Tag: ಉಕ್ಕು ಉತ್ಪಾದನೆ

  • 2047ಕ್ಕೆ ವಾರ್ಷಿಕ 500 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ: ಹೆಚ್‌ಡಿಕೆ

    2047ಕ್ಕೆ ವಾರ್ಷಿಕ 500 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ: ಹೆಚ್‌ಡಿಕೆ

    ನವದೆಹಲಿ: ಸಣ್ಣ ಪ್ರಮಾಣದ ಉಕ್ಕು ಉತ್ಪಾದಿತ ಕ್ಷೇತ್ರವು ರಾಷ್ಟ್ರದ ಅಭಿವೃದ್ಧಿಯ ಬೆನ್ನೆಲುಬಿನಂತೆ ಕೆಲಸ ಮಾಡುತ್ತಿದೆ. 2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಮತ್ತು 2047ರ ವೇಳೆಗೆ 500 ದಶಲಕ್ಷ ಟನ್ ಉಕ್ಕು ಉತ್ಪಾದಿಸುವ ಕಾರ್ಯಸೂಚಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆಯ ಸಚಿವ ಹೆಚ್.ಡಿ ಕುಮಾರಸ್ವಾಮಿ (H D Kumaraswamy) ಹೇಳಿದರು.

    ನವದೆಹಲಿಯ (New Delhi) ವಿಜ್ಞಾನ ಭವನದಲ್ಲಿ ಸಣ್ಣ ಪ್ರಮಾಣದ ಉಕ್ಕು ಕೈಗಾರಿಕೆಗಳ ಸವಾಲುಗಳ ಕುರಿತು ಉಕ್ಕು ಸಚಿವಾಲಯ ಹಮ್ಮಿಕೊಂಡಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಾರತದ ಉಕ್ಕು ವಲಯದ ಒಟ್ಟು ಉತ್ಪಾದನೆಯ 50%ರಷ್ಟನ್ನು ಉತ್ಪಾದಿಸುತ್ತಿರುವ ಸಣ್ಣ ಪ್ರಮಾಣದ ಉಕ್ಕು ಕೈಗಾರಿಕೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ಈ ವಲಯಕ್ಕೆ ಶಕ್ತಿ ತುಂಬುವ ಕೆಲಸವನ್ನು ಮಾಡುತ್ತಿದ್ದೇವೆ ಎಂದರು. ಇದನ್ನೂ ಓದಿ: ಧರ್ಮಸ್ಥಳ ವಿಚಾರದಲ್ಲಿ ವರಸೆ ಬದಲಿಸಿದ ಸಿಎಂ – ಜೋಶಿ ಆರೋಪ

    ಸಣ್ಣ ಗಾತ್ರದ ಉಕ್ಕು ವಲಯವು ಕೇವಲ ಒಂದು ಉದ್ಯಮವಲ್ಲ. ಇದು ದೇಶಿಯ ಕೈಗಾರೀಕರಣದ ಬೆನ್ನೆಲುಬು. ಇದು ಸ್ಥಳೀಯ ಆರ್ಥಿಕತೆಗೆ ಶಕ್ತಿ ನೀಡುತ್ತಿದೆ ಹಾಗೂ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿ ಮಾಡುತ್ತಿದೆ. ಸಮಗ್ರ ಬೆಳವಣಿಗೆಗೆ ಉತ್ತೇಜನ ನೀಡುತ್ತಿರುವುದು ಮಾತ್ರವಲ್ಲದೆ, ಪ್ರಧಾನಿ ಮೋದಿ ಅವರ ಮಾರ್ಗದರ್ಶನದಲ್ಲಿ ಭಾರತವನ್ನು ಶೂನ್ಯ ಇಂಗಾಲ ಬಿಡುಗಡೆ ಹಾಗೂ ಉಕ್ಕು ವಲಯದಲ್ಲಿ ಜಾಗತಿಕ ಸುಸ್ಥಿರ ರಾಷ್ಟ್ರವನ್ನಾಗಿ ಹೊರಹೊಮ್ಮಿಸಲು ನಾವು ದೃಢನಿಶ್ಚಯ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಭಾರತೀಯ ಪ್ರಜೆಯಾಗದೇ ಮತದಾರರ ಪಟ್ಟಿಯಲ್ಲಿ ಸೋನಿಯ ಗಾಂಧಿ ಸೇರ್ಪಡೆ; ಮತಗಳವು ಆರೋಪಕ್ಕೆ ಬಿಜೆಪಿ ಪ್ರತ್ಯಾರೋಪ

    2030ರ ವೇಳೆಗೆ ವಾರ್ಷಿಕ 300 ದಶಲಕ್ಷ ಟನ್ ಮತ್ತು 2047ರ ವೇಳೆಗೆ 500 ದಶಲಕ್ಷ ಟನ್ ಉಕ್ಕು ಉತ್ಪಾದನೆ ಮಾಡುವುದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಗುರಿ ಆಗಿದೆ. ಈ ಮೈಲಿಗಲ್ಲುಗಳನ್ನು ಸಾಧಿಸುವಲ್ಲಿ ಸಣ್ಣ ಗಾತ್ರದ ಉಕ್ಕು ವಲಯವು ಪ್ರಮುಖ ಪಾತ್ರವಹಿಸುತ್ತಿದೆ ಎಂದು ತಿಳಿಸಿದರು.

    ವಿಶೇಷ ಉಕ್ಕಿಗಾಗಿ ಪಿಎಲ್‌ಐ ಯೋಜನೆ, ಹಸಿರು ಉಕ್ಕು ಪ್ರಮಾಣೀಕರಣ ರೇಟಿಂಗ್ ವ್ಯವಸ್ಥೆ, ಹೈಡ್ರೋಜನ್ ಆಧರಿತ ಉಕ್ಕು ತಯಾರಿಕೆ ಯೋಜನೆಗಳು ಮತ್ತು ಉಕ್ಕಿನ ಸ್ಕ್ರ‍್ಯಾಪ್ ಮರುಬಳಕೆ ನೀತಿ ಸೇರಿದಂತೆ ಪ್ರಮುಖ ಉಪಕ್ರಮಗಳನ್ನು ಸರ್ಕಾರವು ಕೈಗೊಂಡಿದೆ ಎಂದು ವಿವರಿಸಿದರು. ಇದನ್ನೂ ಓದಿ: ಮಹಿಳೆಯರ ರಕ್ಷಣೆಗೆ ಬರಲಿದೆ ಅಕ್ಕ ಪಡೆ: ಲಕ್ಷ್ಮಿ ಹೆಬ್ಬಾಳ್ಕರ್

    ಸರ್ಕಾರದ ಪೂರ್ವಭಾವಿ ಕ್ರಮಗಳ ಬಗ್ಗೆ ಮಾತನಾಡಿದ ಕುಮಾರಸ್ವಾಮಿ ಅವರು, ಇಂಧನ ದಕ್ಷತೆಯು ಇನ್ನು ಮುಂದೆ ಐಚ್ಛಿಕವಲ್ಲ. ತ್ಯಾಜ್ಯ ಶಾಖ ಹೆಚ್ಚಳ, ಅತ್ಯಾಧುನಿಕ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಮತ್ತು ನವೀಕರಿಸಬಹುದಾದ ಇಂಧನ ಏಕೀಕರಣ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವಲ್ಲಿ ನಾವು ಸಣ್ಣ ಪ್ರಮಾಣದ ಕೈಗಾರಿಕಾ ಘಟಕಗಳನ್ನು (ಎಂಎಸ್‌ಎಂಇ) ಉತ್ತೇಜಿಸುತ್ತೇವೆ ಎಂದು ನುಡಿದರು.

    ಮನೆ, ಬೃಹತ್ ಕಟ್ಟಡ, ಹೆದ್ದಾರಿ, ಸೇತುವೆ, ರೇಲ್ವೆ, ವಿಮಾನ, ರಾಕೆಟ್ ಸೇರಿದಂತೆ ರಾಷ್ಟ್ರದ ಭವ್ಯ ಇತಿಹಾಸವನ್ನು ನಿರ್ಮಿಸುವ ಉಕ್ಕು ಕ್ಷೇತ್ರವನ್ನು ನಾವು ಮತ್ತಷ್ಟು ಸಶಕ್ತಗೊಳಿಸಬೇಕಿದೆ. ನೀತಿ, ಉದ್ದೇಶ ಮತ್ತು ನಮ್ಮ ಜನರ ಉತ್ಸಾಹದೊಂದಿಗೆ ನಾವು ಭಾರತವನ್ನು ಜಾಗತಿಕ ಉಕ್ಕಿನ ಶಕ್ತಿ ಕೇಂದ್ರವನ್ನಾಗಿ ಮಾಡುತ್ತೇವೆ ಎಂದು ಹೇಳಿದರು.

    ಇದೇ ವೇಳೆ ಜಾಗತಿಕವಾಗಿ ಭಾರತದ ಉಕ್ಕು ಉದ್ಯಮಕ್ಕೆ ಏಕೀಕೃತ ಗುರುತನ್ನು ಸಂಕೇತಿಸುವ ಭಾರತ್ ಸ್ಟೀಲ್ ಲೋಗೋ ಮತ್ತು ಭಾರತ್ ಸ್ಟೀಲ್ ಅಂತರ್ಜಾಲ ತಾಣವನ್ನು ಸಚಿವರು ಅನಾವರಣಗೊಳಿಸಿದರು. ಉಕ್ಕು ಉತ್ಪಾದನೆಯಲ್ಲಿ ಇಂಗಾಲ ಹೊರಸೂಸುವಿಕೆಯನ್ನು ಕನಿಷ್ಠ ಮಟ್ಟಕ್ಕೆ ತಂದಿರುವ ಹಾಗೂ ಉಕ್ಕು ಉತ್ಪಾದನಾ ಮಾನದಂಡಗಳ ಗುರಿಯನ್ನು ಸಾಧಿಸಿದ ಉದ್ಯಮದ ನಾಯಕರಿಗೆ ಗೌರವಿಸಿದರು.

  • ಖಾಸಗೀಕರಣ ಹೊಸ್ತಿಲಲ್ಲಿದ್ದ ವೈಜಾಗ್ ಸ್ಟೀಲ್ ಕಾರ್ಖಾನೆಗೆ ಕೇಂದ್ರದಿಂದ ಜೀವದಾನ – 11,440 ಕೋಟಿ ಪುನಶ್ಚೇತನ ಪ್ಯಾಕೇಜ್

    ಖಾಸಗೀಕರಣ ಹೊಸ್ತಿಲಲ್ಲಿದ್ದ ವೈಜಾಗ್ ಸ್ಟೀಲ್ ಕಾರ್ಖಾನೆಗೆ ಕೇಂದ್ರದಿಂದ ಜೀವದಾನ – 11,440 ಕೋಟಿ ಪುನಶ್ಚೇತನ ಪ್ಯಾಕೇಜ್

    – 2030ರ ಹೊತ್ತಿಗೆ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ

    ನವದೆಹಲಿ: ತೀವ್ರ ಆರ್ಥಿಕ ನಷ್ಟಕ್ಕೆ ಸಿಲುಕಿ ಖಾಸಗೀಕರಣದ ಹೊಸ್ತಿಲಲ್ಲಿದ್ದ ಆಂಧ್ರ ಪ್ರದೇಶದ ವಿಶಾಖಪಟ್ಟಣದ ರಾಷ್ಟ್ರೀಯ ಉಕ್ಕು ಕಾರ್ಖಾನೆ ಅಥವಾ ವೈಜಾಗ್ ಸ್ಟೀಲ್ ಕಂಪನಿಯನ್ನು (Visakhapatnam Steel Plant) 11,440 ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸಲಾಗುವುದು ಎಂದು ಕೇಂದ್ರದ ಉಕ್ಕು -ಬೃಹತ್ ಖಾತೆ ಸಚಿವ ಹೆಚ್.ಡಿ ಕುಮಾರಸ್ವಾಮಿ (HD kumaraswamy) ಅವರು ಘೋಷಿಸಿದರು.

    ಇದು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿರುವ ಕುಮಾರಸ್ವಾಮಿ ಅವರು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ನಾಯಕತ್ವದಲ್ಲಿ ಇದು ಸಾಧ್ಯವಾಗಿದೆ. ದೇಶೀಯ ಉಕ್ಕು ಕ್ಷೇತ್ರಕ್ಕೆ ಶಕ್ತಿ ತುಂಬುವ ದಿಟ್ಟ ಹೆಜ್ಜೆ ಇದಾಗಿದೆ ಎಂದರು.

    ನವದೆಹಲಿ ಉಕ್ಕು ಸಚಿವಾಲಯದಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯಲ್ಲಿ ಕುಮಾರಸ್ವಾಮಿ ಅವರು, ತಮ್ಮ ಇಲಾಖೆಯ ಸಹಾಯಕ ಸಚಿವ ಭೂಪತಿರಾಜು ಶ್ರೀನಿವಾಸ ವರ್ಮ ಹಾಗೂ ಕೇಂದ್ರ ವಿಮಾನಯಾನ ಖಾತೆ ಸಚಿವ ರಾಮಮೋಹನ್ ನಾಯ್ಡು ಅವರ ಜೊತೆಗೂಡಿ ವೈಜಾಗ್ ಸ್ಟೀಲ್ ಪ್ಯಾಕೇಜ್ ಅನ್ನು ಘೋಷಣೆ ಮಾಡಿದರು.

    ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಗುರುವಾರ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (CCEA) ಸಭೆಯಲ್ಲಿ ವೈಜಾಗ್ ಸ್ಟೀಲ್ ಪುನಶ್ಚೇತನ ಪ್ಯಾಕೇಜ್‌ಗೆ ಅನುಮೋದನೆ ನೀಡಲಾಗಿದೆ. ಪ್ರಧಾನಿ ಮೋದಿ ಅವರು ಸಂಕ್ರಾಂತಿ ಹೊತ್ತಿಗೆ ಆಂಧ್ರ ಪ್ರದೇಶ ಜನತೆಗೆ ಶುಭ ಸುದ್ದಿ ಕೊಡುತ್ತೇವೆ ಎಂದು ಹೇಳಿದ್ದರು. ಅದರಂತೆ ವಿಶಾಖಪಟ್ಟಣ ಸ್ಟೀಲ್ ಕಾರ್ಖಾನೆಯ ಪುನಶ್ಚೇತನ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಪ್ರಧಾನಿಗಳಿಗೆ ಹಾಗೂ ನಮ್ಮ ಪ್ರಯತ್ನಗಳಿಗೆ ಸಂಪೂರ್ಣ ಸಹಕಾರ ನೀಡಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ವಿಶೇಷ ಧನ್ಯವಾದ ಸಲ್ಲಿಸುವೆ ಎಂದು ಸಚಿವರು ಹೇಳಿದರು.

    ವಾರ್ಷಿಕ 7.3 ದಶಲಕ್ಷ ಟನ್ ಉಕ್ಕು ಉತ್ಪಾದನೆ
    ಕಾರ್ಖಾನೆಯ ಪುನಚ್ಚೆತನ ಪ್ಯಾಕೇಜ್‌ನ ಪೂರ್ಣ ವಿವರಗಳನ್ನು ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು. ಎಲ್ಲಾ ಮೂರು ಬ್ಲಾಸ್ಟ್ ಪರ್ನೆಸ್‌ಗಳಿಗೆ ಚಾಲನೆ ಕೊಟ್ಟು ಕೆಲವೇ ತಿಂಗಳಲ್ಲಿ ಇಡೀ ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಉಕ್ಕು ಉತ್ಪಾದನೆಗೆ ಅಗತ್ಯವಾದ ಎಲ್ಲಾ ವ್ಯವಸ್ಥೆ ಮಾಡುತ್ತೇವೆ. ಅಲ್ಲದೆ, ಕಾರ್ಖಾನೆ ಹೊಂದಿರುವ ಸಾಲವನ್ನು ಗಮನದಲ್ಲಿಟ್ಟುಕೊಂಡು ಉತ್ಪಾದನೆಯ ದಕ್ಷತೆ, ಕ್ಷಮತೆಯನ್ನು ಹೆಚ್ಚಿಸುತ್ತೇವೆ. ವಾರ್ಷಿಕ 7.3 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿ ಮುಟ್ಟಲು ಎಲ್ಲಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

    ಎಷ್ಟು ಹೂಡಿಕೆ?
    ವೈಜಾಗ್ ಸ್ಟೀಲ್ ಕಾರ್ಖಾನೆಗೆ ಈ ಪ್ಯಾಕೇಜ್‌ನಲ್ಲಿ 10,300 ಕೋಟಿ ಹೂಡಿಕೆ ಮಾಡಲಾಗುವುದು ಹಾಗೂ 1,140 ಕೋಟಿಯನ್ನು ಷೇರು ರೂಪದಲ್ಲಿ ನಿರ್ವಹಣಾ ಬಂಡವಾಳವಾಗಿ ತೊಡಗಿಸಲಾಗುವುದು. ಈ 1,140 ಕೋಟಿಯನ್ನು 10 ವರ್ಷಗಳ ವರೆಗೂ ವಾಪಸ್ ಪಡೆಯಲು ಅವಕಾಶ ಇರುವುದಿಲ್ಲ. ಇದು ಮಹತ್ವದ ನಿರ್ಧಾರ ಆಗಿದೆ ಎಂದು ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

    ಕಾರ್ಖಾನೆಯನ್ನು ಅತ್ಯಂತ ದಕ್ಷತೆ, ಕ್ಷಮತೆಯಿಂದ ಮುನ್ನಡೆಸುತ್ತೇವೆ. ಇದು ಸಂಪೂರ್ಣವಾಗಿ ಸರ್ಕಾರಿ ಸ್ವಾಮ್ಯದ ಕೈಗಾರಿಕೆಯಾಗಿದೆ. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ನಾವು ಸಂಘಟಿತ ಪ್ರಯತ್ನ ನಡೆಸಿದ್ದೇವೆ. ಸಮುದ್ರ ದಂಡೆಯಲ್ಲಿರುವ ದೇಶದ ಅತ್ಯಂತ ವ್ಯೂಹಾತ್ಮಕ ಉಕ್ಕು ಸ್ಥಾವರವನ್ನು ರಕ್ಷಿಸಿಕೊಳ್ಳಲು ಹಾಗೂ ನಿರೀಕ್ಷಿತ ಗುರಿಗಳನ್ನು ಮುಟ್ಟಲು ನಾವು ಶ್ರಮಿಸುತ್ತೇವೆ ಎಂದು ಅವರು ಹೇಳಿದರು.

    2025ರ ಜನವರಿ ವೇಳೆಗೆ ಎರಡು ಬ್ಲಾಸ್ಟ್ ಫರ್ನೇಸ್‌ಗಳೊಂದಿಗೆ ಮತ್ತು ಆಗಸ್ಟ್ 2025 ರ ವೇಳೆಗೆ ಮೂರು ಬ್ಲಾಸ್ಟ್ ಫರ್ನೇಸ್‌ಗಳೊಂದಿಗೆ ಕಾರ್ಯಾಚರಣೆಯನ್ನು ಪುನರಾರಂಭಿಸಲು ಯೋಜಿಸಿದ್ದೇವೆ. ದೇಶೀಯ ಉಕ್ಕು ಉತ್ಪಾದನೆ ಹಾಗೂ ಉಕ್ಕು ಮಾರುಕಟ್ಟೆಗೆ ಈ ಕ್ರಮ ದೊಡ್ಡ ಕೊಡುಗೆ ನೀಡುತ್ತದೆ. ಮುಖ್ಯವಾಗಿ ಸಾವಿರಾರು ಉದ್ಯೋಗಿಗಳು ಮತ್ತು ಅವರ ಅವಲಂಬಿತರ ಜೀವನೋಪಾಯಕ್ಕೆ ಅನುಕೂಲವಾಗಲಿದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

    2030ರ ಹೊತ್ತಿಗೆ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ
    ಪ್ರಧಾನಿ ನರೇಂದ್ರ ಮೋದಿ ಅವರು 2030ರ ಹೊತ್ತಿಗೆ ದೇಶೀಯವಾಗಿ 300 ದಶಲಕ್ಷ ಟನ್ ಉಕ್ಕು ಉತ್ಪಾದನೆ ಗುರಿಯನ್ನು ನಿಗದಿ ಮಾಡಿದ್ದಾರೆ. ಈ ಗುರಿ ಮುಟ್ಟಬೇಕಾದರೆ ಅನೇಕ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿದೆ. ವೈಜಾಗ್ ಸ್ಟೀಲ್ ಪುನಶ್ಚೇತನ ಯೋಜನೆಯನ್ನು ಇದೇ ಉದ್ದೇಶದಿಂದ ರೂಪಿಸಲಾಗಿದೆ. ದೇಶೀಯ ಉಕ್ಕು ಉದ್ಯಮಕ್ಕೆ ಈ ಕಾರ್ಖಾನೆಯ ಬಹುದೊಡ್ಡ ಕೊಡುಗೆ ನೀಡುತ್ತದೆ ಎಂದು ಅವರು ಹೇಳಿದರು.

    ವಿಶಾಪಟ್ಟಣ ಉಕ್ಕು ಕಾರ್ಖಾನೆಯನ್ನು ಪುನಶ್ಚೇತನ ಮಾಡಬೇಕು ಎಂಬುದು ಆಂಧ್ರ ಪ್ರದೇಶ ಜನರ ಬಹುಕಾಲದ ಬೇಡಿಕೆ ಆಗಿತ್ತು. ನಾನು ಉಕ್ಕು ಸಚಿವನಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ನನ್ನ ಮೊದಲ ಅಧಿಕೃತ ಭೇಟಿಯನ್ನು ಈ ಕಾರ್ಖಾನೆಗೆ ನೀಡಿದೆ. ಇಡೀ ಕಾರ್ಖಾನೆ ವೀಕ್ಷಣೆ ಜತೆಗೆ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಗಳ ಜತೆ ಸಭೆ ನಡೆಸಿದ್ದೆ ಎಂದು ಅವರು ಹೇಳಿದರು.