Tag: ಆಸ್ಪತ್ರೆ ಸಿಬ್ಬಂದಿ

  • ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ನರಳಾಟ- ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಗೆ ದಾಖಲು

    ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿ ನರಳಾಟ- ಚಿಕಿತ್ಸೆ ಸಿಗದೆ ಖಾಸಗಿ ಆಸ್ಪತ್ರೆಗೆ ದಾಖಲು

    ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಗರ್ಭಿಣಿ ನರಳಾಡಿದ ಘಟನೆ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.

    ಕೋಲಾರ ತಾಲೂಕಿನ ಶಿವರಾಮಪುರ ಗ್ರಾಮ ಮಹಿಳೆ ಹೆರಿಗೆ ನೋವಿನಿಂದ ಬೆಳಿಗ್ಗೆ 6 ಗಂಟೆಯಿಂದಲೂ ನರಳಾಡುತ್ತಿದ್ದಳು. ತುಂಬು ಗರ್ಭಿಣಿ ಸುಮ ಹೊಟ್ಟೆಯಲ್ಲಿ ಮಗು ಸತ್ತು ಹೋಗಿತ್ತು. ಮಗು ತೀರಿ ಹೋಗಿದೆ, ತಾಯಿ ಆದರೂ ಬದುಕಿಸಿ ಎಂದು ಗರ್ಭೀಣಿ ಪೋಷಕರು ಹಾಗೂ ಪತಿ ಸುಬ್ರಮಣಿ ಕೇಳಿಕೊಳ್ಳುತ್ತಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಮಾತ್ರ ಕ್ಯಾರೆ ಅಂದಿಲ್ಲ. ಇದನ್ನೂ ಓದಿ: ಸೋಕಿನಿಂದ ಹಲವು ಕುಟುಂಬಗಳು ವಿನಾಶದ ಅಂಚಿನಲ್ಲಿವೆ – ಸಂಸದ ಎ.ನಾರಾಯಣ ಸ್ವಾಮಿ

    ನಮ್ಮಲ್ಲಿ ಚಿಕಿತ್ಸೆ ಲಭ್ಯವಿಲ್ಲ ಹಾಗಾಗಿ ನೀವು ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗಿ ಎಂದು ಸಿಬ್ಬಂದಿ ಹೇಳಿದ್ದಾರೆ. ನಮಗೆ ಇಲ್ಲೇ ಅಂದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿ ಎಂದು ಸಂಬಂಧಿಕರು ಪಟ್ಟು ಹಿಡಿದಿದ್ದರು. ಹೊಟ್ಟೆಯಲ್ಲಿ ಮಗು ಮೃತಪಟ್ಟಿರುವ ವಿಚಾರವನ್ನ ತಾಯಿಗೂ ತಿಳಿಸದೆ ಪತಿ ಹಾಗೂ ಪೋಷಕರು ಆಕೆಯನ್ನ ಕಾಯಿಸುತ್ತಿದ್ದರು. ಆದರೆ ಗರ್ಭೀಣಿ ಮಾತ್ರ ನನ್ನ ಮಗು ಇನ್ನು ಬದುಕಿದೆ ಎಂದು ಆಸೆಯಲ್ಲಿ ಇದ್ದಳು.

    ಗರ್ಭೀಣಿ ನರಳಾಟ ಎಂತಹ ಕಲ್ಲು ಮನಸ್ಸನ್ನು ಮೃದು ಮಾಡುವಂತ್ತಿದ್ದು, ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ಚಿಕಿತ್ಸೆ ನೀಡದೆ ತಡ ಮಾಡಿದ್ದಾರೆ. ಈ ಘಟನೆ ಆಸ್ಪತ್ರೆಗೆ ಬಂದಿದ್ದ ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ನಂತರ ಮಹಿಳೆಯನ್ನು ಅರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

  • ಆಸ್ಪತ್ರೆ ಸಿಬ್ಬಂದಿಯ 80 ಕಾರ್ ಸ್ಚಚ್ಛಗೊಳಿಸಿದ 10ರ ಪೋರ

    ಆಸ್ಪತ್ರೆ ಸಿಬ್ಬಂದಿಯ 80 ಕಾರ್ ಸ್ಚಚ್ಛಗೊಳಿಸಿದ 10ರ ಪೋರ

    ವಾಷಿಂಗ್ಟನ್: 10 ವರ್ಷದ ಬಾಲಕ ಹಾಗೂ ಆತನ ಕುಟುಂಬ ಸ್ನೇಹಿತರೊಬ್ಬರು ಆಸ್ಪತ್ರೆ ಸಿಬ್ಬಂದಿಯ 80 ಕಾರುಗಳ ಮೇಲೆ ಬಿದ್ದಿದ್ದ ಹಿಮವನ್ನು ಸ್ವಚ್ಛಗೊಳಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.

    ಕೊರೊನಾ ಸಂಕಷ್ಟದ ಸಮಯದಲ್ಲಿ ಎಲ್ಲರಿಗೂ ಮನೆಯಲ್ಲಿಯೇ ಕೆಲಸ ಮಾಡುವ ಅವಕಾಶವಿತ್ತು. ಆದರೆ ಆಸ್ಪತ್ರೆಯಲ್ಲಿ ಕೆಲಸ ಮಾಡುವವರಿಗೆ ಮಾತ್ರ ಯಾವುದೇ ರೀತಿಯ ವರ್ಕ್ ಫ್ರಮ್ ಹೋಮ್ ಇರಲಿಲ್ಲ. ಹಾಗಾಗಿ ಅವರಿಗಾಗಿ ಏನಾದರೂ ಮಾಡಬೇಕೆಂದು ತೀರ್ಮಾನಿಸಿದ್ದರು.

    ಫೆಬ್ರವರಿ 1 ರಂದು ಕ್ರಿಶ್ಚಿಯನ್ ಸ್ಟೋನ್(10) ಮತ್ತು ಅಬ್ಬೆ ಮೀಕರ್(29) ಎಂಬವರು ವೆಸ್ಟರ್ಲಿ ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶಕ್ಕೆ ತಲುಪಿ ಆಸ್ಪತ್ರೆ ಸಿಬ್ಬಂದಿ ಕಾರುಗಳ ಮೇಲಿನ ಹಿಮವನ್ನು ಸ್ವಚ್ಛಗೊಳಿಸಿದ್ದಾರೆ.

    ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ತಮಗಾಗಿ ನಿರಂತರವಾಗಿ ಕೆಲಸ ಮಾಡಿದ್ದ ಆಸ್ಪತ್ರೆ ಸಿಬ್ಬಂದಿಗಳಿಗೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕೆಂದು ಭಾವಿಸಿದ್ದರು. ಆಸ್ಪತ್ರೆ ಸಿಬ್ಬಂದಿ ಕಾರನ್ನು ಸ್ಟಾರ್ಟ್ ಮಾಡಲು ಬಂದಾಗ ಕಾರುಗಳನ್ನು ಸ್ವಚ್ಛಗೊಳಿಸುವ ಮೂಲಕ ಸಹಾಯ ಮಾಡಿದ್ದಾರೆ.

    ಪ್ರತಿ ದಿನ ಆಸ್ಪತ್ರೆಯ ಸಿಬ್ಬಂದಿ ಕೋವಿಡ್ ಸಾಂಕ್ರಾಮಿಕ ರೋಗದ ಜೊತೆ ಹೋರಾಡಿ ಮನೆಗೆ ಹಿಂದಿರುಗಲು ಹಿಮದಿಂದ ಕಷ್ಟ ಪಡುತ್ತಾರೆ. ಹಾಗಾಗಿ ಅವರ ಕಾರುಗಳ ಮೇಲಿನ ಹಿಮವನ್ನು ಸ್ವಚ್ಛಗೊಳಿಸುವ ಮೂಲಕ ನಾವು ಅವರಿಗೆ ಮನೆಗೆ ಹೋಗಲು ಸುಲಭವಾಗುವಂತೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಆದರೆ ಶಿಫ್ಟ್ ಮುಗಿಸಿಕೊಂಡು ಕಾರಿನ ಬಳಿ ಬಂದು ನೋಡಿದ ಅನೇಕ ಆರೋಗ್ಯ ಸಿಬ್ಬಂದಿ ಕಾರು ಸ್ವಚ್ಛಗೊಂಡಿರುವುದನ್ನು ಕಂಡು ಆಶ್ಚರ್ಯಗೊಂಡರು. ನಮ್ಮ ಈ ಪ್ರಯತ್ನಕ್ಕೆ ಆಸ್ಪತ್ರೆ ಸಿಬ್ಬಂದಿ ಧನ್ಯವಾದ ತಿಳಿಸಿದರು ಎಂದು ಸ್ಟೋನ್, ಮೇಕರ್ ಹೇಳಿದ್ದಾರೆ.

  • ಮೆಗ್ಗಾನ್ ಸಿಬ್ಬಂದಿ ಎಡವಟ್ಟು- ಆಸ್ಪತ್ರೆಯಲ್ಲಿ ಅಸುನೀಗಿದ ಮಗು ಅದಲು, ಬದಲು

    ಮೆಗ್ಗಾನ್ ಸಿಬ್ಬಂದಿ ಎಡವಟ್ಟು- ಆಸ್ಪತ್ರೆಯಲ್ಲಿ ಅಸುನೀಗಿದ ಮಗು ಅದಲು, ಬದಲು

    – ಪೊಲೀಸ್ ಠಾಣೆ ಮೆಟ್ಟಿಲೇರಿದ ಪೋಷಕರು

    ಶಿವಮೊಗ್ಗ: ಆಸ್ಪತ್ರೆಯಲ್ಲಿ ಮೃತಪಟ್ಟ ನವಜಾತ ಶಿಶುವನ್ನು ಪೋಷಕರಿಗೆ ನೀಡದೇ, ಬದುಕಿರುವ ಮಗುವಿನ ಪೋಷಕರಿಗೆ ಸಿಬ್ಬಂದಿ ನೀಡಿರುವ ಆಘಾತಕಾರಿ ಘಟನೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ.

    ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಣೆಬೆಳಕೆರೆ ನಿವಾಸಿಗಳಾದ ಸುಮಾ, ಅಂಜನಪ್ಪ ದಂಪತಿಗೆ ಕಳೆದ ಸೋಮವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಮಗು ಜನನವಾಗಿದೆ. ಅದೇ ದಿನ ಶಿವಮೊಗ್ಗ ಜಿಲ್ಲೆಯ ಸೊರಬದ ಸುಮಾ, ಗೋಪಾಲಪ್ಪ ದಂಪತಿಗೂ ಹೆಣ್ಣು ಮಗು ಜನಿಸಿದೆ. ಇಬ್ಬರ ಮಕ್ಕಳನ್ನು ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಈ ವೇಳೆ ಸುಮಾ-ಅಂಜನಪ್ಪನವರ ಗಂಡು ಮಗು ಮೃತವಾಗಿದೆ. ಸುಮಾ, ಗೋಪಾಲಪ್ಪ ದಂಪತಿಯ ಹೆಣ್ಣು ಮಗು ಚಿಕಿತ್ಸೆಯಲ್ಲಿದೆ. ಗಂಡು ಮಗು ಮೃತವಾಗುತ್ತಿದ್ದಂತೆಯೇ ಆಸ್ಪತ್ರೆಯ ಸಿಬ್ಬಂದಿ ಮೃತ ಮಗುವನ್ನು ಸೊರಬದ ಸುಮಾ ಅವರಿಗೆ ನೀಡಿ ಕಳುಹಿಸಿದ್ದಾರೆ.

    ಮೃತ ಮಗುವನ್ನು ಪಡೆದ ಸೊರಬದ ಸುಮಾ, ಗೋಪಾಲಪ್ಪ ದಂಪತಿ ಕಣ್ಣೀರು ಹಾಕುತ್ತಾ ಮಗುವನ್ನು ಪಡೆದುಕೊಂಡು ಆಸ್ಪತ್ರೆಯಿಂದ ತಮ್ಮ ಊರಿಗೆ ತೆರಳಿದ್ದಾರೆ. ಸಂಜೆ ವೇಳೆಗೆ ಇತ್ತ ಮಗು ನೋಡಲೆಂದು ತೀವ್ರ ನಿಗಾ ಘಟಕಕ್ಕೆ ಹೋದ ಸುಮಾ ಅಂಜನಪ್ಪನವರ ಪೋಷಕರಿಗೆ ವೈದ್ಯರು ನಿಮ್ಮ ಮಗು ಸಾವನ್ನಪ್ಪಿದೆ ಎಂದು ಹೇಳಿದ್ದಾರೆ. ಸುಮಾ ಅಂಜನಪ್ಪ ಅವರ ಮಗು ಜನಿಸಿದಾಗ ಮಗು ಒಂದೂವರೆ ಕೆ.ಜಿ ತೂಕ ಇದ್ದ ಕಾರಣ ಚಿಕಿತ್ಸೆಯಲ್ಲಿಡಲಾಗಿತ್ತು. ಸರಿ ಮೃತ ಮಗುವನ್ನು ನೀಡಿ ಎಂದು ಕೇಳಿದಾಗ ಆಸ್ಪತ್ರೆಯ ಸಿಬ್ಬಂದಿ ಮಾಡಿದ ಎಡವಟ್ಟು ಹೊರಬಿದ್ದಿದೆ.

    ಈ ವೇಳೆಗಾಗಲೇ ಸೊರಬದ ಸುಮಗೋಪಾಲಪ್ಪನವರು ಮಗುವನ್ನು ತಮ್ಮೂರಿಗೆ ತೆಗೆದು ಕೊಂಡು ಹೋಗಿ ಅಂತ್ಯಕ್ರಿಯೆಯನ್ನು ಸಹ ಮಾಡಿ ಮುಗಿಸಿದ್ದಾರೆ. ಆದರೆ ಅವರ ಮಗು ಆಸ್ಪತ್ರೆಯಲ್ಲೆ ಚಿಕಿತ್ಸೆ ಪಡೆಯುತ್ತಿದೆ. ಇದರಿಂದ ಕೋಪಗೊಂಡ ಸುಮಾ ಅಂಜನಪ್ಪ ಪೋಷಕರು ತಮಗೆ ಮಗು ಬೇಕು ಎಂದು ದೊಡ್ಡಪೇಟೆ ಪೊಲೀಸ್ ಠಾಣೆ ಮೇಟ್ಟಿಲೇರಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಲು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶ್ರೀಧರ್ ನಿರಾಕರಿಸಿದ್ದಾರೆ.

    ಇತ್ತ ಮೃತಪಟ್ಟ ಮಗುವಿನ ದೇಹವು ಸಿಗದೆ ಸುಮಾ ಅಂಜನಪ್ಪ ಕುಟುಂಬ ಪರದಾಡುವಂತಾಗಿದೆ. ಇಬ್ಬರು ಮಗುವಿನ ತಾಯಂದಿರ ಹೆಸರು ಒಂದೇ ಆಗಿದ್ದರಿಂದ ಹಾಗೂ ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯ ಬೇಜವಾಬ್ದಾರಿಯಿಂದಾಗಿ ಈ ರೀತಿಯ ಸಮಸ್ಯೆ ಉಂಟಾಗಿದೆ. ಮಗುವನ್ನು ಬದಲಾವಣೆ ಮಾಡಿ ನೋವಿಗೆ ಕಾರಣರಾದವರನ್ನು ಅಮಾನತು ಮಾಡಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ. ಅಲ್ಲದೆ ಘಟನೆ ಕುರಿತು ಮೃತ ಮಗುವಿನ ಪೋಷಕರು ದೊಡ್ಡಪೇಟೆ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

  • ಜಿಲ್ಲಾಸ್ಪತ್ರೆಯ ಗುತ್ತಿಗೆ ಸಿಬ್ಬಂದಿಗೆ 105 ಆಹಾರ ಕಿಟ್ ವಿತರಣೆ

    ಜಿಲ್ಲಾಸ್ಪತ್ರೆಯ ಗುತ್ತಿಗೆ ಸಿಬ್ಬಂದಿಗೆ 105 ಆಹಾರ ಕಿಟ್ ವಿತರಣೆ

    – ಪಬ್ಲಿಕ್ ಹೀರೋ ವಿಶು ಶೆಟ್ಟಿ ತಂಡದ ಸಹಾಯ

    ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಚ್ಛತಾ ಸಿಬ್ಬಂದಿ, ಡಿ ಗ್ರೂಪ್ ಸಿಬ್ಬಂದಿ ಹಾಗೂ ಇತರ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗೆ 105 ಆಹಾರ ವಸ್ತುಗಳ ಕಿಟ್ ವಿತರಿಸಲಾಯಿತು.

    ಸರಕಾರಿ ಆಸ್ಪತ್ರೆಯ ಕೆಲಸವಾದರೂ ಇವರು ಗುತ್ತಿಗೆ ಆಧಾರದಲ್ಲಿ ನೇಮಕವಾಗಿರುವುದರಿಂದ ಇವರ ವೇತನ ಬಹಳ ಕಡಿಮೆ. ಕೆಲವು ಸಿಬ್ಬಂದಿಯ ಜೀವನ ನಿರ್ವಹಣೆ ಕೊರೊನಾ ಸಮಸ್ಯೆಯಿಂದ ಇನ್ನಷ್ಟು ಬಿಗಡಾಯಿಸಿದೆ. ಈ ಬಗ್ಗೆ ಸಮಾಜ ಸೇವಕ, ಪಬ್ಲಿಕ್ ಹೀರೋ ವಿಶು ಶೆಟ್ಟಿಯವರಿಗೆ ಮಾಹಿತಿ ಸಿಕ್ಕಿದೆ.

    ವಿಶು ಶೆಟ್ಟಿಯವರಿಗೆ ತಿಳಿದ ಕೂಡಲೇ ತಮ್ಮ ಮಿತ್ರರಾದ ಡೊನಾಲ್ಡ್ ಸಾಲ್ದಾನರ ಗಮನಕ್ಕೆ ತಂದಿದ್ದಾರೆ. ತುರ್ತಾಗಿ ಸ್ಪಂದಿಸಿದ ಡೊನಾಲ್ಡ್ ಸಾಲ್ದಾನರವರು ನಾಗರಿಕ ಆರೋಗ್ಯ ವೇದಿಕೆ ಮತ್ತು ಎಸ್‍ವಿಪಿ ಫೌಂಡೇಶನ್ ಮುಖಾಂತರ 55 ಆಹಾರದ ಕಿಟ್ ನೀಡಿದ್ದಾರೆ. ಉಳಿದ 50 ಆಹಾರದ ಕಿಟ್ ವಿಶು ಶೆಟ್ಟಿಯವರು ನೀಡಿ ಸಹಕರಿಸಿದರು.

    ಕೊರೊನಾ ಸಂಕಷ್ಟದ ಪರಿಸ್ಥಿತಿಯಲ್ಲಿ ಸ್ವಚ್ಛತಾ ಸಿಬ್ಬಂದಿ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ಸೇವೆ ಅಮೂಲ್ಯದ್ದಾಗಿದೆ. ಅವರು ಅಸಹಾಯಕ ಪರಿಸ್ಥಿತಿಯಲ್ಲಿ ಇರುವುದಕ್ಕೆ ವಿಶು ಶೆಟ್ಟಿ ಬೇಸರ ವ್ಯಕ್ತಪಡಿಸಿದ್ದಾರೆ. ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಶ್ರಮಿಸುವ ವ್ಯಕ್ತಿಗೆ ಅಸಹಾಯಕತೆ ಬರಬಾರದು. ಸರ್ಕಾರ ಅವರ ಆರ್ಥಿಕ ಮತ್ತು ಮನೆಯ ಸ್ಥಿತಿಯನ್ನು ನಿಭಾಯಿಸಲು ಸಹಾಯ ಮಾಡಬೇಕು ಎಂದು ವಿಶು ಶೆಟ್ಟಿ ಪಬ್ಲಿಕ್ ಟಿವಿ ಮೂಲಕ ಒತ್ತಾಯಿಸಿದ್ದಾರೆ.

  • ಹಸಿದವರಿಗೆ ಉಚಿತ ಊಟ ನೀಡಲು ಡಿಕೆಶಿ ಸಂಚಾರಿ ಕ್ಯಾಂಟೀನ್ ಚಾಲನೆ

    ಹಸಿದವರಿಗೆ ಉಚಿತ ಊಟ ನೀಡಲು ಡಿಕೆಶಿ ಸಂಚಾರಿ ಕ್ಯಾಂಟೀನ್ ಚಾಲನೆ

    ಶಿವಮೊಗ್ಗ: ಜಿಲ್ಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿ ಬಳಗದ ಸದಸ್ಯರು ಹಸಿದವರಿಗೆ ಸಂಚಾರಿ ಕ್ಯಾಂಟೀನ್ ಮೂಲಕ ಹೊಟ್ಟೆ ತುಂಬಿಸುವ ಕೆಲಸ ಮಾಡುತ್ತಿದ್ದಾರೆ.

    ಸಾರ್ವಜನಿಕರ ಅನುಕೂಲಕ್ಕಾಗಿ ಡಿ.ಕೆ. ಶಿವಕುಮಾರ್ ಸಂಚಾರಿ ಕ್ಯಾಂಟೀನ್ ಆರಂಭಿಸಲಾಗಿದ್ದು, ಈ ಸಂಚಾರಿ ಕ್ಯಾಂಟೀನ್‍ಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಇಂದು ಚಾಲನೆ ನೀಡಿದರು. ಈ ಸಂಚಾರಿ ಕ್ಯಾಂಟೀನ್ ನಗರದ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುವ ಸ್ಟಾಪ್, ನರ್ಸ್, ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳನ್ನು ನೋಡಿಕೊಳ್ಳುವ ಅಟೆಂಡರ್ ಹಾಗೂ ನಗರದಲ್ಲಿ ಆಹಾರಕ್ಕಾಗಿ ಪರಿತಪಿಸುತ್ತಿರುವ ಸಾರ್ವಜನಿಕರ ಅನುಕೂಲಕ್ಕಾಗಿ ಡಿ.ಕೆ.ಶಿ. ಸಂಚಾರಿ ಕ್ಯಾಂಟೀನ್ ಆರಂಭಿಸಲಾಗಿದೆ.

    ಪ್ರತಿ ದಿನಕ್ಕೆ 500 ರಿಂದ 600 ಜನರಿಗೆ ಉಪಹಾರ ನೀಡುವ ಯೋಜನೆ ಇದಾಗಿದ್ದು, ಹಸಿದವರಿಗೆ ಈ ಸಂಚಾರಿ ಕ್ಯಾಂಟೀನ್ ಮೂಲಕ ಹೊಟ್ಟೆ ತುಂಬಿಸುವ ಸೇವೆ ಮಾಡಲಾಗುತ್ತಿದೆ. ಅಷ್ಟೇ ಅಲ್ಲದೇ ಉಪಹಾರದ ಜೊತೆಗೆ ನೀರಿನ ಬಾಟಲಿಯನ್ನು ಕೂಡ ಉಚಿತವಾಗಿ ವಿತರಣೆ ಮಾಡಲಾಗುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪ್ರಚಾರ ಮಾಡಲಾಗಿದೆ.

    ಈ ಕ್ಯಾಂಟೀನ್ ಫೋನ್ ನಂ.ಗೆ ಒಂದು ಕರೆ ಮಾಡಿದರೆ ಸಾಕು ಉಚಿತವಾಗಿ, ಆಹಾರ ಮತ್ತು ನೀರನ್ನು ಒದಗಿಸುವ ಸೇವೆ ಇಂದಿನಿಂದ ಆರಂಭಿಸಲಾಗಿದೆ. ಜಿಲ್ಲಾ ಕಾಂಗ್ರೆಸ್ ಮುಖಂಡ ದೇವೆಂದ್ರಪ್ಪ ನೇತೃತ್ವದಲ್ಲಿ ಈ ಸಂಚಾರಿ ಕ್ಯಾಂಟೀನ್ ಇಂದಿನಿಂದ ಆರಂಭಗೊಂಡಿದೆ.

  • ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ, ಚಿಕಿತ್ಸೆ ನೀಡಲು ಕೇಳ್ತಾರೆ ಲಂಚ

    ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ, ಚಿಕಿತ್ಸೆ ನೀಡಲು ಕೇಳ್ತಾರೆ ಲಂಚ

    ಚಿತ್ರದುರ್ಗ: ಹೆಸರಿಗೆ ಮಾತ್ರ ಸರ್ಕಾರಿ ಜಿಲ್ಲಾ ಆಸ್ಪತ್ರೆ, ಆದರೆ ಅಲ್ಲಿ ಯಾವುದೇ ಚಿಕಿತ್ಸೆ ಹಾಗು ಸೇವೆ ಪಡೆಯಬೇಕೆಂದರೆ ರೋಗಿಗಳು ಹಣ ಕೊಡಲೇಬೇಕು. ಹೀಗಾಗಿ ಆಸ್ಪತ್ರೆಯಲ್ಲಿ ಗಾಡಿ ತಳ್ಳುವ ಸಿಬ್ಬಂದಿ ಸೇರಿದಂತೆ ಹೆರಿಗೆ ವಾರ್ಡಿನಲ್ಲಿರೋ ಸ್ಟಾಫ್ ನರ್ಸ್ ಗಳವರೆಗೆ ಲಂಚ ಕೇಳೋದು ಮಾಮೂಲಿಯಾಗಿದ್ದು, ಆಸ್ಪತ್ರೆ ಸಿಬ್ಬಂದಿ ರೋಗಿಗಳಿಂದ ಹಣ ಪಡೆಯುವ ದೃಶ್ಯಗಳು ಮೊಬೈಲ್‍ನಲ್ಲಿ ಸೆರೆಯಾಗಿದೆ.

    ಕೋಟೆನಾಡು ಚಿತ್ರದುರ್ಗದ ಜಿಲ್ಲಾಸ್ಪತ್ರೆಯಲ್ಲಿ ಈ ದೃಶ್ಯ ಕಂಡುಬಂದಿದೆ. ಒಂದೆಡೆ ಆಸ್ಪತ್ರೆಯಲ್ಲಿ ಪುಟ್ಟ ಕಂದಮ್ಮಗಳ ಚಿಕಿತ್ಸೆಗಾಗಿ ಬಾಣಂತಿಯರು ಕಾದು ಕುಳಿತಿರುವ ದೃಶ್ಯಗಳು, ರೋಗಿಗಳು ಚಿಕಿತ್ಸೆಗಾಗಿ ಬಂದಿರುವ ದೃಶ್ಯಗಳು ಕಂಡುಬಂದರೆ, ಇನ್ನೊಂದೆಡೆ ಸಿಬ್ಬಂದಿ ರೋಗಿಗಳಿಂದ ಹಣ ಪಡೆಯುವ ದೃಶ್ಯಗಳು ಕಾಣಸಿಗುತ್ತದೆ. ಈ ಆಸ್ಪತ್ರೆ ಹೆಸರಿಗೆ ಮಾತ್ರ ಜಿಲ್ಲೆಯ ಬೃಹತ್ ಆಸ್ಪತ್ರೆ, ಆದರೆ ಇಲ್ಲಿ ಚಿಕಿತ್ಸೆ ಅನ್ನೋದು ಮರೀಚಿಕೆಯಾಗಿದೆ. ರೋಗಿಗಳ ಸ್ಥಿತಿ ಸ್ವಲ್ಪ ಗಂಭೀರವಾದರೆ ಸಾಕು, ದಾವಣಗೆರೆ ಅಥವಾ ಖಾಸಗಿ ಆಸ್ಪತ್ರೆಗಳಿಗೆ ಇಲ್ಲಿನ ವೈದ್ಯರು ಕಳಿಸುತ್ತಾರೆ ಎಂಬ ಆರೋಪಗಳು ಕೇಳಿ ಬಂದಿವೆ.

    ಇಲ್ಲಿನ ಸಿಬ್ಬಂದಿಗಳಂತೂ ಮಹಾಚತುರರು, ಮಾತು ಆಡಿದರೆ ಹಣ ಕೊಡಿ ಎನ್ನುತ್ತಾರೆ. ತುರ್ತು ಚಿಕಿತ್ಸೆ ಪಡೆದು ವಾರ್ಡ್‍ಗೆ ಶಿಫ್ಟ್ ಆಗಬೇಕೆಂದರೂ ಸಿಬ್ಬಂದಿಗೆ ಲಂಚ ಕೊಡಬೇಕು. ಅಲ್ಲದೆ ಹೆರಿಗೆ ಮಾಡಿಸುವುದರಿಂದ ಹಿಡಿದು ಬಾಣಂತಿಯನ್ನು ವಾರ್ಡಿಗೆ ಕಳುಹಿಸುವಾಗಲೂ ಲಂಚ ಕೊಡಬೇಕು. ಇಲ್ಲವಾದರೆ ಹೆರಿಗೆ ಕೊಠಡಿಯಿಂದ ಬಾಣಂತಿಯನ್ನ ಇಲ್ಲಿನ ಸಿಬ್ಬಂದಿಗಳು ಶಿಫ್ಟ್ ಸಹ ಮಾಡಲ್ಲ. ಅದಕ್ಕೆ ಸಾಕ್ಷಿ ಎಂಬಂತೆ ಈ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡದ ದೃಶ್ಯಗಳು ಎಲ್ಲೆಡೆ ವೈರಲ್ ಆಗಿವೆ.

    ಈ ಲಂಚಾವತಾರದಿಂದ ಬೇಸತ್ತ ನಾಗರಿಕರು ಈ ಪ್ರಕರಣದಲ್ಲಿ ರೋಗಿಗಳ ರಕ್ತ ಹೀರುತ್ತಿರುವ ಲಂಚಬಾಕರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ. ಹೀಗಾಗಿ ಈ ಬಗ್ಗೆ ಜಿಲ್ಲಾಸ್ಪತ್ರೆಯ ಸರ್ಜನ್ ಜಯಪ್ರಕಾಶ್ ಅವರನ್ನ ಕೇಳಿದರೆ, ಪ್ರಕರಣ ಕುರಿತು ಆಸ್ಪತ್ರೆಯ ಸಿಬ್ಬಂದಿಯನ್ನ ವಿಚಾರಣೆಗೊಳಪಡಿಸುತ್ತೇವೆ. ಅವರ ವಿರುದ್ಧ ತನಿಖೆ ಮಾಡಿ ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಿದ್ದಾರೆ. ಕಸ ಗುಡಿಸುವವರಿಂದ ಹಿಡಿದು ಆಯುಷ್ಮಾನ್ ಕಾರ್ಡ್ ವಿತರಿಸುವ ಗುಮಾಸ್ತ ಕೂಡ ಲಂಚ ಪಡೆಯುತ್ತಿದ್ದಾರೆ. ಇಷ್ಟೇಲ್ಲ ನಡೆಯುತ್ತಿದ್ದರು ಸಹ ಜಿಲ್ಲಾ ಆರೋಗ್ಯ ಇಲಾಖೆ ಜಾಣ ಕುರುಡು ಪ್ರದರ್ಶಿಸುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.

    ಹೆಸರಿಗೆ ಮಾತ್ರ ಸರ್ಕಾರಿ ಆಸ್ಪತ್ರೆ ಎಂದು ನಾಮಫಲಕ ಹಾಕಿರುವ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಲಂಚಾವತಾರದಲ್ಲಿ ಭಾಗಿಯಾಗಿರೋ ಆರೋಪಿಗಳಿಗೆ ಬಿಸಿ ಮುಟ್ಟಿಸಿ, ಉಳಿದವರನ್ನ ಎಚ್ಚರಿಸುತ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ.

  • ಸರ್ಕಾರಿ ಆಸ್ಪತ್ರೆ ಬೆಡ್ ಮೇಲೆ ಮಲಗಿದ ಬೀದಿ ನಾಯಿ

    ಸರ್ಕಾರಿ ಆಸ್ಪತ್ರೆ ಬೆಡ್ ಮೇಲೆ ಮಲಗಿದ ಬೀದಿ ನಾಯಿ

    ಬಾಗಲಕೋಟೆ: ರೋಗಿಗಳು ಮಲಗಬೇಕಾದ ಆಸ್ಪತ್ರೆ ಬೆಡ್ ಮೇಲೆ ಬೀದಿ ನಾಯಿ ಹಾಯಾಗಿ ಮಲಗಿರುವ ಘಟನೆ ಜಿಲ್ಲೆಯ ರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.

    ಆಸ್ಪತ್ರೆ ಬೆಡ್ ಮೇಲೆ ಚರ್ಮ ರೋಗಕ್ಕೆ ಒಳಗಾದ ನಾಯಿ ಮಲಗಿದ್ದರೂ ಅಲ್ಲಿನ ಸಿಬ್ಬಂದಿ ಅದನ್ನು ಗಮನಿಸದೇ ಓಡಾಡುತ್ತಿದ್ದಾರೆ. ಅದ್ದರಿಂದ ಜನರು ಇದು ಸಾರ್ವಜನಿಕ ಆಸ್ಪತ್ರೆಯೋ ನಾಯಿ ಆಸ್ಪತ್ರೆಯೋ ಎಂದು ಕೇಳುವ ಪರಿಸ್ಥಿತಿ ಬಂದಿದೆ.

    ಈ ವಿಚಾರದ ಬಗ್ಗೆ ಸ್ಥಳೀಯರು ಆಸ್ಪತ್ರೆ ಸಿಬ್ಬಂದಿಯನ್ನು ವಿಚಾರಿಸಿದರೆ, ನಾವು ನಾಯಿಯನ್ನು ಕಾಯುತ್ತಾ ಕುಳಿತುಕೊಳ್ಳಲು ಆಗುತ್ತಾ ಎಂದು ಬೇಜವಾಬ್ದಾರಿ ತೋರುತ್ತಿದ್ದಾರೆ. ಸಿಬ್ಬಂದಿಯ ಈ ವರ್ತನೆಗೆ ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹ ವ್ಯಕ್ತಪಡಿಸಿದ್ದಾರೆ.

  • ಅಂಬುಲೆನ್ಸ್ ಸಿಗದೆ ಮಗನ ಶವವನ್ನು ಹೆಗಲ ಮೇಲೆ ಹೊತ್ತೊಯ್ದ ತಂದೆ

    ಅಂಬುಲೆನ್ಸ್ ಸಿಗದೆ ಮಗನ ಶವವನ್ನು ಹೆಗಲ ಮೇಲೆ ಹೊತ್ತೊಯ್ದ ತಂದೆ

    ಪಾಟ್ನಾ: ಆಸ್ಪತ್ರೆ ಸಿಬ್ಬಂದಿ ಅಂಬುಲೆನ್ಸ್ ನೀಡದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ತಮ್ಮ 8 ವರ್ಷದ ಮಗನ ಮೃತದೇಹವನ್ನು ಹೆಗಲ ಮೇಲೆ ಹೊತ್ತೊಯ್ದ ಮನಕಲಕುವ ಘಟನೆ ಬಿಹಾರದ ನಳಂದಾ ಜಿಲ್ಲೆಯಲ್ಲಿ ನಡೆದಿದೆ.

    ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ತವರು ಜಿಲ್ಲೆಯ ಸದರ್ ಆಸ್ಪತ್ರೆಯಲ್ಲಿ ಆಡಳಿತಾಧಿಕಾರಿಗಳು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ನಳಂದಾದ ಸೀತಾ ಬಿಘಾ ಪ್ರದೇಶದ ನಿವಾಸಿಯಾಗಿದ್ದ ಸಾಗರ್ ಕುಮಾರ್(8) ಮೃತ ದುರ್ದೈವಿ.

    ಮಂಗಳವಾರ ಬೆಳಿಗ್ಗೆ ಸೈಕ್ಲಿಂಗ್ ಮುಗಿಸಿ ಬಾಲಕ ಮನೆಗೆ ಬಂದ ಮೇಲೆ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಆಗ ತಕ್ಷಣ ಪೋಷಕರು ಆತನನ್ನು ಸಮೀಪದ ಖಾಸಗಿ ಕ್ಲಿನಿಕ್‍ಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ವೈದ್ಯರು ಮಗುವನ್ನು ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಮಗನನ್ನು ತಂದೆ ತಾಯಿ ಸದರ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ದುರಾದೃಷ್ಟವಶಾತ್ ಆಸ್ಪತ್ರೆಗೆ ಬರುವ ಮೊದಲೇ ಬಾಲಕ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದರು.

    ಮೃತದೇಹ ತೆಗೆದುಕೊಂಡು ಹೋಗಲು ಅಂಬುಲೆನ್ಸ್ ನೀಡಿ ಎಂದು ಪೋಷಕರು ಆಸ್ಪತ್ರೆ ಸಿಬ್ಬಂದಿ ಬಳಿ ಮನವಿ ಮಾಡಿದ್ದಾರೆ. ಆದರೆ ಈ ಬಗ್ಗೆ ಆಸ್ಪತ್ರೆಯ ಯಾವ ಸಿಬ್ಬಂದಿಯಾಗಲಿ, ವೈದ್ಯರಾಗಲಿ ಕ್ಯಾರೆ ಅಂದಿಲ್ಲ. ಮೊದಲೇ ಮಗನ ಸಾವಿನಿಂದ ನೊಂದಿದ್ದ ತಂದೆ ಬೇಸತ್ತು ಬೇರೆ ದಾರಿ ಕಾಣದೆ ಮೃತದೇಹವನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಹೋಗಿದ್ದಾರೆ.

    ಮೃತದೇಹಗಳನ್ನು ಸಾಗಿಸುವ ಸಲುವಾಗಿ ಸದರ್ ಆಸ್ಪತ್ರೆಗೆ ವಾಹನಗಳ ವ್ಯವಸ್ಥೆ ಕಲ್ಪಿಸಿಕೊಡಲಾಗಿದೆ. ಅಲ್ಲದೆ ಆಸ್ಪತ್ರೆಯಲ್ಲಿ ಮರಣಹೊಂದಿದ ಯಾವುದೇ ರೋಗಿಯ ಮೃತದೇಹವನ್ನು ಸಾಗಿಸಲು ಕುಟುಂಬದವರೊಂದಿಗೆ ಮಾತನಾಡಿ, ವಾಹನವನ್ನು ನೀಡುವುದು ನಿಯೋಜಿತ ಅಧಿಕಾರಿಗಳ ಜವಾಬ್ದಾರಿಯಾಗಿದೆ. ಆದರೆ, ಸಾಗರ್‍ನ ತಂದೆ ಮೃತದೇಹವನ್ನು ಭುಜದ ಮೇಲೆ ಹೊತ್ತು ಸಹಾಯಕ್ಕಾಗಿ ಆಸ್ಪತ್ರೆಯ ಆವರಣದಲ್ಲಿ ಗೋಳಾಡಿದರೂ ಆಸ್ಪತ್ರೆಯ ಯಾವುದೇ ಸಿಬ್ಬಂದಿ ಆತನ ಸಹಾಯಕ್ಕೆ ಬಾರದೆ ಅಮಾನವೀಯತೆ ಮೆರೆದಿದ್ದಾರೆ.

    ಈ ಬಗ್ಗೆ ನಳಂದಾ ಜಿಲ್ಲಾಧಿಕಾರಿ (ಡಿಎಂ) ಯೋಗೇಂದ್ರ ಸಿಂಗ್ ಅವರನ್ನು ಪ್ರಶ್ನಿಸಿದಾಗ, ಇದು ಗಂಭೀರ ವಿಷಯವಾಗಿದ್ದು, ಈ ಬಗ್ಗೆ ತನಿಖೆ ನಡೆಸಲು ಆದೇಶಿಸಿದ್ದೇನೆ ಎಂದರು. ಅಲ್ಲದೆ ಆಸ್ಪತ್ರೆಯ ಅಧಿಕಾರಿಗೆ ಕೇಳಿದರೆ, ಬಾಲಕನ ಕುಟುಂಬಕ್ಕೆ ವಾಹನದ ಭರವಸೆ ನೀಡಲಾಗಿತ್ತು. ಆದರೆ ಆ ಸಮಯದಲ್ಲಿ ಅಂಬುಲೆನ್ಸ್ ಲಭ್ಯವಿಲ್ಲದ ಕಾರಣ ಕುಟುಂಬವನ್ನು ಕಾಯುವಂತೆ ಹೇಳಿದ್ದೆವು. ಆಗ ತಂದೆ ಮೃತ ದೇಹವನ್ನು ಹೊತ್ತುಕೊಂಡು ಹೊರಟುಹೋದರು ಎಂದು ತಿಳಿಸಿದ್ದಾರೆ.

    ಮಗುವನ್ನು ಆಸ್ಪತ್ರೆಗೆ ಕರೆತರುವ ಮೊದಲೇ ಮಗು ಸಾವನ್ನಪ್ಪಿದೆ. ಈ ಬಗ್ಗೆ ತಿಳಿದ ಬಳಿಕ ಬಾಲಕನ ಪೋಷಕರು ಆತುರದಿಂದ ಮಗನ ಶವವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಆಸ್ಪತ್ರೆ ಅಧೀಕ್ಷಕ ಡಾ.ರಾಮ್ ಕುಮಾರ್ ಹೇಳಿದ್ದಾರೆ.

    ಈಗಾಗಲೇ ಮೆದುಳಿನ ಉರಿಯೂತ ಕಾಯಿಲೆಗೆ (ಅಕ್ಯೂಟ್ ಎನ್ಸೆಫಾಲಿಟಿಸ್ ಸಿಂಡ್ರೋಮ್‍ಗೆ – ಎಇಎಸ್) ಬಿಹಾರ ತತ್ತರಿಸಿ ಹೋಗಿದೆ. ಈವರೆಗೂ ಈ ಕಾಯಿಲೆಗೆ 167 ಮಕ್ಕಳು ಬಲಿಯಾಗಿದ್ದಾರೆ. ಹೀಗಾಗಿ ರಾಜ್ಯದ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿಯೂ ಎಇಎಸ್‍ಗೆ ತುತ್ತಾದ ಮಕ್ಕಳಿಗೆ ಉಚಿತ ಚಿಕಿತ್ಸೆ ಹಾಗೂ ವೈದ್ಯಕೀಯ ವ್ಯವಸ್ಥೆ ನೀಡಬೇಕು ಎಂದು ಸೂಚಿಸಲಾಗಿದೆ.

  • ಚಿಕಿತ್ಸೆಗೆ ಅಂಬುಲೆನ್ಸ್ ನೀಡದ ಆಸ್ಪತ್ರೆ – ಮಗನ ಶವವನ್ನು ಹೊತ್ತೊಯ್ದ ತಾಯಿ!

    ಚಿಕಿತ್ಸೆಗೆ ಅಂಬುಲೆನ್ಸ್ ನೀಡದ ಆಸ್ಪತ್ರೆ – ಮಗನ ಶವವನ್ನು ಹೊತ್ತೊಯ್ದ ತಾಯಿ!

    ಲಕ್ನೋ: ಅಂಬುಲೆನ್ಸ್ ನೀಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಕ್ಕೆ ತನ್ನ ಮಗನ ಶವವನ್ನು ತಾಯಿಯೇ ಹೊತ್ತುಕೊಂಡು ಹೋದ ಮನಕಲಕುವ ಘಟನೆ ಉತ್ತರ ಪ್ರದೇಶದ ಶಹಜಹಾನ್‍ಪುರದಲ್ಲಿ ನಡೆದಿದೆ.

    ಸೋಮವಾರದಂದು ಬಾಲಕನಿಗೆ ಹೆಚ್ಚು ಜ್ವರ ಬಂದಿದ್ದ ಕಾರಣಕ್ಕೆ ತಂದೆ ತಾಯಿ ಆತನನ್ನು ಶಹಜಹಾನ್‍ಪುರದಲ್ಲಿ ಆಸ್ಪತ್ರೆಯೊಂದಕ್ಕೆ ಕರೆದುಕೊಂಡು ಹೋಗಿದ್ದರು. ಆದರೆ ಅಲ್ಲಿನ ವೈದ್ಯರು ಬಾಲಕನ ಸ್ಥಿತಿ ಗಂಭೀರವಾಗಿದೆ ಲಕ್ನೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಎಂದು ಸೂಚಿಸಿದ್ದಾರೆ. ಆಗ ಪೋಷಕರು ಬಾಲಕನನ್ನು ಕರೆದುಕೊಂಡು ಹೋಗಲು ಅಂಬುಲೆನ್ಸ್ ವ್ಯವಸ್ಥೆ ನೀಡಿ ಎಂದು ಮನವಿ ಮಾಡಿದ್ದಾರೆ.

    ಮನವಿಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ನಿರಾಕರಿಸಿದ್ದು, ಬೇರೆ ವಾಹನ ವ್ಯವಸ್ಥೆ ಮಾಡಿಕೊಂಡು ಮಗನನ್ನು ಆಸ್ಪತ್ರೆಗೆ ಕರೆದೊಯ್ಯಲು ತಮ್ಮ ಬಳಿ ಹಣವಿಲ್ಲದ ಕಾರಣಕ್ಕೆ ಬಡ ತಂದೆ ತಾಯಿ ಕಂಗಾಲಾಗಿದ್ದಾರೆ. ಬಳಿಕ ಬೇರೆ ವಿಧಿಯಿಲ್ಲದೆ ತಾಯಿಯೇ ಮಗನನ್ನು ಎತ್ತಿಕೊಂಡು ಬೇರೆ ಆಸ್ಪತ್ರೆಗೆ ತೆರಳುತ್ತಿದ್ದರು.

    ಮಾರ್ಗ ಮಧ್ಯೆಯೇ ಬಾಲಕ ಸಾವನ್ನಪ್ಪಿದ್ದು, ಮಗನ ಶವವನ್ನು ತಾಯಿ ಹೊತ್ತುಕೊಂಡೇ ಮನೆಗೆ ತೆರೆಳಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ವ್ಯವಸ್ಥೆ ನೀಡಿದ್ದರೆ ತಮ್ಮ ಮಗ ಉಳಿಯುತ್ತಿದ್ದ. ನಾವು ಬಡವರು ಎಂದು ನಮ್ಮನ್ನು ನಿರ್ಲಕ್ಷಿಸಿದ್ದಾರೆ ಎಂದು ಮೃತ ಬಾಲಕನ ಪೋಷಕರು ಆರೋಪಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಬಾಲಕನ ತಂದೆ, ನಾವು ಸೋಮವಾರ ಬೆಳಗ್ಗೆ ಮಗನನ್ನು ಆಸ್ಪತ್ರಗೆ ಕರೆದೋಯ್ದಿದ್ದೆವು. ಆದರೆ ಅಲ್ಲಿನ ವೈದ್ಯರು ಮಗು ಸ್ಥಿತಿ ಗಂಭೀರವಾಗಿದೆ ಬೇರೆಡೆ ಚಿಕಿತ್ಸೆ ಕೊಡಿಸಿ ಎಂದು ಸೂಚಿಸಿದರು. ಆಗ ನಾವು ಅಂಬುಲೆನ್ಸ್ ವ್ಯವಸ್ಥೆ ನೀಡಲು ಮನವಿ ಮಾಡಿದಾಗ ಸಿಬ್ಬಂದಿ ನಿರಾಕರಿಸಿದರು. ಆಸ್ಪತ್ರೆ ಆವರಣದಲ್ಲಿ ಮೂರು ಅಂಬುಲೆನ್ಸ್ ಇದ್ದರೂ ಕೂಡ ನಮ್ಮ ಮನವಿಯನ್ನು ನಿರ್ಲಕ್ಷಿಸಿದರು ಎಂದು ಕಣ್ಣೀರಿಟ್ಟಿದ್ದಾರೆ.

    ಪೋಷಕರ ಆರೋಪವನ್ನು ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿ ತಳ್ಳಿಹಾಕಿದ್ದಾರೆ. ಬಾಲಕನ ಸ್ಥಿತಿ ಗಂಭೀರವಾಗಿದ್ದ ಕಾರಣಕ್ಕೆ ಲಕ್ನೋ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಂದಿದ್ದೇವು. ಆದರೆ ಆ ನಂತರ ಪೋಷಕರು ಏನು ಮಾಡಿದರು ಎಂದು ನಮಗೆ ಗೊತ್ತಿಲ್ಲ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.

  • ನಂದಮೂರಿ ಹರಿಕೃಷ್ಣ ಮೃತ ದೇಹದ ಜೊತೆ ಸೆಲ್ಫಿ: ಸಿಬ್ಬಂದಿ ವಜಾ

    ನಂದಮೂರಿ ಹರಿಕೃಷ್ಣ ಮೃತ ದೇಹದ ಜೊತೆ ಸೆಲ್ಫಿ: ಸಿಬ್ಬಂದಿ ವಜಾ

    ಹೈದರಾಬಾದ್: ನಟ ಹಾಗೂ ರಾಜಕಾರಣಿ ನಂದಮೂರಿ ಹರಿಕೃಷ್ಣ ಅವರ ಮೃತ ದೇಹದ ಜೊತೆ ನಾಲ್ಕು ಜನ ಖಾಸಗಿ ಆಸ್ಪತ್ರೆಯ ಸಿಬ್ಬಂದಿ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದರು. ಈ ಕುರಿತು ಭಾರೀ ಟೀಕೆ ಕೇಳಿ ಬರುತ್ತಿದ್ದಂತೆ ಆಸ್ಪತ್ರೆ ಆಡಳಿತ ಮಂಡಳಿ ನಾಲ್ವರನ್ನು ಕೆಲಸದಿಂದ ವಜಾಗೊಳಿಸಿದೆ.

    ನಂದಮೂರಿ ಹರಿಕೃಷ್ಣ ಮೃತ ದೇಹದ ಜೊತೆಗಿನ ಸೆಲ್ಫಿ ಫೋಟೋ ನೋಡಿದ್ದ ನೆಟ್ಟಿಗರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದರು. ಅಮಾನವೀಯವಾಗಿ ನಡೆದುಕೊಂಡ ಆಸ್ಪತ್ರೆಯ ಅವರನ್ನು ಕೆಲಸದಿಂದ ತೆಗೆದು ಹಾಕುವಂತೆ ಒತ್ತಾಯಿಸಿದ್ದರು. ಮಾಹಿತಿ ತಿಳಿಯುತ್ತಿದ್ದಂತೆ ಆಡಳಿತ ಮಂಡಳಿ ಅವರನ್ನು ವಜಾಗೊಳಿಸಿ, ಸಾರ್ವಜನಿಕರಲ್ಲಿ ಕ್ಷಮೆ ಕೇಳಿದೆ.

    ನಡೆದದ್ದು ಏನು?
    ಆಗಸ್ಟ್ 29ರಂದು ತೆಲಂಗಾಣದ ನಲ್ಗೊಂಡ ಬಳಿ ಬೀಕರ ಅಪಘಾತ ಸಂಭವಿಸಿ, ನಂದಮೂರಿ ಹರಿಕೃಷ್ಣ ಗಂಭೀರ ಗಾಯಗೊಂಡಿದ್ದರು. ಅವರನ್ನು ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.

    ಮೃತದೇಹ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವೇಳೆ ಒಬ್ಬ ಪುರುಷ ಹಾಗೂ ಮೂವರು ಮಹಿಳಾ ಸಿಬ್ಬಂದಿ ಮೃತ ದೇಹದೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ನೆಟ್ಟಿಗರು ಕಿಡಿಕಾರಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv