Tag: ಆಹಾರ ಕಿಟ್

  • ಮೇ 17ರ ನಂತ್ರ ಲಾಕ್‍ಡೌನ್ ತೆರವಿನ ಸುಳಿವು ನೀಡಿದ ಸಚಿವ ಸಿ.ಟಿ.ರವಿ

    ಮೇ 17ರ ನಂತ್ರ ಲಾಕ್‍ಡೌನ್ ತೆರವಿನ ಸುಳಿವು ನೀಡಿದ ಸಚಿವ ಸಿ.ಟಿ.ರವಿ

    ಬೆಂಗಳೂರು: ಲಾಕ್‍ಡೌನ್ ಪಾಲಿಸದ ಜನರಿಂದ ಲಾಕ್‍ಡೌನ್ ಪದೇ ಪದೇ ವಿಸ್ತರಣೆಯಾಯಿತು. ಈ ಕಾರಣಗಳಿಂದ ಮತ್ತೆ ವಿಸ್ತರಣೆ ಮಾಡುವುದರಲ್ಲಿ ಅರ್ಥ ಇಲ್ಲ ಎಂದು ಹೇಳುವ ಮೂಲಕ ಸಚಿವ ಸಿ.ಟಿ.ರವಿ ಮೇ 17ರ ನಂತರ ಲಾಕ್‍ಡೌನ್ ತೆರವು ಸುಳಿವು ನೀಡಿದ್ದಾರೆ.

    ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಬೆಂಗಳೂರು ಹೊರವಲಯ ಟಿ.ದಾಸರಹಳ್ಳಿಯಲ್ಲಿ ಬಡವರಿಗೆ ತರಕಾರಿ ಕಿಟ್ ವಿತರಣೆ ಮಾಡಲಾಯಿತು. ರೈತರಿಂದ ನೇರವಾಗಿ ತರಕಾರಿ ಖರೀದಿಸಿ ಕ್ಷೇತ್ರದ ಜನರಿಗೆ ವಿತರಣೆ ಮಾಡಿದರು. ಮಾಜಿ ಶಾಸಕ ಮುನಿರಾಜು ನೇತೃತ್ವದಲ್ಲಿ 10 ಸಾವಿರ ಜನರಿಗೆ ಕಿಟ್ ವಿತರಣೆ ಮಾಡಿದ್ದಾರೆ.

    ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಸಿ.ಟಿ.ರವಿ, ಕೊರೊನಾ ಚೈನ್ ಬ್ರೇಕ್ ಮಾಡಲಿಕ್ಕೆ ಲಾಕ್‍ಡೌನ್ ಪ್ರಯೋಗ ಮಾಡಿದ್ದು, ಆದರೆ ಎಲ್ಲರೂ ಸರಿಯಾಗಿ ಲಾಕ್‍ಡೌನ್ ನಿಯಮ ಪಾಲನೆ ಮಾಡಲಿಲ್ಲ. ಈ ಕೊರೊನಾ ಬರುತ್ತೆ ಅಂತ ನಾವು ನಿರೀಕ್ಷೆ ಮಾಡಿರಲಿಲ್ಲ. ಲಾಕ್‍ಡೌನ್ ಪಾಲಿಸದ ಜನರಿಂದ ಲಾಕ್‍ಡೌನ್ ಪದೇ ಪದೇ ವಿಸ್ತರಣೆಯಾಯಿತು. ಈ ಕಾರಣಗಳಿಂದ ಮತ್ತೆ ವಿಸ್ತರಣೆ ಮಾಡುವುದರಲ್ಲಿ ಅರ್ಥ ಇಲ್ಲ. ಕೂಲಿ ಕಾರ್ಮಿಕರಿಂದ ಹಿಡಿದು ದೊಡ್ಡ ಉದ್ದಿಮೆದಾರನವರೆಗೆ ಬಡತನ ಇದೆ. ಹೀಗಾಗಿ ಲಾಕ್‍ಡೌನ್ ನಿರ್ಬಂಧ ತೆರವಿನ ಸೂಚನೆ ಸಿಕ್ಕಿದೆ ಎಂದು ಹೇಳುವ ಮೂಲಕ ಮೇ 17ರ ನಂತರ ಲಾಕ್‍ಡೌನ್ ತೆರವು ಸುಳಿವು ನೀಡಿದರು.

    ನಮ್ಮ ರಾಜ್ಯದಲ್ಲಿ ಒಳ್ಳೆಯ ಪ್ರವಾಸಿ ತಾಣಗಳು ಇವೆ. ಆದರೆ ಕೊರೊನದಿಂದಾಗಿ ಪ್ರವಾಸಕ್ಕೆ ತೊಂದರೆಯಾಗಿದೆ. 6 ತಿಂಗಳಿನಿಂದ ಒಂದು ವರ್ಷ ನಮ್ಮ ಇಲಾಖೆ ಚೇತರಿಸಿಕೊಳ್ಳಲು ಕಷ್ಟ, ನನ್ನ ಬಳಿ ಇರುವ ಮೂರು ಇಲಾಖೆಗಳು ಸಂತೃಪ್ತಿ ಸಮಯದಲ್ಲಿ ನಡೆಯುವ ಇಲಾಖೆಗಳು. ಆದರೆ ಕೊರೊನಾ ವೈರಸ್‍ನಿಂದಾಗಿ ಸಾಕಷ್ಟು ಸಮಸ್ಯೆಯಾಗಿದೆ ಎಂದು ಸಿ.ಟಿ.ರವಿ ತಿಳಿಸಿದರು.

  • ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ವಾರ್ನಿಂಗ್ ಕೊಟ್ಟು ಆಹಾರ ಕಿಟ್ ಹಂಚಿದ ಗೋಪಾಲಯ್ಯ

    ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ವಾರ್ನಿಂಗ್ ಕೊಟ್ಟು ಆಹಾರ ಕಿಟ್ ಹಂಚಿದ ಗೋಪಾಲಯ್ಯ

    ಬೆಂಗಳೂರು: ಕೊರೊನಾ ಮಹಾಮಾರಿ ತೊಲಗುವ ತನಕ ಉಳ್ಳವರು ಬಡವರಿಗೆ ನೆರವು ನೀಡಿ ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಕೆ. ಗೋಪಾಲಯ್ಯ ಮನವಿ ಮಾಡಿದರು.

    ಬೆಂಗಳೂರು ಹೊರವಲಯ ಟಿ. ದಾಸರಹಳ್ಳಿಯ ಚೊಕ್ಕಸಂದ್ರ ಮುಖ್ಯ ರಸ್ತೆಯಲ್ಲಿ ಪಾಲಿಕೆ ಸದಸ್ಯೆ ಸರ್ವಮಂಗಳ, ಸಿ.ಎಂ ನಾಗರಾಜು ಹಾಗೂ ಸೆಮಿ ಲ್ಯಾಬ್ ಕಂಪನಿ ವತಿಯಿಂದ ಬಡವರಿಗೆ ದಿನಸಿ ಕಿಟ್ ವಿತರಿಸುವ ಕಾರ್ಯಕ್ರಮಕ್ಕೆ ಗೋಪಾಲಯ್ಯ ಅವರು ಚಾಲನೆ ನೀಡಿದರು. ಬಳಿಕ ಈ ಬಗ್ಗೆ ಮಾತನಾಡಿದ ಅವರು, ಪಡಿತರ ಚೀಟಿದಾರರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯ ದಿನಸಿ ವಿತರಿಸುತ್ತಿವೆ. ಕಡು ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಬಿಜೆಪಿ ಜನಪ್ರತಿನಿಧಿಗಳು ಹಾಗೂ ಮುಖಂಡರು ನೆರವು ನೀಡುತ್ತಿರುವುದು ಉತ್ತಮ ಬೆಳವಣಿಗೆಯಾಗಿದ್ದು, ಕೊರೊನಾ ಇರುವವರೆಗೆ ಜನಸೇವೆ ಮುಂದುವರೆಸುತ್ತೇವೆ ಎಂದರು. ಅಲ್ಲದೆ ಹೊರ ಜಿಲ್ಲೆಯ ಹಾಗೂ ಹೊರ ತಾಲೂಕಿನ ಎಲ್ಲಾ ಕುಟುಂಬಗಳಿಗೆ ಹತ್ತಿರದ ನ್ಯಾಯ ಬೆಲೆ ಅಂಗಡಿಯವರು ದಿನಸಿ ವಿತರಣೆ ಮಾಡಬೇಕು ಎಂದು ಎಚ್ಚರಿಕೆ ನೀಡಿದರು.

    ನಂತರ ಟಿ. ದಾಸರಹಳ್ಳಿಯ ಮಾಜಿ ಶಾಸಕ ಮುನಿರಾಜು ಮಾತನಾಡಿ, ಸಂಕಷ್ಟದ ಸಮಯದಲ್ಲಿ ಸಂತ್ರಸ್ತರ ನೆರವಿಗೆ ಜನಪ್ರತಿನಿಧಿಗಳೊಂದಿಗೆ ಸಂಘ ಸಂಸ್ಥೆಗಳು ಕೈಜೋಡಿಸಿದೆ. ಇದರಿಂದ ಅಸಹಾಯಕರಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಸೆಮಿ ಲ್ಯಾಬ್ ಕಾರ್ಖಾನೆ ಮಾಲೀಕ ಡಾ. ಮಹಮದ್ ಮಜೀದ್, ಸಿಇಒ ನೀರಜಾ ಶೆಟ್ಟಿ, ಎಂ.ಸಿ ಮುನಿರಾಜು, ನಿಸರ್ಗ ಕೆಂಪರಾಜು, ಕೆ. ಮುನಿರಾಜು, ಜಗದೀಶ್, ಮಂಜುನಾಥ್ ಮೊದಲಾದವರು ಭಾಗಿಯಾಗಿದ್ದರು.

  • 200 ಆಟೋ ಚಾಲಕರಿಗೆ ಸಹಾಯ ಹಸ್ತ ಚಾಚಿದ ಸೀರಿಯಲ್ ನಿರ್ಮಾಪಕ

    200 ಆಟೋ ಚಾಲಕರಿಗೆ ಸಹಾಯ ಹಸ್ತ ಚಾಚಿದ ಸೀರಿಯಲ್ ನಿರ್ಮಾಪಕ

    ಮಡಿಕೇರಿ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಇಡೀ ದೇಶವೇ ಲಾಕ್‍ಡೌನ್ ಆದ ಬಳಿಕ ಕೋಟ್ಯಂತರ ಜನರ ಆರ್ಥಿಕ ಪರಿಸ್ಥಿತಿ ತೀರ ಹದಗೆಟ್ಟಿದೆ. ಅದರಲ್ಲಿ ಆಟೋ ಚಾಲಕರ ಸ್ಥಿತಿಯೋ ಗಂಭೀರವಾಗಿದೆ. ಇದನ್ನು ಮನಗಂಡ ಸೀರಿಯಲ್ ನಿರ್ಮಾಪಕಯೊಬ್ಬರು 200 ಆಟೋ ಚಾಲಕರಿಗೆ 1 ಲಕ್ಷ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳನ್ನು ವಿತರಣೆ ಮಾಡಿ ಸಹಾಯ ಮಾಡಿದ್ದಾರೆ.

    ಕೊಡಗು ಜಿಲ್ಲೆಯ ಕುಶಾಲನಗರದ ನಿರ್ಮಾಪಕ ಮತ್ತು ಉದ್ಯಮಿಯಾಗಿರುವ ಉಮಾಶಂಕರ್ ಅವರು ಸ್ವತಃ ಆಟೋ ಚಾಲಕರಾಗಿದ್ದವರು. ಇಂದು ಆರ್ಥಿಕವಾಗಿ ಸುಧಾರಣೆ ಆಗಿರುವ ಉಮಾಶಂಕರ್ ಕೊರೊನಾದಿಂದ ತಮ್ಮ ಸಹಉದ್ಯೋಗಿಗಳಾಗಿದ್ದ ಆಟೋ ಚಾಲಕರು ತೀವ್ರ ಸಮಸ್ಯೆಗೆ ಸಿಲುಕಿದ್ದಾರೆ ಎಂದು ಅವರಿಗೆ ಸಹಾಯ ಮಾಡಿದ್ದಾರೆ. ಸುಮಾರು 200 ಆಟೋ ಚಾಲಕರಿಗೆ ಉಮಾಶಂಕರ್ ಲಕ್ಷ ರೂಪಾಯಿ ಮೌಲ್ಯದ ಆಹಾರ ಪದಾರ್ಥಗಳ ಕಿಟ್ ಅನ್ನು ವಿತರಣೆ ಮಾಡಿದರು.

    ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರಿಂದ ಆಟೋ ಚಾಲಕರಿಗೆ ಉಮಾಶಂಕರ್ ಕಿಟ್ ವಿತರಣೆ ಮಾಡಿಸಿದರು. ಕುಶಾಲನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಮುಖಂಡರು ಆಟೋ ಚಾಲಕರನ್ನು ನಿಲ್ಲಿಸಿದರು. ಪ್ರತೀ ಆಟೋ ಚಾಲಕರಿಗೆ ಹ್ಯಾಂಡ್ ಸ್ಯಾನಿಟೈಸರ್ ನೀಡಿ ಬಳಿಕ ಸಾಮಾಜಿಕ ಅಂತರ ಕಾಯ್ದುಕೊಂಡೇ ಕಿಟ್ ವಿತರಣೆ ಮಾಡಲಾಯಿತು.

    ಈ ವೇಳೆ ಮಾತನಾಡಿದ ಉಮಾಶಂಕರ್ ಅವರು, ಯಾರೂ ಸಹಾಯ ಮಾಡಿ ಎಂದು ಕೇಳುವುದಿಲ್ಲ. ಆದರೆ ಇಂತಹ ಸ್ಥಿತಿಯಲ್ಲಿ ಜನರ ಪರಿಸ್ಥಿತಿ ಅರ್ಥ ಮಾಡಿಕೊಂಡು ನಿಮ್ಮ ಮನೆಗಳ ಸುತ್ತಮುತ್ತಲಿರುವ ಬಡ ಜನರಿಗೆ ಸಹಾಯ ಮಾಡಿ ಎಂದು ಮನವಿ ಮಾಡಿದರು.

  • ಕೊಲ್ಲೂರು ಮೂಕಾಂಬಿಕಾದಿಂದ 18 ಸಾವಿರ ಯಕ್ಷಗಾನ ಕಲಾವಿದರಿಗೆ ಸಹಾಯ

    ಕೊಲ್ಲೂರು ಮೂಕಾಂಬಿಕಾದಿಂದ 18 ಸಾವಿರ ಯಕ್ಷಗಾನ ಕಲಾವಿದರಿಗೆ ಸಹಾಯ

    – 20 ಲಕ್ಷ ಮೌಲ್ಯದ ಆಹಾರ ಕಿಟ್ ವಿತರಣೆ

    ಉಡುಪಿ: ಕೊರೊನಾ ಲಾಕ್ ಡೌನ್ ಸಂದರ್ಭ ಯಕ್ಷಗಾನ ಕಲಾವಿದರು ಸೇವಾ ಆಟ, ಸಾರ್ವಜನಿಕ ಪ್ರದರ್ಶನ ಇಲ್ಲದೆ ಕಂಗಾಲಾಗಿದ್ದಾರೆ. ಸಂಕಷ್ಟದಲ್ಲಿರುವ ನಾಲ್ಕು ಜಿಲ್ಲೆಯ ಕಲಾವಿದರ ಸಹಾಯಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಮುಂದೆ ಬಂದಿದೆ.

    ಕೊರೊನಾ ಆವರಿಸಿದ ನಂತರ ಯಕ್ಷಗಾನ ಮೇಳಗಳ ತಿರುಗಾಟವೆಲ್ಲ ರದ್ದಾಗಿದೆ. ಕರಾವಳಿ ಭಾಗದಲ್ಲಂತೂ ಯಕ್ಷಗಾನ ಕಲಾವಿದರಿಗೆ ಸೆಲೆಬ್ರಿಟಿ ಸ್ಥಾನಮಾನವಿದೆ. ಕಷ್ಟಕಾಲದಲ್ಲಿ ಬೇರೆಯವರಿಂದ ಸಹಾಯ ಯಾಚಿಸಲು ಕಲಾವಿದರಿಗೆ ಸ್ವಾಭಿಮಾನ ಬಿಡುವುದಿಲ್ಲ. ಕೊನೆಗೂ ಯಕ್ಷಗಾನ ಕಲಾವಿದರ ಕಷ್ಟ ಸರ್ಕಾರದ ಅರಿವಿಗೆ ಬಂದಿದೆ. ತಿರುಗಾಟ ಇಲ್ಲದೆ ನಲುಗಿ ಹೋಗಿರುವ ಕಲಾವಿದರಿಗೆ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಆಹಾರದ ಕಿಟ್ ವಿತರಿಸಿದ್ದಾರೆ.

    ಉಡುಪಿ ಯಕ್ಷಗಾನ ಕಲಾರಂಗದ ಮುತುವರ್ಜಿಯಿಂದ ವಿವಿಧ ಯಕ್ಷಗಾನ ಮೇಳಗಳಲ್ಲಿ ದುಡಿಯುವ 1,800 ಕಲಾವಿದರನ್ನು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ಕೈ ಹಿಡಿದಿದೆ. ದೇಗುಲದ ವತಿಯಿಂದ ಯಕ್ಷಗಾನ ಕಲಾವಿದರಿಗೆ ದಿನಸಿ ಕಿಟ್ ಗಳ ವಿತರಣೆ ಮಾಡಲಾಯ್ತು. ಸುಮಾರು 20 ಲಕ್ಷ ಮೌಲ್ಯದ ಆಹಾರದ ಕಿಟ್ ಗಳನ್ನು ನೀಡಲಾಯ್ತು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಈ ಸಹಾಯ ಹಸ್ತಕ್ಕೆ ಚಾಲನೆ ನೀಡಿದರು. ದ.ಕ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗದ ಕಲಾವಿದರಿಗೆ ನೆರವು ನೀಡಲಾಗಿದೆ. ಉಡುಪಿಯ ಯಕ್ಷಗಾನ ಕಲಾರಂಗಸಂಸ್ಥೆಯ ಸಹಕಾರ ದಲ್ಲಿ ಕಿಟ್ ವಿತರಣೆ ಮಾಡಲಾಯ್ತು. ಕಿಟ್ ಹಂಚುವಾಗಲೂ ವಿಶೇಷ ಕ್ರಮ ಅನುಸರಿಸಲಾಗಿದೆ.

    ಕಲಾವಿದರನ್ನು ಕರೆಸಿಕೊಂಡು ಕಿಟ್ ನೀಡಿ ಅವರನ್ನು ಚಿಕ್ಕವರನ್ನಾಗಿಸದೆ, ಅವರಿದ್ದಲ್ಲಿಗೇ ಹೋಗಿ ಆಯಾ ಊರುಗಳಲ್ಲಿ ಕಿಟ್ ಹಸ್ತಾಂತರ ಮಾಡಲಾಗಿದೆ. ಈ ವೇಳೆ ಮಾತನಾಡಿದ ಸಚಿವರು, ಯಕ್ಷಗಾನ ಕ್ಷೇತ್ರದಲ್ಲಿ ಸಾವಿರಾರು ಕಲಾವಿದರು ಇನ್ನೂ ಬಡತನದಲ್ಲಿದ್ದಾರೆ. ಯಕ್ಷಗಾನ ಸೇವೆ ನಡೆದರೆ ಮಾತ್ರ ಅವರ ಹೊಟ್ಟೆ ತುಂಬುವ ಪರಿಸ್ಥಿತಿ ಇದೆ. ಯಕ್ಷಗಾನದಲ್ಲಿ ಕಲಾವಿದರು ಕಷ್ಟದಲ್ಲಿರುವಾಗ ಅವರ ಕೈ ಹಿಡಿಯುವುದು ನಮ್ಮ ಕರ್ತವ್ಯ ಎಂದರು.

    ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್ ಗೆ ಕಿಟ್ ಗಳನ್ನು ಸಾಂಕೇತಿಕವಾಗಿ ಹಸ್ತಾಂತರಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತ್ತುಗುಂಡಿ, ಸಹಾಯಕ ಇ ಒ ಕೃಷ್ಣಮೂರ್ತಿ, ಮೇಳಗಳ ಯಜಮಾನ ಪಿ ಕಿಶನ್ ಹೆಗ್ಡೆ, ಕಲಾರಂಗದ ಪಧಿಕಾರಿಗಳಾದ ಎಸ್ ವಿ ಭಟ್, ಗಂಗಾಧರ ರಾವ್, ನಾರಾಯಣ ಹೆಗಡೆ, ಗಣೇಶ್ ಬ್ರಹ್ಮಾವರ, ಅಜಿತ್ ರಾವ್, ಎಚ್ ಎನ್ ಶೃಂಗೇಶ್ವರ, ರಾಜೇಶ್ ನಾವಡ, ಹೆಚ್ ಎನ್ ವೆಂಕಟೇಶ್, ಕಿಶೋರ್ ಆಚಾರ್ಯ, ಸನಕ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.

    ಈ ಮೂಲಕ ಕಲಾವಿದರಿಗೆ ನೆರವು ನೀಡಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ, ಸಚಿವರಿಗೆ, ದೇವಳದ ಆಡಳಿತ ಮಂಡಳಿಗೆ ಕಲಾರಂಗದ ಕಾರ್ಯದರ್ಶಿ ಮುರಳಿ ಕಡೆಕಾರ್ ಕೃತಜ್ಞತೆ ಅರ್ಪಿಸಿದರು.

  • ಆಹಾರ ಕಿಟ್ ವಿತರಿಸಿದ ಮಾಜಿ ಸಚಿವ ಎಂಟಿಬಿ ನಾಗರಾಜ್‍

    ಆಹಾರ ಕಿಟ್ ವಿತರಿಸಿದ ಮಾಜಿ ಸಚಿವ ಎಂಟಿಬಿ ನಾಗರಾಜ್‍

    ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಮೈಲನಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಎಂ.ಟಿ.ಬಿ. ನಾಗರಾಜ್ ಗ್ರಾಮದ ಬಡಜನರಿಗೆ ಆಹಾರ ಕಿಟ್ ವಿತರಣೆ ಮಾಡಿದರು

    ಕೊರೊನಾ ಮಹಾಮಾರಿಯಿಂದ ದೇಶಾದ್ಯಂತ ಲಾಡ್‍ಡಾನ್ ಆಗಿದೆ. ಪರಿಣಾಮ ಎಲ್ಲರಿಗೂ ತೊಂದರೆಯಾಗುತ್ತಿದೆ. ಆದ್ದರಿಂದ ನನ್ನ ಕೈಲಾದ ಸಹಾಯ ಮಾಡುತ್ತಿದ್ದೇನೆ. ಹೊಸಕೋಟೆಯಲ್ಲಿ ದಿನ ಸಹಾಯ ಮಾಡುತ್ತಿದ್ದೇನೆ ಮತ್ತು ಇಂದು ನೆಲಮಂಗಲದ ಮೈಲನಳ್ಳಿಯಲ್ಲಿ ವಾಸವಾಗಿರುವ ಬಡವರಿಗೆ ಆಹಾರ ಕಿಟ್ ಕೊಡುತ್ತಿದ್ದೇನೆ ಎಂದು ಎಂಟಿಬಿ ನಾಗರಾಜ್ ಮಾಧ್ಯಮಗಳಿಗೆ ತಿಳಿಸಿದರು.

    ವಿದೇಶದಿಂದ ಬರುವ ಜನರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕ್ವಾರಂಟೈನ್ ಮಾಡಬೇಕು. ಅವರು ನಮ್ಮವರು ನಮ್ಮ ಕನ್ನಡಿಗರು. ಅವರಿಗೆ ಸರ್ಕಾರ ಕ್ವಾರಂಟೈನ್ ವಿಚಾರದಲ್ಲಿ ಎಲ್ಲಾ ಕ್ರಮ ಕೈಗೊಳ್ಳಬೇಕು. ಅವರು ನಮ್ಮವರು ಆದರೆ ಯಾಕೋ ಗೊತ್ತಿಲ್ಲ ನಾಲ್ಕು ತಾಲೂಕಿನ ಶಾಸಕರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದರು. ಈ ವೇಳೆ ಮಾಜಿ ಶಾಸಕ ನಾಗರಾಜು, ಭವಾನಿ ಗ್ರೂಪ್ ಮಾಲೀಕ ಮಂಜುನಾಥ್, ಮೈಲನಳ್ಳಿಯ ಪ್ರಶಾಂತ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

  • ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದವ್ರ ನೆರವಿಗೆ ನಿಂತ ಜಿಮ್ ಮಾಲೀಕ

    ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದವ್ರ ನೆರವಿಗೆ ನಿಂತ ಜಿಮ್ ಮಾಲೀಕ

    – ಸನ್ಮಾನಿಸಿದ ಶಾಲುಗಳನ್ನೇ ನಿರ್ಗತಿಕರಿಗೆ ದಾನ ಮಾಡಿದ್ರು

    ಬೆಂಗಳೂರು: ಲಾಕ್‍ಡೌನ್ ಜಾರಿಯಾದ ಬಳಿಕ ನಗರದಲ್ಲಿರುವ ಭಿಕ್ಷುಕರು ಮತ್ತು ವಲಸೆ ಕಾರ್ಮಿಕರು ಆಹಾರಕ್ಕಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಇಂತಹ ಸಂತ್ರಸ್ತರಿಗೆ ವಿಜಯನಗರದ ಐರನ್ ಟೆಂಪಲ್ ಜಿಮ್ ಮಾಲೀಕ ಒಡಿ ಇಂಡಿಯಾ ವಿಶ್ವಾಸ್‍ಗೌಡ ನೆರವಾಗಿದ್ದಾರೆ. ನಿತ್ಯ ನೂರಾರು ಜನ್ರಿಗೆ ಉಚಿತವಾಗಿ ಆಹಾರ ನೀರು ಪೂರೈಸುತ್ತಿದ್ದಾರೆ.

    ಲಾಕ್‍ಡೌನ್‍ನಿಂದಾಗಿ ತಮ್ಮ ಊರುಗಳಿಗೂ ಹೋಗಲಾಗದೆ, ಇತ್ತ ನಗರದಲ್ಲಿಯೂ ಇರಲಾಗದೆ ಸಣ್ಣಪುಟ್ಟ ಶೆಡ್ ಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಹಾಗೂ ವಿವಿಧ ಸಮುದಾಯ ಭವನಗಳಲ್ಲಿರುವ ಕಾರ್ಮಿಕರಿಗೆ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.

    ಪ್ರೊಫೆಷನಲ್ ಬಾಡಿಬಿಲ್ಡರ್ ಆಗಿರುವ ವಿಶ್ವಾಸ್‍ಗೌಡ ಲಾಕ್‍ಡೌನ್ ಜಾರಿಯಾದ ಬಳಿಕ ಆಹಾರವಿಲ್ಲದೆ ಪರದಾಡುತ್ತಿದ್ದ ಜನರಿಗೆ ನೆರವಾಗಲು ತಮ್ಮದೇ ಜಿಮ್‍ನಲ್ಲಿ ಕಸರತ್ತು ಮಾಡುತ್ತಿದ್ದ ಯುವಕರ ಗುಂಪು ಕಟ್ಟಿಕೊಂಡು ಈ ಅನ್ನ ದಾಸೋಹ ಕಾರ್ಯ ಆರಂಭಿಸಿದ್ದಾರೆ.

    ಕಳೆದ 20 ದಿನಗಳಿಂದ ಪ್ರತಿದಿನ ಆಹಾರ ಮತ್ತು ಬಡ ಕುಟುಂಬದವರಿಗೆ ರೇಷನ್ ಕಿಟ್ (ಅಕ್ಕಿ, ಬೇಳೆ, ಸಕ್ಕರೆ, ರವೆ, ಉಪ್ಪು, ಎಣ್ಣೆ ಈರುಳ್ಳಿ, ಸೋಪ್) ಗಳನ್ನು ಹಂಚುತ್ತಿದ್ದಾರೆ. ಜೊತೆಗೆ ನಿರ್ಗತಿಕರಿಗೆ ಹೊದ್ದು ಮಲಗಲು ತಮಗೆ ಸನ್ಮಾನಿಸಿದ ಶಾಲುಗಳನ್ನೇ ಕೊಟ್ಟು ಹೃದಯ ವೈಶಾಲ್ಯತೆ ಮೆರೆಯುತ್ತಿದ್ದಾರೆ.

  • ಪತಿ ಚಿಕಿತ್ಸೆಗೆ ತಾಳಿ ಮಾರಿದ ಪತ್ನಿ ಪ್ರಕರಣ- ಪಬ್ಲಿಕ್ ಟಿವಿ ವತಿಯಿಂದ ಮಾತ್ರೆ ವ್ಯವಸ್ಥೆ

    ಪತಿ ಚಿಕಿತ್ಸೆಗೆ ತಾಳಿ ಮಾರಿದ ಪತ್ನಿ ಪ್ರಕರಣ- ಪಬ್ಲಿಕ್ ಟಿವಿ ವತಿಯಿಂದ ಮಾತ್ರೆ ವ್ಯವಸ್ಥೆ

    ಚಿಕ್ಕಬಳ್ಳಾಪುರ: ಗಂಡನ ಹೃದಯ ಸಂಬಂಧಿ ಸಮಸ್ಯೆಗೆ ಚಿಕಿತ್ಸೆ ಕೊಡಿಸಲು ಪತ್ನಿ ತನ್ನ ತಾಳಿಯನ್ನೇ ಮಾರಿದ ಪ್ರಕರಣದ ಪಬ್ಲಿಕ್ ಟಿವಿ ವರದಿಗೆ ಹಲವರು ಸ್ಪಂದಿಸಿ ಸಹಾಯ ಹಸ್ತ ಚಾಚಿದ್ದಾರೆ.

    ಜಿಲ್ಲೆಯ ಚಿಂತಾಮಣಿ ತಾಲೂಕಿನ ಕೆ.ಕುರಪ್ಪಲ್ಲಿ ಗ್ರಾಮದ ಲಿಂಗಪ್ಪ ಅವರಿಗೆ ಹೃದಯಾಘಾತವಾಗಿತ್ತು. ಆ ವೇಳೆ ಪತಿಯ ಶಸ್ತ್ರಚಿಕಿತ್ಸೆಗೆ ಪತ್ನಿ ಬೀರಮ್ಮ ತಮ್ಮ ತಾಳಿಯನ್ನು ಮಾರಿ ಹಣ ಹೊಂದಿಸಿದ್ದರು. ಆದರೆ ಕೊರೊನಾ ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೂಲಿ ಕೆಲಸವೂ ಇಲ್ಲದೇ ದಂಪತಿ ಸಮಸ್ಯೆ ಎದುರಿಸಿದ್ದರು.

    ಪತಿಯ ಚಿಕಿತ್ಸೆಗೆ ಮಾತ್ರೆಗಳನ್ನು ಸಹ ಕೊಡಿಸಲು ಬೀರಮ್ಮ ಸಮಸ್ಯೆ ಎದುರಿಸಿದ್ದರು. ಅಲ್ಲದೇ ಅವರ ಜೀವನ ನಿರ್ವಹಣೆ ಕೂಡ ಕಷ್ಟವಾಗಿತ್ತು. ಈ ಬಗ್ಗೆ ನಿಮ್ಮ ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಗೆ ಸ್ಪಂದಿಸಿದ ಬಿಜೆಪಿ ಮುಖಂಡರಾದ ಮುನಿರಾಮು, ಕೃಷ್ಣಾರೆಡ್ಡಿ ಅವರು ಚಿಕ್ಕಬಳ್ಳಾಪುರ ನಗರದಿಂದ ಕುರಪ್ಪಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಮಾತ್ರೆ ನೀಡಿದ್ದಾರೆ. ಅಲ್ಲದೇ ಹಲವರು ದಂಪತಿಯ ಸಂಕಷ್ಟಕ್ಕೆ ಸ್ಪಂದಿಸಿ ಧನಸಹಾಯ ಹಾಗೂ ದಿನಸಿ ಕಿಟ್ ಸೇರಿದಂತೆ ತರಕಾರಿ ವಿತರಣೆ ಮಾಡಿದ್ದಾರೆ.

    ದೂರದ ಪೋಲ್ಯಾಂಡ್ ದೇಶದಲ್ಲಿರೋ ಕನ್ನಡಿಗರೊಬ್ಬರು ಬೀರಮ್ಮ ಅವರ ಬ್ಯಾಂಕ್ ಖಾತೆಗೆ ಧನಸಹಾಯ ಮಾಡಿರುವುದಾಗಿ ತಿಳಿಸಿದ್ದಾರೆ. ಹಲವರು ಮಹಿಳೆಯ ಬ್ಯಾಂಕ್ ಖಾತೆ ನಂಬರ್ ಪಡೆದುಕೊಳ್ಳುತ್ತಿದ್ದು, ಧನಸಹಾಯ ಮಾಡುವುದಾಗಿ ತಿಳಿಸಿದ್ದಾರೆ.

  • ಬಡವರಿಗೆ ಹೆಚ್.ಡಿ ದೇವೇಗೌಡರ ನೇತೃತ್ವದಲ್ಲಿ ದಿನಸಿ ಕಿಟ್ ಹಂಚಿಕೆ

    ಬಡವರಿಗೆ ಹೆಚ್.ಡಿ ದೇವೇಗೌಡರ ನೇತೃತ್ವದಲ್ಲಿ ದಿನಸಿ ಕಿಟ್ ಹಂಚಿಕೆ

    – ಕೋಳಿ, ಮೊಟ್ಟೆಗಾಗಿ ಮುಗಿಬಿದ್ದ ಜನ

    ಬೆಂಗಳೂರು: ಬೆಂಗಳೂರು ಹೊರವಲಯ ಟಿ. ದಾಸರಹಳ್ಳಿ ಕ್ಷೇತ್ರದ ಲಕ್ಷ್ಮೀಪುರ ಗ್ರಾಮದಲ್ಲಿ ಇಂದು ಬಡ ಹಾಗೂ ಕೂಲಿ ಕಾರ್ಮಿಕರಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೆಗೌಡ ಅವರ ನೇತೃತ್ವದಲ್ಲಿ ದಿನಸಿ ಕಿಟ್ ವಿತರಣೆ ಮಾಡಲಾಯಿತು.

    ದೇವೇಗೌಡರು ಕಿಟ್ ವಿತರಣೆ ಮಾಡಿ ಕಾರ್ಯಕ್ರಮದಿಂದ ಹೊರಡುತ್ತಿದ್ದಂತೆ, ಕೋಳಿ ಪಡೆಯಲು ಸಾವಿರಾರು ಜನರು ಬಿರುಬಿಸಿಲನ್ನು ಲೆಕ್ಕಿಸದೆ ಸರತಿ ಸಾಲಿನಲ್ಲಿ ನಿಂತರು. ಸುಮಾರು 2000 ಜನರಿಗೆ ಸ್ಥಳೀಯ ಮುಖಂಡ ಚರಣ್‍ಗೌಡ ಆಹಾರ ಕಿಟ್ ವಿತರಣೆ ಮಾಡುತ್ತಿದ್ದು, ದಿನಸಿ, ಮೊಟ್ಟೆ ಹಾಗೂ ಕೋಳಿಗಾಗಿ ಜನರು ಮುಗಿಬಿದ್ದರು. ಕೆಲವೊಮ್ಮೆ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಜನರು ಕೋಳಿ ಪಡೆಯಲು ಮುಂದಾದ ಘಟನೆಯೂ ನಡೆಯಿತು.

    ಇದೇ ವೇಳೆ ಶಾಸಕ ಮಂಜುನಾಥ್ ಸರ್ಕಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ವಿರುದ್ಧ ಕಿಡಿಕಾರಿದರು. ಸರ್ಕಾರದಿಂದ ನೀಡುತ್ತಿರುವ ಆಹಾರ ಕಿಟ್‍ಗಳು ಬಿಜೆಪಿ ಕಾರ್ಯಕರ್ತರ ಮನೆ ಸೇರುತ್ತಿದೆ. ಆದರೆ ನಮ್ಮ ಕಾರ್ಯಕರ್ತರು ಯಾವುದೇ ಪಕ್ಷ ಬೇದ ಮಾಡದೇ ಎಲ್ಲ ವರ್ಗದ ಜನರಿಗೆ ಈ ಕೊರೊನಾ ಲಾಕ್‍ಡೌನ್ ವೇಳೆ ಆಹಾರ ಕಿಟ್ ಹಂಚುವಲ್ಲಿ ಮತ್ತು ಸಹಾಯ ಮಾಡುವಲ್ಲಿ ಯಶಸ್ವಿಯಾಗಿದೆ ಎಂದರು.

  • ಮಗನ ಮದ್ವೆಗೆ ಖರ್ಚು ಮಾಡಬೇಕಿದ್ದ 5.5 ಕೋಟಿ ವೆಚ್ಚದಲ್ಲಿ 2 ಕ್ಷೇತ್ರಕ್ಕೆ ಆಹಾರ ಕಿಟ್ ವಿತರಣೆ: ಎಚ್‍ಡಿಕೆ

    ಮಗನ ಮದ್ವೆಗೆ ಖರ್ಚು ಮಾಡಬೇಕಿದ್ದ 5.5 ಕೋಟಿ ವೆಚ್ಚದಲ್ಲಿ 2 ಕ್ಷೇತ್ರಕ್ಕೆ ಆಹಾರ ಕಿಟ್ ವಿತರಣೆ: ಎಚ್‍ಡಿಕೆ

    – ನನ್ನ ಆಸೆಯಂತೆ ಮಗನ ವಿವಾಹ ನಡೆದಿಲ್ಲ
    – ನಿಖಿಲ್, ರೇವತಿಯಿಂದ ಕಿಟ್ ವಿತರಣೆಗೆ ಚಾಲನೆ

    ರಾಮನಗರ: ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕುಟುಂಬಸ್ಥರು ರಾಮನಗರ ಮತ್ತು ಚನ್ನಪಟ್ಟಣ ಜನರಿಗೆ ದಿನಸಿ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

    ರಾಮನಗರದ ಮಂಜುನಾಥ ಕನ್ವೆನ್ಷನ್ ಹಾಲ್‍ನಲ್ಲಿ ದಿನಸಿ ಕಿಟ್ ವಿತರಣೆ ಮಾಡಲು ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ, ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಸೊಸೆ ರೇವತಿ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಮೊದಲ ಬಾರಿಗೆ ಕುಟುಂಬದ ಜೊತೆ ನಿಖಿಲ್ ಪತ್ನಿ ರೇವತಿ ಕೂಡ ಆಗಮಿಸಿದ್ದರು. ಸುಮಾರು 60 ಸಾವಿರ ಬಡ ಕುಟುಂಬಳಿಗೆ ಅಕ್ಕಿ, ಬೇಳೆ ಸಕ್ಕರೆ ಇರುವ ಕಿಟ್‍ಗಳನ್ನ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.

    ಈ ವೇಳೆ ಮಾಧ್ಯಮಗಳ ಜೊತೆ ಕುಮಾರಸ್ವಾಮಿ, ಸುಮಾರು 1 ಲಕ್ಷದ 4 ಸಾವಿರ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ ನಡೆಯಲಿದೆ. ಚನ್ನಪಟ್ಟಣ ಹಾಗೂ ರಾಮನಗರ ಕ್ಷೇತ್ರಗಳ ಎಲ್ಲಾ ಮನೆಗಳಿಗೂ ಈ ಆಹಾರ ಕಿಟ್ ತಲುಪಲಿದೆ. ನನ್ನ ಮಗನ ಮದುವೆಯನ್ನು ರಾಮನಗರದಲ್ಲಿ ಮಾಡಬೇಕೆಂಬ ನನ್ನ ಆಸೆ ನಡೆಯಲಿಲ್ಲ. ಈ ಹಿನ್ನೆಲೆಯಲ್ಲಿ ಮದುವೆಗೆ ನಾನು ಏನು ಹಣ ವೆಚ್ಚ ಮಾಡಬೇಕು ಎಂದುಕೊಂಡಿದ್ದೆನೋ, ಆ ವೆಚ್ಚವನ್ನ ಎರಡು ಕ್ಷೇತ್ರಗಳಿಗೆ ವಿನಿಯೋಗ ಮಾಡುತ್ತಿದ್ದೇನೆ. ಐದೂವರೆ ಕೋಟಿ ವೆಚ್ಚದ ಸಾಮಗ್ರಿಗಳನ್ನು ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಮಗ ಮತ್ತು ಸೊಸೆಯನ್ನು ಕರೆದುಕೊಂಡು ಆಹಾರ ಕಿಟ್ ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ಕೊಡಿಸಿದ್ದೇನೆ. ಕ್ಷೇತ್ರದ ಶಾಸಕರು ಅವರವರ ಮನೆಗೆ ತಲುಪಿಸುವ ಕೆಲಸವನ್ನು ಈಗಾಗಲೇ ಶುರು ಮಾಡಿದ್ದಾರೆ ಎಂದು ತಿಳಿಸಿದರು.

    ಕೊರೊನಾದಿಂದ ಬಡವರ ಆರ್ಥಿಕ ಸ್ಥಿತಿ ಕೆಳಗೆ ಇಳಿದಿದೆ. ಬಡವರಿಗೆ ಇಂತಹ ಸಮಯದಲ್ಲಿ ಹಣ ಖರ್ಚು ಮಾಡುವುದು ಸರ್ಕಾರದ ಕರ್ತವ್ಯ. ಚಿತ್ರದುರ್ಗದ ಓರ್ವ ಮಹಿಳೆ ಈರುಳ್ಳಿ ಚೀಲದ ಮುಂದೆ ನಿಂತು ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸಿವುದಾಗಿ ಹೇಳಿದ್ದಾರೆ. ರಾಜ್ಯದ ಹಲವು ರೈತರ ಸಮಸ್ಯೆಗಳು ಕೂಡ ಇದೆ ರೀತಿ ಇದೆ. ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ರೈತರ ಸಮಸ್ಯೆಗಳಿಗೆ ಸ್ಪಂದನೆ ಮಾಡಬೇಕು. ರೈತರ ನೆರವಿಗೆ ಅಂತ ಸರ್ಕಾರದ ಅಧಿಕಾರಿಗಳು 450 ಕೋಟಿ ಪರಿಹಾರ ನೀಡಲು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಈ ಪರಿಹಾರವನ್ನಾದರೂ ಸರ್ಕಾರ ಬಿಡುಗಡೆ ಮಾಡಲಿ ಎಂದು ಕುಮಾರಸ್ವಾಮಿ ಸಿಎಂಗೆ ಮನವಿ ಮಾಡಿದರು.

    ರಾಜ್ಯದಲ್ಲಿ ಇನ್ನೂ 15 ದಿನಗಳ ಕಾಲ ಲಾಕ್‍ಡೌನ್ ಮುಂದುವರಿಸುವ ಬಗ್ಗೆ ಮಾಹಿತಿ ಇದೆ. ರಾಜ್ಯದ ಜನರಿಗೆ ಮನೆ ಬಾಡಿಗೆ, ವಿದ್ಯುತ್ ಬಿಲ್ ಹಾಗೂ ಶಾಲೆಯ ಶುಲ್ಕ ಕಟ್ಟಲು ವಿನಾಯಿತಿ ನೀಡಬೇಕು. ಸರ್ಕಾರ ತಗೆದುಕೊಳ್ಳುವ ನಿರ್ಣಯಗಳು ಬಡವರ ಪರವಾಗಿ ಇರಬೇಕು. ಕೇಂದ್ರ ಸರ್ಕಾರ 50 ಸಾವಿರ ಕೋಟಿ ಮ್ಯೂಚುಯಲ್ ಫಂಡ್ ತೆಗೆದುಕೊಂಡಿದೆ. ಇದು ಕೇವಲ ಉದ್ಯಮಿಗಳಿಗೆ ಮಾತ್ರ ಅನುಕೂಲವಾಗುತ್ತದೆ. ಅಂಬಾನಿ ಹಾಗೂ ಟಾಟಾ ಅಂತವರಿಗೆ ಮಾತ್ರ ಈ ಮ್ಯೂಚುಯಲ್ ಫಂಡ್ ಉಪಯೋಗವಾಗುತ್ತೆ. ಸಣ್ಣ ಕಾರ್ಖಾನೆ ನಡೆಸುವವರಿಗೆ ಇದು ನೆರವಾಗುವುದಿಲ್ಲ. ಸರ್ಕಾರ ಬಡವರಿಗೆ ಅನುಕೂಲವಾಗುವಂತೆ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.

  • ತಂದೆಯ ಪುಣ್ಯ ತಿಥಿಯ ಬದಲಿಗೆ ಬಡವರಿಗೆ ಆಹಾರ ಕಿಟ್ ವಿತರಿಸಿದ ಮಗ

    ತಂದೆಯ ಪುಣ್ಯ ತಿಥಿಯ ಬದಲಿಗೆ ಬಡವರಿಗೆ ಆಹಾರ ಕಿಟ್ ವಿತರಿಸಿದ ಮಗ

    ಕೋಲಾರ: ತಂದೆಯ ಪುಣ್ಯ ತಿಥಿಗಾಗಿ ಕೂಡಿಟ್ಟ ಹಣದಲ್ಲಿ ಪೋಸ್ಟ್ ಮಾಸ್ಟರ್ ಕೊರೊನಾ ಲಾಕ್‍ಡೌನ್‍ನಿಂದ ಕಂಗಾಲಾಗಿರುವ ಬಡವರು, ನಿರ್ಗತಿಕರಿಗೆ ದಿನಸಿ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಿ ಮಾದರಿಯಾಗಿದ್ದಾರೆ.

    ಕೋಲಾರ ನಗರದ ಗಲ್‍ಪೇಟೆ ನಿವಾಸಿ ಪೋಸ್ಟ್ ಮಾಸ್ಟರ್ ನಾರಾಯಣಸ್ವಾಮಿ ತನ್ನ ತಂದೆ ಬಂಗವಾದಿ ಮುನಿಸ್ವಾಮಿ ಅವರ 13ನೇ ವರ್ಷದ ಪುಣ್ಯ ತಿಥಿ ದಿನ ಆಹಾರ ಪದಾರ್ಥಗಳನ್ನ ವಿತರಣೆ ಮಾಡಿದರು. ಮೂಲತಃ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಬಂಗವಾದಿ ಗ್ರಾಮದವರಾದ ಮುನಿಸ್ವಾಮಿ ಅವರು ಕಾಲಾಧೀನರಾಗಿ 13 ವರ್ಷಗಳು ಮುಗಿದಿದೆ.

    ಹಾಗಾಗಿ ಭಾನುವಾರ ಮುನಿಸ್ವಾಮಿ ಅವರ ಪುಣ್ಯ ತಿಥಿ ಇತ್ತು. ಆದರೆ ಮಗ ನಾರಾಯಣಸ್ವಾಮಿ ಪುಣ್ಯ ತಿಥಿ ಮಾಡಿ ದುಂದು ವೆಚ್ಚ ಮಾಡುವ ಬದಲಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡುವ ಮೂಲಕ ವಿಭಿನ್ನವಾಗಿ ತಂದೆಯ ಸ್ಮರಣೆ ಮಾಡಿದರು.

    ಕೋಲಾರ ನಗರದ ಗಲ್‍ಪೇಟೆಯ ತಮ್ಮ ನಿವಾಸದಲ್ಲಿ 80ಕ್ಕೂ ಹೆಚ್ಚು ಬಡವರು ಹಾಗೂ ನಿರ್ಗತಿಕರಿಗೆ ಆಹಾರ ಪದಾರ್ಥಗಳ ಕಿಟ್‍ಗಳನ್ನ ವಿತರಣೆ ಮಾಡಿದ್ದಾರೆ. ಈ ಮೂಲಕ ಕೊರೊನಾ ಸಂಕಷ್ಟಕ್ಕೀಡಾದವರಿಗೆ ತಮ್ಮ ಕೈಲಾದ ಸಹಾಯ ಮಾಡಿದ್ದಾರೆ. ಈಗಾಗಲೇ ಒಂದೂವರೆ ತಿಂಗಳಿನಿಂದ ಕೊರೊನಾ ಲಾಕ್‍ಡೌನ್‍ನಿಂದಾಗಿ ಜನ ಕಂಗಾಲಾಗಿರುವುದನ್ನ ಅರಿತು ಈ ನಿರ್ಧಾರ ಮಾಡಿರುವುದಾಗಿ ಪೋಸ್ಟ್ ಮಾಸ್ಟರ್ ನಾರಾಯಣಸ್ವಾಮಿ ಹೇಳಿದ್ದಾರೆ.