Tag: ಕಲ್ಲಿದ್ದಲು ಗಣಿಗಾರಿಕೆ

  • ಕೋವಿಡ್-19 ಬಿಕ್ಕಟ್ಟು ಸ್ವಾವಲಂಬಿ ಭಾರತಕ್ಕೆ ಸಿಕ್ಕಿದ ಅವಕಾಶ: ಪ್ರಧಾನಿ ಮೋದಿ

    ಕೋವಿಡ್-19 ಬಿಕ್ಕಟ್ಟು ಸ್ವಾವಲಂಬಿ ಭಾರತಕ್ಕೆ ಸಿಕ್ಕಿದ ಅವಕಾಶ: ಪ್ರಧಾನಿ ಮೋದಿ

    ನವದೆಹಲಿ: ವರಮಾನ ಹಂಚಿಕೆ ಆಧಾರದಲ್ಲಿ ಕಲ್ಲಿದ್ದಲು ವಲಯದಲ್ಲಿರುವ ಸರ್ಕಾರದ ಏಕಸ್ವಾಮ್ಯ ವ್ಯವಸ್ಥೆ ರದ್ದುಗೊಳಿಸಿ ಖಾಸಗಿ ಸಂಸ್ಥೆಗಳಿಗೆ ವಾಣಿಜ್ಯ ಗಣಿಗಾರಿಕೆಗೆ ಕೇಂದ್ರ ಸರ್ಕಾರ ಅವಕಾಶ ನೀಡಿದ್ದು, ಈ ಯೋಜನೆಗೆ ಪ್ರಧಾನಿ ಮೋದಿ ಅವರು ಇಂದು ಚಾಲನೆ ನೀಡಿದರು.

    ದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹೊಸ ವ್ಯವಸ್ಥೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಕೇಂದ್ರ ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹಾಜರಿದ್ದರು. ಕೋವಿಡ್-19 ಹಿನ್ನೆಲೆಯಲ್ಲಿ ‘ಆತ್ಮ ನಿರ್ಭರ್ ಭಾರತ್’ ಯೋಜನೆ ಅಡಿ ಕೇಂದ್ರ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು. ಇದರ ಭಾಗವಾಗಿ ಕಲ್ಲಿದ್ದಲು ಕ್ಷೇತ್ರದಲ್ಲಿ ವಾಣಿಜ್ಯ ಗಣಿಗಾರಿಕೆಗೆ ಅವಕಾಶ ಮಾಡಿಕೊಡಲಾಗಿದೆ ಎಂದರು.

    ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೊರೊನಾ ವೈರಸ್ ಸಂದರ್ಭದ ಸಂದಿಗ್ಧ ಪರಿಸ್ಥಿತಿಯನ್ನು ಭಾರತ ವಿದೇಶಿ ವಸ್ತುಗಳ ಅಮದು ನಿಲ್ಲಿಸಿ, ಸ್ವಾವಲಂಬಿಯಾಗುವ ಅವಕಾಶವನ್ನಾಗಿ ಬಳಕೆ ಮಾಡಿಕೊಳ್ಳಲಿದೆ. ಕೊರೊನಾ ಬಿಕ್ಕಟ್ಟು ನಮಗೆ ಸ್ವಾವಲಂಬಿ ಪಾಠವನ್ನು ಕಲಿಸಿದ್ದು, ಆಮದು ವಸ್ತುಗಳ ಮೇಲಿನ ಅವಲಂಬನೆಯನ್ನು ಭಾರತ ಕಡಿಮೆ ಮಾಡಲಿದೆ. ಭಾರತ ವಿಶ್ವದಲ್ಲಿ 4ನೇ ಅತಿದೊಡ್ಡ ಕಲ್ಲಿದ್ದಲು ನಿಕ್ಷೇಪಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ವಿಶ್ವದ 2ನೇ ಅತಿದೊಡ್ಡ ಉತ್ಪಾದಕ ರಾಷ್ಟ್ರವಾಗಿದ್ದರೂ ಕಲ್ಲಿದ್ದಲನ್ನು ರಫ್ತು ಮಾಡುತ್ತಿಲ್ಲ ಎಂದರು.

