Tag: ಕನ್ನಡ ಸಿನೆಮಾ

  • ಪ್ರಸ್ಥಕ್ಕೆ ಕಾಯುತ್ತಿರೋ ಬ್ರಹ್ಮಚಾರಿಗೆ ಬರ್ತ್ ಡೇ ಗಿಫ್ಟ್!

    ಪ್ರಸ್ಥಕ್ಕೆ ಕಾಯುತ್ತಿರೋ ಬ್ರಹ್ಮಚಾರಿಗೆ ಬರ್ತ್ ಡೇ ಗಿಫ್ಟ್!

    ಬೆಂಗಳೂರು: ಅಯೋಗ್ಯ ಎಂಬ ಚಿತ್ರದ ಅದ್ಭುತ ಯಶಸ್ಸಿನ ನಂತರದಲ್ಲಿ ನಟ ನೀನಾಸಂ ಸತೀಶ್ ಅವರ ನಸೀಬು ಬದಲಾಗಿ ಬಿಟ್ಟಿದೆ. ಆ ನಂತರದಲ್ಲಿ ಒಂದರ ಹಿಂದೊಂದರಂತೆ ಚಿತ್ರಗಳು ಅವರನ್ನು ಅರಸಿ ಬರುತ್ತಿವೆ. ಸದ್ಯ ಅವರೊಪ್ಪಿಕೊಂಡಿರೋ ಚಿತ್ರಗಳೆಲ್ಲವೂ ಭಿನ್ನ ಬಗೆಯವುಗಳೇ ಎಂಬುದು ವಿಶೇಷ. ಇದೀಗ ಸತೀಶ್ ಬ್ರಹ್ಮಚಾರಿ ಎಂಬ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರತಂಡವೀಗ ಹೀರೋ ಬರ್ತ್ ಡೇಗೆ ಗಿಫ್ಟೊಂದನ್ನು ಕೊಡಲು ತಯಾರಾಗಿದೆ!

    ಬ್ರಹ್ಮಚಾರಿ ಚಿತ್ರಕ್ಕೆ ಹಂಡ್ರೆಡ್ ಪರ್ಸೆಂಟ್ ವರ್ಜಿನ್ ಎಂಬ ಟ್ಯಾಗ್ ಲೈನ್ ಇದೆ. ಆದರೆ ಇದೀಗ ಬಿಡುಗಡೆಗೊಂಡಿರೋ ಪೋಸ್ಟರಿನಲ್ಲಿ ನೀನಾಸಂ ಸತೀಶ್, ನಾಯಕಿ ಅದಿತಿ ಪ್ರಭುದೇವರೊಂದಿಗೆ ಪ್ರಸ್ಥದ ಮೂಡಿನಲ್ಲಿರೋ ಫೋಟೋ ಅನಾವರಣಗೊಂಡಿದೆ. ಪ್ಯೂರ್ ವರ್ಜಿನ್ ಬ್ರಹ್ಮಚಾರಿಯ ಪ್ರಸ್ಥದ ಮೂಡಿನ ಬಗ್ಗೆ ಪ್ರೇಕ್ಷಕರು ಚಕಿತಗೊಂಡಿದ್ದಾರೆ.

    ಹೀಗೆ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಪೋಸ್ಟರ್ ಬಿಡುಗಡೆ ಮಾಡಿರೋ ಚಿತ್ರತಂಡ ನೀನಾಸಂ ಸತೀಶ್ ಅವರಿಗೆ ಬರ್ತ್ ಡೇ ಗಿಫ್ಟ್ ಒಂದನ್ನು ಕೊಡಲು ತಯಾರಾಗಿರೋ ಸೂಚನೆ ನೀಡಿದೆ. ಇದೇ ತಿಂಗಳ ಇಪ್ಪತ್ತರಂದು ಸತೀಶ್ ಅವರ ಹುಟ್ಟುಹಬ್ಬವಿದೆ. ಆ ದಿನವೇ ಬ್ರಹ್ಮಚಾರಿಯದ್ದೊಂದು ಟೀಸರ್ ಬಿಡುಗಡೆಗೊಳಿಸಲು ತೀರ್ಮಾನಿಸಲಾಗಿದೆ. ಈ ಟೀಸರ್ ಹೇಗಿರಬಹುದೆಂಬ ಅಂದಾಜು ನೀಡೋ ಮಿನಿ ಟೀಸರೊಂದು 10ನೇ ತಾರೀಕಿನಂದು ಹೊರ ಬರಲಿದೆಯಂತೆ.

    ಬ್ರಹ್ಮಚಾರಿ ಚಿತ್ರ ಈಗಾಗಲೇ ಪೋಸ್ಟರುಗಳ ಮೂಲಕವೇ ವ್ಯಾಪಕ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಈ ಮೂಲಕವೇ ಪ್ರೇಕ್ಷಕರನ್ನು ಗೊಂದಲಕ್ಕೆ ತಳ್ಳುತ್ತಾ, ಅದನ್ನೇ ಕ್ಯೂರಿಯಾಸಿಟಿಯಾಗಿ ಮಾರ್ಪಾಟು ಮಾಡೋ ಕಲೆಗಾರಿಕೆಯನ್ನ ಚಿತ್ರತಂಡ ಪ್ರದರ್ಶಿಸುತ್ತಿದೆ. ಸತೀಶ್ ಅಭಿಮಾನಿಗಳಂತೂ ಈ ಸಿನಿಮಾ ಬಗ್ಗೆ ಕಾತರರಾಗಿದ್ದಾರೆ. ಸತೀಶ್ ಬರ್ತ್ ಡೇಯಂದೇ ಅಭಿಮಾನಿಗಳೆಲ್ಲರಿಗೂ ಟೀಸರ್ ಕೊಡುಗೆ ಸಿಗಲಿದೆ.

  • ಹಫ್ತಾ: ಸ್ಯಾಂಡಲ್‍ವುಡ್‍ಗೆ ಆಗಮಿಸಿದ ಯುವ ನಿರ್ಮಾಪಕ ಬಾಲರಾಜ್!

    ಹಫ್ತಾ: ಸ್ಯಾಂಡಲ್‍ವುಡ್‍ಗೆ ಆಗಮಿಸಿದ ಯುವ ನಿರ್ಮಾಪಕ ಬಾಲರಾಜ್!

    ಬೆಂಗಳೂರು: ವರ್ಧನ್ ತೀರ್ಥಹಳ್ಳಿ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ `ಹಫ್ತಾ’ ಚಿತ್ರದ ಹವಾ ಅಡೆತಡೆಯಿಲ್ಲದೇ ಮುಂದುವರೆಯುತ್ತಿದೆ. ಈಗಾಗಲೇ ಬಿಡುಗಡೆಯಾಗಿರೋ ಟ್ರೈಲರ್, ಹಾಡುಗಳ ಮೂಲಕವೇ ಭರ್ಜರಿ ಟಾಕ್ ಕ್ರಿಯೇಟ್ ಮಾಡಿರೋ ಈ ಸಿನಿಮಾ ಬಗ್ಗೆ ವ್ಯಾಪಕವಾದ ಸಕಾರಾತ್ಮಕ ಪ್ರತಿಕ್ರಿಯೆಗಳೇ ಕೇಳಿ ಬರುತ್ತಿವೆ. ಯಾವುದೇ ಒಂದು ಸಿನಿಮಾ ಅಂದರೂ ಹೆಚ್ಚಿನದಾಗಿ ಹಲವರ ಅದೆಷ್ಟೋ ವರ್ಷದ ಕನಸು ನನಸಾದ ಕಥೆಗಳಿರುತ್ತವೆ. ಹಫ್ತಾ ಚಿತ್ರದ ವಿಚಾರದಲ್ಲಿಯೂ ಅಂಥವೇ ಒಂದಷ್ಟು ಮೊದಲ ಕನಸಿನ ಕಥೆಗಳಿವೆ. ಈ ಚಿತ್ರದ ನಿರ್ಮಾಪಕರಲ್ಲೊಬ್ಬರಾಗಿರೋ ಬಾಲರಾಜ್ ಟಿಸಿ ಪಾಳ್ಯ ಕೂಡಾ ವರ್ಷಾಂತರಗಳ ಕನಸೊಂದು ಹಫ್ತಾ ಮೂಲಕ ನನಸಾದ ಖುಷಿಯಲ್ಲಿದ್ದಾರೆ.

    ಹಫ್ತಾ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಅವರ ಪಾಲಿಗೂ ಮೊದಲ ಹೆಜ್ಜೆ. ವರ್ಧನ್ ತೀರ್ಥಹಳ್ಳಿ ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ ನಾಯಕನಾಗಿ ಅವರಿಗೂ ಇದು ಮೊದಲ ಹೆಜ್ಜೆಯೇ. ಇನ್ನು ನಿರ್ಮಾಪಕರಾದ ಮೈತ್ರಿ ಮಂಜುನಾಥ್ ಅವರೂ ಇದೇ ಸಾಲಿನಲ್ಲಿದ್ದಾರೆ. ಅದೇ ರೀತಿ ತಮ್ಮದೇ ಬ್ಯುಸಿನೆಸ್, ವಹಿವಾಟು ಅಂತಿದ್ದರೂ ಸಿನಿಮಾ ಧ್ಯಾನವನ್ನು ಬಹುವಾಗಿ ಹಚ್ಚಿಕೊಂಡಿದ್ದ ಬಾಲರಾಜ್ ಕೂಡಾ ಹಫ್ತಾ ಮೂಲಕವೇ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ.

    ಬಾಲರಾಜ್ ಮೂಲ ಬೆಂಗಳೂರಿಗರೇ. ಟಿಸಿ ಪಾಳ್ಯ ಏರಿಯಾದಲ್ಲಿಯೇ ಹುಟ್ಟಿ ಬೆಳೆದ ಅವರು ಕಾಲೇಜು ದಿನಗಳಲ್ಲಿಯೇ ಸಹಜವೆಂಬಂಥಾ ಸಿನಿಮಾ ವ್ಯಾಮೋಹ ಹೊಂದಿದ್ದವರು. ತಾನೂ ಕೂಡಾ ಈ ಬಣ್ಣದ ಜಗತ್ತಿನ ಭಾಗವಾಗಬೇಕೆಂಬ ಕನಸನ್ನು ಆ ಕಾಲದಿಂದಲೇ ಕಾಪಿಟ್ಟುಕೊಂಡು ಬಂದಿದ್ದ ಬಾಲರಾಜ್ ಆ ನಂತರದಲ್ಲಿ ಜೀವನೋಪಾಯಕ್ಕಾಗಿ ತಮ್ಮದೇ ಬ್ಯುಸಿನೆಸ್‍ನ ಹಾದಿ ಹಿಡಿದಿದ್ದರು. ಈ ಜಂಜಾಟ, ಒತ್ತಡಗಳ ನಡುವೆಯೂ ಸಿನಿಮಾ ನಿರ್ಮಾಣ ಮಾಡಬೇಕೆಂಬ ಬಯಕೆ ಹೊಂದಿದ್ದ ಅವರಿಗೆ ಕಡೆಗೂ ಹಫ್ತಾ ಮೂಲಕ ಆ ಅವಕಾಶ ಕೂಡಿ ಬಂದಿದೆ.

    ಈ ಸಿನಿಮಾ ನಿರ್ದೇಶಕರಾದ ಪ್ರಕಾಶ್ ಹೆಬ್ಬಾಳ, ನಿರ್ಮಾಪಕ ಮೈತ್ರಿ ಮಂಜುನಾಥ್ ಹಾಗೂ ಬಾಲರಾಜ್ ಸ್ನೇಹಿತರು. ವರ್ಷಗಳ ಹಿಂದೆ ಪ್ರಕಾಶ್ ಹೆಬ್ಬಾಳ ಹಫ್ತಾ ಚಿತ್ರದ ಬಗ್ಗೆ ಹೇಳಿ, ಕಥೆಯನ್ನೂ ವಿವರಿಸಿ ಬಾಲರಾಜ್ ಮುಂದೆ ನಿರ್ಮಾಣದಲ್ಲಿ ಭಾಗಿಯಾಗುವ ಬಗ್ಗೆ ಆಫರ್ ಇಟ್ಟಿದ್ದರಂತೆ. ಆ ಕ್ಷಣವೇ ಒಪ್ಪಿಗೆ ಸೂಚಿಸಿದ್ದ ಬಾಲರಾಜ್ ಅಂಥಾದ್ದೊಂದು ಹಠಾತ್ ನಿರ್ಧಾರ ತಳೆಯಲು ಕಾರಣವಾದದ್ದು ಹಫ್ತಾದ ಡಿಫರೆಂಟ್ ಕಥೆ. ಆ ಬಳಿಕ ಅಂದುಕೊಂಡಂತೆಯೇ ಸಾಗಿ ಬಂದು ನಿರೀಕ್ಷೆಗೂ ಮೀರಿ ಈ ಚಿತ್ರವನ್ನು ಅಚ್ಚುಕಟ್ಟಾಗಿ ರೂಪಿಸಿರುವ ತೃಪ್ತಿ ಬಾಲರಾಜ್ ಅವರಲ್ಲಿದೆ.

    ಇಂಥಾ ಮೊದಲ ಹೆಜ್ಜೆಗಳು ಒಳ್ಳೆ ಅಭಿಪ್ರಾಯ, ಪ್ರೋತ್ಸಾಹಗಳಿಂದ ಮುದಗೊಳ್ಳುತ್ತವೆ. ಅದರಲ್ಲಿಯೂ ಗೆಲುವಿನ ಸೂಚನೆ ಸಿಕ್ಕಿದರಂತೂ ಉತ್ಸಾಹ ಇನ್ನೂ ಇಮ್ಮಡಿಸುತ್ತದೆ. ಬಾಲರಾಜ್ ಈಗ ಅಂಥಾದ್ದೇ ಮೂಡಿನಲ್ಲಿದ್ದಾರೆ. ಹಫ್ತಾ ಚಿತ್ರಕ್ಕೆ ಎಲ್ಲ ದಿಕ್ಕುಗಳಿಂದಲೂ ಸಕಾರಾತ್ಮಕ ಸ್ವಾಗತವೇ ಸಿಗುತ್ತಿದೆ. ಇನ್ನೇನು ತೆರೆಗೆ ಬರಲಿರೋ ಈ ಚಿತ್ರದ ಗೆಲುವಿನ ಸೂಚನೆ ಈಗಾಗಲೇ ಸಿಕ್ಕಿಬಿಟ್ಟಿದೆ. ಹಫ್ತಾ ಮೂಲಕವೇ ನಿರ್ಮಾಪಕರಾಗಿ ಅದೃಷ್ಟ ಪರೀಕ್ಷೆಗಿಳಿದಿರೋ ಬಾಲರಾಜ್ ಕೂಡಾ ಇದರಿಂದ ಖುಷಿಗೊಂಡು ದೊಡ್ಡ ಗೆಲುವೊಂದನ್ನು ಎದುರು ನೋಡುತ್ತಿದ್ದಾರೆ.

    https://www.youtube.com/watch?v=zZefRDFISRU

  • ಘೀಳಿಡಲು ಸಜ್ಜಾದ ಸಲಗ ಗೆಲ್ಲುವ ಸೂಚನೆ!

    ಘೀಳಿಡಲು ಸಜ್ಜಾದ ಸಲಗ ಗೆಲ್ಲುವ ಸೂಚನೆ!

    ಬೆಂಗಳೂರು: ದುನಿಯಾ ವಿಜಯ್ ಅಭಿನಯಿಸಿ ನಿರ್ದೇಶನವನ್ನೂ ಮಾಡುತ್ತಿರೋ ಚಿತ್ರ ಸಲಗ. ಬಂಡಿಮಾಕಾಳಮ್ಮ ದೇವಸ್ಥಾನದಲ್ಲಿ ಮುಹೂರ್ತ ಸಮಾರಂಭ ನಡೆಯೋ ಮೂಲಕ ಈ ಸಿನಿಮಾಗೆ ವಿದ್ಯುಕ್ತ ಚಾಲನೆ ಸಿಕ್ಕಿದೆ. ಸಲಗ ಎಂಬುದೇ ಪಕ್ಕಾ ಮಾಸ್ ಟೈಟಲ್. ದುನಿಯಾ ವಿಜಯ್ ಮೊದಲ ಹೆಜ್ಜೆಯಲ್ಲಿ ನಿರ್ದೇಶಕರಾಗಿ ಈ ಚಿತ್ರವನ್ನ ಹೇಗೆ ಸಂಭಾಳಿಸಲಿದ್ದಾರೆ, ಇದರ ಕಥೆ ಎಂಥಾದ್ದೆಂಬುದೂ ಸೇರಿದಂತೆ ಪ್ರೇಕ್ಷಕರಲ್ಲಿರೋ ಕುತೂಹಲ ಒಂದೆರಡಲ್ಲ. ಸಲಗ ಪ್ರೇಕ್ಷಕರ ನಡುವೆ ಈ ಪಾಟಿ ಘೀಳಿಟ್ಟು ಸದ್ದು ಮಾಡುತ್ತಿರೋದಕ್ಕೆ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರೋದು ಕೆ.ಪಿ ಶ್ರೀಕಾಂತ್ ಅನ್ನೋದೂ ಕೂಡಾ ಕಾರಣ!

    ಕೆಪಿ ಶ್ರೀಕಾಂತ್ ಹಿಟ್ ಸಿನಿಮಾ ನಿರ್ಮಾಪಕರೆಂದೇ ಖ್ಯಾತರಾಗಿರುವವರು. ಸಿನಿಮಾವನ್ನು ವ್ಯವಹಾರದಾಚೆಗೆ ಪ್ರೀತಿಸುವ ಅವರು ಕಥೆಗೆ ಎಲ್ಲ ಕೋನದಿಂದಲೂ ಕಸುವಿದೆ ಅಂತ ಗೊತ್ತಾಗದೆ ಯಾವ ಚಿತ್ರವನ್ನೂ ನಿರ್ಮಾಣ ಮಾಡಲು ಮುಂದಾಗುವವರಲ್ಲ. ಹೆಚ್ಚೂಕಮ್ಮಿ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಚಿತ್ರರಂಗದ ಭಾಗವಾಗಿರುವ ಶ್ರೀಕಾಂತ್ ಬತ್ತಳಿಕೆಯಲ್ಲಿ ಈ ಮಾತಿಗೆ ಪೂರಕವಾದ ವಿಚಾರಗಳೇ ಇವೆ. ಇಂಥಾ ಶ್ರೀಕಾಂತ್ ಮತ್ತು ದುನಿಯಾ ವಿಜಯ್ ಸಲಗದ ಮೂಲಕ ಭಾರೀ ಯಶಸ್ಸೊಂದನ್ನು ತಮ್ಮದಾಗಿಸಿಕೊಳ್ಳಲಿದ್ದಾರೆಂಬ ಸೂಚನೆಗಳೇ ಎಲ್ಲ ದಿಕ್ಕಿನಿಂದಲೂ ಕಾಣಿಸುತ್ತಿವೆ.

    ಸಲಗ ಆರಂಭದಲ್ಲಿಯೇ ಎಂಥಾ ಸೆನ್ಸೇಷನ್ ಕ್ರಿಯೇಟ್ ಮಾಡಿದೆ ಅನ್ನೋದಕ್ಕೆ ಚಿತ್ರರಂಗದ ಗಣ್ಯರ ಪ್ರತಿಕ್ರಿಯೆಗಳಿಗಿಂತಲೂ ಬೇರೆ ಉದಾಹರಣೆ ಬೇಕಿಲ್ಲ. ಯುವ ನಿರ್ದೇಶಕ ಸಂತೋಷ್ ಆನಂದ್‍ರಾಮ್ ಈ ಚಿತ್ರದ ಮೂಲಕ ನಿರ್ದೇಶಕರಾಗುತ್ತಿರೋ ವಿಜಯ್ ಸೇರಿದಂತೆ ಇಡೀ ಚಿತ್ರ ತಂಡಕ್ಕೆ ಶುಭ ಕೋರಿದ್ದಾರೆ. ತರುಣ್ ಸುಧೀರ್ ಕೂಡಾ ತಮ್ಮ ಬಹುಕಾಲದ ಗೆಳೆಯನ ಈ ಸಾಹಸಕ್ಕೆ ಶುಭ ಕೋರಿದ್ದಾರೆ. ಕಾರ್ತಿಕ್ ಗೌಡ, ರಿಯಲ್ ಸ್ಟಾರ್ ಉಪೇಂದ್ರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕರು ಸಲಗಕ್ಕೆ ಶುಭ ಕೋರಿದ್ದಾರೆ.

    ಇದು ಸಲಗ ಚಿತ್ರದ ಬಗ್ಗೆ ತಾನೇ ತಾನಾಗಿ ಹುಟ್ಟಿಕೊಂಡಿರೋ ಪಾಸಿಟಿವ್ ವಾತಾವರಣ. ದುನಿಯಾ ವಿಜಯ್ ಅವರೇನು ಏಕಾಏಕಿ ನಿರ್ದೇಶಕರಾಗಿ ಅವತರಿಸಿಲ್ಲ. ನಿರ್ದೇಶನಕ್ಕೆ ಬೇಕಾಗುವಂಥಾ ಎಲ್ಲ ಪಟ್ಟುಗಳನ್ನೂ ಕರಗತ ಮಾಡಿಕೊಂಡು ಎಲ್ಲದರಲ್ಲಿಯೂ ಪಕ್ಕಾ ಅನ್ನಿಸಿದ ನಂತರವಷ್ಟೇ ಅಖಾಡಕ್ಕಿಳಿದಿದ್ದಾರೆ. ವಿಜಯ್ ಅವರ ಇಂಥಾ ಶ್ರದ್ಧೆಯ ಯಾನಕ್ಕೆ ನಿರ್ಮಾಪಕ ಕೆ ಪಿ ಶ್ರೀಕಾಂತ್ ಕೂಡಾ ಸಾಥ್ ನೀಡಿದ್ದಾರೆ. ಇವರಿಬ್ಬರ ಕಾಂಬಿನೇಷನ್ನಿನಲ್ಲಿ ಕನ್ನಡ ಚಿತ್ರರಂಗದಲ್ಲೊಂದು ಮೈಲಿಗಲ್ಲೆನ್ನಬಹುದಾದ ಕಮಾಲ್ ನಡೆಯೋ ಲಕ್ಷಣಗಳೇ ಎಲ್ಲೆಡೆ ದಟ್ಟೈಸಿದೆ.

  • ತಪ್ತ ಮನಸಿನ ನಿರ್ದೇಶಕ ಪ್ರಕಾಶ್ ಹೆಬ್ಬಾಳರ ಚೊಚ್ಚಲ ‘ಹಫ್ತಾ’!

    ತಪ್ತ ಮನಸಿನ ನಿರ್ದೇಶಕ ಪ್ರಕಾಶ್ ಹೆಬ್ಬಾಳರ ಚೊಚ್ಚಲ ‘ಹಫ್ತಾ’!

    ಬೆಂಗಳೂರು: ಈಗ ಎಲ್ಲೆಡೆ ಟೀಸರ್ ಮತ್ತು ಹಾಡುಗಳ ಮೂಲಕ ಪ್ರೇಕ್ಷಕರ ನಡುವೆ ಚರ್ಚೆ ಹುಟ್ಟುಹಾಕಿರೋ ಚಿತ್ರ ಹಫ್ತಾ. ಈಗಾಗಲೇ ಹಲವಾರು ಚಿತ್ರಗಳಲ್ಲಿ ಖಳನಟನಾಗಿ ಅಬ್ಬರಿಸಿರೋ ಯುವ ನಟ ವರ್ಧನ್ ತೀರ್ಥಹಳ್ಳಿ ಈ ಸಿನಿಮಾ ಮೂಲಕ ನಾಯಕನಾಗಿ ಹೊರಹೊಮ್ಮುವ ಖುಷಿಯಲ್ಲಿದ್ದಾರೆ. ಈವರೆಗೂ ಹೊರಬಂದಿರೋ ಪೋಸ್ಟರ್ ಗಳಲ್ಲಿನ ವಿಭಿನ್ನ ಛಾಯೆಯ ಮೂಲಕವೇ ಭರವಸೆ ಹುಟ್ಟಿಸಿವೆ. ಕರಾವಳಿ ತೀರದ ಭೂಗತ ಮಜಲೊಂದನ್ನು ತೆರೆದಿಡುವ ಮಜವಾದ ಕಥಾ ಹಂದರ ಹೊಂದಿರೋ ಈ ಚಿತ್ರ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಅವರ ಮೊದಲ ಕನಸು.

    ಇಂಥಾ ಪ್ರತೀ ಮೊದಲ ಹೆಜ್ಜೆಯ ಹಿಂದೆಯೂ ಅದೆಷ್ಟೋ ವರ್ಷಗಳ ತಪನೆಯಿರುತ್ತದೆ. ಕಷ್ಟ ಕಾರ್ಪಣ್ಯಗಳನ್ನು ದಾಟಿಕೊಂಡು ಗುರಿಯತ್ತ ಸಾಗಿ ಬಂದ ಸ್ಫೂರ್ತಿದಾಯಕ ಕಹಾನಿಯೂ ಇರುತ್ತದೆ. ಇದೀಗ ಹಫ್ತಾ ಎಂಬ ಅಪರೂಪದ ಚಿತ್ರವೊಂದರ ಮೂಲಕವೇ ನಿರ್ದೇಶಕನಾಗುವ ಕನಸನ್ನು ನನಸು ಮಾಡಿಕೊಂಡಿರುವ ಪ್ರಕಾಶ್ ಹೆಬ್ಬಾಳ ಅವರ ಹಿಂದೆಯೂ ಅಂಥಾದ್ದೇ ಒಂದು ಕಥೆಯಿದೆ. ಏಳೆಂಟು ವರ್ಷಗಳಿಂದ ಸಿನಿಮಾ ಕ್ಷೇತ್ರದಲ್ಲಿ ಅವುಡುಗಚ್ಚಿ ಶ್ರದ್ಧೆಯಿಂದ ಕಾರ್ಯ ನಿರ್ವಹಿಸುತ್ತಾ ಕಡೆಗೂ ಒಂದೊಳ್ಳೆ ಸಿನಿಮಾ ನಿರ್ದೇಶನ ಮಾಡಿದ ಆತ್ಮತೃಪ್ತಿಯೂ ಅವರ ಮಾತುಗಳಲ್ಲಿ ಹಣಕಿ ಹಾಕುತ್ತವೆ.

    ಪ್ರಕಾಶ್ ಹೆಬ್ಬಾಳ ರಮೇಶ್ ಅರವಿಂದ್, ದಯಾಳ್ ಪದ್ಮನಾಭನ್ ಮುಂತಾದವರ ಗರಡಿಯಲ್ಲಿ ಪಳಗಿಕೊಂಡವರು. ಬೆಂಗಳೂರಿನಂಥಾ ಸಿಟಿಯಲ್ಲಿ ಹುಟ್ಟಿದರೂ ಬೇರೆ ಭಾಗಗಳತ್ತ, ಅಲ್ಲಿನ ಆಗು ಹೋಗುಗಳತ್ತ ಬೆರಗುಗಣ್ಣಿನ ನೋಟ ಹೊಂದಿದ್ದ ಅವರ ಪಾಲಿಗೆ ಕಾಲೇಜು ದಿನಗಳಲ್ಲಿಯೇ ಸಿನಿಮಾ ನಿರ್ದೇಶಕನಾಗಬೇಕೆಂಬ ಕನಸು ತೀವ್ರವಾಗಿತ್ತು. ಓದೆಲ್ಲವೂ ಮುಗಿದಾಕ್ಷಣವೇ ತನ್ನ ಕನಸಿನ ಕ್ಷೇತ್ರದ ಕಕ್ಷೆ ತಲುಪಿಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನಿಸಲಾರಂಭಿಸಿದ್ದ ಅವರು ಕಡೆಗೂ ಜೋಕಾಲಿ ಎಂಬ ಚಿತ್ರದ ಮೂಲಕ ಅದನ್ನು ಸಾಕಾರಗೊಳಿಸಿಕೊಂಡಿದ್ದರು. ಈ ಚಿತ್ರದಲ್ಲವರು ಅಸಿಸ್ಟೆಂಟ್ ಡೈರೆಕ್ಟರ್ ಆಗಿಯೂ ಕಾರ್ಯ ನಿರ್ವಹಿಸಿದ್ದರು.

    ಈ ಮೂಲಕವೇ ನಿರ್ದೇಶನದ ಪಟ್ಟುಗಳ ಮೊದಲ ಪಾಠ ಅರಿತುಕೊಂಡ ಪ್ರಕಾಶ್ ಪಾಲಿಗೆ ಮತ್ತೊಂದು ಅಯಾಮವನ್ನು ಅನಾವರಣಗೊಳಿಸಿದ್ದು ದಯಾಳ್ ಪದ್ಮನಾಭನ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ಹಗ್ಗದ ಕೊನೆ ಸಿನಿಮಾ. ಈ ನಡುವೆಯೇ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚುವ ಸಲುವಾಗಿ ಪೀಕ್ ಅವರ್ ಎಂಬೊಂದು ಕಿರು ಚಿತ್ರವನ್ನೂ ನಿರ್ದೇಶನ ಮಾಡಿದ್ದರು. ಇದು ಯೂಟ್ಯೂಬ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆಗೆ ಪಾತ್ರವಾಗಿತ್ತು.

    ಇದರಿಂದಲೇ ಭರವಸೆ ತುಂಬಿಕೊಂಡ ಪ್ರಕಾಶ್ ಹೆಬ್ಬಾಳ, ಒಂದು ವಿಭಿನ್ನವಾದ ಕಥೆಯೊಂದಿಗೇ ನಿರ್ದೇಶಕನಾಗಿ ಪಾದಾರ್ಪಣೆ ಮಾಡಬೇಕೆಂಬ ನಿರ್ಧಾರದೊಂದಿಗೆ ಮುಂದುವರೆಯಲಾರಂಭಿಸಿದ್ದರು. ಆಗ ಅವರಿಗೆ ಆಕರ್ಷಣೆಯಾಗಿ ಕಂಡದ್ದು ಕರಾವಳಿ ತೀರದ ಭೂಗತ ಜಗತ್ತು. ಈಗಾಗಲೇ ಆ ಭಾಗದ ಕೆಲವರು ಕೋಸ್ಟಲ್ ಏರಿಯಾದ ಕತ್ತಲ ಲೋಕದ ಹಲವಾರು ಮಜಲುಗಳನ್ನು ತೆರೆ ಮೇಲೆ ತಂದಿದ್ದಾರೆ. ಆದರೆ ಅದರಾಚೆಯ ಗುರುತಿರದ ಮಜಲುಗಳನ್ನು ದಕ್ಕಿಸಿಕೊಳ್ಳೋದು ತಪ್ತ ಮನಸುಗಳಿಗೆ ಮಾತ್ರವೇ ಸಾಧ್ಯ. ಅಂಥಾದ್ದೊಂದು ಮನಸ್ಥಿತಿ ಇರೋದರಿಂದಲೇ ಅದೆಲ್ಲಕ್ಕಿಂತಲೂ ಭಿನ್ನ ನೋಟದೊಂದಿಗೇ ಮಜವಾದೊಂದು ಕಥೆ ಹೆಣೆದ ಪ್ರಕಾಶ್ ಕಡೆಗೂ ಅಂದುಕೊಂಡಂತೆಯೇ ಅದಕ್ಕೆ ದೃಶ್ಯ ರೂಪ ನೀಡಿದ್ದಾರೆ.

    ಪ್ರತಿಯೊಂದರಲ್ಲಿಯೂ ಬಹಳ ಎಚ್ಚರಿಕೆಯಿಂದ, ಶ್ರದ್ಧೆಯಿಂದಲೇ ಪ್ರಕಾಶ್ ಹಫ್ತಾ ಚಿತ್ರವನ್ನು ರೂಪಿಸಿದ್ದಾರೆ. ಆ ಕಾರಣದಿಂದಲೇ ಬಿಡುಗಡೆಯ ಹಂತದಲ್ಲಿರೋ ಹಫ್ತಾ ದೊಡ್ಡ ಮಟ್ಟದಲ್ಲಿಯೇ ಸೌಂಡ್ ಮಾಡುತ್ತಿದೆ. ಯಾರಿಗೇ ಆದರೂ ಮೊದಲ ಪ್ರಯತ್ನಕ್ಕೇ ಈ ಪಾಟಿ ಪಾಸಿಟಿವ್ ವಾತಾವರಣ ಸೃಷ್ಟಿಯಾದರೆ ಖುಷಿಯಾಗುತ್ತದೆ. ಪ್ರಕಾಶ್ ಹೆಬ್ಬಾಳ್ ಕೂಡಾ ಇದೀಗ ಅಂಥಾದ್ದೊಂದು ತುಂಬು ಖುಷಿಯ ವಾರಸೂದಾರರಾಗಿದ್ದಾರೆ. ಈ ಮೂಲಕ ತಮ್ಮ ಚೊಚ್ಚಲ ಪ್ರಯತ್ನಕ್ಕೆ ಗೆಲುವಾಗುವ ತುಂಬು ಭರವಸೆಯೂ ಅವರಲ್ಲಿದೆ.

  • ಹಫ್ತಾ: ನಿರ್ಮಾಪಕ ಮೈತ್ರಿ ಮಂಜುನಾಥ್ ಕಣ್ಣಲ್ಲಿ ಗೆಲುವಿನ ಪ್ರಭೆ!

    ಹಫ್ತಾ: ನಿರ್ಮಾಪಕ ಮೈತ್ರಿ ಮಂಜುನಾಥ್ ಕಣ್ಣಲ್ಲಿ ಗೆಲುವಿನ ಪ್ರಭೆ!

    ವರ್ಧನ್ ತೀರ್ಥಹಳ್ಳಿ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಚಿತ್ರ ಹಫ್ತಾ. ಪ್ರಕಾಶ್ ಹೆಬ್ಬಾಳ ನಿರ್ದೇಶನದ ಈ ಚಿತ್ರ ವಿಶೇಷವಾದೊಂದು ಕಥೆಯನ್ನು ಹೊಂದಿದೆಯೆಂಬ ಅಂದಾಜು ಈಗಾಗಲೇ ಪ್ರೇಕ್ಷಕರಿಗೆಲ್ಲ ಸಿಕ್ಕಿ ಬಿಟ್ಟಿದೆ. ಯಾವುದೇ ಯಶಸ್ವಿ ಚಿತ್ರ ಬಿಡುಗಡೆಗೂ ಮುಂಚೆಯೇ ಸಕಾರಾತ್ಮಕವಾದ ಟಾಕ್ ಕ್ರಿಯೇಟ್ ಮಾಡುತ್ತವಲ್ಲ? ಆ ರೀತಿಯ ಲಕ್ಷಣಗಳಿಗೆಲ್ಲ ಹಫ್ತಾ ಚಿತ್ರ ರೂವಾರಿಯಾಗಿದೆ. ಇದು ನಿರ್ಮಾಪಕರಾಗಿ ಮೊದಲ ಪ್ರಯತ್ನದಲ್ಲಿಯೇ ಮೈತ್ರಿ ಮಂಜುನಾಥ್ ಅವರಿಗೆ ತುಂಬು ಭರವಸೆಯನ್ನೂ ಹುಟ್ಟಿಸಿದೆ.

    ಮೈತ್ರಿ ಮಂಜುನಾಥ್ ಅವರು ಹಫ್ತಾ ಚಿತ್ರವನ್ನು ಮೈತ್ರಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿನಲ್ಲಿ ಪ್ರತಿಷ್ಠಿತ ಉದ್ಯಮಿಯಾಗಿ ಗುರುತಿಸಿಕೊಂಡಿರೋ ಮಂಜುನಾಥ್ ಮೈತ್ರಿ ಗ್ರೂಪ್ಸ್ ಮಾಲೀಕರು. ಇದರಡಿಯಲ್ಲಿ ಹಲವಾರು ಉದ್ಯಮಗಳ ಒಡೆಯರಾಗಿರುವ ಅವರ ಪಾಲಿಗೆ ಸಿನಿಮಾ ಮಾಡಬೇಕೆಂಬುದು ಹಳೆಯ ಕನಸು. ಹಾಗಂತ ಅದಕ್ಕೇನೂ ರೂಪುರೇಷೆ ಇಲ್ಲದಿರಲಿಲ್ಲ. ಒಟ್ಟಾರೆ ಒಂದು ಸಿನಿಮಾ ಮಾಡಿ ನಿರ್ಮಾಪಕ ಅನ್ನಿಸಿಕೊಳ್ಳುವ ಯಾವ ಅವಸರವೂ ಅವರಿಗಿರಲಿಲ್ಲ. ಎಲ್ಲ ರೀತಿಯಿಂದಲೂ ತಮಗೆ ಒಪ್ಪಿಗೆಯಾಗುವ, ಕೇಳಿದಾಕ್ಷಣವೇ ಗೆಲುವಿನ ಸೂಚನೆ ಸಿಗುವಂಥಾ ಕಥೆ ಸಿಕ್ಕಿದಾಗಲಷ್ಟೇ ನಿರ್ಮಾಪಕರಾಗಿ ಹೊಸ ಯಾನ ಆರಂಭಿಸಬೇಕೆಂಬ ನಿರ್ಧಾರ ಅವರದ್ದಾಗಿತ್ತು.

    ಇಂಥಾದ್ದೊಂದು ಅಚಲ ನಿರ್ಧಾರಕ್ಕೆ ಹೊಸಾ ಆವೇಗ ಸಿಕ್ಕಿದ್ದು ಎರಡು ವರ್ಷಗಳ ಹಿಂದೆ. ಈ ಸಿನೆಮಾದ ನಿರ್ದೇಶಕ ಪ್ರಕಾಶ್ ಹೆಬ್ಬಾಳ ಮಂಜುನಾಥ್ ಅವರಿಗೆ ಬಹು ಕಾಲದ ಗೆಳೆಯ. ಅದೊಂದು ದಿನ ಎಲ್ಲ ತಯಾರಿ ಮಾಡಿಕೊಂಡು ಬಂದಿದ್ದ ಪ್ರಕಾಶ್ ಹಫ್ತಾ ಚಿತ್ರದ ಕಥೆಯನ್ನು ಮಂಜುನಾಥ್ ಅವರಿಗೆ ಒಪ್ಪಿಸಿದ್ದರಂತೆ. ಪೂರ್ತಿ ಕಥೆ ಕೇಳಿದವರಿಗೆ ತಾನು ನಿರ್ಮಾಪಕನಾಗಿ ಪಾದಾರ್ಪಣೆ ಮಾಡಲು ಇದೇ ಸರಿಯಾದ ಕಥೆ ಅಂತ ಆ ಕ್ಷಣವೇ ಅನ್ನಿಸಿತ್ತಂತೆ. ಈ ಕಾರಣದಿಂದಲೇ ಮೈತ್ರಿ ಪ್ರೊಡಕ್ಷನ್ಸ್ ಅಸ್ತಿತ್ವಕ್ಕೆ ಬಂದು ಹಫ್ತಾ ಚಿತ್ರಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿತ್ತು.

    ಬೆಂಗಳೂರಿನವರೇ ಆದ ಮಂಜುನಾಥ್ ಪಾಲಿಗೆ ಸಿನಿಮಾ ಆಕರ್ಷಣೆ ಇಂದು ನಿನ್ನೆಯದ್ದಲ್ಲ. ಈ ಬಗ್ಗೆ ಅಪಾರ ಕ್ರೇಜ್ ಹೊಂದಿದ್ದ ಅವರು ಕೆಲ ಕಿರು ಚಿತ್ರಗಳನ್ನು ನಿರ್ಮಾಣ ಮಾಡಿದ್ದರು. ಅದನ್ನು ಸಿನಿಮಾ ಮಾಡುವ ತಯಾರಿಯೆಂದೇ ಪರಿಗಣಿಸಿದ್ದರು. ತಾವೊಂದು ಸಿನಿಮಾ ನಿರ್ಮಾಣ ಮಾಡಿದರೆ ಅದು ತಾಂತ್ರಿಕವಾಗಿಯೂ ಶ್ರೀಮಂತಿಕೆಯಿಂದ ಕೂಡಿರಬೇಕೆಂದು ಆಶಿಸಿದ್ದ ಮಂಜುನಾಥ್ ಹಫ್ತಾ ಚಿತ್ರವನ್ನೂ ಕೂಡಾ ಅದರಂತೆಯೇ ರೂಪಿಸಿದ ಖುಷಿ ಹೊಂದಿದ್ದಾರೆ.

    ಹಫ್ತಾ ಚಿತ್ರ ಶುರುವಾದ ಮೊದಲ ದಿನವೇ ನೂರಾರು ಮಂದಿಗೆ ಕೆಲಸ ಕೊಟ್ಟ ತೃಪ್ತ ಭಾವವನ್ನೂ ತುಂಬಿಕೊಂಡಿದ್ದ ಮೈತ್ರಿ ಮಂಜುನಾಥ್ ಪಾಲಿಗೆ ಆರಂಭದಿಂದ ಇಲ್ಲಿಯವರೆಗೂ ಒಳ್ಳೆಯ ಅನುಭವಗಳೇ ಕೈ ಹಿಡಿದಿವೆ. ಆರಂಭದಲ್ಲಿ ಪ್ರಕಾಶ್ ಕಥೆ ಹೇಳುವಾಗ ಇದ್ದ ಫೀಲ್‍ಗೆ ಅನುಗುಣವಾಗಿಯೇ ಚಿತ್ರ ಮೂಡಿ ಬಂದಿರೋದರಿಂದ ಅವರಲ್ಲಿ ಗೆಲ್ಲುವ ಭರವಸೆ ಹೆಚ್ಚಾಗಿದೆ. ಕರಾವಳಿ ತೀರದ ಭೂಗತ ಜಗತ್ತಿನ ಕಥೆಯನ್ನು ವಿಭಿನ್ನವಾಗಿಯೇ ತೆರೆ ಮೇಲೆ ತಂದಿರೋದರ ಬಗ್ಗೆ ಖುಷಿ, ಮತ್ತದು ಎಲ್ಲಾ ಪ್ರೇಕ್ಷಕರಿಗೂ ಇಷ್ಟವಾಗುತ್ತದೆ ಎಂಬ ಭರವಸೆ ಮಂಜುನಾಥ್ ಅವರದ್ದು.

    ಇದು ಮೈತ್ರಿ ಮಂಜುನಾಥ್ ನಿರ್ಮಾಣದ ಮೊದಲ ಚಿತ್ರ. ಇದರ ಬಗ್ಗೆ ಈಗ ಅಷ್ಟ ದಿಕ್ಕುಗಳಿಂದಲೂ ಒಳ್ಳೆ ಮಾತುಗಳೇ ಕೇಳಿ ಬರುತ್ತಿವೆ. ಈ ಮೂಲಕವೇ ಪುಷ್ಕಳವಾದ ಗೆಲುವು ದಕ್ಕುತ್ತದೆ ಎಂಬ ಭರವಸೆಯೂ ಗಟ್ಟಿಯಾಗುತ್ತಿದೆ. ಇದುವೇ ಮಂಜುನಾಥ್ ಅವರಲ್ಲಿ ನಿರ್ಮಾಪಕರಾಗಿ ನೆಲೆ ಕಂಡುಕೊಳ್ಳುವ ಇರಾದೆಯನ್ನೂ ಹುಟ್ಟಿಸಿದೆ. ಈಗಾಗಲೇ ಅವರು ಎರಡನೇ ಚಿತ್ರಕ್ಕಾಗಿ ತಯಾರಿ ಆರಂಭಿಸಿದ್ದಾರೆ. ಇದು ಹಫ್ತಾ ಬಿಡುಗಡೆ ಪೂರ್ವದಲ್ಲಿಯೇ ಸೃಷ್ಟಿಸಿರೋ ಕ್ರೇಜ್‍ನ ಪರಿಣಾಮ!

    https://www.youtube.com/watch?v=zZefRDFISRU

  • ರೋಚಕ ಕಥೆಯೊಂದಿಗೆ ಮೋಹಕ ಅನುಭವ ನೀಡೋ `ವೀಕೆಂಡ್’!

    ರೋಚಕ ಕಥೆಯೊಂದಿಗೆ ಮೋಹಕ ಅನುಭವ ನೀಡೋ `ವೀಕೆಂಡ್’!

    ಬೆಂಗಳೂರು: ಶೃಂಗೇರಿ ಸುರೇಶ್ ನಿರ್ದೇಶನದ ವೀಕೆಂಡ್ ಚಿತ್ರ ತೆರೆ ಕಂಡಿದೆ. ಬಿಡುಗಡೆಯ ಕಡೆಯ ಕ್ಷಣದಲ್ಲಿ ಈ ಸಿನಿಮಾ ಬಗ್ಗೆ ಗಾಢವಾದೊಂದು ಕುತೂಹಲ ಹುಟ್ಟಿಕೊಂಡಿತ್ತಲ್ಲಾ? ಅದನ್ನು ಎಲ್ಲ ದಿಕ್ಕುಗಳಿಂದಲೂ ತಣಿಸುವಂಥಾ ಎಲಿಮೆಂಟುಗಳೊಂದಿಗೆ, ಆರಂಭದಿಂದ ಕ್ಲೈಮ್ಯಾಕ್ಸ್ ವರೆಗೂ ನೋಡುಗರನ್ನು ಸೆಳೆದಿಟ್ಟುಕೊಂಡು ಸಾಗುವ ವೀಕೆಂಡ್ ಒಂದೊಳ್ಳೆ ಚಿತ್ರವಾಗಿ ಎಲ್ಲರನ್ನೂ ತಾಕಿದೆ. ಸಾಮಾನ್ಯವಾಗಿ ಸಾಮಾಜಿಕ ಸಂದೇಶವನ್ನು ಕಮರ್ಶಿಯಲ್ ಜಾಡಿನಲ್ಲಿಯೇ ಹೇಳೋದು ಅಪರೂಪ. ಆದರೆ ಭರ್ಜರಿ ಕಾಮಿಡಿ, ಆಕ್ಷನ್, ಲವ್ ಸೇರಿದಂತೆ ಎಲ್ಲ ಅಂಶಗಳನ್ನೂ ಒಳಗೊಂಡಿರೋ ವೀಕೆಂಡಿನಲ್ಲಿ ನಮ್ಮ ನಡುವಿದ್ದೂ ನಾವ್ಯಾರೂ ಹೆಚ್ಚಾಗಿ ತಲೆ ಕೆಡಿಸಿಕೊಳ್ಳದ ವಿಚಾರಗಳನ್ನು ಪರಿಣಾಮಕಾರಿಯಾಗಿಯೇ ದೃಷ್ಯೀಕರಿಸಲಾಗಿದೆ.

    ಹೊರ ಜಗತ್ತಿನಲ್ಲಿ ಇವರಿಗೇನೂ ಕಮ್ಮಿ ಇಲ್ಲ ಎಂಬಂಥಾ ಇಮೇಜು, ಅದಕ್ಕೆ ಸರಿಯಾಗಿ ರೂಢಿಸಿಕೊಂಡ ಥಳುಕು ಬಳುಕಿನ ಲೈಫ್ ಸ್ಟೈಲ್… ಆದರೆ ಬದುಕಿನ ನೆತ್ತಿಯ ಮೇಲೆ ಸದಾ ನೇತಾಡುತ್ತಲೇ ಇರುವ ಅನಿಶ್ಚಿತತೆಯ ತೂಗುಗತ್ತಿ. ಯಾವುದೇ ಕ್ಷಣದಲ್ಲಿಯಾದರೂ ನೆಚ್ಚಿಕೊಂಡ ಕೆಲಸವನ್ನು ಬಿಟ್ಟು ಬೀದಿಯಲ್ಲಿ ನಿಲ್ಲಬಹುದಾದ ಬದುಕು… ಇದು ಐಟಿ ಬಿಟ ವಲಯದಲ್ಲಿ ಕೆಲಸ ಮಾಡೋರ ಸಾಮಾನ್ಯ ಗೋಳು. ಇಂಥಾ ಅಕ್ಷರಸ್ಥರೇ ಬದುಕಿನ ಅನಿವಾರ್ಯತೆಗೆ ಸಿಕ್ಕಿ ಅಡ್ಡ ದಾರಿ ಹಿಡಿದರೆ, ಕ್ರಿಮಿನಲ್ಲುಗಳಾದರೆ ಅದರ ಪರಿಣಾಮ ಘೋರ. ಇಂಥಾ ವಾಸ್ತವವನ್ನು ಸವರಿಕೊಂಡು ಹೋದಂತೆ ಭಾಸವಾಗುವ ರೋಚಕ ಕಥೆಯನ್ನು ವೀಕೆಂಡ್ ಚಿತ್ರ ಹೊಂದಿದೆ.

    ನಾಯಕ ಅಜೆಯ್ ಸಾಫ್ಟ್‍ವೇರ್ ಕ್ಷೇತ್ರದಲ್ಲಿಯೇ ಕಾರ್ಯ ನಿರ್ವಹಿಸುವಾತ. ಈತನ ಮೇಲೆ ಸಹೋದ್ಯೋಗಿಯೊಬ್ಬಳು ಮೋಹಗೊಂಡಿದ್ದರೆ ಈತ ಮಾತ್ರ ನಾಯಕಿಯ ಹಿಂದೆ ಬಿದ್ದಿರುತ್ತಾನೆ. ಈ ಪ್ರೇಮದ ಹಿನ್ನೆಲೆಯಲ್ಲಿಯೇ ನಿರ್ದೇಶಕರು ಐಟಿ ಬಿಟಿ ಕ್ಷೇತ್ರದ ಅಷ್ಟೂ ವಿಚಾರಗಳನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಜಾಣ್ಮೆ ತೋರಿದ್ದಾರೆ. ಅಲ್ಲಿನ ಕೆಲಸದೊತ್ತಡ, ಸಂಬಳ ಪಡೆಯಲು ಮಾಡಬೇಕಾದ ಅನಿವಾರ್ಯ ಸರ್ಕಸ್ಸುಗಳೆಲ್ಲವನ್ನು ಕೂಡಾ ಮನ ಮುಟ್ಟುವಂತೆ ದೃಷ್ಯದ ಚೌಕಟ್ಟಿಗೆ ಒಗ್ಗಿಸಲಾಗಿದೆ.

    ಇಂಥಾ ಎಲ್ಲ ಸರ್ಕಸ್ಸುಗಳಾಚೆಗೂ ಕೆಲಸ ಕಳೆದುಕೊಂಡಾಗ ಈ ಐಟಿ ಉದ್ಯೋಗಿಗಳ ಬದುಕು ಹೇಗಿರುತ್ತೆ? ಎಂಥೆಂಥಾ ಅವಘಡಗಳು ಸಂಭವಿಸಬಹುದೆಂಬುದನ್ನು ನಿರ್ದೇಶಕರು ರುಚಿಕಟ್ಟಾಗಿಯೇ ನಿರೂಪಿಸಿದ್ದಾರೆ. ಹಾಗಂತ ಈ ಸಿನಿಮಾ ಇಂಥಾ ಒಳತೋಟಿ, ತಲ್ಲಣಗಳಲ್ಲಿಯೇ ಕಳೆದು ಹೋಗಿದೆ ಅಂದುಕೊಳ್ಳಬೇಕಿಲ್ಲ. ಕಾಮಿಡಿ, ಪ್ರೀತಿ ಸೇರಿದಂತೆ ಎಲ್ಲೆಲ್ಲಿ ಯಾವುದನ್ನು ಬೆರೆಸಬೇಕೋ ಅದನ್ನು ಅಚ್ಚುಕಟ್ಟಾಗಿಯೇ ಮಾಡಲಾಗಿದೆ. ಆದ್ದರಿಂದಲೇ ವೀಕೆಂಡ್ ಎಂಬುದು ಸಂಪೂರ್ಣ ಎಂಟರ್‍ಟೈನ್ಮೆಂಟ್ ಪ್ಯಾಕೇಜಿನಂತೆ ಮೂಡಿ ಬಂದಿದೆ. ಒಂದಿಡೀ ಚಿತ್ರ ಇಷ್ಟೊಂದು ಪರಿಣಾಮಕಾರಿಯಾಗಿ ಮೂಡಿ ಬರಲು ಬೇರೇನೇ ಕಾರಣಗಳಿದ್ದರೂ ಅನಂತ್ ನಾಗ್ ಎಂಬ ಮೇರು ನಟ ಈ ಚಿತ್ರದ ಪ್ರಧಾನ ಆಕರ್ಷಣೆ. ಅವರಿಲ್ಲಿ ಸಾಫ್ಟ್‍ವೇರ್ ಮೊಮ್ಮಗನ ತಾತನಾಗಿ, ತಪ್ಪಾದಾಗ ತಿದ್ದುವ ಹಿರಿಯನ ಪಾತ್ರವನ್ನು ಎಂದಿನಂತೆಯೇ ಮನಸೂರೆಗೊಳ್ಳುವಂತೆ ನಿರ್ವಹಿಸಿದ್ದಾರೆ.

    ವಿಶೇಷವೆಂದರೆ ಈ ಚಿತ್ರವನ್ನು ನಿರ್ಮಾಣ ಮಾಡಿರುವ ಮಂಜುನಾಥ್ ಡಿ ಅವರೇ ಪೊಲೀಸ್ ಅಧಿಕಾರಿಯಾಗಿಯೂ ಅಬ್ಬರಿಸಿದ್ದಾರೆ. ಈ ಪಾತ್ರವೂ ಸೇರಿದಂತೆ ಗೋಪಿನಾಥ್ ಭಟ್, ರಘು ನೀನಾಸಂ ಸೇರಿದಂತೆ ಎಲ್ಲ ಪಾತ್ರಗಳೂ ಮನಮುಟ್ಟುವಂತಿವೆ. ಮಿಲಿಂದ್ ಮತ್ತು ಸಂಜನಾ ಬುರ್ಲಿ ಕೂಡಾ ತಂತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಶಶಿಧರ್ ಅವರ ಛಾಯಾಗ್ರಹಣ ಕಥೆಗೆ ಹೊಸಾ ಓಘವನ್ನೇ ನೀಡಿದೆ. ಹೀಗೆ ಕಮರ್ಶಿಯಲ್ ವೇನಲ್ಲಿ ರೋಚಕವಾದ ಕಥೆ ಹೇಳೋ ಈ ಚಿತ್ರ ಮನಮಿಡಿಯುವಂಥಾ ಒಂದು ಸಂದೇಶವನ್ನೂ ರವಾನಿಸುತ್ತದೆ. ಇಡೀ ಸಿನಿಮಾ, ಶ್ರಮ ಸಾರ್ಥಕ ಅನ್ನಿಸೋದು ಈ ಕಾರಣದಿಂದಲೇ. ಒಟ್ಟಾರೆಯಾಗಿ ವೀಕೆಂಡ್ ಒಂದೊಳ್ಳೆ ಚಿತ್ರ ನೋಡಿದ ಖುಷಿಯನ್ನು ನೋಡುಗರೆಲ್ಲರ ಮನಸಿಗಿಳಿಯುವಂತೆ ಮಾಡುತ್ತದೆ.

    ರೇಟಿಂಗ್: 3.5/5 

  • ಟೆಕ್ಕಿಗಳ ಮನೋಲೋಕ ಅನಾವರಣಗೊಳಿಸಲಿರೋ ವೀಕೆಂಡ್!

    ಟೆಕ್ಕಿಗಳ ಮನೋಲೋಕ ಅನಾವರಣಗೊಳಿಸಲಿರೋ ವೀಕೆಂಡ್!

    ಸುರೇಶ್ ಶೃಂಗೇರಿ ನಿರ್ದೇಶನ ಮಾಡಿರುವ ವೀಕೆಂಡ್ ಚಿತ್ರ ಈ ವಾರ ಬಿಡುಗಡೆಯಾಗುತ್ತಿದೆ. ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ನಟಿಸುತ್ತಿರೋ ಈ ಚಿತ್ರದಲ್ಲಿ ಅನಂತ್ ನಾಗ್ ಪ್ರಧಾನ ಪಾತ್ರವೊಂದಕ್ಕೆ ಜೀವ ತುಂಬಿದ್ದಾರೆ. ಈ ಸಿನಿಮಾ ಬಗ್ಗೆ ಈ ಪಾಟಿ ಕ್ರೇಜ್ ಹುಟ್ಟಿಕೊಂಡಿರೋದರ ಹಿಂದೆ ಅನಂತ್ ಪಾತ್ರದ ವೈಶಿಷ್ಟ್ಯವೂ ಸೇರಿಕೊಂಡಿದೆ.

    ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ಅವರು ನಿರ್ಮಾಣ ಮಾಡಿರೋ ಚಿತ್ರ ವೀಕೆಂಡ್. ಇದೊಂದು ಯುವ ಆವೇಗವನ್ನು ಒಳಗೊಂಡಿರುವ, ಈ ಮೂಲಕವೇ ಸಾಮಾಜಿಕ ಕಾಳಜಿಯನ್ನೂ ಕೂಡಾ ಪ್ರಚುರಪಡಿಸೋ ಪಕ್ಕಾ ಕಮರ್ಶಿಯಲ್ ಚಿತ್ರ. ಹೊಸ ತಂತ್ರಜ್ಞಾನ, ಹೊಸ ಬಗೆಯ ನಿರೂಪಣೆಯೊಂದಿಗೆ ವೀಕೆಂಡ್ ಬೇರೆಯದ್ದೇ ರೀತಿಯಲ್ಲಿ ಪ್ರೇಕ್ಷಕರಿಗೆಲ್ಲ ಮಜಾ ಕೊಡುವಂತೆ ಮೂಡಿ ಬಂದಿದೆಯಂತೆ.

    ಇಲ್ಲಿ ಸಾಫ್ಟ್‍ವೇರ್ ಉದ್ಯೋಗಿಗಳ ಜಗತ್ತನ್ನು ಕಣ್ಣಿಗೆ ಕಟ್ಟಿದಂತೆ ಅನಾವರಣಗೊಳಿಸಲಾಗಿದೆಯಂತೆ. ಹೇಳಿ ಕೇಳಿ ಐಟಿ ವಲಯದ ಮಂದಿಗೆ ಈ ವೀಕೆಂಡ್ ಮೋಜು ಮಸ್ತಿ ಅನ್ನೋದು ಫೇವರಿಟ್ ಅಂಶ. ಆದರೆ ಅಳತೆ ಮೀರಿದರೆ ವೀಕೆಂಡ್ ಮಸ್ತಿ ಎಂಬುದು ಭೀಕರ ಅನಾಹುತಗಳಿಗೂ ಕಾರಣವಾಗಿ ಬಿಡುತ್ತದೆ. ಅಂಥಾ ಅಂಶಗಳನ್ನು ಫ್ಯಾಮಿಲಿ ಸೆಂಟಿಮೆಂಟಿನ ಸುತ್ತ ಬೆಸೆದು ರೋಚಕವಾದ ಕಥೆಯ ಮೂಲಕ ಈ ಚಿತ್ರವನ್ನು ಅಣಿಗೊಳಿಸಲಾಗಿದೆ.

    ಈ ಚಿತ್ರದಲ್ಲಿ ಅನಂತ್ ನಾಗ್ ನಾಯಕನ ತಾತನ ಪಾತ್ರಕ್ಕೆ ಜೀವ ತುಂಬಿದ್ದಾರೆ. ಅವರದ್ದು ಯುವ ಸಮೂಹವನ್ನು ಸರಿ ದಾರಿಗೆ ತರುವ, ತನ್ನ ಮೊಮ್ಮಗನನ್ನು ಎಲ್ಲ ಎಡವಟ್ಟುಗಳಿಂದ ಪಾರುಗಾಣಿಸೋ ಪಾತ್ರ. ಮಿಲಿಂದ್ ಮತ್ತು ಸಂಜನಾ ಬುರ್ಲಿ ಈ ಚಿತ್ರದಲ್ಲಿ ನಾಯಕ ನಾಯಕಿಯರಾಗಿ ನಟಿಸಿದ್ದಾರೆ.

  • ವೀಕೆಂಡ್ ಹಾಡುಗಳ ಹಂಗಾಮಾ!

    ವೀಕೆಂಡ್ ಹಾಡುಗಳ ಹಂಗಾಮಾ!

    ಬೆಂಗಳೂರು: ಹಾಡುಗಳೇ ಚಿತ್ರವೊಂದರ ಆಹ್ವಾನ ಪತ್ರಿಕೆ ಇದ್ದಂತೆ ಎಂಬ ಮಾತಿದೆ. ಆದ್ದರಿಂದಲೇ ಹಾಡುಗಳು ಗೆದ್ದರೆ ಚಿತ್ರಕ್ಕೂ ಗೆಲುವು ಗ್ಯಾರೆಂಟಿ ಎಂಬ ನಂಬಿಕೆ. ಇದಕ್ಕೆ ತಕ್ಕುದಾಗಿಯೇ ಹಾಡುಗಳು ಹಿಟ್ ಆದರೆ ಆ ಸಿನಿಮಾ ಕೂಡಾ ಹಿಟ್ ಆಗುತ್ತದೆ ಎಂಬ ನಂಬಿಕೆಯೂ ಗಾಂಧಿನಗರದಲ್ಲಿದೆ. ಇದು ಬಹುತೇಕ ಸತ್ಯವೂ ಹೌದು. ಈ ನಿಟ್ಟಿನಲ್ಲಿ ನೋಡ ಹೋದರೆ ಈ ವಾರ ಬಿಡುಗಡೆಗೆ ರೆಡಿಯಾಗಿರೋ ವೀಕೆಂಡ್ ಚಿತ್ರದ ಗೆಲುವು ನಿಚ್ಚಳವಾಗಿದೆ.

    ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ಅವರು ನಿರ್ಮಾಣ ಮಾಡಿರೋ ಈ ಚಿತ್ರವನ್ನು ಶೃಂಗೇರಿ ಸುರೇಶ್ ನಿರ್ದೇಶನ ಮಾಡಿದ್ದಾರೆ. ಈಗ್ಗೆ ಮೂರು ದಶಕಗಳಿಂದೀಚೆಗೆ ಚಿತ್ರರಂಗದಲ್ಲಿ ಸಕ್ರಿಯರಾಗಿರೋ ಸುರೇಶ್ ಅವರು ಈಗಿನ ಯುವ ಸಮುದಾಯದ ತಲ್ಲಣಗಳನ್ನು ಸಾಮಾಜಿಕ ಕಾಳಜಿಯೊಂದಿಗೆ ಕಮರ್ಷಿಯಲ್ ವೇನಲ್ಲಿ ಈ ಮೂಲಕ ದೃಷ್ಯೀಕರಿಸಿದ್ದಾರೆ.

    ಈ ಚಿತ್ರ ಹಾಡುಗಳು ಮತ್ತು ಟ್ರೈಲರ್ ಮೂಲಕವೇ ಜನಮಾನಸಕ್ಕೆ ಹತ್ತಿರಾಗಿದೆ. ಅದರಲ್ಲಿಯೂ ಹಾಡುಗಳಂತೂ ನವೀನ ರೀತಿಯಲ್ಲಿ ಪ್ರೇಕ್ಷಕರನ್ನು ತಲುಪಿಕೊಂಡಿವೆ. ಶ್ರೀಲಂಕಾ ಮೂಲದ ಮನೋಜ್ ಸಂಗೀತ ನಿರ್ದೇಶನದಲ್ಲಿ ಈ ಸಿನಿಮಾದ ಮೂರು ಹಾಡುಗಳು ಮೂಡಿ ಬಂದಿವೆ. ಅನನ್ಯಾ ಭಟ್ ಹಾಡಿರೋ ಐಲಾ ಐಲಾ ಎಂಬ ಪಾರ್ಟಿ ಸಾಂಗ್ ಅಂತೂ ಹೊಸಾ ಕ್ರೇಜ್ ಸೃಷ್ಟಿಸಿ ಬಿಟ್ಟಿದೆ.

    ಈ ಚಿತ್ರದಲ್ಲಿ ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶಶಿಧರ್ ಛಾಯಾಗ್ರಹಣ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ, ಮನೋಜ್ ಸಂಗೀತ ಹಾಗೂ ಅನಂತ್ ನಾಗ್, ಮಂಜುನಾಥ್, ನೀನಾಸಂ ರಘು, ಬ್ಯಾಂಕ್ ಸತೀಶ್, ನೀತು ಬಾಲಾ, ವೀಣಾ ಜಯಶಂಕರ್, ಸಂಜಯ್ ನಾಗೇಶ್, ಮಂಜುನಾಥ ಶಾಸ್ತ್ರಿ, ಗೋಪಿನಾಥ್ ಭಟ್, ನಾಗಭೂಷಣ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.

  • ಪಾರ್ವತಮ್ಮನ ಮಗಳು ಇನ್ವೆಸ್ಟಿಗೇಟಿವ್ ಆಫೀಸರ್ ವೈದೇಹಿ!

    ಪಾರ್ವತಮ್ಮನ ಮಗಳು ಇನ್ವೆಸ್ಟಿಗೇಟಿವ್ ಆಫೀಸರ್ ವೈದೇಹಿ!

    ಬೆಂಗಳೂರು: ದಿಶಾ ಎಂಟರ್ ಪ್ರೈಸಸ್ ಮೂಲಕ ಕೆ.ಎಂ ಶಶಿಧರ್ ನಿರ್ಮಾಣ ಮಾಡಿರುವ ಡಾಟರ್ ಆಫ್ ಪಾರ್ವತಮ್ಮ ಚಿತ್ರ ಇದೇ ತಿಂಗಳ 24ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಹರಿಪ್ರಿಯಾ ನಾಯಕಿಯಾಗಿ ನಟಿಸಿರೋ ಈ ಚಿತ್ರವೀಗ ಎಲ್ಲ ದಿಕ್ಕಿನಲ್ಲಿಯೂ ಪ್ರೇಕ್ಷಕರನ್ನು ಮೋಡಿಗೀಡು ಮಾಡಿದೆ. ಅದುವೇ ಪ್ರೇಕ್ಷಕರನ್ನು ಕೈ ಹಿಡಿದು ಥೇಟರಿಗೆ ಕೈ ಹಿಡಿದು ಕರೆ ತರುವ ನಿರೀಕ್ಷೆಗಳೂ ದಟ್ಟವಾಗಿವೆ.

    ಇದು ಶಂಕರ್ ಜೆ ನಿರ್ದೇಶನದ ಚೊಚ್ಚಲ ಚಿತ್ರ. ಮೊದಲ ಪ್ರಯತ್ನದಲ್ಲಿಯೇ ಅವರು ಹೊಸಾ ಥರದ ಕಥೆಯೊಂದನ್ನು ಕಮರ್ಶಿಯಲ್ ಶೈಲಿಯಲ್ಲಿಯೇ ಹೇಳಲು ಮುಂದಾಗಿದ್ದಾರೆ. ಈ ಚಿತ್ರ ಆರಂಭ ಕಾಲದಿಂದಲೂ ಹರಿಪ್ರಿಯಾ ಅವರ ಗೆಟಪ್ಪುಗಳ ಝಲಕ್ಕಿನಿಂದಲೇ ಟಾಕ್ ಕ್ರಿಯೇಟ್ ಮಾಡುತ್ತಾ ಸಾಗಿ ಬಂದಿತ್ತು. ಟಾಮ್ ಬಾಯ್ ಲುಕ್ ಅಂತೂ ಎಲ್ಲರನ್ನೂ ಸೆಳೆದುಕೊಂಡಿತ್ತು. ಇದನ್ನೂ ಓದಿ: ಡಾಟರ್ ಆಫ್ ಪಾರ್ವತಮ್ಮ ಮತ್ತು ಟಗರು ಕಾಕ್ರೋಚ್!

    ಈ ಚಿತ್ರದಲ್ಲಿ ಹರಿಪ್ರಿಯಾ ಎರಡು ಶೇಡುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಲ್ಯಾಷ್‍ಬ್ಯಾಕ್‍ನಲ್ಲಿ ಕಾಲೇಜು ಹುಡುಗಿಯಾಗಿ ಟಾಮ್ ಬಾಯ್ ಲುಕ್‍ನಲ್ಲಿ ಅವರು ಕಂಗೊಳಿಸಿದ್ದಾರೆ. ಇನ್ನುಳಿದಂತೆ ಎಂಥಾದ್ದೇ ಪ್ರಕರಣವನ್ನಾದರೂ ಲೀಲಾಜಾಲವಾಗಿ ಬೆಂಬೀಳುವ ಖಡಕ್ ಸಿಐಡಿ ಅಧಿಕಾರಿಯಾಗಿಯೂ ಅವರು ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರ ಪಾತ್ರದ ಹೆಸರೇನೆಂಬ ಕುತೂಹಲ ಅಭಿಮಾನಿಗಳಲ್ಲಿತ್ತು. ಹರಿಪ್ರಿಯಾ ಪಾತ್ರದ ಹೆಸರು ವೈದೇಹಿ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿದೆ. ಇದನ್ನೂ ಓದಿ: ಸುಮಲತಾ ಅಂಬರೀಶ್ ಪಾರ್ವತಮ್ಮನಾದ ವಿಸ್ಮಯ!

    ಇಲ್ಲಿ ಕ್ರೈಂ ಥ್ರಿಲ್ಲರ್ ಕಥೆಯ ಜೊತೆ ಜೊತೆಗೇ ತಾಯಿ ಮಗಳ ಸೆಂಟಿಮೆಂಟ್ ದೃಶ್ಯಗಳೂ ಪ್ರಧಾನವಾಗಿರಲಿದೆ. ಸಾಮಾನ್ಯವಾಗಿ ಪೊಲೀಸ್ ಪಾತ್ರವೆಂದಾಕ್ಷಣ ಅಬ್ಬರ ಅರಚಾಟಗಳಿರುತ್ತವೆಂಬ ವಾತಾವರಣವಿದೆ. ಆದರೆ ಸೂಕ್ಷ್ಮ ಸಂವೇದನೆ ಹೊಂದಿರೋ ಈ ಪಾತ್ರ ಎಲ್ಲಕ್ಕಿಂತಲೂ ಭಿನ್ನವಾಗಿ ನೋಡುಗರೆಲ್ಲರ ಆಳಕ್ಕಿಳಿಯುವಷ್ಟು ಸಶಕ್ತವಾಗಿದೆ ಎಂಬುದು ಚಿತ್ರತಂಡದ ಭರವಸೆ.

  • ಈ ವಾರ ಬಿಚ್ಚಿಕೊಳ್ಳಲಿದೆ ವೀಕೆಂಡ್ ವೈಚಿತ್ರ್ಯ!

    ಈ ವಾರ ಬಿಚ್ಚಿಕೊಳ್ಳಲಿದೆ ವೀಕೆಂಡ್ ವೈಚಿತ್ರ್ಯ!

    ಅನಂತ್ ನಾಗ್ ಯಾವ ಚಿತ್ರದಲ್ಲಿಯೇ ಆದರೂ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆಂದರೇನೇ ಅದರೆಡೆಗೆ ಜನ ಆಕರ್ಷಿತರಾಗುತ್ತಾರೆ. ಹಾಗಿರೋವಾಗ ಅವರು ಪ್ರಧಾನ ಪಾತ್ರ ನಿರ್ವಹಿಸಿದ್ದಾರೆಂದರೆ ಕುತೂಹಲ ಹುಟ್ಟದಿರಲು ಸಾಧ್ಯವೇ ಇಲ್ಲ. ಇಂಥಾದ್ದೊಂದು ಕಾರಣದಿಂದಲೇ ಎಲ್ಲ ಪ್ರೇಕ್ಷಕರನ್ನೂ ಸೆಳೆದುಕೊಂಡಿರೋ ಚಿತ್ರ ವೀಕೆಂಡ್. ಇದೀಗ ಇದು ಬಿಡುಗಡೆಯಾಗೋ ದಿನಾಂಕ ಫಿಕ್ಸಾಗಿದೆ.

    ಶೃಂಗೇರಿ ಸುರೇಶ್ ನಿರ್ದೇಶನದ ಈ ಚಿತ್ರ ಈ ವಾರವೇ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರಿನಡಿಯಲ್ಲಿ ಮಂಜುನಾಥ್ ಡಿ ನಿರ್ಮಾಣ ಮಾಡಿರೋ ವೀಕೆಂಡ್ ಚಿತ್ರ ಈಗಾಗಲೇ ಭರ್ಜರಿಯಾಗಿ ಸೌಂಡ್ ಮಾಡಿದೆ. ಟ್ರೈಲರ್ ಮೂಲಕವೇ ಈ ಸಿನಿಮಾದಲ್ಲೇನೋ ಇದೆ ಎಂಬಂಥಾ ಸುಳಿವನ್ನು ಕುತೂಹಲವಾಗಿ ಪ್ರೇಕ್ಷಕರತ್ತ ದಾಟಿಸುವಲ್ಲಿಯೂ ಚಿತ್ರತಂಡ ಯಶ ಕಂಡಿದೆ.

    ಅಖಂಡ ಮೂರು ದಶಕಗಳ ಕಾಲ ಚಿತ್ರರಂಗದಲ್ಲಿ ಚಾಲ್ತಿಯಲ್ಲಿದ್ದು ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸಿರುವವರು ಶೃಂಗೇರಿ ಸುರೇಶ್. ಶಂಕರ್ ನಾಗ್ ಅವರಂಥಾ ಮೇರು ನಟರ ಚಿತ್ರಗಳಿಗೂ ಕೆಲಸ ಮಾಡಿದ್ದ ಅವರು ಹಲವಾರು ಹಿರಿಯ ನಟರೊಂದಿಗೂ ಆತ್ಮೀಯ ಸಖ್ಯ ಹೊಂದಿರುವವರು. ಸುರೇಶ್ ತೀರಾ ಈಗಿನ ಜನರೇಷನ್ನಿನ ಆವೇಗಗಳನ್ನು ಆವಾಹಿಸಿಕೊಂಡೇ ಈ ಚಿತ್ರದ ಕಥೆಯನ್ನು ಸಿದ್ಧಪಡಿಸಿದ್ದಾರೆ.

    ವೀಕೆಂಡ್ ಅಂದರೆ ಐಟಿ ವಲಯದಲ್ಲಿರುವವರೂ ಸೇರಿದಂತೆ ಎಲ್ಲರಿಗೂ ಅಚ್ಚುಮೆಚ್ಚು. ಅದರಲ್ಲಿಯೂ ಐಟಿ ವಲಯದವರಿಗೆ ವೀಕೆಂಡ್ ಮೋಜು ಮಸ್ತಿಯಿಲ್ಲದಿದ್ದರೆ ಕಾಲವೆಂಬುದು ರುಚಿಸೋದಿಲ್ಲ. ಆದರೆ ಕೊಂಚ ಎಚ್ಚರ ತಪ್ಪಿದರೂ ಕೂಡಾ ಈ ಮೋಜು ಮಸ್ತಿ ಬದುಕನ್ನೇ ಅಲ್ಲಾಡಿಸಿ ಹಾಕಿ ಬಿಡುತ್ತದೆ. ಇಂಥಾ ಸೂಕ್ಷ್ಮವಾದ ಕಥಾ ಹಂದರವನ್ನು ಥ್ರಿಲ್ಲರ್ ಶೈಲಿಯಲ್ಲಿ ನಿರೂಪಿಸಲಾಗಿದೆಯಂತೆ.

    ಈ ಚಿತ್ರದಲ್ಲಿ ಮಿಲಿಂದ್ ಮತ್ತು ಸಂಜನಾ ಬುರ್ಲಿ ನಾಯಕ ನಾಯಕಿಯರಾಗಿ ಅಭಿನಯಿಸಿದ್ದಾರೆ. ಶಶಿಧರ್ ಛಾಯಾಗ್ರಹಣ, ಬಾಬು ಖಾನ್ ಕಲಾ ನಿರ್ದೇಶನ, ಮಂಜುನಾಥ್ ಜಂಬೆ ಸಹ ನಿರ್ದೇಶನ, ಮನೋಜ್ ಸಂಗೀತ ಹಾಗೂ ಅನಂತ್ ನಾಗ್, ಮಂಜುನಾಥ್, ನೀನಾಸಂ ರಘು, ಬ್ಯಾಂಕ್ ಸತೀಶ್, ನೀತು ಬಾಲಾ, ವೀಣಾ ಜಯಶಂಕರ್, ಸಂಜಯ್ ನಾಗೇಶ್, ಮಂಜುನಾಥ ಶಾಸ್ತ್ರಿ, ಗೋಪಿನಾಥ್ ಭಟ್, ನಾಗಭೂಷಣ್ ಮುಂತಾದವರ ತಾರಾಗಣ ಈ ಚಿತ್ರಕ್ಕಿದೆ.