ಉಡುಪಿ: ಪ್ರಧಾನಿ ನರೇಂದ್ರ ಮೋದಿ (PM Modi )16 ವರ್ಷಗಳ ಬಳಿ ಉಡುಪಿ ಶ್ರೀ ಕೃಷ್ಣಮಠಕ್ಕೆ ಭೇಟಿ ನೀಡಲಿದ್ದಾರೆ. ನವೆಂಬರ್ 28 ರಂದು ಉಡುಪಿ ಶ್ರೀಕೃಷ್ಣ ದರ್ಶನ ಪಡೆದು, ಸಭಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
ಹೌದು. ನವೆಂಬರ್ 28ರಂದು ಉಡುಪಿ ಶ್ರೀಕೃಷ್ಣ ಮಠಕ್ಕೆ (Udupi Sri Krishna Math) ಭೇಟಿ ನೀಡಲಿದ್ದು, ಅಷ್ಟಮಠಗಳಲ್ಲಿ ಒಂದಾದ ಪರ್ಯಾಯ ಪುತ್ತಿಗೆ ಮಠಕ್ಕೂ ಭೇಟಿ ನೀಡಲಿದ್ದಾರೆ. ಅಂದು ಮಧ್ಯಾಹ್ನ 12 ಗಂಟೆಗೆ ಶ್ರೀಕೃಷ್ಣ ಮಠಕ್ಕೆ ಆಗಮಿಸಲಿದ್ದಾರೆ. ಪುತ್ತಿಗೆ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರೊಂದಿಗೆ ಮಾತುಕತೆ ನಡೆಸಲಿದ್ದಾರೆ. ನಂತರ ಶ್ರೀಕೃಷ್ಣ ಮಠದಲ್ಲಿ ನಡೆಯಲಿರುವ ಲಕ್ಷ ಕಂಠ ಗೀತ ಪಾರಾಯಣ, ಗೀತೋತ್ಸವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ ಎಂದು ಮಠದ ಮೂಲಗಳು ತಿಳಿಸಿವೆ.
ಅಲ್ಲದೇ ಮಠದ ವ್ಯಾಪ್ತಿಯಲ್ಲಿ ಉಡುಪಿ ಶ್ರೀಕೃಷ್ಣನ ದರ್ಶನ ಪಡೆಯಲಿದ್ದು, ಭಕ್ತರು, ಸಾರ್ವಜನಿಕರ ಸಮ್ಮುಖದಲ್ಲಿ ಸಭಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀಕೃಷ್ಣನ ಕೃಪೆಗೆ ಪಾತ್ರರಾಗಲಿದ್ದಾರೆ.
16 ವರ್ಷಗಳ ಹಿಂದೆ ಪುತ್ತಿಗೆ ಪರ್ಯಾಯ ಸಂದರ್ಭ ಉಡುಪಿಗೆ ಭೇಟಿ ನೀಡಿದ್ದ ನರೇಂದ್ರ ಮೋದಿ, ಪ್ರಧಾನಿಯಾದ ಬಳಿಕ ಇದೇ ಮೊದಲ ಬಾರಿಗೆ ಮಠಕ್ಕೆ ಭೇಟಿ ಕೊಡ್ತಿದ್ದಾರೆ. ಪ್ರಧಾನಿ ಕಚೇರಿಯಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಪ್ರಕಟವಾಗಬೇಕಿದೆ.
ಉಡುಪಿ: ಮೊಂಥಾ ಚಂಡಮಾರುತದ (Montha Cyclone) ಪರಿಣಾಮ ಕರ್ನಾಟಕ ಕರಾವಳಿ ಮೇಲೆ ಉಂಟಾಗಿದೆ. ಕಾಪುವಿನ ಮಟ್ಟು ಬೀಚ್ನಲ್ಲಿ (Mattu Beach) ಕಡಲ್ಕೊರೆತ ಆಗಿದೆ.
ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಮೊಂಥಾ ಚಂಡಮಾರುತ ಮತ್ತು ಲಕ್ಷದ್ವೀಪದ ವಾಯುಭಾರ ಕುಸಿತ ಕರ್ನಾಟಕದ ಕರಾವಳಿಯ ಕಡಲನ್ನು ಅಬ್ಬರಿಸುವಂತೆ ಮಾಡಿದೆ. ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದೆ. ಮೀನುಗಾರಿಕಾ ಚಟುವಟಿಕೆಯನ್ನು ನಿಷೇಧಿಸಲಾಗಿದೆ. ಇದನ್ನೂ ಓದಿ: ದೆಹಲಿಯಲ್ಲಿ ಮೋಡ ಬಿತ್ತನೆ ಪ್ರಯೋಗ ವಿಫಲ – ತಾತ್ಕಲಿಕವಾಗಿ ಮುಂದೂಡಿಕೆ
ಜಿಲ್ಲೆಯಾದ್ಯಂತ ಮೋಡ ಮುಸುಕಿದ ವಾತಾವರಣವಿದೆ. ಹವಾಮಾನ ಇಲಾಖೆ ಗಾಳಿ, ಮಳೆ ಮುನ್ಸೂಚನೆ ನೀಡಿದೆ. ಕಾಪು ಮಟ್ಟು ಬೀಚ್ ಸುತ್ತಮುತ್ತ ಕಡಲಕೊರೆತವಾಗಿದೆ. ಗಾಳಿಯ ಅಬ್ಬರ ಹೀಗೆ ಮುಂದುವರೆದರೆ ರಸ್ತೆ, ಜನವಸತಿ ಪ್ರದೇಶಕ್ಕೂ ಆತಂಕವಿದೆ.
