Tag: ಉಡುಪಿ

  • ರಾಜಕೀಯ ಪ್ರವೇಶದ ಕುರಿತು ಕೊನೆಗೂ ಸ್ಪಷ್ಟನೆ ನೀಡಿದ್ರು ಪಲಿಮಾರು ಶ್ರೀಗಳು

    ರಾಜಕೀಯ ಪ್ರವೇಶದ ಕುರಿತು ಕೊನೆಗೂ ಸ್ಪಷ್ಟನೆ ನೀಡಿದ್ರು ಪಲಿಮಾರು ಶ್ರೀಗಳು

    ಉಡುಪಿ: ನಾನು ರಾಜಕೀಯ ಪ್ರವೇಶ ಮಾಡುವುದಿಲ್ಲ. ನಾನು ರಾಜಕೀಯಕ್ಕೆ ಬರುತ್ತೇನೆ ಎಂಬ ಸುದ್ದಿಯೇ ಬಹಳ ಆಘಾತಕಾರಿ ಎಂದು ಉಡುಪಿ ಪಲಿಮಾರು ಮಠಾಧೀಶ ವಿದ್ಯಾಧೀಶ ಸ್ವಾಮೀಜಿಗಳು ಸ್ಪಷ್ಟಪಡಿಸಿದ್ದಾರೆ.

    ಉಡುಪಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸ್ವಾಮೀಜಿ, ನಾನು ಸ್ವಪ್ನದಲ್ಲೂ ರಾಜಕೀಯಕ್ಕೆ ಬರುವ ಬಗ್ಗೆ ಆಲೋಚಿಸಿಲ್ಲ. ರಾಜಕೀಯ ನನ್ನ ಕ್ಷೇತ್ರವೂ ಅಲ್ಲ. ನಾನು ಧರ್ಮ ಪೀಠದಲ್ಲಿದ್ದೇನೆ. ಧಾರ್ಮಿಕವಾಗಿ ಮಾಡಬೇಕಾದ ಕೆಲಸ ಸಾಕಷ್ಟು ಬಾಕಿಯಿದೆ. ರಾಜಕೀಯದವರು ಧರ್ಮ ಪೀಠಕ್ಕೆ ಮಣಿಯುತ್ತಾರೆ. ನಾನು ಏಕೆ ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸಲಿ ಎಂದು ಪ್ರಶ್ನಿಸಿದರು.

    ತಾನು ರಾಜಕೀಯ ಪ್ರವೇಶ ಮಾಡುತ್ತೇನೆ ಎಂಬುವುದು ಕಲ್ಪಿತವಾದ ವಿಚಾರ. ಖಂಡಿತವಾಗಿ ನಾನು ರಾಜಕೀಯ ಪ್ರವೇಶ ನಿರಾಕರಣೆ ಮಾಡುತ್ತಿದ್ದೇನೆ. ಯಾವ ರಾಜಕಾರಣಿಗಳೂ ನನ್ನನ್ನು ಇದುವರೆಗೂ ಸಂಪರ್ಕಿಸಿಯೇ ಇಲ್ಲ. ಸಂಪರ್ಕಿಸಿದರೂ ನಾನು ಒಪ್ಪುವ ಪ್ರಶ್ನೆಯೇ ಇಲ್ಲ. ಈ ಬಗ್ಗೆ ಮುಂದೆ ಪ್ರಚಾರ ಕೂಡಾ ಬೇಡ. ಆದರೆ ಇಂತಹ ಸುದ್ದಿಯಿಂದ ನನ್ನ ಮನಸ್ಸಿಗೆ ಬಹಳ ನೋವಾಗಿದೆ ಎಂದರು.

    ಹಲವು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿಯಿಂದ ರಾಜ್ಯದ ಐದು ಮಠಾಧೀಶರಿಗೆ ಟಿಕೆಟ್ ಎಂಬುವುದಾಗಿ ಸುದ್ದಿಯಾಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ ಪಾಲಿಮಾರು ಶ್ರೀ ಗಳು ರಾಜಕೀಯ ಪ್ರವೇಶ ಮಾಡುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

  • ನಾಗಮಂಡಲಕ್ಕೂ ನೀತಿಸಂಹಿತೆ ಎಫೆಕ್ಟ್- ಸಾಸ್ತಾನದಲ್ಲಿ ಅಧಿಕಾರಿಗಳ ರಾದ್ಧಾಂತ

    ನಾಗಮಂಡಲಕ್ಕೂ ನೀತಿಸಂಹಿತೆ ಎಫೆಕ್ಟ್- ಸಾಸ್ತಾನದಲ್ಲಿ ಅಧಿಕಾರಿಗಳ ರಾದ್ಧಾಂತ

    ಉಡುಪಿ: ಕರಾವಳಿಯ ಧಾರ್ಮಿಕ ಆಚರಣೆಗಳಿಗೆ ಚುನಾವಣಾ ನೀತಿ ಸಂಹಿತೆ ಅಡ್ಡ ಬರುತ್ತಿದೆ. ಅತ್ಯಂತ ಶೃದ್ಧೆ ಭಕ್ತಿಯಿಂದ ಆಚರಿಸುವ ನಾಗಮಂಡಲ ಸೇವೆಗೂ ಚುನಾವಣೆಯ ಬಿಸಿತಟ್ಟಿದೆ. ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ನಾಗಮಂಡಲ ನಡೆಯುತ್ತಿದ್ದಲ್ಲಿಗೆ ಬಂದ ಚುನಾವಣಾಧಿಕಾರಿಗಳು ರಾದ್ಧಾಂತ ಮಾಡಿದ್ದಾರೆ.

    ಸಾಸ್ತಾನದ ಸ್ಥಳೀಯ ಕುಟುಂಬಸ್ಥರು ಅದ್ಧೂರಿಯಾಗಿ ನಾಗ ಮಂಡಲ ಸೇವೆ ಆಯೋಜನೆ ಮಾಡಿದ್ದರು. ಹತ್ತು ಸಾವಿರಕ್ಕೂ ಅಧಿಕ ಭಕ್ತಾಧಿಗಳು ಸೇರಿದ್ದರು. ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲೇ ಧಾರ್ಮಿಕ ಕಾರ್ಯಕ್ರಮ ಆಯೋಜನೆಯಾಗಿತ್ತು. ಚುನಾವಣೆ ಘೋಷಣೆಯಾಗುವ ಮುನ್ನವೇ ಈ ನಾಗಮಂಡಲ ನಿಗದಿಯಾಗಿತ್ತು. ಯಾವುದೇ ಪೂರ್ವ ಸೂಚನೆ ನೀಡದೆ ಚುನಾವಣಾ ಅಧಿಕಾರಿಗಳ ನಾಗಮಂಡಲ ನಡೆಯುತ್ತಿದ್ದ ಪರಿಸರಕ್ಕೆ ಬಂದು ಪರವಾನಿಗೆ ಕೇಳಿದಾಗ ಗೊಂದಲದ ವಾತಾವರಣ ನಿರ್ಮಾಣವಾಯ್ತು.

    ಚುನಾವಣಾ ನೀತಿ ಸಂಹಿತೆಯ ಹಿನ್ನೆಯಲ್ಲಿ ಎಲ್ಲಾ ಕಾರ್ಯಕ್ರಮಗಳುಗೂ ಹೊಸದಾಗಿ ಪರವಾನಿಗೆ ಪಡೆಯುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಈ ಬಗ್ಗೆ ಮಾಹಿತಿ ಇರದ ನಾಗಮಂಡಲ ಆಯೋಜಕರು ಚುನಾವಣಾಧಿಕಾರಿಗಳ ಅನಿರೀಕ್ಷಿತ ಭೇಟಿಯಿಂದ ಕೆಲಕಾಲ ಕಕ್ಕಾಬಿಕ್ಕಿಯಾದರು. ನಾಗಮಂಡಲದಲ್ಲಿ ಇದ್ದ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು. ಸ್ಥಳೀಯರಿಗೂ ಚುನಾವಣಾ ಅಧಿಕಾರಿಗಳಿಗೂ ಮಾತಿನ ಚಕಮಕಿ ನಡೆಯಿತು. ಇದರಿಂದ ಧಾರ್ಮಿಕ ಭಾವನೆಗೆ ಧಕ್ಕೆಯಾಗಿದೆ ಎಂದು ಆಕ್ಷೇಪಿಸಿದ ಜನರು ಯಾವುದೇ ಕಾರಣಕ್ಕೂ ಚಟುವಟಿಕೆ ನಿಲ್ಲಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಕೊನೆಗೆ ಆಯೋಜಕರು ಅಲ್ಲಿ ಅಳವಡಿಸಿದ್ದ ಬ್ಯಾನರ್, ಬಂಟಿಗ್ಸ್ ಗಳನ್ನು ತೆರವು ಮಾಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನಂತರ ನಾಗಮಂಡಲ ಸೇವೆ ಮುಂದುವರಿಯಿತು.

    ಕರಾವಳಿಯಲ್ಲಿ ಧಾರ್ಮಿಕ ಆಚರಣೆಗಳು ಈ ಸಂದರ್ಭ ಹೆಚ್ಚು ಹೆಚ್ಚು ನಡೆಯುತ್ತದೆ. ಕರಾವಳಿಯ ನಂಬಿಕೆ, ಆಚರಣೆಗಳ ಮೇಲೆ ದಾಳಿ ಮಾಡಲು ಬಂದ್ರೆ ಇಲ್ಲಿನ ಜನ ಸುಮ್ಮನಿರಲ್ಲ. ಚುನಾವಣೆಗಿಂತ ನಮಗೆ ನಮ್ಮ ಧಾರ್ಮಿಕ ನಂಬಿಕೆ ಹೆಚ್ಚು. ಚುನಾವಣೆ ಘೋಷಣೆಯಾಗುವ ಮೊದಲೇ ನಾಗಮಂಡಲ, ಯಕ್ಷಗಾನ, ಭೂತಾರಾಧನೆ ನಿಗದಿಯಾಗಿರುತ್ತದೆ. ಈ ಬಗ್ಗೆ ಜಿಲ್ಲಾಡಳಿತ ವಿನಾಯಿತಿ ಮಾಡದಿದ್ದರೆ ಜನ ಆಕ್ರೋಶಗೊಳ್ಳುತ್ತಾರೆ ಎಂದು ಜಾನಪದ ವಿದ್ವಾಂಸ ಅಲೆವೂರು ರಾಜೇಶ್ ಹೇಳಿದ್ದಾರೆ. ಚುನಾವಣಾ ಅಧಿಕಾರಿಗಳಿಗೂ ಈ ಬೆಳವಣಿಗೆ ತಲೆನೋವಾಗಿದೆ.

  • ಅಧಿಕಾರಿಗಳಿಂದ ಸಚಿವ ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನ ಸೀಜ್

    ಅಧಿಕಾರಿಗಳಿಂದ ಸಚಿವ ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನ ಸೀಜ್

    ಉಡುಪಿ: ವಿಧಾನಸಭಾ ಚುನಾವಣೆ ಘೋಷಣೆಯಾಗಿ 24 ಗಂಟೆ ಆಗುವುದರೊಳಗೆ ಜಿಲ್ಲಾಡಳಿತದ ಅಧಿಕಾರಿಗಳು ಬೇಟೆ ಶುರು ಮಾಡಿದ್ದಾರೆ. ಸಚಿವ ಪ್ರಮೋದ್ ಮಧ್ವರಾಜ್ ಚುನಾವಣಾ ಪ್ರಚಾರ ವಾಹನದ ಮೇಲೆ ಚುನಾವಣಾಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ.

    ನಗರದ ಪ್ರವಾಸಿ ಬಂಗಲೆಯಿಂದ ಪ್ರಚಾರಕ್ಕೆಂದು ಹೊರಟ ವಾಹನವನ್ನು ಚುನಾವಣಾ ಆಯೋಗದ ಅಧಿಕಾರಿಗಳು ಮುಟ್ಟುಗೋಲು ಹಾಕಿದ್ದಾರೆ. ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪರವಾನಿಗೆಗೆ ಪತ್ರ ರವಾನಿಸಲಾಗಿತ್ತು. ಆದ್ರೆ ಪ್ರಚಾರದ ಸ್ಥಳ, ಸಮಯವನ್ನು ನಿಗದಿಪಡಿಸಿರಲಿಲ್ಲ. ಪರವಾನಿಗೆ ಪಡೆಯದೆ ಪ್ರಚಾರಕ್ಕೆ ಬಳಸಿದ ಆರೋಪದಡಿಯಲ್ಲಿ ನಗರ ಸಂಚಾರಿ ಪೊಲೀಸರು ವಾಹನವನ್ನು ಸೀಜ್ ಮಾಡಿ ನಗರ ಠಾಣೆಗೆ ಕೊಂಡೊಯ್ದಿದ್ದಾರೆ.

    ಪ್ರಚಾರ ವಾಹನದಲ್ಲಿ ಎರಡು ದಿನದ ಹಿಂದಷ್ಟೇ ಕಾಂಗ್ರೆಸ್ ಪಕ್ಷದ ಕೈ ಚಿಹ್ನೆ ಹಾಕಿಸಿದ್ದರು. ಪ್ರೊಬೆಶನರಿ ಐಎಎಸ್ ಅಧಿಕಾರಿ ಪೂವಿತಾ ನೇತೃತ್ವದಲ್ಲಿ ಇಂದು ದಾಳಿಯಾಗಿದ್ದು, ತಹಶಿಲ್ದಾರ್ ಮತ್ತು ಚುನಾವಣಾ ಅಧಿಕಾರಿಗಳು ಸ್ಥಳದಲ್ಲಿದ್ದರು.

    ಬಿಜೆಪಿ ಸೇರುವ ಬಗ್ಗೆ ಸ್ಪಷ್ಟನೆ: ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ತಾರೆ ಎಂಬ ಊಹಾಪೋಹಗಳಿಗೆ ಸಚಿವರು ಮೊದಲ ಬಾರಿಗೆ ಬಹಿರಂಗವಾಗಿಯೇ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಮೊದಲ ಬಾರಿ ಅವರು ಸಾಮಾಜಿಕ ಜಾಲತಾಣದಲ್ಲಿ ಮೌನ ಮುರಿದಿದ್ದಾರೆ.

    ಸಚಿವ ಮಧ್ವರಾಜ್ ಬಿಜೆಪಿ ಸೇರೋ ಬಗ್ಗೆ ಕಳೆದ ಹಲವು ದಿನಗಳಿಂದ ಭಾರೀ ಚರ್ಚೆ ಆಗುತ್ತಿತ್ತು. ಈ ಬಗ್ಗೆ ಮಧ್ವರಾಜ್ ಕೂಡ ಬಿಜೆಪಿ ಸೇರಲ್ಲ ಎಂದು ಮಾಧ್ಯಮಗಳ ಮುಂದೆ ಬಹಳ ಕೂಲ್ ಆಗಿ ಸ್ಪಷ್ಟನೆ ನೀಡುತ್ತಾ ಬಂದಿದ್ರು. ಕೆಲ ದಿನಗಳ ಹಿಂದೆ ಬಿಜೆಪಿ ಗೇಟು ಮುಚ್ಚಿದೆ. ಗೇಟು ಮುಚ್ಚಿರೋದ್ರಿಂದ ಹೋಗೋ ಪರಿಸ್ಥಿತಿ ಬರಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟು ಮಾತಾಡಿದ್ರು.

    ಮಂಗಳವಾರ ದೆಹಲಿಯಲ್ಲಿ ರಾಷ್ಟ್ರೀಯ ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿರುವ ಸುದ್ದಿಯೂ ಹರಡಿದ್ದು, ಇದಕ್ಕೆ ಪ್ರಮೋದ್ ಮಧ್ವರಾಜ್ ಕೂಡ ನಾನು ಕಾಂಗ್ರೆಸ್ ಬಿಟ್ಟು ಹೋಗಲ್ಲ ಎಂದು ಅದೆಷ್ಟೋ ಬಾರಿ ಹೇಳಿದ್ದೇನೆ ನಾನು ಯಾವ ಪಕ್ಷಕ್ಕೂ ಸೇರಲ್ಲ ಎಂದು ಈಗಲೂ ಹೇಳುತ್ತೇನೆ ಎಂದು ಟ್ವೀಟ್ ಮಾಡಿ ಸ್ಪಷ್ಟಪಡಿಸಿದ್ದಾರೆ.

    https://twitter.com/PMadhwaraj/status/978873976641478656

  • ಆಪ್ತ ಸಹಾಯಕನಿಗೆ ಸಂಬಳವೇ ಕೊಟ್ಟಿಲ್ವಂತೆ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್

    ಆಪ್ತ ಸಹಾಯಕನಿಗೆ ಸಂಬಳವೇ ಕೊಟ್ಟಿಲ್ವಂತೆ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್

    ಉಡುಪಿ: ರಾಜ್ಯಸಭಾ ಸದಸ್ಯ, ಕೇಂದ್ರ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ತಮ್ಮ ಆಪ್ತ ಸಹಾಯಕನಿಗೆ ಲಕ್ಷಗಟ್ಟಲೆ ಸಂಬಳ ಬಾಕಿಯಿಟ್ಟಿದ್ದಾರಂತೆ. ವರ್ಷಗಟ್ಟಲೆ ಕಾದರೂ ಸಂಬಳ ಕೊಟ್ಟಿಲ್ವಂತೆ. ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹೇಳಿದ್ರೂ ಆಸ್ಕರ್ ಪರ್ಸ್ ಬಿಚ್ಚಿಲ್ವಂತೆ.

    ಆಸ್ಕರ್ ಆಪ್ತ ಸಹಾಯಕ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಉಪವಾಸ ಮಾಡಲಿದ್ದಾರೆ. ಆಸ್ಕರ್ ಅವರ ಮಣಿಪಾಲ ವರ್ಕ್ ಶಾಪ್ ನಲ್ಲಿ ನಂತರ ಮನೆಯಲ್ಲಿ 1972ರಿಂದ 1987ರವರಗೆ ಉಡುಪಿಯ ಅಂಬಲ್ಪಾಡಿಯ ಗೋಪಾಲ ಪೂಜಾರಿ ಕೆಲಸಕ್ಕಿದ್ದರು. ಮೊದಲು ಸೂಪರ್ ವೈಸರ್ ಆಗಿದ್ದ ಗೋಪಾಲ್ ಪೂಜಾರಿ ನಂತರ ಆಪ್ತ ಸಹಾಯಕರಾದರು. ಈ ಸಂದರ್ಭದಲ್ಲಿ ಸಂಬಳ ನೀಡಿಲ್ಲ. ಆ ಮೇಲೆ ಸಂಬಳ ಕೊಡುವುದಾಗಿ ಹೇಳುತ್ತಾ ದಿನ ದೂಡಿದರು.

    ಈವರೆಗೆ ನನಗೆ 6 ಲಕ್ಷ 10 ಸಾವಿರ ರೂಪಾಯಿ ಸಂಬಳದ ಹಣ ಕೊಡೋದು ಬಾಕಿಯಿದೆ ಅಂತ ಗೋಪಾಲ ಪೂಜಾರಿ ಆರೋಪಿಸಿದ್ದಾರೆ. 1995ರಲ್ಲಿ ಸೋನಿಯಾಗಾಂಧಿಗೆ ದೂರು ನೀಡಿದ್ದೆ. ಸೋನಿಯಾಗಾಂಧಿ ಆಸ್ಕರ್ ಅವರನ್ನು ಕರೆದು ಸಂಬಳ ಕೊಡಿ ಎಂದು ತಾಕೀತು ಮಾಡಿದ್ದರು. ಆದ್ರೂ ಅವರು ಹಣ ಕೊಡಲಿಲ್ಲ. ಮಗಳ ಮದುವೆ ಸಂದರ್ಭದಲ್ಲಾದ್ರೂ ಕೊಡಬಹುದು ಎಂದು ಕಾದು ಈಗ ಮೋಸ ಹೋಗಿದ್ದೇನೆ ಎಂದು ಅವರು ಹೇಳಿದರು.

    ಕಾರ್ಮಿಕ ಇಲಾಖೆ, ಮುಖ್ಯಮಂತ್ರಿಗಳು, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ರೂ ಪ್ರಯೋಜನವಿಲ್ಲ ಎಂದು ಗೋಪಾಲ್ ಪೂಜಾರಿ ದೂರಿದ್ದಾರೆ. ಏಪ್ರಿಲ್ 1 ರವರೆಗೆ ಗಡುವು ನೀಡಿರುವ ಅವರು, ಏಪ್ರಿಲ್ 2ರಂದು ಉಪವಾಸ ಕೂರುವುದಾಗಿ ಹೇಳಿದ್ದಾರೆ. ಗೋಪಾಲ್ ಪೂಜಾರಿ ಪತ್ನಿ ಚಂಚಲ ಅನಾರೋಗ್ಯದಿಂದ ಬಳಲುತ್ತಿದ್ದು ಸಂಬಂಧಿಕರಿಂದ ಸಹಾಯ ಯಾಚಿಸುವಂತಾಗಿದೆ ಎಂದು ಹೇಳಿದರು.

    15 ದಿನದ ಹಿಂದೆ ಆಸ್ಕರ್ ಗೆ ಪತ್ರ ಬರೆದಿದ್ದೆ. ಅದಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಕೊಟ್ಟ ಹಿಂಬರವನ್ನೂ ಲಗತ್ತಿಸಿದ್ದೆ. ಇದಕ್ಕೂ ಅವರಿಂದ ಉತ್ತರ ಬಂದಿಲ್ಲ ಎಂದು ಹೇಳಿದರು. ನಿಗಮ ಮಂಡಳಿಗೆ ನೇಮಕ ಮಾಡುತ್ತೇನೆ ಎಂದು ಒಂದು ಬಾರಿ ಆಸ್ಕರ್ ಭರವಸೆ ಕೊಟ್ಟಿದ್ದರು ಎಂಬುದನ್ನು ಗೋಪಾಲ್ ಪೂಜಾರಿ ನೆನಪಿಸಿಕೊಂಡರು.

  • ಸೋಶಿಯಲ್ ಮೀಡಿಯಾಗಳ ಮೇಲೆ ಜಿಲ್ಲಾಧಿಕಾರಿಗಳು ಕಣ್ಣಿಟ್ಟಿದ್ದಾರೆ ಜೋಕೆ!

    ಸೋಶಿಯಲ್ ಮೀಡಿಯಾಗಳ ಮೇಲೆ ಜಿಲ್ಲಾಧಿಕಾರಿಗಳು ಕಣ್ಣಿಟ್ಟಿದ್ದಾರೆ ಜೋಕೆ!

    ಉಡುಪಿ: 2018 ರ ರಾಜ್ಯ ವಿಧಾನಸಭಾ ಚುನಾವಣೆ ಘೋಷಣೆಯಾಗುತ್ತಿದಂತೆ ಚುನಾವಣಾ ಆಯೋಗ ನಿಯಮಗಳನ್ನು ಕಟ್ಟುನಿಟ್ಟಿನಿಂದ ಜಾರಿಗೆ ತರಲು ಆರಂಭಿಸಿದೆ. ಇದರ ಭಾಗವಾಗಿ ಸಾಮಾಜಿಕ ಜಾಲತಾಣದಲ್ಲಿ ಪಕ್ಷದ ಕಾರ್ಯಕರ್ತರು, ಅಭಿಮಾನಿಗಳು ಪ್ರಚಾರ ಮಾಡಿದ್ರೂ ಆಯಾಯ ಜಿಲ್ಲಾಧಿಕಾರಿಗಳು ಕಣ್ಣಿಟ್ಟಿದ್ದಾರೆ.

    ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಿದ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಅವರು, ಸಾಮಾಜಿಕ ಜಾಲತಾಣದಲ್ಲಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವುದಕ್ಕೆ ಕಡಿವಾಣ ಹಾಕಲು ವಿಶೇಷ ನಿಗಾ ತಂಡ ರಚನೆ ಮಾಡಲಾಗುವುದು. ಅಲ್ಲದೇ ಯಾವುದೇ ಅಭ್ಯರ್ಥಿ ಪರ ವಿರುದ್ಧ ಹೆಚ್ಚು ಪ್ರಚಾರ ಮಾಡಿದರೆ ಅದನ್ನೂ ಅಭ್ಯರ್ಥಿ ಚುನಾವಣಾ ವೆಚ್ಚಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು.

    ಇದೆ ವೇಳೆ ಕೋಮು ಭಾವನೆ ಪ್ರಚೋದಿಸುವ ಚಟುವಟಿಕೆ ಮೇಲೂ ನಿಗಾ ಇಡಲಿದ್ದು, ಪ್ರಚಾರ ತಾರಕಕ್ಕೆ ಏರಿ ಕೋಮು ಭಾವನೆಗಳು ಕೆಡದಂತೆ ಎಲ್ಲಾ ಪಕ್ಷ ಮತ್ತು ಅಭ್ಯರ್ಥಿಗಳು ಎಚ್ಚರಿಸಬೇಕು ಎಂದು ಹೇಳಿದರು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಮಹಿಳಾ ಬೂತ್ ರಚನೆ ಮಾಡಿ ಮಹಿಳಾ ಸಿಬ್ಬಂದಿಗಳನ್ನು ನೇಮಿಸಲಾಗುವುದು ಎಂದು ಮಾಹಿತಿ ನೀಡಿದರು.

  • ಸಚಿವ ಪ್ರಮೋದ್ ಮಧ್ವರಾಜ್ ಪ್ರಚಾರದ ವಾಹನಕ್ಕೆ ಕೈ ಬಂತು ಕೈ!

    ಸಚಿವ ಪ್ರಮೋದ್ ಮಧ್ವರಾಜ್ ಪ್ರಚಾರದ ವಾಹನಕ್ಕೆ ಕೈ ಬಂತು ಕೈ!

    ಉಡುಪಿ: ಚುನಾವಣಾ ಪ್ರಚಾರ ವಾಹನದಲ್ಲಿ ಎಐಸಿಸಿ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾವೊಬ್ಬ ನಾಯಕರ ಭಾವಚಿತ್ರ ಹಾಕದೆ ಪ್ರಚಾರ ವಾಹನ ಸಿದ್ಧಗೊಳಿಸಿದ್ದ ಸಚಿವ ಪ್ರಮೋದ್ ಮಧ್ವರಾಜ್ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದು, ತಮ್ಮ ಪ್ರಚಾರ ವಾಹನದಲ್ಲಿ ಕಾಂಗ್ರೆಸ್ ಪಕ್ಷದ `ಕೈ’ ಚಿನ್ಹೆಯನ್ನು ಅಂಟಿಸಿದ್ದಾರೆ.

    ಕಳೆದ 15 ದಿನದಿಂದ ಮೀನುಗಾರಿಕಾ, ಯುವಜನ ಮತ್ತು ಕ್ರೀಡಾ ಸಚಿವರಾಗಿರುವ ಪ್ರಮೋದ್ ಮಧ್ವರಾಜ್ ತಮ್ಮ ಪಕ್ಷದ ಯಾವುದೇ ಕುರುಹು ಇಲ್ಲದೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಸಿಎಂ ಸಿದ್ದರಾಮಯ್ಯ, ಕೇಂದ್ರ ನಾಯಕರುಗಳಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಪಕ್ಷದ ಚಿನ್ಹೆ ಇಲ್ಲದೆ ಮಧ್ವರಾಜ್ ಪ್ರಚಾರ ವಾಹನವನ್ನು ತನ್ನೊಬ್ಬನದ್ದೇ ಕಟೌಟ್ ಹಾಕಿ ಸಿಂಗಾರ ಮಾಡಿದ್ದರು. ಈ ಬೆಳವಣಿಗೆ ರಾಜ್ಯವ್ಯಾಪಿ ಸುದ್ದಿಯಾಗಿತ್ತು.

    ಸಚಿವರ ಈ ನಡೆ ಪಕ್ಷದ ಹಿರಿಯರ ಕೆಂಗಣ್ಣಿಗೆ ಕಾರಣವಾಗಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿದ್ದ ಸಚಿವರು ಮಧ್ವರಾಜ್ ಅಭಿಮಾನಿಗಳ ಸಂಘ ದ ವತಿಯಿಂದ ವಾಹನ ತಯಾರು ಮಾಡಿರುವುದರಿಂದ ಪಕ್ಷಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದರು. ಆದರೆ ಸಚಿವರ ಈ ಹೇಳಿಕೆಗೆ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರು ಮುನಿಸಿಕೊಂಡಿದ್ದರು. ಪಕ್ಷದ ಹಿರಿಯರಿಗೂ ಪ್ರಮೋದ್ ಮಧ್ವರಾಜ್ ಅವನ ವನ್ ಮ್ಯಾನ್ ಶೋ ಬಗ್ಗೆ ಅಸಮಾಧಾನ ಉಂಟಾಗಿತ್ತು ಎನ್ನಲಾಗಿದೆ.

    ಇದೀಗ ಚುನಾವಣೆಯ ಹೊಸ್ತಿಲಲ್ಲಿ ಗೊಂದಲಗಳನ್ನು ಮೈಮೇಲೆ ಏಳೆದುಕೊಳ್ಳುವುದು ಬೇಡ ಎಂದು ನಿರ್ಧರಿಸಿರುವ ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ನ ಹಸ್ತದ ಚಿನ್ಹೆಯನ್ನು ತಮ್ಮ ಪ್ರಚಾರ ವಾಹನದಲ್ಲಿ ಅಂಟಿಸಿದ್ದಾರೆ. ಪ್ರಚಾರಕ್ಕಾಗಿ ಬಳಕೆ ಮಾಡುತ್ತಿರುವ ಎರಡು ವಾಹನದಲ್ಲಿ ಈಗ ಹಸ್ತದ ಚಿನ್ಹೆ ರಾರಾಜಿಸುತ್ತಿದೆ.

    ವಾಹನಗಳ ಹಿಂದೆ ಮುಂದೆ, ಅಕ್ಕ ಪಕ್ಕ ಹಸ್ತದ ಚಿತ್ರವನ್ನು ಉಡುಪಿ ಪ್ರವಾಸಿ ಮಂದಿರದಲ್ಲಿ ಅಂಟಿಸಿ ವಾಹನಗಳನ್ನು ಪ್ರಚಾರಕ್ಕೆ ಕೊಂಡೊಯ್ಯಲಾಗಿದೆ. ಈ ಮೂಲಕ ಕಾಂಗ್ರೆಸ್ ಹಿರಿಯ ನಾಯಕರು, ಕಾರ್ಯಕರ್ತರು ಮತದಾರರನ್ನು ತೃಪ್ತಿಪಡಿಸಲು ಪ್ರಮೋದ್ ಮಧ್ವರಾಜ್ ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

  • ನಟ ಅಂಬರೀಶ್ ರನ್ನು ಭೇಟಿ ಮಾಡ್ಬೇಕಂದ್ರು ಪ್ಲೇಬ್ಯಾಕ್ ಸಿಂಗರ್ ಮೆಹಬೂಬ್ ಸಾಬ್

    ನಟ ಅಂಬರೀಶ್ ರನ್ನು ಭೇಟಿ ಮಾಡ್ಬೇಕಂದ್ರು ಪ್ಲೇಬ್ಯಾಕ್ ಸಿಂಗರ್ ಮೆಹಬೂಬ್ ಸಾಬ್

    ಉಡುಪಿ: ದೃಷ್ಠಿಯಿಲ್ಲದೆ ರಿಯಾಲಿಟಿ ಶೋ ಗೆದ್ದ ಛಲದಂಕ ಮಲ್ಲ, ಸಾಧನೆಯ ಮೂಲಕ ಪ್ಲೇ ಬ್ಯಾಕ್ ಸಿಂಗರ್ ಆಗಿರುವ ಮೆಹಬೂಬ್ ಸಾಬ್ ಅವರು ಕನ್ನಡ ನಾಡಿನಲ್ಲಿ ಮನೆಮಾತಾಗಿದ್ದಾರೆ. ಆದ್ರೆ ಇದೀಗ ಅವರಿಗೆ ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಭೇಟಿ ಮಾಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದಾರೆ.


    ಉಡುಪಿಯಲ್ಲಿ ಕತ್ತಲೆಕೋಣೆ ಚಿತ್ರತಂಡದ ಜೊತೆ ನಡೆದ ಸಂವಾದದ ಬಳಿಕ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಮೆಹಬೂಬ್, ಬೆಂಗಳೂರಿನಲ್ಲಿ ಎಲ್ಲಾದ್ರೂ ಅಂಬರೀಶ್ ಅವರನ್ನು ಭೇಟಿಯಾಗಬೇಕು ಅಂತ ಹೇಳಿದ್ರು.

    ಮೆಹಬೂಬ್ ಅವರಿಗೆ ಈಗಾಗಲೇ ನಾಲ್ಕು ಸಿನೆಮಾಗಳಿಗೆ ಆಫರ್ ಸಿಕ್ಕಿದ್ದು, ಜೀವನವನ್ನು ರೂಪಿಸುವತ್ತ ಮೆಹಬೂಬ್ ಸಾಬ್ ಮುನ್ನಡೆಯುತ್ತಿದ್ದಾರೆ. ಆದ್ರೆ ಹಲವು ದಿನಗಳಿಂದ ಮೆಹಬೂಬ್ ಅವರಿಗೆ ನಟ ಅಂಬರೀಶ್ ಅವರನ್ನು ಭೇಟಿ ಮಾಡುವ ಕನಸು ಕನಸಾಗಿಯೇ ಉಳಿದಿದೆ. ಒಂದು ಸಾರಿ ಅಂಬಿಯನ್ನು ಮುಟ್ಟಿ ಹತ್ತಿರ ನಿಂತು ಮಾತನಾಡಿಸಬೇಕು ಅಂತ ಇದೀಗ ಅವರು ಹೇಳುತ್ತಿದ್ದಾರೆ.

    ರಿಯಾಲಿಟಿ ಶೋ ಸಂದರ್ಭ ಅಂಬರೀಶ್ ಅವರು ಮೆಹಬೂಬ್‍ಗೆ 50 ಸಾವಿರ ರೂಪಾಯಿ ಧನ ಸಹಾಯ ಮಾಡಿದ್ದರು. ಆದ್ರೆ ಯಾರು ಸಹಾಯ ಮಾಡಿದ್ದು ಅಂತ ಗಾಯಕನಿಗೆ ಹೇಳಬೇಡಿ ಅಂದಿದ್ದರು. ಹೇಗೋ ಗೊತ್ತು ಮಾಡಿಕೊಂಡ ಮೆಹಬೂಬ್ ಇದೀಗ ಅಂಬರೀಶ್ ಭೇಟಿ ಕುರಿತಾದ ತನ್ನ ಮನದ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಮದುವೆಗಿನ್ನೂ ನಾಲ್ಕು ವರ್ಷ ಟೈಂ ಇದೆ. ತಾನೊಂದು ಸಂಗೀತ ಶಾಲೆ ತೆರೆಯಬೇಕು ಎಂಬ ಧ್ಯೇಯವನ್ನೂ ಇಟ್ಟುಕೊಂಡಿರುವ ಬಗ್ಗೆ ಹೇಳಿದರು.

    ಸಂವಾದ ಕಾರ್ಯಕ್ರಮದಲ್ಲಿ ಮೆಹಬೂಬ್ ತಮ್ಮ ಇಷ್ಟದ ಹಾಡುಗಳನ್ನು ಹಾಡಿದ್ದಾರೆ, ಜೀವನಗಾಥೆಯನ್ನು ಬಿಚ್ಚಿಟ್ಟಿದ್ದಾರೆ. ಇದಾದ ನಂತರ ಮೆಹಬೂಬ್, ಉಡುಪಿ ಶ್ರೀಕೃಷ್ಣಮಠಕ್ಕೆ ಭೇಟಿಕೊಟ್ಟು ಕೃಷ್ಣನ ಸಾನಿಧ್ಯದಲ್ಲೂ ಸಂಗೀತ ಸೇವೆ ನೀಡಿದರು. ಕನಕನ ಕಿಂಡಿ ಮತ್ತು ನವಗ್ರಹ ಕಿಂಡಿ ಮೂಲಕ ಕೃಷ್ಣನಿಗೆ ನಮಸ್ಕರಿಸಿದರು. ಪರ್ಯಾಯ ಪಲಿಮಾರು ಮಠಾಧೀಶರನ್ನು ಭೇಟಿ ಮಾಡಿ ಕೃಷ್ಣಪ್ರಸಾದ ಸ್ವೀಕಾರ ಮಾಡಿದರು.

  • ಸಚಿವ ಪ್ರಮೋದ್ ಮಧ್ವರಾಜ್ ಗೆ 30 ದಿನ ಗಡುವು ನೀಡಿದ ಆರ್‌ಟಿಐ ಕಾರ್ಯಕರ್ತ ಟಿಜೆ ಅಬ್ರಾಹಂ

    ಸಚಿವ ಪ್ರಮೋದ್ ಮಧ್ವರಾಜ್ ಗೆ 30 ದಿನ ಗಡುವು ನೀಡಿದ ಆರ್‌ಟಿಐ ಕಾರ್ಯಕರ್ತ ಟಿಜೆ ಅಬ್ರಾಹಂ

    ಉಡುಪಿ: ಸಚಿವ ಪ್ರಮೋದ್ ಮಧ್ವರಾಜ್ ಅವರು ಹಾಕಿರುವ ಸವಾಲನ್ನು ನಾನು ಸ್ವೀಕರಿಸುತ್ತೇನೆ. ಅವರಿಗೆ ಒಂದು ತಿಂಗಳು ಅವಕಾಶ ಕೊಡುತ್ತೇನೆ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು ಮಾಡಲಿ ಎಂದು ಉಡುಪಿ ಮಾಹಿತಿ ಹಕ್ಕು ಕಾರ್ಯಕರ್ತ (ಆರ್‌ಟಿಐ), ಟಿ.ಜೆ ಅಬ್ರಾಹಂ ಸವಾಲು ಹಾಕಿದ್ದಾರೆ.

    ಇಂದು ಉಡುಪಿ ಪ್ರೆಸ್ ಕ್ಲಬ್‍ನಲ್ಲಿ ಪ್ರತಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸಚಿವರಿಗೆ ತಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ದೂರು ದಾಖಲಿಸಲು ಒಂದು ತಿಂಗಳು ಗಡುವು ನೀಡಿದಾಗಿ ತಿಳಿಸಿದರು. ಇದೇ ವೇಳೆ ಪ್ರಮೋದ್ ಮಧ್ವರಾಜ್ ಅವರ ವಿರುದ್ಧ ಹಲವು ಆರೋಪಗಳನ್ನು ಮಾಡಿದರು. ಸಚಿವರು ನೀಡಿರುವ ಲೀಗಲ್ ನೋಟಿಸನ್ನು ನಾನು ಸ್ವಾಗತಿಸುತ್ತೇನೆ. ನೋಟಿಸ್ ನೋಡಿ ನನಗೆ ಬಹಳ ಸಂತೋಷವಾಗಿದೆ. ಒಂದು ತಿಂಗಳ ಒಳಗೆ ನನ್ನ ವಿರುದ್ಧ ದೂರು ದಾಖಲಿಸಲಿ. ನ್ಯಾಯಾಲಯದಲ್ಲಿ ಸಚಿವರು ಮಾಡಿರುವ ಎಲ್ಲಾ ಅಕ್ರಮಗಳ ಮಾಹಿತಿಯ ದಾಖಲೆಗಳನ್ನು ಸಲ್ಲಿಸುವುದಾಗಿ ಹೇಳಿದರು.

    ಒಂದು ವೇಳೆ ಸಚಿವರು ದೂರು ದಾಖಲಿಸದಿದ್ದರೇ ನಾನೇ ಅವರನ್ನು ಕೋರ್ಟ್ ಗೆ ಎಳೆಯುತ್ತೇನೆ. ಪ್ರಕರಣ ಕೋರ್ಟ್ ಮೆಟ್ಟಿಲು ಹತ್ತಿದ ಬಳಿಕ ಪ್ರತಿಯೊಂದು ದಾಖಲೆ ಹೊರಗೆ ಬರುತ್ತದೆ. ಮೂವತ್ತು ದಿನದಲ್ಲಿ ಸಾಬೀತುಪಡಿಸದಿದ್ದರೆ ಕೇಸು ದಾಖಲು ಮಾಡುತ್ತೇನೆ. ಆದಷ್ಟು ಬೇಗ ಕೇಸು ದಾಖಲು ಮಾಡಿ ಎಂದು ಸಲಹೆ ನೀಡಿದರು.

    2014-2015 ರಲ್ಲಿ ಲೋಕಾಯುಕ್ತರಿಗೆ ಸಲ್ಲಿಸಿದ ದಾಖಲೆಯಲ್ಲಿ 40 ಕೋಟಿ ರೂ. ಆಸ್ತಿ ದಾಖಲೆ ತೋರಿಸಿದ್ದಾರೆ. ತಾಯಿ, ಪತ್ನಿ, ಮಗಳ ಆಸ್ತಿಯನ್ನು ಅದು ಒಳಗೊಂಡಿದೆ. ಆದರೆ 193 ಕೋಟಿ ರೂ. ಸಾಲ ಪಡೆಯುವಷ್ಟು ಆಸ್ತಿ ಸಚಿವರಿಗೆ ಎಲ್ಲಿಂದ ಬಂತು ಎಂದು ಲೋಕಾಯುಕ್ತಕ್ಕೆ ಸಲ್ಲಿಸಿದ ಕಡತ ಹಿಡಿದು ಪ್ರಶ್ನಿಸಿದರು. ಸಚಿವರು ಕ್ಷಮೆ ಕೇಳಲು ಮೂರು ದಿನ ಗಡುವು ಕೊಟ್ಟಿದ್ದಾರೆ. ನಾನು ಎರಡನೇ ದಿನಕ್ಕೆ ಉಡುಪಿಗೆ ಬಂದಿದ್ದೇನೆ. ಕಾನೂನು ರೀತಿಯಲ್ಲಿ ನಾನು ಸರಿಯಿದ್ದೇನೆ. 1.10 ಕೋಟಿ ಬೆಲೆಬಾಳುವ ಆಸ್ತಿ ಅಡವಿಟ್ಟು, 193 ಕೋಟಿ ಸಾಲ ಪಡೆದಿರುವ ಸಚಿವರು ಮತ್ತು ಬ್ಯಾಂಕ್ ಅಧಿಕಾರಿಗಳು ಸೇರಿಕೊಂಡು ಮೋಸ ಮಾಡಿದ್ದಾರೆ. ನನ್ನ ಹೋರಾಟದ ಹಿಂದೆ ಯಾರ ಕೈವಾಡವೂ ಇಲ್ಲ. ರಾಜ್ಯದ ಜನರಿಗಾಗಿ, ಸತ್ಯ ಹೊರಗೆಡವಲು ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

  • ಕರಾವಳಿಯಲ್ಲಿ ‘ಕೈ’ ಕಾರ್ಯಕರ್ತರಿಗೆ ರಾಹುಲ್ ಆಗಮನ ಉತ್ತೇಜನ

    ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯ ಕರಾವಳಿ ಕರ್ನಾಟಕದ ಪ್ರವಾಸಕ್ಕೆ ಸಿಕ್ಕಿದ ಪ್ರತಿಕ್ರಿಯೆ ಕರಾವಳಿಯ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹೊಸ ಭರವಸೆ ಮತ್ತು ಹುಮ್ಮಸ್ಸು ಮೂಡಿಸಿದೆ. ರಾಹುಲ್ ಗಾಂಧಿ ಕಾರ್ಯಕರ್ತರ ಅಭಿಪ್ರಾಯ ಆಲಿಸಿದರು. ಇದರ ಜೊತೆಗೆ ಮುಖಂಡರ ನಿರೀಕ್ಷೆಗೂ ಮೀರಿ ಜನಾರ್ಶೀವಾದ ಸಮಾವೇಶದಲ್ಲಿ ಜನರು ಭಾವಹಿಸಿದ್ದರು.

    ಇದೇ ಮೊದಲ ಬಾರಿಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರೊಬ್ಬರು ಬ್ಲಾಕ್ ಅಧ್ಯಕ್ಷರ ಮಾತುಗಳನ್ನು ಆಲಿಸಿರುವುದು ಮತ್ತು ಸಮಸ್ಯೆಗಳಿಗೆ ಬ್ಲಾಕ್ ಅಧ್ಯಕ್ಷರಿಂದಲೇ ಪರಿಹಾರ ಮಾರ್ಗಗಳನ್ನು ಕೂಡ ಕೇಳಿದ್ದು, ಪಕ್ಷದ ಸಾಮಾನ್ಯ ಕಾರ್ಯಕರ್ತರಿಗೆ ಭರವಸೆಯ ಸಂದೇಶ ನೀಡಿದೆ.

    ಮಾರ್ಚ್ 20 ರ ಬುಧವಾರದಂದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ರಾಹುಲ್ ಗಾಂಧಿ ಅವರು ಉಡುಪಿಯ ಕಾಪು, ಪಡುಬಿದ್ರೆ, ಸುರತ್ಕಲ್ ಮುಂತಾದೆಡೆ ರೋಡ್ ಶೋ ನಡೆಸಿ ಇಳಿ ಸಂಜೆ ಹೊತ್ತಿನಲ್ಲಿ ಮಂಗಳೂರು ನೆಹರೂ ಮೈದಾನದಲ್ಲಿ ಬೃಹತ್ ಸಮಾವೇಶ ಉದ್ದೇಶಿಸಿ ಮಾತನಾಡಿದರು.

    ಸಾಮಾನ್ಯವಾಗಿ ಕಾಂಗ್ರೆಸ್ ಪಕ್ಷದಲ್ಲಿ ಸರ್ಕಾರಕ್ಕೂ, ಕಾರ್ಯಕರ್ತನಿಗೂ, ಪಕ್ಷದ ಮುಖಂಡರಿಗೂ ಬಡಪಾಯಿ ಕಾರ್ಯಕರ್ತನಿಗೂ ಯಾವುದೇ ಸಂಪರ್ಕವೇ ಇರುತ್ತಿರಲಿಲ್ಲ. ಹಾಗೊಂದು ವೇಳೆ ಸಭೆ ಕರೆದರೂ ವಾಸ್ತವ ಸಂಗತಿಯನ್ನು ಹೇಳುವ ಪರಿಸ್ಥಿತಿ ಇರಲಿಲ್ಲ. ಆದರೆ, ಈ ಬಾರಿ ರಾಹುಲ್ ಗಾಂಧಿ ಕರೆದಿದ್ದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬ್ಲಾಕ್ ಅಧ್ಯಕ್ಷರು ಮತ್ತು ಇತರ ಮುಖಂಡರ ಸಭೆಯಲ್ಲಿ ಮುಕ್ತ ಚರ್ಚೆ ನಡೆದಿದೆ. ರಾಹುಲ್ ಗಾಂಧಿ ಪ್ರತಿಯೊಬ್ಬ ಬ್ಲಾಕ್ ಅಧ್ಯಕ್ಷರಿಗೂ ತಮ್ಮ ಅಭಿಪ್ರಾಯ ಹಂಚಿಕೊಳ್ಳಲು ಅವಕಾಶ ನೀಡಿದ್ದಾರೆ. ಕಳೆದ ಒಂದು ವರ್ಷದಿಂದ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ನೀಡುತ್ತಿರುವ ಬಿಡುವಿಲ್ಲದ ಕೆಲಸಗಳ ನಡುವೆಯೂ ಉತ್ತಮ ಮಟ್ಟದ ಉತ್ತೇಜನ ನೀಡಿದಂತಾಗಿದೆ.

    ರಾಹುಲ್ ಗಾಂಧಿ ಇತ್ತೀಚೆಗೆ ಒತ್ತು ನೀಡುತ್ತಿರುವ ಕೇಡರ್ ಪಾರ್ಟಿ ಮತ್ತು ಮೈಕ್ರೋ ಮ್ಯಾನೇಜ್ಮೆಂಟಿಗೆ ಪೂರಕವಾಗಿ ಸ್ಥಾಪಿಸಲಾದ ತೆಂಕ ಎರ್ಮಾಳಿನ ರಾಜೀವ್ ಗಾಂಧಿ ಪೊಲಿಟಿಕಲ್ ಇನ್‍ಸ್ಟಿಟ್ಯೂಟನ್ನು ಉದ್ಘಾಟಿಸುವ ಮೂಲಕ ಜನಾರ್ಶೀವಾದ ಯಾತ್ರೆ ಆರಂಭವಾಯಿತು. ಇದು ಪಕ್ಷದ ಕಾರ್ಯಕರ್ತರಿಗೆ, ಮುಖಂಡರಿಗೆ ತರಬೇತಿ ನೀಡಲು ನಿರ್ಮಿಸಲಾದ ವ್ಯವಸ್ಥೆಯಾಗಿದ್ದು, ಪೂರ್ಣಪ್ರಮಾಣದಲ್ಲಿ ಉಪಯೋಗವಾಗಲಿದೆ.

    ಉಡುಪಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಮಂಗಳೂರಿಗೆ ಆಗಮಿಸಿದ ಯಾತ್ರೆಗೆ ಮಂಗಳೂರಿನ ಅಂಬೇಡ್ಕರ್ ವೃತ್ತದಲ್ಲಿ ಭಾರೀ ಸ್ವಾಗತ ನೀಡಲಾಯಿತು. ರಾಹುಲ್ ಗಾಂಧಿ ಅವರೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ಇದ್ದರು. ಅಂಬೇಡ್ಕರ್ ವೃತ್ತದಿಂದ ನೆಹರೂ ಮೈದಾನದವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲಾಯಿತು.

    ಕತ್ತಲು ಕವಿಯುತ್ತಿದ್ದಂತೆ ಆರಂಭವಾದ ಸಮಾವೇಶದಲ್ಲಿ ಮೊದಲಿಗೆ ಮಾತನಾಡಿದ ರಾಹುಲ್ ಗಾಂಧಿ ಅವರು, ಕರಾವಳಿಯಲ್ಲಿ ಹೆಚ್ಚಿನ ಬೆಂಬಲಿಗರು ಇರುವ ಬಿಲ್ಲವ ಸಮುದಾಯವನ್ನು ಓಲೈಸಲು ಬ್ರಹ್ಮಶ್ರೀ ನಾರಾಯಣ ಗುರು ಅವರ ಹೆಸರನ್ನು, ಅವರ ಸಂದೇಶಗಳನ್ನು ಭಾಷಣದಲ್ಲಿ ಹಲವು ಬಾರಿ ಪ್ರಸ್ತಾಪಿಸಿದ್ರು. ಆನಂತರ ಜಗಜ್ಯೋತಿ ಬಸವಣ್ಣ, ಕರಾವಳಿಯ ವೀರಪುರುಷರಾದ ಕೋಟಿ ಚೆನ್ನಯ, ರಾಣಿ ಅಬ್ಬಕ್ಕ ಮುಂತಾದವರ ಹೆಸರು ಹೇಳಲು ಮರೆಯಲಿಲ್ಲ. ಇಂತಹ ಮಹನೀಯರ ಹೆಸರು ಉಲ್ಲೇಖಿಸಿಯೇ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

    ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ಭಾಷಣ ಜನರಿಗೆ ಹೆಚ್ಚು ರುಚಿಸದಿದ್ದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಯಿತು. ಸಮಾವೇಶಕ್ಕೆ ಭಾರೀ ಜನಸಂದಣಿ ಸೇರಿರುವುದು ಕಾಂಗ್ರೆಸ್ ಪಕ್ಷದ ಜಿಲ್ಲಾ ಮುಖಂಡರು, ರಾಜ್ಯ ನಾಯಕರು ಮತ್ತು ಉಸ್ತುವಾರಿ ಮುಖಂಡರಿಗೆ ಅಚ್ಚರಿ ತಂದಿತ್ತು. ಮಾತ್ರವಲ್ಲದೆ, ರಾಹುಲ್ ಸಮಾವೇಶಕ್ಕೆ ದೊರೆತ ಜನಸ್ಪಂದನೆ ಗುಪ್ತಚರ ಇಲಾಖೆ ಅಧಿಕಾರಿಗಳಲ್ಲೂ ಗೊಂದಲ ಮೂಡಿಸಿತ್ತು ಎನ್ನುವುದು ಸುಳ್ಳಲ್ಲ.

    ಭಾವನಾತ್ಮಕ ವಿಚಾರಗಳು ಮತ್ತು ಅಪಪ್ರಚಾರಗಳ ಮೂಲಕ ಮತದಾರರನ್ನು ಓಲೈಸುತ್ತಿದ್ದ ಪ್ರತಿಪಕ್ಷಕ್ಕೆ ರಾಹುಲ್ ಗಾಂಧಿ ಕಾರ್ಯಕ್ರಮ ಒಂದು ಸ್ಪಷ್ಟ ಸಂದೇಶ ನೀಡಿದರೆ, ಕಾಂಗ್ರೆಸ್ ಕಾರ್ಯಕರ್ತರಲ್ಲಿ ಉತ್ಸಾಹ ಇಮ್ಮಡಿಯಾಗಿದೆ. ಜಿಲ್ಲಾ ಕಾಂಗ್ರೆಸ್ ಆಯೋಜಿಸಿದ ಈ ಸಮಾವೇಶಕ್ಕೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರುತ್ತೆ ಅನ್ನೋದನ್ನು ಸ್ವತಃ ಜಿಲ್ಲಾ ಕಾಂಗ್ರೆಸ್ ನಾಯಕರೇ ಊಹಿಸಿರಲಿಲ್ಲ.

    ಈ ಹಿಂದೆ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಹಾಗೂ ಹಿಂದೂ ಫೈರ್ ಬ್ರಾಂಡ್ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮಂಗಳೂರಿಗೆ ಬಂದಾಗಲೂ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಸೇರದಿರೋದು ಬಿಜೆಪಿಗರನ್ನೂ ಕಂಗೆಡಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಏಳು ಕ್ಷೇತ್ರಗಳಲ್ಲೂ ಕಾಂಗ್ರೆಸ್ ನ ಶಾಸಕರಿದ್ದು, ಅದನ್ನು ಉಳಿಸಿಕೊಂಡು ಕೈತಪ್ಪಿಕೊಂಡಿರುವ ಒಂದು ಕ್ಷೇತ್ರವನ್ನೂ ಪಡೆಯಬೇಕೆಂಬ ಪ್ಲಾನನ್ನೂ ಕಾಂಗ್ರೆಸ್ ಮಾಡುತ್ತಿದೆ. ಇದಕ್ಕೆಲ್ಲಾ ಚುನಾವಣಾ ಪೂರ್ವದಲ್ಲಿ ನಡೆದ ಈ ಜನಾಶೀರ್ವಾದ ಯಾತ್ರೆಯ ಯಶಸ್ಸೂ ಹೆಚ್ಚು ಬಲ ಕೊಟ್ಟಂತಾಗಿದೆ. ಒಟ್ಟಿನಲ್ಲಿ ಇನ್ನೊಂದು ತಿಂಗಳಲ್ಲಿ ನಡೆಯಲಿರುವ ಚುನಾವಣೆಯಲ್ಲಿ ರಾಹುಲ್ ಗಾಂಧಿ ಸಮಾವೇಶದ ನೈಜ ಫಲಿತಾಂಶ ದೊರೆಯಲಿದೆ.

    – ಸುಖ್‍ಪಾಲ್ ಪೊಳಲಿ, ಮಂಗಳೂರು

  • ಸಚಿವ ಮಧ್ವರಾಜ್ ಗೆ ಬಿಜೆಪಿಯಿಂದ ಚಿತ್ರಹಿಂಸೆ- ಮಾಧ್ಯಮದ ಮುಂದೆ ದೂರು ನೀಡಿದ ಸಿದ್ದರಾಮಯ್ಯ

    ಸಚಿವ ಮಧ್ವರಾಜ್ ಗೆ ಬಿಜೆಪಿಯಿಂದ ಚಿತ್ರಹಿಂಸೆ- ಮಾಧ್ಯಮದ ಮುಂದೆ ದೂರು ನೀಡಿದ ಸಿದ್ದರಾಮಯ್ಯ

    ಉಡುಪಿ: ಮೀನುಗಾರಿಕಾ, ಕ್ರೀಡಾ ಮತ್ತು ಯುವಜನ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ಗೆ ಬಿಜೆಪಿ ಚಿತ್ರಹಿಂಸೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರದ ಪಡುಬಿದ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಿನನಿತ್ಯ ಸಚಿವರಿಗೆ ಕೇಂದ್ರ ಮತ್ತು ರಾಜ್ಯ ನಾಯಕರಿಂದ ಹಿಂಸೆಯಾಗುತ್ತಿದೆಯಂತೆ. ಪಾಪ ಮಧ್ವರಾಜ್ ಗೆ ಬಿಜೆಪಿಯವರ ಹಿಂಸೆ ತಡ್ಕೊಳಕಾಗ್ತಿಲ್ಲ ಅಂತ ತಿಳಿಸಿದ್ದಾರೆ.

    ರಾಹುಲ್ ಗಾಂಧಿ ಉಡುಪಿ ಕಾರ್ಯಕ್ರಮದ ಸಂದರ್ಭ ಜನಾಶೀರ್ವಾದ ಯಾತ್ರೆಯ ಬಸ್ ಹತ್ತುವಾಗ ಈ ರೀತಿಯ ಗಂಭೀರ ಆರೋಪ ಮಾಡಿದ್ದಾರೆ. ಪ್ರಮೋದ್ ಮಧ್ವರಾಜ್ ಹುಟ್ಟು ಕಾಂಗ್ರೆಸ್ಸಿಗ. ಅವರು ಯಾವುದೇ ಕಾರಣಕ್ಕೂ ಬಿಜೆಪಿ ಹೋಗಲ್ಲ. ಎಷ್ಟೇ ಪರೀಕ್ಷೆಗಳು ನಡೆದರೂ ಮಧ್ವರಾಜ್ ನಮ್ಮ ಜೊತೆಯಲ್ಲೇ ಇರ್ತಾರೆ ಅಂತ ಎರಡೆರಡು ಬಾರಿ ಒತ್ತಿ ಹೇಳಿದರು.

    ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿ ಸೇರ್ತಾರೆ ಅನ್ನೋ ಸುದ್ದಿಯಿದೆ. ಸ್ವತಃ ಸಚಿವರೇ ತಾನು ಬಿಜೆಪಿ ಸೇರಲ್ಲ ಅಂತ ಹಲವು ಬಾರಿ ಹೇಳಿಕೆ ನೀಡಿದ್ದರು. ಸಿಎಂ ಸಿದ್ದರಾಮಯ್ಯ ಕೂಡಾ ಮೂರ್ನಾಲ್ಕು ಬಾರಿ ಸ್ಪಷ್ಟನೆ ನೀಡಿದ್ದರು. ಈ ನಡುವೆ ಕೇಂದ್ರ, ರಾಜ್ಯ ಬಿಜೆಪಿ ನಾಯಕರು ಪ್ರಮೋದ್ ಮಧ್ವರಾಜ್ ಅವರನ್ನು ಪಕ್ಷಕ್ಕೆ ಸೆಳೆಯುವ ಯತ್ನವನ್ನು ಮೂರು ವರ್ಷದಿಂದ ಮಾಡುತ್ತಿದೆ. ಆದ್ರೆ ಬಿಜೆಪಿ ನಾಯಕರು ಸಚಿವರಿಗೆ ಯಾವ ತರದ ಚಿತ್ರಹಿಂಸೆ ಕೊಡ್ತಾಯಿದ್ದಾರೆ. ಯಾವೆಲ್ಲಾ ಮಾರ್ಗದಲ್ಲಿ ಕಾಟ ಕೊಡುತ್ತಿದ್ದಾರೆ? ಎಂಬ ಬಗ್ಗೆ ಸಿಎಂ ಸಿದ್ದರಾಮಯ್ಯ ಆಗಲಿ, ಸಚಿವ ಪ್ರಮೋದ್ ಮಧ್ವರಾಜ್ ಆಗಲಿ ಸ್ಪಷ್ಟನೆ ನೀಡಿಲ್ಲ.