Tag: ಕನಕಪುರ

  • ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಭೂಕಬಳಿಕೆ ಆರೋಪ – ಗ್ರಾಮಸ್ಥರಿಂದ ದಾಖಲೆ ಬಿಡುಗಡೆ

    ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ಭೂಕಬಳಿಕೆ ಆರೋಪ – ಗ್ರಾಮಸ್ಥರಿಂದ ದಾಖಲೆ ಬಿಡುಗಡೆ

    – ನ್ಯಾಯ ಒದಗಿಸದಿದ್ದರೆ ದಯಾಮರಣ ನೀಡುವಂತೆ ಮನವಿ

    ರಾಮನಗರ: ಶಾಸಕ ಇಕ್ಬಾಲ್ ಹುಸೇನ್ (Iqbal Hussain) ವಿರುದ್ಧ ಭೂಕಬಳಿಕೆ (Land Grabbing) ಆರೋಪ ವಿಚಾರ ಕುರಿತು ಕನಕಪುರ (Kanakapura) ತಾಲೂಕಿನ ಹೊಂಗಣಿದೊಡ್ಡಿ ಗ್ರಾಮಸ್ಥರು ಇಂದು ದಾಖಲೆ ಬಿಡುಗಡೆ ಮಾಡಿದ್ದಾರೆ.

    1957ರಲ್ಲಿ ಭೂ ಮಾಲೀಕರು ಗ್ರಾಮಸ್ಥರಿಗೆ ಹಿಂದೆ ಕ್ರಯ ಮಾಡಿಕೊಟ್ಟ ದಾಖಲಾತಿ ಹಾಗೂ 19 ಜನ ಗೇಣಿದಾರರ ಗೇಣಿ ಅರ್ಜಿಯನ್ನ ಬಿಡುಗಡೆ ಮಾಡಿ ಸುದ್ದಿಗೋಷ್ಠಿ ನಡೆಸಿ ಗ್ರಾಮಸ್ಥರು ಮಾತನಾಡಿದರು. ಗ್ರಾಮದ 67 ಎಕರೆ ಜಮೀನನ್ನು ರಾಮನಗರ ಶಾಸಕರು ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡಿದ್ದಾರೆ. ಇಡೀ ಗ್ರಾಮವೇ ಶಾಸಕರ ಹೆಸರಲ್ಲಿ ಇದೆ ಎಂಬುದನ್ನು ಸ್ವತಃ ಶಾಸಕರೇ ಒಪ್ಪಿಕೊಂಡಿದ್ದಾರೆ. ಈಗ ಗ್ರಾಮವನ್ನ ಮಾತ್ರ ಬಿಟ್ಟುಕೊಡುತ್ತೇನೆ ಎನ್ನುತ್ತಾರೆ. ಕೇವಲ ಗ್ರಾಮದ ಜಮೀನು ಮಾತ್ರವಲ್ಲ ನಮ್ಮ ಕೃಷಿ ಭೂಮಿಯನ್ನೂ ನಮಗೆ ಬಿಟ್ಟುಕೊಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ನಾಲ್ವರು ಇಸ್ರೇಲ್‌ ಮಹಿಳಾ ಸೈನಿಕರನ್ನು ಬಿಡುಗಡೆ ಮಾಡಿದ ಹಮಾಸ್‌ ಉಗ್ರರು

    19 ಗೇಣಿದಾರರ ಜಮೀನುಗಳನ್ನು ವಾಪಸ್ ನೀಡಿ. ಸ್ಥಳಕ್ಕೆ ಡಿಸಿ ಭೇಟಿ ನೀಡಿ ನಮ್ಮ ಜಾಗಕ್ಕೆ ಮಂಜೂರಾತಿ ಪತ್ರಗಳ ನೀಡಬೇಕು. ಕಳೆದ 60-70 ವರ್ಷದಿಂದ ನಾವು ಅಲ್ಲಿ ವ್ಯವಸಾಯ ಮಾಡ್ತಿದ್ದೇವೆ. ನಮ್ಮ ಜಮೀನುಗಳನ್ನ ನಮಗೆ ಉಳಿಸಿಕೊಡಿ. ಲೋಕಾಯುಕ್ತ ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು. ನ್ಯಾಯ ಒದಗಿಸಲಿಲ್ಲ ಅಂದರೆ ದಯಾಮರಣ ನೀಡುವಂತೆ ಸುದ್ದಿಗೋಷ್ಠಿಯಲ್ಲಿ ಗ್ರಾಮಸ್ಥರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಬಡ್ಡಿ ಹಣಕ್ಕೆ ಮನಬಂದಂತೆ ಹಲ್ಲೆ – ಬೆತ್ತಲೆಗೊಳಿಸಿ ಚಿತ್ರಹಿಂಸೆ

  • ಡಿಕೆಶಿ ಕ್ಷೇತ್ರದಲ್ಲಿ ಗ್ರಾಮವನ್ನೇ ಖರೀದಿಸಿದ್ರಾ ಕಾಂಗ್ರೆಸ್‌ ಶಾಸಕ?

    ಡಿಕೆಶಿ ಕ್ಷೇತ್ರದಲ್ಲಿ ಗ್ರಾಮವನ್ನೇ ಖರೀದಿಸಿದ್ರಾ ಕಾಂಗ್ರೆಸ್‌ ಶಾಸಕ?

    – ಇಕ್ಬಾಲ್ ಹುಸೇನ್ ವಿರುದ್ದ ಲೋಕಾಯುಕ್ತಕ್ಕೆ ದೂರು

    ರಾಮನಗರ: ರಾಜ್ಯದಲ್ಲಿ ವಕ್ಫ್ ಜಮೀನಿಗೆ ಸಂಬಂಧಪಟ್ಟಂತೆ ಆಡಳಿತ ಪಕ್ಷ ಹಾಗೂ ವಿಪಕ್ಷಗಳ ನಡುವೆ ಜಟಾಪಟಿ ಒಂದು ಕಡೆಯಾದರೆ ಮತ್ತೊಂದು ಕಡೆ ರಾಮನಗರ ಕಾಂಗ್ರೆಸ್ ಶಾಸಕ ಇಕ್ಬಾಲ್‌ ಹುಸೇನ್‌ (Iqbal Hussain) ಇಡೀ ಗ್ರಾಮವನ್ನೇ ಖರೀದಿ ಮಾಡಿದ ಗಂಭೀರ ಆರೋಪ ಕೇಳಿ ಬಂದಿದೆ.

    ಉಳುವವನೇ ಭೂಮಿಯ ಒಡೆಯ ಎಂಬ ಭೂ ಸುಧಾರಣಾ ಕಾಯ್ದೆಯನ್ನು ಉಲ್ಲಂಘನೆ ಮಾಡಿ ಇಡೀ ಊರನ್ನೇ ಶಾಸಕರು ಖರೀದಿ ಮಾಡಿದ್ದಾರೆಂದು ಗ್ರಾಮಸ್ಥರು ಈಗ ಲೋಕಾಯುಕ್ತಕ್ಕೆ (Lokayukta) ದೂರು ನೀಡಿದ್ದಾರೆ.

    ಉಳುವವನೇ ಭೂಮಿಯ ಒಡೆಯ ಎಂಬ ಕಾಯ್ದೆ ಜಾರಿಗೆ ಬಂದು ದಶಕಗಳೇ ಕಳೆದಿವೆ. ಈ ಕಾಯ್ದೆಯನ್ನು ಜಾರಿ ಮಾಡಿ ಬಡಜನರಿಗೆ ಭೂಮಿ ಕೊಟ್ಟಿದ್ದೇವೆ ಎಂಬ ಹೆಗ್ಗಳಿಕೆಯನ್ನು ಕಾಂಗ್ರೆಸ್ (Congress) ಪಡೆದುಕೊಳ್ಳುತ್ತಿದೆ. ಆದರೆ ಕಾಂಗ್ರೆಸ್ ಶಾಸಕರೇ ಈ ಕಾಯ್ದೆಯನ್ನು ಉಲ್ಲಂಘನೆ ಮಾಡಿ ರೈತರ ಜಮೀನು ಕಬಳಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

     

    ಡಿಸಿಎಂ ಡಿಕೆ ಶಿವಕುಮಾರ್‌(DK Shivakumar) ಕನಕಪುರ ತಾಲೂಕಿನ ಯಡಮಾರನಹಳ್ಳಿ ದಾಖಲೆಯ ಹೊಂಗಣಿದೊಡ್ಡಿ ಗ್ರಾಮದಲ್ಲಿನ ಸುಮಾರು 67 ಎಕರೆ 30 ಗುಂಟೆ ಜಮೀನನ್ನು ಇಕ್ಬಾಲ್ ಹುಸೇನ್ ತಮ್ಮ ಹೆಸರಿಗೆ ಮಾಡಿಕೊಂಡಿದ್ದು, ಗ್ರಾಮಸ್ಥರಲ್ಲಿ ಊರು ಒಕ್ಕಲೆಬ್ಬಿಸುವ ಆತಂಕ ಸೃಷ್ಠಿಯಾಗಿದೆ. ಕಳೆದ 50-60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು, ಜೀವನ ನಡೆಸುತ್ತಿದ್ದ ಇಡೀ ಊರನ್ನೇ ಅಧಿಕಾರ ದುರ್ಬಳಕೆ ಮಾಡಿಕೊಂಡು ಖರೀದಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

    ಶಾಸಕ ಇಕ್ಬಾಲ್ ಹುಸೇನ್ ಸೇರಿ 7 ಮಂದಿ ವಿರುದ್ಧ ಲೋಕಾಯುಕ್ತಕ್ಕೆ ಗ್ರಾಮಸ್ಥರು ದೂರು ನೀಡಿದ್ದಾರೆ. ಕನಕಪುರ ತಾಲೂಕಿನ ವಿಎ, ಆರ್ ಐ, ಶಿರಸ್ತೇದಾರ್, ಹಾಲಿ ತಹಶಿಲ್ದಾರ್ ಹಾಗೂ ಹಿಂದಿನ ತಹಶಿಲ್ದಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ನಾವ್ಯಾರಿಗೂ ತೊಂದರೆ ಕೊಟ್ಟಿಲ್ಲ, ನಮ್ಮನ್ನ ಟಾರ್ಗೆಟ್ ಮಾಡ್ತಿದ್ದಾರೆ: ಪ್ರಮೋದಾ ದೇವಿ

     

    ಕಳೆದ 60 ವರ್ಷಗಳಿಂದ ವ್ಯವಸಾಯ ಮಾಡಿಕೊಂಡು ಬಂದಿದ್ದೇವೆ. ಮನೆ ಕಟ್ಟಲು ಜಾಗ ತೆಗೆದುಕೊಂಡಿದ್ದೇವೆ. ಇದೀಗ ಏಕಾಏಕಿ ಬಂದು ಈ ಜಾಗ ನಮ್ಮದು ಎಂದರೆ ಹೇಗೆ, ನಾವು ಈ ಬಗ್ಗೆ ಕೋರ್ಟ್‌ನಲ್ಲಿ ಕೇಸ್‌ ಹಾಕಿದ್ದೇವೆ. ಕನಕಪುರದ ಕಂದಾಯ ಅಧಿಕಾರಿಗಳು ಶಾಮೀಲಾಗಿ ಈ ರೀತಿ ಮಾಡಿದ್ದಾರೆ, ಕನಕಪುರ, ಹಾರೋಹಳ್ಳಿಯಲ್ಲಿ ಇದ್ದಂತಹ ಭೂ ನ್ಯಾಯ ಮಂಡಲಿ ನ್ಯಾಯಾಲಯವನ್ನು ಬೇಕಂತಲೇ ಮುಚ್ಚಿಸಿದ್ದಾರೆ. ನಾವು ಬೆಂಗಳೂರಿನ ಭೂ ನ್ಯಾಯ ಮಂಡಲಿಯಲ್ಲಿ ಕೇಸ್ ದಾಖಲಿಸಿದ್ದೇವೆ. ಕೇಸ್ ಇತ್ಯರ್ಥ ಆಗದೇ ಶಾಸಕರು ಹೇಗೆ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

    ತಮ್ಮ ಮೇಲೆ ಬಂದಿರುವ ಭೂಕಬಳಿಕೆ ಆರೋಪ ಕುರಿತು ರಾಮನಗರ ಶಾಸಕ ಇಕ್ಬಾಲ್ ಹುಸೇನ್ ಕೂಡಾ ಪ್ರತಿಕ್ರಿಯೆ ನೀಡಿ ನಾನು ಖರೀದಿ ಮಾಡಿರುವ ಜಮೀನಿನಲ್ಲಿ ಗ್ರಾಮ ಇರುವುದು ನಿಜ ಎಂದು ಒಪ್ಪಿಕೊಂಡಿದ್ದಾರೆ.

     ನಾನು ಖರೀದಿ ಮಾಡಿದ ಜಮೀನಿನ ಸರ್ವೆನಂಬರ್ ಒಂದರಲ್ಲಿ ಗ್ರಾಮ ಇದೆ. ಆ ಗ್ರಾಮದ ಜನರಿಗೆ ಹಕ್ಕುಪತ್ರ ಇಲ್ಲ. ನಾನು ಖರೀದಿ ಮಾಡಿರುವ ಜಮೀನಿನಲ್ಲಿ ಆ ಗ್ರಾಮ ಇರುವ ಜಾಗವನ್ನು ಜನರಿಗೆ ಬಿಟ್ಟು ಕೊಡುತ್ತೇನೆ. ಈಗಾಗಲೇ ಅಧಿಕಾರಿಗಳಿಗೆ ಹಕ್ಕುಪತ್ರ ಮಾಡಿಕೊಡಲು ಹೇಳಿದ್ದೇನೆ. ಆದರೆ ನನ್ನ ವಿರುದ್ಧದ ಆರೋಪದಲ್ಲಿ ಸತ್ಯವಿಲ್ಲ. ಯಾರೋ ಸಂಘ ಕಟ್ಟಿಕೊಂಡು ಬಂದು ರೋಲ್ ಕಾಲ್ ಮಾಡುತ್ತಿದ್ದಾರೆ. ಈ ಬಗ್ಗೆ ಲೋಕಾಯುಕ್ತದಲ್ಲೇ ತನಿಖೆ ಆಗಲಿ ಎಂದಿದ್ದಾರೆ.

  • ಬೆಂಗಳೂರು| ಟ್ಯೂಷನ್ ಟೀಚರ್‌ನಿಂದಲೇ ವಿದ್ಯಾರ್ಥಿನಿ ಕಿಡ್ನ್ಯಾಪ್ – ಆರೋಪಿ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ

    ಬೆಂಗಳೂರು| ಟ್ಯೂಷನ್ ಟೀಚರ್‌ನಿಂದಲೇ ವಿದ್ಯಾರ್ಥಿನಿ ಕಿಡ್ನ್ಯಾಪ್ – ಆರೋಪಿ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ

    – ಫೋನ್ ಪೇ, ಗೂಗಲ್ ಪೇ, ಎಟಿಎಂ, ಆನ್ಲೈನ್‌ ಪೇಮೆಂಟ್ ಬಳಕೆ ಮಾಡದ ಆರೋಪಿ

    ಬೆಂಗಳೂರು/ರಾಮನಗರ: ಪ್ರೀತಿ-ಪ್ರೇಮದ ಹೆಸರಿನಲ್ಲಿ ಟ್ಯೂಷನ್ ಟೀಚರ್‌ನಿಂದಲೇ 10ನೇ ತರಗತಿ ವಿದ್ಯಾರ್ಥಿನಿ ಕಿಡ್ನ್ಯಾಪ್ ಆಗಿರುವ ಘಟನೆ ನಡೆದಿದೆ.

    ಕನಕಪುರ ಮೂಲದ ಬಾಲಕಿ ತಂದೆಯಿಂದ ಜೆ.ಪಿ.ನಗರ ಠಾಣೆಯಲ್ಲಿ ಕಿಡ್ನಾಪ್ ಪ್ರಕರಣ ದಾಖಲಾಗಿದೆ. ಕನಕಪುರ ಮೂಲದ ಟ್ಯೂಷನ್ ಟೀಚರ್ ಅಭಿಷೇಕ್‌ನಿಂದ ವಿದ್ಯಾರ್ಥಿನಿ ಅಪಹರಣವಾಗಿದೆ. ಇದನ್ನೂ ಓದಿ: 17 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಶುದ್ಧೀಕರಣ ಘಟಕದಲ್ಲಿ ನಾಯಿ ಶವ ಪತ್ತೆ

    ಕಳೆದ ನ.23 ರಂದು ಎಂದಿನಂತೆ ಆರೋಪಿ ಬಳಿ ಟ್ಯೂಷನ್‌ಗೆ ವಿದ್ಯಾರ್ಥಿನಿ ಬಂದಿದ್ದಳು. ಟ್ಯೂಷನ್ ಮುಗಿದು ರಾತ್ರಿಯಾದರೂ ಮನೆಗೆ ವಾಪಸ್ ಆಗಿರಲಿಲ್ಲ. ರಾತ್ರಿ ಟ್ಯೂಷನ್ ಸೆಂಟರ್ ಬಳಿ ಹೋದಾಗ ಬಾಲಕಿಯನ್ನ ಟ್ಯೂಷನ್ ಟೀಚರ್ ಕರೆದೊಯ್ದಿರೋದು ಗೊತ್ತಾಗಿದೆ.

    ಬಾಲಕಿಯನ್ನ ಕರೆದೊಯ್ಯುವ ವೇಳೆ ಮನೆಯ ರೂಂನಲ್ಲೇ ಮೊಬೈಲ್ ಬಿಟ್ಟು ಆರೋಪಿ ಪರಾರಿಯಾಗಿದ್ದಾನೆ. ಕಳೆದ ನಲವತ್ತು ದಿನಗಳಿಂದ ಸಣ್ಣ ಸುಳಿವು ಸಿಗದಂತೆ ಅಪ್ರಾಪ್ತೆ ಜೊತೆ ತಲೆಮರೆಸಿಕೊಂಡಿದ್ದಾನೆ. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ರಾಮನಗರ ಟೌನ್ ವ್ಯಾಪ್ತಿಯಲ್ಲಿ ಕಾಡಾನೆಗಳು ಪ್ರತ್ಯಕ್ಷ

    ಪೋನ್ ಬಳಕೆ ಮಾಡ್ತಿಲ್ಲ. ಪೋನ್ ಪೇ, ಗೂಗಲ್ ಪೇ, ಎಟಿಎಂ ಸೇರಿ ಆನ್ಲೈನ್ ಪೇಮೆಂಟ್ ಕೂಡ ಆರೋಪಿ ಮಾಡುತ್ತಿಲ್ಲ. ಕಳೆದ ನಲವತ್ತು ದಿನಗಳಿಂದ ಬೆಂಗಳೂರು ರಾಮನಗರ, ಕನಕಪುರ ಸೇರಿ ಹಲವು ಕಡೆ ಆರೋಪಿಗಾಗಿ ಪೊಲೀಸರು ತಲಾಶ್ ನಡೆಸಿದ್ದಾರೆ.

    ಸದ್ಯ ಆರೋಪಿ ಸುಳಿವು ಕೊಟ್ಟವರಿಗೆ ಬಹುಮಾನ ನೀಡುವುದಾಗಿ ಪೊಲೀಸ್ ಪ್ರಕಟಣೆಯಲ್ಲಿ ಘೋಷಿಸಲಾಗಿದೆ. ಆರೋಪಿ ಪತ್ತೆಯಾಗದ ಹಿನ್ನೆಲೆ ಪೊಲೀಸರು ಲುಕ್‌ಔಟ್ ನೋಟಿಸ್ ಹೊರಡಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಐಶ್ವರ್ಯ ಗೌಡಳಿಂದ ವಂಚನೆಗೆ ಒಳಗಾಗಿದ್ರೆ ದೂರು ನೀಡಿ: ಎಸ್ಪಿ

  • ಬ್ರೇಕ್ ಫೇಲ್ ಆಗಿ ತಡೆಗೋಡೆಗೆ ಗುದ್ದಿದ KSRTC ಬಸ್

    ಬ್ರೇಕ್ ಫೇಲ್ ಆಗಿ ತಡೆಗೋಡೆಗೆ ಗುದ್ದಿದ KSRTC ಬಸ್

    – ಸ್ವಲ್ಪ ಯಾಮಾರಿದ್ರೂ ಕಂದಕಕ್ಕೆ ಉರುಳುತಿದ್ದ ಬಸ್, ಪ್ರಯಾಣಿಕರು ಪಾರು

    ರಾಮನಗರ: ಬ್ರೇಕ್ ಫೇಲ್ (Brake Failure) ಆದ ಪರಿಣಾಮ ರಸ್ತೆ ತಡೆಗೋಡೆಗೆ ಕೆಎಸ್‌ಆರ್‌ಟಿಸಿ ಬಸ್ (KSRTC Bus) ಡಿಕ್ಕಿಯಾಗಿ ಕೂದಲೆಳೆ ಅಂತರದಲ್ಲಿ ಪ್ರಯಾಣಿಕರು ಪಾರಾದ ಘಟನೆ ಕನಕಪುರ (Kanakapura) ತಾಲೂಕಿನ ಸಂಗಮದ ರಸ್ತೆಯಲ್ಲಿ ನಡೆದಿದೆ.

    ಕನಕಪುರದಿಂದ ಸಂಗಮದ ಕಡೆ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್, ಸಂಗಮ ಸಮೀಪದ ತಿರುವಿನ ರಸ್ತೆಯಲ್ಲಿ ಬ್ರೇಕ್ ಫೇಲ್ ಆಗಿದೆ. ಬಸ್ ನಿಯಂತ್ರಣಕ್ಕೆ ತರಲು ಚಾಲಕ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆಸಿದ ಬಳಿಕ ಬಸ್ ನಿಂತಿದೆ. ಸ್ವಲ್ಪ ಯಾಮಾರಿದ್ದರೂ ಪ್ರಪಾತಕ್ಕೆ ಬಸ್ ಉರುಳಿ ಬಾರಿ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು. ಇದನ್ನೂ ಓದಿ: ಕೋಲಾರ ಗಡಿಯಲ್ಲಿ ಮುಂದುವರೆದ ಕಾಡಾನೆ ಉಪಟಳ – ಅಪಾರ ಪ್ರಮಾಣದ ಬೆಳೆಗಳು ನಾಶ

    ಬಸ್‌ನಲ್ಲಿ ಸುಮಾರು 70ಕ್ಕೂ ಅಧಿಕ ಪ್ರಯಾಣಿಕರು ಹೊಸ ವರ್ಷ ಹಿನ್ನೆಲೆ ಸಂಗಮದ ಶಿವನ ದೇವಾಲಯಕ್ಕೆ ಹೋಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪ್ರಯಾಣಿಕರು ಪಾರಾಗಿದ್ದಾರೆ. ಇನ್ನೂ ಸ್ಥಳಕ್ಕೆ ಸಾತನೂರು ಪೊಲೀಸರು ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: Tumakuru| ಹೊಸ ವರ್ಷಕ್ಕೆ ಕೇಕ್ ತರಲು ಹೋದ ಯುವಕ ಅಪಘಾತದಲ್ಲಿ ಸಾವು

  • Ramanagara | ಮನೆ ಕಾಂಪೌಂಡ್ ಹಾರಿ ನಾಯಿ ಮೇಲೆ ಚಿರತೆ ದಾಳಿ

    Ramanagara | ಮನೆ ಕಾಂಪೌಂಡ್ ಹಾರಿ ನಾಯಿ ಮೇಲೆ ಚಿರತೆ ದಾಳಿ

    ರಾಮನಗರ: ಜಿಲ್ಲೆಯಲ್ಲಿ ಚಿರತೆ (Leopard) ಹಾವಳಿ ಮುಂದುವರೆದಿದ್ದು, ಜನವಸತಿ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿರೋ ಘಟನೆ ಕನಕಪುರ (Kanakapura) ತಾಲೂಕಿನ ಅಳ್ಳಿಮಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.

    ಗ್ರಾಮದ ಬೋರೇಗೌಡ ಎಂಬವರ ಮನೆ ಬಳಿ ಚಿರತೆ ಓಡಾಟ ನಡೆಸಿದ್ದು, ಸೋಮವಾರ ರಾತ್ರಿ ಮನೆಯ ಕಾಂಪೌಂಡ್ ಎಗರಿ ನಾಯಿ ಮೇಲೆ ದಾಳಿ ಮಾಡಿದೆ. ನಾಯಿ ಬೊಗಳುತ್ತಿದ್ದಂತೆ ಚಿರತೆ ಸ್ಥಳದಿಂದ ಕಾಲ್ಕಿತ್ತಿದೆ. ಇನ್ನೂ ಚಿರತೆ ಓಡಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಕ್ರಿಸ್‌ಮಸ್ ಹಬ್ಬ – ಕೋಲಾರದ ಮೆಥೋಡಿಸ್ಟ್ ಚರ್ಚ್‌ನಲ್ಲಿ ದೀಪಾಲಂಕಾರ

    ಚಿರತೆ ಪ್ರತ್ಯಕ್ಷಕ್ಕೆ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಕೂಡಲೇ ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ. ಇನ್ನೂ ಅಕ್ಕಪಕ್ಕದ ಗ್ರಾಮದಲ್ಲೂ ಆಗಾಗ ಚಿರತೆಗಳು ನಾಯಿ, ಕೋಳಿಗಳನ್ನು ಹೊತ್ತೊಯ್ಯುತ್ತಿದ್ದರೂ ಅರಣ್ಯ ಇಲಾಖೆ ಈ ಬಗ್ಗೆ ಕ್ರಮವಹಿಸುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಹೋಟೆಲ್‌ಗೆ ಕರೆಸಿ ಪ್ರಿಯಕರನ ಮರ್ಮಾಂಗ ಕಟ್ ಮಾಡಿದ್ಳು ಪ್ರಿಯತಮೆ!

  • ಶಬರಿಮಲೆ ದೇಗುಲದ ಸ್ಕೈವಾಕ್‌ನಿಂದ ಜಿಗಿದು ಅಯ್ಯಪ್ಪ ಮಾಲಾಧಾರಿ ಆತ್ಮಹತ್ಯೆ

    ಶಬರಿಮಲೆ ದೇಗುಲದ ಸ್ಕೈವಾಕ್‌ನಿಂದ ಜಿಗಿದು ಅಯ್ಯಪ್ಪ ಮಾಲಾಧಾರಿ ಆತ್ಮಹತ್ಯೆ

    ರಾಮನಗರ: ಶಬರಿಮಲೆ (Sabarimala) ದೇಗುಲದ ಸ್ಕೈವಾಕ್ ಮೇಲಿಂದ ಬಿದ್ದು ಅಯ್ಯಪ್ಪ ಭಕ್ತರೊಬ್ಬರು (Ayyappa Devotee) ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

    ಕನಕಪುರದ (Kanakapura) ಮದ್ದೂರಮ್ಮ ಬೀದಿ ನಿವಾಸಿ ಕುಮಾರ್ (40) ಆತ್ಮಹತ್ಯೆ ಮಾಡಿಕೊಂಡ ಭಕ್ತ. ಮೃತ ಕುಮಾರ್ ಗಾರೆ ಕೆಲಸ ಮಾಡಿಕೊಂಡಿದ್ದರು. ಮೂರು ದಿನದ ಹಿಂದೆ ಕುಮಾರ್ ಸೇರಿ 6 ಮಂದಿ ಶಬರಿಮಲೆಗೆ ತೆರಳಿದ್ದರು. ಅಯ್ಯಪ್ಪನ ದರ್ಶನ ಪಡೆದ ಬಳಿಕ ದೇವಾಲಯದ ಸ್ಕೈವಾಕ್ ಶೆಲ್ಟರ್ ಮೇಲಿನಿಂದ ಜಿಗಿದು ಕುಮಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ದೇವಾಲಯದ ಮೇಲಿಂದ ಜಿಗಿಯುವ ದೃಶ್ಯ ಭಕ್ತರೊಬ್ಬರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಅಭಿಮಾನದಿಂದ ನಟರನ್ನು ನಂಬಿ ಯಾರೂ ಮೋಸಹೋಗಬೇಡಿ: ಎ6 ಜಗದೀಶ್ ತಾಯಿ ಕಣ್ಣೀರು

    ಘಟನೆಯಲ್ಲಿ ಅಯ್ಯಪ್ಪ ಮಾಲಾಧಾರಿ ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಕುಮಾರ್‌ಗೆ ಶಬರಿಮಲೆ ಸನ್ನಿಧಾನದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಕೊಟ್ಟಾಯಂ ಮೆಡಿಕಲ್ ಕಾಲೇಜಿಗೆ ರವಾನೆ ಮಾಡುವ ವೇಳೆ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂಧ ಶಬರಿಮಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಕುಮಾರ್ ಕುಟುಂಬಸ್ಥರು ಶಬರಿಮಲೆಗೆ ತೆರಳಿದ್ದಾರೆ.

    ಇನ್ನೂ ಕುಮಾರ್ ಸಾವಿನ ಬಗ್ಗೆ ಪತ್ನಿ ಅನುಮಾನ ವ್ಯಕ್ತಪಡಿಸಿದ್ದಾರೆ.  ಸೋಮವಾರವಷ್ಟೇ ಪತಿ ಪೋನ್ ಮಾಡಿ ಮಾತನಾಡಿದ್ದರು. ಮನೆಯಲ್ಲೂ ಯಾವುದೇ ರೀತಿ ಸಮಸ್ಯೆ ಆಗಿರಲಿಲ್ಲ. ಸ್ನೇಹಿತರ ಜೊತೆ ದೇವಾಲಯಕ್ಕೆ ಹೋಗಿದ್ದವರು ಯಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೋ ಗೊತ್ತಿಲ್ಲ. ಸ್ನೇಹಿತರು ಅವರು ಒಬ್ಬರನ್ನೇ ಬಿಟ್ಟು ಎಲ್ಲಿಹೋಗಿದ್ದರು ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡುತ್ತೇವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಒಂದು ದೇಶ ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ

  • Ramanagara| ಕಾಡಾನೆ ದಾಳಿಗೆ ರೈತ ಬಲಿ

    Ramanagara| ಕಾಡಾನೆ ದಾಳಿಗೆ ರೈತ ಬಲಿ

    ರಾಮನಗರ: ಜಿಲ್ಲೆಯಲ್ಲಿ ಕಾಡಾನೆ ದಾಳಿ ಮುಂದುವರಿದಿದ್ದು, ಭಾನುವಾರ ಬೆಳ್ಳಂಬೆಳಗ್ಗೆ ಕಾಡಾನೆ (Wild Elephant) ದಾಳಿಗೆ ರೈತ (Farmer) ಬಲಿಯಾದ ಘಟನೆ ಕನಕಪುರ (Kanakapura) ತಾಲೂಕಿನ ಹೆಗ್ಗನೂರು ದೊಡ್ಡಿ ಗ್ರಾಮದಲ್ಲಿ ನಡೆದಿದೆ.

    ಕರಿಯಪ್ಪ (65) ಮೃತ ರೈತ. ಇಂದು ಮುಂಜಾನೆ 4 ಗಂಟೆಗೆ ಘಟನೆ ಸಂಭವಿಸಿದೆ. ಕರಿಯಪ್ಪ ಜಮೀನಿನಲ್ಲಿ ಹಾಕಿದ್ದ ಮೆದೆ ನೋಡಲು ತೆರಳಿದ್ದ ವೇಳೆ ಕಾಡಾನೆ ಏಕಾಏಕಿ ದಾಳಿ ನಡೆಸಿದೆ. ತಕ್ಷಣ ಗಾಯಾಳು ಕರಿಯಪ್ಪನನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದರಾದರೂ ಮಾರ್ಗಮಧ್ಯೆ ಕರಿಯಪ್ಪ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ರಾಯಚೂರು | ಮತ್ತೋರ್ವ ಬಾಣಂತಿ ಸಾವು – ಮೃತರ ಸಂಖ್ಯೆ 10ಕ್ಕೆ ಏರಿಕೆ

    ಕನಕಪುರ ಸಾರ್ವಜನಿಕ ಆಸ್ಪತ್ರೆಗೆ ಮೃತ ಕರಿಯಪ್ಪ ಮೃತದೇಹವನ್ನು ರವಾನಿಸಲಾಗಿದೆ. ಸಾತನೂರು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: 46 ವರ್ಷ ಹಳೆ ಕಾಲದ ಹಿಂದೂ ದೇವಾಲಯ ಪತ್ತೆ; ಸಂಭಲ್ ಮಸೀದಿ ಸುತ್ತ ಮುಂದುವರಿದ ತೆರವು ಕಾರ್ಯ

  • ಕೃಷಿ ಕೂಡ ಉದ್ಯಮವೇ, ಉದ್ಯಮಿಗಳಾಗಿ ಹತ್ತಾರು ಜನರಿಗೆ ಉದ್ಯೋಗ ನೀಡಿ: ಡಿಕೆಶಿ

    ಕೃಷಿ ಕೂಡ ಉದ್ಯಮವೇ, ಉದ್ಯಮಿಗಳಾಗಿ ಹತ್ತಾರು ಜನರಿಗೆ ಉದ್ಯೋಗ ನೀಡಿ: ಡಿಕೆಶಿ

    -ಇಲ್ಲಿರುವ ಮಕ್ಕಳಲ್ಲಿ ಯಾರಾದರೂ ಒಬ್ಬರು ಮುಂದೆ ಡಿಕೆ ಶಿವಕುಮಾರ್ ಆಗಬೇಕು

    ರಾಮನಗರ: ಕೃಷಿ (Agriculture) ಕೂಡ ಈಗ ಒಂದು ಉದ್ಯಮವೇ. ಉದ್ಯೋಗಿಗಳಾಗುವುದಕ್ಕಿಂತ ಹತ್ತಾರು ಜನರಿಗೆ ಉದ್ಯೋಗ ನೀಡುವ ಉದ್ದಿಮೆದಾರರಾಗುವುದು ನಿಮ್ಮ ಗುರಿಯಾಗಬೇಕು ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಸಲಹೆ ನೀಡಿದರು.

    ಕನಕಪುರದ (Kanakapura) ಕರಿಯಪ್ಪ ಕೃಷಿ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಹಾಲು ಹಾಗೂ ರೇಷ್ಮೆ ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಇದರ ಜೊತೆಗೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ಹೂವಿನ ಬೆಳೆ ಹಾಕುವುದರಿಂದ ಆರ್ಥಿಕವಾಗಿ ಪ್ರಗತಿ ಸಾಧಿಸಬಹುದು. ನೀವು ಕೇವಲ ಎಂಜಿನಿಯರ್ ಆಗುವುದಷ್ಟೇ ನಿಮ್ಮ ಗುರಿಯಾಗುವುದು ಬೇಡ. ನೀವೇ ಹತ್ತಾರು ಜನರಿಗೆ ಉದ್ಯೋಗ ಸೃಷ್ಟಿಸುವಂತೆ ನೀವು ಬೆಳೆಯಬೇಕು. ಸ್ವಯಂ ಉದ್ಯೋಗವೇ ಶ್ರೇಷ್ಠ ಉದ್ಯೋಗವಾಗಿದೆ. ಆ ನಿಟ್ಟಿನಲ್ಲಿ ನೀವು ಗಮನಹರಿಸಿ ಎಂದರು. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಬೈಕ್ – ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದ ಸವಾರ ಸಾವು

    ಈಗಿನ ಕಾಲದಲ್ಲಿ ಯಾವುದೇ ಶಿಕ್ಷಕರು ತಾವು ಮಕ್ಕಳಿಗಿಂತ ಬುದ್ಧಿವಂತರು ಎಂದು ಭಾವಿಸಿದರೆ ಅದು ತಪ್ಪು. ಇನ್ನು ಮುಂದೆ ಶಾಲಾ ಕಾಲೇಜುಗಳಲ್ಲಿ ಯಾವುದೇ ಕಾರ್ಯಕ್ರಮವಾದರೂ ಶಿಕ್ಷಕರು ವೇದಿಕೆ ಮೇಲೆ ಇರಬಾರದು. ಇಡೀ ಕಾರ್ಯಕ್ರಮವನ್ನು ಮಕ್ಕಳೇ ನಡೆಸಬೇಕು. ಅವರೇ ಸ್ವಾಗತ ಭಾಷಣ ಮಾಡಬೇಕು. ಇದರಿಂದ ಅವರಲ್ಲಿನ ಪ್ರತಿಭೆ ಅನಾವರಣವಾಗುತ್ತದೆ. ಅವರಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ನಾಯಕರನ್ನು ಬೆಳೆಸುವವನೇ ನಿಜವಾದ ನಾಯಕ. ಮಕ್ಕಳಿಗೆ ಉತ್ತೇಜನ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು – ಭಾನುವಾರ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾವೇಶ

    ಇಲ್ಲಿರುವ ಮಕ್ಕಳಲ್ಲಿ ಯಾರಾದರೂ ಒಬ್ಬರು ಮುಂದೆ ಡಿ.ಕೆ. ಶಿವಕುಮಾರ್ ಆಗಬೇಕು. ನಾನು ಕೂಡ ಶಿಕ್ಷಣ ಸಂಸ್ಥೆ ನಡೆಸಿದ್ದೇನೆ. ಈಗ ನನ್ನ ಮಕ್ಕಳಿಗೆ ಜವಾಬ್ದಾರಿ ವಹಿಸಿದ್ದೇನೆ. ಈ ಕಾಲೇಜಿಗೆ ಬೆಂಗಳೂರು ದಕ್ಷಿಣ ಕೃಷಿ ಕಾಲೇಜು ಎಂದು ಹೆಸರಿಡಲು ಬಯಸಿದ್ದೆ. ಆದರೆ ನೀವು ಈ ಶಾಲೆಯ ಸಂಸ್ಥಾಪಕರಾದ ಕರಿಯಪ್ಪನವರ ಹೆಸರು ಇಟ್ಟಿದ್ದೀರಿ. ಅವರ ಹೆಸರಾಗಿರುವುದರಿಂದ ಇದು ಹಾಗೇ ಇರಲಿ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು ಎಂಬುದು ನಿಮ್ಮೆಲ್ಲರ ತಲೆಯಲ್ಲಿರಲಿ. ನಿಮ್ಮ ತಂದೆ ತಾಯಿ ಒಂದಿಂಚೂ ಜಾಗವನ್ನು ಮಾರಲು ಬಿಡಬೇಡಿ. ಮುಂದೆ ಈ ಭೂಮಿಗೆ ಯಾವ ಬೆಲೆ ಬರಲಿದೆ ಎಂದು ನಿಮಗೆ ಊಹೆಯೂ ಇಲ್ಲ. ಚೆಲುವರಾಯಸ್ವಾಮಿ ಅವರು ತಮ್ಮ ಸಚಿವಾಲಯದಿಂದ ಈ ಕೃಷಿ ಕಾಲೇಜು ನೀಡಿ ನಿಮ್ಮೆಲ್ಲರಿಗೂ ನೆರವು ನೀಡಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಗುರಿ: ಶೈಲೇಂದ್ರ ಬೆಲ್ದಾಳೆ

  • ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಮರಕ್ಕೆ ಕಾರು ಡಿಕ್ಕಿ ಹೊಡೆದು ಯುವಕ ಸಾವು

    ಬೆಳ್ಳಂಬೆಳಗ್ಗೆ ಭೀಕರ ಅಪಘಾತ – ಮರಕ್ಕೆ ಕಾರು ಡಿಕ್ಕಿ ಹೊಡೆದು ಯುವಕ ಸಾವು

    ರಾಮನಗರ: ಮರಕ್ಕೆ ಕಾರು ಡಿಕ್ಕಿಯಾಗಿ ಓರ್ವ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಮತ್ತೊಬ್ಬ ಗಂಭೀರ ಗಾಯಗೊಂಡಿರುವ ಘಟನೆ ಕನಕಪುರ (Kanakapura) ತಾಲೂಕಿನ ದೊಡ್ಡಮುದವಾಡಿ ಗ್ರಾಮದ ಬಳಿ ಇಂದು (ಸೋಮವಾರ) ಮುಂಜಾನೆ ನಡೆದಿದೆ.

    ಇಂದು ಬೆಳ್ಳಂಬೆಳಗ್ಗೆ ನಿದ್ರೆ ಮಂಪರಿನಲ್ಲಿದ್ದ ಕಾರು ಚಾಲಕ ನಿಯಂತ್ರಣ ಕಳೆದುಕೊಂಡು ಮರಕ್ಕೆ ಗುದ್ದಿದ್ದಾನೆ. ಡಿಕ್ಕಿಯಾಗಿರುವ ರಭಸಕ್ಕೆ ವಿನಯ್ (24) ಎಂಬ ಯುವಕ ಸ್ಥಳದಲ್ಲೇ ಮೃತ ಪಟ್ಟಿದ್ದು, ಅನಿಕೇತ್ ಎಂಬವನಿಗೆ ಗಂಭೀರ ಗಾಯವಾಗಿದೆ. ಇದನ್ನೂ ಓದಿ: ಬೆಂಗಳೂರು| ಉತ್ತರ ಭಾರತ ಮೂಲದ ಯುವಕನ ಮೇಲೆ ಆಸಿಡ್ ದಾಳಿ

    ಕಾರಿನಲ್ಲಿದ್ದವರು ಬೆಂಗಳೂರಿನ (Bengaluru) ಇಟ್ಟಮಡು ನಿವಾಸಿಗಳಾಗಿದ್ದು, ವೀಕೆಂಡ್ ಹಿನ್ನೆಲೆ ರೆಸಾರ್ಟ್‌ಗೆ ಬಂದಿದ್ದರು. ಹಿಂತಿರುಗಿ ಹೋಗುವಾಗ ಅಪಘಾತ ಸಂಭವಿಸಿದೆ. ಸ್ಥಳೀಯರು ಗಾಯಾಳುವನ್ನ ಹಾರೋಹಳ್ಳಿಯ ದಯಾನಂದ ಸಾಗರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಕನಕಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಮಿಸ್ ಯೂನಿವರ್ಸ್ ಇಂಡಿಯಾ-2024 ಕಿರೀಟ ಗೆದ್ದ ಗುಜರಾತಿ ಸುಂದರಿ

  • ದಲಿತ ಯುವಕನ ಕೈ ಕತ್ತರಿಸಿದ ರೌಡಿಶೀಟರ್‌ಗಳ ಕಾಲಿಗೆ ಕನಕಪುರ ಪೊಲೀಸರಿಂದ ಗುಂಡೇಟು

    ದಲಿತ ಯುವಕನ ಕೈ ಕತ್ತರಿಸಿದ ರೌಡಿಶೀಟರ್‌ಗಳ ಕಾಲಿಗೆ ಕನಕಪುರ ಪೊಲೀಸರಿಂದ ಗುಂಡೇಟು

    ರಾಮನಗರ: ಬೆಳ್ಳಂಬೆಳಿಗ್ಗೆ ರೌಡಿಶೀಟರ್‌ಗಳ (Rowdy Sheeter) ಮೇಲೆ ಕನಕಪುರ ನಗರ ಪೊಲೀಸರು (Kanakapura City Police) ಗುಂಡಿನ ದಾಳಿ ನಡೆಸಿದ್ದಾರೆ.

    ಸಿಪಿಐ ಮಿಥುನ್ ಶಿಲ್ಪಿ ಹಾಗೂ ಪಿಎಸ್‌ಐ ಮನೋಹರ್ ಅವರು ಹರ್ಷ ಅಲಿಯಾಸ್ ಕೈಮ, ಕರುಣೇಶ್ ಅಲಿಯಾಸ್ ಕಣ್ಣ ಮೇಲೆ ಗುಂಡಿನ ದಾಳಿ ನಡೆಸಿ ಬಂಧಿಸಿದ್ದಾರೆ.

    ಕಳೆದ ವಾರ ಕನಕಪುರ ತಾಲೂಕಿನ ಮಳಗಾಳು ಗ್ರಾಮದ ದಲಿತ (Dalit) ಯುವಕ ಅನೀಶ್ ಅವರ ಎಡಗೈ ಕತ್ತರಿಸಿ ಈ ರೌಡಿ ಶೀಟರ್‌ಗಳು ಪರಾರಿಯಾಗಿದ್ದರು. ಆರೋಪಿಗಳ ಬಂಧಿಸುವಂತೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಇದನ್ನೂ ಓದಿ: ಮುಷರಫ್‌ಗೆ ಶ್ರದ್ಧಾಂಜಲಿ ಸಲ್ಲಿಸಲು ಮುಂದಾದ ಕೇರಳ ಬ್ಯಾಂಕ್‌ ನೌಕರರ ಸಂಘ!

    ಇಂದು ಖಚಿತ ಮಾಹಿತಿ ಪಡೆದು ಇಂದು ಪೊಲೀಸರು ಆರೋಪಿಗಳನ್ನು ಬಂಧಿಸಲು ತೆರಳಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಕಗ್ಗಲೀಪುರದ ವ್ಯಾಲಿ ಸ್ಕೂಲ್ ರೋಡ್ ಬಳಿ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ.

    ಆರೋಪಿಗಳನ್ನ ಸ್ಥಳೀಯ ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬಂಧನಕ್ಕೆ ತೆರಳಿದ್ದ ವೇಳೆ ಪೊಲೀಸ್ ಸಿಬ್ಬಂದಿ ರಾಜಶೇಖರ್, ಶಿವಕುಮಾರ್ ಅವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.