    ವಾಣಿಜ್ಯ ಕಲ್ಲಿದ್ದಲು ಗಣಿಗಾರಿಕೆ ಈಗ ಮುಕ್ತವಾಗಿದ್ದು, ಇದು ಎಲ್ಲಾ ಕ್ಷೇತ್ರಗಳಿಗೂ ಸಹಾಯ ಮಾಡುತ್ತದೆ. ಭಾರತ ಶಕ್ತಿಯಲ್ಲಿ ಸ್ವಾವಲಂಬಿಯಾಗಲು ಇಂದು ಬಹುದೊಡ್ಡ ಹೆಜ್ಜೆ ಇಟ್ಟಿದೆ. ಕೋವಿಡ್-19 ಬಿಕ್ಕಟ್ಟನ್ನು ಒಂದು ಅವಕಾಶವನ್ನಾಗಿ ಪರಿವರ್ತಿಸಿ ಆಮದಿನ ಮೇಲಿನ ಅವಲಂಬನೆಯನ್ನು ಇದು ಕಡಿಮೆ ಮಾಡಲಿದೆ. ಹರಾಜು ಪ್ರಕ್ರಿಯೆಯಿಂದ ರಾಜ್ಯಗಳಿಗೆ ಹೆಚ್ಚಿನ ಆದಾಯ ನೀಡುತ್ತದೆ. ಉದ್ಯೋಗ ಅವಕಾಶವನ್ನು ಸೃಷ್ಟಿಸುವುದರೊಂದಿಗೆ ದೂರದ ಪ್ರದೇಶಗಳ ಅಭಿವೃದ್ಧಿಗೂ ಸಹಕಾರಿ ಆಗಲಿದೆ ಎಂದು ತಿಳಿಸಿದರು.

    ಕಲ್ಲಿದ್ದಲು ಗಣಿಗಾರಿಕೆಯಲ್ಲಿ ಖಾಸಗಿ ವಲಯ ಆರಂಭ ಹಾಗೂ ಹೂಡಿಕೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ 41 ಕಲ್ಲಿದ್ದಲು ಗಣಿಗಳನ್ನು ಇ-ಹರಾಜು ಹಾಕಲಿದೆ. ಅಂದಾಜಿನ ಪ್ರಕಾರ 41 ಕಲ್ಲಿದ್ದಲು ಗಣಿಗಳ ಹರಾಜಿನ ಮೂಲಕ ಮುಂದಿನ 5-7 ವರ್ಷಗಳಲ್ಲಿ ದೇಶದಲ್ಲಿ 33 ಸಾವಿರ ಕೋಟಿ ರೂ. ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ಈ ಪ್ರಕ್ರಿಯೆಯಿಂದ ರಾಜ್ಯ ಸರ್ಕಾರಗಳಿಗೆ ವಾರ್ಷಿಕ 20 ಸಾವಿರ ಕೋಟಿ ರೂ. ಆದಾಯ ಲಭಿಸಲಿದೆ ಎಂದು ನಿರೀಕ್ಷೆ ಮಾಡಲಾಗಿದೆ.

  • ಮೇಕೆ ಸಾವಿನಿಂದ 2.68 ಕೋಟಿ ರೂ. ನಷ್ಟ

    ಮೇಕೆ ಸಾವಿನಿಂದ 2.68 ಕೋಟಿ ರೂ. ನಷ್ಟ

    ಭುವನೇಶ್ವರ: ಮೇಕೆಯೊಂದು ಅಪಘಾತದಲ್ಲಿ ಸಾವನ್ನಪ್ಪಿದ್ದಕ್ಕೆ ಮಹಾನದಿ ಕೋಲ್‍ಫೀಲ್ಡ್ಸ್ ಲಿ.(ಎಂಸಿಎಲ್)ಗೆ 2.68 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ಕಂಪನಿ ತಿಳಿಸಿದೆ.

    ಓಡಿಶಾದಲ್ಲಿ ಈ ಘಟನೆ ನಡೆದಿದ್ದು, ಅಪಘಾತದಲ್ಲಿ ಮೇಕೆಯೊಂದು ಸಾವನ್ನಪ್ಪಿದ ನಂತರ ಸ್ಥಳೀಯರು ನಡೆಸಿದ ಪ್ರತಿಭಟನೆಯಿಂದಾಗಿ 2.68 ಕೋಟಿ ರೂ. ನಷ್ಟ ಸಂಭವಿಸಿದೆ.

    ಏನಿದು ಪ್ರಕರಣ?
    ಕಲ್ಲಿದ್ದಲು ಸಾಗಿಸುತ್ತಿದ್ದ ಟಿಪ್ಪರ್ ಗೆ ಸಿಲುಕಿ ಅಪಘಾತದಲ್ಲಿ ಮೇಕೆ ಸಾವನ್ನಪ್ಪಿತ್ತು. ಇದಕ್ಕೆ ಪರಿಹಾರ ರೂಪವಾಗಿ ಸ್ಥಳೀಯರು 60 ಸಾವಿರ ರೂ. ಬೇಡಿಕೆ ಇಟ್ಟಿದ್ದಾರೆ. ಇದಕ್ಕಾಗಿ ಟಾಲ್ಚರ್ ಕಲ್ಲಿದ್ದಲು ಪ್ರದೇಶದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿ ಕೋಲಾಹಲ ಸೃಷ್ಟಿಸಿದ್ದರಿಂದ ನಷ್ಟ ಉಂಟಾಗಿದೆ ಎಂದು ಎಂಸಿಎಲ್ ಪ್ರಕಟಣೆಯಲ್ಲಿ ತಿಳಿಸಿದೆ.

    ಪಕ್ಕದ ಹಳ್ಳಿಯ ನಿವಾಸಿಗಳ ನೇತೃತ್ವದ ಜನಸಮೂಹ ಸೋಮವಾರ ಬೆಳಗ್ಗೆ 11 ಗಂಟೆಯಿಂದ ಟಾಲ್ಚರ್ ಕಲ್ಲಿದ್ದಲು ಕ್ಷೇತ್ರಗಳಲ್ಲಿನ ಜಗನ್ನಾಥ ಸಿಡಿಂಗ್ಸ್ ನಂ.1 ಹಾಗೂ 2ರಲ್ಲಿ ಪ್ರತಿಭಟನೆ ನಡೆಸಿ ಕಲ್ಲಿದ್ದಲು ಸಾಗಣೆ ಮತ್ತು ರವಾನೆ ಕೆಲಸವನ್ನು ಸ್ಥಗಿತಗೊಳಿಸಿದ್ದಾರೆ. ಪ್ರತಿಭಟನೆ ಕುರಿತು ಮಾಹಿತಿ ತಿಳಿದು ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರು ಮಧ್ಯ ಪ್ರವೇಶಿಸಿ, ಪ್ರತಿಭಟನೆ ತಣ್ಣಗಾಗಿಸಲು ಮಧ್ಯಾಹ್ನ 2.30 ಆಗಿದ್ದು, ನಂತರ ಕೆಲಸ ಪುನರಾರಂಭಗೊಂಡಿದೆ ಎಂದು ಸಂಸ್ಥೆ ತಿಳಿಸಿದೆ.

    ಈ ಮೂರುವರೆ ಗಂಟೆಗಳ ಅಕ್ರಮ ಕೆಲಸ ಸ್ಥಗಿತದಿಂದಾಗಿ ಕಲ್ಲಿದ್ದಲು ಸಾಗಣೆಯಲ್ಲಿ 1.4 ಕೋಟಿ ರೂ. ಹಾಗೂ ರೈಲ್ವೇ ಮೂಲಕ ರವಾನೆಯಾಗುತ್ತಿದ್ದ ಕಲ್ಲಿದ್ದಲು ಸಾಗಣೆಯಲ್ಲಿ ತಡವಾಗಿದ್ದರಿಂದ 1.28 ಕೋಟಿ ರೂ. ನಷ್ಟವಾಗಿದೆ. ಒಟ್ಟು ಅಂದಾಜು 2.68 ಕೋಟಿ ರೂ.ಗಳ ನಷ್ಟದ ಜೊತೆಗೆ ಸರ್ಕಾರದ ಬೊಕ್ಕಸಕ್ಕೆ 46 ಲಕ್ಷ ರೂ. ನಷ್ಟವಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

    ಅಕ್ರಮವಾಗಿ ಕೆಲಸಕ್ಕೆ ಅಡ್ಡಿಯುಂಟುಮಾಡಿದವರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವಂತೆ ಕಂಪನಿಯೂ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಿಸಿದೆ. ಕಲ್ಲಿದ್ದಲು ಗಣಿಗಾರಿಕೆ ಕಾರ್ಯಾಚರಣೆಗೆ ಇಂತಹ ಅಕ್ರಮ ಅಡೆತಡೆಯಲು ರಾಷ್ಟ್ರದ ಆರ್ಥಿಕ ಬೆಳವಣಿಗೆಗೆ ವಿರುದ್ಧವಾಗಿದೆ. ಅಲ್ಲದೆ, ದೇಶದ ಐದು ಟ್ರಿಲಿಯನ್ ಆರ್ಥಿಕತೆ ಗುರಿಗೆ ಅಡೆತಡೆಗಳನ್ನು ಉಂಟುಮಾಡುತ್ತದೆ ಎಂದು ಎಂಸಿಎಲ್ ವಕ್ತಾರರು ತಿಳಿಸಿದ್ದಾರೆ.

    ಕಲ್ಲಿದ್ದಲು ಗಣಿಗಾರಿಕೆ ಪ್ರದೇಶವನ್ನು ಕಾರ್ಯನಿರತ ವಲಯವನ್ನಾಗಿ ಗುರುತಿಸಲಾಗಿದೆ. ಇಲ್ಲಿ ಅಧಿಕೃತ ಚಲನೆ, ತರಬೇತಿ ಪಡೆದ ಮತ್ತು ಗಣಿಗಾರಿಕೆ ಕುರಿತು ಜ್ಞಾನ ಹೊಂದಿರುವವರಿಗೆ ಮಾತ್ರ ಕಾರ್ಯನಿರ್ವಹಿಸಲು ಅವಕಾಶವಿದೆ. ಜನಸಾಮಾನ್ಯರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಅದಾಗ್ಯೂ ಅಪರಿಚಿತರು ಹಾಗೂ ಇಲ್ಲಿನ ಸ್ಥಳೀಯರು ಕಲ್ಲಿದ್ದಲು ಪಡೆಯಲು ಹಾಗೂ ಕಟ್ಟಿಗೆ ಆಯ್ದುಕೊಳ್ಳಲು ಅಕ್ರಮವಾಗಿ ಪ್ರವೇಶಿಸುತ್ತಿದ್ದಾರೆ. ತಾವು ಬರುವುದಲ್ಲದೆ ತಮ್ಮ ಜಾನುವಾರುಗಳನ್ನೂ ಮೇಯಿಸಲು ತರುತ್ತಿದ್ದಾರೆ. ಇದು ಆತಂಕಕ್ಕೆ ಕಾರಣವಾಗಿದೆ ಎಂದು ಸಂಸ್ಥೆಯ ವಕ್ತಾರರು ಆರೋಪಿಸಿದ್ದಾರೆ.