Tag: ಆಶ್ರಯ ಮನೆ

  • ಆಶ್ರಯ ಮನೆ ಹಂಚಿಕೆಯಲ್ಲಿ ಅಕ್ರಮ ಆರೋಪ- ನ್ಯಾಯಕ್ಕಾಗಿ ಟವರ್ ಏರಿ ಕುಳಿತ ದಂಪತಿ

    ಆಶ್ರಯ ಮನೆ ಹಂಚಿಕೆಯಲ್ಲಿ ಅಕ್ರಮ ಆರೋಪ- ನ್ಯಾಯಕ್ಕಾಗಿ ಟವರ್ ಏರಿ ಕುಳಿತ ದಂಪತಿ

    ಹಾಸನ: ಆಶ್ರಯ ಮನೆ ಹಂಚಿಕೆಯಲ್ಲಿ ಅನ್ಯಾಯ ಆಗಿದೆ ಎಂದು ದಂಪತಿಗಳು ಮೊಬೈಲ್ ಟವರ್ ಏರಿ ಕುಳಿತ ಘಟನೆ ಜಿಲ್ಲೆಯ ಬೇಲೂರಿನ ನೆಹರು ನಗರದಲ್ಲಿ ನಡೆದಿದೆ.

    ಮೋಹನ್ ರಾಜ್ ಮತ್ತು ಚಂದನ ಮೊಬೈಲ್ ಟವರ್ ಏರಿ ಕುಳಿತ ದಂಪತಿ. ಬಂಟೇನಹಳ್ಳಿ ಗ್ರಾಮ ಪಂಚಾತಿಯಲ್ಲಿ ಆಶ್ರಯ ಮನೆ ನೀಡುವುದಾಗಿ ದಂಪತಿಯಿಂದ ಒಂದು ಸಾವಿರ ಹಣ ಪಡೆದಿರುವ ಆರೋಪ ಕೇಳಿ ಬಂದಿದೆ. ಆದರೆ ಕೊನೆಗೆ ದಂಪತಿಗೆ ಆಶ್ರಯ ಮನೆ ನೀಡದೆ ವಂಚನೆ ಮಾಡಿರುವುದಾಗಿ ಆರೋಪ ಮಾಡುತ್ತಿದ್ದಾರೆ.

    ನಮಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ದಂಪತಿ ಟವರ್ ಏರಿ ಕುಳಿತಿದ್ದಾರೆ. ಈ ಕುರಿತ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳದಲ್ಲಿ ಸಾರ್ವಜನಿಕರು ಜಮಾಯಿಸಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಟವರ್ ನಿಂದ ಕೆಳಗಿಳಿಯುವಂತೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ.

  • ಬಡಾವಣೆಯ ಮನೆಗಳನ್ನು ನೋಡಿ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ!

    ಬಡಾವಣೆಯ ಮನೆಗಳನ್ನು ನೋಡಿ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ!

    – ಶಿಡ್ಲಘಟ್ಟ ಪಟ್ಟಣದ ರಾಜೀವ್ ಗಾಂಧಿ ಬಡಾವಣೆ ಜನರ ಗೋಳು
    – ಮದುವೆ ಆಗಲ್ಲವೆಂದು ಮನೆಯನ್ನೇ ಖಾಲಿ ಮಾಡಿದ್ರು

    ಚಿಕ್ಕಬಳ್ಳಾಪುರ: ಮದುವೆ ಆಗೋಕೆ ಮುಂಚೆ ಮನೆ ನೋಡೋಕೆ ವಧುವಿನ ಕಡೆಯವರು ಬರುತ್ತಾರೆ. ಆದರೆ ನಮ್ಮ ಮನೆ, ನಮ್ಮ ಬಡಾವಣೆ ನೋಡಿದರೆ ಹೆಣ್ಣು ಕೊಡಬೇಕು ಅಂತ ಬಂದವರು ನಂತರ ನಮ್ಮ ಮನೆಯತ್ತ ತಿರುಗಿಯೂ ನೋಡುವುದಿಲ್ಲ ಎಂಬುದು ಈ ಬಡಾವಣೆಯ ಯುವಕರ ಗೋಳು.

    ಶಿಡ್ಲಘಟ್ಟ ನಗರ ಹೊರವಲಯದ ರಾಜೀವ್ ಗಾಂಧಿ ಆಶ್ರಯ ಬಡಾವಣೆಯ ಜನರ ಗೋಳು ಇದಾಗಿದ್ದು, ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ರಾಜೀವ್ ಗಾಂಧಿ ಆಶ್ರಯ ಯೋಜನೆಯಡಿ ದಶಕದ ಹಿಂದೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನೂರಾರು ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ದಶಕ ಕಳೆದರೂ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯ ಒದಗಿಸಿಲ್ಲ. ಕುಡಿಯುವ ನೀರು, ಸಮರ್ಪಕ ಚರಂಡಿ, ವಿದ್ಯುತ್ ಸಮಸ್ಯೆ ಸೇರಿದಂತೆ ಹಲವು ಸಮಸ್ಯೆಗಳು ಅಲ್ಲಿನ ನಿವಾಸಿಗಳನ್ನು ಕಾಡುತ್ತಿವೆ.

    ವಿಧಿಯಿಲ್ಲದೆ ಕೆಲವರು ಬಾಗಿಲು ತೆಗೆದು ಇದೇ ಮನೆಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಉಳಿದಂತೆ ಬಹುತೇಕ ಮನೆಗಳಿಗೆ ಬೀಗ ಜಡಿದು ಹಲವರು ನಗರ ಸೇರಿಕೊಂಡಿದ್ದಾರೆ. ನಗರದಿಂದ 5 ಕಿ.ಮೀ. ದೂರದಲ್ಲಿರುವ ಬೆಂಗಾಡಿನ ರೀತಿಯ ಈ ಆಶ್ರಯ ಬಡಾವಣೆಯಲ್ಲಿ ವಾಸಿಸುವ ಕುಟುಂಬಗಳ ಯುವಕರಿಗೆ ಹೆಣ್ಣು ಕೊಡುವುದಿಲ್ಲ ಎಂದು ಹೇಳುತ್ತಾರಂತೆ.

    ಕುಡಿಯುವ ನೀರು, ಚರಂಡಿ, ರಸ್ತೆ, ವಿದ್ಯುತ್ ಪೂರೈಕೆ ಸೇರಿದಂತೆ ಮೂಲಭೂತ ಸೌಕರ್ಯಗಳೇ ಇಲ್ಲ. ಇಂತಹ ವಾತಾವರಣದಲ್ಲಿರುವವರಿಗೆ ಹೇಗೆ ಹೆಣ್ಣು ಕೊಡುವುದು ಎಂದು ಹೆಣ್ಣಿನ ಕಡೆಯವರು ಪ್ರಶ್ನಿಸುತ್ತಾರೆ. ಆಶ್ರಯ ಬಡಾವಣೆಯ ಎದುರಲ್ಲೇ ರೇಷ್ಮೆ ನೂಲು ತೆಗೆಯುವ ಕಾರ್ಖಾನೆಗಳಿದ್ದು, ಅಲ್ಲಿಂದ ಬರುವ ಕೆಟ್ಟ ವಾಸನೆಯಿಂದ ಜನ ನಿತ್ಯ ನರಕ ನೋಡುವಂತಾಗಿದೆ.

    ಅಲ್ಲದೆ ನಮ್ಮ ಸಂಬಂಧಿಕರು ಸಹ ಮನೆಗಳಿಗೆ ಬರದಂತಾಗಿದ್ದಾರೆ. ಈ ಮೂಲಕ ಬಡವರಿಗೆ ಮನೆ ಕಟ್ಟಿಕೊಟ್ಟರೂ ಇದು ಪ್ರಯೋಜನವಿಲ್ಲದಂತಾಗಿದೆ. ನಗರಸಭೆಯವರು ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಪರಿಣಾಮ ಆಶ್ರಯ ಬಡಾವಣೆಯ ಬಡವರು ಇದ್ದ ಸೂರನ್ನು ಬಿಟ್ಟು ಪಟ್ಟಣದ ಬಾಡಿಗೆ ಮನೆಗಳಿಗೆ ತೆರಳಿ ನೆಲಸುವಂತಾಗಿದೆ.

  • ಆಶ್ರಯ ಮನೆ ಹಾಕಿಸಿಕೊಡಿ ಎಂದು ಕೇಳಿದ ಬಡ ರೈತನಿಗೆ ಶಾಸಕ ಪಿ ರಾಜೀವ್ ಅವಾಚ್ಯ ಶಬ್ಧಗಳಿಂದ ನಿಂದನೆ

    ಆಶ್ರಯ ಮನೆ ಹಾಕಿಸಿಕೊಡಿ ಎಂದು ಕೇಳಿದ ಬಡ ರೈತನಿಗೆ ಶಾಸಕ ಪಿ ರಾಜೀವ್ ಅವಾಚ್ಯ ಶಬ್ಧಗಳಿಂದ ನಿಂದನೆ

    ಬೆಳಗಾವಿ: ಆಶ್ರಯ ಮನೆ ಹಾಕಿಸಿಕೊಡಿ ಎಂದು ಕೇಳಿದ ಬಡ ರೈತನಿಗೆ ಶಾಸಕ ಪಿ ರಾಜೀವ್ ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಘಟನೆ ನಡೆದಿದೆ.

    ಅಧಿಕಾರಿಗಳಿಗೆ, ಜನರಿಗೆ ಅವಾಜ್ ಹಾಕಿ ಸದಾ ಒಂದಿಲ್ಲೊಂದು ವಿವಾದವನ್ನು ಮೈ ಮೇಲೆ ಎಳೆದುಕೊಳ್ಳುವ ಕುಡಚಿ ಮತಕ್ಷೇತ್ರದ ಶಾಸಕ ಪಿ ರಾಜೀವ್ ಈಗ ಮತ್ತೊಮ್ಮೆ ರೈತರೊಬ್ಬರಿಗೆ ಆವಾಜ್ ಹಾಕಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

    ರಾಯಬಾಗ ತಾಲೂಕಿನ ಅಳಗವಾಡಿ ಗ್ರಾಮ ಪಂಚಾಯ್ತಿಯಲ್ಲಿ ಆಶ್ರಯ ಮನೆ ಹಂಚಿಕೆ ಮಾಡುವ ಸಂದರ್ಭದಲ್ಲಿ ಆಶ್ರಯ ಮನೆ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ವ್ಯಕ್ತಿಯನ್ನು ಅವ್ಯಾಚ ಶಬ್ಧಗಳಿಂದ ನಿಂದಿಸಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ.

    ನಮ್ಮ ಮನೆ ನೋಡೋಕ್ಕೆ ಬಂದಿಲ್ಲ ಎಂದು ಪ್ರಶ್ನಿಸಿದ ರೈತನಿಗೆ, “ಕಿಮ್ಮತ್ತು ಕೊಡ್ತೀನಿ ಅಷ್ಟೇ. ನಾನು ಎಂಎಲ್‍ಎ ನನ್ನನ್ನು ನೀನು ಮನೆಗೆ ಕರೆದುಕೊಂಡು ಹೋಗಬೇಕು. ಇಲ್ಲಿಂದ ನಡಿ… ನೀನು ಹೊಟ್ಟೆಗೆ ಏನು ತಿನ್ನುತ್ತೀಯ” ಎಂದು ನಿಂದಿಸಿದ್ದಾರೆ. “ಇಷ್ಟು ದಿನ ನಿಮ್ಮನ್ನು ನಾಯಿ ಇಟ್ಟ ಹಾಗೆ ಇಟ್ಟಿದ್ದರು. ನಿಮ್ಮ ಬಳಿ ಬರುತ್ತೇನೆ ಎಂದರೆ ಋಣ ಇಟ್ಟುಕೊ ನೀಚ ನನ್ನ ಮಗನೆ. ನನ್ನ ವಿರುದ್ಧ ಬಂದರೆ ಸೆಡ್ಡು ಹೊಡೆಯೋಕೆ ರೆಡಿ ಇದ್ದೀನಿ. ಪಿ ರಾಜೀವ್ ನನ್ನು ಹೆದರಿಸುವರು ಯಾರೂ ಇಲ್ಲ ಈ ತಾಲೂಕಿನಲ್ಲಿ” ಎಂದು ಆವಾಜ್ ಹಾಕಿದ್ದಾರೆ.

    ಶಾಸಕರು ಬಡವರಿಗಾಗಿ ಶ್ರಮಿಸಿ ಸರಿಯಾದ ಫಲಾನುಭವಿಗಳಿಗೆ ಮನೆ ಸಿಗಲಿ ಎಂದು ಕಷ್ಟಪಡುತ್ತಿದ್ದಾರೆ ಎಂದು ಜನರು ಅಂದುಕೊಂಡರೂ ಶಾಸಕರು ಈ ರೀತಿಯಾಗಿ ಆವಾಜ್ ಹಾಕುವುದು ಎಷ್ಟು ಸರಿ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.