Tag: ಕನಿಕಾ ಕಪೂರ್

  • ಪ್ಲಾಸ್ಮಾ ನೀಡಿ ಜೀವ ಉಳಿಸಲು ಮುಂದಾದ ಗಾಯಕಿ

    ಪ್ಲಾಸ್ಮಾ ನೀಡಿ ಜೀವ ಉಳಿಸಲು ಮುಂದಾದ ಗಾಯಕಿ

    ನವದೆಹಲಿ: ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಕೊರೊನಾ ಸೋಂಕು ತಗುಲಿದ ನಂತರ ಸ್ವಯಂ ದಿಗ್ಬಂಧನ ವಿಧಿಸಿಕೊಳ್ಳದೆ, ಹಲವು ಗಣ್ಯರು ಭಾಗವಹಿಸಿದ್ದ ಸಮಾರಂಭದಲ್ಲಿ ಪಾಲ್ಗೊಳ್ಳುವ ಮೂಲಕ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಇದೀಗ ಜನರೇ ಕೊಂಡಾಡುವ ಕೆಲಸ ಮಾಡುತ್ತಿದ್ದು, ಜೀವ ಉಳಿಸುವ ನಿರ್ಧಾರ ಕೈಗೊಂಡಿದ್ದಾರೆ.

    ಹೌದು, ರಾಜಕಾರಣಿಗಳೂ ಸೇರಿದಂತೆ ಗಣ್ಯಾತಿಗಣ್ಯರು ಭಾಗವಹಿಸಿದ್ದ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಕನಿಕಾ ಕಪೂರ್ ವಿಪರೀತ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ ನಂತರ ಈ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಸ್ಪಷ್ಟನೆಯನ್ನೂ ನೀಡಿದ್ದರು. ಆದರೂ ನೆಟ್ಟಿಗರು ಇದನ್ನು ಒಪ್ಪಿರಲಿಲ್ಲ. ಇದೀಗ ಎಲ್ಲರೂ ತಿರುಗಿ ನೋಡುವಂತೆ ಅವರು ಮಾಡಿದ್ದು, ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.

    ಕೊರೊನಾ ಸೋಂಕಿತ ವ್ಯಕ್ತಿ ಬಹುಬೇಗ ಗುಣಮುಖರಾಗಲು ಅತ್ಯುತ್ತಮ ಮಾರ್ಗ ಪ್ಲಾಸ್ಮಾ ಥೆರಪಿ ಮಾಡುವುದು. ಇದರಿಂದಾಗಿ ಕೊರೊನಾ ಸೋಂಕಿತ ವ್ಯಕ್ತಿ ಬೇಗನೇ ಗುಣಮುಖರಾಗುತ್ತಾರೆ ಎಂಬುದು ಈಗಾಗಲೇ ದೆಹಲಿಯಲ್ಲಿ ನಡೆದ ಪರೀಕ್ಷೆಯಲ್ಲಿ ಬಹುತೇಕ ಸಾಬೀತಾಗಿದೆ. ಹೀಗಾಗಿ ಇತರ ರಾಜ್ಯಗಳೂ ಈ ನಿಯಮ ಪಾಲಿಸುತ್ತಿದ್ದು, ಪ್ಲಾಸ್ಮಾ ಥೆರಪಿಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಹ ಕೊರೊನಾ ಸೋಂಕಿತ ರೋಗಿಯನ್ನು ಬೇಗ ಗುಣಪಡಿಸಲು ಪ್ಲಾಸ್ಮಾ ಥೆರಪಿ ಅಗತ್ಯ ಎಂದಿದ್ದಾರೆ. ಅಲ್ಲದೆ ಕೊರೊನಾದಿಂದ ಗುಣಮುಖರಾದ ಎಲ್ಲರೂ ಪ್ಲಾಸ್ಮಾ ದಾನ ಮಾಡುವ ಮೂಲಕ ಇತರ ಸೋಂಕಿತರು ಗುಣಮುಖರಾಗಲು ಸಹಾಯ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

    ಈ ಎಲ್ಲ ಬೆಳವಣಿಗೆ ನಡುವೆ ಗಾಯಕಿ ಕನಿಕಾ ಕಪೂರ್ ಪ್ಲಾಸ್ಮಾ ದಾನ ಮಾಡಲು ಮುಂದಾಗಿದ್ದು, ಅಗತ್ಯವಿರುವವರಿಗೆ ಪ್ಲಾಸ್ಮಾ ನೀಡಲು ಸಿದ್ಧ. ಕೊರೊನಾದಿಂದ ಗುಣಮುಖರಾಗಿರುವ ಮೂವರು ಈಗಾಗಲೇ ಪ್ಲಾಸ್ಮಾ ದಾನ ನೀಡಿದ್ದು, ಹೀಗಾಗಿ ನಾನೂ ಪ್ಲಾಸ್ಮಾ ನೀಡಲು ನಿರ್ಧಾರ ಮಾಡಿದ್ದೇನೆ. ಈಗಾಗಲೇ ರಕ್ತ ಪರೀಕ್ಷೆ ನಡೆಸಲಾಗಿದ್ದು, ವರದಿಯಲ್ಲಿ ಎಲ್ಲವೂ ಸರಿಯಾಗಿದ್ದರೆ ಪ್ಲಾಸ್ಮಾ ದಾನ ಮಾಡುವುದಾಗಿ ತಿಳಿಸಿದ್ದಾರೆ.

    ಕನಿನಾ ಕಪೂರ್ ಅವರಿಗೆ ಕೊರೊನಾ ಸೋಂಕು ತಗುಲಿರುವುದು ಮಾರ್ಚ್ 20ರಂದು ದೃಢಪಟ್ಟಿತ್ತು. ಇದಾದ ಬಳಿಕ ಕೊರೊನಾ ವೈರಸ್ ಕುರಿತು ಕನಿಕಾ ನಿರ್ಲಕ್ಷ್ಯ ವಹಿಸಿದ್ದಾರೆ. ಇಂಗ್ಲೆಂಡ್‍ನಿಂದ ಮರಳಿದ ಮೇಲೆ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿಲ್ಲ ಎಂಬ ಆರೋಪ ಕೇಳಿ ಬಂದಿತ್ತು. ಇದಾದ ಬಳಿಕ ಗಾಯಕಿ ಸ್ಪಷ್ಟನೆ ನೀಡಿದ್ದರು.

  • 16 ದಿನಗಳ ಬಳಿಕ ಕನಿಕಾ ಕಪೂರ್ ಡಿಸ್ಚಾರ್ಜ್

    16 ದಿನಗಳ ಬಳಿಕ ಕನಿಕಾ ಕಪೂರ್ ಡಿಸ್ಚಾರ್ಜ್

    ಲಕ್ನೋ: ಕೊರೊನಾ ಸೋಂಕಿಗೆ ತುತ್ತಾಗಿದ್ದ ಬಾಲಿವುಡ್ ಗಾಯಕಿ, ಕನಿಕಾ ಕಪೂರ್ 16 ದಿನಗಳ ಬಳಿಕ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಕೊರೊನಾ ಸೋಂಕಿಗೆ ಒಳಗಾಗಿದ್ದ ಗಾಯಕಿಗೆ ಲಕ್ನೋನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.

    ಆರನೇ ವರದಿ ನಗೆಟಿವ್ ಬಂದ ಹಿನ್ನೆಲೆಯಲ್ಲಿ ಇಂದು ಸಂಜಯ್ ಗಾಂಧಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಆದ್ರೆ ಮುಂದಿನ 14 ದಿನ ಮನೆಯಲ್ಲಿ ಎಲ್ಲರೊಂದಿಗೆ ಅಂತರ ಕಾಯ್ದುಕೊಂಡು ಕ್ವಾರಂಟೈನ್ ನಲ್ಲಿರುವಂತೆ ವೈದ್ಯರು ಸೂಚಿಸಿದ್ದಾರೆ. ಕನಿಕಾ ಕಪೂರ್ ಗೆ ಕೊರೊನಾ ಸೋಂಕು ತಗುಲಿರೋದು ಮಾರ್ಚ್ 20ರಂದು ದೃಢಪಟ್ಟಿತ್ತು. ಅಂದಿನಿಂದಲೇ ಐಸೋಲೇಷನ್ ವಾರ್ಡಿನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಮಾರ್ಚ್ 30ರ ನಂತರ ಕನಿಕಾ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿತ್ತು.

