Tag: ಕನ್ನಡ ರಾಜೋತ್ಸವ

  • ಪೋತಿಸ್ ಮಳಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    ಪೋತಿಸ್ ಮಳಿಗೆಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    ಬೆಂಗಳೂರು: ದಕ್ಷಿಣ ಭಾರತದ ಜವಳಿ ಮಾರಾಟ ಸಂಸ್ಥೆ ಪೋತಿಸ್ ಸಂಸ್ಥೆ ನಗರದಲ್ಲಿ ಅದ್ಧೂರಿಯಾಗಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಿದೆ.

    ಪೋತಿಸ್ ಮಳಿಗೆಯನ್ನು ಕೆಂಪು ಮತ್ತು ಹಳದಿ ಬಣ್ಣದಿಂದ ಶೃಂಗರಿಸಿ ಬಟ್ಟೆ ಖರೀದಿಗೆ ಆಗಮಿಸಿದ ಎಲ್ಲ ಗ್ರಾಹಕರಿಗೆ ಸಿಹಿ ನೀಡಿ ಸಂಂಭ್ರಮಾಚರಣೆ ಮಾಡಿದೆ. ಅಷ್ಟೇ ಅಲ್ಲದೇ ಮಧ್ಯಾಹ್ನ 1,500 ಮಂದಿಗೆ ಅನ್ನದಾನ ಸಹ ನಡೆಸಿ ವಿಶಿಷ್ಟವಾಗಿ ರಾಜೋತ್ಸವ ಆಚರಿಸಿದೆ. ಮಳಿಗೆಗೆ ಆಗಮಿಸಿದ ಗ್ರಾಹಕರಿಗೆ ಒಂದು ಸ್ವೀಟ್ ಬಾಕ್ಸ್ ಉಡುಗೊರೆ ನೀಡಿದ್ದು, ಇಡೀ ದಿನ ಮಳಿಗೆಯಲ್ಲಿ ಕನ್ನಡದ ಹಾಡುಗಳನ್ನು ಹಾಕುವ ಮೂಲಕ ಕನ್ನಡ ವಾತಾವರಣವನ್ನು ಸೃಷ್ಟಿಮಾಡಿತ್ತು.

    2018ರ ಫೆಬ್ರವರಿಯಲ್ಲಿ ಕೆಂಪೇಗೌಡ ರಸ್ತೆಯಲ್ಲಿ ಮಳಿಗೆ ಉದ್ಘಾಟನೆ ಮಾಡಿತ್ತು. ಅಲ್ಲದೇ ಸಂಸ್ಥೆಯ ರಾಯಭಾರಿಯಾಗಿ ನಟ ಪುನೀತ್ ರಾಜ್‍ಕುಮಾರ್ ಹಾಗೂ ನಟಿ ತಮನ್ನಾ ಅವರನ್ನ ನೇಮಕ ಮಾಡಿತ್ತು. 95 ವರ್ಷಗಳಿಂದ ಜವಳಿ ಉದ್ಯಮದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಪೋತಿಸ್, ಮಯೂರಿ, ವಸುಂಧರ, ಪರಂಪರಾ, ವಸ್ತ್ರಕಲಾ ಹಾಗೂ ಕಲಾಕ್ಷೇತ್ರದಂತಹ ಬ್ರ್ಯಾಂಡೆಡ್ ರೇಷ್ಮೆ ವಸ್ತ್ರಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಅಲ್ಲದೇ ಕಾಂಚೀಪುರಂ, ಧರ್ಮವರಂ, ಬನಾರಸ್ ರೇಷ್ಮೆ ಉಡುಪುಗಳು, ಫ್ಯಾನ್ಸಿ ಹಾಗೂ ಡಿಸೈನರ್ ಸೀರೆಗಳು ಸೇರಿದಂತೆ ಸಿದ್ದ ಉಡುಪುಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಾ ವಿಶ್ವಾಸಗಳಿಸಿದೆ.

    ಪೋತಿಸ್ ಶಾಖೆಯಲ್ಲಿ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ಕಡೆ ಉಡುಪುಗಳನ್ನು ಖರೀದಿಬಹುದಾಗಿದ್ದ ಮಳಿಗೆಯಾಗಿದ್ದು, ಎಲ್ಲಾ ಸಮಾರಂಭಗಳಿಗೂ ಸೂಕ್ತ ಎನಿಸುವಂಥ ಅತ್ಯುತ್ತಮ ಗುಣಮಟ್ಟದ ವೈವಿಧ್ಯಮಯ ವಸ್ತ್ರಗಳನ್ನು ಒಳಗೊಂಡಿದೆ.

    ಕೆಂಪೇಗೌಡ ರಸ್ತೆಯಲ್ಲಿರುವ ಮಳಿಗೆ ಒಂದು ಲಕ್ಷ ಚದರ ಅಡಿ ವಿಸ್ತೀರ್ಣದಲ್ಲಿ ಹಾಗೂ ಎಂಟು ಅಂತಸ್ತಿನ ಕಟ್ಟದಲ್ಲಿ ನಿರ್ಮಾಣವಾಗಿದ್ದು, ಕುಟುಂಬದ ಎಲ್ಲಾ ಸದಸ್ಯರಿಗೂ ಬೇಕಾದ ವಸ್ತ್ರಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಮಾರಾಟ ಮಾಡುತ್ತಿದೆ. ಅಲ್ಲದೇ ತಮ್ಮ ಮಾರಾಟ ಮಳಿಗೆಗೆ ಬರುವ ಗ್ರಾಹಕರಿಗೆ ಶುಲ್ಕ ರಹಿತ ವಾಹನ ಪಾರ್ಕಿಂಕ್ ವ್ಯವಸ್ಥೆಯನ್ನು ಮಾಡಿದ್ದು, ರಾಷ್ಟ್ರೀಯ ಹಬ್ಬಗಳು ಸೇರಿ ವಿವಿಧ ವಿಶೇಷ ಸನ್ನಿವೇಶದಲ್ಲಿ ರಿಯಾಯಿತಿ ಮಾರಾಟವನ್ನು ಏರ್ಪಡಿಸುತ್ತಾ ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜ್ಯೋತ್ಸವ ಭಾಷಣದಲ್ಲಿ ಶಿರಸಿಯ ಶಾಲೆಯನ್ನು ಹೊಗಳಿದ ಸಿಎಂ

    ರಾಜ್ಯೋತ್ಸವ ಭಾಷಣದಲ್ಲಿ ಶಿರಸಿಯ ಶಾಲೆಯನ್ನು ಹೊಗಳಿದ ಸಿಎಂ

    ಬೆಂಗಳೂರು: ಕರ್ನಾಟಕ ರಾಜ್ಯೋತ್ಸವದ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನನಗೆ ಮುಖ್ಯಮಂತ್ರಿಯಾಗಿ ಸಮಾರಂಭ ನಡೆಸುವ ಅವಕಾಶ ದೊರೆತಿತ್ತು. ಇದೀಗ ಮತ್ತೊಮ್ಮೆ ಈ ಭಾಗ್ಯವನ್ನು ಕನ್ನಡಾಂಬೆ ನನಗೆ ಈ ಅವಕಾಶ ಕರುಣಿಸಿದ್ದಾಳೆ. ಕನ್ನಡ ತಾಯಿಗೆ ನನ್ನ ನಮನ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ನಗರದ ಕಂಠೀರವ ಕ್ರೀಡಾಂಗಣದಲ್ಲಿ ಧ್ವಜರೋಹಣ ನಡೆಸಿ ಮಾತನಾಡಿದ ಅವರು, ಹಲವು ವಂಶಗಳು ಕಟ್ಟಿ ಬೆಳೆಸಿದ ಕನ್ನಡ ನಾಡು ತನ್ನದೇ ಆದ ರಾಜಕೀಯ ಅಸ್ಮಿತೆಯನ್ನು ಹೊಂದಿರುವ ಧನ್ಯಭೂಮಿಯಾಗಿದ್ದು, ಕನ್ನಡ ನಾಡಿನ ಮಣ್ಣಲ್ಲಿ ಮೂಡಿಬಂದ ಕದಂಬ, ಗಂಗ, ರಾಷ್ಟ್ರಕೂಟ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳೆಲ್ಲ ಇಡೀ ದಕ್ಷಿಣ ಭಾರತವನ್ನು ವ್ಯಾಪಿಸಿದಂತಹ ಕನ್ನಡ ಆಡಳಿತ ವ್ಯವಸ್ಥೆ ರೂಢಿಸಿದ್ದು ಕರ್ನಾಟಕದ ಹೆಮ್ಮೆ ಆಗಿದೆ. ಕರ್ನಾಟಕ ಬಹು ಹಿಂದಿನಿಂದಲೂ ಒಂದು ಪ್ರತ್ಯೇಕ ಪ್ರಭಾವಶಾಲಿ ಆಡಳಿತ ವ್ಯವಸ್ಥೆಯಾಗಿ ಬೆಳವಣಿಗೆ ಕಂಡಿದೆ ಎಂದು ಸಿಎಂ ಎಚ್‍ಡಿಕೆ ಹೇಳಿದರು.

    ಸಿಎಂ ಭಾಷಣದ ಪೂರ್ಣ ಪಠ್ಯ ಇಲ್ಲಿದೆ:
    ಕನ್ನಡ ನಾಡಿನವರು ಅಭಿಮಾನಿಗಳು, ಅತ್ಯುಗ್ರರು, ವಿವೇಕಿಗಳು, ಸುಭಟರು, ಕಾವ್ಯ ಪ್ರಯೋಗ ಮತಿಗಳು, ಮಿತಭಾಷಿಗಳು, ಅನ್ಯಧರ್ಮ ಹಾಗೂ ಪರರ ವಿಚಾರಗಳನ್ನು ಸಹಿಸಿಕೊಳ್ಳುವ ಚಿನ್ನದಂತಹ ಜನರು. ಇಪ್ಪತ್ತೈದು ಶತಮಾನಗಳಿಗೂ ಹೆಚ್ಚಿದ ತನ್ನ ಸುಧೀರ್ಘ ಚರಿತ್ರೆಯಲ್ಲಿ, ಶಕ್ತಿಶಾಲಿಯಾಗಿ ಉಳಿದು, ಬಾಳಿ ಬೆಳೆದು, ಮನುಕುಲದ ಭರವಸೆಯ ದೀಪ ಎಂಬ ಪ್ರಖ್ಯಾತಿ ಪಡೆದ ಕರ್ನಾಟಕ, ಬ್ರಿಟಿಷರ ಆಡಳಿತದಲ್ಲಿ ಹರಿದು ಹಂಚಿಹೋದದ್ದೊಂದು ದೌರ್ಭಾಗ್ಯ. ಆದರೆ ನಾಡನ್ನು ಮರಳಿ ಒಂದೇ ಛತ್ರದಡಿ ತಂದು ಕರ್ನಾಟಕದ ಗತ ವೈಭವವನ್ನು ಮರಳಿ ಕಂಡುಕೊಳ್ಳಬೇಕು ಎನ್ನುವ ಆಶಯದ ಮಹಾನ್ ಜನಾಂದೋಲನವೇ ಕರ್ನಾಟಕ ಏಕೀಕರಣ ಚಳವಳಿ. ಇಂದು ನಮ್ಮ ಕರ್ನಾಟಕ ರೂಪುಗೊಳ್ಳಲು ಈ ಚಳವಳಿಯೇ ಕಾರಣ.

    ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನಂತಹ ಮಹಾನ್ ಸಂಘಟನೆಗಳ ಮಾರ್ಗದರ್ಶನದಲ್ಲಿ ಅನೇಕ ಅಪ್ರತಿಮ ಸೇನಾನಿಗಳ ದಿಟ್ಟ ಹೋರಾಟದ, ಕೋಟಿ ಕೋಟಿ ಕನ್ನಡಿಗರ ತ್ಯಾಗ, ಬಲಿದಾನ, ಶಕ್ತಿಯ ಫಲವಾಗಿ ರೂಪುಗೊಂಡಿದ್ದು ಅಖಂಡ ಕರ್ನಾಟಕ. ಕನ್ನಡ ಚಳವಳಿಯ ಅಸಂಖ್ಯಾ ಹೋರಾಟಗಾರರಿಗೆ ನನ್ನ ನಮನ. ಅತ್ಯಂತ ಗರಿಮೆಯಿಂದ ಬಾಳಿದ ಕನ್ನಡ ಜೀವ ಸಂಸ್ಕೃತಿಯ ಉನ್ನತಿಯನ್ನು ಪುನ: ಸ್ಥಾಪಿಸಬೇಕೆನ್ನುವ ಅಂದಿನ ಹೋರಾಟಗಾರರ ಕನಸು, ಇಂದಿಗೂ ನನ್ನ ಅತ್ಯಂತ ಪ್ರೀತಿಯ ವಿಚಾರ. ಕನ್ನಡದ ಗರಿಮೆಯನ್ನು ಎಲ್ಲೆಡೆ ಪಸರಿಸಬೇಕು ಎನ್ನುವುದು ನನ್ನ ಬಹುದೊಡ್ಡ ಕನಸು.

    12 ವರ್ಷಗಳ ಹಿಂದೆ ಸುವರ್ಣ ಕರ್ನಾಟಕ ಸಂಭ್ರಮಾಚರಣೆಯ ದಿನದಂದು ನಾನು ನನ್ನ ಜನರಿಗೆ ನೀಡಿದ ವಚನ, ಬದ್ಧತೆಗಳು ಇನ್ನೂ ನನ್ನ ಮನಪಟಲದಲ್ಲಿ ಹಸಿರಾಗಿವೆ. ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಉಡಿಯಲ್ಲಿ ತುಂಬಿಕೊಂಡ, ಎರಡೂವರೆ ಸಾವಿರ ವರ್ಷಕ್ಕೂ ಹೆಚ್ಚು ಕಲಾವಧಿಯ ಇತಿಹಾಸದ ಹಿನ್ನೆಲೆ ಹೊಂದಿರುವ ಕರ್ನಾಟಕ ಮತ್ತು ಕನ್ನಡಭಾಷೆ ಇನ್ನಷ್ಟು ಪ್ರಜ್ವಲವಾಗಿ ಹೊಳೆಯಬೇಕಿದೆ. ಮುಂದಿನ ನೊಬೆಲ್ ಪ್ರಶಸ್ತಿ ಪಡೆಯುವ ಭಾರತದ ಲೇಖಕ-ಲೇಖಕಿ ಕನ್ನಡದವರೇ ಆಗಿರುತ್ತಾರೆ ಎಂಬ ವಿಶ್ವಾಸ ತುಂಬಿದ ಮಾತು ನನಗೆ ಬಹಳ ಇಷ್ಟವಾಗಿದೆ. ಇದೇ ಆತ್ಮವಿಶ್ವಾಸ ನನ್ನಲ್ಲಿಯೂ ಇದೆ.

    ಈ ಆತ್ಮ ವಿಶ್ವಾಸವನ್ನು ಹರಳುಗಟ್ಟಿಸುವ ಹಾದಿ ನಮ್ಮ ಕೈಯಲ್ಲಿಯೇ ಇದೆ. ಇದೇ ಕಾರಣಕ್ಕಾಗಿಯೇ ನಮ್ಮ ಸರ್ಕಾರಿ ಶಿಕ್ಷಣ ಸಂಸ್ಥೆಗಳ ಸುಧಾರಣೆ, ನವೀಕರಣ ಕಾರ್ಯಗಳನ್ನು ನಮ್ಮ ಸರ್ಕಾರ ಮೊದಲ ಆಧ್ಯತೆ ನೀಡಿದೆ. ಕರ್ನಾಟಕದ ಗುರು ಪರಂಪರೆಗೆ ತನ್ನದೇ ಆದ ಔನ್ನತ್ಯವಿದೆ. ಸರ್ಕಾರೀ ಶಿಕ್ಷಕ ವೃತ್ತಿಯನ್ನು ಜೀವನ ಮಾರ್ಗವಾಗಲ್ಲದೆ, ಅತ್ಯುತ್ತಮ ವ್ಯಕ್ತಿತ್ವಗಳನ್ನು ಬೆಳೆಸುವ ಅರ್ಥಪೂರ್ಣ ಸಾಧನವಾಗಿ ಪರಿಗಣಿಸಿದ ಅನೇಕ ಅದ್ಭುತ ಶಿಕ್ಷಕರನ್ನು ನಾನು ನೋಡಿದ್ದೇನೆ. ಧನ್ಯಭಾವ ಅನುಭವಿಸಿದ್ದೇನೆ. ಅಂತರರಾಷ್ಟ್ರೀಯ ಖ್ಯಾತಿಯ ಸಂಶೋಧಕ ಭಾರತರತ್ನ ಪ್ರೊ ಸಿ.ಎನ್.ಆರ್.ರಾವ್ ಅವರು ಓದಿದ್ದು, ಹಳ್ಳಿಯ ಪ್ರಾಥಮಿಕ ಶಾಲೆಯಲ್ಲಿಯೇ ಎನ್ನುವ ಒಂದು ಉದಾಹರಣೆ ಸಾಕು.

    ಶಿರಸಿಯ ಮಾರಿಕಾಂಬಾ ಸರ್ಕಾರಿ ಶಾಲೆ ಸಾಧಿಸಿರುವ ಅತ್ಯುತ್ತಮ ಗುಣಮಟ್ಟದ ದಾಖಲೆ ಸದಾ ನನ್ನನ್ನು ಆವರಿಸಿ, ನಮ್ಮ ಪ್ರತಿಶಾಲೆಯೂ ಈ ಮಟ್ಟಕ್ಕೆ ಏರುವಂತೆ ಪ್ರಯತ್ನಿಸಬಾರದೇಕೆ? ಎನ್ನುವ ಪ್ರಶ್ನೆ ಮೂಡುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿಯನ್ನು ಹಿಂದಿಕ್ಕಿ ದಾಖಲೆ ಎನಿಸುವಂತೆ ತನ್ನ ವಿದ್ಯಾರ್ಥಿ ಸಂಖ್ಯೆಯನ್ನು ಏರಿಸಿಕೊಂಡಿರುವ ಈ ಶಾಲೆಯ ಪ್ರಗತಿಗೆ ಅಲ್ಲಿನ ಶಿಕ್ಷಕವರ್ಗದ ಕೊಡುಗೆ ಕೂಡ ಪ್ರಮುಖ ಕಾರಣ ಎಂದು ನಾನು ಬಲ್ಲೆ. ಇದೇ ಮಟ್ಟಕ್ಕೆ ನಮ್ಮ ಎಲ್ಲ ಸರ್ಕಾರಿ ಶಿಕ್ಷಣ ಸಂಸ್ಥೆಗಳು ಬರಬೇಕೆನ್ನುವುದು ನನ್ನ ಮಹದಾಸೆ. ಇದಕ್ಕೆ ಬೇಕಾದ ಎಲ್ಲ ನೆರವನ್ನೂ ನೀಡಲು ಸರ್ಕಾರ ಸಿದ್ಧವಾಗಿದೆ. ನಮ್ಮ ಶಿಕ್ಷಣ ಸಂಸ್ಥೆಗಳ ಗುಣಮಟ್ಟ, ಮೂಲಭೂತ ಸೌಲಭ್ಯ ವೃದ್ಧಿಯ ವಿಚಾರದಲ್ಲಿ ಯಾವುದೇ ರಾಜಿಯನ್ನೂ ಮಾಡಿಕೊಳ್ಳದೆ ಮುಂದುವರೆಯಲು ಸರ್ಕಾರ ಬದ್ಧವಾಗಿದೆ.

    ಇಂದಿನಿಂದ ರಾಜ್ಯದಲ್ಲಿ ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಒಟ್ಟು 153 ವಿಶೇಷ ಚೇತನ ಮಕ್ಕಳ ಶಾಲೆಗಳಲ್ಲಿ ಕಲಿಯುತ್ತಿರುವ ಒಟ್ಟು 10,567 ವಿಶೇಷಚೇತನ ಮಕ್ಕಳಿಗೂ ಬಿಸಿಹಾಲು ವಿತರಿಸುವ ಕಾರ್ಯಕ್ರಮವನ್ನು ಪ್ರಾರಂಭಿಸುತ್ತಿದ್ದೇವೆ. ಒಟ್ಟು 58 ಲಕ್ಷ 30 ಸಾವಿರಕ್ಕೂ ಹೆಚ್ಚು ಮಕ್ಕಳು ಬಿಸಿಹಾಲು ವಿತರಿಸುವ ವ್ಯವಸ್ಥೆಯಿಂದ ಲಾಭಪಡೆಯುತ್ತಿದ್ದಾರೆ. ಶಿಕ್ಷಣ ಇಲಾಖೆಯ ಸಮಗ್ರ ಸುಧಾರಣೆಗಾಗಿ, ಸರ್ಕಾರಿ ಶಾಲಾ ಕಾಲೇಜು ಕಟ್ಟಡಗಳ ನವೀಕರಣ ಹಾಗೂ ನಿರ್ಮಾಣಕ್ಕಾಗಿ ಈಗಾಗಲೇ ನೀಡಿರುವ 1,200 ಕೋಟಿ ರೂ.ಗಳ ಅನುದಾನ ನನ್ನ ಮಾತಿಗೆ ಸಾಕ್ಷಿ. ಆದರೆ ನಮ್ಮ ಶಿಕ್ಷಕ ವೃಂದ ಕೂಡ ಈ ದಿಸೆಯಲ್ಲಿ ಇನ್ನಷ್ಟು ಶ್ರಮ ಹಾಕಬೇಕಿದೆ. ನಮ್ಮ ಶಾಲಾ ಕಾಲೇಜುಗಳು ಶಿಕ್ಷಣ ದೇಗುಲಗಳಾದಾಗ ನೋಬೆಲ್ ಸಾಹಿತ್ಯ ಪುರಸ್ಕಾರ ನಮಗೊಲಿವ ದಿನ ದೂರವಿರಲಾರದು.

    ಜನತಾದರ್ಶನದಲ್ಲಿ ನಾನು ಕಂಡುಕೊಂಡ ಮತ್ತೊಂದು ಸತ್ಯವೆಂದರೆ, ನಮ್ಮ ಯುವ ಉದ್ಯೋಗಾವಕಾಂಕ್ಷಿಗಳಲ್ಲಿ ಕೌಶಲ್ಯದ ಕೊರತೆ ಮತ್ತು ಸಂವಹನ ಸಮಸ್ಯೆ. ಈ ಯುವಜನರಿಗಾಗಿ ಸರ್ಕಾರ 53 ಕಂಪನಿಗಳ ಸಹಯೋಗದೊಂದಿಗೆ ಉದ್ಯೋಗ ಮೇಳವನ್ನು ನಡೆಸಿತು. ಯುವಜನರ ಪ್ರತಿಭೆಗೆ ಸಾಣೆ ನೀಡಲು ಮೂರು ಕೌಶಲ್ಯಾಧಾರಿತ ವಿಶ್ವವಿದ್ಯಾನಿಲಯಗಳ ಸ್ಥಾಪನೆಗೂ ಕ್ರಮ ಕೈಗೊಂಡಿದ್ದೇವೆ. ಕನ್ನಡವೇ ಪ್ರಾಣಪದಕ ಎಂದು ನಾವು ಭಾವಿಸಿರುವುದು ನಿಜ. ಆದರೆ ನಮ್ಮ ಮಕ್ಕಳ ಭವಿಷ್ಯದ ದೃಷ್ಟಿಯೂ ನಮಗೆ ಮುಖ್ಯ. ನಮ್ಮ ಮಕ್ಕಳು, ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳು ತಮ್ಮ ಕೀಳರಿಮೆಯ ಭಾವದಿಂದ ಹೊರಬಂದು ಎಲ್ಲರಂತೆ ಜೀವನವನ್ನು ಎದುರಿಸಬೇಕು ಎನ್ನುವುದು ನಮ್ಮ ಉದ್ದೇಶ. ಸರ್ಕಾರಿ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಭಾಷೆಯನ್ನು ಕಲಿಸುವ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವ ಪ್ರಯತ್ನ ಮಾಡುತ್ತಿದ್ದೇವೆ. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಒಂದನೇ ತರಗತಿಯಿಂದ ಇಂಗ್ಲಿಷ್ ಕಲಿಸುವ ಆಶಯಕ್ಕೆ ಅಲ್ಲಲ್ಲಿ ಅಪಸ್ವರಗಳು ಬರುತ್ತಿರುವುದನ್ನು ಗಮನಿಸಿದ್ದೇನೆ.

    ಇಂಗ್ಲಿಷ್ ಕಲಿಕೆ ಕನ್ನಡದ ಸಾರ್ವಭೌಮತ್ವದ ಮೇಲೆ ಸವಾರಿ ಮಾಡಲು ನಾವು ಸರ್ವಥಾ ಅವಕಾಶ ನೀಡುವುದಿಲ್ಲ. ಇಂಗ್ಲಿಷ್ ಕಲಿಸುವ ನಮ್ಮ ಉದ್ದೇಶ ಕೇವಲ ವ್ಯಾವಹಾರಿಕ ದೃಷ್ಟಿಗೆ ಮಾತ್ರ ಸೀಮಿತ. ಇದರಂತೆಯೇ ಜಾನಪದ ಜಾತ್ರೆಯನ್ನು ಚಿರನೂತನವಾಗಿಸುವ ಕನಸು ಕೂಡ ನನ್ನದು. ಈ ಜನಪದ ಜಾತ್ರೆಗಳು, ನಗರ ಹಾಗೂ ಗ್ರಾಮೀಣ ಜಾನಪದ ಸಂಸ್ಕೃತಿಗಳ ನಡುವೆ ಸ್ನೇಹ ಸೇತುವೆ ಕಟ್ಟಲಿವೆ. ಜೊತೆಯಲ್ಲಿಯೇ ನಮ್ಮ ಜಾನಪದ ಕಲಾವಿದರ ಪ್ರತಿಭೆಯನ್ನು ವಿವಿಧ ವೇದಿಕೆಗಳಲ್ಲಿ ಪ್ರದರ್ಶಿಸಲು ಒಂದು ಅತ್ಯುತ್ತಮ ಅವಕಾಶವನ್ನು ಒದಗಿಸಲಿದೆ. ಸಾಹಿತ್ಯಿಕವಾಗಿ, ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಸಮೃದ್ಧವಾದ ಒಂದು ಸುಂದರ ಕರ್ನಾಟಕ ಕಟ್ಟುವುದು ನನ್ನ ಕನಸು. ಈ ಕನಸಿನ ಸಾಕಾರಕ್ಕೆ ದುಡಿಯುವುದು ನನ್ನ ಸಂಕಲ್ಪ. ಸರ್ವಜನಾಂಗದ ಶಾಂತಿಯ ತೋಟವಾಗಿ ಕಂಗೊಳಿಸಿದ ಕರ್ನಾಟಕ ಮುಂದಿನ ದಿನಗಳಲ್ಲಿಯೂ ಎಲ್ಲ ಜಾತಿ, ಧರ್ಮ, ಶ್ರದ್ಧೆಗಳ ಜನರೂ ಸಾಮರಸ್ಯದಿಂದ ಬದುಕುವ ಒಂದು ಸುಂದರ ತೋಟವಾಗಿಯೇ ಉಳಿಯಬೇಕು. ಹಿಂದು, ಕ್ರೈಸ್ತ, ಮುಸಲ್ಮಾನ, ಪಾರಸಿಕ ಜೈನರ ಉದ್ಯಾನವಾದ ಕರ್ನಾಟಕದ ಹಿರಿಮೆಗೆ ಎಂದಿಗೂ ಕುಂದು ಬರಬಾರದು. ಇದು ನಮ್ಮ ಕರ್ತವ್ಯ ಮತ್ತು ಈ ಸಂದರ್ಭದಲ್ಲಿ ನಾವು ಕೈಗೊಳ್ಳಬೇಕಾದ ಪ್ರಮಾಣ ಕೂಡ. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು ಸಿರಿಗನ್ನಡಂ ಗೆಲ್ಗೆ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv