Tag: ಉರಿ ಸೆಕ್ಟರ್

  • ಗಡಿಯಲ್ಲಿ ಖ್ಯಾತೆ ತೆಗೆದ ಪಾಕಿಸ್ತಾನ – ಏಳೆಂಟು ಪಾಕ್ ಸೈನಿಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

    ಗಡಿಯಲ್ಲಿ ಖ್ಯಾತೆ ತೆಗೆದ ಪಾಕಿಸ್ತಾನ – ಏಳೆಂಟು ಪಾಕ್ ಸೈನಿಕರನ್ನು ಹೊಡೆದುರುಳಿಸಿದ ಭಾರತೀಯ ಸೇನೆ

    – ಮೂವರು ಭಾರತೀಯ ಸೈನಿಕರು ಹುತಾತ್ಮ

    ಶ್ರೀನಗರ: ಎಲ್‍ಓಸಿ ಬಳಿ ಪಾಕಿಸ್ತಾನ ಮತ್ತೆ ಖ್ಯಾತೆ ತೆಗೆದಿದ್ದು, ಅಪ್ರಚೋದಿತ ಗುಂಡಿನ ದಾಳಿ ಮಾಡಿದೆ. ಪರಿಣಾಮ ಭಾರತೀಯ ಸೈನಿಕರು ಪ್ರತಿದಾಳಿ ಮಾಡಿದ್ದು, ಪಾಕಿಸ್ತಾನದ ಏಳೆಂಟು ಸೈನಿಕರನ್ನು ಹೊಡೆದುರುಳಿಸಿದೆ.

    ಉರಿ ಮತ್ತು ಗುರೆಜ್ ಸೆಕ್ಟರ್ ಗಳಲ್ಲಿ ಪಾಕಿಸ್ತಾನ ಆರ್ಮಿ ಅಪ್ರಚೋದಿತ ಗುಂಡಿನ ದಾಳಿ ಮಾಡಿದ್ದು, ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ದಾಳಿ ಮಾಡಿದೆ. ಈ ದಾಳಿಯಲ್ಲಿ ಪಾಕಿಸ್ತಾನದ ಎರಡು-ಮೂರು ಸೇನಾ ವಿಶೇಷ ಸೇವಾ ಗುಂಪು (ಎಸ್‍ಎಸ್‍ಜಿ) ಕಮಾಂಡೋಗಳು ಸೇರಿದಂತೆ ಏಳೆಂಟು ಸೈನಿಕರು ಸಾವನ್ನಪ್ಪಿದ್ದಾರೆ. ಜೊತೆಗೆ ಪಾಕಿಸ್ತಾನದ 12 ಮಂದಿ ಯೋಧರು ಗಾಯಗೊಂಡಿದ್ದಾರೆ.

    ಎರಡು ಕಡೆ ನಡೆದ ಈ ಗುಂಡಿನ ದಾಳಿಯಲ್ಲಿ ಉರಿ ಸೆಕ್ಟರಿನಲ್ಲಿ ಇಬ್ಬರು ಭಾರತೀಯ ಸೈನಿಕರು ಮತ್ತು ಗುರೆಜ್ ಸೆಕ್ಟರಿನಲ್ಲಿ ಓರ್ವ ಯೋಧ ಸೇರಿ ಒಟ್ಟು ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಜೊತೆಗೆ ಮೂವರು ಯೋಧರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ದಾಳಿಯಲ್ಲಿ ಪಾಕಿಸ್ತಾನ ಸೇನೆಯ ಬಂಕರ್ ಗಳು, ಇಂಧನ ಡಂಪ್‍ಗಳು ಮತ್ತು ಲಾಂಚ್ ಪ್ಯಾಡ್‍ಗಳು ಹಾಗೂ ಭಯೋತ್ಪಾದಕರು ಅಡಗು ತಾಣಗಳು ನಾಶವಾಗಿವೆ ಎಂದು ಸೇನೆಯಿಂದ ಮಾಹಿತಿ ದೊರಕಿದೆ.

    ಈ ವಿಚಾರವಾಗಿ ಹೇಳಿಕೆ ಬಿಡುಗಡೆ ಮಾಡಿರುವ ಸೇನೆ, ದಾವರ್, ಕೆರನ್, ಉರಿ ಮತ್ತು ನೌಗಮ್ ಸೇರಿದಂತೆ ಹಲವಾರು ಸೆಪ್ಟರ್ ಗಳಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿದೆ. ಜೊತೆಗೆ ಮಾರ್ಟಾರ್ ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಬಳಸಿ ಉದ್ದೇಶಪೂರ್ವಕವಾಗಿ ನಾಗರಿಕ ಪ್ರದೇಶಗಳ ಮೇಲೆ ದಾಳಿ ಮಾಡಿದೆ. ಈ ದಾಳಿಯಲ್ಲಿ ಮೂವರು ಯೋಧರು ಹುತಾತ್ಮರಾಗಿದ್ದು, ಇನ್ನೂ ಮೂವರು ಗಾಯಗೊಂಡಿದ್ದಾರೆ. ಜೊತೆಗೆ ಮಕ್ಕಳು ಸೇರಿದಂತೆ ಆರು ಜನ ನಾಗರಿಕರು ಗಾಯಗೊಂಡಿದ್ದಾರೆ ತಿಳಿಸಿದೆ.

  • ಉರಿ ಸೆಕ್ಟರ್‌ನಲ್ಲಿ ಉಗ್ರರ ದಾಳಿಗೆ ಮಡಿದ ವೀರ ಯೋಧನ ಅಂತ್ಯಕ್ರಿಯೆ

    ಉರಿ ಸೆಕ್ಟರ್‌ನಲ್ಲಿ ಉಗ್ರರ ದಾಳಿಗೆ ಮಡಿದ ವೀರ ಯೋಧನ ಅಂತ್ಯಕ್ರಿಯೆ

    – ವೀರಯೋಧ ವಿರೇಶ್ ಅಮರ್ ರಹೆ: ಮೊಳಗಿದ ಘೋಷಣೆ
    – ಮಗನನ್ನು ನೆನೆದು ಕಣ್ಣೀರಿಟ್ಟ ತಾಯಿ

    ಗದಗ: ಜಮ್ಮು-ಕಾಶ್ಮಿರದ ಉರಿನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಯಲ್ಲಿ ಹುತಾತ್ಮರಾಗಿದ್ದ ಯೋಧ ವೀರೇಶ್ ಕುರಹಟ್ಟಿ ಅವರ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಇಂದು ರೋಣ ತಾಲೂಕಿನ ಕರುಮುಡಿ ಗ್ರಾಮದಲ್ಲಿ ನೆರವೇರಿತು.

    ಕರುಮುಡಿ ಗ್ರಾಮದ ಯೋಧ ವೀರೇಶ್ ಕುರಹಟ್ಟಿ (50) ಅವರು ಕಳೆದ 30 ವರ್ಷಗಳಿಂದ ಭಾರತೀಯ ಸೇನೆಯ 18ನೇ ಮರಾಠ ಬಟಾಲಿಯನ್‍ನಲ್ಲಿ ಸೇವೆಸಲ್ಲಿಸುತ್ತಿದ್ದರು. ಇತ್ತೀಚೆಗೆ ಸುಬೇದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಡಿಸೆಂಬರ್ 25ರಂದು ಶ್ರೀನಗರದ ರಾಮಾಪೂರ ಹಾಗೂ ಉರಿ ಸೆಕ್ಟರ್‍ನಲ್ಲಿ ಭಾರತೀಯ ಸೈನಿಕರು ಹಾಗೂ ಪಾಕಿಸ್ತಾನದ ನುಸುಳುಕೊರ ಉಗ್ರರ ಮಧ್ಯೆ ಗುಂಡಿನ ದಾಳಿ ನಡೆದಿತ್ತು. ಈ ವೇಳೆ ಗುಂಡು ತಗುಲಿ ಯೋಧ ವೀರೇಶ್ ವೀರಮರಣ ಹೊಂದಿದ್ದಾರೆ.

    ವೀರೇಶ್ ಅವರು ಕಳೆದ ದೀಪಾವಳಿ ಹಬ್ಬಕ್ಕೆ ಊರಿಗೆ ಬಂದು ಕುಟುಂಬದವರೊಂದಿಗೆ ಖುಷಿ ಖುಷಿಯಾಗಿ ಬೆಳಕಿನ ಹಬ್ಬ ಆಚರಿಸಿಹೊಗಿದ್ದರು. ಈಗ ಅವರ ಮನೆ ಬೆಳಕು ನಂದಿಹೋಗಿದ್ದು, ಕುಟುಂಬಕ್ಕೆ ಕತ್ತಲು ಆವರಿಸಿದಂತಾಗಿದೆ. ಸೇನೆಯಲ್ಲಿ ಸುಬೆದಾರ್ ಆಗಿ ಕೆಲಸ ಮಾಡುತ್ತಿದ್ದ ವೀರೇಶ್ ಕುರಹಟ್ಟಿ ನಿವೃತ್ತಿಯಾಗಲು ಕೇವಲ ಮೂರು ತಿಂಗಳು ಮಾತ್ರ ಬಾಕಿ ಇತ್ತು. ನಿವೃತ್ತಿಯಾಗಿ ಊರಿಗೆ ಬರುವ ಮುನ್ನ ಶವವಾಗಿ ತಾಯಿನಾಡಿಗೆ ತೆರಳುತ್ತಿರುವುದು ನಿಜಕ್ಕೂ ದುಃಖದ ಸಂಗತಿ. ವೀರೇಶ್ ಅವರ ಅಗಲಿಕೆಯಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

    ಬಡತನ ಕುಟುಂಬವಾದ್ದರಿಂದ ಹೊಟ್ಟೆಬಟ್ಟೆ ಕಟ್ಟಿ ನೌಕರಿ ಮಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕೆಂಬ ಕನಸು, ಛಲ, ಯೊಧ ವೀರೇಶ್ ಅವದ್ದಾಗಿತ್ತು. ವೀರೇಶ್ ಅವರು ಹುತಾತ್ಮರಾಗುವ ಒಂದು ವಾರದ ಮೊದಲು ತಾಯಿ ಕಾಶಮ್ಮ ಅವರಿಗೆ ಫೋನ್ ಮಾಡಿದ್ದರು. ಆದರೆ ಮನೆಯ ಬಳಿಯ ನಾಯಿ ಕೂಗುವ ಶಬ್ಧಕ್ಕೆ ಮಗನ ಧ್ವನಿ ತಾಯಿಗೆ ಕೇಳಿಸಲಿಲ್ಲ. ಅಮ್ಮಾ ಮತ್ತೊಮ್ಮೆ ಫೋನ್ ಮಾಡುತತೇನೆ ಚೆನ್ನಾಗಿರು ಅಂತ ವೀರೇಶ್ ಫೋನ್ ಕಟ್ ಮಾಡಿದ್ದರು. ಅಂದಿನ ಆ ಧ್ವನಿ ತಾಯಿಯ ಕಿವಿನಲ್ಲಿ ಇಂದಿಗೂ ಗುಣಗುಡುತ್ತಿದೆ ಎಂದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ.

    ದೇಶ ಸೇವೆ ಸಾಕು ಬಾ ಮಗ ಅಂತ ತಾಯಿ ಹೇಳಿದಾಗಲೆಲ್ಲಾ, ಆಯಿತು ಅಮ್ಮ ಬೇಗ ಬರುತ್ತೇನೆ ಎಂದು ವಿರೇಶ್ ಹೇಳುತ್ತಿದ್ದರು. ಈಗ ಶವವಾಗಿ ಮನೆಗೆ ಬಂದಿದ್ದಾರೆ. ಮನೆಯ ಒಡೆಯನೇ ಹೋದಮೇಲೆ ನಮಗ್ಯಾರು ಗತಿ ಎಂದು ವೀರೇಶ್ ಅವರ ಕುಟುಂಬ ಕಣ್ಣೀರಿಡುತ್ತಿದೆ. ಪತ್ನಿ ಲಲಿತಾ ಅವರು ಕೂಡ ಎರಡು ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ರೋಧಿಸುತ್ತಿದ್ದಾರೆ. ದೇಶಕ್ಕೆ ಅರ್ಪಣೆಯಾದ ಎನ್ನುವ ಗಟ್ಟಿ ಮನಸ್ಸಿನ ಮಾತು ಮನೆಯವರಿಂದ ಕೇಳಿ ಬರುತ್ತಿದ್ದರೂ, ಒಡಲಾಳದಲ್ಲಿ ಹೇಳಲಾಗದಷ್ಟು ನೋವು ತುಂಬಿದೆ.

    ವೀರಯೋಧ ವೀರೇಶ್ ಅವರ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ಬರುತ್ತಿದ್ದಂತೆ, ಗ್ರಾಮದ ಯುವಕರು ನೂರಾರು ಬೈಕ್‍ಗಳ ಮೂಲಕ ಬೈಕ್ ರ್ಯಾಲಿ ನಡೆಸಿದರು. ಗ್ರಾಮದ ತುಂಬೆಲ್ಲಾ ಮೆರವಣಿಗೆ ಮಾಡಿದರು. ಅಮರ್ ರಹೆ.. ಅಮರ್ ರಹೆ.. ವೀರಯೋಧ ವಿರೇಶ್ ಅಮರ್ ರಹೆ… ಭಾರತ ಮಾತಾಕಿ ಜೈ ಎಂಬ ಘೋಷಣೆ ಕೂಗುತ್ತ ಊರ ತುಂಬೆಲ್ಲಾ ಪಾರ್ಥಿವ ಶರೀರ ಮೆರವಣಿಗೆ ಮಾಡಿದರು. ಯೋಧ ವೀರೇಶ್ ಅವರು ಹುತಾತ್ಮರಾದ ಸುದ್ದಿಯಿಂದ ಕರಮುಡಿ ಗ್ರಾಮದ ಊರಿಗೆ ಊರೆ ದುಃಖ ಮಡುಗಟ್ಟಿದೆ.

    ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿಪಾಟೀಲ್ ಅವರು ಯೋಧ ವೀರೇಶ್ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಮಕ್ಕಳ ಶಿಕ್ಷಣಕ್ಕೆ ಎರಡು ಲಕ್ಷ ರೂಪಾಯಿ ಪರಿಹಾರ ಘೊಷಣೆ ಮಾಡಿದ್ದಾರೆ. ಸರ್ಕಾರದಿಂದ ಬರುವ ಎಲ್ಲಾ ಸೌಲಭ್ಯಗಳನ್ನು ಆದಷ್ಟು ಬೇಗ ಕುಟುಂಬಕ್ಕೆ ತಲುಪಿಸುವ ಭರವಸೆ ನೀಡಿದರು. ಜೊತೆಗೆ ಗ್ರಾಮದಲ್ಲಿ ವೀರೇಶ್ ಅವರ ಸ್ಮಾರಕ ನಿರ್ಮಿಸುವುದಾಗಿ ಭರವಸೆ ನೀಡಿದರು.

    ಯೋಧ ವೀರೇಶ್ ಅವರ ಅಂತ್ಯಸಂಸ್ಕಾರ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ನೆರವೇರಿತು. ಹಿಂದೂ ಪಂಚಮಸಾಲಿ ಲಿಂಗಾಯತ ಧರ್ಮದ ವಿಧಿವಿಧಾನ ಹಾಗೂ ಸರ್ಕಾರಿ ಸಕಲ ಗೌರವಗೊಂದಿಗೆ ಅಂತ್ಯಕ್ರಿಯೆ ನಡೆಯಿತು. ಸೈನಿಕರು ಮೂರು ಸುತ್ತಿನ ಗುಂಡು ಹಾರಿಸಿ ಗೌರವ ಅರ್ಪಿಸಿದರು. ಅಂತ್ಯಕ್ರಿಯೆಯಲ್ಲಿ ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ್, ಸಚಿವ ಸಿ.ಸಿ ಪಾಟೀಲ್, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಮಾಜಿ ಶಾಸಕರುಗಳಾದ ಬಿ.ಆರ್ ಯಾವಗಲ್, ಜಿ.ಎಸ್.ಪಾಟೀಲ್ ಸೇರಿದಂತೆ ಅನೇಕ ಅಧಿಕಾರಿಗಳು ಭಾಗವಹಿಸಿ ಗೌರವ ವಂದನೆ ಸಲ್ಲಿಸಿದರು.

  • ಉರಿಯಲ್ಲಿ ಉಗ್ರರ ದಾಳಿ – ಗದಗ ಜಿಲ್ಲೆಯ ಯೋಧ ಹುತಾತ್ಮ

    ಉರಿಯಲ್ಲಿ ಉಗ್ರರ ದಾಳಿ – ಗದಗ ಜಿಲ್ಲೆಯ ಯೋಧ ಹುತಾತ್ಮ

    ಗದಗ: ಜಮ್ಮು-ಕಾಶ್ಮೀರದ ಉರಿ ಸೆಕ್ಟರ್ ನಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ವೇಳೆ ಗದಗ ಜಿಲ್ಲೆಯ ಯೋಧರೊಬ್ಬರು ಹುತಾತ್ಮರಾಗಿದ್ದಾರೆ.

    ಜಿಲ್ಲೆಯ ರೋಣ ತಾಲೂಕಿನ ಕರುಮುಡಿ ಗ್ರಾಮದ 50 ವರ್ಷದ ಯೋಧ ವಿರೇಶ್ ಕುರತ್ತಿ ಹುತಾತ್ಮರಾಗಿದ್ದಾರೆ. ವಿರೇಶ್ ಕಳೆದ 30 ವರ್ಷದಿಂದ ಭಾರತೀಯ ಸೇನೆ 18ನೇ ಮರಾಠ ಬೆಟಾಲಿಯನ್‍ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಈಗ ಸುಬೆದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

    ಎರಡು ದಿನಗಳ ಹಿಂದೆ ಶ್ರೀನಗರದ ರಾಮಾಪೂರ ಹಾಗೂ ಉರಿ ಸೆಕ್ಟರ್ ನಲ್ಲಿ ಉಗ್ರರಿಂದ ಗುಂಡಿನ ದಾಳಿ ನಡೆದಿದೆ. ಆ ದಾಳಿಯಲ್ಲಿ ಜಿಲ್ಲೆಯ ಯೋಧ ವಿರೇಶ್ ವೀರ ಮರಣ ಹೊಂದಿದ್ದಾರೆ. ಹುತಾತ್ಮ ಯೋಧನ ಪಾರ್ಥಿವ ಶರೀರ ಶುಕ್ರವಾರ ತಾಯಿನಾಡಿಗೆ ತಲುಪುವ ನಿರೀಕ್ಷೆ ಇದೆ. ಇದನ್ನೂ ಓದಿ: ಮದ್ವೆಯಾದ 16 ದಿನದಲ್ಲೇ ಬಾಂಬ್ ಬ್ಲಾಸ್ಟ್ – ಯೋಧ ಹುತಾತ್ಮ

    ಸೇನೆಯಲ್ಲಿ ಸುಬೆದಾರ್ ಆಗಿ ಕೆಲಸ ಮಾಡುತ್ತಿದ್ದ ವಿರೇಶ್ ಕುರತ್ತಿ ನಿವೃತ್ತಿಯಾಗಲು ಕೇವಲ ಮೂರು ತಿಂಗಳು ಮಾತ್ರ ಬಾಕಿ ಇತ್ತು. ನಿವೃತ್ತಿಯಾಗುವ ಮೊದಲೇ ವಿರೇಶ್ ಹುತಾತ್ಮರಾಗಿದ್ದು, ಇದರಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

    ಶುಕ್ರವಾರ ಯೋಧನ ಪಾರ್ಥಿವ ಶರೀರ ಶ್ರೀನಗರದಿಂದ ವಿಮಾನ ಮೂಲಕ ದೆಹಲಿ, ಪುಣೆ ಮಾರ್ಗವಾಗಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರಲಿದೆ. ಅಲ್ಲಿಂದ ವಾಹನ ಮೂಲಕ ಗದಗ ಜಿಲ್ಲೆ ಕರುಮುಡಿ ಗ್ರಾಮಕ್ಕೆ ತಲುಪಲಿದೆ.