Tag: ಉಪನ್ಯಾಸಕ

  • ಹಾಸಿಗೆ ಹಿಡಿದು 5 ವರ್ಷವಾದ್ರೂ ಸರ್ಕಾರದಿಂದ ಸಿಗದ ಪರಿಹಾರ

    ಹಾಸಿಗೆ ಹಿಡಿದು 5 ವರ್ಷವಾದ್ರೂ ಸರ್ಕಾರದಿಂದ ಸಿಗದ ಪರಿಹಾರ

    -ಸಂಕಷ್ಟದಲ್ಲಿ ಪಾರ್ಶ್ವವಾಯು ಪೀಡಿತ ಉಪನ್ಯಾಸಕರ ಕುಟುಂಬ

    ಧಾರವಾಡ: ಪಾರ್ಶ್ವವಾಯು ಪೀಡಿತ ಉಪನ್ಯಾಸಕರೊಬ್ಬರ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದು, ಸರ್ಕಾರ ಸಹಾಯಕ್ಕೆ ಮುಂದಾಗಬೇಕೆಂದು ಕುಟುಂಬಸ್ಥರು ಮನವಿ ಮಾಡಿಕೊಂಡಿದ್ದಾರೆ.

    ಧಾರವಾಡದ ನಿಸರ್ಗ ಲೇಔಟ್ ನಲ್ಲಿರುವ ಮಹಾದೇವ್ ಮಾಳಗಿ ಕಳೆದ 5 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾರೆ. 1999ರಲ್ಲಿ ಕೆಇಎಸ್ ಪರೀಕ್ಷೆಯಲ್ಲಿ ಪಾಸಾದ ನಂತರ ಶಿಕ್ಷಣ ಇಲಾಖೆಯಲ್ಲಿ 15 ವರ್ಷ ಸರ್ವಿಸ್ ಮಾಡಿದ್ದಾರೆ. ಬಿಇಓ ಆಗಿ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಮಹಾದೇವ್ ಮಾಳಗಿ ಅವರು ಹಿರಿಯ ಉಪನ್ಯಾಸಕರಾಗಿ ಬೆಳಗಾವಿ ಜಿಲ್ಲೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪಾರ್ಶ್ವವಾಯುಗೆ ತುತ್ತಾಗಿದ್ದರು.

    ಅಂದಿನಿಂದ ಮಹಾದೇವ್ ಮಾಳಗಿ ಅವರಿಗೆ ಸಂಬಳವೂ ಬಂದಿಲ್ಲ ಮತ್ತು ಇಲಾಖೆಯಿಂದ ಯಾವುದೇ ಸಹಾಯ ದೊರೆತಿಲ್ಲ. ಮಹಾದೇವ್ ಅವರ ಚಿಕಿತ್ಸೆಗಾಗಿ ಆಸ್ತಿ ಮಾರಾಟ ಮಾಡಿ ಆಸ್ಪತ್ರೆ ಬಿಲ್ ಪಾವತಿಸುತ್ತಿದ್ದಾರೆ. ಸ್ವಯಂ ನಿವೃತ್ತಿ ಪಡೆಯಲು ಅಂದಿನ ಸಿಎಂ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದ್ರೂ ಕಾನೂನು ತೊಡಕು ಉಂಟಾಗಿದೆ. ಹೀಗಾಗಿ ಈ ಅಧಿಕಾರಿ ಕುಟುಂಬ ಈಗ ಸಮಸ್ಯೆಗೆ ಸಿಲುಕಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕೆ ಹಾಗೂ ಚಿಕಿತ್ಸೆ ಹಣ ಇಲ್ಲದೇ ಪರದಾಟ ನಡೆಸಿದೆ. ಸರ್ಕಾರ ವಿಶೇಷ ಪ್ರಕರಣ ಎಂದು ಪರಿಗಣಿಸಿ ಇವರ ಕುಟುಂಬಕ್ಕೆ ಸಹಾಯ ಮಾಡಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

  • ಕೊರೊನಾ ಎಫೆಕ್ಟ್ – ಮರದ ಮೇಲೆ ಮನೆ ಮಾಡಿದ ಕರಾವಳಿಯ ಉಪನ್ಯಾಸಕ

    ಕೊರೊನಾ ಎಫೆಕ್ಟ್ – ಮರದ ಮೇಲೆ ಮನೆ ಮಾಡಿದ ಕರಾವಳಿಯ ಉಪನ್ಯಾಸಕ

    ಮಂಗಳೂರು: ಕೊರೊನಾ ಭೀತಿಯಿಂದ ಜನರು ಸಾಮಾಜಿಕ ಅಂತರ ಕಾಯ್ದು ಕೊಳ್ಳುತ್ತಿದ್ದಾರೆ. ಆದರೆ ಇಲ್ಲೊಬ್ಬರು ಸಾಮಾಜಿಕ ಅಂತರದಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮರದ ಮೇಲೆಯೇ ಟ್ರೀಹೌಸ್ ನಿರ್ಮಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ವಿವೇಕ್ ಆಲ್ವ ಮರದ ಮೇಲೆ ಮನೆ ನಿರ್ಮಿಸಿದ್ದಾರೆ. ವೃತ್ತಿಯಲ್ಲಿ ಉಪನ್ಯಾಸಕರಾಗಿರುವ ಇವರು, ಕೃಷಿ ಸಂಶೋಧನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ತನ್ನ ಮನೆಯ ಸಮೀಪವಿರುವ ಕೃತಕ ಕಾಡಿನಲ್ಲಿ 7 ದಿನಗಳ ಕಾಲ ಕೆಲಸ ಮಾಡಿ ಮರದ ಮೇಲೆ ಗುಡಿಸಲನ್ನು ನಿರ್ಮಾಣ ಮಾಡಿದ್ದಾರೆ.

    ಇದು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದರ ಜೊತೆಗೆ ಅದ್ಭುತ ಪ್ರಕೃತಿ ಸೌಂದರ್ಯದ ಅನುಭವವನ್ನು ನೀಡುತ್ತದೆ. ಈ ಮರದ ಮೇಲಿನ ಗುಡಿಸಲಿನಲ್ಲಿ ಹಕ್ಕಿಗಳ ಚಿಲಿಪಿಲಿ, ಪುಸ್ತಕ ಓದುವುದು, ಏಕಾಂತದಲ್ಲಿ ಸಂಗೀತ ಕೇಳುವುದು, ತಂಪಾದ ಗಾಳಿಯೊಂದಿಗೆ ಪ್ರಕೃತಿ ವೀಕ್ಷಣೆ ಮಾಡಬಹುದು. ಜೊತೆಗೆ ಇಲ್ಲಿ ಇವರು ಹಕ್ಕಿಗಳಿಗಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ವಿವೇಕ್ ಆಳ್ವ ಹೇಳಿದ್ದಾರೆ.

