Tag: ಇಡ್ಲಿ

  • ಬಡವರ ಪಾಲಿನ ಅನ್ನಪೂರ್ಣೇಶ್ವರಿ ಕೋಲಾರದ ಅಜ್ಜಿ-ಕೊರೊನಾ ಸಮಯದಲ್ಲೂ 1 ರೂ.ಗೆ ಇಡ್ಲಿ ಮಾರಾಟ

    ಬಡವರ ಪಾಲಿನ ಅನ್ನಪೂರ್ಣೇಶ್ವರಿ ಕೋಲಾರದ ಅಜ್ಜಿ-ಕೊರೊನಾ ಸಮಯದಲ್ಲೂ 1 ರೂ.ಗೆ ಇಡ್ಲಿ ಮಾರಾಟ

    ಕೋಲಾರ: ಕಳೆದ ಎರಡೂವರೆ ತಿಂಗಳಿಂದ ಎಲ್ಲೆಡೆ ಕೊರೊನಾ ಲಾಕ್‍ಡೌನ್ ಆಗಿ ಹೋಟೆಲ್ ಉದ್ಯಮ ಸೇರಿದಂತೆ ಜನಜೀವನ ಕಷ್ಟವಾಗಿದೆ. ಅಗತ್ಯ ವಸ್ತುಗಳು ಸೇರಿದಂತೆ ಎಲ್ಲವೂ ದುಬಾರಿಯಾಗಿ ಜನ ಸಮಾನ್ಯರಿಗೆ ಸಂಕಷ್ಟ ಎದುರಾಗಿದೆ. ಈ ಮಧ್ಯೆ ಕೋಲಾರದಲ್ಲೊಬ್ಬ ಅಜ್ಜಿ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡಿ ಬಡವರ ಪಾಲಿನ ಅನ್ನಪೂರ್ಣೆಶ್ವರಿಯಾಗಿದ್ದಾರೆ.

    ಪ್ರಸ್ತುತ ಕಾಲದಲ್ಲಿ ಒಂದು ಪುಟ್ಟ ಇಡ್ಲಿಗೆ ಐದು ರೂ. ಟೀ-ಕಾಫಿಗೆ 10 ರಿಂದ 20 ರೂಪಾಯಿ ಕೊಡಲೇಬೇಕು. ಇನ್ನೂ ಹೊಟ್ಟೆ ತುಂಬಾ ತಿನ್ನಬೇಕಂದ್ರೆ ಕನಿಷ್ಟ 40 ರಿಂದ 50 ರೂಪಾಯಿ ಕೊಡಲೇಬೇಕು. ಆದರೆ ಇಲ್ಲೊಬ್ಬ 85 ವರ್ಷದ ಅಜ್ಜಿ ಕಳೆದ 50 ವರ್ಷಗಳಿಂದ ಇಡ್ಲಿಯನ್ನು ನಾಲ್ಕಾಣೆ, ಐವತ್ತು ಪೈಸೆ, ಈಗ 1 ರೂಪಾಯಿಗೆ ಮಾರಾಟ ಮಾಡುತ್ತಾ ಬಡವರ ಹಸಿವು ನೀಗಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

    ರೂಪಾಯಿಗೆ ಇಡ್ಲಿ ಮಾರುತ್ತಿರುವ ಈ ಅಜ್ಜಿಯ ಹೆಸರು ಸೆಲ್ವಮ್ಮ, ಕೋಲಾರ ಜಿಲ್ಲೆಯ ಬಂಗಾರಪೇಟೆ ಪಟ್ಟಣದ ಪಂಪ್‍ಹೌಸ್ ಬಳಿ ಈ ಅಜ್ಜಿ ತನ್ನ ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದಾರೆ. ಈ ಅಜ್ಜಿ ತಯಾರು ಮಾಡುವ ಇಡ್ಲಿಗೆ ಎಷ್ಟು ಬೇಡಿಕೆಯಿದೆ ಎಂದರೆ ಬೆಳಗ್ಗೆ ಒಂಬತ್ತು ಗಂಟೆಯೊಳಗೆ ಎಲ್ಲಾ ಇಡ್ಲಿ ಖಾಲಿಯಾಗುತ್ತೆ. ಬೆಳಗ್ಗೆ 7 ಗಂಟೆಯಿಂದಲೇ ಅಜ್ಜಿ ಮನೆ ಮುಂದೆ ತಿಂಡಿ ಖರೀದಿ ಮಾಡಲು ಜನರು ಸಾಲುಗಟ್ಟಿ ನಿಂತಿರುತ್ತಾರೆ. ಈ ಇಳಿವಯಸ್ಸಿನಲ್ಲೂ ಪ್ರತಿದಿನ 300 ಇಡ್ಲಿ, ಚಟ್ನಿ ಸಾಂಬಾರು ಸಹ ಅಜ್ಜಿ ಒಬ್ಬರೇ ತಯಾರು ಮಾಡುತ್ತಾರೆ.

    ಮೂಲತಃ ತಮಿಳುನಾಡಿನವರಾದ ಇವರು ಕೋಲಾರಕ್ಕೆ ಬಂದು 55 ವರ್ಷಗಳೇ ಆಗಿದೆ. ಇವರ ಬಳಿ ಹೆಚ್ಚಾಗಿ ಬಡವರು, ಗಾರ್ಮೆಂಟ್ಸ್ ಮಹಿಳೆಯರು. ಆಟೋ ಚಾಲಕರು ಪ್ರತಿ ನಿತ್ಯ ಇಡ್ಲಿ ಖರೀದಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ. ಕಡಿಮೆ ಬೆಲೆಗೆ ಮಾರಾಟ ಮಾಡ್ತಿರೋದಕ್ಕೆ ಇನ್ನುಳಿದ ಹೋಟೆಲ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದಾರೆ.

  • ‘ಏನೇ ಆಗ್ಲಿ 1 ರೂಪಾಯಿಗೇ ಇಡ್ಲಿ ಮಾರುತ್ತೇನೆ’ – ಲಾಕ್‍ಡೌನ್‍ನಲ್ಲೂ ಬಡವರಿಗಾಗಿ ಶ್ರಮಿಸುತ್ತಿರೋ ಅಜ್ಜಿ

    ‘ಏನೇ ಆಗ್ಲಿ 1 ರೂಪಾಯಿಗೇ ಇಡ್ಲಿ ಮಾರುತ್ತೇನೆ’ – ಲಾಕ್‍ಡೌನ್‍ನಲ್ಲೂ ಬಡವರಿಗಾಗಿ ಶ್ರಮಿಸುತ್ತಿರೋ ಅಜ್ಜಿ

    – ಸಾಮಗ್ರಿ ದುಬಾರಿ ಎಂದು ಇಡ್ಲಿ ಬೆಲೆ ಏರಿಕೆ ಮಾಡಲ್ಲ
    – ಇಳಿ ವಯಸ್ಸಲ್ಲೂ ಮಾನವೀಯತೆ ಮೆರೆಯುತ್ತಿರುವ ಅಜ್ಜಿ

    ಚೆನ್ನೈ: ಲಾಕ್‍ಡೌನ್‍ನಲ್ಲಿ ಅಡುಗೆ ಸಾಮಗ್ರಿ ಬೆಲೆ, ದಿನ ಬಳಿಕೆಯ ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಹಲವರು ಇದೇ ಒಳ್ಳೆಯ ಅವಕಾಶ ದುಬಾರಿ ಬೆಲೆಗೆ ವಸ್ತುಗಳನ್ನು ಮಾರಾಟ ಮಾಡಿ ಹಣ ಮಾಡೋಣ ಅಂತ ಪ್ಲಾನ್ ಹಾಕಿ, ಹಣ ಗಳಿಸುತ್ತಿದ್ದಾರೆ. ಆದರೆ ತಮಿಳುನಾಡಿನ ವಡಿವೇಲಪಾಲ್ಯಂ ಗ್ರಾಮದಲ್ಲಿನ ‘ಇಡ್ಲಿ ಪಾಟಿ'(ಇಡ್ಲಿ ಅಜ್ಜಿ) ಎಂದೇ ಖ್ಯಾತಿಗಳಿಸಿರುವ 85 ವರ್ಷದ ವೃದ್ಧೆ ಕಮಲಥಾಲ್ ಅವರು ಲಾಕ್‍ಡೌನ್‍ನಲ್ಲಿಯೂ ಕೇವಲ 1 ರೂಪಾಯಿಗೇ ಇಡ್ಲಿ ಮಾರಾಟ ಮಾಡುತ್ತಿದ್ದಾರೆ. ಸಾಮಗ್ರಿ ಬೆಲೆ ದುಬಾರಿಯಾದರೂ ಬಡವರ ಹಸಿವು ನೀಗಿಸಲು ಕೇವಲ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡುತ್ತಾ ಮಾನವೀಯತೆ ಮೆರೆದಿದ್ದಾರೆ.

    ವಡಿವೇಲಪಾಲ್ಯಂ ಗ್ರಾಮದ ನಿವಾಸಿ ಕಮಲಥಾಲ್ ಅವರು ಕಳೆದ 30 ವರ್ಷದಿಂದ ಇಡ್ಲಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ತಮ್ಮ ಅಂಗಡಿ ಬಾಗಿಲು ತೆಗೆದು, ಸ್ವಾದಿಷ್ಟ ಮತ್ತು ರುಚಿಯಾದ ಸಾಂಬಾರ್, ಚಟ್ನಿ ಜೊತೆಗೆ ಕೇವಲ 1 ರೂಪಾಯಿ ಬೆಲೆಗೆ ಇಡ್ಲಿ ಮಾರಾಟ ಮಾಡುತ್ತಾರೆ. ಇದನ್ನೂ ಓದಿ: ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರುತ್ತಿದ್ದಾರೆ 80ರ ವೃದ್ಧೆ

    ಲಾಕ್‍ಡೌನ್ ಅವಧಿಯಲ್ಲಿ ಅಡುಗೆ ಸಾಮಗ್ರಿ ಬೆಲೆ ಏರಿಕೆಯಾಗಿದೆ. ಈ ಸಂಕಷ್ಟದ ಸಂದರ್ಭದಲ್ಲಿ ಬಡವರಿಗೆ ಹೆಚ್ಚು ಹಣ ಕೊಟ್ಟು ಆಹಾರ ಪಡೆಯಲು ಕಷ್ಟವಾಗುತ್ತದೆ. ಸಾಮಗ್ರಿ ಬೆಲೆ ಹೆಚ್ಚಾದರೂ ನಾನು ಒಂದು ಇಡ್ಲಿಗೆ 1 ರೂಪಾಯಿ ತೆಗೆದುಕೊಳ್ಳುತ್ತೇನೆ. ಲಾಭಕ್ಕಾಗಿ ನಾನು ಈ ಕೆಲಸ ಮಾಡುತ್ತಿಲ್ಲ. ಬಡವರಿಗೆ, ಹಸಿದವರಿಗೆ ಆಹಾರ ನೀಡಬೇಕು ಎನ್ನುವುದು ನನ್ನ ಆಶಯ ಎಂದು ಅಜ್ಜಿ ಹೇಳಿಕೊಂಡಿದ್ದಾರೆ.

    ಸಾಮಗ್ರಿ ಬೆಲೆಯೆಲ್ಲಾ ದುಬಾರಿಯಾಗಿದೆ. ಇಡ್ಲಿ ತಯಾರಿಸಲು ಕಷ್ಟವಾಗುತ್ತಿದೆ. ಆದರೆ ಕೆಲವರು ನನಗೆ ದಿನಸಿ ಸಾಮಗ್ರಿ, ತರಕಾರಿಗಳನ್ನು ತಂದುಕೊಟ್ಟು ಸಹಾಯ ಮಾಡುತ್ತಿದ್ದಾರೆ. ಉದ್ದಿನ ಬೇಳೆ ಬೆಲೆ ಕೆಜಿಗೆ 100 ರೂಪಾಯಿಂದ 150 ರೂಪಾಯಿ ಆಗಿದೆ. ಮೆಣಸು ಕೆಜಿಗೆ 150 ರೂಪಾಯಿಂದ 200 ರೂಪಾಯಿ ಆಗಿದೆ. ಆದರೂ ನಾನು ಇಡ್ಲಿ ಬೆಲೆ ಏರಿಕೆ ಮಾಡಲ್ಲ. ಹೇಗೋ ಈ ಪರಿಸ್ಥಿತಿಯನ್ನು ನಿರ್ವಹಿಸುತ್ತಿದ್ದೇನೆ ಎಂದು ಅಜ್ಜಿ ತಿಳಿಸಿದ್ದಾರೆ.

    ಸದ್ಯ ಅಜ್ಜಿ ದಿನಕ್ಕೆ 300ಕ್ಕೂ ಹೆಚ್ಚು ಮಂದಿಗೆ ಆಹಾರ ನೀಡುತ್ತಿದ್ದಾರೆ. ಅಲ್ಲದೇ ಸಾಮಾಜಿಕ ಅಂತರ ಕಾಯ್ದುಕೊಂಡು ಗ್ರಾಹಕರಿಗೆ ಇಡ್ಲಿ ಪಾರ್ಸಲ್ ನೀಡುತ್ತಿದ್ದಾರೆ. ಬೇರೆ ಬೇರೆ ಪ್ರದೇಶಗಳಿಂದ ಬಂದ ಜನರು ಲಾಕ್‍ಡೌನ್‍ನಿಂದ ಇಲ್ಲೇ ಸಿಲುಕಿಕೊಂಡಿದ್ದಾರೆ. ಲಾಕ್‍ಡೌನ್‍ನಿಂದ ಸಾಕಷ್ಟು ಮಂದಿ ಸಂಕಷ್ಟದಲ್ಲಿದ್ದಾರೆ. ಅವರಿಗೆ ತನ್ನಿಂದ ಸಹಾಯವಾಗಲಿ ಎಂದು ಅಜ್ಜಿ ಇಂದಿಗೂ 1 ರೂಪಾಯಿಗೆ ಇಡ್ಲಿ ಮಾರುತ್ತಾ ಮನವೀಯತೆ ಮೆರೆದಿದ್ದಾರೆ.

  • ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರುತ್ತಿದ್ದಾರೆ 80ರ ವೃದ್ಧೆ

    ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರುತ್ತಿದ್ದಾರೆ 80ರ ವೃದ್ಧೆ

    ಚೆನ್ನೈ: ತಮಿಳುನಾಡಿನ ವಡಿವೇಲಪಾಲ್ಯಂ ಗ್ರಾಮದಲ್ಲಿನ 80 ವರ್ಷದ ವೃದ್ಧೆಯೊಬ್ಬರು ಬಡವರಿಗಾಗಿ ಕೇವಲ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡುವ ಮೂಲಕ ಎಲ್ಲರ ಮನ ಗೆದ್ದಿದ್ದಾರೆ.

    ವಡಿವೇಲಪಾಲ್ಯಂ ಗ್ರಾಮದ ನಿವಾಸಿ ಕಮಲಥಾಲ್ ಅವರು ಕಳೆದ 30 ವರ್ಷದಿಂದ ಇಡ್ಲಿ ಮಾರಾಟ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಪ್ರತಿನಿತ್ಯ ಬೆಳಗ್ಗೆ ತನ್ನ ಅಂಗಡಿ ಬಾಗಿಲು ತೆಗೆದು, ಸ್ವಾದಿಷ್ಟ ಮತ್ತು ರುಚಿಯಾದ ಸಾಂಬಾರ್, ಚಟ್ನಿ ಜೊತೆಗೆ ಕೇವಲ ಒಂದು ರೂಪಾಯಿ ಬೆಲೆಗೆ ಇಡ್ಲಿ ಮಾರಾಟ ಮಾಡುತ್ತಾರೆ.

    ವಡಿವೇಲಪಾಲ್ಯಂನಲ್ಲಿ ಕಳೆದ 30 ವರ್ಷಗಳಿಂದ ಅಜ್ಜಿ ಇಡ್ಲಿ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಪ್ರತಿ ಮುಂಜಾನೆ ಇಡ್ಲಿ ತಯಾರಿಸಲು ತಾಜಾ ಹಿಟ್ಟನ್ನು ಬರೋಬ್ಬರಿ 4 ಗಂಟೆ ಸಮಯ ತೆಗೆದುಕೊಂಡು ಕೈಯಾರೆ ಅರೆಯುತ್ತಾರೆ. ಬಳಿಕ ತಾಜಾ ಇಡ್ಲಿ ತಯಾರಿಸಿ ಗ್ರಾಹಕರಿಗೆ ನೀಡುತ್ತಾರೆ. ಪ್ರತಿನಿತ್ಯ ಈ ಅಜ್ಜಿ ಬರೋಬ್ಬರಿ 1000 ಇಡ್ಲಿ ಮಾರಾಟ ಮಾಡಿ ಜೀವನ ನಡೆಸುತ್ತಾರೆ.

    ಈ ವ್ಯಾಪಾರ ಆರಂಭಿಸಿದಾಗ ಕೇವಲ 50 ಪೈಸೆಗೆ ಒಂದು ಇಡ್ಲಿ ಮಾರಾಟ ಮಾಡುತ್ತಿದ್ದೆ. ಬಳಿಕ ಸಾಮಾಗ್ರಿಗಳ ಬೆಲೆ ಜಾಸ್ತಿಯಾದ ಬಳಿಕ ಒಂದು ರೂಪಾಯಿಗೆ ಇಡ್ಲಿ ಬೆಲೆಯನ್ನು ಏರಿಕೆ ಮಾಡಿದೆ ಎಂದು ಅಜ್ಜಿ ತಿಳಿಸಿದ್ದಾರೆ.

    ನೀವು ಯಾಕೆ ಇಷ್ಟು ಕಡಿಮೆ ಬೆಲೆಗೆ ಇಡ್ಲಿ ಮಾರುತ್ತೀರಾ? ಬೆಲೆ ಹೆಚ್ಚು ಮಾಡಿ ಎಂದು ಅಜ್ಜಿಗೆ ಹೇಳಿದರೆ, ನನಗೆ ದುಡ್ಡು ಮಾಡುವ ಉದ್ದೇಶವಿಲ್ಲ. ಹಸಿದವರಿಗೆ, ಬಡವರಿಗೆ ಆಹಾರ ನೀಡುವುದು ನನ್ನ ಉದ್ದೇಶ. ನಾನು ಬೆಲೆ ಹೆಚ್ಚಿಸಿದರೆ ನನ್ನ ಅಂಗಡಿಗೆ ಬರುವ ಬಡ ಜನರಿಗೆ ಕಷ್ಟವಾಗುತ್ತದೆ. ಪ್ರತಿನಿತ್ಯ 15ರಿಂದ 20 ರೂ. ಹಣ ಕೊಟ್ಟು ತಿನ್ನಲು ಗ್ರಾಹಕರಿಗೂ ಭಾರವಾಗುತ್ತೆ. ಆದ್ದರಿಂದ 1 ರೂಪಾಯಿಗೆ ಇಡ್ಲಿ ಮಾರಾಟ ಮಾಡುತ್ತೇನೆ ಎಂದು ಉತ್ತರಿಸಿದ್ದಾರೆ.

    ಇಳಿ ವಯಸ್ಸಿನಲ್ಲಿ ಯಾರ ಮೇಲೂ ಅವಲಂಬಿಸದೇ ಇಡ್ಲಿ ಮಾರಾಟ ಮಾಡಿಕೊಂಡು ತನ್ನ ಜೀವನ ಸಾಗಿಸುವುದರ ಜೊತೆಗೆ ಬಡವರಿಗೆ ಕಡಿಮೆ ಬೆಲೆಯಲ್ಲಿ ಆಹಾರ ನೀಡುತ್ತ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

  • ಮೈಸೂರು ದಸರಾ: ಇಡ್ಲಿ ತಿನ್ನೋ ಸ್ಪರ್ಧೆಯಲ್ಲಿ ಪೈಪೋಟಿ ನಡೆಸಿದ ಮಹಿಳಾ ಮಣಿಗಳು!

    ಮೈಸೂರು ದಸರಾ: ಇಡ್ಲಿ ತಿನ್ನೋ ಸ್ಪರ್ಧೆಯಲ್ಲಿ ಪೈಪೋಟಿ ನಡೆಸಿದ ಮಹಿಳಾ ಮಣಿಗಳು!

    ಮೈಸೂರು: ನಗರದಲ್ಲಿ ಆಯೋಜಿಸಿದ್ದ ಆಹಾರ ಮೇಳದ ಇಡ್ಲಿ ತಿನ್ನುವ ಸ್ಪರ್ಧೆಯಲ್ಲಿ ಮಹಿಳಾ ಮಣಿಗಳು ಭಾಗವಹಿಸುವ ಮೂಲಕ ಕಾರ್ಯಕ್ರಮಕ್ಕೆ ಕಳೆ ತಂದುಕೊಟ್ಟರು.

    ನಾಡಹಬ್ಬ ದಸರಾಗೆ ಚಾಲನೆ ಸಿಕ್ಕ ನಂತರ ಅರಮನೆ ನಗರಿಯಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು, ದಿನದಿಂದ ದಿನಕ್ಕೆ ವಿಶಿಷ್ಟ ಕಾರ್ಯಕ್ರಮಗಳು ನಾಡಿನ ಜನರನ್ನು ಕೈಬೀಸಿ ಕರೆಯುತ್ತಿವೆ. ಬುಧವಾರ ನಗರದ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದಲ್ಲಿ ಆಹಾರ ಮೇಳವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ವಿಶಿಷ್ಟವಾಗಿ ಮಹಿಳೆಯರಿಗಾಗಿಯೇ ಇಡ್ಲಿ ತಿನ್ನುವ ಸ್ಪರ್ಧೆಯನ್ನು ಆಯೋಜಕರು ಹಮ್ಮಿಕೊಂಡಿದ್ದರು. ಈ ಸ್ಪರ್ಧೆಗೆ ಲಕ್ಕಿ ಡಿಪ್ ಮೂಲಕ 10 ಜನರನ್ನು ಆಯ್ಕೆ ಮಾಡಿ ಇಡ್ಲಿ ತಿನ್ನುವ ಸ್ಪರ್ಧೆಗೆ ಆರಿಸಲಾಗಿತ್ತು.

    ಮಹಿಳೆಯರು ಅಡುಗೆ ಮಾಡಲು ಸೈ, ತಿನ್ನುವುದಕ್ಕೆ ಸೈ ಎನ್ನುವಂತೆ ತಾ ಮುಂದು ನಾ ಮುಂದು ಎಂಬಂತೆ ಗಬಗಬನೆ ಇಡ್ಲಿಯನ್ನು ತಿಂದರು. ಆದರೆ ಪಡುವಾರಹಳ್ಳಿಯ ಲಲಿತ ಪುಟ್ಟೇಗಾಡ ಎಂಬವರು ಎಲ್ಲರಿಗಿಂತ ಮೊದಲು ಇಡ್ಲಿಯನ್ನು ತಿಂದು ಮುಗಿಸುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡರು. ಮಹಿಳಾ ಮಣಿಯರು ಇಡ್ಲಿಯನ್ನು ತಿನ್ನುವ ಸ್ಪರ್ಧೆಯನ್ನು ನೋಡಲು ಜನ ಮುಗಿಬಿದ್ದಿದ್ದರು.

    ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವಕ್ಕೆ ಬುಧವಾರ ಅದ್ಧೂರಿ ಚಾಲನೆ ಸಿಕ್ಕಿದೆ. ಇನ್ಫೋಸಿಸ್ ಫೌಂಡೇಶನ್ ಮುಖ್ಯಸ್ಥೆ ಸುಧಾಮೂರ್ತಿ ನಾಡದೇವತೆ ಚಾಮುಂಡೇಶ್ವರಿಗೆ ತುಲಾ ಲಗ್ನದಲ್ಲಿ ಅಗ್ರ ಪೂಜೆ ಸಲ್ಲಿಸುವ ಮೂಲಕ ಶಾಸ್ತ್ರೋಕ್ತವಾಗಿ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ ನೀಡಿದ್ದರು.

    ಬುಧವಾರ ನಡೆದ ಕಾರ್ಯಕ್ರಮದಲ್ಲಿ ಸಿಎಂ ಕುಮಾರಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಜಿ. ಟಿ ದೇವೆಗೌಡ, ಸಚಿವ ಸಾರಾ ಮಹೇಶ್ ಸೇರಿದಂತೆ ಹಲವು ಸಚಿವರು ಹಾಗೂ ಗಣ್ಯಾತಿಗಣ್ಯರು ಉಪಸ್ಥಿತರಿದ್ದರು. ಇದಕ್ಕೂ ಮುನ್ನ ಸುಧಾಮೂರ್ತಿ ಕುಟುಂಬ ಸಮೇತರಾಗಿ ಚಾಮುಂಡಿ ದೇವಿಗೆ ಬಾಗೀನ ಅರ್ಪಿಸಿದ್ದರು. ಇದಲ್ಲದೇ ಬುಧವಾರ ಬೆಳಗ್ಗೆ 11 ಗಂಟೆಗೆ ಅರಮನೆಯಲ್ಲಿ ಅದ್ಧೂರಿಯಾಗಿ ಖಾಸಗಿ ದರ್ಬಾರ್ ಸಹ ನಡೆದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv