Tag: ಕಾದಿಟ್ಟ ಅರಣ್ಯ

  • ಮೀಸಲು ಅರಣ್ಯದಲ್ಲಿನ ಮಂಗಗಳಿಗೆ ಆಹಾರ ಹಾಕಿದ್ರೆ ಬೀಳುತ್ತೆ ಕೇಸ್

    ಮೀಸಲು ಅರಣ್ಯದಲ್ಲಿನ ಮಂಗಗಳಿಗೆ ಆಹಾರ ಹಾಕಿದ್ರೆ ಬೀಳುತ್ತೆ ಕೇಸ್

    ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಕೊಂಚಾವರಂ ಅರಣ್ಯ ಪ್ರದೇಶಕ್ಕೆ ಭೇಟಿ ಕೊಟ್ಟರೆ ಅಲ್ಲಿನ ಮಂಗಗಳಿಗೆ ಎಲ್ಲರು ಹಣ್ಣುಗಳನ್ನು ಹಾಕುತ್ತಾರೆ. ಆದರೆ ಇನ್ಮುಂದೆ ಹೀಗೆ ಮಂಗಗಳಿಗೆ ಹಣ್ಣು ಹಾಕಿದರೆ ಅರಣ್ಯ ಇಲಾಖೆ ಅಧಿಕಾರಿಗಳು ಕೇಸ್ ಹಾಕಲು ಮುಂದಾಗಿದ್ದಾರೆ.

    ಇತ್ತೀಚೆಗೆ ಹಸಿದ ಮಂಗಗಳಿಗೆ ಆರ್.ಟಿ.ಐ ಕಾರ್ಯಕರ್ತ ಸಿದ್ದರಾಮಯ್ಯ ಹೀರೆಮಠ ಬಾಳೆಹಣ್ಣು ನೀಡಿದ ವಿಡಿಯೋ ವಿವಾದಕ್ಕೆ ಕಾರಣವಾಗಿತ್ತು. ವನ್ಯಜೀವು ಕಾಯ್ದೆ ಪ್ರಕಾರ ಕೊಂಚಾವರಂ ಮೀಸಲು ಅರಣ್ಯ ಪ್ರದೇಶದಲ್ಲಿ ಕಾನೂನು ಬಾಹಿರವಾಗಿ ನುಗ್ಗಿ, ಪ್ರಾಣಿಗಳಿಗೆ ಆಹಾರ ನೀಡುವ ಮೂಲಕ ಅವುಗಳ ಸಾವಿಗೆ ಕಾರಣವಾಗಿದ್ದಾರೆ ಎಂದು ತಿಪ್ಪಣ್ಣಪ್ಪ ಹಾಗೂ ಪ್ರವೀಣ ಜಿಲ್ಲೆಯ ಜಿಲ್ಲಾಧಿಕಾರಿಗೆ ದೂರು ನೀಡಿದ್ದರು.

    ಈ ದೂರಿನ ಆಧಾರದ ಮೇಲೆ ವನ್ಯಜೀವು ಸಂರಕ್ಷಣಾ ಕಾಯ್ದೆ 1972, ಸೆಕ್ಷನ್ 27 ಮತ್ತು 51ರ ಅಡಿ ಚಿಂಚೋಳಿ ತಾಲೂಕಿನ ಶಾದಿಪುರ ಶಾಖೆಯ ವನ್ಯಜೀವಿ ವಲಯದ ಚಿಂಚೋಳಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ತಮ್ಮ ಫೇಸ್ ಬುಕ್‍ನಲ್ಲಿ ಸ್ಪಷ್ಟನೆ ನೀಡಿರುವ ಆರ್.ಟಿ.ಐ ಕಾರ್ಯಕರ್ತ ಸಿದ್ದರಾಮಯ್ಯ, ಇದು ದುರುದ್ದೇಶದಿಂದ ನನ್ನ ಮೇಲೆ ಹಾಕಲಾಗಿರುವ ಪ್ರಕರಣವಾಗಿದೆ. ಒಂದು ವೇಳೆ ಅರಣ್ಯಾಧಿಕಾರಿಗಳು ಇದರ ಬಗ್ಗೆ ನೋಟಿಸ್ ನೀಡಿದರೆ ಹಾಜರಾಗಿ ಸ್ಪಷ್ಟನೆ ನೀಡುವುದಾಗಿ ಹೇಳಿದ್ದಾರೆ.