– ಉಡುಪಿ ಜಿಲ್ಲೆಗೆ ಹೈ ಅಲರ್ಟ್; ಮೀನುಗಾರಿಕೆಯ ತೆರಳಿದ್ದ ಬೋಟ್ಗಳೆಲ್ಲ ವಾಪಸ್
ಉಡುಪಿ: ಲಕ್ಷದ್ವೀಪದ ಸುತ್ತಮುತ್ತ ವಾಯುಭಾರ ಕುಸಿತವಾಗಿದ್ದು, ಚಂಡಮಾರುತದ ವಾತಾವರಣ ಸೃಷ್ಟಿಯಾಗಿದೆ. ಮುಂದಿನ ಮೂರ್ನಾಲ್ಕು ದಿನ ಭಾರಿ ಗಾಳಿಮಳೆ ಬೀಳುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಕರ್ನಾಟಕ ಕರಾವಳಿಯ ಜಿಲ್ಲೆಗಳಿಗೆ ಹೈ ಅಲರ್ಟ್ ಘೋಷಣೆ ಮಾಡಿದೆ.
ಉಡುಪಿ (Udupi) ಜಿಲ್ಲೆಯ ಮಲ್ಪೆ ಸರ್ವ ಋತು ಮೀನುಗಾರಿಕಾ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದ ಎಲ್ಲ ಬೋಟುಗಳು ವಾಪಸ್ ಆಗಿವೆ. ರಾಜ್ಯದ ಗಡಿ ದಾಟಿ ಗೋವಾ, ಮಹಾರಾಷ್ಟ್ರ ಗುಜರಾತ್ ಬಾರ್ಡರ್ನಲ್ಲಿ ಇರುವ ಬೋಟ್ಗಳಿಗೆ ಹತ್ತಿರದ ಬಂದರುಗಳನ್ನು ಆಶ್ರಯಿಸುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಬಂಗಾಳ ಕೊಲ್ಲಿಯಲ್ಲಿ ‘ಮೋಂಥಾ’ ಸೈಕ್ಲೋನ್ ಅಬ್ಬರ – ಚೆನ್ನೈನಲ್ಲಿ ಭಾರೀ ಮಳೆ ಸಾಧ್ಯತೆ
ಉಡುಪಿಯ ಬೋಟ್ಗಳು ಗೋವಾ, ಮಹಾರಾಷ್ಟ್ರ, ಗುಜರಾತ್ ಬಂದರು ಸೇರಿವೆ. ಮಲ್ಪೆ, ಗಂಗೊಳ್ಳಿ, ಕುಂದಾಪುರದ ಸಾವಿರಾರು ಬೋಟ್ಗಳು ವಾಪಸ್ ಆಗಿವೆ. ಚಂಡಮಾರುತವು ಕಡಲ ತೀರದಿಂದ ಸುಮಾರು 300 ಕಿಲೋಮೀಟರ್ ದೂರದಲ್ಲಿದೆ.
ಅರಬ್ಬೀ ಕಡಲ ತೀರದ ಎಲ್ಲಾ ರಾಜ್ಯಗಳಿಗೂ ಕಟ್ಟೆಚ್ಚರ ನೀಡಲಾಗಿದೆ. 40 ರಿಂದ 50 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆಳಸಮುದ್ರ, ಪರ್ಶಿಯನ್, ಟ್ರಾಲ್, ನಾಡದೋಣಿಗಳು ಲಂಗರು ಹಾಕಿವೆ. ಇದನ್ನೂ ಓದಿ: ಕರಾವಳಿಯಲ್ಲಿ ಅಬ್ಬರದ ಬಿರುಗಾಳಿ ಸಹಿತ ಮಳೆ – ಮುಳುಗಿದ ರಸ್ತೆ, ಕುಸಿದ ಗುಡ್ಡ
ಬೆಂಗಳೂರು: ರಾಜ್ಯದಲ್ಲಿ ಮಳೆ (Rain) ಆರ್ಭಟ ಮತ್ತೆ ಮುಂದುವರಿದಿದೆ. ದೀಪಾವಳಿ ಸಂಭ್ರಮದಲ್ಲಿದ್ದ ಜನತೆಗೆ ಮಳೆರಾಯ ಕೊಂಚ ಬೇಸರ ತರಿಸಿದ್ದಾನೆ. ಹಾಸನ, ಚಿಕ್ಕಮಗಳೂರು, ಉಡುಪಿ ಸೇರಿ ರಾಜ್ಯದ ನಾನಾ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದ್ದು, ಸಾಕಷ್ಟು ಅವಾಂತರ ಸೃಷ್ಟಿಸಿದೆ. ಸತತ ಮಳೆಯಿಂದ ಬೆಳೆನಾಶವಾಗಿದ್ದು, ಬೆಳೆ ಕಳೆದುಕೊಂಡ ರೈತರು ಕಣ್ಣೀರಿಡುವಂತೆ ಮಾಡಿದೆ.
ಹಾಸನ ಜಿಲ್ಲೆಯಲ್ಲಿ ಕಳೆದ ಐದು ದಿನಗಳಿಂದ ಬಹುತೇಕ ತಾಲೂಕುಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿ ಗ್ರಾಮದಲ್ಲಿ ಬಾರಿ ಮಳೆಯಿಂದ ಕೆರೆಯ ಕೋಡಿ ಒಡೆದು ನೂರಾರು ಎಕರೆ ಪ್ರದೇಶದ ರೈತರ ಜಮೀನುಗಳು ಜಲಾವೃತಗೊಂಡಿವೆ. ಅಡಿಕೆ, ತೆಂಗಿನ ತೋಟ, ಹೊಲ, ಗದ್ದೆಗಳಲ್ಲಿ ನೀರು ತುಂಬಿಕೊಂಡಿದೆ.
ಅರಸೀಕೆರೆ ತಾಲೂಕಿನ ಚಿಕ್ಕಮ್ಮನಹಳ್ಳಿ ಗ್ರಾಮದ ಶಂಕರಲಿಂಗಪ್ಪ ಎಂಬವರ ಮನೆಗೆ ನೀರು ನುಗ್ಗಿದೆ. ಮನೆಯಲ್ಲಿದ್ದ ವಸ್ತುಗಳೆಲ್ಲಾ ನೀರಿನಲ್ಲಿ ತೇಲಿವೆ. ಹೊಳೆನರಸೀಪುರ ಪಟ್ಟಣದ, ಕಾರ್ಖಾನೆ ಬೀದಿಯಲ್ಲಿರುವ ಮಂಜು ಎಂಬವರ ಮನೆಗೂ ನೀರು ನುಗ್ಗಿ ಅಪಾರ ಹಾನಿ ಆಗಿದೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಮಳೆಗೆ ಹಳ್ಳಕೊಳ್ಳ, ಕೆರೆ ಕಟ್ಟೆಗಳು ತುಂಬಿ ಹರಿದು ಹೊಲ, ಗದ್ದೆಗಳು ಜಲಾವೃತವಾಗಿವೆ.
ಅರಸೀಕೆರೆ ತಾಲೂಕಿನಲ್ಲೂ ಮಳೆ ಅಬ್ಬರಿಸಿದ್ದು, ಮಳೆನೀರು ಆಸ್ಪತ್ರೆ ಒಳಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ರೋಗಿಗಳು ಬೆಡ್ನಿಂದ ಕೆಳಗೆ ಇಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ರೋಗಿಗಳ ಕಡೆಯವರು ನೀರಿನಲ್ಲೇ ನಿಲ್ಲಬೇಕಾಗಿದೆ.
ಚಿಕ್ಕಮಗಳೂರಿನ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನವನ್ನ ಅಸವ್ಯಸ್ತಗೊಳಿಸಿದೆ. ದೀಪಾವಳಿ ಹಬ್ಬದಂದೇ ಅಬ್ಬರಿಸಿದ ಮಳೆಗೆ ಮಲೆನಾಡು ಜನರು ಹೈರಾಣಾಗಿದ್ದಾರೆ. ಜಿಲ್ಲೆಯ ಕಳಸ, ಹೊರನಾಡು, ಕುದುರೆಮುಖ ಭಾಗದಲ್ಲಿ ಭಾರೀ ಮಳೆಯಾಗಿದ್ದು. ಹಳ್ಳದಂತಾದ ರಸ್ತೆಗಳಲ್ಲಿ ವಾಹನ ಚಲಾಯಿಸಲು ವಾಹನ ಸವಾರರು ಪರದಾಡಿದ್ದಾರೆ.
ಕರಾವಳಿ ಜಿಲ್ಲೆ ಉಡುಪಿಯಲ್ಲೂ ಮಳೆ ಅಬ್ಬರ ಜೋರಾಗಿದೆ. ಗುಡುಗು, ಮಿಂಚು ಸಹಿತ ಸುರಿದ ಭಾರಿ ಮಳೆಗೆ ಉಡುಪಿ ಜನರು ಹೈರಾಣಾಗಿದ್ದಾರೆ. ಬಿರುಗಾಳಿ ಸಹಿತ ಮಳೆಯಾದ ಕಾರಣ. ಜಿಲ್ಲೆಯ ವಿವಿಧೆಡೆ ವಿದ್ಯುತ್ನಲ್ಲಿ ವ್ಯತ್ಯಯವಾಗಿದೆ.
ತುಮಕೂರು ಜಿಲ್ಲಾದ್ಯಂತ ಮಳೆ ಅಬ್ಬರಿಸುತ್ತಿದ್ದು, ಜನಜೀವನಕ್ಕೆ ಬ್ರೇಕ್ ಹಾಕಿದೆ. ತಿಪಟೂರಿನಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ರಸ್ತೆಗೆ ನುಗ್ಗಿದ ಮಳೆ ನೀರು ಕೃತಕ ಕೆರೆ ಸೃಷ್ಟಿಸಿದೆ. ಕೆರೆಯಂತಾದ ಅಂಡರ್ಪಾಸ್ನಲ್ಲಿ ವಾಹನ ಸವಾರರು ಪರದಾಡುವಂತ ಸ್ಥಿತಿ ನಿರ್ಮಾಣ ಮಾಡಿದೆ. ಅವೈಜ್ಞಾನಿಕ ಕಾಮಗಾರಿಗೆ ವಾಹನ ಸವಾರರು ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ್ದಾರೆ.
ಇನ್ನು ಚಿತ್ರದುರ್ಗ ತಾಲೂಕಿನ ಕಸವನಹಳ್ಳಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರ ಮಳೆಯಾಗಿದ್ದು, ಶೀತ ಹೆಚ್ಚಾಗಿ ಹೂವಿನ ಗಿಡಗಳು ಕೊಳೆರೋಗಕ್ಕೆ ತುತ್ತಾಗಿ ಕೊಳೆಯುತ್ತಿವೆ. ದೀಪಾವಳಿಗೆ ಭರ್ಜರಿ ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದ ರೈತರು ಕಂಗಲಾಗಿದ್ದಾರೆ. ಮಳೆಯಿಂದಾಗಿ ಸಕಾಲಕ್ಕೆ ಹೂವು ಕೊಯ್ಲು ಮಾಡಲಾಗದೇ ಕಲರ್ ಫುಲ್ ಸೆಂಟಿಲ್ ಹೂವು ಜಮೀನಲ್ಲೇ ಕೊಳೆಯುತ್ತಿದೆ. ಒಟ್ಟಾರೆ ರಾಜ್ಯದಲ್ಲಿ ಮಳೆ ಅಬ್ಬರ ಜೋರಾಗಿದ್ದು, ಮಳೆ ಸೃಷ್ಟಿಸಿದ ಅವಾಂತರಕ್ಕೆ ಜನರು ಹೈರಾಣಾಗಿದ್ದಾರೆ.
ಉಡುಪಿ: ಇಲ್ಲಿನ ಅಂಬಲಪಾಡಿ ಬಳಿ ಯುವಕ ಮತ್ತು ಹುಡುಗಿ ನೇಣಿಗೆ ಶರಣಾಗಿರುವ ಘಟನೆ ನಡೆದಿದೆ.
ಪಿಯುಸಿ ವಿದ್ಯಾರ್ಥಿನಿ, ವಲಸೆ ಕಾರ್ಮಿಕ ಮಲ್ಲೇಶ್ (23) ಆತ್ಮಹತ್ಯೆ ಮಾಡಿಕೊಂಡವರು. ಲೇಬರ್ ಕಾಲೊನಿಯ ಜೋಪಡಿಯಲ್ಲಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉತ್ತರ ಕರ್ನಾಟಕ ಮೂಲದ ಕಾರ್ಮಿಕರು ವಾಸಿಸುವ ಕಾಲೊನಿ ಇದಾಗಿದೆ. ಹುಡುಗಿಯ ತಾಯಿ ಮನೆಯಲ್ಲಿ ಇಲ್ಲದ ವೇಳೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಉಡುಪಿ ನಗರ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ಉಡುಪಿ ಜಿಲ್ಲಾ ಆಸ್ಪತ್ರೆಗೆ ಶವಗಳನ್ನು ರವಾನಿಸಲಾಗಿದೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ವಿದ್ಯಾರ್ಥಿನಿ ತಾಯಿ ರಾಯಚೂರಿನಿಂದ ವಾಪಸಾಗುತ್ತಿದ್ದಾರೆ.
ಹಳ್ಳಿ ಹುಡುಗ ಖ್ಯಾತಿಯ ಮಂಜುನಾಥ್ ಚೇರ್ಕಾಡಿ ನಾಯಕ ನಟರಾಗಿ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಆಲ್ಬಮ್ ಸಾಂಗ್ ಮುಹೂರ್ತ ನಡೆದಿದೆ.
ಆರ್ ಎಸ್ ಸಾಂಗ್ಸ್ ಪ್ರೊಡಕ್ಷನ್ಸ್ ಹಾಗೂ ಆರ್ಯ ಪ್ರೊಡಕ್ಷನ್ಸ್ ಅವರ ಬಹುನಿರೀಕ್ಷಿತ ಕನ್ನಡ ಆಲ್ಬಂ ಹಾಡು ‘ಆರ್ಯ’ ಚಿತ್ರೀಕರಣ ಉಡುಪಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯಿತು. ಹಾಡಿನ ಮುಹೂರ್ತವನ್ನು ಉಡುಪಿಯ ಇತಿಹಾಸ ಪ್ರಸಿದ್ಧ ಕುಕ್ಕೆ ಹಳ್ಳಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಸಿದ ತಂಡವು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ನಮ್ಮ ಮುಹೂರ್ತಕ್ಕೆ ಬಿರುವೆರ್ ಕುಡ್ಲ ರಿ. ಉಡುಪಿ ಘಟಕದ ಅಧ್ಯಕ್ಷ ಯೋಗೀಶ್ ಪೂಜಾರಿ ಹಾಗೂ ಖ್ಯಾತ ಉದ್ಯಮಿ ರಾಜೇಶ್ ಪೂಜಾರಿ ಚಾಲನೆ ನೀಡಿದರು.
