Tag: ಕರ್ನಾಟಕ ಉಪ ಚುನಾವಣೆ

  • ಮಂಡ್ಯ ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿದ್ದರಾಮಯ್ಯ ಅಂತಿಮ

    ಮಂಡ್ಯ ಬಿಜೆಪಿ ಅಭ್ಯರ್ಥಿಯಾಗಿ ಡಾ.ಸಿದ್ದರಾಮಯ್ಯ ಅಂತಿಮ

    ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಬಿಜೆಪಿಯಿಂದ ಡಾ.ಸಿದ್ದರಾಮಯ್ಯರನ್ನು ಅಂತಿಮ ಮಾಡಿದೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿ ಲಭ್ಯವಾಗಿವೆ.

    ಇಂದು ನಗರದ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಾಜಿ ಡಿಸಿಎಂ ಆರ್.ಅಶೋಕ್ ನೇತೃತ್ವದಲ್ಲಿ ಸಭೆ ನಡೆಸಲಾಗಿತ್ತು. ಕೇವಲ ನಾಲ್ಕು ತಿಂಗಳ ಅಧಿಕಾರಕ್ಕೆ ಹಲವು ನಾಯಕರು ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಚುನಾವಣೆಗೆ ಸ್ಫರ್ಧಿಸಲು ನಿರಾಸಕ್ತಿ ತೋರಿಸಿದ್ದರು. ಕೊನೆ ಗಳಿಗೆಯಲ್ಲಿ ಬಿಜೆಪಿ ಮಾಜಿ ಶಾಸಕ ದೊಡ್ಡಬೋರೇಗೌಡ ಅವರ ಪುತ್ರ ನಿವೃತ್ತ ಹೆಚ್ಚುವರಿ ವಾಣಿಜ್ಯ ತೆರಿಗೆ ಅಧಿಕಾರಿ ಡಾ. ಸಿದ್ದರಾಮಯ್ಯ ಅವರನ್ನು ಅಂತಿಮ ಮಾಡಿದೆ. ದೊಡ್ಡಬೋರೇಗೌಡರು ಈ ಹಿಂದೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

    ಸಿದ್ದರಾಮಯ್ಯನವರು ಹೆಚ್ಚುವರಿ ವಾಣಿಜ್ಯ ತೆರಿಗೆ ಅಧಿಕಾರಿಯಾಗಿ ಮತ್ತು ಕೆಇಆರ್ ಸಿಯ ಕಾರ್ಯದರ್ಶಿಯೂ ಆಗಿ ಜುಲೈನಲ್ಲಿ ನಿವೃತ್ತಿ ಹೊಂದಿದ್ದಾರೆ. ಇಂದು ಪಕ್ಷ ಸೇರ್ಪಡೆಗೊಂಡ ಸಿದ್ದರಾಮಯ್ಯನವರು ಮಂಡ್ಯ ಕ್ಷೇತ್ರಕ್ಕೆ ಧುಮುಕಿದ್ದಾರೆ. ಉಪ ಚುನಾವಣೆಯಲ್ಲಿಯೂ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡ ಹಿನ್ನೆಲೆಯಲ್ಲಿ ಬಿಜೆಪಿಗೆ ಅಭ್ಯರ್ಥಿಗಾಗಿ ಹುಡುಕಾಟದಲ್ಲಿತ್ತು. ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ನಾಯಕ ಮಂಡ್ಯ ಉಪ ಚುನಾವಣೆ ಕಣಕ್ಕೆ ಇಳಿಯಲಿದ್ದಾರೆ. ಇದೂವರೆಗೂ ಜೆಡಿಎಸ್ ತನ್ನ ಪಕ್ಷದಿಂದ ಯಾರನ್ನು ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಿಲ್ಲ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮಿನಿಸಮರಕ್ಕೆ ಸಿದ್ಧಗೊಂಡ ಪಕ್ಷಗಳು- ಬಿಜೆಪಿ ಅಭ್ಯರ್ಥಿಗಳು ಬಹುತೇಕ ಫೈನಲ್!

    ಮಿನಿಸಮರಕ್ಕೆ ಸಿದ್ಧಗೊಂಡ ಪಕ್ಷಗಳು- ಬಿಜೆಪಿ ಅಭ್ಯರ್ಥಿಗಳು ಬಹುತೇಕ ಫೈನಲ್!

    ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳಲ್ಲಿ ಯಾವ ಅಭ್ಯರ್ಥಿಗಳನ್ನು ಕಣ್ಣಕ್ಕೀಳಿಸಬೇಕೆಂದು ಮೂರು ಪಕ್ಷಗಳು ನಿರ್ಣಯಿಸಿವೆ. ಯಾವ ಕ್ಷೇತ್ರವನ್ನು ಯಾವ ಪಕ್ಷ ಹಂಚಿಕೊಳ್ಳಬೇಕು ಎಂಬುದರ ಕುರಿತಾಗಿ ದೋಸ್ತಿಗಳಲ್ಲಿ ಉಂಟಾಗಿದ್ದ ಗೊಂದಲ ಕೊನೆಗೂ ಬಗೆಹರಿದಿದೆ. ನಿರೀಕ್ಷೆಯಂತೆ ರಾಮನಗರ, ಮಂಡ್ಯ ಜೆಡಿಎಸ್‍ಗೆ ಸಿಕ್ಕಿದ್ದು, ಶಿವಮೊಗ್ಗ, ಬಳ್ಳಾರಿ ಲೋಕಸಭೆ ಕ್ಷೇತ್ರ ಮತ್ತು ಜಮಖಂಡಿ ವಿಧಾನಸಭೆ ಕ್ಷೇತ್ರ ಕಾಂಗ್ರೆಸ್‍ಗೆ ದಕ್ಕಿದೆ.

    ಮಂಗಳವಾರ ಕುಮಾರಕೃಪಾ ಅತಿಥಿ ಗೃಹದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಈ ಮಿನಿ ಸಮರವನ್ನು ಜಂಟಿಯಾಗಿ ಎದುರಿಸಲು ಎರಡು ಪಕ್ಷಗಳು ನಿರ್ಧರಿಸಿವೆ. ಕಾಂಗ್ರೆಸ್-ಜೆಡಿಎಸ್ ಸಭೆ ಅಪರೂಪದ ಸನ್ನಿವೇಶಕ್ಕೆ ಸಾಕ್ಷಿಯಾಯಿತು. ಸಮ್ಮಿಶ್ರ ಸರ್ಕಾರ ಬರುವುದಕ್ಕೂ ಮೊದಲು ಬದ್ಧ ವೈರಿಗಳಂತೆ ಕರೆಯಲ್ಪಡುತ್ತಿದ್ದ, ಒಂದು ಕಾಲದ ಒಡನಾಡಿಗಳೂ ಆದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ ಅಕ್ಕ ಪಕ್ಕದಲ್ಲೇ ಕುಳಿತು ಪರಸ್ಪರ ಚರ್ಚೆ ನಡೆಸಿದರು.

    ಸಭೆ ಬಳಿಕ ಮಾತನಡಿದ ಈ ಬಗ್ಗೆ ಸ್ಪಷ್ಟಪಡಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಒಟ್ಟಿಗೆ ಚುನಾವಣಾ ಪ್ರಚಾರ ಮಾಡೋದಾಗಿ ಹೇಳಿದ್ರು. ಕೊಮುವಾದಿ ಪಕ್ಷವನ್ನ ಮಟ್ಟ ಹಾಕುವುದೇ ನಮ್ಮ ಉದ್ದೇಶ ಅಂತಾ ಹೇಳಿದರು. ಈ ಸಭೆಯಲ್ಲಿ ಜೆಡಿಎಸ್‍ನಿಂದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡ್ಯಾನಿಷ್ ಅಲಿ, ಕಾಂಗ್ರೆಸ್‍ನಿಂದ ಮಾಜಿ ಸಿಎಂ ಸಿದ್ದರಾಮಯ್ಯ, ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರರು ಭಾಗವಹಿಸಿದ್ದರು.

    ಬಿಜೆಪಿಯಲ್ಲೂ ಅಭ್ಯರ್ಥಿ ಆಯ್ಕೆ ಜೋರಾಗಿದೆ. ಡಾಲರ್ಸ್ ಕಾಲೋನಿಯಾ ಯಡಿಯೂರಪ್ಪ ಅವರ ನಿವಾಸದಲ್ಲಿ ಪಕ್ಷದ ಪ್ರಮುಖರು ಸಭೆ ಸೇರಿದ್ದರು. ಕಾಂಗ್ರೆಸ್ ಸಭೆಯಲ್ಲಿ ರಾಮನಗರದ ಬಗ್ಗೆ ಚರ್ಚೆಯಾದ್ರೆ, ಬಿಜೆಪಿ ಸಭೆಯಲ್ಲಿ ಜಮಖಂಡಿ ಕ್ಷೇತ್ರದ ಅಭ್ಯರ್ಥಿ ವಿಷಯವಾಗಿ ಬಿಸಿಬಿಸಿ ಚರ್ಚೆಯಾಯ್ತು. ಕೊನೆಗೆ ಸಂಧಾನ ಸಮಾಧಾನ ನಡೆದು ಹೆಸರು ಅಂತಿಮವಾಗಿದ್ದು, ಇನ್ಮೂರು ದಿನಗಳಲ್ಲಿ ಘೋಷಿಸಲಿದ್ದಾರೆ.

