Tag: ಕರ್ನಾಟಕ ಬಜೆಟ್ 2020

  • ಹಿಂದುಳಿದ ಜಿಲ್ಲೆಯನ್ನು ಕಡೆಗಣಿಸಿದ್ರಾ ಯಡಿಯೂರಪ್ಪ?

    ಹಿಂದುಳಿದ ಜಿಲ್ಲೆಯನ್ನು ಕಡೆಗಣಿಸಿದ್ರಾ ಯಡಿಯೂರಪ್ಪ?

    ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರಕ್ಕೆ ಈ ಬಾರಿಯ ಬಜೆಟ್ ಭಾರೀ ನಿರಾಸೆ ಮೂಡಿಸಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಚಾಮರಾಜನಗರವನ್ನು ಸಂಪೂರ್ಣವಾಗಿ ಕಡೆಗಣಿಸಿದ್ದಾರೆ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

    ಕೆರೆ ತುಂಬಿಸುವ ಯೋಜನೆ, ಕಬಿನಿ ಕುಡಿಯುವ ನೀರಿನ ಎರಡನೇ ಹಂತದ ಯೋಜನೆ, ರೇಷ್ಮೆ ಕೃಷಿ ಅಭಿವೃದ್ಧಿ, ಕೈಗಾರಿಕೆಗಳ ಸ್ಥಾಪನೆ, ಕೋಲ್ಡ್ ಸ್ಟೋರೇಜ್ ಸೇರಿದಂತೆ ಹಲವಾರು ಯೋಜನೆಗಳಿಗೆ ಅನುದಾನ ಘೋಷಣೆಯಾಗಲಿದೆ ಎಂಬ ನಿರೀಕ್ಷೆ ಇತ್ತು. ಆದರೆ ಈ ನಿರೀಕ್ಷೆಗಳೆಲ್ಲಾ ಹುಸಿಯಾಗಿವೆ.

    ಇದಕ್ಕೆ ಇಲ್ಲಿನ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸಹ ಕಾರಣರಾಗಿದ್ದಾರೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲೆಗೆ ಬೇಕಾದ ಅನುದಾನ ತರುವಲ್ಲಿ ಅವರು ವಿಫಲರಾಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

    ಇನ್ನೊಂದೆಡೆ ಕಳೆದ ಬಾರಿ ಮುಖ್ಯಮಂತ್ರಿಯಾದಾಗ ಕೃಷಿ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದ ಯಡಿಯೂರಪ್ಪ ಈಗ ಬಹುಮತವಿದ್ದರೂ ಸಾಲಮನ್ನಾ ಮಾಡುವ ಬಗ್ಗೆ ಚಕಾರವೆತ್ತದೇ ರೈತರಿಗೆ ದ್ರೋಹ ಎಸಗಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಈ ರಾಜ್ಯದಲ್ಲಿಯೇ ಇದ್ದೇವಾ ಅನ್ನೋ ಮನೋಭಾವ ಕೂಡ ಕಾಡುತ್ತಿದೆ ಎಂದು ರೈತರು ರಾಜ್ಯ ಬಜೆಟ್ ಬಗ್ಗೆ ಕಿಡಿಕಾರಿದ್ದಾರೆ.

  • ಶ್ರೇಷ್ಠ ಬಜೆಟ್ ಮಂಡಿಸಿದ ಬಿಎಸ್‍ವೈಗೆ ವೇದವ್ಯಾಸ ಕಾಮತ್ ಅಭಿನಂದನೆ

    ಶ್ರೇಷ್ಠ ಬಜೆಟ್ ಮಂಡಿಸಿದ ಬಿಎಸ್‍ವೈಗೆ ವೇದವ್ಯಾಸ ಕಾಮತ್ ಅಭಿನಂದನೆ

    ಮಂಗಳೂರು: ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಸರ್ವಶ್ರೇಷ್ಠ ಬಜೆಟ್ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ.ವೇದವ್ಯಾಸ ಕಾಮತ್ ತಿಳಿಸಿದ್ದಾರೆ.

    ರಾಜ್ಯ ಬಜೆಟ್ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಅವರು ಬಿಪಿಎಲ್ ಕಾರ್ಡ್ ಹೊಂದಿದವರಿಗೆ, ಕೃಷಿಕರಿಗೆ, ಜನಸಾಮಾನ್ಯರಿಗೆ, ಮೀನುಗಾರರಿಗೆ, ಮಹಿಳಾ ಕಾರ್ಮಿಕರಿಗೆ, ಕಟ್ಟಡ ಕಾರ್ಮಿಕರಿಗೆ, ಆರೋಗ್ಯ ಕ್ಷೇತ್ರಕ್ಕೆ, ಪ್ರವಾಸೋದ್ಯಮ ಮತ್ತು ವಿವಿಧ ನಿಗಮಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನವನ್ನು ನೀಡಿ ಸರ್ವಜನ ಸುಖ ಮತ್ತು ಸರ್ವಜನ ಹಿತವಾಗಿರುವ ಬಜೆಟ್ ಮಂಡಿಸಿದ್ದಾರೆ.

    ಮಹಿಳಾ ಮೀನುಗಾರರ ಸಬಲೀಕರಣಕ್ಕಾಗಿ 1.5 ಕೋಟಿ ಅನುದಾನದಲ್ಲಿ ಮತ್ರ್ಯ ವಿಕಾಸ ಯೋಜನೆ, ಮಹಿಳಾ ಮೀನುಗಾರರಿಗೆ 5 ಕೋಟಿ ವೆಚ್ಚದಲ್ಲಿ ದ್ವಿಚಕ್ರ ವಾಹನ, ಹೀನ್ನೀರು ಮೀನುಗಾರಿಕೆ ಅಭಿವೃದ್ಧಿ, ಒಂದು ಲಕ್ಷ ಕಟ್ಟಡ ಕಾರ್ಮಿಕರಿಗೆ ಮುಖ್ಯಮಂತ್ರಿ ಆರೋಗ್ಯ ಸುರಕ್ಷಾ ಯೋಜನೆ, ಕಟ್ಟಡ ಕಾರ್ಮಿಕರಿಗೆ ಉಚಿತ ಪ್ರಿ ಪೇಯ್ಡ್ ಹೆಲ್ತ್ ಕಾರ್ಡ್ ಯೋಜನೆ, ಕಟ್ಟಡ ಕಾರ್ಮಿಕರಿಗೆ 10 ಮೊಬೈಲ್ ಕ್ಲಿನಿಕ್, ಸಾವಯವ ಕೃಷಿ ಪ್ರೋತ್ಸಾಹಕ್ಕೆ 200 ಕೋಟಿ ಘೊಷಣೆ ಮಾಡಿದ್ದಾರೆ ಎಂದರು.

    ಕರಾವಳಿ ಕಿಂಡಿ ಅಣೆಕಟ್ಟು ಯೋಜನೆಗೆ ಅನುದಾನ, ನವನಗರೋತ್ಥಾನ ಯೋಜನೆಗೆ 8,344 ಕೋಟಿ, ವಿಶ್ವಕರ್ಮ ಅಭಿವೃದ್ಧಿ ನಿಗಮಕ್ಕೆ 25 ಕೋಟಿ, ಪ್ರವಾಸೋದ್ಯಮಕ್ಕೆ 500 ಕೋಟಿ, ಈಗಾಗಲೇ ನೆರೆ ಪರಿಹಾರಕ್ಕೆ 3000 ಕೋಟಿ ವಿತರಣೆ, ಕಿಡ್ನಿ ವೈಫಲ್ಯ ಹೊಂದಿದವರಿಗೆ ಉಚಿತ ಪೆರಿಟೋನಿಯಲ್ ಡಯಾಲೀಸಿಸ್ ಯೋಜನೆ, ಸಂಚಾರಿ ಹೆಲ್ತ್ ಕ್ಲಿನಿಕ್ ಆರಂಭ, ಕೃಷಿ ಯೋಜನೆಯ ಅಭಿವೃದ್ಧಿಗೆ 32,259 ಕೋಟಿ ಅನುದಾನ ಸಹಿತ ವಿವಿಧ ಯೋಜನೆಗಳಿಗೆ ಅನುದಾನ ನೀಡುವ ಮೂಲಕ ದೂರದೃಷ್ಟಿಯ, ಶ್ರೇಷ್ಠ ಬಜೆಟ್ ಅನ್ನು ಮಂಡಿಸಿದ ಮುಖ್ಯಮಂತ್ರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

  • ಕರ್ನಾಟಕ ಬಜೆಟ್ 2020 – 1 ರೂ. ಎಲ್ಲಿಂದ ಬರುತ್ತದೆ? ಎಲ್ಲಿ ಖರ್ಚಾಗುತ್ತದೆ?

    ಕರ್ನಾಟಕ ಬಜೆಟ್ 2020 – 1 ರೂ. ಎಲ್ಲಿಂದ ಬರುತ್ತದೆ? ಎಲ್ಲಿ ಖರ್ಚಾಗುತ್ತದೆ?

    ಬೆಂಗಳೂರು: ಸಿಎಂ ಯಡಿಯೂರಪ್ಪನವರು ತಮ್ಮ ಏಳನೇ ಬಜೆಟ್ ಇಂದು ಮಂಡಿಸಿದರು. ಬಜೆಟ್ ನ ಒಟ್ಟು ಗಾತ್ರ 2,37,893 ಕೋಟಿ ರೂ ಆಗಿದ್ದು, 2020-21ನೇ ಸಾಲಿನಲ್ಲಿ ಒಟ್ಟು 2,33,134 ಕೋಟಿ ರೂ ಜಮೆಗಳನ್ನು ನಿರೀಕ್ಷಿಸಲಾಗಿದೆ. ಅಂತೆಯೇ 2,37,893 ಕೋಟಿ ವೆಚ್ಚವನ್ನು ಅಂದಾಜಿಸಲಾಗಿದ್ದು, ಆದಾಯಕ್ಕೂ ವೆಚ್ಚಕ್ಕೂ 4,759 ಅಂತರವಿದೆ. ಹಾಗಾದರೆ ಆದಾಯ ಎಲ್ಲಿಂದ ಬರುತ್ತದೆ, ಎಲ್ಲಿ ಖರ್ಚಾಗುತ್ತದೆ ಎನ್ನುವ ವಿವರವನ್ನು ಇನ್ನು ನೀಡಲಾಗಿದೆ.

    1 ರೂ. ಎಲ್ಲಿಂದ ಬರುತ್ತದೆ?
    ರಾಜ್ಯ ತೆರಿಗೆಯೇತರ ರಾಜಸ್ವದಿಂದ – 3 ಪೈಸೆ
    ಕೇಂದ್ರ ಸರ್ಕಾರದ ಸಹಾಯಾನುದಾನ -7 ಪೈಸೆ
    ಕೇಂದ್ರ ತೆರಿಗೆ ಪಾಲಿನಿಂದ – 12
    ಸಾಲದಿಂದ -22
    ರಾಜ್ಯ ತೆರಿಗೆ ಆದಾಯದಿಂದ -54 ಪೈಸೆ
    ಸಾರ್ವಜನಿಕ ಲೆಕ್ಕ (ನಿವ್ವಳ) -2
    (ಜಿಎಸ್‍ಟಿ ನಷ್ಟ ಪರಿಹಾರ ಒಳಗೊಂಡಿದೆ)

    1 ರೂ. ಎಲ್ಲಿ ಖರ್ಚಾಗುತ್ತದೆ?
    ವೇತನ ಮತ್ತು ಭತ್ಯೆಗಳು-21 ಪೈಸೆ
    ಬಂಡವಾಳ ವೆಚ್ಚ-20 ಪೈಸೆ
    ಇತರೆ ರಾಜಸ್ವ ವೆಚ್ಚ-16
    ಆಡಳಿತಾತ್ಮಕ ವೆಚ್ಚ- 2 ಪೈಸೆ
    ಸಾಮಾಜಿಕ ಭದ್ರತಾ ಪಿಂಚಣಿಗಳು – 3 ಪೈಸೆ
    ಸಹಾಯಾನುದಾನ ಮತ್ತು ಇತರೆ- 4 ಪೈಸೆ
    ಪಿಂಚಣಿ-9 ಪೈಸೆ
    ಸಹಾಯಧನ-10 ಪೈಸೆ
    ಋಣ ಮೇಲುಸ್ತುವಾರಿ-15 ಪೈಸೆ

  • ಅತಿ ಕಡಿಮೆ ಅವಧಿಯಲ್ಲಿ ಬಜೆಟ್ ಓದಿದ ಬಿಎಸ್‍ವೈ

    ಅತಿ ಕಡಿಮೆ ಅವಧಿಯಲ್ಲಿ ಬಜೆಟ್ ಓದಿದ ಬಿಎಸ್‍ವೈ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು 2020-21 ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಇಂದು ಬಜೆಟ್ ಓದುವ ಮೂಲಕ ಸಿಎಂ ಹೊಸ ದಾಖಲೆ ಬರೆದಿದ್ದಾರೆ.

    ಹೌದು. ಸಿಎಂ ಬಿಎಸ್‍ವೈ ಅವರು ಇಂದು ಅತಿ ಕಡಿಮೆ ಅವಧಿಯಲ್ಲಿ ಬಜೆಟ್ ಓದಿ ಮುಗಿಸಿದ್ದಾರೆ. ಸಿಎಂ ಅವರು 112 ಪುಟಗಳ ಬಜೆಟ್ ಪುಸ್ತಕ ಓದಲು 1 ಗಂಟೆ 40 ನಿಮಿಷಗಳ ಕಾಲ ತೆಗೆದುಕೊಂಡಿದ್ದಾರೆ. ಈ ಮೂಲಕ ರಾಜ್ಯದ ಆಯವ್ಯಯ ಇತಿಹಾಸದಲ್ಲಿ ಅತಿ ಕಡಿಮೆ ಅವಧಿಗೆ ಬಜೆಟ್ ಓದಿದ ಸಿಎಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ಕಳೆದ ವರ್ಷ ಅಂದರೆ 2019ರ ಫೆಬ್ರವರಿ 8ಕ್ಕೆ ಹೆಚ್.ಡಿ ಕುಮಾರಸ್ವಾಮಿ ಅವರು ಬಜೆಟ್ ಮಂಡನೆ ಮಾಡಿದ್ದರು. ಅಂದು ಹೆಚ್‍ಡಿಕೆ ಅವರು 3 ಗಂಟೆ 10 ನಿಮಿಷಗಳ ಕಾಲ ಬಜೆಟ್ ಓದಲು ತೆಗೆದುಕೊಂಡಿದ್ದರು. ಮಧ್ಯಾಹ್ನ 12.35ಕ್ಕೆ ಕುಮಾರಸ್ವಾಮಿಯವರು ಬಜೆಟ್ ಭಾಷಣ ಆರಂಭಿಸಿ 3.40ಕ್ಕೆ ತಮ್ಮ ಬಜೆಟ್ ಭಾಷಣ ಪೂರ್ಣಗೊಳಿಸಿದ್ದರು. ಕುಮಾರಸ್ವಾಮಿ ಅಂದು ಸತತ 3 ಗಂಟೆ 10 ನಿಮಿಷಗಳ ಕಾಲ ನಿಂತುಕೊಂಡೇ ಬಜೆಟ್ ಭಾಷಣ ಓದಿದ್ದರು. ಈ ಹಿನ್ನೆಲೆಯಲ್ಲಿ ಬಜೆಟ್ ಮಂಡನೆ ಪೂರ್ಣಗೊಳ್ಳುತ್ತಿದ್ದಂತೆಯೇ ಹೆಚ್‍ಡಿಕೆ ಬಳಿ ಧಾವಿಸಿದ ಆಡಳಿತ ಪಕ್ಷದ ಶಾಸಕರು ಅಭಿನಂದಿಸಿದ್ದರು.

    ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅಂದ್ರೆ 2018ರಲ್ಲಿ ಫೆಬ್ರವರಿ 16ಕ್ಕೆ 4 ಗಂಟೆ 10 ನಿಮಿಷ ಬಜೆಟ್ ಓದಲು ತೆಗೆದುಕೊಂಡಿದ್ದರು. ಆ ಸಂದರ್ಭದಲ್ಲಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು 2,09,181 ಕೋಟಿ ರೂ.ಗಳ ಗಾತ್ರದ ಬಜೆಟ್ ಮಂಡಿಸಿದ್ದ ಅವರು, ಕಳೆದ ಐದು ವರ್ಷಗಳಲ್ಲಿ ತಮ್ಮ ಸರ್ಕಾರದ ಸಾಧನೆಗಳ ವರದಿ ಒಪ್ಪಿಸಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ 6ನೆಯ ಹಾಗೂ ಹಣಕಾಸು ಸಚಿವರಾಗಿ 13ನೇ ಬಜೆಟ್ ಅನ್ನು ಜನತೆಯ ಮುಂದೆ ತೆರೆದಿಟ್ಟಿದ್ದರು.