Tag: ಆಸ್ಕರ್ ಫರ್ನಾಂಡಿಸ್

  • ಸಿಎಂ ಬೊಮ್ಮಾಯಿ ಹಿಂದೊಮ್ಮೆ ಕಾಂಗ್ರೆಸ್ ಕದ ತಟ್ಟಿದ್ದರು: ವಿನಯ್ ಕುಮಾರ್ ಸೊರಕೆ

    ಸಿಎಂ ಬೊಮ್ಮಾಯಿ ಹಿಂದೊಮ್ಮೆ ಕಾಂಗ್ರೆಸ್ ಕದ ತಟ್ಟಿದ್ದರು: ವಿನಯ್ ಕುಮಾರ್ ಸೊರಕೆ

    ಉಡುಪಿ: ಸಿಎಂ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲು ಬಯಸಿದ್ದರು. ಹಿಂದೊಮ್ಮೆ ನಮ್ಮ ಹಿರಿಯ ನಾಯಕ ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿಯಾಗಿ ಚರ್ಚೆ ಮಾಡಿದ್ದರು ಎಂದು ಕಾಂಗ್ರೆಸ್‍ನ ಹಿರಿಯ ನಾಯಕ ವಿನಯ್ ಕುಮಾರ್ ಸೊರಕೆ ರಾಜಕೀಯ ಬಾಂಬ್ ಹಾಕಿದ್ದಾರೆ.

    BASAVARAJ BOMMAI

    ಉಡುಪಿಯ ಪೆರ್ಡೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡುತ್ತಾ ಹಳೆಯ ಕಥೆಯನ್ನು ಬಿಚ್ಚಿಟ್ಟ ಸೊರಕೆ, ಬಸವರಾಜ ಬೊಮ್ಮಾಯಿ ಆರ್‌ಎಸ್‌ಎಸ್‌ -ಸಂಘಪರಿವಾರದ ಜನ ಅಲ್ಲ. ಬಿಜೆಪಿಯವರಿಗೆ ಬೊಮ್ಮಾಯಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಂಡಿರುವುದು ಸಹಿಸಲಾಗುತ್ತಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನ ಹಲವು ಶಾಸಕರು ಬಿಜೆಪಿಗೆ ಬರ್ತಾರೆ: ಬಿಎಸ್‍ವೈ

    ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಆಪರೇಷನ್ ಕಾಂಗ್ರೆಸ್ ಸದ್ದಿಲ್ಲದೆ ನಡೆಯುತ್ತದೆ ಎಂಬ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ. ಚುನಾವಣೆ ಸಂದರ್ಭ ಬಿಜೆಪಿ ಶಾಸಕರಿಗೆ ಕಾಂಗ್ರೆಸ್ ಗಾಳ ಹಾಕಿದೆ ಎಂದು ಸ್ವತಃ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿಯ ಕೆಲ ಶಾಸಕರು ಅತಂತ್ರದಲ್ಲಿ ಇದ್ದಾರೆ. ಈ ಹಿಂದೆ ಬೊಮ್ಮಾಯಿ ಕಾಂಗ್ರೆಸ್ ಸೇರಲು ಮುಂದಾಗಿದ್ದರು. ಆಸ್ಕರ್ ಫರ್ನಾಂಡಿಸ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು ಎಂದರು. ಇದನ್ನೂ ಓದಿ: ಯಾವುದೇ ಪಕ್ಷ ಆಡಳಿತದಲ್ಲಿ ಇರಲಿ, ಬೆಲೆ ಸತತವಾಗಿ ಹೆಚ್ಚಳವಾಗಿದೆ: ಬೊಮ್ಮಾಯಿ

    ಬಸವರಾಜ ಬೊಮ್ಮಾಯಿ ಆರ್‌ಎಸ್‌ಎಸ್‌ ಸಂಘಪರಿವಾರದ ಜನ ಅಲ್ಲ. ಬೊಮ್ಮಾಯಿಯವರ ತಂದೆ ಜೆಡಿಎಸ್‍ನಲ್ಲಿ ಇದ್ದವರು. ಎಂ.ಪಿ ಪ್ರಕಾಶ್ ಕಾಂಗ್ರೆಸ್ ಸೇರುವಾಗ ಬೊಮ್ಮಾಯಿ ಕೂಡ ನಮ್ಮನ್ನು ಸಂಪರ್ಕ ಮಾಡಿದ್ದರು. ಬೊಮ್ಮಾಯಿ ಜಾತ್ಯಾತೀತ ನಿಲುವು ಇರುವವರು. ಜಾತ್ಯಾತೀತ ನಿಲುವನ್ನು ಬಿಜೆಪಿಯವರು ಸಹಿಸುತ್ತಾರಾ? ಬಿಜೆಪಿಯವರಿಗೆ ಯು.ಪಿಯ ಯೋಗಿಯಂತ ಜನ ಬೇಕು. ಬೊಮ್ಮಾಯಿ ಸಿಎಂ ಆಗಿ ಎಷ್ಟು ಸಮಯ ಇರುತ್ತಾರೋ ಗೊತ್ತಿಲ್ಲ ಎಂದು ವ್ಯಂಗ್ಯವಾಡಿದರು. ಇದನ್ನೂ ಓದಿ:  ಸಿದ್ದರಾಮಯ್ಯ ಅವರನ್ನು ನಾನೇ ಬಿಜೆಪಿಗೆ ಕರೆ ತರುತ್ತೇನೆ: ರಾಜೂ ಗೌಡ

  • ಇಂದು ಮಧ್ಯಾಹ್ನ ಬೆಂಗಳೂರಿಗೆ ಬರಲಿದ್ದಾರೆ ರಾಹುಲ್ ಗಾಂಧಿ

    ಇಂದು ಮಧ್ಯಾಹ್ನ ಬೆಂಗಳೂರಿಗೆ ಬರಲಿದ್ದಾರೆ ರಾಹುಲ್ ಗಾಂಧಿ

    ಬೆಂಗಳೂರು: ಇಂದು ಮಧ್ಯಾಹ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಲಿದ್ದಾರೆ.

    ಮಧ್ಯಾಹ್ನ 1:45ಕ್ಕೆ ಬೆಂಗಳೂರಿಗೆ ಆಗಮಿಸಲಿರುವ ರಾಹುಲ್ ಗಾಂಧಿ ಅಗಲಿದ ಹಿರಿಯ ಕಾಂಗ್ರೆಸ್ ನಾಯಕ ಆಸ್ಕರ್ ಫರ್ನಾಂಡಿಸ್ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

    ರಿಚ್ಮಂಡ್ ಟೌನ್ ನಲ್ಲಿರುವ ರೆಸ್ಟ್ ಹೌಸ್ ಆಪಾರ್ಟ್ ಮೆಂಟ್‍ನಲ್ಲಿ ಆಸ್ಕರ್ ಫರ್ನಾಂಡಿಸ್  ಕುಟುಂಬದ ಸದಸ್ಯರನ್ನ ಭೇಟಿ ಮಾಡಿ ರಾಹುಲ್ ಗಾಂಧಿ ಸಾಂತ್ವನ ಹೇಳಲಿದ್ದಾರೆ.

    ಕೆಪಿಸಿಸಿ ಅಧ್ಯಕ್ಷರಾಗಿ ಎರಡು ಬಾರಿ ಸೇವೆ ಸಲ್ಲಿಸಿದ, ಮಾಜಿ ಕೇಂದ್ರ ಸಚಿವ, ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದ ಆಸ್ಕರ್ ಫರ್ನಾಂಡಿಸ್ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೂ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಅಂತಿಮ ದರ್ಶನಕ್ಕೆ ಇಡಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರದ ಮುಂದೆ ಭಗವದ್ಗೀತೆ, ಬೈಬಲ್, ಕುರಾನ್ ಸಮಾಗಮ

    ಮಧ್ಯಾಹ್ನ 12:30ಕ್ಕೆ ಕೆಪಿಸಿಸಿ ಕಚೇರಿಯಿಂದ ಮೆರವಣಿಗೆ ಮೂಲಕ ಹೊರಟು ಶಾಂತಿ ನಗರದ ಹೊಸೂರು ರಸ್ತೆಯಲ್ಲಿರುವ ಸೆಂಟ್ ಪ್ಯಾಟ್ರಿಕ್ ಚರ್ಚ್ ನಲ್ಲಿ ಅಂತಿಮ ಪೂಜಾ ವಿಧಿಗಳು ನೆರವೇರಲಿದೆ. ಇದನ್ನೂ ಓದಿ: ಅಗಲಿದ ಕಾಂಗ್ರೆಸ್ ನಾಯಕ ಆಸ್ಕರ್‌ಗೆ ಉಡುಪಿ ಬಿಜೆಪಿ ಕಚೇರಿಯಲ್ಲಿ ಶ್ರದ್ಧಾಂಜಲಿ

    3 ಗಂಟೆಗೆ ಶಾಂತಿನಗರದ ಹೊಸೂರು ರಸ್ತೆಯ ಸೆಂಟ್ ಪ್ಯಾಟ್ರಿಕ್ ಸ್ಮಶಾನದಲ್ಲಿ ಆಸ್ಕರ್ ಫರ್ನಾಂಡಿಸ್ ಅಂತ್ಯಕ್ರಿಯೆ ನೆರವೇರಲಿದೆ. ರಾಜ್ಯ ಕಾಂಗ್ರೆಸ್ ಎಲ್ಲಾ ಪ್ರಮುಖ ನಾಯಕರುಗಳು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.

  • ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರದ ಮುಂದೆ ಭಗವದ್ಗೀತೆ, ಬೈಬಲ್, ಕುರಾನ್ ಸಮಾಗಮ

    ಆಸ್ಕರ್ ಫೆರ್ನಾಂಡಿಸ್ ಪಾರ್ಥಿವ ಶರೀರದ ಮುಂದೆ ಭಗವದ್ಗೀತೆ, ಬೈಬಲ್, ಕುರಾನ್ ಸಮಾಗಮ

    ಉಡುಪಿ: ಹಿರಿಯ ಕಾಂಗ್ರೆಸ್ ನಾಯಕ ಮಾಜಿ ಕೇಂದ್ರ ಸಚಿವ ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ವಿಧಿವಶರಾಗಿದ್ದಾರೆ. ಪಾರ್ಥಿವ ಶರೀರದ ಮುಂದೆ ಹಿಂದೂ ಕ್ರೈಸ್ತ ಮುಸಲ್ಮಾನ ಮೂರು ಧರ್ಮದ ಪವಿತ್ರ ಗ್ರಂಥಗಳು ಶ್ಲೋಕಗಳ ಪಠಣ ಮಾಡಲಾಯಿತು. ಉಡುಪಿಯ ಜಿಲ್ಲಾ ಕಾಂಗ್ರೆಸ್ ಕಚೇರಿ ಸರ್ವಧರ್ಮ ಸಮನ್ವಯಕ್ಕೆ ಸಾಕ್ಷಿಯಾಯಿತು.

    ಆಸ್ಕರ್ ಫರ್ನಾಂಡಿಸ್ ಪಾರ್ಥಿವ ಶರೀರವನ್ನು ಇರಿಸಿ ಉಡುಪಿಯ ಕಾಂಗ್ರೆಸ್ ಅಂತಿಮ ನಮನ ಸಲ್ಲಿಸಲಾಯಿತು. ಮುಸಲ್ಮಾನ ಧರ್ಮಗುರುಗಳು ಖರಾನ್ ಸಂದೇಶಗಳನ್ನು ವೇದಿಕೆಯಲ್ಲಿ ಬೋಧಿಸಿದರು. ಸಾಮಾಜಿಕ ರಾಜಕೀಯ ಚಟುವಟಿಕೆ ಮಾಡುವ ಮೂಲಕ ಎಲ್ಲಾ ವರ್ಗದವರಿಗೆ ಆಸ್ಕರ್ ಸಹಾಯ ಮಾಡಿದ್ದನ್ನು ಸ್ಮರಿಸಲಾಯಿತು. ಇದನ್ನೂ ಓದಿ: 5 ದಶಕದಿಂದ ರಾಷ್ಟ್ರ ರಾಜಧಾನಿ, ರಾಜ್ಯದ ಕಾಂಗ್ರೆಸ್ಸಿನ ಬಹುದೊಡ್ಡ ಕೊಂಡಿಯಾಗಿದ್ದ ಆಸ್ಕರ್ ಇನ್ನು ನೆನಪು ಮಾತ್ರ

    ಅಂತಿಮ ದರ್ಶನಕ್ಕೆ ಜನ ಬರುತ್ತಿದ್ದಂತೆ ಭಗವದ್ಗೀತೆಯ ಮಂತ್ರಪಠಣ ಕಾಂಗ್ರೆಸ್ ಕಚೇರಿಯಲ್ಲಿ ನಡೆಸಲಾಯಿತು. ಮರಣದ ನಂತರ ಆತ್ಮ ಭಗವಂತನಲ್ಲಿ ಐಕ್ಯ ಹೊಂದುವ ಕುರಿತಾದ ಭಗವದ್ಗೀತೆಯ ಶ್ಲೋಕಗಳನ್ನು ಪಠಿಸಲಾಯಿತು. ಸಾಮೂಹಿಕ ಭಜನೆ ಕಾರ್ಯಕ್ರಮ ಕೂಡ ಈ ಸಂದರ್ಭದಲ್ಲಿ ನಡೆಯಿತು. ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಡೆದು ಬಂದ ಹಾದಿ

    ಫಾದರ್ ವಿಲಿಯಂ ಮಾರ್ಟಿಸ್ ಬೈಬಲ್ ನ ಕೆಲವು ಶ್ಲೋಕಗಳನ್ನು ಪಠಣ ಮಾಡಿದರು. ಆಸ್ಕರ್ ಫೆರ್ನಾಂಡಿಸ್ ಅವರ ಕುಟುಂಬಕ್ಕೆ ನೋವು ಮರೆಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥನೆ ಮಾಡಲಾಯ್ತು.

    ಕ್ರೈಸ್ತ ಧರ್ಮದವರ ಆಗಿದ್ದರು ಆಸ್ಕರ್ ಫೆರ್ನಾಂಡಿಸ್ ಅತಿಹೆಚ್ಚು ಹಿಂದೂ, ಮುಸಲ್ಮಾನ ಗೆಳೆಯರು ಹಿತೈಷಿಗಳು ಇದ್ದರು. ಹಿಂದೂ ಸಂಪ್ರದಾಯದ ಪ್ರಕಾರ ಬೆಳಗ್ಗೆ 9 ಗಂಟೆಯಿಂದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಜನೆಯನ್ನು ಏರ್ಪಡಿಸಲಾಗಿತ್ತು. ಕ್ರೈಸ್ತ ಧರ್ಮದಲ್ಲಿ ಹುಟ್ಟಿದ್ದರೂ ಆಸ್ಕರ್ ಫೆರ್ನಾಂಡಿಸ್‍ಗೆ ಭಜನೆ ದೇವರನಾಮ ಸಂಕೀರ್ತನೆಗಳನ್ನು ಕೇಳುವುದು ಬಹಳ ಅಚ್ಚುಮೆಚ್ಚಿನದ್ದಾಗಿತ್ತು ಎಂದು ಆಸ್ಕರ್ ಆಪ್ತ ಗಫೂರ್ ಮಾಹಿತಿ ನೀಡಿದರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ

    ಕಳೆದ ನಾಲ್ಕೈದು ವರ್ಷಗಳಿಂದ ಆಸ್ಕರ್ ಫೆರ್ನಾಂಡಿಸ್ ತೀವ್ರ ಅನಾರೋಗ್ಯಕ್ಕೆ ಒಳಗಾದ ಸಂದರ್ಭದಲ್ಲಿ ಮನೆಯಲ್ಲಿ ಸಂಗೀತ ಭಜನೆಗಳನ್ನು ಆಲಿಸುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಂತಿಮ ನಮನದ ಸಂದರ್ಭ ಕಾಂಗ್ರೆಸ್ ಕಚೇರಿಯಲ್ಲಿ ಭಜನೆಯನ್ನು ಏರ್ಪಡಿಸಲಾಗಿತ್ತು. ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಿಧನ- ನಾಳೆ ಉಡುಪಿ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ

  • ಆಸ್ಕರ್ ಫರ್ನಾಂಡಿಸ್ ನಡೆದು ಬಂದ ಹಾದಿ

    ಆಸ್ಕರ್ ಫರ್ನಾಂಡಿಸ್ ನಡೆದು ಬಂದ ಹಾದಿ

    ಉಡುಪಿ: ಕರಾವಳಿಯ ಗಾಂಧಿ ಎಂದು ಪಕ್ಷದೊಳಗೆ ಕರೆಸಿಕೊಳ್ಳುತ್ತಿದ್ದ, ಕಾಂಗ್ರೆಸ್ ಮುತ್ಸದ್ಧಿ ಹಿರಿಯ ನೇತಾರ ಆಸ್ಕರ್ ಫರ್ನಾಂಡಿಸ್ ಕೊನೆಯುಸಿರೆಳೆದಿದ್ದಾರೆ. ಒಂಬತ್ತು ಬಾರಿ ಲೋಕಸಭೆ ಮತ್ತು ರಾಜ್ಯಸಭೆಗೆ ಆಸ್ಕರ್ ಆಯ್ಕೆಯಾಗಿದ್ದರು.

    ಆಸ್ಕರ್ ಫರ್ನಾಂಡಿಸ್ 1941ರ ಮಾರ್ಚ್ 27 ರಂದು ಜನಿಸಿದ್ದರು. ತಂದೆ ರೋಕೀ ಫರ್ನಾಂಡಿಸ್ ಅಧ್ಯಾಪಕರಾಗಿದ್ದರು. ತಾಯಿ ಲಿಯೋನಿಸ್ಸಾ ಫರ್ನಾಂಡಿಸ್ ಪ್ರಗತಿಶೀಲ ಮಹಿಳೆ. ರೋಕಿಯವರ 12 ಮಕ್ಕಳಲ್ಲಿ ಒಬ್ಬರು ಓಸ್ಕರ್. ತಂದೆ ಬ್ರಿಟಿಷರ ವಿರುದ್ಧ ಧ್ವನಿಯೆತ್ತಿದ ಹೋರಾಟಗಾರರಾಗಿದ್ದರು. ತಾಯಿ ಲಿಯೋನಿಸ್ಸಾ ಫರ್ನಾಂಡಿಸ್ ದ.ಕ. ಜಿಲ್ಲೆಯ ಪ್ರಥಮ ಮಹಿಳಾ ಬೆಂಚ್ ಮ್ಯಾಜಿಸ್ಟ್ರೇಟ್ ಆಗಿದ್ದರು. ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ

    ಆಸ್ಕರ್ ಫರ್ನಾಂಡಿಸ್ ಪ್ರೌಢ ಶಿಕ್ಷಣ ಬೋರ್ಡ್ ಹೈಸ್ಕೂಲಿನಲ್ಲಿ ನಡೆಯಿತು. ಮುಂದೆ ಉಡುಪಿಯ ಎಂ.ಜಿ.ಎಂ. ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು. ಮೂಲತ: ಆಸ್ಕರ್ ಕೃಷಿಕರಾಗಿದ್ದರು. ಜನ ನಾಯಕನಾದ ಮೇಲೂ ಗದ್ದೆ ಉಳುಮೆ ಮಾಡುತ್ತಿದ್ದರು. ಕೆಲಕಾಲ ಭಾರತೀಯ ಜೀವವಿಮಾ ನಿಗಮದ ಉದ್ಯೋಗಿಯಾಗಿ ದುಡಿಮೆ ಮಾಡಿದ್ದರು. 1972 ರಲ್ಲಿ ಉಡುಪಿ ಮುನ್ಸಿಪಾಲಿಟಿಯ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದ್ದ ಆಸ್ಕರ್, ಬ್ಲಾಸಂ ಫರ್ನಾಂಡಿಸ್ ರನ್ನು ವಿವಾಹ ಆಗಿದ್ದಾರೆ. ಆಮೇಲೆ ಅವರು ರಾಷ್ಟ್ರ ರಾಜಧಾನಿಯತ್ತ ಪಯಣ ಮಾಡಿ, ಗಾಂಧಿ ಕುಟುಂಬಕ್ಕೆ ಹತ್ತಿರರಾದರು. 1980 ರಲ್ಲಿ ಉಡುಪಿ ಲೋಕಸಭಾ ಕ್ಷೇತ್ರದಿಂದ ಆಯ್ಕೆಯಾದರು. ದೆಹಲಿ ರಾಜಕೀಯ ಅಲ್ಲಿಂದ ಶುರುವಾಯ್ತು. ಇದನ್ನೂ ಓದಿ: ಆಸ್ಕರ್ ಫರ್ನಾಂಡಿಸ್ ನಿಧನ- ನಾಳೆ ಉಡುಪಿ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ

    ಉಡುಪಿ ಸಂಸದರಾಗಿ 1980, 1984, 1989, 1991, 1996ರಲ್ಲಿ ಆಯ್ಕೆಯಾದರು. ಒಟ್ಟು ಐದು ಬಾರಿ ಉಡುಪಿಯನ್ನು ಪ್ರತಿನಿಧಿಸಿದ್ದು, 1998 ರಲ್ಲಿ ಅಲ್ಪ ಮತಗಳ ಅಂತರದಿಂದ ಐಎಂ ಜಯರಾಮ ಶೆಟ್ಟಿ ವಿರುದ್ಧ ಸೋಲು ಅನುಭವಿಸಿದರು. ಬಳಿಕ ರಾಜ್ಯಸಭಾ ಸದಸ್ಯರಾಗಿ ರಾಜ್ಯಸಭಾ ಸದಸ್ಯನಾಗಿ ರಾಜಕೀಯ ಮುಂದುವರೆಸಿದರು. 1998 ರಿಂದ ಒಟ್ಟು ನಾಲ್ಕನೇ ಬಾರಿ ರಾಜ್ಯಸಭೆ ಸದಸ್ಯನಾಗಿ ಆಯ್ಕೆಯಾಗಿದ್ದಾರೆ. ಪಕ್ಷ ಹಾಗೂ ಸರ್ಕಾರದಲ್ಲಿ ವಿವಿಧ ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದರು. 1983ರಲ್ಲಿ ಅಖಿಲ ಭಾರತ ಕಾಂಗ್ರೇಸ್ ಪಕ್ಷದ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾದರು 1985 ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಸಂಸದೀಯ ಕಾರ್ಯದರ್ಶಿಯಾಗಿ ಆಯ್ಕೆಯಾದರು. ನಂತರ ಅಖಿಲ ಭಾರತ ಕಾಂಗ್ರೇಸ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿಯೂ ಆಯ್ಕೆಯಾಗುತ್ತಾರೆ.

    ಇಂದಿರಾ ಗಾಂಧಿ, ರಾಜೀವ್ ಗಾಂಧಿ ಹಾಗೂ ಸೋನಿಯಾ ಗಾಂಧಿಯವರ ನಂಬಿಕೆಯ ನಾಯಕನಾಗಿ ಗುರುತಿಸಲ್ಪಡುತ್ತಾರೆ. 1986 ರಲ್ಲಿ ಕನಾಟಕ ಪ್ರದೇಶ ಕಾಂಗ್ರೇಸ್ ಸಮಿತಿಯ ಅಧ್ಯಕ್ಷರಾದರು. ಕೇಂದ್ರದ ರಾಷ್ಟ್ರೀಯ ಹೆದ್ದಾರಿ, ಅಂಕಿ ಅಂಶ, ಯುವಜನ ಸೇವೆ, ಕ್ರೀಡೆ ಹಾಗೂ ಕಾರ್ಮಿಕ ಸಚಿವರಾಗಿ 2004-2009ರ ತನಕ ಸೇವೆ ಸಲ್ಲಿಸಿದ್ದಾರೆ. ಉಡುಪಿಯ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಆಸ್ಕರ್, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ಕೇಂದ್ರ ಚುನಾವಣಾ ಆಯೋಗದ ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ. ರಾಜ್ಯಸಭಾ ಸದಸ್ಯರಾಗಿರುವಾಗಲೇ ಆಸ್ಕರ್ ಫರ್ನಾಂಡಿಸ್ ಇಹಲೋಕದ ಪಯಣ ಮುಗಿಸಿದ್ದಾರೆ.

  • ಆಸ್ಕರ್ ಫರ್ನಾಂಡಿಸ್ ನಿಧನ- ನಾಳೆ ಉಡುಪಿ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ

    ಆಸ್ಕರ್ ಫರ್ನಾಂಡಿಸ್ ನಿಧನ- ನಾಳೆ ಉಡುಪಿ ಚರ್ಚ್‍ನಲ್ಲಿ ವಿಶೇಷ ಪ್ರಾರ್ಥನೆ

    ಉಡುಪಿ: ಕೇಂದ್ರ ಸರ್ಕಾರದ ಮಾಜಿ ಸಚಿವ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ವಿಧಿವಶರಾಗಿದ್ದಾರೆ. ಆಸ್ಕರ್ ಫರ್ನಾಂಡಿಸ್ ಅವರ ಮೃತದೇಹವನ್ನು ಉಡುಪಿ ನಗರದ ಮದರ್ ಆಫ್ ಸಾರೋಸ್ ಚರ್ಚ್‍ನಲ್ಲಿ ಇರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

    ಮಂಗಳವಾರ ಮುಂಜಾನೆ 9 ಗಂಟೆ ಸುಮಾರಿಗೆ ಕರೆತರಲಾಗುತ್ತದೆ. ಚರ್ಚ್‍ನಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ಧರ್ಮಗುರುಗಳು ನೆರವೇರಿಸಲಿದ್ದಾರೆ. ಸುಮಾರು ಒಂದು ಗಂಟೆಗಳ ಕಾಲ ಪ್ರಾರ್ಥನೆ ನೆರವೇರಲಿದೆ.

    ಉಡುಪಿ ಧರ್ಮಪ್ರಾಂತ್ಯದ ಬಿಷಪ್ ಜೆರಾಲ್ಡ್ ಐಸಾಕ್ ಲೋಬೋ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ಚರ್ಚ್ ಫಾದರ್ ಚಾಲ್ರ್ಸ್ ಮಿನೇಜಸ್ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಿಕೊಡುತ್ತಾರೆ. ಜಿಲ್ಲೆಯ ಕೆಲ ಗಣ್ಯರು ಇದೇ ಸಂದರ್ಭದಲ್ಲಿ ಆಸ್ಕರ್ ಫರ್ನಾಂಡಿಸ್ ಅವರ ಅಂತಿಮ ದರ್ಶನ ಮಾಡಲಿದ್ದಾರೆ. ಇದನ್ನೂ ಓದಿ:  ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಗಣ್ಯರ ಸಂತಾಪ

    ಬೆಳಗ್ಗೆ 11 ಗಂಟೆ ಸುಮಾರಿಗೆ ನಗರದ ಬ್ರಹ್ಮಗಿರಿಯಲ್ಲಿರುವ ಕಾಂಗ್ರೆಸ್ ಭವನಕ್ಕೆ ಆಸ್ಕರ್ ಫರ್ನಾಂಡಿಸ್ ಮೃತದೇಹವನ್ನು ರವಾನೆ ಮಾಡಲಾಗುತ್ತದೆ. ಜಿಲ್ಲೆಯ ಹಿರಿಯ ನಾಯಕರು ಕಾರ್ಯಕರ್ತರು ಆಸ್ಕರ್ ಫರ್ನಾಂಡಿಸ್ ಹಿತೈಷಿಗಳು ಆಪ್ತರು ಬಂದು ದರ್ಶನ ಮಾಡುವ ವ್ಯವಸ್ಥೆಯನ್ನು. ಮಧ್ಯಾಹ್ನ 1.30ರವರೆಗೆ ಅಂತಿಮ ದರ್ಶನ ವ್ಯವಸ್ಥೆ ಇದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಕಚೇರಿ ಮಾಹಿತಿ ನೀಡಿದೆ.

  • ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಗಣ್ಯರ ಸಂತಾಪ

    ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಗಣ್ಯರ ಸಂತಾಪ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್(80) ಅವರು ಇಹಲೋಕ ತ್ಯಜಿಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಗಣ್ಯರು ಸಂತಾಪವನ್ನು ಸೂಚಿಸಿದ್ದಾರೆ.

    ಆಸ್ಕರ್ ಫರ್ನಾಂಡಿಸ್ ಅವರ ನಿಧನದಿಂದ ದುಃಖವಾಗಿದೆ. ಈ ದುಃಖದ ಸಮಯದಲ್ಲಿ, ನನ್ನ ಆಲೋಚನೆಗಳು ಮತ್ತು ಪ್ರಾರ್ಥನೆಗಳು ಅವರ ಕುಟುಂಬ ಮತ್ತು ಹಿತೈಷಿಗಳೊಂದಿಗೆ ಇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಆಸ್ಕರ್ ಫರ್ನಾಂಡಿಸ್ ನಿಧನಕ್ಕೆ ಎಸ್ ಆರ್ ವಿಶ್ವನಾಥ್ ಸಂತಾಪ ಸೂಚಿಸಿದ್ದಾರೆ.  ಇದನ್ನೂ ಓದಿ: ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ

     

    ಕಾಂಗ್ರೆಸ್‍ನ ಹಿರಿಯ ನಾಯಕ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಬಿಡಿಎ ಅಧ್ಯಕ್ಷ ಮತ್ತು ಯಲಹಂಕ ಶಾಸಕರಾದ ಎಸ್.ಆರ್.ವಿಶ್ವನಾಥ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಆಸ್ಕರ್ ಫರ್ನಾಂಡಿಸ್ ಅವರ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಸರಳ ಸಜ್ಜನ ನಾಯಕರಾಗಿ ಗುರುತಿಸಿಕೊಂಡಿದ್ದ ಅವರು ಜನಾನುರಾಗಿಯಾಗಿದ್ದರು ಎಂದು ವಿಶ್ವನಾಥ್ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

    ಫರ್ನಾಂಡಿಸ್ ಅವರು ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರಾಗಿ ರಾಜ್ಯ ಮತ್ತು ರಾಷ್ಟ್ರಕ್ಕೆ ಸಲ್ಲಿಸಿರುವ ಸೇವೆ ಅನನ್ಯವಾಗಿದೆ. ಅವರ ನಿಧನದಿಂದ ರಾಜ್ಯ ಮತ್ತು ರಾಷ್ಟ್ರ ಒಬ್ಬ ಉತ್ತಮ ಜನನಾಯಕನನ್ನು ಕಳೆದುಕೊಂಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ನೀಡಲಿ ಮತ್ತು ಅವರ ಕುಟಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.

    ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನಕ್ಕೆ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ ಕುಮಾರ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.ಕಾಂಗ್ರೆಸ್ ನ ಹಿರಿಯ ನಾಯಕ ,ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಅವರ ನಿಧನದ ಸುದ್ದಿ ತಿಳಿದು ದುಃಖವಾಯಿತು.ಲೋಕಸಭಾ ಸದಸ್ಯರಾಗಿ ರಾಜ್ಯ ಸಭಾ ಸದಸ್ಯರಾಗಿ ಅವರು ಸಲ್ಲಿಸಿದ ಸೇವೆ ಅನನ್ಯವಾದದ್ದು, ಏಳು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಆಸ್ಕರ್ ಫರ್ನಾಂಡಿಸ್ ಉಡುಪಿಯಲ್ಲಿ ಹುಟ್ಟಿ, ನಂತರ ರಾಷ್ಟ್ರ ಮಟ್ಟದ ನಾಯಕರಾಗಿ ಬೆಳೆದದ್ದು ಒಂದು ಸಾಹಸಗಾಥೆ. ಅವರ ನಿಧನದಿಂದ ರಾಜ್ಯ ಮತ್ತು ರಾಷ್ಟ್ರ ಒಬ್ಬ ಅತ್ಯುತ್ತಮ ಜನನಾಯಕ ನನ್ನ ಕಳೆದುಕೊಂಡಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ. ಅವರ ಕುಟುಂಬ ವರ್ಗಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಸುನಿಲ್ ಕುಮಾರ್ ತಮ್ಮ ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.

  • ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ

    ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಇನ್ನಿಲ್ಲ

    ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್(80) ಅವರು ಇಹಲೋಕ ತ್ಯಜಿಸಿದ್ದಾರೆ.

    ಯೋಗ ಮಾಡುವ ವೇಳೆ ಆಯತಪ್ಪಿ ಬಿದ್ದು, ತಲೆಗೆ ಪೆಟ್ಟು ಮಾಡಿಕೊಂಡಿದ್ದ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ಸ್ಥಿತಿ  ಗಂಭೀರವಾಗಿತ್ತು. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಬಳಿಕ ಮಂಗಳೂರಿನ ಯೆನಪೋಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ.

    ಕಾಂಗ್ರೆಸ್ ನಾಯಕರಾದ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಆಸ್ಪತ್ರೆಗೆ ಭೇಟಿ ನೀಡಿ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ವಿಚಾರಿಸಿದ್ದರು. ಅಲ್ಲದೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಹಾಗೂ ಕಾಂಗ್ರೆಸ್ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಫರ್ನಾಂಡಿಸ್ ಅವರ ಕುಟುಂಬಸ್ಥರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ್ದರು.

    ಆಸ್ಕರ್ ಫರ್ನಾಂಡಿಸ್ ಅವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಆಪ್ತ ವಲಯದಲ್ಲಿ ಫರ್ನಾಂಡಿಸ್ ಗುರುತಿಸಿಕೊಂಡಿದ್ದರು. ಪಕ್ಷದಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುತ್ತಿದ್ದ ಪ್ರಮುಖ ನಾಯಕರ ಪೈಕಿ ಆಸ್ಕರ್ ಫರ್ನಾಂಡಿಸ್ ಅವರು ಸಹ ಒಬ್ಬರಾಗಿದ್ದರು. ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಸಹ ಕೆಲಸ ಮಾಡಿದ್ದರು.

    ಫರ್ನಾಂಡಿಸ್ ಅವರು ಮಾರ್ಚ್ 27, 1941ರಲ್ಲಿ ಉಡುಪಿಯಲ್ಲಿ ಜನಿಸಿದ್ದರು. ಜನವರಿ 18, 1980 ರಲ್ಲಿ ಉಡುಪಿ ಕ್ಷೇತ್ರದಿಂದ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು. ಬಳಿಕ 17 ಜೂನ್ 2013ರಂದು ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾಗಿದ್ದರು. ಒಟ್ಟು ಐದು ಬಾರಿ ಉಡುಪಿಯಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಬಳಿಕ 2004ರಲ್ಲಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

  • ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ, ಡಿಕೆಶಿ

    ಆಸ್ಕರ್ ಫೆರ್ನಾಂಡಿಸ್ ಆರೋಗ್ಯ ವಿಚಾರಿಸಿದ ಸಿದ್ದರಾಮಯ್ಯ, ಡಿಕೆಶಿ

    ಮಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫೆರ್ನಾಂಡಿಸ್ ಚಿಕಿತ್ಸೆ ಪಡೆಯುತ್ತಿರುವ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

    ಮನೆಯಲ್ಲಿ ಜಾರಿ ಬಿದ್ದು ಗಾಯಗೊಂಡಿದ್ದ ಆಸ್ಕರ್ ಫೆರ್ನಾಂಡಿಸ್ ಮಂಗಳೂರಿನ ಯೆನೆಪೋಯಾ ಆಸ್ಪತ್ರೆಗೆ ದಾಖಲಾಗಿದ್ದು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಅವರ ಆರೋಗ್ಯ ವಿಚಾರಿಸಲು ಮಂಗಳೂರಿಗೆ ಆಗಮಿಸಿದ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಆಸ್ಪತ್ರೆಯ ವೈದ್ಯರು ಹಾಗೂ ಆಸ್ಕರ್ ಅವರ ಮನೆಯವರಲ್ಲಿ ಮಾತುಕತೆ ನಡೆಸಿದ್ರು. ಆಸ್ಪತ್ರೆ ಭೇಟಿ ಬಳಿಕ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ ಆಸ್ಕರ್ ಅವರ ಆರೋಗ್ಯ ಹದಗೆಟ್ಟಿಲ್ಲ, ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ತಜ್ಞ ವೈದ್ಯರು ಅವರಿಗೆ ಚಿಕಿತ್ಸೆ ನೀಡುತ್ತಿದ್ದಾರೆ. ದೆಹಲಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡೋ ಅಗತ್ಯ ಇಲ್ಲ ಎಂದರು.

    ದೇಶದ ವಿವಿಧ ಕಡೆಯಿಂದಲೆ ಮಂಗಳೂರಿನ ಆಸ್ಪತ್ರೆಗೆ ಬರುತ್ತಾರೆ. ಹೀಗಾಗಿ ಇಲ್ಲೇ ಉತ್ತಮ ಚಿಕಿತ್ಸೆ ಪಡೆದು ಅವರು ಶೀಘ್ರ ಗುಣಮುಖರಾಗಿ ಹೊರ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸೋದಾಗಿ ಹೇಳಿದರು.

    ವಲಸಿಗರು ಅಲ್ಲ,ಬಿಜೆಪಿಯ ಶಾಸಕ ಸಚಿವರುಗಳು: ವಲಸೆ ಶಾಸಕರು ಈಗ ಅವರು ವಲಸಿಗರಲ್ಲ, ಅವರು ಬಿಜೆಪಿ ಶಾಸಕರು- ಸಚಿವರುಗಳು, ಅವರಿಗೂ ನಮಗೂ ಯಾವುದೇ ಸಂಬಂಧ ಇಲ್ಲ. ಬಿಜೆಪಿ ಶಾಸಕರು ಮೀಟಿಂಗ್ ಮಾಡಿ, ಯಾರನ್ನ ಭೇಟಿ ಮಾಡಿದ್ರು ಅದಕ್ಕೂ ನಮಗೂ ಸಂಬಧವಿಲ್ಲ. ವಲಸೆ ಶಾಸಕರು ಮರಳಿ ಪಕ್ಷಕ್ಕೆ ಬರುವ ವಿಚಾರದ ಬಗ್ಗೆ ನಾನು ಈಗ ಏನು ಹೇಳಲ್ಲ. ಅದಕ್ಕೆಲ್ಲಾ ಇನ್ನು ಸಮಯವಿದೆ. ಮುಂದೆ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನಿಮಗೂ ಸಿಗಲಿದೆ ನಾನು ಕೂಡ ಉತ್ತರ ಕೊಡುತ್ತೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

  • ಆಸ್ಕರ್ ಆರೋಗ್ಯಕ್ಕಾಗಿ ಅನಂತೇಶ್ವರ ದೇವರಿಗೆ ಪೂಜೆ – ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರಾರ್ಥನೆ

    ಆಸ್ಕರ್ ಆರೋಗ್ಯಕ್ಕಾಗಿ ಅನಂತೇಶ್ವರ ದೇವರಿಗೆ ಪೂಜೆ – ರಾಘವೇಂದ್ರ ಸ್ವಾಮಿ ಮಠದಲ್ಲಿ ಪ್ರಾರ್ಥನೆ

    ಉಡುಪಿ: ರಾಜ್ಯಸಭಾ ಸದಸ್ಯ ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡಿಸ್ ಶೀಘ್ರ ಗುಣಮುಖರಾಗಲಿ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ದೇವರ ಮೊರೆ ಹೋಗಿದೆ. ಅನಂತೇಶ್ವರ ದೇವರಿಗೆ, ರಾಘವೇಂದ್ರ ಸ್ವಾಮಿಗಳಿಗೆ ಪೂಜೆ ಸಲ್ಲಿಸಿದೆ.

    ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೇತೃತ್ವದಲ್ಲಿ ಪದಾಧಿಕಾರಿಗಳು ಸದಸ್ಯರು ರಥಬೀದಿಯಲ್ಲಿರುವ ಅನಂತೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಕೆ ಮಾಡಿದರು. ಆಸ್ಕರ್ ಫೆರ್ನಾಂಡಿಸ್ ಶೀಘ್ರ ಚೇತರಿಕೆಯಾಗಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳಲಾಯಿತು. ಪರ್ಕಳ ಕಾಂಗ್ರೆಸ್ ಸಮಿತಿ ವತಿಯಿಂದ ನಗರದ ರಾಘವೇಂದ್ರ ಮಠದಲ್ಲಿ ಆಸ್ಕರ್ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು.

    ಸುಮಾರು 50 ವರ್ಷಗಳ ಕಾಲ ರಾಷ್ಟ್ರರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಆಸ್ಕರ್ ಫೆರ್ನಾಂಡಿಸ್, ಪಕ್ಷಬೇಧ ಮರೆತು ಕೆಲಸ ಮಾಡಿದವರು. ಜಾತಿ ಮತ ಬೇಧ ರಾಜಕಾರಣವನ್ನು ಹತ್ತಿರವೂ ಸೇರಿಸಿಕೊಂಡವರಲ್ಲ. ಗಾಂಧಿ ಕುಟುಂಬಕ್ಕೆ ಬಹಳ ಹತ್ತಿರ ಇರುವ ಸ್ವಾರ್ಥ ರಹಿತ ಜೀವನ ನಡೆಸುವವರು ಇನ್ನಷ್ಟು ಬಾಳಿ ಬದುಕಬೇಕು ಎಂದು ಅರ್ಚಕರ ಮೂಲಕ ದೇವರಲ್ಲಿ ಕೋರಿಕೊಳ್ಳಲಾಯ್ತು. ಇನ್ನಷ್ಟು ಕಾಲ ಆಸ್ಕರ್ ಅವರ ಸೇವೆ ದೇಶಕ್ಕೆ ಸಿಗಬೇಕು ಎಂದು ನಾಯಕರು ದೇವರಲ್ಲಿ ಪ್ರಾರ್ಥನೆ ಮಾಡಿದರು. ಇದನ್ನೂ ಓದಿ: ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲು

    ಅಶೋಕ್ ಕುಮಾರ್ ಮಾತನಾಡಿ, ಆಸ್ಕರ್ ಫೆರ್ನಾಂಡಿಸ್ ಅವರ ಆರೋಗ್ಯ ಚಿಂತಾಜನಕವಾಗಿದೆ. ನಾಯಕರ ಆರೋಗ್ಯ ವಿಚಾರಿಸಲು ಮಂಗಳೂರಿಗೆ ಹೋಗುವ ಪರಿಸ್ಥಿತಿ ಈಗ ಇಲ್ಲ. ಕೊರೋನಾ ಕಾರಣ ಎಲ್ಲರನ್ನು ಆಸ್ಪತ್ರೆಯೊಳಗೆ ಬಿಡುತ್ತಿಲ್ಲ. ಚರ್ಚ್ ಮಸೀದಿಯಲ್ಲಿ ಈಗಾಗಲೇ ಪ್ರಾರ್ಥನೆಗಳನ್ನು ಕಾಂಗ್ರೆಸ್ನ ಕಾರ್ಯಕರ್ತರು ಅಭಿಮಾನಿಗಳು ಸಲ್ಲಿಸಿದ್ದಾರೆ. ವಿಶೇಷ ಪೂಜೆ ದೇವರಿಗೆ ನೀಡಿದ್ದೇವೆ. ಶೀಘ್ರ ಗುಣಮುಖರಾಗಲಿ ಎಂದು ಪ್ರಾರ್ಥಿಸಿದ್ದೇವೆ. ಎಲ್ಲರೂ ದೇವರಲ್ಲಿ ಪ್ರಾರ್ಥನೆ ಮಾಡಿ ಎಂದರು.

  • ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲು

    ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲು

    ಮಂಗಳೂರು: ಕಾಂಗ್ರೆಸ್ ಮುಖಂಡ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಆಸ್ಕರ್ ಅವರು ಭಾನುವಾರ ಮನೆಯಲ್ಲಿ ನಿಯಂತ್ರಣ ತಪ್ಪಿ ಜಾರಿ ಬಿದಿದ್ದರು. ಆದರೆ ದೊಡ್ಡ ಪ್ರಮಾಣದಲ್ಲಿ ಗಾಯವಾಗಿಲ್ಲವೆಂದು ನಿರ್ಲಕ್ಷ್ಯ ವಹಿಸಿದ್ದರು.

    ಇದೀಗ ಮಾಮೂಲಿ ಚಿಕಿತ್ಸೆಗೆಂದು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ತೆರಳಿದ್ದ ವೇಳೆ ತಲೆಯ ಒಳಭಾಗಕ್ಕೆ ಏಟು ಬಿದ್ದಿರುವುದು ಬೆಳಕಿಗೆ ಬಂದಿದೆ. ಶಸ್ತ್ರ ಚಿಕಿತ್ಸೆ ಹಿನ್ನೆಲೆಯಲ್ಲಿ ಆಸ್ಕರ್ ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಸಚಿವ ಮುರುಗೇಶ್ ನಿರಾಣಿ ಬಳಿ ಸುಮಾರು 500 ಸಿ.ಡಿಗಳು ಇವೆ: ಅಲಂ ಪಾಷಾ