Tag: ಒಡೆಯ

  • ಬಿಗ್ ಬಾಸ್‍ನಲ್ಲಿ ಕುರಿ ಪ್ರತಾಪ್ ಉಳಿಸಲು ಡಿ ಬಾಸ್ ಫ್ಯಾನ್ಸ್ ಹೊಸ ಪ್ಲಾನ್

    ಬಿಗ್ ಬಾಸ್‍ನಲ್ಲಿ ಕುರಿ ಪ್ರತಾಪ್ ಉಳಿಸಲು ಡಿ ಬಾಸ್ ಫ್ಯಾನ್ಸ್ ಹೊಸ ಪ್ಲಾನ್

    – ಒಡೆಯ ಬ್ಯಾನರ್‌ನಲ್ಲಿ ‘ವೋಟ್ ಫಾರ್ ಕುರಿ’

    ಬೆಂಗಳೂರು: ತಮ್ಮ ಕಾಮಿಡಿ ಮೂಲಕ ಜನರ ಮನ ಗೆದ್ದಿರುವ ಕುರಿ ಪ್ರತಾಪ್‍ರನ್ನು ಬಿಗ್ ಬಾಸ್ ಸೀಸನ್-7ರ ಮನೆಯಲ್ಲಿ ಉಳಿಸಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳು ಹೊಸ ಪ್ಲಾನ್ ಮಾಡಿದ್ದಾರೆ.

    ಬಿಗ್ ಬಾಸ್ ಸೀಸನ್-7ರಲ್ಲಿ ಎಲ್ಲರಿಗೂ ಚಿರಪರಿಚಿತವಾಗಿರುವ ವ್ಯಕ್ತಿ ಅಂದರೆ ಅದು ಕುರಿ ಪ್ರತಾಪ್, ಇನ್ನು ಉಳಿದವರು ಧಾರಾವಾಹಿ ನಟ, ನಟಿಯರು, ಡ್ಯಾನ್ಸರ್ ಇರುವ ಕಾರಣ ಧಾರಾವಾಹಿ ನೋಡದೆ ಇರುವವರಿಗೆ ಅವರ ಪರಿಚಯ ಇರುವುದಿಲ್ಲ. ಕೆಲವೊಂದು ಸಿನಿಮಾಗಳಲ್ಲಿ ಕುರಿ ಪ್ರತಾಪ್ ಅವರ ಕಾಮಿಡಿಯನ್ನು ಜನ ನೋಡಿರುತ್ತಾರೆ. ಇನ್ನು ಮಜಾ ಟಾಕೀಸ್‍ನಲ್ಲಿ ಕುರಿ ಪ್ರತಾಪ್ ಎಲ್ಲರನ್ನು ನಕ್ಕು ನಲಿಸಿದ್ದಾರೆ. ಅದೇ ರೀತಿ ಸದ್ಯ ಬಿಗ್ ಬಾಸ್ ಸೀಸನ್-7ರ ಹಾಸ್ಯ ಪ್ರತಿಭೆಯಾಗಿರುವ ಕುರಿ ಪ್ರತಾಪ್ ಅವರಿಗೆ ಹೆಚ್ಚು ವೋಟ್ ಮಾಡಿ ಎಂದು ಡಿ ಬಾಸ್ ಅಭಿಮಾನಿಗಳು ವಿನೂತನ ರೀತಿ ಮನವಿ ಮಾಡಿಕೊಂಡಿದ್ದಾರೆ.

    ಕುರಿ ಪ್ರತಾಪ್ ತುಂಬಾ ಮುಗ್ಧ. ಅವರು ಅಷ್ಟು ಬೇಗ ಅಗ್ರೆಸ್ಸೀವ್ ಆಗೋಲ್ಲ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ. ಸದ್ಯ ಬಿಗ್ ಬಾಸ್ ಶೋನಲ್ಲಿ ಎಲ್ಲರನ್ನು ನಕ್ಕು ನಲಿಸಿ, ಮನರಂಜನೆ ನೀಡುತ್ತಿರುವವರ ಸಾಲಿನಲ್ಲಿ ಅವರಿದ್ದಾರೆ. ಮೊದಲ ಮೂರು-ನಾಲ್ಕು ವಾರಗಳಲ್ಲಿ ಕುರಿ ಪ್ರತಾಪ್ ಅವರು ನಾಮಿನೇಷನ್ ಲಿಸ್ಟ್ ಗೆ ಬಂದೇ ಇರಲಿಲ್ಲ. ಇತ್ತೀಚೆಗಷ್ಟೇ ಅವರು ಕೂಡ ನಾಮಿನೇಟ್ ಲಿಸ್ಟ್ ನಲ್ಲಿ ಅವರ ಹೆಸರು ಸೇರಿಕೊಂಡಿದೆ. ಅದರೆ ಜನರು ವೋಟ್ ಮಾಡಿ ಅವರನ್ನು ಸೇವ್ ಮಾಡಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಒಳಗೊಂದು ಹೊರಗೊಂದು ಇಟ್ಟುಕೊಳ್ಳದೆ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿತ್ವ ಕುರಿ ಪ್ರತಾಪ್ ಅವರಲ್ಲಿ ಇದೆ. ಹೀಗಾಗಿ ನಾಮಿನೇಟ್ ಆದರೂ ಅವರು ಸೇವ್ ಆಗುತ್ತಾ ಬಂದಿದ್ದಾರೆ.

    ಕುರಿ ಪ್ರತಾಪ್ ಅವರ ಅಭಿಮಾನಿಗಳು ಅವರನ್ನು ಉಳಿಸಲು ಹೆಚ್ಚೆಚ್ಚು ವೋಟ್ ಮಾಡುತ್ತಿದ್ದಾರೆ. ಹಾಗೆಯೇ ಜೊತೆಯಲ್ಲಿರುವವರಿಗೂ ವೋಟ್ ಮಾಡಿ ಎಂದು ಮಾಹಿತಿ ನೀಡುತ್ತಿದ್ದಾರೆ. ಅಷ್ಟೇ ಅಲ್ಲದೆ ದರ್ಶನ್ ಅವರ ಸಿನಿಮಾದ ಬ್ಯಾನರನ್ನೇ ಪ್ರತಾಪ್ ಅವರನ್ನು ಉಳಿಕೊಳ್ಳಲು ಅಭಿಮಾನಿಗಳು ಬಳಸಿಕೊಂಡಿದ್ದಾರೆ.

    ಇತ್ತೀಚೆಗಷ್ಟೇ ದರ್ಶನ್ ಅಭಿನಯದ ಭಾರೀ ನಿರೀಕ್ಷಿತ `ಒಡೆಯ’ ಸಿನಿಮಾ ರಿಲೀಸ್ ಆಗಿದೆ. ಈ ವೇಳೆ ದರ್ಶನ್ ಅಭಿಮಾನಿಗಳು ಥಿಯೇಟರ್ ಮುಂದೆ ಡಿ ಬಾಸ್ ಜೊತೆ ಕೆಲ ಅಭಿಮಾಗಳ ಫೋಟೋ ಬ್ಯಾನರ್ ಹಾಕುವುದು ಸಹಜ. ಆದರೆ ಹೀಗೆ ಹಾಕಿದ್ದ ಬ್ಯಾನರ್‌ವೊಂದರಲ್ಲಿ ‘ವೋಟ್ ಫಾರ್ ಕುರಿ’ ಎಂದು ಬರೆದು ಕುರಿ ಪ್ರತಾಪ್ ಫೋಟೋವನ್ನು ಕೂಡ ಹಾಕಲಾಗಿದೆ. ಸದ್ಯ ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದನ್ನು ನೋಡಿ ನೆಟ್ಟಿಗರು ಕುರಿ ಪ್ರತಾಪ್ ಅಭಿಮಾನಿಗಳ ಐಡಿಯಾಗೆ ಫಿದಾ ಆಗಿದ್ದಾರೆ.

  • ಅಬ್ಬರಿಸುತ್ತಲೇ ಪ್ರೇಕ್ಷಕರ ಮನಗೆದ್ದ ಒಡೆಯ!

    ಅಬ್ಬರಿಸುತ್ತಲೇ ಪ್ರೇಕ್ಷಕರ ಮನಗೆದ್ದ ಒಡೆಯ!

    ಸಂದೇಶ್ ನಾಗರಾಜ್ ಅರ್ಪಿಸಿ, ಎನ್.ಸಂದೇಶ್ ನಿರ್ಮಾಣ ಮಾಡಿರುವ ಒಡೆಯ ಚಿತ್ರ ತೆರೆಕಂಡು ಇದೀಗ ರಾಜ್ಯಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಭರಪೂರ ಓಪನಿಂಗ್ ಪಡೆದುಕೊಂಡಿದ್ದ ಈ ಸಿನಿಮಾ ಬಾಯಿಂದಬಾಯಿಗೆ ಹರಡಿಕೊಂಡ ಸದಭಿಪ್ರಾಯಗಳಿಂದಲೇ ಎರಡನೇ ದಿನ ಮತ್ತಷ್ಟು ಹೌಸ್‍ಫುಲ್ ಪ್ರದರ್ಶನದೊಂದಿಗೆ ಮಹಾ ಗೆಲುವಿನತ್ತ ದಾಪುಗಾಲಿಡುತ್ತಿದೆ. ಅಷ್ಟಕ್ಕೂ ಮೊದಲಿನಿಂದ ಬಿಡುಗಡೆಯ ಕಡೇ ಘಳಿಗೆಯವರೆಗೂ ಒಡೆಯನ ಮೇಲೆ ಕುದುರಿಕೊಂಡಿದ್ದ ಕ್ರೇಜ್ ಇತ್ತಲ್ಲಾ ಅದು ದೊಡ್ಡ ಮಟ್ಟದ ಗೆಲುವಿನ ಮುನ್ಸೂಚನೆಯಂತಿತ್ತು.

    ಒಂದೊಳ್ಳೆ ಕಂಟೆಂಟು ಮತ್ತು ಅದರಲ್ಲಿ ಮಾಸ್ ಮತ್ತು ಫ್ಯಾಮಿಲಿ ಮ್ಯಾನ್ ಆಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸಿರುವ ರೀತಿಗಳೇ ಅದನ್ನು ನಿಜವಾಗಿಸಿವೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು ಮಾಸ್, ಫ್ಯಾಮಿಲಿ ಸೆಂಟಿಮೆಂಟ್ ಸೇರಿದಂತೆ ಎಲ್ಲ ಥರದ ಪಾತ್ರಗಳಿಗೂ ಸರಿ ಹೊಂದುವಂಥಾ ನಟನೆ. ಒಂದು ಕಡೆ ಅವರ ಅಭಿಮಾನಿಗಳು ದರ್ಶನ್ ಸದಾ ಆಕ್ಷನ್ ಓರಿಯಂಟೆಡ್ ಪಾತ್ರಗಳಲ್ಲಿಯೇಮಿಂಚಬೇಕೆಂದು ಬಯಸುತ್ತಾರೆ. ಮತ್ತೊಂದು ಕಡೆಯಿಂದ ಫ್ಯಾಮಿಲಿ ಪ್ರೇಕ್ಷಕರು ಅವರನ್ನು ಮತ್ತೆ ಮತ್ತೆ ಫ್ಯಾಮಿಲಿ ಮ್ಯಾನ್ ಆಗಿ ಕಣ್ತುಂಬಿಕೊಳ್ಳಲು ಕಾತರಿಸುತ್ತಾರೆ. ಈ ಥರದ ಪ್ರೇಕ್ಷಕರ ಎಲ್ಲ ಬೇಡಿಕೆ, ಆಶಯಗಳನ್ನೂ ತಣಿಸುವಂಥಾ ರೀತಿಯಲ್ಲಿ ಒಡೆಯ ಮೂಡಿ ಬಂದಿದೆ. ಈ ಕಾರಣದಿಂದಲೇ ಎರಡನೇ ದಿನ ಮತ್ತಷ್ಟು ಆವೇಗದಿಂದ ಈ ಸಿನಿಮಾಮುನ್ನುಗ್ಗುತ್ತಿದೆ.

    ಒಡೆಯ ಕರ್ನಾಟಕದ ಮೂಲೆ ಮೂಲೆಯಲ್ಲಿಯೂ ಇದೀಗ ಉತ್ತಮ ಪ್ರದರ್ಶನ ನೀಡುತ್ತಿದೆ. ದರ್ಶನ್ ಅವರಂಥಾ ಸ್ಟಾರ್ ನಟರ ಸಿನಿಮಾಗಳೆಂದ ಮೇಲೆ ಒಂದು ಕ್ರೇಜ್, ದೊಡ್ಡ ಮಟ್ಟದ ನಿರೀಕ್ಷೆಗಳು ಇದ್ದೇ ಇರುತ್ತವೆ. ಆದರೆ ಅದೆಲ್ಲವನ್ನೂ ಮೀರಿದಂಥಾ ಮೇಲ್ಮಟ್ಟದಲ್ಲಿ ಅಂಥಾ ಸಿನಿಮಾಗಳು ಮೂಡಿ ಬಂದಾಗ ಪ್ರೇಕ್ಷಕರ ಸಂತಸಕ್ಕೆ ಎಲ್ಲೆಗಳೇ ಇರುವುದಿಲ್ಲ. ಒಡೆಯನ ಗೆಲುವಿನ ನಾಗಾಲೋಟದ ಹಿಂದೆ ಇದೇ ಅಂಶ ಪ್ರಧಾನವಾಗಿ ಕೆಲಸ ಮಾಡಿದೆ.

    ಒಡೆಯ ಚಿತ್ರ ದರ್ಶನ್ ಅವರನ್ನು ಬೇರೆಯದ್ದೇ ಥರದಲ್ಲಿ ಅನಾವರಣಗೊಳಿಸಲಿದೆ ಅನ್ನೋ ನಂಬಿಕೆ ಈ ಹಿಂದಿನಿಂದಲೇ ಹುಟ್ಟಿಕೊಂಡಿತ್ತು. ಅವರಿಲ್ಲಿ ಗಜೇಂದ್ರನಾಗಿ ಅಬ್ಬರಿಸಿದ ರೀತಿ ಎಲ್ಲ ನಿರೀಕ್ಷೆಗಳನ್ನೂ ಮೀರಿದ ಸ್ವರೂಪದ್ದು. ಇದರಿಂದಾಗಿಯೇ ಎಲ್ಲ ವರ್ಗದ ಪ್ರೇಕ್ಷಕರಿಗೂ ಒಡೆಯ ಇಷ್ಟವಾಗಿದ್ದಾರೆ. ಈ ಹಿಂದೆ ಎನ್. ಸಂದೇಶ್ ಅವರು ತಮ್ಮ ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರಿನ ಮೂಲಕ ದರ್ಶನ್ ಅಭಿನಯದ ಪ್ರಿನ್ಸ್ ಮತ್ತು ಮಿಸ್ಟರ್ ಐರಾವತ ಎಂಬೆರಡು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದರು. ಅವೆರಡೂ ಸಿನಿಮಾಗಳು ಕೂಡಾ ಸೂಪರ್ ಹಿಟ್ ಆಗಿದ್ದವು. ಒಡೆಯ ಚಿತ್ರ ಆ ಸಾಲಿನಲ್ಲಿ ಸಂದೇಶ್ ಪ್ರೊಡಕ್ಷನ್ಸ್‍ಗೆ ಹ್ಯಾಟ್ರಿಕ್ ಗೆಲುವು ತಂದು ಕೊಟ್ಟಿದೆ.

    ಫ್ಯಾಮಿಲ್ ಕಂ ಆಕ್ಷನ್ ಸ್ವರೂಪದ ಈ ಕಥೆ ನಿಜಕ್ಕೂ ಮೋಡಿ ಮಾಡಿದೆ. ವರ್ಷದ ಕೊನೆಯನ್ನು ಒಡೆಯ ಒಂದೊಳ್ಳೆ ಸಿನಿಮಾ ನೋಡಿದ ಖುಷಿಯಿಂದಲೇ ಶೃಂಗಾರಗೊಳ್ಳುವಂತೆ ಮಾಡಿದ್ದಾನೆ. ನೀವಿನ್ನೂ ಈ ಸಿನಿಮಾ ನೋಡಿಲ್ಲ ಎಂದಾದರೆ ಖಂಡಿತಾ ಒಮ್ಮೆನೋಡಿ. ಅತ್ಯುತ್ತಮ ಚಿತ್ರ ನೋಡಿದ ಖುಷಿಯೊಂದು ಮನಸು ಸೋಕುತ್ತದೆ.

  • ಸೆಡ್ಡು ಹೊಡೆದರೆ ಗೆದ್ದೇ ತೀರುವ ಹಠದ ಒಡೆಯ!

    ಸೆಡ್ಡು ಹೊಡೆದರೆ ಗೆದ್ದೇ ತೀರುವ ಹಠದ ಒಡೆಯ!

    ದರ್ಶನ್ ಅಭಿಮಾನಿಗಳ ಪಾಲಿಗೆ ಹ್ಯಾಟ್ರಿಕ್ ಹಬ್ಬದಂತೆ ಬಿಂಬಿಸಲ್ಪಟ್ಟಿದ್ದ ಚಿತ್ರ ಒಡೆಯ. ಒಂದು ಪಕ್ಕಾ ಫ್ಯಾಮಿಲಿ ಕಂ ಮಾಸ್ ಸಬ್ಜೆಕ್ಟಿನೊಂದಿಗೆ ರೂಪುಗೊಂಡಿರೋ ಈ ಚಿತ್ರವೀಗ ಬಿಡುಗಡೆಯಾಗಿದೆ. ಸಂದೇಶ್ ಪ್ರೊಡಕ್ಷನ್ ಬ್ಯಾನರಿನಡಿಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾ ಶುರುವಾತಿನಿಂದಲೂ ಮೂಡಿಸಿದ್ದ ನಿರೀಕ್ಷೆ, ಕುತೂಹಲಗಳದ್ದೊಂದು ಚೆಂದದ ಹಾದಿ. ದರ್ಶನ್ ಯಾವುದೇ ಸಿನಿಮಾಗಳಲ್ಲಿ ಅಭಿನಯಿಸಿದರೂ ಕೂಡಾ ಇಂಥಾದ್ದೊಂದು ಕ್ರೇಜ್ ಹುಟ್ಟಿಕೊಳ್ಳೋದು ಅಪರೂಪದ ವಿದ್ಯಮಾನವೇನಲ್ಲ. ಆದರೆ, ಒಡೆಯನ ವಿಚಾರದಲ್ಲಿ ಅದರ ತೀವ್ರತೆ ತುಸು ಹೆಚ್ಚೇ ಇತ್ತು. ಅದೆಲ್ಲವೂ ತಣಿಯುವಂತೆ, ನಿರೀಕ್ಷೆಗೂ ಮೀರಿದ ಶೈಲಿಯಲ್ಲಿ ಈ ಸಿನಿಮಾವೀಗ ಪ್ರೇಕ್ಷಕರನ್ನು ಎದುರುಗೊಂಡಿದೆ.

    ಈಗಾಗಲೇ ದರ್ಶನ್ ಅವರ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿ ಸೈ ಅನ್ನಿಸಿಕೊಂಡಿದ್ದ ಎಂ.ಡಿ ಶ್ರೀಧರ್ ನಿರ್ದೇಶನ, ಈ ಹಿಂದೆಯೇ ಎರಡು ಯಶಸ್ವೀ ಚಿತ್ರಗಳನ್ನು ದರ್ಶನ್‍ರೊಂದಿಗೆ ಕೊಡಮಾಡೊರೋ ಸಂದೇಶ್ ಪ್ರೊಡಕ್ಷನ್ ಬ್ಯಾನರ್‍ನ ನಿರ್ಮಾಣ… ಇದೆಲ್ಲದರೊಂದಿಗೆ ಮತ್ತೊಂದು ಮಹಾ ಗೆಲುವು ದಕ್ಕಿಸಿಕೊಳ್ಳುವ ಆವೇಗದೊಂದಿಗೇ ಈ ಸಿನಿಮಾ ಸಾಗಿ ಬಂದಿತ್ತು. ಒಂದರೆ ಕ್ಷಣವೂ ಅತ್ತಿತ್ತ ಕದಲದಂಥಾ ಕ್ಯೂರಿಯಾಸಿಟಿ, ಸದಾ ಅಂತರ್ಗತ ಒರತೆಯಂತೆ ಫ್ಯಾಮಿಲಿ ಸೆಂಟಿಮೆಂಟಿನ ಪಸೆಯನ್ನು ಕಾಪಾಡಿಕೊಂಡು ಸಾಗುವ ಗಟ್ಟಿ ಕಥೆ ಮತ್ತು ಇದೆಲ್ಲದರ ಕೇಂದ್ರ ಬಿಂದುವಾಗಿ ಅಬ್ಬರಿಸೋ ಗಜೇಂದ್ರನ ಪಾತ್ರಗಳೆಲ್ಲವೂ ಸೇರಿ ಒಡೆಯ ಚಿತ್ರವನ್ನು ಬೇರೆಯದ್ದೇ ಮಟ್ಟಕ್ಕೇರಿಸಿ ಬಿಟ್ಟಿವೆ.

    ಇಲ್ಲಿನ ಕಥೆಯ ಕೇಂದ್ರಬಿಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿರ್ವಹಿಸಿರುವ ಗಜೇಂದ್ರನ ಪಾತ್ರ. ಗಜೇಂದ್ರ ಟ್ರೇಡಿಂಗ್ ಮತ್ತು ಟ್ರಾನ್ಸ್‍ಪೋರ್ಟ್ ಕಂಪೆನಿಯ ಮಾಲೀಕ. ಹೀಗೆ ತನ್ನ ವ್ಯವಹಾರದಲ್ಲಿ ಬ್ಯುಸಿಯಾಗಿದ್ದುಕೊಂಡೇ ವ್ಯಕ್ತಿಗತವಾಗಿ ತಮ್ಮಂದಿರ ಪ್ರೀತಿಯನ್ನೇ ಜಗತ್ತೆಂದುಕೊಂಡವನು ಗಜೇಂದ್ರ. ಹಾಗಂತ ಈತನದ್ದು ತನ್ನ ವ್ಯವಹಾರ ಮತ್ತು ವೈಯಕ್ತಿಕ ಬದುಕನ್ನೇ ಜಗತ್ತಾಗಿಸಿಕೊಂಡಿರೋ ವ್ಯಕ್ತಿತ್ವಲ್ಲ. ಗಜೇಂದ್ರ ಅನ್ಯಾಯ ಕಂಡರೆ ಕೆಂಡವಾಗಿ ಆರ್ಭಟಿಸುತ್ತಾನೆ. ಪ್ರೀತಿಯ ಮುಂದೆ ಕರಗುತ್ತಲೇ ರೈತರ ಪರವಾಗಿ ನಿಂತು ಬಡಿದಾಡುತ್ತಾನೆ. ಅನ್ಯಾಯವೆಸಗುವಾತ ಎಂಥಾದ್ದೇ ರಕ್ಕಸ ಪ್ರವೃತ್ತಿ ಹೊಂದಿದವನಾಗಿದ್ದರೂ ಸೆಡ್ಡು ಹೊಡೆದು ನಿಂತು ಮಣ್ಣು ಮುಕ್ಕಿಸುತ್ತಾನೆ.

    ಇದಿಷ್ಟು ಕಥಾ ಎಳೆಯೇ ದರ್ಶನ್ ಒಡೆಯನಾಗಿ ಅದ್ಯಾವ ಪರಿಯಾಗಿ ಮಿಂಚಿದ್ದಾರೆಂಬುದನ್ನು ಸಾರಿ ಹೇಳುತ್ತದೆ. ಮುಂದಿನ ಕಥೆಯ ಎಳೆ ಹೇಳೋದಕ್ಕಿಂತ ಅದನ್ನು ಸಿನಿಮಾ ಮಂದಿರಗಳಲ್ಲಿ ನೋಡಿ ಖುಷಿ ಪಡುವುದೇ ಉತ್ತಮ. ಒಟ್ಟಾರೆಯಾಗಿ ಇಡೀ ಚಿತ್ರದಲ್ಲಿ ಮಾಸ್ ಮತ್ತು ಫ್ಯಾಮಿಲಿ ಸೆಂಟಿಮೆಂಟ್ ಕಥೆಗಳು ಒಟ್ಟೋಟ್ಟಾಗಿಯೇ ಸಾಗುತ್ತವೆ. ಅದೆಲ್ಲವೂ ಕಣ್ಮನ ತಣಿಸುವಂಥಾ ದೃಷ್ಯ ವೈಭವದ ಮೂಲಕ ಮತ್ತಷ್ಟು ಪರಿಣಾಮಕಾರಿಯಾಗಿ ಮೂಡಿ ಬಂದಿದೆ. ಈ ಮೂಲಕ ನಿರ್ದೇಶಕ ಎಂ.ಡಿ ಶ್ರೀಧರ್ ತಮ್ಮ ಕುಸುರಿ ಕಲೆಯ ಪಾಂಡಿತ್ಯವನ್ನು ಸಾಬೀತುಗೊಳಿಸಿದ್ದಾರೆ. ದರ್ಶನ್ ಅವರನ್ನು ಶ್ರೀಧರ್ ಇಲ್ಲಿ ಓರ್ವ ನಟನಾಗಿ ಮತ್ತೊಂದು ಮಟ್ಟಕ್ಕೇರುವಂತೆಯೇ ದೃಶ್ಯ ಕಟ್ಟಿದ್ದಾರೆ. ದರ್ಶನ್ ಗಜೇಂದ್ರನಾಗಿ ಅಬ್ಬರಿಸಿದ ರೀತಿಯ ಬಗೆಗಂತೂ ಯಾವ ವಿವರಣಗಳ ಅಗತ್ಯವೂ ಇಲ್ಲ.

    ಹೀಗೆ ದರ್ಶನ್ ಅವರೊಂದಿಗೆ ಸಲೀಸಾಗಿ ಎಣಿಸಲೂ ಕಷ್ಟವಾಗುವಷ್ಟು ದೊಡ್ಡ ತಾರಾಗಣ ಸಾಥ್ ನೀಡಿದೆ. ಆ ಇಡೀ ತಾರಾಗಣವನ್ನು ಇಲ್ಲಿನ ದೃಷ್ಯಗಳಿಗೆ ಬೇಕಾದಂತೆ ದುಡಿಸಿಕೊಳ್ಳಲಾಗಿದೆ. ಇಲ್ಲಿ ಪ್ರತಿ ಪಾತ್ರಗಳೂ ಮನಸಲ್ಲಿ ನೆಲೆ ನಿಲ್ಲುತ್ತವೆ. ರವಿಶಂಕರ್, ಶರತ್ ಲೋಹಿತಾಶ್ವ ಎಂದಿನಂತೆಯೇ ವಿಲ್ಲನ್ನುಗಳಾಗಿ ಅಬ್ಬರಿಸಿದ್ದಾರೆ. ಸಾಮಾನ್ಯವಾಗಿ ಅಬ್ಬರದ ಪಾತ್ರಗಳಲ್ಲಿ ಕಾಣಿಸಿಕೊಳ್ಳೋ ದೇವರಾಜ್ ಇಲ್ಲಿ ಮತ್ತಷ್ಟು ಭಿನ್ನವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಒಟ್ಟಾರೆಯಾಗಿ ಒಡೆಯ ಎಲ್ಲ ವರ್ಗದ ಪ್ರೇಕ್ಷಕರೂ ಕೂತು ನೋಡಿ ಮನತಣಿಸಿಕೊಳ್ಳುವಂಥಾ ಸ್ವರೂಪದಲ್ಲಿಯೇ ಮೂಡಿ ಬಂದಿದೆ.

    ರೇಟಿಂಗ್: 4 / 5

  • ನಟಿ ಊರ್ವಶಿ ವಿರುದ್ಧ ಅಸಮಾಧಾನ ಹೊರಹಾಕಿದ ದರ್ಶನ್

    ನಟಿ ಊರ್ವಶಿ ವಿರುದ್ಧ ಅಸಮಾಧಾನ ಹೊರಹಾಕಿದ ದರ್ಶನ್

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

    ನಾವು ಕನ್ನಡ ಭಾಷೆಯಲ್ಲಿ ಸಿನಿಮಾ ಮಾಡುತ್ತಿದ್ದೇವೆ. ಕನ್ನಡ ಅಭಿಮಾನವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂಬುದು ನನ್ನ ಆಸೆ. ಕೆಲವರು ಕನ್ನಡ ಕಲಿಯುತ್ತಾರೆ. ಹೊಸಬರು ಎಂದಾಕ್ಷಣ ಎಲ್ಲವೂ ಆಗುತ್ತೆ ಎಂಬ ಅರ್ಥ ಅಲ್ಲ. ಒಂದು ಹೊಸ ಪ್ರಯತ್ನ ಮಾಡಬೇಕು ಎಂದರು.

    ನಮ್ಮ ಭಾಷೆಯವರನ್ನೇ ಸಿನಿಮಾದಲ್ಲಿ ಅವಕಾಶ ಕೊಟ್ಟಾಗ ಲಿಪ್ ಮೂಮೆಂಟ್ ತಿಳಿಯುತ್ತದೆ. ‘ಐರಾವತ’ ಚಿತ್ರದಲ್ಲಿ ಹೀಗೆ ಆಗಿತ್ತು. ನಟಿ ಊರ್ವಶಿ ನೋಡಲು ಚೆನ್ನಾಗಿದ್ದರು. ಆದರೆ ಅವರು ಕನ್ನಡ ಭಾಷೆ ಕಲಿಯಲಿಲ್ಲ. ಇದು ಐರಾವತ ಚಿತ್ರಕ್ಕೆ ಮೈನಸ್ ಪಾಯಿಂಟ್ ಆಯಿತು. ಮುಂಬೈಯಿಂದ ಬಂದವರು ತಮಿಳು ಹಾಗೂ ತೆಲುಗು ಚಿತ್ರರಂಗಕ್ಕೆ ಹೋದಾಗ ಅಲ್ಲಿನ ಭಾಷೆ ಕಲಿಯುತ್ತಾರೆ. ಆದರೆ ನಮ್ಮ ಭಾಷೆಯನ್ನು ನಿರ್ಲಕ್ಷ್ಯಿಸುತ್ತಾರೆ ಎಂದು ದರ್ಶನ್ ಅಸಮಾಧಾನ ವ್ಯಕ್ತಪಡಿಸಿದರು.

    ನಾನು ಹೈದರಾಬಾದ್‍ನ ರಾಮೋಜಿ ಫಿಲಂ ಸಿಟಿಯಲ್ಲಿ ಶೂಟಿಂಗ್ ಮಾಡಿದ್ದೇನೆ. ಬೇರೆ ಭಾಷೆಗಳ ಸಿನಿಮಾ ಸೆಟ್ ನೋಡಿದ್ದೇವೆ. ಅವರ ಸಿನಿಮಾ ಸೆಟ್ ನೋಡಿದಾಗ ನಮ್ಮ ಕನ್ನಡ ಸಿನಿಮಾ ಸೆಟ್ ಚೆನ್ನಾಗಿದೆ ಎಂದು ಎನಿಸುತ್ತೆ. ನಿರ್ಮಾಪಕರು ಹೊರಗಿನಿಂದ ನಟಿಯನ್ನು ಕರೆದುಕೊಂಡು ಬರುತ್ತಾರೆ ಎಂದು ಹೇಳಿದಾಗ ನಾನು ಅವರಿಗೆ ಟಾಪ್ ಹೀರೋಯಿನ್ ಕರೆದುಕೊಂಡು ಬಾ ಎಂದು ಹೇಳುತ್ತೇನೆ. ಮುಂಬೈಯಿಂದ ನಟಿಯನ್ನು ಕರೆದುಕೊಂಡು ಬರುತ್ತೇನೆ ಎಂದರೆ ನಮ್ಮವರನ್ನೇ ನಟಿಯಾಗಿ ಮಾಡು ಎಂದು ಹೇಳುತ್ತೇನೆ ಎಂದರು.

    ದರ್ಶನ್ ಜೊತೆಗೆ ನಟಿ ಊರ್ವಶಿ ‘ಐರಾವತ’ ಸಿನಿಮಾದಲ್ಲಿ ನಟಿಯಾಗಿ ನಟಿಸಿದ್ದರು.

  • ಮೈಸೂರಿನಲ್ಲಿ ‘ಒಡೆಯ’ ಸ್ಟಾರ್‌ಗಳ ಮೆರವಣಿಗೆ

    ಮೈಸೂರಿನಲ್ಲಿ ‘ಒಡೆಯ’ ಸ್ಟಾರ್‌ಗಳ ಮೆರವಣಿಗೆ

    ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾದ ಪೋಸ್ಟರ್ ಗಳ ಮೆರವಣಿಗೆಯನ್ನು ಇಂದು ನಗರದಲ್ಲಿ ನಡೆಸಲಾಯ್ತು.

    ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಚಿತ್ರ ಬಿಡುಗಡೆಯಾಗುವ ಶಾಂತಲಾ ಚಿತ್ರ ಮಂದಿರದವರೆಗೂ ಆಟೋ, ಜಟಕಾ ಬಂಡಿ ಮತ್ತು ಅಲಂಕರಿಸಿದ ರಥದಲ್ಲಿ ಪೋಸ್ಟರ್ ಗಳ ಮೆರವಣಿಗೆ ನಡೆಯಿತು. ನೂರಾರು ಅಭಿಮಾನಿಗಳು ಜೈಕಾರ ಹಾಕುತ್ತಾ, ತಮಟೆ ಬೀಟ್ ಗೆ ಹೆಜ್ಜೆ ಹಾಕಿ ಸಿನಿಮಾಗೆ ಶುಭ ಕೋರಿದರು. ಮೆರವಣಿಗೆ ಉದ್ದಕ್ಕೂ ತಮ್ಮ ನೆಚ್ಚಿನ ನಟನಿಗೆ ಜೈಕಾರ ಹಾಕಿದರು.

    ಚಂದನವನದ ಬಹುನೀರಿಕ್ಷಿತ ಸಿನಿಮಾ ಒಡೆಯ ಗುರುವಾರ ಬಿಡುಗಡೆಯಾಗಲಿದೆ. ಸಂದೇಶ್ ನಾಗರಾಜ್ ನಿರ್ಮಾಣ, ಎಚ್‍ಡಿ ಶ್ರೀಧರ್ ನಿರ್ದೇಶನದಲ್ಲಿ ಒಡೆಯ ಚಿತ್ರ ಮೂಡಿ ಬಂದಿದೆ. ದರ್ಶನ್ ಖದರ್ ಅನ್ನು ಮತ್ತಷ್ಟು ಮಿರುಗಿಸುವಂಥಾ ಕಥೆ ಹೊಂದಿರೋ ಈ ಚಿತ್ರದ ಬಗ್ಗೆ ಅವರ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಈ ಚಿತ್ರದಲ್ಲಿ ಯಶಸ್ ಮತ್ತು ಪಂಕಜ್ ದರ್ಶನ್ ಸಹೋದರರಾಗಿ ನಟಿಸಿದ್ದಾರೆ. ಸನಾ ತಿಮ್ಮಯ್ಯ ಸಿನಿಮಾದಲ್ಲಿ ದರ್ಶನ್ ಅವರಿಗೆ ಜೊತೆಯಾಗಿದ್ದಾರೆ.

  • ಸಂಬಂಧಗಳಿಗೆ ಬೆಲೆ ಕೊಡುವ ಒಡೆಯನ ಆಕ್ಷನ್ ಅಚ್ಚರಿ!

    ಸಂಬಂಧಗಳಿಗೆ ಬೆಲೆ ಕೊಡುವ ಒಡೆಯನ ಆಕ್ಷನ್ ಅಚ್ಚರಿ!

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಚಿತ್ರ ಪರಿಪೂರ್ಣವಾದ ಕೌಟುಂಬಿಕ ಕಥಾ ಹಂದರ ಹೊಂದಿರೋ ಚಿತ್ರವೆಂಬ ವಿಚಾರ ಈಗಾಗಲೇ ಜಾಹೀರಾಗಿದೆ. ಟ್ರೇಲರ್, ಟೀಸರ್ ಮತ್ತು ಹಾಡುಗಳ ಮೂಲಕ ಒಡೆಯನ ಅದ್ದೂರಿತನದ ಮಜಲುಗಳು ಸಹ ಅನಾವರಣಗೊಂಡಿವೆ. ಸಂದೇಶ್ ನಾಗರಾಜ್ ಅರ್ಪಿಸಿ, ಎನ್ ಸಂದೇಶ್ ಅವರು ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರಿನಲ್ಲಿ ನಿರ್ಮಾಣ ಮಾಡಿರುವ ಚಿತ್ರವಿದು. ಇದರಲ್ಲಿ ದರ್ಶನ್ ತುಂಬಿದ ಮನೆಯ ಒಡೆಯನಾಗಿ, ಬಂಧಗಳಿಗೆ ಬೆಲೆ ಕೊಡುವ ನಾಯಕನಾಗಿ ಪಕ್ಕಾ ಫ್ಯಾಮಿಲಿ ಮ್ಯಾನ್ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಭರ್ಜರಿ ಆಕ್ಷನ್ ಸನ್ನಿವೇಶಗಳೂ ಈ ಸಿನಿಮಾದಲ್ಲಿ ಹೇರಳವಾಗಿದೆ. ಅದುವೇ ಈ ಚಿತ್ರದ ಪ್ರಧಾನ ಆಕರ್ಷಣೆ ಅನ್ನೋದು ಚಿತ್ರತಂಡದ ಭರವಸೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿಜ ಜೀವನದಲ್ಲಿಯೂ ಸ್ನೇಹಕ್ಕೆ, ಪ್ರೀತಿಗೆ ತುಂಬಾನೇ ಬೆಲೆ ಕೊಡುವಂಥಾ ವ್ಯಕ್ತಿತ್ವ ಹೊಂದಿರುವವರು. ಅವರನ್ನು ಫ್ಯಾಮಿಲಿ ಸಬ್ಜೆಕ್ಟಿನ ಚಿತ್ರಗಳಲ್ಲಿಯೇ ಕಾಣ ಬಯಸುವ ದೊಡ್ಡ ಪ್ರೇಕ್ಷಕ ವರ್ಗವೇ ಕನ್ನಡದಲ್ಲಿದೆ. ಆಗಾಗ ಆ ವರ್ಗದ ಪ್ರೇಕ್ಷಕರನ್ನು ತಣಿಸುವಂಥಾ ಸಿನಿಮಾಗಳಲ್ಲಿ ದರ್ಶನ್ ನಟಿಸುತ್ತಾರೆ. ಆದರೆ ಒಡೆಯ ಪೂರ್ತಿಯಾಗಿ ಫ್ಯಾಮಿಲಿ ಪ್ಯಾಕೇಜಿನಂಥಾ ಚಿತ್ರ. ತನ್ನನ್ನು ನಂಬಿದವರಿಗಾಗಿ ಏನು ಮಾಡಲೂ ಸಿದ್ಧವಿರುವ ಈ ಒಡೆಯ, ಎದುರಾಳಿಗಳು ಯಾರೇ ಇದ್ದರೂ ಎದೆ ಅದುರಿಸುವಂತೆ ಅಬ್ಬರಿಸಲೂ ಹಿಂದೆ ಮುಂದೆ ನೋಡುವವನಲ್ಲ. ಒಡೆಯ ಗಜೇಂದ್ರನ ಈ ಗುಣವೇ ಸದರಿ ಸಿನಿಮಾವನ್ನು ಪಕ್ಕಾ ಆಕ್ಷನ್ ಚಿತ್ರವಾಗಿಯೂ ಗಮನ ಸೆಳೆಯುವಂತೆ ಮಾಡಿದೆ.

    ದರ್ಶನ್ ಅಭಿಮಾನಿಗಳು ಸದಾ ಅವರನ್ನು ಆಕ್ಷನ್ ಪಾತ್ರಗಳಲ್ಲಿಯೇ ನೋಡಲು ಬಯಸುತ್ತಾರೆ. ಅಂಥವರೆಲ್ಲರನ್ನೂ ತಣಿಸುವಂಥಾ ಹೈ ವೋಲ್ಟೇಜ್ ಸಾಹಸ ಸನ್ನಿವೇಶಗಳು ಈ ಚಿತ್ರದಲ್ಲಿವೆ. ಅದರ ಝಲಕ್‍ಗಳು ಈಗಾಗಲೇ ಟ್ರೇಲರ್, ಟೀಸರ್‍ಗಳಲ್ಲಿ ಕಾಣಿಸಿವೆ. ಒಟ್ಟಾರೆಯಾಗಿ ಒಡೆಯನನ್ನು ನಿರ್ದೇಶಕ ಎಂ ಡಿ ಶ್ರೀಧರ್ ಇಲ್ಲಿನ ನೇಟಿವಿಟಿಗೆ ಒಗ್ಗಿಸಿಕೊಂಡು ರೂಪಿಸಿದ್ದಾರೆ. ಈ ಹಿಂದೆ ದರ್ಶನ್ ಅವರ ಫಸ್ಟ್ ಲುಕ್ ಅಭಿಮಾನಿಗಳು ಹುಚ್ಚೇಳುವಂತೆ ಮಾಡಿತ್ತು. ಅದನ್ನೇ ಮೀರಿಸುವಂಥಾ ಚೆಂದದ ಲುಕ್ಕುಗಳಲ್ಲಿ ದರ್ಶನ್ ಇಲ್ಲಿ ಒಡೆಯನಾಗಿ ಕಂಗೊಳಿಸಿದ್ದಾರೆ. ಇದೆಲ್ಲವೂ ಈ ವಾರವೇ ಪ್ರೇಕ್ಷಕರೆಲ್ಲರ ಮುಂದೆ ಅನಾವರಣಗೊಳ್ಳಲಿವೆ.

  • ಕೊಡಗಿನ ಕುವರಿ ಸನಾ ತಿಮ್ಮಯ್ಯ ಪ್ರಕಾರ ಒಡೆಯ ಅಂದರೆ

    ಕೊಡಗಿನ ಕುವರಿ ಸನಾ ತಿಮ್ಮಯ್ಯ ಪ್ರಕಾರ ಒಡೆಯ ಅಂದರೆ

    ಸಂದೇಶ್ ನಾಗರಾಜ್ ಅರ್ಪಿಸಿ, ಎನ್ ಸಂದೇಶ್ ನಿರ್ಮಾಣ ಮಾಡಿರುವ ಒಡೆಯ ಚಿತ್ರ ಈ ವಾರ ತೆರೆಗಾಣುತ್ತಿದೆ. ಈ ಮೂಲಕ ಅದೆಷ್ಟೋ ಕಾಲದಿಂದ ಅಭಿಮಾನಿಗಳಲ್ಲಿ ನಿಗಿನಿಗಿಸುತ್ತಿದ್ದ ಕಾತರ, ನಿರೀಕ್ಷೆಗಳೆಲ್ಲವೂ ಸಾಕಾರಗೊಳ್ಳುವ ಕ್ಷಣಗಳಿಗೆ ಕೌಂಟ್ ಡೌನ್ ಶುರುವಾಗಿದೆ. ಈ ಸಿನಿಮಾ ಆರಂಭವಾದ ಕ್ಷಣದಿಂದಲೇ ಇದರ ನಾಯಕಿ ಯಾರಾಗುತ್ತಾರೆಂಬ ಕುತೂಹಲ ಹುಟ್ಟಿಕೊಂಡಿತ್ತು. ಈ ಸಾಲಿನಲ್ಲಿ ಒಂದಷ್ಟು ಲೀಡ್ ನಟಿಯರ ಹೆಸರುಗಳೂ ತೇಲಿ ಹೋಗಿದ್ದವು. ಆದರೆ ಕಡೆಯೂ ಒಡೆಯನ ಒಡತಿಯಾಗಿ ನಿಕ್ಕಿಯಾಗಿದ್ದು ಕೊಡಗಿನ ಕುವರಿ ರಾಘವಿ ತಿಮ್ಮಯ್ಯ. ಮೊದಲ ಹೆಜ್ಜೆಯಲ್ಲಿಯೇ ಎಲ್ಲರೂ ಹುಬ್ಬೇರಿಸುವಂಥಾ ಅವಕಾಶ ಗಿಟ್ಟಿಸಿಕೊಂಡಿದ್ದ ರಾಘವಿಯ ಲಕ್ಕು ಈ ಸಿನಿಮಾ ಮೂಲಕವೇ ಬದಲಾಗೋ ಲಕ್ಷಣಗಳಿವೆ. ಈ ಕಾರಣದಿಂದಲೇ ಅವರು ಹೆಸರು ಬದಲಾವಣೆ ಮಾಡಿಕೊಂಡು ಇದೀಗ ಸನಾ ತಿಮ್ಮಯ್ಯ ಆಗಿ ಅವತರಿಸಿದ್ದಾರೆ.

    ಚಾಲೆಂಜಿಂಗ್ ಸ್ಟಾರ್‌ಗೆ ನಾಯಕಿಯಾಗಬೇಕೆಂಬ ಆಸೆ ಮತ್ತು ಪೈಪೋಟಿ ಲೀಡ್ ನಟಿಯರ ವಲಯದಲ್ಲಿಯೇ ಇರುತ್ತದೆ. ಹಾಗಿರುವಾಗ ಹೊಸಾ ಹುಡುಗಿ ಸನಾ ಅವಕಾಶವನ್ನು ತನ್ನದಾಗಿಸಿಕೊಂಡಾಗ ಸಹಜವಾಗಿಯೇ ಎಲ್ಲರೂ ಹೆಬ್ಬೇರಿಸಿದ್ದರು. ಆದರೆ ಇಲ್ಲಿರೋ ತನ್ನ ಸವಾಲಿನಂಥಾ ಪಾತ್ರವನ್ನು ಸನಾ ಎಲ್ಲರೂ ಮೆಚ್ಚಿಕೊಳ್ಳುವಂತೆಯೇ ನಿಭಾಯಿಸಿದ್ದಾರಂತೆ. ಅದು ಸಾಧ್ಯವಾದದ್ದು ದರ್ಶನ್ ಹಾಗೂ ಇಡೀ ಚಿತ್ರತಂಡದ ಪ್ರೋತ್ಸಾಹ ಮತ್ತು ಮಾರ್ಗದರ್ಶನದಿಂದಲೇ ಅನ್ನೋದು ಸನಾ ಅಭಿಪ್ರಾಯ. ಈ ನಿಟ್ಟಿನಲ್ಲಿ ಒಡೆಯ ಅಂದರೆ ಅವರ ಪಾಲಿಗೆ ಮಾರ್ಗದರ್ಶಕ ಮತ್ತು ಆತ್ಮಬಂಧು. ತನಗೆ ಇಂಥಾದ್ದೊಂದು ಅವಕಾಶ ಕೊಟ್ಟಿರೋ ಸಂದೇಶ್ ಪ್ರೊಡಕ್ಷನ್ಸ್ ಬಗ್ಗೆಯೂ ಸನಾಗೆ ಅಪಾರವಾದ ಗೌರವಾಧರಗಳಿವೆ.

    ಸನಾಗೆ ಆರಂಭಿಕ ಹೆಜ್ಜೆಯಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ನಾಯಕಿಯಾಗಿ ನಟಿಸೋ ಅವಕಾಶ ಕೂಡಿ ಬಂದಿರೋದರ ಬಗ್ಗೆ ಖುಷಿಯಿದೆ. ಸವಾಲಿನಂಥಾ ನಾಯಕಿಯ ಪಾತ್ರವನ್ನೂ ಸಮರ್ಥವಾಗಿ ನಿರ್ವಹಿಸಿರೋದರ ಬಗ್ಗೆ ಹೆಮ್ಮೆಯೂ ಇದೆ. ಇದರ ಜೊತೆ ಜೊತೆಗೇ ಒಡೆಯ ಕನ್ನಡಿಗರೆಲ್ಲರ ಪ್ರೀತಿ ಸಂಪಾದಿಸುವಂಥಾ ಹೆಮ್ಮೆಯ ಚಿತ್ರವಾಗಿ ಮೂಡಿ ಬಂದಿದೆಯೆಂಬ ಭರವಸೆ, ಅದು ದೊಡ್ಡ ಮಟ್ಟದಲ್ಲಿಯೇ ಗೆಲುವು ಕಾಣಲಿದೆ ಎಂಬ ನಂಬಿಕೆ ಸನಾರದ್ದು. ಇದೆಲ್ಲ ಏನೇ ಇದ್ದರೂ ಚೊಚ್ಚಲ ಚಿತ್ರದಲ್ಲಿಯೇ ದರ್ಶನ್ ನಾಯಕಿಯಾದ ಸನಾ ಅದೃಷ್ಟ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತೆ. ಸಿನಿಮಾ ಬಿಡುಗಡೆಯಾದ ನಂತರ ಸನಾ ನಟನೆಯನ್ನು ನೋಡಿಯೂ ಅದೇ ಅಚ್ಚರಿ ಮತ್ತೆ ಮಿರುಗುವಂತಾಗೋದರಲ್ಲಿ ಯಾವ ಸಂದೇಹವೂ ಇಲ್ಲ.

  • ಒಡೆಯ ಸಿನ್ಮಾ ನೋಡಿ ಬೈಕ್ ನಿಮ್ಮದಾಗಿಸಿಕೊಳ್ಳಿ

    ಒಡೆಯ ಸಿನ್ಮಾ ನೋಡಿ ಬೈಕ್ ನಿಮ್ಮದಾಗಿಸಿಕೊಳ್ಳಿ

    ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಒಡೆಯ’ ಸಿನಿಮಾ ಈಗಾಗಲೇ ಟ್ರೈಲರ್ ಮತ್ತು ಹಾಡುಗಳ ಮೂಲಕ ಭಾರೀ ಸದ್ದು ಮಾಡುತ್ತಿದೆ. ಈ ಸಿನಿಮಾ ಇದೇ ಡಿಸೆಂಬರ್ 12 ರಂದು ಬಿಡುಗಡೆಯಾಗುತ್ತಿದೆ. ಇದೀಗ ಒಡೆಯ ಚಿತ್ರತಂಡದಿಂದ ಪ್ರೇಕ್ಷಕರಿಗೆ ಭರ್ಜರಿ ಆಫರ್‍ವೊಂದನ್ನು ನೀಡಿದೆ.

    ಹೌದು..’ಒಡೆಯ’ ಚಿತ್ರತಂಡ ಸಿನಿಮಾ ನೋಡಿ ಸ್ಟೈಲಿಶ್ ಬೈಕ್ ಗೆಲ್ಲಿ ಎಂಬ ಆಫರ್ ನೀಡಿದೆ. ಅಂದರೆ ಪ್ರಮುಖ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರು ‘ಒಡೆಯ’ ಸಿನಿಮಾ ವೀಕ್ಷಿಸಬೇಕು. ನಂತರ ಪ್ರೇಕ್ಷಕರು ತೆಗೆದುಕೊಂಡಿರುವ ಟಿಕೆಟ್ ಅನ್ನು ಭರ್ತಿ ಮಾಡಿ ಚಿತ್ರಮಂದಿರಗಳಲ್ಲಿ ಇಟ್ಟಿರುವ ಲಕ್ಕಿ ಡಿಪ್ ಬಾಕ್ಸ್ ಒಳಗೆ ಹಾಕಬೇಕು. ಲಕ್ಕಿ ಡ್ರಾ ಮೂಲಕ ಗೆದ್ದವರಿಗೆ ಸ್ಟ್ರೈಲಿಶ್ ಬೈಕ್ ಸಿಗುತ್ತದೆ.

    ಕೆಜಿ ರಸ್ತೆಯಲ್ಲಿರುವ ನರ್ತಕಿ ಚಿತ್ರಮಂದಿರಲ್ಲಿ ಈ ಆಫರ್ ನೀಡಲಾಗಿದೆ. ಸಿನಿಮಾ ನೋಡಿ ಬೈಕ್ ಗೆಲ್ಲಿ ಸ್ಪರ್ಧೆಗೆ ನಿರ್ಮಾಪಕ ಸಂದೇಶ್ ನಾಗರಾಜ್ ಚಾಲನೆ ನೀಡಿದ್ದಾರೆ. ಜೊತೆಗೆ ಬೈಕ್ ಯಾವುದು ಎಂದು ನಿರ್ಮಾಪಕರೇ ಅನಾವರಣ ಕೂಡ ಮಾಡಿದ್ದಾರೆ. ಇದನ್ನೂ ಓದಿ: ಟ್ರೇಲರ್ ಮೂಲಕ ಆರ್ಭಟಿಸಿದ ಒಡೆಯ ಗಜೇಂದ್ರ!

    ಕೆಂಪು ಬಣ್ಣದ ಬೈಕ್ ನೋಡಲು ತುಂಬಾ ಸ್ಟೈಲಿಶ್ ಆಗಿದ್ದು, ಎಲೆಕ್ಟ್ರಿಕ್ ವಾಹನವಾಗಿದ. BENLG ಮಾಡೆಲ್ ಆಗಿರುವ ಈ ಬೈಕ್ ಬೆಲೆ ಸುಮಾರು 90 ಸಾವಿರದವರೆಗೂ ಇದೆ. ಒಂದೇ ಒಂದು ಬೈಕ್ ಮಾತ್ರ ಬಹುಮಾನವಾಗಿ ಇರಿಸಲಾಗಿದೆ. ಇದನ್ನೂ ಓದಿ: ಅನ್ನ ಹಾಕೋ ರೈತನಿಗೆ ಮೋಸ ಆದ್ರೆ ನಾನ್ ಸುಮ್ನೆ ಇರಲ್ಲ: ದರ್ಶನ್

  • ಟ್ರೇಲರ್ ಮೂಲಕ ಆರ್ಭಟಿಸಿದ ಒಡೆಯ ಗಜೇಂದ್ರ!

    ಟ್ರೇಲರ್ ಮೂಲಕ ಆರ್ಭಟಿಸಿದ ಒಡೆಯ ಗಜೇಂದ್ರ!

    ಸಂದೇಶ್ ನಾಗರಾಜ್ ಅರ್ಪಿಸಿ, ಎನ್. ಸಂದೇಶ್ ನಿರ್ಮಾಣಮಾಡಿರುವ ಒಡೆಯ ಚಿತ್ರ ಇದೇ ಡಿಸೆಂಬರ್ 12ರಂದು ಬಿಡುಗಡೆಯಾಗುತ್ತಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಿರೋ ಈ ಚಿತ್ರದ ಬಗ್ಗೆ ಈಗಾಗಲೇ ಅಭಿಮಾನದಾಚೆಗೂ ಎಲ್ಲ ವರ್ಗದ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿದೆ. ಇದರ ಬಗೆಗಿನ ಹೆಚ್ಚಿನ ಸುದ್ದಿಗಳಿಗಾಗಿ ಅಭಿಮಾನಿಗಳೆಲ್ಲ ಕಾದು ಕೂತಿರುವಾಗಲೇ ಟ್ರೇಲರ್ ಬಿಡುಗಡೆ ಮಾಡೋದಾಗಿ ಚಿತ್ರತಂಡ ಹೇಳಿಕೊಂಡಿತ್ತು. ಇದೀಗ ಖುದ್ದ ದರ್ಶನ್ ಅವರೇ ಒಡೆಯನ ಟ್ರೇಲರ್ ಅನ್ನು ಅನಾವರಣಗೊಳಿಸಿದ್ದಾರೆ.

    ಪ್ರೀತಿಯ ಮಾತುಗಳೊಂದಿಗೆ ಅಭಿಮಾನಿಗಳನ್ನು ತಾಕಿದ್ದಾರೆ. ‘ನಮ್ಮ ಸಂದೇಶ್ ಕಂಬೈನ್ಸ್ ಬ್ಯಾನರ್ ನಲ್ಲಿ ಮೂಡಿಬಂದಿರುವ ಒಡೆಯ ಚಿತ್ರದ ಟ್ರೇಲರ್ ಅನ್ನು ನಿಮ್ಮ ಮಡಿಲಿಗೆ ಅರ್ಪಿಸಿದ್ದೇವೆ. ನೋಡಿ ಹರಸಿ’ ಅಂತ ಒಡೆಯ ದರ್ಶನ್ ಪ್ರೇಕ್ಷಕರನ್ನು ಕೇಳಿಕೊಂಡಿದ್ದಾರೆ. ಹೀಗೆ ಬಿಡುಗಡೆಯಾಗಿರುವ ಟ್ರೇಲರ್ ನಿರೀಕ್ಷೆಯಂತೆಯೇ ಚೆಂದಗೆ ಮೂಡಿ ಬಂದಿದೆ. ದರ್ಶನ್ ಗಜೇಂದ್ರನಾಗಿ ಅಕ್ಷರಶಃ ಮಿಂಚಿದ್ದಾರೆ. ಇದರಲ್ಲಿನ ಫ್ಯಾಮಿಲಿ ಬೆಸುಗೆ, ಮಾಸ್ ಸನ್ನಿವೇಶಗಳು, ಕಾಮಿಡಿ ಸೇರಿದಂತೆ ಎಲ್ಲವೂ ನೋಡುಗರಿಗೆ ಕಚಗುಳಿ ಇಡುವಂತಿವೆ. ಇದರೊಂದಿಗೆ ಅಭಿಮಾನಿಗಳೆಲ್ಲರ ಬಹು ಕಾಲದ ಆಸೆಯೂ ಸಾಕಾರಗೊಂಡಿದೆ.

    ಒಡೆಯ ಚಿತ್ರದ ವಿಚಾರದಲ್ಲಿ ಒಂದೇ ಫೋಟೋ ಕೂಡಾ ಜಾಹೀರಾಗದಂತೆ ಎಚ್ಚರ ವಹಿಸಲಾಗಿತ್ತು. ಈ ಕಾರಣದಿಂದಲೇ ದರ್ಶನ್ ಲುಕ್ಕು ಹೇಗಿದೆ ಎಂಬುದರ ಬಗ್ಗೆ ಅಭಿಮಾನಿಗಳು ಕಾತರರಾಗಿದ್ದರು. ಪೋಸ್ಟರ್ ಮೂಲಕ ಅದು ಜಾಹೀರಾಗಿದ್ದರೂ ಟ್ರೇಲರ್ ಮೂಲಕ ಅದನ್ನು ಕಣ್ತುಂಬಿಕೊಳ್ಳುವ ತಹ ತಹ ಎಲ್ಲರಲ್ಲಿಯೂ ಇತ್ತು. ಇದೀಗ ಟ್ರೇಲರ್ ನಲ್ಲಿ ಗಜೇಂದ್ರನ ಗೆಟಪ್ಪು ಕಣ್ಣು ಕೋರೈಸುವಂತೆಯೇ ಅನಾವರಣಗೊಂಡಿದೆ.

    ದರ್ಶನ್ ಫ್ಯಾಮಿಲಿ ಸೆಂಟಿಮೆಂಟ್ ಸೀನುಗಳು, ಮಾಸ್ ಸನ್ನಿವೇಷಗಳಲ್ಲಿ ಅಬ್ಬರಿಸಿರೋ ಪರಿ ಕಂಡು ಅಭಿಮಾನಿಗಳೆಲ್ಲ ಥ್ರಿಲ್ ಆಗಿದ್ದಾರೆ. ಪ್ರಧಾನವಾಗಿ ಇಲ್ಲಿನ ಡೈಲಾಗುಗಳು ದರ್ಶನ್ ಅಭಿಮಾನಿಗಳು ಹುಚ್ಚೇಳುವಂತಿವೆ. ಈ ಒಡೆಯ ರೈತರ ಪರವಾಗಿ ಹೋರಾಡುವವನೆಂಬ ವಿಚಾರವೂ ಡೈಲಾಗುಗಳ ಮೂಲಕವೇ ಪ್ರೇಕ್ಷಕರನ್ನು ತಲುಪಿಕೊಂಡಿವೆ. ಈ ಹಿಂದೆ ಪ್ರಿನ್ಸ್, ಮಿಸ್ಟರ್ ಐರಾವತ ಎಂಬ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಾಪಕ ಎನ್ ಸಂದೇಶ್ ಮತ್ತು ದರ್ಶನ್ ಒಟ್ಟಾಗಿ ಕೊಟ್ಟಿದ್ದರು. ಒಡೆಯ ಈ ಜೋಡಿಯ ಮೂರನೇ ಚಿತ್ರ. ಈ ಮೂಲಕ ಹ್ಯಾಟ್ರಿಕ್ ಗೆಲುವು ಗ್ಯಾರೆಂಟಿ ಅನ್ನೋದಕ್ಕೆ ಈ ಟ್ರೇಲರ್ ಸಾಕ್ಷಿಯಂತಿದೆ. ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯುವಂತೆಯೇ ನಿರ್ದೇಶಕ ಎಂ ಡಿ ಶ್ರೀಧರ್ ಈ ಚಿತ್ರವನ್ನು ಕಟ್ಟಿ ಕೊಟ್ಟಿದ್ದಾರೆಂಬುದೂ ಟ್ರೇಲರ್ ಮೂಲಕವೇ ಸಾಬೀತಾಗಿದೆ. ಅಂದಹಾಗೆ ಒಡೆಯ ಇದೇ ತಿಂಗಳ 12ರಂದು ದರ್ಶನ ನೀಡಲಿದ್ದಾನೆ.

  • ಅನ್ನ ಹಾಕೋ ರೈತನಿಗೆ ಮೋಸ ಆದ್ರೆ ನಾನ್ ಸುಮ್ನೆ ಇರಲ್ಲ: ದರ್ಶನ್

    ಅನ್ನ ಹಾಕೋ ರೈತನಿಗೆ ಮೋಸ ಆದ್ರೆ ನಾನ್ ಸುಮ್ನೆ ಇರಲ್ಲ: ದರ್ಶನ್

    -ಅಧಿಕಾರ ಇವತ್ತು ಒಬ್ಬರತ್ರ, ನಾಳೆ ಇನ್ನೊಬ್ಬರ ಹತ್ರ ಇರುತ್ತೆ

    ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ಒಡೆಯ’ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ.

    ನಟ ದರ್ಶನ್ ಎರಡು ದಿನದ ಹಿಂದೆ ಇಂದು ಟ್ರೈಲರ್ ರಿಲೀಸ್ ಮಾಡುವುದಾಗಿ ತಿಳಿಸಿದ್ದರು. ಅದರಂತೆಯೇ ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಸದ್ದು ಮಾಡುತ್ತಿದೆ.

    ಟ್ರೈಲರ್ ಶುರುವಿನಲ್ಲೇ “ನಮ್ಮ ಜೊತೆ ಇರುವವರನ್ನು ನಾವು ಚೆನ್ನಾಗಿ ನೋಡಿಕೊಂಡರೆ, ಮೇಲೆ  ಇರುವವನು ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ” ಎಂಬ ಡೈಲಾಗ್ ಪ್ರೇಕ್ಷಕರನ್ನು ತನ್ನತ್ತ ಸೆಳೆದಿದೆ. ಮನೆಗೆ ದೊಡ್ಡ ಮಗನಾಗಿ ತನ್ನ ತಮ್ಮಂದಿರನ್ನು ಪ್ರೀತಿಯಿಂದ ನೋಡಿಕೊಳ್ಳುವ ಒಡೆಯನಾಗಿ ದರ್ಶನ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ಪ್ರೀತಿ, ಕುಟುಂಬ, ಎಮೋಷನಲ್, ಆ್ಯಕ್ಷನ್ ಎಲ್ಲವೂ ಅದ್ಭುತವಾಗಿ ಮೂಡಿ ಬಂದಿದೆ.

    ರೈತರಿಗೆ ಮೋಸ ಮಾಡುವವರ ವಿರುದ್ಧ ಗಜೇಂದ್ರನಾಗಿ ಹೋರಾಡುವ ಒಡೆಯನಾಗಿಯೂ ಕಾಣಿಸಿಕೊಂಡಿದ್ದರು. ಜೊತೆಗ ಸಾಧುಕೋಕಿಲಾ, ಚಿಕ್ಕಣ್ಣ ಅವರ ಕಾಮಿಡಿಯ ಪಂಚಿಂಗ್ ಡೈಲಾಗ್ ಪ್ರೇಕ್ಷಕರನ್ನು ರಂಜಿಸುತ್ತವೆ. ಒಟ್ಟಿನಲ್ಲಿ ಒಂದು ಕರ್ಮಷಿಯಲ್ ಸಿನಿಮಾವಾಗಿ ಒಡೆಯ ಚಿತ್ರ ಮೂಡಿ ಬಂದಿದೆ. ಟ್ರೈಲರ್ 2.23 ನಿಮಿಷಗಳಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 2ಲಕ್ಷಕ್ಕೂ ಅಧಿಕ ವ್ಯೂವ್ಸ್ ಕಂಡಿದೆ. ಜೊತೆಗೆ ಸಾವಿರಾರು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    ಈ ಹಿಂದೆ ಟ್ವೀಟ್ ಮಾಡಿದ್ದ ದರ್ಶನ್, “ಒಡೆಯ ಸಿನಿಮಾ ಟ್ರೈಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‍ನಲ್ಲಿ ಡಿಸೆಂಬರ್ 1 ಬೆಳಗ್ಗೆ 10 ಗಂಟೆಗೆ ಬಿಡುಗಡೆಯಾಗಲಿದೆ” ಎಂದು ಬರೆದುಕೊಂಡಿದ್ದರು. ಸಿನಿಮಾದ ಹಾಡು ಬಿಡುಗಡೆಯ ವೇಳೆಯೂ ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ತಿಳಿಸಿದ್ದರು.

    ಇದೊಂದು ಸಹೋದರರ ಸಿನಿಮಾವಾಗಿದ್ದು, ಎಂ.ಡಿ.ಶ್ರೀಧರ್ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಇದೇ ತಿಂಗಳ 12ರಂದು ಈ ಸಿನಿಮಾ ರಿಲೀಸ್ ಆಗಲಿದೆ. ಚಿತ್ರದಲ್ಲಿ ದರ್ಶನ್‍ಗೆ ಜೋಡಿಯಾಗಿ ನಟಿ ಸನಾ ತಿಮ್ಮಯ್ಯ ಕಾಣಿಸಿಕೊಂಡಿದ್ದಾರೆ.