Tag: ಕರ್ನೂಲ್‌ ಬಸ್‌ ದುರಂತ

  • ಕರ್ನೂಲ್‌ ದುರಂತದ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ – ಬಸ್‌ಗಳಲ್ಲಿ ಈ ವಸ್ತುಗಳನ್ನ ಕೊಂಡೊಯ್ಯುವಂತಿಲ್ಲ!

    ಕರ್ನೂಲ್‌ ದುರಂತದ ಬಳಿಕ ಎಚ್ಚೆತ್ತ ಸಾರಿಗೆ ಇಲಾಖೆ – ಬಸ್‌ಗಳಲ್ಲಿ ಈ ವಸ್ತುಗಳನ್ನ ಕೊಂಡೊಯ್ಯುವಂತಿಲ್ಲ!

    – ನಿಯಮ ಕಡ್ಡಾಯಗೊಳಿಸಲು ಸಚಿವ ರಾಮಲಿಂಗಾರೆಡ್ಡಿ ಸೂಚನೆ

    ಬೆಂಗಳೂರು: ಕರ್ನೂಲ್ ಬಸ್ ದುರಂತದ (Karnool Bus Fire) ಬೆನ್ನಲ್ಲೇ ರಾಜ್ಯ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡಿದೆ. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸೇರಿದಂತೆ 4 ಸಾರಿಗೆ ನಿಗಮಗಳ ಎಂಡಿಗಳಿಗೆ ಬಸ್‌ಗಳಲ್ಲಿ ಕೆಲ ನಿಯಮಗಳನ್ನ ಕಡ್ಡಾಯಗೊಳಿಸಲು ಸೂಚಿಸಿದ್ದಾರೆ.

    ಪ್ರಮುಖವಾಗಿ ಬಸ್‌ಗಳಲ್ಲಿ ಬೆಂಕಿ ಸ್ಪರ್ಶಕ್ಕೆ ಸರಳವಾಗಿ ಉರಿಯುವ ವಸ್ತುಗಳ ಸಾಗಣಿಕೆಗೆ ಬ್ರೇಕ್ ಹಾಕಬೇಕು. ಬಸ್ ಗಳಲ್ಲಿ ಯಾವುದೇ ರೀತಿಯ ಸ್ಫೋಟಕ ವಸ್ತುಗಳನ್ನ ತೆಗೆದುಕೊಂಡು ಹೋಗಬಾರದು. ಎಲ್ಲಾ ಎಸಿ ಬಸ್‌ಗಳಲ್ಲಿ ಸುತ್ತಿಗೆ ಕಡ್ಡಾಯಗೊಳಿಸಿದ್ದು, ಇದರಿಂದ ತುರ್ತು ಸಂದರ್ಭಗಳಲ್ಲಿ ಕಿಟಕಿಗಳನ್ನು ಒಡೆಯಲು ಬಳಸಲು ಸಹಾಯವಾಗಲಿದೆ. ಅಲ್ಲದೇ ಲಗೇಜ್ ಸಾಗಿಸುವ ಜಾಗದಲ್ಲಿ ಯಾವುದೇ ವ್ಯಕ್ತಿ ಮಲಗಲು ಅವಕಾಶ ನೀಡಬಾರದು. ಬಸ್ಸುಗಳ ನವೀಕರಣ‌ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಸೂಚನೆ ನೀಡಿದ್ದಾರೆ.

    ಜೊತೆಗೆ ಬಸ್ಸುಗಳಲ್ಲಿನ ಸುರಕ್ಷತಾ ಆಡಿಟ್ ಪರಿಶೀಲನೆಗೆ ತಂಡಗಳನ್ನು ರಚಿಸಿ, ಬಸ್ ಗಳಲ್ಲಿ ಯಾವುದೇ ನೂನ್ಯತೆ ಕಂಡುಬಂದರೂ ಕಠಿಣ ಕ್ರಮಕ್ಕೆ ಆದೇಶಕ್ಕೆ ಸೂಚಿಸಿದ್ದಾರೆ.

    ಇದ್ರ ನಡುವೆ ನಿನ್ನೆ ಹಾಗೂ ಇಂದು ರಾಜ್ಯ ಸಾರಿಗೆ ಅಧಿಕಾರಿಗಳು ಹಾಗೂ ಟ್ರಾಫಿಕ್ ಪೊಲೀಸ್ರು, ಬೆಂಗಳೂರಿನಿಂದ ಹೋಗುವಂತ ಎಲ್ಲಾ ಬಸ್ಸುಗಳನ್ನ ಪರಿಶೀಲನೆಗೆ ಮುಂದಾಗಿದ್ದಾರೆ. ಮೆಜೆಸ್ಟಿಕ್ ನಲ್ಲಿ ಖಾಸಗಿ ಎಸಿ ಬಸ್ ಗಳ ಪರಿಶೀಲನೆ ನಡೆಸಿ, ಡ್ರೈವರ್ ಲೈಸೆನ್ಸ್, ಬಸ್ ಗಳ ದಾಖಲೆ ಚೆಕ್ ಮಾಡುತ್ತಿದ್ದಾರೆ.

  • ಆಂಧ್ರ ಬಸ್‌ ದುರಂತಕ್ಕೂ ಮುನ್ನ ಅಜಾಗರೂಕತೆಯಿಂದ ಬೈಕ್‌ ಚಾಲನೆ – ಎಣ್ಣೆ ಮತ್ತಲ್ಲಿದ್ನಾ ಸವಾರ?

    ಆಂಧ್ರ ಬಸ್‌ ದುರಂತಕ್ಕೂ ಮುನ್ನ ಅಜಾಗರೂಕತೆಯಿಂದ ಬೈಕ್‌ ಚಾಲನೆ – ಎಣ್ಣೆ ಮತ್ತಲ್ಲಿದ್ನಾ ಸವಾರ?

    – ಪೆಟ್ರೋಲ್‌ ಬಂಕ್‌ ಬಳಿ ಅಡ್ಡಾದಿಡ್ಡಿ ಬೈಕ್‌ ಚಲಾಯಿಸಿರುವ ದೃಶ್ಯ ಸೆರೆ

    ಅಮರಾವತಿ: ಆಂಧ್ರ ಖಾಸಗಿ ಬಸ್ ದುರಂತಕ್ಕೂ ಮುನ್ನ ಬೈಕ್ ಸವಾರ ಅಜಾಗರೂಕತೆಯಿಂದ ಬೈಕ್‌ ಚಾಲನೆ ಮಾಡಿದ್ದ ವಿಡಿಯೋ ವೈರಲ್ ಆಗಿದೆ.

    ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಶುಕ್ರವಾರ ಬೆಳಗಿನ ಜಾವ 20 ಜನರನ್ನು ಬಲಿತೆಗೆದುಕೊಂಡ ಭೀಕರ ಬಸ್ ದುರಂತ ತನಿಖೆ ಹೊಸ ತಿರುವು ಪಡೆದುಕೊಂಡಿದೆ. ಅಪಘಾತಕ್ಕೆ ಸ್ವಲ್ಪ ಮೊದಲು ಬೈಕ್‌ ಚಾಲಕ ಅಜಾಗರೂಕತೆಯಿಂದ ಬೈಕ್‌ ಚಾಲನೆ ಮಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವೀಡಿಯೊ ವೈರಲ್ ಆಗಿದೆ. ಇದನ್ನೂ ಓದಿ: Kurnool Bus Fire | ದುರಂತಕ್ಕೀಡಾದ ಖಾಸಗಿ ಬಸ್ ಮೇಲಿದೆ 23 ಸಾವಿರಕ್ಕೂ ಹೆಚ್ಚು ದಂಡ

    ಪೆಟ್ರೋಲ್‌ ಬಂಕ್‌ವೊಂದರಲ್ಲಿ ರಾತ್ರಿ ವೇಳೆ ಬೈಕ್‌ ಸವಾರ ಪೆಟ್ರೋಲ್‌ ಹಾಕಿಸಿದ್ದಾನೆ. ಆತ ಕುಡಿದ ಮತ್ತಿನಲ್ಲಿದ್ದಂತೆ ವರ್ತಿಸಿದ್ದಾನೆ. ಸ್ಟ್ಯಾಂಡ್‌ ಹಾಕಿದ್ದ ಬೈಕನ್ನು ಹಾಗೆಯೇ ತಿರುಗಿಸಿ ಸ್ಟಾರ್ಟ್‌ ಮಾಡಿಕೊಂಡು ಅಡ್ಡಾದಿಡ್ಡಿ ಬೈಕ್‌ ಚಲಾಯಿಸಿರುವುದು ಕಂಡುಬಂದಿದೆ.

    ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಖಾಸಗಿ ಐಷಾರಾಮಿ ಬಸ್‌ಗೆ ಡಿಕ್ಕಿ ಹೊಡೆಯುವ ಸ್ವಲ್ಪ ಸಮಯದ ಮೊದಲು ಬೈಕ್‌ ಸವಾರ ಶಿವಶಂಕರ್‌ ಅಜಾಗರೂಕತೆಯಿಂದ ಬೈಕ್‌ ಚಲಾಯಿಸಿದ್ದಾನೆ. ಡಿಕ್ಕಿಯ ನಂತರ ವಿ ಕಾವೇರಿ ಟ್ರಾವೆಲ್ಸ್‌ಗೆ ಸೇರಿದ ಖಾಸಗಿ ಬಸ್ ಬೆಂಕಿಗೆ ಆಹುತಿಯಾಗಿದ್ದು, ಶಿವಶಂಕರ್ ಅವರ ಬೈಕನ್ನು ಸುಮಾರು 200 ಮೀಟರ್‌ಗಳಷ್ಟು ಎಳೆದೊಯ್ದಿದೆ. ಬೈಕ್‌ನಿಂದ ಘರ್ಷಣೆ ಮತ್ತು ಇಂಧನ ಸೋರಿಕೆಯಿಂದಾಗಿ ಬಸ್‌ಗೆ ಭಾರಿ ಬೆಂಕಿ ಹೊತ್ತಿಕೊಂಡಿದೆ ಎಂದು ಪ್ರಾಥಮಿಕ ವರದಿಗಳು ದೃಢಪಡಿಸಿವೆ. ಇದನ್ನೂ ಓದಿ: Karnool Bus Fire | ಮೃತರ ಕುಟುಂಬಸ್ಥರಿಗೆ ಕೇಂದ್ರದಿಂದ ತಲಾ 2 ಲಕ್ಷ ಪರಿಹಾರ ಘೋಷಣೆ

    ತೆಲಂಗಾಣ ಸಚಿವ ಜೂಪಲ್ಲಿ ಕೃಷ್ಣ ರಾವ್ ಅವರು ಅಪಘಾತಕ್ಕೆ ಬಸ್ ಚಾಲಕ ಮತ್ತು ಟ್ರಾವೆಲ್ ಏಜೆನ್ಸಿಯನ್ನು ದೂಷಿಸಿದ್ದಾರೆ. ಇಬ್ಬರನ್ನೂ ಬಂಧಿಸಿ ನಿರ್ಲಕ್ಷ್ಯದ ಚಾಲನೆಯ ಆರೋಪ ಹೊರಿಸಲಾಗಿದೆ.

  • ಕರ್ನೂಲ್ ಬಸ್ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆಂಧ್ರ ಸರ್ಕಾರಕ್ಕೆ ಹೇಳಿದ್ದೇವೆ: ಡಿಕೆಶಿ

    ಕರ್ನೂಲ್ ಬಸ್ ದುರಂತದ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಲು ಆಂಧ್ರ ಸರ್ಕಾರಕ್ಕೆ ಹೇಳಿದ್ದೇವೆ: ಡಿಕೆಶಿ

    ಬೆಂಗಳೂರು: ಕರ್ನೂಲ್ ಬಸ್ ದುರಂತದ (Karnool Bus Fire) ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಆ ರಾಜ್ಯ ಸರ್ಕಾರಕ್ಕೆ ಹೇಳಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ಹೇಳಿದ್ದಾರೆ.

    ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನೂಲ್‌ನಲ್ಲಿ ಸಂಭವಿಸಿರುವ ಬಸ್ ಅಪಘಾತ ದುರಾದೃಷ್ಟಕರ. ಇತ್ತೀಚೆಗೆ ಬೆಂಗಳೂರಿನಿಂದ ಹೈದರಾಬಾದ್‌ಗೆ ತೆರಳುತ್ತಿದ್ದ ಗ್ರೀನ್ ಲೈನ್ ಬಸ್ ಕೂಡ ಇದೇ ರೀತಿ ದುರಂತಕ್ಕೆ ಒಳಗಾಗಿತ್ತು. ಆಗ ನಮ್ಮ ಪಕ್ಷದ ರಾಯಚೂರು ಅಧ್ಯಕ್ಷೆ ಚಾಲಕನನ್ನು ಎಚ್ಚರಿಸಿದ ಪರಿಣಾಮ, ಬಸ್‌ನಲ್ಲಿದ್ದ 20 ಮೆಡಿಕಲ್ ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದರು. ಕೆಲವು ಸಣ್ಣಪುಟ್ಟ ಗಾಯಗಳಾಗಿದ್ದವು. ಆದರೆ ಆ ರಾಜ್ಯದ ಪೊಲೀಸರು ಅಗತ್ಯ ಕ್ರಮ ಕೈಗೊಂಡಿರಲಿಲ್ಲ. ನಾನು ರಾಯಚೂರಿಗೆ ಹೋದಾಗ ಅಲ್ಲಿ ಕೆಲವರು ನನಗೆ ಅದರ ವಿಡಿಯೋ ತೋರಿಸಿದರು ಎಂದು ಹೇಳಿದರು.ಇದನ್ನೂ ಓದಿ: ಡ್ರೈವರ್‌, ಕಂಡಕ್ಟರ್ ಬೆಂಕಿ ನಂದಿಸ್ತಿದ್ದರು, 5 ಸೆಕೆಂಡ್‌ಲ್ಲಿ ಜೀವ ಉಳಿಸಿಕೊಂಡ್ವಿ – ಪ್ರಾಣಾಪಾಯದಿಂದ ಪಾರಾದ ಆಕಾಶ್ ಮಾತು

    ಈ ದುರಂತ ಬೇರೆ ರಾಜ್ಯದಲ್ಲಿ ಆಗಿದ್ದರೂ ಈ ಬಗ್ಗೆ ಗಮನಹರಿಸುವಂತೆ ಸಾರಿಗೆ ಸಚಿವರು ಹಾಗೂ ಗೃಹ ಸಚಿವರಿಗೆ ಸೂಚಿಸುತ್ತೇವೆ. ಯಾವುದೇ ರಾಜ್ಯದ ಸರ್ಕಾರವಾಗಲಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಗಮನಹರಿಸಬೇಕು. ಈ ಪ್ರಕರಣದಲ್ಲಿ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹೀಗಾಗಿ ಅಪಘಾತಕ್ಕೆ ಕಾರಣ ತಿಳಿಯಲು ತನಿಖೆ ನಡೆಸಬೇಕಿದೆ. ಇದು ಸಣ್ಣ ಘಟನೆಯಲ್ಲ. ಇಂತಹ ದುರ್ಘಟನೆ ಮತ್ತೆ ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

    ಇದೇ ವೇಳೆ ತೇಜಸ್ವಿ ಸೂರ್ಯ ಬಗ್ಗೆ ಮಾತನಾಡಿದ ಅವರು, ಎಷ್ಟು ಬಾರಿ ಪ್ರಧಾನಿಯವರನ್ನು ಭೇಟಿ ಮಾಡಿ ಬೆಂಗಳೂರಿನ ಅಭಿವೃದ್ಧಿಗೆ ಎಷ್ಟು ಅನುದಾನ ಕೋರಿದ್ದಾರೆ. ಲೋಕಸಭಾ ಸದಸ್ಯನಾಗಿ ಆತ ಕರ್ನಾಟಕಕ್ಕೆ ಎಷ್ಟು ಅನುದಾನ ತಂದಿದ್ದಾನೆ? ನಿಗದಿತವಾಗಿ ದೊರೆಯುವ ಅನುದಾನ ಬೇರೆಯಾದರೆ ವಿಶೇಷ ಅನುದಾನದ ಬಗ್ಗೆ ನಾನು ಪ್ರಶ್ನೆ ಮಾಡುತ್ತಿದ್ದೇನೆ. ಬೆಂಗಳೂರಿನ ಜನ ಆತನಿಗೆ ಮತ ನೀಡಿದ್ದಾರೆ. ಬೆಂಗಳೂರಿಗೆ ಆತನ ಕೊಡುಗೆ ಏನೆಂದು ಉತ್ತರಿಸಲಿ ಎಂದು ತಿರುಗೇಟು ನೀಡಿದರು.ಇದನ್ನೂ ಓದಿ: ಚಿತ್ತಾಪುರದಲ್ಲಿ RSS ಪಥಸಂಚಲನ ವಿವಾದ – ಅ.28ಕ್ಕೆ ಶಾಂತಿ ಸಭೆ ನಡೆಸಲು ಕೋರ್ಟ್ ಸೂಚನೆ

  • Kurnool Bus Fire | ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ!

    Kurnool Bus Fire | ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ!

