Tag: ಆರ್ಮಿ ಮುಖ್ಯಸ್ಥ

  • ಭಾರತದಿಂದ ವಿಶ್ವಕ್ಕೆ ಔಷಧಿ ಪೂರೈಕೆ, ಪಾಕ್‍ನಿಂದ ಭಯೋತ್ಪಾದನೆ ರಫ್ತು: ಆರ್ಮಿ ಮುಖ್ಯಸ್ಥ ಗರಂ

    ಭಾರತದಿಂದ ವಿಶ್ವಕ್ಕೆ ಔಷಧಿ ಪೂರೈಕೆ, ಪಾಕ್‍ನಿಂದ ಭಯೋತ್ಪಾದನೆ ರಫ್ತು: ಆರ್ಮಿ ಮುಖ್ಯಸ್ಥ ಗರಂ

    – ಪುಂಡಾಟ ಮುಂದುವರಿಸಿದ ಪಾಕ್

    ನವದೆಹಲಿ: ಹೆಮ್ಮಾರಿ ಕೊರೊನಾ ವೈರಸ್ ವಿರುದ್ಧ ಭಾರತ ಹೋರಾಡುತ್ತಿದೆ. ಅಷ್ಟೇ ಅಲ್ಲದೆ ವಿವಿಧ ದೇಶಗಳಿಗ ಸಹಾಯ ಮಾಡುತ್ತಿದೆ. ಇಂತಹ ಪರಿಸ್ಥಿತಿ ಪಾಕಿಸ್ತಾನ ತನ್ನ ಪುಂಡಾಟವನ್ನು ಮುಂದುವರಿಸಿದೆ ಎಂದು ಆರ್ಮಿ ಮುಖ್ಯಸ್ಥ ಜನರಲ್‌ ಮನೋಜ್ ಮುಕುಂದ್ ನರವಾಣೆ ಗುಡುಗಿದ್ದಾರೆ.

    ಆರ್ಮಿ ಮುಖ್ಯಸ್ಥ ಜನರಲ್‌ ನರವಾಣೆ ಅವರ ಹೇಳಿಕೆಯ ಕೆಲವೇ ಗಂಟೆಗಳ ಮುನ್ನ ಪಾಕಿಸ್ತಾನ ಸೇನೆಯು ಜಮ್ಮು-ಕಾಶ್ಮೀರದ ಪೂಂಚ್ ಜಿಲ್ಲೆಯ ನಿಯಂತ್ರಣ ರೇಖೆಯಲ್ಲಿ (ಎಲ್‍ಒಸಿ) ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಯತ್ನಿಸಿತ್ತು. ಅಷ್ಟೇ ಅಲ್ಲದೆ ಕಸ್ಬಾ ಮತ್ತು ಕಿರ್ನಿ ವಲಯಗಳಲ್ಲಿನ ಎಲ್‍ಒಸಿ ಉದ್ದಕ್ಕೂ ಸಣ್ಣ ಶಸ್ತ್ರಾಸ್ತ್ರಗಳಿಂದ ಗುಂಡು ಹಾರಿಸಿತ್ತು.

    ಕುಪ್ವಾರಾದಲ್ಲಿ ಮಾತನಾಡಿದ ಆರ್ಮಿ ಮುಖ್ಯಸ್ಥ ಜನರಲ್‌ ನರವಾಣೆ ಅವರು, ”ನಾವು ನಮ್ಮ ನಾಗರಿಕರಿಗೆ ಮಾತ್ರವಲ್ಲದೆ ವಿಶ್ವದ ಇತರ ಭಾಗಗಳಿಗೆ ವೈದ್ಯಕೀಯ ತಂಡ, ಔಷಧಿಗಳನ್ನು ರಫ್ತು ಮಾಡಿ ಕೊರೊನಾ ವಿರುದ್ಧ ಹೋರಾಡುತ್ತಿದ್ದೇವೆ. ಆದರೆ ಮತ್ತೊಂದೆಡೆ ಪಾಕಿಸ್ತಾನ ಭಯೋತ್ಪಾದನೆಯನ್ನು ಮಾತ್ರ ರಫ್ತು ಮಾಡುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ” ಎಂದು ಎಚ್ಚರಿಕೆ ನೀಡಿದ್ದಾರೆ.

    ಇಲ್ಲಿಯವರೆಗೆ ಭಾರತೀಯ ಸೈನ್ಯದಲ್ಲಿ ಕೇವಲ 8 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅವರಲ್ಲಿ 2 ವೈದ್ಯರು ಮತ್ತು 1 ನರ್ಸಿಂಗ್ ಸಹಾಯಕ, 4 ಜನರು ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಲಡಾಖ್‍ನಲ್ಲಿ ಒಬ್ಬರಿಗೆ ಸೋಂಕು ತಗುಲಿತ್ತು ಅವರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಮತ್ತು ಕರ್ತವ್ಯಕ್ಕೆ ಹಾಜರಾಗಿದ್ದಾರೆ ಎಂದು ತಿಳಿಸಿದರು.

    ಯಾವುದೇ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರದ ಯೋಧರನ್ನು ಮತ್ತೆ ಘಟಕಗಳಿಗೆ ಸ್ಥಳಾಂತರಿಸಲಾಗುತ್ತಿದೆ. ನಾವು ಈಗಾಗಲೇ ಎರಡು ವಿಶೇಷ ರೈಲುಗಳನ್ನು ಒದಗಿಸಿದ್ದೇವೆ. ಬೆಂಗಳೂರಿನಿಂದ ಜಮ್ಮು ಮತ್ತು ಬೆಂಗಳೂರಿನಿಂದ ಗುವಾಹಟಿಗೆ ರೈಲು ಸೇವೆ ಕಲ್ಪಿಸಲಾಗಿದ್ದು, ಅಲ್ಲಿಂದ ಯೋಧರನ್ನು ಕರೆತರಲಾಗುತ್ತಿದೆ ಎಂದು ಮಾಹಿತಿ ನೀಡಿದರು.

    ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಕ್ಷಣಾ ಸಚಿವಾಲಯದ ವಕ್ತಾರ ಕರ್ನಲ್ ದೇವೇಂದರ್ ಆನಂದ್ ಅವರು, ”ಇಂದು ಬೆಳಗ್ಗೆ 11 ಗಂಟೆಗೆ ಪಾಕಿಸ್ತಾನವು ಕಸ್ಬಾ ಮತ್ತು ಕಿರ್ನಿ ವಲಯಗಳಲ್ಲಿನ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಸಣ್ಣ ಶಸ್ತ್ರಾಸ್ತ್ರ ಮತ್ತು ಗಾರೆಗಳಿಂದ ಗುಂಡು ಹಾರಿಸುವ ಮೂಲಕ ಅಪ್ರಚೋದಿತ ಕದನ ವಿರಾಮ ಉಲ್ಲಂಘನೆಗೆ ಮಾಡಿದೆ. ಇದಕ್ಕೆ ಭಾರತೀಯ ಸೇನೆಯು ಸೂಕ್ತವಾಗಿ ಪ್ರತೀಕಾರ ತೀರಿಸುತ್ತಿದೆ” ಎಂದು ತಿಳಿಸಿದ್ದಾರೆ.

    ಪಾಕಿಸ್ತಾನದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 6000ಕ್ಕೆ ತಲುಪಿದ್ದರೆ, ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 117ಕ್ಕೆ ತಲುಪಿದೆ. ವಿಶ್ವಾದ್ಯಂತ 1.3 ಲಕ್ಷಕ್ಕೂ ಹೆಚ್ಚು ಜನರು ಕೊರೊನಾಗೆ ಬಲಿಯಾಗಿದ್ದಾರೆ.

  • ಆರ್ಮಿಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ- ಬಿಪಿನ್ ರಾವತ್

    ಆರ್ಮಿಯಲ್ಲಿ ಸಲಿಂಗಕಾಮಕ್ಕೆ ಅವಕಾಶವಿಲ್ಲ- ಬಿಪಿನ್ ರಾವತ್

    ನವದೆಹಲಿ: ಸಲಿಂಗಕಾಮ ಅಪರಾಧವಲ್ಲ ಅಂತ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಆರ್ಮಿಗೆ ಇದು ಅನ್ವಯವಾಗುವುದಿಲ್ಲ ಎಂದು ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದಾರೆ.

    ಸೇನೆಯ ವಾರ್ಷಿಕ ಸುದ್ದಿಗೋಷ್ಠಿ ನಡೆಸಿ ಇಂದು ಮಾತನಾಡಿದ ಅವರು, ಸಲಿಂಗಕಾಮಕ್ಕೆ ಸೇನೆಯಲ್ಲಿ ಅವಕಾಶ ನೀಡಲ್ಲ. ಭಾರತೀಯ ಸೇನೆಯ ಕಾನೂನಿನ ವಿಧಿಗಳ ಪ್ರಕಾರ ಸಲಿಂಗಕಾಮಕ್ಕೆ ಅವಕಾಶವಿಲ್ಲ. ಹೀಗಾಗಿ ಕೋರ್ಟ್ ಆದೇಶವನ್ನು ಸೇನೆಯಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

    ನಾವು ದೇಶದ ಕಾನೂನುಗಳನ್ನು ಮೀರಿದ ವ್ಯಕ್ತಿಗಳಲ್ಲ ಎಂದು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ ಅವರು, ಸೇನೆಗೆ ಸೇರಿದವರು ಕೆಲವು ಹಕ್ಕುಗಳನ್ನು ಕಳೆದುಕೊಳ್ಳುತ್ತಾರೆ. ಇದರಿಂದಾಗಿ ಕೆಲವು ಸಾಮಾನ್ಯರಿಗಿಂತ ನಮಗೆ ಭಿನ್ನವಾಗಿರುತ್ತದೆ. ಈ ನಿಟ್ಟಿನಲ್ಲಿ ಸಲಿಂಗಕಾಮಕ್ಕೆ ಸೇನೆಯಲ್ಲಿ ಅವಕಾಶವಿಲ್ಲ ಎಂದು ತಿಳಿಸಿದ್ದಾರೆ.

    ಕೋರ್ಟ್ ತೀರ್ಪು ಏನು?:
    ಸಲಿಂಗಕಾಮ ಅಪರಾಧವಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಐದು ಜನ ನ್ಯಾಯಾಧೀಶರ ಪೀಠವು ಸೆಪ್ಟೆಂಬರ್ 6ರಂದು ತೀರ್ಪು ನೀಡಿತ್ತು. ಈ ತೀರ್ಪಿನಿಂದಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 377ರ ರದ್ದುಗೊಳಿಸಲಾಗಿದೆ. ಐಪಿಸಿ ಸೆಕ್ಷನ್ 377ರ ಪ್ರಕಾರ ಯಾವುದೇ ವ್ಯಕ್ತಿ, ಮಹಿಳೆ ಅಥವಾ ಪ್ರಾಣಿಗಳೊಂದಿಗೆ ನಿಸರ್ಗಕ್ಕೆ ವಿರುದ್ಧವಾಗಿ ಲೈಂಗಿಕ ಕ್ರಿಯೆ ನಡೆಸಿದರೆ ಅದು ಅಪರಾಧವಾಗಿತ್ತು. ಇಂತಹ ಅಪರಾಧಕ್ಕೆ ಜೀವಾವಧಿ ಶಿಕ್ಷೆ ಅಥವಾ 10 ವರ್ಷ ಜೈಲು ಹಾಗೂ ದಂಡ ವಿಧಿಸಬಹುದಾಗಿತ್ತು.

    ಕಾಲದ ಜೊತೆ ಕಾನೂನು ಕೂಡ ಬದಲಾಗಬೇಕು ಎಂದು ಹೇಳಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಆರ್. ಫಾಲಿ ನಾರಿಮನ್, ಎ.ಎಂ.ಖಾನ್‍ವಿಲ್ಕರ್, ಡಿ.ವೈ.ಚಂದ್ರಚೂಡ್ ಮತ್ತು ಇಂದೂ ಮಲ್ಹೋತ್ರ ಅವರನ್ನು ಒಳಗೊಂಡ ಈ ಪೀಠವು ಐಪಿಸಿ 377 ಅನ್ನು ಅಸಿಂಧುಗೊಳಿಸಿ ಆದೇಶವನ್ನು ಪ್ರಕಟಿಸಿತ್ತು. ಈ ಮೂಲಕ 156 ವರ್ಷದ ಹಿಂದಿನ ಬ್ರಿಟಿಷ್ ಕಾನೂನು ರದ್ದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಯುದ್ಧಭೂಮಿಯಲ್ಲಿ ಮಹಿಳಾ ನೇಮಕಾತಿ ಕಷ್ಟ – ಸೇನಾ ಮುಖ್ಯಸ್ಥರ ವಿರುದ್ಧ ಆಕ್ರೋಶ

    ಯುದ್ಧಭೂಮಿಯಲ್ಲಿ ಮಹಿಳಾ ನೇಮಕಾತಿ ಕಷ್ಟ – ಸೇನಾ ಮುಖ್ಯಸ್ಥರ ವಿರುದ್ಧ ಆಕ್ರೋಶ

    – ಸೇನಾ ಮುಖ್ಯಸ್ಥ ರಾವತ್ ವಿರುದ್ಧ ಆನ್‍ಲೈನ್‍ನಲ್ಲಿ ಆಕ್ರೋಶ
    – ಹುತಾತ್ಮ ಮಹಿಳಾ ಯೋಧರ ಮೃತದೇಹ ನೋಡಲು ನಮ್ಮ ದೇಶ ಸಿದ್ಧವಿಲ್ಲ ಎಂದಿದ್ದ ಬಿಪಿನ್ ರಾವತ್

    ನವದೆಹಲಿ: ಯುದ್ಧಭೂಮಿಯಲ್ಲಿ ಕಾರ್ಯನಿರ್ವಹಿಸಲು ಮಹಿಳಾ ನೇಮಕಾತಿಗೆ ಇರುವ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ಬಳಕೆದಾರರು, ರಾವತ್ ಹೇಳಿಕೆ ಸೇನೆಯನ್ನು ಮುಜುಗರಕ್ಕೀಡು ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಸೇನಾ ಮುಖ್ಯಸ್ಥರು ಹೇಳಿದ್ದೇನು?: ಖಾಸಗಿ ವಾಹಿನಿಯೊಂದಕ್ಕೆ ನೀಡಿದ್ದ ಸಂದರ್ಶನದ ವೇಳೆ ರಾವತ್ ಅವರು, ಮಹಿಳಾ ನೇಮಕಾತಿಯ ಹಲವು ಆಯಾಮಗಳ ಬಗ್ಗೆ ಮಾತನಾಡಿದ್ದರು.

    ಮಹಿಳೆಯರಿಗೆ ಯುದ್ಧ ಭೂಮಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶ ಕೊಡಲು ನಾನು ಸಿದ್ಧನಿದ್ದೇನೆ. ಆದರೂ ಸೇನೆಯಲ್ಲಿರುವ ಯೋಧರು ಗ್ರಾಮೀಣ ಪ್ರದೇಶಗಳಿಂದ ಬಂದಿರುತ್ತಾರೆ. ಅವರೆಲ್ಲಾ ಮಹಿಳಾ ಕಮಾಂಡರ್ ಗಳು ತಮ್ಮ ನೇತೃತ್ವ ವಹಿಸುವುದನ್ನು ಒಪ್ಪಲ್ಲ ಎಂದು ಹೇಳಿದ್ದರು.

    ಸೇನೆಯಲ್ಲಿ ಮಹಿಳೆಯರು ಎಂಜಿನಿಯರ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಾಯು ಪಡೆಯಲ್ಲಿ ಅವರೇ ನಮ್ಮ ಶಸ್ತ್ರ ವ್ಯವಸ್ಥೆಯನ್ನು ನಿಯಂತ್ರಿಸುತ್ತಾರೆ. ಯುದ್ಧಭೂಮಿಯಲ್ಲಿ ಆ ಮಹಿಳಾ ಯೋಧರು ಮೃತಪಡುವ ಸಾಧ್ಯತೆ ಇರುತ್ತವೆ. ಒಂದು ವೇಳೆ ಅವರು ಯುದ್ಧಭೂಮಿಯಲ್ಲಿ ಸಾವನ್ನಪ್ಪಿದರೆ ಮೃತದೇಹ ಮನೆಗೆ ಮರಳಿದಾಗ ಅದನ್ನು ನೋಡಲು ನಮ್ಮ ದೇಶ ಸಿದ್ಧವಿಲ್ಲ ಎಂದು ಹೇಳಿದ್ದರು.

    ಹಾಗಂತ ಅವರು ಬೇರೆಲ್ಲೂ ಸಾಯಲ್ಲ ಎಂದು ನಾನು ಹೇಳಲ್ಲ. ಮಕ್ಕಳನ್ನು ಹೊಂದಿರುವ ಮಹಿಳೆಯರು ರಸ್ತೆ ಅಪಘಾತಗಳಲ್ಲೂ ಸಾಯುತ್ತಾರೆ. ಆದರೆ ಯುದ್ಧಭೂಮಿಯಲ್ಲಿ ಸಾವನ್ನಪ್ಪಿದ ಮಹಿಳೆಯನ್ನು ನೋಡಲು ದೇಶ ಬಯಸುವುದೇ ಎಂದು ಪ್ರಶ್ನಿಸಿದರು.

    ಯುದ್ಧರಂಗದಲ್ಲಿ ಕರ್ತವ್ಯ ನಿರ್ವಹಿಸಲು ಮಹಿಳೆಯರಿಗೆ ಅವಕಾಶ ನೀಡಲು ಸೇನೆ ಸಿದ್ಧವಿಲ್ಲ ಎಂದಲ್ಲ. ಒಂದು ವೇಳೆ ಕಮಾಂಡರ್ ಹುದ್ದೆ ನೀಡಿದರೆ ಅವರು ದೀರ್ಘಾವಧಿಗೆ ಕುಟುಂಬದ ಹೊಣೆಗಾರಿಕೆಯಿಂದ ದೂರ ಉಳಿಯಬಹುದೇ? ಆಗ ಅವರಿಗೆ ಹೆರಿಗೆ ರಜೆ ನೀಡಲಾಗುವುದಿಲ್ಲ ಎಂದು ನಿರ್ಬಂಧ ಹೇರಬಹುದೇ? ಎಂದು ಪ್ರಶ್ನಿಸಿದ ಅವರು ನಾನು ಹೀಗೆ ಹೇಳಿದರೆ ವಿವಾದಕ್ಕೆ ಗುರಿಯಾಗುತ್ತದೆ ಎಂದು ಹೇಳಿದ್ದಾರೆ.

    ಟ್ಟೀಟ್ ನಲ್ಲಿ ಏನಿದೆ?:
    ಬಟ್ಟೆ ಬದಲಾಯಿಸುವಾಗ ಯೋಧರು ಇಣುಕುವ ಸಾಧ್ಯತೆ ಇದೆ. ಹೀಗಾಗಿ ಮಹಿಳೆಯರಿಗೆ ಯುದ್ಧಭೂಮಿಯಲ್ಲಿ ಅವಕಾಶ ನೀಡಲು ಸಾಧ್ಯವಿಲ್ಲ ಎನ್ನುವ ಮೂಲಕ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರು ಸೇನೆ ಹಾಗೂ ದೇಶವನ್ನು ಮುಜುಗರಕ್ಕೀಡುಮಾಡಿದ್ದಾರೆ ಎಂದು ವಿಷ್ಣುಕಾಂತ್ ಶರ್ಮಾ ಎಂಬವರು ಟ್ವೀಟ್ ಮಾಡಿದ್ದಾರೆ.

    https://twitter.com/Dibyendu69/status/1074174987802599425

    ರಾವತ್ ಹೇಳಿಕೆ ನಿಜಕ್ಕೂ ಆಘಾತಕರ. ಅವರೀಗ ಸೇನೆ ಮತ್ತು ದೇಶವನ್ನು ಮುಜುಗರಕ್ಕೀಡುಮಾಡಲು ಶುರು ಮಾಡಿದ್ದಾರೆ. ಅವರ ನಿವೃತ್ತಿಗೆ ಇನ್ನೆಷ್ಟು ತಿಂಗಳುಗಳು ಬಾಕಿ ಇದೆ ಎಂದು ಪ್ರಶ್ನಿಸಿ ಜಸ್ಕಿರಾತ್ ಸಿಂಗ್ ನಗ್ರ ಎಂಬವರು ಕಿಡಿಕಾಡಿದ್ದಾರೆ.

    ಮಹಿಳೆಯರಿಗೆ ಖಾಸಗಿತನ ನೀಡಲಾಗದ್ದರ ಬಗ್ಗೆ ರಾವತ್ ಬೇಸರ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಮತ್ತು ಬುದ್ಧಿ ಇಲ್ಲದವರು ಕೊನೆಗೆ ಸೇನೆ ಸೇರಿದಾಗ ಹೀಗಾಗಲು ಸಾಧ್ಯ ಎಂದು ಲಿಂಡ್ಸೆ ಪೆರೆರಾ ಎಂಬವರು ಬಿಪಿನ್ ರಾವತ್ ಅವರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com