    ಕನಿಕಾ ವಿರುದ್ಧ ಎಫ್‍ಐಆರ್: ಕೊರೊನಾ ವಿರುದ್ಧದ ಹೋರಾಟದಲ್ಲಿ ಜಯಗಳಿಸಿರುವ ಕನಿಕಾಗೆ ಬಂಧನದ ಭೀತಿ ಎದುರಾಗಿದೆ. ಲಕ್ನೋ ಸಿಟಿಯ ಸರೋಜಿನಿ ನಗರ ಪೊಲೀಸ್ ಠಾಣೆಯಲ್ಲಿ ಕನಿಕಾ ಕಪೂರ್ ವಿರುದ್ಧ ಐಪಿಸಿ ಸೆಕ್ಷನ್ 188, 269 ಮತ್ತು 270ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಕೊರೊನಾಗೆ ಸಂಬಂಧಿಸಿದ ಮುಂಜಾಗ್ರತ ಕ್ರಮಗಳನ್ನು ಪಾಲಿಸದಿರುವುದು ಮತ್ತು ನಿರ್ಲಕ್ಷ್ಯ ಆರೋಪದಡಿಯಲ್ಲಿ ಮೂರು ಪ್ರಕರಣಗಳು ದಾಖಲಾಗಿವೆ.

    ಕೊರೊನಾ ಲಕ್ಷಣಗಳು ಕಾಣಿಸಿಕೊಂಡಿದ್ದರೂ ಕನಿಕಾ ಕಪೂರ್ ಕೆಲ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಮಾರ್ಚ್ 9ರಂದು ಲಂಡನ್ ನಿಂದ ಬಂದಿದ್ದ ಕನಿಕಾ, ಲಕ್ನೊ ನಗರದ ಅಪಾರ್ಟ್ ಮೆಂಟ್ ನಲ್ಲಿ ಉಳಿದುಕೊಂಡಿದ್ದರು. ಈ ಅಪಾರ್ಟ್ ಮೆಂಟ್‍ನಲ್ಲಿ 700 ಕುಟುಂಬಗಳು ವಾಸವಾಗಿದ್ದರಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇಷ್ಟು ಮಾತ್ರ ಅಲ್ಲದೇ ಲಕ್ನೋದಲ್ಲಿರುವ ತಾಜ್ ಹೋಟೆಲ್ ನಲ್ಲಿ ಕಾಂಗ್ರೆಸ್ ಮಾಜಿ ಸಂಸದ ಜಿತಿನ್ ಪ್ರಸಾದ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

    ಈ ಪಾರ್ಟಿಯಲ್ಲಿ ರಾಜಸ್ಥಾನದ ಮಾಜಿ ಸಿಎಂ ವಸುಂಧರಾ ರಾಜೆ, ಪುತ್ರ ದುಷ್ಯಂತ ಸಿಂಗ್, ಉತ್ತರ ಪ್ರದೇಶದ ಆರೋಗ್ಯ ಮಂತ್ರಿ ಜಯಪ್ರತಾಪ್ ಸೇರಿದಂತೆ ಹಲವು ರಾಜಕೀಯ ಪ್ರಮುಖರು ಭಾಗಿಯಾಗಿದ್ದರು. ಹಾಗಾಗಿ ಕನಿಕಾ ಕೊರೊನಾ ಪ್ರಕರಣ ದೊಡ್ಡ ಆತಂಕವನ್ನೇ ಸೃಷ್ಟಿಸಿತ್ತು. ಕನಿಕಾ ಜೊತೆ ಸಂಪರ್ಕದಲ್ಲಿದ್ದ 45 ಜನರ ವರದಿ ನೆಗೆಟಿವ್ ಬಂದಿದ್ದು, ಮೂರು ನಾಯಕರನ್ನು ಐಸೋಲೇಷನ್ ಮಾಡಲಾಗಿದೆ. ಇನ್ನು ಆರೋಗ್ಯ ಮಂತ್ರಿಯವರ ಸಂಪರ್ಕದಲ್ಲಿದ್ದ 50ಕ್ಕೂ ಅಧಿಕ ಜನರ ಗಂಟಲು ದ್ರವದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ.

  • ದಕ್ಷಿಣ ಆಫ್ರಿಕಾ ತಂಡ ಉಳಿದಿದ್ದ ಹೋಟೆಲಿನಲ್ಲಿಯೇ ಕನಿಕಾ ವಾಸ್ತವ್ಯ

    ದಕ್ಷಿಣ ಆಫ್ರಿಕಾ ತಂಡ ಉಳಿದಿದ್ದ ಹೋಟೆಲಿನಲ್ಲಿಯೇ ಕನಿಕಾ ವಾಸ್ತವ್ಯ

    ಮುಂಬೈ: ಕೊರೊನಾ ಸೋಂಕಿಗೆ ಒಳಗಾಗಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಉಳಿದುಕೊಂಡಿದ್ದ ಹೋಟೆಲಿನಲ್ಲಿಯೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡ ವಾಸ್ತವ್ಯ ಹೂಡಿತ್ತು.

    ಲಕ್ನೋ ನಗರದ ಫೈವ್ ಸ್ಟಾರ್ ಹೋಟೆಲಿನಲ್ಲಿ ಮಾರ್ಚ್ 14 ರಿಂದ 16ರವರೆಗೆ ಉಳಿದುಕೊಂಡಿದ್ದರು. ಎರಡನೇ ಏಕದಿನ ಪಂದ್ಯ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ತಂಡದ ಎಲ್ಲ ಸದಸ್ಯರು ಪ್ರತ್ಯೇಕ ಕೋಣೆಗಳಲ್ಲಿಯೇ ಉಳಿದುಕೊಂಡಿದ್ದರು. ಕೊರೊನಾ ಆತಂಕದಿಂದ ಪಂದ್ಯ ರದ್ದಾಗಿದ್ದರಿಂದ ತಂಡದ ಸದಸ್ಯರು ತಮ್ಮ ದೇಶಕ್ಕೆ ಹಿಂದಿರುಗಿದ್ದಾರೆ. ಕನಿಕಾ ಸಹ ಅದೇ ಹೋಟೆಲಿನಲ್ಲಿ ಉಳಿದುಕೊಂಡಿರುವ ವಿಷಯ ಬಹಿರಂಗಗೊಳ್ಳುತ್ತಿದ್ದಂತೆ ಕ್ರಿಕೆಟ್ ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.

    ಮಾರ್ಚ್ 14ರಿಂದ 16ರವರೆಗೆ ಹೋಟೆಲಿನಲ್ಲಿ ಉಳಿದುಕೊಂಡಿದ್ದ ಕನಿಕಾ, ಅಲ್ಲಿಯ ಲಬಿಯಲ್ಲಿ ಊಟ ಸಹ ಮಾಡಿದ್ದರು. ಜೊತೆಗೆ ಹೋಟೆಲಿನಲ್ಲಿ ಅನೇಕರನ್ನು ಭೇಟಿಯಾಗಿದ್ದರು. ಈ ಸಂಬಂಧ ಉತ್ತರ ಪ್ರದೇಶದ ಆರೋಗ್ಯ ಇಲಾಖೆ ಹೋಟೆಲಿನಲ್ಲಿರುವ ಸಿಸಿಟಿವಿ ದೃಶ್ಯಾವಳಿಗಳ ಮೂಲಕ ಪರಿಶೀಲನೆ ನಡೆಸುತ್ತಿದೆ. ಸಿಸಿಟಿವಿ ದೃಶ್ಯಗಳ ಮೂಲಕ ಕನಿಕಾ ಭೇಟಿ ಮಾಡಿದ ಜನರನ್ನು ಪತ್ತೆ ಹಚ್ಚುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಕನಿಕಾ ನಿವಾಸದ ಪರಿಸರದಲ್ಲಿ ವಾಸವಾಗಿರುವ ಸುಮಾರು 22 ಸಾವಿರ ಜನರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿ, ಮುಂಜಾಗೃತ ಕ್ರಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

    ಮಾರ್ಚ್ 9ರಂದ ಲಂಡನ್ ನಿಂದ ಹಿಂದಿರುಗಿದ್ದ ಕನಿಕಾ, ಲಕ್ನೋ ನಗರದ ಅಪಾರ್ಟ್ ಮೆಂಟಿನಲ್ಲಿ ಉಳಿದುಕೊಂಡಿದ್ದರು. ಇಲ್ಲಿ ಒಟ್ಟು 700 ಕುಟುಂಬಗಳು ವಾಸವಾಗಿವೆ. ಮಾರ್ಚ್ 15ರಂದು ತಾಜ್ ಹೋಟೆಲಿನಲ್ಲಿ ಕಾಂಗ್ರೆಸ್ ಮಾಜಿ ಸಂಸದ ಜಿತಿನ್ ಪ್ರಸಾದ್ ಸಂಬಂಧಿ ಆದೇಶ್ ಸೇಠ್ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಹಲವು ರಾಜಕಾರಣಿಗಳು ಸೇರಿದಂತೆ ಕನಿಕಾ ಕಪೂರ್ ಭಾಗಿಯಾಗಿದ್ದರು. ಇದರಲ್ಲಿ 45 ಜನರದ್ದು ನೆಗಟಿವ್ ರಿಪೋರ್ಟ್ ಬಂದಿದ್ದು, ಮೂವರನ್ನು ಐಸೋಲೇಶನ್ ನಲ್ಲಿರಿಸಲಾಗಿದೆ.

  • ಕನಿಕಾ ಪಾರ್ಟಿಯಲ್ಲಿ ವಸುಂಧರಾ, ದುಶ್ಯಂತ್ ಭಾಗಿ – ಸಂಸತ್ ಕಲಾಪಕ್ಕೂ ಹಾಜರ್

    ಕನಿಕಾ ಪಾರ್ಟಿಯಲ್ಲಿ ವಸುಂಧರಾ, ದುಶ್ಯಂತ್ ಭಾಗಿ – ಸಂಸತ್ ಕಲಾಪಕ್ಕೂ ಹಾಜರ್

    – ಕನಿಕಾ ಕಪೂರ್‌ಗೆ ಕೊರೊನಾ ಸೋಂಕು
    – ಸಂಸತ್ತಿನಲ್ಲಿ ಹಲವು ಸದಸ್ಯರನ್ನು ಸಂಪರ್ಕಿಸಿದ್ದ ದುಶ್ಯಂತ್

    ನವದೆಹಲಿ: ಬಾಲಿವುಡ್ ಗಾಯಕಿ ಕನಿಕಾ ಕಪೂರ್‍ಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ವಸುಂಧರಾ ರಾಜೇ ಮತ್ತು ಪುತ್ರ ಸಂಸದ ದುಶ್ಯಂತ್ ಸಿಂಗ್ ಈಗ ಜನಸಂಪರ್ಕದಿಂದ ಪ್ರತ್ಯೇಕಗೊಂಡಿದ್ದಾರೆ.

    41 ವರ್ಷದ ಕನಿಕಾ ಕಪೂರ್ ಮಾರ್ಚ್ 9 ರಂದು ಲಂಡನ್‍ನಿಂದ ಮುಂಬೈಗೆ ಆಗಮಿಸಿದ್ದರು. ಬಳಿಕ ಲಕ್ನೋದಲ್ಲಿ ಆಯೋಜನೆಗೊಂಡಿದ್ದ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ 200ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು. ಈ ಪಾರ್ಟಿಯಲ್ಲಿ ವಸುಂಧರ ರಾಜೇ ಮತ್ತು ಅವರ ಪುತ್ರ ದುಶ್ಯಂತ್ ಮತ್ತು ಅವನ ಮಾವ ಭಾಗಿಯಾಗಿದ್ದರು. ಈ ಪಾರ್ಟಿಯಲ್ಲಿ ಭಾಗಿಯಾದ ಬಳಿಕ ದುಶ್ಯಂತ್ ಸಿಂಗ್ ಸಂಸತ್ ಕಲಾಪಕ್ಕೆ ಹಾಜರಾಗಿದ್ದು ಹಲವು ಸದಸ್ಯರು ಇವರ ಸಂಪರ್ಕಕ್ಕೆ ಬಂದಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ವಸುಂಧರಾ ರಾಜೇ ಅವರು, ಲಖನೌದಲ್ಲಿ ಒಂದು ಡಿನ್ನರ್ ಪಾರ್ಟಿಗೆ ನಾನು ನನ್ನ ಮಗ ದುಶ್ಯಂತ್ ಮತ್ತು ಅವನ ಮಾವ ರಾತ್ರಿ ಹೋಗಿದ್ದೆವು. ದುರದೃಷ್ಟವಶಾತ್ ಇಂದು ಕೊರೊನಾ ಇರುವುದು ದೃಢಪಟ್ಟಿರುವ ಗಾಯಕಿ ಕನಿಕಾ ಸಹ ಅಲ್ಲಿಗೆ ಅತಿಥಿಯಾಗಿ ಬಂದಿದ್ದರು. ವಿಷಯ ತಿಳಿದ ಕೂಡಲೇ ಮುನ್ನೆಚ್ಚರಿಕೆ ಕ್ರಮವಾಗಿ ನಾನು ಮತ್ತು ನನ್ನ ಮಗ ಸ್ವತಃ ಪ್ರತ್ಯೇಕವಾಗಿ ವಾಸಿಸಲು ಆರಂಭಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಅಂದು ಕನಿಕಾ ಕಪೂರ್ ಅತಿಥಿಯಾಗಿದ್ದ ಕಾರ್ಯಕ್ರಮಕ್ಕೆ ಲಕ್ನೋದ ಪ್ರಮುಖ ವ್ಯಕ್ತಿಗಳು, ಸಚಿವರು ಹಾಗೂ ಅಧಿಕಾರಿಗಳು ಬಂದಿದ್ದರು. ಮೂಲಗಳ ಪ್ರಕಾರ ಸುಮಾರು 200 ಜನರು ಕಾರ್ಯಕ್ರಮದಲ್ಲಿ ಸೇರಿದ್ದರು. ಮಾರ್ಚ್ 9ರಂದು ಕನಿಕಾ ಲಂಡನ್‍ನಿಂದ ಮುಂಬೈಗೆ ಬಂದಿದ್ದರು. ಇದಾದ ಎರಡು ದಿನಗಳ ನಂತರ ಲಕ್ನೋಗೆ ತೆರಳಿದ್ದರು. ಲಕ್ನೋದಲ್ಲಿ ಮಾರ್ಚ್ 15ರಂದು ನಡೆದಿದ್ದ ಕಾರ್ಯಕ್ರಮದಲ್ಲಿ ವಸುಂಧರಾ ರಾಜೇ, ದುಶ್ಯಂತ್ ಸಿಂಗ್ ಸೇರಿದಂತೆ ಹಲವರು ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸೇರಿಕೊಂಡಿದ್ದರು.

    ಈ ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ದುಶ್ಯಂತ್ ಸಿಂಗ್ ಉತ್ತರ ಪ್ರದೇಶ ಮತ್ತು ರಾಜಸ್ತಾನದ ಸಂಸದರ ನಿಯೋಗದ ಅಂಗವಾಗಿ ಬುಧವಾರ ರಾಷ್ಟ್ರಪತಿಯನ್ನು ಭೇಟಿಯಾಗಿದ್ದರು. ಶುಕ್ರವಾರ ಅವರನ್ನು ಭೇಟಿಯಾದ ಮಾಜಿ ಕೇಂದ್ರ ಸಚಿವ ಅನುಪ್ರಿಯಾ ಪಟೇಲ್, ಕಾಂಗ್ರೆಸ್ಸಿನ ಜಿತಿನ್ ಪ್ರಸಾದ್ ಮತ್ತು ದೀಪಿಂದರ್ ಹೂಡಾ ಅವರು ಅವರ ಮನೆಯಲ್ಲೇ ಐಸೋಲೇಟೆಡ್ ಆಗಿದ್ದಾರೆ.

    ಲಕ್ನೋ ಕಾರ್ಯಕ್ರಮ ಮುಗಿದ ನಂತರ ದುಶ್ಯಂತ್ ಸಿಂಗ್ ಅವರು ಸಂಸತ್ತಿಗೆ ಹೋಗಿದ್ದರು. ಈ ವಿಚಾರವಾಗಿ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ಮುಖಂಡ ಡೆರಿಕ್ ಓಬ್ರೀನ್, ಸ್ವತಃ ಪ್ರತ್ಯೇಕವಾಗಿ ಎಚ್ಚರಿಕೆಯ ನಡೆ ಅನುಸರಿಸುವಂತೆ ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ ದೇಶದಲ್ಲಿ ಸಂಸತ್ತು ಕಾರ್ಯನಿರ್ವಹಿಸುತ್ತಿದೆ. ಸಂಸತ್ ಅಧಿವೇಶನವನ್ನು ಮುಂದೂಡಬೇಕು. ನಾನು ಒಂದು ದಿನ ದುಶ್ಯಂತ್ ಪಕ್ಕದಲ್ಲಿ ಎರಡೂವರೆ ಗಂಟೆ ಕುಳಿತಿದ್ದೆ. ಹಾಗಾಗಿ ನಾನು ಮನೆಯಲ್ಲಿ ಪ್ರತ್ಯೇಕವಾಗಿ ಇದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

    ಲಕ್ನೋದಲ್ಲಿ ಕಾರ್ಯಕ್ರಮ ಮುಗಿದ ನಂತರ ದುಶ್ಯಂತ್ ಸಿಂಗ್ ಗುರುವಾರ ಸಂಸತ್ತಿನ ಸೆಂಟ್ರಲ್ ಹಾಲ್‍ನಲ್ಲಿ ನಿಶಿಕಾಂತ್ ಮತ್ತು ಮನೋಜ್ ತಿವಾರಿ ಅವರೊಂದಿಗೆ ಕುಳಿತಿದ್ದರು. ಅವರು ಅಂದು ಯಾರನ್ನೆಲ್ಲ ಸಂಪರ್ಕಿಸಿದ್ದಾರೆ ಎನ್ನುವ ಮಾಹಿತಿಯನ್ನು ಕಲೆ ಹಾಕುವ ಕಾರ್ಯ ಪ್ರಗತಿಯಲ್ಲಿದೆ. ಜೊತೆಗೆ ಕನಿಕಾ ಭಾಗಿಯಾಗಿದ್ದ ಕಾರ್ಯಕ್ರಮದಲ್ಲಿ ಇದ್ದ ಎಲ್ಲರೂ ಸ್ವಯಂ ಪ್ರೇರಿತವಾಗಿ ಪ್ರತ್ಯೇಕವಾಗಿ ವಾಸಿಸುವಂತೆ ಉತ್ತರ ಪ್ರದೇಶ ಆರೋಗ್ಯ ಇಲಾಖೆ ಸೂಚಿಸಿದೆ. ಸೋಂಕಿನ ಲಕ್ಷಣಗಳು ಕಂಡು ಬಂದರೆ ವರದಿ ಮಾಡುವಂತೆ ತಿಳಿಸಿದೆ.

    https://www.instagram.com/p/B98tXqnFqE2/

    ನಾನು ಲಂಡನ್‍ನಿಂದ ಬಂದಾಗ 10 ದಿನಗಳ ಹಿಂದೆ ವಿಮಾನ ನಿಲ್ದಾಣದಲ್ಲಿ ನನ್ನನ್ನು ಸ್ಕ್ಯಾನಿಂಗ್‍ಗೆ ಒಳಪಡಿಸಲಾಗಿತ್ತು. ಆದರೆ ಅಲ್ಲಿ ಯಾವುದೇ ರೋಗದ ಗುಣ ಕಂಡು ಬಂದಿರಲಿಲ್ಲ. ಆದರೆ ನಾನು ಮನೆಗೆ ಬಂದ ನಂತರದಲ್ಲಿ ನಾಲ್ಕು ದಿನಗಳ ಹಿಂದೆಯಷ್ಟೇ ಜ್ವರ, ನೆಗಡಿಯ ಲಕ್ಷಣಗಳು ಕಾಣಿಸಿಕೊಂಡಿತು. ತಕ್ಷಣ ನಾನು ವೈದ್ಯರ ಬಳಿ ಬಂದು ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ನಿಮಗೂ ಜ್ವರ, ನೆಗಡಿ, ಕೆಮ್ಮಿನ ಲಕ್ಷಣ ಕಾಣಿಸಿಕೊಂಡರೆ, ಪ್ರತ್ಯೇಕವಾಗಿ ಉಳಿದು ಕೂಡಲೇ ಪರೀಕ್ಷೆಗೆ ಒಳಗಾಗಿ ಎಂದು ಕನಿಕಾ ಕಪೂರ್ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಬರೆದುಕೊಂಡಿದ್ದಾರೆ.