Tag: ಕನ್ನಡ ಸಿನೆಮಾ

  • ರತ್ನಮಂಜರಿ: ಸಾಫ್ಟ್‌ವೇರ್ ಜಗತ್ತಿಂದ ಬಣ್ಣದ ಲೋಕಕ್ಕೆ ಬಂದ ಪ್ರತಿಭಾವಂತ ಪ್ರಸಿದ್ಧ್!

    ರತ್ನಮಂಜರಿ: ಸಾಫ್ಟ್‌ವೇರ್ ಜಗತ್ತಿಂದ ಬಣ್ಣದ ಲೋಕಕ್ಕೆ ಬಂದ ಪ್ರತಿಭಾವಂತ ಪ್ರಸಿದ್ಧ್!

    ಬೆಂಗಳೂರು: ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯಲ್ಲಿ ಗೌರವಾನ್ವಿತ ಕೆಲಸ. ತಿಂಗ ತಿಂಗಳು ಕೈ ಸೇರೋ ದೊಡ್ಡ ಮೊತ್ತದ ಸಂಬಳ. ಆರ್ಥಿಕವಾಗಿ ಬದುಕಿಗೆ ಯಾವ ತತ್ವಾರವೂ ಇಲ್ಲ ಎಂಬಂಥಾ ನಿರಾಳ ಸ್ಥಿತಿಗತಿ… ಇದು ಬಹುತೇಕರು ಕಲ್ಪಿಸಿಕೊಳ್ಳುವ ಸ್ವರ್ಗದಂಥಾ ಬದುಕಿನ ಚಿತ್ರ. ಆದರೆ ಅದೆಲ್ಲವೂ ದಕ್ಕಿದರೂ ಕೂಡಾ ಬೇರೇನನ್ನೋ ಧ್ಯಾನಿಸುವಂಥಾ ಮನಸುಗಳೂ ನಮ್ಮ ನಡುವಲ್ಲಿವೆ. ಈ ಥರದ ಧ್ಯಾನವೆಲ್ಲ ಬಹುಪಾಲು ಸಿನಿಮಾ ಕೇಂದ್ರಿತವಾದದ್ದೆಂಬುದು ಗೊತ್ತಿರೋ ವಿಚಾರವೇ. ಹಾಗೆ ಸಾಫ್ಟ್‌ವೇರ್ ಲೋಕದಿಂದ ಬಂದು ಚಿತ್ರರಂಗಕ್ಕೆ ಹೊಸಾ ಆಲೋಚನೆಯನ್ನು ಹೊತ್ತುತಂದ ಅನೇಕರಿದ್ದಾರೆ. ಆ ಸಾಲಿನಲ್ಲಿ ಇದೀಗ ಬಿಡುಗಡೆಗೆ ಸಜ್ಜುಗೊಂಡಿರುವ ರತ್ನಮಂಜರಿ ಚಿತ್ರದ ನಿರ್ದೇಶಕ ಪ್ರಸಿದ್ಧ್ ಕೂಡಾ ಅನಾಯಾಸವಾಗಿಯೇ ಸೇರ್ಪಡೆಗೊಳ್ಳುತ್ತಾರೆ.

    ಬೆಂಗಳೂರಿನಲ್ಲಿಯೇ ಹುಟ್ಟಿ ಬೆಳೆದಿರುವ ಪ್ರಸಿದ್ಧ್ ಅವರ ಪಾಲಿಗೆ ಆರಂಭದಿಂದಲೂ ಸಿನಿಮಾ ಅಂದರೆ ಅದೇನೋ ಆಸಕ್ತಿ. ಆದರೆ ಅಲ್ಲಿ ಇಂಥಾದ್ದೇ ಕೆಲಸ ಮಾಡಬೇಕೆಂಬ ಇರಾದೆಯೇನೂ ಇರಲಿಲ್ಲ. ಕರಾಟೆಪಟುವೂ ಆಗಿರೋ ಅವರು ಅದರಲ್ಲಿ ಬ್ಲಾಕ್ ಬೆಲ್ಟ್ ಹಂತವನ್ನೂ ತಲುಪಿಕೊಂಡಿದ್ದವರು. ಅವರು ಡ್ಯಾನ್ಸ್ ಕೊರಿಯೋಗ್ರಾಫರ್ ಕೂಡಾ ಹೌದು. ಅನೇಕರಿಗೆ ನೃತ್ಯ ಹೇಳಿಕೊಟ್ಟ ತೃಪ್ತಿಯೂ ಅವರಲ್ಲಿದೆ. ಸಾಫ್ಟ್ ವೇರ್ ವಲಯದಲ್ಲಿಯೂ ಅವರಿಗೆ ಗ್ರಾಫಿಕ್ಸ್, ಆನಿಮೇಷನ್ ವಿಭಾಗದ ಕೆಲಸವೇ ಸಿಕ್ಕಿತ್ತು. ಇದು ಅವರೊಳಗೆ ಸುಪ್ತವಾಗಿದ್ದ ಸಿನಿಮಾ ಕನಸನ್ನು ಮತ್ತಷ್ಟು ನಿಗಿ ನಿಗಿಸುವಂತೆ ಮಾಡಿದ್ದದ್ದು ಸುಳ್ಳಲ್ಲ.

    ಹೀಗೆಯೇ ಒಳಗೊಳಗೆ ಸಿನಿಮಾ ಕನಸನ್ನು ಸಾಕಿಕೊಂಡಿದ್ದ ಅವರು ಕಡೆಗೂ ದೃಢ ನಿರ್ಧಾರ ಮಾಡಿ ಸ್ಟೋರಿ ರೈಟರ್ ಅವತಾರದಲ್ಲಿ ಚಿತ್ರರಂಗದ ಪಡಸಾಲೆಗೆ ಅಡಿಯಿರಿಸಿದ್ದರು. ಅದಾಗಲೇ ಸಾಕಷ್ಟು ಕಥೆಗಳನ್ನು ಸಿದ್ಧಪಡಿಸಿಕೊಂಡಿದ್ದ ಅವರು ಮೊದಲು ಕಥೆ ಹೇಳಿದ್ದು ನಾದಬ್ರಹ್ಮ ಹಂಸಲೇಖಾ ಅವರ ಮುಂದೆ. ಹಂಸಲೇಖಾ ಕೂಡಾ ಪ್ರಸಿದ್ಧ್ ಒಳಗಿರೋ ಕಥೆಯ ಕಸುವನ್ನು ಗುರುತಿಸಿ ಪ್ರೋತ್ಸಾಹಿಸಿದ್ದರು. ಅವರೇ ಶಿವರಾಜ್ ಕುಮಾರ್ ಅವರಲ್ಲಿಗೂ ಕಳಿಸಿದ್ದರು. ಪ್ರಸಿದ್ಧ್ ಶಿವಣ್ಣನಿಗೂ ಕಥೆ ಹೇಳಿದ್ದರಾದರೂ ಕಾರಣಾಂತರಗಳಿಂದ ಆ ಕನಸು ಕೈಗೂಡಿರಲಿಲ್ಲ.

    ಆ ನಂತರವೂ ಸಿನಿಮಾ ಮಾಡೋ ಗುಂಗಲ್ಲಿ ಅನೇಕರನ್ನು ಸಂಪರ್ಕಿಸಿದ್ದರಾದರೂ ಅದಕ್ಕೆ ಕಾಲ ಕೂಡಿ ಬಂದಿರಲಿಲ್ಲ. ಹೀಗೆಯೇ ನಿರಾಸೆಯಾದರೂ ಸೈರಿಸಿಕೊಂಡು ಮುಂದುವರೆಯುತ್ತಿದ್ದ ಪ್ರಸಿದ್ಧ ಅವರಿಗೆ ಕಡೆಗೂ ಸಿಕ್ಕಿದ್ದವರು ಎನ್ ಆರ್ ಐ ನಟರಾಜ್ ಹಳೆಬೀಡು. ಅವರೊಂದಿಗೆ ಸಿನಿಮಾ ಬಗ್ಗೆ ಚರ್ಚಿಸುತ್ತಾ ರತ್ನಮಂಜರಿ ಕಥೆ ಹುಟ್ಟಿಕೊಂಡಿತ್ತು. ತದನಂತರ ಡಾ. ನವೀನ್ ಮತ್ತು ಸಂದೀಪ್ ಕೂಡಾ ನಿರ್ಮಾಣಕ್ಕೆ ಜೊತೆಯಾಗೋ ಮೂಲಕ ಪ್ರಸಿದ್ಧ್ ಕನಸಿಗೆ ದೊಡ್ಡ ಮಟ್ಟದಲ್ಲಿಯೇ ಶುಭಾರಂಭ ದೊರೆತಿತ್ತು.

    ಆ ನಂತರದಲ್ಲಿ ಛಾಯಾಗ್ರಾಹಕ ಪ್ರೀತಂ ತೆಗ್ಗಿನ ಮನೆ ಸೇರಿದಂತೆ ತಮ್ಮ ಕನಸಿಗೆ ಪೂರಕವಾದ ತಂತ್ರಜ್ಞರ ತಂಡವೇ ಪ್ರಸಿದ್ಧ್ ಅವರಿಗೆ ಸಿಕ್ಕಿತ್ತು. ನೋಡ ನೋಡುತ್ತಲೇ ಸಿನಿಮಾವನ್ನೇ ಉಸಿರಾಡೋ ಅಚ್ಚುಕಟ್ಟಾದೊಂದು ತಂಡವೂ ಸಾಥ್ ನೀಡಿತ್ತು. ಇದರಿಂದಾಗಿಯೇ ಯಾವ ಅಡೆತಡೆಯೂ ಇಲ್ಲದೇ ಈ ಚಿತ್ರ ಅಂದುಕೊಂಡಂತೆಯೇ ರೂಪುಗೊಂಡಿದೆಯಂತೆ. ಈ ಮೂಲಕ ಪ್ರಸಿದ್ಧ್ ಬಹುಕಾಲದ ಕನಸೊಂದು ಮೋಹಕವಾಗಿಯೇ ನನಸಾದ ಖುಷಿಯಲ್ಲಿದ್ದಾರೆ. ಕಥೆಯ ವಿಚಾರದಲ್ಲಿ, ತಾಂತ್ರಿಕವಾಗಿ ಹೊಸತನ ಹೊಂದಿರೋ ಈ ಚಿತ್ರ ಇದೇ ಮೇ ತಿಂಗಳಲ್ಲಿ ಅದ್ಧೂರಿಯಾಗಿಯೇ ಬಿಡುಗಡೆಯಾಗುತ್ತಿದೆ.

  • ಪ್ರೇಕ್ಷಕರನ್ನು ಥೇಟರಿನಾಚೆಗೂ ಕಾಡಲಿದೆ ಖನನ ಕಥೆ!

    ಪ್ರೇಕ್ಷಕರನ್ನು ಥೇಟರಿನಾಚೆಗೂ ಕಾಡಲಿದೆ ಖನನ ಕಥೆ!

    ಬೆಂಗಳೂರು:  ಅಚ್ಚುಕಟ್ಟಾದ ಕಂಟೆಂಟ್ ಹೊಂದಿರುವ ಹೊಸತನದ ಚಿತ್ರಗಳನ್ನು ಕನ್ನಡದ ಪ್ರೇಕ್ಷಕರು ಯಾವತ್ತಿದ್ದರೂ ಗೆಲ್ಲಿಸಿಯೇ ತೀರುತ್ತಾರೆ. ಅದರಲ್ಲಿಯೂ ಹೊಸಾ ಪ್ರಯೋಗಗಳಿಗಂತೂ ಪ್ರೇಕ್ಷಕರ ಪ್ರೋತ್ಸಾಹ ಸದಾ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ನೋಡ ಹೋದರೆ ಆರ್ಯವರ್ಧನ್ ನಾಯಕರಾಗಿ ನಟಿಸಿರುವ ಖನನ ಚಿತ್ರದ ಗೆಲುವು ನಿಚ್ಚಳವಾಗಿದೆ!

    ಶೀರ್ಷಿಕೆಯ ಬಗ್ಗೆಯೇ ಪ್ರೇಕ್ಷಕರು ಆಕರ್ಷಿತರಾಗಿ ತಲೆ ಕೆಡಿಸಿಕೊಳ್ಳುವಂತೆ ಮಾಡುವಂಥಾ ಟ್ರೆಂಡ್ ಇತ್ತೀಚೆಗೆ ಶುರುವಾಗಿದೆ. ಹುಡುಕಿದರೆ ಬಹಳಷ್ಟು ಅರ್ಥವತ್ತಾದ ವಿಚಾರಗಳನ್ನು ಹೊಮ್ಮಿಸುವಂಥಾ ಶೀರ್ಷಿಕೆಗಳೂ ಹಲವಾರಿವೆ. ಖನನ ಕೂಡಾ ಅದೇ ಥರದ ಸಮ್ಮೋಹಕ ಶೀರ್ಷಿಕೆ ಹೊಂದಿರುವ ಚಿತ್ರ.

    ಖನನ ಎಂಬುದು ಸಂಸ್ಕೃತ ಪದ. ಇದರ ಅರ್ಥಕ್ಕೆ ತಕ್ಕುದಾದ ಕಥೆಯನ್ನೂ ಈ ಚಿತ್ರ ಹೊಂದಿದೆ. ಸಸ್ಪೆನ್ಸ್ ಥ್ರಿಲ್ಲರ್ ಜಾನರಿನ ಖನನ ಪಕ್ಕಾ ಕಮರ್ಶಿಯಲ್ ಮಾದರಿಯಲ್ಲಿಯೇ ತಯಾರಾಗಿದೆ. ನಿರ್ದೇಶಕ ರಾಧಾ ಹೇಳಿ ಕೇಳಿ ತೆಲುಗು ಚಿತ್ರರಂಗದಲ್ಲಿ ಪಳಗಿಕೊಂಡಿರುವವರು. ಭಾರೀ ಬಜೆಟ್ಟಿನ ಸೂಪರ್ ಹಿಟ್ ಚಿತ್ರಗಳಿಗೂ ಕೆಲಸ ಮಾಡಿರುವವರು. ಆದ್ದರಿಂದಲೇ ಕನ್ನಡಕ್ಕೆ ತುಂಬಾ ಅಪರೂಪವಾಗಿರೋ ಖನನ ಕಥೆಯನ್ನವರು ಕಮರ್ಶಿಯಲ್ ರೂಪದಲ್ಲಿಯೇ ಕಟ್ಟಿ ಕೊಟ್ಟಿದ್ದಾರಂತೆ.

    ಇಲ್ಲಿಯ ಕಥೆ ಬರೀ ಕಲ್ಪನೆಯ ಮೂಸೆಯಲ್ಲಿ ಅರಳಿಕೊಂಡಿರೋದಲ್ಲ. ಬದುಕಿಗೆ ಹತ್ತಿರವಾದ, ಗೊಂದಲದ ಸಿಕ್ಕು ಬಿಡಿಸುತ್ತಲೇ ಥರ ಥರದ ಸಾಕ್ಷಾತ್ಕಾರ ಮಾಡಿಸುವಂಥಾ ತಿರುಳನ್ನು ಹೊಂದಿದೆಯಂತೆ. ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂಥಾ ಈ ಕಥೆ ಥೇಟರಿನಿಂದ ಹೊರಬಂದ ನಂತರವೂ ಪ್ರೇಕ್ಷಕರನ್ನು ಬಿಟ್ಟೂ ಬಿಡದಂತೆ ಕಾಡುವಂತಿದೆಯಂತೆ.

    ಖನನ ಚಿತ್ರದಲ್ಲಿ ಅಂಥಾದ್ದೇನಿದೆ ಅನ್ನೋದು ಮುಂದಿನ ತಿಂಗಳು ಖಂಡಿತಾ ಜಾಹೀರಾಗಲಿದೆ. ಯಾಕೆಂದರೆ ಮೇ ತಿಂಗಳಲ್ಲಿ ಈ ಚಿತ್ರ ಕನ್ನಡವೂ ಸೇರಿದಂತೆ ಮೂರು ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

  • ಲಂಡನ್ ನಲ್ಲಿ ಲಂಬೋದರ: ವಿದೇಶಿ ವ್ಯಾಮೋಹದಿಂದ ದೇಶ ಮರೆತವರ ಮರ್ಮರ!

    ಲಂಡನ್ ನಲ್ಲಿ ಲಂಬೋದರ: ವಿದೇಶಿ ವ್ಯಾಮೋಹದಿಂದ ದೇಶ ಮರೆತವರ ಮರ್ಮರ!

    ಬೆಂಗಳೂರು: ಯಾವುದೇ ಸಿನಿಮಾ ರೂಪಿಸಿದವರೂ ತಮ್ಮ ಚಿತ್ರವನ್ನು ಯಾಕೆ ಜನ ನೋಡಲೇ ಬೇಕು ಅನ್ನೋದಕ್ಕೆ ಬೇಕಾದಷ್ಟು ಕಾರಣಗಳನ್ನ ಕೊಡುತ್ತಾರೆ. ಆದರೆ ಲಂಡನ್ ನಲ್ಲಿ ಲಂಬೋದರ ಚಿತ್ರದ ನಿರ್ದೇಶಕ ರಾಜ್ ಸೂರ್ಯ ಕೊಡೋ ಕಾರಣ ಮಾತ್ರ ತುಸು ಭಿನ್ನ. ಇನ್ನೇನು ಇದೇ ತಿಂಗಳ ಇಪ್ಪತ್ತೊಂಬತ್ತರಂದು ಬಿಡುಗಡೆಗೊಳ್ಳಲಿರೋ ಈ ಚಿತ್ರದ ವಿಶೇಷತೆಗಳು ಎಲ್ಲ ವರ್ಗದ ಪ್ರೇಕ್ಷಕರನ್ನೂ ಸೆಳೆಯುವಂತಿದೆ.

    ಈಗ ಹೇಳಿಕೇಳಿ ಥಳುಕು ಬಳುಕಿಗೆ ಬೇಗನೆ ಮಾರು ಹೋಗುವ ಕಾಲ. ಹುಟ್ಟಿದ ನೆಲವನ್ನು ಹಳಹಳಿಸುತ್ತಾ ಹೇಗಾದರೂ ಮಾಡಿ ವಿದೇಶಕ್ಕೆ ಹಾರಿ ಸೆಟಲ್ ಆಗಬೇಕೆಂಬ ಮನಸ್ಥಿತಿಯೇ ಬಹುತೇಕರನ್ನು ಆಳುತ್ತಿದೆ. ಹೀಗೆ ಹುಟ್ಟಿದೂರನ್ನು ತೊರೆದು ವಿದೇಶದಲ್ಲಿ ಬೇರಿಳಿಸಿಕೊಂಡು ತಾಯಿ ಬೇರನ್ನು ಸಂಪೂರ್ಣವಾಗಿ ಮರೆತರೆ ಏನಾಗುತ್ತೆ ಅನ್ನೋದಕ್ಕೆ ಖಂಡಿತವಾಗಿಯೂ ಈ ಚಿತ್ರದಲ್ಲಿ ವಿಶೇಷವಾದ ಉತ್ತರಗಳು ಜಾಹೀರಾಗಲಿವೆ!

    ಇನ್ನು ಪಾತ್ರಗಳ ಬಗ್ಗೆ ಹೇಳೋದಾದರೆ ನಿರ್ದೇಶಕರು ಪ್ರತೀ ಪಾತ್ರವನ್ನೂ ಕೂಡಾ ಟ್ರೆಂಡ್ ಸೆಟ್ ಮಾಡುವಂಥಾ ರೀತಿಯಲ್ಲಿ ರೂಪಿಸಿದ್ದಾರಂತೆ. ಸಂಪತ್ ರಾಜ್ ಅವರದ್ದಿಲ್ಲಿ ವಿಶಿಷ್ಟವಾದ ಪಾತ್ರ. ಸಾಧು ಕೋಕಿಲಾ ಕೂಡಾ ಈವರೆಗಿನದಕ್ಕಿಂತಲೂ ಪಕ್ಕಾ ವಿಶೇಷವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರಂತೆ. ನಮ್ಮ ನಡುವೆಯೇ ಇರುವಂತೆ ಭಾಸವಾಗೋ ಈ ಪಾತ್ರಗಳೆಲ್ಲವೂ ತಮ್ಮದೇ ರೀತಿಯಲ್ಲಿ ಕಚಗುಳಿ ಇಡಲಿವೆ ಅನ್ನೋದು ಚಿತ್ರತಂಡದ ಭರವಸೆ.

    ಈಗಾಗಲೇ ಲಂಡನ್ ನಲ್ಲಿ ಲಂಬೋದರ ಚಿತ್ರ ಬಹು ನಿರೀಕ್ಷಿತ ಸಿನಿಮಾವಾಗಿ ಹೊರಹೊಮ್ಮಿದೆ. ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರೋ ಈ ಸಿನಿಮಾದಲ್ಲಿ ಸ್ಕ್ರೀನ್ ಪ್ಲೇ, ಎಡಿಟಿಂಗ್, ಹಾಡುಗಳು, ಛಾಯಾಗ್ರಹಣ ಸೇರಿದಂತೆ ಎಲ್ಲದರಲ್ಲಿಯೂ ಹೊಸಾ ಪ್ರಯೋಗಗಳನ್ನು ಮಾಡಲಾಗಿದೆ. ಅದರ ಮುದ ಏನೆಂಬುದು ಈ ತಿಂಗಳ ಇಪ್ಪತ್ತೊಂಬತ್ತರಂದು ಜಾಹೀರಾಗಲಿದೆ.

  • ರವಿ ಹಿಸ್ಟರಿ: ಪಲ್ಲವಿ ರಾಜು ಈಗ ಎಸ್.ಐ. ಅನಿತ!

    ರವಿ ಹಿಸ್ಟರಿ: ಪಲ್ಲವಿ ರಾಜು ಈಗ ಎಸ್.ಐ. ಅನಿತ!

    ಬೆಂಗಳೂರು: ಬೇಗನೆ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸುತ್ತಾ ಮುಖ್ಯ ನಾಯಕಿಯಾಗಿ ನೆಲೆನಿಲ್ಲಬೇಕೆಂಬ ಆಸೆ ಇದೀಗ ತಾನೇ ಬಣ್ಣ ಹಚ್ಚಿದ ಹೊಸಾ ಹುಡುಗಿಯರಲ್ಲೂ ಇರುತ್ತೆ. ಆದರೆ ನಟಿಸೋ ಚಿತ್ರಗಳ ಸಂಖ್ಯೆ ಕಡಿಮೆಯಾದರೂ, ತೀರಾ ಕಮರ್ಷಿಯಲ್ ಸಿನಿಮಾಗಳಲ್ಲದೇ ಹೋದರೂ ನಟಿಸೋ ಪಾತ್ರದ ಮೂಲಕವೇ ಗುರುತಾಗ ಬೇಕೆಂಬ ಹಂಬಲ ಹೊಂದಿರುವವರು ವಿರಳ. ಅಂಥಾ ವಿರಳ ಮನಸ್ಥಿತಿ ಹೊಂದಿರೋ ಅಪರೂಪದ ನಟಿ ಪಲ್ಲವಿ ರಾಜು. ಅವರೀಗ ಈ ವಾರ ತೆರೆ ಕಾಣಲಿರುವ ರವಿ ಹಿಸ್ಟರಿ ಚಿತ್ರದ ನಾಯಕಿಯಾಗಿ ವಿಶೇಷ ಗೆಟಪ್ಪೊಂದರ ಮೂಲಕ ಪ್ರೇಕ್ಷಕರನ್ನು ಮುಖಾಮುಖಿಯಾಗಲು ತಯಾರಾಗಿದ್ದಾರೆ.

    ಸಿನಿಮಾ ಯಾವ ಜಾನರಿನದ್ದೇ ಆಗಿದ್ದರೂ ತನ್ನ ಪಾತ್ರ ಸವಾಲಿನದ್ದಾಗಿರಬೇಕೆಂಬ ಹಂಬಲ ಹೊಂದಿರುವವರು ಪಲ್ಲವಿ ರಾಜು. ಆ ಕಾರಣದಿಂದಲೇ ಅವರಿಂದು ವಿಶಿಷ್ಟ ನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಕ’ ಎಂಬ ಚಿತ್ರದ ಮೂಲಕವೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು ಈಗ ಬಿಡುಗಡೆಗೆ ಸಜ್ಜಾಗಿರೋ ರವಿ ಹಿಸ್ಟರಿ ಸಿನಿಮಾದ ನಾಯಕಿ. ಈ ಪಾತ್ರದ ಬಗ್ಗೆ ಅವರಿಗೆ ಈ ಹಿಂದೆಂದಿಗಿಂತಲೂ ಹೆಚ್ಚಿನ ಭರವಸೆ ಇದೆ.

    ಇದುವರೆಗೂ ಪಲ್ಲವಿ ಸವಾಲಿನ ಪಾತ್ರಗಳಿಗೇ ಜೀವ ತುಂಬಿದ್ದಾರೆ. ಈ ಹಿಂದೆ ತೆರೆ ಕಂಡಿದ್ದ ಮಂತ್ರಂ ಚಿತದಲ್ಲಿನ ಇವರ ನಟನೆಯೇ ಪಲ್ಲವಿ ಓರ್ವ ಅಸಾಮಾನ್ಯ ನಟಿ ಅನ್ನೋದಕ್ಕೆ ಸ್ಪಷ್ಟ ಉದಾಹರಣೆ. ಅವರೊಳಗಿನ ನಟನಾ ಚಾತುರ್ಯಕ್ಕೆ ಸವಾಲಿನಂಥಾ ಪಾತ್ರವೇ ರವಿ ಹಿಸ್ಟರಿ ಚಿತ್ರದಲ್ಲಿ ಸಿಕ್ಕಿದೆಯಂತೆ. ಅಂದಹಾಗೆ ಇಲ್ಲವರು ಎಸ್‍ಐ ಅನಿತಾ ಎಂಬ ಪಾತ್ರದಲ್ಲಿ ನಟಿಸಿದ್ದಾರೆ.

    ಆರಂಭದಲ್ಲಿ ನಿರ್ದೇಶಕ ಮಧು ಚಂದ್ರ ಕಥೆ ಹೇಳಿದ್ದಾಗ ಪಲ್ಲವಿ ರಾಜು ಅವರ ಪಾತ್ರದ ಒಂದು ಪದರವನ್ನಷ್ಟೇ ಬಿಚ್ಚಿಟ್ಟಿದ್ದರಂತೆ. ಆದರೆ ರಿಹರ್ಸಲ್ ಸಂದರ್ಭದಲ್ಲಿ ಇವರ ಪಾತ್ರದ ಎರಡು ಪುಟ ತಿರುವುತ್ತಲೇ ಅಚ್ಚರಿ ಕಾದಿತ್ತಂತೆ. ಅದಕ್ಕೆ ಕಾರಣ ಅವರ ಪಾತ್ರಕ್ಕಿರೋ ಸಮ್ಮೋಹಕವಾದ ತಿರುವು ಮತ್ತು ಶೇಡುಗಳು!

    ರವಿ ಹಿಸ್ಟರಿ ಎಂಬುದೇ ಈಗ ವಿಭಿನ್ನ ಜಾಡಿನ ಚಿತ್ರವಾಗಿ ಪ್ರೇಕ್ಷಕರನ್ನ ಸೆಳೆದುಕೊಂಡಿದೆ. ಅದರಲ್ಲಿ ನಾಯಕಿಯಾಗಿರೋ ಪಲ್ಲವಿ ಎಸ್‍ಐ ಅನಿತ ಆಗಿ ಕಾಣಿಸಿಕೊಂಡಿದ್ದಾರೆ. ಎಸ್‍ಐ ಅಂದಾಕ್ಷಣ ಗಾಗಲ್ಸ್ ಹಾಕಿಕೊಂಡು ಬಿಲ್ಡಪ್ಪು ಕೊಡೋ ಪಾತ್ರದ ಕಲ್ಪನೆ ಬರೋದು ಸಹಜ. ಆದರೆ ಈ ಪಾತ್ರ ವಾಸ್ತವಕ್ಕೆ ಹತ್ತಿರವಾಗಿದೆಯಂತೆ. ಮಧ್ಯಮವರ್ಗದಿಂದ ಬಂದ ಹುಡುಗಿಯಾಗಿ, ಕಷ್ಟಪಟ್ಟು ಎಸ್‍ಐ ಆಗೋ ಶೇಡಿನ ಪಾತ್ರ ಪಲ್ಲವಿ ರಾಜು ವೃತ್ತಿ ಬದುಕಿಗೆ ಹೊಸಾ ದಿಕ್ಕು ತೋರಿಸೋ ಸಾಧ್ಯತೆಗಳೇ ಢಾಳಾಗಿವೆ.

    ಪಲ್ಲವಿ ರಾಜು ಇದುವರೆಗೂ ಒಂದಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವೆಲ್ಲವೂ ಪ್ರಯೋಗಾತ್ಮಕ ಚಿತ್ರಗಳೇ. ಆದರೆ ರವಿ ಹಿಸ್ಟರಿ ಪ್ರಯೋಗಗಳನ್ನ ಹೊಂದಿರೋ ಕಮರ್ಷಿಯಲ್ ಮೂವಿ. ಇದರ ಮೂಲಕವೇ ಎಸ್.ಐ. ಅನಿತಾ ಆಗಿ ಹೊಸ ಕಮಾಲ್ ಸೃಷ್ಟಿಸೋ ಭರವಸೆ ಪಲ್ಲವಿ ರಾಜು ಅವರದ್ದು.

  • ಲಂಡನ್‍ನಲ್ಲಿ ಲಂಬೋದರನ ಬಗ್ಗೆ ಶ್ರುತಿ ಪ್ರಕಾಶ್ ಹೇಳಿದ್ದೇನು?

    ಲಂಡನ್‍ನಲ್ಲಿ ಲಂಬೋದರನ ಬಗ್ಗೆ ಶ್ರುತಿ ಪ್ರಕಾಶ್ ಹೇಳಿದ್ದೇನು?

    ಬೆಂಗಳೂರು: ಶ್ರುತಿ ಪ್ರಕಾಶ್ ಮೂಲತಃ ಕನ್ನಡತಿಯೇ ಆಗಿದ್ದರೂ ಈ ಬಿಗ್ ಬಾಸ್ ಶೋ ಮೂಲಕವೇ ಕನ್ನಡಿಗರಿಗೆ ಪರಿಚಯವಾದ ಹುಡುಗಿ. ಕಳೆದ ಸೀಸನ್ನಿನ ಈ ಶೋನಲ್ಲಿ ಮುಖ ಮುಖವಾಡಗಳ ಸಂತೆಯ ನಡುವೆಯೂ ನೈಜ ವ್ಯಕ್ತಿತ್ವ ಮರೆಮಾಚದೆ ಕನ್ನಡಿಗರ ಮನ ಗೆದ್ದಿದ್ದವರು ಶ್ರುತಿ. ಈ ಶೋ ಮುಗಿದ ನಂತರ ತನ್ನೆದುರು ಅವಕಾಶಗಳ ಮೆರವಣಿಗೆಯೇ ನೆರೆದಿದ್ದರೂ ಕೂಡಾ ಅವರು ಪ್ರೀತಿಯಿಂದ ಆರಿಸಿಕೊಂಡಿದ್ದು ಲಂಡನ್ ನಲ್ಲಿ ಲಂಬೋದರ ಚಿತ್ರವನ್ನು. ಈ ಬಗ್ಗೆ ಒಂದಷ್ಟು ಮಜವಾದ ವಿಚಾರಗಳನ್ನ ಶ್ರುತಿ ಪಬ್ಲಿಕ್ ಟಿವಿಯ ಜೊತೆ ಹಂಚಿಕೊಂಡಿದ್ದಾರೆ.

    ಶ್ರುತಿ ಪ್ರಕಾಶ್ ಮೂಲತಃ ಕರ್ನಾಟಕದ ಗಡಿ ಪ್ರದೇಶವಾದ ಬೆಳಗಾವಿಯವರು. ಹಿಂದಿ ಭಾಷೆಯಲ್ಲಿ ನಾನಾ ಹಿಟ್ ಧಾರಾವಾಹಿಗಳ ಮೂಲಕ, ಮ್ಯೂಸಿಕ್ ಆಲ್ಬಂಗಳ ಮೂಲಕ ಪ್ರಸಿದ್ಧಿ ಹೊಂದಿದ್ದರೂ ಈ ಕನ್ನಡತಿಯ ಪರಿಚಯ ಕನ್ನಡಿಗರಿಗೇ ಇರಲಿಲ್ಲ. ಬೆಳಗಾವಿಯ ಕನ್ನಡತನದ ಕುಟುಂಬದಲ್ಲಿಯೇ ಹುಟ್ಟಿ ಬೆಳೆದು ಮುಂಬೈನಲ್ಲಿ ತಮ್ಮ ಕನಸಿನ ಆರಂಭ ಮಾಡಿದ್ದ ಶ್ರುತಿಗೆ ಅಲ್ಲಿ ಅಗಾಧವಾದ ಪ್ರಸಿದ್ಧಿ ಸಿಕ್ಕರೂ ಕೂಡಾ ಅದೊಂದು ಕೊರಗು ಮಾತ್ರ ಅವರನ್ನು ಬೆಂಬಿಡದೆ ಕಾಡುತ್ತಿತ್ತಂತೆ. ಅದು ತಮ್ಮ ತಾಯಿಭಾಷೆಯಾದ ಕನ್ನಡ ಚಿತ್ರದ ಮೂಲಕ ನಾಯಕಿಯಾಗಿ ಅಡಿಯಿರಿಸಿ ಕನ್ನಡಿಗರನ್ನೆಲ್ಲ ತಲುಪಿಕೊಳ್ಳುವ ಹಂಬಲ!

    ಮೊದಲು ತನ್ನನ್ನು ತಾನು ಕನ್ನಡಿಗರೆಂದು ಪರಿಚಯ ಮಾಡಿಕೊಂಡು ಮತ್ತೆ ಮುಂದುವರೆಯಬೇಕು ಅಂದುಕೊಂಡಿದ್ದ ಶ್ರುತಿ ಅವರಿಗೆ ಬಿಗ್ ಬಾಸ್ ಶೋ ವರದಾನವಾಗಿದೆ. ಈ ಮೂಲಕ ಕನ್ನಡಿಗರ ಮನೆಮಗಳಂತೆ ಆಗಿಹೋಗಿರೋ ಶ್ರುತಿ ಅವರು ರಾಜ್ ಸೂರ್ಯ ಹೇಳಿದ ಲಂಡನ್ ನಲ್ಲಿ ಲಂಬೋದರ ಚಿತ್ರವನ್ನು ಪ್ರೀತಿಯಿಂದಲೇ ಒಪ್ಪಿಕೊಂಡಿದ್ದಾರಂತೆ. ಅದಕ್ಕೆ ಕಾರಣ ಗಂಭೀರವಾದ ಕಥೆ ಮತ್ತು ಮಜವಾದ ನಿರೂಪಣೆ.

    ಈ ಚಿತ್ರದ ಮೂಲಕವೇ ಶ್ರುತಿ ನಾಯಕಿಯಾಗಿ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರುತಿ ಅವರದ್ದು ನಾನಾ ಶೇಡುಗಳಿರೋ ಪಾತ್ರವಂತೆ. ಇಲ್ಲವರು ಪ್ರತಿಯೊಂದು ವಿಚಾರವನ್ನೂ ಕೂಡಾ ಅಳೆದೂ ತೂಗಿ ಆಲೋಚಿಸಿಯೇ ಮುಂದಡಿ ಇಡುವ ಪ್ರಾಕ್ಟಿಕಲ್ ಹುಡುಗಿಯಾಗಿ ಮಿಂಚಿದ್ದಾರಂತೆ. ಇವರ ಜೋಡಿ ಲಂಬೋದರ ಪ್ರತೀ ನಿತ್ಯ ಎದ್ದೇಟಿಗೆ ದಿನಭವಿಷ್ಯ ನೋಡಿ ಅದರಂತೆಯೇ ಮುಂದುವರೆಯುವಾತ. ಅಂಥಾ ಕ್ಯಾರೆಕ್ಟರ್ ಮತ್ತು ಈ ಪ್ರಾಕ್ಟಿಕಲ್ ಹುಡುಗಿಯ ಕಾಂಬಿನೇಷನ್ನೇ ಈ ಸಿನಿಮಾದ ಪ್ರಧಾನ ಆಕರ್ಷಣೆ.

    ಈ ಚಿತ್ರದ ಮೂಲಕವೇ ತಮಗೆ ಕನ್ನಡದಲ್ಲಿ ನಾಯಕಿಯಾಗಿ ಗಟ್ಟಿ ನೆಲೆ ಕೊಡಲಿದೆ ಅನ್ನೋ ಭರವಸೆ ಶ್ರುತಿ ಪ್ರಕಾಶ್ ಅವರಿಗಿದೆ. ಲಂಬೋದರನ ಕಾರಣದಿಂದಲೇ ಇನ್ನೂ ಒಂದಷ್ಟು ಅವಕಾಶಗಳು ಅವರ ಮುಂದಿವೆ. ಆದರೆ ಈ ಚಿತ್ರ ಬಿಡುಗಡೆಯಾದ ನಂತರವೇ ಆ ಬಗ್ಗೆ ಆಲೋಚಿಸುವ ನಿರ್ಧಾರ ಶ್ರುತಿ ಅವರದ್ದು. ಈ ನಡುವೆ ಹಿಂದಿ ಸೀರಿಯಲ್ಲುಗಳ ಅವಕಾಶ ಬಂದರೂ ನಿರಾಕರಿಸುತ್ತಿರೋ ಅವರ ಪಾಲಿಗೆ ಕನ್ನಡದಲ್ಲಿಯೇ ನೆಲೆಗೊಳ್ಳೋ ಆಸೆಯಿದೆ. ಲಂಡನ್ ನಲ್ಲಿ ಲಂಬೋದರ ಸೃಷ್ಟಿಸಿರೋ ಕ್ರೇಜ್ ನೋಡಿದರೆ ಅದು ಸಾಧ್ಯವಾಗೋ ಎಲ್ಲ ಲಕ್ಷಣಗಳೂ ದಟ್ಟವಾಗಿವೆ.

  • `ಹನಿಗಳು ಏನನ್ನು ಹೇಳಲು ಹೊರಟಿವೆ’ ಈ ವಾರ ಬಿಡುಗಡೆ

    `ಹನಿಗಳು ಏನನ್ನು ಹೇಳಲು ಹೊರಟಿವೆ’ ಈ ವಾರ ಬಿಡುಗಡೆ

    ಬೆಂಗಳೂರು: ಹೊನ್ನಾದೇವಿ ಕ್ರೀಯೆಷನ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ಹನಿಗಳು ಏನನ್ನು ಹೇಳಲು ಹೊರಟಿವೆ ಚಿತ್ರವು ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹಳ್ಳಿ ಹುಡುಗನೊಬ್ಬ ವಿದ್ಯಾಭ್ಯಾಸಕ್ಕಾಗಿ ಪಟ್ಟಣಕ್ಕೆ ಬರುತ್ತಾನೆ. ಹಾಗೆ ಕಾಲೇಜು ಸೇರಿದ ಹುಡುಗ ಪ್ರೀತಿಯ ಬಲೆಗೆ ಬಿದ್ದು, ಮನೆಯವರ ವಿರೋಧದ ನಡುವೆಯೂ ಮದುವೆಯಾಗುತ್ತಾನೆ. ಆ ನಂತರ ಆತನ ಬದುಕಿನಲ್ಲಿ ಏನೆಲ್ಲಾ ತಿರುವುಗಳು ಎದುರಾಗುತ್ತವೆ ಅನ್ನೋದು ಈ ಚಿತ್ರದ ಸಾರಾಂಶ.

    ಈ ಚಿತ್ರಕ್ಕೆ ನಾಗರಾಜ್.ಬಿ.ಹೆಚ್. ಕಥೆ, ಚಿತ್ರಕಥೆ, ಸಂಭಾಷಣೆ ಬರೆದು, ನಿರ್ಮಾಣದ ಜೊತೆ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ದಿನೇಶ್ ಕುಮಾರ್ ಸಂಗೀತ, ಅರುಣ್ ಗೂಳೂರು ಛಾಯಾಗ್ರಹಣ, ಅಜಯ್, ನಾಗೇಶ್ ಸಾಹಿತ್ಯ, ಅವಿನಾಶ್ ಶರತ್ ಬೈಂದೂರು, ಚಿರು ಸಂಕಲನವಿದೆ, ನಾಗೇಶ್, ಪಲ್ಲವಿ, ಚಂದ್ರ, ಅರುಣ್ ಶಿವಲಿಂಗೇಗೌಡ ಪಾಂಡವಪುರ, ಮಧು, ಬಸವರಾಜ್, ಜೀವನ್, ಅಭಿಷೇಕ್ ಮುಂತಾದವರ ತಾರಾಬಳಗವಿದೆ.

  • ರುದ್ರಾಕ್ಷಿಪುರ: ಶಿಲೆ ಕೆತ್ತುವ ಮನಸೊಳಗೆ ಮೊಳಕೆಯೊಡೆದ ಸಿನಿಮಾ ಕನಸು!

    ರುದ್ರಾಕ್ಷಿಪುರ: ಶಿಲೆ ಕೆತ್ತುವ ಮನಸೊಳಗೆ ಮೊಳಕೆಯೊಡೆದ ಸಿನಿಮಾ ಕನಸು!

    ಬೆಂಗಳೂರು: ಈಶ್ವರ ಪೋಲಂಕಿ ನಿರ್ದೇಶನದ ರುದ್ರಾಕ್ಷಿಪುರ ಚಿತ್ರದ ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಎಲ್ಲೆಡೆ ಈ ಚಿತ್ರದ ಬಗ್ಗೆ ಭಾರೀ ನಿರೀಕ್ಷೆ ಹುಟ್ಟಿಕೊಂಡಿದೆ. ಥ್ರಿಲ್ಲರ್ ಕಥಾನಕ ಹೊಂದಿರೋ ಈ ಚಿತ್ರ ವೀಕ್ಷಣೆಗಾಗಿ ಪ್ರೇಕ್ಷಕರೂ ಕಾತರರಾಗಿದ್ದಾರೆ. ಇಷ್ಟೆಲ್ಲ ಬೆಳವಣಿಗೆಗಳ ಹಿಂದೆ ನಿರ್ಮಾಪಕರಾಗಿ, ಸಿನಿಮಾ ಪ್ರೇಮಿಯಾಗಿ ನಿಂತಿರುವವರು ನಾಗರಾಜ್ ಮುರುಡೇಶ್ವರ!

    ಯಾವ ಮೂಲೆಯಲ್ಲಿ, ಯಾವ ಕೆಲಸ ನೆಚ್ಚಿಕೊಂಡಿರೋ ಜೀವಗಳಿಗೆ ಈ ಸಿನಿಮಾ ಕನಸು ಬೀಳುತ್ತೋ ಹೇಳಲು ಬರೋದಿಲ್ಲ. ಈ ಮಾತಿಗೆ ತಕ್ಕುದಾಗಿಯೇ ಇದೆ ರುದ್ರಾಕ್ಷಿಪುರ ಚಿತ್ರದ ನಿರ್ಮಾಪಕ ನಾಗರಾಜ್ ಮುರುಡೇಶ್ವರ ಅವರ ರಿಯಲ್ ಸ್ಟೋರಿ!

    ಉತ್ತರಕನ್ನಡ ಜಿಲ್ಲೆಯ ಪ್ರಖ್ಯಾತ ಯಾತ್ರಾ ಸ್ಥಳವಾದ ಮುರುಡೇಶ್ವರ ನಾಗರಾಜ್ ಅವರ ಊರು. ತೀರಾ ಹನ್ನೊಂದನೇ ವರ್ಷಕ್ಕೆ ಊರು ಬಿಟ್ಟಿದ್ದ ಅವರು ನಂತರ ಹೋಗಿದ್ದು ದೂರದ ಚೆನ್ನೈಗೆ. ಅಲ್ಲಿ ಏನೇನೋ ಪಡಿಪಾಟಲು ಪಟ್ಟು ವಿವೇಕ್ ಆರ್ಕಿಟೆಕ್ಟ್ ಕಂಪೆನಿಯಲ್ಲಿ ಸಣ್ಣ ಕೆಲಸಕ್ಕೆ ಸೇರಿಕೊಂಡ ನಾಗರಾಜ್ ಶಿಲ್ಪಕಲೆಯ ಸಂಪೂರ್ಣ ಪಾಠ ಕಲಿತದ್ದು ಅಲ್ಲಿಯೇ. ಆ ನಂತರ ಹತ್ತಾರು ವರ್ಷಗಳ ಕಾಲ ಅಲ್ಲಿಯೇ ಕಾರ್ಯನಿರ್ವಹಿಸಿ ಇದೀಗ ಅವರು ಶಿವಮೊಗ್ಗದಲ್ಲಿ ಚೌಡೇಶ್ವರಿ ಶಿಲ್ಪಕಲಾ ಕಂಪೆನಿ ತೆರೆದಿದ್ದಾರೆ. ಇದರಡಿಯಲ್ಲಿ ಮೂವತ್ತಕ್ಕೂ ಹೆಚ್ಚು ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದಾರೆ.

    ಹೀಗೆ ಶಿಲ್ಪಿಯಾಗಿ ಯಶ ಕಂಡಿರೋ ನಾಗರಾಜ್ ಅವರು ಹದಿನೈದು ವರ್ಷಗಳಿಂದಲೂ ನಿರ್ದೇಶಕನಾಗ ಬೇಕೆಂಬ ಕನಸನ್ನು ಸಾಕಿಕೊಂಡಿದ್ದರು. ಆದರೆ ನಿರ್ದೇಶಕ ಈಶ್ವರ್ ಪೋಲಂಕಿ ಹೇಳಿದ ಕಥೆ, ಅದರಲ್ಲಿನ ಹೊಸತನ ಕಂಡಾಗ ಮೊದಲು ನಿರ್ಮಾಪಕನಾಗಿ ಅಖಾಡಕ್ಕಿಳಿಯೋದೇ ಒಳಿತೆನ್ನಿಸಿತ್ತಂತೆ. ಈ ಮೂಲಕ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹಿಸಿ ಒಂದಷ್ಟು ಪಾಠವನ್ನೂ ನಾಗರಾಜ್ ಕಲಿತುಕೊಂಡಿದ್ದಾರೆ.

    ರುದ್ರಾಕ್ಷಿಪುರ ಚಿತ್ರವನ್ನು ಖಂಡಿತಾ ಜನ ಮೆಚ್ಚಿ ಪ್ರೋತ್ಸಾಹಿಸುತ್ತಾರೆಂಬ ನಂಬಿಕೆ ನಾಗರಾಜ್ ಅವರಿಗಿದೆ. ಜೊತೆಗೆ ಮುಂದೆ ತಾವೇ ನಿರ್ದೇಶಕರಾಗಿ ಹೊರ ಹೊಮ್ಮಲು ಬೇಕಾದ ತಯಾರಿಯನ್ನೂ ಅವರು ಆರಂಭಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪೂಜಾ ಗಾಂಧಿಯ ಎಂಟರ್‍ಟೈನ್ಮೆಂಟ್ ಫ್ಯಾಕ್ಟರಿಗೆ ಬೀಗ ಬಿತ್ತಾ?

    ಪೂಜಾ ಗಾಂಧಿಯ ಎಂಟರ್‍ಟೈನ್ಮೆಂಟ್ ಫ್ಯಾಕ್ಟರಿಗೆ ಬೀಗ ಬಿತ್ತಾ?

    ಬೆಂಗಳೂರು: ಕೇವಲ ಒಂದೂವರೆ ವರ್ಷಗಳ ಹಿಂದಷ್ಟೇ ಒಟ್ಟೊಟ್ಟಿಗೇ ಮೂರು ಸಿನಿಮಾ ಶುರು ಮಾಡಿದ್ದರು ಪೂಜಾ ಗಾಂಧಿ… ಎಲ್ಲಿಂದಲೋ ಬಂದು, ಕರ್ನಾಟಕದಲ್ಲಿ ನೆಲೆನಿಂತು, ಸಿನಿಮಾಗಳಲ್ಲಿ ನಟಿಸುತ್ತಲೇ ಕೆಲವಾರು ಉದ್ಯಮಗಳನ್ನೂ ಆರಂಭಿಸಿದರು. ಇವೆಲ್ಲದರ ಜೊತೆಗೆ ರಾಜಕೀಯಕ್ಕೂ ಕಾಲಿಟ್ಟರು. ನಿರ್ಮಾಪಕಿಯಾಗಿ ಅದಾಗಲೇ ಒಂದು ಸಿನಿಮಾವನ್ನು ನಿರ್ಮಿಸಿದ್ದ ಪೂಜಾ ಆಗ ಸಿನಿಮಾ ಫ್ಯಾಕ್ಟರಿಯನ್ನೇ ಆರಂಭಿಸಿದ್ದರು.

    ಹತ್ತು ವರ್ಷಗಳ ಹಿಂದೆ ಅನಿರೀಕ್ಷಿತವಾಗಿ ಕನ್ನಡ ಚಿತ್ರರಂಗದ ದಿಗಂತದಲ್ಲಿ ಉದಯಿಸಿದ ತಾರೆ ಪೂಜಾ ಗಾಂಧಿ. `ಮುಂಗಾರು ಮಳೆ’ ಚಿತ್ರ ಹೇಗೆ ನಾಯಕ ನಟ ಗಣೇಶ್ ಮತ್ತು ನಿರ್ದೇಶಕ ಯೋಗರಾಜ್ ಭಟ್ಟರ ಅದೃಷ್ಟದ ಬಾಗಿಲನ್ನು ತೆರೆಸಿತೋ ಅದೇ ರೀತಿ ಪಂಜಾಬಿನಿಂದ ಬಂದ ನಾಯಕಿ ಪೂಜಾ ಗಾಂಧಿಗೂ ಅದೃಷ್ಟ ಖುಲಾಯಿಸಿತು. ಆದರೆ `ಮುಂಗಾರು ಮಳೆ’ ಚಿತ್ರ ಬಿಡುಗಡೆಯಾದಾಗ ಪೂಜಾ ಗಾಂಧಿ ಬಗ್ಗೆ ಗಾಂಧಿನಗರದ ಜನರಿಗೆ ಒಂದಿಷ್ಟು ಅಲರ್ಜಿ ಇತ್ತು. ಆಕೆ ಕುಳ್ಳಿ ಎಂದರು ಕೆಲವರು. ಆಕೆಯದ್ದು `ಮ್ಯಾನ್ಲಿ ಲುಕ್’ ಎಂದು ಕೆಲವರು ಹೀಯಾಳಿಸಿದರು. ಮತ್ತೆ ಕೆಲವರು `ಆಕೆಗೆ ನಟನೆ ಅಷ್ಟೇನು ಬರೋಲ್ಲ’ ಎಂದರು. ಅಷ್ಟೇ ಏಕೆ, `ಮುಂಗಾರು ಮಳೆ’ ಚಿತ್ರದಲ್ಲಿ ಪೂಜಾ ಗಾಂಧಿಯ ಬದಲು ನಾಯಕಿಯಾಗಿ ರಮ್ಯಾ ಇದ್ದಿದ್ದರೆ ಆ ಚಿತ್ರದ ಖದರೇ ಬೇರೆಯಾಗುತ್ತಿತ್ತು ಎಂದು ಹಲವರು ಭವಿಷ್ಯವನ್ನು ನುಡಿದಿದ್ದರು. ಇವೆಲ್ಲ ಟೀಕೆಗಳನ್ನು ನೋಡಿ ಈ ಪಂಜಾಬಿ ಹುಡುಗಿ ಒಂದೇ ಚಿತ್ರಕ್ಕೆ ವಾಪಸ್ ಹೋಗುತ್ತಾಳೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ ಯಾವಾಗ ಬಾಕ್ಸ್ ಆಫೀಸ್‍ನಲ್ಲಿ `ಮುಂಗಾರು ಮಳೆ’ ಹಿಟ್ ಆಯಿತೋ ಆಗ ಪೂಜಾಳನ್ನು ಟೀಕೆ ಮಾಡಿದ್ದ ಅದೇ ಗಾಂಧಿನಗರದ ಜನ ಆಕೆಯ ಕಾಲ್‍ಶೀಟ್ ಗಾಗಿ ಆಕೆ ಸುತ್ತ ಗಿರಕಿ ಹೊಡೆಯಲಾರಂಭಿಸಿದರು.

    ಎಷ್ಟಾದರೂ ಗೆದ್ದೆತ್ತಿನ ಬಾಲ ಹಿಡಿಯುವುದು ನಮ್ಮವರ ಸಹಜ ಗುಣ ತಾನೆ? ಹೌದು, ಪೂಜಾ ಗಾಂಧಿ ಲೈಮ್ ಲೈಟಿಗೆ ಬಂದಿದ್ದೇ ತಡ, ಆಕೆ ಮಾಲಾಶ್ರೀಯನ್ನು ನೆನಪಿಸುವ ರೀತಿಯಲ್ಲಿ ಶೈನ್ ಆಗುತ್ತಾಳೋ ಎಂದೆನಿಸಲು ಆರಂಭವಾಯಿತು. ಏಕೆಂದರೆ ಗಾಂಧಿನಗರದ ಬಹುತೇಕ ಎಲ್ಲಾ ನಿರ್ಮಾಪಕರು ಮತ್ತು ನಿರ್ದೇಶಕರು `ಪೂಜಾ ಮಂತ್ರ’ ಪಠಿಸಲು ಆರಂಭಿಸಿದ್ದರು.

    ಪೂಜಾಳ ಯಶಸ್ಸು ಮತ್ತು ನಾಗಾಲೋಟಕ್ಕೆ ಹಲವಾರು ಕಾರಣಗಳು ಇದ್ದವು. ಮೊದಲನೆಯದಾಗಿ, ಈ ಪಂಜಾಬಿ ಹುಡುಗಿ ಮೊದಲ ದಿನದಿಂದಲೇ ತೊದಲು ಕನ್ನಡ ನುಡಿಗಳನ್ನು ಮಾತನಾಡುತ್ತಾ ಕನ್ನಡಿಗರ ಮೆಚ್ಚುಗೆಗೆ ಪಾತ್ರಳಾದಳು. ಹಾಗೆಯೇ ನಮ್ಮ ಕನ್ನಡದ ಹುಡುಗಿಯರ ತರಹ ಬಿಂಕ-ವೈಯ್ಯಾರ ತೋರಿಸದೇ ನಿರ್ಮಾಪಕ ಕೊಟ್ಟಿದ್ದನ್ನು ಪಡೆದದ್ದೂ ಆಕೆಯ ಸುತ್ತ ನಿರ್ಮಾಪಕರು ಮುತ್ತಿಗೆ ಹಾಕಲು ಕಾರಣವಾಯಿತು. ಆಕೆಯ ಮತ್ತೊಂದು ವಿಶೇಷತೆಯೆಂದರೆ ದೊಡ್ಡ ದೊಡ್ಡ ನಟರುಗಳೊಂದಿಗೆ ಮಾತ್ರವಲ್ಲ, ಉದ್ಯಮಕ್ಕೆ ಹೊಸದಾಗಿ ಕಾಲಿಟ್ಟ ಹೊಸ ಹೀರೋಗಳ ಜೊತೆ ಕೂಡಾ ಯಾವುದೆ ಗರ್ವವಿಲ್ಲದೆ ಮರ ಸುತ್ತಲು ಒಪ್ಪಿಕೊಳ್ಳುತ್ತಿದ್ದದ್ದು. ನೋಡುನೋಡುತ್ತಿದ್ದಂತೆ ಪೂಜಾ ಗಾಂಧಿ ಕನ್ನಡದ ಜನಪ್ರಿಯ ನಾಯಕಿಯಾಗಿದ್ದ ರಮ್ಯಾಳನ್ನು ಕೂಡಾ ಓವರ್ ಟೇಕ್ ಮಾಡಿ ಅತ್ಯಂತ ಬೇಡಿಕೆಯ ನಟಿ ಎನ್ನಿಸಲಾರಂಭಿಸಿದಳು.

    ಪಂಜಾಬಿನ ಈ ಹುಡುಗಿ ಕರ್ನಾಟಕದ ಕಲಾಭಿಮಾನಿಗಳ ಮೆಚ್ಚಿನ ತಾರೆಯಾಗಿ ಬೆಳೆದು ನಿಂತಳು. ಆರಂಭದಲ್ಲಿ ಗಣೇಶ್ ಜೊತೆ ನಾಯಕಿಯಾಗಿ ಕಾಣಿಸಿಕೊಂಡ ಪೂಜಾ ಗಾಂಧಿ ಆನಂತರ ಉಪೇಂದ್ರ, ಜಗ್ಗೇಶ್, ಪುನೀತ್ ರಾಜ್‍ಕುಮಾರ್, ಶ್ರೀನಗರ ಕಿಟ್ಟಿ… ಹೀಗೆ ಬಹುತೇಕ ಎಲ್ಲಾ ಹೀರೋಗಳ ಜೊತೆ ನಟಿಸಿ ಮನ ಗೆದ್ದಳು. ಇದೇ ಸಂದರ್ಭದಲ್ಲಿ ಸುನೀಲ್ ಸಮೇತ ಅನೇಕ ಅಪರಿಚಿತ ಮತ್ತು ಉದಯೋನ್ಮುಖ ನಾಯಕರ ಜೊತೆ ಕೂಡಾ ಆಕೆ ನಟಿಸಿದಳು.

    ಇಷ್ಟೆಲ್ಲಾ ಯಾಕೆ ಹೇಳುತ್ತಿದ್ದೇವೆ ಎಂದರೆ, ಪೂಜಾ ಗಾಂಧಿ ನಟನೆಯಿಂದ ನಿರ್ಮಾಣಕ್ಕೆ ಜಾರಿದ್ದು ನಿಮಗೆಲ್ಲಾ ಗೊತ್ತಿರೋ ವಿಚಾರವೇ. ಅಭಿನೇತ್ರಿ ಸಿನಿಮಾವನ್ನು ಪೂಜಾ ನಿರ್ಮಿಸಿದ್ದರು. ನಂತರ ರಾವಣಿ ಎನ್ನುವ ಚಿತ್ರವನ್ನು ಆರಂಭಿಸಿದ್ದರೂ ಅದು ಟೇಕಾಫ್ ಆಗಲಿಲ್ಲ. ನಡುವೆ ಮತ್ತೆ ಬಂದ ಪೂಜಾ ಒಟ್ಟಿಗೇ ಮೂರು ಸಿನಿಮಾ ನಿರ್ಮಿಸುವುದಾಗಿ ಹೇಳಿಕೊಂಡಿದ್ದರು. ಭೂ, ಉದಾಹಿ ಮತ್ತು ಬ್ಲಾಕ್ ಅಂಡ್ ವೈಟ್ ಎನ್ನುವ ಚಿತ್ರಗಳನ್ನು ಆರಂಭಿಸಿದ್ದರು. ತೆಲುಗಿನ ಖ್ಯಾತ ನಟ ಜೆಡಿ ಚಕ್ರವರ್ತಿ ಈ ಮೂರೂ ಸಿನಿಮಾಗಳನ್ನು ನಿರ್ದೇಶಿಸಲಿದ್ದಾರೆ ಅಂತಾ ಹೇಳಿ ಸ್ವತಃ ಪೂಜಾ ಗಾಂಧಿ ಪ್ರೆಸ್ ಮೀಟ್ ಮಾಡಿದ್ದರು. ಇವು ಮೂರು ಸಿನಿಮಾಗಳ ಜೊತೆಗೆ ಇನ್ನೂ ಹತ್ತಾರು ಸಿನಿಮಾಗಳನ್ನು ಆರಂಭಿಸುವ ಪ್ಲಾನು ಮಾಡಿದ್ದೀನಿ ಅಂತಾ ಅಶೋಕ ಹೋಟೇಲಿನಲ್ಲಿ ಹೇಳಿದ್ದರು ಪೂಜಾ ಮೇಡಮ್ಮು.

    ಹತ್ತಾರು ಸಿನಿಮಾ ಇರಲಿ, ಆರಂಭಿಕವಾಗಿ ಶುರು ಮಾಡಿದ ಮೂರು ಸಿನಿಮಾಗಳು ಕೂಡಾ ಈಗ ಪೂರ್ಣ ಪ್ರಮಾಣದಲ್ಲಿ ಕಣ್ಮುಚ್ಚಿದ ಸುದ್ದಿ ಕೇಳಿಬರುತ್ತಿದೆ. ಅಸಲಿಗೆ ಜೆ.ಡಿ. ಚಕ್ರವರ್ತಿಗೂ ಪೂಜಾ ಗಾಂಧಿಗೂ ನಡುವಿನ ಸಂಬಂಧವೇ ಕಿತ್ತು ಹೋಗಿದೆ ಅನ್ನೋ ನ್ಯೂಸು ಕೂಡಾ ದಟ್ಟವಾಗಿ ಹಬ್ಬಿದೆ. ಎಂಟರ್‍ಟೈನ್ಮೆಂಟ್ ಫ್ಯಾಕ್ಟರಿಗೆ ಬೀಗ ಬಿದ್ದಿದ್ದಾರೂ ಯಾಕೆ? ಏನಿದೆಲ್ಲಾ? ಪೂಜಾ ಗಾಂಧಿ ಮೇಲಿಂದ ಮೇಲೆ ಯಾಕೆ ಇಂಥವೇ ಸೋಲುಗಳಿಗೆ ಸಿಲುಕುತ್ತಿದ್ದಾರೆ? ಈ ಪ್ರಶ್ನೆಗಳಿಗೆಲ್ಲಾ ಸ್ವತಃ ಪೂಜಾ ಅವರೇ ಉತ್ತರಿಸಬೇಕು!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪುರಾತನ ದೆವ್ವಕ್ಕೆ ಪುಳ್ಚಾರು ಎಡೆಯಿಟ್ಟ ಅಮವಾಸೆ!

    ಪುರಾತನ ದೆವ್ವಕ್ಕೆ ಪುಳ್ಚಾರು ಎಡೆಯಿಟ್ಟ ಅಮವಾಸೆ!

    ಪ್ರಶಾಂತ್ ನಿರ್ದೇಶನದ ಅಮವಾಸೆ ಚಿತ್ರ ಒಂದಷ್ಟು ನಿರೀಕ್ಷೆ ಹುಟ್ಟಿಸಿತ್ತು. ಇದು ಹೇಳಿ ಕೇಳಿ ಹೊಸಾ ಅಲೆಯ ಚಿತ್ರಗಳ ಜಮಾನ. ಹುಮ್ಮಸ್ಸಿನ ಹುಡುಗರು ಸದ್ದೇ ಇಲ್ಲದೆ ಎಂಟ್ರಿ ಕೊಟ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿ ಬಿಡುತ್ತಾರೆ. ಅಮವಾಸೆಯಲ್ಲೂ ಕೂಡಾ ಇಂಥಾದ್ದೇ ಕಮಾಲ್ ನಡೆದಿರಬಹುದೆಂಬ ನಿರೀಕ್ಷೆ ಹೊತ್ತು ಥೇಟರು ಹೊಕ್ಕವರಿಗೆ ಸಿಕ್ಕಿದ್ದು ನಿರಾಸೆಯ ಅನುಭವ!

    ಯಾವ್ಯಾವುದೋ ಕಾರಣಕ್ಕೆ ಸತ್ತು ಹೋದವರು ದೆವ್ವವಾಗೋದು, ಅದಕ್ಕೆ ಕಾರಣರಾದವರನ್ನು ಥರ ಥರದಲ್ಲಿ ಕಾಡೋದು… ಹುಡುಕಿದರೆ ಈ ಥರದ ಕಥೆ ಹೊಂದಿರೋ ಚಿತ್ರಗಳಿಗೆ ದಂಡಿ ದಂಡಿ ಉದಾಹರಣೆಗಳು ಸಿಗುತ್ತವೆ. ಇಂಥವುಗಳಿಗೆ ಹೊಸಾ ಉದಾಹರಣೆಯಂಥಾ, ಹಳೇ ಟ್ರ್ಯಾಕಿನ ಚಿತ್ರವಾಗಿ ಅಮವಾಸೆ ದಾಖಲಾಗಿದೆ.

    ಈ ಚಿತ್ರದ್ದು ಸಾಧಾರಣ ಕಥೆ. ನಾಲ್ವರು ಆತ್ಮೀಯ ಸ್ನೇಹಿತರಲ್ಲೊಬ್ಬನಿಗೆ ಹುಡುಗಿಯೊಬ್ಬಳ ಮೇಲೆ ಲವ್ವಾಗುತ್ತೆ. ಆಗ ಆತನ ಮುಂದೆ ಸ್ನೇಹ ಅಥವಾ ಪ್ರೀತಿಯನ್ನು ಆಯ್ಕೆ ಮಾಡಿಕೊಳ್ಳುವಂಥಾ ಭಯಾನಕ ಸಂದರ್ಭ ಸೃಷ್ಟಿಯಾಗುತ್ತೆ. ಆತ ಸ್ನೇಹವನ್ನೇ ಆಯ್ದುಕೊಂಡಿದ್ದರ ಫಲವಾಗಿ ಹುಡುಗಿಯ ದುರಂತ ಅಂತ್ಯ. ನಂತರ ಈತನೂ ಆತ್ಮಹತ್ಯೆ ಮಾಡಿಕೊಂಡೇಟಿಗೆ ಕಥೆಗೊಂದು ತಿರುವು. ಅದರಾಚೆಗೆ ಪ್ರೀತಿ ಕೈ ತಪ್ಪಿ ಸತ್ತ ಹುಡುಗಿ ಪ್ರೇತಾತ್ಮವಾಗಿ ಕಾಡುತ್ತಾಳಾ ಎಂಬುದು ಕುತೂಹಲ.

    ಆದರೆ ಈ ಚಿತ್ರದುದ್ದಕ್ಕೂ ಅಂಥಾ ಯಾವ ಕುತೂಹಲಕರವಾದ ವಿಚಾರಗಳೂ ಇಲ್ಲ. ನಿರ್ದೇಶಕ ಪ್ರಶಾಂತ್ ಉಲ್ಟಾ ಸ್ಕ್ರೀನ್ ಪ್ಲೇ ಕೂಡಾ ವರ್ಕೌಟ್ ಆಗಿಲ್ಲ. ಇಡೀ ಚಿತ್ರ ಹಾರರ್ ಕಥೆ ಹೊಂದಿದ್ದರೂ ಪುರಾತನ ದೆವ್ವಕ್ಕೆ ಪುಳ್ಚಾರು ಎಡೆಯಿಟ್ಟಂತಾಗಿದೆ. ಸಿದ್ಧಸೂತ್ರದ ಆಚೀಚೆಗೆ ಕದಲದ ಅಮವಾಸೆಯ ಬೂತಚೇಷ್ಟೆಗಳು ಯಾವ ರೀತಿಯಿಂದಲೂ ಕಾಡೋದಿಲ್ಲ. ಕತೆ ಸಾಧಾರಣವಾದದ್ದೇ ಆದರೂ ಒಂದಷ್ಟುಯ ಶ್ರಮ ವಹಸಿದ್ದರೆ ತಕ್ಕಮಟ್ಟಿಗೆ ಎಫೆಕ್ಟಿವ್ ಆಗಬಹುದಾಗಿದ್ದ ಅವಕಾಶವನ್ನೂ ಕೂಡಾ ನಿರ್ದೇಶಕರು ಕೈ ತಪ್ಪಿಸಿಕೊಂಡಿದ್ದಾರೆ.

    ಹೊಸಬರು ಚಿತ್ರ ಮಾಡಿದಾಗ ಒಂದಷ್ಟು ನಿರೀಕ್ಷೆಗಳಿರುತ್ತವೆ. ಹೊಸಾ ಬಗೆಯ ಕಥೆಯೊಂದಿಗೆ ಏನೋ ಮೋಡಿ ಮಾಡಿರುತ್ತಾರೆಂಬ ನಂಬಿಕೆಯೂ ಪ್ರೇಕ್ಷಕರಲ್ಲಿರುತ್ತೆ. ಆದರೆ ಅಮವಾಸೆಯಂಥಾ ಚಿತ್ರಗಳು ಕೊಡಮಾಡೋದು ಅಪಾದಮಸ್ತಕ ನಿರಾಸೆಯನ್ನಷ್ಟೇ. ಇದರ ಪರಿಣಾಮವಾಗಿ ಕೆಲ ಒಳ್ಳೆ ಚಿತ್ರಗಳನ್ನೂ ಸೋಲಿನ ಬಾಧೆ ಆವರಿಸಿಕೊಳ್ಳುವಂತಾಗುತ್ತದೆ!

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದಿವಂಗತ ಮಂಜುನಾಥನ ಗೆಳೆಯರು ಮೋಸ ಮಾಡೋದಿಲ್ಲ!

    ದಿವಂಗತ ಮಂಜುನಾಥನ ಗೆಳೆಯರು ಮೋಸ ಮಾಡೋದಿಲ್ಲ!

    ಬೆಂಗಳೂರು: ದಿವಂಗತ ಮಂಜುನಾಥನ ಗೆಳೆಯರ ದರ್ಶನವಾಗಿದೆ. ಒಂದು ಯೂಥ್ ಫುಲ್ ಕಥೆಯನ್ನು ಲವಲವಿಕೆಯಿಂದಲೇ ಹೇಳುತ್ತಾ ಕಡೆಗೆ ಯುವ ಸಮುದಾಯಕ್ಕೊಂದು ಎಚ್ಚರಿಕೆಯ ಸಂದೇಶವನ್ನೂ ರವಾನಿಸುವ ಈ ಚಿತ್ರ ಪ್ರೇಕ್ಷಕರಿಗೆಲ್ಲ ಹೊಸಾ ಅನುಭವ ತುಂಬುವಲ್ಲಿ ಸಫಲವಾಗಿದೆ.

    ಎಸ್.ಡಿ ಅರುಣ್ ನಿರ್ದೇಶನದ ಈ ಚಿತ್ರ ಪೋಸ್ಟರುಗಳಲ್ಲಿನ ಫ್ರೆಶ್ ಅನುಭೂತಿಯನ್ನು ಹಾಗೆಯೇ ಕಾಪಿಟ್ಟುಕೊಂಡು ಪ್ರೇಕ್ಷಕರನ್ನು ತಲುಪಿಕೊಂಡಿದೆ. ಸಂಭಾಷಣೆಯಿಂದ ಹಿಡಿದು ಪ್ರತಿಯೊಂದರಲ್ಲಿಯೂ ಸಹಜತೆಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ತಮ್ಮನ ನಡುವಿನ ಪಾತ್ರಗಳೇ ಎಂಬಂಥಾ ಫೀಲು ಹುಟ್ಟಿಸುವಂತೆ ಈ ಚಿತ್ರದ ಪ್ರತೀ ಪಾತ್ರಗಳನ್ನೂ ನಿರ್ದೇಶಕರು ಕಟ್ಟಿ ಕೊಟ್ಟಿದ್ದಾರೆ. ಯಾವ ಭಾವಗಳೂ ಭಾರ ಅನ್ನಿಸದಂತೆ, ಯಾವ ದೃಶ್ಯಗಳೂ ಬೋರು ಹೊಡೆಸದಂತೆ ಅತ್ಯಂತ ಎಚ್ಚರಿಕೆಯಿಂದ ತಿದ್ದಿ ತೀಡಿದ ಕಲಾಕೃತಿಯಂತೆ ಈ ಚಿತ್ರ ಮೂಡಿ ಬಂದಿದೆ.

    ಸಂಜಯ್, ನವೀನ್, ರಾಜ್ ಕಿರಣ್ ಮತ್ತು ಶ್ರೀನಿವಾಸುಲು ಒಟ್ಟಿಗೇ ಓದಿದ್ದ ಗೆಳೆಯರು. ಅವರೆಲ್ಲರೂ ಇಂಜಿನಿಯರಿಂಗ್ ಓದಿ ಕೆಲಸ ಕಾರ್ಯ ಅಂತ ಒಬ್ಬೊಬ್ಬರೂ ಒಂದೊಂದು ದಿಕ್ಕುಗಳಾಗಿರುವಾಗಲೇ ಅವರ ಮತ್ತೋರ್ವ ಗೆಳೆಯ ದಿವಂಗತನಾದ ದುರ್ವಾರ್ತೆ ಬಂದೆರಗುತ್ತೆ. ಹೇಗೋ ಆ ಸಾವಿನ ನೆಪದಲ್ಲಿ ಮತ್ತೆ ಈ ನಾಲ್ವರು ಒಂದೆಡೆ ಸೇರಿತ್ತಾರೆ. ಆದರೆ ಮಂಜುನಾಥ ದಿವಂಗತನಾಗಿದ್ದು ಆತ್ಮಹತ್ಯೆಯಿಂದಲ್ಲ, ಬದಲಾಗಿ ಇದು ಕೊಲೆ ಅಂತ ಪೊಲೀಸ್ ಅಧಿಕಾರಿ ಕೆಂಪಯ್ಯ ಅದಾಗಲೇ ಫೀಲ್ಡಿಗಿಳಿದಿರುತ್ತಾನೆ. ಅದು ನಿಜಕ್ಕೂ ಕೊಲೆಯಾ? ಅದರಲ್ಲಿ ಈ ಗೆಳೆಯರು ತಗುಲಿಕೊಳ್ತಾರಾ ಅಂತೆಲ್ಲ ಪ್ರಶ್ನೆಗಳಿಗೆ ಥೇಟರಿನಲ್ಲಿ ಉತ್ತರ ಹುಡುಕಿದರೆ ಮಜವಾದೊಂದು ಅನುಭವವಾಗೋದು ಖಾತರಿ!

    ಸಹಜ ಸಂಭಾಷಣೆಯಲ್ಲಿಯೇ ಲವಲವಿಕೆ, ಹಾಸ್ಯವನ್ನೂ ಬೆರೆಸಿರುವ ನಿರ್ದೇಶಕರು ಪರಿಣಾಮಕಾರಿಯಾಗಿಯೇ ದೃಶ್ಯ ಕಟ್ಟಿದ್ದಾರೆ. ತನ್ನ ಮಗನಿಗೆ ಏನೂ ಕಡಿಮೆಯಾಗದಂತೆ ಪೊರೆದ ತಂದೆ ರಿಟೈರ್ಡು ಸ್ಟೇಜಿಗೆ ಬಂದರೂ ಅಪ್ಪನನ್ನು ನೋಡಿಕೊಳ್ಳಲಾರದ ಮಗ. ಆ ವಯಸ್ಸಲ್ಲಿಯೂ ಮಗನ ನೆರವಿಗಾಗಿ ಸೆಕ್ಯೂರಿಟಿ ಕೆಲಸಕ್ಕೆ ಹೊರಡೋ ಅಪ್ಪನನ್ನು ನೋಡಿ ಮಾನಸಿಕ ವೇದನೆಗೆ ಬೀಳೋ ಪುತ್ರ… ಒಟ್ಟಾರೆಯಾಗಿ ಇಲ್ಲಿ ಸಾವೊಂದರ ಸುತ್ತ ಬದುಕಿನ ಸೂಕ್ಷ್ಮಗಳನ್ನು ಅರಳಿಸುವ ಕುಸುರಿಯಂಥಾದ್ದನ್ನು ನಿರ್ದೇಶಕರು ಮಾಡಿದ್ದಾರೆ.

    ಆರಂಭದಿಂದ ಅಂತ್ಯದವರೆಗೂ ಕುತೂಹಲ ಕಾಯ್ದಿಟ್ಟುಕೊಂಡೇ ಈ ಚಿತ್ರ ಯುವ ಸಮೂಹಕ್ಕೆ, ಅದರಲ್ಲಿಯೂ ವಿಶೇಷವಾಗಿ ಗಂಡು ಮಕ್ಕಳಿಗೊಂದು ಸ್ಪಷ್ಟವಾದ, ಪರಿಣಾಮಕಾರಿಯಾದ ಎಚ್ಚರಿಕೆಯ ಸಂದೇಶ ರವಾನಿಸುತ್ತದೆ. ಅದರ ಜೊತೆ ಜೊತೆಗೇ ಒಂದೊಳ್ಳೆ ಚಿತ್ರ ನೋಡಿದ ತೃಪ್ತ ಬಾವವೂ ಪ್ರೇಕ್ಷಕರನ್ನು ತುಂಬಿಕೊಳ್ಳುತ್ತದೆ. ಯುವ ಸಮುದಾಯ, ಪೋಷಕರು ಸೇರಿದಂತೆ ಎಲ್ಲರೂ ನೋಡಬಹುದಾದ ಚಿತ್ರ ದಿವಂಗತ ಮಂಜುನಾಥನ ಗೆಳೆಯರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv