Tag: ಆರ್ ಟಿಪಿಎಸ್

  • ಎರಡು ತಿಂಗಳಿಂದ RTPS ಬಂದ್ – ಸಂಪೂರ್ಣ ಮುಚ್ಚುವ ಭೀತಿಯಲ್ಲಿ ಕಾರ್ಮಿಕರು

    ಎರಡು ತಿಂಗಳಿಂದ RTPS ಬಂದ್ – ಸಂಪೂರ್ಣ ಮುಚ್ಚುವ ಭೀತಿಯಲ್ಲಿ ಕಾರ್ಮಿಕರು

    ರಾಯಚೂರು: ಇಡೀ ರಾಜ್ಯಕ್ಕೆ ಶೇ.40 ರಷ್ಟು ವಿದ್ಯುತ್ ನೀಡುತ್ತಿದ್ದ ರಾಯಚೂರಿನ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ ಟಿಪಿಎಸ್ ಕಳೆದ ಎರಡು ತಿಂಗಳಿಂದ ಸಂಪೂರ್ಣ ಬಂದ್ ಆಗಿದೆ. ಇದರಿಂದ ನೂರಾರು ಜನ ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಅಲ್ಲದೆ ವಿದ್ಯುತ್ ಕೇಂದ್ರವನ್ನ ಸಂಪೂರ್ಣ ಮುಚ್ಚುವ ಯೋಚನೆ ಸರ್ಕಾರದ ಮಾಡಿದೆಯಾ ಅನ್ನೋ ಅನುಮಾನ ಕಾರ್ಮಿಕರನ್ನ ಕಾಡುತ್ತಿದೆ.

    ಶಕ್ತಿ ನಗರದ ಬೃಹತ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್ ಟಿಪಿಎಸ್ ಆರಂಭವಾದಾಗಿನಿಂದ ಇದೇ ಮೊದಲ ಬಾರಿಗೆ ಅತೀ ಹೆಚ್ಚು ಕಾಲ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿದೆ. ಕಳೆದ ಎರಡು ತಿಂಗಳಿಂದ ವಿದ್ಯುತ್ ಕೇಂದ್ರದ ಎಲ್ಲಾ ಎಂಟು ಘಟಕಗಳು ಸಂಪೂರ್ಣ ಬಂದ್ ಆಗಿವೆ. 1,720 ಮೆಗಾ ವ್ಯಾಟ್ ಸಾಮರ್ಥ್ಯ ವಿದ್ಯುತ್ ಕೇಂದ್ರ ಈಗ ಒಂದೇ ಒಂದು ಯೂನಿಟ್ ವಿದ್ಯುತ್ ಉತ್ಪಾದಿಸುತ್ತಿಲ್ಲ. ಇದರಿಂದಾಗಿ ಆರ್ ಟಿಪಿಎಸ್ ನ ಸುಮಾರು 500 ಜನ ಗುತ್ತಿಗೆ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ. ಕೇಂದ್ರದ ಹಿರಿಯ ನೌಕರರು, ಬಹಳಷ್ಟು ಇಂಜಿನಿಯರ್ ಗಳನ್ನ ವೈಟಿಪಿಎಸ್ ಹಾಗೂ ರಾಜ್ಯದ ವಿವಿಧ ವಿದ್ಯುತ್ ಉತ್ಪಾದನಾ ಕೇಂದ್ರಗಳಿಗೆ ನಿಯೋಜಿಸಲಾಗಿದೆ.

    ಹಿಂದೆಂದೂ ಕೇಂದ್ರ ಎಲ್ಲಾ ಘಟಕಗಳನ್ನು ಬಂದ್ ಮಾಡಿರಲಿಲ್ಲ. ತೀವ್ರತರದ ಕಲ್ಲಿದ್ದಲು ಅಥವಾ ನೀರಿನ ಸಮಸ್ಯೆಯಾದಾಗ ಮಾತ್ರ ಹೆಚ್ಚು ಘಟಕಗಳನ್ನ ಸ್ಥಗಿತಗೊಳಿಸಲಾಗುತ್ತಿತ್ತು. ಆದ್ರೆ ಈಗ ಕೊರೋನಾ ಲಾಕ್‍ಡೌನ್ ಹಿನ್ನೆಲೆ ವಿದ್ಯುತ್ ಬಳಕೆ ಪ್ರಮಾಣ ಇಳಿಕೆ ಹಾಗೂ ರಾಜ್ಯದಲ್ಲಿ ಸುರಿದ ಉತ್ತಮ ಮಳೆಯಿಂದ ವಿದ್ಯುತ್ ಬೇಡಿಕೆ ಕುಸಿದಿದೆ ಎನ್ನಲಾಗಿದೆ. ಆದ್ರೆ ಕಾರ್ಮಿಕ ಹೋರಾಟಗಾರರು ಮಾತ್ರ ಸರ್ಕಾರ ಜಿಲ್ಲೆಗೆ ಹಾಗೂ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ ಅಂತ ಆರೋಪಿಸಿದ್ದಾರೆ.

    ಜಲ ವಿದ್ಯುತ್ ಸ್ಥಾವರ ಹಾಗೂ ಸೋಲಾರ್ ವಿದ್ಯುತ್ ಸ್ಥಾವರಗಳಲ್ಲಿ ಒಂದು ಯೂನಿಟ್ ವಿದ್ಯುತ್ ಉತ್ಪಾದನೆಗೆ 1 ರೂಪಾಯಿ 60 ಪೈಸೆ ಖರ್ಚು ಬಂದ್ರೆ ಶಾಖೋತ್ಪನ್ನ ವಿದ್ಯುತ್ ಸ್ಥಾವರಗಳಲ್ಲಿ 5 ರೂಪಾಯಿ 30 ಪೈಸೆ ಖರ್ಚು ಬರುತ್ತೆ ಅನ್ನೋದು ಅಧಿಕಾರಿಗಳ ಸಮಜಾಯಿಸಿ. ಹೀಗಾಗಿ ಆರ್ ಟಿ ಪಿಎಸ್ ಹಾಗೂ ಬಳ್ಳಾರಿಯ ಬಿಟಿಪಿಎಸ್ ವಿದ್ಯುತ್ ಕೇಂದ್ರದಲ್ಲಿ ಉತ್ಪಾದನೆ ಸ್ಥಗಿತಗೊಳಿಸಿವೆ. ಇನ್ನೂ ಯರಮರಸ್‍ನ ವೈಟಿಪಿಎಸ್‍ನ ಒಂದು ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಹೀಗಾಗಿ ಉತ್ಪಾದನಾ ವೆಚ್ಚದ ಕಾರಣಕ್ಕೆ ಕಾರ್ಮಿಕರಿಗೆ ಅನ್ಯಾಯವಾಗಬಾರದು ಅನ್ನೋ ಕೂಗು ಹೆಚ್ಚಾಗಿದೆ.

    ರಾಜ್ಯದಲ್ಲಿ ಸದ್ಯ ಒಟ್ಟು 6,354 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯಿದ್ದು ಜಲ, ಪವನ, ಸೋಲಾರ್ ಹಾಗೂ ಇನ್ನಿತರ ಮೂಲಗಳಿಂದ ಸರಿದೂಗಿಸಲಾಗುತ್ತಿದೆ. ಆದ್ರೆ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳನ್ನ ಮಾತ್ರ ಬಂದ್ ಮಾಡುವ ಮೂಲಕ ಕಾರ್ಮಿಕರನ್ನ ಬೀದಿಗೆ ತಳ್ಳಲಾಗಿದೆ.

  • ವಿದ್ಯುತ್ ಬೇಡಿಕೆ ಇಳಿಮುಖ- RTPS ನ ಎಂಟೂ ಘಟಕಗಳ ಕಾರ್ಯ ಸ್ಥಗಿತ

    ವಿದ್ಯುತ್ ಬೇಡಿಕೆ ಇಳಿಮುಖ- RTPS ನ ಎಂಟೂ ಘಟಕಗಳ ಕಾರ್ಯ ಸ್ಥಗಿತ

    ರಾಯಚೂರು: ವಿದ್ಯುತ್ ಬೇಡಿಕೆ ಕಡಿಮೆಯಾದ ಹಿನ್ನೆಲೆ ನಗರದ ಶಕ್ತಿನಗರದಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರ ಆರ್‍ ಟಿಪಿಎಸ್‍ನ ಎಲ್ಲ ಎಂಟು ವಿದ್ಯುತ್ ಘಟಕಗಳು ಕಾರ್ಯವನ್ನು ಸ್ಥಗಿತಗೊಳಿಸಿವೆ.

    ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಇಳಿಮುಖವಾದ ಹಿನ್ನೆಲೆ ಸ್ಥಗಿತ ಕ್ರಮ ಕೈಗೊಳ್ಳಲಾಗಿದೆ. ಎಂಟು ವಿದ್ಯುತ್ ಕೇಂದ್ರಗಳಲ್ಲಿ ಉತ್ಪಾದನೆ ನಿಲ್ಲಿಸಿ ಸಂಪೂರ್ಣ ವಿಶ್ರಾಂತಿ ನೀಡಲಾಗಿದೆ. ಕೊರೊನಾ ಹಿನ್ನೆಲೆ ಕೈಗಾರಿಕೆಗಳು ಬಂದ್ ಆಗಿರುವ ಹಿನ್ನೆಲೆ ಕಳೆದ ಮೂರು ತಿಂಗಳಿಂದ ವಿದ್ಯುತ್ ಬೇಡಿಕೆಯಲ್ಲಿ ಕುಸಿತವಾಗಿದೆ. ಈ ಬಾರಿ ಬೇಸಿಗೆಯಲ್ಲೂ ವಿದ್ಯುತ್ ಬೇಡಿಕೆ ಹೆಚ್ಚಾಗದ ಹಿನ್ನೆಲೆ ಕ್ರಮ ಕೈಗೊಳ್ಳಲಾಗಿದೆ. ಕಳೆದ ತಿಂಗಳು ಎರಡು ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದ್ದವು. ಇದೀಗ ಈ ಎರಡು ಘಟಕಗಳನ್ನು ಸಹ ಬಂದ್ ಮಾಡಲಾಗಿದೆ.

    ಪವನ, ಜಲ ವಿದ್ಯುತ್ ಸ್ಥಾವರಗಳಿಂದ ರಾಜ್ಯದ ವಿದ್ಯುತ್ ಬೇಡಿಕೆ ಪೂರೈಕೆ ಮಾಡಲಾಗುತ್ತಿದೆ. ಹೀಗಾಗಿ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳನ್ನು ಬಂದ್ ಮಾಡಲಾಗಿದೆ. ರಾಜ್ಯದಲ್ಲಿ ಒಟ್ಟು 9009 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಪ್ರಸ್ತುತ ರಾಜ್ಯದ ಬೇಡಿಕೆ 8992 ಮೆಗಾವ್ಯಾಟ್ ಇದೆ. ವೈಟಿಪಿಎಸ್‍ನ ಎರಡು ಘಟಕಗಳಲ್ಲಿ ಎರಡನೇ ಘಟಕ ಮಾತ್ರ ಕಾರ್ಯನಿರ್ವಹಿಸುತ್ತಿದೆ. ಬಳ್ಳಾರಿಯ ಬಿಟಿಪಿಎಸ್‍ನ ಮೂರು ಘಟಕಗಳ ಕಾರ್ಯವನ್ನು ಸಹ ಸ್ಥಗಿತಗೊಳಿಸಲಾಗಿದೆ.

  • ಆರ್ ಟಿಪಿಎಸ್‍ನ 8ರಲ್ಲಿ 6 ವಿದ್ಯುತ್ ಘಟಕಗಳ ಕಾರ್ಯ ಸ್ಥಗಿತ!

    ಆರ್ ಟಿಪಿಎಸ್‍ನ 8ರಲ್ಲಿ 6 ವಿದ್ಯುತ್ ಘಟಕಗಳ ಕಾರ್ಯ ಸ್ಥಗಿತ!

    ರಾಯಚೂರು: ರಾಜ್ಯದೆಲ್ಲೆಡೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಯಚೂರಿನಲ್ಲಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರಗಳ ಘಟಕಗಳು ಕಾರ್ಯಸ್ಥಗಿತಗೊಂಡಿವೆ.

    ಇಲ್ಲಿನ ಶಕ್ತಿನಗರದಲ್ಲಿರುವ ಆರ್ ಟಿಪಿಎಸ್‍ನ ಒಟ್ಟು ಎಂಟು ಘಟಕಗಳಲ್ಲಿ 6 ವಿದ್ಯುತ್ ಘಟಕಗಳು ಕಾರ್ಯಸ್ಥಗಿತಗೊಂಡಿವೆ. 1 ಮತ್ತು 5 ನೇ ಘಟಕದಲ್ಲಿ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ.

    1,720 ಮೆಗಾ ವ್ಯಾಟ್ ಸಾಮರ್ಥ್ಯದ ಕೇಂದ್ರದಲ್ಲಿ ಕೇವಲ 303 ಮೆಗಾ ವ್ಯಾಟ್ ಉತ್ಪಾದನೆಯಾಗುತ್ತಿದೆ. ಇನ್ನು ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ನ 800 ಮೆಗಾವ್ಯಾಟ್‍ನ 2 ವಿದ್ಯುತ್ ಕೇಂದ್ರಗಳು ಸಹ ಕಾರ್ಯಸ್ಥಗಿತಗೊಂಡಿವೆ. ರಾಜ್ಯದೆಲ್ಲೆಡೆ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ವಿದ್ಯುತ್ ಬೇಡಿಕೆ ಕುಸಿತವಾಗಿದ್ದು ಘಟಕಗಳು ಕಾರ್ಯಸ್ಥಗಿತಗೊಂಡಿವೆ ಎಂದು ಹೇಳಲಾಗುತ್ತಿದೆ.

  • ಆರ್ ಟಿಪಿಎಸ್ ನಲ್ಲಿ ವ್ಯಾಗನರ್ ಗಳಿಗೆ ಬೂದಿ ತುಂಬುವ ಪೈಪ್ ಗಳಲ್ಲಿ ಸೋರಿಕೆ

    ಆರ್ ಟಿಪಿಎಸ್ ನಲ್ಲಿ ವ್ಯಾಗನರ್ ಗಳಿಗೆ ಬೂದಿ ತುಂಬುವ ಪೈಪ್ ಗಳಲ್ಲಿ ಸೋರಿಕೆ

    ರಾಯಚೂರು: ಶಕ್ತಿ ನಗರದಲ್ಲಿರುವ ಆರ್ ಟಿಪಿಎಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಹಾರುವ ಬೂದಿ ಪೈಪ್ ಸೋರಿಕೆಯಾಗಿ ಕೆಲ ಕಾಲ ಆತಂಕ ಸೃಷ್ಟಿಸಿದೆ.

    ನಗರದ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಲೋಕಾ ಶೆಡ್ ಬಳಿ ವ್ಯಾಗನಾರ್ ಗಳಿಗೆ ತುಂಬುವ ಬೂದಿ ಪೈಪ್ ಗಳು ಸೋರಿಕೆಯಾಗಿದ್ದರಿಂದ ಈ ಅವಘಡ ಸಂಭವಿಸಿದೆ. ಬೂದಿ ಸೋರಿಕೆಯಾದ ಪರಿಣಾಮ ಸಂಪೂರ್ಣ ಆರ್ ಟಿಪಿಎಸ್ ಘಟಕ ಬೂದಿಯಿಂದ ಆವೃತಗೊಂಡಿದೆ. ಇದರಿಂದಾಗಿ ಘಟಕದಲ್ಲಿ ಕೆಲಸ ಮಾಡುವ ಸಿಬ್ಬಂದಿಗಳು ಕಂಗಲಾಗಿದ್ದು, ಹಾರೋ ಬೂದಿಯಿಂದಾಗಿ ಸಿಬ್ಬಂದಿಗಳಿಗೆ ಉಸಿರಾಟಕ್ಕೂ ತೊಂದರೆಯಾಗಿದೆ ಎಂದು ತಿಳಿದು ಬಂದಿದೆ.

    ಈ ಬೂದಿ ರಾಯಚೂರು-ಹೈದರಾಬಾದ್ ಮುಖ್ಯ ರಸ್ತೆವರೆಗೂ ಹಬ್ಬಿದ್ದರಿಂದ ಪ್ರಯಾಣಿಕರು ಸಹ ಗಾಬರಿಗೊಂಡಿದ್ದು, ಸದ್ಯ ಈಗ ವಾತಾವರಣ ಸಹಜ ಸ್ಥಿತಿಗೆ ಮರಳುತ್ತಿದೆ. ಆರ್ ಟಿಪಿಎಸ್ ಘಟಕದಲ್ಲಿ ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿರುವುದರಿಂದ ಸಿಬ್ಬಂದಿಗಳು ಆತಂಕ ಹೆಚ್ಚಾಗಿದೆ.