Tag: ಈಶಾನ್ಯ ರಾಜ್ಯಗಳು

  • ಸಿಂಧೂ ನದಿ ನೀರು ಈಶಾನ್ಯ ರಾಜ್ಯಗಳಿಗೆ ಹರಿಸಲು ಕೇಂದ್ರ ಸರ್ಕಾರ ಪ್ಲ್ಯಾನ್‌

    ಸಿಂಧೂ ನದಿ ನೀರು ಈಶಾನ್ಯ ರಾಜ್ಯಗಳಿಗೆ ಹರಿಸಲು ಕೇಂದ್ರ ಸರ್ಕಾರ ಪ್ಲ್ಯಾನ್‌

    – ಪಾಕಿಸ್ತಾನಕ್ಕೆ ಹೆಚ್ಚುವರಿ ನೀರು ಹರಿಯುವುದನ್ನು ತಪ್ಪಿಸುತ್ತೆ ಯೋಜನೆ

    ನವದೆಹಲಿ: ಸಿಂಧೂ ನದಿ (Indus River) ನೀರನ್ನು ಈಶಾನ್ಯ ರಾಜ್ಯಗಳಿಗೆ ಹರಿಸಲು ಕೇಂದ್ರ ಸರ್ಕಾರ ಯೋಜಿಸಿದೆ. 2029ರ ಚುನಾವಣೆಗೂ ಮುನ್ನ ಯೋಜನೆ ಪೂರ್ಣಗೊಳಿಸಲು ಕೇಂದ್ರ ಮುಂದಾಗಿದೆ.

    ಕಳೆದ ಶುಕ್ರವಾರ ಕೇಂದ್ರದ ಹಿರಿಯ ಸಚಿವ ಸಭೆಯಲ್ಲಿ ಈ ಸಂಬಂಧ ಡಿಪಿಆರ್ ಸಿದ್ಧಪಡಿಸಲು ಒಪ್ಪಿಗೆ ಸೂಚಿಸಲಾಗಿದೆ. ಮುಂದಿನ ವರ್ಷದಲ್ಲಿ ವಿಸ್ತೃತ ಯೋಜನಾ ವರದಿ ನೀಡಲು ಎಲ್ ಆ್ಯಂಡ್ ಟಿ ಕಂಪನಿಗೆ ಸೂಚನೆ ನೀಡಲಾಗಿದೆ.

    ಉತ್ತರ ರಾಜ್ಯಗಳ ನೀರಿನ ಬೇಡಿಕೆಗಳನ್ನು ಪೂರೈಸಲು ಭಾರತ ಸಿಂಧೂ ನದಿ ವ್ಯವಸ್ಥೆಯಲ್ಲಿ ಬೃಹತ್ ಬದಲಾವಣೆಗಳನ್ನು ಮಾಡಲು ಸಜ್ಜಾಗಿದೆ. ಪಾಕಿಸ್ತಾನದೊಂದಿಗಿನ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದ ನಂತರ ಕೇಂದ್ರ ಈ ಕಾರ್ಯತಂತ್ರ ರೂಪಿಸಿದೆ. ಇದನ್ನೂ ಓದಿ: ಅ.6ರ ಬಳಿಕ ಬಿಹಾರ ವಿಧಾನಸಭೆ ಚುನಾವಣೆಗೆ ದಿನಾಂಕ ಪ್ರಕಟಿಸುವ ಸಾಧ್ಯತೆ

    ಉತ್ತರ ರಾಜ್ಯಗಳಿಗೆ ಸಿಂಧೂ ನದಿ ನೀರನ್ನು ತಲುಪಿಸುವ ಉದ್ದೇಶಿತ 113 ಕಿ.ಮೀ. ಕಾಲುವೆಯ ಕಾಮಗಾರಿ ಬಗ್ಗೆ ಸಭೆಯಲ್ಲಿ ಪರಿಶೀಲಿಸಲಾಯಿತು ಎಂದು ಮೂಲಗಳು ತಿಳಿಸಿವೆ.

    ಸಿಂಧೂ ನದಿ ನೀರು ಒಪ್ಪಂದವು 1960 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಆಗಿತ್ತು. ವಿಶ್ವಬ್ಯಾಂಕ್ ಹಸ್ತಕ್ಷೇಪದ ನಂತರ ಸಹಿ ಹಾಕಲಾದ ಒಂದು ಮಹತ್ವದ ನೀರು ಹಂಚಿಕೆ ಒಪ್ಪಂದ ಇದಾಗಿದೆ. ಏಪ್ರಿಲ್ 22 ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ಒಪ್ಪಂದವನ್ನು ಸ್ಥಗಿತಗೊಳಿಸಿತು. ‘ನೀರು ಮತ್ತು ರಕ್ತ ಒಟ್ಟಿಗೆ ಹರಿಯಲು ಸಾಧ್ಯವಿಲ್ಲ’ ಎಂದು ಸರ್ಕಾರ ಪ್ರತಿಪಾದಿಸಿತ್ತು.

    ಅಂದಿನಿಂದ ಸರ್ಕಾರವು ಭಾರತದ ಸಿಂಧೂ ನದಿ ನೀರಿನ ಪಾಲನ್ನು ಬಳಸಿಕೊಳ್ಳಲು ವಿವರವಾದ ಯೋಜನೆಯನ್ನು ರೂಪಿಸುತ್ತಿದೆ. ಅದಕ್ಕಾಗಿ, ಅಂತರ-ಜಲಾನಯನ ಸಿಂಧೂ ಜಲ ವರ್ಗಾವಣೆ ಯೋಜನೆಯಡಿಯಲ್ಲಿ ಮಹತ್ವಾಕಾಂಕ್ಷೆಯ ಯೋಜನೆಯನ್ನು ರೂಪಿಸಲಾಗಿದೆ. ಸರ್ಕಾರದ ಉನ್ನತ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲಾಗುತ್ತಿದೆ.

    14 ಕಿ.ಮೀ. ಸುರಂಗದ ನಿರ್ಮಾಣ ಮಾಡುವುದು ಈ ಯೋಜನೆಯ ಅತ್ಯಂತ ಸವಾಲಿನ ಸಂಗತಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಅಂತಹ ಸುರಂಗಕ್ಕೆ ಪರ್ವತ ಬಂಡೆಗಳ ವಿವರವಾದ ಅಧ್ಯಯನದ ಅಗತ್ಯವಿದೆ. ಇದನ್ನೂ ಓದಿ: ಜಾಗತಿಕ ಅಡೆತಡೆ, ಅನಿಶ್ಚಿತತೆಗಳ ಹೊರತಾಗಿಯೂ ಭಾರತದ ಬೆಳವಣಿಗೆ ಆಕರ್ಷಕವಾಗಿದೆ: ಮೋದಿ

    ವೇಗ ಮತ್ತು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸುರಂಗ ಕೊರೆಯುವ ಯಂತ್ರಗಳು ಮತ್ತು ರಾಕ್ ಶೀಲ್ಡ್ ತಂತ್ರಜ್ಞಾನದ ಬಳಕೆಯನ್ನು ಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಈ ಸುರಂಗವನ್ನು ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಉಜ್ ಬಹುಪಯೋಗಿ ಯೋಜನೆಗೆ ಸಂಪರ್ಕಿಸಲಾಗುವುದು. ಇದು ರಾವಿಯ ಉಪನದಿಯಾದ ಉಜ್ ನದಿಯಿಂದ ಬಿಯಾಸ್ ಜಲಾನಯನ ಪ್ರದೇಶಕ್ಕೆ ನೀರನ್ನು ವರ್ಗಾಯಿಸಲು ಅನುವು ಮಾಡಿಕೊಡುತ್ತದೆ.

    ಈ ಸುರಂಗದ ಕಾಮಗಾರಿ ಪೂರ್ಣಗೊಳ್ಳುವುದರಿಂದ ರವಿ-ಬಿಯಾಸ್-ಸಟ್ಲೆಜ್ ವ್ಯವಸ್ಥೆಯನ್ನು ಸಿಂಧೂ ನದಿ ಜಲಾನಯನ ಪ್ರದೇಶಕ್ಕೆ ಸಂಪರ್ಕಿಸುತ್ತದೆ. ಇದರಿಂದಾಗಿ ಭಾರತವು ತನ್ನ ನೀರಿನ ಪಾಲಿನ ಬಳಕೆಯನ್ನು ಗರಿಷ್ಠಗೊಳಿಸಲು ಸಾಧ್ಯವಾಗುತ್ತದೆ. ಇದರ ನಿರ್ಮಾಣವು ಮೂರರಿಂದ ನಾಲ್ಕು ವರ್ಷಗಳನ್ನು ತೆಗೆದುಕೊಳ್ಳುತ್ತದೆ. 2028 ರ ವೇಳೆಗೆ ಸಿದ್ಧವಾಗಲಿದೆ ಎಂದು ಮೂಲಗಳು ಅಂದಾಜಿಸಿವೆ. ಅಂದಾಜು ವೆಚ್ಚ ಸುಮಾರು 4,000-5,000 ಕೋಟಿ ರೂ. ಆಗಬಹುದು ಎನ್ನಲಾಗಿದೆ.

    ಈ ಯೋಜನೆಯು ರಾಜಸ್ಥಾನದ ಶುಷ್ಕ ಪ್ರದೇಶಗಳಲ್ಲಿ ಇಂದಿರಾ ಗಾಂಧಿ ಕಾಲುವೆಗೆ ನೀರನ್ನು ತಿರುಗಿಸುವ ಮೂಲಕ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಜಮ್ಮು ಮತ್ತು ಕಾಶ್ಮೀರ, ಹರಿಯಾಣ, ದೆಹಲಿ ಮತ್ತು ಪಂಜಾಬ್‌ನಂತಹ ರಾಜ್ಯಗಳು ಸಹ ಈ ಯೋಜನೆಯಿಂದ ಪ್ರಯೋಜನ ಪಡೆಯುತ್ತವೆ. ಚೆನಾಬ್ ನದಿಯನ್ನು ರವಿ-ಬಿಯಾಸ್-ಸಟ್ಲೆಜ್ ವ್ಯವಸ್ಥೆಗೆ ಸಂಪರ್ಕಿಸಲು ಕಾಲುವೆಯನ್ನು ನಿರ್ಮಿಸಲಾಗುವುದು. ಈ ರಾಜ್ಯಗಳ ಅಸ್ತಿತ್ವದಲ್ಲಿರುವ ಕಾಲುವೆ ವ್ಯವಸ್ಥೆಗಳಿಗೆ ಇದನ್ನು ಸಂಪರ್ಕಿಸಲಾಗುವುದು. ಇದರಿಂದ ನೀರು ನೇರವಾಗಿ ಇಂದಿರಾ ಗಾಂಧಿ ಕಾಲುವೆಯನ್ನು ತಲುಪಬಹುದು. ರಾಜಸ್ಥಾನದ ಶ್ರೀ ಗಂಗಾನಗರಕ್ಕೆ ನೀರನ್ನು ತಲುಪಿಸಬಹುದು.

    ಅಲ್ಲದೇ, ಈ ಯೋಜನೆಯು ದೆಹಲಿ, ಪಂಜಾಬ್, ಹರಿಯಾಣ ಮತ್ತು ರಾಜಸ್ಥಾನಗಳಲ್ಲಿ ಕುಡಿಯುವ ನೀರಿನ ಲಭ್ಯತೆಯನ್ನು ಹೆಚ್ಚಿಸುತ್ತದೆ. ಈ ಯೋಜನೆಯು ಭಾರತದ ಪಾಲಿನ ಹೆಚ್ಚುವರಿ ನೀರನ್ನು ಪಾಕಿಸ್ತಾನಕ್ಕೆ ಹರಿಯುವುದನ್ನು ತಪ್ಪಿಸುತ್ತದೆ. ಹೀಗಾಗಿ, ದೇಶದ ನೀರಿನ ಭದ್ರತೆಯನ್ನು ಬಲಪಡಿಸುತ್ತದೆ. ಇದು ಹವಾಮಾನ ಬದಲಾವಣೆ ಮತ್ತು ಬದಲಾಗುತ್ತಿರುವ ಮಳೆಯ ಮಾದರಿಗಳ ಪರಿಣಾಮಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಅಸ್ತಿತ್ವದಲ್ಲಿರುವ 13 ಕಾಲುವೆ ವ್ಯವಸ್ಥೆಗಳನ್ನು ಬಲಪಡಿಸುತ್ತದೆ ಎನ್ನಲಾಗಿದೆ.

  • ಕೇರಳದಿಂದ ಈಶಾನ್ಯ ರಾಜ್ಯಗಳವರೆಗೂ ನಿಲ್ಲದ ವರುಣನ ಅಬ್ಬರ – ಮಳೆಯಾರ್ಭಟಕ್ಕೆ 30ಕ್ಕೂ ಹೆಚ್ಚು ಬಲಿ

    ಕೇರಳದಿಂದ ಈಶಾನ್ಯ ರಾಜ್ಯಗಳವರೆಗೂ ನಿಲ್ಲದ ವರುಣನ ಅಬ್ಬರ – ಮಳೆಯಾರ್ಭಟಕ್ಕೆ 30ಕ್ಕೂ ಹೆಚ್ಚು ಬಲಿ

    ದೇಶದ ಹಲವು ರಾಜ್ಯಗಳಲ್ಲಿ ಅವಧಿಗೂ ಮುನ್ನವೇ ಮುಂಗಾರು ಆರಂಭವಾಗಿದ್ದು, ದಕ್ಷಿಣದ ಕೇರಳದಿಂದ (Kerala) ಈಶಾನ್ಯ ರಾಜ್ಯಗಳವರೆಗೂ (Northeast States) ವರುಣ ಅಬ್ಬರಿಸುತ್ತಿದ್ದಾನೆ.

    ಈಶಾನ್ಯ ರಾಜ್ಯಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಅಲ್ಲೋಲ ಕಲ್ಲೋಲವಾಗಿದ್ದು, ಅವಧಿಪೂರ್ವ ಮುಂಗಾರು ಹೊಡೆತಕ್ಕೆ ಅಸ್ಸಾಂ, ಸಿಕ್ಕಿಂ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಅರುಣಾಚಲ ಪ್ರದೇಶ ರಾಜ್ಯಗಳು ಕಂಗಾಲಾಗಿವೆ.ಇದನ್ನೂ ಓದಿ: ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಬೇಡ ಎಂದಿಲ್ಲ: ದಿನೇಶ್ ಗುಂಡೂರಾವ್

    ಕಳೆದೆರೆಡು ದಿನಗಳಲ್ಲಿ ಮಳೆಯಾರ್ಭಟಕ್ಕೆ ಭೂಕುಸಿತ, ಹಠಾತ್ ಪ್ರವಾಹ ಉಂಟಾಗಿ ಜಲಪ್ರಳಯವೇ ಸಂಭವಿಸಿದೆ. ಮಳೆ ಸಂಬಂಧಿತ ಅವಘಡಗಳಲ್ಲಿ ಅಸ್ಸಾಂನಲ್ಲಿ 9, ಅರುಣಾಚಲ ಪ್ರದೇಶದಲ್ಲಿ 9, ಮೇಘಾಲಯದಲ್ಲಿ 7 ಮತ್ತು ಮಿಜೋರಾಂನಲ್ಲಿ 6 ಸಾವನ್ನಪ್ಪಿದ್ದು, ನಾಗಾಲ್ಯಾಂಡ್‌ನಲ್ಲಿ ಒಬ್ಬರ ಪ್ರಾಣಪಕ್ಷಿ ಹಾರಿ ಹೋಗಿದೆ.

    ರಸ್ತೆಗಳು ಹಾಳಾಗಿ, ಮನೆಗಳು ಕುಸಿದು ಜನರಿಗೆ ದಿಕ್ಕು ತೋಚದಂತಾಗಿದೆ. ನದಿಗಳು ಅಪಾಯಮಟ್ಟ ಮೀರಿ ಭೋರ್ಗರೆಯುತ್ತಿವೆ. ಅಸ್ಸಾಂನ 12 ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, 78,000ಕ್ಕೂ ಹೆಚ್ಚು ಜನರು ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಎನ್‌ಡಿಆರ್‌ಎಫ್‌ನಿಂದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಅರುಣಾಚಲ ಪ್ರದೇಶದಲ್ಲಿ ಮಳೆರಾಯ ನರಕವನ್ನೇ ಸೃಷ್ಟಿಸಿದ್ದು, ಗುಡ್ಡಕುಸಿತದಿಂದ ಕೆಸರಿನಲ್ಲಿಯೇ ಮೃತದೇಹಗಳು ಹುದುಗಿವೆ. ಸಿಕ್ಕಿಂನಲ್ಲಿ ಮಳೆ, ಪ್ರವಾಹದಿಂದ ರಸ್ತೆ ಸಂಪರ್ಕ ಬಂದ್ ಆಗಿದ್ದು, 1,500 ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ಈ ಕುರಿತು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದ್ದು, ಈಶಾನ್ಯ ರಾಜ್ಯಗಳಲ್ಲಿ ಭಾರೀ ಮಳೆ ಮುಂದುವರಿಯಲಿದೆ ಎಂದು ತಿಳಿಸಿದೆ. ಇನ್ನೂ ಕೇರಳಕ್ಕೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ಕಾಸರಗೋಡಿನಲ್ಲಿ ಮಳೆ ಹೆಚ್ಚಾಗುತ್ತಿದೆ. ಇದರಿಂದಾಗಿ ಮಧೂರು (Madhur) ಶ್ರೀಮದನಂತೇಶ್ವರ ಸಿದ್ಧಿ ವಿನಾಯಕ ದೇವಸ್ಥಾನ ಜಲಾವೃತಗೊಂಡಿದೆ.ಇದನ್ನೂ ಓದಿ: ಪಂಜಾಬ್‌ vs ಮುಂಬೈ ಕ್ವಾಲಿಫೈಯರ್ 2 ಪಂದ್ಯಕ್ಕೆ ಮಳೆ ಅಡ್ಡಿ – ಮ್ಯಾಚ್‌ ರದ್ದಾದ್ರೆ ಯಾರಿಗೆ ನಷ್ಟ?