Tag: ಕರ್ಣ ಕುಮಾರ್

  • ರಣಹೇಡಿ ಜೊತೆ ಕಬ್ಬು ಕಟಾವಿಗೆ ಬಂದ ಐಶ್ವರ್ಯಾ ರಾವ್!

    ರಣಹೇಡಿ ಜೊತೆ ಕಬ್ಬು ಕಟಾವಿಗೆ ಬಂದ ಐಶ್ವರ್ಯಾ ರಾವ್!

    ಸಾಮಾನ್ಯವಾಗಿ ಬಹುತೇಕ ನಟಿಯರು ಗ್ಲಾಮರಸ್ ಪಾತ್ರಗಳಲ್ಲಿ, ಪಕ್ಕಾ ಕಮರ್ಷಿಯಲ್ ಚಿತ್ರಗಳಲ್ಲಿಯೇ ಮಿಂಚಬೇಕೆಂಬ ಇರಾದೆ ಹೊಂದಿರುತ್ತಾರೆ. ಕೆಲವೇ ಕೆಲ ನಟಿಯರು ಮಾತ್ರವೇ ಅದು ಎಂಥಾದ್ದೇ ಚಹರೆಯ ಪಾತ್ರವಾದರೂ ನಟನೆಗೆ ಅವಕಾಶವಿರಬೇಕು, ಅದು ಸವಾಲಿನದ್ದಾಗಿರಬೇಕೆಂಬ ಮನಸ್ಥಿತಿ ಹೊಂದಿರುತ್ತಾರೆ. ಅಂಥ ವಿರಳ ನಟಿಯರ ಸಾಲಿನಲ್ಲಿ ಐಶ್ವರ್ಯಾ ರಾವ್ ಕೂಡಾ ಸೇರಿಕೊಳ್ಳುತ್ತಾರೆ. ಬಹುಶಃ ತಾನು ಪರಿಪೂರ್ಣ ನಟಿಯಾಗಬೇಕೆಂಬ ತುಡಿತ ಇಲ್ಲದೇ ಹೋಗಿದ್ದರೆ ಖಂಡಿತಾ ಅವರು ರಣಹೇಡಿ ಚಿತ್ರದ ಪಾತ್ರವನ್ನು ಒಪ್ಪಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.

    ನಿರ್ದೇಶಕ ಮನು ಕೆ. ಶೆಟ್ಟಿ ಹಳ್ಳಿ ಕಥೆಯನ್ನು ಸಿದ್ಧಪಡಿಸಿಕೊಳ್ಳುವಾಗಲೇ ಪಾತ್ರಗಳಿಗೂ ಕಲಾವಿದರನ್ನು ನಿಕ್ಕಿ ಮಾಡಿಕೊಂಡಿದ್ದರಂತೆ. ಕರ್ಣ ಕುಮಾರ್ ಈ ಕಥೆಯನ್ನು, ಪಾತ್ರವನ್ನು ಆರಂಭಿಕವಾಗಿಯೇ ಒಪ್ಪಿಕೊಂಡಿದ್ದರು. ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದ ಕರ್ಣಕುಮಾರ್ ಕೂಡಾ ಅತ್ಯಂತ ಖುಷಿಯಿಂದಲೇ ಈ ಪಾತ್ರವನ್ನು ಒಪ್ಪಿಕೊಂಡಿದ್ದರು. ಆದರೆ ನಾಯಕಿಯಾಗಿ ಯಾರನ್ನು ಆಯ್ಕೆ ಮಾಡಿಕೊಳ್ಳೋದೆಂಬುದೇ ಪ್ರಶ್ನೆಯಾಗಿತ್ತು. ಅದು ಡಿಗ್ಲಾಮ್ ಪಾತ್ರ. ನಟನೆಯಲ್ಲಿ ಪಾರಂಗತೆಯಾದ ನಟಿ ಮಾತ್ರವೇ ಅದನ್ನು ನಿರ್ವಹಿಸಲು ಸಾಧ್ಯ. ಇದಕ್ಕಾಗಿ ಹುಡುಕಾಟದಲ್ಲಿದ್ದಾಗ ಅದಾಗಲೇ ರವಿ ಹಿಸ್ಟರಿ ಎಂಬ ಚಿತ್ರದಲ್ಲಿ ನಟಿಸಿದ್ದ ಐಶ್ವರ್ಯಾ ರಾವ್ ನಿರ್ದೇಶಕರ ಕಣ್ಣಿಗೆ ಬಿದ್ದಿದ್ದರು.

    https://www.facebook.com/publictv/videos/2397787000346983/?t=1

    ರವಿ ಹಿಸ್ಟರಿಯ ಜೊತೆಗೇ ಮತ್ತೊಂದು ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದವರು ಐಶ್ವರ್ಯಾ ರಾವ್. ಈ ಕಥೆ ಮತ್ತು ಪಾತ್ರದ ಬಗ್ಗೆ ಕೇಳಿ ಥ್ರಿಲ್ ಆದ ಐಶ್ವರ್ಯಾ ಮರು ಮಾತಾಡದೆ ಅದನ್ನು ಒಪ್ಪಿಕೊಂಡಿದ್ದರಂತೆ. ಅವರದ್ದಿಲ್ಲಿ ಬಳ್ಳಾರಿ ಸೀಮೆಯಿಂದ ಕಬ್ಬು ಕಟಾವು ಮಾಡಲು ಮಂಡ್ಯ ಸೀಮೆಗೆ ಬಂದ ಕೂಲಿಯಾಳಿನ ಪಾತ್ರ. ಯಾವುದೇ ಗ್ಲಾಮರ್ ಇಲ್ಲದ ಆ ಪಾತ್ರಕ್ಕೆ ಐಶ್ವರ್ಯಾ ಜೀವ ತುಂಬಿರೋ ರೀತಿಯ ಬಗ್ಗೆ ಚಿತ್ರತಂಡದಲ್ಲೊಂದು ಮೆಚ್ಚುಗೆ ಇದ್ದೇ ಇದೆ. ಐಶ್ವರ್ಯಾರ ನಟನೆ ನೋಡಿದ ಪ್ರತೀ ಪ್ರೇಕ್ಷಕರೂ ಕೂಡ ಮೆಚ್ಚಿಕೊಳ್ಳದಿರಲು ಸಾಧ್ಯವೇ ಇಲ್ಲ ಎಂಬಂಥಾ ಭರವಸೆಯೂ ಚಿತ್ರತಂಡದಲ್ಲಿದೆ. ಈ ಪಾತ್ರ ಸೇರಿದಂತೆ ಒಟ್ಟಾರೆ ಚಿತ್ರದ ಸ್ಪಷ್ಟ ಚಿತ್ರಣ ಈ ವಾರ ಸಿಗಲಿದೆ.

  • ರಣಹೇಡಿಯ ಒಡಲಲ್ಲಿದೆ ರೈತ ಕಥನ!

    ರಣಹೇಡಿಯ ಒಡಲಲ್ಲಿದೆ ರೈತ ಕಥನ!

    ಮರ್ಷಿಯಲ್ ಹಾದಿಯ ಸಿನಿಮಾಗಳ ಅಬ್ಬರದ ನಡುವೆಯೇ ಆಗಾಗ ನೆಲದ ಘಮಲಿನ ಸಿನಿಮಾಗಳೂ ಕೂಡಾ ತಯಾರಾಗುತ್ತಿರುತ್ತವೆ. ಇದರಲ್ಲಿನ ಕ್ರಿಯಾಶೀಲತೆ, ಹೊಸತನಗಳೇ ಗೆಲುವಿನ ಹಾದಿ ತೋರಿಸುತ್ತವೆ. ಕಂಟೆಂಟು ಗಟ್ಟಿಯಾಗಿದ್ದರೆ ಎಂಥಾ ದೊಡ್ಡ ಚಿತ್ರಗಳ ಎದುರಾದರೂ ಪೈಪೋಟಿ ಕೊಟ್ಟು ಗೆಲ್ಲೋ ಕಸುವನ್ನು ಈಗಾಗಲೇ ಕನ್ನಡದ ಪ್ರೇಕ್ಷಕರು ಕರುಣಿಸಿದ್ದಾರೆ. ಆ ಬಲದಿಂದಲೇ ಪ್ರಯೋಗಾತ್ಮಕವಾದ, ಹೊಸ ಜಾಡಿನ ಸಿನಿಮಾಗಳು ಆಗಾಗ ರೂಪುಗೊಳ್ಳುತ್ತಿರುತ್ತವೆ. ಅದೇ ಸಾಲಿನಲ್ಲಿ ದಾಖಲಾಗುವಂತೆ ಮೂಡಿ ಬಂದಿರುವ ರಣಹೇಡಿ ಚಿತ್ರ ಇದೇ ತಿಂಗಳ 29ರಂದು ತೆರೆಗಾಣುತ್ತಿದೆ.

    ಮನು ಕೆ ಶೆಟ್ಟಿಹಳ್ಳಿ ನಿರ್ದೆಶನದಲ್ಲಿ ಮೂಡಿ ಬಂದಿರುವ ಈ ಚಿತ್ರವನ್ನು ಸುರೇಶ್ ನಿರ್ಮಾಣ ಮಾಡಿದ್ದಾರೆ. ಕರ್ಣಕುಮಾರ್ ಮತ್ತು ಐಶ್ವರ್ಯಾ ರಾವ್ ಇದರ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ನಟಿಸುತ್ತಾ ಪ್ರತಿಭಾವಂತ ನಟನಾಗಿ ಗುರುತಿಸಿಕೊಂಡಿರುವವರು ಕರ್ಣ ಕುಮಾರ್. ಅವರು ರಣಹೇಡಿ ಮೂಲಕ ನಾಯಕ ನಟನಾಗಿಯೂ ಹೊರ ಹೊಮ್ಮಿದ್ದಾರೆ. ಈ ಹಿಂದೆ ರವಿ ಹಿಸ್ಟರಿ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದ ಐಶ್ವರ್ಯಾ ರಾವ್ ಇಲ್ಲಿಯೂ ನಾಯಕಿಯಾಗಿದ್ದಾರೆ. ಅವರದ್ದಿಲ್ಲಿ ಕೂಲಿಕಾರರ ಹೆಣ್ಣು ಮಗಳ ಡಿಗ್ಲಾಮ್ ಪಾತ್ರ. ಈ ದಿನಮಾನಕ್ಕೆ ತೀರಾ ಹೊಸತಾಗಿರೋ ಈ ಪಾತ್ರಕ್ಕಾಗಿ ಐಶ್ವರ್ಯಾ ಬಹಳಷ್ಟು ತಯಾರಿ ನಡೆಸಿಯೇ ನಟಿಸಿದ್ದಾರಂತೆ.

    ಇದು ಇವತ್ತಿನ ಸಂದರ್ಭದಲ್ಲಿ ಅತ್ಯಂತ ವಿಶಿಷ್ಟವಾದ ಕಥೆ ಹೊಂದಿರುವ ಚಿತ್ರ. ದೇಶದ ಬೆನ್ನೆಲುಬು ಅಂತೆಲ್ಲ ಕರೆಸಿಕೊಳ್ಳುವ ರೈತಾಪಿ ವರ್ಗದ ಕಷ್ಟ ಕಾರ್ಪಣ್ಯದೊಂದಿಗೇ ಒಂದು ಸಮೃದ್ಧ ಸಂಸ್ಕೃತಿಗೆ ಕನ್ನಡಿಯಾಗುವಂಥಾ ಕಥೆ ಇಲ್ಲಿದೆ. ಮಂಡ್ಯ ಸೀಮೆಯ ಹಳ್ಳಿಗಾಡಿನಲ್ಲಿಯೇ ಹುಟ್ಟಿ ಬೆಳೆದ ನಿರ್ದೇಶಕ ಮನು ಕೆ. ಶೆಟ್ಟಿಹಳ್ಳಿ ತಾನು ಕಂಡ ನೈಜ ಬದುಕಿನ ಚಿತ್ರಣವನ್ನೇ ಇಲ್ಲಿ ಬಿಚ್ಚಿಟ್ಟಿದ್ದಾರಂತೆ. ಇದರೊಂದಿಗೆ ಹಳ್ಳಿ ಬದುಕಿನ ಆಚಾರ ವಿಚಾರ, ಪೇಟೆಯ ಥಳುಕಿಗೆ ಬಲಿಯಾಗಿ ತಣ್ಣಗೆ ಮೂಲೆಗುಂಪಾಗುತ್ತಿರೋ ಆಚರಣೆಗಳತ್ತಲೂ ಇಲ್ಲಿ ಬೆಳಕು ಚೆಲ್ಲಲಾಗಿದೆಯಂತೆ. ಒಟ್ಟಾರೆಯಾಗಿ ರೈತರ ಬದುಕಿನ ಚಿತ್ರಣದೊಂದಿಗೆ ಹಳ್ಳಿ ಬದುಕಿನ ಚಿತ್ತಾರ ಮೂಡಿಸುವ ಅದ್ಭುತ ಕಥೆಯನ್ನು ರಣಹೇಡಿ ಒಳಗೊಂಡಿದೆ. ಅದೆಲ್ಲವೂ ಇದೇ ತಿಂಗಳ 29ರಂದು ನಿಮ್ಮ ಮುಂದೆ ಅನಾವರಣಗೊಳ್ಳಲಿವೆ.

    https://www.youtube.com/watch?v=kXf1qX9ay9w

  • ಗ್ರಾಮೀಣ ಸೊಗಡಿನ ರಣಹೇಡಿ!

    ಗ್ರಾಮೀಣ ಸೊಗಡಿನ ರಣಹೇಡಿ!

    ಬೆಂಗಳೂರು: ಪಕ್ಕಾ ಕಮರ್ಶಿಯಲ್ ಜಾಡಿನ ಮಾಸ್ ಸಿನಿಮಾಗಳ ಜೊತೆ ಜೊತೆಗೆ ಗ್ರಾಮೀಣ ಸೊಗಡಿನ ಸಿನಿಮಾಗಳೂ ಆಗಾಗ ರೂಪುಗೊಳ್ಳುತ್ತಿರುತ್ತವೆ. ಅದರಲ್ಲಿಯೂ ರೈತರ ಸಮಸ್ಯೆಗಳತ್ತ ಬೆಳಕು ಚೆಲ್ಲುತ್ತಲೇ ಆ ಭಾಗದ ಜನಜೀವನವನ್ನು ಅನಾವರಣಗೊಳಿಸುವ ಸಾಕಷ್ಟು ಸಿನಿಮಾಗಳು ಅಪರೂಪಕ್ಕಾದರೂ ನಿರ್ಮಾಣಗೊಳ್ಳುತ್ತಿರುತ್ತವೆ. ಅದೇ ಸಾಲಿನಲ್ಲಿ ತಯಾರಾಗಿ ಈಗ ಬಿಡುಗಡೆಗೆ ಸಜ್ಜುಗೊಂಡಿರೋ ಚಿತ್ರ ‘ರಣಹೇಡಿ’. ಒಂದಷ್ಟು ಕಾಲದಿಂದ ನಾನಾ ಬಗೆಯಲ್ಲಿ ಸುದ್ದಿ ಕೇಂದ್ರದಲ್ಲಿರುವ, ಪ್ರೇಕ್ಷಕರೆಲ್ಲರ ಕುತೂಹಲಕ್ಕೆ ಕಾರಣವಾಗಿರುವ ಈ ಚಿತ್ರವೀಗ ಇದೇ ನವೆಂಬರ್ 22ರಂದು ಬಿಡುಗಡೆಗೆ ರೆಡಿಯಾಗಿದೆ.

    ಮನು ಕೆ ಶೆಟ್ಟಿಹಳ್ಳಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಹಿಂದೆ ಪ್ರಯಾಣಿಕರ ಗಮನಕ್ಕೆ ಎಂಬ ಸಿನಿಮಾ ನಿರ್ಮಾಣ ಮಾಡಿದ್ದ ಸುರೇಶ್ ಅವರೇ ಈ ಚಿತ್ರಕ್ಕೂ ಬಂಡವಾಳ ಹೂಡಿದ್ದಾರೆ. ಇಲ್ಲಿ ಈ ಹಿಂದೆ ಸಾಕಷ್ಟು ಪಾತ್ರಗಳಲ್ಲಿ ನಟಿಸಿರೋ ಕರ್ಣ ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ರವಿ ಹಿಸ್ಟರಿ, ಬಡ್ಡಿಮಗನ್ ಲೈಫು ಮುಂತಾದ ಸಿನಿಮಾಗಳಲ್ಲಿ ನಾಯಕಿಯಾಗಿದ್ದ ಐಶ್ವರ್ಯಾ ರಾವ್ ಇಲ್ಲಿ ಕೂಲಿ ಹುಡುಗಿಯ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆಯಾಗಿ ಅಪ್ಪಟ ಗ್ರಾಮೀಣ ಸೊಗಡಿನೊಂದಿಗೆ ಈ ಚಿತ್ರ ಮೂಡಿ ಬಂದಿದೆ.

    ಹೊಸತನದ ಕಥೆಗಳಿಗೇ ಪ್ರಧಾನವಾಗಿ ಪ್ರಾಶಸ್ತ್ಯ ಕೊಡುವ ಸುರೇಶ್ ಅವರು ಈ ಹಿಂದೆ ಪ್ರಯಾಣಿಕರ ಗಮನಕ್ಕೆ ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಆ ನಂತರದಲ್ಲಿ ಗ್ರಾಮ್ಯ ಕಥನಕ್ಕೆ ಮನಸೋತು ಈ ಚಿತ್ರವನ್ನು ನಿರ್ಮಾಣ ಮಾಡಲು ಒಪ್ಪಿಕೊಂಡಿದ್ದಾರೆ. ಇದು ಕೇವಲ ಗ್ರಾಮೀಣ ಸೊಗಡಿನ ಕಥೆ ಮಾತ್ರವಲ್ಲ. ಇಲ್ಲಿ ರೈತರ ಸಮಸ್ಯೆಗಳತ್ತ ಬೆಳಕು ಹರಿಸಲಾಗಿದೆ. ನಿಜವಾಗಿಯೂ ಬೆಳೆಯನ್ನೇ ನಂಬಿ ಬದುಕೋ ರೈತ ಯಾವ್ಯಾವ ಸಮಸ್ಯೆಗಳನ್ನು ಎದುರಿಸಿ ನಲುಗುತ್ತಾನೆಂಬುದರ ಚಿತ್ರಣವೂ ಇಲ್ಲಿದೆಯಂತೆ. ಇದೆಲ್ಲವನ್ನೂ ಕಮರ್ಶಿಯಲ್ ಹಾದಿಯಲ್ಲಿ ಹೇಳುತ್ತಲೇ ಮಜವಾದ ಹೂರಣವನ್ನು ಬಿಚ್ಚಿಡಲಿರೋ ಈ ಸಿನಿಮಾ ಇನ್ನು ವಾರದೊಪ್ಪತ್ತಿನಲ್ಲಿಯೇ ಚಿತ್ರಮಂದಿರ ತಲುಪಿಕೊಳ್ಳಲಿದೆ.