    ಈ ಗುಡಿಸಲಿನ ಸುತ್ತ ಬಿಸಿಲು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಶಾಡೋ ನೆಟ್ ಹಾಕಲಾಗಿದೆ. ಕುಳಿತುಕೊಳ್ಳಲು ಚೇರ್ ಗಳ ವ್ಯವಸ್ಥೆ ಮಾಡಲಾಗಿದೆ. ಸದ್ಯ ಲಾಕ್‍ಡೌನ್ ನಿಂದ ಸಮಯ ಕಳೆಯಲು ಇದು ಉತ್ತಮ ಜಾಗ ಎಂದು ವಿವೇಕ್ ಆಳ್ವ ತಿಳಿಸಿದ್ದಾರೆ.

  • ಬುದ್ಧಿ ಹೇಳಿದ್ದಕ್ಕೆ ಉಪನ್ಯಾಸಕನ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿ

    ಬುದ್ಧಿ ಹೇಳಿದ್ದಕ್ಕೆ ಉಪನ್ಯಾಸಕನ ಮೇಲೆ ಹಲ್ಲೆ ಮಾಡಿದ ವಿದ್ಯಾರ್ಥಿ

    ರಾಯಚೂರು: ವಿದ್ಯಾರ್ಥಿಗಳ ಜಗಳಕ್ಕೆ ಪಂಚಾಯತಿ ಮಾಡಿ ಬುದ್ಧಿ ಹೇಳಿದ್ದಕ್ಕೆ ಉಪನ್ಯಾಸಕನ ಮೇಲೆ ವಿದ್ಯಾರ್ಥಿಯೋರ್ವ ತನ್ನ ಸ್ನೇಹಿತರೊಂದಿಗೆ ಹಲ್ಲೆ ಮಾಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಪ್ರಾಣೇಶ್ ಕುಲಕರ್ಣಿ ಮೇಲೆ ವಿದ್ಯಾರ್ಥಿಯಿಂದ ಹಲ್ಲೆಯಾಗಿದೆ.

    ಕಾಲೇಜಿನ ಬಿಸಿಎ ವಿದ್ಯಾರ್ಥಿ ರಂಜಿತ್ ಕುಮಾರ್ ಇನ್ನೋರ್ವ ಬಿಎ ವಿದ್ಯಾರ್ಥಿ ಆಂಜಿನೇಯನ ಮೇಲೆ ತನ್ನ ಸ್ನೇಹಿತರೊಂದಿಗೆ ಕಾಲೇಜು ಬಳಿ ಹಲ್ಲೆ ಮಾಡಿದ್ದನು. ಈ ಘಟನೆ ಹಿನ್ನೆಲೆ ಕಾಲೇಜಿನ ಉಪನ್ಯಾಸಕರು ರಂಜಿತ್‍ನನ್ನ ಕರೆದು ತಿಳಿ ಹೇಳಿದ್ದರು. ಆ ವೇಳೆಯೂ ತನ್ನ ಸ್ನೇಹಿತರನ್ನ ಕರೆದುಕೊಂಡು ಬಂದಿದ್ದ ರಂಜಿತ್ ಉಪನ್ಯಾಸಕರ ಮಾತಿಗೂ ಬೆಲೆಕೊಟ್ಟಿರಲಿಲ್ಲ. ಉಪನ್ಯಾಸಕ ಪ್ರಾಣೇಶ್ ಕುಲಕರ್ಣಿ ರಂಜಿತ್ ವರ್ತನೆಯನ್ನ ಖಂಡಿಸಿ ಬೈದಿದ್ದರು. ಇದೇ ಸಿಟ್ಟನ್ನ ಇಟ್ಟುಕೊಂಡು ಕೃಷಿ ವಿವಿ ಹತ್ತಿರ ಬುಲೆಟ್ ನಲ್ಲಿ ಕಾಲೇಜಿಗೆ ಬರುತ್ತಿದ್ದ ಉಪನ್ಯಾಸಕ ಪ್ರಾಣೇಶ್ ಕುಲಕರ್ಣಿಯನ್ನ ತಡೆದು ಮನಸೋಇಚ್ಚೆ ಹಲ್ಲೆ ಮಾಡಿದ್ದಾರೆ.

    ಘಟನೆ ಹಿನ್ನೆಲೆ ರಂಜಿತ್ ಸೇರಿ ಆರು ಜನರ ವಿರುದ್ಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಾಯಗೊಂಡು ಪ್ರಜ್ಞೆತಪ್ಪಿ ರಸ್ತೆಯಲ್ಲಿ ಬಿದ್ದಿದ್ದ ಉಪನ್ಯಾಸಕ ಪ್ರಾಣೇಶ್ ನನ್ನ ಕಂಡು ಅವರ ಹಳೆಯ ವಿದ್ಯಾರ್ಥಿ ಸಮೀರ್ ಪಾಶಾ ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಉಪನ್ಯಾಸಕ ಪ್ರಾಣೇಶ್ ಚೇತರಿಸಿಕೊಂಡಿದ್ದಾರೆ.

    ಈ ಹಿಂದೆ ವಿದ್ಯಾರ್ಥಿ ರಂಜಿತ್ ಕಾಲೇಜು ಶುಲ್ಕ ಕಟ್ಟದಿದ್ದಾಗ ಪ್ರಾಣೇಶ್ ಸ್ವತಃ ಶುಲ್ಕ ಕಟ್ಟಿ ಪರೀಕ್ಷೆ ಬರೆಯಲು ಅನುಮಾಡಿಕೊಟ್ಟಿದ್ದರಂತೆ. ಆದ್ರೆ ಅದೇ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಉಪನ್ಯಾಸಕನ ಮೇಲೆ ಹಲ್ಲೆ ಮಾಡಿದ್ದಾನೆ. ಅದೃಷ್ಟವಶಾತ್ ಬಸ್ ನಲ್ಲಿ ರಾಯಚೂರಿಗೆ ಬರುತ್ತಿದ್ದ ಹಳೆಯ ವಿದ್ಯಾರ್ಥಿ ಸಮೀರ್ ಪಾಶಾ ಕೂಡಲೇ ಬಸ್ ಇಳಿದು ಪ್ರಜ್ಞೆತಪ್ಪಿ ಬಿದ್ದಿದ್ದ ಉಪನ್ಯಾಸಕರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾನೆ.

  • ಪ್ರಶ್ನೆ ಕೇಳಿದ ವಿದ್ಯಾರ್ಥಿಗಳಿಗೆ ಚಪ್ಪಲಿಯಿಂದ ಥಳಿಸಿದ ಉಪನ್ಯಾಸಕ

    ಪ್ರಶ್ನೆ ಕೇಳಿದ ವಿದ್ಯಾರ್ಥಿಗಳಿಗೆ ಚಪ್ಪಲಿಯಿಂದ ಥಳಿಸಿದ ಉಪನ್ಯಾಸಕ

    ರಾಯಚೂರು: ಪರೀಕ್ಷೆಯಲ್ಲಿ ಅಂಕ ನೀಡುವ ವಿಚಾರವಾಗಿ ತಾರತಮ್ಯ ಯಾಕೆ ಮಾಡುತ್ತೀರಿ ಅಂತ ಪ್ರಶ್ನಿಸಿದ್ದಕ್ಕೆ ರಾಯಚೂರಿನ ಮಾನ್ವಿಯಲ್ಲಿ ಉಪನ್ಯಾಸಕನೋರ್ವ ವಿದ್ಯಾರ್ಥಿಗಳಿಗೆ ಚಪ್ಪಲಿಯಿಂದ ಥಳಿಸಿರುವ ಘಟನೆ ನಡೆದಿದೆ.

    ಮಾನ್ವಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಉಪನ್ಯಾಸಕ ಚಂದ್ರಶೇಖರ್ ವಿದ್ಯಾರ್ಥಿ ಪೃಥ್ವಿರಾಜ್ ಹಾಗೂ ಇತರರಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ. ಏಕಾಏಕಿ ವಿದ್ಯಾರ್ಥಿಗಳಿಗೆ ಚಪ್ಪಲಿಯಿಂದ ಹೊಡೆದಿರುವ ದೃಶ್ಯವು ಕಾಲೇಜಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉಪನ್ಯಾಸಕನ ವರ್ತನೆಯಿಂದ ಬೇಸತ್ತ ವಿದ್ಯಾರ್ಥಿಗಳು ಕೂಡಲೇ ಕ್ರಮ ಕೈಗೊಳ್ಳುವಂತೆ ಪ್ರಾಂಶುಪಾಲರಿಗೆ ದೂರು ನೀಡಿದ್ದಾರೆ.

    ಚಂದ್ರಶೇಖರ್ ಅವರು ಉದ್ದೇಶ ಪೂರ್ವಕವಾಗಿ ಕೆಲ ವಿದ್ಯಾರ್ಥಿಗಳಿಗೆ ಆಂತರಿಕ ಅಂಕಗಳನ್ನು ಕಡಿಮೆ ನೀಡುತ್ತಾರೆ. ಅಷ್ಟೇ ಅಲ್ಲದೆ ವಿದ್ಯಾರ್ಥಿಗಳ ಜೊತೆ ಅನುಚಿವಾಗಿ ವರ್ತಿಸುತ್ತಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾತಿನಲ್ಲೆ ಉತ್ತರ ಕೊಟ್ಟು ಮುಗಿಸಬಹುದಾಗಿದ್ದನ್ನು ಚಪ್ಪಲಿ ಏಟಿನ ಮೂಲಕ ಬೆಳೆಸಿದ್ದಕ್ಕೆ ಎಂದು ಉಪನ್ಯಾಸಕರಿಗೆ ಪ್ರಾಂಶುಪಾಲರು ಛೀಮಾರಿ ಹಾಕಿದ್ದಾರೆ ಎನ್ನಲಾಗಿದೆ. ಜೊತೆಗೆ ವಿದ್ಯಾರ್ಥಿಗಳ ಪೋಷಕರು ಸಹ ಹಲ್ಲೆ ಮಾಡಿದ ಉಪನ್ಯಾಸಕ ಚಂದ್ರಶೇಖರ್ ಅವರ ವರ್ತನೆ ಬಗ್ಗೆ ಕಿಡಿಕಾರಿದ್ದಾರೆ.

    ಕೊನೆಗೆ ಉಪನ್ಯಾಸಕ ಚಂದ್ರಶೇಖರ್ ವಿದ್ಯಾರ್ಥಿಗಳಲ್ಲಿ ಕ್ಷಮೆಯಾಚಿಸಿದ್ದರಿಂದ ವಿದ್ಯಾರ್ಥಿಗಳು ಸುಮ್ಮನಾಗಿದ್ದಾರೆ. ಆದರೆ ವಿದ್ಯಾರ್ಥಿಗಳಿಗೆ ಚಪ್ಪಲಿಯಿಂದ ಹೊಡೆದ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

  • ವಿದ್ಯಾರ್ಥಿನಿಗೆ ಕಾಮಪಾಠ-ಉಪನ್ಯಾಸಕನಿಗೆ ಬಿತ್ತು ಧರ್ಮದೇಟು

    ವಿದ್ಯಾರ್ಥಿನಿಗೆ ಕಾಮಪಾಠ-ಉಪನ್ಯಾಸಕನಿಗೆ ಬಿತ್ತು ಧರ್ಮದೇಟು

    ಕಲಬುರಗಿ: ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಉಪನ್ಯಾಸಕನಿಗೆ ವಿದ್ಯಾರ್ಥಿಗಳು ಥಳಿಸಿದ್ದಾರೆ. ಕಲಬುರಗಿ ನಗರದ ಶರಣಬಸವ ವಿಶ್ವವಿದ್ಯಾಲಯದಲ್ಲಿ ಈ ಘಟನೆ ನಡೆದಿದೆ.

    ಚೆನ್ನು ಬಿರಾಜಿ ವಿದ್ಯಾರ್ಥಿಗಳಿಂದ ಒದೆ ತಿಂದ ಉಪನ್ಯಾಸಕ. ವಿಶ್ವವಿದ್ಯಾಲಯದ ಎಲೆಕ್ಟ್ರಿಕಲ್ ವಿಭಾಗದ ಉಪನ್ಯಾಸಕನಾಗಿರುವ ಚೆನ್ನು ವಿದ್ಯಾರ್ಥಿನಿಗಳಿಗೇ ಪಾಠ ಮಾಡುವದು ಬಿಟ್ಟು ತನ್ನ ಚಪ್ಪಲ ತೀರಿಸಿಕೊಳ್ಳಲು ಹೋಗಿದ್ದಾನೆ. ವಿದ್ಯಾರ್ಥಿನಿಯರ ಮೊಬೈಲ್ ನಂಬರ್ ಪಡೆದು ಅಸಭ್ಯ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡಿದ್ದಾನೆ. ಉಪನ್ಯಾಸಕನ ಕಾಟದಿಂದ ಬೇಸತ್ತ ವಿದ್ಯಾರ್ಥಿನಿ ರಹಸ್ಯವಾಗಿ ಮೊಬೈಲ್ ನಲ್ಲಿ ಸಾಕ್ಷ್ಯ ಸಂಗ್ರಹಿಸಿದ್ದಾಳೆ.

    ಈ ವಿಷಯ ವಿದ್ಯಾರ್ಥಿನಿಯ ಪೋಷಕರಿಗೆ ಗೊತ್ತಾಗುತ್ತಿದ್ದಂತೆ ಕಾಲೇಜಿನತ್ತ ಬಂದು ಕಾಮುಕನ ಉಪನ್ಯಾಸಕನ ಗ್ರಹಚಾರ ಬಿಡಿಸಿದ್ದಾರೆ. ವಿದ್ಯಾರ್ಥಿಗಳ ಎದುರೇ ಕ್ಲಾಸ್‌ರೂಂನಲ್ಲಿ ಥಳಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ವಿದ್ಯಾರ್ಥಿನಿ ಕಡೆಯವರು ಎಲ್ಲಾ ವಿದ್ಯಾರ್ಥಿನಿಯರಿಗೇ ಕ್ಷಮೆ ಕೇಳುವಂತೆ ಬಾರಿಸಿದ್ದಾರೆ. ನಂತರ ಚೆನ್ನು ತರಗತಿ ಕೋಣೆಯಲ್ಲಿ ಎಲ್ಲ ವಿದ್ಯಾರ್ಥಿಗಳ ಬಳಿ ಕ್ಷಮೆ ಕೇಳಿದ್ದಾನೆ.

    ಈ ವಿಷಯ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಗಮನಕ್ಕೆ ಬರುತ್ತಿದ್ದಂತೆ, ಕೂಡಲೇ ಉಪನ್ಯಾಸಕ ಚೆನ್ನುವಿನ ರಾಜೀನಾಮೆ ಪಡೆದು ಮನೆಗೆ ಕಳುಹಿಸಿದ್ದಾರೆ. ಸದ್ಯ ಈ ಉಪನ್ಯಾಸಕನಿಗೆ ನೀಡಿರುವ ಧರ್ಮದೇಟಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  • ಎನ್‍ಎಸ್‍ಎಸ್ ಶಿಬಿರದಲ್ಲಿ ಶಿಕ್ಷಕರ ಭರ್ಜರಿ ಡ್ಯಾನ್ಸ್ – ವಿಡಿಯೋ ವೈರಲ್

    ಎನ್‍ಎಸ್‍ಎಸ್ ಶಿಬಿರದಲ್ಲಿ ಶಿಕ್ಷಕರ ಭರ್ಜರಿ ಡ್ಯಾನ್ಸ್ – ವಿಡಿಯೋ ವೈರಲ್

    ಕೋಲಾರ: ಕಾಲೇಜು ವಿದ್ಯಾರ್ಥಿಗಳೊಂದಿಗೆ ಎನ್‍ಎಸ್‍ಎಸ್ ಶಿಬಿರದಲ್ಲಿ ಉಪನ್ಯಾಸಕನೊರ್ವ ಕನ್ನಡದ ಎವರ್ ಗ್ರೀನ್ ಹಾಡುಗಳಿಗೆ ಮಳೆಯಲ್ಲಿಯೇ ಸಖತ್ ಡ್ಯಾನ್ಸ್ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

    ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ವೆಂಗದಂದ್ರ ಸರ್ಕಾರಿ ಶಾಲೆಯ ಮೈದಾನದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕ ಮಂಜುನಾಥ್ ಸಕತ್ ಸ್ಟೆಪ್ಸ್ ಹಾಕಿ ಫೇಮಸ್ ಆಗಿದ್ದಾರೆ. ಕಳೆದ ಮೂರು ದಿನಗಳಿಂದ ಸುಂದರಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಎನ್‍ಎಸ್‍ಎಸ್ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ನಿನ್ನೆ ಸುರಿಯುತ್ತಿರುವ ಮಳೆ ನೀರಿನಲ್ಲಿ ಉಪನ್ಯಾಸಕ ಹಾಗೂ ವಿದ್ಯಾರ್ಥಿಗಳು ಪರಸ್ಪರ ನೀರೆರಚಿಕೊಂಡು ಡಾನ್ಸ್ ಮಾಡಿದ್ದಾರೆ.

    ಶಿಕ್ಷಕರು ಡ್ಯಾನ್ಸ್ ಚೆನ್ನಾಗಿ ಮಾಡಿದ್ದಾರೆ. ಆದರೆ ಸಕತ್ ಡಿ.ಜೆ ಸೌಂಡ್‍ಗೆ ಸಾರಾಯಿ ಶೀಸೆಯಲ್ಲಿ ನನ್ನ ದೇವಿ ಕಾಣುವಳು ಎಂಬ ಹಾಡಿಗೆ ಥೇಟ್ ಕುಡುಕರಂತೆ ಉಪನ್ಯಾಸಕ ಸ್ಟೆಪ್ ಹಾಕುವ ಮೂಲಕ ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಪಾಠ ಪ್ರವಚನ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕಾದ ಉಪನ್ಯಾಸಕ ಹೀಗೆ ಮಕ್ಕಳೊಂದಿಗೆ ನೃತ್ಯ ಮಾಡಿರುವುದು ಕೆಟ್ಟ ಸಂದೇಶವನ್ನು ರವಾನಿಸುತ್ತದೆ. ಜೊತೆಗೆ ಉಪನ್ಯಾಸಕ ಮಂಜುನಾಥ್‍ಗೆ ವಿರಹ ವೇದನೆ ಕಾಡುತ್ತಿರಬಹುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಸಾಮಾಜಿಕ ಜಾಲತಾಣದಲ್ಲಿ ಎನ್‍ಎಸ್‍ಎಸ್ ಶಿಬಿರದ ನೃತ್ಯ ವೈರಲ್ ಆಗಿದ್ದು, ಉಪನ್ಯಾಸಕನ ಈ ನಡೆ ತೀವ್ರ ಚರ್ಚೆಗೆ ಕಾರಣವಾಗಿದೆ. ಹಲವು ಉತ್ತಮವಾಗಿ ಡ್ಯಾನ್ಸ್ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

  • ನಿವೃತ್ತಿಯಾದರೂ ಪರಿಸರ ಸೇವೆಯಲ್ಲಿ ತೊಡಗಿರುವ ಉಪನ್ಯಾಸಕ

    ನಿವೃತ್ತಿಯಾದರೂ ಪರಿಸರ ಸೇವೆಯಲ್ಲಿ ತೊಡಗಿರುವ ಉಪನ್ಯಾಸಕ

    – 5 ಸಾವಿರಕ್ಕೂ ಹೆಚ್ಚು ಸಸಿಗಳ ನೆಟ್ಟು ಯುವಕರಿಗೆ ಮಾದರಿ

    ಬಾಗಲಕೋಟೆ: ಪರಿಸರದ ಬಗ್ಗೆ ನಿರ್ಲಕ್ಷ್ಯ ಮನೋಭಾವನೆಯಿಂದ ಕಾಂಕ್ರಿಟ್ ಕಾಡು ಬೆಳೆಯುತ್ತಿದೆ. ಇದರಿಂದ ಎಲ್ಲೆಡೆ ತಾಪಮಾನ ಹೆಚ್ಚುತ್ತಿದೆ. ಆದರೆ ಇಲ್ಲೊಬ್ಬರು ಉಪನ್ಯಾಸಕ ನಿವೃತ್ತಿ ಹೊಂದಿದರೂ ಮನೆಯವರೊಂದಿಗೆ ಕಾಲ ಕಳೆಯದೇ, ತಮ್ಮ ನಿವೃತ್ತಿ ಜೀವನವನ್ನು ಪರಿಸರ ರಕ್ಷಣೆಗೆ ಮುಡಿಪಾಗಿಟ್ಟಿದ್ದಾರೆ.

    ಪರಿಸರ ರಕ್ಷಣೆಗೆ ಮುಂದಾಗಿರುವ ಬಾದಾಮಿ ಪಟ್ಟಣದ ನಿವಾಸಿ ಶಿವರೆಡ್ಡಿ ವಾಸನ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ನಿಸರ್ಗ ಬಳಗ ಎಂಬ ಸಂಘಟನೆ ಹುಟ್ಟುಹಾಕಿ ಸುಂದರ ಪರಿಸರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಮೂಲಕ ಯುವಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುತ್ತ, ಇಡೀ ಪಟ್ಟಣವನ್ನೇ ಹಸಿರೀಕರಣ ಮಾಡಲು ಹೊರಟಿದ್ದಾರೆ. ಪಿಯು ಕಾಲೇಜ್‍ನಲ್ಲಿ ಜೀವಶಾಸ್ತ್ರದ ಉಪನ್ಯಾಸಕರಾಗಿದ್ದ ವಾಸನ್, 63ರ ಇಳಿ ವಯಸ್ಸಿನಲ್ಲಿಯೂ ಪರಿಸರ ಉಳಿಸಿ ಅಭಿಯಾನ ಆರಂಭಿಸಿದ್ದಾರೆ. ಈಗಾಗಲೇ ಪಟ್ಟಣದ ಸುತ್ತ ಸುಮಾರು 5 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಟ್ಟು ಹಸರೀಕರಣದ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದಾರೆ.

    ಹೆಚ್ಚುತ್ತಿರುವ ತಾಪಮಾನವನ್ನು ಸಸಿ ನೆಡುವ ಮೂಲಕ ಕಡಿಮೆ ಮಾಡಬೇಕು. ನೀರಿನ ಅಂತರ್ಜಲ ಮಟ್ಟ ವೃದ್ಧಿಯಾಗಬೇಕು ಎಂಬ ಕನಸುಗಳನ್ನು ಹೊತ್ತು ಬಿಡುವಿನ ವೇಳೆಯಲ್ಲಿ ಊರೂರು ಸುತ್ತಿ ಪರಿಸರ ರಕ್ಷಣೆ, ಗಿಡ ನೆಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಮೂಲಕ ಪರಿಸರ ಪ್ರೇಮಿ ಎನಿಸಿಕೊಂಡಿದ್ದಾರೆ. ಯುವಕರು, ಮಹಿಳೆಯರು, ಶಿಕ್ಷಕರನ್ನೊಳಗೊಂಡ ಸುಮಾರು 50 ಸದಸ್ಯರ ನಿಸರ್ಗ ಬಳಗ ಹುಟ್ಟು ಹಾಕಿ ಚಾಲುಕ್ಯರ ನಾಡನ್ನು ಹಸಿರು ನಾಡು ಮಾಡಲು ಹೊರಟಿದ್ದಾರೆ.

    ಬಾದಾಮಿ ಐತಿಹಾಸಿಕ ಪ್ರವಾಸಿ ತಾಣ, ಪಟ್ಟಣದಲ್ಲಿ ಚಾಲುಕ್ಯರ ಆಳ್ವಿಕೆಗೆ ಸಾಕ್ಷಿಯಾದ ಸುಂದರ ಕಲಾಶಿಲ್ಪಗಳಿವೆ. ಇದನ್ನು ವೀಕ್ಷಿಸಲು ದೇಶ-ವಿದೇಶದಿಂದ ಪ್ರವಾಸಿಗರು ಬರುತ್ತಾರೆ. ಆದರೆ ಪಟ್ಟಣ ಮಾತ್ರ ಬಿಸಿಲ ಕೂಪದಲ್ಲಿ ಸುಡುವಂತಿದೆ. ಇದನ್ನರಿತ ಎಸ್.ಎಚ್ ವಾಸನ್, ಬಾದಾಮಿ ಪಟ್ಟಣವನ್ನು ಸುಂದರ ಪರಿಸರದ ಪಟ್ಟಣವನ್ನಾಗಿ ಮಾಡಬೇಕು ಎಂಬ ಉದ್ದೇಶದಿಂದ, ಪಟ್ಟಣದ ಹಸರೀಕರಣಕ್ಕಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ.

    ಸಸಿ ನೆಡುವುದರಲ್ಲಿಯೂ ಜಾಣತನ ಮೆರೆದಿರುವ ಇವರು, ಹೊಂಗೆ ಮರದಿಂದ ಮುಂದೊಂದು ದಿನ ಜೈವಿಕ ಇಂಧನ ಸಿಗುತ್ತೆ ಎಂಬ ಉದ್ದೇಶದಿಂದ ಹೆಚ್ಚಾಗಿ ಹೊಂಗೆ ಸಸಿಗಳನ್ನೇ ನೆಡುತ್ತಿದ್ದಾರೆ. ಅಲ್ಲದೆ, ಈ ಹಿಂದಿನ ಅರಣ್ಯ ಸಚಿವ ರಮಾನಾಥ್ ರೈ ಅವರನ್ನು ಭೇಟಿ ಮಾಡಿ, ಬಾದಾಮಿ ಪಟ್ಟಣಕ್ಕೆ ಸಾಲುಮರದ ತಿಮ್ಮಕ್ಕ ಉದ್ಯಾನವನ್ನು ಸಹ ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಹೀಗಾಗಿ ಬಾದಾಮಿ ಜನ ಇವರನ್ನು ಪರಿಸರ ಪ್ರೇಮಿ ಎಂದು ಕರೆಯುತ್ತಾರೆ.

  • ವಿದ್ಯಾರ್ಥಿನಿಯರಿಗೆ ಪ್ರೀತಿಯ ಪಾಠ ಮಾಡಿದ ಗಣಿತ ಉಪನ್ಯಾಸಕ ಅಮಾನತು: ವಿಡಿಯೋ

    ವಿದ್ಯಾರ್ಥಿನಿಯರಿಗೆ ಪ್ರೀತಿಯ ಪಾಠ ಮಾಡಿದ ಗಣಿತ ಉಪನ್ಯಾಸಕ ಅಮಾನತು: ವಿಡಿಯೋ

    ಚಂಡೀಗಢ: ಹರಿಯಾಣದ ಗಣಿತ ಉಪನ್ಯಾಸಕನೊಬ್ಬ ವಿದ್ಯಾರ್ಥಿನಿಯರಿಗೆ ಪ್ರೇಮ ಪಾಠ ಹೇಳಿಕೊಟ್ಟು ಕಾಲೇಜಿನಿಂದ ಅಮಾನತುಗೊಂಡಿದ್ದಾನೆ.

    ಕರ್ನಾಲ್‍ನ ಮಹಿಳಾ ಕಾಲೇಜಿನ ಚರಣ್ ಸಿಂಗ್ ಅಮಾನತುಗೊಂಡಿರುವ ಉಪನ್ಯಾಸಕ. ಚರಣ್ ಕ್ಲಾಸಿನಲ್ಲಿ ಪ್ರೀತಿ ಪಾಠ ಮಾಡುತ್ತಿದ್ದಾಗ ವಿದ್ಯಾರ್ಥಿನಿಯೊಬ್ಬಳು ಅದನ್ನು ವಿಡಿಯೋ ಮಾಡಿ ಪ್ರಿನ್ಸಿಪಾಲ್‍ಗೆ ತೋರಿಸಿದ್ದಾಳೆ. ಈ ವಿಡಿಯೋ ನೋಡಿದ ತಕ್ಷಣ ಪ್ರಿನ್ಸಿಪಾಲ್ ಉಪನ್ಯಾಸಕನನ್ನು ಸಸ್ಪೆಂಡ್ ಮಾಡಿದ್ದಾರೆ. ಉಪನ್ಯಾಸಕನ ಪ್ರೀತಿ ಪಾಠದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದೆ.

    ವಿಡಿಯೋದಲ್ಲಿ ಚರಣ್ ಸಿಂಗ್ ವಿದ್ಯಾರ್ಥಿನಿಯರಿಗೆ ಬೋರ್ಡ್ ಮೇಲೆ ಪ್ರೀತಿಯ ಮೂರು ಸೂತ್ರ ಹೇಳಿಕೊಟ್ಟಿದ್ದಾನೆ. ಮೊದಲನೇ ಸೂತ್ರ ಕ್ಲೋಸ್ನೆಸ್- ಅಟ್ರ್ಯಾಕ್ಷನ್ = ಫ್ರೆಂಡ್‍ಶಿಪ್, ಎರಡನೇ ಸೂತ್ರ ಕ್ಲೋಸ್ನೆಸ್ + ಅಟ್ರ್ಯಾಕ್ಷನ್ = ರೊಮ್ಯಾಂಟಿಕ್ ಲವ್ ಹಾಗೂ ಮೂರನೇ ಫಾರ್ಮೂಲಾ ಅಟ್ರ್ಯಾಕ್ಷನ್ – ಕ್ಲೋಸ್ನೆಸ್ = ಕ್ರಶ್ ಎಂದು ಉಪನ್ಯಾಸಕ ಪ್ರೀತಿ ಪಾಠ ಮಾಡಿದ್ದಾನೆ.

    ಈ ಮೂರು ಸೂತ್ರಗಳನ್ನು ಉಪನ್ಯಾಸಕ ಹಿಂದಿಯಲ್ಲಿ ಹೇಳಿಕೊಟ್ಟಿದ್ದಾನೆ. ಸೂತ್ರದ ಪ್ರತಿಯೊಂದು ಪದವನ್ನು ವಿದ್ಯಾರ್ಥಿನಿಯರಿಗೆ ವಿವರಿಸಿದ್ದಾರೆ. ಅಲ್ಲದೇ ಮದುವೆಯಾದ ಮೇಲೆ ಪತಿ – ಪತ್ನಿಯ ವೃದ್ಧರಾದ ನಂತರ ಅವರ ನಡುವೆ ಆಕರ್ಷಣೆ ಕಡಿಮೆ ಆಗುತ್ತೆ. ಬಳಿಕ ಅವರು ಕೇವಲ ಸ್ನೇಹಿತರಾಗಿ ಇರುತ್ತಾರೆ ಎಂದು ಕ್ಲಾಸಿನಲ್ಲಿ ವಿವರಿಸಿದ್ದಾನೆ. ಪ್ರೀತಿ ಪಾಠ ಕೇಳಿದ ವಿದ್ಯಾರ್ಥಿನಿಯರು ಜೋರಾಗಿ ನಗುತ್ತಾ ‘ಯೆಸ್’ ಸಾರ್ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕೇಳಿಬಂದಿದೆ.

  • ಓರ್ವನ ಪ್ರತಿಭಟನೆಗೆ 50ಕ್ಕೂ ಹೆಚ್ಚು ಪೊಲೀಸ್ ನಿಯೋಜನೆ!

    ಓರ್ವನ ಪ್ರತಿಭಟನೆಗೆ 50ಕ್ಕೂ ಹೆಚ್ಚು ಪೊಲೀಸ್ ನಿಯೋಜನೆ!

    ಚಿಕ್ಕಬಳ್ಳಾಪುರ: ಠಾಣೆ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹಕ್ಕಿಳಿದ ಉಪನ್ಯಾಸಕನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಎದುರು ನಡೆದಿದೆ.

    ಖಾಸಗಿ ಕಾಲೇಜಿನ ಉಪನ್ಯಾಸಕ ಪ್ರದೀಪ್ ಈಶ್ವರ್ ಪೊಲೀಸರು ವಶಕ್ಕೆ ಪಡೆದಾತ. ಅಂದಹಾಗೆ ರಾಜಕೀಯ ಮುಖಂಡ ನವೀನ್ ಕಿರಣ್ ಬೆಂಬಲಿಗ ಉಪನ್ಯಾಸಕ ಪ್ರದೀಪ್ ಈಶ್ವರ್ ಹಾಗೂ ಶಾಸಕ ಸುಧಾಕರ್ ಬೆಂಬಲಿಗ ನಗರಸಭಾ ಸದಸ್ಯ ಗಜೇಂದ್ರ ನಡುವೆ ನಗರಸಭಾ ಆವರಣದಲ್ಲೇ ಗಲಾಟೆ ಆಗಿತ್ತು.

    ಈ ಪ್ರಕರಣದಲ್ಲಿ ಪರಸ್ಪರರು ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆದರೆ ಗಲಾಟೆಯ ಸಂಪೂರ್ಣ ಚಿತ್ರಣ ನಗರಸಭೆ ಸಿಸಿಟಿವಿಯಲ್ಲಿ ವಿಡಿಯೋ ರೆಕಾರ್ಡ್ ಆಗಿದ್ದು, ಆ ಸಿಸಿಟಿವಿ ಫೂಟೇಜ್ ಬಿಡುಗಡೆ ಮಾಡುವಂತೆ ಹಾಗೂ ನಗರಸಭಾ ಸದಸ್ಯ ಗಜೇಂದ್ರನನ್ನ ಬಂಧಿಸುವಂತೆ ಉಪನ್ಯಾಸಕ ಪ್ರದೀಪ್ ಆಗ್ರಹಿಸಿ ಅಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದರು. ಅಮರಣಾಂತ ಸತ್ಯಾಗ್ರಹಕ್ಕೆ ಅವಕಾಶ ಮಾಡಿಕೊಡದ ಪೊಲೀಸರು ಪ್ರದೀಪ್ ಈಶ್ವರನನ್ನ ವಶಕ್ಕೆ ಪಡೆದುಕೊಂಡರು.

    ಈ ವೇಳೆ ಮಾತನಾಡಿದ ಪ್ರದೀಪ್, ಶಾಸಕ ಸುಧಾಕರ್ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮತ್ತೊಂದೆಡೆ ಓರ್ವ ಉಪನ್ಯಾಸಕ ಪ್ರತಿಭಟನೆಗೆ ಮುಂದಾದರೆ ಚಿಕ್ಕಬಳ್ಳಾಪುರ ಪೊಲೀಸರು 50 ಕ್ಕೂ ಹೆಚ್ಚು ಮಂದಿ ಬಂದೋಬಸ್ತ್ ಗೆ ನಿಯೋಜನೆಗೊಂಡಿದ್ದರು. ಚಿಕ್ಕಬಳ್ಳಾಪುರ ನಗರ, ಮಹಿಳಾ ಪೊಲೀಸ್ ಠಾಣೆಯ ಸಿಬ್ಬಂದಿ ಅಲ್ಲದೆ ಹೆಚ್ಚುವರಿಯಾಗಿ ಶಿಡ್ಲಘಟ್ಟ ನಗರ ಠಾಣಾ ಪಿ ಎಸ್ ಐ ಹಾಗೂ ಗ್ರಾಮಾಂತರ ಠಾಣಾ ಪಿ ಎಸ್ ಐ ಸೇರಿದಂತೆ ಸಿಬ್ಬಂದಿಯನ್ನ ಸಹ ಕರೆಸಿಕೊಂಡಿದ್ದರು. ಇವರು ಸಾಲದೂ ಅಂತ ಒಂದು ಡಿ ಆರ್ ವ್ಯಾನ್ ತುಕಡಿಯೊಂದಿಗೆ ಸಿಬ್ಬಂದಿಯನ್ನ ನಿಯೋಜನೆಗೊಳಿಸಿದ್ದರು.

    ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆ ಎದುರು ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತೇನೆ ಅಂತ ಉಪನ್ಯಾಸಕ ಪ್ರದೀಪ್ ಅಂಬೇಡ್ಕರ್ ಭಾವಚಿತ್ರ ಹಿಡಿದು ಕೂತು ಪ್ರತಿಭಟನೆ ನಡೆಸಿದ್ದರು. ಇತ್ತ ಪೊಲೀಸ್ ಠಾಣೆ ಬಳಿ ಬಂದ ಚಿಕ್ಕಬಳ್ಳಾಪುರ ವೃತ್ತ ನಿರೀಕ್ಷಕ ಸುದರ್ಶನ್ 50ಕ್ಕೂ ಹೆಚ್ಚು ಮಂದಿ ಪೊಲೀಸರೊಂದಿಗೆ ಪರಿಸ್ಥಿತಿ ನಿಭಾಯಿಸಿ, ಪ್ರದೀಪ್ ಈಶ್ವರ್ ನನ್ನ ವಶಕ್ಕೆ ಪಡೆದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಎಬಿವಿಪಿ ವಿದ್ಯಾರ್ಥಿಗಳ ಕಾಲು ಮುಟ್ಟಿ ಕ್ಷಮೆ ಕೇಳಿದ ಉಪನ್ಯಾಸಕ!- ವಿಡಿಯೋ ವೈರಲ್

    ಎಬಿವಿಪಿ ವಿದ್ಯಾರ್ಥಿಗಳ ಕಾಲು ಮುಟ್ಟಿ ಕ್ಷಮೆ ಕೇಳಿದ ಉಪನ್ಯಾಸಕ!- ವಿಡಿಯೋ ವೈರಲ್

    ಭೋಪಾಲ್: ಕ್ಷಮೆ ಕೇಳುವಂತೆ ಪ್ರತಿಭಟನೆ ನಡೆಸಿದ್ದ ಎಬಿವಿಪಿ ವಿದ್ಯಾರ್ಥಿಗಳ ಕಾಲನ್ನು ಉಪನ್ಯಾಸಕರು ಮುಟ್ಟುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಮಧ್ಯಪ್ರದೇಶದ ಮಥುರಾದ ರಾಜೀವ್ ಗಾಂಧಿ ಸ್ನಾತಕೋತ್ತರ ಕಾಲೇಜಿನಲ್ಲಿ ಘಟನೆ ನಡೆದಿದ್ದು, ಸ್ಥಳದಲ್ಲಿಯೇ ಇದ್ದ ವ್ಯಕ್ತಿಯೊಬ್ಬರು ಈ ದೃಶ್ಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

    ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳು ಬುಧವಾರ ಉಪನ್ಯಾಸಕ ವಿರುದ್ಧ ಘೋಷಣೆ ಕೂಗುತ್ತಿದ್ದರು. ಅಲ್ಲದೆ ಅವರು ನಮ್ಮನ್ನು ಕ್ಷಮೆ ಕೇಳಬೇಕು ಎಂದು ಪಟ್ಟು ಹಿಡಿದಿದ್ದರು. ಈ ವೇಳೆ ಅಲ್ಲಿಗೆ ಬಂದ ಉಪನ್ಯಾಸಕರು ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಕಾಲಿಗೆ ಬಿದ್ದಿದ್ದಾರೆ.

    ಕ್ಷಮೆ ಕೇಳಿದ್ದು ಏಕೆ?
    ಎಬಿವಿಪಿ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ‘ಭಾರತ್ ಮಾತಾ ಕಿ ಜೈ’ ಎಂದು ಘೋಷಣೆ ಕೂಗುತ್ತಿದ್ದರು. ಆಗ ಅಲ್ಲಿದೆ ಬಂದ ಉಪನ್ಯಾಸಕರು ಘೋಷಣೆಯನ್ನು ನಿಲ್ಲಿಸುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದ್ದರು. ಇದರಿಂದಾಗಿ ಉಪನ್ಯಾಸಕರ ವಿರುದ್ಧ ಆಕ್ರೋಶ ಹೊರ ಹಾಕಿದ ವಿದ್ಯಾರ್ಥಿಗಳು, ತರಗತಿ ಬಿಟ್ಟು ಹೊರಬಂದು ಪ್ರತಿಭಟನೆ ಪ್ರಾರಂಭಿಸಿದ್ದರು. ‘ಭಾರತ್ ಮಾತಾ ಕಿ ಜೈ’ ಘೋಷಣೆಯನ್ನು ಕೂಗದಂತೆ ಹೇಳಿ, ದೇಶ ವಿರೋಧಿ ಧೋರಣೆ ತೋರಿದ್ದಾರೆ. ಹೀಗಾಗಿ ಅವರು ನಮಗೆ ಕ್ಷಮೆ ಕೇಳಬೇಕು ಅಂತ ಒತ್ತಾಯಿಸಿದ್ದರು.

    ವಿಡಿಯೋದಲ್ಲಿ ಏನಿದೆ?
    ಪ್ರತಿಭಟನೆ ನಿರತ ವಿದ್ಯಾರ್ಥಿಗಳ ಬಳಿ ಬಂದ ಉಪನ್ಯಾಸಕರು, ಸಹೋದ್ಯೋಗಿಗಳ ಮಾತನ್ನು ಲೆಕ್ಕಿಸದೇ ವಿದ್ಯಾರ್ಥಿಗಳ ಕಾಲು ಮುಟ್ಟಿ ಕ್ಷಮೆಯಾಚನೆಗೆ ಮುಂದಾದರು. ಬನ್ನಿ ಕ್ಷಮೆ ಕೇಳುತ್ತೇನೆ ಅಂತ ಸಾಲಾಗಿ ನಿಂತಿದ್ದ ಕೆಲವರ ಕಾಲಿಗೆ ಬಿದ್ದರು. ಅವರ ವರ್ತನೆಯಿಂದಾಗಿ ಪ್ರತಿಭಟನಾ ನಿರತ ವಿದ್ಯಾರ್ಥಿಗಳು ತಪ್ಪಿಸಿಕೊಳ್ಳಲು ಮುಂದಾದರು. ಬಳಿಕ ನಾನು ತಪ್ಪು ಮಾಡಿದ್ದೇನೆಯೇ ಅಂತ ಪ್ರಶ್ನಿಸಿ, ದೇಶ ವಿರೋಧಿ ಅಂತ ಕರೆಯಬೇಡಿ ಅಂತ ಉಪನ್ಯಾಸಕರು ಹೇಳಿದ್ದಾರೆ.

    ಈ ವಿಡಿಯೋದ ಬಗ್ಗೆ ಜನ ತಮ್ಮದೇ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಪಾಠ ಕಲಿಸಲು ಉಪನ್ಯಾಸಕರು ಕಾಲಿಗೆ ಬಿದ್ದಿದ್ದಾರೆ ಎಂದು ಕೆಲವರು ಹೇಳಿದರೆ, ಕೆಲವರು ವಿದ್ಯಾರ್ಥಿಗಳ ಪ್ರತಿಟಭಟನೆ ಸರಿ ಇದೆ ಎಂದು ಹೇಳಿದ್ದಾರೆ.

    ಈ ವಿಚಾರಕ್ಕೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ಕಮೆಂಟ್ ಮಾಡಿ ತಿಳಿಸಿ.


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv