Tag: ಏಸು ಪ್ರತಿಮೆ

  • ಬೆಟ್ಟದ ಮೇಲಿನ ಏಸು ಪ್ರತಿಮೆ ತೆರವು- ಬಿಕ್ಕಿ ಬಿಕ್ಕಿ ಅತ್ತ ಗ್ರಾಮಸ್ಥರು

    ಬೆಟ್ಟದ ಮೇಲಿನ ಏಸು ಪ್ರತಿಮೆ ತೆರವು- ಬಿಕ್ಕಿ ಬಿಕ್ಕಿ ಅತ್ತ ಗ್ರಾಮಸ್ಥರು

    ಚಿಕ್ಕಬಳ್ಳಾಪುರ: ಕನಕಪುರದ ಕಪಾಲ ಬೆಟ್ಟದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಸಾಗರಹಳ್ಳಿ ಬಳಿಯ ಬೆಟ್ಟದಲ್ಲಿ ತಲೆ ಎತ್ತಿದ್ದ ಏಸು ಪ್ರತಿಮೆ ದೊಡ್ಡ ವಿವಾದವನ್ನೇ ಸೃಷ್ಟಿ ಮಾಡಿತ್ತು.

    ಅಕ್ರಮವಾಗಿ ಬೆಟ್ಟದಲ್ಲಿ ನಿರ್ಮಾಣವಾಗಿದ್ದ ಏಸು ಪ್ರತಿಮೆ ಮೇಲೆ ಹಿಂದೂಪರ ಸಂಘಟನೆಗಳ ಕಣ್ಣು ಬಿದ್ದು ಹೋರಾಟಕ್ಕಿಳಿದಿದ್ರು. ಹೀಗಾಗಿ ಎಚ್ಚೆತ್ತ ತಹಶೀಲ್ದಾರ್ ಅಜಿತ್ ರೈ ಇಂದು ಏಸು ಪ್ರತಿಮೆ ತೆರವು ಮಾಡಿದ್ರು. ಆದರೆ ಗ್ರಾಮಸ್ಥರು ಮಾತ್ರ ಏಸು ಪ್ರತಿಮೆ ತೆರವು ಮಾಡಿದ್ದಕ್ಕೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಹೌದು. ಬೆಟ್ಟದ ಮೇಲೆ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಗ್ರಾಮದ ಕೈಸ್ಥ ಧರ್ಮ ಬೆಂಬಲಿತರು ಬೆಟ್ಟಕ್ಕೆ ಮಹಿಮಾ ಬೆಟ್ಟ ಅಂತ ಹೆಸರಿಟ್ಟು, ಬೆಟ್ಟದ ಮೇಲೆ ಅಕ್ರಮವಾಗಿ ಏಸು ಪ್ರತಿಮೆ, ಶಿಲುಬೆ ಹಾದಿ ನಿರ್ಮಾಣ ಮಾಡಿ ಪ್ರಾರ್ಥನೆ ಮಾಡಿಕೊಂಡು ಬರುತ್ತಿದ್ದರು. ಈ ವಿಚಾರ ಹಿಂದೂಪರ ಸಂಘಟನೆಗಳ ಕಣ್ಣಿಗೆ ಬಿದ್ದು ಕನಕಪುರ ಕಪಾಲ ಬೆಟ್ಟದಂತೆ ದೊಡ್ಡ ವಿವಾದದ ಸ್ವರೂಪ ಪಡೆದುಕೊಳ್ಳುತ್ತಿತ್ತು. ಹೀಗಾಗಿ ಎಚ್ಚೆತ್ತ ದೇವನಹಳ್ಳಿ ತಹಶೀಲ್ದಾರ್ ಇಂದು ಏಸು ಪ್ರತಿಮೆ ತೆರವು ಕಾರ್ಯ ನಡೆಸಿದರು.

    ದೊಡ್ಡಬಳ್ಳಾಪುರ ಡಿವೈಎಸ್‍ಪಿ ರಂಗಪ್ಪ ನೇತೃತ್ವದಲ್ಲಿ ನೂರಾರು ಮಂದಿ ಪೊಲೀಸರು, ಕ್ರೇನ್ ಹಾಗೂ ಟಿಪ್ಪರ್‍ಗಳ ಮೂಲಕ ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ಎಂಟ್ರಿ ಕೊಟ್ಟ ತಹಶೀಲ್ದಾರ್ ಬಿಗಿ ಪೊಲೀಸ್ ಬಂದೋಬಸ್ತ್ ನಲ್ಲಿ ಬೆಟ್ಟದ ಮೇಲಿನ ಏಸು ಪ್ರತಿಮೆ ತೆರವು ಮಾಡಿದರು.

    ತೆರವು ಮಾಡಿದ ಏಸು ಪ್ರತಿಮೆಯನ್ನ ಟಿಪ್ಪರ್ ಮೂಲಕ ಗ್ರಾಮದಲ್ಲಿನ ಚರ್ಚ್‍ಗೆ ಸ್ಥಳಾಂತರಿಸಲಾಯಿತು. ಆದರೆ ಈ ವೇಳೆ ಬೆಳಗ್ಗೆಯಿಂದಲೂ ಊಟ ತಿಂಡಿ ಬಿಟ್ಟು ಚರ್ಚ್ ಬಳಿ ಮೊಕ್ಕಾಂ ಹೂಡಿದ್ದ ಕೈಸ್ತ ಧರ್ಮೀಯ ಗ್ರಾಮಸ್ಥರು, ಪ್ರತಿಮೆ ಆಗಮಿಸುತ್ತಿದ್ದಂತೆ ಕೈಯಲ್ಲಿ ಮೊಂಬತ್ತಿ ಹಿಡಿದು ಕಣ್ಣಿರು ಸುರಿಸಿ ಗೋಳಾಡಿದರು. ಕನಿಷ್ಠ ಗುಡ್ ಪ್ರೈಡೇ ಹಬ್ಬದವರೆಗೂ ಏಸು ಪ್ರತಿಮೆ ತೆರವು ಮಾಡದಂತೆ ಮನವಿ ಮಾಡಿದ್ರೂ ಅಧಿಕಾರಿಗಳು ಸ್ಪಂದಿಸಲಿಲ್ಲ ಅಂತ ತಮ್ಮ ಅಸಮಾಧಾನ ಹೊರಹಾಕಿದ್ರು.

    ಕನಕಪುರ ಕಪಾಲಿ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣದ ವಿವಾದಂತೆ ಈ ಮಹಿಮಾ ಬೆಟ್ಟದ ಏಸು ಪ್ರತಿಮೆಯೂ ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಹೀಗಾಗಿ ಎಚ್ಚೆತ್ತ ತಾಲೂಕು ಆಡಳಿತ ವಿವಾದ ತೀವ್ರ ಸ್ವರೂಪ ಪಡೆಯುವ ಮುನ್ನವೇ ಏಸು ಪ್ರತಿಮೆ ತೆರವು ಮಾಡಿದೆ. ಇದು ಸ್ಥಳೀಯ ಗ್ರಾಮಸ್ಥರ ಕಣ್ಣೀರಿಗೂ ಕಾರಣವಾಗಿದೆ.

  • ಕಪಾಲ ಬೆಟ್ಟದಂತೆ ದೇವನಹಳ್ಳಿಯ ದೊಡ್ಡಗುಟ್ಟದಲ್ಲೂ ಏಸು ಪ್ರತಿಮೆ ನಿರ್ಮಾಣ

    ಕಪಾಲ ಬೆಟ್ಟದಂತೆ ದೇವನಹಳ್ಳಿಯ ದೊಡ್ಡಗುಟ್ಟದಲ್ಲೂ ಏಸು ಪ್ರತಿಮೆ ನಿರ್ಮಾಣ

    – ದೊಡ್ಡಗುಟ್ಟಕ್ಕೆ ಮಹಿಮಾ ಬೆಟ್ಟವೆಂದು ನಾಮಕರಣ

    ಚಿಕ್ಕಬಳ್ಳಾಪುರ: ರಾಮನಗರದಲ್ಲಿನ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದದ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ದೊಡ್ಡಗುಟ್ಟ ಬೆಟ್ಟದಲ್ಲೂ ಏಸು ಪ್ರತಿಮೆ ನಿರ್ಮಾಣವಾಗಿದ್ದು ಭಾರೀ ಚರ್ಚೆಗೆ ಕಾರಣವಾಗಿದೆ.

    ದೊಡ್ಡಸಾಗರಹಳ್ಳಿ ಗ್ರಾಮದ ಬಳಿ ಇರುವ ದೊಡ್ಡಗುಟ್ಟ ಬೆಟ್ಟ ಕಪಾಲ ಬೆಟ್ಟದಂತೆ ವಿವಾದಕ್ಕೆ ಕಾರಣವಾಗುತ್ತಿದೆ. 180 ಮನೆಗಳಿರುವ ಪುಟ್ಟ ಗ್ರಾಮ ದೊಡ್ಡಸಾಗರಹಳ್ಳಿಗೆ ಹೊಂದಿಕೊಂಡಿರುವ ದೊಡ್ಡಗುಟ್ಟ ಬೆಟ್ಟದಲ್ಲಿ ಅಕ್ರಮವಾಗಿ ಏಸು ಪ್ರತಿಮೆ ಹಾಗೂ ಶಿಲುಬೆಗಳನ್ನ ನಿರ್ಮಾಣ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದು ಹಿಂದೂ ಪರ ಸಂಘಟನೆಗಳ ಕಂಗಣ್ಣಿಗೆ ಕಾರಣವಾಗಿದ್ದು, ಹಿಂದೂ ಪರ ಸಂಘಟನೆಯೊಂದು ದೇವನಹಳ್ಳಿ ತಹಶೀಲ್ದಾರ್ ಗೆ ದೂರು ನೀಡಿದ್ದಾರೆ.

    ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಏಸು ಪ್ರತಿಮೆ ಹಾಗೂ ಶಿಲುಬೆಗಳನ್ನ ನಿರ್ಮಾಣ ಮಾಡಿರುವುದಲ್ಲದೇ ಗ್ರಾಮಸ್ಥರನ್ನ ಮತಾಂತರ ಮಾಡಿರುವುದಾಗಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ದೊಡ್ಡಗುಟ್ಟ ಬೆಟ್ಟಕ್ಕೆ ಮಹಿಮಾ ಬೆಟ್ಟ ಅಂತ ಹೆಸರು ಬದಲಿಸಲಾಗಿದೆ. ಈ ಹಿಂದೆ ಈ ಬೆಟ್ಟದಲ್ಲಿ ಲಕ್ಷ್ಮೀನರಸಿಂಹ ಸ್ವಾಮಿ ಹಾಗೂ ವಿನಾಯಕನ ದೇವಾಲಯಗಳಿತ್ತು, ಸದ್ಯ ಅವುಗಳ ಕುರುಹುಗಳು ಸಿಗದ ಹಾಗೆ ನಾಶಪಡಿಸಿ ಏಸುಪ್ರತಿಮೆ ನಿರ್ಮಾಣ ಮಾಡಿದ್ದಾರೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ.

    ಈ ಏಸು ಪ್ರತಿಮೆ, ಶಿಲುಬೆಗಳಿಂದ ದೊಡ್ಡಗುಟ್ಟ ಬೆಟ್ಟ ಕಪಾಲ ಬೆಟ್ಟದಂತೆ ವಿವಾದಕ್ಕೆ ಕಾರಣವಾಗುತ್ತಿದೆ. ಈ ಬಗ್ಗೆ ದೊಡ್ಡಬಳ್ಳಾಪುರ ನಗರದ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಹಿಂದೂ ಪರ ಸಂಘಟನೆಗಳ ಮುಖಂಡರು, ದೊಡ್ಡ ಸಾಗರ ಗ್ರಾಮದ ಸರ್ವೆ ನಂಬರ್ 158ರಲ್ಲಿ ಸರ್ಕಾರಿ ಜಾಗದ ಗುಡ್ಡದಲ್ಲಿ ಶಿಲುಬೆ ಹಾಕಿ ಏಸು ಪ್ರತಿಮೆ ನಿರ್ಮಾಣ ಮಾಡಲಾಗಿದೆ. ಸರ್ಕಾರಿ ಜಾಗದ ಗುಡ್ಡಗಳಲ್ಲಿ ಕರ್ನಾಟಕದಲ್ಲಿ ಏಸು ಶಿಲುಬೆ ಹಾಗೂ ಏಸು ಪ್ರತಿಮಗಳನ್ನ ನಿರ್ಮಾಣ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಕೇವಲ ಶಿಲುಬೆ, ಪ್ರತಿಮೆ ನಿರ್ಮಾಣ ಮಾಡುವುದಲ್ಲದೇ ಸುತ್ತಮುತ್ತಲ ಗ್ರಾಮಸ್ಥರನ್ನ ಮತಾಂತರ ಮಾಡುವ ಮೂಲಕ ಸರ್ಕಾರಿ ಜಾಗಗಳನ್ನ ಕಬಳಿಸುವ ಹುನ್ನಾರ ನಡೆಸಲಾಗ್ತಿದೆ. ಇಂತಹ ಕೆಲಸಗಳಿಂದ ಕೋಮು ಸೌಹಾರ್ದ ಕೆಡಿಸುವ ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಏಸು ಪ್ರತಿಮೆ ನಿರ್ಮಾಣ ಮಾಡಿರುವವರ ಸ್ವಯಂಪ್ರೇರಣೆಯಿಂದ ಪ್ರತಿಮೆ ಹಾಗೂ ಶಿಲುಬೆಯನ್ನ ತೆರವುಗೊಳಿಸಬೇಕು. ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

    ದೊಡ್ಡಗುಟ್ಟ ಬೆಟ್ಟದ ಮೇಲಿನ ಏಸು ಪ್ರತಿಮೆ ಹಾಗೂ ಶಿಲುಬೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ತಹಶೀಲ್ದಾರ್ ಅಜಿತ್ ರೈ ಗ್ರಾಮಕ್ಕೆ ಹೋಗಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂದ ಪಬ್ಲಿಕ್ ಟಿವಿಗೆ ಫೋನ್ ಮೂಲಕ ಪ್ರತಿಕ್ರಿಯಿಸಿದ ತಹಶೀಲ್ದಾರ್, ಸರಿ ಸುಮಾರು 40 ಎಕ್ರೆ ಬೆಟ್ಟದ ಪ್ರದೇಶವಿದ್ದು, ಇದು ಸರ್ಕಾರಿ ಜಾಗವಾಗಿದೆ. ಗ್ರಾಮಸ್ಥರು ಸ್ಮಶಾನಕ್ಕೆ ಈ ಜಾಗದಲ್ಲಿ ಮಂಜೂರು ಮಾಡುವಂತೆ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲಿ ಯಾರಿಗೂ ಏಸು ಪ್ರತಿಮೆ ನಿರ್ಮಾಣ ಮಾಡಲು ಜಾಗ ಕೊಟ್ಟಿಲ್ಲ. ಹೀಗಾಗಿ ಗುರುವಾರ ಗ್ರಾಮಸ್ಥರ ಜೊತೆ ಸಭೆ ನಡೆಸಿ, ಈ ವಿಚಾರವನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

  • ಏಸು ಪ್ರತಿಮೆ ನಿರ್ಮಾಣ ವಿವಾದ – ಸರ್ಕಾರಕ್ಕೂ ಮುನ್ನ ಕ್ರೈಸ್ತ ಮುಖಂಡರ ಸತ್ಯ ಶೋಧನ ವರದಿ ಬಿಡುಗಡೆ

    ಏಸು ಪ್ರತಿಮೆ ನಿರ್ಮಾಣ ವಿವಾದ – ಸರ್ಕಾರಕ್ಕೂ ಮುನ್ನ ಕ್ರೈಸ್ತ ಮುಖಂಡರ ಸತ್ಯ ಶೋಧನ ವರದಿ ಬಿಡುಗಡೆ

    ಬೆಂಗಳೂರು: ಸದ್ಯಕ್ಕೆ ತಣ್ಣಗಾಗಿದ್ದ ಕನಕಪುರದ ಕಪಾಲ ಬೆಟ್ಟದಲ್ಲಿ ಉದ್ದೇಶಿತ ಏಸು ಪ್ರತಿಮೆ ನಿರ್ಮಾಣ ವಿವಾದಕ್ಕೆ ಮತ್ತೆ ಜೀವ ಬಂದಿದೆ. ಏಸು ಪ್ರತಿಮೆ ನಿರ್ಮಾಣ ಸಂಬಂಧ ವಿವಾದಿತ ಗೋಮಾಳ ಭೂಮಿ ವಾಪಸ್ ಬಗ್ಗೆ ನಿರ್ಧರಿಸಲು ಸರ್ಕಾರ ಈಗಾಗಲೇ ರಾಮನಗರ ಜಿಲ್ಲಾಡಳಿತದಿಂದ ವರದಿ ಕೇಳಿರೋದು ಹಳೆಯ ಸುದ್ದಿ. ಆದರೆ ರಾಮನಗರ ಜಿಲ್ಲಾಡಳಿತವು ಪ್ರಕರಣ ಸಂಬಂಧ ವರದಿ ಸಿದ್ಧಪಡಿಸಿದ್ದ ಬಹಳ ದಿನಗಳಾಗಿದ್ದರೂ ಆ ವರದಿಯನ್ನು ಬಿಡುಗಡೆ ಮಾಡಲು ಸರ್ಕಾರ ಸೂಕ್ತ ಸಮಯಕ್ಕಾಗಿ ಕಾಯುತ್ತಿದೆ ಎನ್ನಲಾಗಿದೆ. ಈ ಮಧ್ಯೆ ಸರ್ಕಾರದ ವರದಿಗೂ ಮುನ್ನವೇ ಕ್ರೈಸ್ತ ಮುಖಂಡರ ಸತ್ಯಶೋಧನಾ ಸಮಿತಿಯೊಂದು ವಿವಾದ ಸಂಬಂಧ ವರದಿ ಸಿದ್ಧಪಡಿಸಿ ಇವತ್ತು ಬಿಡುಗಡೆಗೊಳಿಸಿದೆ. ಆ ಮೂಲಕ ಸಮಿತಿಯು ಸರ್ಕಾರಕ್ಕೆ ಸೆಡ್ಡು ಹೊಡೆದಿದೆ.

    ಮಕ್ಕಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷ ಮರಿಸ್ವಾಮಿ ಅಧ್ಯಕ್ಷತೆಯ ಈ ಸತ್ಯ ಶೋಧನಾ ಸಮಿತಿಯಲ್ಲಿ ಐದು ಮಂದಿ ಕ್ರೈಸ್ತ ಸದಸ್ಯರಿದ್ದರು. ವರದಿ ಬಂದ ಬಳಿಕವೂ ವಿಧಾನಪರಿಷತ್ ಸದಸ್ಯ ಐವಾನ್ ಡಿಜೋಜಾ ನೇತೃತ್ವದ ನಿಯೋಗವು ನಿನ್ನೆ ಕಪಾಲ ಬೆಟ್ಟಕ್ಕೆ ಭೇಟಿ ಕೊಟ್ಟು ವರದಿಯ ಸತ್ಯಾಂಶಗಳನ್ನು ಪರಿಶೀಲಿಸಿತು. ಇಂದು ಐವಾನ್ ಡಿಸೋಜಾ ಅವರು ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಈ ವರದಿಯನ್ನು ಬಿಡುಗಡೆಗೊಳಿಸಿದರು. ಈ ವೇಳೆ ಮಾತಾಡಿದ ಐವಾನ್ ಡಿಸೋಜಾ, ಈ ವರದಿಯ ಪ್ರಕಾರ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಸರ್ಕಾರ 2018 ರಲ್ಲಿ 10 ಎಕರೆ ಭೂಮಿ ಮಂಜೂರು ಮಾಡಿತ್ತು. ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗಾಗಿ ಅಂತಲೇ ಸ್ಪಷ್ಟವಾಗಿ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಹಾಗಾಗಿ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಸರ್ಕಾರ ವಿರೋಧಿಸದಂತೆ ಮನವಿ ಮಾಡಿಕೊಂಡರು.

    ರಾಜಕೀಯ ದುರುದ್ದೇಶಕ್ಕಾಗಿ ಪ್ರಕರಣಕ್ಕೆ ವಿವಾದ ಬಣ್ಣ ಬಳಿಯಲಾಗಿದೆ. ವಿಷಬೀಜ ಬಿತ್ತುವ ಪ್ರಯತ್ನಗಳು ನಡೆದಿವೆ. ಗೋಮಾಳ ಭೂಮಿಯನ್ನು ಹಿಂದೂ, ಮುಸ್ಲಿಂ, ಕ್ರೈಸ್ತ ಇತರೇ ಸಮುದಾಯಗಳಿಗೆ ಸರ್ಕಾರ ಮೊದಲಿಂದಲೂ ಮಂಜೂರು ಮಾಡುತ್ತಾ ಬಂದಿದೆ. ಹಾಗೆಯೇ ಕಪಾಲ ಬೆಟ್ಟದಲ್ಲಿ ಕ್ರೈಸ್ತರಿಗೂ ಭೂಮಿ ಮಂಜೂರು ಮಾಡಲಾಗಿದೆ. ಹಾಗಾಗಿ ಸರ್ಕಾರ ಏಸುಪ್ರತಿಮೆ ನಿರ್ಮಿಸಲು ಅವಕಾಶ ಕೊಡಬೇಕೆಂದು ಐವಾನ್ ಡಿಸೋಜಾ ಮನವಿ ಮಾಡಿಕೊಂಡರು. ಇದೇ ವೇಳೆ ಸಕಾಧರದ ಆದೇಶ ಪ್ರತಿಯನ್ನೂ ಬಿಡುಗಡೆಗೊಳಿಸಲಾಯ್ತು.

    ಕ್ರೈಸ್ತ ಮುಖಂಡರ ಸತ್ಯ ಶೋಧನಾ ಸಮಿತಿ ವರದಿಯ ಪ್ರಮುಖ ಅಂಶಗಳು ಹೀಗಿವೆ :

    1. ಹಾರೋಬೆಲೆಯಲ್ಲಿ 1662ರಿಂದಲೂ ಕ್ರೈಸ್ತರ ವಾಸ ಇದೆ.
    2. 26/02/2018 ರಂದು ರಾಜ್ಯ ಸರ್ಕಾರವು ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಸರ್ವೆ ನಂ.283 ರಲ್ಲಿ 10 ಎಜತೆ ಗೋಮಾಳ ಜಾಗ ಮಂಜೂರು.
    3. ಕಾನೂನಾತ್ಮಕವಾಗಿ ಜಮೀನು ಮಂಜೂರು. ಪಹಣಿ ಮತ್ತು ಮ್ಯೂಟೇಷನ್ ದಾಖಲೆಗಳಲ್ಲೂ ನಮೂದು.
    4. ಆದೇಶ ಪ್ರತಿಯಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳಿಗೆ ಅಂತ ಸ್ಪಷ್ಟವಾಗಿ ಉಲ್ಲೇಖ.

    5. ಹಾರೋಬೆಲೆ ಮತ್ತು ಸುತ್ತಮುತ್ತಲ ಗ್ರಾಮಗಳ ಜನರಿಗೆ ಕುಡಿಯಲು ರಾಮನಗರ ಜಿ.ಪಂ.ಯಿಂದ ಬೋರ್ ವೆಲ್ ಹಾಕಿಸಿಕೊಡಲಾಗಿದೆ. ಪ್ರತಿಮೆಗಾಗಿ ಹಾಕಿಸಿದ ಬೋರ್ ವೆಲ್ ಅಲ್ಲ.
    6. ಏಸುಪ್ರತಿಮೆ ನಿರ್ಮಾಣಕ್ಕೆ ಬಂದಿರುವ ಕಾರ್ಮಿಕರಿಗಾಗಿ ಕ್ರಮಬದ್ಧವಾಗಿ, ಶುಲ್ಕ ಪಾವತಿಸಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ವಿದ್ಯುತ್ ಸಂಪರ್ಕ ಅನಧಿಕೃತ ಅನ್ನುವ ಆರೋಪ ಸುಳ್ಳು.
    7. ಬೆಟ್ಟದ ಮೇಲೆ ಬೃಹತ್ ವಾಟರ್ ಟ್ಯಾಂಕ್ ಕಟ್ಟಲಾಗಿದೆ. ಆ ಟ್ಯಾಂಕ್ ನಿರ್ಮಾಣಕ್ಕೆ ಅಗತ್ಯ ಪರಿಕರ, ಸಾಮಾಗ್ರಿ ತೆಗೆದುಕೊಂಡು ಹೋಗಲು ಅದರ ಗುತ್ತಿಗೆದಾರ ರಸ್ತೆ ನಿರ್ಮಿಸಿದ್ದಾನೆ. ಅದು ಏಸುಪ್ರತಿಮೆಗಾಗಿ ನಿರ್ಮಿಸಿದ ರಸ್ತೆ ಅಲ್ಲ.

  • ಬಂದಿದ್ದೀರಿ, ಬೊಗಳಿದ್ದೀರಿ, ಹೋಗಿದ್ದೀರಿ – ಬೊಗಳೋ ನಾಯಿ ಕಚ್ಚಲ್ಲ: ಕಲ್ಲಡ್ಕಗೆ ಡಿಕೆಸು ಸವಾಲು

    ಬಂದಿದ್ದೀರಿ, ಬೊಗಳಿದ್ದೀರಿ, ಹೋಗಿದ್ದೀರಿ – ಬೊಗಳೋ ನಾಯಿ ಕಚ್ಚಲ್ಲ: ಕಲ್ಲಡ್ಕಗೆ ಡಿಕೆಸು ಸವಾಲು

    – ಕನಕಪುರದಲ್ಲಿ ಮತಾಂತರ ಆಗಿದ್ರೆ ರಾಜೀನಾಮೆ ಕೊಡ್ತೇನೆ
    – ಫಾದರ್ ಮುಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಾಗ ಜಾತಿ, ಧರ್ಮ ಇರಲಿಲ್ಲ

    ರಾಮನಗರ: ಭಾರತದ ಇತಿಹಾಸ, ಸಂಸ್ಕೃತಿಯ ಬಗ್ಗೆ ಹೇಳುವಂತಹವರು. ಆದರೆ ಇವರ ಮಕ್ಕಳು ಟ್ರಂಪ್ ಹತ್ತಿರ ಹೋಗಿ ಕೈ ಒಡ್ಡಿಕೊಂಡು ಅಮೆರಿಕಾದಲ್ಲಿ ಕೆಲಸ ಮಾಡ್ತಾರೆ. ಇವರಿಗೆ ಹಾರ್ಟ್ ಅಟ್ಯಾಕ್ ಆಗಿದ್ದ ವೇಳೆ ಫಾದರ್ ಮುಲ್ಲಾ ಆಸ್ಪತ್ರೆಗೆ ದಾಖಲಾಗಿ ಆಪರೇಷನ್‍ಗೆ ಒಳಗಾಗಿದ್ದ ವೇಳೆ ಜಾತಿಯಿರಲಿಲ್ಲ, ಧರ್ಮ ಬರೋದಿಲ್ಲ. ಅವನ್ಯಾರೋ ಬಾಯಿಗೆ ಬಂದಂಗೆ ಮಾತನಾಡ್ತಾನೆ. ಹಿರಿಯರು ಅಂತಾ ಕಲ್ಲಡ್ಕ ಪ್ರಭಾಕರ್ ಭಟ್ ಬಗ್ಗೆ ಗೌರವವಿದೆ ಎಂದು ಸಂಸದ ಡಿಕೆ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

    ವಯಸ್ಸಾದ ಮೇಲೆ ಅರಳೋ ಮರಳೋ ಅಂತಾ ನಮ್ಮ ಹಳ್ಳಿಯಲ್ಲಿ ಅಂತಾರೆ. ಹಾಗೇ ಅರಳೋ ಮರಳೋ ಕಾಲದಲ್ಲಿ ಎಲ್ಲಿರಬೇಕು ಅಂದ್ರೆ ತಲೆ ಕೆಟ್ಟಿರೋರ್ ಜಾಗದಲ್ಲಿರಬೇಕು. ಅವರ ಹೆಸರೇ ತಲೆ ಕೆಟ್ಟಿರೋರು. ಇಂತಹವರೆಲ್ಲ ಬಂದು ಕನಕಪುರದಲ್ಲಿ ಭಾಷಣ ಮಾಡಿಬಿಟ್ಟು ಹೋಗೋದು. ಕ್ರಿಶ್ಚಿಯನ್ ದೇಶದಲ್ಲಿ ಹೋಗಿ ಇವರ ಮಕ್ಕಳು ಕೈ ಒಡ್ಡುವುದು ಎಂದು ಆರ್‍ಎಸ್‍ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಡಿಕೆ ಸುರೇಶ್ ಕಿಡಿಕಾರಿದ್ದಾರೆ.

    ಇವರು ಚಿಲ್ಲರೇ ರಾಜಕೀಯ, ನೀಚ ಹೊಲಸಿನ ಭಾಷೆಯಲ್ಲಿ ಮಾತನಾಡುವ ಸಂಸ್ಕೃತಿ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಕೆಂಪು ಬಟ್ಟೆ ಹಾಕಿಕೊಂಡ್ರೆ ಮಾತ್ರ ಹಿಂದೂಗಳು, ಇಲ್ಲ ಅಂದ್ರೆ ಬೇರೆಯವರು ಹಿಂದೂಗಳು ಅಲ್ಲವಾ? ಬಿಜೆಪಿ ಜೊತೆಗಿದ್ದರೆ ಮಾತ್ರ ಹಿಂದುಗಳಾ? ಕೇಸರಿ ಟವಲ್ ಹಾಕಿಕೊಂಡ್ರೆ ಮಾತ್ರ ಹಿಂದುಗಳಾ ಎಂದು ಪ್ರಶ್ನಿಸಿದ್ರು. ರಾಜಕೀಯ ಕಾರಣಕ್ಕಾಗಿ ಕನಕಪುರದಲ್ಲಿ ಬೆಂಕಿ ಹಚ್ಚಬೇಕು. ರಾಮನಗರ ಜಿಲ್ಲೆಯಲ್ಲಿ ಏನೋ ಸಾಧನೆ ಮಾಡಬೇಕು ಅಂತೇಳಿ. ನಾನು ಒಬ್ಬ ಗೆದ್ದಿದ್ದೇನೆ ಅಂತಾ ನನ್ನ ಹೆಸರನ್ನ ಹೇಳ್ತೀರಿ ಎಂದು ಕಿಡಿಕಾರಿದರು.

    ಮತಾಂತರ ಮಾಡಿದ್ದರೆ ರಾಜಕೀಯ ಸನ್ಯಾಸ ತೆಗೆದುಕೊಳ್ಳಲು ಸಿದ್ಧನಿದ್ದೇನೆ. ನಾನು ಮತ್ತು ನಮ್ಮ ನಾಯಕರಾದ ಡಿ.ಕೆ.ಶಿವಕುಮಾರ್ ಇಷ್ಟು ವರ್ಷಗಳ ಅಧಿಕಾರ ಮತ್ತು ರಾಜಕೀಯ ಜೀವನದಲ್ಲಿ ಒಬ್ಬನೇ ಒಬ್ಬ ಹಿಂದುವನ್ನು ಮತಾಂತರ ಮಾಡಿದ್ದನ್ನು ತೋರಿಸಿದರೆ ನಾನು ರಾಜಕೀಯವಾಗಿ ಸನ್ಯಾಸ ಸ್ವೀಕರಿಸುತ್ತೇವೆ ಎಂದು ಸವಾಲು ಹಾಕಿದರು.

    ಕನಕಪುರದಲ್ಲಿ ಬಂದು ಭಾಷಣ ಮಾಡ್ತಾರೆ, ಬೊಗಳುವ ನಾಯಿ ಕಚ್ಚುವುದಿಲ್ಲ ಎಂದು ಗಾದೆ ಮಾತು ನಾನು ಹೇಳಿದ್ದಲ್ಲ. ನಾಲಿಗೆಗೆ ಮೂಳೆ ಇಲ್ಲ ಎಂದು ಬಾಯಿಗೆ ಬಂದದ್ದನ್ನೆಲ್ಲಾ ಮಾತನಾಡುವುದಲ್ಲ, ಗಾಂಧೀಜಿ ಶಾಂತಿ ತತ್ವ ಹೇಳಿದರು. ಅಂಬೇಡ್ಕರ್ ಸಮಾನತೆ ಸಾರಿದರು. ಬಸವಣ್ಣ ಮನುಷ್ಯ ಧರ್ಮ ಅಂತೇಳಿದ್ರು. ಈ ಮೂರನ್ನು ಬಿಟ್ಟವರು ಯಾರು ಇವರು? ಈ ಮೂರು ಲೆಕ್ಕ ಇಲ್ಲ. ಗಾಂಧೀಜಿ ಹೆಸರು ಹೇಳ್ತಾರೆ ಅದ್ರೆ ಅವರ ತತ್ವವಿಲ್ಲ, ಬಸವಣ್ಣನ ಪೂಜೆ ಮಾಡ್ತಾರೆ ಅವರ ಆದರ್ಶಗಳಿಲ್ಲ. ಅಂಬೇಡ್ಕರ್‍ರ ಸಂವಿಧಾನದ ಬಗ್ಗೆ ಹೊಗಳುವಂತ ಮಾತಾಡ್ತಾರೆ ಗೌರವಿಸುವುದಿಲ್ಲ. ಇವರು ಬಂದು ನಮಗೆ ಹಿತವಚನ ಹೇಳುವಂತಹ ಕೆಲಸ ಮಾಡುತ್ತಾರೆ ಎಂದು ವ್ಯಂಗ್ಯ ಮಾಡಿದರು.

  • ಡಿಕೆಶಿ ಕನಕಪುರದ ಎಂಎಲ್‍ಎ ಅಷ್ಟೇ ಎಂದು ಗುಡುಗಿದ ಆರ್.ಅಶೋಕ್

    ಡಿಕೆಶಿ ಕನಕಪುರದ ಎಂಎಲ್‍ಎ ಅಷ್ಟೇ ಎಂದು ಗುಡುಗಿದ ಆರ್.ಅಶೋಕ್

    ಬೆಂಗಳೂರು: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದ ರಾಜಕೀಯಯಕ್ಕೆ ತಿರುಗಿದೆ. ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಬಿಜೆಪಿ ಸಾಥ್ ನೀಡಿದ್ದು, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ಬಾಣಗಳ ಸುರಿಮಳೆ ಜೋರಾಗಿದೆ. ಕನಕಪುರ ಡಿಕೆಶಿಗೆ ಸಂಬಂಧಿಸಿದ್ದಲ್ಲ, ಡಿಕೆಶಿ ಕನಕಪುರ ಎಂಎಲ್‍ಎ ಅಷ್ಟೇ ಅಂತಾ ಕಂದಾಯ ಸಚಿವ ಆರ್.ಅಶೋಕ್ ಗುಡುಗಿದ್ದಾರೆ.

    ಬೆಂಗಳೂರಿನ ಪದ್ಮನಾಭನಗರದಲ್ಲಿ ಮಾತನಾಡಿದ ಆರ್.ಅಶೋಕ್, ಗಲಾಟೆ ಮಾಡಬೇಡಿ ಅಂತಾ ಡಿಕೆಶಿ ಅವರ ಕಾರ್ಯಕರ್ತರಿಗೆ ಹೇಳಿದ್ರೆ ಗಲಾಟೆ ಮಾಡಿ ಅಂತಾ ಅರ್ಥ. ನಮ್ಮ ಸರ್ಕಾರ ಗಲಾಟೆ ಮಾಡಿಸಲ್ಲ, ಗಲಾಟೆ ಮಾಡಿಸಲು ಡಿಕೆಶಿಯಿಂದ ಸಾಧ್ಯ ಅಂತಾ ಟಾಂಗ್ ಕೊಟ್ಟರು.

    ಶಿವಕುಮಾರ್ ಪ್ರಚೋದಿಸುವ ಹೇಳಿಕೆ ಕೊಡಬಾರದು. ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಬಾಲಗಂಗಾಧರ ಸ್ವಾಮೀಜಿ ರಾಮನಗರ ಜಿಲ್ಲೆಯವರು. ಶಿವಕುಮಾರ್ ಅವರಿಗೆ ಇವರು ಯಾರೂ ನೆನಪಾಗಿಲ್ವಾ? ಮೊದಲು ಹೆತ್ತ ತಾಯಿಯನ್ನು ಪೂಜಿಸೋಣ, ನಂತರ ಪಕ್ಕದ ಮನೆ ತಾಯಿಯನ್ನು ಪೂಜಿಸೋಣ ಎಂದರು.

    ಇನ್ನು ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿಚಾರವಾಗಿ ಡಿಸಿ ಮೌಖಿಕ ವರದಿ ನೀಡಿದ್ದು, ಸಮಗ್ರವಾಗಿ ಲಿಖಿತ ವರದಿ ನೀಡುವಂತೆ ಸೂಚಿಸಿರುವುದಾಗಿ ಅಶೋಕ್ ಸ್ಪಷ್ಟಪಡಿಸಿದ್ದಾರೆ. ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣಕ್ಕೆ ಡಿಸೆಂಬರ್ ತಿಂಗಳಲ್ಲಿ ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದಿದ್ದಾರೆ. ಆದರೆ ಎರಡು ವರ್ಷಗಳಿಂದ ಕೆಲಸ ನಡೆಯುತ್ತಿದೆ. ರಸ್ತೆ ಸಂಪರ್ಕ, ವಿದ್ಯುತ್ ಸಂಪರ್ಕಕ್ಕೆ ಅನುಮತಿಯನ್ನೇ ಪಡೆದಿಲ್ಲ ಅನ್ನೋದು ಆರ್. ಅಶೋಕ್ ವಾದ. ಹಾಗಾಗಿ ಸರ್ಕಾರ ಕಾನೂನಾತ್ಮಕವಾಗಿ ಹೋಗುತ್ತಿದೆ ಅಷ್ಟೇ. ಸಮಯಕ್ಕೆ ಸರಿಯಾದ ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.

  • ಕನಕಪುರದಲ್ಲಿ ಇಂದು ಕೇಸರಿ ಕಹಳೆ

    ಕನಕಪುರದಲ್ಲಿ ಇಂದು ಕೇಸರಿ ಕಹಳೆ

    ಬೆಂಗಳೂರು: ಟ್ರಬಲ್ ಶೂಟರ್, ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸ್ವಕ್ಷೇತ್ರದಲ್ಲೇ ಇಂದು ನಿಜವಾದ ಅಗ್ನಿ ಪರೀಕ್ಷೆ ಎದುರಾಗಿದೆ. ರಿಪಬ್ಲಿಕ್ ಆಫ್ ಕನಕಪುರ ಎನ್ನುತ್ತಿದ್ದವರಿಗೆ ಇಂದು ಸಂಕಷ್ಟ ಎದುರಾಗಲಿದೆ.

    ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ಏಸು ಮೂರ್ತಿ ಸ್ಥಾಪನೆ ವಿರೋಧಿಸಿ ಹಿಂದು ಜಾಗರಣ ವೇದಿಕೆ ಇಂದು ಕನಕಪುರ ಚಲೋ ಪ್ರತಿಭಟನೆಗೆ ಕರೆಕೊಟ್ಟಿದೆ. ಕನಕಪುರದ ಅಯ್ಯಪ್ಪ ಸ್ವಾಮಿ ದೇವಸ್ಥಾನದಿಂದ ಚನ್ನಬಸಪ್ಪ ವೃತ್ತದವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ ಅನಂತರ ಬೃಹತ್ ಪ್ರತಿಭಟನಾ ಸಮಾವೇಶ ನಡೆಯಲಿದೆ. ಆದರೆ ಇದು ಕೇವಲ ಏಸು ಪ್ರತಿಮೆ ವಿರೋಧಿಸಿ ನಡೆಯುವ ಜಾಥಾ ಅಲ್ಲ ಅನ್ನೋದೆ ಡಿಕೆಶಿಗೆ ತಲೆನೋವು ತಂದಿಟ್ಟಿದೆ.

    ಬಿಜೆಪಿ ಇದೇ ಅವಕಾಶವನ್ನ ಬಳಸಿಕೊಂಡು ಕನಕಪುರದ ಕೋಟೆ ಮೇಲೆ ಕೇಸರಿ ಬಾವುಟ ಹಾರಿಸುವ ಪ್ರಯತ್ನ ಆರಂಭಿಸಿದೆ. ಹಿಂದು ಜಾಗರಣಾ ವೇದಿಕೆಯ ಪ್ರತಿಭಟನೆಯಲ್ಲಿ ಅನೇಕ ಬಿಜೆಪಿ ನಾಯಕರು ಸಹಾ ಭಾಗವಹಿಸಲಿದ್ದಾರೆ.

    ಇದು ಕಪಾಲ ಬೆಟ್ಟದ ಏಸು ಪ್ರತಿಮೆ ವಿವಾದವಾಗಿದ್ದರೆ ಡಿ.ಕೆ.ಶಿವಕುಮಾರ್ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಇದನ್ನೇ ಬಳಸಿಕೊಂಡು ಬಿಜೆಪಿ ಕನಕಪುರ ಕೋಟೆಗೆ ಲಗ್ಗೆ ಇಡಲು ಮುಂದಾಗಿದೆ. ಈ ಬೆಳವಣಿಗೆ ಇದುವರೆಗೆ ಕನಕಪುರಕ್ಕೆ ನಾನೇ ಕಿಂಗ್ ಅಂದುಕೊಂಡಿದ್ದ ಡಿ.ಕೆ.ಶಿವಕುಮಾರ್ ನೆಮ್ಮದಿ ಕೆಡಿಸಿದಂತಾಗಿದೆ.

  • ಕಪಾಲ ಬೆಟ್ಟಕ್ಕೆ ಬಿಜೆಪಿ ನಿಯೋಗ ಭೇಟಿ- ಡಿಕೆಶಿ ಕೆಂಡಾಮಂಡಲ

    ಕಪಾಲ ಬೆಟ್ಟಕ್ಕೆ ಬಿಜೆಪಿ ನಿಯೋಗ ಭೇಟಿ- ಡಿಕೆಶಿ ಕೆಂಡಾಮಂಡಲ

    ಬೆಂಗಳೂರು: ಭಾರೀ ವಿವಾದಕ್ಕೆ ಕಾರಣವಾಗಿರೋ ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಸ್ಥಾಪನೆ ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಯಾವುದೇ ಕಾರಣಕ್ಕೂ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ಅವಕಾಶ ಇಲ್ಲ ಅಂತ ಬಿಜೆಪಿ ಹೇಳ್ತಿದ್ದರೆ, ಏಸು ಪ್ರತಿಮೆ  ಸ್ಥಾಪನೆ ಮಾಡಿಯೇ ಸಿದ್ಧ ಅಂತ ಮಾಜಿ ಸಚಿವ ಡಿಕೆ ಶಿವಕುಮಾರ್ ಹಠಕ್ಕೆ ಬಿದ್ದಿದ್ದಾರೆ. ಈ ಗೊಂದಲಗಳ ಮಧ್ಯೆ ಸೋಮವಾರ(ನಾಳೆ) ಬಿಜೆಪಿ, ಸ್ವಾಮೀಜಿಗಳ ನಿಯೋಗ ಕಪಾಲ ಬೆಟ್ಟಕ್ಕೆ ಭೇಟಿ ಕೊಡ್ತಿದ್ದು, ಬಿಜೆಪಿ ಭೇಟಿಗೆ ಡಿಕೆಶಿ ಕೆಂಡಾಮಂಡಲರಾಗಿದ್ದಾರೆ.

    ವಿಡಿಯೋ ಮೂಲಕ ತಮ್ಮ ಆಕ್ರೋಶವನ್ನ ಹೊರ ಹಾಕಿರೋ ಡಿಕೆ ಶಿವಕುಮಾರ್ ಕನಕಪುರ ಜನರು ಶಾಂತಿ ಕಾಪಾಡಬೇಕು ಅಂತ ಮನವಿ ಮಾಡಿದ್ದಾರೆ. ಬಿಜೆಪಿ ಅವರು ಉದ್ದೇಶ ಪೂರ್ವಕವಾಗಿ ವಿವಾದ ಮಾಡಲು ಸೋಮವಾರ ಕನಕಪುರದ ಕಪಾಲ ಬೆಟ್ಟಕ್ಕೆ ಬರುತ್ತಿದ್ದಾರೆ. ಅಲ್ಲಿ ಸಭೆ ಮಾಡಿ ಗೊಂದಲ ಸೃಷ್ಟಿ ಮಾಡೋದು ಅವರ ಉದ್ದೇಶ. ಹೀಗಾಗಿ ಯಾರು ಬಿಜೆಪಿ ಅವರ ಮಾತಿಗೆ ಶಾಂತಿ ಕಳೆದುಕೊಳ್ಳಬೇಡಿ. ಶಾಂತಿಯುತವಾದ ಕನಕಪುರದ ಗೌರವ ಕಾಪಾಡಿ ಎಂದು ಮನವಿ ಮಾಡಿದ್ದಾರೆ.

    ಅಲ್ಲದೆ ಬಿಜೆಪಿ, ಆರ್ ಎಸ್‍ಎಸ್ ವಿರುದ್ಧವೂ ಗುಡುಗಿರೋ ಡಿಕೆಶಿ, ಹಿಂದುಳಿದ ಕನಕಪುರವನ್ನ ಅಭಿವೃದ್ಧಿ ಮಾಡಿದ್ದೇವೆ. ಇದನ್ನ ಸಹಿಸದ ಬಿಜೆಪಿ, ಆರ್ ಎಸ್‍ಎಸ್ ಶಾಂತಿ ಕದಡಲು ಕನಕಪುರಕ್ಕೆ ಬರುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

  • ಕೆಂಪೇಗೌಡ್ರ ಮಗ ಅಂತೀರಲ್ಲ, ಹಾಗೇ ನಾನು ಕಾಳೇಗೌಡ್ರ ಮೊಮ್ಮಗ- ಡಿಕೆಶಿಗೆ ಸ್ವಾಮೀಜಿ ಟಾಂಗ್

    ಕೆಂಪೇಗೌಡ್ರ ಮಗ ಅಂತೀರಲ್ಲ, ಹಾಗೇ ನಾನು ಕಾಳೇಗೌಡ್ರ ಮೊಮ್ಮಗ- ಡಿಕೆಶಿಗೆ ಸ್ವಾಮೀಜಿ ಟಾಂಗ್

    ರಾಮನಗರ: ಕನಕಪುರಕ್ಕೂ ಕಾಳಿಗೂ ಏನ್ ಸಂಬಂಧ ಅಂತೀರಾ, ನಾನು ಕನಕಪುರದ ಮೊಮ್ಮಗ. ಮಾಜಿ ಮಂತ್ರಿಗಳೇ ನಾನು ಕನಕಪುರದ ಕೆಂಪೇಗೌಡರ ಮಗ ಅಂತೀರಲ್ಲ, ಹಾಗೇ ಕಾಳೇಗೌಡರ ಮೊಮ್ಮಗ ನಾನು. ಹೆದರಿಸಬೇಡಿ ಇಲ್ಲಿ ಹೆದರಿಕೊಳ್ಳುವವರು ಯಾರೂ ಇಲ್ಲ ಎಂದು ಮಾಜಿ ಸಚಿವ ಡಿಕೆ ಶಿವಕುಮಾರ್ ಗೆ ರಾಮನಗರದಲ್ಲಿ ಕಾಳಿಮಠದ ರಿಷಿ ಕುಮಾರ ಸ್ವಾಮೀಜಿ ಟಾಂಗ್ ನೀಡಿದ್ದಾರೆ.

    ಕನಕಪುರ ತಾಲೂಕಿನ ಹಾರೋಬೆಲೆಯ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ಏಸು ಪ್ರತಿಮೆ ವಿರೋಧಿಸಿದ್ದಾರೆ. ಹಾಗೆಯೇ ಪ್ರತಿಮೆಗಾಗಿ ಕೆತ್ತನೆಯಾಗುತ್ತಿರುವ ಕಪಾಲ ಬೆಟ್ಟದ ಮೇಲಿರುವ ಕಲ್ಲುಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಹಿಂದೂ ಜಾಗೃತಿ ಸೇನೆ ಕಾರ್ಯಕರ್ತರ ಜೊತೆ ಅವರು ರಾಮನಗರ ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು.

    ಇದೇ ವೇಳೆ ಮಾತನಾಡಿದ ಸ್ವಾಮೀಜಿ, ಕನಕಪುರ ನಿಮ್ಮದಲ್ಲ, ರಾಮನಗರ ನಿಮ್ಮದಲ್ಲ, ಕರ್ನಾಟಕ ನಿಮ್ಮದಲ್ಲ. ನಮ್ಮದೂ ರಾಮನಗರನೇ, ನಾವು ಕೂಡ ಕರ್ನಾಟಕದವರೇ. ತಪ್ಪು ನಮ್ಮಿಂದ ಆಗಿಲ್ಲ. ಇಂತಹ ಎಷ್ಟೋ ಬೆಟ್ಟಗಳನ್ನು ಹೊಡೆದಿರುವಂತವರೆಲ್ಲ ಬೆಟ್ಟದ ಮೇಲೆ ಇನ್ನೊಂದು ಇಡುವುದಕ್ಕೆ ಹೋಗ್ತಾ ಇದ್ದೀರಾ. ಇದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದು ಪರೋಕ್ಷವಾಗಿ ಮಾಜಿ ಸಚಿವ ಡಿಕೆ ಶಿವಕುಮಾರ್‍ರವರು ಬೆಟ್ಟವನ್ನೇ ಕರಗಿಸಿ ಗಣಿಗಾರಿಕೆ ನಡೆಸಿದ್ದಾರೆ. ಇದೀಗ ಮತ್ತೊಂದು ಬೆಟ್ಟದ ಮೇಲೆ ಏಸುವಿನ ಪ್ರತಿಮೆ ಕೂರಿಸಲು ಹೋಗ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕಳೆದ ಡಿಸೆಂಬರ್ 31 ರಂದು ಕಪಾಲ ಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಅಪಪ್ರಚಾರ ಹಾಗೂ ದೂರುಗಳನ್ನು ನೀಡುವ ಮೂಲಕ ಹೆದರಿಸಲು ಪ್ರಯತ್ನಿಸ್ತಿದ್ದೀರಿ. ಸೋಷಿಯಲ್ ಮೀಡಿಯಾಗಳಲ್ಲಿ ಮೋದಿ ವಿರುದ್ಧ ಯಡಿಯೂರಪ್ಪ ವಿರುದ್ಧ ಮಾತನಾಡಿದ್ದಾರೆ ಎಂದು ಅಪಪ್ರಚಾರ ಮಾಡ್ತಿದ್ದೀರಿ. ಆದರೆ ರಿಷಿಕುಮಾರ ಸ್ವಾಮೀಜಿ ಮೊದಲಿನಂತಿಲ್ಲ ಹೆದರಿಸಬೇಡಿ, ಹೆದರುವವರು ಯಾರೂ ಇಲ್ಲ ಎಂದು ಡಿಕೆಶಿ ವಿರುದ್ಧ ವಾಗ್ದಾಳಿ ನಡೆಸಿದರು.

    ಕಪಾಲ ಬೆಟ್ಟದಲ್ಲಿ ಅಕ್ರಮವಾಗಿ ಈಗಾಗಲೇ ರಸ್ತೆ, ವಿದ್ಯುತ್, ಕೊಳವೆ ಬಾವಿ ಸಂಪರ್ಕ ನೀಡಲಾಗಿದೆ. ಸದ್ಯಕ್ಕೆ ಕಪಾಲ ಬೆಟ್ಟದ ಮೇಲೆ ನಡೆಯುತ್ತಿರುವ ಕಲ್ಲು ಕೆತ್ತನೆಯ ಕಾರ್ಯದ ಕಲ್ಲುಗಳನ್ನು ಹಾಗೂ ಬೆಟ್ಟದ ಮೇಲಿರಿಸಿರುವ ಕಲ್ಲು ಕೊರೆಯುವ ಮಷಿನ್‍ಗಳನ್ನು 19 ನೇ ತಾರೀಕಿನ ಒಳಗಾಗಿ ತೆರವುಗೊಳಿಸಬೇಕು. ಇಲ್ಲದಿದ್ರೆ ರಾಮನಗರ ತಾಲೂಕಿನ ಬಿಡದಿ ಸಮೀಪವಿರುವ ಕೋತಿ ಆಂಜನೇಯ ದೇವಾಲಯದಿಂದ ಕಪಾಲ ಬೆಟ್ಟಕ್ಕೆ ಪಾದಯಾತ್ರೆ ನಡೆಸುತ್ತೇವೆ. ಪಾದಯಾತ್ರೆಯಲ್ಲಿ ಅನೇಕ ಸಾಧು-ಸಂತರು, ಉತ್ತರ ಕರ್ನಾಟಕದ ಸಾಧು-ಸಂತರು ಅನೇಕ ಹಿಂದೂಪರ ಸಂಘಟನೆಯ ಕಾರ್ಯಕರ್ತರು ಭಾಗವಹಿಸ್ತಾರೆ. ಆ ದಿನ ಏನಾದ್ರೂ ಕಪಾಲ ಬೆಟ್ಟದಲ್ಲಿ ಹೆಚ್ಚು ಕಡಿಮೆಯಾದ್ರೆ ಅದಕ್ಕೆ ಜಿಲ್ಲಾಡಳಿತವೇ ನೇರ ಹೊಣೆಯಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.

  • ‘ಕಪಾಲ ಬೆಟ್ಟದ ಸ್ಥಳ ವಾಪಸ್ ಪಡೆದ್ರೆ ಮಠ, ದರ್ಗಾಗಳಿಗೆ ನೀಡಿರೋ ಜಾಗವನ್ನೂ ವಾಪಸ್ ಪಡೆಯಿರಿ’

    ‘ಕಪಾಲ ಬೆಟ್ಟದ ಸ್ಥಳ ವಾಪಸ್ ಪಡೆದ್ರೆ ಮಠ, ದರ್ಗಾಗಳಿಗೆ ನೀಡಿರೋ ಜಾಗವನ್ನೂ ವಾಪಸ್ ಪಡೆಯಿರಿ’

    ರಾಮನಗರ: ಕನಕಪುರ ತಾಲೂಕಿನ ಹಾರೋಬೆಲೆ ಗ್ರಾಮದ ಕಪಾಲ ಬೆಟ್ಟದಲ್ಲಿ ನಿರ್ಮಾಣವಾಗುತ್ತಿರುವ ವಿಶ್ವದ ಅತೀ ಎತ್ತರದ ಏಸುಕ್ರಿಸ್ತನ ಪ್ರತಿಮೆ ವಿವಾದ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಸಾಕಷ್ಟು ವಿರೋಧಗಳ ನಡುವೆ ಇದೀಗ ಏಸುಕ್ರಿಸ್ತನ ಬೆಂಬಲಕ್ಕೂ ಕೆಲ ಸಂಘಟನೆಯ ಕಾರ್ಯಕರ್ತರು ಮುಂದಾಗಿದ್ದಾರೆ.

    ಕಪಾಲ ಬೆಟ್ಟದಲ್ಲಿ ಏಸುಕ್ರಿಸ್ತನ ಪ್ರತಿಮೆ ನಿರ್ಮಾಣವಾಗುತ್ತಿರುವ 10 ಏಕರೆ ಜಾಗವನ್ನು ಸರ್ಕಾರ ವಾಪಸ್ ಪಡೆಯುವುದಾದರೆ, ಈ ಹಿಂದೆ ಮಠ, ಆಶ್ರಮ, ದರ್ಗಾದಂತಹ ಧಾರ್ಮಿಕ ಸಂಸ್ಥೆಗಳಿಗೆ ನೀಡಿರುವ ಜಾಗಗಳನ್ನು ಕೂಡ ವಾಪಸ್ ಪಡೆಯಬೇಕು ಎಂದು ಕರ್ನಾಟಕ ಸಮತಾ ಸೈನಿಕದಳದ ಜಿಲ್ಲಾದ್ಯಕ್ಷ ಕೋಟೆ ಕುಮಾರ್ ಆಗ್ರಹಿಸಿದ್ದಾರೆ.

    ಪ್ರವಾಸಿ ಮಂದಿರದಲ್ಲಿ ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಂಘಟನೆ ವತಿಯಿಂದ ಏಸು ಪ್ರತಿಮೆ ನಿರ್ಮಾಣಕ್ಕೆ ಬೆಂಬಲವನ್ನು ನೀಡುತ್ತಿದ್ದೇವೆ. ಪ್ರತಿಮೆ ನಿರ್ಮಾಣದ ವಿಚಾರವಾಗಿ ಏನೆಲ್ಲಾ ಅನುಕೂಲಗಳು ಬೇಕಿದೆ, ಜೊತೆಗೆ ಪ್ರತಿಮೆ ವಿರೋಧಿಸುವವರ ವಿರುದ್ಧ ಹೋರಾಟಕ್ಕೂ ತಾವು ಕೈ ಜೋಡಿಸುವುದಾಗಿ ತಿಳಿಸಿದರು.

    ಕೆಲವರು ಏಸುಕ್ರಿಸ್ತನ ಪ್ರತಿಮೆ ನಿರ್ಮಾಣ ವಿಚಾರವಾಗಿ ಆಧಾರಗಳೇ ಇಲ್ಲದ ಮತಾಂತರದ ಊಹಾಪೋಹದ ಆರೋಪಗಳನ್ನು ಮಾಡುತ್ತಿದ್ದಾರೆ. ಹಾರೋಬೆಲೆಯಲ್ಲದೇ ಪ್ರತಿಮೆಯಾದರೆ ವಿಶ್ವದ ಜನ ಈ ಭಾಗಕ್ಕೆ ಬರುತ್ತಾರೆ ಪ್ರವಾಸೋದ್ಯಮ ಕೂಡ ಅಭಿವೃದ್ದಿಯಾಗಲಿದೆ. ಅಲ್ಲದೇ ಈ ಭಾಗದ ರೈತರ ಜಮೀನುಗಳು ಚಿನ್ನದಂತಹ ಬೆಲೆಯನ್ನ ಪಡೆದುಕೊಳ್ಳಲಿವೆ. ಆದರೆ ಧರ್ಮದ ಹೆಸರಿನಲ್ಲಿ ಕಲಹವನ್ನುಂಟು ಮಾಡುವಂತಹ ಕೆಲಸವನ್ನು ಮತಾಂಧರು ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

    ಲಂಡನ್‍ನಲ್ಲಿ ವಿಶ್ವಮಾನವತೆ ಸಾರಿದ ಬಸವಣ್ಣನ ವಿಗ್ರಹವನ್ನ ಇಲ್ಲಿಂದ ತೆರಳಿ ಅಲ್ಲಿ ವಾಸ ಮಾಡುತ್ತಿರುವ ಹಿಂದೂಗಳು ಪ್ರತಿಷ್ಠಾಪನೆ ಮಾಡಿದ್ದಾರೆ. ಆದರೆ ವಿಶ್ವಕ್ಕೆ ಶಾಂತಿ ಸಂದೇಶ ಸಾರಿದ ಏಸುವಿನ ಪ್ರತಿಮೆಗೆ ಮತಾಂಧರಿಂದ ಪ್ರತಿಮೆ ನಿರ್ಮಾಣಕ್ಕೆ ಅಡ್ಡಿಪಡಿಸಲಾಗುತ್ತಿದೆ. ಇದೇ ಜ.13ಕ್ಕೆ ಕನಕಪುರ ಚಲೋಗೆ ಮುಂದಾಗಿದ್ದಾರೆ, ಇದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದರು.

    ಸರ್ವಧರ್ಮದ ರಾಷ್ಟ್ರ ನಮ್ಮದಾಗಿದ್ದು. ಸಂವಿಧಾನದಲ್ಲೇ ಸರ್ವಧರ್ಮದ ಕಲ್ಪನೆಯನ್ನ ಹೇಳಲಾಗಿದೆ. ದೇಶದಲ್ಲಿ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಂ, ಕ್ರೈಸ್ತ, ಸಿಖ್, ಪಾರ್ಸಿ, ಜೈನ, ಭೌದ್ಧರು ವಾಸಿಸುತ್ತಿದ್ದಾರೆ. ಕೆಲವರು ಸಮಾಜದ ಸ್ವಾಸ್ಥ್ಯ ಕದಡುವಂತಹ ಕೆಲಸ ಮಾಡುತ್ತಿದ್ದಾರೆ. ಪ್ರತಿಮೆ ನಿರ್ಮಾಣದ ಜಾಗ ವಾಪಸ್ ಪಡೆಯುವಂತೆ ಆಗ್ರಹಿಸಿರುವುದು ಸರಿಯಲ್ಲ ಎಂದರು.

     

  • ಗೋಮಾಳ ಭೂಮಿಯಲ್ಲಿ ಏಸು ಪ್ರತಿಮೆ: ರಾಮನಗರ ಜಿಲ್ಲಾಡಳಿತದಿಂದ ವರದಿ ಪೂರ್ಣ

    ಗೋಮಾಳ ಭೂಮಿಯಲ್ಲಿ ಏಸು ಪ್ರತಿಮೆ: ರಾಮನಗರ ಜಿಲ್ಲಾಡಳಿತದಿಂದ ವರದಿ ಪೂರ್ಣ

    ಬೆಂಗಳೂರು: ಕನಕಪುರದ ಕಪಾಲ ಬೆಟ್ಟದಲ್ಲಿ ಏಸು ಪ್ರತಿಮೆ ನಿರ್ಮಾಣ ವಿವಾದ ಸಂಬಂಧ ಕಂದಾಯ ಇಲಾಖೆ ಕೇಳಿರುವ ವರದಿಯನ್ನು ರಾಮನಗರ ಜಿಲ್ಲಾಡಳಿತವು ಕೊನೆಗೂ ಸಿದ್ಧಪಡಿಸಿದೆ.

    ರಾಮನಗರ ಜಿಲ್ಲಾಧಿಕಾರಿ ಮತ್ತು ಕನಕಪುರ ತಹಶೀಲ್ದಾರ್ ನೇತೃತ್ವದಲ್ಲಿ ವರದಿ ತಯಾರಿಸಲಾಗಿದೆ. ಸುಮಾರು ಹತ್ತು ದಿನಗಳ ಕಾಲಾವಕಾಶದಲ್ಲಿ ರಾಮನಗರ ಜಿಲ್ಲಾಡಳಿತ ಈ ವರದಿಯನ್ನು ಸಿದ್ಧಪಡಿಸಿದೆ. ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಇನ್ನೆರಡು ದಿನಗಳಲ್ಲಿ ರಾಮನಗರ ಜಿಲ್ಲಾಧಿಕಾರಿಗಳು ವರದಿಯನ್ನು ಸಲ್ಲಿಕೆ ಮಾಡುವ ಸಾಧ್ಯತೆಯಿದೆ. ಇದನ್ನೂ ಓದಿ: ಡಿಕೆಶಿ, ಕಾಂಗ್ರೆಸ್ಸಿಗೆ ಲಾಭ ಮಾಡಿಕೊಡೋದು ಬೇಡ ಎಂದ ಯಡಿಯೂರಪ್ಪ

    ವರದಿಯಲ್ಲಿ ಏನಿದೆ?
    ರಾಮನಗರ ಜಿಲ್ಲಾಡಳಿತ ಸಿದ್ಧಪಡಿಸಿರುವ ಈ ವರದಿಯಲ್ಲಿ ಗೋಮಾಳ ಭೂಮಿಯಲ್ಲಿ ಯಾವುದೇ ನಿರ್ಮಾಣ, ಮಂಜೂರು, ಪರಭಾರೆ ಅಗತ್ಯ ಇಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ. ಅರ್ಹ ಮೂಲಗಳು ಪಬ್ಲಿಕ್ ಟಿವಿಗೆ ನೀಡಿರುವ ಮಾಹಿತಿಗಳನ್ವಯ ವರದಿಯ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

    1. ಕಪಾಲ ಬೆಟ್ಟ ಗೋಮಾಳ ಭೂಮಿಯಾಗಿದೆ. ಇದರಲ್ಲಿ 10 ಎಕರೆ ಖಾಸಗಿ ಟ್ರಸ್ಟ್ ಗೆ ಅಕ್ರಮ ಮಂಜೂರು ಮಾಡಲಾಗಿದೆ.
    2. ವನ್ಯಜೀವಿ ಕಾಯ್ದೆ, ಬಿಎಂಆರ್ ಡಿಎಗಳ ನಿಯಮಗಳನ್ನು ಉಲ್ಲಂಘಿಸಿ 10 ಎಕರೆ ಗೋಮಾಳ ಭೂಮಿ ಪರಭಾರೆ ಮಾಡಲಾಗಿದೆ.
    3. ಕಪಾಲ ಬೆಟ್ಟ ನಲ್ಲಹಳ್ಳಿ ಸರ್ವೆ ನಂ.283 ರಲ್ಲಿದೆ. ಈ ಸರ್ವೆ ನಂಬರ್ ಬೆಟ್ಟದ ಪಕ್ಕದಲ್ಲೇ ಇರುವ ಕಾವೇರಿ ವನ್ಯ ಜೀವಿಧಾಮದ ಬಫರ್ ಝೋನ್ ವ್ಯಾಪ್ತಿಗೆ ಬರಲಿದೆ. ಹಾಗಾಗಿ ಯಾವುದೇ ನಿರ್ಮಾಣಕ್ಕೆ ಅವಕಾಶ ಇರುವುದಿಲ್ಲ. ಇದನ್ನೂ ಓದಿ: ಡಿಕೆ ಶಿವಕುಮಾರ ಅಲ್ಲ ಏಸುಕುಮಾರ – ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಆಕ್ರೋಶ

    4. ಕಾವೇರಿ ವನ್ಯ ಜೀವಿಧಾಮದ ಬಫರ್ ಝೋನ್ ನಲ್ಲಿ ಕಾಮಗಾರಿ ನಡೆಸಲು ರಾಜ್ಯ ಮತ್ತು ಕೇಂದ್ರ ಪರಿಸರ ಇಲಾಖೆಗಳ ಅನುಮತಿ ಬೇಕು. ಈ ಅನುಮತಿಗಳು ಏಸು ಪ್ರತಿಮೆ ನಿರ್ಮಾಣಕ್ಕೆ ಪಡೆದಿರುವುದಿಲ್ಲ.
    5. ಮೂರು ವರ್ಷಗಳ ಹಿಂದೆ ಬರ ಪರಿಸ್ಥಿತಿಯಿದ್ದಾಗ ಅಕ್ರಮವಾಗಿ ಕೊಳವೆ ಬಾವಿ ತೋಡಿಸಲಾಗಿತ್ತು.
    6. ಅಕ್ರಮವಾಗಿ ಕೊಳವೆ ಬಾವಿ ತೋಡಲು ರಾಮನಗರ ಜಿಲ್ಲಾ ಪಂಚಾಯಿತಿಯಿಂದ ಒಪ್ಪಿಗೆ ಪಡೆಯಲಾಗಿದೆ.
    7. ಏಸು ಪ್ರತಿಮೆ ನಿರ್ಮಿಸಲು ಅನಧಿಕೃತವಾಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ.
    8. ಪ್ರತಿಮೆ ನಿರ್ಮಿಸುವ ಸಲುವಾಗಿಯೇ ನಿಯಮ ಮೀರಿ 2 ಕಿ.ಮೀ ರಸ್ತೆ ನಿರ್ಮಿಸಲಾಗಿದೆ. ಇದನ್ನೂ ಓದಿ: ಏಸು ಪ್ರತಿಮೆಗೆ ಜಮೀನು – ಡಿಕೆಶಿಗೆ 4 ಪ್ರಶ್ನೆ ಕೇಳಿದ ಪ್ರತಾಪ್ ಸಿಂಹ

    ಕಂದಾಯ ಇಲಾಖೆಗೆ ರಾಮನಗರ ಡಿಸಿ ವರದಿ ಸಲ್ಲಿಸಿದ ನಂತರ ಸಚಿವ ಸಂಪುಟ ಸಭೆಯಲ್ಲಿ ಈ ವರದಿ ಮೇಲೆ ಮಹತ್ವದ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಸಂಪುಟ ಸಭೆಯ ಚರ್ಚೆಯ ಬಳಿಕ ಸರ್ಕಾರದ ನಿರ್ಧಾರ ಗೊತ್ತಾಗಲಿದೆ. ಆದರೆ ಮೂಲಗಳ ಪ್ರಕಾರ ಏಸು ಪ್ರತಿಮೆ ನಿರ್ಮಿಸಲು ಉದ್ದೇಶಿಸಿರುವ ಗೋಮಾಳ ಭೂಮಿಯನ್ನು ಸರ್ಕಾರ ವಾಪಸ್ ಪಡೆಯುವ ಸಾಧ್ಯತೆ ದಟ್ಟವಾಗಿದೆ.