ವಿಜಯಪುರ: ಗಣೇಶ ವಿಸರ್ಜನೆ ವೇಳೆ ವಿದ್ಯುತ್ ಪ್ರವಹಿಸಿ (Current Shock) ಓರ್ವ ಯುವಕ ಮೃತಪಟ್ಟಿದ್ದು, ಇಬ್ಬರ ಸ್ಥಿತಿ ಚಿಂತಾಜನಕವಾಗಿರುವ ಘಟನೆ ವಿಜಯಪುರ (Vijayapura) ನಗರದ ಗಾಂಧಿಚೌಕ್ ವೃತ್ತದ ಟಾಂಗಾ ಸ್ಟ್ಯಾಂಡ್ ಬಳಿ ನಡೆದಿದೆ.
7ನೇ ದಿನ ಗಣೇಶನ ವಿಸರ್ಜನೆಗೆ ಮೂರ್ತಿಯನ್ನು ಸಾಗಿಸುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಗಣೇಶ ಮೆರವಣಿಗೆ (Ganesha Procession) ವೇಳೆ ಯುವಕರು ಡಿಜೆ ಬಾಕ್ಸ್ ಮೇಲೆ ಕುಳಿತು ಕೋಲಿನಿಂದ ವಿದ್ಯುತ್ ತಂತಿಯನ್ನು ಎತ್ತಿದ್ದರು. ಈ ವೇಳೆ ವಿದ್ಯುತ್ ಪ್ರವಹಿಸಿ ಶುಭಂ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನುಳಿದ ಇಬ್ಬರು ಯುವಕರ ಸ್ಥಿತಿ ಚಿಂತಾಜನಕವಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಮುಂದುವರಿದ ಅಮೆರಿಕ ಸುಂಕ ಸಮರ; ತೈಲ ಖರೀದಿಗೆ ಭಾರತಕ್ಕೆ ದೊಡ್ಡ ಡಿಸ್ಕೌಂಟ್ ಕೊಟ್ಟ ರಷ್ಯಾ
ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
– ಅಪಘಾತದಿಂದ ಸಾವು ಎಂದು ಬಿಂಬಿಸಿದ್ದ ಹಂತಕಿ, ಪ್ರಿಯಕರ ಅರೆಸ್ಟ್
ರಾಯ್ಪುರ: ಮಹಿಳೆಯೊಬ್ಬಳು ಪ್ರಿಯಕರನೊಂದಿಗೆ ಸೇರಿ ಕರೆಂಟ್ ಶಾಕ್ ನೀಡಿ ಮಾವನನ್ನು (Father-in-law) ಹತ್ಯೆ ಮಾಡಿ, ಬಳಿಕ ಗಾಯವನ್ನು ಮರೆಮಾಚಲು ಅರಶಿಣ ಪುಡಿ ಹಚ್ಚಿರುವ ಘಟನೆ ಛತ್ತೀಸ್ಗಢದಲ್ಲಿ (Chhattisgarh) ನಡೆದಿದೆ.
ಆರೋಪಿ ಗೀತಾಳಿಗೆ ಹಾಗೂ ಮಾವ ಮನೋಹರ್ ನಡುವೆ ಪ್ರತಿನಿತ್ಯವೂ ಜಗಳವಾಡುತ್ತಿದ್ದರು. ಇಬ್ಬರಿಗೂ ಸರಿ ಹೊಂದುತಿರಲಿಲ್ಲ. ಹೀಗಾಗಿ ಗೀತಾ, ಪ್ರಿಯಕರನೊಂದಿಗೆ ಸೇರಿ ಮಾವನ ಕೊಲೆಗೆ ಮಾಸ್ಟರ್ ಪ್ಯಾನ್ ಮಾಡಿದ್ದಳು. ಇದನ್ನೂ ಓದಿ: ಕಾರವಾರ | ಕಾರಿನ ಮೇಲೆ ಉರುಳಿ ಬಿದ್ದ ಮರ – ಮಹಿಳೆ ಸಾವು
ಮನೋಹರ್ ರಾತ್ರಿ ನಿದ್ರೆಗೆ ಜಾರಿದ್ದ ವೇಳೆ ಗೀತಾ ಹಾಗೂ ಪ್ರಿಯಕರ ಸೇರಿ ಕರೆಂಟ್ ಶಾಕ್ ನೀಡಿ ಕೊಲೆ ಮಾಡಿದ್ದರು. ಈ ವೇಳೆ ಕೊಲೆ ಮಾಡಿದ್ದು ತಾನೇ ಎಂದು ತಿಳಿಯಬಾರೆಂದು ತಲೆ ಉಪಯೋಗಿಸಿದ್ದ ಗೀತಾ, ಕೈಗೆ ಎಲೆಕ್ಟಿçಷಿಯನ್ಗಳು ಧರಿಸುವ ಗ್ಲೌಸ್ ಅನ್ನು ಧರಿಸಿ ಕರೆಂಟ್ ಶಾಕ್ ನೀಡಿದ್ದಳು.
ಬಳಿಕ ಕುಟುಂಬಸ್ಥರ ಬಳಿ ಕುಡಿದ ಮತ್ತಿನಲ್ಲಿ ಬೈಕ್ನಿಂದ ಬಿದ್ದು ಮಾವ ಸಾವನ್ನಪ್ಪಿದ್ದಾರೆ ಎಂದು ಕಥೆ ಕಟ್ಟಿದ್ದಳು. ಅಂತ್ಯಕ್ರಿಯೆಯ ವೇಳೆ ಮನೋಹರ್ ಮೈ ಮೇಲಿನ ಗಾಯಗಳನ್ನು ಕುಟುಂಬಸ್ಥರು ಗಮನಿಸಿದ್ದರು. ಇದರಿಂದ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ಇದನ್ನೂ ಓದಿ: ವೆಜ್ ಬದಲು ಚಿಕನ್ ಪಿಜ್ಜಾ ಕಳಿಸಿದ ಡಾಮಿನೋಸ್ – 50,000 ರೂ. ದಂಡ
ಸ್ಥಳಕ್ಕಾಗಮಿಸಿದ ಪೊಲೀಸರು ಶವದ ಮರಣೋತ್ತರ ಪರೀಕ್ಷೆ ಮಾಡಿದ್ದರು. ಈ ವೇಳೆ ಇದು ಸಹಜ ಸಾವಲ್ಲ, ಕೊಲೆ ಎಂದು ದೃಢಪಡಿಸಿದರು. ಬಳಿಕ ಪೊಲೀಸರು ಸೊಸೆಯನ್ನು ವಿಚಾರಣೆಗೊಳಪಡಿಸಿದಾಗ ಪ್ರಿಯಕರನೊಂದಿಗೆ ಸೇರಿ ಕೊಲೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾಳೆ. ಅಲ್ಲದೇ ಕೊಲೆಯ ಕುರುಹು ಸಿಗಬಾರದೆಂದು ಗಾಯವಾದ ಭಾಗಗಳಿಗೆ ಅರಶಿಣ ಹಾಗೂ ರೋಸ್ ವಾಟರ್ ಹಾಕಿರುವುದಾಗಿ ಬಾಯ್ಬಿಟ್ಟಿದ್ದಾಳೆ.
ಸದ್ಯ ಪೊಲೀಸರು ಕೊಲೆ ಆರೋಪಿಗಳಾದ ಗೀತಾ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಚಿತ್ರದುರ್ಗ: ವಿದ್ಯುತ್ ತಂತಿ (Electric Wire) ಸ್ಪರ್ಶಿಸಿ ಇಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ (Chitradurga) ಜಿಲ್ಲೆ ಹಿರಿಯೂರು (Hiriyur) ತಾಲೂಕಿನ ಕೃಷ್ಣಾಪುರ ಗ್ರಾಮದಲ್ಲಿ ನಡೆದಿದೆ.
ಜಯರಾಂ ಅಡಿಕೆ ತೋಟದಲ್ಲಿ ಕೆಲ ಶ್ರೀಗಂಧದ ಮರಗಳಿದ್ದು, ಕಳ್ಳತನಕ್ಕೆ ಆಗಮಿಸಿ ಈ ರೀತಿ ಸಾವಿಗೀಡಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಅಬ್ಬಿನಹೊಳೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಇದನ್ನೂ ಓದಿ: ರಾಜಸ್ತಾನ| ಬಸ್-ರಿಕ್ಷಾ ನಡುವೆ ಭೀಕರ ಅಪಘಾತ; 8 ಮಕ್ಕಳು ಸೇರಿ 12 ಮಂದಿ ಸಾವು
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ (Renukaswamy Case) ಮರ್ಡರ್ ಕೇಸಲ್ಲಿ ದರ್ಶನ್ ಗ್ಯಾಂಗ್ನ ಮತ್ತಷ್ಟು ಕರಾಳಮುಖ ಬಯಲಾಗ್ತಿದೆ. ಆರೋಪಿಗಳ ವಿಚಾರಣೆ ವೇಳೆ ಆ ಗ್ಯಾಂಗ್ನ ಮತ್ತಷ್ಟು ಕ್ರೌರ್ಯ ಅನಾವರಣಗೊಳ್ತಿದೆ.
ಹೌದು. ಯಾವ ಸಿನಿಮಾಗೂ ಕಮ್ಮಿ ಇಲ್ಲ ಎಂಬಂತೆ ಟಾರ್ಚರ್ ಮೇಲೆ ಟಾರ್ಚರ್ ಕೊಟ್ಟು ರೇಣುಕಾಸ್ವಾಮಿಯನ್ನು ದುರುಳರು ಕೊಂದಿದ್ದಾರೆ. ಆರಂಭದಲ್ಲಿ ರೇಣುಕಾಸ್ವಾಮಿ ಮೇಲೆ ಕಬ್ಬಿಣದ ರಾಡ್, ರಿಪೀಸ್, ಲಾಠಿಯಿಂದ ಹಲ್ಲೆ ಮಾಡಿದ್ದ ದರ್ಶನ್ ಗ್ಯಾಂಗ್, ಅವರ ತಲೆಯನ್ನು ಲಾರಿಗೆ ಜಜ್ಜಿತ್ತು. ಇದರಿಂದ ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿ ಬಿದ್ದಿದ್ರು.
ರೇಣುಕಾಸ್ವಾಮಿ ಪ್ರಜ್ಞೆ ತಪ್ಪಿದ ಸಂದರ್ಭದಲ್ಲಿ ಕರೆಂಟ್ ಶಾಕ್ ನೀಡಿದ್ದಾರೆ. ಸ್ವಾಮಿಯ ಕೈ-ಕಿವಿ-ಹೊಟ್ಟೆ ಭಾಗಕ್ಕೆ ಕರೆಂಟ್ ಶಾಕ್ ನೀಡಿ ಟಾರ್ಚರ್ ಕೊಟ್ಟಿದ್ದಾರೆ. ಈ ಸಂಬಂಧ 9ನೇ ಆರೋಪಿ ಧನರಾಜ್ನನ್ನು ಕಳೆದ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಕರೆಂಟ್ ಶಾಕ್ ಕೊಡಲು ಬಳಸುವ ಮೆಗ್ಗಾರ್ ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಕಸ್ಟಡಿಯಲ್ಲಿರುವ ʼಗಜ’ನಿಗೆ ಕರಗಿದ ಗತ್ತು- ನನ್ನಿಂದ ತಪ್ಪಾಗಿದೆ, ಬಿಟ್ಟು ಬಿಡಿ ಎಂದ ದರ್ಶನ್!
ಇನ್ನು ಪಟ್ಟಣಗೆರೆಯ ಜಯಣ್ಣ ಶೆಡ್ನಲ್ಲಿ ಹಿಂದೆ ಹಲವರಿಗೆ ಟಾರ್ಚರ್ ನೀಡಲಾಗಿದೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಫೈನಾನ್ಸ್ ಸರಿಯಾಗಿ ಕಟ್ಟದವರನ್ನು ಇಲ್ಲಿ ಕೂಡಿ ಹಾಕಿ ಟಾರ್ಚರ್ ಕೊಡಲಾಗ್ತಿತ್ತು. ವಿನಯ್ ಕೃತ್ಯಗಳಿಗೆ ಮೆಗ್ಗಾರ್ ಎಕ್ಸ್ಪರ್ಟ್ ಧನರಾಜ್ ಸಾಥ್ ಕೊಡ್ತಿದ್ದ ಎನ್ನುವುದು ತನಿಖೆ ವೇಳೆ ಗೊತ್ತಾಗಿದೆ. ಇದೆಲ್ಲಾ ನಿಮಗೆ ಹೇಗೆಲ್ಲಾ ಗೊತ್ತಾಯ್ತು ಎಂದು ಮಾಧ್ಯಮಗಳನ್ನು ಗೃಹ ಸಚಿವ ಪರಮೇಶ್ವರ್ ಪ್ರಶ್ನಿಸಿದ್ದಾರೆ.
ಬೆಂಗಳೂರು: ಕರೆಂಟ್ ಶಾಕ್ನಿಂದ (Electrocuted) ದಿಢೀರ್ ನೂಕು ನುಗ್ಗಲು ಸೃಷ್ಟಿಯಾದ ಘಟನೆ ಹಾಸನಾಂಬೆ ದೇವಸ್ಥಾನದಲ್ಲಿ(Hasanamba Temple) ಬಳಿ ನಡೆದಿದೆ.
ವರ್ಷಕ್ಕೆ ಒಂದು ಬಾರಿ ತೆರೆಯಲ್ಪಡುವ ಹಾಸನಾಂಬೆ ದೇವಾಲಯದ ಬಾಗಿಲು ನವೆಂಬರ್ 2 ರಿಂದ ತೆರೆದಿದ್ದು ಇಂದು ಬೆಳಗ್ಗೆಯಿಂದಲೂ ಸಾವಿರಾರು ಸಂಖ್ಯೆಯ ಭಕ್ತರು ದೇವಿಯ ದರ್ಶನಕ್ಕೆ ಆಗಮಿಸಿದ್ದರು.
ಮಧ್ಯಾಹ್ನ 12.30ರ ವೇಳೆ ಉಚಿತ ದರ್ಶನದ ಸಾಲಿ ಹಾಕಿದ್ದ ಬ್ಯಾರಿಕೇಡ್ನಲ್ಲಿ ವಿದ್ಯುತ್ ಪ್ರವಹಿಸಿದೆ. ಬ್ಯಾರಿಕೇಡ್ ವಿದ್ಯುತ್ ಪ್ರವಹಿಸಿದ್ದನ್ನು ಕಂಡು ಸಾಲಿನಲ್ಲಿದ್ದ ಭಕ್ತರು ಜೀವ ಉಳಿಸಿಕೊಳ್ಳಲು ಎದ್ನೋ ಬಿದ್ನೋ ಎಂದು ಸ್ಥಳದಿಂದ ಓಡಿದ್ದಾರೆ. ಈ ವೇಳೆ ಒಬ್ಬರ ಮೇಲೆ ಒಬ್ಬರು ಬಿದ್ದಿದ್ದಾರೆ. ಇದನ್ನೂ ಓದಿ: PSI Scam: ಪಿಎಸ್ಐ ಮರುಪರೀಕ್ಷೆಗೆ ಹೈಕೋರ್ಟ್ ಆದೇಶ – ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿ ವಜಾ
ಕೂಡಲೇ ಅಲ್ಲಿದ್ದ ಸ್ವಯಂಸ್ವೇವಕರು ಮತ್ತು ಸ್ಥಳೀಯರು ಕೆಲವರನ್ನು ಹೊರಗೆಳೆದು ಆಸ್ಪತ್ರೆಗೆ ದಾಖಲಿಸಿದ್ದಾರೆ. 20 ಮಂದಿಗೆ ಕರೆಂಟ್ ಶಾಕ್ ಹೊಡೆದಿದ್ದು, ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ ಎಂಬ ಮಾಹಿತಿ ಲಭ್ಯವಾಗಿದೆ.
ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಅಧಿಕಾರಕ್ಕೆ ಬಂದು ನಾಲ್ಕು ತಿಂಗಳು ಕಳೆದಿದೆ. ಚುನಾವಣಾ ಪೂರ್ವದಲ್ಲಿ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ಗೃಹಜ್ಯೋತಿ, ಗೃಹಲಕ್ಷ್ಮಿ, ಶಕ್ತಿ, ಅನ್ನಭಾಗ್ಯ ಯೋಜನೆಗಳನ್ನು ಜಾರಿ ಮಾಡಿದೆ. ಉಚಿತ ವಿದ್ಯುತ್ ನೀಡುವ ಗೃಹಜ್ಯೋತಿ ಯೋಜನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಲೆ ಇವೆ. ಒಂದೆಡೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎನ್ನುತ್ತಿರುವ ಸರ್ಕಾರ ಮತ್ತೊಂದೆಡೆ ರೈತರಿಂದ ದುಪ್ಪಟ್ಟು ವಿದ್ಯುತ್ ಬಿಲ್ ವಸೂಲಿಗೆ ಇಳಿದಿದೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗೃಹಜ್ಯೋತಿ ಯೋಜನೆ ಜಾರಿಗೊಳಿಸಿ 200 ಯೂನಿಟ್ವರೆಗೆ ಉಚಿತ ಕರೆಂಟ್ ನೀಡುವ ಕೊಟ್ಟ ಭರವಸೆ ಈಡೇರಿಸಿದೆ. ಆದ್ರೆ ಗ್ರಾಮೀಣ ಭಾಗಗಳಲ್ಲಿ ಬೇರೆ ರೀತಿಯ ಚಿತ್ರಣವಿದೆ. ತೀವ್ರ ಬರಗಾಲದಿಂದ ಬೆಳೆಗಳೆಲ್ಲಾ ನಾಶವಾಗಿ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ನಡುವೆ ಉಳಿದಿರೋ ಅಲ್ಪಸ್ವಲ್ಪ ಬೆಳೆಗಳನ್ನು ಉಳಿಸಿಕೊಳ್ಳಲು ಪಂಪ್ಸೆಟ್ ಹೊಂದಿರುವ ರೈತರು, ವಿದ್ಯುತ್ ಇಲಾಖೆ ನೀಡ್ತಿರೋ ಒಂದೆರಡು ಗಂಟೆ ಕರೆಂಟ್ನಲ್ಲೇ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಪಂಪ್ಸೆಟ್ಗಳನ್ನು ಹೊಂದಿರುವ ರೈತರಿಗೆ ವಿದ್ಯುತ್ ಇಲಾಖೆ ಶಾಕ್ ನೀಡಿದೆ. ಲಕ್ಷ ಲಕ್ಷ ಮೊತ್ತದ ಕರೆಂಟ್ ಬಿಲ್ ನೀಡಿದ್ದು, ಇನ್ನು 15 ದಿನಗಳಲ್ಲಿ ಬಿಲ್ ಪಾವತಿ ಮಾಡಬೇಕು ಎಂದು ವಾರ್ನಿಂಗ್ ನೀಡಿದೆ.
ಹಾಸನ (Hassan) ಜಿಲ್ಲೆಯಲ್ಲಿ ರೈತರು ಬಳಸುವ ಒಂದೂವರೆ ಲಕ್ಷಕ್ಕೂ ಅಧಿಕ ಪಂಪ್ಸೆಟ್ಗಳಿಗೆ ಸರ್ಕಾರ ಕರೆಂಟ್ ನೀಡುತ್ತಿದೆ. ಇದುವರೆಗೂ ಬಹುತೇಕ ಸರ್ಕಾರಗಳು ರೈತರ ಬೆಳೆಗಳಿಗೆ ಬಳಸುವ ವಿದ್ಯುತ್ಗೆ ಬಿಲ್ ನೀಡಿರಲಿಲ್ಲ. ಅದರಲ್ಲೂ ಕೃಷಿ ಬಳಕೆ ಪಂಪ್ಸೆಟ್ಗಳಿಗೆ ರೈತರು ಉಚಿತವಾಗಿಯೇ ಕರೆಂಟ್ ಬಳಕೆ ಮಾಡಿಕೊಳ್ಳುತ್ತಿದ್ದರು. ಕೆಲವು ರೈತರು ಇನ್ನೂ ಮೀಟರ್ ಅಳವಡಿಕೆ ಮಾಡಿಸಿಕೊಳ್ಳುವ ಪ್ರಕ್ರಿಯೆಯಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಗೃಹಜ್ಯೋತಿ ಜಾರಿ ಮಾಡಿರುವ ಸರ್ಕಾರ ಸಣ್ಣ, ಅತಿಸಣ್ಣ ರೈತರು ತಮ್ಮ ಕೃಷಿ ಚಟುವಟಿಕೆಗೆ ಅಗತ್ಯಕ್ಕೆ ತಕ್ಕಂತೆ ಬಳಸುತ್ತಿರುವ ನೀರಾವರಿ ಪಂಪ್ಸೆಟ್ಗಳಿಗೆ ಲಕ್ಷ ಲಕ್ಷ ಬಿಲ್ ನೀಡಲು ಆರಂಭಿರುವುದು ರೈತರಿಗೆ ದೊಡ್ಡ ಆಘಾತ ಉಂಟು ಮಾಡಿದೆ.
ಸಕಲೇಶಪುರ, ಬೇಲೂರು ಸೇರಿದಂತೆ ಎಲ್ಲಾ ತಾಲೂಕುಗಳ ರೈತರಿಗೆ ದುಬಾರಿ ಬಿಲ್ ಮೂಲಕ ಬರೆ ಎಳೆಯುತ್ತಿದೆ. ಹತ್ತಾರು ವರ್ಷಗಳಿಂದ ಕೆಲ ರೈತರು ಬಿಲ್ ಪಾವತಿ ಮಾಡಿಲ್ಲ. ಅಂತಹವರನ್ನು ಸೇರಿಸಿ ಎಲ್ಲಾ ರೈತರ ಪಂಪ್ಸೆಟ್ಗಳಿಗೆ ಎರಡೂವರೆ ಲಕ್ಷ, ಒಂದು ಲಕ್ಷ, ಐವತ್ತು ಸಾವಿರ ಹೀಗೆ ಮನಬಂದಂತೆ ಬಿಲ್ ನೀಡಿದ್ದಾರೆ. ಈ ವರ್ಷ ಬರಗಾಲದಿಂದ ಬೆಳೆ ಕಳೆದುಕೊಂಡು ಕಂಗಾಲಾಗಿದ್ದೀವಿ. ಈ ವೇಳೆ ಹೇಗೆ ಬಿಲ್ ಕಟ್ಟೋದು ಎನ್ನುತ್ತಿದ್ದಾರೆ. ಇದನ್ನೂ ಓದಿ: ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಎಡವಟ್ಟು- ಕೆಇಎಯಿಂದ ನೂರಾರು ಅಭ್ಯರ್ಥಿಗಳಿಗೆ ಸಂಕಷ್ಟ
ಸರ್ಕಾರ ಕೊಟ್ಟ ಮಾತಿನಂತೆ ಗ್ಯಾರಂಟಿ ಈಡೇರಿಸಲು ಗೃಹಜ್ಯೋತಿ ಜಾರಿಗೊಳಿಸಿ ಮನೆಮನೆಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. 200 ಯೂನಿಟ್ ವಿದ್ಯುತ್ ಉಚಿತ ಸಿಗುತ್ತಿದೆ ಎಂದು ಜನರು ಖಷಿಯಲ್ಲಿರುವಾಗ ಪಂಪ್ಸೆಟ್ಗಳಿಗೆ ದುಬಾರಿ ಬಿಲ್ ನೀಡುವ ಮೂಲಕ ರೈತರಿಂದ ಹಣ ವಸೂಲಿ ಮಾಡಲು ಮುಂದಾಗಿರೋದು ರೈತರ ಕಣ್ಣು ಕೆಂಪಾಗಿಸಿದೆ.
ಬೆಂಗಳೂರು: ವಾಟರ್ ಹೀಟರ್ನಿಂದಾಗಿ (Water Heater) ವಿದ್ಯುತ್ ಶಾಕ್ (Current Shock) ತಗುಲಿ ತಾಯಿ (Mother) ಹಾಗೂ ಮಗು (Child) ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಂಗಳೂರಿನಲ್ಲಿ (Bengaluru) ನಡೆದಿದೆ.
ತಾಯಿ ಜ್ಯೋತಿ ಹಾಗೂ ಆಕೆಯ 4 ವರ್ಷದ ಮಗು ಜಯಾನಂದ್ ವಿದ್ಯುತ್ ಶಾಕ್ನಿಂದ ಮೃತಪಟ್ಟವರು. ರಾಯಚೂರು ಮೂಲದ ಜ್ಯೋತಿ ತನ್ನ ಗಂಡ ಹಾಗೂ ಮಗನೊಂದಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕನಕ ನಗರದಲ್ಲಿ ನೆಲೆಸಿದ್ದರು. ಆಕೆ ಹೊಟ್ಟೆಪಾಡಿಗಾಗಿ ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಳು. ಇದನ್ನೂ ಓದಿ: ತಾನು ಚಿತ್ರ ಚೆನ್ನಾಗಿ ಬಿಡಿಸಲ್ಲ ಅಂತ ಕಲಾ ಪರೀಕ್ಷೆಗೆ ಅಣ್ಣನನ್ನು ಕೂರಿಸಿದ BA ವಿದ್ಯಾರ್ಥಿ
ಭಾನುವಾರ ಮಧ್ಯಾಹ್ನ ಸ್ನಾನಗೃಹದಲ್ಲಿ ನೀರು ಬಿಸಿ ಮಾಡಲು ಇಟ್ಟಿದ್ದ ವಾಟರ್ ಹೀಟರ್ನಿಂದ ಬಾಲಕ ಜಯಾನಂದ್ಗೆ ಕರೆಂಟ್ ಶಾಕ್ ತಗುಲಿತ್ತು. ಮಗುವಿಗೆ ಶಾಕ್ ತಗುಲಿ ಒದ್ದಾಡುತ್ತಿರುವುದನ್ನು ಕಂಡ ಜ್ಯೋತಿ ಆತನನ್ನು ಕಾಪಾಡಲು ಮುಂದಾದಾಗ ಆಕೆಗೂ ಕರೆಂಟ್ ಶಾಕ್ ತಗುಲಿದೆ. ಇದರಿಂದ ತಾಯಿ ಹಾಗೂ ಮಗು ಇಬ್ಬರೂ ದಾರುಣವಾಗಿ ಅಂತ್ಯ ಕಂಡಿದ್ದಾರೆ.
ಭಾನುವಾರ ಮಧ್ಯಾಹ್ನ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜ್ಯೋತಿ ಕುಟುಂಬ ಕೆಲ ದಿನಗಳ ಹಿಂದಷ್ಟೇ ರಾಯಚೂರಿನಿಂದ ಬೆಂಗಳೂರಿಗೆ ಬಂದಿತ್ತು. ಸ್ಥಳಕ್ಕೆ ಹೊಸಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮುಂದಿವರಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ನಿಂದ ಕರ್ನಾಟಕಕ್ಕೆ ಅವಮಾನ, ಖರ್ಗೆಗೆ ಛತ್ರಿಯೇ ಸಿಗಲಿಲ್ಲ: ಮೋದಿ
ಬೆಂಗಳೂರು: ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ದರ (Power Bill) ಏರಿಕೆಯ ಶಾಕ್ ಎದುರಾಗಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಫೆ. 13 ರಿಂದ ಮಾರ್ಚ್ 1 ರವರೆಗೆ ಸಾರ್ವಜನಿಕ ಆದಾಲತ್ ನಡೆಸಲಿದ್ದು, ಮತ್ತೆ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ. ಇದಕ್ಕೆ ಹೊಟೇಲ್ ಉದ್ಯಮಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ದರ ಏರಿಕೆಯ ಶಾಕ್ ತಟ್ಟಲಿದೆ. ರಾಜ್ಯದ ವಿದ್ಯುತ್ ವಿತರಣಾ ಕಂಪನಿಗಳು ವಿದ್ಯುತ್ ದರ ಪರಿಷ್ಕರಣೆ ಕೋರಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ನಾಳೆಯಿಂದ ಮಾರ್ಚ್ 1 ರವರೆಗೆ ಸಾರ್ವಜನಿಕ ಆದಾಲತ್ ನಡೆಸಲಿದ್ದು, ಮತ್ತೆ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆ ಇದೆ. ಈ ನಿರ್ಣಯಕ್ಕೆ ಬೃಹತ್ ಬೆಂಗಳೂರು ಹೊಟೇಲ್ಗಳ ಸಂಘ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದೊಂದು ಅವೈಜ್ಞಾನಿಕ ನಿರ್ಣಯ. ಗ್ರಾಹಕರ ಮೇಲೆ ಹೊರೆ ಹಾಕೋದು ಸಮಂಜಸವಲ್ಲ ಅಂತ ಕಿಡಿಕಾರಿದ್ದಾರೆ. ಇದನ್ನೂ ಓದಿ:ಪಂದ್ಯಶ್ರೇಷ್ಠ ಜಡೇಜಾಗೆ ಬಿಸಿ ಮುಟ್ಟಿಸಿದ ICC
ಎಸ್ಕಾಮ್ಗಳು ಪ್ರತಿ ಯುನಿಟ್ ಗೆ ಒಂದೂವರೆ ರೂಪಾಯಿಯಿಂದ 2 ರೂಪಾಯಿ ತನಕ ವಿದ್ಯುತ್ ದರ ಏರಿಕೆ ಕೋರಿ ಈಗಾಗಲೇ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ನಾಳೆಯಿಂದ ಮಾರ್ಚ್ 1 ರವರೆಗೆ ಸಾರ್ವಜನಿಕ ಆದಾಲತ್ ನಡೆಸಲಿದ್ದು, ಆಕ್ಷೇಪಣೆ, ಸಲಹೆ ಸೂಚನೆಗಳನ್ನು ಪರಿಗಣಿಸಿ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಮಂಡಳಿ ತನ್ನ ನಿರ್ಧಾರ ಪ್ರಕಟಿಸಲಿದೆ. ಈಗಾಗಲೇ ಡಿಜಿಟಲ್ ಮೀಟರ್ಗಳ ಅಳವಡಿಕೆಯಿಂದಲೂ ವಿದ್ಯುತ್ ಬಿಲ್ ದುಪ್ಪಟ್ಟು ಬರ್ತಿದ್ದು, ಇದಕ್ಕೂ ಸಾರ್ವಜನಿಕರಿಂದಲೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕಳೆದ ವರ್ಷ ರಾಜ್ಯದಲ್ಲಿ ಎರಡು ಬಾರಿ ವಿದ್ಯುತ್ ದರ ಏರಿಕೆ ಮಾಡಲಾಗಿತ್ತು. ಕಳೆದ ಏಪ್ರಿಲ್ನಲ್ಲಿ ಪ್ರತಿ ಯುನಿಟ್ ಗೆ 35 ಪೈಸೆ, ಸೆಪ್ಟೆಂಬರ್ ನಲ್ಲಿ ಇಂಧನ ಹೊಂದಾಣಿಕೆ ಹಿನ್ನಲೆ ಪ್ರತಿ ಯುನಿಟ್ಗೆ 24 ಪೈಸೆಯಿಂದ 43 ಪೈಸೆವರೆಗೆ ಏರಿಕೆ ಮಾಡಲಾಗಿತ್ತು. ಡಿಜಿಟಲ್ ಮೀಟರ್ಗಳ ಅಳವಡಿಕೆಯಿಂದಲೂ ವಿದ್ಯುತ್ ದರ ಹೆಚ್ಚೆಚ್ಚು ಬರ್ತಿತ್ತು. ಇದ್ರಿಂದ ಗ್ರಾಹಕರು ಕೂಡ ಆಕ್ರೋಶಗೊಂಡಿದ್ದು, ಯಾವ್ದೇ ಕಾರಣಕ್ಕೂ ವಿದ್ಯುತ್ ದರ ಹೆಚ್ಚಳಕ್ಕೆ ಸರ್ಕಾರ ಮುಂದಾಗಬಾರದು ಅಂತ ಅಸಮಾಧಾನ ವ್ಯಕ್ತಪಡಿಸ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
ಹಾಸನ: ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ರೈತ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ.
ಗ್ರಾಮದ 45 ವರ್ಷದ ರೈತ ಚಂದ್ರೇಗೌಡ ಮೃತ ದುರ್ದೈವಿ. ತಮ್ಮ ಹೊಲದಲ್ಲಿ ಬೆಳೆಯಲಾಗಿದ್ದ ಶುಂಠಿ ಬೆಳೆಗೆ ಕೀಟನಾಶಕ ಸಿಂಪಡಣೆ ಮಾಡಲು ಹೋಗಿದ್ದಾಗ, ಹೊಲದಲ್ಲಿ ತುಂಡಾಗಿ ಬಿದ್ದಿದ್ದ ತಂತಿಯನ್ನು ತುಳಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಮೃತ ವ್ಯಕ್ತಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳು ಇದ್ದಾರೆ. ಮನೆಯ ಆಧಾರ ಸ್ತಂಭವಾಗಿದ್ದ ವ್ಯಕ್ತಿಯನ್ನು ಕಳೆದುಕೊಂಡು ಕುಟುಂಬದವರು ಕಂಗಾಲಾಗಿದ್ದಾರೆ. ಸ್ಥಳಕ್ಕೆ ಬೇಲೂರು ಪಿಎಸ್ಐ ಅಜೇಯ ಕುಮಾರ್, ಸಹಾಯಕ ಎಂಜಿನಿಯರ್ ಗಳಾದ ಕುಮಾರ್ ಹಾಗೂ ಸಂದೀಪ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮಡಿಕೇರಿ: ಕೂಲಿ ಕೆಲಸಕ್ಕೆಂದು ಅಸ್ಸಾಂನಿಂದ ಬಂದ ಅಮ್ಮ ಮಗಳು ಕಾಳು ಮೆಣಸು ಕೊಯ್ಯಲು ಹೋಗಿ ಕರೆಂಟ್ ಶಾಕ್ ಹೊಡೆದು ಸಾವನ್ನಪ್ಪಿರುವ ಘಟನೆ ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಕುಂದಾ ಗ್ರಾಮದ ಈಚೂರು ಎಂಬಲ್ಲಿ ನಡೆದಿದೆ.
ಮೃತ ಮಹಿಳೆಯರನ್ನು 45 ವಷ೯ದ ಸ್ವರೂಪ ಖಾತುನ್ ಮತ್ತು 20 ವಷ೯ದ ಹಸೀನಾ ಎಂದು ಗುರುತಿಸಲಾಗಿದೆ. ಈಚೂರು ಗ್ರಾಮದ ರಮೇಶ್ ಅವರ ತೋಟದಲ್ಲಿ ಕಾಳು ಮೆಣಸು ಕೊಯ್ಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಾಳು ಕೊಯ್ಯಲು ಅಲ್ಯೂಮಿನಿಯಂ ಏಣಿಯನ್ನು ಬಳಸಿದ್ದೆ ಈ ಘಟನೆ ಕಾರಣ ಎನ್ನಲಾಗಿದೆ.
ಕರಿಮೆಣಸು ಕೊಯ್ಯುವಾಗ ಅಲ್ಯೂಮಿನಿಯಂ ಏಣಿ ಬಳಕೆ ಮಾಡಬೇಡಿ ಎಂದು ಕಾರ್ಮಿಕ ಇಲಾಖೆಯ ಆದೇಶ ಹೋರಾಡಿಸಿದ್ದರೂ ಕೊಡಗಿನ ಬಹುತೇಕ ಕಾಫಿ ತೋಟದಲ್ಲಿ ಆದೇಶ ಪಾಲನೆ ಆಗುತ್ತಿಲ್ಲ. ಇದರಿಂದಾಗಿ ಇಂದು ಕೂಲಿ ಹುಡುಕಿ ಬಂದ ಎರಡು ಜೀವಗಳು ಬಲಿಯಾಗಿವೆ. ಕಾಳು ಕೊಯ್ಯಲು ಹೋದ ಖಾತುನ್ ಮತ್ತು ಹಸೀನಾ ಅಲ್ಯೂಮಿನಿಯಂ ಏಣಿ ಮೇಲೆ ಹತ್ತಿದ್ದಾರೆ. ಈ ವೇಳೆ ತೋಟದ ಮೇಲೆ ಹಾದುಹೋಗಿದ್ದ 11 ಕೆವಿ ವಿದ್ಯುತ್ ತಂತಿಯಿಂದ ಅಲ್ಯೂಮಿನಿಯಂ ಏಣಿಗೆ ವಿದ್ಯುತ್ ಪ್ರವಹಿಸಿದೆ. ಈ ವೇಳೆ ಮಹಿಳೆಯರಿಗೂ ವಿದ್ಯುತ್ ಸ್ಪರ್ಶವಾಗಿ ಸ್ಥಳದಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ವಿದ್ಯುತ್ ಸ್ಪರ್ಶದ ತೀವ್ರತೆ ಇಬ್ಬರು ಮಹಿಳೆಯರ ಕಾಲು ಸುಟ್ಟು ಕರಕಲಾಗಿದೆ. ಮೃತದೇಹಗಳನ್ನು ಗೋಣಿಕೊಪ್ಪಲು ಸರ್ಕಾರಿ ಆಸ್ಪತ್ರೆಗೆ ತಂದು ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಈ ಸಂಬಂಧ ಗೋಣಿಕೊಪ್ಪ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.