Tag: ಐಪಿಎಲ್ 2020

  • ಆರ್‌ಸಿಬಿ ಗೆಲುವಿಗಾಗಿ ರಾಯಚೂರಿನ ಅಭಿಮಾನಿಗಳಿಂದ ರುದ್ರಾಭಿಷೇಕ

    ಆರ್‌ಸಿಬಿ ಗೆಲುವಿಗಾಗಿ ರಾಯಚೂರಿನ ಅಭಿಮಾನಿಗಳಿಂದ ರುದ್ರಾಭಿಷೇಕ

    ರಾಯಚೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ತಂಡದ ಗೆಲುವಿಗಾಗಿ ರುದ್ರಾಭಿಷೇಕ ಮಾಡಿಸುವ ಮೂಲಕ ದೇವರಿಗೆ ಪ್ರಾರ್ಥನೆ ಸಲ್ಲಿಸಿದ್ದಾರೆ. ಜಿಲ್ಲೆಯ ಲಿಂಗಸುಗೂರು ತಾಲೂಕಿನ ಗುರುಗುಂಟಾ ಶ್ರೀ ಅಮರೇಶ್ವರ ದೇವಾಲಯದಲ್ಲಿ ರುದ್ರಾಭಿಷೇಕ ನೆರವೇರಿಸಿದ್ದಾರೆ.

    ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಆರ್‌ಸಿಬಿ ಗೆಲುವಿಗಾಗಿ ಅಭಿಮಾನಿಗಳು ವಿಶೇಷ ಪ್ರಾರ್ಥನೆ ಸಲ್ಲಿಸಿ ರುದ್ರಾಭಿಷೆಕದ ರಶೀದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇಂಡಿಯನ್ ಪ್ರೀಮಿಯನ್ ಲೀಗ್ 2020ರ ಲೀಗ್ ಹಂತದ ಕೊನೆ ಪಂದ್ಯ ಆಡಲು ಸಜ್ಜಾಗಿರುವ ಆರ್‌ಸಿಬಿ ತಂಡದ ಪರ ಅಭಿಮಾನಿಗಳು ಪ್ರಾರ್ಥನೆ ಸಲ್ಲಿಸಿದ್ದಾರೆ.

    ರಾಯಲ್ ಚಾಲೆಂಜರ್ಸ್ ತಂಡ ನಿರ್ಣಾಯಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೆಣಸಾಡಲಿದ್ದು, ಗೆದ್ದರೆ ಪ್ಲೇ – ಆಫ್ ಸ್ಥಾನ ಖಚಿತವಾಗಲಿದೆ. ಮಹತ್ವದ ಪಂದ್ಯದಲ್ಲಿ ಗೆಲುವಿಗೆ ಆರ್‌ಸಿಬಿ ಅಭಿಮಾನಿಗಳು ರುದ್ರಾಭಿಷೇಕ ಮಾಡಿದ್ದಾರೆ. ಇದನ್ನೂ ಓದಿ: ಐಪಿಎಲ್2020: 2ನೇ ಸ್ಥಾನ ಯಾರಿಗೆ? ಕೊಹ್ಲಿ ಪಡೆಗೆ ಪ್ಲೇ ಆಫ್ ಸ್ಥಾನ ಕನ್ಫರ್ಮ್ ಆಗುತ್ತಾ?

  • ಐಪಿಎಲ್2020: 2ನೇ ಸ್ಥಾನ ಯಾರಿಗೆ? ಕೊಹ್ಲಿ ಪಡೆಗೆ ಪ್ಲೇ ಆಫ್ ಸ್ಥಾನ ಕನ್ಫರ್ಮ್ ಆಗುತ್ತಾ?

    ಐಪಿಎಲ್2020: 2ನೇ ಸ್ಥಾನ ಯಾರಿಗೆ? ಕೊಹ್ಲಿ ಪಡೆಗೆ ಪ್ಲೇ ಆಫ್ ಸ್ಥಾನ ಕನ್ಫರ್ಮ್ ಆಗುತ್ತಾ?

    – ಕೆಕೆಆರ್ ಪ್ಲೇ ಆಫ್ ಪ್ರವೇಶಿಸಲು ಅವಕಾಶವಿದೆ

    ಅಬುಧಾಬಿ: 2020ರ ಐಪಿಎಲ್ ಟೂರ್ನಿಯಲ್ಲಿ 45 ದಿನಗಳಲ್ಲಿ 54 ತಂಡಗಳು ಪೂರ್ಣಗೊಂಡರೂ ಪ್ಲೇ ಆಫ್ ರೇಸ್ ಅಂತ್ಯವಾಗಿಲ್ಲ. ಇವತ್ತು ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ. ಇವತ್ತು ದೆಹಲಿ ಮತ್ತು ಬೆಂಗಳೂರು ನಡುವೆ ಐಪಿಎಲ್ ಮ್ಯಾಚ್ ನಡೆಯಲಿದೆ.

    ಇಂದಿನ ಮ್ಯಾಚ್‍ನಲ್ಲಿ ಆರ್‌ಸಿಬಿ ಗೆಲ್ಲಲೇಬೇಕಾಗಿದೆ. ಗೆದ್ದರಷ್ಟೇ ಪ್ಲೇ ಆಫ್‍ಗೆ ಆರ್ ಸಿಬಿಗೆ ಎಂಟ್ರಿ ಸಿಗುತ್ತೆ. ಅಪ್ಪಿತಪ್ಪಿ ಸೋತರೆ ಆಗ ಬೆಂಗಳೂರು ತಂಡದ ಭವಿಷ್ಯ ಹೈದ್ರಾಬಾದ್-ಮುಂಬೈ ನಡುವಿನ ಪಂದ್ಯದ ಮೇಲೆ ಅವಲಂಬಿತ ಆಗಿರುತ್ತೆ. ಮುಂಬೈ ಎದುರು ಹೈದ್ರಾಬಾದ್ ಸೋತರಷ್ಟೇ ಆರ್ ಸಿಬಿ ಆಸೆ ಜೀವಂತವಾಗಿರಲಿದೆ.

    ಆವೃತ್ತಿಯ ಮೊದಲ ಪಂದ್ಯದಲ್ಲಿ ಡೆಲ್ಲಿ, ಬೆಂಗಳೂರು ತಂಡವನ್ನು 59 ರನ್ ಗಳ ಅಂತರದಿಂದ ಸೋಲುಣಿಸಿತ್ತು. ಈ ಸೋಲಿಗೆ ಕೊಹ್ಲಿ ಸೇನೆ ಪ್ರತಿಕಾರ ತೀರಿಸಿಕೊಳ್ಳಬೇಕಿದೆ. ಸದ್ಯ 13 ಪಂದ್ಯಗಳಲ್ಲಿ 7 ರಲ್ಲಿ ಗೆದ್ದು 14 ಅಂಕಗಳೊಂದಿಗೆ ಬೆಂಗಳೂರು, ಡೆಲ್ಲಿ ತಂಡಗಳು ಕ್ರಮವಾಗಿ 2ನೇ ಮತ್ತು 3ನೇ ಸ್ಥಾನದಲ್ಲಿವೆ. ಆರ್ ಸಿಬಿ ಸದ್ಯ -0.145 ರನ್ ರೇಟ್ ಹೊಂದಿದ್ದು, ಡೆಲ್ಲಿ -0.159 ರನ್ ರೇಟ್ ಹೊಂದಿದೆ. ಈ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಪ್ಲೇ ಆಫ್ ಸ್ಥಾನ ಖಚಿತವಾಗುತ್ತದೆ. ಆದರೆ ಸೋತ ತಂಡದ ಭವಿಷ್ಯ ಹೈದರಾಬಾದ್-ಮುಂಬೈ ಪಂದ್ಯಗಳ ಫಲಿತಾಂಶದ ಮೇಲೆ ನಿರ್ಧಾರವಾಗುತ್ತದೆ.

    ಹೈದರಾಬಾದ್ ವಿರುದ್ಧ ಪಂದ್ಯದಲ್ಲಿ ಮುಂಬೈ ಗೆಲುವು ಪಡೆದರೇ ಯಾವುದೇ ಸಮಸ್ಯೆ ಆಗುವುದಿಲ್ಲ. ಒಂದೊಮ್ಮೆ ಸೋತರೆ ರನ್ ರೇಟ್ ಕಾರಣದಿಂದ ಹೈದರಾಬಾದ್ ತಂಡ 3ನೇ ಸ್ಥಾನ ಪಡೆಯಲಿದೆ. ಸದ್ಯ ಹೈದರಾಬಾದ್ ತಂಡ +0.555 ರನ್ ರೇಟ್ ಹೊಂದಿದೆ. ಆಗ 4ನೇ ಸ್ಥಾನಕ್ಕಾಗಿ ಆರ್ ಸಿಬಿ, ಡೆಲ್ಲಿ ಪಂದ್ಯದಲ್ಲಿ ಸೋತ ತಂಡ ಹಾಗೂ ಕೋಲ್ಕತ್ತಾ ನಡುವಿನ ತಂಡಗಳ ರನ್ ರೇಟ್ ಮೇಲೆ 4ನೇ ಸ್ಥಾನ ಖಚಿತವಾಗುತ್ತದೆ. ಕೋಲ್ಕತ್ತಾ ತಂಡ ಸದ್ಯ -0.214 ರನ್ ರೇಟ್ ಹಾಗೂ 14 ಅಂಕಗಳೊಂದಿಗೆ 4ನೇ ಸ್ಥಾನ ಪಡೆದುಕೊಂಡಿದೆ.

    4ನೇ ಸ್ಥಾನಕ್ಕೆ ರನ್ ರೇಟ್ ಪ್ರಮುಖ ಪಾತ್ರವಹಿಸುವ ಕಾರಣದಿಂದ ಪಂದ್ಯದಲ್ಲಿ ಆರ್ ಸಿಬಿ ಮೊದಲು ಬ್ಯಾಟಿಂಗ್ ಮಾಡಿದರೆ 15 ರನ್ ಬಾಕಿ ಇರುವಂತೆ ಗೆಲ್ಲಬೇಕಿದೆ. ಆರ್ ಸಿಬಿ ಮೊದಲು ಬೌಲ್ ಮಾಡಿದರೆ ಡೆಲ್ಲಿ 22 ರನ್ ಗಳ ಗೆಲುವು ಪಡೆಯಬೇಕಿದೆ. ಇತ್ತ ಡೆಲ್ಲಿ ಮೊದಲು ಬ್ಯಾಟಿಂಗ್ ಮಾಡಿದರೆ 12 ಎಸೆತ ಬಾಕಿ ಇರುವಂತೆ ಆರ್ ಸಿಬಿ ಗೆಲುವು ಪಡೆಯಬೇಕಿದೆ. ಅಥವಾ ಡೆಲ್ಲಿ ಮೊದಲು ಬೌಲ್ ಮಾಡಿದರೆ 18 ಪ್ಲಸ್ ರನ್ ಗಳೊಂದಿಗೆ ಆರ್ ಸಿಬಿ ಗೆಲುವು ಪಡೆಯಬೇಕಿದೆ. ಉಳಿದಂತೆ ರಾಜಸ್ಥಾನ ತಂಡ ಅಂತಿಮ ಸ್ಥಾನ ಪಡೆದರೆ, ಚೆನ್ನೈ 7 ಹಾಗೂ ಪಂಜಾಬ್ ತಂಡ 6ನೇ ಸ್ಥಾನದಲ್ಲಿ ಟೂರ್ನಿಯಿಂದ ಹೊರ ನಡೆಯಲಿದೆ.

  • ಕೋಪದಿಂದ ಬ್ಯಾಟ್ ಎಸೆದ ಗೇಲ್‍ಗೆ ಬಿತ್ತು ದಂಡ

    ಕೋಪದಿಂದ ಬ್ಯಾಟ್ ಎಸೆದ ಗೇಲ್‍ಗೆ ಬಿತ್ತು ದಂಡ

    ಅಬುಧಾಬಿ: ಐಪಿಎಲ್ ಕೋಡ್ ಆಫ್ ಕಂಡಕ್ಟ್ ನಿಯಮಗಳನ್ನು ಮುರಿದ ಕಾರಣ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕ್ರಿಸ್ ಗೇಲ್‍ಗೆ ಪಂದ್ಯದ ಶುಲ್ಕದಲ್ಲಿ ಶೇ.10 ರಷ್ಟು ದಂಡವಾಗಿ ವಿಧಿಸಲಾಗಿದೆ.

    ಕ್ರಿಸ್ ಗೇಲ್ ಅವರು ಟಿ-20 ಮಾದರಿಯ ಕ್ರಿಕೆಟ್‍ಗೆ ಹೇಳಿ ಮಾಡಿಸಿದಂತ ಬ್ಯಾಟ್ಸ್ ಮನ್ ಆಗಿದ್ದಾರೆ. ಆದರೆ ರಾಜಸ್ಥಾನ ರಾಯಲ್ಸ್ ವಿರುದ್ಧ ಪಂದ್ಯದಲ್ಲಿ 99 ರನ್ ಗಳಿಸಿ ಔಟಾದ ಗೇಲ್, ಕ್ಷಣ ಕಾಲ ಹತಾಶೆಗೊಂಡು ಬ್ಯಾಟ್ ಎಸೆದಿದ್ದರು. ಪಂದ್ಯದಲ್ಲಿ 2ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ಗೇಲ್, 63 ಎಸೆತದಲ್ಲಿ ಆರು ಬೌಂಡರಿ ಮತ್ತು ಎಂಟು ಭರ್ಜರಿ ಸಿಕ್ಸರ್ ಸಮೇತ ಬರೋಬ್ಬರಿ 99 ರನ್ ಬಾರಿಸಿ ಔಟಾದರು. ನಿಯಮಗಳನ್ನು ಮುರಿದ ಕಾರಣ ಅವರಿಗೆ ದಂಡ ವಿಧಿಸಲಾಗಿದ್ದು, ಸದ್ಯ ತಮ್ಮ ತಪ್ಪನ್ನು ಗೇಲ್ ಒಪ್ಪಿಕೊಂಡಿದ್ದಾರೆ. ಐಪಿಎಲ್ ಕೋಡ್ ಆಫ್ ಕಂಡಕ್ಟ್ ಅಫೆನ್ಸ್ 2.2 ಲೆವೆಲ್ 1 ರ ಅನ್ವಯ ಪಂದ್ಯದ ರೆಫರಿ ದಂಡ ವಿಧಿಸಿದ್ದಾರೆ.

    ಪಂದ್ಯದಲ್ಲಿ 8 ಸಿಕ್ಸರ್ ಸಿಡಿಸುವುದರೊಂದಿಗೆ ಟಿ20 ಮಾದರಿ ಕ್ರಿಕೆಟ್‍ನಲ್ಲಿ ಸಾವಿರ ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ ಗೇಲ್, ಐಪಿಎಲ್ ಆವೃತ್ತಿಯಲ್ಲಿ ಶತಕ ಗಳಿಸುವ ಅವಕಾಶದಿಂದ ವಂಚಿತರಾಗಿದ್ದರು. ಜೋಫ್ರಾ ಅರ್ಚರ್ ಎಸೆದ ಯಾರ್ಕರ್ ರನ್ನು ಎದುರಿಸಲು ಗೇಲ್ ವಿಫಲರಾಗಿದ್ದ ಗೇಲ್ 99 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. ಇದರೊಂದಿಗೆ ಐಪಿಎಲ್‍ನಲ್ಲಿ 99 ರನ್ ಗಳಿಗೆ 2ನೇ ಬಾರಿಗೆ ಔಟಾದ ಏಕೈಕ ಆಟಗಾರ ಎನಿಸಿಕೊಂಡಿದ್ದಾರೆ. 2019ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಗೇಲ್ 99 ರನ್ ಗಳಿಸಿ ಅಜೇಯರಾಗಿ ಉಳಿದಿದ್ದರು.

    ಪಂದ್ಯದ ಬಳಿಕ ಮಾತನಾಡಿದ್ದ ಗೇಲ್, ಇಂದು ನಮ್ಮ ಆಟಗಾರರಿಗೆ ಶತಕ ಸಾಧನೆ ಮಾಡುವುದಾಗಿ ಮಾತು ಕೊಟ್ಟಿದ್ದೆ. ಆದರೆ ಅದು ಸದ್ಯವಾಗಿರಲಿಲ್ಲ. ಆದರೆ ನನ್ನ ಮನಸ್ಸಿಗೆ ಮಾತ್ರ ಇದು ಶತಕವೇ ಎಂದು ನಕ್ಕು ಸುಮ್ಮನಾಗಿದ್ದರು. 99 ರನ್ ಗಳಲ್ಲಿ ಔಟಾಗುವುದು ದುರಾದೃಷ್ಟಕರ. ಆದರೆ ನಾನು ಆಟವನ್ನು ಸಂತಸದಿಂದ ಆಡಿದ್ದೇನೆ. ಯುವ ಆಟಗಾರರೊಂದಿಗೆ ಬ್ಯಾಟಿಂಗ್ ಮಾಡುವುದು ಹೆಚ್ಚು ಸಂತಸ ನೀಡುತ್ತದೆ. ಅಂತೆಯೇ ಐಪಿಎಲ್ ಟ್ರೋಫಿ ಗೆದ್ದರೆ ಚೆನ್ನಾಗಿರುತ್ತೆ ಎಂದಿದ್ದಾರೆ.

    ವೆಸ್ಟ್ ಇಂಡೀಸ್ ಪರ ಅಂತಾರಾಷ್ಟ್ರೀಯ ಟಿ-20 ಪಂದ್ಯ, ಐಪಿಎಲ್ ಮತ್ತು ಬಿಗ್ ಬ್ಯಾಷ್ ಸೇರಿದಂತೆ ಗೇಲ್ ಹಲವಾರು ಟಿ-20 ಟೂರ್ನಿಗಳನ್ನು ಆಡಿದ್ದಾರೆ. ಈ ಎಲ್ಲ ಪಂದ್ಯಗಳಿಂದ ಕೇವಲ ಟಿ-20 ಪಂದ್ಯಗಳಲ್ಲೇ 10 ಸಾವಿರ ರನ್ ಸಿಡಿಸಿದ್ದಾರೆ. ಜೊತೆಗೆ ಐಪಿಎಲ್‍ನಲ್ಲಿ 349 ಸಿಕ್ಸ್ ಮತ್ತು 4,760 ರನ್ ಬಾರಿಸಿದ್ದಾರೆ.

  • ಧೋನಿಗೆ ಥ್ಯಾಂಕ್ಯೂ ಹೇಳಿದ ಬಿಸಿಸಿಐ

    ಧೋನಿಗೆ ಥ್ಯಾಂಕ್ಯೂ ಹೇಳಿದ ಬಿಸಿಸಿಐ

    ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ನಿವೃತ್ತಿ ಘೋಷಿಸಿದ ಕೆಲ ತಿಂಗಳ ಬಳಿಕ ಬಿಸಿಸಿಐ ಧೋನಿ ಅವರಿಗೆ ಧನ್ಯವಾದ ತಿಳಿಸಿದೆ.

    ಧೋನಿ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಜೀವನಕ್ಕೆ ಆಗಸ್ಟ್ 15 ರಂದು ನಿವೃತ್ತಿ ಘೋಷಣೆ ಮಾಡಿದ್ದರು. ಆ ಬಳಿಕ ಐಪಿಎಲ್ ಟೂರ್ನಿಯಲ್ಲಿ ಮುಂದುವರಿದಿದ್ದರು. ಸದ್ಯ ಧೋನಿ ನಿವೃತ್ತಿಯ ಬಳಿಕ ಟೀಂ ಇಂಡಿಯಾ ಮೊದಲ ಟೂರ್ನಿಯನ್ನು ಆಡಲಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಆಸ್ಟ್ರೇಲಿಯಾ ವಿರುದ್ಧದ ಸರಣಿಗೆ ಆಟಗಾರರನ್ನು ಆಯ್ಕೆ ಮಾಡಿರುವ ಬಿಸಿಸಿಐ, ಟೀಂ ಇಂಡಿಯಾ ಲೆಜೆಂಡ್ ಆಟಗಾರನಿಗೆ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಫೋಸ್ಟ್ ಮಾಡುವ ಮೂಲಕ ಗೌರವ ಸಲ್ಲಿಸಿದೆ.

    ಇತ್ತ 2020ರ ಐಪಿಎಲ್ ಆವೃತ್ತಿಯಲ್ಲಿ ಕೆಟ್ಟ ಪ್ರದರ್ಶನ ನೀಡುವ ಮೂಲಕ ಧೋನಿ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಲೀಗ್ ಹಂತದಲ್ಲೇ ಟೂರ್ನಿಯಿಂದ ಹೊರ ನಡೆಯುವುದು ಖಚಿತವಾಗಿದೆ. ಈ ಬಾರಿಯ ಟೂರ್ನಿಯಿಂದ ಹೊರ ನಡೆದ ಮೊದಲ ತಂಡ ಎಂಬ ಕೆಟ್ಟ ಸಾಧನೆ ಮಾಡಿತ್ತು. ವೈಯುಕ್ತಿಕವಾಗಿಯೂ ಧೋನಿ ಟೂರ್ನಿಯಲ್ಲಿ ಮಿಂಚಲು ವಿಫಲರಾಗಿದ್ದು, 12 ಪಂದ್ಯಗಳಲ್ಲಿ ಕೇವಲ 199 ರನ್ ಗಳಿಸಿದ್ದಾರೆ.

    ಟೀಂ ಇಂಡಿಯಾ ತಂಡವನ್ನು ಮುನ್ನಡೆಸಿದ ಧೋನಿ ಅತ್ಯಂತ ಯಶಸ್ವಿ ನಾಯಕ ಎನಿಸಿಕೊಂಡಿದ್ದು, 2007 ಟಿ20 ವಿಶ್ವಕಪ್, 2011 ಏಕದಿನ ವಿಶ್ವಕಪ್, 2016ರ ಏಷ್ಯಾ ಕಪ್ ಗೆದ್ದ ತಂಡದ ನಾಯಕರಾಗಿದ್ದಾರೆ. ಅಲ್ಲದೇ ಧೋನಿ ನಾಯಕತ್ವದಲ್ಲಿ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ತಲುಪಿತ್ತು. ಉಳಿದಂತೆ ಐಸಿಸಿಯ ಮೂರು ಟ್ರೋಫಿಗಳನ್ನು ಗೆದ್ದ ತಂಡವನ್ನು ಮುನ್ನಡೆಸಿದ ಏಕೈಕ ನಾಯಕ ಎಂಬ ಹೆಗ್ಗಳಿಕೆಯನ್ನು ಧೋನಿ ಪಡೆದಿದ್ದಾರೆ.

  • ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡೋ ಕ್ರಿಕೆಟ್ ದೇವರು- ವೈರಲ್ ಆಯ್ತು ಸೂರ್ಯಕುಮಾರ್ ಹಳೆ ಟ್ವೀಟ್

    ಕೊಹ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡೋ ಕ್ರಿಕೆಟ್ ದೇವರು- ವೈರಲ್ ಆಯ್ತು ಸೂರ್ಯಕುಮಾರ್ ಹಳೆ ಟ್ವೀಟ್

    – ಸ್ಲೆಡ್ಜ್ ಮಾಡಿ ಟೀಕೆಗೆ ಗುರಿಯಾದ ಕೊಹ್ಲಿ

    ಅಬುಧಾಬಿ: ಸೂರ್ಯಕುಮಾರ್ ಯಾದವ್ ಐಪಿಎಲ್ 2020ರ ಆವೃತ್ತಿಯಲ್ಲಿ ಅತಿ ಹೆಚ್ಚು ಕೇಳಿ ಬರುತ್ತಿರುವ ಹೆಸರು. ಇತ್ತ ಇದೇ ಸಂದರ್ಭದಲ್ಲಿ ಟೀಂ ಇಂಡಿಯಾಗೆ ಆಯ್ಕೆ ಮಾಡದಿರುವುದು ಅಭಿಮಾನಿಗಳ ಅಸಮಾಧಾನಕ್ಕೆ ಕಾರಣವಾಗಿತ್ತು. ಆದರೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಮುಂಬೈ ಯುವ ಆಟಗಾರ ಸೂರ್ಯಕುಮಾರ್ ಯಾದವ್ ಅವರನ್ನು ಸ್ಲೆಡ್ಜಿಂಗ್ ಮಾಡಿರುವುದು ಕ್ರಿಕೆಟ್ ಅಭಿಮಾನಿಗಳ ಅಸಮಾಧಾನವನ್ನು ಮತ್ತಷ್ಟು ಹೆಚ್ಚಿಸಿದೆ.

    ಕೊಹ್ಲಿ ಸ್ಲೆಡ್ಜಿಂಗ್ ಮಾಡುತ್ತಿದಂತೆ ಸೂರ್ಯಕುಮಾರ್ ಯಾದವ್ ಅವರ ಹಳೆಯ ಟ್ವೀಟ್‍ಗಳನ್ನು ಬೆಳಕಿಗೆ ತರುತ್ತಿರುವ ಅಭಿಮಾನಿಗಳು ಟ್ವೀಟ್‍ಗಳನ್ನು ವೈರಲ್ ಮಾಡುತ್ತಿದ್ದಾರೆ. 2016 ರಿಂದ ಸೂರ್ಯಕುಮಾರ್ ವಿರಾಟ್ ಕೊಹ್ಲಿ ಕುರಿತು ಟ್ವೀಟ್ ಮಾಡುತ್ತಿದ್ದಾರೆ. ನಂಬರ್ 3ನೇ ಕ್ರಮಾಂಕದಲ್ಲಿ ಕ್ರಿಕೆಟ್ ದೇವರು ಭಾರತ ತಂಡ ಸಂಕಷ್ಟದಲ್ಲಿದ್ದರೆ ಪ್ರತಿ ಬಾರಿ ಕಾಪಾಡುತ್ತಾರೆ ಎಂದು 2016 ಮಾರ್ಚ್ 20 ರಂದು ಟ್ವೀಟ್ ಮಾಡಿದ್ದರು. ಇತ್ತ 2019ರ ಡಿಸೆಂಬರ್ 5 ರಂದು ಮತ್ತೊಂದು ಟ್ವೀಟ್ ಮಾಡಿದ್ದ ಅವರು, ವಿಶ್ವ ಕ್ರಿಕೆಟ್‍ನಲ್ಲಿ ಕೊಹ್ಲಿ ಅತ್ಯುನ್ನತ ಸ್ಥಾನವನ್ನು ತಲುಪಿದ್ದಾರೆ ಎಂದು ಬರೆದುಕೊಂಡಿದ್ದರು.

    ಕೊಹ್ಲಿ ಪರ ಇಷ್ಟು ಅಭಿಮಾನವನ್ನು ಹೊಂದಿರುವ ಯುವ ಆಟಗಾರನ ವಿರುದ್ಧ ಕೊಹ್ಲಿ ಸ್ಲೆಡ್ಜಿಂಗ್ ಮಾಡಿರುವುದು ಸರಿಯಲ್ಲ ಎಂದಿದ್ದಾರೆ. ಮತ್ತೆ ಕೆಲವರು ವಿರಾಟ್ ಕೊಹ್ಲಿರನ್ನು ಮಾಜಿ ನಾಯಕ ಎಂಎಸ್ ಧೋನಿಗೆ ಹೋಲಿಕೆ ಮಾಡಿ ಟೀಕೆ ಮಾಡಿದ್ದಾರೆ. ಯಾವುದೇ ಕಾರಣವಿಲ್ಲದೇ ಕೊಹ್ಲಿ ಏಕೆ ಸೂರ್ಯಕುಮಾರ್ ಯಾದವ್ ಮೇಲೆ ಗರಂ ಆಗಿದ್ದರು ಎಂದು ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡಿದ್ದಾರೆ.

    ನಡೆದಿದ್ದೇನು?
    ಅಬುಧಾಬಿ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಬೆಂಗಳೂರು, ಮುಂಬೈ ನಡುವಿನ ಪಂದ್ಯದಲ್ಲಿ ಘಟನೆ ನಡೆದಿದೆ. ಪ್ಲೇ ಆಫ್ ಸೇರುವ ಹೈವೋಲ್ಟೇಜ್ ಪಂದ್ಯದಲ್ಲಿ ಕೊಹ್ಲಿ ಪಡೆ ನಿರೀಕ್ಷೆ ಮಟ್ಟದಲ್ಲಿ ಮಿಂಚಲು ವಿಫಲವಾಗಿತ್ತು. ಪಂದ್ಯದಲ್ಲಿ ಮುಂಬೈ ಪರ ಉತ್ತಮ ಪ್ರದರ್ಶನ ನೀಡಿ ತಂಡದ ಗೆಲುವಿಗೆ ಕಾರಣವಾದ ಸೂರ್ಯಕುಮಾರ್ ಯಾದವ್, ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ತಂಡದ ಗೆಲುವಿಗೆ 79 ರನ್ ಗಳ ಕಾಣಿಕೆ ನೀಡಿದ್ದರು.

    ಮುಂಬೈ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದ ಸೂರ್ಯಕುಮಾರ್ ಯಾದವ್, ಬೆಂಗಳೂರು ಬೌಲರ್ ಗಳನ್ನು ಸುಲಭಗಾಗಿ ಎದುರಿಸುತ್ತಿದ್ದರು. ಆದರೆ ಇತ್ತ ತಂಡದ ಬೌಲರ್ ಗಳು ಎದುರಾಳಿ ತಂಡದ ವಿಕೆಟ್ ಪಡೆಯಲು ವಿಫಲರಾಗಿದ್ದು, ಕೊಹ್ಲಿ ಅವರಿಗೆ ಸೂರ್ಯಕುಮಾರ್ ಅವರನ್ನು ಪ್ರಚೋದನೆ ಮಾಡುವಂತೆ ಮಾಡಿತ್ತು. 13ನೇ ಓವರಿನ ಅಂತಿಮ ಎಸೆತದ ಚೆಂಡನ್ನು ಎಕ್ಸ್ಟ್ರಾ ಕವರ್ ನತ್ತ ಸೂರ್ಯಕುಮಾರ್ ಯಾದವ್ ಬಾರಿಸಿದ್ದರು. ಈ ಚೆಂಡನ್ನು ಕೊಹ್ಲಿ ತಡೆದಿದ್ದರು. ಓವರ್ ಮುಕ್ತಾಯವಾದ ಕಾರಣ ಸೂರ್ಯಕುಮಾರ್ ಯಾದವ್ ಕ್ರಿಸ್‍ನಲ್ಲೇ ಕೊಹ್ಲಿರನ್ನು ನೋಡುತ್ತಾ ನಿಂತರು. ಕೂಡಲೇ ಚೆಂಡನ್ನು ಪಡೆದ ಕೊಹ್ಲಿ, ಸೂರ್ಯಕುಮಾರ್ ಯಾದವ್ ಬಳಿ ಗರಂ ಆಗಿ ಹೋಗಿ ನಿಂತರು. ಇತ್ತ ಸೂರ್ಯಕುಮಾರ್ ಸಮಯದ ಬಳಿಕ ನಾನ್ ಸ್ಟ್ರೈಕರ್ ಬ್ಯಾಟ್ಸ್ ಮನ್ ಬಳಿಗೆ ತೆರಳಿದ್ದರು. ಯಾದವ್ ಅಲ್ಲಿಂದ ಮುಂದೆ ಸಾಗಿದರೆ ಕೊಹ್ಲಿ ಮಾತ್ರ ಕೆಲ ಸಮಯ ಆತನನ್ನೇ ನೋಡುತ್ತಾ ನಿಂತರು.

    ಇತ್ತ ಪಂದ್ಯದಲ್ಲಿ 43 ಎಸೆತಗಳಲ್ಲಿ ಮೂರು ಸಿಕ್ಸರ್, 10 ಬೌಂಡರಿಗಳೊಂದಿಗೆ ಸೂರ್ಯಕುಮಾರ್ ಯಾದವ್ 79 ರನ್ ಗಳಿಸಿದ್ದಾರೆ. ಟೀಂ ಇಂಡಿಯಾಗೆ ಆಯ್ಕೆಯಾಗದೆ ಹೋದರೂ ಸೂರ್ಯಕುಮಾರ್ ತಮ್ಮದೇ ಶೈಲಿ ಆಯ್ಕೆ ಸಮಿತಿಗೆ ಸಂದೇಶ ರವಾನಿಸಿದ್ದಾರೆ. ಇತ್ತ ಸೂರ್ಯಕುಮಾರ್ ಯಾದವ್ ಅವರ ಬ್ಯಾಟಿಂಗ್ ಬಗ್ಗೆ ಮೆಚ್ಚುಗೆ ಸೂಚಿಸಿರುವ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ, ದೃಢವಾಗಿ, ತಾಳ್ಮೆಯಿಂದ ಇರುವಂತೆ ತಿಳಿಸಿದ್ದಾರೆ.

  • ಊಟ ಆಯ್ತಾ- ಮೈದಾನದಿಂದ್ಲೇ ಮಡದಿಯ ಕಾಳಜಿ ವಹಿಸಿದ ಕೊಹ್ಲಿ ವೀಡಿಯೋ ವೈರಲ್

    ಊಟ ಆಯ್ತಾ- ಮೈದಾನದಿಂದ್ಲೇ ಮಡದಿಯ ಕಾಳಜಿ ವಹಿಸಿದ ಕೊಹ್ಲಿ ವೀಡಿಯೋ ವೈರಲ್

    ಅಬುಧಾಬಿ: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಪತ್ನಿ ಅನುಷ್ಕಾ ಶರ್ಮಾ ನಡುವೆ ಐಪಿಎಲ್ ಪಂದ್ಯವೊಂದರ ಸಂದರ್ಭದಲ್ಲಿ ಸನ್ನೆ ಮಾಡುತ್ತಾ ಕಾಳಜಿ ವಹಿಸಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

    ಕೋವಿಡ್ ಕಾರಣದಿಂದ ಐಪಿಎಲ್ ಪಂದ್ಯಗಳು ಯುಎಇನಲ್ಲಿ ನಡೆಯುತ್ತಿದ್ದು, ಬಯೋ ಸೆಕ್ಯೂರ್ ವಾತಾವರಣದಲ್ಲಿ ಬಿಸಿಸಿಐ ಪಂದ್ಯಗಳನ್ನು ನಡೆಸುತ್ತಿದೆ. ಈ ವೇಳೆ ಕೊಹ್ಲಿ ತಂಡವನ್ನು ಹುರಿದುಂಬಿಸಲು ಅನುಷ್ಕಾ ಶರ್ಮಾ ಭಾನುವಾರ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ನಡೆದ ಪಂದ್ಯದ ಸಂದರ್ಭದಲ್ಲಿ ಕ್ರೀಡಾಂಗಣದಲ್ಲಿ ಹಾಜರಿದ್ದರು. ಇದನ್ನೂ ಓದಿ:ವಿರಾಟ್ ಅಬ್ಬರದ ಆಟಕ್ಕೆ ಅನುಷ್ಕಾ ಫಿದಾ- ಚಪ್ಪಾಳೆ, ಕಿಸ್ ನೀಡಿ ಸಂಭ್ರಮ

    ಈ ಸಂದರ್ಭದಲ್ಲಿ ತಂಡದ ಇತರೇ ಆಟಗಾರರೊಂದಿಗೆ ಕ್ರೀಡಾಂಗಣಕ್ಕೆ ಆಗಮಿಸಿದ ವಿರಾಟ್ ಕೊಹ್ಲಿ, ಪ್ರೇಕ್ಷರಕರ ವಿಶೇಷ ಗ್ಯಾಲರಿಯಲ್ಲಿ ನಿಂತಿದ್ದ ಪತ್ನಿ ಅನುಷ್ಕಾರನ್ನು ನೋಡಿ ಸನ್ನೆಯ ಮೂಲಕವೇ ಊಟ ತಿಂದ ಎಂದು ವಿಚಾರಿಸಿದ್ದಾರೆ. ಸದ್ಯ ದಂಪತಿಯ ಈ ಮುದ್ದಾದ ವಿಡಿಯೋವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ವಿಡಿಯೋದಲ್ಲಿ ವಿ-ನೆಕ್ಲೈನ್ ಹೊಂದಿರುವ ಕೆಂಪು ಉಡುಪಿನಲ್ಲಿ ಕಾಣಿಸಿಕೊಂಡಿರುವ ಅನುಷ್ಕಾ ಪತಿಗೆ ಆಯ್ತು ಎಂದು ಉತ್ತರಿಸಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: ಇಳಿ ಸಂಜೆಯಲಿ ಪತ್ನಿಯ ಜೊತೆ ರೊಮ್ಯಾಂಟಿಕ್ ಮೂಡ್‍ನಲ್ಲಿ ಕೊಹ್ಲಿ

    ಈ ಹಿಂದಿನ ಪಂದ್ಯದ ಸಂದರ್ಭದಲ್ಲೂ ಕ್ರೀಡಾಂಗಣದಲ್ಲಿ ಹಾಜರಿದ್ದ ಅನುಷ್ಕಾ, ಕೊಹ್ಲಿ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಫ್ಲೈಯಿಂಗ್ ಕಿಸ್ ನೀಡಿದ್ದರು. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಂದಹಾಗೆ ಅನುಷ್ಕಾ ಐಪಿಎಲ್ 2020ರ ಆರಂಭದಿಂದಲೂ ಯುಎಇನಲ್ಲಿ ಹಾಜರಿದ್ದಾರೆ. ಗರ್ಭಿಣಿಯಾಗಿರುವ ಕಾರಣ ಕೆಳ ಪಂದ್ಯಗಳ ಸಂದರ್ಭದಲ್ಲಿ ಮಾತ್ರ ವೀಕ್ಷಿಸಲು ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ಜೋಡಿ ತಮಗೆ ಸಿಕ್ಕ ಸಮಯವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ.

     

    View this post on Instagram

     

    Couple Goals ???? Follow ❤️ ????@music__and__masthi ???? ❤️ #Followusformore . . . ????️ For more videos of ???? ????️ #TollyWood #BollyWood #VideoSongs #Musically #Dance #DanceVideos ????️????❤️ @instatrendsoffl #deepthishannu#combination #love #shekarmaster #naveenkumarreddy1#viral#tiktok#telugulovesongs#telugulovefailurewhatsappstatus#telugulovers #telugulovesongs #telugudubssmash #viratkohli #virushka #anushkasharma #iccworldcup2019 DISCLAIMER ‌This photo, video or Audio is not owned by ourselves ‌The copyright credit goes to respective owners ‌This video is not used for illegal sharing or profit Making ‌This video is purely Fan made ‌If any problem Message us on Instagram and the video will be removed ‌No need to report or send strike ‌Credit/Removal:-@music__and__masthi

    A post shared by MUSIC & MASTHI (@music__and__masthi) on

  • ಆಸೀಸ್ ಪ್ರವಾಸದಿಂದ ರೋಹಿತ್ ಔಟ್- ಗೊಂದಲಕ್ಕೀಡು ಮಾಡಿದ ಬಿಸಿಸಿಐ ನಡೆ

    ಆಸೀಸ್ ಪ್ರವಾಸದಿಂದ ರೋಹಿತ್ ಔಟ್- ಗೊಂದಲಕ್ಕೀಡು ಮಾಡಿದ ಬಿಸಿಸಿಐ ನಡೆ

    ಮುಂಬೈ: ಆಸ್ಟ್ರೇಲಿಯಾ ಸರಣಿಗೆ ಸೋಮವಾರ ಬಿಸಿಸಿಐ ಪ್ರಕಟ್ಟಿಸಿದ್ದ ತಂಡದಲ್ಲಿ ಟೀಂ ಇಂಡಿಯಾ ಉಪನಾಯಕ ರೋಹಿತ್ ಶರ್ಮಾ ಅವರಿಗೆ ಅವಕಾಶ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕ್ರಿಕೆಟ್ ಅಭಿಮಾನಿಗಳಲ್ಲಿ ಹಲವು ಅನುಮಾನಗಳು ಮೂಡಿದ್ದು, ರೋಹಿತ್ ಶರ್ಮಾ ಕೈಬಿಡಲು ಕಾರಣವೇನು ಎಂದು ಹಲವರು ಪ್ರಶ್ನೆ ಮಾಡಿದ್ದಾರೆ.

    ಐಪಿಎಲ್ 2020ರ ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ವಿರುದ್ಧದ ಪಂದ್ಯದಲ್ಲಿ ರೋಹಿತ್ ಶರ್ಮಾ ಗಾಯಗೊಂಡಿದ್ದರು. ಆ ಬಳಿಕ ಪಂದ್ಯದಲ್ಲಿಯೂ ರೋಹಿತ್ ಶರ್ಮಾ ಫೀಲ್ಡಿಂಗ್ ನಡೆಸಿರಲಿಲ್ಲ. ಬಳಿಕ ಸೂಪರ್ ಓವರಿನಲ್ಲಿ ಪೋಲಾರ್ಡ್ ಅವರು ಕ್ಯಾಪ್ಟನ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಪಂದ್ಯದಲ್ಲಿ ಮುಂಬೈ ಸೋಲುಂಡಿತ್ತು.

    ಪಂಜಾಬ್ ವಿರುದ್ಧದ ಬಳಿಕ ಮುಂಬೈ ಇಂಡಿಯನ್ಸ್ ತಂಡ ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ತಂಡ ವಿರುದ್ಧ ಆಡಿದ್ದ ಪಂದ್ಯಗಳಲ್ಲಿ ರೋಹಿತ್ ಶರ್ಮಾ ತಂಡದಿಂದ ಹೊರಗುಳಿದಿದ್ದರು. ಸದ್ಯ ಬಿಸಿಸಿಐ ಪ್ರಕಟಿಸಿರುವ ಆಸ್ಟ್ರೇಲಿಯಾ ವಿರುದ್ಧ ಟಿ20, ಏಕದಿನ ಮತ್ತು ಟೆಸ್ಟ್ ಟೂರ್ನಿಗೆ ಪ್ರಕಟಿಸಿರುವ ತಂಡದಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ರೋಹಿತ್ ಶರ್ಮಾ ಗಾಯದ ತೀವ್ರತೆ ಮೇಲೆ ಅಭಿಮಾನಿಗಳಲ್ಲಿ ಸಂದೇಹ ವ್ಯಕ್ತವಾಗಿದೆ.

    ಸದ್ಯ ಈ ಕುರಿತು ಪ್ರಶ್ನೆ ಮಾಡಿರುವ ಟೀಂ ಇಂಡಿಯಾ ದಿಗ್ಗಜ ಆಟಗಾರ, ಐಪಿಎಲ್ ಕ್ರಿಕೆಟ್ ವಿಶ್ಲೇಷಕ ಸುನಿಲ್ ಗವಾಸ್ಕರ್, ಮುಂಬೈ ಇಂಡಿಯನ್ಸ್ ಹಾಗೂ ಟೀಂ ಇಂಡಿಯಾ ಆಯ್ಕೆ ಸಮಿತಿ ರೋಹಿತ್ ಶರ್ಮಾರ ಗಾಯದ ಕುರಿತು ಸ್ಪಷ್ಟನೆ ನೀಡಬೇಕು ಎಂದು ಹೇಳಿದ್ದಾರೆ.

    ರೋಹಿತ್ ಶರ್ಮಾ ಭಾನುವಾರ ಮುಂಬೈ ಇಂಡಿಯನ್ಸ್ ನೆಟ್ಸ್ ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಾ ಕಾಣಿಸಿಕೊಂಡಿದ್ದರು. ಆದರೆ ಅವರ ಯಾವ ತೀವ್ರತೆಯಲ್ಲಿ ಗಾಯವಾಗಿದೆ ಎಂಬುವುದು ನನಗೆ ಅರ್ಥವಾಗುತ್ತಿಲ್ಲ. ಒಂದೊಮ್ಮೆ ಗಾಯಗೊಂಡಿದ್ರು ಪ್ಯಾಡ್ಸ್ ಕಟ್ಟಿಕೊಂಡು ಹೇಗೆ ಅಭ್ಯಾಸ ನಡೆಸಲು ಸಾಧ್ಯ. ಒಂದೊಮ್ಮೆ ಇದನ್ನು ಚಿಕ್ಕಗಾಯ ಎಂದುಕೊಂಡರೆ, ಆಸ್ಟ್ರೇಲಿಯಾ ಟೂರ್ನಿಯಲ್ಲಿ ಟಿ20 ಮತ್ತು ಏಕದಿನ ಮಾದರಿ ಪಂದ್ಯಗಳಲ್ಲಿ ಕೈಬಿಟ್ಟು, ಟೆಸ್ಟ್ ಪಂದ್ಯಗಳಿಗೆ ಆಯ್ಕೆ ಮಾಡಬಹುದಿತ್ತು. ಏಕೆಂದರೆ ಆತ ಚೇತರಿಸಿಕೊಂಡು ಮತ್ತೆ ಫಿಟ್ನೆಸ್ ಪಡೆಯಲು ಒಂದೂವರೆ ತಿಂಗಳ ಸಮಯ ಲಭಿಸುತ್ತಿತ್ತು. ಈಗಲಾದರೂ ಮುಂಬೈ ಇಂಡಿಯನ್ಸ್ ತಂಡ ರೋಹಿತ್ ಶರ್ಮಾಗೆ ಆಗಿರುವ ಗಾಯದ ಬಗ್ಗೆ ಸ್ಪಷ್ಟನೆ ನೀಡಬೇಕಿದೆ ಎಂದು ಗವಾಸ್ಕರ್ ಹೇಳಿದ್ದಾರೆ.

  • ಆರ್‌ಸಿಬಿಗೆ ಕೂಡಿ ಬಾರದ ಗ್ರೀನ್ ಜರ್ಸಿ- ಗೆಲುವಿಗಿಂತ ಸೋಲೇ ಹೆಚ್ಚು

    ಆರ್‌ಸಿಬಿಗೆ ಕೂಡಿ ಬಾರದ ಗ್ರೀನ್ ಜರ್ಸಿ- ಗೆಲುವಿಗಿಂತ ಸೋಲೇ ಹೆಚ್ಚು

    ದುಬೈ: ಐಪಿಎಲ್ 2020ರ ಆವೃತ್ತಿಯ ಸಂಡೇ ಡಬಲ್ ಧಮಾಕ ಪಂದ್ಯದ ಮೊದಲ ಮ್ಯಾಚ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಸೋಲುಂಡಿತ್ತು. ಪಂದ್ಯದಲ್ಲಿ ಹಸಿರು ಬಣ್ಣದ ಜರ್ಸಿಯೊಂದಿಗೆ ಕಣಕ್ಕೆ ಇಳಿದಿದ್ದ ಕೊಹ್ಲಿ ಪಡೆ ಈ ಬಾರಿಯೂ ಕೆಟ್ಟ ಪ್ರದರ್ಶನ ನೀಡಿತ್ತು.

    ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡದ ಇದುವರೆಗೂ 10 ಐಪಿಎಲ್ ಆವೃತ್ತಿಗಳಲ್ಲಿ ಗ್ರೀನ್ ಜರ್ಸಿಯೊಂದಿಗೆ ಕಣಕ್ಕೆ ಇಳಿದಿದ್ದು, ಇದರಲ್ಲಿ ಕೇವಲ 2 ಪಂದ್ಯದಲ್ಲಿ ಮಾತ್ರ ಗೆಲುವು ಪಡೆದಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಲಭ್ಯವಾಗದ ಕಾರಣ 7 ಪಂದ್ಯಗಳಲ್ಲಿ ಸೋಲುಂಡಿದೆ.

    2011 ರಲ್ಲಿ ಮೊದಲ ಬಾರಿಗೆ ಗ್ರೀನ್ ಜರ್ಸಿ ತೊಟಿದ್ದ ಆರ್‌ಸಿಬಿ ತಂಡದ ಆಟಗಾರರು ಅಂದು ಕೊಚ್ಚಿ ಟಸ್ಕರ್ಸ್ ಕೇರಳ ವಿರುದ್ಧ ಗೆಲುವು ಪಡೆದಿದ್ದರು. 2019ರ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗ್ರೀನ್ ಜರ್ಸಿ ತೊಟ್ಟು ಕಣಕ್ಕಿಳಿದಿದ್ದ ಪಂದ್ಯದಲ್ಲೂ ಸೋಲು ಲಭಿಸಿತ್ತು. ಗ್ರೀನ್ ಜರ್ಸಿಯಲ್ಲಿ ಆಡಿದ ಪಂದ್ಯಗಳ ಫಲಿತಾಂಶ ನೋಡುವುದಾದರೆ, 2011 ಗೆಲುವು, 2012 ಸೋಲು, 2013 ಸೋಲು, 2014 ಸೋಲು, 2015 ಫಲಿತಾಂಶವಿಲ್ಲ, 2016 ಗೆಲುವು, 2017 ಸೋಲು, 2018 ಸೋಲು, 2019 ಸೋಲು, 2020ರಲ್ಲಿ ಸೋಲು. ಇದನ್ನೂ ಓದಿ: ಐಪಿಎಲ್ 2020: ಪ್ಲೇ ಆಫ್ಸ್, ಫೈನಲ್ ಶೆಡ್ಯೂಲ್ ಡೇಟ್ ಫಿಕ್ಸ್

    ವಿಶೇಷ ಎಂದರೇ ಆರ್‌ಸಿಬಿ ಹಸಿರು ಜರ್ಸಿಯಲ್ಲಿ ಗೆಲುವು ಪಡೆದಿದ್ದ ಎರಡು ಆವೃತ್ತಿಗಳಲ್ಲಿ, ಅಂದರೇ 2011 ಮತ್ತು 2016ರಲ್ಲಿ ತಂಡ ಫೈನಲ್ ಪ್ರವೇಶ ಮಾಡಿತ್ತು. ಇದಕ್ಕೂ ಮುನ್ನ ಆರ್‌ಸಿಬಿ 2009 ರ ಟೂರ್ನಿಯಲ್ಲಿ ಫೈನಲ್ ಮಾಡಿತ್ತು. ಉಳಿದಂತೆ 2020ರ ಟೂರ್ನಿಯಲ್ಲಿ ಇದುವರೆಗೂ 11 ಪಂದ್ಯಗಳನ್ನು ಆಡಿರುವ ಆರ್‌ಸಿಬಿ 7 ಪಂದ್ಯಗಳಲ್ಲಿ ಗೆಲುವು ಪಡೆದು, 14 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. ಚೆನ್ನೈ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆದಿದ್ದರೇ ಪಟ್ಟಿಯಲ್ಲಿ ನಂ.1ಕ್ಕೇರುವ ಅವಕಾಶವಿತ್ತು. ಇದನ್ನೂ ಓದಿ: ಗ್ರೀನ್ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್‌ಸಿಬಿ- ಏನಿದರ ವಿಶೇಷತೆ?

  • ಐಪಿಎಲ್ 2020: ಪ್ಲೇ ಆಫ್ಸ್, ಫೈನಲ್ ಶೆಡ್ಯೂಲ್ ಡೇಟ್ ಫಿಕ್ಸ್

    ಐಪಿಎಲ್ 2020: ಪ್ಲೇ ಆಫ್ಸ್, ಫೈನಲ್ ಶೆಡ್ಯೂಲ್ ಡೇಟ್ ಫಿಕ್ಸ್

    ಅಬುಧಾಬಿ: ಐಪಿಎಲ್ 2020ರ ಪ್ಲೇ ಆಫ್ಸ್, ಫೈನಲ್ ಪಂದ್ಯಗಳ ವೇಳಾಪಟ್ಟಿಯನ್ನು ಬಿಸಿಸಿಐ ಭಾನುವಾರ ಬಿಡುಗಡೆ ಮಾಡಿದೆ.

    ನವೆಂಬರ್ 5 ರಿಂದ 10ರ ವರೆಗೂ ದುಬೈ ಮತ್ತು ಅಬುಧಾಬಿ ಕ್ರೀಡಾಂಗಣದಲ್ಲಿ ಪಂದ್ಯಗಳು ನಡೆಯಲಿದ್ದು, ಈ ಕುರಿತ ಅಧಿಕೃತ ಮಾಹಿತಿಯನ್ನು ಐಪಿಎಲ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.

    ನ.3 ರಂದು ಐಪಿಎಲ್ ಲೀಗ್ ಹಂತದ ಪಂದ್ಯಗಳು ಮುಕ್ತಾಯವಾಗಲಿದೆ. ಈ ಹಿನ್ನೆಲೆಯಲ್ಲಿ ಪ್ಲೇ ಆಫ್ಸ್, ಫೈನಲ್ ಶೆಡ್ಯೂಲ್ ಬಿಡುಗಡೆಯಾಗಿದ್ದು, ನವೆಂಬರ್ 4ರಂದು ವಿಶ್ರಾಂತಿ ನೀಡಲಾಗಿದೆ. ನ.5 ರಂದು ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದ್ದು, ದುಬೈ ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಎಂದಿನಂತೆ ಅಂಕಪಟ್ಟಿಯಲ್ಲಿ ಮೊದಲ 2 ಸ್ಥಾನಗಳಲ್ಲಿರುವ ತಂಡಗಳು ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಮುಖಾಮುಖಿ ಆಗಲಿದೆ. ಈ ಪಂದ್ಯದಲ್ಲಿ ಗೆದ್ದ ತಂಡದ ಫೈನಲ್‍ಗೆ ತಲುಪಲಿದೆ.

    ನ.6 ರಂದು ಅಬುಧಾಬಿಯಲ್ಲಿ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಅಂಕಪಟ್ಟಿಯಲ್ಲಿ 3 ಮತ್ತು 4ನೇ ಸ್ಥಾನದಲ್ಲಿರುವ ತಂಡಗಳ ನಡುವೆ ಪಂದ್ಯ ನಡೆಯಲಿದೆ. ನ.7 ವಿಶ್ರಾಂತಿಯ ದಿನವಾಗಿದ್ದು, ನ.8 ರಂದು 2ನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ವೇಳೆ ಕ್ವಾಲಿಫೈಯರ್ ಮೊದಲ ಪಂದ್ಯದಲ್ಲಿ ಸೋತ ತಂಡ ಹಾಗೂ ಎಲಿಮೆನೇಟರ್ ಪಂದ್ಯದಲ್ಲಿ ಗೆದ್ದ ಪಂದ್ಯಗಳ ನಡುವೆ ಹಣಾಹಣಿ ನಡೆಯಲಿದ್ದು, ಗೆಲುವು ಪಡೆದ ತಂಡ ಫೈನಲ್ ತಲುಪಲಿದೆ.

    ನ.9 ವಿಶ್ರಾಂತಿಯ ದಿನವಾಗಿದ್ದು, ಐಪಿಎಲ್ 2020ರ ಫೈನಲ್ ಪಂದ್ಯ ದುಬೈನಲ್ಲಿ ನ.10 ರಂದು ನಡೆಯಲಿದೆ. ಕ್ವಾಲಿಫೈಯರ್ 1 ಮತ್ತು 2 ಪಂದ್ಯಗಳಲ್ಲಿ ಗೆಲುವು ಪಡೆದ ತಂಡಗಳು ಕಪ್‍ಗಾಗಿ ಮುಖಾಮುಖಿ ಆಗಲಿದೆ. ಪ್ಲೇ ಆಫ್ಸ್, ಫೈನಲ್ ಪಂದ್ಯ ರಾತ್ರಿ 7.30ರಿಂದ ಆರಂಭವಾಗಲಿದೆ. ಇತ್ತ ಮಹಿಳಾ ಟಿ20 ಚಾಲೆಂಜ್‍ಗೆ ಶಾರ್ಜಾ ವೇದಿಕೆಯನ್ನು ಫಿಕ್ಸ್ ಮಾಡಲಾಗಿದ್ದು, ಆದ್ದರಿಂದ ಇಲ್ಲಿ ಪ್ಲೇ ಆಫ್ಸ್ ಪಂದ್ಯಗಳನ್ನು ನಿರ್ವಹಿಸುತ್ತಿಲ್ಲ. ಈ ಲೀಗ್ ನವೆಂಬರ್ 4 ರಿಂದ 9ರವರೆಗೂ ನಡೆಯಲಿದೆ.

  • ಚೆನ್ನೈ ವಿರುದ್ಧ ಗ್ರೀನ್ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್‌ಸಿಬಿ- ಏನಿದರ ವಿಶೇಷತೆ?

    ಚೆನ್ನೈ ವಿರುದ್ಧ ಗ್ರೀನ್ ಜರ್ಸಿಯಲ್ಲಿ ಕಣಕ್ಕಿಳಿಯಲಿದೆ ಆರ್‌ಸಿಬಿ- ಏನಿದರ ವಿಶೇಷತೆ?

    ಅಬುಧಾಬಿ: ಪ್ರತಿ ಬಾರಿ ಐಪಿಎಲ್ ಟೂರ್ನಿಯಲ್ಲಿ ವಿಶೇಷ ಬಣ್ಣದ ಜರ್ಸಿಯೊಂದಿಗೆ ಕಣಕ್ಕಿಳಿಯುವ ಬೆಂಗಳೂರು ರಾಯಲ್ಸ್ ಚಾಲೆಂಜರ್ಸ್ ತಂಡ ಈ ಬಾರಿ ಹಸಿರು ಬಣ್ಣದ ಜರ್ಸಿಯೊಂದಿಗೆ ಚೆನ್ನೈ ವಿರುದ್ಧ ಆಡಲಿದೆ.

    ಭಾನುವಾರ ನಡೆಯಲಿರುವ ಪಂದ್ಯದಲ್ಲಿ ಬೆಂಗಳೂರು ತಂಡದ ಆಟಗಾರರು ಹಸಿರು ಬಣ್ಣದ ಜರ್ಸಿ ಧರಿಸಲಿದ್ದಾರೆ. ಈ ಕುರಿತ ಮಾಹಿತಿಯನ್ನು ಹಂಚಿಕೊಂಡಿರುವ ಆರ್ ಸಿಬಿ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ವಿಡಿಯೋವೊಂದರನ್ನು ಪೋಸ್ಟ್ ಮಾಡಿದೆ.

    ವಿಶ್ವದಲ್ಲಿ ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯದ ಕುರಿತು ಜಾಗೃತಿ ಮೂಡಿಸಲು ಬೆಂಗಳೂರು ತಂಡದ ಹಸಿರು ಬಣ್ಣದ ಜರ್ಸಿ ಧರಿಸುತ್ತಿದೆ. ವಿಡಿಯೋದಲ್ಲಿ ಈ ಕುರಿತು ಮನವಿ ಮಾಡಿರುವ ಆರ್ ಸಿಬಿ ಆಟಗಾರರು, ಪರಿಸರವನ್ನು ರಕ್ಷಣೆ ಮಾಡಲು ಪ್ರತಿಯೊಬ್ಬರು ತಮ್ಮ ಕೈಲಾದ ಕಾರ್ಯವನ್ನು ಮಾಡಬೇಕಿದೆ. ಮುಖ್ಯವಾಗಿ ಪ್ಲಾಸ್ಟಿಕ್ ವ್ಯರ್ಥಗಳನ್ನು ಮರುಬಳಕೆ ಮಾಡಿ. ಮಕ್ಕಳಿಗೂ ಪರಿಸರ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ ಎಂದು ಎಬಿ ಡಿವಿಲಿಯರ್ಸ್ ಮನವಿ ಮಾಡಿದ್ದಾರೆ.

    ಚಿಕ್ಕ ಚಿಕ್ಕ ಕೆಲಸಗಳನ್ನು ತಪ್ಪದೇ ಮಾಡುವುದರಿಂದ ಪರಿಸರವನ್ನು ನಾವು ಕಾಪಾಡಬಹುದಾಗಿದೆ. ಭೂಮಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವುದರೊಂದಿಗೆ, ಮರಗಳನ್ನು ಬೆಳಸಿ ಹಸಿರು ವಾತಾವರಣವನ್ನು ನಿರ್ಮಾಣ ಮಾಡಬೇಕಿದೆ ಎಂದು ಫಿಂಚ್, ಡೇಲ್ ಸ್ಟೇಯ್ನ್ ಕರೆ ನೀಡಿದ್ದಾರೆ.

    2011 ರಿಂದಲೂ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಗೋ ಗ್ರೀನ್ ಕಾರ್ಯಕ್ರಮವನ್ನು ನಡೆಸಿಕೊಳ್ಳುತ್ತಾ ಬರುತ್ತಿದೆ. ಪರಿಸರವನ್ನು ಕಾಪಾಡಿಕೊಂಡರೇ ಮಾತ್ರ ಎಲ್ಲರೂ ಉತ್ತಮ ಆರೋಗ್ಯಕಾರ ಜೀವನ ನಡೆಸುತ್ತೇವೆ. ಪ್ರತಿಯೊಬ್ಬರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿದೆ ಎಂದು ನಾಯಕ ವಿರಾಟ್ ಕೊಹ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಐಪಿಎಲ್‍ನಿಂದ ಧೋನಿ ನಿವೃತ್ತಿ?- ಮುನ್ಸೂಚನೆಗಳಿವೆ ಎಂದ ಫ್ಯಾನ್ಸ್