Tag: ಇಮ್ರಾನ್ ಪಾಷಾ

  • ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಎಫ್‍ಐಆರ್ ದಾಖಲು

    ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಎಫ್‍ಐಆರ್ ದಾಖಲು

    ಬೆಂಗಳೂರು: ಪಾದರಾಯನಪುರ ಕಾರ್ಪೊರೇಟರ್ ಇರ್ಮಾನ್ ಪಾಷಾ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

    ಬೆಂಗಳೂರಿನ ಜೆಜೆ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 188 (ಸರ್ಕಾರಿ ಅಧಿಕಾರಿಗಳ ಕೆಲಸಕ್ಕೆ ಅಡ್ಡಿ), 270 (ವೈರಸ್ ಹಬ್ಬಿಸಲು ಯತ್ನ), 271 (ರೋಗ ನಿರೋಧಕ ನಿರ್ಬಂಧ ನಿಯಮವನ್ನು ಉಲ್ಲಂಘಿಸುವುದು) ಹಾಗೂ ಕ್ವಾರಂಟೈನ್ ನಿಯಮ ಉಲ್ಲಂಘನೆ ಆರೋಪದಡಿ ಪ್ರಕರಣ ದಾಖಲಾಗಿದೆ.

    ಕೊರೊನಾ ಪಾಸಿಟಿವ್ ಬಂದ ಹಿನ್ನೆಲೆ ಇಮ್ರಾನ್ ಪಾಷಾ ಅವರನ್ನು ಆರೋಗ್ಯ ಅಧಿಕಾರಿಗಳು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಪಾದರಾಯನಪುರಕ್ಕೆ ಹೋಗಿದ್ದರು. ಈ ವೇಳೆ ಇಮ್ರಾನ್ ಪಾಷಾ ಮನೆ ಬಳಿ ಹೈಡ್ರಾಮಾ ಸೃಷ್ಟಿಸಿ ನೂರಾರು ಜನ ಸೇರುವಂತೆ ಮಾಡಿದ್ದರು. ಈ ಸಂಬಂಧ ಆರೋಗ್ಯ ಅಧಿಕಾರಿಗಳು ಜೆಜೆ ನಗರ ಪೊಲೀಸರಿಗೆ ದೂರು ನೀಡಿದ್ದರು. ಆರೋಗ್ಯ ಅಧಿಕಾರಿಗಳ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

    ಕಾರ್ಪೊರೇಟರ್ ಹೈಡ್ರಾಮಾ:
    ಪಾದರಾಯನಪುರ ವಾರ್ಡ್ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ಶುಕ್ರವಾರ ಕೊರೊನಾ ಸೋಂಕು ದೃಢಪಟ್ಟಿದ್ದರೂ ಅವರು ಆಸ್ಪತ್ರೆ ಸೇರಿದ್ದು ಶನಿವಾರ ಮಧ್ಯಾಹ್ನದ ಹೊತ್ತಿಗೆ. ಇಮ್ರಾನ್ ಪಾಷಾ ಆಸ್ಪತ್ರೆಗೆ ದಾಖಲು ನಿರಾಕರಿಸಿ ಮೊಂಡಾಟ ಪ್ರದರ್ಶಿಸಿದ್ದರು. ಮನೆ ಬಳಿಗೆ ಪೊಲೀಸರು, ಆರೋಗ್ಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಬಂದರೂ ಇಮ್ರಾನ್ ಪಾಷಾ ಮನೆಯಿಂದ ಹೊರಬರಲಿಲ್ಲ.

    ಕಾರ್ಪೊರೇಟರ್ ಇಮ್ರಾನ್ ತಂದೆ ಆರೀಫ್, ಶಾಸಕ ಜಮೀರ್ ಅಹ್ಮದ್ ಮಾತನ್ನೂ ಕೇಳಲಿಲ್ಲ. ಕೊನೆಗೆ ಪೊಲೀಸರು, ನೀವು ಆಸ್ಪತ್ರೆಗೆ ಬರಲಿಲ್ಲ ಅಂದ್ರೆ ಪ್ರಕರಣ ದಾಖಲಿಸಿ ಅರೆಸ್ಟ್ ಮಾಡ್ತೀವಿ ಎಂದು ವಾರ್ನಿಂಗ್ ಕೊಟ್ಟರು. ಸತತ ಮೂರು ಗಂಟೆಗಳ ಹೈಡ್ರಾಮಾ ಬಳಿಕ ಇಮ್ರಾನ್ ಪಾಷಾ ಪಿಪಿಇ ಕಿಟ್ ಸಮೇತ ಮನೆಯಿಂದ ಹೊರಬಂದು, ಜನರತ್ತ ಕೈಬೀಸಿ ಅಂಬುಲೆನ್ಸ್ ಹತ್ತಿ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದರು.

    ಇಮ್ರಾನ್ ಬೆಂಬಲಿಗರನ್ನು ನಿಯಂತ್ರಿಸುವುದು ಪೊಲೀಸರಿಗೆ ಕಷ್ಟವಾಗಿಬಿಟ್ಟಿತ್ತು. ಇಮ್ರಾನ್ ಪಾಷಾ 200ಕ್ಕೂ ಹೆಚ್ಚು ಮಂದಿ ಜೊತೆ ಸಂಪರ್ಕದಲ್ಲಿದ್ದು, ಎಲ್ಲರನ್ನೂ ಪತ್ತೆ ಹಚ್ಚಿ ಕ್ವಾರಂಟೈನ್ ಮಾಡಲಾಗುತ್ತಿದೆ. ಕಾರ್ಪೊರೇಟರ್ ನಡುವಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇಂಥಾದ್ದೆಲ್ಲಾ ಸಹಿಸೋಕೆ ಆಗಲ್ಲ ಎಂದು ಆರೋಗ್ಯ ಸಚಿವ ಶ್ರೀರಾಮುಲು ಶನಿವಾರ ಗರಂ ಆಗಿದ್ದರು. ಅಷ್ಟೇ ಅಲ್ಲದೆ ಕಾರ್ಪೊರೇಟರ್ ಇಮ್ರಾನ್ ಪಾಷಾ ವಿರುದ್ಧ ಕ್ರಮಕ್ಕೆ ಕಂದಾಯ ಸಚಿವ ಅಶೋಕ್ ಆಗ್ರಹಿಸಿದ್ದರು.

  • ಕೊನೆಗೂ ಕಾರ್ಪೋರೇಟರ್ ಇಮ್ರಾನ್ ಪಾಷಾ ಆಸ್ಪತ್ರೆಗೆ ಶಿಫ್ಟ್

    ಕೊನೆಗೂ ಕಾರ್ಪೋರೇಟರ್ ಇಮ್ರಾನ್ ಪಾಷಾ ಆಸ್ಪತ್ರೆಗೆ ಶಿಫ್ಟ್

    ಬೆಂಗಳೂರು: ಸತತ ಮೂರು ಗಂಟೆಗಳ ನಂತರ ಪಾದರಾಯನಪುರದ ಕಾರ್ಪೋರೇಟರ್ ಇಮ್ರಾನ್ ಪಾಷಾ ಅವರನ್ನು ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.

    ಅಂಬುಲೆನ್ಸ್ ಮೂಲಕ ಇಮ್ರಾನ್ ಪಾಷಾರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪೊಲೀಸರು, ಆರೋಗ್ಯ ಇಲಾಖೆ ಅಧಿಕಾರಿಗಳು ಮನವೊಲಿಸದ ನಂತರ ಇಮ್ರಾನ್ ಮನೆಯಿಂದ ಹೊರ ಬಂದಿದ್ದಾರೆ. ಮನೆಯಿಂದ ಹೊರಗೆ ಬಂದು, ಜನರ ಕಡೆಗೆ ಕೈ ಬೀಸಿ ಅಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಹೋಗಿದ್ದಾರೆ.

    ಇಮ್ರಾನ್ ಪಾಷಾಗೆ ಇರೋದು ಎರಡನೇ ಹಂತದ ಕೊರೊನಾವಾಗಿದೆ. ಅತಿಯಾದ ನೆಗಡಿ ಮತ್ತು ಕೆಮ್ಮು ಇದೆ. ಇದರಿಂದ ಕುಟುಂಬಸ್ಥರಿಗೂ ಸೋಂಕು ತಗಲುವ ಸಾಧ್ಯತೆ ಇದೆ. ಅಲ್ಲದೇ ಇಮ್ರಾನ್‍ಗೆ 8 ದಿನದ ಹಿಂದೆಯೇ ಉಸಿರಾಟದ ತೊಂದರೆ ಇತ್ತು. ಮೂರು ದಿನದ ಹಿಂದೆ ದಿನಸಿ ವಿತರಣೆ ಕೂಡ ಮಾಡಿದ್ದರು. ಹೀಗಾಗಿ ಇಮ್ರಾನ್ ಸಂಪರ್ಕದಲ್ಲಿದ್ದವರ ಮಾಹಿತಿಯನ್ನು ಆರೋಗ್ಯ ಇಲಾಖೆ ಕಲೆ ಹಾಕುತ್ತಿದೆ.

    ಇಮ್ರಾನ್‍ಗೆ ಶುಕ್ರವಾರ ರಾತ್ರಿ ಕೊರೊನಾ ಪಾಸಿಟಿವ್ ವರದಿ ಬಂದಿದೆ. ಆದರೆ ಇದುವರೆಗೂ ಆಸ್ಪತ್ರೆಗೆ ಹೋಗದೆ ಮನೆಯಲ್ಲಿದ್ದರು. ಬೆಳಗ್ಗೆಯಿಂದಲೇ ಅವರ ಮನೆ ಮುಂದೆ ಆರೋಗ್ಯ ಅಧಿಕಾರಿಗಳು, ಪೊಲೀಸರು ಕಾದು ಕುಳಿತಿದ್ದರು. ಪೊಲೀಸರು ಮತ್ತು ಆರೋಗ್ಯ ಅಧಿಕಾರಿಗಳು ಎಷ್ಟೇ ಮನವೊಲಿಸಿದರೂ ಇಮ್ರಾನ್ ಮನೆಯಿಂದ ಹೊರಬಾರದೆ ಕುಳಿತಿದ್ದರು. ಅಷ್ಟೇ ಅಲ್ಲದೇ ಇಮ್ರಾನ್ ತಂದೆ ಮತ್ತು ಜಮೀರ್ ಆಹಮ್ಮದ್ ಕೂಡ ಮನೆಯ ಬಳಿ ಬಂದು ಅವರ ಮನವೊಲಿಸುವ ಪ್ರಯತ್ನ ಮಾಡಿದ್ದರು.

    ಇಮ್ರಾನ್ ಪಾಷಾ ಹೊರಗೆ ಬಾರದ ಹಿನ್ನೆಲೆಯಲ್ಲಿ ಪೊಲೀಸರು ಕೂಡ ಮನೆಯಿಂದ ಹೊರಬಾರದಿದ್ದರೆ ಕೇಸ್ ದಾಖಲು ಮಾಡಬೇಕಾಗುತ್ತೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರೂ ಬೇಲ್ ಸಿಕ್ಕೊಲ್ಲ. ವರದಿ ಬರುವ ತನಕ ಪ್ರತ್ಯೇಕ ಐಲೋಲೇಷನ್ ಅಲ್ಲಿ ಇರಿ ಅಂತ ವಾರ್ನಿಂಗ್ ಕೂಡ ಮಾಡಿದ್ದರು. ಕೊನೆಗೆ ಇಮ್ರಾನ್ ಮನಸ್ಸು ಬದಲಾಯಿಸಿ ಮನೆಯಿಂದ ಹೊರ ಬಂದು ಆಸ್ಪತ್ರೆಗೆ ಹೋಗಿದ್ದಾರೆ.

  • ಪಾದರಾಯನಪುರ ಪುಂಡಾಟದ ಮಾಸ್ಟರ್ ಮೈಂಡ್ ಇರ್ಫಾನ್ ಪಾಷಾ

    ಪಾದರಾಯನಪುರ ಪುಂಡಾಟದ ಮಾಸ್ಟರ್ ಮೈಂಡ್ ಇರ್ಫಾನ್ ಪಾಷಾ

    – ಬಿಬಿಎಂಪಿ ಎಲೆಕ್ಷನ್ ಇಟ್ಕೊಂಡು ಗಲಭೆ

    ಬೆಂಗಳೂರು: ನಗರದ ಪಾದರಾಯನಪುರದಲ್ಲಿ ನಡೆದ ಗಲಭೆಯ ಮಾಸ್ಟರ್ ಮೈಂಡ್ ಕೆಎಫ್‍ಡಿ ಇರ್ಫಾನ್ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಕೆಎಫ್‍ಡಿ ಮುಖಂಡ ಇರ್ಫಾನ್ ಪಾಷಾ ತಾನು ಗೆಲ್ಲೋಕೆ ಜನರನ್ನ ಉಪಯೋಗಿಸಿಕೊಂಡಿದ್ದ. ಮುಂದಿನ ವರ್ಷ ಕಾರ್ಪೋರೇಷನ್ ಎಲೆಕ್ಷನ್ ಇದೆ ಚುನಾವಣೆಗೆ ನಿಲ್ಬೇಕು. ಕಳೆದ ಬಾರಿ ಇಮ್ರಾನ್ ಪಾಷಾ ಮುಂದೆ ನಿಂತು ಅವಮಾನ ಅನುಭವಿಸಿದ್ದೀನಿ. ಹೀಗಾಗಿ ಈ ಬಾರಿ ಚುನಾವಣೆಯಲ್ಲಿ ಗೆಲ್ಲಲೇ ಬೇಕು ಅಂತ ಆತನ ತೀರ್ಮಾನ ಮಾಡಿ ಈ ಕೃತ್ಯ ಎಸಗಿದ್ದಾನೆ.

    ಇಮ್ರಾನ್ ಪಾಷಾ ನಿಮ್ಮನ್ನೆಲ್ಲ ಕರೆದುಕೊಂಡು ಹೋಗಿ ಜೈಲಿಗೆ ಹಾಕ್ತಾನೆ. ಇದೆಲ್ಲಾ ಬೇಕಾ ನಿಮಗೆ. ಅವನು ಹೇಳಿದ ಹಾಗೆ ಕೇಳ್ಬೇಡಿ. ನಾನು ನಿಮಗೆ ನ್ಯಾಯ ಕೊಡಿಸ್ತೀನಿ ಅಂತ ಪ್ರಚೋದನೆ ಕೊಟ್ಟಿದ್ದನಂತೆ. ನಾವೇನು ಉದ್ದೇಶ ಇಟ್ಕೊಂಡು ಮಾಡಿಲ್ಲ. ಅವನು ಹೇಳಿದ ಹಾಗೇ ಮಾಡಿದ್ದೀವಿ ಅಂತ ಆರೋಪಿಗಳು ಹೇಳಿಕೆ ಕೊಟ್ಟಿದ್ದಾರೆ.

    ಮಧ್ಯಾಹ್ನ ಕ್ವಾರಂಟೈನ್ ಮಾಡಲು ಬಂದಾಗಲೇ ಇರ್ಫಾನ್ ಗೆ ಅಸಮಾಧಾನ ಇತ್ತು. ಬಳಿಕ ಸಂಜೆ 4 ಗಂಟೆಗೆ ಮತ್ತೆ ಬರ್ತೀವಿ ಅಂತ ವೈದ್ಯರು, ಆಶಾಕಾರ್ಯಕರ್ತೆಯರು ಹೋದ್ರು. ಆ ಸಂದರ್ಭದಲ್ಲಿ ನಮ್ಮ ಜೊತೆ ಮಾತನಾಡಿದ್ದ ಇರ್ಫಾನ್, ಸಂಜೆ ಬಂದಾಗ ಅವರಿಗೆ ತಕ್ಕ ಶಾಸ್ತಿ ಮಾಡ್ಬೇಕು ಅಂತ ಹೇಳಿದ್ದ. ಆದರೆ ಅವರು ಸಂಜೆ ಬರಲಿಲ್ಲ ಬದಲಾಗಿ ರಾತ್ರಿ ಬಂದಿದ್ರು. ನಮ್ಮ ಕೆಲಸವೂ ಸುಲಭ ಆಗಿತ್ತು. ನೋಡ ನೋಡ್ತಿದ್ದಂತೆ ಇರ್ಫಾನ್ ಕಿರುಚಾಡಲು ಶುರು ಮಾಡಿದ್ದ ಎಂದಿದ್ದಾರೆ.

    ಅಲ್ಲದೆ ಕ್ವಾರಂಟೈನ್ ಗೆ ಹೋಗಲು ನಿಂತಿದ್ದವರಿಗೆ ನಿಮಗೆ ಬುದ್ಧಿ ಇಲ್ವಾ ಅಂತ ಬೈಯೋಕೂ ಶುರು ಮಾಡಿದ್ದ. ಆ ಸಂದರ್ಭದಲ್ಲಿಯೇ ಗಲಾಟೆ ಆಗಿದ್ದು. ನಮಗೆ ನ್ಯಾಯ ಬೇಕು ಅಂತ ಕೂಗಾಡ್ತಾ ಇದ್ವಿ. ಇದ್ದಕ್ಕಿದ್ದಂತೆ ಗಲಾಟೆ ಪ್ರಾರಂಭ ಆಯ್ತು. ನಾವು ಎಲ್ಲರ ಜೊತೆ ಸೇರ್ಕೊಂಡು ಗಲಾಟೆ ಮಾಡಿದ್ವಿ ಎಂದು ಆರೋಪಿಗಳು ಪೊಲೀಸರ ಮುಂದೆ ಸತ್ಯ ಬಾಯಿಬಿಟ್ಟಿದ್ದಾರೆ.

    ಇರ್ಫಾನ್ ಯಾರು..?
    ಕೆಎಫ್ ಡಿಯ ಇರ್ಫಾನ್ ಕೇವಲ ಕೆಎಫ್ ಡಿ ಅಲ್ಲಿ ಇರಲಿಲ್ಲ. ಕಳೆದ ಬಾರಿ ಎಸ್‍ಡಿಪಿಐಯಿಂದ ಕಾರ್ಪೋರೇಷನ್ ಎಲೆಕ್ಷನ್ ಗೆ ನಿಂತು ಸೋತಿದ್ದ. ಈ ಮೂಲಕ ಎಸ್ ಡಿಪಿಐ ಅಲ್ಲಿ ಕೂಡ ಗುರುತಿಸಿಕೊಂಡಿದ್ದ. ಹಾಲಿ ಕಾರ್ಫೊರೇಟರ್ ಇಮ್ರಾನ್ ಪಾಷಾ ವಿರುದ್ಧ ತೊಡೆ ತಟ್ಟೋದೆ ಈತನ ಉದ್ದೇಶವಾಗಿದೆ.

    ಸದ್ಯ ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರ ದಂಡು ನೆರೆದಿದ್ದು, ಇಂದು ಬೆಳಗ್ಗೆ ಖಾಕಿಗಳಿಂದ ಪಥಸಂಚಲನ ನಡೆಯಿತು. ದೊಂಬಿ ಬಳಿಕ ಸೀಲ್‍ಡೌನ್ ಪಾದರಾಯನಪುರದಲ್ಲಿ ಖಾಕಿ ಭದ್ರಕೋಟೆಯಿದ್ದು, ಗಲಭೆ ಎಬ್ಬಿಸಿದ 54 ಪುಂಡರನ್ನು ರಾಮನಗರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ದೊಂಬಿ ಸಂಬಂಧ ಮತ್ತೆ 80 ಮಂದಿಯನ್ನ ಪೊಲೀಸರು ಮತ್ತೆ ವಶಕ್ಕೆ ಪಡೆದಿದ್ದಾರೆ.

  • ಅಮೂಲ್ಯ ಕೇಸ್ – ಪಾಷಾಗೆ ಪ್ರಶ್ನೆ ಪತ್ರಿಕೆ ನೀಡಿದ ಎಸ್‍ಐಟಿ

    ಅಮೂಲ್ಯ ಕೇಸ್ – ಪಾಷಾಗೆ ಪ್ರಶ್ನೆ ಪತ್ರಿಕೆ ನೀಡಿದ ಎಸ್‍ಐಟಿ

    ಬೆಂಗಳೂರು: ಪಾದರಾಯನಪುರ ಜೆಡಿಎಸ್ ಕಾರ್ಪೋರೇಟರ್ ಇಮ್ರಾನ್ ಪಾಷಾಗೆ ವಿಶೇಷ ತನಿಖಾ ತಂಡ(ಎಸ್‍ಐಟಿ) ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ನೀಡಿದೆ.

    ಪಾಷಾ ಮೊದಲನೇ ದಿನದ ತನಿಖೆಯ ವೇಳೆ ಪೊಲೀಸರಿಗೆ ಅಮೂಲ್ಯ ಹೇಗೆ ವೇದಿಕೆ ಮೇಲೆ ಬಂದಳು? ಆಕೆಯನ್ನು ಆಹ್ವಾನ ಮಾಡಿದರು ಯಾರು ನನಗೆ ಗೊತ್ತಿಲ್ಲ ಅನ್ನೋದು ಬಿಟ್ಟರೆ ಬೇರೆ ಏನನ್ನು ಹೇಳಿರಲಿಲ್ಲ. ಈ ಕಾರಣಕ್ಕೆ ಚಿಕ್ಕಪೇಟೆ ಎಸಿಪಿ ಮಹಾಂತರೆಡ್ಡಿ, ಉಪ್ಪಾರಪೇಟೆ ಇನ್ಸ್ ಪೆಕ್ಟರ್ ಸುರೇಶ್ ನೇತೃತ್ವದ ತನಿಖಾ ತಂಡ ಘಟನೆ ನಡೆದ ಬಗ್ಗೆ ಪ್ರಮುಖ ಪ್ರಶ್ನಾವಳಿಗಳನ್ನು ಸಿದ್ಧಪಡಿಸಿ ಪಾಷಾಗೆ ಕಳಿಸಿಕೊಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ಪ್ರಕರಣ ಕುರಿತಂತೆ ಮತ್ತೊಮ್ಮೆ ತನಿಖೆಗೆ ಬರುವಾಗ ಕೊಟ್ಟಿರುವ ಪ್ರಶ್ನಾವಳಿಗೆ ವಿಚಾರಣೆ ವೇಳೆ ಸಮರ್ಪಕವಾಗಿ ಉತ್ತರ ಕೊಡಲೇಬೇಕೆಂದು ಸೂಚಿಸಲಾಗಿದೆ.

    ನಗರದ ಫ್ರೀಡಂ ಪಾರ್ಕ್‍ನಲ್ಲಿ ನಡೆಯುತ್ತಿದ್ದ ಎನ್.ಆರ್.ಸಿ, ಸಿಎಎ, ವಿರುದ್ಧ ಪ್ರತಿಭಟಸಭೆಯಲ್ಲಿ ಅಮೂಲ್ಯ ಲಿಯೋನ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಳು. ಫ್ರೀಡಂಪಾರ್ಕಿನಲ್ಲಿ ಕಾರ್ಯಕ್ರಮ ನಡೆಸಲು ಪಾಲಿಕೆಯ ಸದಸ್ಯ ಇಮ್ರಾನ್ ಪಾಷಾ ಅನುಮತಿ ಪಡೆದಿದ್ದರು. ಪೊಲೀಸರು ಅನುಮತಿಯನ್ನು ಕೊಡುವಾಗ ಷರತ್ತು ಬದ್ಧ ಅನುಮತಿಯನ್ನು ಕೊಟ್ಟಿದ್ದರು.

    ಸಿಎಎ, ಎನ್.ಆರ್.ಸಿ ವಿರುದ್ಧ ಪ್ರತಿಭಟನ ಕಾರ್ಯಕ್ರಮದಲ್ಲಿ ಅಹಿತಕರ ಘಟನೆಗಳು ಹಾಗೂ ಶಾಂತಿ ಭಂಗ ಉಂಟು ಮಾಡುವ ಘಟನೆಗಳು ನಡೆದರೆ ಆಯೋಜಕರೆ ಹೊಣೆ ಎಂದು ಪೊಲೀಸರು ಇಮ್ರಾನ್‍ಗೆ ಹೇಳಿದ್ದರು. ಈಗ ಕಾರ್ಯಕ್ರಮದಲ್ಲಿ ಶಾಂತಿ ಭಂಗ ಉಂಟು ಮಾಡಿದ ಹಿನ್ನೆಲೆಯಲ್ಲಿ ಇಮ್ರಾನ್ ಪಾಷಾ ಅವರನ್ನು ವಿಚಾರಣೆ ನಡೆಸಲಾಗುತ್ತಿದೆ.

    ಅಮೂಲ್ಯ ಈ ಕಾರ್ಯಕ್ರಮದ ಮುನ್ನ ದಿನವೇ ಫೇಸ್‍ಬುಕ್ ನಲ್ಲಿ ಓವೈಸಿ ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ ಎಂದು ಪೋಸ್ಟ್ ಹಾಕಿದ್ದಳು. ಅಷ್ಟೇ ಅಲ್ಲದೇ ಭಾಷಣದ ವೇಳೆ ಕಾರ್ಯಕ್ರಮದ ಬ್ಯಾಡ್ಜ್ ಧರಿಸಿದ್ದಳು.

  • ಪಾಕ್ ಪರ ಘೋಷಣೆ ಪ್ರಕರಣ- ಪೊಲೀಸರ ಪ್ರಶ್ನೆಗೆ ಕಾರ್ಪೊರೇಟರ್ ಸುಸ್ತೋ ಸುಸ್ತು

    ಪಾಕ್ ಪರ ಘೋಷಣೆ ಪ್ರಕರಣ- ಪೊಲೀಸರ ಪ್ರಶ್ನೆಗೆ ಕಾರ್ಪೊರೇಟರ್ ಸುಸ್ತೋ ಸುಸ್ತು

    ಬೆಂಗಳೂರು: ನಗರದ ಫ್ರೀಡಂ ಪಾರ್ಕ್ ನಲ್ಲಿ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಪಾಕ್ ಪ್ರೇಮಿ ಅಮೂಲ್ಯ ಲಿಯೋನ ಪರಪ್ಪನ ಅಗ್ರಹಾರ ಸೇರಿದ್ದಾಳೆ. ಈ ಪ್ರಕರಣದ ಸಂಬಂಧ ವಿಚಾರಣೆಗೆ ಹಾಜರಾಗಿದ್ದ ಪ್ರತಿಭಟನೆ ಆಯೋಜಕ, ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ಪೊಲೀಸರು ನೀರಿಳಿಸಿದ್ದಾರೆ.

    ಪ್ರಕರಣದ ಸಂಬಂಧ ತನಿಖೆ ಆರಂಭಿಸಿರುವ ಉಪ್ಪಾರಪೇಟೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಪಾದರಾಯನಪುರ ಕಾರ್ಪೊರೇಟರ್ ಇಮ್ರಾನ್ ಪಾಷಾ ಅವರಿಗೆ ನೋಟಿಸ್ ಜಾರಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಠಾಣೆಗೆ ಹಾಜರಾದ ಇಮ್ರಾನ್ ಪಾಷಾ ಅವರಿಗೆ ಐದು ಜನ ಪೊಲೀಸ್ ಅಧಿಕಾರಿಗಳು ರೌಂಡ್ ಟೇಬಲ್ ಮಾದರಿಯಲ್ಲಿ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇದನ್ನೂ ಓದಿ: ಅಮೂಲ್ಯಳನ್ನು ಕಾರ್ಯಕ್ರಮದಿಂದ ಕೈಬಿಟ್ಟ ಆಯೋಜಕರು- ವಿಮಾನ ಟಿಕೆಟ್ ರದ್ದು

    ವಿಚಾರಣೆ ವೇಳೆ ಇಮ್ರಾನ್ ಪಾಷ, ಕಾರ್ಯ ಕ್ರಮ ಆಯೋಜನೆ ಮಾಡಿದ್ದು ನಾನೇ. ಆದರೆ ಅದಕ್ಕೆ ಅಮೂಲ್ಯಳಿಗೆ ಆಹ್ವಾನ ಕೊಟ್ಟವರು ಯಾರು? ಅವಳಿಗೆ ವಿಐಪಿ ಪಾಸ್ ಕೊಟ್ಟವರು ಯಾರು? ಬ್ಯಾಡ್ಜ್  ಕೊಟ್ಟವರು ಯಾರು? ಅವಳನ್ನು ವೇದಿಕೆ ಮೇಲೆ ಬಿಟ್ಟವರು ಯಾರು ಎನ್ನುವುದು ಪ್ರಶ್ನೆಗಳಿಗೆ ಪಾಷಾ ಅವರು ನನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ಲಭಿಸಿದೆ. ಇದನ್ನೂ ಓದಿ: ಅಮೂಲ್ಯ ಜೊತೆ ವೇದಿಕೆಯಲ್ಲಿದ್ದ ಎಲ್ಲರ ಮೇಲೆ ದೇಶದ್ರೋಹ ಕೇಸ್ ಹಾಕಿ: ಅನಂತ್ ಕುಮಾರ್ ಹೆಗ್ಡೆ

    ಇದೇ ವಿಚಾರಕ್ಕೆ ಪೊಲೀಸರು ಬೇರೆ ಬೇರೆ ಆಯಾಮದಲ್ಲಿ ಇಮ್ರಾನ್ ಪಾಷಾ ಅವರಿಗೆ ಪ್ರಶ್ನೆ ಮಾಡಿದ್ದಾರೆ. ಪ್ರಶ್ನೆಗಳಿಂದ ಕಕ್ಕಾಬಿಕ್ಕಿಯಾದ ಇಮ್ರಾನ್ ಪಾಷಾ ನಂಗೇನು ಗೊತ್ತಿಲ್ಲ. ದಯವಿಟ್ಟು ನನ್ನ ಬಿಟ್ಟುಬಿಡಿ ಸರ್ ಅಂತ ಮನವಿ ಮಾಡಿಕೊಂಡಿದ್ದಾರೆ ಎಂದು ಮೂಲಗಳಿಂದ ಹೇಳಿಬಂದಿದೆ. ಅಷ್ಟೇ ಅಲ್ಲದೆ ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನೂ ಹತ್ತು ಜನರಿಗೆ ನೋಟಿಸ್ ನೀಡುವ ಸಾಧ್ಯತೆ ಇದ್ದು, ಇಮ್ರಾನ್ ಪಾಷಾ ಅವರನ್ನು ಪೊಲೀಸರು ಶನಿವಾರ ಸತತ ಆರು ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.

  • ಕೈಯಲ್ಲಿ ಮಚ್ಚು, ಲಾಂಗು ಹಿಡಿದ ಪಾಲಿಕೆ ಸದಸ್ಯ – ಕೇಳಿದ್ರೆ ಏನ್ ತಪ್ಪು ಅಂದ್ರು ಇಮ್ರಾನ್ ಪಾಷಾ

    ಕೈಯಲ್ಲಿ ಮಚ್ಚು, ಲಾಂಗು ಹಿಡಿದ ಪಾಲಿಕೆ ಸದಸ್ಯ – ಕೇಳಿದ್ರೆ ಏನ್ ತಪ್ಪು ಅಂದ್ರು ಇಮ್ರಾನ್ ಪಾಷಾ

    ಬೆಂಗಳೂರು: ಬಿಬಿಎಂಪಿ ಹಾಲಿ ಸದಸ್ಯರೊಬ್ಬರು ಈದ್ ಮಿಲಾದ್ ಆಚರಣೆ ವೇಳೆ ಲಾಂಗ್ ಪ್ರದರ್ಶನ ಮಾಡಿರೋ ಘಟನೆ ಇಂದು ಬೆಳಕಿಗೆ ಬಂದಿದೆ.

    ಈ ಘಟನೆ ಬ್ಯಾಟಾರಾಯನಪುರದ ಗೋರಿಪಾಳ್ಯದಲ್ಲಿ ಶನಿವಾರ ನಡೆದಿದ್ದು, ವಾರ್ಡ್ ನಂಬರ್ 135ರ ಪಾಲಿಕೆ ಸದಸ್ಯ ಇಮ್ರಾನ್ ಪಾಷಾ ಅವರು ಓರ್ವ ಜನಪ್ರತಿನಿಧಿಯಾಗಿ ಸಾರ್ವಜನಿಕರ ಮುಂದೆಯೇ ಈ ರೀತಿ ವರ್ತನೆ ಮಾಡಿದ್ದಾರೆ.

    ಈ ಕುರಿತು ಪಬ್ಲಿಕ್ ಟಿವಿ ಇಮ್ರಾನ್ ಪಾಷಾ ಅವರನ್ನು ಮಾತನಾಡಿಸಿದಾಗ, ಸಾವಿರಾರು ಮಂದಿ ನಮ್ಮ ಮನೆ ಮುಂದೆ ನೆರೆದಿದ್ದರು. ಹಲವು ಕಡೆ ನನ್ನ ಆಮಂತ್ರಿಸಿದ್ದರು. ಹೀಗಾಗಿ ನಾನು ಅಲ್ಲಿ ಅನ್ನದಾನ ಮಾಡಿ ಹಿಂತಿರುಗಿ ಬರುತ್ತಿದ್ದ ಸಂದರ್ಭದಲ್ಲಿ ಹಲವು ಮಂದಿ ಯುವಕರು ಕೈಯಲ್ಲಿ ಲಾಂಗ್ ಹಿಡಿದುಕೊಂಡು ಇದ್ದರು. ಆದ್ರೆ ಯಾರಿಗೂ ತೊಂದರೆ ಮಾಡೋ ಉದ್ದೇಶದಿಂದ ಅವರು ಲಾಂಗ್ ಹಿಡಿಕೊಂಡಿಲ್ಲ. ಈ ವೇಳೆ ಅವರು ಅಣ್ಣ ಬನ್ನಿ ಅಂತ ಕರೆದ್ರು. ಹೀಗಾಗಿ ನಾನು ಕೂಡ ಕೈಯಲ್ಲಿ ಲಾಂಗ್ ಹಿಡಿದೆ. ಅಂತೆಯೇ ಅವರೆಲ್ಲರೂ ನನ್ನ ಎತ್ತಿಕೊಂಡು ಕುಣಿದ್ರು ಅಂತ ಅವರು ಹೇಳಿದ್ರು.

    ಅಂದು ಈದ್ ಮಿಲಾದ್ ಆಗಿದ್ದುದರಿಂದ ಹಿಂದೂಸ್ತಾನದ ಎಲ್ಲಾ ರಾಜಕೀಯ ನಾಯಕರುಗಳು ಕೂಡ ಮೆರವಣಿಗೆ ಹೋಗಿ ಅವರ ಅಭಿಮಾನಿಗಳ ಜೊತೆ ಖುಷಿಯಿಂದ ಆಚರಣೆ ಮಾಡುತ್ತಾರೆ. ಅಷ್ಟಕ್ಕೂ ಅಲ್ಲಿ ನಾನು ಒಬ್ಬನೇ ಲಾಂಗ್ ಹಿಡಿದುಕೊಂಡಿಲ್ಲ. ಅಲ್ಲಿ ನೆರೆದಿದ್ದ ಹಲವರು ಹಿಡಿದುಕೊಂಡಿದ್ದರು. ಒಟ್ಟಿನಲ್ಲಿ ನಾನೇನು ತಪ್ಪು ಕೆಲಸ ಮಾಡಿಲ್ಲ ಅಂತ ಅವರು ಸಮರ್ಥಿಸಿಕೊಂಡ್ರು.

    ಸದ್ಯ ಕಾರ್ಪೋರೇಟರ್ ವರ್ತನೆಗೆ ಸಾರ್ವಜನಿಕ ವಲಯದಲ್ಲಿ ತ್ರೀವ ಆಕ್ರೋಶ ವ್ಯಕ್ತವಾಗುತ್ತಿದೆ.