Tag: ಉಸಿರಾಟ ತೊಂದರೆ

  • ಉಸಿರಾಟದ ತೊಂದರೆ – ಮತ್ತೆ ಆಸ್ಪತ್ರೆ ಸೇರಿದ ಅಮಿತ್ ಶಾ

    ಉಸಿರಾಟದ ತೊಂದರೆ – ಮತ್ತೆ ಆಸ್ಪತ್ರೆ ಸೇರಿದ ಅಮಿತ್ ಶಾ

    ನವದೆಹಲಿ: ಉಸಿರಾಟದ ತೊಂದರೆ ಕಾಣಿಸಿಕೊಂಡ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮತ್ತೆ ದೆಹಲಿ ಏಮ್ಸ್ ಆಸ್ಪತ್ರೆ ದಾಖಲಾಗಿದ್ದಾರೆ.

    ಅಮಿತ್ ಶಾ ಅವರು ಇತ್ತೀಚೆಗಷ್ಟೇ ಕೊರೊನಾದಿಂದ ಗುಣಮುಖರಾಗಿ ಬಂದಿದ್ದರು. ಆದರೆ ಮತ್ತೆ ಅವರಿಗೆ ಉಸಿರಾಟ ತೊಂದರೆ ಕಾಣಿಸಿಕೊಂಡ ಕಾರಣ ಶನಿವಾರ ರಾತ್ರಿ 11 ಗಂಟೆಗೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಹಿಂದೆ ಕೊರೊನಾ ಬಂದ ಕಾರಣ ಅವರು ದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು.

    ಅಮಿತ್ ಶಾ ಅವರಿಗೆ ಆಗಸ್ಟ್ 2ರಂದು ಕೊರೊನಾ ಪಾಸಿಟಿವ್ ಬಂದಿತ್ತು. ಇದನ್ನು ಟ್ವೀಟ್ ಮಾಡುವ ಮೂಲಕ ದೃಢಪಡಿಸಿದ್ದ ಅಮಿತ್ ಶಾ, ನನಗೆ ಕೊರೊನಾ ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ದಾಖಲಾಗಿದ್ದೇನೆ ಎಂದು ತಿಳಿಸಿದ್ದರು. ಈ ನಂತರ ಅವರಿಗೆ ಅಗಸ್ಟ್ 14ರಂದು ಕೊರೊನಾ ಬರದಿ ನೆಗೆಟಿವ್ ಬಂದಿತ್ತು. ಆದ ಕಾರಣ ಮತ್ತೆ ಟ್ವೀಟ್ ಮಾಡಿದ್ದ ಅಮಿತ್ ಶಾ ನನಗೆ ಕೊರೊನಾ ವರದಿ ನೆಗೆಟಿವ್ ಬಂದ ಕಾರಣ ಹೋಂ ಐಸೊಲೇಶನ್‍ನಲ್ಲಿ ಇರಲಿದ್ದೇನೆ ಎಂದು ಟ್ವೀಟ್ ಮಾಡಿ ತಿಳಿಸಿದ್ದರು.

    ಇದಾದ ಬಳಿಕ ಅಗಸ್ಟ್ 18ರಂದು ಮಧ್ಯ ರಾತ್ರಿ ಮತ್ತೆ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ಬಗ್ಗೆ ಅಂದು ಪತ್ರಿಕಾ ಪ್ರಕಟನೆ ಹೊರಡಿಸಿದ್ದ ಏಮ್ಸ್ ನಿರ್ದೇಶಕ ರಣದೀಪ್ ಗುಲೇರಿಯಾ, ಅಮಿತ್ ಶಾ ಅವರಿಗೆ ಕಳೆದ 3-4 ದಿನಗಳಿಂದ ಮೈ-ಕೈ ನೋವು, ಸುಸ್ತು ಕಾಣಿಸಿಕೊಂಡ ಹಿನ್ನೆಲೆ ಪೋಸ್ಟ್ ಕೋವಿಡ್ ಕೇರ್ ಗೆ ದಾಖಲಿಸಿಕೊಳ್ಳಲಾಗಿದೆ. ಅವರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಏಮ್ಸ್ ಆಸ್ಪತ್ರೆಯ ಪೋಸ್ಟ್ ಕೋವಿಡ್ ಕೇರ್ ಗೆ ದಾಖಲಿಸಿಕೊಳ್ಳಲಾಗಿದೆ. ಅವರು ಆರಾಮಾಗಿದ್ದು, ಆಸ್ಪತ್ರೆಯಿಂದಲೇ ಕೆಲಸ ಮಾಡಲಿದ್ದಾರೆ ಎಂದು ತಿಳಿಸಲಾಗಿತ್ತು.

    ಆಗಸ್ಟ್ 18ರಂದು ಆಸ್ಪತ್ರೆ ಸೇರಿದ್ದ ಅಮಿತ್ ಶಾ ಅವರು 13 ದಿನಗಳ ಕಾಲ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆದುಕೊಂಡು ಅಗಸ್ಟ್ 31ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದರು. ಇದಾದ 13 ದಿನಗಳ ಬಳಿಕ ಮತ್ತೆ ಅಮಿತ್ ಶಾ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

  • ಉಸಿರಾಟದ ತೊಂದರೆಯಿಂದಾಗಿ ವಿಮಾನದಲ್ಲೇ ಮೃತಪಟ್ಟ ಹಸುಗೂಸು

    ಉಸಿರಾಟದ ತೊಂದರೆಯಿಂದಾಗಿ ವಿಮಾನದಲ್ಲೇ ಮೃತಪಟ್ಟ ಹಸುಗೂಸು

    ಹೈದರಾಬಾದ್: ಉಸಿರಾಟದ ಸಮಸ್ಯೆಯಿಂದಾಗಿ ನಾಲ್ಕು ತಿಂಗಳ ಹಸುಗೂಸೊಂದು ವಿಮಾನದಲ್ಲೇ ಮೃತಪಟ್ಟಿದೆ.

    ಬೆಂಗಳೂರಿನಿಂದ ಪಾಟ್ನಾಗೆ ತೆರಳುತ್ತಿದ್ದ ವಿಮಾನದಲ್ಲಿ 4 ತಿಂಗಳ ಮಗುವೊಂದು ಉಸಿರಾಟದ ತೊಂದರೆಯಿಂದ ಮೃತಪಟ್ಟಿದೆ. ಮಂಗಳವಾರ ಬೆಳಗ್ಗೆ 6.15 ಕ್ಕೆ 4 ತಿಂಗಳ ಮಗುವಿನೊಂದಿಗೆ ಪೋಷಕರು ಇಂಡಿಗೋದ 6E-897 ವಿಮಾನದಲ್ಲಿ ಬೆಂಗಳೂರಿನಿಂದ ಪಾಟ್ನಾಗೆ ತೆರಳುತ್ತಿದ್ದರು. ಸುಮಾರು 7.30ರ ಹೊತ್ತಿಗೆ ಮಗುವಿಗೆ ಏಕಾಏಕಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.

    ಕೂಡಲೇ ಎಚ್ಚೆತ್ತ ವಿಮಾನ ಸಿಬ್ಬಂದಿ ಮಗುವಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ, ತುರ್ತು ಕಾರಣದಿಂದ ವಿಮಾನದ ಮಾರ್ಗವನ್ನು ಬದಲಾಯಿಸಿ, ಹೈದರಬಾದ್ ನಲ್ಲಿ ಲ್ಯಾಂಡ್ ಮಾಡಿದ್ದಾರೆ. ವಿಮಾನ ಲ್ಯಾಂಡ್ ಆಗುತ್ತಿದ್ದಂತೆಯೇ ಮಗುವನ್ನು ಅಂಬುಲೆನ್ಸ್ ಮೂಲಕ ಹೈದರಾಬಾದ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಿಲಾಗಿತ್ತು. ಆದರೆ ಮಗುವನ್ನು ಪರೀಕ್ಷಿಸಿದ ವೈದ್ಯರು, ಈಗಾಗಲೇ ಮಗು ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.

    ಘಟನೆ ಕುರಿತು ಪ್ರತಿಕ್ರಿಯಿಸಿದ ಇಂಡಿಗೋ ವಿಮಾನಯಾನ ಅಧಿಕಾರಿಗಳು, ಮಂಗಳವಾರ ಬೆಂಗಳೂರಿನಿಂದ ಪಾಟ್ನಾಗೆ ತೆರಳುತಿದ್ದ ವಿಮಾನದಲ್ಲಿ 4 ತಿಂಗಳ ಮಗುವೊಂದು ತೀವ್ರ ಉಸಿರಾಟ ತೊಂದರೆಯಿಂದ ಬಳಲಿತ್ತು. ಹೀಗಾಗಿ ವಿಮಾನವನ್ನು ಕೂಡಲೇ ಹೈದರಾಬಾದ್‍ನಲ್ಲಿ ಲ್ಯಾಂಡ್ ಮಾಡಿ, ಆಸ್ಪತ್ರೆಗೆ ದಾಖಲಿಸಿದರೂ, ಮಗು ಮೃತಪಟ್ಟಿದೆ ಎಂದು ಸಂತಾಪ ಸೂಚಿಸಿದ್ದಾರೆ.

    ಘಟನೆ ಸಂಬಂಧ ಪೊಲೀಸರು ಸಿಆರ್ ಪಿಸಿ ಸೆಕ್ಷನ್ 174ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.