Tag: ಕರ್ನಾಟಕ ತಂಡ

  • ವಿಜಯ್‌ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ

    ವಿಜಯ್‌ ಹಜಾರೆ ಟ್ರೋಫಿ ಗೆದ್ದ ಕರ್ನಾಟಕ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ

    ಬೆಂಗಳೂರು: 5ನೇ ಬಾರಿಗೆ ವಿಜಯ್‌ ಹಜಾರೆ ಟ್ರೋಫಿ (Vijay Hazare Trophy) ಗೆದ್ದ ಮಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ ತಂಡಕ್ಕೆ ತವರಿನಲ್ಲಿ ಅದ್ಧೂರಿ ಸ್ವಾಗತ ಸಿಕ್ಕಿದೆ.

    ಕರ್ನಾಟಕ ಕ್ರಿಕೆಟ್‌ ಅಸೋಸಿಯೇಷನ್ (karnataka cricket Association) ಹಾಗೂ ಆಟಗಾರರ ಕುಟುಂಬಸ್ಥರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತ ಕೋರಿದ್ದಾರೆ. ಹೂಗುಚ್ಛ ನೀಡಿ, ಹಾರ ಹಾಕಿ ಬರಮಾಡಿಕೊಂಡಿದ್ದಾರೆ. ಏರ್‌ಪೋರ್ಟ್‌ನಿಂದ ಹೊರಬರುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಜೈಕಾರ ಹಾಕಿದ್ದಾರೆ. ಇದನ್ನೂ ಓದಿ: Champions | ವಿಜಯ್‌ ಹಜಾರೆ ಟ್ರೋಫಿ – 5ನೇ ಬಾರಿ ಕರ್ನಾಟಕ ಚಾಂಪಿಯನ್

    ಇದಕ್ಕೂ ಮುನ್ನ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿದ ಕರ್ನಾಟಕ ತಂಡದ ಬ್ಯಾಟರ್‌ ಸ್ಮರಣ್ ರವಿಚಂದ್ರನ್ ಪೋಷಕರು ʻಪಬ್ಲಿಕ್‌ ಟಿವಿʼ ಜೊತೆಗೆ ಮಾತನಾಡಿದರು. ತಾಯಿ ಸುನಂದಾ, ತಂದೆ ರವಿಚಂದ್ರನ್ ಹಾಗೂ ಕೋಚ್ ಸಯ್ಯದ್ ಟ್ರೋಫಿ ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು. ಇದನ್ನೂ ಓದಿ: Champions Trophy 2025 | ಟೀಂ ಇಂಡಿಯಾ ಪ್ರಕಟ – ರೋಹಿತ್‌ ಸಾರಥಿ, 15 ತಿಂಗಳ ಬಳಿಕ ಶಮಿ ಕಂಬ್ಯಾಕ್‌

    ಕರ್ನಾಟಕ ಕಪ್ ಗೆದ್ದಿರೋದು ಖುಷಿ ಇದೆ. ನನ್ನ ಮಗ ಶತಕ ಸಿಡಿಸಿದ್ದು, ಒಂದು ಖುಷಿಯಾದ್ರೆ, ತಂಡ ಕಪ್ ಗೆದ್ದಿರೋದು ಡಬಲ್ ಖುಷಿ ಇದೆ. ತನ್ನ ಮಗ ತುಂಬಾ ಶ್ರಮ ಪಟ್ಟಿದ್ದಾನೆ. ಫೈನಲ್ ಮ್ಯಾಚ್ ಗೆದ್ದ ಮೇಲೆ ಕಪ್ ಗೆದ್ದಿದ್ದೇವೆ ಅಂತಾ ಕಾಲ್ ಮಾಡಿ ಮಾತನಾಡಿದ. ಆ ಕ್ಷಣ ತುಂಬಾ ಖುಷಿ ಕೊಟ್ಟಿತು ಎಂದು ಹೇಳಿಕೊಂಡಿದ್ದಾರೆ.

    ವಡೋದರಾದ ಕೊಟಾಂಬಿ ಸ್ಟೇಡಿಯಂನಲ್ಲಿ ನಡೆದ ವಿಜಯ್‌ ಹಜಾರೆ ಟ್ರೋಫಿ ಫೈನಲ್‌ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಮಯಾಂಕ್‌ ಅಗರ್ವಾಲ್‌ ನೇತೃತ್ವದ ಕರ್ನಾಟಕ ತಂಡ 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 348 ರನ್‌ ಗಳಿಸಿತ್ತು. 349 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನಟ್ಟಿದ ಕರುಣ್‌ ನಾಯರ್‌ ನೇತೃತ್ವದ ವಿದರ್ಭ ತಂಡ 48.2 ಓವರ್‌ಗಳಲ್ಲಿ 312 ರನ್‌ಗಳಿಗೆ ಆಲೌಟ್‌ ಆಗಿ ಸೋಲೊಪ್ಪಿಕೊಂಡಿತ್ತು. ಇದನ್ನೂ ಓದಿ: ಎಸ್‌ಪಿ ಸಂಸದೆಯ ಜೊತೆ ಕ್ರಿಕೆಟಿಗ ರಿಂಕು ಸಿಂಗ್‌ ಎಂಗೇಜ್‌, ಶೀಘ್ರವೇ ಮದ್ವೆ

    ಕರ್ನಾಟಕ ತಂಡ (Karnataka Team) 2013-14ರಲ್ಲಿ ಚೊಚ್ಚಲ ವಿಜಯ್‌ ಹಜಾರೆ ಟ್ರೋಫಿ ಗೆದ್ದುಕೊಂಡಿತ್ತು. ಆ ನಂತರ 2014-15, 2017-18 ಹಾಗೂ 2019-20ರಲ್ಲಿ ಪ್ರಶಸ್ತಿ ಗೆದ್ದಿತ್ತು. ಇದೀಗ ಮಯಾಂಕ್‌ ಅಗರ್ವಾಲ್‌ ನಾಯಕತ್ವದಲ್ಲಿ ಫೈನಲ್‌ ತಲುಪಿದ್ದ ಕರ್ನಾಟಕ ತಂಡ 5ನೇ ಬಾರಿ ಚಾಂಪಿಯನ್‌ ಕಿರೀಟ ಮುಡಿಗೇರಿಸಿಕೊಂಡಿದೆ.

  • ಕರ್ನಾಟಕಕ್ಕೆ ಗೆಲುವು ಅನಿವಾರ್ಯ- ಸೋತ್ರೆ ರಣಜಿಯಿಂದ ಔಟ್?

    ಕರ್ನಾಟಕಕ್ಕೆ ಗೆಲುವು ಅನಿವಾರ್ಯ- ಸೋತ್ರೆ ರಣಜಿಯಿಂದ ಔಟ್?

    ಬೆಂಗಳೂರು: ಸೌರಾಷ್ಟ್ರ ಪಂದ್ಯವನ್ನ ಡ್ರಾ ಮಾಡಿಕೊಂಡು ಅಂಕಪಟ್ಟಿಯಲ್ಲಿ 7ನೇ ಸ್ಥಾನಕ್ಕೆ ಇಳಿದಿರುವ ಕರ್ನಾಟಕ ತಂಡಕ್ಕೆ ಮಾಡು ಇಲ್ಲವೇ ಮಡಿ ಪರಿಸ್ಥಿತಿ ಎದುರಾಗಿದೆ. 6ನೇ ಸುತ್ತಿನ ಪಂದ್ಯದಲ್ಲಿ ರೇಲ್ವೇಸ್ ವಿರುದ್ಧ ಇಂದು ಅದೃಷ್ಟ ಪರೀಕ್ಷೆಗೆ ಕರ್ನಾಟಕ ತಂಡ ಇಳಿಯುತ್ತಿದೆ. ನಾಕೌಟ್ ಗೆ ಲಗ್ಗೆ ಇಡಬೇಕಾದ್ರೆ ಈ ಪಂದ್ಯದಲ್ಲಿ ಗೆಲ್ಲಲೇಬೇಕಾದ ಒತ್ತಡದಲ್ಲಿ ಕರ್ನಾಟಕ ತಂಡವಿದೆ.