    ಸಂಭಾವ್ಯ ಬಿಜೆಪಿ ಅಭ್ಯರ್ಥಿಗಳು
    * ರಾಮನಗರ ವಿಧಾನಸಭಾ ಕ್ಷೇತ್ರ – ರುದ್ರೇಶ್
    * ಜಮಖಂಡಿ ವಿಧಾನಸಭಾ ಕ್ಷೇತ್ರ – ಶ್ರೀಕಾಂತ್ ಕುಲಕರ್ಣಿ
    * ಮಂಡ್ಯ ಲೋಕಸಭಾ ಕ್ಷೇತ್ರ – ಅಶ್ವಥ್ ನಾರಾಯಣ್
    * ಶಿವಮೊಗ್ಗ ಲೋಕಸಭಾ ಕ್ಷೇತ್ರ – ಬಿ.ವೈ. ರಾಘವೇಂದ್ರ
    * ಬಳ್ಳಾರಿ ಲೋಕಸಭಾ ಕ್ಷೇತ್ರ – ಜೆ.ಶಾಂತ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕರ್ನಾಟಕ ಉಪ ಚುನಾವಣೆ-ಆಪರೇಷನ್ ಮಾಡೋರಿಗೆ ಆಪರೇಷನ್ ಭೀತಿ!

    ಕರ್ನಾಟಕ ಉಪ ಚುನಾವಣೆ-ಆಪರೇಷನ್ ಮಾಡೋರಿಗೆ ಆಪರೇಷನ್ ಭೀತಿ!

    -ಬಳ್ಳಾರಿ ಗೆಲುವು ಸಾಧಿಸಲು ‘ಕೈ’ ರಣತಂತ್ರ

    ಬಳ್ಳಾರಿ: ಶಾಸಕ ಶ್ರೀರಾಮುಲು ರಾಜೀನಾಮೆಯಿಂದ ತೆರವಾಗಿರುವ ಬಳ್ಳಾರಿ ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಈ ಬೆನ್ನಲ್ಲೇ ಬಿಜೆಪಿ ತೆಕ್ಕೆಯಲ್ಲಿರುವ ಲೋಕಸಭಾ ಕ್ಷೇತ್ರವನ್ನ ಕಸಿದುಕೊಳ್ಳಲು ಕಾಂಗ್ರೆಸ್ ತಂತ್ರವೊಂದನ್ನ ರೂಪಿಸಿದೆ.

    ಮೈತ್ರಿಕೂಟ ಸರ್ಕಾರ ಕೆಡವಲು ಆಪರೇಷನ್ ಕಮಲಕ್ಕೆ ಕೈ ಹಾಕಿದ್ದ ರೆಡ್ಡಿ-ರಾಮುಲುಗೆ ಲೋಕಸಭೆಯ ಉಪ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲು ಕೈ ನಾಯಕರು ಸೆಚ್ಕ್ ಹಾಕಿದ್ದಾರಂತೆ. ಬಿಜೆಪಿಯಿಂದ ಲೋಕಸಭೆಯ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕತೆ ತೋರುತ್ತಿರುವ ಅಭ್ಯರ್ಥಿಗಳನ್ನೆ ಪಕ್ಷಕ್ಕೆ ಸೆಳೆದು ಅವರನ್ನೇ ಅಭ್ಯರ್ಥಿಯಾಗಿ ಮಾಡುವ ಆಲೋಚನೆ ಕೈ ನಾಯಕರದ್ದಾಗಿದೆ. ಈ ಮೂಲಕ ಆಪರೇಷನ್ ಕಮಲಕ್ಕೆ ಕೈ ಹಾಕಿದವರಿಗೆ ಆಪರೇಷನ್ ಭೀತಿ ಹುಟ್ಟಿಸಲು ಕೈ ನಾಯಕರು ರಣತಂತ್ರ ರೂಪಿಸಿದ್ದಾರೆ ಎಂಬ ಮಾಹಿತಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.

    ಶ್ರೀರಾಮುಲುಗೆ ಸೆಡ್ಡು ಹೊಡೆದ ಡಿಕೆಶಿ: ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ 6 ರಿಂದ 7 ಮಂದಿ ಆಕ್ಷಾಂಕಿಗಳು ಸಜ್ಜಾಗಿ ನಿಂತಿದ್ದಾರೆ. ಆದರೆ ಬಿಜೆಪಿ ಮಾತ್ರ ಇದೂವರೆಗೂ ಅಭ್ಯರ್ಥಿಯನ್ನ ಘೋಷಣೆ ಮಾಡಲು ಹಿಂದೆ ಮುಂದೆ ನೋಡುತ್ತಿದೆ. ಹೀಗಾಗಿ ಬಳ್ಳಾರಿ ಬೈ ಎಲೆಕ್ಷನ್ ಉಸ್ತುವಾರಿ ವಹಿಸಿಕೊಂಡಿರುವ ಸಚಿವ ಡಿಕೆ ಶಿವಕುಮಾರ್ ಈ ಚುನಾವಣೆಯಲ್ಲಿ ರೆಡ್ಡಿ- ರಾಮುಲುಗೆ ಬಿಸಿ ಮುಟ್ಟಿಸಲು ಆಪರೇಷನ್ ಹಸ್ತ ಮಾಡೋ ಪ್ಲಾನ್ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಬಿಜೆಪಿಯಿಂದ ಟಿಕೇಟ್ ವಂಚಿತರಾದವರನ್ನೆ ಪಕ್ಷಕ್ಕೆ ಕರೆತಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಲ್ಲಿಸಿ ರೆಡ್ಡಿ-ರಾಮುಲುಗೆ ಬಿಸಿ ಮುಟ್ಟಿಸಲು ಡಿ.ಕೆ.ಶಿವಕುಮಾರ್ ಸಜ್ಜಾಗಿದ್ದಾರೆ ಅನ್ನೋ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿವೆ. ಹೀಗಾಗೇ ಮಾಜಿ ಸಂಸದ, ಶಾಸಕರಾಗಿರುವ ರಾಜ್ಯ ಬಿಜೆಪಿ ಉಪಾಧ್ಯಕ್ಷ ಶ್ರೀರಾಮುಲು ಬಳ್ಳಾರಿ ಕ್ಷೇತ್ರದ ಅಭ್ಯರ್ಥಿ ಹೆಸರನ್ನ ಘೋಷಣೆ ಮಾಡಲು ಹಿಂದೆ ಮುಂದೆ ನೋಡ್ತಿದ್ದಾರೆ. ಒಟ್ಟಾರೆ ಬಳ್ಳಾರಿ ಲೋಕಸಭಾ ಉಪ ಚುನಾವಣೆಯಲ್ಲಿ ಆಪರೇಷನ್ ಕಮಲಕ್ಕೆ ಕೈ ಹಾಕಿದವರಿಗೆ ಜಯವಾಗುತ್ತೋ ಅಥವಾ ಕಾಂಗ್ರೆಸ್ ನಾಯಕರ ರಣತಂತ್ರ ಯಶ್ವಸಿಯಾಗುತ್ತೋ ಅನ್ನೋದು ಇದೀಗ ಎಲ್ಲರ ಕುತೂಹಲ ಕೆರಳಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಯಾರೀ ಸ್ವಾಮಿ, ಲಕ್ಷ್ಮಿ ಅಶ್ವಿನ್‍ಗೌಡ? – ಫೇಸ್‍ಬುಕ್‍ನಲ್ಲಿ ಗರಂ ಆದ್ರಾ ಶಿವರಾಮೇಗೌಡ್ರು?

    ಯಾರೀ ಸ್ವಾಮಿ, ಲಕ್ಷ್ಮಿ ಅಶ್ವಿನ್‍ಗೌಡ? – ಫೇಸ್‍ಬುಕ್‍ನಲ್ಲಿ ಗರಂ ಆದ್ರಾ ಶಿವರಾಮೇಗೌಡ್ರು?

    – ಜೆಡಿಎಸ್‍ಗೆ ತಲೆನೋವಾದ ಮಂಡ್ಯ ಲೋಕಸಭೆ ಟಕೆಟ್ ಹಂಚಿಕೆ

    ಮಂಡ್ಯ: ಲೋಕಸಭಾ ಉಪಚುನಾವಣೆ ಘೋಷಣೆಯಾದ ಮಂಡ್ಯ ಜಿಲ್ಲೆಯಿಂದ ಯಾರನ್ನು ಕಣಕ್ಕಿಳಿಸಬೇಕೆಂಬುದು ಜೆಡಿಎಸ್‍ಗೆ ತಲೆನೋವು ಆರಂಭವಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಶಿವರಾಮೇಗೌಡರು ಯೋಚಿಸುತ್ತಿದ್ದು, ಜೆಡಿಎಸ್ ಟಿಕೆಟ್‍ಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಇತ್ತ ಲಕ್ಷ್ಮಿ ಅಶ್ವಿನ್ ಗೌಡ ಅವರಿಗೆ ಜೆಡಿಎಸ್ ಟಿಕೆಟ್ ನೀಡುವ ಸಾಧ್ಯತೆಗಳಿವೆ. ಎಲ್.ಆರ್.ಶಿವರಾಮೇಗೌಡ ಎಂಬ ಹೆಸರಿನ ಫೇಸ್‍ಬುಕ್ ಪೇಜಿನಲ್ಲಿ ಬರೆದುಕೊಂಡಿರುವ ಕೆಲವು ಸಾಲುಗಳು ಜೆಡಿಎಸ್ ನಲ್ಲಿ ಅಸಮಾಧಾನದ ಹೊಗೆ ಕಾಣಿಸಿಕೊಂಡಿದೆ ಎಂದು ಹೇಳುತ್ತಿವೆ.

    ಫೇಸ್‍ಬುಕ್ ನಲ್ಲಿ ಏನು ಬರೆಯಲಾಗಿದೆ?
    ಯಾರಿ ಸ್ವಾಮಿ, ಈ ಲಕ್ಷ್ಮಿಅಶ್ವಿನಿ ಗೌಡ? ಎಷ್ಟು ವರ್ಷದಿಂದ ರಾಜಕೀಯದಲ್ಲಿ ಇದ್ದಾರೆ? ನಮ್ಮ ನಾಯಕರು ಶ್ರೀ ಎಲ್.ಆರ್.ಶಿವರಾಮೇ ಗೌಡರು ಸುಮಾರು 25 ವರ್ಷಗಳಿಂದ ರಾಜಕೀಯ ಜೀವನ ನಡೆಸುತ್ತಿದ್ದಾರೆ. ನಿನ್ನೆ ಮೊನ್ನೆ ಬಂದವರಿಗೆಲ್ಲ ಲೋಕಸಭಾ ಚುನಾವಣೆಗೆ ಟಿಕೆಟ್ ಬೇಕು ಅಂದ್ರೆ… ಹೆಂಗೆ ನೀವೇ ಹೇಳಿ… ಅಂತಾ ಬರೆಯಲಾಗಿದೆ.

    ಮಂಡ್ಯ ಜಿಲ್ಲೆಯ ಮುಂದಿನ ಜೆಡಿಎಸ್ ಲೋಕಸಭಾ ಅಭ್ಯರ್ಥಿ ಎಂದು ಬಿಂಬಿತವಾಗಿರುವ ಎಲ್.ಆರ್.ಶಿವರಾಮೇಗೌಡರಿಗೆ ಟಿಕೆಟ್ ಕೊಡಲಿ. ಎಲ್ಲ ನಮ್ಮ ಜೆಡಿಎಸ್ ನಾಯಕರು ಸಂಪೂರ್ಣ ಸಪೋರ್ಟ್ ಮಾಡಿ. ಜೈ ದೇವೇಗೌಡಜೀ, ಜೈ ಕುಮಾರಣ್ಣ ಎಂದು ಮತ್ತೊಂದು ಪೋಸ್ಟ್ ಕೂಡ ಮಾಡಲಾಗಿದೆ.

    ಶಿವರಾಮೇಗೌಡರೇ ಈ ರೀತಿಯ ಸಾಲುಗಳನ್ನು ಬರೆದ್ರಾ ಎನ್ನುವ ಸಂಶಯ ಕೂಡ ಹುಟ್ಟಿಕೊಂಡಿದೆ. ಈ ಫೇಸ್‍ಬುಕ್ ಪೇಜ್ ಶಿವರಾಮೇಗೌಡರ ಅಧಿಕೃತ ಖಾತೆಯೇ ಅಥವಾ ಅಭಿಮಾನಿಗಳದ್ದಾ? ಎಂಬ ಗೊಂದಲವು ಹುಟ್ಟಿಕೊಂಡಿದೆ. ಈ ಬಗ್ಗೆ ಶಿವರಾಮೆಗೌಡರು ಇದೂವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ. ಮಂಡ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳುತ್ತಾ ಎಂಬುದರ ಬಗ್ಗೆ ಪ್ರಶ್ನೆಯೂ ಹುಟ್ಟಿಕೊಂಡಿದೆ.

    2017ರಲ್ಲಿ ಐಆರ್‍ಎಸ್ ವೃತ್ತಿಗೆ ರಾಜೀನಾಮೆ ನೀಡಿ ಲಕ್ಷ್ಮಿ ಅಶ್ವಿನ್ ಗೌಡ ಜೆಡಿಎಸ್ ಸೇರ್ಪಡೆಗೊಂಡು ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದಾರೆ. ಒಂದು ಮಾಜಿ ಸಂಸದೆ ರಮ್ಯಾ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ರೆ ಲಕ್ಷ್ಮಿ ಅಶ್ವಿನ್ ಗೌಡರನ್ನು ಎದುರಾಳಿಯಾಗಿ ನಿಲ್ಲಿಸುವುದು ಜೆಡಿಎಸ್ ನ ಲೆಕ್ಕಾಚಾರ ಎಂಬ ಸುದ್ದಿ ಬಲವಾಗಿ ಹರಿದಾಡಿತ್ತು. ಆದ್ರೆ ಶಿವಾರಮೇಗೌಡರು ಜೆಡಿಎಸ್‍ನ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ 25 ವರ್ಷಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ನನಗೆ ಟಿಕೆಟ್ ನೀಡಬೇಕೆಂಬುವುದು ಶಿವರಾಮೇಗೌಡ ಅಭಿಮಾನಿಗಳ ವಾದ. 2012ರ ಬ್ಯಾಚ್‍ನ ಐಆರ್‍ಎಸ್ ಆಫೀಸರ್ ಆಗಿದ್ದ ಲಕ್ಷ್ಮಿ ಅಶ್ವಿನ್ ಗೌಡ, ರೈಲ್ವೆ ಇಲಾಖೆಯಲ್ಲಿ ಸಹಾಯಕ ಹಣಕಾಸು ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದಾರೆ.

    ಕಳೆದ ಎರಡು ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‍ನಿಂದ ರಮ್ಯಾ ಮತ್ತು ಜೆಡಿಎಸ್ ನಿಂದ ಪುಟ್ಟರಾಜು ಮುಖಾಮುಖಿ ಆಗಿದ್ದರು. ಒಂದು ರಮ್ಯಾವರು ಗೆಲುವು ಕಂಡಿದ್ದರೆ, 2014ರಲ್ಲಿ ಪುಟ್ಟರಾಜು ಗೆಲುವು ಕಂಡಿದ್ದಾರೆ. ಈ ಬಾರಿ ವಿಧಾನಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಿದ್ದ ಪುಟ್ಟರಾಜು ಅವರು ಶಾಸಕರಾಗಿ ಆಯ್ಕೆಗೊಂಡಿದ್ದರಿಂದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಪುಟ್ಟರಾಜು ಅವರಿಂದ ತೆರವಾದ ಸ್ಥಾನಕ್ಕೆ ನವೆಂಬರ್ 3ರಂದು ಉಪ ಚುನಾವಣೆ ನಡೆಯಲಿದೆ. ಇದನ್ನೂ ಓದಿ: ಮಂಡ್ಯ ಲೋಕಸಭಾ ಉಪಚುನಾವಣೆ: ಜೆಡಿಎಸ್ ಟಿಕೆಟ್‍ಗೆ ಬೆಂಗ್ಳೂರಿಗೆ ದೌಡಾಯಿಸಿದ ಶಿವರಾಮೇಗೌಡ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮೈತ್ರಿ ಸರ್ಕಾರದ ಬೈ ಎಲೆಕ್ಷನ್ ಚಕ್ರವ್ಯೂಹ ಭೇದಿಸಲು ಬಿಜೆಪಿ ಪ್ಲಾನ್-ಹೈಕಮಾಂಡ್‍ನಿಂದ 2+1 ಫಾರ್ಮುಲಾ

    ಮೈತ್ರಿ ಸರ್ಕಾರದ ಬೈ ಎಲೆಕ್ಷನ್ ಚಕ್ರವ್ಯೂಹ ಭೇದಿಸಲು ಬಿಜೆಪಿ ಪ್ಲಾನ್-ಹೈಕಮಾಂಡ್‍ನಿಂದ 2+1 ಫಾರ್ಮುಲಾ

    ಬೆಂಗಳೂರು: ಕರ್ನಾಟಕದ ಎರಡು ವಿಧಾನಸಭೆ ಮತ್ತು ಮೂರು ಲೋಕಸಭಾ ಕ್ಷೇತ್ರಗಳ ಉಪ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ರಾಜಕೀಯ ಪಕ್ಷಗಳು ಗೆಲುವಿನ ಲೆಕ್ಕಾಚಾರದಲ್ಲಿ ನಿರತವಾಗಿವೆ. ವಿಧಾನಸಭಾ ಚುನಾವಣೆಯಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದ ಬಿಜೆಪಿ ಸರ್ಕಾರ ರಚಿಸುವಲ್ಲಿ ವಿಫಲವಾಯಿತು. ಈ ಹಿನ್ನೆಲೆಯಲ್ಲಿ ಉಪ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಮೈತ್ರಿ ಸರ್ಕಾರಕ್ಕೆ ತಿರುಗೇಟು ನೀಡಲು ಉಪಕದನದ ರಣತಂತ್ರಗಳನ್ನು ರಚಿಸಲು ಬಿಜೆಪಿ ಮುಂದಾಗಿದೆ.

    ಹೀಗಾಗಿ ಬಿಜೆಪಿ ಹೈಕಮಾಂಡ್ ಈಗಾಗಲೇ ರಾಜ್ಯ ನಾಯಕರಿಗೆ 2+1 ಫಾರ್ಮುಲಾ ಅನುಸರಿಸುವಂತೆ ಸೂಚಿಸಿದೆ. ಉಪ ಚುನಾವಣೆ ಇಷ್ಟವಿಲ್ಲದಿದ್ದರೂ ಬಿಜೆಪಿಗೆ ಬೈ ಎಲೆಕ್ಷನ್ ನಲ್ಲಿ ಗೆಲ್ಲುವುದು ಅನಿವಾರ್ಯವಾಗಿದೆ. 3 ಕ್ಷೇತ್ರಗಳ ಲೋಕಸಭೆ ಉಪಚುನಾವಣೆಯಲ್ಲಿ ಎರಡು ಕ್ಷೇತ್ರ ಗೆಲ್ಲೋದು, ಎರಡು ಕ್ಷೇತ್ರಗಳ ವಿಧಾನಸಭೆ ಚುನಾವಣೆಯಲ್ಲಿ 1 ಕ್ಷೇತ್ರ ಗೆಲ್ಲೋದು ಬಿಜೆಪಿಯ 2+1 ಫಾರ್ಮುಲಾ. ಚುನಾವಣೆಯ 5 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಲು ಬಿಜೆಪಿ 5 ತಂಡಗಳನ್ನು ರಚಿಸಿದೆಯಂತೆ. ಈ ಎಲ್ಲ ಟೀಂಗಳು ಪಕ್ಷದ ಅಭ್ಯರ್ಥಿಯ ಪರ ಪ್ರಚಾರ ಮಾಡಲಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.

    2+1 ಬಿಜೆಪಿ ಟಾಸ್ಕ್

    ಟೀಂ ನಂಬರ್ 1:
    ಮಾಜಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಶಿವಮೊಗ್ಗ ಉಸ್ತುವಾರಿ
    ಯಡಿಯೂರಪ್ಪರಿಗೆ ಈಶ್ವರಪ್ಪ, ವಿಜಯೇಂದ್ರ ಸಾಥ್
    ಒಟ್ಟು ಮೂವರ ನೇತೃತ್ವದ ಟೀಂಗೆ ಸಾಥ್ ನೀಡಲು 10 ಶಾಸಕರು ಉಸ್ತುವಾರಿಗಳು

    ಟೀಂ ನಂಬರ್ 2:
    ಶಾಸಕ ಶ್ರೀ ರಾಮುಲು ನೇತೃತ್ವದಲ್ಲಿ ಬಳ್ಳಾರಿ ಉಸ್ತುವಾರಿ
    ರಾಮುಲು ಅವರಿಗೆ ಸಂಸದೆ ಶೋಭಾ, ಶಾಸಕ ಸೋಮಶೇಖರ್ ರೆಡ್ಡಿ ಸಾಥ್
    ಮೂವರ ನೇತೃತ್ವದ ಟೀಂಗೆ ಸಾಥ್ ನೀಡಲು 10 ಶಾಸಕರು ಉಸ್ತುವಾರಿಗಳು

    ಟೀಂ ನಂಬರ್ 2:
    ಮಾಜಿ ಡಿಸಿಎಂ ಆರ್.ಅಶೋಕ್ ನೇತೃತ್ವದಲ್ಲಿ ಮಂಡ್ಯ ಉಸ್ತುವಾರಿ
    ಅಶೋಕ್ ಗೆ ಪ್ರತಾಪ್ ಸಿಂಹ, ಸಿ.ಟಿ.ರವಿ ಸಾಥ್
    ಮೂವರ ಟೀಂಗೆ ಸಾಥ್ ನೀಡಲು 8 ಶಾಸಕರುಗಳ ಉಸ್ತುವಾರಿ

    ಟೀಂ ನಂಬರ್ 4:
    ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ಉಸ್ತುವಾರಿ
    ಯೋಗೇಶ್ವರ್ ಅವರಿಗೆ ಪರಿಷತ್ ಸದಸ್ಯರಾದ ರವಿಕುಮಾರ್, ತೇಜಸ್ವಿನಿ ಗೌಡ ಸಾಥ್
    ಮೂವರ ಟೀಂಗೆ 5 ಮಂದಿ ಹಾಲಿ ಶಾಸಕರು, 3 ಮಂದಿ ಮಾಜಿ ಶಾಸಕರುಗಳ ಉಸ್ತುವಾರಿ

    ಟೀಂ ನಂಬರ್ 5:
    ಮಾಜಿ ಸಿಎಂ ಜಗದೀಶ್ ಶೆಟ್ಟರ್ ನೇತೃತ್ವದಲ್ಲಿ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿ
    ಶೆಟ್ಟರ್ ಅವರಿಗೆ ಶಾಸಕರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ ಸಾಥ್
    ಮೂವರ ಟೀಂಗೆ 10 ಮಂದಿ ಶಾಸಕರುಗಳ ಉಸ್ತುವಾರಿ

    ಇತ್ತ ಬಳ್ಳಾರಿ ಮತ್ತು ಶಿವಮೊಗ್ಗ ಎರಡು ಕ್ಷೇತ್ರಗಳು ಬಿಜೆಪಿ ಭದ್ರಕೋಟೆ ಎಂದು ಕರೆಸಿಕೊಳ್ಳುತ್ತಿವೆ. ಹೀಗಾಗಿ ಉಪ ಚುನಾವಣೆಯಲ್ಲಿ ಎರಡೂ ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್-ಜೆಡಿಎಸ್ ಸರ್ಕಾರ ನಿರ್ಧರಿಸಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಯಡಿಯೂರಪ್ಪ ಪುತ್ರ ಬಿ.ವೈ. ರಾಘವೇಂದ್ರ ಸ್ಪರ್ಧಿಸುವುದು ಖಚಿತವಾಗಿದೆ. ಬಳ್ಳಾರಿಯಲ್ಲಿ ಏಳೆಂಟು ಜನ ಆಕಾಂಕ್ಷಿಗಳಿದ್ದಾರೆ ಅಂತಾ ಶಾಸಕ ಶ್ರೀರಾಮುಲು ಹೇಳಿಕೊಂಡಿದ್ದಾರೆ. ಹಾಗಾಗಿ ಬಳ್ಳಾರಿಯಲ್ಲಿ ಯಾರಿಗೆ ಬಿಜೆಪಿ ಟಿಕೆಟ್ ಸಿಗುತ್ತೆ ಅನ್ನೋ ಕುತೂಹಲ ಮನೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಲೋಕಸಭಾ ಉಪ ಚುನಾವಣೆಗೆ ಬಿಜೆಪಿ ವಿರೋಧ

    ಲೋಕಸಭಾ ಉಪ ಚುನಾವಣೆಗೆ ಬಿಜೆಪಿ ವಿರೋಧ

    ಬೆಂಗಳೂರು: ಶನಿವಾರ ಚುನಾವಣಾ ಆಯೋಗ ಪಂಚ ರಾಜ್ಯಗಳ ವಿಧಾನಸಭಾ ಮತ್ತು ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರ ಹಾಗು ಎರಡು ವಿಧಾನಸಭಾ ಉಪಚುನಾವಣೆಗ ದಿನಾಂಕವನ್ನು ನಿಗದಿ ಮಾಡಿದೆ. ಇತ್ತ ಕರ್ನಾಟಕದ ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಗೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ಶಾಸಕ ಸುರೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ.

    ಶಿಕಾರಿಪುರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಉಪ ಚುನಾವಣೆ ಅನಗತ್ಯವಾಗಿತ್ತು. ಕೊನೆ ಕ್ಷಣದವರೆಗೂ ಲೋಕಸಭಾ ಉಪಚುನಾವಣೆ ಇರುವುದಿಲ್ಲ ಎಂದೇ ಭಾವಿಸಿದ್ದೆವು. ಈಗ ಆಯ್ಕೆ ಆಗುವವರು ಕೇವಲ ಐದು ತಿಂಗಳು ಮಾತ್ರ ಸಂಸತ್ ಸದಸ್ಯರಾಗಿರುತ್ತಾರೆ. ಈ ಕಾರಣದಿಂದ ಯಾವುದೇ ಪಕ್ಷದವರಿಗೂ ಈ ಚುನಾವಣೆ ಬಗ್ಗೆ ಆಸಕ್ತಿ ಇಲ್ಲ. ಚುನಾವಣಾ ಆಯೋಗದ ತೀರ್ಮಾನವನ್ನು ಅನಿವಾರ್ಯವಾಗಿ ಸ್ವಾಗತಿಸುತ್ತೇವೆ ಎಂದರು.

    ಮೂರು ಲೋಕಸಭಾ ಹಾಗೂ ಎರಡು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಕಣದಲ್ಲಿ ಇರಲಿದ್ದಾರೆ. ಶಿವಮೊಗ್ಗದ ಅಭ್ಯರ್ಥಿ ಇಂದು ಹಾಗೂ ಮಂಡ್ಯ ಅಭ್ಯರ್ಥಿಯನ್ನು ಸೋಮವಾರ ಅಂತಿಮಗೊಳಿಸಲಿದ್ದೇವೆ. ಪ್ರಧಾನಿ ಮೋದಿಯವರ ಸಾಧನೆಯನ್ನು ಜಗತ್ತು ಅಚ್ಚರಿಯಿಂದ ನೋಡುತ್ತಿದೆ. ಇದನ್ನು ಇಟ್ಟುಕೊಂಡು ಮುಂಬರುವ ಚುನಾವಣೆ ಎದುರಿಸುತ್ತೆವೆ. ಈ ಉಪ ಚುನಾವಣೆ ಮುಂದಿನ ಚುನಾವಣೆ ಫಲಿತಾಂಶದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

    ಇತ್ತ ಬಿಜೆಪಿ ಶಾಸಕ ಸುರೇಶ್ ಕುಮಾರ್, ಈಗ ಸಂಸತ್‍ಗೆ ಆಯ್ಕೆಯಾಗುವ ಅಭ್ಯರ್ಥಿಗಳ ಅಧಿಕಾರ ಅವಧಿ ಗರಿಷ್ಠ ನಾಲ್ಕು ತಿಂಗಳ ಮಾತ್ರ. ಉಪ ಚುನಾವಣೆ ಬೇಕಿತ್ತಾ ಎಂದು ಟ್ವಿಟ್ಟರ್ ನಲ್ಲಿ ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv