Tag: ಐಪಿಎಲ್

  • ಮುಂಬೈ ವಿರುದ್ಧ ಪಂಜಾಬ್‌ಗೆ ಜಯ – ನಾಳೆ ಆರ್‌ಸಿಬಿ Vs ಕಿಂಗ್ಸ್‌ ಫೈನಲ್‌

    ಮುಂಬೈ ವಿರುದ್ಧ ಪಂಜಾಬ್‌ಗೆ ಜಯ – ನಾಳೆ ಆರ್‌ಸಿಬಿ Vs ಕಿಂಗ್ಸ್‌ ಫೈನಲ್‌

    – ಶ್ರೇಯಸ್‌ ಅಯ್ಯರ್‌ ಸ್ಫೋಟಕ ಅರ್ಧಶತಕ
    – 2ನೇ ಬಾರಿ ಫೈನಲ್‌ ಪ್ರವೇಶಿಸಿದ ಪಂಜಾಬ್‌

    ಅಹಮಾದಾಬಾದ್‌: ಕ್ವಾಲಿಫೈಯರ್‌-2ನಲ್ಲಿ ಮುಂಬೈ ಇಂಡಿಯನ್ಸ್‌ (Mumbai Indians) ವಿರುದ್ಧ ರೋಚಕ 5 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪಂಜಾಬ್‌ (Punjab Kings) ಐಪಿಎಲ್‌ ಫೈನಲ್‌ಗೆ (IPL Final) ಪ್ರವೇಶಿಸಿದೆ. 5 ಬಾರಿ ಚಾಂಪಿಯನ್ ಮುಂಬೈ ತಂಡವನ್ನು ಬಗ್ಗು ಬಡಿದ ಪಂಜಾಬ್‌ 2ನೇ ಬಾರಿ ಫೈನಲ್‌ಗೆ ತಲುಪಿದ್ದು ನಾಳೆ ಆರ್‌ಸಿಬಿಯನ್ನು (RCB) ಎದುರಿಸಲಿದೆ

    ಮಳೆಯಿಂದ 2 ಗಂಟೆ 15 ನಿಮಿಷ ತಡವಾಗಿ ಆರಂಭಗೊಂಡ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಬೀಸಿದ ಮುಂಬೈ 6 ವಿಕೆಟ್‌ ನಷ್ಟಕ್ಕೆ 203 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್‌ ನಾಯಕ ಶ್ರೇಯಸ್‌ ಅಯ್ಯರ್‌ (Shreyas Iyer) ಅವರ ಸ್ಫೋಟಕ ಅರ್ಧಶತಕದ ನೆರವಿನಿಂದ ಇನ್ನೂ 6 ಎಸೆತ ಇರುವಂತೆಯೇ 5 ವಿಕೆಟ್‌ ನಷ್ಟಕ್ಕೆ 207 ರನ್‌ ಗಳಿಸಿ ಜಯ ಸಾಧಿಸಿತು.

    ಪ್ರಿಯಾಂಶ್‌ ಆರ್ಯ 20 ರನ್‌, ಪ್ರಭುಸಿಮ್ರಾನ್‌ ಸಿಂಗ್‌ 6 ರನ್‌, ಬುಮ್ರಾ ಮೊದಲ ಓವರ್‌ನಲ್ಲಿ 20 ರನ್‌ ಹೊಡೆದ ಜೋಶ್‌ ಇಂಗ್ಲಿಸ್‌ 38 ರನ್‌(21 ಎಸೆತ, 5 ಬೌಂಡರಿ, 2 ಸಿಕ್ಸ್‌) ಹೊಡೆದು ಔಟಾದಾಗ ಪಂಜಾಬ್‌ ಸ್ಕೋರ್‌ 3 ವಿಕಟ್‌ ನಷ್ಟಕ್ಕೆ 72 ರನ್‌ ಗಳಿಸಿತ್ತು. ಇದನ್ನೂ ಓದಿ: ಮುಂಬೈ ಸಂಘಟಿತ ಬ್ಯಾಟಿಂಗ್‌ – ಪಂಜಾಬ್‌ಗೆ 204 ರನ್‌ ಗುರಿ

    ಒಂದು ಹಂತದಲ್ಲಿ ಸಂಕಷ್ಟದಲ್ಲಿದ್ದರೂ ಶ್ರೇಯಸ್‌ ಅಯ್ಯರ್‌ ಮತ್ತು ನೆಹಲ್‌ ವಧೇರಾ 47 ಎಸೆತಗಳಲ್ಲಿ 84 ರನ್‌ ಜೊತೆಯಾಟವಾಡಿ ತಂಡವನ್ನು ಪಾರು ಮಾಡಿದರು. ವಧೇರಾ 48 ರನ್‌(29 ಎಸೆತ, 4 ಬೌಂಡರಿ, 2 ಸಿಕ್ಸ್‌) ಹೊಡೆದು ಔಟಾದರೆ ನಾಯಕನ ಆಟವಾಡಿದ ಶ್ರೇಯಸ್‌ ಅಯ್ಯರ್‌ ಔಟಾಗದೇ 87 ರನ್‌(41 ಎಸೆತ, 5 ಬೌಂಡರಿ, 8 ಸಿಕ್ಸ್‌) ಹೊಡೆದು ತಂಡಕ್ಕೆ ಜಯವನ್ನು ತಂದುಕೊಟ್ಟರು. ಅತ್ಯುತ್ತಮ ಆಟವಾಡಿ ತಂಡವನ್ನು ಗೆಲ್ಲಿಸಿಕೊಟ್ಟ ಶ್ರೇಯಸ್‌ ಅಯ್ಯರ್‌ ಅರ್ಹವಾಗಿಯೇ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

     

    11 ವರ್ಷಗಳ ಬಳಿಕ ಫೈನಲ್‌:
    ಪಂಜಾಬ್ ಐಪಿಎಲ್‌ನಲ್ಲಿಎರಡನೇ ಬಾರಿ ಫೈನಲ್‌ ಪ್ರವೇಶಿಸಿದೆ. 11 ವರ್ಷಗಳ ಹಿಂದೆ 2014 ರಲ್ಲಿ ಕೋಲ್ಕತ್ತಾ ವಿರುದ್ಧ ಫೈನಲ್‌ನಲ್ಲಿ ಸೋತು ಪಂಜಾಬ್‌ ರನ್ನರ್‌ ಅಪ್‌ ಅಗಿತ್ತು.

  • ಐಪಿಎಲ್ ಫೈನಲ್‌ಗೆ ಎಂಟ್ರಿ – ‘ಹಾಕ್ರೊ ಸ್ಟೆಪ್ಪು’ ಅಂತ ಫ್ಯಾನ್ಸ್‌ಗೆ ಹುರಿದುಂಬಿಸಿದ ಆರ್‌ಸಿಬಿ

    ಐಪಿಎಲ್ ಫೈನಲ್‌ಗೆ ಎಂಟ್ರಿ – ‘ಹಾಕ್ರೊ ಸ್ಟೆಪ್ಪು’ ಅಂತ ಫ್ಯಾನ್ಸ್‌ಗೆ ಹುರಿದುಂಬಿಸಿದ ಆರ್‌ಸಿಬಿ

    ಚಂಡೀಗಢ: ಐಪಿಎಲ್ ಕ್ವಾಲಿಫೈಯರ್ 1 ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kings) ವಿರುದ್ಧ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ (RCB) ತಂಡ ಫೈನಲ್‌ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದು, ‘ಹಾಕ್ರೊ ಸ್ಟೆಪ್ಪು’ ಎಂದು ಅಭಿಮಾನಿಗಳನ್ನು ಹುರಿದುಂಬಿಸಿದೆ.

    ಮಲ್ಲನ್‌ಪುರ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ವಿರುದ್ಧ ಆರ್‌ಸಿಬಿ ಕೇವಲ 10 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಐಪಿಎಲ್ ಇತಿಹಾಸದಲ್ಲಿ ನಾಲ್ಕನೇ ಬಾರಿಗೆ ಫೈನಲ್‌ಗೆ ಎಂಟ್ರಿ ಕೊಟ್ಟಿದೆ.

    ಈ ಬೆನ್ನಲ್ಲೇ ಆರ್‌ಸಿಬಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಕ್ಸ್ ಖಾತೆಯಲ್ಲಿ ‘ಹಾಕ್ರೊ ಸ್ಟೆಪ್ಪು’ ಎಂದು ಬರೆದು ಬೆಂಕಿಯ ಇಮೋಜಿ ಹಾಕಿ ಹರ್ಷ ವ್ಯಕ್ತಪಡಿಸಿದೆ. ಈ ಪೋಸ್ಟ್‌ಗೆ ಆರ್‌ಸಿಬಿ ಅಭಿಮಾನಿಗಳು ಕೂಡ ಫುಲ್ ಖುಷಿಯಾಗಿ ಲೈಕ್ಸ್, ಕಾಮೆಂಟ್ಸ್ ಮಾಡುತ್ತಿದ್ದಾರೆ.

    2018ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್, 2019 ಮತ್ತು 2020ರಲ್ಲಿ ಮುಂಬೈ ಇಂಡಿಯನ್ಸ್, 2021ರಲ್ಲಿ ಸಿಎಸ್‌ಕೆ, 2022ರಲ್ಲಿ ಗುಜರಾತ್ ಟೈಟಾನ್ಸ್, 2023ರಲ್ಲಿ ಸಿಎಸ್‌ಕೆ, 2024ರಲ್ಲಿ ಕೆಕೆಆರ್ ತಂಡಗಳು ಕ್ವಾಲಿಫೈಯರ್-1ನಲ್ಲಿ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡಿವೆ. ಇದೀಗ 18ನೇ ಆವೃತ್ತಿಯ ಕ್ವಾಲಿಫೈಯರ್-1 ನಲ್ಲಿ ಗೆದ್ದು ಫೈನಲ್ ಪ್ರವೇಶಿಸಿರುವ ಆರ್‌ಸಿಬಿ ಚಾಂಪಿಯನ್ ಪಟ್ಟಕ್ಕೆ ಕೊರಳೊಡ್ಡಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

  • ಪಂಜಾಬ್‌ ಜೊತೆ ಫೈನಲ್‌ ಫೈಟ್‌ – ಆರ್‌ಸಿಬಿಗೆ ಗಾಯದ ಚಿಂತೆ

    ಪಂಜಾಬ್‌ ಜೊತೆ ಫೈನಲ್‌ ಫೈಟ್‌ – ಆರ್‌ಸಿಬಿಗೆ ಗಾಯದ ಚಿಂತೆ

    ಮುಲ್ಲಾನ್‌ಪುರ: ಐಪಿಎಲ್‌ (IPL 2025) ಲೀಗ್‌ ಹಂತದ ಎಲ್ಲಾ ಪಂದ್ಯಗಳು ಕೊನೆಗೊಂಡಿದ್ದು ಇಂದು ಚಂಡೀಗಢದ ಮುಲ್ಲಾನ್‌ಪುರದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮತ್ತು ಪಂಜಾಬ್‌ ಕಿಂಗ್ಸ್‌ (PBKS) ಮಧ್ಯೆ ಮೊದಲ ಕ್ವಾಲಿಫೈಯರ್‌ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಜಯಗಳಿಸಿದವರು ನೇರವಾಗಿ ಫೈನಲ್‌ ಪ್ರವೇಶಿಸಿದರೆ ಸೋತವರು ಭಾನುವಾರ ನಡೆಯಲಿರುವ ಎರಡನೇ ಕ್ವಾಲಿಫೈಯರ್‌ ಪಂದ್ಯವನ್ನು ಆಡಬೇಕಾಗುತ್ತದೆ.

    ಆರ್‌ಸಿಬಿ ಈ ಬಾರಿ ಲೀಗ್‌ 14 ಪಂದ್ಯಗಳ ಪೈಕಿ 9 ರಲ್ಲಿ ಗೆದ್ದಿದೆ. ಮಳೆಯಿಂದ ಬೆಂಗಳೂರಿನ ಪಂದ್ಯ ರದ್ದಾಗಿದ್ದರಿಂದ ಒಟ್ಟು 19 ಅಂಕ ಸಂಪಾದಿಸಿ 2ನೇ ಸ್ಥಾನ ಪಡೆದಿದೆ. ಪಂಜಾಬ್‌ ಸಮಾನ 19 ಅಂಕ ಪಡೆದರೂ ನೆಟ್‌ ರನ್‌ರೇಟ್‌ ಆಧಾರದಲ್ಲಿ ಮೊದಲ ಸ್ಥಾನ ಪಡೆದಿದೆ. ಈ ಬಾರಿ ಮೂರನೇ ಬಾರಿ ಇತ್ತಂಡಗಳು ಮುಖಾಮುಖಿಯಾಗುತ್ತಿವೆ. ಲೀಗ್‌ ಮುಖಾಮುಖಿಯಲ್ಲಿ ಎರಡು ತಂಡಗಳು ಒಂದೊಂದು ಪಂದ್ಯವನ್ನು ಗೆದ್ದಿವೆ.  ಇದನ್ನೂ ಓದಿ: IPL 2025 | ಪಂದ್ಯ ಸೋತು ಹೃದಯ ಗೆದ್ದ ಪಂತ್‌

    ಆರ್‌ಸಿಬಿಗೆ ಗಾಯದ ಚಿಂತೆ:
    ಐಪಿಎಲ್ ಪುನಾರಂಭದ ಬಳಿಕ ಆರ್‌ಸಿಬಿಯಲ್ಲಿ ಗಾಯದ ಸಮಸ್ಯೆ ಹೆಚ್ಚಾಗಿದೆ. ವೇಗಿ ಜೋಶ್ ಹೇಜಲ್‌ವುಡ್ ಫಿಟ್ ಆಗಿದ್ದು, ಈ ಪಂದ್ಯದಲ್ಲಿ ಆಡುವ ಸಾಧ್ಯತೆಯಿದೆ. ಟಿಮ್ ಡೇವಿಡ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಗೈರಾಗಲಿದ್ದಾರೆ ಎನ್ನಲಾಗುತ್ತಿದೆ. ನಾಯಕ ರಜತ್ ಪಾಟೀದಾರ್ ಗಾಯದ ಸಮಸ್ಯೆ ಜೊತೆಗೆ ಲಯದ ಸಮಸ್ಯೆ ಎದುರಿಸುತ್ತಿದ್ದಾರೆ.

    ಕಳೆದ ಬಾರಿ ಶ್ರೇಯಸ್‌ ಅಯ್ಯರ್‌ ನೇತೃತ್ವದಲ್ಲಿ ಕೋಲ್ಕತ್ತಾ ತಂಡ ಚಾಂಪಿಯನ್‌ ಆಗಿ ಹೊರಹೊಮ್ಮಿತ್ತು. ಈ ಬಾರಿಯೂ ಶ್ರೇಯಸ್‌ ಅಯ್ಯರ್‌ ತಂಡವನ್ನು ಪ್ಲೇ ಆಫ್‌ವರೆಗೆ ತಲುಪಿಸಿದ್ದಾರೆ. ತಂಡ ಎಲ್ಲಾ ವಿಭಾಗದಲ್ಲೂ ಉತ್ತಮ ಪ್ರದರ್ಶನ ನೀಡುತ್ತಿದ್ದು ತವರಿನಲ್ಲಿ ಆರ್‌ಸಿಬಿಯನ್ನು ಮಣಿಸುವ ಲೆಕ್ಕಾಚಾರದಲ್ಲಿದೆ. ಇದನ್ನೂ ಓದಿ: ಆರ್‌ಸಿಬಿಯಲ್ಲಿರುವ ಅಣ್ಣ ಹುರಿದುಂಬಿಸಿದ್ರು, ನಾನು ನನ್ನ ಆಟವಾಡಿದೆ: ಜಿತೇಶ್‌ ಶರ್ಮಾ

    ಈ ಬಾರಿಯ ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ (Virat Kohli) ಒಟ್ಟು 602 ರನ್‌ ಹೊಡೆದು ಅತಿ ಹೆಚ್ಚು ರನ್‌ ಹೊಡೆದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ 5ನೇ ಸ್ಥಾನ ಪಡೆದರೆ 514 ರನ್‌ ಹೊಡೆದಿರುವ ಶ್ರೇಯಸ್‌ ಅಯ್ಯರ್‌ (Shreyas Iyer) 10ನೇ ಸ್ಥಾನ ಪಡೆದಿದ್ದಾರೆ. 499 ರನ್‌ ಹೊಡೆದಿರುವ ಪ್ರಭುಸಿಮ್ರಾನ್‌ ಸಿಂಗ್‌ 11ನೇ ಸ್ಥಾನ ಪಡೆದಿದ್ದಾರೆ.

    ಬೌಲಿಂಗ್‌ನಲ್ಲಿ 10 ಪಂದ್ಯಗಳಿಂದ 18 ವಿಕೆಟ್‌ ಪಡೆದ ಜೋಶ್ ಹೇಜಲ್‌ವುಡ್ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್‌ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದರೆ ಪಂಜಾಬ್‌ ಕಿಂಗ್ಸ್‌ನ ಅರ್ಶ್‌ದೀಪ್‌ ಸಿಂಗ್‌ 14 ಪಂದ್ಯಗಳಿಂದ 18 ವಿಕೆಟ್‌ ಪಡೆದು 5ನೇ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: RCB ವಿರುದ್ಧದ ಪಂದ್ಯದಲ್ಲಿ ನಾನಾ ಅವತಾರ – ಪಂತ್‌ ಸೇರಿ ಎಲ್‌ಎಸ್‌ಜಿಗೆ ಬಿತ್ತು ಭಾರಿ ದಂಡ

    ಟ್ರೋಫಿ ಸಿಕ್ಕಿಲ್ಲ
    ಆರ್‌ಸಿಬಿ ಮತ್ತು ಪಂಜಾಬ್‌ ಇಲ್ಲಿಯವರೆಗೆ ಟ್ರೋಫಿಯನ್ನು ಗೆದ್ದಿಲ್ಲ. ಆದರೆ ಇಲ್ಲಿಯವರೆಗೆ ಎರಡೂ ತಂಡಗಳು ಫೈನಲ್‌ ಪ್ರವೇಶಿಸಿವೆ. ಆರ್‌ಸಿಬಿ 2009, 2011, 2016 ರಲ್ಲಿ ಫೈನಲ್‌ ಪ್ರವೇಶಿಸಿದರೆ ಪಂಜಾಬ್‌ 2014 ರಲ್ಲಿ ಫೈನಲ್‌ ಪ್ರವೇಶಿಸಿತ್ತು.

  • ಆರ್‌ಸಿಬಿಯಲ್ಲಿರುವ ಅಣ್ಣ ಹುರಿದುಂಬಿಸಿದ್ರು, ನಾನು ನನ್ನ ಆಟವಾಡಿದೆ: ಜಿತೇಶ್‌ ಶರ್ಮಾ

    ಆರ್‌ಸಿಬಿಯಲ್ಲಿರುವ ಅಣ್ಣ ಹುರಿದುಂಬಿಸಿದ್ರು, ನಾನು ನನ್ನ ಆಟವಾಡಿದೆ: ಜಿತೇಶ್‌ ಶರ್ಮಾ

    ಲಕ್ನೋ: ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿ ತಂಡವನ್ನು ಕ್ವಾಲಿಫೈಯರ್‌ಗೆ ತೆಗೆದುಕೊಂಡ ಹೋದ ನಾಯಕ ಜಿತೇಶ್‌ ಶರ್ಮಾ (Jitesh Sharma) ಆರ್‌ಸಿಬಿಯಲ್ಲಿರುವ (RCB) ಅಣ್ಣನ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ.

    ಆರ್‌ಸಿಬಿಯಲ್ಲಿರುವ ಅಣ್ಣ ಯಾರೂ ಅಲ್ಲ. ದಿನೇಶ್‌ ಕಾರ್ತಿಕ್‌ (Dinesh Karthik) ಅವರನ್ನೇ ಜಿತೇಶ್‌ ಶರ್ಮಾ ಅಣ್ಣ ಎಂದು ಸಂಬೋಧಿಸಿ ಗೌರವ ನೀಡಿದ್ದಾರೆ.

    ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದ ಜಿತೇಶ್‌ ಶರ್ಮಾ ಅವರನ್ನು ಮುರಳಿ ಕಾರ್ತಿಕ್‌ ಮಾತನಾಡಿಸಿದರು. ಈ ವೇಳೆ, ವಿರಾಟ್ ಕೊಹ್ಲಿ ಔಟಾದಾಗ ನಾನು ಈ ಬಾರಿ ಆಟ ಆಡಲೇಬೇಕು ಎಂದು ನಿರ್ಧರಿಸಿದೆ. ನನ್ನ ಬಳಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯ ಇದೆ ಎಂದು ನನ್ನ ಗುರು, ಮಾರ್ಗದರ್ಶಕ ಡಿಕೆ ಅಣ್ಣ ಹೇಳಿ ಹುರಿದುಂಬಿಸಿದರು. ಅದರಂತೆ ನಾನು ನನ್ನ ಆಟವಾಡಿದೆ ಎಂದು ತಿಳಿಸಿದರು. ಇದನ್ನೂ ಓದಿ: IPL 2025 | ಪಂದ್ಯ ಸೋತು ಹೃದಯ ಗೆದ್ದ ಪಂತ್‌

     

     

    ನನಗೆ ಅನಿಸಿಕೆಗಳನ್ನು ವ್ಯಕ್ತಪಡಿಸಲು ಪದಗಳೇ ಸಿಗುತ್ತಿಲ್ಲ. ನಾನು ಆ ರೀತಿಯ ಆಡಿ ಪಂದ್ಯವನ್ನು ಗೆಲ್ಲಿಸಿದ್ದೇನೆ ಎಂದು ನನಗೆ ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: 9 ವರ್ಷಗಳ ಬಳಿಕ ಕ್ವಾಲಿಫೈಯರ್‌ 1ಗೆ ಲಗ್ಗೆಯಿಟ್ಟ ಆರ್‌ಸಿಬಿ

    ಎಲ್ಲಾ ಹೊರೆ ನನ್ನ ಮೇಲಿರುವುದರಿಂದ ನನಗೆ ಒತ್ತಡ ಇತ್ತು. ಆದರೆ ನನ್ನೊಂದಿಗೆ ವಿರಾಟ್, ಕೃನಾಲ್, ಭುವಿ ಇದ್ದಾರೆ.  ನಾವು ಚೆನ್ನಾಗಿ ಆಡಲು ಪ್ರಯತ್ನಿಸುತ್ತೇವೆ. ಮುಂದಿನ ಪಂದ್ಯದಲ್ಲೂ ಇದೇ ರೀತಿಯ ಪ್ರದರ್ಶನ ನೀಡಲು ಪ್ರಯತ್ನಿಸುತ್ತೇವೆ ಎಂದು ತಿಳಿಸಿದರು.

    ಲಕ್ನೋ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ 11.2 ಓವರ್‌ಗಳಲ್ಲಿ 123 ರನ್‌ಗಳಿಸಿದ್ದಾಗ 54 ರನ್‌(30 ಎಸೆತ, 10 ಬೌಂಡರಿ) ಹೊಡೆದಿದ್ದ ಕೊಹ್ಲಿ ಔಟಾಗಿದ್ದರು.  ನಂತರ ಮುರಿಯದ 5ನೇ ವಿಕೆಟಿಗೆ ಮಯಾಂಕ್‌ ಅಗರ್‌ವಾಲ್‌ ಮತ್ತು ಜಿತೇಶ್‌ ಶರ್ಮಾ 45 ಎಸೆತಗಳಲ್ಲಿ 107 ರನ್‌ ಜೊತೆಯಾಟವಾಡಿ ಪಂದ್ಯವನ್ನು ಗೆಲ್ಲಿಸಿದ್ದಾರೆ.

    107 ರನ್‌ಗಳ ಜೊತೆಯಾಟದಲ್ಲಿ ಮಯಾಂಕ್‌ 12 ಎಸೆತಗಳಲ್ಲಿ 20 ರನ್‌ ಹೊಡೆದರೆ ಜಿತೇಶ್‌ ಶರ್ಮಾ 85(33 ಎಸೆತ, 8 ಬೌಂಡರಿ, 6 ಸಿಕ್ಸ್‌) ಹೊಡೆಯುವ ಮೂಲಕ ಗೆಲುವಿನ ದಡ ಸೇರಿಸಿದರು.

  • 7 ವರ್ಷಗಳ ಬಳಿಕ ಶತಕ ಸಿಡಿಸಿ ಪಲ್ಟಿ ಹೊಡೆದ ಪಂತ್‌

    7 ವರ್ಷಗಳ ಬಳಿಕ ಶತಕ ಸಿಡಿಸಿ ಪಲ್ಟಿ ಹೊಡೆದ ಪಂತ್‌

    ಲಕ್ನೋ: 18ನೇ ಆವೃತ್ತಿಯ ಐಪಿಎಲ್‌ಗೆ 27 ಕೋಟಿ ರೂ.ಗಳಿಗೆ ಬಿಕರಿಯಾಗಿದ್ದ ರಿಷಭ್‌ ಪಂತ್‌ (Rishabh Pant) ಭಾರೀ ನಿರೀಕ್ಷೆಯೊಂದಿಗೆ ಅಖಾಡಕ್ಕಿಳಿದಿದ್ದರು. ಆದ್ರೆ ಆರಂಭಿಕ ಪಂದ್ಯದಿಂದಲೂ ಕಳಪೆ ಬ್ಯಾಟಿಂಗ್‌ ಪ್ರದರ್ಶನದಿಂದ ಟ್ರೋಲ್‌ಗೆ ಒಳಗಾಗಿದ್ದ ಪಂತ್‌ ಕೊನೆಯ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದಾರೆ.

    7 ವರ್ಷಗಳ ಬಳಿಕ ಶತಕ ಸಿಡಿಸಿದ ಪಂತ್‌ ಮೈದಾನದಲ್ಲಿಯೇ ಪಲ್ಟಿ ಹೊಡೆದು ಸಂಭ್ರಮಿಸಿದರು. ಇದು 7 ವರ್ಷಗಳ ಬಳಿಕ ಪಂತ್‌ ಸಿಡಿಸಿದ ಶತಕವಾಗಿದೆ. 2018ರಲ್ಲಿ ಡೆಲ್ಲಿ ಡೇರ್‌ ಡೆವಿಲ್ಸ್‌ (ಇಂಡಿನ ಡೆಲ್ಲಿ ಕ್ಯಾಪಿಟಲ್ಸ್) ತಂಡದಲ್ಲಿದ್ದ ಪಂತ್‌‌ ಅಜೇಯ 128 ರನ್‌ (63 ಎಸೆತ, 7 ಸಿಕ್ಸರ್‌, 15 ಬೌಂಡರಿ) ಬಾರಿಸಿದ್ದರು. ಆದ್ರೆ ಆ ಪಂದ್ಯದಲ್ಲೂ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ಡೇರ್‌ಡೆವಿಲ್ಸ್‌ ಸೋತಿತ್ತು.

    ಈ ಆವೃತ್ತಿಯ ಆರಂಭದಿಂದಲೂ ಲಕ್ನೋ ತಂಡ ಉತ್ತಮ ಪ್ರದರ್ಶನ ನೀಡುತ್ತಾ ಬಂದಿತು. ಮೊದಲ ಪಂದ್ಯದಲ್ಲೇ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ 209 ರನ್‌ಗಳಿಸಿತ್ತು. ಆದ್ರೆ ಆ ಪಂದ್ಯದಲ್ಲೂ ರಿಷಭ್‌ ಪಂತ್‌ ಶೂನ್ಯ ಸುತ್ತಿದರು. ಬಳಿಕ‌ ನಡೆದ ಪಂದ್ಯಗಳಲ್ಲಿ ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದರು. ಸಿಎಸ್‌ಕೆ ವಿರುದ್ಧ ನಡೆದ ಪಂದ್ಯದಲ್ಲಿ 63 ರನ್‌ ಗಳಿಸಿತ್ತಾದರೂ 49 ಎಸೆತಗಳನ್ನು ತೆಗೆದುಕೊಂಡಿದ್ದರು. ಇದೂ ಸಹ ಪಂತ್‌ ವಿರುದ್ಧ ಅಭಿಮಾನಿಗಳು ಬೇಸರಗೊಳ್ಳುವಂತೆ ಮಾಡಿತ್ತು. ಆದ್ರೆ ಲೀಗ್‌ ಪಂದ್ಯದಲ್ಲಿ ಪಂತ್‌ ಅಬ್ಬರಿಸಿದ ರೀತಿ ಕಂಡು ಫ್ಯಾನ್ಸ್‌ ದಂಗಾಗಿದ್ದಾರೆ.

    ಆರಂಭದಿಂದಲೇ ಸ್ಫೋಟಕ ಪ್ರದರ್ಶನಕ್ಕಿಳಿದ ಪಂತ್‌ 54 ಎಸೆತಗಳಲ್ಲಿ 10 ಬೌಂಡರಿ, 6 ಸಿಕ್ಸರ್‌ ಸಹಿತ ಶತಕ ಪೂರೈಸಿದರು. ಒಟ್ಟು ತಾವು ಎದುರಿಸಿದ 61 ಎಸೆತಗಳಲ್ಲಿ 11 ಬೌಂಡರಿ, 8 ಸಿಕ್ಸರ್‌ ಸಹಿತ 118 ರನ್‌ ಗಳಿಸಿ ಅಜೇಯರಾಗುಳಿದರು.

  • ಟಾಪ್‌-2ಗೆ ಫೈಟ್‌ | ಮಳೆಯಿಂದ ರದ್ದಾದ್ರೆ ಕ್ವಾಲಿಫೈಯರ್-1 ಆರ್‌ಸಿಬಿ ಎಂಟ್ರಿ!

    ಟಾಪ್‌-2ಗೆ ಫೈಟ್‌ | ಮಳೆಯಿಂದ ರದ್ದಾದ್ರೆ ಕ್ವಾಲಿಫೈಯರ್-1 ಆರ್‌ಸಿಬಿ ಎಂಟ್ರಿ!

    ಲಕ್ನೋ: ಇಂದು ಲಕ್ನೋ (Lucknow Super Giants) ವಿರುದ್ಧದ ಪಂದ್ಯ ಗೆದ್ದರೆ ಆರ್‌ಸಿಬಿ (RCB) ಕ್ವಾಲಿಫೈಯರ್-1ಕ್ಕೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಮಳೆಯಿಂದ ರದ್ದಾದರೆ ಆರ್‌ಸಿಬಿ ರನ್‌ ರೇಟ್‌ ಆಧಾರದದಲ್ಲಿ ಅಗ್ರ-2 ರಲ್ಲಿ ಸ್ಥಾನ ಗಿಟ್ಟಿಸಿಕೊಳ್ಳಲಿದೆ.

    ಹೌದು. ಈಗಾಗಲೇ ಪ್ಲೇ ಆಫ್‌ಗೆ 4 ತಂಡಗಳು ಪ್ರವೇಶ ಪಡೆದರೂ ಅಗ್ರ-2 ಸ್ಥಾನಕ್ಕೆ ನಡೆಯುತ್ತಿರುವ ಪೈಪೋಟಿ ಇನ್ನೂ ಕಡಿಮೆಯಾಗಿಲ್ಲ. 14 ಪಂದ್ಯಗಳಿಂದ 19 ಅಂಕ ಪಡೆದಿರುವ ಪಂಜಾಬ್‌ (Punjab Kings) ಈಗಾಗಲೇ ಕ್ವಾಲಿಫೈಯರ್‌-1ಗೆ ಅರ್ಹತೆ ಪಡೆದಿದೆ.

    ಕ್ವಾಲಿಫೈಯರ್‌ ಅರ್ಹತೆ ಪಡೆಯುವ ಎರಡನೇ ತಂಡಕ್ಕೆ ಆರ್‌ಸಿಬಿ ಮತ್ತು ಗುಜರಾತ್‌ ಮಧ್ಯೆ ಪ್ರಬಲ ಸ್ಪರ್ಧೆ ನಡೆಯುತ್ತಿದೆ. ಗುಜರಾತ್‌ (Gujarat Giants) ಸತತ 2 ಪಂದ್ಯಗಳನ್ನು ಸೋತರೆ ಆರ್‌ಸಿಬಿ ಹೈದರಾಬಾದ್‌ ವಿರುದ್ಧ ಸೋತಿದೆ. ಇದನ್ನೂ ಓದಿ: ಟೆಸ್ಟ್‌ ನಿವೃತ್ತಿ ಬಳಿಕ ಟೆಂಪಲ್‌ ರನ್‌; ಅಯೋಧ್ಯೆಯ ಹನುಮಾನ್ ಗರ್ಹಿ ದೇವಸ್ಥಾನಕ್ಕೆ ವಿರುಷ್ಕಾ ದಂಪತಿ ಭೇಟಿ

    ಅಂಕಪಟ್ಟಿಯಲ್ಲಿ ಗುಜರಾತ್‌ 18 ಅಂಕ ಪಡೆದರೆ ಆರ್‌ಸಿಬಿ 17 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಅಗ್ರಸ್ಥಾನದಲ್ಲಿದ್ದ ಗುಜರಾತ್ ಟೈಟಾನ್ಸ್‌ನ ಸತತ 2 ಪಂದ್ಯಗಳನ್ನು ಸೋತ ಕಾರಣ ಆರ್‌ಸಿಬಿಗೆ ಅಗ್ರ-2 ಸ್ಥಾನಕ್ಕೇರುವ ಸುವರ್ಣಾವಕಾಶ ಒದಗಿಬಂದಿದೆ. ಒಂದು ವೇಳೆ ಲಕ್ನೋ ವಿರುದ್ಧ ಆರ್‌ಸಿಬಿ ಸೋತರೆ ಮುಂಬೈ ವಿರುದ್ಧ ಎಲಿಮಿನೇಟರ್‌ ಪಂದ್ಯವನ್ನು ಆಡಬೇಕಾಗುತ್ತದೆ.

    ರದ್ದಾದ್ದರೂ ಟಾಪ್‌-2
    ಆರ್‌ಸಿಬಿ ಉತ್ತಮ ರನ್‌ರೇಟ್‌ನಿಂದ ಗೆದ್ದರೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಬಹುದು. ಒಂದು ವೇಳೆ ಪಂದ್ಯ ಮಳೆಯಿಂದ ರದ್ದಾದರೂ, ಆರ್‌ಸಿಬಿಗೆ ನೆಟ್ ರನ್‌ರೇಟ್ ಆಧಾರದಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯಲಿದೆ.

    ಗುಜರಾತ್‌ 18 ಅಂಕದ ಜೊತೆಗೆ 0.254 ನೆಟ್ ರನ್‌ರೇಟ್ ಇದೆ. ಆರ್‌ಸಿಬಿ ಈಗ 17 ಅಂಕದ ಜೊತೆಗೆ 0.255 ರನ್‌ ರೇಟ್‌ ಹೊಂದಿದೆ. ಒಂದು ವೇಳೆ ಮಳೆ ಬಂದು ಪಂದ್ಯ ರದ್ದಾದರೆ 1 ಅಂಕ ಲಭಿಸಿದಾಗ ಆರ್‌ಸಿಬಿ ಅಂಕ 18 ಆಗುತ್ತದೆ. ಗುಜರಾತ್‌ಗೆ ಹೋಲಿಸಿದಾಗ 0.001 ರನ್‌ರೇಟ್‌ ಹೆಚ್ಚಿದೆ. ಅಂಕಗಳು ಸಮನಾದರೆ ನೆಟ್ ರನ್‌ರೇಟ್‌ನಲ್ಲಿ ಆರ್‌ಸಿಬಿ ಅಗ್ರ -2 ಸ್ಥಾನ ಪಡೆಯಲಿದೆ.

  • IPL 2025 | ಕೊನೆಯಲ್ಲಿ ʻಸನ್‌ʼ ಸ್ಟ್ರೋಕ್‌ – ಮೊದಲೆರಡು ಸ್ಥಾನ ಕಳೆದುಕೊಂಡರೆ ಆರ್‌ಸಿಬಿಗೆ ಆಗುವ ನಷ್ಟವೇನು?

    IPL 2025 | ಕೊನೆಯಲ್ಲಿ ʻಸನ್‌ʼ ಸ್ಟ್ರೋಕ್‌ – ಮೊದಲೆರಡು ಸ್ಥಾನ ಕಳೆದುಕೊಂಡರೆ ಆರ್‌ಸಿಬಿಗೆ ಆಗುವ ನಷ್ಟವೇನು?

    ಲಕ್ನೋ: 18ನೇ ಆವೃತ್ತಿಯ ಐಪಿಎಲ್‌ (IPL 2025) ಆವೃತ್ತಿ ಇನ್ನೇನು ಮುಕ್ತಾಯ ಘಟಕ್ಕೆ ತಲುಪುತ್ತಿದೆ. ಲೀಗ್‌ ಸುತ್ತಿನಲ್ಲಿ ಉತ್ತಮ ಪ್ರದರ್ಶನ ಕಾಯ್ದುಕೊಂಡಿದ್ದ ಆರ್‌ಸಿಬಿಗೆ (RCB) ಕೊನೆಕೊನೆಯಲ್ಲಿ ಮರ್ಮಾಘಾತ ಆಗಿದೆ.

    ಸನ್‌ ರೈಸರ್ಸ್‌ ಹೈದರಾಬಾದ್‌ (SRH) ವಿರುದ್ಧದ ಸೋಲಿನಿಂದ ಇದೀಗ ಲೀಗ್‌ ಸುತ್ತಿನಲ್ಲಿ 2ನೇ ಸ್ಥಾನವನ್ನೂ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಇದರಿಂದ ಟ್ರೋಫಿ ಗೆಲ್ಲುವ ಕನಸು ಕಂಡಿರುವ ಆರ್‌ಸಿಬಿಗೆ ದೊಡ್ಡ ನಷ್ಟ ಉಂಟಾಗುವ ಸಾಧ್ಯತೆ ಇದೆ. ಅದು ಹೇಗೆ ಅನ್ನೋದನ್ನ ತಿಳಿಯಬೇಕಿದ್ದರೆ ಮುಂದೆ ಓದಿ…

    18ನೇ ಆವೃತ್ತಿಯ ಐಪಿಎಲ್‌ ಪ್ಲೇ ಆಫ್‌ಗೆ ಗುಜರಾತ್‌, ಪಂಜಾಬ್‌, ಆರ್‌ಸಿಬಿ, ಮುಂಬೈ ತಂಡಗಳು ಈಗಾಗಲೇ ಲಗ್ಗೆಯಿಟ್ಟಿವೆ. ಈ ನಾಲ್ಕು ತಂಡಗಳಲ್ಲಿ ಈಗ ನಂ.1, ನಂ.2 ಪಟ್ಟಕ್ಕೆ ಹಣಾಹಣಿ ನಡೆಯುತ್ತಿದೆ. ಗುಜರಾತ್‌, ಆರ್‌ಸಿಬಿ, ಮುಂಬೈ ತಲಾ 13 ಪಂದ್ಯಗಳನ್ನಾಡಿದ್ದರೆ, ಪಂಜಾಬ್‌ ಕಿಂಗ್ಸ್‌ಗೆ ಮಾತ್ರ ಇನ್ನೂ 2 ಪಂದ್ಯಗಳು ಬಾಕಿಯಿವೆ.

    ನಂ.2 ಸ್ಥಾನವೂ ಕಳೆದುಕೊಳ್ಳುತ್ತಾ ಆರ್‌ಸಿಬಿ?
    ಸದ್ಯ ಸನ್‌ ರೈಸರ್ಸ್‌ ವಿರುದ್ಧದ ಸೋಲಿನಿಂದ 3ನೇ ಸ್ಥಾನಕ್ಕೆ ಕುಸಿದಿರುವ ಆರ್‌ಸಿಬಿಗೆ ಮತ್ತೆ 1 ಅಥವಾ 2ನೇ ಸ್ಥಾನಕ್ಕೇರುವ ಅವಕಾಶವಿದೆ. ಮುಂದಿನ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಸೋತು, ಮುಂಬೈ ವಿರುದ್ಧ ಕಡಿಮೆ ರನ್‌ ಅಂತರದಿಂದ ಗೆಲ್ಲಬೇಕು. ಗುಜರಾತ್‌ ಟೈಟಾನ್ಸ್‌ ಸಿಎಸ್‌ಕೆ ವಿರುದ್ಧ ಸೋಲಬೇಕು. ಇದೇ ವೇಳೆ ಮುಂಬೈ ಪಂಜಾಬ್‌ ವಿರುದ್ಧ ಕಡಿಮೆ ರನ್‌ ಅಂತರದಿಂದ ಸೋತು. ಆರ್‌ಸಿಬಿ ಲಕ್ನೋ ವಿರುದ್ಧ ಉತ್ತಮ ರನ್‌ ರೇಟ್‌ನಿಂದ ಗೆದ್ದರೆ, ಆಗ ಆರ್‌ಸಿಬಿ ಮೊದಲ ಅಥವಾ ಅಗ್ರಸ್ಥಾನಕ್ಕೇರುವ ಸಾಧ್ಯತೆಗಳಿವೆ. ಏಕೆಂದರೆ ನೆಟ್ ರನ್‌ರೇಟ್‌ನಲ್ಲಿ ಮುಂಬೈ ಇಂಡಿಯನ್ಸ್‌ ಎಲ್ಲರಿಗಿಂತ ಮುಂದಿದೆ. ಮುಂಬೈ +1.292 ನೆಟ್‌ರನ್‌ ರೇಟ್‌ ಹೊಂದಿದ್ದರೆ, ಗುಜರಾತ್‌ +0.602, ಪಂಜಾಬ್‌ +0.389, ಆರ್‌ಸಿಬಿ +0.255 ನೆಟ್‌ ರನ್‌ರೇಟ್‌ ಹೊಂದಿದೆ.

    ಮೊದಲೆರಡು ಸ್ಥಾನ ಕಸಿದರೆ ಆರ್‌ಸಿಬಿಗೆ ಆಗುವ ನಷ್ಟ ಏನು?
    ಸಾಮಾನ್ಯವಾಗಿ ಐಪಿಎಲ್‌ನಲ್ಲಿ ಮೊದಲ 2 ಸ್ಥಾನಗಳಲ್ಲಿರುವ ತಂಡಗಳಿಗೆ ಹೆಚ್ಚು ಲಾಭ. ಏಕೆಂದರೆ ಮೊದಲ ಕ್ವಾಲಿಫೈಯರ್‌ 1ನಲ್ಲಿ ಸೆಣಸಿದಾಗ ಗೆದ್ದ ತಂಡ ನೇರವಾಗಿ ಫೈನಲ್‌ ಪ್ರವೇಶಿಸಿದ್ರೆ, ಸೋತ ತಂಡಕ್ಕೆ ಮತ್ತೊಂದು ಅವಕಾಶ ಸಿಗಲಿದೆ. ಆದ್ರೆ 3 ಮತ್ತು 4ನೇ‌ ಸ್ಥಾನ ಪಡೆಯುವ ತಂಡಗಳಿಗೆ ಒಂದೊಂದೇ ಅವಕಾಶ ಇರುತ್ತದೆ. ಎಲಿಮಿನೇಟರ್‌ 1ನಲ್ಲಿ ಮೂರು ಮತ್ತು 4ನೇ ಸ್ಥಾನ ಪಡೆದ ತಂಡಗಳು ಸೆಣಸಲಿದ್ದು, ಸೋತ ತಂಡ ಮನೆಗೆ ಹೋಗಬೇಕಾಗುತ್ತದೆ. ಗೆದ್ದ ತಂಡ ಕ್ವಾಲಿಫೈಯರ್‌ 1ನಲ್ಲಿ ಸೋತ ತಂಡದ ಜೊತೆಗೆ ಕ್ವಾಲಿಫೈಯರ್‌-2ನಲ್ಲಿ ಸೆಣಸಬೇಕಾಗುತ್ತದೆ. ಕ್ವಾಲಿಫೈಯರ್‌ 2ನಲ್ಲಿ ಗೆದ್ದ ತಂಡ ಫೈನಲ್‌ ಪ್ರವೇಶಿಸಲಿದೆ. ಹೀಗಾಗಿ ಆರ್‌ಸಿಬಿಗೆ ಮೊದಲ 2 ಸ್ಥಾನಗಳಲ್ಲಿ ಕಾಯ್ದುಕೊಳ್ಳುತ್ತಾ ಅನ್ನೋದನ್ನ ಕಾದುನೋಡಬೇಕಿದೆ.

    ಆರ್‌ಸಿಬಿಗೆ ಹೀನಾಯ ಸೋಲು:
    ಇನ್ನೂ ಶುಕ್ರವಾರ ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ ಲಕ್ನೋದ ಏಕನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್‌ಸಿಬಿ 42 ರನ್‌ಗಳ ಅಂತರದಿಂದ ಸೋಲು ಕಂಡಿದೆ. ಇದರೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಕುಸಿದಿದೆ.

    .

  • ಐಪಿಎಲ್‌ ಪ್ಲೇಆಫ್‌ – 4ನೇ ಸ್ಥಾನಕ್ಕೆ 3 ತಂಡಗಳ ಮಧ್ಯೆ ರೇಸ್‌

    ಐಪಿಎಲ್‌ ಪ್ಲೇಆಫ್‌ – 4ನೇ ಸ್ಥಾನಕ್ಕೆ 3 ತಂಡಗಳ ಮಧ್ಯೆ ರೇಸ್‌

    ನವದೆಹಲಿ: ಐಪಿಎಲ್‌ (IPL) ಪ್ಲೇ ಆಫ್‌ನ (Playoffs) 4ನೇ ಸ್ಥಾನಕ್ಕಾಗಿ ಈಗ ಮೂರು ತಂಡಗಳ ಮಧ್ಯೆ ಪೈಪೋಟಿ ಆರಂಭವಾಗಿದೆ.

    ಡೆಲ್ಲಿ (DC) ವಿರುದ್ಧ ಗುಜರಾತ್‌ ಜೈಂಟ್ಸ್‌ ಜಯಗಳಿಸುವುದರೊಂದಿಗೆ ಗುಜರಾತ್‌ ಟೈಟಾನ್ಸ್‌, ಆರ್‌ಸಿಬಿ ಮತ್ತು ಪಂಜಾಬ್‌ ಕಿಂಗ್ಸ್‌ ಪ್ಲೇ ಆಫ್‌ ಪ್ರವೇಶಿಸಿದೆ. ಈಗ ಮುಂಬೈ ಇಂಡಿಯನ್ಸ್‌ (Mumbai Indians), ಲಕ್ನೋ (Lucknow Super Giants) ಮತ್ತು ಡೆಲ್ಲಿ ಮಧ್ಯೆ 4ನೇ ಸ್ಥಾನಕ್ಕಾಗಿ ಸ್ಪರ್ಧೆ ಆರಂಭವಾಗಿದೆ.

    ಲಕ್ನೋ ಮೂರು ಪಂದ್ಯ ಗೆದ್ದರೆ 16 ಅಂಕ ತಲುಪಬಹುದಾಗಿದೆ. ಮುಂಬೈ ಎರಡು ಪಂದ್ಯ ಗೆದ್ದರೆ 18 ಅಂಕ ಸಂಪಾದಿಸಿದರೆ ಡೆಲ್ಲಿ ಎರಡು ಪಂದ್ಯ ಗೆದ್ದರೆ 17 ಅಂಕ ಪಡೆಯಲಿದೆ. ಆದರೆ ಇಲ್ಲಿ ಮುಂಬೈ ಮತ್ತು ಡೆಲ್ಲಿ ಮಧ್ಯೆ ಒಂದು ಪಂದ್ಯ ನಡೆಯಲಿದೆ. ಇದನ್ನೂ ಓದಿ: RCB, ಗುಜರಾತ್‌, ಪಂಜಾಬ್‌ ಪ್ಲೇ-ಆಫ್‌ಗೆ ಎಂಟ್ರಿ – ಡೆಲ್ಲಿ ವಿರುದ್ಧ ನೋ ಲಾಸ್‌ನಲ್ಲಿ ಟೈಟಾನ್ಸ್‌ ಪಾಸ್‌

    ಮುಂಬೈ ವಿರುದ್ಧ ಡೆಲ್ಲಿ ಸೋತರೆ, ಡೆಲ್ಲಿ ಹೊರಬೀಳಲಿದೆ. ಮುಂಬೈ ಸೋತರೆ, ಆಗ ಪಂಜಾಬ್ ವಿರುದ್ಧ ಕೊನೆಯ ಪಂದ್ಯದಲ್ಲಿ ಗೆಲ್ಲಬೇಕು. ಜೊತೆಗೆ ಡೆಲ್ಲಿ ತನ್ನ ಕೊನೆ ಪಂದ್ಯದಲ್ಲಿ ಪಂಜಾಬ್‌ಗೆ ಶರಣಾಗಿ, ಲಕ್ನೋ 3 ರಲ್ಲಿ 1 ಪಂದ್ಯ ಸೋಲಬೇಕು. ಸದ್ಯ 10 ಅಂಕ ಪಡೆದಿರುವ ಲಕ್ನೋ ಮೂರಕ್ಕೆ ಮೂರೂ ಪಂದ್ಯ ಗೆಲ್ಲಬೇಕಾಗುತ್ತದೆ. ಇದನ್ನೂ ಓದಿ: ಪಾಕಿಗೆ ಶಾಕ್‌ – ಏಷ್ಯಾಕಪ್‌ನಿಂದ ಹಿಂದೆ ಸರಿದ ಭಾರತ!

    ಈಗಾಗಲೇ ಪ್ಲೇ-ಆಫ್‌ಗೇರಿರುವ 3 ತಂಡ ಗಳ ನಡುವೆ ಮೊದಲ 2 ಸ್ಥಾನಕ್ಕೆ ಪೈಪೋಟಿ ಇದೆ. ಅಗ್ರ-2ರಲ್ಲಿ ಸ್ಥಾನ ಪಡೆಯುವ ತಂಡಗಳು ಕ್ವಾಲಿಫೈಯರ್-1ನಲ್ಲಿ ಆಡಲಿದ್ದು, ಆ ಪಂದ್ಯ ಗೆಲ್ಲುವ ತಂಡ ನೇರವಾಗಿ ಫೈನಲ್‌ಗೆ ಅರ್ಹತೆ ಪಡೆಯಲಿದೆ. ಕ್ವಾಲಿಫಯರ್‌ನಲ್ಲಿ ಸೋತ ತಂಡಕ್ಕೂ ಎಲಿಮಿನೇಟರ್‌ ಪಂದ್ಯವಿದೆ.

  • ಆರ್‌ಸಿಬಿ, ಕೆಕೆಆರ್‌ ಪಂದ್ಯ 5 ಓವರ್‌ಗೆ ಸೀಮಿತವಾಗುತ್ತಾ?

    ಆರ್‌ಸಿಬಿ, ಕೆಕೆಆರ್‌ ಪಂದ್ಯ 5 ಓವರ್‌ಗೆ ಸೀಮಿತವಾಗುತ್ತಾ?

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR)  ಪಂದ್ಯ 5 ಓವರ್‌ಗಳ ಆಟಕ್ಕೆ ಸೀಮಿತವಾಗುತ್ತಾ ಎಂಬ ಪ್ರಶ್ನೆ ಎದ್ದಿದೆ.

    ಹೌದು, ಬೆಂಗಳೂರಿನಲ್ಲಿ (Bengaluru) ಭಾರೀ ಮಳೆಯಾಗುತ್ತಿದ್ದು ಪಂದ್ಯ ಇನ್ನೂ ಆರಂಭವಾಗಿಲ್ಲ. ಒಂದು ವೇಳೆ ಮಳೆ ಮುಂದುವರಿದರೆ ಓವರ್‌ ಕಡಿತವಾಗುತ್ತದೆ.

    ರಾತ್ರಿ 8:45ಕ್ಕೆ ಪಂದ್ಯ ಆರಂಭವಾದರೆ ಓವರ್‌ನಲ್ಲಿ ಕಡಿತವಾಗುವುದಿಲ್ಲ. ನಂತರ ಪಂದ್ಯ ನಡೆದರೆ ಓವರ್‌ ಕಡಿತವಾಗುತ್ತದೆ. ರಾತ್ರಿ 10:56ರ ವರೆಗೆ ಪಂದ್ಯ ನಡೆಸಲು ಅವಕಾಶವಿದ್ದು ಕನಿಷ್ಠ 5 ಓವರ್‌ ಆದರೂ ಆಡಿಸಬಹುದು.

    ರಾತ್ರಿ 10:50 ರ ನಂತರವೂ ಮಳೆ ಸುರಿದರೆ ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಪಂದ್ಯ ರದ್ದುಗೊಂಡರೆ ಎರಡು ತಂಡಗಳಿಗೂ ಸಮಾನವಾಗಿ ಒಂದೊಂದು ಅಂಕ ನೀಡಲಾಗುತ್ತದೆ. ಹೀಗಾಗಿ ಆರ್‌ಸಿಬಿ 12 ಪಂದ್ಯಗಳಿಂದ 17 ಅಂಕ ಪಡೆದರೆ ಕೆಕೆಆರ್‌ 13 ಪಂದ್ಯವಾಡಿ 12 ಅಂಕ ಪಡೆಯುತ್ತದೆ. ಈ ಮೂಲಕ ಕೆಕೆಆರ್‌ ಟೂರ್ನಿಯಿಂದ ನಿರ್ಗಮಿಸುತ್ತದೆ.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಪಂದ್ಯಗಳು ಆರಂಭಿಸಬಹುದು. ಉದಾಹರಣೆಗೆ 1 ಗಂಟೆ ಭಾರೀ ಮಳೆ ಸುರಿದರೂ ಕೆಲವೇ ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದು. ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಂ ಅಳವಡಿಕೆಯಾಗಿದ್ದು ಕೂಡಲೇ ನೀರನ್ನು ಹೊರ ಹಾಕಲಾಗುತ್ತದೆ. ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನ ಒಣಗಿಸುವ ವ್ಯವಸ್ಥೆಯಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

    ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಸ್ಥಗಿತಗೊಂಡಿದ್ದ ಐಪಿಎಲ್‌ ಪಂದ್ಯಗಳು ಇಂದಿನಿಂದ ಮತ್ತೆ ಆರಂಭವಾಗಲಿದೆ. ಈಗಾಗಲೇ 16 ಅಂಕ ಗಳಿಸಿರುವ ಆರ್‌ಸಿಬಿ ನಾಳಿನ ಪಂದ್ಯ ಗೆದ್ದರೆ ಪ್ಲೇ ಆಫ್‌ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

  • ಬೆಂಗಳೂರಿನಲ್ಲಿ ಭಾರೀ ಮಳೆ | ಆರ್‌ಸಿಬಿ-ಕೆಕೆಆರ್‌ ಪಂದ್ಯಕ್ಕೆ ಅಡ್ಡಿ

    ಬೆಂಗಳೂರಿನಲ್ಲಿ ಭಾರೀ ಮಳೆ | ಆರ್‌ಸಿಬಿ-ಕೆಕೆಆರ್‌ ಪಂದ್ಯಕ್ಕೆ ಅಡ್ಡಿ

    ಬೆಂಗಳೂರು: ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್‌ ರೈಡರ್ಸ್‌ (KKR) ವಿರುದ್ಧದ ಪಂದ್ಯಕ್ಕೆ ಮಳೆ (Rain) ಅಡ್ಡಿಯಾಗಿದೆ.

    ಸಂಜೆ ಬೆಂಗಳೂರಿನಲ್ಲಿ ಜೋರಾಗಿ ಮಳೆ ಆರಂಭವಾಗಿದೆ. ಹೀಗಾಗಿ ಮಳೆ ನಿಂತರಷ್ಟೇ ಪಂದ್ಯ ಆರಂಭವಾಗಲಿದೆ. ಹವಾಮಾನ ಇಲಾಖೆ ಇಂದು ಸಂಜೆ ಜೋರಾಗಿ ಮಳೆ ಸುರಿಯಲಿದೆ ಎಂದು ಮೊದಲೇ ಮುನ್ಸೂಚನೆ ನೀಡಿತ್ತು.

    ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಎಷ್ಟೇ ಮಳೆಯಾದರೂ, ಮಳೆ ನಿಂತ ನಂತರ ಕೆಲವೇ ನಿಮಿಷಗಳಲ್ಲಿ ಪಂದ್ಯಗಳು ಆರಂಭಿಸಬಹುದು. ಉದಾಹರಣೆಗೆ ಒಂದು ಗಂಟೆ ಭಾರೀ ಮಳೆ ಸುರಿದರೂ ಕೆಲವೇ ನಿಮಿಷಗಳಲ್ಲಿ ಪಂದ್ಯವನ್ನು ಆರಂಭಿಸಬಹುದು.

    ಕ್ರೀಡಾಂಗಣದಲ್ಲಿ ಸಬ್ ಏರ್ ಸಿಸ್ಟಂ ಅಳವಡಿಕೆಯಾಗಿದ್ದು ಕೂಡಲೇ ನೀರನ್ನು ಹೊರ ಹಾಕಲಾಗುತ್ತದೆ. ಬಿಸಿ ಗಾಳಿಯನ್ನು ಹಾಯಿಸಿ ಮೈದಾನವನ್ನ ಒಣಗಿಸುವ ವ್ಯವಸ್ಥೆಯಿದೆ. 4.5 ಕೋಟಿ ರೂ. ವೆಚ್ಚದಲ್ಲಿ ಈ ವ್ಯವಸ್ಥೆಯನ್ನು ಅಳವಡಿಸಲಾಗಿದೆ.

    ಆಪರೇಷನ್‌ ಸಿಂಧೂರ ಕಾರ್ಯಾಚರಣೆಯ ನಂತರ ಸ್ಥಗಿತಗೊಂಡಿದ್ದ ಐಪಿಎಲ್‌ ಪಂದ್ಯಗಳು ಇಂದಿನಿಂದ ಮತ್ತೆ ಆರಂಭವಾಗಲಿದೆ. ಈಗಾಗಲೇ 16 ಅಂಕ ಗಳಿಸಿರುವ ಆರ್‌ಸಿಬಿ ನಾಳಿನ ಪಂದ್ಯ ಗೆದ್ದರೆ ಪ್ಲೇ ಆಫ್‌ ಪ್ರವೇಶಿಸಿದ ಮೊದಲ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.