    ದೆಹಲಿಯಲ್ಲಿ ಪಂದ್ಯ ನಡೆಯಲಿದ್ದು, ಮದುವೆ ಹಿನ್ನೆಲೆ ಕಳೆದ ಪಂದ್ಯದಿಂದ ದೂರ ಉಳಿದಿದ್ದ ಕರುಣ್ ನಾಯರ್ ಈ ಪಂದ್ಯಕ್ಕೆ ಲಭ್ಯರಿದ್ದಾರೆ. ಗಾಯಾಳು ಆಗಿದ್ದ ಕೆ. ಗೌತಮ್ ಕೂಡ ಈ ಪಂದ್ಯಕ್ಕೆ ಲಭ್ಯರಿದ್ದು, ಕರ್ನಾಟಕ ತಂಡ ಮತ್ತಷ್ಟು ಬಲಿಷ್ಟವಾಗಿದೆ. ಆಡಿರುವ 5 ಪಂದ್ಯಗಳಿಂದ 17 ಅಂಕ ಗಳಿಸಿರುವ ಕರ್ನಾಟಕ ಸದ್ಯ ಅಂಕಪಟ್ಟಿಯಲ್ಲಿ 7 ನೇ ಸ್ಥಾನದಲ್ಲಿದೆ. ಅಗ್ರ 5 ತಂಡ ನಾಕೌಟ್ ಹಂತಕ್ಕೆ ತಲುಪಲಿದ್ದು ಕರ್ನಾಟಕಕ್ಕೆ ಈ ಪಂದ್ಯ ಪ್ರಮುಖವಾಗಿದೆ. 6 ಪಂದ್ಯ ಆಡಿ 13 ಅಂಕ ಗಳಿಸಿರುವ ರೈಲ್ವೇಸ್ ಕೂಡ ಒತ್ತಡದಲ್ಲಿದ್ದು, ಕರ್ನಾಟಕಕ್ಕೆ ತಿರುಗೇಟು ಕೊಡುವ ತವಕದಲ್ಲಿದೆ.

    ಇದುವರೆಗೂ ಕರ್ನಾಟಕ ಮತ್ತು ರೈಲ್ವೇಸ್ 9 ಪಂದ್ಯಗಳಲ್ಲಿ ಮುಖಾಮುಖಿಯಾಗಿದೆ. ಕರ್ನಾಟಕ 5 ಪಂದ್ಯದಲ್ಲಿ ಜಯಗಳಿಸಿ 3 ಪಂದ್ಯ ಡ್ರಾ ಮಾಡಿಕೊಂಡಿದೆ. ರೈಲ್ವೇಸ್ 1 ಪಂದ್ಯ ಮಾತ್ರ ಗೆದ್ದಿದೆ.

  • ಸಾಧನೆಗಿಲ್ಲ ಅಂಗವಿಕಲತೆ- ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಕರ್ನಾಟಕ ಚಾಂಪಿಯನ್

    ಸಾಧನೆಗಿಲ್ಲ ಅಂಗವಿಕಲತೆ- ರಾಷ್ಟ್ರಮಟ್ಟದ ಕಬಡ್ಡಿಯಲ್ಲಿ ಕರ್ನಾಟಕ ಚಾಂಪಿಯನ್

    ಮಂಗಳೂರು: ಬಲಿಷ್ಠರ ಆಟವೆಂದೇ ಹೆಸರು ಗಳಿಸಿರುವ ಕಬಡ್ಡಿಯನ್ನು ಈಗ ವಿಕಲ ಚೇತನರೂ ಆಡಲಾರಂಭಿಸಿದ್ದು, ರಾಷ್ಟ್ರಮಟ್ಟದ ವಿಕಲ ಚೇತನರ ಕಬಡ್ಡಿ ಕೂಟದಲ್ಲಿ ಕರ್ನಾಟಕ ತಂಡ ಪ್ರಶಸ್ತಿಯನ್ನು ಗೆದ್ದಿದೆ.

    ಒಂದು ಕೈ ಊನ ಇದ್ದವರು, ಕೈ ಅರ್ಧಕ್ಕೆ ಕಳಕೊಂಡವರು, ಒಂದು ಕಾಲು ಸಪೂರ ಇದ್ದವರು, ಒಂದು ಕಾಲೇ ಇಲ್ಲದವರು ಹೀಗೆ ನಾನಾ ತೆರನಾದ ದೈಹಿಕ ಊನವುಳ್ಳವರು ನಿರಾಯಾಸವಾಗಿ ಕಬಡ್ಡಿ ರೈಡ್ ಮಾಡ್ತಿರೋದನ್ನು ನೋಡಿದರೆ ಅಚ್ಚರಿಯಾಗುತ್ತೆ. ಆದ್ರೆ ದೈಹಿಕ ಬಲ ಮತ್ತು ಯುಕ್ತಿಯಿಂದಲೇ ಆಡೋ ಕಬಡ್ಡಿ ಆಟವನ್ನು ವಿಕಲಚೇತನರು, ತಾವು ಇತರೇ ಆಟಗಾರರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ ಅನ್ನುವಂತೆ ಆಡಿ ತೋರಿಸಿದ್ದಾರೆ.

    ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ವಿಕಲ ಚೇತನರ ಕಬಡ್ಡಿ ಕೂಟದಲ್ಲಿ 12 ರಾಜ್ಯಗಳ ತಂಡಗಳು ಭಾಗವಹಿಸಿದ್ದವು. ವಿಪರ್ಯಾಸ ಅಂದರೆ, ಸರ್ಕಾರದ ಪ್ರೋತ್ಸಾಹದ ಕೊರತೆಯಿಂದ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಕಬಡ್ಡಿ ಪಂದ್ಯಾವಳಿ ನಡೆಯಿತು. ರಾಷ್ಟ್ರ ಮಟ್ಟದಲ್ಲಿ ಕೂಟ ನಡೆಯುತ್ತಿದ್ದರೂ ಪ್ರಚಾರ ಇಲ್ಲದ ಕಾರಣ ಸೀಮಿತ ಸಂಖ್ಯೆಯಲ್ಲಿ ಪ್ರೇಕ್ಷಕರು ಪಂದ್ಯವನ್ನು ವೀಕ್ಷಿಸಿದರು.

    ವಿಕಲಚೇತನರು ಎಂದರೆ ಅವರಿಂದ ಏನೂ ಮಾಡಲು ಸಾಧ್ಯವಿಲ್ಲ ಎನ್ನುವವರೇ ಹೆಚ್ಚು. ಆದರೆ ಸಾಧಿಸಬೇಕೆಂಬ ಛಲವೊಂದಿದ್ದರೆ ಎಂತವರೂ ಏನನ್ನಾದರೂ ಸಾಧಿಸಬಹುದು ಅನ್ನೋದನ್ನ ಕಬಡ್ಡಿ ಪಂದ್ಯದಲ್ಲಿ ಭಾಗವಹಿಸಿದ್ದ ವಿಕಲಚೇತನರು ತೋರಿಸಿಕೊಟ್ಟಿದ್ದಾರೆ. ದೈಹಿಕವಾಗಿ ಬಲಿಷ್ಠರಾಗಿರುವರು ಆಡುವ ಪ್ರೋ ಕಬಡ್ಡಿಯನ್ನು ನೋಡೋರು, ಅಂಗವೈಕಲ್ಯತೆ ಇರುವವರು ತಾವೇನೂ ಕಮ್ಮಿಯಿಲ್ಲ ಎಂದು ಕಬಡ್ಡಿ ಆಡಿ ದೇಶಕ್ಕೆ ಚಾಂಪಿಯನ್ ಆಗಿದ್ದಾರೆ.

    ಸಾಮಾನ್ಯವಾಗಿ ಅಂಗ ವಿಕಲಚೇತರೆಂದರೆ ವೀಲ್ ಚೇರ್ ಕೊಟ್ಟು ಬದಿಗಿರಿಸುತ್ತಾರೆ. ಆದರೆ, ಅವರಲ್ಲೂ ಆಡೋ ಹುಮ್ಮಸ್ಸು ಇರುತ್ತೆ ಅನ್ನುವುದನ್ನು ಯಾರೂ ಮನಗಾಣುವುದಿಲ್ಲ. ಪ್ಯಾರಾ ಒಲಿಂಪಿಕ್ಸ್ ಅನ್ನುವ ಪ್ರತ್ಯೇಕ ವಿಭಾಗ ಇದ್ದರೂ, ಕಬಡ್ಡಿ ಆಡಿಸಿ ನೋಡಿದ್ದಿಲ್ಲ. ಆದರೆ ಬಾಗಲಕೋಟೆ, ವಿಜಾಪುರ, ಕೊಪ್ಪಳದಂತಹ ಹಳ್ಳಿ ಹುಡುಗರೇ ಕರ್ನಾಟಕ ತಂಡದಲ್ಲಿದ್ದು ಇದೇ ಮೊದಲ ಬಾರಿಗೆ ನಡೆದ ರಾಷ್ಟ್ರೀಯ ವಿಕಲ ಚೇತನರ ಕಬಡ್ಡಿ ಪಂದ್ಯಾವಳಿಯ ಫೈನಲಿನಲ್ಲಿ ರಾಜಸ್ಥಾನ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿದ್ದಾರೆ.

    ಇಷ್ಟಕ್ಕೂ ಕರ್ನಾಟಕ ತಂಡವನ್ನು ಕಟ್ಟಿ ಬೆಳೆಸಿದ ಕೀರ್ತಿ ಕೋಚ್  ಶೇಖರ್ ಗೆ ಸಲ್ಲುತ್ತದೆ. ದೈಹಿಕ ಊನ ಇದ್ದವರನ್ನು ಸ್ಫೂರ್ತಿ ಕೊಟ್ಟು 18 ವರ್ಷಗಳ ಹಿಂದೆ ತಂಡ ಕಟ್ಟಿದ ಶೇಖರ್ ಸದ್ಯ ತಂಡದ ಕೋಚ್ ಆಗಿದ್ದಾರೆ. ಬಲಿಷ್ಠರ ಕ್ರೀಡೆಗೆ ವಿಕಲ ಚೇತನರ ಎಂಟ್ರಿಯಾಗಿದ್ದಾರೆ. ಸಮಾಜ ಹಾಗೂ ಸರ್ಕಾರದ ಕಡೆಯಿಂದ ಸಹಕಾರ ಸಿಕ್ಕರೆ ಇಂಥವರೂ ರಾಷ್ಟ್ರ ಮಟ್ಟದಲ್ಲಿ ಮಿಂಚಬಲ್ಲರು ಅನ್ನುವುದನ್ನು ತೋರಿಸಿದ್ದಾರೆ. ಒಟ್ಟಿನಲ್ಲಿ ಸಾಧಿಸಬೇಕೆಂಬ ಛಲವೊಂದಿದ್ದರೆ ಏನನ್ನಾದರೂ ಸಾಧಿಸಬಹುದು ಅನ್ನೋದನ್ನು ಈ ಸಾಹಸಿಗರು ನಾಡಿಗೆ ತೋರಿಸಿಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv