Tag: ಏರ್ ಇಂಡಿಯಾ

  • ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

    ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

    – ರಾಷ್ಟ್ರಪತಿಯಿಂದ ಚಿನ್ನದ ಪದಕ
    – 30 ವರ್ಷಗಳ ಅಪಘಾತ ರಹಿತ ಚಾಲನೆ

    ಕಲ್ಲಿಕೋಟೆ: ಲ್ಯಾಂಡಿಂಗ್‌ ವೇಳೆ ರನ್‌ವೇಯಿಂದ ಜಾರಿ 2 ತುಂಡಾದ ವಿಮಾನವನ್ನು ಹಾರಿಸುತ್ತಿದ್ದ ಪೈಲಟ್‌ ದೀಪಕ್‌ ವಸಂತ ಸಾಠೆ ಯುದ್ಧ ವಿಮಾನಗಳ ಹಾರಾಟದ ಅನುಭವವನ್ನು ಪಡೆದಿದ್ದರು.

    ಹೌದು. ದುಬೈಯಿಂದ 184 ಪ್ರಯಾಣಿಕರನ್ನು ಕರೆತರುತ್ತಿದ್ದ ಏರ್‌ಇಂಡಿಯಾ ಎಕ್ಸ್‌ ಪ್ರೆಸ್‌ ವಿಮಾನವನ್ನು ದೀಪಕ್‌ ವಸಂತ ಸಾಠೆ ಎರಡು ಬಾರಿ ವಿಮಾನ ನಿಲ್ದಾಣಕ್ಕೆ ಸುತ್ತು ಹೊಡೆಸಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯ ಮಧ್ಯೆಯೂ ವಿಮಾನವನ್ನು ಟೇಬಲ್‌ ಟಾಪ್‌ ರನ್‌ವೇಯಲ್ಲಿ ಇಳಿಸಿದರೂ ಅದು 35 ಅಡಿ ಕಂದಕಕ್ಕೆ ಜಾರಿ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿದೆ.

    ಪುಣೆಯ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದ ಸಾಠೆ ಮಿಗ್‌ 21 ಯುದ್ಧವಿಮಾನವನ್ನು ಹಾರಿಸಿದ್ದರು. ವಾಯುಪಡೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕೆ ಅವರಿಗೆ ರಾಷ್ಟ್ರಪತಿಯಿಂದ ಚಿನ್ನದ ಪದಕ ಸಹ ಸಿಕ್ಕಿತ್ತು. ಹೈದರಾಬಾದ್‌ನಲ್ಲಿರುವ ಏರ್‌ಫೋರ್ಸ್‌ ಅಕಾಡೆಮಿಯಲ್ಲಿದ್ದಾಗ ಅವರು ಸ್ವಾರ್ಡ್‌ ಆಫ್‌ ಆನರ್‌ ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.

    1981ರಲ್ಲಿ ವಾಯಪಡೆಗೆ ಸೇರಿದ್ದ ಸಾಠೆ 22 ವರ್ಷಗಳ ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಇರುವ ಏರ್‌ ಪೋರ್ಸ್‌ ಟ್ರೈನಿಂಗ್‌ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದರು. ಸ್ಕ್ವಾಡ್ರನ್‌ ಲೀಡರ್‌ ಆಗಿ ನಿವೃತ್ತಿ ಪಡೆದ ಬಳಿಕ ನಾಗರಿಕ ವಿಮಾನ ಸೇವೆಗೆ ಸೇರ್ಪಡೆಯಾಗಿದ್ದರು.

    ಬೋಯಿಂಗ್‌ 737 ವಿಮಾನಗಳ ಹಾರಾಟದಲ್ಲಿ ಅಪಾರ ಅನುಭವ ಹೊಂದಿದ್ದ ಇವರು 30 ವರ್ಷಗಳ ಕಾಲ ಅಪಘಾತರಹಿತ ಪೈಲಟ್‌ ಆಗಿ ಗುರುತಿಸಿಕೊಂಡಿದ್ದರು. ಮುಂಬೈ ನಿವಾಸಿಯಾಗಿದ್ದ ಇವರು ಕಳೆದ 18 ವರ್ಷಗಳಿಂದ ಏರ್‌ ಇಂಡಿಯಾದಲ್ಲಿ ಪೈಲಟ್‌ ಆಗಿದ್ದರು. ಏರ್‌ ಇಂಡಿಯಾದಲ್ಲಿ ಸೇವೆಗೆ ಸೇರಿದ ನಂತರ ಅವರು ಏರ್‌ಬಸ್‌310 ಗಳ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ್ದರು.

    ಸಾಠೆ ಅವರಿಗೆ ಇಬ್ಬರು ಪುತ್ರರಿದ್ದು, ಒಬ್ಬರು ಬೆಂಗಳೂರಿನಲ್ಲಿದ್ದರೆ ಇನ್ನೊಬ್ಬರು ಅಮೆರಿಕದಲ್ಲಿದ್ದಾರೆ. ಶೀಘ್ರವೇ ಇವರು ಕಲ್ಲಿಕೋಟೆಗೆ ತಲುಪಲಿದ್ದಾರೆ ಎಂದು ವರದಿಯಾಗಿದೆ.

    ಸುತ್ತಲೂ ಆಳ ಕಣಿವೆಯಿ ಇದ್ದು, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗುತ್ತದೆ. ಈ ರೀತಿಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸುವುದು ಬಹಳ ಸವಾಲಿನ ಕೆಲಸ. ಕಲ್ಲಿಕೋಟೆ ದುರ್ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.

  • ಕೋಯಿಕ್ಕೋಡ್ ವಿಮಾನ ದುರಂತ- 16 ಸಾವು, 15 ಮಂದಿ ಗಂಭೀರ

    ಕೋಯಿಕ್ಕೋಡ್ ವಿಮಾನ ದುರಂತ- 16 ಸಾವು, 15 ಮಂದಿ ಗಂಭೀರ

    ತಿರುವನಂತಪುರಂ: ಕೇರಳದ ಕರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ದುರಂತ ಘಟನೆಯಲ್ಲಿ 16 ಮಂದಿ ಸಾವನ್ನಪ್ಪಿದ್ದು, 15 ಮಂದಿಯ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ 123 ಮಂದಿ ಗಾಯಗೊಂಡಿದ್ದಾರೆ ಎಂದು ಮಲಪ್ಪುರಂ ಎಸ್‍ಪಿ ತಿಳಿಸಿದ್ದಾರೆ.

    ಇಂದು ಸಂಜೆ 7.45ರ ಸುಮಾರಿಗೆ ದುಬೈನಿಂದ ಬಂದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಕೋಯಿಕ್ಕೋಡ್‍ನ ಕರಿಪುರದಲ್ಲಿ ಲ್ಯಾಂಡಿಗೆ ವೇಳೆ ನಿಲ್ದಾಣದ ರನ್ ವೇಯಲ್ಲಿ ಜಾರಿ ದುರಂತಕ್ಕೀಡಾಗಿದೆ. ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡಿಲ್ಲ. ವಿಮಾನದಲ್ಲಿ 174 ಮಂದಿ ಪ್ರಯಾಣಿಕರಿದ್ದರು. 10 ಮಂದಿ ಮಕ್ಕಳು, ಇಬ್ಬರು ಪೈಲಟ್‍ಗಳು ಹಾಗೂ ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು. ಸದ್ಯ ಪ್ರಯಾಣಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

    ಭೀಕರ ದುರಂತದಲ್ಲಿ ಪುಟ್ಟ ಕಂದಮ್ಮವೊಂದು ಬದುಕುಳಿದಿದೆ. ವಿಮಾನ ಭೀಕರ ದುರಂತಕ್ಕೀಡಾದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿಗೆ ಪುಟ್ಟ ಮಗುವೊಂದು ಅಳುತ್ತಿರುವ ಶಬ್ದ ಕೇಳಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಮಗುವಿನ ಅಳು ಕೇಳುತ್ತಿರುವ ಕಡೆ ತೆರಳಿ ರಕ್ಷಿಸಿದ್ದಾರೆ. ಘಟನೆಯಿಂದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೊಂಡ್ರೊಟ್ಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ.

  • ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ತಿರುವನಂತಪುರಂ: ಕೇರಳದ ಕೋಯಿಕ್ಕೋಡ್ ಕರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ದುರಂತದಲ್ಲಿ ಪುಟ್ಟ ಕಂದಮ್ಮವೊಂದು ಬದುಕುಳಿದಿದೆ.

    ವಿಮಾನ ಭೀಕರ ದುರಂತಕ್ಕೀಡಾದ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ರಕ್ಷಣಾ ಸಿಬ್ಬಂದಿಗೆ ಪುಟ್ಟ ಮಗುವೊಂದು ಅಳುತ್ತಿರುವ ಶಬ್ದ ಕೇಳಿದೆ. ಕೂಡಲೇ ಎಚ್ಚೆತ್ತ ಸಿಬ್ಬಂದಿ ಮಗುವಿನ ಅಳು ಕೇಳುತ್ತಿರುವ ಕಡೆ ತೆರಳಿ ರಕ್ಷಿಸಿದ್ದಾರೆ. ಘಟನೆಯಿಂದ ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಕೊಂಡ್ರೊಟ್ಟಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ.

    ಈ ಸಂಬಂಧ ಸಿವಿಲ್ ಪೊಲಿಸ್ ಅಧಿಕಾರಿ ಮಗುವನ್ನು ಹಿಡಿದ ಫೋಟೋದೊಂದಿಗೆ ಆಡಿಯೋ ಬಿಡುಗಡೆ ಮಾಡಿದ್ದು, ದುಬೈನಿಂದ ಬಂದ ವಿಮಾನ ಇಲ್ಲಿ ಅವಘಡಕ್ಕೆ ತುತ್ತಾಗಿದೆ. ಘಟನೆಯಲ್ಲಿ ಮಗುವೊಂದು ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ಮಗುವಿಗೆ ಯಾರೂ ಇಲ್ಲ. ಮಗುವನ್ನು ಆಸ್ಪತ್ರೆಗೆ ದಾಖಲಿಸುವುದಾಗಿ ತಿಳಿಸಿದ್ದಾರೆ.

    ಇಂದು ಸಂಜೆ 7.45ರ ಸುಮಾರಿಗೆ ದುಬೈನಿಂದ ಕೋಯಿಕ್ಕೋಡ್ ಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಗೆ ವೇಳೆ ನಿಲ್ದಾಣದ ರನ್ ವೇಯಲ್ಲಿ ಜಾರಿ ದುರಂತಕ್ಕೀಡಾಗಿದೆ. ಲ್ಯಾಂಡಿಂಗ್ ವೇಳೆ ಬೆಂಕಿ ಹೊತ್ತಿಕೊಂಡಿಲ್ಲ. ವಿಮಾನದಲ್ಲಿ 174 ಮಂದಿ ಪ್ರಯಾಣಿಕರಿದ್ದರು. 10 ಮಂದಿ ಮಕ್ಕಳು, ಇಬ್ಬರು ಪೈಲಟ್‍ಗಳು ಹಾಗೂ ಐವರು ಕ್ಯಾಬಿನ್ ಸಿಬ್ಬಂದಿ ಇದ್ದರು. ಸದ್ಯ ಪ್ರಯಾಣಿಕರ ರಕ್ಷಣಾ ಕಾರ್ಯ ಭರದಿಂದ ಸಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ.

  • ‘Proud Of You’ – ಏರ್ ಇಂಡಿಯಾ ಸೇವೆಗೆ ಪಾಕ್ ಮೆಚ್ಚುಗೆ

    ‘Proud Of You’ – ಏರ್ ಇಂಡಿಯಾ ಸೇವೆಗೆ ಪಾಕ್ ಮೆಚ್ಚುಗೆ

    ನವದೆಹಲಿ: “ನಿಮ್ಮ ಬಗ್ಗೆ ನಮಗೆ ಹೆಮ್ಮೆ ಆಗುತ್ತಿದೆ” – ಹೀಗೆ ಕರೆಯುವ ಮೂಲಕ ಕೊರೊನಾ ಸಂಕಷ್ಟದ ಸಮಯದಲ್ಲಿ ಭಾರತದ ಸಹಕಾರವನ್ನು ಪಾಕಿಸ್ತಾನ ಶ್ಲಾಘಿಸಿದೆ.

    ಹೌದು. ಅಂತರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ವಿರುದ್ಧ ಸದಾ ದೂರಿಕೊಂಡೇ ಬರುತ್ತಿರುವ ಪಾಕಿಸ್ತಾನ ಕೊರೊನಾದಿಂದ ಆಗಿರುವ ಸಮಸ್ಯೆಯನ್ನು ಏರ್ ಇಂಡಿಯಾ ಬಗೆ ಹರಿಸುತ್ತಿರುವುದನ್ನು ನೋಡಿ ಮೆಚ್ಚುಗೆ ಸೂಚಿಸಿದೆ.

    ಆಗಿದ್ದೇನು?
    ಲಾಕ್‍ಡೌನ್ ಘೋಷಣೆಯಾದ ಬಳಿಕ ಭಾರತ ಸರ್ಕಾರ ಸಂಪೂರ್ಣವಾಗಿ ವಿದೇಶಿ ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಿತ್ತು. ಈ ನಿಷೇಧ ಕೈಗೊಳ್ಳುವ ಮುನ್ನವೇ ಹಲು ದೇಶಗಳಿಂದ ಪ್ರಯಾಣಿಕರು ಭಾರತಕ್ಕೆ ಆಗಮಿಸಿದ್ದರು. ವಿಮಾನ ಸೇವೆ ರದ್ದಾದ ಹಿನ್ನೆಲೆಯಲ್ಲಿ ವಿವಿಧ ರಾಯಭಾರ ಕಚೇರಿಗಳ ಮನವಿಗೆ ಸ್ಪಂದಿಸಿದ ಭಾರತ ಏರ್ ಇಂಡಿಯಾ ವಿಶೇಷ ವಿಮಾನದ ಮೂಲಕ ಈ ಪ್ರಯಾಣಿಕರನ್ನು ವಿದೇಶಕ್ಕೆ ಕಳುಹಿಸಿಕೊಡುತ್ತಿದೆ.

    ಏಪ್ರಿಲ್ 2 ರಂದು ಮುಂಬೈ ವಿಮಾನ ನಿಲ್ದಾಣದಿಂದ ಜರ್ಮನಿಯ ಫ್ರಾಂಕ್‍ಫರ್ಟ್ ವಿಮಾನ ನಿಲ್ದಾಣಕ್ಕೆ ಯುರೋಪ್ ಪ್ರಜೆಗಳನ್ನು ಹೊತ್ತುಕೊಂಡು ಏರ್ ಇಂಡಿಯಾ ಸಾಗುತಿತ್ತು. ಏರ್ ಇಂಡಿಯಾ ಪಾಕಿಸ್ತಾನದ ಫ್ಲೈಟ್ ಇನ್ಫಾರ್ಮೆಶನ್ ರಿಜನ್(ಎಫ್‍ಐಆರ್) ತಲುಪುತ್ತಿದ್ದಂತೆ ಪಾಕಿಸ್ತಾನ ಏರ್ ಟ್ರಾಫಿಕ್ ಕಂಟ್ರೋಲರ್(ಎಟಿಸಿ) ಅಸಲಾಂ ವಾಲಿಕುಮ್ ಎಂದು ಹೇಳಿ ಸ್ವಾಗತಿಸಿದ್ದಾರೆ.

    “ಇದು ಫ್ರಾಂಕ್‍ಫರ್ಟ್‍ಗೆ ತೆರಳುತ್ತಿರುವ ಪರಿಹಾರ ವಿಮಾನವಲ್ಲವೇ ದೃಢಪಡಿಸಿ” ಎಂದು ಪಾಕ್ ಎಟಿಸಿ ಹೇಳಿದೆ. ಇದಕ್ಕೆ ಕ್ಯಾಪ್ಟನ್, “ಹೌದು” ಎಂದು ಉತ್ತರಿಸಿದ್ದಾರೆ.

    ಈ ವೇಳೆ “ಇಂತಹ ಕಠಿಣ ಪರಿಸ್ಥಿತಿಯಲ್ಲೂ ನೀವು ವಿಶೇಷ ವಿಮಾನ ಸೇವೆ ನೀಡುತ್ತಿದ್ದೀರಿ. ನಮಗೆ ತುಂಬಾ ಹೆಮ್ಮೆ ಆಗುತ್ತಿದೆ. ಗುಡ್ ಲಕ್” ಎಂದು ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನು ಕೇಳಿ ಭಾರತದ ಕ್ಯಾಪ್ಟನ್ ಆಶ್ಚರ್ಯಗೊಂಡು “ಧನ್ಯವಾದಗಳು” ಎಂದು ಪ್ರತಿಕ್ರಿಯಿಸಿದ್ದರೆ.

    ಪ್ರಯಾಣದ ಸಂದರ್ಭದಲ್ಲಿ ಭಾರತದ ವಿಮಾನಕ್ಕೆ ಇರಾನ್ ವಾಯುಸೀಮೆಯ ರೇಡಾರ್ ಸಂಪರ್ಕಕಕ್ಕೆ ಸಿಕ್ಕಿರಲಿಲ್ಲ. ಈ ವಿಚಾರವನ್ನು ಭಾರತದ ಕ್ಯಾಪ್ಟನ್ ಪಾಕಿಸ್ತಾನದ ಎಟಿಸಿಗೆ ತಿಳಿಸಿದ್ದಾರೆ. ಕೂಡಲೇ ಪಾಕ್ ಎಟಿಸಿ ಇರಾಕ್ ಟೆಹರಾನ್ ಎಟಿಸಿ ಜೊತೆ ಸಂಪರ್ಕಿಸಿ ಸಹಾಯ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಏರ್ ಇಂಡಿಯಾ ಪೈಲಟ್ ಮಾತನಾಡಿ, “ನನ್ನ ಜೀವನದಲ್ಲಿ ಮೊದಲ ಬಾರಿಗೆ ನೇರವಾದ ದಾರಿಯಲ್ಲಿ ಪ್ರಯಾಣಿಸಿದ್ದೇನೆ. ಇರಾನ್ ನೇರ ಮತ್ತು ಹತ್ತಿರವಾದ ದಾರಿಯನ್ನು ಏರ್‍ಲೈನ್ಸ್ ಕಂಪನಿಗಳಿಗಳಿಗೆ ನೀಡುವುದು ಬಹಳ ಅಪರೂಪ. ಈ ವಾಯು ದಾರಿ ಇರಾನಿನ ರಕ್ಷಣೆಗೆ ಮಾತ್ರ ಮೀಸಲು. ಆದರೆ ಇರಾನ್ ಎಟಿಸಿ ನೇರವಾದ ದಾರಿಯನ್ನು ನೀಡಿದ್ದು ಮಾತ್ರವಲ್ಲದೇ ಅವರ ವಾಯು ಸೀಮೆಯನ್ನು ದಾಟುವಾಗ ‘ಆಲ್ ದಿ ಬೆಸ್ಟ್’ ಎಂದು ಹೇಳಿ ಮೆಚ್ಚುಗೆ ಸೂಚಿಸಿದರು ಎಂಬುದಾಗಿ ತಿಳಿಸಿದ್ದಾರೆ.

    ಇರಾನ್ ಬಳಿಕ ಟರ್ಕಿ ವಾಯು ಸೀಮೆಯನ್ನು ಬಳಸಿ ಏರ್ ಇಂಡಿಯಾ ವಿಮಾನ ಜರ್ಮನಿಯ ಫ್ರಾಂಕ್‍ಫರ್ಟ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿದೆ. ಏರ್ ಇಂಡಿಯಾ ವಿಮಾನ ಬೆಳಗ್ಗೆ 9:15ಕ್ಕೆ ಲ್ಯಾಂಡ್ ಆಗಬೇಕಿತ್ತು. ಆದರೆ ಪಾಕಿಸ್ತಾನ ಮತ್ತು ಎಟಿಸಿ ಅಧಿಕಾರಿಗಳ ಸಹಾಯದಿಂದ 45 ನಿಮಿಷ ಬೇಗ ಅಂದರೆ 8:30ಕ್ಕೆ ಲ್ಯಾಂಡ್ ಆಗಿದೆ.

    ಜರ್ಮನಿ, ಫ್ರಾನ್ಸ್, ಐರ್ಲೆಂಡ್ ಮತ್ತು ಕೆನಡಾದ ರಾಯಭಾರ ಕಚೇರಿ ಮನವಿಯ ಮೇರೆಗೆ ಏರ್ ಇಂಡಿಯಾ ಭಾರತದಲ್ಲಿ ಅತಂತ್ರರಾಗಿರುವ ಆ ದೇಶಗಳ ಪ್ರಜೆಗಳನ್ನು 18 ವಿಶೇಷ ವಿಮಾನಗಳ ಮೂಲಕ ಕಳುಹಿಸಿ ಕೊಡುತ್ತಿದೆ. ಈ ವಿಮಾನದಲ್ಲೇ ಚೀನಾದಿಂದ ಬರುತ್ತಿರುವ ಕೊರೊನಾಗೆ ಸಂಬಂಧಿಸಿದ ವೈದ್ಯಕೀಯ ಪರಿಕರಗಳನ್ನು ಏರ್ ಇಂಡಿಯಾ ವಿಮಾನಗಳು ವಿದೇಶಕ್ಕೆ ಕಳುಹಿಸುತ್ತಿವೆ.

  • ಕೊರೊನಾ ಎಫೆಕ್ಟ್ – 6 ದೇಶಗಳಿಗೆ ಏರ್ ಇಂಡಿಯಾ ಸೇವೆ ರದ್ದು

    ಕೊರೊನಾ ಎಫೆಕ್ಟ್ – 6 ದೇಶಗಳಿಗೆ ಏರ್ ಇಂಡಿಯಾ ಸೇವೆ ರದ್ದು

    ನವದೆಹಲಿ: ಕೊರೊನಾ ವೈರಸ್ ಹರಡುವ ಭೀತಿ ಹಿನ್ನೆಲೆಯಲ್ಲಿ ಇಟಲಿ, ಫ್ರಾನ್ಸ್, ಜರ್ಮನಿ, ಇಸ್ರೇಲ್, ದಕ್ಷಿಣ ಕೊರಿಯಾ, ಶ್ರೀಲಂಕಾ ದೇಶಗಳಿಗೆ ಏರ್ ಇಂಡಿಯಾ ವಿಮಾನ ಸೇವೆಯನ್ನು ರದ್ದು ಮಾಡಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಕೊರೊನಾ ಸಾಂಕ್ರಾಮಿಕ ರೋಗ ಎಂದು ಘೋಷಣೆಯಾದ ಬೆನ್ನಲ್ಲೇ ಈ ನಿರ್ಧಾರವನ್ನು ಏರ್ ಇಂಡಿಯಾ ತೆಗೆದುಕೊಂಡಿದ್ದು, ಏಪ್ರಿಲ್ 30ರವರೆಗೂ ಈ ದೇಶಗಳಿಗೆ ಸೇವೆ ರದ್ದು ಮಾಡಲಾಗಿದೆ. ಇದಕ್ಕೂ ಮುನ್ನ ಇಟಲಿ, ಫ್ರಾನ್ಸ್ ಸೇರಿ ಯುರೋಪಿಯನ್ ದೇಶಗಳಿಗೆ ಚಾಲನೆಯಲ್ಲಿದ್ದ ವಿಮಾನ ಹಾರಾಟದ ಸಂಖ್ಯೆಯನ್ನು ಕಡಿಮೆ ಮಾಡಲಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ಸಾಂಕ್ರಾಮಿಕ ರೋಗ ಎಂದು ಘೋಷಣೆ ಮಾಡಿದ ಬೆನ್ನಲ್ಲೇ ಬಳಿಕ ಇಟಲಿ, ಫ್ರಾನ್ಸ್, ಜರ್ಮನಿ, ಇಸ್ರೇಲ್, ದಕ್ಷಿಣ ಕೊರಿಯಾ, ಶ್ರೀಲಂಕಾಕ್ಕೆ ಹಾರಾಟ ರದ್ದು ಮಾಡಿದೆ.

    ಕೊರೊನಾ ವೈರಸ್ ಏಕಾಏಕಿ ಇಟಲಿ, ಫ್ರಾನ್ಸ್, ಜರ್ಮನಿ, ಸ್ಪೇನ್, ಇಸ್ರೇಲ್, ದಕ್ಷಿಣ ಕೊರಿಯಾದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡು ಬಂದಿದ್ದು, ಅಲ್ಲಿಂದ ಭಾರತಕ್ಕೆ ಬರುವ ಪ್ರಯಾಣಿಕರಲ್ಲಿ ಸೋಂಕು ಹೆಚ್ಚು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಏರ್ ಇಂಡಿಯಾ ಮುಖ್ಯಸ್ಥರು ತಿಳಿಸಿದ್ದಾರೆ.

    ಇತ್ತೀಚೆಗೆ ಮಾರ್ಚ್ 13ರಿಂದ ಏಪ್ರಿಲ್ 15ರವರೆಗೆ ರಾಜತಾಂತ್ರಿಕ ಮತ್ತು ಕೆಲವು ವಿಭಾಗಗಳನ್ನು ಹೊರತುಪಡಿಸಿ ಎಲ್ಲಾ ಮಾದರಿ ವೀಸಾಗಳನ್ನು ಅಮಾನತುಗೊಳಿಸಲು ಬುಧವಾರ ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು.

  • ‘ಪ್ಲೀಸ್ ನಮ್ಮನ್ನು ರಕ್ಷಿಸಿ’ – ಇಟಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ 50ಕ್ಕೂ ಹೆಚ್ಚು ಕನ್ನಡಿಗರು

    ‘ಪ್ಲೀಸ್ ನಮ್ಮನ್ನು ರಕ್ಷಿಸಿ’ – ಇಟಲಿ ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿದ್ದಾರೆ 50ಕ್ಕೂ ಹೆಚ್ಚು ಕನ್ನಡಿಗರು

    – ಪಬ್ಲಿಕ್ ಟಿವಿ ಜೊತೆ ನೋವು ತೋಡಿಕೊಂಡ ಪ್ರಯಾಣಿಕರು
    – ಕೊರೊನಾಗೆ ಇಟಲಿ ಬಂದ್
    – ಪ್ರತಿ ದಿನ ನಿಯಮ ಬದಲಾಗುತ್ತಿದೆ

    ರೋಮ್: ಕೊರೊನಾ ದಾಳಿಗೆ ಇಟಲಿ ಸಂಪೂರ್ಣ ಬಂದ್ ಆಗಿದ್ದು, ರೋಮ್ ಏರ್‌ಪೋರ್ಟ್‌ನಲ್ಲಿ 50ಕ್ಕೂ ಹೆಚ್ಚು ಕನ್ನಡಿಗರು ಸಿಲುಕಿದ್ದಾರೆ. ವಿಮಾನ ನಿಲ್ದಾಣದಲ್ಲಿ ಸಿಲುಕಿಕೊಂಡಿರುವ ಕನ್ನಡಿಗರು ಪಬ್ಲಿಕ್ ಟಿವಿ ಜೊತೆ ಮಾತನಾಡುವ ಮೂಲಕ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.

    ನಿರುಪಮಾ ಗೌಡ ಎಂಬವರು ಮಾತನಾಡಿ, “ನಾವೆಲ್ಲಾ ಇಲ್ಲಿ ಸಿಲುಚಿನಿ ಏರ್‌ಪೋರ್ಟ್‌ನಲ್ಲಿ ಸಿಲುಕಿ ಹಾಕಿಕೊಂಡಿದ್ದೇವೆ. ಭಾರತದಿಂದ ಫ್ಲೈಟ್ ಯಾವಾಗ ಬರುತ್ತೆ ಎಂದು ಕಾಯುತ್ತಿದ್ದೇವೆ. ಯಾವಾಗ ಬರುತ್ತೆ ಎನ್ನುವ ಮಾಹಿತಿಯೇ ಇನ್ನು ಸಿಕ್ಕಿಲ್ಲ. ಬುಧವಾರ ಸಂಜೆಯಿಂದ ನಾವು ಕಾಯುತ್ತಿದ್ದೇವೆ. ನಾವು ಏರ್‍ ಇಂಡಿಯಾ ಫ್ಲೈಟ್ ಬುಕ್ ಮಾಡಿದ್ದೇವೆ. ಆದರೆ ಇದುವರೆಗೆ ಯಾವುದೇ ಅಪ್ಡೇಟ್ ಬಂದಿಲ್ಲ. ಚಿಕ್ಕಪುಟ್ಟ ದೇಶವಾದ ಶ್ರೀಲಂಕಾದವರನ್ನು ಹಾಗೂ ಬೇರೆ ದೇಶದವರನ್ನು ಕರೆಸಿಕೊಳ್ಳುತ್ತಿದ್ದಾರೆ. ಆದರೆ ನಮ್ಮ ದೇಶದಿಂದ ಯಾವುದೇ ಪ್ರತಿಕ್ರಿಯೆ ಬರುತ್ತಿಲ್ಲ. ನಾವು ಈವರೆಗೆ ಆರೋಗ್ಯವಾಗಿದ್ದೇವೆ. ಇನ್ನು 2 ದಿನ ಇಲ್ಲೇ ಇದ್ದರೆ ಆರೋಗ್ಯ ಸಮಸ್ಯೆ ಎದುರಾಗುತ್ತೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಮದನ್ ಗೌಡ ಎಂಬವರು,”ನಾನು ಸೋಮವಾರ ಫ್ಲೈಟ್ ಬುಕ್ ಮಾಡಿದ್ದೆ. ಏರ್ ಇಂಡಿಯಾ ವೆಬ್‍ಸೈಟ್‍ನಲ್ಲಿ ಯಾವುದೇ ದಾಖಲೆ ಕಡ್ಡಾಯ, ನೀವು ಕೊಡಲೇಬೇಕು ಎಂದು ಕೊಟ್ಟಿರಲಿಲ್ಲ. ನಾವು ರಾಯಭಾರ ಜೊತೆ ಮಾತನಾಡಿದ್ದೇವೆ. ಇಟಲಿಯಲ್ಲಿ ಹೊರಗಡೆ ಬರುವುದಕ್ಕೆ ಜನರು ಹೆದರುತ್ತಿದ್ದಾರೆ. ಇಟಲಿ ಸರ್ಕಾರ ತುಂಬಾ ಕಠಿಣವಾದ ರೂಲ್ಸ್ ತರುತ್ತಿದೆ. ಪ್ರತಿದಿನ ರೂಲ್ಸ್ ಚೇಂಜ್ ಆಗುತ್ತಿದೆ. ವಿಮಾನ ನಿಲ್ದಾಣದಲ್ಲಿ ತುಂಬಾ ರಿಸ್ಕ್ ಇದೆ. ಇಲ್ಲಿ ಫ್ಲೈಟ್ ಟೈಮ್ಮಿಂಗ್ ಚೇಂಜ್ ಮಾಡುತ್ತಿದ್ದಾರೆ. ಏರ್‌ಪೋರ್ಟ್‌ನಲ್ಲಿ ಸೋಂಕು ಹರಡುವ ಸಾಧ್ಯತೆ ಜಾಸ್ತಿ ಇದೆ. ಹೊರಗಡನೇ ಹೋಗಬಾರದು ಎನ್ನುವ ಈ ಟೈಮಲ್ಲಿ ಏನೂ ಮಾಹಿತಿ ಕೊಡದೇ ಏರ್‌ಪೋರ್ಟ್‌ನಲ್ಲಿ ಕೂಡಿ ಹಾಕಿದ್ರೆ ಎಷ್ಟು ಜನರಿಗೆ ಸೋಂಕು ಹರಡಬಹುದು. ನೀವೇ ನಿಮ್ಮ ಪ್ರಜೆಗಳನ್ನು ರಿಸ್ಕ್ ಗೆ ಸಿಲುಕಿಸುತ್ತಿದ್ದೀರ. ಯಾರಿಗಾದರೂ ಸೋಂಕು ತಗುಲಿದರೆ ಇದಕ್ಕೆಲ್ಲಾ ನೇರ ಕಾರಣ ಭಾರತ ಸರ್ಕಾರ ಹಾಗೂ ಏರ್ ಇಂಡಿಯಾನೇ ಎಂದು ಆಕ್ರೋಶ ಹೊರಹಾಕಿದರು.

    ಇದೇ ವೇಳೆ ಮತ್ತೊಬ್ಬ ವ್ಯಕ್ತಿ,”ಏರ್ ಇಂಡಿಯಾ ವಿಮಾನದಲ್ಲಿ ನಮ್ಮನ್ನು ಕರೆದೊಯ್ದಿಲ್ಲ. ನಾವು ವಾರದ ಮುಂಚೆಯೇ ಟಿಕೆಟ್ ಬುಕ್ ಮಾಡಿದ್ದೀವಿ. ಆದರೆ ಇಲ್ಲಿ ಈಗ ಮೆಡಿಕಲ್ ಸರ್ಟಿಫಿಕೇಟ್ ನೀಡಬೇಕೆಂದು ಹೇಳುತ್ತಿದ್ದಾರೆ. ಸರ್ಟಿಫಿಕೇಟ್ ನೀಡಿದ ಮೇಲೆ ಪರಿಶೀಲಿಸಿ ನಿಮ್ಮ ಪ್ರಯಾಣವನ್ನು ರೀಶೆಡ್ಯೂಲ್ ಮಾಡುತ್ತೇವೆ ಎನ್ನುತ್ತಿದ್ದಾರೆ. ನಮಗೆ ಮಾಹಿತಿ ನೀಡಲೂ ಸಹ ಇಲ್ಲಿ ಯಾರೂ ಇಲ್ಲ. ನಾವು ಇಲ್ಲಿ ಸಿಲುಕಿಕೊಂಡಿದ್ದೇವೆ. ದಯವಿಟ್ಟು ನಮ್ಮನ್ನು ಇಲ್ಲಿಂದ ರಕ್ಷಿಸಬೇಕೆಂದು ಮನವಿ ಮಾಡುತ್ತೇನೆ” ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

     

     

     

     

     

     

     

     

    ಡಿಸಿಎಂ ಅಶ್ವಥ್ ನಾರಾಯಣ ತನ್ನ ಟ್ವಿಟ್ಟರಿನಲ್ಲಿ, ಇಟಲಿ ಸೇರಿದಂತೆ ಕೊರೊನಾ ಪೀಡಿತ ಹೊರದೇಶಗಳಲ್ಲಿರುವ ಕನ್ನಡಿಗರನ್ನು ಕರೆತರಲು ನಮ್ಮ ಸರ್ಕಾರ ಕೇಂದ್ರದ ಪ್ರಧಾನಿ ಮೋದಿ ಸರ್ಕಾರದ ಜೊತೆಗೆ ಸಹಕರಿಸಿ ಕಾರ್ಯೋನ್ಮುಖವಾಗಿದೆ. ತಜ್ಞ ವೈದ್ಯರನ್ನು ಕರೆದುಕೊಂಡು ಹೋಗಿ ಅಲ್ಲಿಯೇ ತೀವ್ರ ತಪಾಸಣೆಗೆ ಒಳಪಡಿಸಿ ಸುರಕ್ಷತೆಯಿಂದ ಅವರನ್ನು ಇಲ್ಲಿಗೆ ವಾಪಸ್ ಕರೆತರಲಾಗುವುದು ಎಂದು ಟ್ವೀಟ್ ಮಾಡಿ ಭರವಸೆ ನೀಡಿದ್ದಾರೆ.

  • ಸುರಕ್ಷತಾ ನಿಯಮ ಉಲ್ಲಂಘನೆ – ಮೂವರು ಪೈಲೆಟ್ ಅಮಾನತು

    ಸುರಕ್ಷತಾ ನಿಯಮ ಉಲ್ಲಂಘನೆ – ಮೂವರು ಪೈಲೆಟ್ ಅಮಾನತು

    ನವದೆಹಲಿ: ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನ ಜಾರಿ ನಿರ್ದೇಶನಾಲಯ ಮೂವರು ಪೈಲೆಟ್‍ಗಳನ್ನು ಅಮಾನತುಗೊಳಿಸಿದೆ.

    ಒಬ್ಬರು ಏರ್ ಇಂಡಿಯಾ ಹಾಗೂ ಇನ್ನಿಬ್ಬರು ಸ್ಪೈಸ್ ಜೆಟ್ ವಿಮಾನದ ಪೈಲೆಟ್‍ಗಳನ್ನು ಸುರಕ್ಷತೆಯ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ಅಮಾನತುಗೊಂಡಿದ್ದಾರೆ. ಮೂವರು ಪೈಲೆಟ್‍ಗಳ ಜೊತೆಗೆ ಓರ್ವ ಏರ್ ಇಂಡಿಯಾ ಕ್ಯಾಬಿನ್ ಸಿಬ್ಬಂದಿಯೂ ಅಮಾನತುಗೊಂಡಿದ್ದಾರೆ.

    ಕೊಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡುವಾಗ ರನ್ ವೇ ಅಂಚಿನಲ್ಲಿರುವ ದೀಪಗಳಿಗೆ ಹಾನಿಯಾಗಿತ್ತು. ಹೀಗಾಗಿ ಸ್ಪೈಸ್ ಜೆಟ್ ವಿಮಾನದ ಇಬ್ಬರು ಪೈಲೆಟ್‍ಗಳ ಫ್ಲೈಯಿಂಗ್ ಪರವಾನಗಿ(ಲೈಸೆನ್ಸ್)ಗಳನ್ನು ಆರು ತಿಂಗಳುಗಳ ಕಾಲ ಅಮಾನತುಗೊಳಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಜುಲೈ 2ರಂದು ಪುಣೆ-ಕೊಲ್ಕತ್ತಾ ಮಧ್ಯೆ ಆರತಿ ಗುಣಶೇಖರನ್ ಹಾಗೂ ಸೌರಭ್ ಗುಲಿಯಾ ವಿಮಾನ ಹಾರಿಸುತ್ತಿದ್ದರು. ಈ ವೇಳೆ ನಡೆದ ಘಟನೆಯ ಹಿನ್ನೆಲೆಯಲ್ಲಿ ಇಬ್ಬರನ್ನು ಅಮಾನತುಗೊಳಿಸಲಾಗಿದೆ.

    ಘಟನೆ ಕುರಿತು ತನಿಖೆ ನಡೆಸಲಾಗಿದ್ದು, ಸ್ಪೈಸ್ ಜೆಟ್ ವಿಮಾನ ರನ್ ವೇ hಡಿeshoಟಜ ಠಿoiಟಿಣ ನಿಂದ 1300 ಅಡಿಗಳಷ್ಟು ದೂರ ಚಲಿಸಿ ಬಲಗಡೆ ಅಂಚಿನಲ್ಲಿರುವ ದೀಪಗಳಿಗೆ ಹಾನಿ ಮಾಡಿದ ಹಿನ್ನೆಲೆಯಲ್ಲಿ ಶಿಸ್ತು ಕ್ರಮ ಕೈಗೊಳ್ಳಲಾಗಿದೆ.

  • ಪ್ರತಿ ನಿತ್ಯ ಸೆಕ್ಸ್ ಬೇಕಾ? ಮಹಿಳಾ ಪೈಲಟ್‍ಗೆ ಪ್ರಶ್ನಿಸಿದ ಕ್ಯಾಪ್ಟನ್

    ಪ್ರತಿ ನಿತ್ಯ ಸೆಕ್ಸ್ ಬೇಕಾ? ಮಹಿಳಾ ಪೈಲಟ್‍ಗೆ ಪ್ರಶ್ನಿಸಿದ ಕ್ಯಾಪ್ಟನ್

    ನವದೆಹಲಿ: ಏರ್ ಇಂಡಿಯಾ ಹಿರಿಯ ಕ್ಯಾಪ್ಟನ್ ತನ್ನ ಸಹದ್ಯೋಗಿ ಮಹಿಳಾ ಪೈಲಟ್ ಗೆ ಪ್ರತಿನಿತ್ಯ ಸೆಕ್ಸ್ ಬೇಕಲ್ಲವೆ ಎಂದು ಪ್ರಶ್ನಿಸಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಮಹಿಳೆ ಕ್ಯಾಪ್ಟನ್ ವಿರುದ್ಧ ದೂರು ದಾಖಲಿಸಿದ್ದಾರೆ. ಈಗಾಗಲೇ ಏರ್ ಇಂಡಿಯಾ ಈ ಸಂಬಂಧ ವಿಚಾರಣೆಯನ್ನು ನಡೆಸುತ್ತಿದೆ.

    ಏನಿದು ಪ್ರಕರಣ?
    ಕ್ಯಾಪ್ಟನ್ ಮಾರ್ಗದರ್ಶನದಲ್ಲಿ ನನ್ನ ತರಬೇತಿ ಮುಗಿದಿತ್ತು. ಮೇ 5ರಂದು ಕ್ಯಾಪ್ಟನ್ ಹೈದರಾಬಾದ್ ರೆಸ್ಟೊರೆಂಟ್ ನಲ್ಲಿ ಊಟಕ್ಕೆ ನನ್ನನ್ನು ಆಹ್ವಾನಿಸಿದ್ದರು. ಕ್ಯಾಪ್ಟನ್ ಆಗಿದ್ದರಿಂದ ಅವರ ಮೇಲಿನ ಗೌರವದಿಂದ ರಾತ್ರಿ ಸುಮಾರು 8 ಗಂಟೆಗೆ ಔತಣಕೂಟಕ್ಕೆ ತೆರಳಿದ್ದೆ ಎಂದು ಮಹಿಳಾ ಪೈಲಟ್ ದೂರಿನಲ್ಲಿ ತಿಳಿಸಿದ್ದಾರೆ.

    ಊಟ ಮಾಡಲು ಆರಂಭಿಸುತ್ತಿದ್ದಂತೆ ಕ್ಯಾಪ್ಟನ್ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಲು ಆರಂಭಿಸಿದರು. ಹೀಗೆ ಮಾತನಾಡುತ್ತಾ ನಿನ್ನ ಪತಿ ಕೆಲಸದ ನಿಮಿತ್ತ ಮನೆಯಿಂದ ಹೊರಗೆ ಇರ್ತಾರೆ. ನೀನು ಎಲ್ಲವನ್ನು ಹೇಗೆ ನಿಭಾಸ್ತೀಯಾ? ಪ್ರತಿದಿನ ನಿನಗೆ ಸೆಕ್ಸ್ ಅವಶ್ಯಕವೆಂದು ಅನ್ನಿಸಲ್ವಾ ಎಂದು ಪ್ರಶ್ನೆ ಮಾಡಿದ್ದಾನೆ. ಕ್ಯಾಪ್ಟನ್ ಅಸಹ್ಯ ಮಾತುಗಳಿಂದ ಬೇಸರಗೊಂಡ ಮಹಿಳೆ ಈ ರೀತಿ ಕೇಳುವುದು ತಪ್ಪು ಎಂದು ತಿಳಿಸಿ ರೆಸ್ಟೊರೆಂಟ್ ನಿಂದ ಹೊರಬಂದಿದ್ದಾರೆ. ಸ್ವಲ್ಪವೂ ತಡಮಾಡದೇ ಕ್ಯಾಬ್ ಬುಕ್ ಮಾಡಿಕೊಂಡು ಮನೆ ತಲುಪಿದ್ದಾರೆ.

    ಮರುದಿನ ಮಹಿಳೆ ತನಗಾದ ಲೈಂಗಿಕ ದೌರ್ಜನ್ಯದ ಬಗ್ಗೆ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ಕ್ಯಾಪ್ಟನ್ ವಿರುದ್ಧ ದೂರು ಸಲ್ಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಸಿರುವ ಏರ್ ಇಂಡಿಯಾ ತನಿಖೆಗೆ ಆದೇಶಿಸಿದೆ.

  • ಜೆಟ್ ಏರ್‍ವೇಸ್ ಬಳಿಕ ಸಂಕಟದಲ್ಲಿ ಏರ್ ಇಂಡಿಯಾ!

    ಜೆಟ್ ಏರ್‍ವೇಸ್ ಬಳಿಕ ಸಂಕಟದಲ್ಲಿ ಏರ್ ಇಂಡಿಯಾ!

    – 9 ಸಾವಿರ ಕೋಟಿ ಸಾಲದ ಸುಳಿಯಲ್ಲಿ ಏರ್ ಇಂಡಿಯಾ

    ನವದೆಹಲಿ: ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‍ವೇಸ್ ತನ್ನ ಸೇವೆಯನ್ನು ನಿಲ್ಲಿಸಿದೆ. ಇದೀಗ ಸರ್ಕಾರದ ಏರ್ ಇಂಡಿಯಾ ಸಹ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ.

    ಈ ಆರ್ಥಿಕ ವರ್ಷದಲ್ಲಿ ಏರ್ ಇಂಡಿಯಾ ಬರೋಬ್ಬರಿ 9 ಸಾವಿರ ಕೋಟಿ ರೂ. ಸಾಲವನ್ನು ಮರುಪಾವತಿಸಬೇಕಿದೆ. ಪ್ರತಿನಿತ್ಯ 6 ಕೋಟಿ ರೂ. ನಷ್ಟ ಅನುಭವಿಸುತ್ತಿರುವ ಏರ್ ಇಂಡಿಯಾ ಸಾಲ ಹೇಗೆ ಮರುಪಾವತಿಸುತ್ತದೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಸರ್ಕಾರದ ಒಂದು ವೇಳೆ ಹಣಕಾಸಿನ ವ್ಯವಸ್ಥೆಯನ್ನು ಕಲ್ಪಿಸಿದರೆ ಮಾತ್ರ ಏರ್ ಇಂಡಿಯಾ ಜೊತೆಗೆ ಜೆಟ್ ಏರ್‍ವೇಸ್ ಕಂಪನಿಗಳು ಉಳಿದುಕೊಳ್ಳುತ್ತೇವೆ ಎಂದು ಹೇಳಲಾಗುತ್ತಿದೆ.

    ಏರ್ ಇಂಡಿಯಾದ ಈ ಮೊದಲಿನ ಸಾಲವನ್ನ ಪಾವತಿಸಿದ್ದ ಸರ್ಕಾರ, ಮುಂದಿನ ದಿನಗಳಲ್ಲಿ ಯಾವುದೇ ಈಕ್ವಿಟಿ ಶೇರ್‍ಗಳನ್ನು ಪಡೆಯಲ್ಲ ಹಾಗೂ ಹಣಕಾಸಿನ ಸಹಾಯಕ್ಕೆ ಮುಂದಾಗಲ್ಲ ಎಂದು ಎಚ್ಚರಿಕೆ ನೀಡಿತ್ತು. ಆರ್ಥಿಕ ಸಚಿವಾಲಯದ ಅಧಿಕಾರಿಗಳ ಪ್ರಕಾರ, ಏರ್ ಇಂಡಿಯಾ ಭವಿಷ್ಯ ಲೋಕಸಭಾ ಚುನಾವಣೆಯ ಫಲಿತಾಂಶದ ಮೇಲೆ ನಿಂತಿದೆ. ಮತ್ತೊಮ್ಮೆ ಎನ್‍ಡಿಎ ಮೈತ್ರಿಕೂಟ ಸರ್ಕಾರ ರಚಿಸಿದ್ದಲ್ಲಿ, ಬಂಡವಾಳ ಹೂಡುವಂತೆ ಪ್ರಧಾನಿಗಳಿಗೆ ಮನವಿ ಮಾಡಿಕೊಳ್ಳಲಾಗುವುದು. ಸರ್ಕಾರಿ ಕಂಪನಿ ಆಗಿದ್ದರಿಂದ ಮರು ಹೂಡಿಕೆಗೆ ಸರ್ಕಾರ ಮುಂದಾಗಬಹುದು ಎಂದು ಹೇಳುತ್ತಾರೆ.

    54 ಸಾವಿರ ಕೋಟಿ ಸಾಲ:
    ಮೂಲಗಳ ಪ್ರಕಾರ ಏರ್ ಇಂಡಿಯಾ 54 ಸಾವಿರ ಕೋಟಿ ರೂ. ಸಾಲದ ಸುಳಿಯಲ್ಲಿ ಸಿಲುಕಿದೆ. ಕಂಪನಿಯನ್ನು ಉಳಿಸಲು ಕಳೆದ ಆರ್ಥಿಕ ವರ್ಷದಲ್ಲಿ ಸರ್ಕಾರ ಕಂಪನಿಯ ಶೇ.76ರಷ್ಟು ಶೇರುಗಳನ್ನು ಮಾರಾಟ ಮಾಡುವಲ್ಲಿ ವಿಫಲವಾಗಿತ್ತು. ಕೊನೆಗೆ ವಿಶೇಷ ಪ್ಯಾಕೇಜ್ ಹೆಸರಿನಲ್ಲಿ ವೆಹಿಕಲ್ ಏರ್ ಇಂಡಿಯಾ ಅಸೆಟ್ ಹೋಲ್ಟಿಂಗ್ಸ್ ಲಿಮಿಟೆಡ್ ಖಾತೆಗೆ 29 ಸಾವಿರ ಕೋಟಿ ರೂ. ಹಣವನ್ನು ವರ್ಗಾವಣೆ ಮಾಡಿತ್ತು. ಈ ಹಣಕ್ಕೆ ಏರ್ ಇಂಡಿಯಾ ಕಂಪನಿ ಸರ್ಕಾರಕ್ಕೆ ವಾರ್ಷಿಕ 4,400 ಕೋಟಿ ಬಡ್ಡಿ ಜೊತೆಗೆ 2,700 ಕೋಟಿ ಕಂತು ಪಾವತಿಸಬೇಕಿತ್ತು. ಈ ನಿರ್ಧಾರದಿಂದ ಮುಂದಿನ ಆರ್ಥಿಕ ವರ್ಷಗಳಲ್ಲಿ ಏರ್ ಇಂಡಿಯಾದ ಹಣಕಾಸಿನ ಪರಿಸ್ಥಿತಿ ಸುಧಾರಿಸಬಹುದು ಎಂದು ಅಂದಾಜಿಸಿತ್ತು. ಆದ್ರೆ ಕಂಪನಿ ಆರ್ಥಿಕ ಪರಿಸ್ಥಿತಿ ಸುಧಾರಣೆಯ ಬದಲು ಮತ್ತಷ್ಟು ಹದೆಗೆಡುತ್ತಾ ಬಂದಿದೆ.

    ಪ್ರತಿನಿತ್ಯ 6 ಕೋಟಿ ನಷ್ಟ: ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಏರ್ ಇಂಡಿಯಾ ಪ್ರತಿನಿತ್ಯ ಅಂತರರಾಷ್ಟ್ರೀಯ ಸೇವೆಯಲ್ಲಿ 6 ಕೋಟಿ ರೂ. ನಷ್ಟವನ್ನು ಅನುಭವಿಸುತ್ತಿದೆ. ದೇಶದ ಗಡಿ ಪ್ರದೇಶದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣ ಆಗಿದ್ದರಿಂದ ಪಾಕಿಸ್ತಾನ ತನ್ನ ವಾಯು ಮಾರ್ಗವನ್ನು ಬಂದ್ ಮಾಡಿದೆ. ಈ ಹಿನ್ನೆಲೆಯಲ್ಲಿ ಯುರೋಪ್ ಮತ್ತು ಅಮೆರಿಕಾ ಸೇವೆಯಲ್ಲಿ ನಷ್ಟ ಅನುಭಸುವಂತಾಗಿದೆ. ನಷ್ಟ ಸರಿದೂಗಿಸುಕೊಳ್ಳಲು ಕೆಲವು ವಿಮಾನಗಳ ಹಾರಾಟವನ್ನು ನಿಲ್ಲಿಸಿದೆ.

  • ವೈನ್ ಬೇಕು ವೈನ್ – ವಿಮಾನದಲ್ಲಿ ಮಹಿಳೆಯ ರಾದ್ಧಾಂತ: ವಿಡಿಯೋ

    ವೈನ್ ಬೇಕು ವೈನ್ – ವಿಮಾನದಲ್ಲಿ ಮಹಿಳೆಯ ರಾದ್ಧಾಂತ: ವಿಡಿಯೋ

    ನವದೆಹಲಿ: ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ನಡೆಸಿದ್ದ ಐರಿಷ್ ಮಹಿಳಾ ಪ್ರಯಾಣಿಕರೊಬ್ಬರು ವಿಮಾನದ ಸಿಬ್ಬಂದಿ ವೈನ್ ನೀಡಿಲ್ಲ ಎಂದು ಆರೋಪಿಸಿ ರಾದ್ಧಾಂತ ಸೃಷ್ಟಿಸಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    ಮುಂಬೈನಿಂದ ಲಂಡನ್‍ಗೆ ಶನಿವಾರ ಬಿಸಿನೆಸ್ ಕ್ಲಾಸಿನಲ್ಲಿ ಪ್ರಯಾಣ ಬೆಳೆಸಿದ್ದ ಐರಿಷ್ ಮಹಿಳೆ ವಿಮಾನ ಸಿಬ್ಬಂದಿಗೆ ನಿಂದನೆ ಮಾಡಿದ್ದಾಳೆ. ವಿಮಾನದ ಸಿಬ್ಬಂದಿ ಹೆಚ್ಚಿನ ಪ್ರಮಾಣದಲ್ಲಿ ವೈನ್ ನೀಡಲು ನಿರಾಕರಿಸಿದ್ದ ವೇಳೆ ಈ ಘಟನೆ ನಡೆದಿದೆ.

    ಮೊದಲು ಮಹಿಳೆಗೆ ವೈನ್ ಪೂರೈಕೆ ಮಾಡಲಾಗಿದ್ದು, ಆ ಬಳಿಕವೂ ಹೆಚ್ಚಿನ ಪ್ರಮಾಣದಲ್ಲಿ ವೈನ್ ನೀಡುವಂತೆ ಮಹಿಳೆ ಪಟ್ಟು ಹಿಡಿದಿದ್ದಾಳೆ. ಈ ವೇಳೆ ವಿಮಾನ ಸಿಬ್ಬಂದಿ ನಿರಾಕರಿಸಿದ ಕಾರಣ ಆಕೆ ಬಾಯಿಗೆ ಬಂದಂತೆ ಬೈದು ರಾದ್ಧಾಂತ ಮಾಡಿದ್ದಾಳೆ.

    ಮಹಿಳೆಯ ಏರ್ ಇಂಡಿಯಾ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಹಿಳೆ ಎಷ್ಟೇ ಕುಗಾಡಿದರೂ ವಿಮಾನ ಸಿಬ್ಬಂದಿ ತಾಳ್ಮೆಯಿಂದಲೇ ಇದ್ದರು. ಇದನ್ನು ಕಂಡು ಮತ್ತಷ್ಟು ರೊಚ್ಚಿಗೆದ್ದ ಆಕೆ ಸಿಬ್ಬಂದಿ ಮೇಲೆ ಉಗುಳಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಮಹಿಳೆಯ ಅಸಭ್ಯ ವರ್ತನೆಯನ್ನ ವಿಮಾನ ಸಿಬ್ಬಂದಿಯೇ ಮೊಬೈಲ್‍ನಲ್ಲಿ ಸೆರೆ ಹಿಡಿದ್ದಾರೆ. ಅಸಭ್ಯ ವರ್ತನೆ ಕಾರಣ ಲಂಡನ್ ವಿಮಾನ ನಿಲ್ದಾಣದಲ್ಲಿ ಆಕೆಯನ್ನು ಬಂಧಿಸಿದ್ದಾರೆ ಎಂದು ಮಾಧ್ಯಮ ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ತಾನು ಅಂತರಾಷ್ಟ್ರೀಯ ಮಟ್ಟದ ವಕೀಲೆಯಾಗಿದ್ದು, ಪ್ರಯಾಣಿಕರಿಗೆ ಸರಿಯಾದ ಸೇವೆ ನೀಡಲು ನಿಮಗೆ ಆಗುವುದಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾಳೆ. ಘಟನೆ ವೇಳೆ ಸಹಪ್ರಯಾಣಿಕರು ಯಾರು ಮಾತನಾಡದೇ ಸುಮ್ಮನೆ ಕುಳಿತಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews