Tag: ಆಸ್ತಿ

  • ಜಯಲಲಿತಾ ನಿವಾಸದಲ್ಲಿದೆ 4 ಕೆ.ಜಿ ಚಿನ್ನ, 601 ಕೆ.ಜಿ ಬೆಳ್ಳಿ

    ಜಯಲಲಿತಾ ನಿವಾಸದಲ್ಲಿದೆ 4 ಕೆ.ಜಿ ಚಿನ್ನ, 601 ಕೆ.ಜಿ ಬೆಳ್ಳಿ

    – 11 ಟಿವಿ ಸೆಟ್‌, 10 ಫ್ರಿಡ್ಜ್‌
    – ತಮಿಳುನಾಡು ಸರ್ಕಾರದಿಂದ ಪಟ್ಟಿ

    ಚೆನ್ನೈ: ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ನಿವಾಸದಲ್ಲಿ 4 ಕೆ.ಜಿ ಚಿನ್ನ, 601 ಕೆ.ಜಿ ಬೆಳ್ಳಿ ಸಿಕ್ಕಿದೆ ಎಂದು ತಮಿಳುನಾಡು ಸರ್ಕಾರ ಹೇಳಿದೆ.

    ಜಯಲಲಿತಾ ವಾಸವಿದ್ದ ʼವೇದ ನಿಲಯಂʼ ನಿವಾಸವನ್ನು ಸ್ಮಾರಕವನ್ನಾಗಿ ರೂಪಿಸಲು ತಮಿಳುನಾಡು ಸರ್ಕಾರ ಮುಂದಾಗುತ್ತಿದೆ. ಈ ಹಿನ್ನೆಲೆಯಲ್ಲಿ ವೇದ ನಿಲಯಂನಲ್ಲಿರುವ ಸ್ಥಿರ ಮತ್ತು ಚರ ಸ್ವತ್ತನ್ನು ತಮಿಳುನಾಡು ಸರ್ಕಾರ ಪುರಚ್ಚಿ ತಲೈವಿ ಡಾ.ಜಯಲಲಿತಾ ಮೆಮೋರಿಯಲ್‌ ಫೌಂಡೇಷನ್‌ಗೆ ಕಳುಹಿಸಿಕೊಡುತ್ತಿದೆ. ಇದನ್ನೂ ಓದಿ: ಎಷ್ಟೇ ವಿರೋಧಿಗಳಾಗಿದ್ರೂ ಜಯಲಲಿತಾ, ಕರುಣಾನಿಧಿ ಒಂದು ಮಾತಿಗೆ ಬದ್ಧರಾಗಿದ್ರು

    ಸರ್ಕಾರ ನಿವಾಸದಲ್ಲಿರುವ ವಸ್ತುಗಳನ್ನು ಪಟ್ಟಿಮಾಡಿದ್ದು, ಪೀಠೋಪಕರಣಗಳು, ಪುಸ್ತಕಗಳು, ಆಭರಣಗಳು ಸೇರಿ ಒಟ್ಟು 32,721 ಚರ ಸ್ವತ್ತುಗಳಿವೆ ಎಂದು ತಿಳಿಸಿದೆ.

    ನಿವಾಸದಲ್ಲಿ ಏನು ಸಿಕ್ಕಿದೆ?
    4.72 ಕೆಜಿ ಚಿನ್ನ( 14 ವಸ್ತುಗಳು), 601. 424 ಕೆಜಿ ಬೆಳ್ಳಿ( 87 ವಸ್ತುಗಳು) 162 ಸಣ್ಣ ಪಾತ್ರೆಗಳು, 11 ಟಿವಿ ಸೆಟ್‌, 10 ಫ್ರಿಡ್ಜ್‌, 556 ಪಿಠೋಪಕರಣ ಸಾಮಾಗ್ರಿಗಳು, 10,438 ವಸ್ತ್ರ ಸಾಮಾಗ್ರಿಗಳು, 6,514 ಅಡಿಗೆ ಪಾತ್ರೆಗಳು, 15 ಪೂಜಾ ಪಾತ್ರೆಗಳು, 10,438 ತುಂಡು ಉಡುಗೆ ವಸ್ತುಗಳು(ಟವೆಲ್/ಬೆಡ್‌ಶೀಟ್‌ಗಳು/ಇತರ ಬಟ್ಟೆ/ ಪರದೆ/ ಪಾದರಕ್ಷೆಗಳು), 29 ದೂರವಾಣಿಗಳು / ಮೊಬೈಲ್ ಫೋನ್‌ಗಳು, 221 ಅಡುಗೆ ಎಲೆಕ್ಟ್ರಿಕ್‌ ವಸ್ತುಗಳು, 251 ಎಲೆಕ್ಟ್ರಿಕ್‌ ವಸ್ತುಗಳು, 8,376 ಪುಸ್ತಕಗಳು, 394 ಮೆಮೆಂಟೋಗಳು, ನ್ಯಾಯಾಲಯದ ದಾಖಲೆಗಳು ಮತ್ತು ಐಟಿ ಹೇಳಿಕೆಗಳು, 253 ಲೇಖನ ಸಾಮಗ್ರಿಗಳು, 65 ಸೂಟ್‌ಕೇಸ್‌ಗಳು, 108 ಸೌಂದರ್ಯವರ್ಧಕ ವಸ್ತುಗಳು, 6 ಗಡಿಯಾರಗಳು, 1 ಕ್ಯಾನನ್ ಫೋಟೋಕಾಪಿಂಗ್ ಯಂತ್ರ, 1 ಲೇಸರ್ ಪ್ರಿಂಟರ್‌ ಮತ್ತು 959 ವಿವಿಧ ವಸ್ತುಗಳನ್ನು ಪಟ್ಟಿ ಮಾಡಲಾಗಿದೆ. ಇದನ್ನೂ ಓದಿ: ಜಯಲಲಿತಾ ಜೀವಿತಾವಧಿಯಲ್ಲಿ ಗರ್ಭವತಿ ಆಗಿರಲಿಲ್ಲ-ಮದ್ರಾಸ್ ಕೋರ್ಟ್ ಗೆ ಅಫಿಡವಿಟ್ ಸಲ್ಲಿಸಿದ ಸರ್ಕಾರ

    ಅಣ್ಣಾಡಿಎಂಕೆ ಪಕ್ಷದ ನಾಯಕಿಯಾಗಿದ್ದ ಜಯಲಲಿತಾ ಅವರು ಮೂರು ಅಂತಸ್ತಿನ ವೇದ ನಿಲಯಂ ನಿವಾಸದಲ್ಲಿ ವಾಸಿಸುತ್ತಿದ್ದರು. 2016ರಲ್ಲಿ ಮೃತಪಟ್ಟ ಬಳಿಕ ನಿವಾಸವನ್ನು ಸ್ಮಾರಕವನ್ನಾಗಿ ಪರಿವರ್ತಿಸುವುದಾಗಿ ತಮಿಳುನಾಡು ಸರ್ಕಾರ ಪ್ರಕಟಿಸಿತ್ತು.

    ಜಯಲಲಿತಾ ಅವರ ವೇದ ನಿಲಯಂ ನಿವಾಸವನ್ನು ಸ್ವಾಧೀನಪಡಿಸಿಕೊಂಡಿದ್ದಕ್ಕೆ ಪ್ರತಿಯಾಗಿ ತಮಿಳುನಾಡು ಸರ್ಕಾರ ಜುಲೈ 25 ರಂದು ಸ್ಥಳೀಯ ಸಿವಿಲ್‌ ನ್ಯಾಯಾಲಯದಲ್ಲಿ 67.9 ಕೋಟಿ ರೂ. ಹಣವನ್ನು ಠೇವಣಿಯಾಗಿ ಇರಿಸಿತ್ತು. ಇದರಲ್ಲಿ 36.9ಕೋಟಿ ರೂ. ಗಳನ್ನು ಜಯಲಲಿತಾ ಅವರು ಬಾಕಿ ಉಳಿಸಿಕೊಂಡಿದ್ದರು ಎನ್ನಲಾದ ತೆರೆಗೆ ಇಲಾಖೆಗೆ ಪಾವತಿಸಲಾಗಿದೆ.

    ಜಯಲಲಿತಾ ಬಂಗಲೆಯಲ್ಲಿ ಎರಡು ಮಾವಿನ ಮರ, ಒಂದು ಹಲಸಿನ ಮರ, 5 ತೆಂಗಿನ ಮರ, ಬಾಳೆ ಗಿಡಗಳು ಇವೆ ಎಂದು ಸರ್ಕಾರ ತಿಳಿಸಿದೆ.

  • ಧಮ್ಕಿ ಹಾಕಲು ಮನೆಗೆ ಬಂದವರಿಗೆ ಶೂಟೌಟ್- ಓರ್ವ ಸಾವು, ಇಬ್ಬರು ಗಂಭೀರ

    ಧಮ್ಕಿ ಹಾಕಲು ಮನೆಗೆ ಬಂದವರಿಗೆ ಶೂಟೌಟ್- ಓರ್ವ ಸಾವು, ಇಬ್ಬರು ಗಂಭೀರ

    ಧಾರವಾಡ: ಆಸ್ತಿ ವಿಚಾರಕ್ಕೆ ಸಂಬಂಧಿಕರ ನಡುವಿನ ಜಗಳ ತಾರಕಕ್ಕೇರಿ ಶೂಟೌಟ್ ನಡೆದಿದ್ದು, ಪರಿಣಾಮ ಓರ್ವ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

    ಶಿವಯೋಗಿ ಬಾವಿಕಟ್ಟಿ (44) ಮೃತ ವ್ಯಕ್ತಿ. ನಗರದ ಮದಿಹಾಳದ ಗಣೇಶನಗರದಲ್ಲಿ ಶನಿವಾರ ಕಳೆದ ತಡರಾತ್ರಿ ಘಟನೆ ನಡೆದಿದೆ. ಜಿಲ್ಲೆಯ ಶಿರೂರ ಗ್ರಾಮದ ಶ್ರೀ ಶೈಲ್ ಎಂಬಾತ ತನ್ನ ರಿವಾಲ್ವರ್‌ನಿಂದ ಶಿವಯೋಗಿಯನ್ನು ಶೂಟ್ ಮಾಡಿ ಕೊಲೆ ಮಾಡಿದ್ದಾನೆ.

    ಶಿರೂರ ಗ್ರಾಮದಲ್ಲಿ ಶ್ರೀಶೈಲ್ ಹಾಗೂ ಆತನ ಸಹೋದರಿ ಸುವರ್ಣಾಗೆ ಸಂಬಂಧಿಸಿದ ಆಸ್ತಿ ಇದೆ. ಈ ಆಸ್ತಿ ವಿವಾದ ಬಹಳ ವರ್ಷಗಳಿಂದ ನಡೆಯುತ್ತಲೇ ಇತ್ತು. ಆದರೆ ಕಳೆದ ರಾತ್ರಿ ಸುವರ್ಣಾನ ಮಗ ಈರಪ್ಪ ಹೆಬ್ಬಳ್ಳಿ ತನ್ನ ಗೆಳೆಯನಾದ ಶಿವಯೋಗಿಯನ್ನು ಶ್ರೀಶೈಲ್ ಮನೆಗೆ ಕರೆದುಕೊಂಡು ಹೋಗಿ ಆಸ್ತಿ ಕೊಡಲು ಧಮ್ಕಿ ಹಾಕಿದ್ದಾನೆ. ಈ ವೇಳೆ ಈರಪ್ಪ ಹಾಗೂ ಶಿವಯೋಗಿ ಆರೋಪಿ ಶ್ರೀಶೈಲನಿಗೆ ಮಾರಕಾಸ್ತ್ರಗಳಿಂದ ಹೊಡೆಯಲು ಪ್ರಯತ್ನಿಸಿದ್ದಾರೆ. ಆಗ ಶ್ರೀಶೈಲ್ ತನ್ನ ಬಳಿ ಇದ್ದ ರಿವಾಲ್ವರ್‌ನಿಂದ ಶೂಟ್ ಮಾಡಿದ್ದಾನೆ.

    ಶೂಟ್ ಮಾಡಿದ ತಕ್ಷಣ ಶಿವಯೋಗಿಗೆ ಎದೆಗೆ ಗುಂಡು ಬಿದ್ದಿದೆ. ಈರಪ್ಪನಿಗೆ ಕೂಡ ಗುಂಡು ತಗುಲಿದೆ. ಇದೇ ವೇಳೆ ಈರಪ್ಪನ ಸಂಬಂಧಿ ಸುನೀಲ್ ಸ್ಥಳಕ್ಕೆ ಬಂದಿದ್ದಾನೆ. ಆತನ ಮೇಲೂ ಶ್ರೀಶೈಲ್ ಗುಂಡು ಹಾರಿಸಿದ್ದಾನೆ. ಮೂವರನ್ನ ಆಸ್ಪತ್ರೆಗೆ ಸಾಗಿಸುವ ವೇಳೆ ಶಿವಯೋಗಿ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ್ದಾನೆ.

    ಸದ್ಯ ಶೂಟೌಟಿನಲ್ಲಿ ಗಾಯಗೊಂಡ ಈರಪ್ಪ ಹಾಗೂ ಸುನೀಲ್‍ನನ್ನು ಚಿಕಿತ್ಸೆಗೆಂದು ಹುಬ್ಬಳ್ಳಿ ಕಿಮ್ಸ್ ಗೆ ದಾಖಲು ಮಾಡಲಾಗಿದೆ. ಈ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ. ಕೊಲೆ ಮಾಡಿ ಪರಾರಿಯಾದ ಶ್ರೀಶೈಲನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

  • ಆಸ್ತಿ ವ್ಯಾಜ್ಯ- ಮರ ಕಡಿಯುತ್ತಿದ್ದ ಮಗನನ್ನೆ ಕೊಚ್ಚಿ ಕೊಂದ ತಂದೆ

    ಆಸ್ತಿ ವ್ಯಾಜ್ಯ- ಮರ ಕಡಿಯುತ್ತಿದ್ದ ಮಗನನ್ನೆ ಕೊಚ್ಚಿ ಕೊಂದ ತಂದೆ

    ಚಾಮರಾಜನಗರ: ಆಸ್ತಿ ವ್ಯಾಜ್ಯ ಹಿನ್ನೆಲೆ ತಂದೆ ಮಗನನ್ನೇ ಕೊಚ್ಚಿ ಕೊಲೆಗೈದ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊನ್ನೆಗೌಡನಹುಂಡಿಯಲ್ಲಿ ನಡೆದಿದೆ.

    ಹೊನ್ನೆಗೌಡನಹುಂಡಿಯ ಮಲ್ಲಿಕಾರ್ಜುನಪ್ಪ ಕೊಲೆಯಾದ ದುರ್ಧೈವಿ. ತಂದೆ ಮಹಾದೇವಪ್ಪ ಹಾಗೂ ಆತನ ಎರಡನೇ ಮಗ ಮಂತ್ರಪ್ಪ ಕೃತ್ಯ ಎಸೆಗಿದ ಆರೋಪಿಗಳು.

    ಆಸ್ತಿ ವಿಚಾರಕ್ಕೆ ಮಹಾದೇವಪ್ಪ ಹಾಗೂ ಹಿರಿಯ ಮಲ್ಲಿಕಾರ್ಜುನಪ್ಪ ನಡುವೆ ಕಳೆದ ಎರಡು ವರ್ಷಗಳಿಂದ ಜಗಳ ನಡೆದಿತ್ತು. ಆದರೆ ಮಲ್ಲಿಕಾರ್ಜುನಪ್ಪ ಇಂದು ಬೆಳಗ್ಗೆ ಜಮೀನಿನ ಬಳಿ ಮರ ಕಡಿಯಲು ಹೋಗಿದ್ದ. ಈ ವೇಳೆ ಅಲ್ಲಿಗೆ ಬಂದ ಮಹಾದೇವಪ್ಪ ಮಗನ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾನೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಏರಿದ ಪರಿಣಾಮ ಮಹಾದೇವಪ್ಪ ಮಗನ ಮೇಲೆ ಹಲ್ಲೆ ಮಾಡಿ ಕೊಚ್ಚಿ ಕೊಲೆಗೈದಿದ್ದಾನೆ. ಇದಕ್ಕೆ ಆತನ ಎರಡನೇ ಮಗ ಮಂತ್ರಪ್ಪ ಕೂಡ ಸಾಥ್ ನೀಡಿದ್ದ.

    ಕೃತ್ಯದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಗ್ರಾಮಸ್ಥರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗುಂಡ್ಲುಪೇಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಗಳಿಗೆ ಬಲೆ ಬೀಸಿದ್ದರು. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

  • ಮೂವರು ಪತ್ನಿಯರಿಗೆ ಆಸ್ತಿ ಹಂಚಿಕೆ ಭಯ- 6 ಲಕ್ಷ ಸುಪಾರಿ ಕೊಟ್ಟು ಮೊದ್ಲ ಪತ್ನಿಯಿಂದ ಕೊಲೆ

    ಮೂವರು ಪತ್ನಿಯರಿಗೆ ಆಸ್ತಿ ಹಂಚಿಕೆ ಭಯ- 6 ಲಕ್ಷ ಸುಪಾರಿ ಕೊಟ್ಟು ಮೊದ್ಲ ಪತ್ನಿಯಿಂದ ಕೊಲೆ

    – ಕೊಲೆ ಮಾಡಿದ 6 ದಿನದಲ್ಲಿ ಆರೋಪಿಗಳು ಅರೆಸ್ಟ್
    – 3 ವರ್ಷದಲ್ಲಿ ಮೂರು ವಿವಾಹ

    ಲಕ್ನೋ: ಮಹಿಳೆಯೊಬ್ಬಳು ಆಸ್ತಿಗೋಸ್ಕರ ಸುಪಾರಿ ನೀಡಿ ಪತಿಯನ್ನೇ ಕೊಲೆ ಮಾಡಿಸಿರುವ ಘಟನೆ ಉತ್ತರ ಪ್ರದೇಶದ ಬಾಗಪತ್‍ನಲ್ಲಿ ನಡೆದಿದೆ.

    ವಿಕಾಸ್ ಸಿಂಗ್ ಕೊಲೆಯಾದ ವ್ಯಕ್ತಿ. ಆರೋಪಿ ಪತ್ನಿ ರಜನಿ ಆರು ಲಕ್ಷ ರೂಪಾಯಿ ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾಳೆ. ಆರೋಪಿ ಮಹಿಳೆಯನ್ನು ಗುರುವಾರ ಬಂಧಿಸಲಾಗಿದೆ. ಮೃತನಿಗೆ ನಾಲ್ವರು ಹೆಂಡತಿಯರಿದ್ದು, ಅವರೊಂದಿಗೆ ಆಸ್ತಿಯನ್ನು ಹಂಚಿಕೊಳ್ಳುವುದಕ್ಕೆ ಇಷ್ಟಪಡಲಿಲ್ಲ. ಹೀಗಾಗಿ ಆತನನ್ನು ಕೊಲೆ ಮಾಡಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮೃತ ವಿಕಾಸ್ ಸಿಂಗ್ ದೆಹಲಿಯಲ್ಲಿ ಕೆಲಸ ಮಾಡುತ್ತಿದ್ದನು. ವಿಕಾಸ್ ಸಿಂಗ್ ಕೆಲವು ದಿನಗಳ ಹಿಂದೆ ಬಾಗಪತ್‍ನಲ್ಲಿರುವ ತಮ್ಮ ಗ್ರಾಮಕ್ಕೆ ಬಂದಿದ್ದನು. ಜೂನ್ 19 ರಂದು ಗ್ರಾಮದಲ್ಲಿ ಆತನನ್ನು ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದರು. ಕೊಲೆಯಾದ ಆರು ದಿನದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಮಹಿಳೆ ದೆಹಲಿಯ ನಂಗ್ಲೋಯಿ ಪ್ರದೇಶದವಳು ಎಂದು ಇನ್ಸ್ ಪೆಕ್ಟರ್ ಪ್ರವೀಣ್ ಕುಮಾರ್ ಹೇಳಿದ್ದಾರೆ.

    ಮೃತ ವಿಕಾಸ್ ಸಿಂಗ್ ಮತ್ತು ಆರೋಪಿ ರಜನಿ 2009ರಲ್ಲಿ ಮದುವೆಯಾಗಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದರು. ಆದರೆ ಮೃತ ವಿಕಾಶ್ ಸಿಂಗ್ 2017 ಮತ್ತು 2020ರ ನಡುವೆ ಮತ್ತೆ ಮೂವರು ಮಹಿಳೆಯರನ್ನು ಮದುವೆಯಾಗಿದ್ದನು. ಇದರಿಂದ ಆರೋಪಿ ರಜನಿಗೆ ತನ್ನ ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿತ್ತು. ವಿಕಾಸ್ ತನಗೆ ವಿಚ್ಛೇದನ ನೀಡುತ್ತಾನೆ ಮತ್ತು ತನ್ನ ಆಸ್ತಿಯನ್ನು ಮೂವರು ಪತ್ನಿಯರೊಂದಿಗೆ ಹಂಚಿಕೊಳ್ಳುತ್ತಾನೆ ಎಂದು ಆರೋಪಿ ಭಯಪಟ್ಟಿದ್ದಳು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.

    ಕೊನೆಗೆ ರಜನಿ ಆಸ್ತಿಗೋಸ್ಕರ ಪತಿಯನ್ನ ಕೊಲೆ ಮಾಡಿಸಲು ಪ್ಲಾನ್ ಮಾಡಿಕೊಂಡಿದ್ದಳು. ಅದರಂತೆಯೇ ಕೊಲೆ ಮಾಡಲು ಕಿಲ್ಲರ್ ಸುಧೀರ್ ಸಿಂಗ್‍ಗೆ ಆರು ಲಕ್ಷ ರೂ. ನೀಡಿದ್ದಳು. ಸುದೀಪ್ ಸಿಂಗ್ ಕೊಲೆ ಮಾಡಲು ಮೂವರು ಸ್ಥಳೀಯ ಶೂಟರ್‌ಗಳನ್ನು ನೇಮಿಸಿದ್ದನು. ನಂತರ ಮೂವರು ವಿಕಾಸ್ ಸಿಂಗ್ ಮನೆಗೆ ಹೋಗಿ ಗುಂಡಿಕ್ಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಸಿಂಗ್ ಹೇಳಿದ್ದಾರೆ.

    ಸದ್ಯಕ್ಕೆ ಆರೋಪಿಗಳಾದ ರಜನಿ, ಸುದೀರ್ ಸಿಂಗ್ ಮತ್ತು ರೋಹಿತ್ ಸಿಂಗ್‍ನನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳಾದ ಸಚಿನ್ ಸಿಂಗ್ ಮತ್ತು ರವಿ ಸಿಂಗ್ ಪರಾರಿಯಾಗಿದ್ದಾರೆ.

  • ಚಿಕ್ಕಪ್ಪನ ಜೊತೆಗೂಡಿ ತಂದೆ ಕೊಲೆಗೆ ಮಗ ಸುಪಾರಿ- ಆರೋಪಿಗಳ ಬಂಧನ

    ಚಿಕ್ಕಪ್ಪನ ಜೊತೆಗೂಡಿ ತಂದೆ ಕೊಲೆಗೆ ಮಗ ಸುಪಾರಿ- ಆರೋಪಿಗಳ ಬಂಧನ

    – 3 ಬಾರಿ ಸ್ಕೆಚ್ ಮಿಸ್, ನಾಲ್ಕನೇ ಬಾರಿ ಕತ್ತು ಸೀಳಿ ಹತ್ಯೆ

    ಬೆಂಗಳೂರು: ಆಸ್ತಿಗಾಗಿ ಚಿಕ್ಕಪ್ಪನ ಜೊತೆಗೆ ಸೇರಿ ಮಗನೊಬ್ಬ ತಂದೆಯನ್ನೇ ಬರ್ಬರವಾಗಿ ಕೊಲೆ ಮಾಡಿಸಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.

    ಬಳ್ಳಾರಿಯ ಸ್ಟೀಲ್ ಅಂಡ್ ಅಲೈ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿಂಗನಮನ ಮಾಧವ್ ಕೊಲೆಯಾದ ತಂದೆ. ಮಾಧವ್ ಅವರ ಕಿರಿಯ ಮಗ ಹರಿಕೃಷ್ಣ ಹಾಗೂ ಸಹೋದರ ಶಿವರಾಮ್ ಪ್ರಸಾದ್ ಕೊಲೆಗೆ ಸುಪಾರಿ ನೀಡಿದ್ದ ಆರೋಪಿಗಳು. ಗುಪ್ಪಲಾಳ ಅಪಾರ್ಟ್ಮೆಂಟ್ ಬಳಿ ಫೆಬ್ರವರಿ 14ರಂದು ಆರೋಪಿಗಳು ಕೊಲೆಗೈದು ಪರಾರಿಯಾಗಿದ್ದರು.

    ರಿಯಾಜ್ ಅಬ್ದುಲ್ ಶೇಖ್, ಶಹಬಾಜ್, ಶಾರುಖ್, ಆದಿಲ್ ಖಾನ್ ಹಾಗೂ ಸಲ್ಮಾನ್ ಸುಪಾರಿ ಪಡೆದು ಕೊಲೆ ಮಾಡಿದ್ದ ಆರೋಪಿಗಳು. ಆರೋಪಿಗಳನ್ನು ತಲಘಟಪುರ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

    ಏನಿದು ಪ್ರಕರಣ?:
    ಮಾಧವ್ ಹಲವು ವರ್ಷಗಳಿಂದ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡದ್ದರು. ಜೊತೆಗೆ 100 ಕೋಟಿ ರೂ. ಮೌಲ್ಯದ ಸಾವಿರ ಎಕರೆ ಭೂಮಿ ಖರೀದಿಸಿ ಬಳ್ಳಾರಿ ಸ್ಟೀಲ್ ಅಲೈ ಲಿಮಿಟೆಡ್ ಎಂಬ ಕಂಪನಿ ಶುರು ಮಾಡಿದ್ದರು. ಕೆಲ ವರ್ಷಗಳಿಂದ ಮೈನಿಂಗ್ ಬ್ಯುಸಿನೆಸ್ ಸ್ಥಗಿತವಾಗಿದ್ದರಿಂದ ನಷ್ಟ ಅನುಭವಿಸಿದ್ದರು. ಇದರಿಂದಾಗಿ ಕಂಪನಿಯ ನಿರ್ದೇಶಕರಾಗಿದ್ದ ಮಗ ಹರಿಕೃಷ್ಣ ಹಾಗೂ ಸಹೋದರ ಶಿವರಾಮ್ ಪ್ರಸಾದ್ ಎಂಬುವರು ಆಸ್ತಿ ಮಾರಾಟ ಮಾಡುವಂತೆ ಮಾಧವ್‍ಗೆ ಸೂಚಿಸಿದ್ದರು. ಅವರ ಸಲಹೆ ತಳ್ಳಿಹಾಕಿದ ಹರಿಕೃಷ್ಣ ಚಿಕ್ಕಪ್ಪನ ಜೊತೆಗೆ ಸೇರಿ ತಂದೆಯ ಮೇಲೆ 2014ರಿಂದಲೇ ಯತ್ನಿಸಿದ್ದ.

    ಹರಿಕೃಷ್ಣ ತಂದೆ ಮಾಧವ್ ಅವರ ಮೇಲೆ 2014ರಲ್ಲಿ ಆ್ಯಸಿಡ್ ಅಟ್ಯಾಕ್ ಮಾಡಿಸಿದ್ದ. ಬಳಿಕ ಕೊಲೆಗೆ ಸುಪಾರಿ ನೀಡಿದ್ದ. ಸುಪಾರಿ ಕಿಲ್ಲರ್ ಗಳು ಜೆಸಿ ನಗರ, ಎಸ್.ಜೆ.ಪಾರ್ಕ್ ಪ್ರದೇಶದಲ್ಲಿ ಮಾಧವ್ ಅವರ ಮೇಲೆ ಅಟ್ಯಾಕ್ ಮಾಡಿದ್ದರು. ಆದರೆ ಅವರು ಪಾರಾಗಿದ್ದರು.

    ಸತತ ಎರಡು ಪ್ರಯತ್ನಗಳು ವಿಫಲವಾಗಿದ್ದರಿಂದ 3ನೇ ಬಾರಿ ಸುಪಾರಿ ತಂಡಕ್ಕೆ ಹರಿಕೃಷ್ಣ ಹಾಗೂ ಶಿವರಾಮ್ ಪ್ರಸಾದ್ 25 ಲಕ್ಷ ನೀಡುವುದಾಗಿ ಹೇಳಿದ್ದರು. ಹೀಗಾಗಿ ಸುಪಾರಿ ಪಡೆದ ಆರೋಪಿಗಳು ಫೆಬ್ರವರಿ 14ರಂದು ಗುಪ್ಪಲಾಳ ಅಪಾರ್ಟ್ಮೆಂಟ್ ಬಳಿ ಮಾಧವ್ ಅವರನ್ನು ಕತ್ತು ಸೀಳಿ ಕೊಲೆ ಮಾಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ತಲಘಟಪುರ ಪೊಲೀಸರು ಬೇರೆ ರಾಜ್ಯಗಳಲ್ಲಿ ತೆಲೆ ಮರಿಸಿಕೊಂಡಿದ್ದ ಆರೋಪಿಗಳನ್ನು ಬಂಧಿಸಿದ್ದಾರೆ.

  • ಬರೋಬ್ಬರಿ 1,224 ಕೋಟಿ ಆಸ್ತಿ ಘೋಷಿಸಿಕೊಂಡ ಎಂಟಿಬಿ- 2.48 ಕೋಟಿ ಮೌಲ್ಯದ 5 ಐಷಾರಾಮಿ ಕಾರು

    ಬರೋಬ್ಬರಿ 1,224 ಕೋಟಿ ಆಸ್ತಿ ಘೋಷಿಸಿಕೊಂಡ ಎಂಟಿಬಿ- 2.48 ಕೋಟಿ ಮೌಲ್ಯದ 5 ಐಷಾರಾಮಿ ಕಾರು

    – ಆದರೂ 52 ಕೋಟಿ ಸಾಲಗಾರ

    ಬೆಂಗಳೂರು: ವಿಧಾನ ಪರಿಷತ್‍ಗೆ ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ ಸಚಿವ ಎಂಟಿಬಿ ನಾಗರಾಜ್ ಬರೋಬ್ಬರಿ 1,224 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.

    ಮೇಲ್ಮನೆ ಚುನಾವಣೆಗೆ ಬಿಜೆಪಿಯ ನಾಲ್ವರು ಅಭ್ಯರ್ಥಿಗಳು ಗುರುವಾರ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಅಭ್ಯರ್ಥಿಗಳಾದ ಸುನೀಲ್ ವಲ್ಯಾಪುರೆ, ಎಂಟಿಬಿ ನಾಗರಾಜ್, ಆರ್.ಶಂಕರ್ ಹಾಗೂ ಪ್ರತಾಪ್ ಸಿಂಹ ನಾಯಕ್ ಅವರು ನಾಮಪತ್ರ ಸಲ್ಲಿಸಿದರು. ಈ ಹಿನ್ನೆಲೆಯಲ್ಲಿ ಎಂಟಿಬಿ ನಾಗರಾಜ್ ತಮ್ಮ ಆಸ್ತಿಯನ್ನು ಫೋಷಿಸಿಕೊಂಡಿದ್ದಾರೆ. ಎಂಟಿಬಿ ವಿರುದ್ಧ ಒಂದು ಪೊಲೀಸ್ ದೂರು ಇದೆ. ನಂದಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಪ್ರಕರಣ ವಿಚಾರಣೆ ಹಂತದಲ್ಲಿದೆ.

    ಎಂಟಿಬಿ ಹೆಸರಲ್ಲಿ ಒಟ್ಟು 884 ಕೋಟಿ ಆಸ್ತಿ, ಪತ್ನಿ ಹೆಸರಲ್ಲಿ 331 ಕೋಟಿ ಆಸ್ತಿ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಎಂಟಿಬಿ ಹೆಸರಲ್ಲಿ 461 ಕೋಟಿ ರೂ. ಚರಾಸ್ತಿ, 416 ಕೋಟಿ ರೂ. ಸ್ಥಿರಾಸ್ತಿ ಹೊಂದಿದ್ದಾರೆ. ಪತ್ನಿ ಶಾಂತಕುಮಾರಿ ಹೆಸರಲ್ಲಿ 160 ಕೋಟಿ ರೂ. ಚರಾಸ್ತಿ, 179ಕೋಟಿ ರೂ. ಸ್ಥಿರಾಸ್ತಿ ಇದೆ. ಅಲ್ಲದೇ ಎಂಟಿಬಿ 2.23 ಕೋಟಿ ಮೌಲ್ಯದ ವಜ್ರ, ಪ್ಲಾಟಿನಂ, ಚಿನ್ನಾಭರಣ ಹೊಂದಿದ್ದಾರೆ.

    ಎಂಟಿಬಿ ಆಸ್ತಿ ವಿವರ:
    ಎಂಟಿಬಿ ನಾಗರಾಜ್ ಬಳಿ ನಗದು 32.60 ಲಕ್ಷ ರೂ. ಇದೆ. ಇನ್ನೂ ಎಂಟಿಬಿ ಪತ್ನಿ ಶಾಂತಕುಮಾರಿ ಬಳಿ ನಗದು 45.60 ಲಕ್ಷ ರೂ. ಇದೆ. ಅಲ್ಲದೇ ಎಂಟಿಬಿ ಬ್ಯಾಂಕ್ ಸೇವಿಂಗ್ಸ್ ಖಾತೆಯಲ್ಲಿ 20.26 ಕೋಟಿ ರೂ. ಇದೆ. ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ ಮೊತ್ತ 144.41 ಕೋಟಿ ರೂ. ಪತ್ನಿ ಬ್ಯಾಂಕ್ ಸೇವಿಂಗ್ಸ್ 11.21 ಕೋಟಿ ರೂ., ಬ್ಯಾಂಕ್ ಫಿಕ್ಸೆಡ್ ಡೆಪಾಸಿಟ್ 34.08 ಕೋಟಿ ರೂ. ಇದೆ.

    ಎಂಟಿಬಿ ಬಾಂಡ್ ಮತ್ತು ಷೇರುಗಳ ಮೊತ್ತ 12 ಕೋಟಿ ರೂ. ಆಗಿದೆ. ಪತ್ನಿ ಹೆಸರಿನಲ್ಲಿರುವ ವಿವಿಧ ಬಾಂಡ್ ಮತ್ತು ಷೇರುಗಳ ಮೊತ್ತ 70 ಕೋಟಿ ರೂ. ಇದೆ. ಅಲ್ಲದೇ ಎಂಟಿಬಿ ಮಾಡಿರುವ ಸಾಲ, ಕೊಟ್ಟಿರುವ ಸಾಲ ಒಟ್ಟು ಸೇರಿ 285 ಕೋಟಿ ರೂ. ಇದೆ. ಪತ್ನಿ ಮಾಡಿದ ಸಾಲ, ಕೊಟ್ಟ ಸಾಲದ ಒಟ್ಟು ಮೊತ್ತ 41 ಕೋಟಿ ರೂ. ಆಗಿದೆ. ಇನ್ನೂ ಎಂಟಿಬಿ 2.48 ಕೋಟಿ ಮೌಲ್ಯದ ವಿವಿಧ ವಾಹನಗಳಿವೆ. ಪತ್ನಿಯು ಕೂಡ 1.72 ಕೋಟಿ ಮೌಲ್ಯದ ವಿವಿಧ ವಾಹನಗಳ ಒಡತಿಯಾಗಿದ್ದಾರೆ.

    ಎಂಟಿಬಿ ಹೊಂದಿರುವ ಕೃಷಿ, ವಿವಿಧ ಕಟ್ಟಡಗಳ ಒಟ್ಟು ಸ್ಥಿರಾಸ್ತಿ ಮೌಲ್ಯ 422.75 ಕೋಟಿ ರೂ. ಆಗಿದೆ. ಪತ್ನಿಯು ಒಟ್ಟು 179 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿಗಳ ಒಡತಿ ಆಗಿದ್ದಾರೆ. ಆದರೂ ಎಂಟಿಬಿ 52.75 ಕೋಟಿ ರೂ. ಸಾಲಗಾರ ಆಗಿದ್ದಾರೆ. ಪತ್ನಿ ಮಾಡಿರುವ ಸಾಲ 1.97 ಕೋಟಿ ರೂ. ಎಂದು ಆಸ್ತಿ ವಿವರದಲ್ಲಿ ಘೋಷಿಸಿಕೊಂಡಿದ್ದಾರೆ.

    ಎಂಟಿಬಿ ಪಿತ್ರಾರ್ಜಿತ ಆಸ್ತಿ ಕೇವಲ 6.21 ಕೋಟಿ ರೂ. ಆಗಿದೆ. ಎಂಟಿಬಿ ತಮ್ಮ ಪುತ್ರ ನಿತಿನ್ ಪುರುಷೊತ್ತಮ್‍ಗೆ 129 ಕೋಟಿ ರೂ. ಸಾಲ ನೀಡಿದ್ದಾರೆ. ಎಂಟಿಬಿ ಬಳಿ ಲ್ಯಾಂಡ್ ರೋವರ್, ಮರ್ಸಿಡೀಸ್, ಟೊಯೋಟಾ ಮತ್ತು ಹುಂಡೈ ಕಂಪೆನಿಗಳ ಐಷಾರಾಮಿ ಕಾರುಗಳಿವೆ. ಕಾರುಗಳ ಒಟ್ಟು ಮೌಲ್ಯ 2.48 ಕೋಟಿ ರೂ. ಪತ್ನಿ ಬಳಿ ಇರುವ ಏಕೈಕ ಐಷಾರಾಮಿ ಕಾರು ಪಾರ್ಶ್ (ಪೋರ್ಶೆ), ಬೆಲೆ 1.72 ಕೋಟಿ ರೂ. ಆಗಿದೆ.

    ಇದಲ್ಲದೇ ಎಂಟಿಬಿ ಬಳಿ 54 ಎಕರೆ ಕೃಷಿ ಭೂಮಿ ಇದೆ. ಇದರ ಮಾರುಕಟ್ಟೆ ಮೌಲ್ಯ 29.86 ಕೋಟಿ ರೂ. ಆಗಿದೆ. ಪತ್ನಿ ಹೆಸರಲ್ಲಿ 4 ಎಕರೆ ಕೃಷಿ ಭೂಮಿ, ಇದರ ಮೌಲ್ಯ 26 ಕೋಟಿ ರೂ. ಆಗಿದೆ. ಎಂಟಿಬಿ ಹೆಸರಲ್ಲಿ ಕೃಷಿಯೇತರ ಭೂಮಿ 64.66 ಲಕ್ಷ ಚದರಡಿ, ಮಾರುಕಟ್ಟೆ ಮೌಲ್ಯ 308 ಕೋಟಿ ರೂ. ಆಗಿದೆ. ಪತ್ನಿ ಹೆಸರಲ್ಲಿ 9.50 ಲಕ್ಷ ಚದರಡಿ ಕೃಷಿಯೇತರ ಭೂಮಿ ಇದೆ. ಇದರ ಮೌಲ್ಯ 94.47 ಕೋಟಿ ರೂ. ಎಂಟಿಬಿ ಬಳಿ 1.87 ಲಕ್ಷ ಚದರಡಿ ವಾಣಿಜ್ಯ ಕಟ್ಟಡಗಳು ಇವೆ. ಇದರ ಮೌಲ್ಯ 45 ಕೋಟಿ ರೂ. ಇದೆ. ಇದೆಲ್ಲವನ್ನು ಸೇರಿ ಒಟ್ಟು ಬರೋಬ್ಬರಿ 1,224 ಕೋಟಿ ಆಸ್ತಿ ಇದೆ ಎಂದು ಎಂಟಿಬಿ ಘೋಷಿಸಿಕೊಂಡಿದ್ದಾರೆ.

  • ತಾನು ಸಾಕಿದ್ದ ಎರಡು 2 ಆನೆಗಳಿಗೆ ಇಡೀ ಆಸ್ತಿಯನ್ನೇ ಬರೆದ

    ತಾನು ಸಾಕಿದ್ದ ಎರಡು 2 ಆನೆಗಳಿಗೆ ಇಡೀ ಆಸ್ತಿಯನ್ನೇ ಬರೆದ

    – ರೌಡಿಗಳಿಂದ ಮಾಲೀಕನ ಪ್ರಾಣ ಉಳಿಸಿದ್ದ ಆನೆ
    – ನಾನು ಇಲ್ಲದಿದ್ದಾಗ ಹಸಿವಿನಿಂದ ಬಳಲಬಾರದು

    ಪಾಟ್ನಾ: ಇತ್ತೀಚೆಗೆ ಕೇರಳದಲ್ಲಿ ಪಟಾಕಿ ತುಂಬಿದ್ದ ಪೈನಾಪಲ್ ಹಣ್ಣು ತಿಂದು ಗರ್ಭಿಣಿ ಆನೆಯೊಂದು ಸಾವನ್ನಪ್ಪಿತ್ತು. ಆದರೆ ಬಿಹಾರದ ಪ್ರಾಣಿ ಪ್ರೇಮಿಯೊಬ್ಬರು ತಮ್ಮ ಸಂಪೂರ್ಣ ಆಸ್ತಿಯನ್ನು ತಾವು ಸಾಕಿದ್ದ ಎರಡು ಆನೆಗಳಿಗೆ ಕೊಟ್ಟಿದ್ದಾರೆ.

    ಪಾಟ್ನಾದ ಮೊಹಮ್ಮದ್ ಅಖ್ತರ್ ಇಮಾಮ್ (50) ತಾವು ಸಾಕಿರುವ 20 ಮತ್ತು 15 ವರ್ಷ ವಯಸ್ಸಿನ ಎರಡು ಆನೆಗಳಿಗೆ ಕೋಟ್ಯಂತರ ಬೆಲೆ ಬಾಳುವ ಜಮೀನನ್ನು ಕೊಟ್ಟಿದ್ದಾರೆ. ಅಲ್ಲದೇ ಅಖ್ತರ್ ಮೋತಿ ಮತ್ತು ರಾಣಿ ಎಂಬ ಹೆಸರಿನ ತನ್ನ ಎರಡು ಆನೆಗಳೊಂದಿಗೆ ವಾಸಿಸುತ್ತಿದ್ದಾರೆ.

    “ಕುಟುಂಬ ಪರಂಪರೆಯಾಗಿ ಈ ಎರಡು ಆನೆಗಳು ನನಗೆ ಸಿಕ್ಕಿವೆ. ಮೋತಿ ಮತ್ತು ರಾಣಿ ನನ್ನ ಮಕ್ಕಳಂತೆ. ನನ್ನ ಬಾಲ್ಯದಿಂದಲೂ ನಾನು ಅವರೊಂದಿಗೆ ವಾಸಿಸುತ್ತಿದ್ದೇನೆ. ಇಬ್ಬರು ನನ್ನ ಕುಟುಂಬ ಸದಸ್ಯರು. ನಾನು ಜೀವಂತವಾಗಿರದಿದ್ದಾಗ ಎರಡು ಆನೆಗಳು ಹಸಿವಿನಿಂದ ಬಳಲುವಂತಾಗಬಾರದು. ಹೀಗಾಗಿ ನನ್ನ 6.25 ಎಕರೆ ಭೂಮಿಯನ್ನು ಎರಡು ಆನೆಗಳಿಗೆ ವಿಲ್ ಬರೆದಿದ್ದೇನೆ” ಎಂದು ಅಖ್ತರ್ ತಿಳಿಸಿದರು.

    ಎರಡು ಆನೆಗಳಲ್ಲಿ ಮೋತಿ ನನ್ನ ಜೀವವನ್ನು ಉಳಿಸಿದ್ದಾನೆ. ಮೋತಿ ಭೋಜಪುರ ಜಿಲ್ಲೆಯ ಶಹಪುರ್ ಪ್ರದೇಶಕ್ಕೆ ಮಾವುತನ ಜೊತೆಗೆ ಹೋಗಿದ್ದನು. ಅಲ್ಲಿ ಅವನು ಅನಾರೋಗ್ಯಕ್ಕೆ ಒಳಗಾಗಿದ್ದ. ಆತನಿಗೆ ಚಿಕಿತ್ಸೆ ನೀಡಲು ನಾನು ಅಲ್ಲಿಗೆ ಹೋದೆ. ಒಂದು ದಿನ ನಾನು ಅಲ್ಲಿ ನಿದ್ದೆ ಮಾಡುವಾಗ ಮೋತಿ ಜೋರಾಗಿ ಕೂಗಿಕೊಂಡ. ತಾನು ತಕ್ಷಣ ಎಚ್ಚರಕೊಂಡೆ, ಆಗ ಯಾರೋ ರೌಡಿಗಳು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದರು. ಆಗ ನನ್ನ ಜೀವವನ್ನು ಉಳಿಸಿಕೊಳ್ಳಲು ಓಡಿ ಹೋಗಿದ್ದೆ ಎಂದು ಅಖ್ತರ್ ನಡೆದ ಘಟನೆಯ ಬಗ್ಗೆ ವಿವರಿಸಿದರು.

    ನನ್ನ ಸ್ವಂತ ಕುಟುಂಬ ಸದಸ್ಯರು ಪ್ರಾಣಿ ಕಳ್ಳಸಾಗಾಣಿಕೆದಾರರೊಂದಿಗೆ ಕೈಜೋಡಿಸಿದ್ದಾರೆ. ಈ ಆನೆಗಳನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಎರಡು ಆನೆಗಳಿಗೆ ನನ್ನ ಆಸ್ತಿಯನ್ನು ಬರೆದಿರುವುದರಿಂದ ನನ್ನ ಕುಟುಂಬ ಸದಸ್ಯರಿಂದ ನನಗೆ ಜೀವ ಭಯವಿದೆ ಎಂದು ಅಖ್ತರ್ ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಖ್ತರ್ ವನ್ಯಜೀವಿ ವಾರ್ಡನ್ ಮತ್ತು ಪಾಟ್ನಾ ಪೊಲೀಸ್ ಮುಖ್ಯಸ್ಥರಿಗೆ ಈ ಬಗ್ಗೆ ಪತ್ರ ಬರೆದಿದ್ದಾರೆ.

    ಸರ್ಕಾರ ಆನೆಯನ್ನು ರಕ್ಷಿಸಬೇಕು. ಇಲ್ಲವಾದರೆ ಮುಂದೆ ನಾವು ಆನೆಗಳು ಇದ್ದವು ಎಂದು ಪುಸ್ತಕಗಳಲ್ಲಿ ಮಾತ್ರ ನೋಡಬೇಕಾಗುತ್ತದೆ. ಆನೆಗಳು ಆಹಾರವನ್ನು ಹುಡುಕಿಕೊಡು ಗ್ರಾಮಗಳಿಗೆ ಬರುತ್ತವೆ. ಹೀಗಾಗಿ ನಾವು ಕಾಡನ್ನ ಉಳಿಸಬೇಕು ಎಂದು ಸರ್ಕಾರದ ಬಳಿ ಅಖ್ತರ್ ಮನವಿ ಮಾಡಿದರು.

  • ಕೆಲಸಗಾರರಿಗೆ ಹಣದೊಂದಿಗೆ ಸೈಟ್, ಮಕ್ಕಳಿಗೆ ಆಸ್ತಿ ಹಂಚಿಕೆ – ರೈ ವಿಲ್‍ನಲ್ಲಿ ಏನಿದೆ?

    ಕೆಲಸಗಾರರಿಗೆ ಹಣದೊಂದಿಗೆ ಸೈಟ್, ಮಕ್ಕಳಿಗೆ ಆಸ್ತಿ ಹಂಚಿಕೆ – ರೈ ವಿಲ್‍ನಲ್ಲಿ ಏನಿದೆ?

    – 41 ಪುಟಗಳ ವಿಲ್ ಬರೆದಿರುವ ಮುತ್ತಪ್ಪ ರೈ
    – ಎರಡನೇ ಪತ್ನಿ ಅನುರಾಧಾಗೂ ಆಸ್ತಿ ಹಂಚಿಕೆ
    – ಆಪ್ತರು, ಸಂಬಂಧಿಕರಿಗೆ ಆಸ್ತಿ ಹಂಚಿಕೆ

    ಬೆಂಗಳೂರು: ಸತ್ತ ಮೇಲೆಯೂ ಕೆಲಸದವರ ಪಾಲಿಗೆ ಮತ್ತಪ್ಪ ರೈ ದಾರಿ ದೀಪವಾಗಿದ್ದಾರೆ. ಮನೆಗೆಲಸ, ತೋಟ, ಹಾಗೂ ಕಾರು ಚಾಲಕರು, ಗನ್ ಮ್ಯಾನ್ ಗಳಿಗೆ ಸೈಟ್ ಮತ್ತು ಹಣ ನೀಡಿದ್ದಾರೆ.

    ಮುತ್ತಪ್ಪ ರೈ ನಿಧನರಾದ ಬಳಿಕ ಆಸ್ತಿ ಏನಾಗಬಹುದು ಎಂಬ ಪ್ರಶ್ನೆ ಎದ್ದಿತ್ತು. ಈ ಪ್ರಶ್ನೆಗೆ ಮುತ್ತಪ್ಪ ರೈ ಬದುಕಿರುವಾಗಲೇ ವಿಲ್ ಬರೆದು ಉತ್ತರ ನೀಡಿದ್ದಾರೆ. 41 ಪುಟಗಳ ವಿಲ್‍ನಲ್ಲಿ ಯಾರಿಗೆ ಎಷ್ಟು ಆಸ್ತಿ ಕೊಡಬೇಕು? ಸೈಟ್ ಹಾಗೂ ಮನೆಗಳು ಯಾರಿಗೆ ಸೇರಬೇಕು? ಸಂಘಟನೆ ಜವಾಬ್ದಾರಿ ಯಾರು ಹೊತ್ತುಕೊಳ್ಳಬೇಕು ಎಂಬ ಬಗ್ಗೆ ವಿವರವಾಗಿ ಬರೆದಿದ್ದಾರೆ. ಮುತ್ತಪ್ಪ ರೈ ತಮ್ಮ ವಕೀಲ ನಾರಾಯಣ ಸ್ವಾಮಿ ಬಳಿ ವಿಲ್ ಮಾಡಿಸಿದ್ದು ಈಗ ಲಭ್ಯವಾಗಿದೆ.

    ಆಸ್ತಿ ಎಷ್ಟಿದೆ?
    ವಿಲ್ ಪ್ರಕಾರ ಸುಮಾರು 2 ಸಾವಿರ ಕೋಟಿಗೂ ಅಧಿಕ ಆಸ್ತಿ ರೈ ಹೆಸರಿನಲ್ಲಿದೆ. ದೇವನಹಳ್ಳಿ, ಯಲಹಂಕ, ಬಿಡದಿಯಲ್ಲಿ 150ಕ್ಕೂ ಅಧಿಕ ಎಕರೆ ಜಾಗ, ಮೈಸೂರು, ಮಂಗಳೂರು, ಬಂಟ್ವಾಳ, ಪುತ್ತೂರಿನಲ್ಲಿ ನೂರಾರು ಎಕರೆ ಜಮೀನು ಮುತ್ತಪ್ಪ ರೈ ಹೆಸರಿನಲ್ಲಿದೆ. ಸಕಲೇಶಪುರದಲ್ಲಿ 200 ಎಕರೆ ಜಮೀನಿದೆ.

    ಹಂಚಿಕೆ ಹೇಗೆ?
    ಒಟ್ಟು 600ಕ್ಕೂ ಅಧಿಕ ಎಕರೆ ಜಮೀನನ್ನು ತನ್ನಿಬ್ಬರು ಮಕ್ಕಳಾದ ರಿಕ್ಕಿ ಹಾಗೂ ರಾಖಿ ರೈಗೆ ಗಿಫ್ಟ್ ಡೀಡ್ ಮಾಡಿದ್ದಾರೆ. ಆಸ್ತಿಗಳ ಪೈಕಿ ಮೈಸೂರು, ಪುತ್ತೂರು, ಬಂಟ್ವಾಳ, ಮಂಗಳೂರು ಜಾಗವನ್ನು ರಾಖಿ ರೈಗೆ ನೀಡಿದ್ದರೆ, ಸಕಲೇಶಪುರ, ಬಿಡದಿ, ಯಲಹಂಕ ಹಾಗೂ ದೇವನಹಳ್ಳಿ ಜಾಗವನ್ನು ಚಿಕ್ಕ ಮಗ ರಿಕ್ಕಿ ರೈಗೆ ಹಂಚಿಕೆ ಮಾಡಿದ್ದಾರೆ. ಆಪ್ತರು, ಸಂಬಂಧಿಕರಿಗೆ ಶೇ.20 ರಷ್ಟು ಆಸ್ತಿ ನೀಡಬೇಕೆಂದು ಸೂಚಿಸಿದ್ದಾರೆ. ಬಿಡದಿ ಹಾಗೂ ಸದಾಶಿವನಗರದ ಎರಡೂ ಮನೆಗಳ ಜವಾಬ್ದಾರಿಯನ್ನು ಚಿಕ್ಕ ಮಗ ರಿಕ್ಕಿ ರೈಗೆ ನೀಡಿದ್ದು ಟ್ರೇಡಿಂಗ್ ವ್ಯವಹಾರ ಕಂಪನಿಯನ್ನು ದೊಡ್ಡ ಮಗ ರಾಖಿ ನೋಡಿಕೊಳ್ಳುವಂತೆ ಸೂಚಿಸಿದ್ದಾರೆ.

    ಕೆಲಸಗಾರರಿಗೆ ಸೈಟ್:
    ನಂಬಿಕೆಯಿಂದ 15 ವರ್ಷಗಳ ಕಾಲ ತನ್ನ ಬಳಿ ಕೆಲಸ ಮಾಡಿದ 25 ಕೆಲಸಗಾರರಿಗೆ ಒಂದೊಂದು ಸೈಟ್ ಹಾಗೂ ಕೈಲಾದಷ್ಟು ಹಣ ನೀಡುವಂತೆ ಕಿರಿಯ ಮಗ ರಿಕ್ಕಿ ರೈಗೆ ಸೂಚಿಸಿದ್ದಾರೆ. ತಂದೆಯ ಸೂಚನೆಯಂತೆ ರಿಕ್ಕಿ ಈಗಾಗಲೇ ತಲಾ ಒಬ್ಬೊಬ್ಬರಿಗೆ 3 ಲಕ್ಷ ರೂಪಾಯಿಗಳನ್ನು ಹಂಚಿಕೆ ಮಾಡಿದ್ದಾರೆ.

    ಎರಡನೇ ಪತ್ನಿಗೂ ಹಂಚಿಕೆ:
    ವಿಲ್ ನಲ್ಲಿ ಈಗಾಗಲೇ ಎರಡನೇ ಪತ್ನಿ ಅನುರಾಧಾಗೆ ಆಸ್ತಿ ಹಂಚಿಕೆ ಮಾಡಿರುವುದಾಗಿ ಮುತ್ತಪ್ಪ ರೈ ತಿಳಿಸಿದ್ದಾರೆ. ಚಿನ್ನಾಭರಣ, ಕಾರು, ಕೋಟ್ಯಂತರ ರೂಪಾಯಿ ಹಣದ ಜೊತೆ ಹೆಚ್ ಡಿ ಕೋಟೆ ಆಸ್ತಿ, ಜೊತೆಗೆ ಸಹಕಾರ ನಗರದಲ್ಲಿ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿ ಕೊಡಲಾಗಿದೆ. ಅನುರಾಧಾ ಜೊತೆಗಿದ್ದ ಸಂದರ್ಭದಲ್ಲಿ ಅವರಿಗೆ ಸೇರಬೇಕಾದ ಆಸ್ತಿಯನ್ನು ನೀಡಲಾಗಿದೆ ಎಂದು ವಿಲ್ ನಲ್ಲಿ ಉಲ್ಲೇಖವಾಗಿದೆ.

    ಸಂಘಟನೆ ಹೊಣೆ ಯಾರಿಗೆ?
    ಜಯ ಕರ್ನಾಟಕ ಸಂಘಟನೆ ಯಾವುದೇ ಕಾರಣಕ್ಕೂ ಒಡೆಯಬಾರದು ಎಂದು ಹೇಳಿರುವ ಮುತ್ತಪ್ಪ ರೈ ಈ ಸಂಘಟನೆಯ ಜವಾಬ್ದಾರಿಯನ್ನು ಚಿಕ್ಕಮಗ ರಿಕ್ಕಿ ರೈಗೆ ನೀಡಿದ್ದಾರೆ. ಜಗದೀಶ್ ಸಂಘಟನೆಯ ಅಧ್ಯಕ್ಷತೆಯನ್ನು ನೋಡಿಕೊಳ್ಳಬೇಕು. ಮುಂದೆ ಈ ಸಂಘಟನೆಯನ್ನು ಬೆಳೆಸುವಂತೆ ಕಾರ್ಯಕರ್ತರಲ್ಲಿ ರೈ ಮನವಿಮಾಡಿರುವ ವಿಚಾರ ವಿಲ್ ನಲ್ಲಿ ಉಲ್ಲೇಖವಾಗಿದೆ.

    ವಿದೇಶದಲ್ಲಿ ಮುತ್ತಪ್ಪ ರೈ ಹೆಸರಿನಲ್ಲಿ ಕೋಟ್ಯಂತರ ರೂ. ಮೌಲ್ಯದ ಆಸ್ತಿ ಇದೆ ಎಂಬ ಸುದ್ದಿಗಳು ಹರಿದಾಡಿತ್ತು. ಆದರೆ ವಿಲ್ ನಲ್ಲಿ ವಿದೇಶದ ಆಸ್ತಿ ಬಗ್ಗೆ ಯಾವುದೇ ಉಲ್ಲೇಖ ಇಲ್ಲ. ಮಗನ ವ್ಯವಹಾರ ಬಿಟ್ಟರೆ ರೈಗೆ ಯಾವುದೇ ಆಸ್ತಿ ಇಲ್ಲ. ಎರಡನೇ ಹೆಂಡತಿ ಅನುರಾಧಾಗೂ ಮುತ್ತಪ್ಪ ರೈ ಮಕ್ಕಳಿಗೂ ಯಾವುದೇ ಬಿಕ್ಕಟ್ಟು ಇಲ್ಲ. ಈಗಲೂ ಎಲ್ಲರೂ ಚೆನ್ನಾಗಿದ್ದಾರೆ ಮುಂದೆಯೂ ಚೆನ್ನಾಗಿ ಇರುತ್ತಾರೆ. ಆಸ್ತಿ ವಿಚಾರವಾಗಿ ಅನುರಾಧ ರೈ ಕೇಸ್ ಹಾಕುತ್ತಾರೆ ಎಂಬ ಸುದ್ದಿಗಳೆಲ್ಲ ಸುಳ್ಳು ಎಂಬ ವಿಚಾರ ಈಗ ಬಹಿರಂಗವಾಗಿದೆ.

  • ತಿರುಪತಿ ಶಾಪದಿಂದ್ಲೇ ಆಂಧ್ರ ಸಿಎಂ ತಂದೆ ಸಾವು: ಮುತಾಲಿಕ್

    ತಿರುಪತಿ ಶಾಪದಿಂದ್ಲೇ ಆಂಧ್ರ ಸಿಎಂ ತಂದೆ ಸಾವು: ಮುತಾಲಿಕ್

    ಧಾರವಾಡ: ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ತಂದೆ ತಿರುಪತಿ ದೇವರ ಶಾಪದಿಂದಲೇ ಮೃತಪಟ್ಟಿದ್ದಾರೆ ಎಂದು ಹಿಂದೂಪರ ಸಂಘಟನೆ ಮುಖಂಡ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.

    ತಿರುಪತಿ ಆಸ್ತಿ ಮಾರಾಟ ವಿಚಾರವಾಗಿ ಧಾರವಾಡ ಜಿಲ್ಲಾಧಿಕಾರಿಗಳ ಮೂಲಕ ಆಂಧ್ರ ರಾಜ್ಯಪಾಲರಿಗೆ ಮನವಿ ಮಾಡಿ ಮಾತನಾಡಿದ ಅವರು, ಸೆಕ್ಯೂಲರ್ ಎನ್ನುವ ಇವರು ಹಿಂದೂ ದೇವಸ್ಥಾನದ ಮೇಲೆ ಆಘಾತ ಮಾಡುವ ಪ್ರಕ್ರಿಯೆ ನಡೆದಿದೆ. ಮದರಸಾ, ಚರ್ಚ್ ಆಸ್ತಿ ಬಗ್ಗೆ ಸರ್ಕಾರ ಮಾತಾನಾಡೋದಿಲ್ಲ. ಬದಲಾಗಿ ಹಿಂದೂಗಳ ಮೇಲೆನೇ ಕಣ್ಣು. ಜಗನ್ ತಂದೆ ಇದೇ ರೀತಿ ಮಾಡಿ ತಿರುಪತಿಯ ಶಾಪದಿಂದ ಸತ್ತು ಹೋದ. ಈ ರೀತಿ ಮಾಡಿದರೆ ನಿಮಗೂ ಕೂಡ ತಿರುಪತಿಯ ಶಾಪ ತಟ್ಟುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಆಂಧ್ರಪ್ರದೇಶ ಸರ್ಕಾರ ತಿರುಪತಿ ತಿಮ್ಮಪ್ಪನ ಆಸ್ತಿ ಮಾರಾಟ ಮಾಡಿ ಸರ್ಕಾರಕ್ಕೆ ಹಣ ಜಮಾ ಮಾಡುವ ಪ್ರಕ್ರಿಯೆ ಮಾಡುತ್ತಿದೆ. ಸದ್ಯ ಅದನ್ನ ತಾತ್ಕಾಲಿಕವಾಗಿ ತಡೆ ಹಿಡಿದಿದ್ದಾರೆ. ಆದರೆ ಮುಂದೆಯಾದರೂ ಈ ಪ್ರಕ್ರಿಯೆ ಮಾಡಿಯೇ ಮಾಡುತ್ತಾರೆ. ಅದಕ್ಕೆ ನಮ್ಮ ವಿರೋಧ ಇದೆ ಎಂದರು.

    ತಿರುಪತಿ ದೇವಸ್ಥಾನ ಆಂಧ್ರದಷ್ಟೇ ಅಲ್ಲ, ಇಡಿ ಜಗತ್ತಿನ ಜನ ಬರುವ ದೇವಸ್ಥಾನವಾಗಿದೆ. ಈ ದೇವಸ್ಥಾನಕ್ಕೆ ಬಂದ ಭಕ್ತರ ಕಾಣಿಕೆ ಹಣ ಅದೇ ದೇವಸ್ಥಾನಕ್ಕೆ ಬಳಕೆ ಮಾಡಬೇಕು. ನಿಮ್ಮ ಸ್ವಾರ್ಥಕ್ಕೊಸ್ಕರ ಬಳಸಿಕೊಳ್ಳಬಾರದು. ಸ್ಥಿರ ಆಸ್ತಿ ಮಾರಾಟ ಮಾಡಬಾರದು ಎಂದು ಒತ್ತಾಯಿಸಿದರು.

  • ಆಸ್ತಿಗಾಗಿ ಪತ್ನಿಯನ್ನ ಕೊಂದು ಹಾವಿನ ದ್ವೇಷದ ಕಥೆ ಕಟ್ಟಿದ್ದ ಪತಿ ಅರೆಸ್ಟ್

    ಆಸ್ತಿಗಾಗಿ ಪತ್ನಿಯನ್ನ ಕೊಂದು ಹಾವಿನ ದ್ವೇಷದ ಕಥೆ ಕಟ್ಟಿದ್ದ ಪತಿ ಅರೆಸ್ಟ್

    – ಒಂದಲ್ಲ ಎರಡು ಬಾರಿ ಹಾವಿನಿಂದ ಪತ್ನಿಗೆ ಕಚ್ಚಿಸಿದ್ದ ಪಾಪಿ
    – ಕೃತ್ಯಕ್ಕೆ ಸಹಕರಿಸಿದ್ದ ಹಾವಾಡಿಗನ ಬಂಧನ

    ತಿರುವನಂತಪುರಂ: ಆಸ್ತಿಗಾಗಿ ಪತ್ನಿಯನ್ನ ಕೊಂದು ಹಾವಿನ ದ್ವೇಷದ ಕಥೆ ಕಟ್ಟಿದ್ದ ಪತಿ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಹಾವಾಡಿಗನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

    ಕೊಲ್ಲಂ ಜಿಲ್ಲೆಯ ಅಂಚಲ್ ನಿವಾಸಿ ಸೂರಜ್ (27) ಕೊಲೆಗೈದ ಪತಿ ಹಾಗೂ ಸುರೇಶ್ ಕೊಲೆಗೆ ಸಹಕರಿಸಿದ ಹಾವಾಡಿಗ. ಎಸ್.ಉತ್ತರ (25) ಕೊಲೆಯಾದ ಮಹಿಳೆ. ತಂದೆಯ ಹೇಯ ಕೃತ್ಯಕ್ಕೆ ಒಂದು ವರ್ಷದ ಗಂಡು ಮಗು ತಾಯಿಯನ್ನ ಕಳೆದುಕೊಂಡಿದೆ.

    ಏನಿದು ಪ್ರಕರಣ?:
    ಉತ್ತರಾಗೆ ಫೆಬ್ರವರಿಯಲ್ಲಿ ಹಾವು ಕಚ್ಚಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಆಸ್ಪತ್ರೆಯಲ್ಲಿ ಇದ್ದಾಗಲೇ ಅಂದ್ರೆ ಮೇ 7ರಂದು ಎರಡನೇ ಬಾರಿ ಹಾವು ಕಚ್ಚಿತ್ತು. ಆದರೆ ಉತ್ತರಾಳ ಪೋಷಕರು ಅಳಿಯನ ಮೇಲೆ ಶಂಕೆ ವ್ಯಕ್ತಪಡಿಸಿ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲದೆ ಸೂರಜ್ ವರದಕ್ಷಿಣೆಗಾಗಿ ನಮ್ಮ ಮಗಳಿಗೆ ಆಗಾಗ್ಗೆ ಕಿರುಕುಳ ನೀಡುತ್ತಿದ್ದ. ಮದುವೆಯ ಸಮಯದಲ್ಲಿ ನೀಡಿದ್ದ ಕೆಲವು ಆಭರಣಗಳು ಲಾಕರ್ ನಿಂದ ಕಾಣೆಯಾಗಿವೆ ಎಂದು ದೂರಿದ್ದರು.

    ಈ ಹಿನ್ನೆಲೆ ತನಿಖೆ ಆರಂಭಿಸಿದ ಪೊಲೀಸರಿಗೆ ಆಘಾತವೇ ಕಾದಿತ್ತು. ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೆಲ ಸತ್ಯಗಳು ಬೆಳಕಿಗೆ ಬಂದಿದ್ದವು. ಖಾಸಗಿ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಸೂರಜ್ ಕಳೆದ ಐದು ತಿಂಗಳುಗಳಿಂದ ಪತ್ನಿಯ ಕೊಲೆಗೆ ಸಂಚು ರೂಪಿಸಿದ್ದ. ಈ ಕುರಿತು ಇಂಟರ್ನೆಟ್‍ನಲ್ಲಿ ವಿಡಿಯೋ ಕೂಡ ನೋಡಿದ್ದ.

    ಸೂರಜ್ 10 ಸಾವಿರ ರೂ. ಪಾವತಿಸಿ ಕೊಲ್ಲಂ ಜಿಲ್ಲೆಯ ಹಾವಾಡಿಗ ಸುರೇಶ್‍ನಿಂದ ಹಾವನ್ನು ಖರೀದಿಸಿದ್ದ. ಬಳಿಕ ತನ್ನ ರೂಮ್‍ನಲ್ಲಿ ಹಾವನ್ನು ಬಿಟ್ಟು ಪತ್ನಿಗೆ ಕಚ್ಚುವಂತೆ ಮಾಡಿದ್ದ. ಮೊದಲ ಬಾರಿಗೆ ಹಾವು ಕಚ್ಚಿದಾಗಲೇ ಪತ್ನಿ ಸಾಯುತ್ತಾಳೆ ಎಂದು ಸೂರಜ್ ತಿಳಿಸಿದ್ದ. ಆದರೆ ಅದೃಷ್ಟವಶಾತ್ ಉತ್ತರ ಬದುಕುಳಿದಿದ್ದಳು. ಅಳಿಯನ ಮೇಲೆ ಆಗಲೇ ಅನುಮಾನ ವ್ಯಕ್ತಪಡಿಸಿದ್ದ ಉತ್ತರಾಳ ಪೋಷಕರು ಮಗಳನ್ನು ತಮ್ಮ ಊರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸುತ್ತಿದ್ದರು.

    ಆರೋಪಿ ಮೇ 6ರಂದು ಮತ್ತೆ ಹಾವಿನಿಂದ ಪತ್ನಿಗೆ ಕಚ್ಚಿಸಿ ಕೊಲೆಗೈದಿದ್ದ. ಅಷ್ಟೇ ಅಲ್ಲದೆ ಹಾವನ್ನು ಕೊಂದು ಒಳ್ಳೆಯವನಂತೆ ನಾಟಕವಾಡಿದ್ದ. ಆರೋಪಿಯನ್ನು ವಿಚಾರಣೆಗೆ ಒಳಪಡಿಸಿದಾಗ ಕೃತ್ಯ ಬೆಳಕಿಗೆ ಬಂದಿದೆ.

    ಪತ್ನಿಯನ್ನ ಕೊಂದರೆ ಆಕೆಯ ಹೆಸರಿನಲ್ಲಿದ್ದ ಆಸ್ತಿ ತನಗೆ ಬರುತ್ತದೆ ಎಂದು ಸೂರಜ್ ಕೃತ್ಯ ಎಸೆಗಿದ್ದಾನೆ. ಅಷ್ಟೇ ಅಲ್ಲದೆ ವರದಕ್ಷಿಣೆಗಾಗಿ ಪದೇ ಪದೇ ಕಿರುಕುಳ ನೀಡುತ್ತಿದ್ದ ಎನ್ನುವುದು ವಿಚಾರಣೆ ವೇಳೆ ಸ್ಪಷ್ಟವಾಗಿದೆ.