Tag: ಕರ್ನಾಟಕ ಜಾನಪದ ವಿಶ್ವವಿದ್ಯಾಲಯ

  • ವಿಚಾರಣೆ ಮಾಡಿ ಅಂದ್ರೆ ಕಿತ್ತಾಡಿಕೊಂಡ ವಿವಿ ಸಮಿತಿ ಸದಸ್ಯರು

    ವಿಚಾರಣೆ ಮಾಡಿ ಅಂದ್ರೆ ಕಿತ್ತಾಡಿಕೊಂಡ ವಿವಿ ಸಮಿತಿ ಸದಸ್ಯರು

    ಹಾವೇರಿ: ಸಹಾಯಕ ಪ್ರಾಧ್ಯಾಪಕಿಯೊಬ್ಬರ ಮೇಲೆ ಮೌಲ್ಯಮಾಪನ ಕುಲಸಚಿವ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಕ್ಕೆ ಯತ್ನಿಸಿದ ಪ್ರಕರಣದ ವಿಚಾರಣೆ ನಡೆಸಬೇಕಿದ್ದ ಮಹಿಳಾ ದೌರ್ಜನ್ಯ ತಡೆ ಸಮಿತಿ ಸದಸ್ಯರು ಕಿತ್ತಾಡಿಕೊಂಡಿರುವ ಘಟನೆ ಜಿಲ್ಲೆಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

    ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಗೊಟಗೋಡಿ ಗ್ರಾಮದ ಬಳಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ. ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿಗೆ ಮೌಲ್ಯಮಾಪನ ಕುಲಸಚಿವ ಡಾ.ಎಂ.ಎನ್.ವೆಂಕಟೇಶ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಕುರಿತಾಗಿ ಜನವರಿ 26ರಂದು ವಿಚಾರಣೆ ನಡೆಸಲು ವಿವಿಯ ಮಹಿಳಾ ದೌರ್ಜನ್ಯ ತಡೆ ಸಮಿತಿ ಸದಸ್ಯರು ಸೇರಿದ್ದರು. ಈ ವೇಳೆ ಸಭೆಗೆ ವಿಶ್ವವಿದ್ಯಾಲಯ ಸದಸ್ಯರನ್ನು ಹೊರತುಪಡಿಸಿ ಎನ್.ಜಿ.ಓ ದ ಸದಸ್ಯೆಯೊಬ್ಬರು ಬಂದಿದ್ದರು. ಆಗ ಎನ್.ಜಿ.ಓ ದ ಸದಸ್ಯೆ ಹಾಜರಿಗೆ ಸಮಿತಿ ಸದಸ್ಯರು ಹಾಗೂ ವಿವಿಯ ಸಹಾಯಕ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮೀ ಆಕ್ಷೇಪ ವ್ಯಕ್ತಪಡಿಸಿ ಪರಸ್ಪರ ಕಿತ್ತಾಟ ಮಾಡಿದ್ದಾರೆ.

    ಸಭೆ ನಡೆಸಲು ಬಂದಿದ್ದ ಸದಸ್ಯರಿಗೆ ಇಂದು ರಜಾ ದಿನ, ಅಧಿಕಾರಿಗಳು ಇದ್ದಾಗ ಬನ್ನಿ ಎಂದು ಸಹಾಯಕ ಕುಲಸಚಿವ ಶಹಜಹಾನ್ ಮುದಕವಿ ಕೊಠಡಿಯಿಂದ ಹೊರಗೆ ಕಳಿಸಿದ್ದರು. ಈ ವೇಳೆ ಡಾ.ವಿಜಯಲಕ್ಷ್ಮಿ ಮತ್ತು ಸಮಿತಿಯ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದ್ದು, ಪೊಲೀಸ್ ಠಾಣೆಯ ಮೆಟ್ಟಿಲೇರುವವರೆಗೆ ಸದಸ್ಯೆಯರ ಕಿತ್ತಾಟ ಮುಂದುವರಿದಿತ್ತು. ಪ್ರಕರಣದ ಬಗ್ಗೆ ಮಾತನಾಡುವಾಗ ಅವಾಚ್ಯ ಪದಗಳಿಂದ ನಿಂದಿಸಿ, ಜೀವ ಬೆದರಿಕೆ ಹಾಕಿದ್ದಾರೆಂದು ಡಾ.ವಿಜಯಲಕ್ಷ್ಮಿ ಸಮಿತಿ ಅಧ್ಯಕ್ಷೆ ಡಾ.ಭಾರತಿ ಮರವಂತೆ ಮತ್ತು ಎನ್.ಜಿ.ಓ ದ ಅನಸೂಯಾ ಬಳಿಗಾರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಈ ಬಗ್ಗೆ ಸಮಿತಿ ಸದಸ್ಯರಲ್ಲವಾದರೂ ವಿವಿಯಲ್ಲಿ ಸಭೆಗೆ ಬಂದಿದ್ದಕ್ಕೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆಂದು ಸಹಾಯಕ ಪ್ರಾಧ್ಯಾಪಕಿ ಡಾ.ವಿಜಯಲಕ್ಷ್ಮಿ ಮತ್ತು ಸಹಾಯಕ ಕುಲಸಚಿವ ಶಹಜಹಾನ್ ವಿರುದ್ಧ ಪ್ರತಿದೂರನ್ನು ಅನಸೂಯಾ ಅವರು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿಗ್ಗಾವಿ ಪಟ್ಟಣದಲ್ಲಿ ಮಾತೃಭಾಷಾ ದಿನಾಚರಣಾ ಕಾರ್ಯಕ್ರಮ

    ಶಿಗ್ಗಾವಿ ಪಟ್ಟಣದಲ್ಲಿ ಮಾತೃಭಾಷಾ ದಿನಾಚರಣಾ ಕಾರ್ಯಕ್ರಮ

    ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಆಡಳಿತ ಭವನದ ಸಭಾಂಗಣದಲ್ಲಿ ಇಂದು ಮಾತೃಭಾಷಾ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಯಿತು. ಕನ್ನಡ ಭಾಷಿಕರು ನಿಪುಣರು, ಪರಿಣಿತರು, ಚತುರರು ಮತ್ತು ಕಾವ್ಯಪ್ರಯೋಗ ಶಕ್ತಿಉಳ್ಳವರು ಆಗಿದ್ದರೆಂದು ಧಾರವಾಡದ ಜೆ.ಎಸ್.ಎಸ್. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಜಿನದತ್ತ ಹಡಗಲಿ ಅಭಿಪ್ರಾಯ ವ್ಯಕ್ತಪಡಿಸಿದರು.

    ಭಾಷೆ ವಿಗ್ರಹವಾದರೆ, ಲಿಪಿ ಉತ್ಸವ ಮೂರ್ತಿಯಾಗಿದೆ. ಹೊಳೆಯು ಪ್ರಕಾಶಿಸುವ ಅಭಿಪ್ರಾಯ ಮತ್ತು ಮನೋಭಾವನೆಗಳನ್ನು ವ್ಯಕ್ತಪಡಿಸುವ ಮಹತ್ತರವಾದ ಸಾಧನ ಭಾಷೆಯಾಗಿದೆ. ಭಾಷೆಯೆಂಬುದು ಸಂಸ್ಕೃತದ ಪದವಾಗಿದ್ದು, ಕನ್ನಡದಲ್ಲಿ ಭಾಷೆ, ನುಡಿ, ಮಾತು ಎಂಬೆಲ್ಲ ಪದಗಳಿಂದ ಗುರುತಿಸಲಾಗಿದೆ. ಬಾಯಿಮಾತಿನಲ್ಲಿ ಇದ್ದ ಕನ್ನಡದ ಮೊದಲ ಲಿಪಿಯ ರೂಪ ಹಲ್ಮಿಡಿ ಶಾಸನವಾಗಿದೆ. ರಾಷ್ಟ್ರಭಾಷೆ, ರಾಜಭಾಷೆ ಮತ್ತು ದೇವಭಾಷೆಗಳ ಅಬ್ಬರದಲ್ಲಿ ಮತ್ತು ಪರಭಾಷಾ ವ್ಯಾಮೋಹದಿಂದ ಕನ್ನಡ ಸೊರಗುತ್ತಿದೆ ಎಂದು ಜಿನದತ್ತ ಅವರು ಆತಂಕ ವ್ಯಕ್ತಪಡಿಸಿದರು.

    ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಯವರಾದ (ಪ್ರ) ಪ್ರೊ. ಡಿ.ಬಿ.ನಾಯಕ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಮಾತೃ ಭಾಷೆಯನ್ನು ನೆನಪಿಸುವ ದಿನಾಚರಣೆ ಆಚರಿಸುವ ಸ್ಥಿತಿ ಬಂದಿದೆ ಎಂದರೆ ಭಾರತದ ಭಾಷೆಗಳ ಸ್ಥಿತಿಯ ಅವಲೋಕನ ಮಾಡುವಂತದ್ದು ಅವಶ್ಯಕವಾಗಿದೆ. ವಿಶ್ವವೇ ಒಂದು ಪುಟ್ಟ ಗ್ರಾಮವೆಂಬ ಪರಿಕಲ್ಪನೆ ಬಂದ ನಂತರ ಜಾಗತೀಕರಣ ಒಡ್ಡುತ್ತಿರುವ ಸವಾಲುಗಳನ್ನು ಎದುರಿಸುವ ಭರಾಟೆಯಲ್ಲಿ ಭಾರತದ ಭಾಷೆಗಳು ನಲುಗುತ್ತಿವೆ ಎಂದು ವಿಷಾದಿಸಿದರು.

    ಕರ್ನಾಟಕದಲ್ಲಿ ಆಡು ಭಾಷೆ, ಉಪ ಭಾಷೆ ಹಾಗೂ ನುಡಿ ಭಾಷೆ ಬಳಕೆಯನ್ನು ಕಾಣಬಹುದು. ಎಷ್ಟು ಭಾಷೆಗಳಿವೆಯೋ ಅಷ್ಟು ಸಂಸ್ಕøತಿಯನ್ನು ನಾವು ಕಾಣಬಹುದಾಗಿದೆ. ಮಾತೃ ಭಾಷೆಯೆಂದರೆ ತಾಯಿಯ ಭಾಷೆಯಾಗಿದ್ದು, ವ್ಯವಹಾರಿಕ ಭಾಷೆಯನ್ನು ಸಾಕು ತಾಯಿಯ ಸ್ಥಾನದಲ್ಲಿ ನೋಡಬಹುದಾಗಿದೆ. ಮಾತೃ ಭಾಷೆಯಲ್ಲಿ ನಮ್ಮ ಭಾವನೆಗಳನ್ನು ಪರಿಣಾಮಕಾರಿಯಾಗಿ ಮನ ಮುಟ್ಟುವಂತೆ ಸಂವಹನಿಸಬಹುದಾಗಿದೆ. ಭಾಷೆಯ ಬಗ್ಗೆ ಅಭಿಮಾನ ಹೊಂದಿರಬೇಕೇ ಹೊರತಾಗಿ ದುರಾಭಿಮಾನ ಸಲ್ಲದು ಎಂದು ಡಿ.ಬಿ.ನಾಯಕ್ ಕಿವಿಮಾತು ಹೇಳಿದರು.

    ಮೌಲ್ಯಮಾಪನ ಕುಲಸಚಿವರಾದ ಪ್ರೊ. ಡಿ. ಮುರಹರಿ ನಾಯ್ಕ ಇವರು ಮಾತನಾಡಿ, ಭಾಷೆ ಇಲ್ಲದೇ ನಾಗರೀಕತೆ ಬೆಳವಣಿಗೆ ಅಸಾಧ್ಯ. ಮನುಷ್ಯನ ಬೇಕು ಬೇಡಗಳ ಈಡೇರಿಕೆಗೆ ಭಾಷೆ ಸಹಕಾರಿ ಮಾತೃ ಭಾಷೆಗೆ ಪ್ರಾಧ್ಯಾನ್ಯತೆ ದೊರೆಯಬೇಕು. ವ್ಯವಹಾರಿಕ ಭಾಷೆಗೆ ಅವಶ್ಯಕತೆಗೆ ತಕ್ಕ ಪ್ರಾಮುಖ್ಯತೆ ದೊರೆಯಲಿ. ಲಿಪಿ ಇಲ್ಲದ ಭಾಷೆಗಳ ಉಳಿವಿಗೆ ಸಾಕಷ್ಟು ಸವಾಲುಗಳು ಎದುರಾಗಿವೆ ಎಂದು ಹೇಳಿದರು.

    ಮಾತೃಭಾಷಾ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರವಾಸೋದ್ಯಮ ವಿಭಾಗದ ವಿದ್ಯಾರ್ಥಿ ಶ್ರೀ ಮಾಳಗಿ ದೇವೇಂದ್ರಪ್ಪ ಅವರು ಪ್ರಥಮ ಸ್ಥಾನಗಳಿಸಿದ್ದು, ಎಂ.ಬಿ.ಎ. ವಿಭಾಗದ ಕು. ಶ್ರೀದೇವಿ ಹನಗೋಡಿಮಠ ದ್ವೀತಿಯ ಸ್ಥಾನ, ಜನಪದ ಮಾಧ್ಯಮ ಮತ್ತು ಸಂವಹನ ವಿಭಾಗದ ಶ್ರೀ ಈರಣ್ಣ ಬಿ.ಎಲ್. ತೃತೀಯ ಸ್ಥಾನ ಗಳಿಸಿದರು. ಆಶುಭಾಷಣ ಸ್ಪರ್ಧೆಯಲ್ಲಿ ಶ್ರೀ ಈರಣ್ಣ ಬಿ.ಎಲ್. ಪ್ರಥಮ ಸ್ಥಾನ, ಕು.ಶ್ರೀದೇವಿ ಹನಗೋಡಿ ಮಠ ದ್ವಿತೀಯ ಸ್ಥಾನ ಹಾಗೂ ಶ್ರೀ ಶಶಿಧರ್ ಮೂರನೇ ಸ್ಥಾನ ಪಡೆದಿದ್ದಾರೆ. ಈ ಸಂದರ್ಭದಲ್ಲಿ ವಿಶೇಷ ಉಪನ್ಯಾಸ ನೀಡಿದ ಪ್ರೊ.ಜಿನದತ್ತ ಹಡಗಲಿ ಅವರನ್ನು ಸನ್ಮಾನಿಸಲಾಯಿತು.