Tag: ಕಪಟ ನಾಟಕ ಪಾತ್ರಧಾರಿ

  • ಪ್ರೇಕ್ಷಕರ ಮನಗೆದ್ದ ಹುಲಿರಾಯನ ಕಪಟ ನಾಟಕ!

    ಪ್ರೇಕ್ಷಕರ ಮನಗೆದ್ದ ಹುಲಿರಾಯನ ಕಪಟ ನಾಟಕ!

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹೊಸಬರ ತಂಡಗಳು ಅಡಿಗಡಿಗೆ ಪ್ರೇಕ್ಷಕರ ಮನ ಗೆಲ್ಲುವಂಥಾ ಸಿನಿಮಾಗಳನ್ನು ಸೃಷ್ಟಿಸುತ್ತಿವೆ. ಆ ಸಾಲಿನಲ್ಲಿ ಕ್ರಿಶ್ ನಿರ್ದೇಶನದ ‘ಕಪಟ ನಾಟಕ ಪಾತ್ರಧಾರಿ’ ಚಿತ್ರವೂ ಸೇರಿಕೊಂಡಿದೆ. ಈ ಹಿಂದೆ ‘ಹುಲಿರಾಯ’ ಎಂಬ ಚಿತ್ರದ ಮೂಲಕ ನಾಯಕನಾಗಿ ಆರ್ಭಟಿಸಿದ್ದ ಬಾಲು ನಾಗೇಂದ್ರ ಅವರ ಅದ್ಭುತ ನಟನೆ, ಸಣ್ಣ ಸುಳಿವನ್ನೂ ಬಿಟ್ಟು ಕೊಡದಂತೆ ಬೇರೆಯದ್ದೇ ಅನುಭೂತಿಯನ್ನು ಪ್ರತಿ ಪ್ರೇಕ್ಷಕರಲ್ಲಿಯೂ ತುಂಬಿಸುವ ಅಮೋಘವಾದ ಕಥೆಯೊಂದಿಗೆ ಈ ಸಿನಿಮಾ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ನೀಡುತ್ತಿದೆ.

    ಇದು ಕ್ರಿಶ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ. ಹೀಗೆಂದರೆ ನಂಬಲು ತುಸು ಕಷ್ಟವಾಗುವಂಥಾ ಅಚ್ಚುಕಟ್ಟುತನದೊಂದಿಗೆ ಅವರು ಕಪಟ ನಾಟಕ ಪಾತ್ರಧಾರಿಯನ್ನು ರೂಪಿಸಿದ್ದಾರೆ. ಇಲ್ಲಿನ ಕಥೆ ಒಂದು ರೀತಿಯಲ್ಲಿ ವಿಶೇಷವಾಗಿದ್ದರೆ, ನಿರ್ದೇಶಕರು ಅದನ್ನು ನಿರೂಪಣೆ ಮಾಡಿರೋ ರೀತಿ ಮತ್ತೊಂದು ಥರದಲ್ಲಿ ವಿಶಿಷ್ಟವಾಗಿದೆ. ಇದರಲ್ಲಿನ ಪಾತ್ರಗಳಿಗೆ ಬಾಲು ನಾಗೇಂದ್ರ, ಸಂಗೀತಾ ಭಟ್ ಮತ್ತು ಇತರೇ ತಾರಾಗಣ ಜೀವ ತುಂಬಿರೋ ರೀತಿಯಂತೂ ಇಡೀ ಸಿನಿಮಾದ ಪ್ರಮುಖ ಶಕ್ತಿಯೆಂದರೂ ಅತಿಶಯವಲ್ಲ. ಒಟ್ಟಾರೆಯಾಗಿ ಒಂದಕ್ಕೊಂದು ಪೂರಕವಾದ ಎಲ್ಲ ಅಂಶಗಳು ಒಗ್ಗೂಡಿಕೊಂಡು ಕಪಟ ನಾಟಕ ಪಾತ್ರಧಾರಿಯನ್ನು ಪುಷ್ಕಳ ಗೆಲುವಿನತ್ತ ಸರಾಗವಾಗಿಯೇ ಕರೆದೊಯ್ಯುತ್ತಿವೆ.

    ಒಂದು ವರ್ಗವನ್ನು ಗಮನದಲ್ಲಿಟ್ಟುಕೊಂಡು ಸಿನಿಮಾ ಮಾಡಿದರೆ ಒಂದಂಶವನ್ನು ಪ್ರಧಾನವಾಗಿ ಪರಿಗಣಿಸಿದರೆ ಸಾಕಾಗುತ್ತದೆ. ಆದರೆ ನಿರ್ದೇಶಕ ಕ್ರಿಶ್ ಕಪಟ ನಾಟಕ ಪಾತ್ರಧಾರಿ ಎಲ್ಲ ವರ್ಗಗಳ ಪ್ರೇಕ್ಷಕರಿಗೂ ಮೆಚ್ಚುಗೆಯಾಗಬೇಕೆಂಬ ಉದ್ದೇಶದಿಂದಲೇ ಈ ಕಥೆಯನ್ನು ರೂಪಿಸಿದ್ದಾರೆ. ಅದರಲ್ಲಿ ಯಶವನ್ನೂ ಕಂಡಿದ್ದಾರೆ. ಇಲ್ಲಿ ರೋಚಕ ತಿರುವುಗಳಿವೆ, ಹಾರರ್ ಅಂಶಗಳಿವೆ, ಮಾಸ್, ಲವ್, ಸೆಂಟಿಮೆಂಟ್ ಸೇರಿದಂತೆ ಎಲ್ಲವೂ ಇವೆ. ಆದರೆ ಕಥೆ ಎತ್ತ ಹೊರಳಿಕೊಂಡರೂ ಮನೋರಂಜನೆಗೆ ಮಾತ್ರ ಯಾವ ಕಾರಣದಿಂದಲೂ ಕೊರತೆಯಾಗದಂತೆ ಕ್ರಿಶ್ ಈ ಸಿನಿಮಾವನ್ನು ಕಟ್ಟಿ ಕೊಟ್ಟಿದ್ದಾರೆ. ಆದ ಕಾರಣದಿಂದಲೇ ಇದು ಎಲ್ಲ ವರ್ಗದ ಪ್ರೇಕ್ಷಕರೂ ತಲೆದೂಗಿ ಮೆಚ್ಚಿಕೊಳ್ಳುವಂತೆ ಮೂಡಿ ಬಂದಿದೆ.

  • ಕಪಟ ನಾಟಕ ಪಾತ್ರಧಾರಿ: ಸಸ್ಪೆನ್ಸ್ ಕಥೆಯ ಥ್ರಿಲ್ಲಿಂಗ್ ಸವಾರಿ!

    ಕಪಟ ನಾಟಕ ಪಾತ್ರಧಾರಿ: ಸಸ್ಪೆನ್ಸ್ ಕಥೆಯ ಥ್ರಿಲ್ಲಿಂಗ್ ಸವಾರಿ!

    ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿರುವ ಕಪಟ ನಾಟಕ ಪಾತ್ರಧಾರಿ ಚಿತ್ರ ತೆರೆಕಂಡಿದೆ. ಶೀರ್ಷಿಕೆಯೊಂದಿಗೇ ಗಮನ ಸೆಳೆದು, ಆ ನಂತರದಲ್ಲಿ ಹಾಡುಗಳು ಮತ್ತು ಟ್ರೇಲರ್ ಮೂಲಕ ಸಖತ್ ಕ್ರೇಜ್ ಸೃಷ್ಟಿಸಿದ್ದ ಈ ಚಿತ್ರ ನೋಡುಗರನ್ನೆಲ್ಲ ಕಾಡುವಂತೆ, ಎಲ್ಲ ವರ್ಗದ ಪ್ರೇಕ್ಷಕರೂ ಸಂಪೂರ್ಣವಾಗಿ ತೃಪ್ತರಾಗುವಂತೆ ಅಚ್ಚುಕಟ್ಟಾಗಿಯೇ ಮೂಡಿ ಬಂದಿದೆ.

    ಯಾವ ಥರದ ನಿರೀಕ್ಷೆಗಳೆದ್ದಿದ್ದವೋ ಅದಕ್ಕೆ ತಕ್ಕುದಾದ ಕಂಟೆಂಟಿನೊಂದಿಗೆ ಮೂಡಿ ಬಂದಿರೋ ಈ ಚಿತ್ರ ಮಧ್ಯಮ ವರ್ಗದ ಹುಡುಗನೊಬ್ಬನ ಭೂಮಿಕೆಯಲ್ಲಿ ತೆರೆದುಕೊಳ್ಳುವ ಸಸ್ಪೆನ್ಸ್ ಕಥೆಯೊಂದಿಗೆ ಥ್ರಿಲ್ಲಿಂಗ್ ಜರ್ನಿ ಮಾಡಿಸುವಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ.

    ಇಲ್ಲಿರೋದು ಮಧ್ಯಮ ವರ್ಗದ ಹುಡುಗನೊಬ್ಬನ ಕಥೆ. ಅದು ಈ ವರ್ಗದ ಬಹುತೇಕ ಯುವಕರ ಪ್ರಾತಿನಿಧಿಕ ಕಥೆಯಂತೆಯೇ ಕಾಣಿಸುತ್ತದೆ. ಅದಕ್ಕೆ ಮತ್ತೂ ಒಂದಷ್ಟು ರೋಚಕ ಅಂಶಗಳನ್ನು ಸೇರಿಸಿ ಸಿನಿಮಾ ಸ್ಪರ್ಶ ನೀಡಿರುವಲ್ಲಿಯೇ ನಿರ್ದೇಶಕ ಕ್ರಿಶ್ ಅವರ ಕಸುಬುದಾರಿಕೆ ಎದ್ದು ಕಾಣಿಸುತ್ತದೆ. ಇದಕ್ಕಾಗಿ ಪ್ರತಿ ಪಾತ್ರಗಳನ್ನು ದುಡಿಸಿಕೊಂಡಿರೋದರಲ್ಲಿಯೇ ಇಡೀ ಸಿನಿಮಾದ ನಿಜವಾದ ಶಕ್ತಿಯೂ ಅಡಗಿದೆ. ಬಾಲು ನಾಗೇಂದ್ರ ಪ್ರತಿಭಾವಂತ ನಟ ಅನ್ನೋದು ಇಲ್ಲಿನ ಕೃಷ್ಣ ಎಂಬ ಪಾತ್ರದ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

    ಬಾಲು ನಾಗೇಂದ್ರ ಕೃಷ್ಣ ಎಂಬ ಪಾತ್ರವನ್ನು ನಿರ್ವಹಿಸಿದ್ದಾರೆ. ಅದು ಯಾವ ಕೆಲಸವನ್ನೂ ನೆಟ್ಟಗೆ ಮಾಡಲಾಗದೆ ಸದಾ ಅಪ್ಪನಿಂದ ಉಗಿಸಿಕೊಳ್ಳುವ ಪಾತ್ರ. ಹೀಗಿರುವ ಯುವ ಕೃಷ್ಣನ ಮುಂದೆ ಅನಿವಾರ್ಯತೆಯೊಂದು ಸೃಷ್ಟಿಯಾಗುತ್ತೆ. ಅದರ ಭಾಗವಾಗಿ ಆಟೋ ಓಡಿಸಿ ಬದುಕೋ ನಿರ್ಧಾರ ತಳೆಯುತ್ತಾನೆ. ಈ ಹಾದಿ ಪ್ರೀತಿ ಪ್ರೇಮಗಳೊಂದಿಗೆ ರೊಮ್ಯಾಂಟಿಕ್ ಮೂಡಿಗೆ ಜಾರಿಸುತ್ತಲೇ ಅಲ್ಲೊಂದು ಹಾರರ್ ಸಸ್ಪೆನ್ಸ್ ಕಥನ ತೆರೆದುಕೊಳ್ಳುತ್ತೆ. ಆತನ ಆಟೋ ಹತ್ತಲೇ ಹಿಂದೆ ಮುಂದೆ ನೋಡುವಂಥಾ ನಿರ್ಮಾಣವಾಗುತ್ತೆ. ಹಾಗಾದರೆ ಆಟೋದೊಳಗಾಗೋ ಚಿತ್ರವಿಚಿತ್ರ ಅನುಭವದ ಸೂತ್ರಧಾರರ್ಯಾರು? ಅದರಲ್ಲಿ ಪಾತ್ರಧಾರಿಗಳ್ಯಾರೆಂಬುದಕ್ಕಿಲ್ಲಿ ರೋಚಕ ಉತ್ತರವೇ ಕಾದಿದೆ.

    ನಿರ್ದೇಶಕ ಕ್ರಿಶ್ ಹಲವಾರು ಟ್ವಿಸ್ಟ್ ಗಳನ್ನು ಒಳಗೊಂಡಿರುವ ಈ ಕಥೆಯನ್ನು ಎಲ್ಲಿಯೂ ಸಿಕ್ಕಾಗದಂತೆ ನಿರ್ವಹಿಸಿದ್ದಾರೆ. ಬಾಲು ನಾಗೇಂದ್ರ, ಸಂಗೀತಾ ಭಟ್ ಸೇರಿದಂತೆ ಇಡೀ ಪಾತ್ರವರ್ಗ ತಮ್ಮ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದೆ. ಅದು ಈ ಸಿನಿಮಾದೊಂದು ಶಕ್ತಿಯಾದರೆ, ಛಾಯಾಗ್ರಹಣ, ಸಂಗೀತ ಸೇರಿದಂತೆ ಎಲ್ಲ ವಿಭಾಗಗಳೂ ಇದರಲ್ಲಿ ಭಾಗಿಯಾಗುವಂತಿವೆ. ಒಟ್ಟಾರೆಯಾಗಿ ಇದೊಂದು ಅಚ್ಚುಕಟ್ಟಾದ ವಿಭಿನ್ನ ಚಿತ್ರ. ಕುಟುಂಬ ಸಮೇತರಾಗಿ ನೋಡಿ ಎಂಜಾಯ್ ಮಾಡಲು ಅಡ್ಡಿಯಿಲ್ಲ.

    ರೇಟಿಂಗ್ 3.5 / 5

  • ಕಪಟ ನಾಟಕ ಪಾತ್ರಧಾರಿ: ಆಟೋ ಚಾಲಕನ ಬದುಕಿನ ಸವಾರಿ!

    ಕಪಟ ನಾಟಕ ಪಾತ್ರಧಾರಿ: ಆಟೋ ಚಾಲಕನ ಬದುಕಿನ ಸವಾರಿ!

    ಬೆಂಗಳೂರು: ಇದುವರೆಗೂ ಆಟೋ ಚಾಲಕರ ಬಗ್ಗೆ ಒಂದಷ್ಟು ಕಥೆಗಳು ಕನ್ನಡದಲ್ಲಿ ಸಿನಿಮಾ ಸ್ವರೂಪ ಪಡೆದುಕೊಂಡಿವೆ. ಇದೀಗ ಇದೇ ನವೆಂಬರ್ 8ರಂದು ತೆರೆಗಾಣಲು ರೆಡಿಯಾಗಿರೋ ಕಪಟ ನಾಟಕ ಪಾತ್ರಧಾರಿ ಚಿತ್ರ ಕೂಡಾ ಆಟೋ ಚಾಲಕನೊಬ್ಬನ ಬದುಕಿನ ಕಥೆಯಾಧರಿಸಿದ ಚಿತ್ರವೇ. ಆದರೆ ಈ ಕಥೆ ಮಾತ್ರ ಈವರೆಗೆ ಬಂದಿರುವ ಅಷ್ಟೂ ಕಥೆಗಳಿಗಿಂತಲೂ ಡಿಫರೆಂಟಾಗಿದೆ ಅನ್ನೋದು ಚಿತ್ರತಂಡದ ಭರವಸೆ. ಅದಕ್ಕೆ ಇತ್ತೀಚೆಗಷ್ಟೇ ಬಿಡುಗಡೆಯಾಗಿರೋ ಟ್ರೇಲರ್ ಮೂಲಕವೇ ಮತ್ತಷ್ಟು ಶಕ್ತಿ ಸಿಕ್ಕಿದಂತಾಗಿದೆ.

    ಕಪಟ ನಾಟಕ ಪಾತ್ರಧಾರಿಯಲ್ಲಿ ಬಾಲು ನಾಗೇಂದ್ರ ಮಧ್ಯಮ ವರ್ಗಕ್ಕಿಂತಲೂ ತುಸು ಕೆಳ ಮಟ್ಟದಲ್ಲಿರೋ ಕುಟುಂಬದ ಹುಡುಗನಾಗಿ ನಟಿಸಿದ್ದಾರೆ. ಆತ ಸೋಮಾರಿಗಳಲ್ಲಿಯೇ ಪರಮ ಸೋಮಾರಿ. ಹಾಗಂತ ಅವನು ಜಡ ಭರತನಲ್ಲ. ಚುರುಕಿನ ಸ್ವಭಾವದ ಈತ ಕೈಯಿಟ್ಟ ಯಾವ ಕೆಲಸವೂ ಬರಖತ್ತಾಗೋದಿಲ್ಲ ಎಂಬ ನಂಬಿಕೆ ಆಸುಪಾಸಿನವರಲ್ಲಿಯೇ ಗಟ್ಟಿಯಾಗುವಂಥಾ ವಿದ್ಯಮಾನಗಳು ಜರುಗುತ್ತಿರುತ್ತವೆ. ಅಷ್ಟಕ್ಕೂ ಈತನಿಗೆ ಸರಿಯಾದೊಂದು ಕೆಲಸ ಹಿಡಿದು ಮೈ ಮುರಿದು ದುಡಿಯೋ ಕಾನ್ಸೆಪ್ಟಿನಲ್ಲಿಯೇ ಒಲವಿರೋದಿಲ್ಲ. ಆದರೆ ಬದುಕು ಬಿಡಬೇಕಲ್ಲಾ? ಅದರ ಅನಿವಾರ್ಯತೆಗೆ ಸಿಕ್ಕು ಆಟೋ ಓಡಿಸಿಕೊಂಡು ಬದುಕ ಬೇಕಾಗಿ ಬಂದಾಗ ಅಲ್ಲಾಗೋ ಸ್ಥಿತ್ಯಂತರಗಳನ್ನು ಮಜವಾದ ಕಥೆಯೊಂದಿಗೆ ಇಲ್ಲಿ ನಿರೂಪಿಸಲಾಗಿದೆ.

    ಹೀಗೆ ಅನಿವಾರ್ಯವಾಗಿ ಆಟೋ ಚಾಲಕನಾಗೋ ನಾಯಕ ಯಾವುದೋ ಕಪಟ ನಾಟಕದ ಪಾತ್ರಧಾರಿಯಾಗ ಬೇಕಾಗಿ ಬರುತ್ತದೆ. ಅದುವೇ ಆತನನ್ನು ಸಂಕಷ್ಟದ ಹುದುಲೊಳಗೆ ಹೂತು ಬಿಡುತ್ತದೆ. ಇದರ ನಡುವೆಯೇ ಈ ಆಟೋ ಚಾಲಕ ಪ್ರೇಮಿಯಾಗುತ್ತಾನೆ. ಅಲ್ಲಲ್ಲಿ ನಗಿಸುತ್ತಾನೆ. ಕಚಗುಳಿ ಇಡುತ್ತಾನೆ. ಇಂಥಾ ಮನೋರಂಜನಾತ್ಮಕವಾದ ಗಟ್ಟಿ ಕಥೆ ಹೊಂದಿರೋ ಚಿತ್ರ ಕಪಟ ನಾಟಕ ಪಾತ್ರಧಾರಿ. ಆಟೋ ಚಾಲಕನನ್ನು ಬರಸೆಳೆದುಕೊಳ್ಳೋ ಆ ಘಟನೆ ಯಾವುದು ಎನ್ನುವುದರಿಂದ ಮೊದಲ್ಗೊಂಡು ಎಲ್ಲ ಕುತೂಹಲಗಳಿಗೂ ಇಲ್ಲಿ ಭರಪೂರ ಉತ್ತರ ಸಿದ್ಧವಿದೆ. ಆದರೆ ಅದಕ್ಕಾಗಿ ನವೆಂಬರ್ 8ರ ವರೆಗೆ ಕಾಯಬೇಕಷ್ಟೆ!

  • ಕಪಟ ನಾಟಕ ಪಾತ್ರಧಾರಿಣಿ ಸಂಗೀತಾ ಭಟ್!

    ಕಪಟ ನಾಟಕ ಪಾತ್ರಧಾರಿಣಿ ಸಂಗೀತಾ ಭಟ್!

    ಬೆಂಗಳೂರು: ಗರುಡ ಕ್ರಿಯೇಷನ್ಸ್ ಸ್ಕ್ರೀನ್ಸ್  ಪ್ರೈವೇಟ್ ಲಿಮಿಟೆಡ್ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿರುವ ಚಿತ್ರ ಕಪಟ ನಾಟಕ ಪಾತ್ರಧಾರಿ. ಹತ್ತು ಮಂದಿ ಸ್ನೇಹಿತರು ಸೇರಿಕೊಂಡು ನಿರ್ಮಾಣ ಮಾಡಿರುವ ಈ ಚಿತ್ರವನ್ನು ಕ್ರಿಶ್ ನಿರ್ದೇಶನ ಮಾಡಿದ್ದಾರೆ. ಒಂದು ಯಶಸ್ವಿ ಸಿನಿಮಾ ಬಗ್ಗೆ ಬಿಡುಗಡೆಯ ಹಂತದಲ್ಲಿ ಕೆನೆಗಟ್ಟಿಕೊಳ್ಳುವ ಸದಾಭಿಪ್ರಾಯವಿದೆಯಲ್ಲಾ? ಅಂಥಾ ಗಾಢ ವಾತಾವರಣದೊಂದಿಗೆ ಈ ಚಿತ್ರ ಇದೇ ನವೆಂಬರ್ ಎಂಟನೇ ತಾರೀಕಿನಂದು ಬಿಡುಗಡೆಗೆ ರೆಡಿಯಾಗಿದೆ. ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿರೋ ಈ ಚಿತ್ರದಲ್ಲಿ ಸಂಗೀತಾ ಭಟ್ ಭಿನ್ನ ಪಾತ್ರದ ಮೂಲಕ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.

    ಸಂಗೀತಾ ಭಟ್ ಎರಡನೇ ಸಲ ಮುಂತಾದ ಒಂದಷ್ಟು ಸಿನಿಮಾಗಳಲ್ಲಿ ನಟಿಸಿ ಪ್ರತಿಭಾನ್ವಿತ ನಟಿಯಾಗಿ ಗುರುತಿಸಿಕೊಂಡಿರುವವರು. ಈ ಪ್ರತಿಭೆಯ ಕಾರಣದಿಂದಲೇ ಅವರು ಕಪಟ ನಾಟಕ ಪಾತ್ರಧಾರಿ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದರು. ನಿರ್ದೇಶಕ ಕ್ರಿಶ್ ನಾಯಕನ ಪಾತ್ರಕ್ಕೆ ಬಾಲು ನಾಗೇಂದ್ರ ಅವರನ್ನು ಪಕ್ಕಾ ಮಾಡಿಕೊಂಡ ನಂತರದಲ್ಲಿ ನಾಯಕಿಯ ಪಾತ್ರವನ್ನು ಯಾರು ನಿಭಾಯಿಸುತ್ತಾರೆಂಬ ಬಗ್ಗೆ ಹಲವಾರು ದಿನಗಳ ಕಾಲ ಆಲೋಚಿಸಿದ್ದರಂತೆ. ಕಡೆಗೂ ಅವರ ಕಣ್ಣಿಗೆ ಬಿದ್ದಿದ್ದು ಎರಡನೇ ಸಲ ಚಿತ್ರದ ಚೆಲುವೆ ಸಂಗೀತಾ ಭಟ್.

    ಆರಂಭದಲ್ಲಿ ಈ ಕಥೆ ಕೇಳಿದಾಕ್ಷಣವೇ ಒಂದೇ ಸಲಕ್ಕೆ ಸಂಗೀತಾ ಭಟ್ ನಟಿಸೋ ನಿರ್ಧಾರ ಪ್ರಕಟಿಸಿದ್ದರಂತೆ. ಆ ನಂತರದಲ್ಲಿ ಈವರೆಗೂ ಕೂಡಾ ಸಂಗೀತಾ ಚಿತ್ರತಂಡಕ್ಕೆ ಸಂಪೂರ್ಣ ಸಾಥ್ ಕೊಡುತ್ತಾ ಬಂದಿದ್ದಾರೆ. ಇದೀಗ ವಿದೇಶದಲ್ಲಿ ನೆಲೆಸಿದ್ದರೂ ಸಹ ಸಾಮಾಜಿಕ ಜಾಲತಾಣಗಳ ಮೂಲಕವೇ ಈ ಚಿತ್ರದ ಬಗ್ಗೆ ಪ್ರಚಾರ ನೀಡುತ್ತಿದ್ದಾರೆ. ಅವರು ಈ ಚಿತ್ರದಲ್ಲಿ ನಟಿಸಿರೋ ಪಾತ್ರ ಕೂಡಾ ವಿಶೇಷವಾದದ್ದೇ. ಅವರಿಲ್ಲಿ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡೋ ಹುಡುಗಿಯಾಗಿ ಆ ಪಾತ್ರವನ್ನು ಜೀವಿಸಿದಷ್ಟೇ ತೀವ್ರವಾಗಿ ನಟಿಸಿದ್ದಾರಂತೆ. ಹೀಗೆ ಗಾರ್ಮೆಂಟ್ಸ್ ನಲ್ಲಿ ಕೆಲಸ ಮಾಡುತ್ತಾ ಆಟೋ ಡ್ರೈವರ್ ಜೊತೆ ಪ್ರೀತಿಗೆ ಬೀಳೋ ಆ ಪಾತ್ರ ಇಡೀ ಚಿತ್ರದ ಕೇಂದ್ರ ಬಿಂದುವೂ ಹೌದು. ಅದರ ಚಹರೆಗಳೆಲ್ಲ ಇದೇ ನವೆಂಬರ್ 8ರಂದು ಸ್ಪಷ್ಟವಾಗಿಯೇ ಜಾಹೀರಾಗಲಿವೆ.

  • ಕಪಟ ನಾಟಕ ಪಾತ್ರಧಾರಿಯ ಹಾರರ್ ಲುಕ್!

    ಕಪಟ ನಾಟಕ ಪಾತ್ರಧಾರಿಯ ಹಾರರ್ ಲುಕ್!

    ಬೆಂಗಳೂರು: ಬಾಲು ನಾಗೇಂದ್ರರಂಥಾ ವಿಶಿಷ್ಟ ನಟ ಪ್ರಧಾನ ಪಾತ್ರವನ್ನು ನಿರ್ವಹಿಸಿದ್ದಾರೆಂದ ಮೇಲೆ ಆ ಚಿತ್ರದ ಕಥೆಯೂ ಡಿಫರೆಂಟಾಗಿದೆ ಎಂದೇ ಅರ್ಥ. ಅದು ಪ್ರೇಕ್ಷಕರಿಗೂ ಕೂಡಾ ಚೆನ್ನಾಗಿಯೇ ಗೊತ್ತಿರುವಂಥಾದ್ದು. ಈಗಾಗಲೇ ಹೊರ ಬಂದಿರೋ ಹಾಡುಗಳು ಮತ್ತು ಟ್ರೇಲರ್ ಮೂಲಕವೇ ಈ ಸಿನಿಮಾದ ಭಿನ್ನ ಕಥೆಯ ಸುಳಿವೂ ಕೂಡಾ ಸ್ಪಷ್ಟವಾಗಿ ಜಾಹೀರಾಗಿದೆ. ಈ ಚಿತ್ರ ಇದೇ ನವೆಂಬರ್ 8ರಂದು ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಈ ಕಡೆಯ ಹೊತ್ತಿನಲ್ಲಿ ಈ ಥರದ ಗಾಢವಾದ ನಿರೀಕ್ಷೆ, ಕುತೂಹಲ, ಕ್ರೇಜ್‌ಗಳು ಮೇಳೈಸಿವೆಯಲ್ಲಾ? ಇದೆಲ್ಲವನ್ನೂ ಮೀರಿಸುವ ಹೂರಣ ಈ ಸಿನಿಮಾದೊಳಗಿದೆ.

    ಈ ಚಿತ್ರ ಆಟೋ ಡ್ರೈವರ್ ಒಬ್ಬನ ದಿನಚರಿಯನ್ನೊಳಗೊಂಡಿರುವಂಥಾದ್ದು. ಆದರೆ ನಿರ್ದೇಶಕ ಕ್ರಿಶ್ ಈ ದಿನಚರಿಯ ಪರಿಧಿಯೊಳಗೆ ಇಡೀ ಬ್ರಹ್ಮಾಂಡವನ್ನೇ ತಂದು ನಿಲ್ಲಿಸಿದ್ದಾರೆ. ಇದರಲ್ಲಿರೋದು ಆಟೋ ಡ್ರೈವರನ ದಿನಚರಿಯೆಂಬಂತೆ ಸಿಂಪಲ್ ಕಥೆಯ ಸುಳಿವು ಕೊಟ್ಟಿದ್ದ ಚಿತ್ರತಂಡ ಟ್ರೇಲರ್ ಮೂಲಕ ಅಚ್ಚರಿಗೆ ಕಾರಣವಾಗಿತ್ತು. ಯಾಕೆಂದರೆ ಅದರಾಚೆಗೆ ಅಲ್ಲಿ ಅನೇಕ ಕೊಂಬೆ ಕೋವೆ, ಸಸ್ಪೆನ್ಸ್ ಥ್ರಿಲ್ಲರ್ ಅನುಭವವಾಗಿತ್ತು. ಇದೆಲ್ಲವನ್ನೂ ಮೀರಿದ ಬಿರುಸಿನ ಕಥೆ ಇಲ್ಲಿದೆ ಎಂಬ ಸ್ಪಷ್ಟ ಸೂಚನೆಯೂ ಸಿಕ್ಕಿತ್ತು.

    ಇದೆಲ್ಲವನ್ನು ಹೊರತು ಪಡಿಸಿ ಚಿತ್ರತಂಡ ಕೊಂಚ ಸಸ್ಪೆನ್ಸ್ ಆಗಿಟ್ಟು, ಅಷ್ಟಾಗಿ ಎಲ್ಲಿಯೂ ಹೇಳಿಕೊಳ್ಳದ ಮತ್ತೊಂದು ಅಂಶವೂ ಈ ಚಿತ್ರದಲ್ಲಿದೆ. ಅದು ಹಾರರ್ ಶೇಡ್. ಇದು ಪ್ರತಿ ಪ್ರೇಕ್ಷಕರನ್ನೂ ಕೂಡಾ ಸುಳಿವೇ ಕೊಡದೆ ಬೆಚ್ಚಿ ಬೀಳಿಸಲಿದೆಯಂತೆ. ಇಡೀ ಕಥೆ ಗಂಭೀರವಾಗಿ, ಹಾಸ್ಯಮಯವಾಗಿ, ಉಸಿರು ಬಿಗಿ ಹಿಡಿದು ನೋಡುವಂಥಾ ಆವೇಗದೊಂದಿಗೆ ಸಾಗುತ್ತಿರುವಾಗಲೇ ಇಲ್ಲಿ ಏಕಾಏಕಿ ಹಾರರ್ ಅಂಶಗಳು ಪ್ರತ್ಯಕ್ಷವಾಗಲಿವೆಯಂತೆ. ಹಾಗೆ ಹಾರರ್ ಶೇಡ್ ತೆರೆದುಕೊಳ್ಳಲು ಕಾರಣವೇನು? ಅದರ ತೀವ್ರತೆ ಏನು ಎಂಬುದಕ್ಕೆಲ್ಲ ಇದೇ ನವೆಂಬರ್ ಎಂಟರಂದು ನಿಖರ ಉತ್ತರ ಸಿಗಲಿದೆ.

  • ಕಪಟನಾಟಕ ಪಾತ್ರಧಾರಿಯ ವಿಶೇಷ ಲಿರಿಕಲ್ ವೀಡಿಯೋ!

    ಕಪಟನಾಟಕ ಪಾತ್ರಧಾರಿಯ ವಿಶೇಷ ಲಿರಿಕಲ್ ವೀಡಿಯೋ!

    ಬೆಂಗಳೂರು: ಹೊಸ ತಂಡವೊಂದು ಎಂಟ್ರಿ ಕೊಟ್ಟಿತೆಂದರೆ ಅಲ್ಲಿ ಹೊಸತನದ ಜಾತ್ರೆಯೇ ನೆರೆಯುತ್ತದೆಂಬಂಥಾ ನಂಬಿಕೆ ಕನ್ನಡ ಪ್ರೆಕ್ಷಕರಲ್ಲಿದೆ. ಇತ್ತೀಚೆಗೆ ಬಂದ ಬಹುತೇಕ ಹೊಸ ತಂಡಗಳು ಇಂಥಾ ವಿಶಿಷ್ಟ ಕಂಟೆಂಟಿನ ಸಿನಿಮಾಗಳ ಮೂಲಕ ಈ ನಂಬಿಕೆಯನ್ನು ಗಟ್ಟಿಗೊಳಿಸಿವೆ. ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ರೊಮ್ಯಾಂಟಿಕ್ ಲಿರಿಕಲ್ ವೀಡಿಯೋ ಮೂಲಕವೇ ಮತ್ತೊಂದು ಹೊಸಾ ತಂಡದಿಂದ ರೂಪಿಸಲ್ಪಟ್ಟಿರೋ ‘ಕಪಟನಾಟಕ ಪಾತ್ರಧಾರಿ’ ಎಂಬ ಚಿತ್ರ ಸೌಂಡು ಮಾಡಿತ್ತು. ಇದೀಗ ಈ ಸಿನಿಮಾದ ಮತ್ತೊಂದು ಲಿರಿಕಲ್ ಸಾಂಗ್ ಬಿಡುಗಡೆಯಾಗಿ ಮತ್ತೆ ಪ್ರೇಕ್ಷಕರನ್ನಾವರಿಸಿಕೊಂಡಿದೆ.

    ಈ ಹಾಡನ್ನು ಸಂಗೀತ ನಿರ್ದೇಶಕ ಆದಿಲ್ ನದಾಫ್ ರೂಪಿಸಿರೋ ರೀತಿಗೆ ಪ್ರೇಕ್ಷಕರು ತಲೆದೂಗಿದ್ದಾರೆ. ಹಸಿದಾ ಶಿಕನು ಬೇಟೆಯಾಡಿದೆ ಒಡಲಾ ಕಸಿದು ಸೂರೆ ಮಾಡಿದೆ ಎಂಬ ಈ ಹಾಡನ್ನು ಚಾಣಕ್ಯ ಬರೆದಿದ್ದಾರೆ. ಇಶಾ ಸುಚಿ ಅಷ್ಟೇ ಆಪ್ತವಾಗಿ ಇದಕ್ಕೆ ಧ್ವನಿಯಾಗಿದ್ದಾರೆ. ಸಾಹಿತ್ಯದಲ್ಲಿಯೇ ವಿಶೇಷವಾದ ಅಂಶಗಳನ್ನೊಳಗೊಂಡಿರೋ ಈ ಹಾಡನ್ನು ಆದಿಲ್ ನದಾಫ್ ಅದಕ್ಕೆ ತಕ್ಕುದಾದ ಸಂಗೀತ ಸ್ಪರ್ಶದೊಂದಿಗೆ ಸಮ್ಮೋಹಕವಾಗಿ ರೂಪಿಸಿದ್ದಾರೆ. ಒಂದೇ ಸಲಕ್ಕೆ ಇಷ್ಟವಾಗುವಂತಿರೋ ಈ ಲಿರಿಕಲ್ ಸಾಂಗ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕವಾಗಿಯೇ ಹರಿದಾಡುತ್ತಿದೆ. ಇದನ್ನೂ ಓದಿ:  ಕಪಟನಾಟಕ ಪಾತ್ರಧಾರಿಯಾಗಿ ಹಾಡಾದ ಹುಲಿರಾಯ!

    ವಿಶೇಷವೆಂದರೆ, ಕಪಟನಾಟಕ ಪಾತ್ರಧಾರಿ ತಂಡ ಈ ಹಾಡುಗಳ ಮೂಲಕವೇ ಕಥೆಯ ಬಗ್ಗೆ ಮತ್ತಷ್ಟು ಕುತೂಹಲ ಕೆರಳಿಸುವಂಥಾ ಪಟ್ಟುಗಳನ್ನು ಪ್ರದರ್ಶಿಸುತ್ತಿದೆ. ಕಳೆದ ಬಾರಿ ಬಂದಿದ್ದ ರೊಮ್ಯಾಂಟಿಕ್ ಲಿರಿಕಲ್ ವೀಡಿಯೋ ಸಾಂಗ್ ಮತ್ತು ಈಗ ಬಿಡುಗಡೆಯಾಗಿರೋ ಈ ಹಾಡು ಕೂಡಾ ಕಥೆಯ ಬಗ್ಗೆಯೇ ಪ್ರೇಕ್ಷಕರ ದೃಷ್ಟಿ ಹೊರಳುವಂತೆ ಮಾಡುವಲ್ಲಿ ಗೆದ್ದಿವೆ. ಇದೀಗ ಸಂಪೂರ್ಣವಾಗಿ ಚಿತ್ರೀಕರಣ ಮುಗಿಸಿಕೊಂಡು ಬಿಡುಗಡೆಗೆ ತಯಾರಾಗಿ ನಿಂತಿರೋ ಕಪಟನಾಟಕ ಪಾತ್ರಧಾರಿ ಚಿತ್ರದಲ್ಲಿ ಹುಲಿರಾಯ ಖ್ಯಾತಿಯ ಬಾಲು ನಾಗೇಂದ್ರ ನಾಯಕನಾಗಿ ನಟಿಸಿದ್ದಾರೆ. ಸಂಗೀತ ಭಟ್ ನಾಯಕಿಯಾಗಿ ಜೊತೆಯಾಗಿದ್ದಾರೆ.