Tag: ಆಳ್ವಾಸ್ ಶಿಕ್ಷಣ ಸಂಸ್ಥೆ

  • ಮಾನವೀಯತೆ ಮೆರೆದ ಆಳ್ವಾಸ್ ಶಿಕ್ಷಣ ಸಂಸ್ಥೆ – ಮನೆಗೆ ತೆರಳಿ ಹಣ ಕೊಟ್ಟ ಪ್ರಿನ್ಸಿಪಾಲ್

    ಮಾನವೀಯತೆ ಮೆರೆದ ಆಳ್ವಾಸ್ ಶಿಕ್ಷಣ ಸಂಸ್ಥೆ – ಮನೆಗೆ ತೆರಳಿ ಹಣ ಕೊಟ್ಟ ಪ್ರಿನ್ಸಿಪಾಲ್

    ಚಾಮರಾಜನಗರ: ಹನೂರು ತಾಲೂಕಿನ ಸುಳ್ವಾಡಿ ಗ್ರಾಮದ ಮಾರಮ್ಮ ದೇವಸ್ಥಾನದ ವಿಷ ದುರಂತದಲ್ಲಿ ತಂದೆ-ತಾಯಿ ಕಳೆದುಕೊಂಡ ಅನಾಥರಾಗಿದ್ದ ಮಕ್ಕಳಿಗೆ ಆಳ್ವಾಸ್ ಶಿಕ್ಷಣ ಸಂಸ್ಥೆ ಆಸರೆಯಾಗಿ ಪರಿಹಾರ ಧನವನ್ನು ಕೂಡ ನೀಡಿದೆ.

    ಮಂಗಳವಾರ ಪ್ರಿಯಾ ಮನೆಗೆ ಆಳ್ವಾಸ್ ಪದವಿ ಕಾಲೇಜಿನ ಪ್ರಾಂಶುಪಾಲ ಕುರಿಯನ್ ಭೇಟಿ ನೀಡಿ ಒಂದು ಲಕ್ಷ ರೂ. ಹಣವನ್ನು ನೀಡಿದ್ದಾರೆ. ಈಗಾಗಲೇ ಉನ್ನತ ಶಿಕ್ಷಣ ಪಡೆದು ಉದ್ಯೋಗಕ್ಕೆ ಸೇರುವ ತನಕ ಉಚಿತ ಶಿಕ್ಷಣ, ಹಾಸ್ಟೆಲ್ ವ್ಯವಸ್ಥೆ ಹಾಗೂ ಉದ್ಯೋಗ ಕಲ್ಪಿಸುವ ಜವಬ್ದಾರಿಯನ್ನು ಸಂಸ್ಥೆಯ ಅಧ್ಯಕ್ಷ ಮೋಹನ್ ಆಳ್ವ ಅವರು ಹೊತ್ತುಕೊಂಡಿದ್ದಾರೆ.

    ಇನ್ನೂ ಮಾರಮ್ಮ ವಿಷ ಪ್ರಸಾದದಿಂದ ಮೃತಪಟ್ಟಿದ್ದ ಕುಟುಂಬದವರಿಗೆ ಸಚಿವ ಸಿ. ಪುಟ್ಟರಂಗಶೆಟ್ಟಿ ಅವರು ಪರಿಹಾರ ಧನ ನೀಡುವುದಾಗಿ ಹೇಳಿದ್ದರು. ಅದರಂತೆಯೇ ಮೃತ ಕುಟುಂಬವರ ಮನೆಗೆ ಹೋಗಿ 5 ಲಕ್ಷ ಪರಿಹಾರ ಧನದ ಚೆಕ್ ವಿತರಣೆ ಮಾಡಿದ್ದಾರೆ. ಬಿದರಹಳ್ಳಿ, ಸುಳ್ವಾಡಿ, ಕೋಟೆಪೊದೆ, ಗೋಡೆಸ್‍ನಗರ, ವಡ್ಡರದೊಡ್ಡಿ, ಎಂಜಿ ದೊಡ್ಡಿ, ಮಲೆಮಹದೇಶ್ವರ ಬೆಟ್ಟ, ದೊಡ್ಡಹಾಣೆ ಮತ್ತು ತುಳಸಿಕೆರೆ ಗ್ರಾಮಗಳು ಸೇರಿದಂತೆ ಒಟ್ಟು 15 ಮಂದಿಗೆ ಸರ್ಕಾರದದಿಂದ 5 ಲಕ್ಷ ರೂ. ಹಾಗೂ ಕೆಪಿಸಿಸಿಯಿಂದ 50 ಸಾವಿರ ರೂ. ನೀಡಿದ್ದಾರೆ. ಶಾಸಕ ನರೇಂದ್ರ 50 ಸಾವಿರ, ಸಂಸದ ಆರ್.ಧೃವನಾರಯಣ್ 50 ಸಾವಿರ ರೂ. ಹಾಗೂ ದಿನನಿತ್ಯ ಬಳಕೆ ವಸ್ತುಗಳು ಪೂರೈಕೆ ಮಾಡಿದ್ದಾರೆ.

    ಮಾರಮ್ಮ ವಿಷ ದುರಂತದಲ್ಲಿ ಕೃಷ್ಣ ನಾಯ್ಕ್ ಮತ್ತು ಮೈಲಿಬಾಯಿ ದಂಪತಿ ಇಬ್ಬರು ಮೃತಪಟ್ಟಿದ್ದರು. ಆದರೆ ಇವರಿಗೆ ರಾಣಿಬಾಯಿ, ಪ್ರಿಯಾಬಾಯಿ ಮತ್ತು ರಾಜೇಶ್ ಮೂವರು ಮಕ್ಕಳಿದ್ದು, ತಂದೆ-ತಾಯಿ ಅಗಲಿಕೆಯಿಂದ ಅನಾಥರಾಗಿದ್ದರು. ಇಬ್ಬರು ಹೆಣ್ಣು ಮಕ್ಕಳು ನರ್ಸಿಂಗ್ ಮಾಡುತ್ತಿದ್ದು, ಮಗ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಈ ವೇಳೆ ಇವರ ಆಸರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮುಂದಾಗಿ, ಮೂವರು ಮಕ್ಕಳನ್ನು ದತ್ತು ಪಡೆಯುವುದಾಗಿ ಹೇಳಿತ್ತು. ಅಷ್ಟೇ ಅಲ್ಲದೇ ಅವರ ವಿದ್ಯಾಭ್ಯಾಸದ ಸಂಪೂರ್ಣ ಖರ್ಚನ್ನು ಭರಿಸಲು ಆಳ್ವಾಸ್ ಸಂಸ್ಥೆ ತೀರ್ಮಾನ ಮಾಡಿತ್ತು.

    ಮಾಧ್ಯಮಗಳಲ್ಲಿ ಸುಳ್ವಾಡಿ ದೇವಾಲಯ ವಿಷಪ್ರಸಾದದ ಸುದ್ದಿ ಪ್ರಸಾರವಾಗುತ್ತಿತ್ತು. ಇದನ್ನು ನೋಡಿದ ಆಳ್ವಾಸ್ ಮುಖ್ಯಸ್ಥ ಡಾ. ಮೋಹನ್ ಆಳ್ವಾ ಅವರು ಸ್ಪಂದಿಸಿ, ದುರಂತದಿಂದ ಅನಾಥರಾಗಿರುವ ಮೂವರು ಮಕ್ಕಳನ್ನು ದತ್ತು ಪಡೆಯುತ್ತೇವೆ. ಅವರ ತಂದೆ-ತಾಯಿ ಜಾಗದಲ್ಲಿ ನಿಂತು ಅವರು ವಿದ್ಯಾಭ್ಯಾಸದ ಖರ್ಚನ್ನು ಭರಿಸುತ್ತೇವೆ. ಈಗ ಅವರು ಕಲಿಯುತ್ತಿದ್ದ ಸ್ಥಳದಿಂದ ನಮ್ಮ ಸಂಸ್ಥೆಗೆ ವರ್ಗಾವಣೆ ಮಾಡಿಸಿಕೊಳ್ಳುತ್ತೇವೆ. ಬಳಿಕ ಅವರ ವಿದ್ಯಾಭ್ಯಾಸ ಮುಗಿಸಿ, ಉದ್ಯೋಗ ಪಡೆಯುವವರೆಗೂ ನಾವು ಮೂವರ ಮಕ್ಕಳ ಜವಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವು ಪ್ರಕರಣ: ಆಳ್ವಾಸ್ ಬೆನ್ನಿಗೆ ನಿಂತ ಎಚ್‍ಡಿಕೆ

    ವಿದ್ಯಾರ್ಥಿನಿ ಕಾವ್ಯಶ್ರೀ ನಿಗೂಢ ಸಾವು ಪ್ರಕರಣ: ಆಳ್ವಾಸ್ ಬೆನ್ನಿಗೆ ನಿಂತ ಎಚ್‍ಡಿಕೆ

    ಉಡುಪಿ: ಬ್ಯಾಡ್ಮಿಂಟನ್ ಆಟಗಾರ್ತಿ ಕಾವ್ಯ ಶ್ರೀ ನಿಗೂಢ ಸಾವಿನ ಪ್ರಕರಣ ಇದೀಗ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹೆಸರಿಗೆ ಮಸಿ ಬಳಿಯಬೇಡಿ ಅಂತ ಹೇಳುವ ಮೂಲಕ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಸಂಸ್ಥೆಯ ಬೆನ್ನಿಗೆ ನಿಂತಿದ್ದಾರೆ.

    ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಳ್ವಾಸ್ ಕಾಲೇಜು ಮೂರು ಲಕ್ಷ ಕುಟುಂಬಕ್ಕೆ ನೆರವಾಗಿದೆ. ಇಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಸಿಗುತ್ತಿದೆ. ಸಾವಿನ ಪ್ರಕರಣದ ಬಗ್ಗೆ ಚರ್ಚೆ ಆರಂಭವಾಗಿದೆ. ಸರ್ಕಾರ ಪ್ರಕರಣ ಸತ್ಯಾಸತ್ಯತೆ ಅರಿಯಬೇಕು ಅಂತ ಹೇಳಿದ್ದಾರೆ.

    ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಮೋಹನ ಆಳ್ವ ಈ ವಿಚಾರವಾಗಿ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದಾರೆ. 26 ಸಾವಿರ ಮಕ್ಕಳು ಹಾಸ್ಟೆಲ್ ನಲ್ಲಿದ್ದಾರೆ. 4 ಸಾವಿರ ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ. ಕಾವ್ಯ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ರೆಕ್ಕೆ ಪುಕ್ಕ ಕಟ್ಟಲಾಗುತ್ತಿದೆ. ಈ ಮೂಲಕ ಸಂಸ್ಥೆಯ ಹೆಸರಿಗೆ ಮಸಿ ಬಳಿಯಬೇಡಿ. ಎಲ್ಲಾ ಸಂಘಟನೆಗಳು ರಾಜಕೀಯ ನಿಲ್ಲಿಸಬೇಕು ಅಂತಾ ಕುಮಾರಸ್ವಾಮಿ ಸಿಡಿಮಿಡಿಗೊಂಡಿದ್ದಾರೆ.

    ಇದನ್ನೂ ಓದಿ: ಬಿಗ್ ಬುಲೆಟಿನ್ ನಲ್ಲಿ ಕಾವ್ಯ ಶ್ರೀ ಪ್ರಕರಣದ ಬಿಗ್ ಚರ್ಚೆ – ತನಿಖೆಗೆ ಸಹಕರಿಸುವೆ ಎಂದ ಮೋಹನ್ ಆಳ್ವ

    ಸಿಬ್ಬಂದಿ, ವಿದ್ಯಾರ್ಥಿಗಳ ವಿಚಾರಣೆ: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಾ ನಿಗೂಢ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ಸಹಿತ 6 ವಿದ್ಯಾರ್ಥಿಗಳ ವಿಚಾರಣೆ ನಡೆಸಲಾಗುತ್ತಿದೆ.

    ಎಸಿಪಿ ರಾಜೇಂದ್ರ ನೇತೃತ್ವದ ತಂಡದಿಂದ ಹಾಸ್ಟೆಲ್ ವಾರ್ಡನ್, ಶಿಕ್ಷಕರು, ಸಹಪಾಠಿಗಳು, ಸಿಬ್ಬಂದಿ ವಿಚಾರಣೆ ನಡೆಯುತ್ತಿದೆ. ಅಲ್ಲದೇ ಸಿಸಿಟಿವಿ ಫೂಟೇಜ್, ಹಿಂದಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯ ಪರಿಶೀಲನೆ ಹಾಗೂ ಫೋನ್ ಸಂಭಾಷಣೆ, ಹೆತ್ತವರು ಹೇಳಿಕೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಅಂತೆಯೇ ಕಾವ್ಯಾಳ ಮರಣೋತ್ತರ ವರದಿ ಕೂಡ ಇಂದು ಸಲ್ಲಿಕೆಯಾಗುವ ಸಾಧ್ಯತೆಗಳಿವೆ.

    https://www.youtube.com/watch?v=75vzrVm8Z6w

    https://www.youtube.com/watch?v=BgvrrloxXoQ

    https://www.youtube.com/watch?v=9upWi0NOWqw

  • ಕಾವ್ಯ ನಿಗೂಢ ಸಾವು- ಪೋಷಕರಿಗೆ ಸಂಸದ ಕಟೀಲ್ ಸಾಂತ್ವನ

    ಕಾವ್ಯ ನಿಗೂಢ ಸಾವು- ಪೋಷಕರಿಗೆ ಸಂಸದ ಕಟೀಲ್ ಸಾಂತ್ವನ

    ಮಂಗಳೂರು: ಜುಲೈ 20ರಂದು ಆಳ್ವಾಸ್ ಕಾಲೇಜಿನಲ್ಲಿ ನಿಗೂಢವಾಗಿ ಸಾವನ್ನಪ್ಪಿದ್ದ ವಿದ್ಯಾರ್ಥಿನಿ ಕಾವ್ಯಶ್ರೀ ಮನೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ ನೀಡಿದ್ದಾರೆ.

    ಇದನ್ನೂ ಓದಿ: ಕಾವ್ಯ ನಿಗೂಢ ಸಾವು: ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ- ಹಾಸ್ಟೆಲ್‍ನ ಸಿಸಿಟಿವಿ ದೃಶ್ಯ ಬಿಡುಗಡೆ

    ಕಾವ್ಯ ಪೋಷಕರಿಗೆ ಸಾಂತ್ವನ ಹೇಳಿದ ನಳಿನ್ ಕುಮಾರ್, ಆರೋಪಿಗಳು ಯಾರೇ ಆಗಿದ್ದರೂ ಸರಿ ಅವರನ್ನು ಬಂಧಿಸಬೇಕು. ಈ ಕುರಿತು ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ರಾಜ್ಯ ಮತ್ತು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆಯುತ್ತೇನೆ. ಪ್ರಕರಣದಲ್ಲಿರುವ ಗೊಂದಲಗಳು ಶೀಘ್ರ ನಿವಾರಣೆಯಾಗಬೇಕು ಅಂದ್ರು.

    ಇದನ್ನೂ ಓದಿ:  ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

    ಕಾವ್ಯ ಅನುಮಾನಾಸ್ಪದ ಸಾವಿನ ಪ್ರಕರಣದಲ್ಲಿ ರಾಜಕೀಯ ನಾಯಕರು ತೆಪ್ಪಗಾಗಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಾಕ ಆಕ್ರೋಶ ವ್ಯಕ್ತವಾಗಿತ್ತು.

    ಕಾವ್ಯಾ ಸಾವಿನ ಸಮಗ್ರ ತನಿಖೆಗೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯೆದುರು ಎಬಿವಿಪಿ ಪ್ರತಿಭಟನೆ ನಡೆಸಿತು. ನ್ಯಾಯಕ್ಕಾಗಿ ಆಗ್ರಹಿಸಿ ವಿದ್ಯಾರ್ಥಿಗಳು ಧರಣಿ ನಡೆಸಿದ್ರು.

     

  • ಕಾವ್ಯ ನಿಗೂಢ ಸಾವು: ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ- ಹಾಸ್ಟೆಲ್‍ನ ಸಿಸಿಟಿವಿ ದೃಶ್ಯ ಬಿಡುಗಡೆ

    ಕಾವ್ಯ ನಿಗೂಢ ಸಾವು: ಆಳ್ವಾಸ್ ಸಂಸ್ಥೆ ವಿರುದ್ಧ ಭಾರೀ ಪ್ರತಿಭಟನೆ- ಹಾಸ್ಟೆಲ್‍ನ ಸಿಸಿಟಿವಿ ದೃಶ್ಯ ಬಿಡುಗಡೆ

    ಮಂಗಳೂರು: ಕೋಮು ಗಲಭೆಯಿಂದ ಹೊತ್ತಿ ಉರಿದಿದ್ದ ಮಂಗಳೂರಿನಲ್ಲಿ ಮತ್ತೊಂದು ನಿಗೂಢ ಸಾವು ಹಲವು ಅನುಮಾನ, ವಿವಾದಗಳಿಗೆ ಕಾರಣವಾಗಿದೆ. ಶಿಕ್ಷಣಕ್ಕೆ ಹೆಸರಾದ ಆಳ್ವಾಸ್ ಸಂಸ್ಥೆಯಲ್ಲಿ ಬ್ಯಾಡ್ಮಿಂಟನ್ ವಿದ್ಯಾರ್ಥಿನಿ ಕಾವ್ಯಶ್ರೀ ಸಾವು ಹತ್ತು ಹಲವು ಪ್ರಶ್ನೆಗಳನ್ನು ಎತ್ತಿದೆ.

    ಈ ನಡುವೆ ವಿದ್ಯಾರ್ಥಿನಿ ಸಾವಿನ ನ್ಯಾಯಾಕ್ಕಾಗಿ ಇದೀಗ ಪ್ರತಿಭಟನೆಗಳು ಆರಂಭಗೊಂಡಿವೆ. ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಮಂಗಳೂರಿನ ನೆಹರೂ ಮೈದಾನದಲ್ಲಿ ಮೊಂಬತ್ತಿ ಉರಿಸಿ ಮೌನ ಪ್ರತಿಭಟನೆ ನಡೆಸಿತು. ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಘೋಷಣೆ ಕೂಗಿ, ಸಾವಿನ ತನಿಖೆಯನ್ನು ಸರಿಯಾಗಿ ನಡೆಸಬೇಕೆಂದು ಒತ್ತಾಯಿಸಿದ್ರು.

    ಅಲ್ಲದೇ ಕಾವ್ಯಾ ಸಾವಿನಲ್ಲಿ ದೈಹಿಕ ಶಿಕ್ಷಕ ಪ್ರವೀಣ್ ಕುಮಾರ್ ಕೈವಾಡ ಇರೋ ಆರೋಪ ಕೇಳಿಬಂದಿದ್ರಿಂದ ಮಂಪರು ಪರೀಕ್ಷೆ ಮಾಡಬೇಕೆಂದು ಒತ್ತಾಯಿಸಿದ್ರು. ಇನ್ನು ಕಾವ್ಯಾ ನಿಗೂಢ ಸಾವಿನ ತನಿಖೆಯನ್ನು ಸೂಕ್ತವಾಗಿ ನಡೆಸಬೇಕೆಂದು ಪಿಎಫ್‍ಐ ಕಾರ್ಯಕರ್ತರು ಮೂಡಬಿದ್ರೆಯಲ್ಲಿ ಪ್ರತಿಭಟನೆ ನಡೆಸಿದ್ರು. ಇಷ್ಟೇ ಅಲ್ಲ ದೂರದ ಬಹರೈನ್‍ನಲ್ಲೂ ಪ್ರತಿಭಟನೆ ನಡೆದಿದ್ದು, ಇಂಡಿಯನ್ ಸೋಷಿಯಲ್ ಫೋರಂ ಕರ್ನಾಟಕ ರಿಫಾ ಘಟಕ ಪ್ರಕರಣದ ಸೂಕ್ತ ತನಿಖೆಗೆ ಒತ್ತಾಯಿಸಿದೆ.

    ಕಾವ್ಯ ಸಾವು ಸಹಜವೋ? ಕೊಲೆಯೋ? ಎಂಬ ಪ್ರಶ್ನೆ ಮೂಡಿದ್ದು, ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿದ ಬೆನ್ನಲ್ಲೇ ಆಳ್ವಾಸ್ ಶಿಕ್ಷಣ ಸಂಸ್ಥೆ ಜುಲೈ 20ರ ಹಾಸ್ಟೆಲ್‍ನ ಸಿಸಿಟಿವಿ ದೃಶ್ಯವನ್ನ ಬಿಡುಗಡೆ ಮಾಡಿದೆ.

    ಇದನ್ನೂ ಓದಿ: ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

    ದೃಶ್ಯ 1: ಬೆಳಗ್ಗೆ 6.03ಕ್ಕೆ ಕಾಲೇಜಿನ ಆವರಣದಲ್ಲಿ ಓಡಾಟ

    ದೃಶ್ಯ 2: ಬೆಳಗ್ಗೆ 6.42ಕ್ಕೆ ಮೈದಾನದಲ್ಲಿ ಬ್ಯಾಡ್ಮಿಂಟನ್ ಆಟ

    ದೃಶ್ಯ 3: ಬೆಳಗ್ಗೆ 9.48ಕ್ಕೆ ಶಾಲೆಗೆ ಬಂದಿದ್ದು

    ಮಧ್ಯಾಹ್ನ 3.34ಕ್ಕೆ  ಶಾಲೆಯಿಂದ ಹೋಗುತ್ತಿರುವುದು 

    https://www.youtube.com/watch?v=RoCUPTp54LM

    ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರೋ ಮೂಡಬಿದಿರೆಯ ಆಳ್ವಾಸ್‍ನ 10 ತರಗತಿ ವಿದ್ಯಾರ್ಥಿನಿ ಕಾವ್ಯಶ್ರೀ ಜುಲೈ 20ರಂದು ನಿಗೂಢವಾಗಿ ಸಾವನ್ನಪ್ಪಿದ್ರು. ಸ್ಪೋಟ್ರ್ಸ್ ಕೋಟಾದಲ್ಲಿ ಸೀಟ್ ಪಡೆದಿದಿದ್ದ ಕಾವ್ಯ, ಬ್ಯಾಡ್ಮಿಂಟನ್‍ನಲ್ಲಿ ನ್ಯಾಷನಲ್ ಲೆವೆಲ್ ಚಾಂಪಿಯನ್ ಆಗಿದ್ರು. ಮಗಳು ಕಾವ್ಯ ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದ್ರೆ ಆಳ್ವಾಸ್ ಮಾತ್ರ ದನ್ನ ಅಲ್ಲಗಳೀತಿದೆ. ಇದರ ಮಧ್ಯೆ ಜುಲೈ 20ರಂದು ಶಾಲೆಗೆ ಬಂದಿದ್ದ ಕಾವ್ಯ, ಬ್ಯಾಡ್ಮಿಂಟನ್ ಆಡಿರೋದೆಲ್ಲಾ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮಂಗಳೂರಿನ ಕಟೀಲು ನಿವಾಸಿಯಾಗಿರೋ ಕಾವ್ಯ ಪೋಷಕರು ಕಾಲೇಜಿನಲ್ಲೇ ಕೊಲೆ ಮಾಡಲಾಗಿದೆ ಅಂತ ಆರೋಪಿಸಿದ್ರು.

    ಸಾಯುವ ಮೊದಲ ದಿನ ಸಂತೋಷದಿಂದ ಮಾತನಾಡಿದವಳು, ನಾಳೆಯಿಂದ ಬೆಳಗ್ಗೆ ನಾಲ್ಕು ಗಂಟೆಯಿಂದ ಟ್ರೈನಿಂಗ್ ಬರಲು ಪಿಟಿ ಮೇಷ್ಟ್ರು ಪ್ರವೀಣ್ ತಿಳಿಸಿದ್ದಾರೆ ಅಂತ ಹೇಳಿದ್ದಳು. ಆದ್ರೆ ಆತ್ಮಹತ್ಯೆ ಮಾಡಿಕೊಂಡಳು ಅಂದ್ರೆ ನಂಬೋದಿಕ್ಕೆ ಆಗತ್ತಾ ಅಂತ ಕಾವ್ಯಾ ತಾಯಿ ಬೇಬಿ ಮತ್ತು ತಂದೆ ಲೋಕೇಶ್ ಪ್ರಶ್ನೆ ಮಾಡ್ತಿದ್ದಾರೆ. ಮಂಗಳೂರು ಕಮಿಷನರ್‍ಗೂ ಕಂಪ್ಲೆಂಟ್ ಕೊಟ್ಟಿದ್ದಾರೆ.

    ಈ ನಡುವೆ ಕಾವ್ಯ ಸಾವು ಹಲವು ಪ್ರಶ್ನೆ ಹುಟ್ಟಿಹಾಕಿದೆ: 
    * ಹಾಸ್ಟೆಲ್‍ನೊಳಗೆ ನೇಣು ಹಾಕಲು ಸೀರೆ ಸಿಕ್ಕಿದ್ದು ಹೇಗೆ..?
    * ಹೆತ್ತವರು ಬರುವ ಮೊದಲೇ ಮೃತದೇಹವನ್ನ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಿದ್ದು ಯಾಕೆ..?
    * ಟ್ರಾಕ್ ಸೂಟ್‍ನಲ್ಲೇ ಮೃತದೇಹ ಇದ್ದದ್ದು ಯಾಕೆ..?
    * ಮುಂಜಾನೆ 4 ಗಂಟೆಗೆ ದೈಹಿಕ ಶಿಕ್ಷಕ ತರಬೇತಿಗೆ ಕರೆದದ್ದು ಯಾಕೆ..?

    ಈ ನಡುವೆ ಆಳ್ವಾಸ್ ಸಂಸ್ಥೆ, ಜುಲೈ 20ರಂದು ಕಾವ್ಯಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದೆ. ಆಕೆಯದ್ದು ಕೊಲೆಯಲ್ಲ ಎಂದು ಹೇಳುತ್ತಿದೆ.

  • ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

    ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕೇಸ್: ಆಳ್ವಾಸ್ ಕಾಲೇಜು ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದೇನು?

    ಮಂಗಳೂರು: ಕಾವ್ಯಳನ್ನು ಯಾರೀ ಕೊಲೆ ಮಾಡಿಲ್ಲ. ನಮ್ಮ ಸಂಸ್ಥೆಯ ಮೇಲೆ ಬಂದಿರುವ ಆರೋಪಗಳು ಎಲ್ಲವೂ ಸುಳ್ಳು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಮೋಹನ್ ಆಳ್ವ ಹೇಳಿದ್ದಾರೆ.

    ಕ್ರೀಡಾ ಕೋಟದಡಿ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿದ್ದ ಕಟೀಲು ನಿವಾಸಿ ಕಾವ್ಯಾ ಪೂಜಾರಿ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದಾಗ, ಇಲ್ಲಿ ಆಗುತ್ತಿರುವ ಚರ್ಚೆಗಳು ಯಾವುದು ಸತ್ಯ ಅಲ್ಲ. ಇದನ್ನು ಖಂಡಿತಾ ನಾನು ಒಪ್ಪಲ್ಲ. ನಾನು ಒಬ್ಬ ಜವಾಬ್ದಾರಿಯುತನಾಗಿ ಹೇಳ್ತಾ ಇದ್ದೇನೆ. ಯಾಕಂದ್ರೆ ಇಲ್ಲಿ ನನಗೆ ತುಂಬಾ ಜವಾಬ್ದಾರಿ ಇದೆ. ನನ್ನ ನಂಬಿಕೊಂಡು ಇಡೀ ರಾಜ್ಯದ 26,000 ಮಕ್ಕಳು ಆಳ್ವಾಸ್ ಸಂಸ್ಥೆಯೊಳಗಿದ್ದಾರೆ. ಬಹಳ ದೀರ್ಘ ಕಾಲದಲ್ಲಿ ಕಟ್ಟಿದಂತಹ ಒಂದು ಸಂಸ್ಥೆ. ಇಂತಹ ಸಂಸ್ಥೆಯ ಜವಾಬ್ದಾರಿಯುತ ನಾಗರಿಕನಾಗಿ ನಾನು ಹೆಳ್ತೀನಿ. ಇದು ಆ ದಿವಸ ಹಾಸ್ಟೆಲ್ ಗೆ ಮಕ್ಕಳು ಬರುವಾಗ ಈ ಹುಡುಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಅಂತ ಹೇಳಿದ್ದಾರೆ.

    ಇವಳು ನೇಣು ಹಾಕೊಂಡು ನೇತಾಡ್ತಾ ಇರೋದನ್ನು ನೋಡಿದ ಆಕೆಯ ರೂಮೆಟ್ಸ್ ಗಳೇ ಅವಳ ದೇಹವನ್ನು ಕೆಳಗಿಳಿಸಿದ್ದಾರೆ. ಬಳಿಕ ಕೂಡಲೇ ಆಕೆಯನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದ್ರೆ ಈ ವೇಳೆ ಆಕೆಗೆ ಉಸಿರಾಟ ಇತ್ತೋ ಇಲ್ಲವೋ ಅನ್ನೋದರ ಬಗ್ಗೆ ನನಗೆ ಮಾಹಿತಿಯಿಲ್ಲ. ಆಸ್ಪತ್ರೆಗೆ ಆಕೆಯ ಪೋಷಕರು ಹಾಗೂ ಪೊಲೀಸ್ ಇಲಾಖೆಯವರು ಬಂದ್ರು. ಆಕೆಯ ದೇಹದ ಮೊಹಜರು ಒಂದು ಮುಕ್ಕಾಲು ಗಂಟೆಯಲ್ಲಿ ಆಗಿ ಅವರ ಮನೆಗೆ ತೆರಳಿದರು. ನಾವು ಈ ಕಡೆ ಬಂದ್ವಿ ಅಂದ್ರು.

    ಹೀಗಾಗಿ ಇಲ್ಲಿ ಪಬ್ಲಿಕ್ ಟಿವಿ ಕೇಳಿದ ಪ್ರಶ್ನೆಗಳಿಗೆ ಮೋಹನ್ ಆಳ್ವ ಅವರು ನೀಡಿದ ಉತ್ತರಗಳನ್ನು ನೀಡಲಾಗಿದೆ.

    * ನಾವು ಆಸ್ಪತ್ರೆಗೆ ಹೋಗುವ ಮುನ್ನವೇ ಮಗಳ ದೇಹವನ್ನು ಆಸ್ಪತ್ರೆಯ ಶವಾಗಾರದಲ್ಲಿ ಇಡಲಾಗಿತ್ತು ಅಂತಾ ಪೋಷಕರು ಹೇಳ್ತಾ ಇದ್ದಾರೆ. ಹೀಗಾಗಿ ಪೋಷಕರ ಅನುಮತಿಯಿಲ್ಲದೇ ಹೇಗೆ ಶವಾಗಾರದಲ್ಲಿ ಇಟ್ರಿ?
    ಆಸ್ಪತ್ರೆಯ ಎಮರ್ಜೆನ್ಸಿ ಜಾಗದಲ್ಲಿ ನಾವು ಎಷ್ಟು ಹೊತ್ತು ಶವವನ್ನು ಇಟ್ಟುಕೊಳ್ಳಬಹುದು?. ಹೀಗಾಗಿ ಪೊಲೀಸ್ ಇಲಾಖೆಯವರ ಜೊತೆ ಮಾತನಾಡಿಯೇ ಕಾವ್ಯಾ ಶವವನ್ನು ಶವಾಗಾರದಲ್ಲಿ ಇರಿಸಲಾಗಿತ್ತು.

    * ಶವದ ಮುಖವನ್ನು ಬಿಟ್ಟು ಇಡೀ ದೇಹದ ಯಾವುದೇ ಭಾಗವನ್ನು ನೋಡಲು ಸಾಧ್ಯವಾಗಿಲ್ಲ ನಮಗೆ ಅಂತ ಪೋಷಕರು ಹೇಳ್ತಾ ಇದ್ದಾರೆ.
    ಆಕೆಯ ಶವದಲ್ಲಿ ಒಂದು ಸಣ್ಣ ಗಾಯವಿಲ್ಲ. ಇದಕ್ಕೊಂದು ಅರ್ಥವಿದೆಯಾ?. ನೀವು ಬೇಕಾದ್ರೆ ನಮ್ಮ ಮೂಡಬಿದರೆ ಪೊಲೀಸ್ ಇನ್ಸ್ ಪೆಕ್ಟರ್ ಜೊತೆ ಕೇಳಿ. ಯಾಕಂದ್ರೆ ಆಕೆಯನ್ನು ಯಾರು ಕೊಲೆ ಮಾಡಬೇಕು? ಯಾಕೆ ಕೊಲೆ ಮಾಡ್ಬೇಕು? ಅಂತಾ ಹೇಳಿದ್ರು.

    * ಶಿಕ್ಷಣ ಸಂಸ್ಥೆಯಲ್ಲಿ ಬೆಳಗ್ಗಿನ ಜಾವ 4.15ಕ್ಕೆ ಯಾವುದಾದರೂ ಪ್ರಾಕ್ಟಿಸ್ ಇತ್ತಾ?
    ನೂರಕ್ಕೆ ನೂರು ಪರ್ಸೆಂಟ್ ಯಾವುದೇ ಪ್ರಾಕ್ಟೀಸ್ ಇಲ್ಲ. ಆಕೆ ತಪ್ಪು ತಿಳಿದುಕೊಂಡಿರಬಹುದು. ನಾಲ್ಕು ಕಾಲು ಗಂಟೆಗೆ ಯಾವುದೇ ಪ್ರಾಕ್ಟೀಸ್ ಗಳು ಶಿಕ್ಷಣ ಸಂಸ್ಥೆಯಲ್ಲಿ ನಡೆಯಲ್ಲ. ಈಗಾಗಲೇ 800 ಮಂದಿ ಕ್ರೀಡಾ ವಿದ್ಯಾರ್ಥಿಗಳು ಇದ್ದಾರೆ. ಆದ್ರೆ ಈಕೆ ಬಂದು 1 ತಿಂಗಳಾಗಿದ್ದು. ಇದು ಕಳೆದ 35 ವರ್ಷಗಳಿಂದ ನಡೆಯುವ ಕ್ರೀಡಾ ವಿಚಾರ. ಉಚಿತ ಶಿಕ್ಷಣದಲ್ಲಿ 800 ಮಕ್ಕಳಿದ್ದಾರೆ. ಈಕೆ ಕೂಡ ಉಚಿತ ಶಿಕ್ಷಣದಲ್ಲೇ ನಮ್ಮ ಸಂಸ್ಥೆಗೆ ಸೇರಿದವಳು. ಒಟ್ಟಾರೆ ಬೆಳಗ್ಗಿನ 6 ಗಂಟೆಯವರೆಗೆ ಯಾವುದೇ ಪ್ರಾಕ್ಟೀಸ್ ಗಳು ನಡೆಯಲ್ಲ. ಸಂಸ್ಥೆಯ ಬಸ್ ನಲ್ಲೇ ಈಕೆ 5.30 ಗಂಟೆಗೆ ಗ್ರೌಂಡ್ ಗೆ ಹೋಗ್ತಾಳೆ.

    * ಹಲವಾರು ಪ್ರಕರಣಗಳಲ್ಲಿ ಹಾಸ್ಟೇಲ್ ಒಳಗೆ ಸೀರೆಯ ನೇಣು ಹಾಕ್ಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದ್ರೆ ಮಕ್ಕಳಿಗೆ ಸೀರೆ ಎಲ್ಲಿಂದ ಸಿಗತ್ತೆ?
    ಕಾವ್ಯಾ ಪ್ರಕರಣದಲ್ಲಿ ಆಕೆಯ ಪಕ್ಕದ ರೂಮಿಗೆ ವಿದ್ಯಾರ್ಥಿನಿಯರ ಪೋಷಕರು ಬಂದಿದ್ದರಂತೆ. ಅವರ ಸೀರೆ ಅಲ್ಲಿ ಇತ್ತಂತೆ. ಅದನ್ನು ತೆಗೆದುಕೊಂಡು ಈಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

    * ಮೃತ ದೇಹ ಟ್ರ್ಯಾಕ್ ಶೂಟ್ ನಲ್ಲಿತ್ತು. ಹಾಗಿದ್ರೆ 4.15ಕ್ಕೆ ಗ್ರೌಂಡ್ ಹೋಗಿಲ್ಲ. ಮೊದಲನೇ ದಿನ ಪೋಷಕರ ಜೊತೆ ಚೆನ್ನಾಗಿಯೇ ಮಾತನಾಡಿದ್ದಾಳೆ. ಹಾಗಾದ್ರೆ ಆಕೆ ನೇಣು ಹಾಕಿಕೊಂಡಿರೋದು ಬೆಳಗ್ಗೆನಾ ಅಥವಾ ಸಂಜೆಯಾ?
    ಆಕೆ ಬಾಯಿ ತಪ್ಪಿ ಮುಂಜಾನೆ 4.15 ಗಂಟೆಗೆ ಪ್ರಾಕ್ಟೀಸ್ ಇದೆ ಅಂತ ಹೇಳಿರಬೇಕು. ನಿಜ ಹೇಳ್ತಾ ಇದ್ದೀನಿ.. ಆಕೆ ಬೆಳಗ್ಗೆ 6 ಗಂಟೆಗೆ ಪ್ರಾಕ್ಟೀಸ್ ಗೆ ಹೋಗಿದ್ದಾಳೆ. 7.30 ವರೆಗೆ ಪ್ರಾಕ್ಟೀಸ್ ಮಾಡಿದ್ದಾಳೆ. ಅಲ್ಲಿಂದ ಬಸ್ ಹತ್ತಿ ಬಂದು ನಂತ್ರ ಶಾಲೆಗೆ ಹೋಗಿದ್ದಾಳೆ. ತರಗತಿಯಲ್ಲಿ ಕುಳಿತಿದ್ದಾಳೆ. ಮೂರೂವರೆ ಗಂಟೆವರೆಗೆ ಕ್ಲಾಸ್ ನಡೆದಿತ್ತು. ತದನಂತ್ರ ಮೂರು ಮುಕ್ಕಾಲಿಗೆ ನಮ್ಮ ಬಸ್ ನಲ್ಲಿ ಬಂದು ಇಳಿದಿದ್ದಾಳೆ. ಅಲ್ಲಿವರೆಗೆ ನಮ್ಮಲ್ಲಿ ವಿಡಿಯೋ ಇದೆ. ಹೀಗಾಗಿ ಏನಿದು ಬೆಳಗ್ಗೆ ಮರ್ಡರ್ ಆಗಿದ್ದಳೋ ಅಥವಾ ಸಂಜೆನೋ ಸುಮ್ನೆ ಯಾಕೆ ಈ ತರದ ಪ್ರಶ್ನೆಗಳು. ಹಾಗಿದ್ದರೆ ಇಲ್ಲಿ ಇದ್ದಿದೆಲ್ಲಾ ಸುಳ್ಳಾ? ನಮ್ಮ ಕ್ಯಾಂಪಸ್ ನಲ್ಲಿ ಎಲ್ಲಿಯಾದ್ರೂ ಒಂದು ಮರ್ಡರ್ ಆದ್ರೆ ನಮ್ಮ ಮಕ್ಕಳು ಬಿಟ್ಟರಾ?

    * ರಾಜ್ಯದ ಬೇರೆ ಬೇರೆ ಕಡೆಯಿಂದ ಸಂಸ್ಥೆಗೆ ಶಿಕ್ಷಣಕ್ಕಾಗಿ ಬರ್ತಾರೆ. ಅವರ ಹೆತ್ತವರು ಕೂಡ ಮಕ್ಕಳ ಬಗ್ಗೆ ಏನೇನೋ ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಹಾಗಿದ್ರೆ ಮಕ್ಕಳ ಮನಸ್ಸು ಕುಗ್ಗಿ ಈ ತರದ ಯೋಚನೆಗಳು ಬರಲು ಕಾರಣವೇನಿರಬಹುದು?
    ಕಾವ್ಯಾಳ ಯಾವುದೇ ಸಮಸ್ಯೆಗಳು ನಮ್ಮ ಗಮನಕ್ಕೆ ಬಂದಿಲ್ಲ. ಅವಳು ಸರಿಯಾಗಿಯೇ ಇದ್ದಳು. ಪ್ರಾಕ್ಟೀಸ್ ಕೂಡ ಮಾಡ್ತಾ ಇದ್ದಳು. ಹೀಗಾಗಿ ಬಂದು 1 ತಿಂಗಳು 8 ದಿನಗಳಾದ್ರೂ ಆಕೆಯ ಬಗ್ಗೆ ಯಾವುದೇ ರೀತಿಯ ದೂರುಗಳಿರಲಿಲ್ಲ. 10ನೇ ತರಗತಿಯಲ್ಲಿ ಒದುತ್ತಾ ಇದ್ದಳು. ಹೀಗಾಗಿ ಸುಮ್ನೆ ಎಂತೆಂಥಾ ಅಪವಾದಗಳನ್ನು ಆಕೆಯ ಮೇಲೆ ಹಾಕಲು ನಾನು ತಯಾರಿಲ್ಲ. ಕಲಿಯುವುದರಲ್ಲೂ ಸಾಧಾರಣ ಇದ್ದಳು. ಕ್ರೀಡೆಯಲ್ಲಿ ಆಸಕ್ತಿ ಇರೋ ಮಕ್ಕಳು ಮೊದಲು ಕಲಿಯುವ ಕಡೆ ಅಷ್ಟೊಂದು ಗಮನ ಹರಿಸಲ್ಲ. ಹೋಗ್ತಾ ಹೋಗ್ತಾ ಅವರ ಕಲಿಯುವಿಕೆಯು ಇಂಪ್ರೂ ಆಗತ್ತೆ.

    * ಹಾಗಿದ್ರೆ ಒಬ್ಬಳು ಕ್ರೀಡಾ ವಿದ್ಯಾರ್ಥಿನಿಯಾಗಿ ಕೇವಲ ಅರ್ಧ ಅಂಕಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದಾ ಅಂತಾ ನಿಮಗೆ ಅನಿಸ್ತಿದೆಯೇ?
    ನನಗೆ ಗೊತ್ತಿಲ್ಲ. ಯಾಕಂದ್ರೆ ಒಬ್ಬರು ಕ್ರೀಡಾ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳುವುದೆಂದರೆ ಅವರು ಅನ್ ಫಿಟ್ ಫಾರ್ ಸ್ಪೋರ್ಟ್ಸ್. ಸ್ಪೋರ್ಟ್ಸ್ ಮ್ಯಾನ್ ಗಳಿಗೆ ಇರೋದೇ ಕ್ರೀಡಾ ಮನೋಭಾವ. ಹೀಗಾಗಿ ನನಗೆ ಅಚ್ಚರಿಯಾಗ್ತಾ ಇದೆ. ಯಾಕೆ ಆಕೆ ಈ ನಿರ್ಧಾರಕ್ಕೆ ಬಂದಿದ್ದಾಳೆ. ಯಾಕೆ ಆಕೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಎಂಬುವುದೇ ನನಗೂ ಸಪ್ರೈಸ್ ಅಷ್ಟೇ. ಸ್ಪೋರ್ಟ್ಸ್ ಇಷ್ಟ ಇಲ್ಲ ಅಂತಂದ್ರೆ ನಾವು ಆಕೆಯನ್ನು ಕಳಿಸಿಕೊಡ್ತಾ ಇದ್ವಿ.

    ಆಕೆಯ ಸಹಪಾಠಿಗಳನ್ನು ಮಾತನಾಡಿಸಿದಾಗ, ಆಕೆ ಚೆನ್ನಾಗಿಯೇ ಇದ್ದಳು. ಅಮ್ಮ ಶನಿವಾರ ಬರ್ತಾರೆ. ನನಗೆ ಸ್ವಲ್ಪ ಅಂಕ ಕಡಿಮೆ ಇದೆ. ಮುಂದೆ ಒಳ್ಳೆಯ ಅಂಕಗಳನ್ನು ಗಳಿಸಬೇಕು ಅಂತ ಹೇಳಿದ್ದಳಂತೆ. ಅಲ್ಲದೇ ಒಂದು ದಿನ ರೂಮಿನ ಫ್ಯಾನ್ ಚೆನ್ನಾಗಿ ಇದೆ. ಈ ಫ್ಯಾನ್ ಎಲ್ಲಿದ್ದು? ಯಾವ ಕಂಪನಿಯದ್ದು ಅಂತೆಲ್ಲ ಪ್ರಶ್ನೆಗಳನ್ನು ಕೇಳಿದ್ದಳಂತೆ. ಕೊನೆಯದಾಗಿ ಯಾವಾಗಲೂ ಸುಳ್ಳು ಸುಳ್ಳೇ. ಸತ್ಯ ಸತ್ಯವೇ. ಯಾವತ್ತೂ ನಾನು ಸತ್ಯದ ಹಿಂದೆ ಇದ್ದೇನೆ. ಊಹಾಪೋಹಗಳು ಆಗಬಾರದು. ವದಂತಿ ಬೇರೆ. ಅತ್ಯ ಬೇರೆ. ಅನಗತ್ಯ ವದಂತಿಗಳು ಬರಬಾರದು. ಪೋಷಕರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ಕಾವ್ಯಾ ಪ್ರಕರಣದಲ್ಲಿ ನಾನು ಯಾವ ತನಿಖೆಗೂ ಸಿದ್ಧನಾಗಿದ್ದೇನೆ ಅಂದ್ರು.

    ರೋಬಾರ್ಟ್ ರೊಸಾರಿಯೋ ವಿರುದ್ಧ ಕಿಡಿ: ಈ ವೇಳೆ ರೋಬಾರ್ಟ್ ರೊಸಾರಿಯೋ ಅವರು ಆಳ್ವಾಸ್ ಸಂಸ್ಥೆಯ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವಾ ಜೊತೆ ಮಾತನಾಡಿದಾಗ, ನಾನು ನೀವು ಮಾಡೋ ತನಿಖೆಗೆ ಸಿದ್ದನಿಲ್ಲ. ನಿಮ್ಮ ಜೊತೆ ಮಾತನಾಡುವ ಆಸೆ ನನಗಿಲ್ಲ. ನೀವು ಯಾರು ಇದನ್ನು ಕೇಳಲು. ನಿಮಗೆ ಸ್ಪಷ್ಟೀಕರಣ ಕೊಡಲು ನಾನು ಸಿದ್ದನಿಲ್ಲವೆಂದು ಹೇಳಿ ಮೋಹನ್ ಆಳ್ವ ಫೋನ್ ಕಾಲ್ ಕಟ್ ಮಾಡಿದ್ರು.

    ಇದೇ ಸಂದರ್ಭದಲ್ಲಿ ಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ಪ್ರವೀಣ್ ಅವರನ್ನು ಪಬ್ಲಿಕ್ ಟಿವಿ ಸಂಪರ್ಕಿಸಿದಾಗ, ಕಾವ್ಯಾ ಪೂಜಾರಿ ಒಬ್ಬಳು ಒಳ್ಳೆಯ ಕ್ರೀಡಾ ವಿದ್ಯಾರ್ಥಿನಿ. ಆಕೆ ಮಾನಸಿಕವಾಗಿ ನೊಂದಿರುವ ಬಗ್ಗೆ ಒಂದು ಸಣ್ಣ ಮಾಹಿತಿ ತಿಳಿಯುತ್ತಿದ್ರೆ ನಾನು ಆಕೆಗೆ ಕೌನ್ಸಿಲಿಂಗ್ ಆದ್ರೂ ಮಾಡಿ ಸಂತೈಸುತ್ತಿದ್ದೆ. ಬೆಳಗ್ಗೆ 6 ಗಂಟೆಗೆ ಆಕೆ ಅಭ್ಯಾಸಕ್ಕೆ ಬಂದವಳು 8 ಗಂಟೆಯವರೆಗೆ ಇದ್ದಳು. ಸಂಜೆ 4/15ಕ್ಕೆ ಪ್ರಾಕ್ಟೀಸ್ ಇತ್ತು. ಆದ್ರೆ ಆಕೆ ಬಂದಿರಲಿಲ್ಲ. ಆಕೆಗೆ ಸ್ಪೆಷಲ್ ಕ್ಲಾಸ್ ಇದೆ. ಹೀಗಾಗಿ ನಾನು ಪ್ರಾಕ್ಟೀಸ್ ಗೆ ಬರೋವಾಗ ಲೇಟಾಗಬಹುದು ಅಂತ ಆಕೆಯ ಸೀನಿಯರ್ಸ್ ಹೇಳಿದ್ರು. ಆದ್ರೆ ಆ ದಿನ ಆಕೆ ಪ್ರಾಕ್ಟೀಸ್ ಗೆ ಬಂದಿಲ್ಲ. ಬಳಿಕ ಆಕೆಯ ರೂಮೆಟ್ಸ್ ಗಳು 7- 7.20 ಗಂಟೆಗೆ ಹೋಗಿ ನೋಡಿದಾಗ ವಿಷಯ ಬೆಳಕಿಗೆ ಬಂದಿದೆ ಅಂತ ಹೇಳಿದ್ರು.

    ಒಟ್ಟಿನಲ್ಲಿ ಆಕೆಯ ಸಹಪಾಠಿಗಳು ಆಕೆಗೆ ಕಡಿಮೆ ಮಾರ್ಕ್ ಬಂದಿದೆ. ಹೀಗಾಗಿ ಶನಿವಾರ ಅಮ್ಮ ಬರ್ತಾರೆ ಅಂತಾ ಬೇಜಾರು ಮಾಡಿಕೊಂಡಿದ್ದಳು ಅಂತ ಹೇಳಿದ್ದಾರೆ.

    ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಟೀಲು ಬಳಿಯ ದೇವರಗುಡ್ಡ ಎಂಬಲ್ಲಿನ ನಿವಾಸಿಗಳಾದ ಲೋಕೇಶ್ ಮತ್ತು ಬೇಬಿ ದಂಪತಿಯ ಪುತ್ರಿ ಕಾವ್ಯಾ(15) ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಎಸ್‍ಎಸ್‍ಎಲ್‍ಸಿ ವಿದ್ಯಾರ್ಥಿನಿಯಾಗಿದ್ದು, ಜುಲೈ 20ರಂದು ಹಾಸ್ಟೆಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಶಾಲೆಯಿಂದ ತಿಳಿಸಲಾಗಿತ್ತು.

    ಕಾವ್ಯ ಚಿಕ್ಕಂದಿನಿಂದಲೇ ಬ್ಯಾಡ್ಮಿಂಟನ್ ಚಾಂಪಿಯನ್ ಆಗಿದ್ದಳು. ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಪಾಲ್ಗೊಂಡಿದ್ದು ಕಟೀಲು ಶಾಲೆಗೆ ಕೀರ್ತಿ ತಂದಿದ್ದಳು. ಅದರಂತೆ ಆಳ್ವಾಸ್ ಹೈಸ್ಕೂಲಿನ ದೈಹಿಕ ಶಿಕ್ಷಕರೇ ಕಾವ್ಯಾ ಹೆತ್ತವರನ್ನು ಸಂಪರ್ಕಿಸಿ, ತಮ್ಮ ಶಾಲೆಗೆ ಕಳಿಸಿಕೊಡಿ ಕ್ರೀಡಾ ಕೋಟಾದಲ್ಲಿ ಉಚಿತವಾಗಿ ಶಿಕ್ಷಣ ಕೊಡಿಸುತ್ತೇವೆಂದು ಹೇಳಿ ಕರೆಸಿಕೊಂಡಿದ್ದರು. ಇದೇ ಜುಲೈ ಆರಂಭದಲ್ಲಿ ಕಟೀಲು ಶಾಲೆಯಿಂದ ಆಳ್ವಾಸ್ ಹೈಸ್ಕೂಲು ಸೇರಿದ್ದ ಕಾವ್ಯಾ ಇದೀಗ ನಿಗೂಢವಾಗಿ ಸಾವನ್ನಪ್ಪಿರುವುದು ಹೆತ್ತವರನ್ನು ಆತಂಕಕ್ಕೀಡುಮಾಡಿದೆ.

    https://www.youtube.com/watch?v=O1dTEqQsZ80

    https://www.youtube.com/watch?v=BgvrrloxXoQ&spfreload=10

    https://www.youtube.com/watch?v=9upWi0NOWqw