ತುಳುನಾಡ ಸಾಹಿತ್ಯ ಜೋಡಿಗಳೆಂದೇ ಖ್ಯಾತರಾಗಿರುವ ರಕ್ಷಿತ್ ಸರಿಪಲ್ಲ ನಿರ್ದೇಶನ ಹಾಗೂ ಶ್ರೇಯಸ್ ಯೆಯ್ಯಾಡಿ ಸಾಹಿತ್ಯ ಇರುವಂತಹ ಈ ಹಾಡಿಗೆ ಹಳ್ಳಿ ಹುಡುಗ ಖ್ಯಾತಿಯ ಮಂಜುನಾಥ್ ಚೇರ್ಕಾಡಿ ನಾಯಕ. ಸೋನಿ ಪ್ರಭುದನ್ ನಾಯಕಿ, ಸಹ ಕಲಾವಿದರಾಗಿ ಮೇಘ ಪೂಜಾರಿ, ವಿಶೇಷ ಪಾತ್ರದಲ್ಲಿ ಬಾಲ ನಟಿ ತನಿಷ್ಕಾ ಪೂಜಾರಿ ಅಭಿನಯಿಸುತ್ತಿದ್ದಾರೆ.
ಇನ್ನುಳಿದಂತೆ ಸಿನಿಮಾಟೋಗ್ರಾಫರ್ ಆಗಿ ಹಲವಾರು ಚಲನಚಿತ್ರಗಳಲ್ಲಿ ಕೆಲಸ ಮಾಡಿದಂತಹ ಧೀರಜ್ ಭಟ್, ಛಾಯಾಗ್ರಾಹಕರಾಗಿ ರೋಶನ್ ಉಡುಪಿ, ಸುಭಾಷ್ ಮಿಜಾರ್ ಇವರ ಸಂಗೀತವಿದೆ. ಆರ್ ಕೆ ಮುಲ್ಕಿ ಅವರ ಗಾಯನ ಹಾಡಿನಲ್ಲಿ ಕೇಳಬಹುದು.
ಮೃತ ಮೂವರು ವಿದ್ಯಾರ್ಥಿಗಳ ಪೈಕಿ ಓರ್ವ ಪಿಯುಸಿ ವ್ಯಾಸಂಗ ಮಾಡುತ್ತಿದ್ದ. ಇನ್ನಿಬ್ಬರು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದರು. ಶಾಲೆ ಮುಗಿಸಿ ಮೀನುಗಾರಿಕಾ ಕೆಲಸಕ್ಕೆ ಹೋಗಿದ್ದ ವೇಳೆ ಅವಘಡ ಸಂಭವಿಸಿದೆ. ಘಟನಾ ಸ್ಥಳಕ್ಕೆ ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಜಮೀನಿಗೆ ತೆಂಗಿನಕಾಯಿ ಕೀಳಲು ಹೋಗಿದ್ದಾಗ ಅವಘಡ – ಅಕ್ರಮ ವಿದ್ಯುತ್ ಪ್ರವಹಿಸಿ ಇಬ್ಬರು ಸಾವು
– ತುಂಬಾ ತಮಾಷೆಯ, ಬಹಳ ಪ್ರೀತಿಸುವ ವ್ಯಕ್ತಿ – ಹೆಬ್ರಿಯಲ್ಲಿ ಮೂರು ದಿನದ ಶೂಟಿಂಗ್ ಮುಗಿಸಿದ್ದೇವೆ
ಉಡುಪಿ: ರಾಜು ತಾಳಿಕೋಟೆ (Raju Talikote) ನನ್ನನ್ನು ಮಗನಂತೆ ನೋಡಿಕೊಳ್ಳುತ್ತಿದ್ದರು. ನಿನಗೋಸ್ಕರ ಈ ಚಿತ್ರ ಮಾಡುತ್ತಿದ್ದೇನೆ ಎಂದು ಹೇಳುತ್ತಿದ್ದರು ಎಂದು ರಾಜು ತಾಳಿಕೋಟೆಯವರ ನಿಧನಕ್ಕೆ ನಟ ಶೈನ್ ಶೆಟ್ಟಿ (Shine Shetty) ಕಣ್ಣೀರಿಟ್ಟಿದ್ದಾರೆ.
ಮಣಿಪಾಲ ಆಸ್ಪತ್ರೆ (Manipal Hospital) ಮುಂದೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಗ್ ಬಾಸ್ ಸೀಸನ್ 7ರಲ್ಲಿ ಜೊತೆಗಿದ್ದೆವು. ಇಡೀ ಸೀಸನ್ನ ನಟರ ಜೊತೆ ಅನ್ಯೋನ್ಯ ಸಂಬಂಧವಿದೆ. ರಾಜು ತಾಳಿಕೋಟೆ ತುಂಬಾ ತಮಾಷೆಯ, ಬಹಳ ಪ್ರೀತಿಸುವ ವ್ಯಕ್ತಿ. ಸಿನಿಮಾ ನಿರ್ಮಾಣದ ಕಾಲ ಕೂಡಿ ಬಂದಾಗ ರಾಜು ಅವರನ್ನು ಸಂಪರ್ಕ ಮಾಡಿದ್ದೆ. ನಮ್ಮ ಸಿನಿಮಾಗೆ ಮೊದಲು ಆಯ್ಕೆ ಮಾಡಿದ್ದು ರಾಜು ತಾಳಿಕೋಟೆ ಅವರನ್ನು. ಪಾತ್ರ ಮತ್ತು ಡೈಲಾಗ್ ಅವರಿಗಾಗಿಯೇ ಬರೆದಿದ್ದೇವೆ. ರಾಜು ತಾಳಿಕೋಟೆಯವರಿಗೆ ಒಟ್ಟು 40 ದಿನದ ಶೆಡ್ಯೂಲ್ ಫಿಕ್ಸ್ ಆಗಿತ್ತು. ಹೆಬ್ರಿಯಲ್ಲಿ ಮೂರು ದಿನದ ಶೂಟಿಂಗ್ ಮುಗಿಸಿದ್ದೇವೆ. ಉಡುಪಿ, ಮಂಗಳೂರು ಸುತ್ತಾಡಲು, ಮೀನು ತಿನ್ನಲು ಒಂದು ದಿನ ಮೊದಲೇ ಬಂದಿದ್ದರು. ಗೆಳೆಯರ ಜೊತೆ ಬೇರೆ ಬೇರೆ ಜಾಗಕ್ಕೆ ಸುತ್ತಾಡಿದ್ದಾರೆ ಎಂದರು.
ಭಾನುವಾರ ರಾತ್ರಿ 11 ಗಂಟೆಗೆ ತಂಡದ ಜೊತೆ ಮಾತನಾಡಿದ್ದಾರೆ. ಬಳಿಕ 11:59ಕ್ಕೆ ಉಸಿರಾಟ ಸಮಸ್ಯೆ ಅಂತ ಫೋನ್ ಮಾಡಿದ್ದಾರೆ. ಕೂಡಲೇ ಹೆಬ್ರಿ ಹೆಲ್ತ್ಕೇರ್ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿಂದ ನೇರ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಬಂದೆವು. ಕಳೆದ ರಾತ್ರಿಯೇ ಕುಟುಂಬಕ್ಕೆ ಮಾಹಿತಿಯನ್ನು ಕೊಟ್ಟಿದ್ದೇವೆ. ಮಕ್ಕಳು ಕುಟುಂಬಸ್ಥರು ಬಂದಿದ್ದರು. ಬಳಿಕ ಕೊನೆಯುಸಿರೆಳೆದಿದ್ದಾರೆ ಎಂದು ಬೇಸರಿಸಿದರು.
ಉಡುಪಿ: ಆರ್ಎಸ್ಎಸ್ (RSS) ಎಂದರೆ ಸೇವೆ, ದೇಶಭಕ್ತಿ-ಶಿಸ್ತು. ಸಂಘ ಇಂದಿರಾ ಗಾಂಧಿಗೆ ಹೆದರಿಲ್ಲ, ನೆಹರು ಮುಂದೆ ಮಂಡಿಯೂರಿಲ್ಲ. ಇವರಪ್ಪ ಗೃಹ ಸಚಿವರಾದಾಗ ಏನು ಮಾಡಲು ಸಾಧ್ಯವಾಗಿಲ್ಲ. ಪ್ರಿಯಾಂಕ್ ಖರ್ಗೆ (Priyank Kharge) ಕೈಯಲ್ಲಿ ಏನು ಮಾಡಲು ಸಾಧ್ಯ ಎಂದು ಶಾಸಕ, ಮಾಜಿ ಸಚಿವ ಸುನಿಲ್ ಕುಮಾರ್ (Sunil Kumar) ತಿರುಗೇಟು ಕೊಟ್ಟಿದ್ದಾರೆ.
ಆರ್ಎಸ್ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಸಿಎಂಗೆ ಪತ್ರ ಬರೆದಿರುವ ಬಗ್ಗೆ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡೂವರೆ ವರ್ಷದಿಂದ ಗ್ರಾಮೀಣಾಭಿವೃದ್ಧಿ ಇಲಾಖೆ ಕೋಮಾ ಸ್ಥಿತಿಯಲ್ಲಿದೆ. ಪ್ರಿಯಾಂಕ್ ಖರ್ಗೆ ತಮ್ಮ ಖಾತೆ ನಿಭಾಯಿಸಲಾಗದ ವಿಫಲ ಸಚಿವ. ನಾನೊಬ್ಬ ಸಚಿವ ಎಂದು ತೋರ್ಪಡಿಸಲು ಪದೇ ಪದೇ ಮಾಧ್ಯಮದ ಮುಂದೆ ಬರುತ್ತಾರೆ. ಇಂತಹ ವಿಚಾರಗಳನ್ನು ಪ್ರಸ್ತಾಪಿಸುವುದು ಪ್ರಿಯಾಂಕ್ ಖರ್ಗೆಗೆ ಚಟ ಎಂದರು. ಇದನ್ನೂ ಓದಿ: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್ಎಸ್ಎಸ್ ವಿರುದ್ಧ ರಾಜ್ಯದಲ್ಲಿ ಕ್ರಮ: ಸಿಎಂ
80% ಭ್ರಷ್ಟಾಚಾರ ಮರೆಮಾಚಲು ವಿವಾದ ಸೃಷ್ಟಿಸುತ್ತಾರೆ. ರಾಜ್ಯದಲ್ಲಿ ಗ್ರಾಮೀಣ ರಸ್ತೆಗಳು ಗುಂಡಿ ಬೀಳಲು ಪ್ರಿಯಾಂಕ್ ಖರ್ಗೆ ಕಾರಣ. ಇವರ ಆಡಳಿತದಲ್ಲಿ ಒಂದು ಕಿಲೋಮೀಟರ್ ಹೊಸ ರಸ್ತೆ ನಿರ್ಮಾಣವಾಗಿಲ್ಲ. ಗ್ರಾಮ ಪಂಚಾಯಿತಿಗೆ ಅನುದಾನ ಇಲ್ಲ, ಹೊಸ ಪಿಡಿಒ ನೇಮಕಾತಿಯಿಲ್ಲ. ನಾಲಾಯಕ್ ಸಚಿವ ಆರ್ಎಸ್ಎಸ್ ಅನ್ನು ಟೀಕಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಯವರೇ ನಿಮ್ಮ ಮಕ್ಕಳಿಗೆ ಸರಿಯಾಗಿ ಪಾಠ ಹೇಳಿಕೊಡಿ: ಗೋವಿಂದ ಕಾರಜೋಳ
ಆರ್ಎಸ್ಎಸ್ ಹೆಸರು ತೆಗೆದರೆ ಪ್ರಚಾರಗಿಟ್ಟಿಸಬಹುದು ಎಂಬುದು ಉದ್ದೇಶ. ಪ್ರಿಯಾಂಕ್ ಖರ್ಗೆ ಶಾಶ್ವತ ಅಲ್ಲ, ಅವರ ಅಧಿಕಾರವೂ ಶಾಶ್ವತ ಅಲ್ಲ. ಆರ್ಎಸ್ಎಸ್ ಶಾಶ್ವತ, ಆರ್ಎಸ್ಎಸ್ನ ವಿಚಾರ ಶಾಶ್ವತ. ಕೈಲಾಗದವ ಏನೋ ಮಾಡಿದ್ದಾನೆ ಎಂಬ ಪರಿಸ್ಥಿತಿ ಖರ್ಗೆಯದ್ದು. ಸರ್ಕಾರ ಕರ್ನಾಟಕದ ಅಭಿವೃದ್ಧಿಯ ಬಗ್ಗೆ ಚರ್ಚೆ ಮಾಡುತ್ತಿಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ದೊಡ್ಡಗೌಡ್ರ ಆರೋಗ್ಯದಲ್ಲಿ ಚೇತರಿಕೆ – ಆಸ್ಪತ್ರೆಯಿಂದ ಡಿಸ್ಚಾರ್ಜ್
ಉಡುಪಿ: ತಾಕತ್ತಿದ್ದರೆ ಆರ್ಎಸ್ಎಸ್ (RSS) ನಿಷೇಧ ಮಾಡಿ ಚುನಾವಣೆಗೆ ಬನ್ನಿ ಎಂದು ಸಚಿವ ಪ್ರಿಯಾಂಕ್ ಖರ್ಗೆಗೆ ಮಾಜಿ ಸಚಿವ ಸುನಿಲ್ ಕುಮಾರ್ (Sunil Kumar) ಸವಾಲು ಹಾಕಿದರು.
ಸರ್ಕಾರದ ಸ್ಥಳಗಳಲ್ಲಿ ಆರ್ಎಸ್ಎಸ್ನ ಚಟುವಟಿಕೆಗಳನ್ನು ಬ್ಯಾನ್ ಮಾಡುವಂತೆ ಸಿಎಂಗೆ ಪ್ರಿಯಾಂಕ್ ಖರ್ಗೆ (Priyank Kharge) ಪತ್ರ ಬರೆದಿದ್ದಾರೆ. ಈ ಕುರಿತು ಮಾತನಾಡಿದ ಸುನಿಲ್ ಕುಮಾರ್, ಆರ್ಎಸ್ಎಸ್ ನಿಷೇಧ ಹೇಳಿಕೆ ನಾಚಿಕೆ ಸಂಗತಿ. ಪ್ರಿಯಾಂಕ್ ಖರ್ಗೆ ಅವಿವೇಕಿತನದ ಪತ್ರ ಬರೆದಿದ್ದಾರೆ. ಇವರ ತಂದೆ ಗೃಹ ಸಚಿವರವಾಗಿದ್ದಾಗಲೇ ಆರ್ಎಸ್ಎಸ್ ಅನ್ನು ಏನೂ ಮಾಡಲು ಆಗಿಲ್ಲ. ಅಧಿಕಾರದ ಮದ, ಸೊಕ್ಕಿನಿಂದ ಈ ರೀತಿಯ ಹೇಳಿಕೆ ಕೊಡುತ್ತಿದ್ದೀರಿ. ನಿಮ್ಮ ತಂದೆ ಎಐಸಿಸಿ ಅಧ್ಯಕ್ಷರಾಗಿ ಬರಬಹುದು ಪದೇ ಪದೇ ದುರಹಂಕಾರದಿಂದ ಮಾತನಾಡಬೇಡಿ. ಇದು ನಿಮ್ಮ ಬೆಳವಣಿಗೆಗೆ ಒಳ್ಳೆಯದಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ಅಪ್ಪನಿಂದಲೇ RSS ಬ್ಯಾನ್ ಮಾಡಲು ಆಗ್ಲಿಲ್ಲ, ಇವರಿಂದ ಆಗುತ್ತಾ?: ಯತ್ನಾಳ್ ಟಾಂಗ್
ನೀವು, ನಿಮ್ಮ ಅಧಿಕಾರ ಶಾಶ್ವತ ಅಲ್ಲ. ಆರ್ಎಸ್ಎಸ್ ವಿಚಾರ ಮಾತ್ರ ಶಾಶ್ವತ. ನೂರು ವರ್ಷ ಜನರ ನಡುವೆ ಕೆಲಸ ಮಾಡಿದೆ. ಇನ್ನೂ ನೂರಾರು ವರ್ಷ ಕೆಲಸ ಮಾಡುತ್ತೆ. ನಮ್ಮಂತಹ ಲಕ್ಷಾಂತರ ಸ್ವಯಂ ಸೇವಕರು ಮುಂದಿನ ಪೀಳಿಗೆಯಲ್ಲೂ ಕೆಲಸ ಮಾಡುತ್ತಾರೆ. ಎರಡೂವರೆ ವರ್ಷ ಇಲಾಖೆಯಲ್ಲಿ ಕೇವಲ ಕತ್ತೆ ಕಾದಿದ್ದೀರಿ. ಕಲ್ಯಾಣ ಕರ್ನಾಟಕದಲ್ಲಿ ಪ್ರವಾಹ ಬಂದಾಗ ನಾಪತ್ತೆಯಾಗಿದ್ದೀರಿ. ನಾನು ಸಚಿವನಾಗಿ ಜೀವಂತನಾಗಿದ್ದೇನೆ ಎಂದು ತೋರಿಸಿಕೊಳ್ಳಲು ಹೇಳಿಕೆ ಕೊಡಬೇಡಿ ಎಂದು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಕೆಟ್ಟ ಸರ್ಕಾರ ಇದೆ. ಮುಖ್ಯಮಂತ್ರಿಗಳಿಗೆ ಸಂಪುಟದಲ್ಲಿ ಹಿಡಿತ ಇಲ್ಲ. ಯಾರು ಏನು ಬೇಕಾದರೂ ಮಾತನಾಡಬಹುದೆಂಬ ಪರಿಸ್ಥಿತಿ ಇದೆ. ದಿನ ಬೆಳಗಾದರೆ ಯಾರು ಮುಖ್ಯಮಂತ್ರಿ, ಯಾರು ಸಚಿವ ಅನ್ನೋದೆ ಚರ್ಚೆ. ಇದು 80% ಸರ್ಕಾರ. ತಾಕತ್ತಿದ್ದರೆ ಆರ್ಎಸ್ಎಸ್ ನಿಷೇಧ ಮಾಡಿ ಚುನಾವಣೆಗೆ ಬನ್ನಿ. ದೇಶಭಕ್ತ ಸಂಘಟನೆಯಾಗಿ ಆರ್ಎಸ್ಎಸ್ ವಿಶ್ವದ ಜನರ ಮನಸ್ಸು ಗೆದ್ದಿದೆ. ದೇಶಕ್ಕೆ ತನ್ನದೇ ಕೊಡುಗೆ ನೀಡಿದೆ ಎಂದು ತಿಳಿಸಿದರು. ಇದನ್ನೂ ಓದಿ: ಸರ್ಕಾರಿ ಸ್ಥಳಗಳು, ಮುಜರಾಯಿ ದೇವಸ್ಥಾನಗಳಲ್ಲಿ ಆರ್ಎಸ್ಎಸ್ ಎಲ್ಲಾ ಚಟುವಟಿಕೆ ಬ್ಯಾನ್?
ಆರ್ಎಸ್ಎಸ್ ಅನ್ನು ಪ್ರಿಯಾಂಕ ಖರ್ಗೆ ವಿನಾಕಾರಣ ಟೀಕೆ ಮಾಡುತ್ತಿರುವುದು ಮೊದಲಲ್ಲ. ತನ್ನ ಅಧಿಕಾರ ಅವಧಿಯಲ್ಲಿ ಜನರಿಗೆ ಹತ್ತಿರವಾಗುವ ಯಾವುದೇ ಕೆಲಸ ಖರ್ಗೆ ಸಚಿವರಾಗಿ ಮಾಡಿಲ್ಲ. ಆರ್ಎಸ್ಎಸ್ ಟೀಕೆ ಮಾಡುವ ಮೂಲಕ ಜೀವಂತವಾಗಿದ್ದೇನೆ ಎಂದು ತೋರಿಸಲು ಹೊರಟಿದ್ದಾರೆ. ಇಡೀ ರಾಜ್ಯದಲ್ಲಿ ಗ್ರಾಮೀಣ ಭಾಗದಲ್ಲಿ ರಸ್ತೆಗಳಲ್ಲಿ ಗುಂಡಿ ಬಿದ್ದಿವೆ. ಈ ವೈಫಲ್ಯಕ್ಕೆ ಪ್ರಿಯಾಂಕ್ ಖರ್ಗೆ ಕಾರಣ. ಒಂದು ಹೊರ ರಸ್ತೆ ಮಾಡಿಲ್ಲ, ರಸ್ತೆ ಗುಂಡಿ ಮುಚ್ಚಿಲ್ಲ. ಒಂದೇ ಒಂದು ನಿವೇಶನ ಹಂಚಿಲ್ಲ. ಗ್ರಾಮ ಪಂಚಾಯಿತಿಗೆ ಅನುದಾನ ಕೊಟ್ಟಿಲ್ಲ. ಯಾವುದೇ ಜಿಲ್ಲೆಗೆ ಪ್ರವಾಸ ಮಾಡಿಲ್ಲ. ತನ್ನ ವೈಫಲ್ಯ ಮುಚ್ಚಿಹಾಕಲು ಮಾಧ್ಯಮದ ಮುಂದೆ ಮಾತನಾಡುವ ಚಟ ಎಂದು ಟಾಂಗ್ ಕೊಟ್ಟರು.