    – ಬೆಂಕಿ ನಂದಿಸಿದ ವೇಳೆ 100ಕ್ಕೂ ಹೆಚ್ಚು ಮೊಬೈಲ್ ಫೋನ್‌ ಅವಶೇಷಗಳು ಪತ್ತೆ

    ಹೈದರಾಬಾದ್‌: ಶುಕ್ರವಾರ ಮುಂಜಾನೆ ಸಂಭವಿಸಿದ ಕರ್ನೂಲ್‌ ಬಸ್‌ ದುರಂತಕ್ಕೆ (Kurnool Bus Fire) ಕಾರಣವಾದ ಮತ್ತೊಂದು ಸ್ಫೋಟಕ ಅಂಶ ಬೆಳಕಿಗೆ ಬಂದಿದೆ. ಭಾರೀ ಪ್ರಮಾಣದಲ್ಲಿ ಬೆಂಕಿ ವ್ಯಾಪಿಸಲು ಬೆಂಗಳೂರಿಗೆ ಸಾಗಿಸುತ್ತಿದ್ದ 100ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಒಟ್ಟಾಗಿ ಸ್ಫೋಟಿಸಿದ್ದೂ ಕಾರಣ ಅಂತ ಆಂಧ್ರಪ್ರದೇಶ ಅಗ್ನಿಶಾಮಕ ಇಲಾಖೆಯ (Andhra Pradesh Fire Department) ಅಧಿಕಾರಿಗಳು ತಿಳಿಸಿದ್ದಾರೆ ಎಂದು ವರದಿಯಾಗಿದೆ.

    ಅಧಿಕಾರಿಗಳು ಹೇಳುವಂತೆ ದುರಂತಕ್ಕೀಡಾದ ಬಸ್‌ನ ಹಿಂದಿನ ಸೀಟುಗಳ ಕೆಳಗೆ ಲಗೇಜ್‌ ಜಾಗದಲ್ಲಿ ಹೊಸ ಮೊಬೈಲ್‌ ಫೋನ್‌ಗಳನ್ನ ಇಡಲಾಗಿತ್ತು. ಬೆಂಕಿ ಹೊತ್ತಿಕೊಂಡು ಶಾಖ ಹೆಚ್ಚಾಗಿದ್ದರಿಂದಾಗಿ 100ಕ್ಕೂ ಹೆಚ್ಚು ಹೊಸ ಫೋನ್‌ಗಳು ಒಮ್ಮೆಲೆ ಸ್ಫೋಟಗೊಂಡಿವೆ (Mobile Phones Explosion). ಹಿಂದಿನ ಸೀಟುಗಳ ಕೆಳಗೆ ಹಾನಿಯಾಗಿದ್ದ ನಿರ್ದಿಷ್ಟ ಬ್ರ್ಯಾಂಡ್‌ನ ಹ್ಯಾಂಡ್‌ಸೆಟ್‌ಗಳ ಬಿಡಿಭಾಗಗಳನ್ನ ನೋಡಿ ನಮಗೇ ಆಶ್ಚರ್ಯವಾಯಿತು ಅಂತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ಬೆಂಗಳೂರಿಗೆ ಸಾಗಿಸುತ್ತಿದ್ದ ಮೊಬೈಲ್‌ ಫೋನ್ಸ್‌
    ಬೆಂಗಳೂರಿನ ಕ್ಲೈಂಟ್‌ ಒಬ್ಬರಿಗೆ ತಲುಪಿಸಲು 100ಕ್ಕೂ ಹೆಚ್ಚು ಹ್ಯಾಂಡ್‌ಸೆಟ್‌ಗಳನ್ನ ಲಗೇಜ್‌ ಜಾಗದಲ್ಲಿ ಇರಿಸಲಾಗಿತ್ತು. ಈ ಮೊಬೈಲ್‌ಗಳು ಒಮ್ಮೆಲೆ ಸ್ಫೋಟಗೊಂಡಿರುವುದರಿಂದ ಬೆಂಕಿಯ ಪ್ರಮಾಣ ವ್ಯಾಪಿಸಿರಬಹುದು. ಜೊತೆಗೆ ಎಸಿಗಳು ಹಾಗೂ ಇತರ ಉದ್ದೇಶಗಳಿಗಾಗಿ ಬಸ್‌ನಲ್ಲಿ ಅಳವಡಿಸಿದ್ದ ವಿದ್ಯುತ್‌ ಬ್ಯಾಟರಿಗಳು ಸಹ ಸ್ಫೋಟಗೊಂಡಿದ್ದು ದುರಂತಕ್ಕೆ ಕಾರಣವಾಗಿದೆ. ಬೆಂಕಿಯ ಪ್ರಮಾಣ ಎಷ್ಟಿತ್ತೆಂದರೆ ಬಸ್‌ಗೆ ಅಳವಡಿಸಿದ್ದ ಅಲ್ಯೂಮಿನಿಯಂ ನೆಲಹಾಸು ನೀರಿನಂತೆ ಕರಗಿಹೋಗಿತ್ತು, ಮೊಳೆಗಳು ಕರಗಿ ಬೂದಿಯಂತೆ ಉದುರುತ್ತಿತ್ತು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

    ಮೊದಲ ಕಾರಣ ಏನು?
    ಬೈಕ್‌ನಲ್ಲಿದ್ದ ವ್ಯಕ್ತಿಯನ್ನು ಶಿವಶಂಕರ್ ಎಂದು ಗುರುತಿಸಲಾಗಿದೆ. ಬಸ್ಸು ಮತ್ತು ಬೈಕ್ ಒಂದೇ ದಿಕ್ಕಿನಲ್ಲಿ ಪ್ರಯಾಣಿಸುತ್ತಿತ್ತು. ವೇಗವಾಗಿ ಬರುತ್ತಿದ್ದ ಬಸ್ಸು ಮೊದಲು ಹಿಂಬದಿಯಿಂದ ಬೈಕಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಬೈಕ್ ಕೆಳಗಡೆ ಬಿದ್ದಿದೆ. ಬೈಕ್ ಕೆಳಗಡೆ ಬಿದ್ದರೂ ಚಾಲಕ ಬಸ್ಸನ್ನು ವೇಗವಾಗಿ ಚಲಾಯಿಸಿದ್ದಾನೆ.

    ಕೆಳಭಾಗದಲ್ಲಿ ಸಿಲುಕಿಕೊಂಡಿದ್ದ ಬೈಕನ್ನು ಬಸ್ಸು 300 ಮೀ. ದೂರದವರೆಗೆ ಎಳೆದುಕೊಂಡು ಹೋಗಿದೆ. ಈ ವೇಳೆ ಬೈಕಿನಲ್ಲಿದ್ದ ಪೆಟ್ರೋಲ್ ಕೆಳಕ್ಕೆ ಚೆಲ್ಲಿದೆ. ರಸ್ತೆಯಲ್ಲಿ ಬೈಕನ್ನು ಎಳೆದುಕೊಂಡು ಹೋಗಿದ್ದರಿಂದ ಘರ್ಷಣೆಯಿಂದಾಗಿ ಕಿಡಿ ಹೊತ್ತಿದೆ. ಬೆಂಕಿಯ ಕಿಡಿ ಡೀಸೆಲ್ ಟ್ಯಾಂಕ್ ಮೇಲೆ ಚಿಮ್ಮಿದೆ. ಟ್ಯಾಂಕ್‌ಗೆ ಕಿಡಿ ಚಿಮ್ಮಿದ ಕೂಡಲೇ ಬೆಂಕಿ ಹೊತ್ತಿಕೊಂಡು ಟ್ಯಾಂಕ್ ಸ್ಫೋಟಗೊಂಡಿದೆ. ಸ್ಫೋಟದ ರಭಸಕ್ಕೆ ಡೀಸೆಲ್ ಮೇಲುಗಡೆ ಹಾರಿದ್ದರಿಂದ ಸುಲಭವಾಗಿ ಬೆಂಕಿ ಹರಡಿ ಕ್ಷಣಮಾತ್ರದಲ್ಲಿ ಬಸ್ಸು ಧಗಧಗಿಸಿದೆ.

    ಕರ್ನೂಲ್ ಡಿಸಿ ಹೇಳಿದ್ದೇನು?
    ಕರ್ನೂಲ್ ಬಸ್ ದುರಂತದ ಕುರಿತು ಮಾತನಾಡಿರುವ ಜಿಲ್ಲಾಧಿಕಾರಿ ಡಾ.ಎ ಸಿರಿ, ಖಾಸಗಿ ಬಸ್ ದುರಂತ ಬೆಳಗ್ಗಿನ ಜಾವ 3 ರಿಂದ 3:10ರ ಸುಮಾರಿಗೆ ಆಗಿದೆ. ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಂಧನ ಸೋರಿಕೆಯಾಗಿ ಬೆಂಕಿ ಕಾಣಿಸಿಕೊಂಡಿದೆ. ಬಸ್‌ನಲ್ಲಿದ್ದ 41 ಪ್ರಯಾಣಿಕರಲ್ಲಿ 23 ಜನರನ್ನ ರಕ್ಷಿಸಲಾಗಿದೆ. ಇಲ್ಲಿಯವರೆಗೆ ಮೃತರಲ್ಲಿ 11 ಜನರನ್ನು ಗುರುತಿಸಲಾಗಿದೆ, ಉಳಿದವರ ಗುರುತು ಪತ್ತೆ ಮಾಡುವ ಕಾರ್ಯ ಮಾಡ್ತಿದ್ದೇವೆ ಎಂದು ತಿಳಿಸಿದ್ದಾರೆ.

  • Kurnool Bus Fire | ಬೆಂಗಳೂರಿನ ಇಬ್ಬರು ಟೆಕ್ಕಿಗಳ ದುರಂತ ಸಾವು

    Kurnool Bus Fire | ಬೆಂಗಳೂರಿನ ಇಬ್ಬರು ಟೆಕ್ಕಿಗಳ ದುರಂತ ಸಾವು

    – ದೀಪಾವಳಿ ಹಬ್ಬ ಮುಗಿಸಿಕೊಂಡು ಬರ್ತಿದ್ದ ಸಾಫ್ಟ್‌ವೇರ್‌ ಎಂಜಿನಿಯರ್‌ ಅನುಷಾ

    ಹೈದರಾಬಾದ್‌/ಬೆಂಗಳೂರು: ಕರ್ನೂಲ್‌ನಲ್ಲಿ ನಡೆದ ಭೀಕರ ಬಸ್‌ ದುರಂತದಲ್ಲಿ (Kurnool Bus Fire) ಬೆಂಗಳೂರಿನ (Bengaluru) ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ ಕೂಡ ಸಾವನ್ನಪ್ಪಿದ್ದಾರೆ.

    ಎಂಜಿನಿಯರ್‌ಗಳಾದ (Software Engineer) ಅನುಷಾ, ಗನ್ನಮನೇನಿ ಧಾತ್ರಿ (ಜಿ.ಧಾತ್ರಿ) ಮೃತ ದುರ್ದೈವಿಗಳು. ಇದನ್ನೂ ಓದಿ: Kurnool Bus Fire | ಸೂರ್ಯೋದಯಕ್ಕೂ ಮುನ್ನ ಸಾವಿನ ಮನೆ ಕದ ತಟ್ಟಿದ ಸುಂದರ ಕುಟುಂಬ

    ದೀಪಾವಳಿ ಮುಗಿಸಿಕೊಂಡು ಬರ್ತಿದ್ದ ಅನುಷಾ
    ಮಹೇಶ್ವರಂ ಅನುಷಾ ರೆಡ್ಡಿ ಮೂಲತಃ ಯದಾದ್ರಿ ಭುವನಗಿರಿ ಜಿಲ್ಲೆಯ ವಸ್ತಕೊಂಡೂರು ಗ್ರಾಮದವರು. ಬೆಂಗಳೂರಿನಲ್ಲಿ ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಕೆಲಸ ಮಾಡಿಕೊಂಡಿದ್ದರು. ದೀಪಾವಳಿ ಹಬ್ಬ ಮುಗಿಸಿ ಬರುತ್ತಿದ್ದ ಅನುಷಾ ಇಂದು ಬೆಳಗ್ಗಿನ ಜಾವ ಸಂಭವಿಸಿದ ದುರಂತದಲ್ಲಿ ಮೃತಪಟ್ಟಿದ್ದಾರೆ. ಇದನ್ನೂ ಓದಿ: ಭೀಕರ ದುರಂತಕ್ಕೆ 20 ಬಲಿ – ಬೆಂಗಳೂರಿಗೆ ಬರುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿದ್ದು ಹೇಗೆ? ಬೈಕ್‌ ಗುದ್ದಿದ್ದಾಗ ಏನಾಯ್ತು?

    ಸಾಫ್ಟ್‌ವೇರ್‌ ಎಂಜಿನಿಯರ್ ಧಾತ್ರಿ
    ಗನ್ನಮನೇನಿ ಧಾತ್ರಿ (ಜಿ.ಧಾತ್ರಿ) ಬಾಪಟ್ಲ ಜಿಲ್ಲೆಯವರು. ಮಾವನ ಮನೆಯಿಂದ ಬೆಂಗಳೂರಿಗೆ ವಾಪಸ್‌ ಬರುತ್ತಿದ್ದ ವೇಳೆ ಸಾವನ್ನಪ್ಪಿದ್ದು, ಬದುಕು ದುರಂತ ಅಂತ್ಯಕಂಡಿದೆ. ಇದನ್ನೂ ಓದಿ: ಬೈಕ್‌ ಡಿಕ್ಕಿ, ಧಗಧಗಿಸಿದ ಬೆಂಗಳೂರಿಗೆ ಬರುತ್ತಿದ್ದ ಬಸ್ಸು – 20ಕ್ಕೂ ಹೆಚ್ಚು ಮಂದಿ ಸಜೀವ ದಹನ

    ಬೆಂಗಳೂರಿಗೆ ಬರುತ್ತಿದ್ದ ಬಸ್‌ನಲ್ಲಿ ಇಬ್ಬರು ಮಕ್ಕಳು ಸೇರಿ ಒಟ್ಟು 41 ಮಂದಿ ಪ್ರಯಾಣಿಕರಿದ್ದರು. 20 ಪ್ರಯಾಣಿಕರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈವರೆಗೆ 11 ಮೃತದೇಹಗಳನ್ನ ಹೊರ ತೆಗೆಯಲಾಗಿದ್ದು, ಮೃತದೇಹ ಪತ್ತೆಹಚ್ಚುವ ಕಾರ್ಯವೂ ನಡೆದಿದೆ. ವಿಧಿವಿಜ್ಞಾನ ತಜ್ಞರು ಮೃತ ದೇಹಗಳ ಮಾದರಿಗಳನ್ನು ಸಂಗ್ರಹಿಸಿ ಡಿಎನ್‌ಎ ಪರೀಕ್ಷೆಗಳನ್ನು ನಡೆಸಿದ ನಂತರ ಪೊಲೀಸರು ಮೃತರ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸುವ ಸಾಧ್ಯತೆಯಿದೆ. ಘಟನಾ ಸ್ಥಳದಿಂದ ಡ್ರೈವರ್‌ ಎಸ್ಕೇಪ್‌ ಆಗಿದ್ದು, ನಿರ್ವಾಹಕನನ್ನ ವಶಕ್ಕೆ ಪಡೆಯಲಾಗಿದೆ.

    ಬಸ್‌ನಲ್ಲಿದ್ದವರ ಪಟ್ಟಿ:
    ಅಶ್ವಿನ್ ರೆಡ್ಡಿ (36), ಜಿ.ಧಾತ್ರಿ (27), ಕೀರ್ತಿ (30), ಪಂಕಜ್ (28), ಯುವನ್ ಶಂಕರ್ ರಾಜು (22), ತರುಣ್ (27), ಆಕಾಶ್ (31), ಗಿರಿರಾವ್ (48), ಬುನ್ಸಾಯ್ (33), ಗಣೇಶ್ (30), ಜಯಂತ್ ಪುಷ್ವಾಹ (27), ಪಿಲ್ವಾಮಿನ್ ಬೇಬಿ (30), ರಮೇಶ್ ಕುಮಾರ್ (30) ಮತ್ತು ಅವರ ಕುಟುಂಬದವರು (64), ಕೆ. ಅನುಷಾ (22), ಮೊಹಮ್ಮದ್ ಕೈಸರ್ (51), ದೀಪಕ್ ಕುಮಾರ್ (24), ಆಂದೋಜ್ ನವೀನ್ ಕುಮಾರ್ (26), ಪ್ರಶಾಂತ್ (32), ಎಂ. ಸತ್ಯನಾರಾಯಣ (28), ಮೇಘನಾಥ್ (25), ವೇಣು ಗುಂಡ (33), ಚರಿತ್ (21), ಚಂದನ ಮಂಗ (23), ಸಂಧ್ಯಾರಾಣಿ ಮಂಗಾ (43), ಗ್ಲೋರಿಯಾ (24), ಎಲ್ಲೆಸಾ ಎಸ್. ಶ್ರೀಹರ್ಷ (24), ಶಿವ (24), ಶ್ರೀನಿವಾಸ ರೆಡ್ಡಿ (40), ಸುಬ್ರಹ್ಮಣ್ಯಂ (26), ಕೆ. ಅಶೋಕ್ (27), ಎಂ.ಜಿ. ರಾಮ ರೆಡ್ಡಿ (50), ಉಮಾಪತಿ (32), ಅಮೃತ್ ಕುಮಾರ್ (18), ವೇಣುಗೋಪಾಲ್ ರೆಡ್ಡಿ (24).

    ತುರ್ತು ನಿರ್ಗಮನ ದ್ವಾರದ ಮುರಿದು ಎಸ್ಕೇಪ್ ಆದವರು
    ಜಯಸೂರ್ಯ, ರಾಮಿರೆಡ್ಡಿ, ಅಕಿರಾ, ವೇಣುಗೋಪಾಲ್ ರೆಡ್ಡಿ, ಹರಿಕಾ, ಸತ್ಯನಾರಾಯಣ, ಶ್ರೀಲಕ್ಷ್ಮಿ, ನವೀನ್ ಕುಮಾರ್, ಅಖಿಲ್, ಜಸ್ಮಿತಾ, ರಮೇಶ್ ಮತ್ತು ಸುಬ್ರಹ್ಮಣ್ಯಂ.