ಹಾಸನ: ಸರ್ಕಾರಿ ಜಾಗವನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣ ಮಾಡಿರುವ ಆರೋಪ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಅವರ ಪುತ್ರರಿಗೆ ಹಾಸನ ನಗರಸಭೆ ನೋಟಿಸ್ ಜಾರಿ ಮಾಡಿದೆ.
ಸಚಿವರ ಪುತ್ರರಾದ ಪ್ರಜ್ವಲ್ ಮತ್ತು ಸೂರಜ್ ವಿರುದ್ಧ ನಗರಸಭೆ ನೋಟಿಸ್ ನೀಡಿದೆ. 1ನೇ ವಾರ್ಡ್ ವ್ಯಾಪ್ತಿಯ ಬಿಎಂ ರಸ್ತೆಗೆ ಹೊಂದಿಕೊಂಡಂತೆ ಇರುವ ಆಸ್ತಿಯಲ್ಲಿ, 6 ಮೀಟರ್ ಕಟ್ಟಡ ರೇಖೆಯನ್ನು ಉಲ್ಲಂಘಿಸಿ ಕಾನೂನು ಬಾಹಿರವಾಗಿ ಕಟ್ಟಡ ನಿರ್ಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೋಟಿಸ್ ತಲುಪಿದ 7 ದಿನಗಳ ಒಳಗಾಗಿ ಅತಿಕ್ರಮಿಸಿದ ಜಾಗವನ್ನು ಕೂಡಲೇ ತೆರವುಗೊಳಿಸಬೇಕು. ಇಲ್ಲವೇ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕೃತ ದಾಖಲೆಗಳನ್ನು ನಗರಸಭೆಗೆ ಹಾಜರು ಪಡಿಸಬೇಕು ಎಂದು ನೋಟಿಸ್ನಲ್ಲಿ ಉಲ್ಲೇಖಿಸಲಾಗಿದೆ.
ಒಂದು ವೇಳೆ ನೋಟಿಸ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದರೆ ಅತಿಕ್ರಮ ಜಾಗವನ್ನು ತೆರುವುಗೊಳಿಸಲಾಗುತ್ತದೆ. ಅದಕ್ಕೆ ತಗುಲುವ ವೆಚ್ಚವನ್ನು ಕಟ್ಟಡ ಮಾಲೀಕರಾದ ನಿಮ್ಮಿಂದಲೇ ವಸೂಲಿ ಮಾಡಲಾಗುವುದು ಎಂದು ನಗರಸಭೆ ಆಯುಕ್ತರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬಳ್ಳಾರಿ: ಕಾರ್ಯಕರ್ತರು ಟೋಪಿ ಹಾಕುತ್ತಾರೆ ಎನ್ನುವ ಅರ್ಥದಲ್ಲಿ ನಾನು ಹೇಳಿಲ್ಲವೆಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ.
ಲೋಕಸಭಾ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿರುವ ಅವರು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿ, ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಪಕ್ಷದ ಕಾರ್ಯಕರ್ತರನ್ನು ನಿಲ್ಲಿಸಿ, ಅವರು ಯಾವ ರೀತಿ ಮಾಡಿದ್ದಾರೆಂಬುದು ಅಲ್ಲಿನ ಜನರಿಗೆ ಗೊತ್ತು. ನಾನು ಕಾರ್ಯಕರ್ತರು ಟೋಪಿ ಹಾಕುತ್ತಾರೆ ಎಂದು ಹೇಳಿಲ್ಲ. ರಾಮನಗರ ಜನ ಕುಮಾರಸ್ವಾಮಿಯವರ ಕುಟುಂಬದವರೇ ಇಲ್ಲಿನ ಮುಂದಿನ ಅಭ್ಯರ್ಥಿಯನ್ನಾಗಿ ಮಾಡಿ ಎಂದು ಮಾತು ತೆಗೆದುಕೊಂಡಿದ್ದರು. ಹೀಗಾಗಿ ಅನಿವಾರ್ಯವಾಗಿ ಅನಿತಾ ಕುಮಾರಸ್ವಾಮಿಯವರನ್ನು ಅಲ್ಲಿಂದ ಅಭ್ಯರ್ಥಿಯನ್ನಾಗಿ ಆಯ್ಕೆಮಾಡಲಾಯಿತು. ನನ್ನ ಹೇಳಿಕೆಯಿಂದ ಅನಿತಾರವರ ಗೆಲುವಿಗೆ ಯಾವುದೇ ತೊಂದರೆ ಆಗಲ್ಲ. ಅವರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ ಕಾಂಗ್ರೆಸ್ ಅಭ್ಯರ್ಥಿಗಳ ಬೆಂಬಲಕ್ಕೆ ಜೆಡಿಎಸ್ ಬರುತ್ತಿಲ್ಲವೆಂದು ಪ್ರಶ್ನಿಸಿದಾಗ, ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದಲ್ಲಿಯೇ ಚುನಾವಣೆಯನ್ನು ನಾವು ಎದುರಿಸುತ್ತಿದ್ದೇನೆ. ನಾನು ಸಹ ಖುದ್ದು ಎಲ್ಲಾ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದಾನೆ. ಇಂದೂ ಸಹ ಕಾಂಗ್ರೆಸ್ ಅಭ್ಯರ್ಥಿ ಉಗ್ರಪ್ಪ ಪರ ಪ್ರಚಾರ ಮಾಡುತ್ತಿದ್ದೇನೆ. ಭಾನುವಾರ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಹ ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಅಲ್ಲದೇ ಎಲ್ಲಾ ಸ್ಥಳೀಯ ಮಟ್ಟದ ಮುಖಂಡರು ಸಹ ಚುನಾವಣೆಗೆ ಬೆಂಬಲ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರಕ್ಕೆ ಬರುತ್ತಿಲ್ಲವೆಂಬುದು ಸುಳ್ಳು ಎಂದು ತಿಳಿಸಿದರು. ಇದನ್ನೂ ಓದಿ: ಕಾರ್ಯಕರ್ತರಿಗೆ ಟಿಕೆಟ್ ನೀಡಿ ಗೆಲ್ಲಿಸಿದ್ರೆ, ಟೋಪಿ ಹಾಕಿ ಹೋಗ್ತಾರೆ: ಎಚ್.ಡಿ.ರೇವಣ್ಣ
ಪ್ರಜ್ವಲ್ ರಾಜಕೀಯದ ಕುರಿತು ಮಾತನಾಡಿದ ಅವರು, ಪ್ರಜ್ವಲ್ ರಾಜಕೀಯಕ್ಕೆ ಬರಬೇಕು ಅಂದುಕೊಂಡರೇ, ಅದನ್ನು ಯಾರು ತಡಿಯೋಕೆ ಆಗಲ್ಲ. ನಾವು ಯಾವತ್ತೂ ಸಹ ಹಿಂಬಾಗಿಲಿನಿಂದ ರಾಜಕೀಯಕ್ಕೆ ಬಂದವರಲ್ಲ. ಈ ಹಿಂದೆ ಹಾಸನದ ಬೇಲೂರು ವಿಧಾನಸಭಾ ಕ್ಷೇತ್ರದಲ್ಲಿ ನನ್ನ ಹೆಂಡತಿ ಹಾಗೂ ಮಗ ಕ್ಷೇತ್ರಕ್ಕೆ ತ್ಯಾಗ ಮಾಡಿ, ಅಲ್ಲಿ ವೀರಶೈವ ಸಮುದಾಯದವರನ್ನು ನಿಲ್ಲಿಸಿ ಗೆಲ್ಲಿಸಿದ್ದೇವೆ. ಪ್ರಜ್ವಲ್ ರಾಜಕೀಯಕ್ಕೆ ಬರುವುದನ್ನು ದೇವೇಗೌಡರು ಹಾಗೂ ಕುಮಾರಸ್ವಾಮಿ ತೀರ್ಮಾನ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ನಿಖಿಲ್ ಹಾಗೂ ಪ್ರಜ್ವಲ್ಗೆ ಯಾವುದೇ ಟಿಕೆಟ್ ಸಿಗದಿದ್ದರೇ, ಅವರು ಪಕ್ಷದ ಕಾರ್ಯಕರ್ತರಾಗಿಯೇ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಶಿವಮೊಗ್ಗ: ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಿ ನಾವು ಗೆಲ್ಲಿಸಿದರೆ, ಅವರು ನಮಗೆ ಟೋಪಿ ಹಾಕಿ ಹೋಗುತ್ತಾರೆ ಎನ್ನುವ ಮೂಲಕ ರಾಮನಗರದಲ್ಲಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮರಸ್ವಾಮಿ ಅವರಿಗೆ ಟಿಕೆಟ್ ನೀಡಿದ ಬಗ್ಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಹಿಂದೆ ರಾಮನಗರದಲ್ಲಿ ರಾಜು ಎಂಬವರನ್ನು ಸಿಎಂ ಕುಮಾರಸ್ವಾಮಿ ನಿಲ್ಲಿಸಿ ಗೆಲ್ಲಿಸಿದ್ದರು. ಆದರೆ ಆ ಪಾರ್ಟಿ ಕೊನೆಗೆ ನಮಗೆ ಟೋಪಿ ಹಾಕಿ ಹೋದರು. ನಮ್ಮ ಕುಟುಂಬ ಬಿಟ್ಟು ಪಕ್ಷದ ಬೇರೆ ಕಾರ್ಯಕರ್ತರನ್ನು ನಿಲ್ಲಿಸಿ ಗೆಲ್ಲಿಸಿ ಸ್ವತಃ ನಾವೇ ಟೋಪಿ ಹಾಕಿಸಿಕೊಂಡಿದ್ದೇವೆ. ಹೀಗಾಗಿ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾರವರನ್ನು ರಾಮನಗರ ಕ್ಷೇತ್ರದಿಂದ ಅಖಾಡಕ್ಕೆ ಇಳಿಸಿದ್ದಾರೆ. ಈಗಲೂ ಬೇರೆಯವರನ್ನು ನಿಲ್ಲಿಸಿ ಟೋಪಿ ಹಾಕಿಸ್ಕೋಬೇಕಾ ನೀವೇ ಹೇಳಿ ಎಂದು ಪ್ರಶ್ನಿಸಿದರು.
ಇದೇ ವೇಳೆ ಭವಾನಿ ರೇವಣ್ಣರ ಬಗ್ಗೆ ಪ್ರಶ್ನಿಸಿದಾಗ, ಏನ್ರೀ ಭವಾನಿ ರೇವಣ್ಣ ಬಗ್ಗೆ ಕೇಳ್ತೀರಿ? ಭವಾನಿ ಈಗ ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದಾರೆ. ಅವರನ್ನು ಎಂಎಲ್ಎ ಮಾಡಬೇಕು ಅಂದಿದ್ರೆ, ಯಾವತ್ತೋ ಚುನಾವಣೆಗೆ ನಿಲ್ಲಿಸುತ್ತಿದ್ದೆ. ಈ ಹಿಂದೆ ಬೇಲೂರು ಕ್ಷೇತ್ರದ ಕಾರ್ಯಕರ್ತರು ಸಹ ಒತ್ತಡ ಹಾಕಿದ್ದರು. ಅಲ್ಲದೇ ನಮ್ಮ ಕುಟುಂಬ ಹೊಡೆದಾಡುತ್ತಿದ್ದಾರೆ ಅಂತ ಯಾರಾದರು ಅಂದುಕೊಂಡಿದ್ದರೆ, ಅದು ಅವರ ಕನಸು ಅಷ್ಟೇ. ನಾವೆಲ್ಲಾ ಚೆನ್ನಾಗಿಯೇ ಇದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಹರಿಹಾಯ್ದ ಅವರು, ಬಿಜೆಪಿಯ 17 ಮಂದಿ ಸಂಸದರು, ರಾಜ್ಯಕ್ಕೆ ಏನು ಮಾಡಿದ್ದಾರೆ? ಬರೀ ಅಪ್ಪ, ಮಕ್ಕಳು ಅಂತಾ ನಮ್ಮ ಬಗ್ಗೆಯೇ ಯಾವಾಗಲೂ ಮಾತನಾಡುತ್ತಾರೆ. ನಮ್ಮ ಬಗ್ಗೆ ಮಾತನಾಡದೇ ಇದ್ದರೆ ಅವರಿಗೆ ಊಟ ಸೇರಲ್ಲ. ಹೀಗಾದರೂ ನಮ್ಮನ್ನ ದಿನ ನೆನೆಯುತ್ತಾರಲ್ಲ, ಅವರಿಗೆ ನನ್ನ ಕೃತಜ್ಞತೆಗಳನ್ನ ಸಲ್ಲಿಸುತ್ತೇನೆ. ಜನ ನಮ್ಮನ್ನು ಮರೆಯದಂತೆ ಅವರೇ ನಮ್ಮ ಹೆಸರು ಹೇಳಿ ನೆನಪಿಸುತ್ತಾರೆ ಎಂದು ವ್ಯಂಗ್ಯವಾಡಿದರು.
ಬೆಂಗಳೂರು: ಹಿಂದೊಮ್ಮೆ ಮಾಜಿ ಪ್ರಧಾನಿ ದೇವೇಗೌಡರು ಟೋಲ್ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದರು. ಈಗ ತಮ್ಮ ಮಗ, ಸಚಿವ ಎಚ್.ಡಿ.ರೇವಣ್ಣರ ಇಲಾಖೆಯಲ್ಲಿ ಕಾಮಾಗಾರಿ ಮುಗಿಯದೇ ಇದ್ದರೂ, ಅಧಿಕಾರಿಗಳು ಟೋಲ್ ಸಂಗ್ರಹಣೆಗೆ ಮುಂದಾಗಿದ್ದಾರೆ.
ಇದು ಬೆಂಗಳೂರಿನ ಯಲಹಂಕ-ಎಪಿ ಬಾರ್ಡರ್ ಟೋಲ್ವೇಸ್ನ, ಕಡನತಮಲೆ ಟೋಲ್ ಪ್ಲಾಜಾ ನಡೆಯುತ್ತಿರುವ ಹಗಲು ದರೋಡೆ. ಯಲಹಂಕ-ಎಪಿ ಬಾರ್ಡರ್ ಟೋಲ್ವೇಸ್ ಪ್ರೈವೇಟ್ ಲಿಮಿಟೆಡ್ ಕಂಪನಿ ರಸ್ತೆಯನ್ನು ನಿರ್ಮಿಸಿದೆ. ಇಲ್ಲಿ ನೋಡಿದರೆ ಕಾಮಗಾರಿ ನಡೆಯುತ್ತಲಿದೆ. ಕಡನತಮಲೆ ಟೋಲ್ ಪ್ಲಾಜಾದಿಂದ ಯಲಹಂಕ ಕಡೆ ಬಂದರೆ ಸಿಂಗಲ್ ರೋಡ್ನಲ್ಲೇ ಹೋಗಬೇಕು. ರಸ್ತೆ ಕಾಮಗಾರಿ ಕಂಪ್ಲೀಟ್ ಮಾಡದೇ ಟೋಲ್ ವಸೂಲಿ ಮಾಡುತ್ತಿರೋದಕ್ಕೆ ಜನ ಹಿಡಿ ಹಿಡಿ ಶಾಪ ಹಾಕುತ್ತಿದ್ದಾರೆ.
ರಸ್ತೆ ಸಂಪೂರ್ಣ ನಿರ್ಮಾಣವಾಗಿಲ್ಲ ಆಗಲೇ ಟೋಲ್ ವಸೂಲಿ ನಡೆಯುತ್ತಿದೆ. 76 ಕಿಮೀ ಪೈಕಿ 55 ಕಿಮೀ ರಸ್ತೆ ಕಾಮಗಾರಿ ಮುಕ್ತಾಯವಾಗಿದೆ ಅಂತ ಹೇಳ್ತಾರೆ. ಶೇ.70 ಕಾಮಗಾರಿ ಮುಗಿದಿದೆ ಅದಕ್ಕೆ ವಸೂಲಿ ಮಾಡಿದ್ದೀವಿ ಅಂತಾರೆ ಅದಕ್ಕೆ ದಾಖಲೆ ಕೇಳಿದ್ರೆ ಇಲ್ಲಿಯ ತನಕ ಕೊಟ್ಟಿಲ್ಲ. ಅಲ್ಲದೇ ಟೋಲ್ ರಸ್ತೆಯಲ್ಲಿ ಸರ್ವೀಸ್ ರಸ್ತೆ ಇರಬೇಕು ಅದೂ ಇಲ್ಲ ಅಂತ ಸ್ಥಳೀಯ ಮುಖಂಡರಾದ ಪದ್ಮ ಜೈನ್ ಆಕ್ರೋಶ ಹೊರಹಾಕ್ತಾರೆ.
ಟ್ಯಾಕ್ಸಿ, ಓಲಾ, ಊಬರ್ ಸಂಘದವರು ಕೂಡ ಟೋಲ್ ವಸೂಲಿಗೆ ಆಕ್ರೋಶ ಹೊರಹಾಕಿದ್ದಾರೆ. ಈ ಸರ್ಕಾರ ಚಾಲಕರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಮಾಡ್ತಿದೆ ಅಂತ ನಮ್ಮ ಚಾಲಕರ ಟ್ರೇಡ್ ಯೂನಿಯನ್ ರಾಜ್ಯಾಧ್ಯಕ್ಷರಾದ ಸೋಮಶೇಖರ್ ಆರೋಪಿಸಿದ್ದಾರೆ.
ಬೆಂಗಳೂರು: ಐಎಎಸ್ ಅಧಿಕಾರಿ ಪಲ್ಲವಿ ಆಕುರಾತಿ ದೂರಿನ ಪ್ರಕರಣ ಕುರಿತು ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದರೆ ಅವರು ಆರೋಪ ಮಾಡಿರುವ ಕಾಮಗಾರಿ ನಮ್ಮ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಆರೋಪ ಮಾಡಿರುವ ಕಾಮಗಾರಿಗಳು ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಬರುವುದಿಲ್ಲ. ಅದು ಬಿಬಿಎಂಪಿ ವ್ಯಾಪ್ತಿಗೆ ಬರುತ್ತದೆ ಅಂತ ಸ್ಪಷ್ಟಪಡಿಸಿದ ಸಚಿವರು, ಕಾರ್ ಶೆಡ್ ನಿರ್ಮಿಸುವಂತೆ ಪಲ್ಲವಿ ಅವರು ಪತ್ರ ಬರೆದಿದ್ದರು. ಆದರೆ ಚುನಾವಣೆ ಹಿನ್ನಲೆಯಲ್ಲಿ ಕೆಲಸ ಮಾಡಲು ಸಾಧ್ಯವಾಗಿಲ್ಲ ಅಂತ ಹೇಳಲಾಗಿತ್ತು. ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಎಸ್ಗೆ ವರದಿ ನೀಡಲು ಸೂಚನೆ ನೀಡಿರುವೆ. ಹಣ ಕೊಟ್ಟರೆ ಕೆಲಸ ಆಗುತ್ತದೆ ಎನ್ನುವ ಆರೋಪಕ್ಕೆ ನನಗೆ ಮಾಹಿತಿ ಇಲ್ಲ ಎಂದು ಹೇಳಿ ಜಾರಿಕೊಂಡರು. ಇದನ್ನು ಓದಿ:PWDಯಲ್ಲಿ ದುಡ್ಡು ಕೊಟ್ರೆ ಮಾತ್ರ ಕೆಲಸ- ಪತ್ರ ಬರೆದು ದೂರು ಕೊಟ್ಟ ಮಹಿಳಾ ಅಧಿಕಾರಿ
ಅರಣ್ಯದಲ್ಲಿ ಆನೆ ಸಾವು ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ಸಚಿವರು, ಇದು ಲೋಕೋಪಯೋಗಿ ಇಲಾಖೆಗೆ ಬರುವುದಿಲ್ಲ. ಪ್ರಕರಣವು ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುತ್ತದೆ. ಅರಣ್ಯ ಮಾರ್ಗದಲ್ಲಿ ರಸ್ತೆಯ ಉಬ್ಬು ನಿರ್ಮಾಣಕ್ಕೆ ಅರಣ್ಯ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಿದರೆ ಪರಿಶೀಲಿಸಲಾಗುತ್ತದೆ ಎಂದು ಹೇಳಿದರು.
ಬೆಂಗಳೂರು: ಬಿಡಿಎ ಎಂಜಿನಿಯರ್ ಗೌಡಯ್ಯ ಮನೆ ಮೇಲೆ ಬರೋಬ್ಬರಿ 20 ಗಂಟೆಗಳ ಕಾಲ ನಡೆದ ದಾಳಿ ಅಂತ್ಯವಾಗಿದ್ದು, ಸದ್ಯ ಗೌಡಯ್ಯನ ರಹಸ್ಯ ಬಗೆದಷ್ಟೂ ಬಯಲಾಗ್ತಿದೆ.
ಶುಕ್ರವಾರ ಮಧ್ಯರಾತ್ರಿವರೆಗೆ ಪರಿಶೀಲನೆ ನಡೆಸಿ ಎಸಿಬಿ ಅಧಿಕಾರಿಗಳು ನಿಟೀಸ್ ಜಾರಿ ಮಾಡಿ ಹಿಂದಿರುಗಿದ್ದಾರೆ. ಹೊಸ ಸರ್ಕಾರ, ಹೊಸ ಸಚಿವರು ಬಂದ್ರೂ ಗೌಡಯ್ಯ ಮಾತ್ರ ಕದಲುತ್ತಿಲ್ಲ ಯಾಕೆ ಎನ್ನುವ ಪ್ರಶ್ನೆಯೊಂದು ಇದೀಗ ಜನಸಾಮಾನ್ಯರಲ್ಲಿ ಮೂಡಿದೆ.
ಗೌಡಯ್ಯ ಡಿಸಿಎಂ ಅದೇಶಕ್ಕೆ ಕವಡೆ ಕಾಸಿನ ಕಿಮ್ಮತ್ತು ನೀಡುತ್ತಿರಲಿಲ್ಲ. ಹೀಗಾಗಿ ಪರಮೇಶ್ವರ್ ಅವರು ಬಿಡಿಎ ಅಧ್ಯಕ್ಷರಾಗುತ್ತಿದ್ದಂತೆ ಗೌಡಯ್ಯನ ಬದಲಾವಣೆಗೆ ಮುಂದಾಗಿದ್ದರು. ಆದ್ರೆ ಈ ವೇಳೆ ಗೌಡಯ್ಯನ ಕಾಪಾಡಲು ಸಚಿವ ಎಚ್.ಡಿ.ರೇವಣ್ಣ ಅವರು ಎಂಟ್ರಿ ಕೊಟ್ಟಿದ್ದು, ಗೌಡಯ್ಯನ ಬದಲಾವಣೆ ಮಾಡದಂತೆ ಸಚಿವ ಪರಮೇಶ್ವರ್ಗೆ ತಾಕೀತು ಮಾಡಿದ್ದರು. ಇಷ್ಟು ಮಾತ್ರವಲ್ಲದೇ ರೇವಣ್ಣ ಅವರು ದೇವೇಗೌಡರಿಂದಲೂ ಫೋನ್ ಮಾಡಿಸಿ ಒತ್ತಡ ಹೇರಿದ್ದರು ಎಂಬ ಮಾಹಿತಿಯೊಂದು ಇದೀಗ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ದಾಳಿ ವೇಳೆ ಸಿಕ್ಕಿದ್ದೇನು..?:
ಎಸಿಬಿ ದಾಳಿ ವೇಳೆ 10 ಕೆ.ಜಿ ಚಿನ್ನ, ಕೋಟಿ ಕೋಟಿ ನಗದು ಪತ್ತೆಯಾಗಿದೆ. ಅಲ್ಲದೇ 40 ಎಕರೆ ಜಮೀನು, ಡಾಂಬರು ಮಿಶ್ರಣ ಘಟಕ, ರೋಡ್ ರೋಲರ್, ಶಾಲಾ ಬಸ್ಗಳು, ಕಾರುಗಳು ಪತ್ತೆಯಾಗಿವೆ. ನಿನ್ನೆಯ ದಾಳಿಯಲ್ಲಿ ಸುಮಾರು 200 ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು. ಇತ್ತ ಜಯನಗರದಲ್ಲಿರೋ ಅತ್ತೆಯ ಮನೆಯಲ್ಲಿ ಕೆಜಿಗಟ್ಟಲೇ ಚಿನ್ನ ಇಟ್ಟಿದ್ದು ದಾಳಿ ವೇಳೆ ಬಹಿರಂಗವಾಗಿದೆ. ಅತ್ತೆ ಮನೆಯಲ್ಲಿ ಗೌಡಯ್ಯ ದಂಪತಿ 80 ಬಳೆ, ವಜ್ರದ ಸರ ಒಟ್ಟು 4.5 ಕೆ.ಜಿ ಚಿನ್ನದ ಆಭರಣ ಬಚ್ಚಿಟ್ಟಿದ್ದರು. ಆದ್ರೆ ಇದು ಅತ್ತೆಗೇ ಗೊತ್ತಿರಲಿಲ್ಲ. ಎಸಿಬಿ ರೈಡ್ ಮಾಡಿ ಬಾಚಿಕೊಂಡ ಬಳಿಕ ಅತ್ತೆಗೆ ಚಿನ್ನ ಎಂದು ಗೊತ್ತಾಗಿರುವುದಾಗಿ ತಿಳಿದುಬಂದಿದೆ.
ಅತ್ತೆ ಮನೆಯಲ್ಲಿ ಗೌಡಯ್ಯ ದಂಪತಿ ಕೋಣೆಯೊಂದನ್ನ ಇಟ್ಟಿಕೊಂಡಿದ್ದರು. ಅತ್ತೆ ಮನೆಗೆ ಗೌಡಯ್ಯ ದಂಪತಿ ಹೋದಾಗಲೆಲ್ಲ ರೂಂಗೆ ಹೋಗಿ ಬಾಗಿಲು ಹಾಕಿಕೊಳ್ಳುತ್ತಿದ್ದರಂತೆ. ಮನೆಯಲ್ಲಿದ್ದ ಚಿನ್ನಾಭರಣ ಎಸಿಬಿ ಅಧಿಕಾರಿಗಳು ದಾಳಿ ವೇಳೆ ವಶಪಡಿಸಿಕೊಂಡಾಗ ಗೌಡಯ್ಯನ ಅತ್ತೆ ಕಕ್ಕಾಬಿಕ್ಕಿ ಆದರು. ಸದ್ಯ ಅತ್ತೆ ಮನೆಯಿಂದ 80 ಬಳೆ, 15 ಕ್ಯಾರೆಟ್ ವಜ್ರದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಶನಿವಾರದಿಂದ ಬ್ಯಾಂಕ್ ಖಾತೆಗಳನ್ನು ಪರಿಶೀಲಿಸಲಾಗುತ್ತದೆ. ಗೌಡಯ್ಯ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನಲ್ಲೂ ಭಾರೀ ಆಸ್ತಿ ಸಂಪಾದಿಸಿದ್ದಾರೆ. 40 ಎಕರೆ ಜಮೀನು, ಡಾಂಬರು ಮಿಶ್ರಣ ಘಟಕ, ರೋಡ್ ರೋಲರ್, ಶಾಲಾ ಬಸ್ಗಳು, ಕಾರುಗಳು ಪತ್ತೆಯಾಗಿವೆ.
ಹಾಸನ: ಗಾಂಧಿ ಜಯಂತಿ ಪ್ರಯುಕ್ತ ಸಿಎಂ ಕುಮಾರಸ್ವಾಮಿ ಅವರ ಕಾರ್ಯಕ್ರಮಕ್ಕೆ ಶಾಸಕರು ಬರದಿದ್ದಕ್ಕೆ ರೇವಣ್ಣ ಕ್ಲಾಸ್ ತೆಗೆದುಕೊಂಡಿದ್ದಾರೆ.
ಗಾಂಧಿ ಜಯಂತಿಗೆ ಆಗಮಿಸಿದ್ದ ಬಿಜೆಪಿ ಶಾಸಕ ಪ್ರೀತಂಗೌಡ ಅವರನ್ನು ಸಚಿವ ರೇವಣ್ಣ ಪ್ರಶ್ನಿಸಿದ್ದಾರೆ. ರೀ ಕಾರ್ಯಕ್ರಮಕ್ಕೆ ಏಕೆ ಬಂದಿರಲಿಲ್ಲ. ನಾನೇ ಖುದ್ದಾಗಿ ಫೋನ್ ಮಾಡಿದ್ದೆ. ಲೆಟರ್ ಕೂಡ ಕಳಿಸಿದ್ದೆ. ಆದರೂ ಏಕೆ ಬರಲಿಲ್ಲ ಎಂದು ರೇವಣ್ಣ ಪ್ರಶ್ನಿಸಿದ್ದಾರೆ.
ಕಳೆದ ತಿಂಗಳು 23ರಂದು ಹಾಸನದಲ್ಲಿ ಸಾವಿರಾರು ಕೋಟಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮಕ್ಕೆ ಸ್ಥಳೀಯ ಶಾಸಕರು ಬಾರದೆ ಗೈರಾಗಿದ್ದರು. ಇಂದು ಈ ಬಗ್ಗೆ ನೇರವಾಗಿ ಸಚಿವರು, ಶಾಸಕರನ್ನು ಪ್ರಶ್ನೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ರೇವಣ್ಣ ಈ ಕುರಿತು ಸ್ವತಃ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಹೇಳಿದ್ದಾರೆ. ನೋಡಿ ಮೇಡಂ ನಾನೇ ಫೋನ್ ಮಾಡಿ ಸ್ವತಃ ಕರೆದಿದ್ದೇನೆ. ಆದರೂ ಯಾರೂ ಬಂದಿಲ್ಲ ಎಂದು ಸಚಿವರು ದೂರಿದ್ದಾರೆ. ಆಗ ಶಾಸಕ ಪ್ರೀತಂಗೌಡ ಆಹ್ವಾನ ಪತ್ರಿಕೆ ನನಗೆ ಹಿಂದಿನ ದಿನ ಬಂತು ನಿಮ್ಮಿಂದ ನನಗೆ ಯಾವುದೇ ಫೋನ್ ಬಂದಿಲ್ಲ. ಅಲ್ಲದೇ ನೀವು ಕರೆ ಮಾಡಿದ್ದು ಈ ಹಿಂದೆ ಗುದ್ದಲಿ ಪೂಜೆಗಾಗಿಯೇ ಎಂದು ಶಾಸಕ ನಾಜೂಕಾಗಿಯೇ ಸಚಿವರಿಗೆ ತಿರುಗೇಟು ನೀಡಿದರು.
ಹಾಸನ: ಬಿಜೆಪಿಯವರಿಗೆ ದೈವಾನುಗ್ರಹವಿಲ್ಲ ಹೀಗಾಗಿ ಅವರು ಎಷ್ಟೇ ಪ್ರಯತ್ನ ಪಟ್ಟರೂ ಸಹ ಜೆಡಿಎಸ್ ಹಾಗೂ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವುದಕ್ಕೆ ಆಗುವುದಿಲ್ಲವೆಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಹೀಗಾಗಿ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರವನ್ನು ಬೀಳಿಸಲು ಪ್ರಯತ್ನಿಸುತ್ತಿದ್ದಾರೆ. ಇದರ ಬದಲು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲಮನ್ನಾ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಡ ಹೇರಬೇಕು. ಬಿಜೆಪಿಯವರಿಗೆ ದೈವಾನುಗ್ರಹ ಇಲ್ಲ. ಹೀಗಾಗಿ ಅವರು ಎಷ್ಟೇ ಪ್ರಯತ್ನಪಟ್ಟರೂ ಸರ್ಕಾರ ಈ ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವಿಲ್ಲವೆಂದು ಹೇಳಿದರು.
ಮಳೆಯಿಂದ ಆಗಿರುವ ಹಾನಿಗೆ ಪರಿಹಾರದ ಹಣ ಬಿಡುಗಡೆ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಬಳಿ ಹೋಗಲು ರಾಜ್ಯ ಬಿಜೆಪಿ ನಾಯಕರಿಗೆ ತಾಕತ್ತಿಲ್ಲ. ಅದನ್ನು ಬಿಟ್ಟು ನಮಗೆ 300 ಕೋಟಿ ಕೊಡಿ ಸರ್ಕಾರ ಬೀಳಿಸ್ತೀವಿ ಅಂತ ಬೇಡಿಕೆ ಇಟ್ಟಿದ್ದಾರೆ. ಸರ್ಕಾರಕ್ಕೆ ಅಧಿಕಾರಕ್ಕೆ ಬಂದ ದಿನದಿಂದಲೂ ಸರ್ಕಾರ ಉರುಳಿಸಲು ಬಿಜೆಪಿಯವರು ಪ್ರಯತ್ನಿಸುತ್ತಲೇ ಇದ್ದಾರೆ. ಏನೇ ಮಾಡಿದರೂ ಜೆಡಿಎಸ್ ಶಾಸಕರನ್ನು ಖರೀದಿ ಮಾಡಲು ಸಾಧ್ಯವಿಲ್ಲವೆಂದು ಗುಡುಗಿದರು.
ಭಾನುವಾರ ಹಾಸನದ ಹಾಲು ಒಕ್ಕೂಟಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಆಗಮಿಸಲಿದ್ದಾರೆ. ಅಂದು ಐಸ್ ಕ್ರೀಂ ಘಟಕ ಹಾಗೂ ಒಡೆಯರ ಕಾಲದ ನಾಲೆ ಕಾಮಗಾರಿ ಹಾಗೂ ಮಹಿಳಾ ಕಾಲೇಜು ಉದ್ಘಾಟನೆ ಸೇರಿದಂತೆ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುತ್ತಾರೆ ಎಂದು ತಿಳಿಸಿದರು.
ಶನಿವಾರ ಹಾಸನದ ಹೊರವಲಯದ ಹೊಯ್ಸಳ ರೆಸಾರ್ಟ್ ನಲ್ಲಿ ಜೆಡಿಎಸ್ ಪಕ್ಷದ ಶಾಸಕಾಂಗ ಸಭೆ ನಡೆಯಲಿದ್ದು, ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ಪಕ್ಷದ ಎಲ್ಲಾ ಶಾಸಕರು, ವಿಧಾನ ಪರಿಷತ್ ಸದಸ್ಯರು ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಹಾಸನದಲ್ಲಿ ಶನಿವಾರ ಜೆಡಿಎಸ್ ಶಾಸಕರ ತುರ್ತು ಸಭೆ
ಹಾಸನ: ಮಾಜಿ ಸಚಿವ ಎ.ಮಂಜುರವರಿಗೆ ಮಾಡಲು ಏನು ಕೆಲಸ ಇಲ್ಲ ಅಂತ ಕಾಣುತ್ತೆ. ಹೀಗಾಗಿ ಏನಾದರೂ ಒಂದು ಗಾಳಿ ಸುದ್ದಿ ಬಿಡಬೇಕು ಅನ್ನುವ ಕಾರಣಕ್ಕೆ ಈ ರೀತಿ ಹೇಳಿಕೆ ನೀಡಿದ್ದಾರೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವ್ಯಂಗ್ಯವಾಡಿದ್ದಾರೆ.
ಹಾಸನ ನಗರದ ಹಲವು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರಿ ಭೂಮಿ ಕಬಳಿಕೆ ಆರೋಪ ಮಾಡಿರುವ ಮಾಜಿ ಸಚಿವ ಎ.ಮಂಜು ಅವರ ಹೇಳಿಕೆಗೆ ತಿರುಗೇಟು ನೀಡಿದರು.
ಯಾವುದೇ ಸರ್ಕಾರಿ ಭೂಮಿಯನ್ನು ರೇವಣ್ಣ ಅಥವಾ ಕುಟುಂಬದ ಯಾರೇ ಮಾಡಿದ್ದರೂ ಸಹ ಅದನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಲಿ. ಈ ಹಿಂದೆ ಯಡಿಯೂರಪ್ಪನವರು ಸಹ ನಮ್ಮ ಕುಟುಂಬ ಭೂಮಿ ಕಬಳಿಸಿದೆ ಎಂದು ಪದೇ ಪದೇ ಆರೋಪಿಸುತ್ತಿದ್ದಾರೆ. ಅಲ್ಲದೇ ಅದಕ್ಕಾಗಿ ಓರ್ವ ಮಂತ್ರಿಯನ್ನೇ ಬಿಟ್ಟಿದ್ದರು. ಆದರೆ ಏನೂ ಪ್ರಯೋಜನವಾಗಿರಲಿಲ್ಲ. ಈಗ ಮಾಜಿ ಸಚಿವರು ಶುರು ಹಚ್ಚಿಕೊಂಡಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ರೇವಣ್ಣ ವಿರುದ್ಧವೇ ಭೂ ಕಬಳಿಕೆ ಆರೋಪ: ಎ ಮಂಜು ದಾಖಲೆ ರಿಲೀಸ್
ಎ.ಮಂಜು ಅವರಿಗೆ ಸದ್ಯ ಮಾಡಲು ಏನೂ ಕೆಲಸವಿಲ್ಲ. ಈಗ ಅವರಿಗೆ ಬಿಡುವು ಜಾಸ್ತಿ ಇದೆ. ಹೀಗಾಗಿ ಈ ರೀತಿ ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ಮಂತ್ರಿಯಿದ್ದಾಗಲೇ ಆರೋಪ ಮಾಡಲು ಹೋಗಿದ್ದರು. ಆದರೆ ಆವಾಗ ಅವರಿಗೆ ಏನು ಸಿಕ್ಕಿರಲಿಲ್ಲ. ಈಗ ಏನಾದರೂ ಸಿಕ್ಕಿರಬೇಕು, ಏನು ಬೇಕಿದ್ದರೂ ತನಿಖೆ ಮಾಡಲಿ ನಾನೇನು ಬೇಡ ಅನ್ನುವುದಿಲ್ಲ. ಏನಾದರೂ ಗಾಳಿ ಸುದ್ದಿ ಬಿಡಬೇಕಲ್ಲ ಅಂತ ಹೀಗೆ ಹೇಳಿಕೆ ನೀಡಿರಬಹುದು ಎಂದು ಆಕ್ರೋಶ ಹೊರಹಾಕಿದರು.
ನಿರ್ಮಲಾನಂದ ಶ್ರೀಗಳ ಕುರಿತು ಎ.ಮಂಜು ಹೇಳಿಕೆಗೆ ತೀವ್ರವಾಗಿ ವಾಗ್ದಾಳಿ ನಡೆಸಿದ ಅವರು, ನಿರ್ಮಲಾನಂದನಾಥ ಸ್ವಾಮೀಜಿಯವರು ನಮ್ಮ ಸಮಾಜದ ಆಸ್ತಿಯಾಗಿದ್ದಾರೆ. ಅವರ ಕುರಿತು ಹಗುರವಾಗಿ ಮಾತನಾಡುವುದು ಸರಿಯಲ್ಲ. ರಾಜ್ಯದಲ್ಲಿ ಯಾರಿಗಾದರೂ ಅನ್ಯಾಯವಾದರೆ ಸ್ವಾಮೀಜಿಗಳು ಮಾತನಾಡುವ ಅವಕಾಶವಿದೆ. ಯಾರೂ ಸಹ ಸ್ವಾಮೀಜಿಗಳ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ರಾಮನಗರ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಶ್ರೀರಾಮನಿದ್ದಂತೆ. ಇನ್ನು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಆಂಜನೇಯನಿದ್ದಂತೆ. ರಾಮನಗರದ ಜನ ಸೀತಾದೇವಿ(ಅನಿತಾ ಕುಮಾರಸ್ವಾಮಿ) ಅವರನ್ನು ಈಗ ಕರೆತರಬೇಕಾಗಿದೆ. ರಾಮ ಹಾಗೂ ಅಂಜನೇಯನ ಜೊತೆ ಸೀತಾಮಾತೆಯನ್ನ ಕರೆತಂದ್ರೆ ರಾಮನಗರ ಅಲ್ಲದೇ ರಾಜ್ಯವೂ ಕೂಡಾ ರಾಮರಾಜ್ಯವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ ದೇವೇಗೌಡ ಅವರು ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಶಂಕುಸ್ಥಾಪನೆ ಮುನ್ನ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಸಚಿವರು, ರೇವಣ್ಣ ಅವರು ಹಗಲು ರಾತ್ರಿ ಅಭಿವೃದ್ಧಿ ಕಾರ್ಯಕ್ಕಾಗಿ ಶ್ರಮಿಸುತ್ತಿದ್ದಾರೆ. ಈಗ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮತ್ತಷ್ಟು ಬಲ ಬರಲು ಮುಂಬರುವ ಉಪಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಬೇಕು ಎಂದು ಮನವಿ ಮಾಡಿಕೊಂಡರು.
ಜನತಾದರ್ಶನ, ಗ್ರಾಮವಾಸ್ತವ್ಯ ಮೂಲಕ ಎಚ್.ಡಿ.ಕುಮಾರಸ್ವಾಮಿ ಇತರರಿಗೆ ಮಾದರಿಯಾಗಿದ್ದಾರೆ. ಉಪ ಚುನಾವಣೆಯಲ್ಲಿ ಅನಿತಾ ಕುಮಾರಸ್ವಾಮಿ ಅವರು ಆಯ್ಕೆಯಾದರೆ ರಾಮನಗರದ ಜೊತೆಗೆ ರಾಜ್ಯವೂ ಸಮೃದ್ಧವಾಗಿ ಪ್ರಗತಿ ಹೊಂದುತ್ತದೆ ಎಂದು ಭರವಸೆ ನೀಡಿದರು.