Tag: ಆರ್‍ಬಿಐ

  • RBI ಉಪ ಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ

    RBI ಉಪ ಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ನೇಮಕ

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್‌‌ನ (RBI) ನೂತನ ಉಪಗವರ್ನರ್ (Deputy Governer) ಆಗಿ ಮೂರು ವರ್ಷಗಳ ಅವಧಿಗೆ ಶಿರೀಶ್ ಚಂದ್ರ ಮುರ್ಮು (Shirish Chandra Murmu) ಅವರನ್ನು ನೇಮಕ ಮಾಡಲಾಗಿದೆ.

    ಸದ್ಯ ಆರ್‌ಬಿಐ ಉಪಗವರ್ನರ್ ಆಗಿರುವ ರಾಜೇಶ್ವರ್ ರಾವ್ ಅವರ ಅವಧಿ ಅ.8ರಂದು ಕೊನೆಗೊಳ್ಳಲಿದ್ದು, ಅದಾದ ಬಳಿಕ ಅ.9ರಿಂದ ನೂತನ ಉಪಗವರ್ನರ್ ಆಗಿ ಶಿರೀಶ್ ಚಂದ್ರ ಮುರ್ಮು ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಸ್ತುತ ಆರ್‌ಬಿಐನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಇದನ್ನೂ ಓದಿ: 7 ವರ್ಷದ ಬಾಲಕನ ಮೇಲೆ ಶಿಕ್ಷಕಿಯಿಂದ ಇದೆಂಥಾ ಕ್ರೌರ್ಯ – ಹೋಂ ವರ್ಕ್‌ ಮಾಡದಿದ್ದಕ್ಕೆ ತಲೆ ಕೆಳಗಾಗಿ ನೇತುಹಾಕಿ ಹಿಂಸೆ

    ಆರ್‌ಬಿಐ ನಾಲ್ಕು ಉಪಗವರ್ನರ್‌ಗಳನ್ನು ಹೊಂದಿದ್ದು, ಪ್ರತಿಯೊಬ್ಬರೂ ಹಣಕಾಸು ನೀತಿ, ಬ್ಯಾಂಕಿಂಗ್ ಮೇಲ್ವಿಚಾರಣೆ ಮತ್ತು ಹಣಕಾಸು ಮಾರುಕಟ್ಟೆಗಳ ನಿಯಂತ್ರಣದಂತಹ ನಿರ್ಣಾಯಕ ಕ್ಷೇತ್ರಗಳ ಬಗ್ಗೆ ಕಾರ್ಯನಿರ್ವಹಿಸುತ್ತಾರೆ. ಈ ಪೈಕಿ ಶಿರೀಶ್ ಚಂದ್ರ ಮುರ್ಮು ಅವರು ಒಂದು ಅಥವಾ ಹೆಚ್ಚಿನ ಖಾತೆಗಳ ಉಸ್ತುವಾರಿ ವಹಿಸಿಕೊಳ್ಳುವ ನಿರೀಕ್ಷೆಯಿದ್ದು, ಈವರೆಗೂ ಖಾತೆಗಳ ಉಸ್ತುವಾರಿ ಬಗ್ಗೆ ನಿಖರವಾದ ಮಾಹಿತಿ ಅಧಿಕೃತವಾಗಿ ಘೋಷಣೆಯಾಗಿಲ್ಲ. ಈ ಕುರಿತು ಸಂಪುಟ ನೇಮಕಾತಿ ಸಮಿತಿ ಅನುಮೋದನೆ ನೀಡಿದ್ದು, ಆರ್‌ಬಿಐ ಉಪಗವರ್ನರ್ ಆಗಿ ನೇಮಿಸಲಾಗಿದೆ.

  • ಮೊದಲ ಬಾರಿಗೆ ಆರ್‌ಬಿಐ `ಚಿನ್ನದ ಖಜಾನೆ’ ಅನಾವರಣ

    ಮೊದಲ ಬಾರಿಗೆ ಆರ್‌ಬಿಐ `ಚಿನ್ನದ ಖಜಾನೆ’ ಅನಾವರಣ

    – ಡಾಕ್ಯುಮೆಂಟರಿ ಮೂಲಕ ಅಪರೂಪದ ದೃಶ್ಯಗಳ ಪ್ರಸಾರ
    – ಕೋಟ್ಯಂತರ ಬೆಲೆಯ ಚಿನ್ನದ ಗಟ್ಟಿ, ಸಂಗ್ರಹಗಾರದ ಆಳ-ಅಗಲ ಬಹಿರಂಗ
    – ಆರ್‌ಬಿಐಗೆ 90 ವರ್ಷ ತುಂಬುತ್ತಲೇ ಈ ಸಾಕ್ಷ್ಯಚಿತ್ರ ರಿಲೀಸ್

    ಮುಂಬೈ: ಮೊದಲ ಬಾರಿಗೆ ಭಾರತದ ಕೇಂದ್ರೀಯ ಬ್ಯಾಂಕ್ ಆರ್‌ಬಿಐ (RBI) ಸಾಕ್ಷ್ಯಚಿತ್ರವೊಂದನ್ನು ಹೊರತಂದಿದೆ. ಈ ಮೂಲಕ ತನ್ನ ಚಿನ್ನದ ಖಜಾನೆಯೊಂದನ್ನು ಅನಾವರಣಗೊಳಿಸಿದೆ.

    ಇಲ್ಲಿಯವರೆಗೆ ಸಾರ್ವಜನಿಕರಿಗೆ ಆರ್‌ಬಿಐ ದೇಶದ ಸಂಪತ್ತನ್ನು ನಗದು ರೂಪದಲ್ಲಿ ಮಾತ್ರವಲ್ಲದೆ ಚಿನ್ನದ ರೂಪದಲ್ಲೂ ಇಟ್ಟುಕೊಂಡಿರುತ್ತದೆ ಎಂಬುದಷ್ಟೇ ತಿಳಿದಿತ್ತು. ಆದರೆ ಇದೇ ಮೊದಲ ಬಾರಿಗೆ ಸಾಕ್ಷ್ಯಚಿತ್ರವೊಂದರ (Documentry) ಮೂಲಕ ಆರ್‌ಬಿಐನ ಚಿನ್ನ ಸಂಗ್ರಹಗಾರದ ಆಳ-ಅಗಲ ಬಹಿರಂಗಗೊಳಿಸಿದೆ.ಇದನ್ನೂ ಓದಿ: ಕುಕ್ಕೆಯಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ ಅಣ್ಣಾಮಲೈ

    ಓಟಿಟಿ ವೇದಿಕೆಯಾದ ಜಿಯೋ ಹಾಟ್‌ಸ್ಟಾರ್‌ನಲ್ಲಿ (Jio Hotstar) 5 ಭಾಗಗಳಲ್ಲಿ ಪ್ರಸಾರವಾಗುತ್ತಿರುವ `ಆರ್‌ಬಿಐ ಅನ್‌ಲಾಕ್ಡ್‌: ಬಿಯಾಂಡ್ ದ ರುಪಿ’ (RBI Unlocked: Beyond the Rupee) ಎಂಬ ಡಾಕ್ಯುಮೆಂಟರಿಯ ಮೂಲಕ ಆರ್‌ಬಿಐ ಬಳಿ ಇರುವ ಅಗಾಧ ಸಂಪತ್ತಿನ ಅನಾವರಣ ಮಾಡಲಾಗಿದೆ. ಸದ್ಯ 4 ಭಾಗಗಳು ರಿಲೀಸ್ ಆಗಿದ್ದು, ಇನ್ನೂ ಒಂದು ಭಾಗ ರಿಲೀಸ್ ಆಗಬೇಕಷ್ಟೆ. ಆರ್‌ಬಿಐ ಸ್ಥಾಪನೆಯಾಗಿ 90 ವರ್ಷ ತುಂಬಿರುವ ಹೊತ್ತಿನಲ್ಲೇ ಈ ಡಾಕ್ಯುಮೆಂಟರಿ ಹೊರಬಂದಿದೆ.

    ಸಾಕ್ಷ್ಯಚಿತ್ರದಲ್ಲೇನಿದೆ?
    ಚಾಕ್‌ಬೋರ್ಡ್ ಎಂಟರ್‌ಟೇನ್‌ಮೆಂಟ್ (Chalkboard Entertainment) ನಿರ್ಮಿಸಿರುವ ಈ ಡಾಕ್ಯುಮೆಂಟರಿಯಲ್ಲಿ, ಕಳೆದ 90 ವರ್ಷಗಳಲ್ಲಿ ಆರ್‌ಬಿಐನ ಕಾರ್ಯವೈಖರಿಯನ್ನು ವಿವರಿಸಲಾಗಿದೆ. ತಲಾ 12.5 ಕೆ.ಜಿ. ತೂಗುವ ಚಿನ್ನದ ಗಟ್ಟಿಗಳ ಅಟ್ಟಿಯನ್ನು ಬಿಗಿಭದ್ರತೆಯಲ್ಲಿ ಇರಿಸಿರುವುದನ್ನು ತೋರಿಸಲಾಗಿದೆ. ಇವುಗಳ ಮೌಲ್ಯ ಕೋಟಿಯಷ್ಟಿದ್ದು, ಭಾರತದಲ್ಲಿ ಒಟ್ಟು 870 ಟನ್ ಚಿನ್ನದ ಸಂಗ್ರಹವಿದೆ ಎಂಬುದು ಬಹಿರಂಗಪಡಿಸಿದೆ.

    1991ರ ಬಳಿಕ ವಿದೇಶಿ ವ್ಯಾಪಾರ ಸಮತೋಲನವನ್ನು ಕಾಯ್ದುಕೊಳ್ಳಲು ದೇಶದ ಚಿನ್ನವನ್ನು ವಿದೇಶಗಳಿಗೆ ನೀಡಬೇಕಾಗಿತ್ತು. ಇದರ ಹೊರತಾಗಿಯೂ ಆರ್‌ಬಿಐ ತನ್ನ ಚಿನ್ನದ ಸಂಗ್ರಹ ಕುಗ್ಗಲು ಬಿಟ್ಟಿಲ್ಲ. ಇತ್ತೀಚಿನ ವರದಿ ಪ್ರಕಾರ, ಭಾರತದಲ್ಲಿ 7.2 ಲಕ್ಷ ಕೋಟಿ ರೂ. ಮೌಲ್ಯದ ಸ್ವರ್ಣ ಸಂಗ್ರಹವಿದೆ. ಈ ಬಗ್ಗೆ ಮಾತನಾಡಿದ ಅಧಿಕಾರಿಯೊಬ್ಬರು, `ದೇಶ ಹಾಗೂ ಆರ್ಥಿಕತೆ ಏರಿಳಿತಗಳನ್ನು ಕಾಣುತ್ತಿರುತ್ತವೆ. ಆದರೆ ಚಿನ್ನ ಯಾವಾಗಲೂ ತನ್ನ ಮೌಲ್ಯವನ್ನು ಕಾಯ್ದುಕೊಳ್ಳುತ್ತದೆ’ ಎಂದು ಹೇಳಿದ್ದಾರೆ.

    ಈ ಡಾಕ್ಯುಮೆಂಟರಿ ಮೂಲಕ, ತನ್ನ ಕಾರ್ಯನಿರ್ವಹಣೆ ಹಾಗೂ ಭದ್ರತೆಯನ್ನು ಅನಾವರಣಗೊಳಿಸುವ ಮೂಲಕ ಜನರಲ್ಲಿ ಅರಿವು ನಂಬಿಕೆ ಮೂಡಿಸುವುದು ಆರ್‌ಬಿಐನ ಮುಖ್ಯ ಉದ್ದೇಶವಾಗಿದೆ.ಇದನ್ನೂ ಓದಿ: ಕಬಿನಿಯಿಂದ ನೀರು ಬಿಡುಗಡೆ – ಕಪಿಲಾ ನದಿ ಉಕ್ಕಿ ಭತ್ತದ ಬೆಳೆ ಮುಳುಗಡೆ

  • ಸತತ 3ನೇ ಬಾರಿ ರೆಪೋ ದರ ಇಳಿಕೆ – ಗೃಹ ಸಾಲ, ಇಎಂಐ ಸೌಲಭ್ಯದಾರರಿಗೆ ಗುಡ್‌ನ್ಯೂಸ್‌

    ಸತತ 3ನೇ ಬಾರಿ ರೆಪೋ ದರ ಇಳಿಕೆ – ಗೃಹ ಸಾಲ, ಇಎಂಐ ಸೌಲಭ್ಯದಾರರಿಗೆ ಗುಡ್‌ನ್ಯೂಸ್‌

    ನವದೆಹಲಿ: ದೇಶದ ಜಿಡಿಪಿಗೆ ಮತ್ತಷ್ಟು ಉತ್ತೇಜನ ನೀಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಸತತ 3ನೇ ಬಾರಿಗೆ ರೆಪೋ ದರ (Repo Rate) ಕಡಿತಗೊಳಿಸಿದೆ. ನಿರೀಕ್ಷೆಗೂ ಮೀರಿ 50 ಬೇಸಿಸ್ ಪಾಯಿಂಟ್‌ ಕಡಿತಗೊಳಿಸಿದ್ದು ರೆಪೋ ಬಡ್ಡಿ ದರ ಶೇ.6 ರಿಂದ ಶೇ.5.50ಕ್ಕೆ ಇಳಿಕೆಯಾಗಿದೆ.

    ಆರ್‌ಬಿಐನ ಹಣಕಾಸು ನೀತಿ ಸಮಿತಿಯು (MPC) ಸಭೆಯ ಬಳಿಕ 50 ಮೂಲಾಂಶದಷ್ಟು (ಬೇಸಿಸ್‌ ಪಾಯಿಂಟ್‌) ರೆಪೋ ದರ ಕಡಿಮೆ ಮಾಡಲು ನಿರ್ಧರಿಸಿರುವುದಾಗಿ ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ.

    ಇದರಿಂದ ಸಾಲ (Loan) ಮತ್ತು ಇಎಂಐಗಳ (EMI) ಬಡ್ಡಿ ದರವೂ ಇಳಿಕೆಯಾಗಲಿದೆ. ಜೊತೆಗೆ ಹೊಸ ಸಾಲಗಾರರಿಗೆ ಗೃಹ ಸಾಲಗಳು, ವಾಹನದ ಮೇಲಿನ ಸಾಲಗಳು ಕಡಿಮೆ ಬಡ್ಡಿ ದರದಲ್ಲಿ ಸಿಗಲಿದೆ. ಆಟೊ ಮೋಬೈಲ್, ಕಾರ್ಪೊರೇಟ್ ಸಾಲಗಳ ಮೇಲಿನ ಮರುಪಾವತಿ ಕಂತುಗಳಲ್ಲಿಯೂ ಇಳಿಕೆಯಾಗುವ ನಿರೀಕ್ಷೆ ಇದೆ.

    ರೆಪೋ ದರದಲ್ಲಿ ಶೇ 0.25ರಷ್ಟು ಇಳಿಕೆ ಆಗಬಹುದೆಂದು ತಜ್ಞರು ನಿರೀಕ್ಷಿಸಿದ್ದರು. ಆದ್ರೆ ಆರ್‌ಸಿಬಿ ನಿರೀಕ್ಷೆಗೂ ಮೀರಿ ಇಳಿಕೆ ಮಾಡಿದೆ. ಜಿಡಿಪಿಯು 4 ವರ್ಷದ ಕನಿಷ್ಠ ಮಟ್ಟ ಶೇ 6.5ಕ್ಕೆ ಕುಸಿದಿತ್ತು. ಹೀಗಾಗಿ ಜಿಡಿಪಿ ಉತ್ತೇಜನಕ್ಕೆ ಕ್ರಮ ಕೈಗೊಳ್ಳುವ ಭಾಗವಾಗಿ ರೆಪೋ ದರ ಕಡಿತಗೊಳಿಸಿದೆ. ಇದು ಕಳೆದ ಮೂರು ವರ್ಷಗಳಲ್ಲಿ ಹೆಚ್ಚಿನ ಇಳಿಕೆ ಕೂಡ ಆಗಿದೆ ಎಂದು ತಿಳಿದುಬಂದಿದೆ. 2022ರ ಆಗಸ್ಟ್ 5 ರಂದು ರೆಪೋ ದರವು ಶೇ 5.40ರಷ್ಟಿತ್ತು.

    ಈ ವರ್ಷದ ಫೆಬ್ರವರಿಯಿಂದ ಆರ್‌ಬಿಐ ರೆಪೋ ದರದಲ್ಲಿ 100 ಮೂಲಾಂಶದಷ್ಟು ಕಡಿತ ಮಾಡಿದೆ. ಏಪ್ರಿಲ್‌ನಲ್ಲಿ 25 ಬೇಸಿಸ್‌ ಪಾಯಿಂಟ್‌ ಕಡಿತಗೊಳಿಸಲಾಗಿತ್ತು. ಆಗ ರೆಪೋ ದರ ಶೇ. 6ಕ್ಕೆ ಇಳಿದಿತ್ತು.

    ರೆಪೋ ರೇಟ್ ಎಂದರೇನು?
    ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ. ರೆಪೋ ರೇಟ್‌ ಜಾಸ್ತಿ ಇದ್ದರೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡುತ್ತದೆ. ಇದರಿಂದ ವಾಹನ ಸಾಲ, ಗೃಹ ಸಾಲ್ಯ ಇತ್ಯಾದಿ ಸಾಲಗಳ ಬಡ್ಡಿ ದರ ಏರುತ್ತದೆ.

    ರಿವರ್ಸ್ ರೆಪೋ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೋ ರೇಟ್. ಆರ್‍ಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವರ್ಸ್‌ ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‌ಬಿಐಗೆ ವರ್ಗಾಯಿಸುತ್ತದೆ.

    ಉದಾಹರಣೆಗೆ:
    HDFC ಬ್ಯಾಂಕಿನಿಂದ 8.70% ಬಡ್ಡಿದರದಲ್ಲಿ 30 ವರ್ಷಗಳಿಗೆ 50 ಲಕ್ಷ ರೂ. ಗೃಹಸಾಲ ಪಡೆದರೆ
    ಪ್ರಸ್ತುತ EMI: 39,136 ರೂ. ಇದೆ

    ಹೊಸ ರೆಪೋ ದರ ಇಳಿಕೆ ನಂತರ
    ಹೊಸ EMI: 37,346 ರೂ. ಇರಲಿದೆ
    ಮಾಸಿಕ ಉಳಿತಾಯ: 1,790 ರೂ.
    ವಾರ್ಷಿಕ ಉಳಿತಾಯ: 21,480 ರೂ.

  • ಸತತ 2ನೇ ಬಾರಿ ರೆಪೋ ದರ ಕಡಿತ – ಇಳಿಕೆಯಾಗಲಿದೆ ಗೃಹ ಸಾಲ, ಇಎಂಐ

    ಸತತ 2ನೇ ಬಾರಿ ರೆಪೋ ದರ ಕಡಿತ – ಇಳಿಕೆಯಾಗಲಿದೆ ಗೃಹ ಸಾಲ, ಇಎಂಐ

    ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ರೆಪೋ ದರವನ್ನು (Repo Rate) ಸತತ ಎರಡನೇ ಬಾರಿ ಇಳಿಸಿದೆ. 25 ಬೇಸಿಸ್ ಪಾಯಿಂಟ್‌ ಕಡಿತಗೊಳಿಸಿದ್ದರಿಂದ ಸಾಲ (Loan) ಮತ್ತು ಇಎಂಐಗಳ (EMI) ಬಡ್ಡಿ ದರವೂ ಇಳಿಕೆಯಾಗಲಿದೆ.

    25 ಬೇಸಿಸ್ ಪಾಯಿಂಟ್ ಇಳಿಸಿದ್ದರಿಂದ ಈಗ ರೆಪೋದ ದರ 6%ಕ್ಕೆ ಇಳಿದಿದೆ. ಐದು ವರ್ಷಗಳ ಬಳಿಕ ಈ ಫೆಬ್ರವರಿಯಲ್ಲಿ ರೆಪೋ ದರವನ್ನು ಆರ್‌ಬಿಐ ಇಳಿಕೆ ಮಾಡಿತ್ತು. 25 ಬೇಸಿಸ್‌ ಪಾಯಿಂಟ್‌ ಇಳಿಕೆ ಮಾಡಿದ್ದರಿಂದ ರೇಪೋ ದರ 6.25% ಕ್ಕೆ ತಗ್ಗಿತ್ತು. ಆರ್‌ಬಿಐ ರೆಪೋ ದರ ಇಳಿಕೆ ಮಾಡುತ್ತಿದ್ದಂತೆ ಬ್ಯಾಂಕ್‍ಗಳಿಗೆ ಬಿಸಿ ತಟ್ಟಲಿದೆ. ಬ್ಯಾಂಕ್‍ಗಳು ಸಾಲದ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡಬೇಕಾಗುತ್ತದೆ. ಇದನ್ನೂ ಓದಿ: ಕಾನೂನು ಸ್ವರೂಪ ಪಡೆದ ʻವಕ್ಫ್ ಬಿಲ್ʼ – ಕೇಂದ್ರ ಅಧಿಸೂಚನೆ

    ಆರ್‌ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ, ಹಣಕಾಸು ನೀತಿ ಸಮಿತಿ(MPC)ಯ ವರದಿಯನ್ನು ಬಿಡುಗಡೆ ಮಾಡಿ ರೆಪೋ ಕಡಿತದ ನಿರ್ಧಾರ ಪ್ರಕಟಿಸಿದರು. ಈ ದರ ಕಡಿತದೊಂದಿಗೆ ಗೃಹ ಸಾಲದ ಬಡ್ಡಿದರಗಳು ಮತ್ತೊಮ್ಮೆ 8% ಕ್ಕಿಂತ ಕೆಳಗೆ ಇಳಿಯುವ ಸಾಧ್ಯತೆಯಿದೆ. ಇದನ್ನೂ ಓದಿ: ಮುಂಬೈ ದಾಳಿಕೋರ ಅಮೆರಿಕದಿಂದ ಗಡಿಪಾರು – ನಾಳೆ ಬೆಳಗ್ಗೆ ಭಾರತಕ್ಕೆ ರಾಣಾ

    ಆರ್ಥಿಕತೆಯ ಮುನ್ನೋಟದ ಕುರಿತು ಮಾತನಾಡಿದ ಮಲ್ಹೋತ್ರಾ, ಜಲಾಶಯಗಳು ಭರ್ತಿಯಾಗಿರುವ ಕಾರಣ ಬೆಳೆ ಉತ್ಪಾದನೆಯಿಂದಾಗಿ ಈ ವರ್ಷ ಕೃಷಿ ವಲಯವು ಉತ್ತಮವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ. ಉತ್ಪಾದನಾ ಚಟುವಟಿಕೆಯೂ ವೇಗವನ್ನು ಪಡೆಯುತ್ತಿದೆ, ವ್ಯಾಪಾರ ನಿರೀಕ್ಷೆಗಳು ಸಕಾರಾತ್ಮಕವಾಗಿದೆ ಎಂದರು.

    ರೆಪೋ ರೇಟ್ ಎಂದರೇನು?
    ವಾಣಿಜ್ಯ ಬ್ಯಾಂಕ್‌ಗಳ ರಿಸರ್ವ್ ಬ್ಯಾಂಕ್‍ನಿಂದ ಪಡೆಯುವ ಅಲ್ಪಾವಧಿ ಸಾಲದ ಮೇಲಿನ ಬಡ್ಡಿ ದರಕ್ಕೆ ರೆಪೋ ದರ ಎನ್ನುತ್ತಾರೆ. ರೆಪೋ ದರ ಕಡಿಮೆಯಾದರೆ ಬ್ಯಾಂಕ್‌ಗಳು ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಹಣವನ್ನು ಪಡೆಯಬಹುದು. ಬ್ಯಾಂಕ್‍ಗಳು ತಮ್ಮಲ್ಲಿ ಹಣದ ಕೊರತೆಯಾದಾಗ ಆರ್‌ಬಿಐನಿಂದ ಹಣ ಪಡೆಯುತ್ತಿರುತ್ತವೆ. ರೆಪೋ ರೇಟ್‌ ಜಾಸ್ತಿ ಇದ್ದರೆ ಬ್ಯಾಂಕ್‌ಗಳು ಸಾಲದ ಮೇಲಿನ ಬಡ್ಡಿ ದರವನ್ನು ಏರಿಕೆ ಮಾಡುತ್ತದೆ. ಇದರಿಂದ ವಾಹನ ಸಾಲ, ಗೃಹ ಸಾಲ್ಯ ಇತ್ಯಾದಿ ಸಾಲಗಳ ಬಡ್ಡಿ ದರ ಏರುತ್ತದೆ.

    ರಿವರ್ಸ್ ರೆಪೋ: ವಾಣಿಜ್ಯ ಬ್ಯಾಂಕುಗಳು ಆರ್‌ಬಿಐನಲ್ಲಿ ಇಡುವ ಠೇವಣಿಗಳ ಮೇಲೆ ಪಡೆಯುವ ಬಡ್ಡಿದರವೇ ವಿರುದ್ಧ ರೆಪೋ ರೇಟ್. ಆರ್‍ಐನಲ್ಲಿ ಠೇವಣಿ ಇಡುವುದು ಬ್ಯಾಂಕುಗಳಿಗೆ ಸುರಕ್ಷಿತ. ರಿವರ್ಸ್‌ ರೆಪೋ ದರ ಹೆಚ್ಚಾದಾಗ ಬ್ಯಾಂಕುಗಳು ಹೆಚ್ಚಿನ ಮೊತ್ತವನ್ನು ಆರ್‌ಬಿಐಗೆ ವರ್ಗಾಯಿಸುತ್ತದೆ.

  • ಮಂಗಳೂರು ಡಿಸಿಸಿ ಬ್ಯಾಂಕ್‌ಗೆ ಆರ್‌ಬಿಐ ಶಾಕ್‌ – 5 ಲಕ್ಷ ರೂ. ದಂಡ, ಕಾನೂನು ಕ್ರಮದ ಎಚ್ಚರಿಕೆ

    ಮಂಗಳೂರು ಡಿಸಿಸಿ ಬ್ಯಾಂಕ್‌ಗೆ ಆರ್‌ಬಿಐ ಶಾಕ್‌ – 5 ಲಕ್ಷ ರೂ. ದಂಡ, ಕಾನೂನು ಕ್ರಮದ ಎಚ್ಚರಿಕೆ

    – ಸಾಲಗಳ ಹೆಸರಿನಲ್ಲಿ ಭಾರೀ ಅಕ್ರಮ ಶಂಕೆ

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನಲ್ಲಿ (SCDCC) ಭಾರೀ ಅಕ್ರಮ ಶಂಕೆ ವ್ಯಕ್ತವಾದ ಬೆನ್ನಲ್ಲೇ ಭಾರತೀಯ ರಿಸರ್ವ್‌ ಬ್ಯಾಂಕ್‌ 5 ಲಕ್ಷ ರೂ. ದಂಡ ವಿಧಿಸಿದೆ. ಅಲ್ಲದೇ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದೆ.

    ಡಾ.ಎಂ.ಎನ್​ ರಾಜೇಂದ್ರ ಕುಮಾರ್ ಅಧ್ಯಕ್ಷತೆಯ ಮಂಗಳೂರು ಡಿಸಿಸಿ ಬ್ಯಾಂಕ್ (Mangaluru DCC Bank),​ ಆರ್​​ಬಿಐ ನಿಯಮ ಉಲ್ಲಂಘಿಸಿ ತನ್ನ ನಿರ್ದೇಶಕರಿಗೆ ಸಾಲ ಮಂಜೂರು ಮಾಡಿರುವ ಆರೋಪ ಕೇಳಿಬಂದಿದೆ. ಇದು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಸೆಕ್ಷನ್ 20 ಮತ್ತು 56ನ ನಿಯಮ ಉಲ್ಲಂಘನೆಯಾಗಿದೆ.

    ಆದ್ದರಿಂದ RBI ಸೆಕ್ಷನ್ 47A(1)(c), 46(4)(i), ಮತ್ತು 56 ಅನುಸಾರ ದಂಡ ವಿಧಿಸಿದೆ. 2023ರ ಮಾರ್ಚ್ 31ರಲ್ಲಿ ನಬಾರ್ಡ್ ಡಿಸಿಸಿ ಬ್ಯಾಂಕಿನ ಹಣಕಾಸು ಸ್ಥಿತಿಯ ಪರಿಶೀಲನೆ ಮಾಡಿತ್ತು. ಪರಿಶೀಲನೆ ಸಂದರ್ಭದಲ್ಲಿ ನಿಯಮ ಉಲ್ಲಂಘನೆಯ ಬಗ್ಗೆ ಸಾಕ್ಷ್ಯಗಳು ಲಭ್ಯವಾಗಿದ್ದವು. ಆ ಬಳಿಕ ಮಂಗಳೂರು ಡಿಸಿಸಿ ಬ್ಯಾಂಕ್​​ಗೆ ಆರ್​ಬಿಐ ನೋಟೀಸ್​ ಕೂಡ ನೀಡಿತ್ತು.

    ಬ್ಯಾಂಕ್ ನಿಯಮಾನುಸಾರ ಕೆಲಸ ಮಾಡದೇ ಇದ್ದರೆ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಆರ್​ಬಿಐ, ಸೆಕ್ಷನ್ 20ರಡಿ ಯಾವುದೇ ವಾಣಿಜ್ಯ ಬ್ಯಾಂಕ್ ತನ್ನ ನಿರ್ದೇಶಕರಿಗೆ ಅಥವಾ ಅವರ ಸಂಬಂಧಿತ ಸಂಸ್ಥೆಗಳಿಗೆ ಯಾವುದೇ ರೀತಿಯ ಸಾಲ ಅಥವಾ ಹಣಕಾಸು ಸಹಾಯವನ್ನು ನೀಡುವಂತಿಲ್ಲ. ಇದು ಬ್ಯಾಂಕ್​ನ ಆಡಳಿತ ಮಂಡಳಿಯ ಮೇಲೆ ಆರ್ಥಿಕ ಪ್ರಭಾವ ಬೀರುವ ಸಾಧ್ಯತೆ ಇರುವ ವ್ಯಕ್ತಿಗಳಾಗಿರುತ್ತಾರೆ. ತಮ್ಮ ಹಿತಾಸಕ್ತಿಗೆ ಬ್ಯಾಂಕ್​ ಅನ್ನು ದುರುಪಯೋಗಪಡಿಸಿಕೊಳ್ಳುವುದನ್ನು ತಡೆಯಲು ಮಾಡಲಾಗಿದೆ. ಈ ನಿಯಮವನ್ನು ಪರಸ್ಪರ ಹಿತಾಸಕ್ತಿಯ ಮುನ್ಸೂಚನೆ ನಿವಾರಿಸಲು ಮತ್ತು ಗ್ರಾಹಕರ ಠೇವಣಿಗಳ ಸುರಕ್ಷತೆ ಕಾಪಾಡಲು ರೂಪಿಸಲಾಗಿದೆ ಎಂದು ಹೇಳಿದೆ.

    ಅಲ್ಲದೇ ಸೆಕ್ಷನ್ 56ರಡಿ ಸಹಕಾರಿ ಬ್ಯಾಂಕ್‌ಗಳಿಗಾಗಿ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಕೆಲವು ನಿರ್ದಿಷ್ಟ ನಿಯಮಗಳನ್ನು ಅಳವಡಿಸಲಾಗಿದೆ. ಇದು ಸಹಕಾರಿ ಬ್ಯಾಂಕ್‌ಗಳು ಸಹ ವಾಣಿಜ್ಯ ಬ್ಯಾಂಕ್‌ಗಳಂತೆ ನಿರ್ವಹಿಸಬೇಕು. ಆದರೆ ಸಹಕಾರಿ ಮೂಲಭೂತ ತತ್ವಗಳನ್ನೂ ಅನುಸರಿಸಬೇಕು ಎಂಬ ದೃಷ್ಟಿಯಿಂದ ರೂಪಿಸಲಾಗಿದೆ. ಅಂದರೆ ಸಹಕಾರಿ ಬ್ಯಾಂಕ್‌ಗಳು ತಮ್ಮ ನಿರ್ದೇಶಕರಿಗೆ ಅಥವಾ ಅವರ ಸಂಬಂಧಿತ ವ್ಯಕ್ತಿಗಳಿಗೆ ಸಾಲ ನೀಡಬಾರದು. ಅದರೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿಂದ ನಿಯಮ ಉಲ್ಲಂಘಿಸಿ ಸಾಲ ನೀಡಿರುವ ಆರೋಪ ಕೇಳಿಬಂದಿದೆ. ನಿಯಮಗಳನ್ನು ಉಲ್ಲಂಘಿಸಿ ತನ್ನ ನಿರ್ದೇಶಕರಿಗೆ ಸಾಲ ಮಂಜೂರು ಮಾಡಿದೆ. ಹೀಗಾಗಿ ದಂಡ ವಿಧಿಸಿರುವ ಆರ್‌ಬಿಐ, ಡಿಸಿಸಿ ಬ್ಯಾಂಕ್ ಸಾಲಗಳ ಬಗ್ಗೆ ಉನ್ನತ ತನಿಖೆ ಸಾಧ್ಯತೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

  • ಆರ್‌ಬಿಐ ನೂತನ ಡೆಪ್ಯೂಟಿ ಗವರ್ನರ್ ಆಗಿ ಪೂನಮ್ ಗುಪ್ತಾ ನೇಮಕ

    ಆರ್‌ಬಿಐ ನೂತನ ಡೆಪ್ಯೂಟಿ ಗವರ್ನರ್ ಆಗಿ ಪೂನಮ್ ಗುಪ್ತಾ ನೇಮಕ

    ನವದೆಹಲಿ: ಎನ್‌ಸಿಎಇಆರ್‌ನ (NCAER) ಮಹಾನಿರ್ದೇಶಕಿ, ಆರ್ಥಿಕ ತಜ್ಞೆ ಹಾಗೂ ಪ್ರಧಾನ ಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಮಾಜಿ ಸದಸ್ಯೆ ಪೂನಮ್ ಗುಪ್ತಾ (Poonam Gupta) ಮೂರು ವರ್ಷಗಳ ಅವಧಿಗೆ ಆರ್‌ಬಿಐನ (RBI) ಡೆಪ್ಯೂಟಿ ಗವರ್ನರ್ ಆಗಿ ನೇಮಕಗೊಂಡಿದ್ದಾರೆ.

    ನ್ಯಾಷನಲ್ ಕೌನ್ಸಿಲ್ ಆಫ್ ಅಪ್ಲೈಡ್ ಎಕನಾಮಿಕ್ ರಿಸರ್ಚ್‌ಗೆ ಸೇರುವ ಮೊದಲು, ಗುಪ್ತಾ ಅವರು ಅಂತರರಾಷ್ಟ್ರೀಯ ಹಣಕಾಸು ನಿಗಮದಲ್ಲಿ ಜಾಗತಿಕ ಮ್ಯಾಕ್ರೋ ಮತ್ತು ಮಾರುಕಟ್ಟೆ ಸಂಶೋಧನೆಯ ಪ್ರಮುಖ ಅರ್ಥಶಾಸ್ತ್ರಜ್ಞರಾಗಿ ಸೇವೆ ಸಲ್ಲಿಸಿದರು. ಈ ಹಿಂದೆ ಭಾರತೀಯ ಅಂತರರಾಷ್ಟ್ರೀಯ ಆರ್ಥಿಕ ಸಂಬಂಧಗಳ ಸಂಶೋಧನಾ ಮಂಡಳಿಯಲ್ಲಿ ಮತ್ತು ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಪ್ರಾಧ್ಯಾಪಕರಾಗಿದ್ದರು. ಅಲ್ಲದೇ ಅಂತರರಾಷ್ಟ್ರೀಯ ಹಣಕಾಸು ನಿಧಿಯಲ್ಲಿ (IMF) ಸಂಶೋಧಕರೂ ಆಗಿದ್ದರು. ಇದನ್ನೂ ಓದಿ: ಉಕ್ರೇನ್‌ ಮಹಿಳೆಯರನ್ನ ರೇಪ್‌ ಮಾಡುವಂತೆ ಒತ್ತಾಯಿಸುತ್ತಿದ್ದ ರಷ್ಯಾ ಸೈನಿಕನ ಪತ್ನಿಗೆ ಕಠಿಣ ಜೈಲು ಶಿಕ್ಷೆ

    ಪೂನಮ್ 16ನೇ ಹಣಕಾಸು ಆಯೋಗದ ಸಲಹಾ ಮಂಡಳಿಯ ಸದಸ್ಯರೂ ಹೌದು. ಇತ್ತೀಚಿಗೆ ಆರ್‌ಬಿಐನ ಡೆಪ್ಯೂಟಿ ಗವರ್ನರ್ ಹುದ್ದೆಯಿಂದ ನಿವೃತ್ತಿ ಹೊಂದಿದ ಎಂ.ಬಿ.ಪಾತ್ರಾ ಅವರ ಹುದ್ದೆಯನ್ನು ಪೂನಮ್ ಗುಪ್ತಾ ಅಲಕಂರಿಸಲಿದ್ದಾರೆ. ಇದನ್ನೂ ಓದಿ: ರಾಜ್ಯ ಗುಪ್ತವಾರ್ತೆ ನಿರ್ದೇಶಕ ಹೇಮಂತ್ ನಿಂಬಾಳ್ಕರ್‌ಗೆ ಮುಖ್ಯಮಂತ್ರಿಗಳ ಸ್ವರ್ಣಪದಕ ಪ್ರದಾನ

    ಶೈಕ್ಷಣಿಕ ಹಿನ್ನೆಲೆ:
    ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ – ಮೇರಿಲ್ಯಾಂಡ್ ವಿಶ್ವವಿದ್ಯಾಲಯ, ಕಾಲೇಜ್ ಪಾರ್ಕ್ (1998)
    ವಿಶೇಷತೆ: ಸ್ಥೂಲ ಅರ್ಥಶಾಸ್ತ್ರ, ಅಂತರರಾಷ್ಟ್ರೀಯ ಹಣಕಾಸು ಮತ್ತು ಅಂತರರಾಷ್ಟ್ರೀಯ ವ್ಯಾಪಾರ
    ಅರ್ಥಶಾಸ್ತ್ರದಲ್ಲಿ ಎಂ.ಎ – ಮೇರಿಲ್ಯಾಂಡ್ ವಿಶ್ವವಿದ್ಯಾಲಯ, ಕಾಲೇಜ್ ಪಾರ್ಕ್ (1995)
    ಅರ್ಥಶಾಸ್ತ್ರದಲ್ಲಿ ಎಂ.ಎ – ದೆಹಲಿ ಸ್ಕೂಲ್ ಆಫ್ ಎಕನಾಮಿಕ್ಸ್ (1991)
    ಅರ್ಥಶಾಸ್ತ್ರದಲ್ಲಿ ಬಿ.ಎ – ಹಿಂದೂ ಕಾಲೇಜು, ದೆಹಲಿ ವಿಶ್ವವಿದ್ಯಾಲಯ (1989)

    ಅಂತರರಾಷ್ಟ್ರೀಯ ಅರ್ಥಶಾಸ್ತ್ರ ಪಿಎಚ್‌ಡಿಯಲ್ಲಿ ಪೂನಮ್ ಗುಪ್ತ 1998ರ ಎಕ್ಸಿಮ್ ಬ್ಯಾಂಕ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: Waqf Debate |ವರ್ಷಕ್ಕೆ 12 ಸಾವಿರ ಕೋಟಿ ಆದಾಯ ಸಿಗ್ಬೇಕು, ಆದ್ರೆ ಸಿಕ್ಕಿದ್ದು 166 ಕೋಟಿ: ಕಾಂಗ್ರೆಸ್‌ ವಿರುದ್ಧ ರಿಜಿಜು ಕಿಡಿ

  • ಪ್ರಧಾನಿ ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ಶಕ್ತಿಕಾಂತ್‌ ದಾಸ್‌ ನೇಮಕ

    ಪ್ರಧಾನಿ ಮೋದಿ ಪ್ರಧಾನ ಕಾರ್ಯದರ್ಶಿಯಾಗಿ ಶಕ್ತಿಕಾಂತ್‌ ದಾಸ್‌ ನೇಮಕ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯಾಗಿ ಆರ್‌ಬಿಐ ಮಾಜಿ ಗವರ್ನರ್‌ ಶಕ್ತಿಕಾಂತ್‌ ದಾಸ್‌ ಅವರನ್ನು ನೇಮಕ ಮಾಡಲಾಗಿದೆ ಸರ್ಕಾರದ ಅಧಿಸೂಚನೆ ತಿಳಿಸಿದೆ.

    ದಾಸ್ ಅವರ ನೇಮಕಾತಿ ಪ್ರಧಾನ ಮಂತ್ರಿಯ ಅವಧಿಯವರೆಗೆ ಅಥವಾ ಮುಂದಿನ ಆದೇಶದ ವರೆಗೆ ಇರಲಿದೆ ಎಂದು ಕ್ಯಾಬಿನೆಟ್‌ನ ನೇಮಕಾತಿ ಸಮಿತಿ ಹೇಳಿದೆ.

    SHAKTIKANTA DAS

    ಸರ್ಕಾರದ ಥಿಂಕ್ ಟ್ಯಾಂಕ್ ನೀತಿ ಆಯೋಗದ ಸಿಇಒ ಬಿವಿಆರ್ ಸುಬ್ರಹ್ಮಣ್ಯಂ ಅವರ ಅವಧಿಯನ್ನು ಸಹ ವಿಸ್ತರಿಸಲಾಗಿದೆ. 1987-ಬ್ಯಾಚ್‌ನ ನಿವೃತ್ತ ಐಎಎಸ್‌ ಅಧಿಕಾರಿಯನ್ನು 2023ರ ಫೆಬ್ರವರಿಯಲ್ಲಿ ಎರಡು ವರ್ಷಗಳ ಕಾಲ ನೀತಿ ಆಯೋಗ ಸಿಇಒ ಆಗಿ ನೇಮಿಸಲಾಗಿತ್ತು.

    ಕೋವಿಡ್-19 ಸಾಂಕ್ರಾಮಿಕ ರೋಗದ ಸಮಯದಲ್ಲಿ ಆರ್‌ಬಿಐ ಗವರ್ನರ್ ಆಗಿ ಶಕ್ತಿಕಾಂತ್‌ ದಾಸ್‌ ಅವರು ಭಾರತದ ಆರ್ಥಿಕ ಸ್ಥಿರತೆಯನ್ನು ಬಲಪಡಿಸಲು ಹಲವಾರು ಕ್ರಮಗಳ ಮುಂಚೂಣಿಯಲ್ಲಿದ್ದರು.

    ಆರ್ಥಿಕತೆಯ ಮೇಲೆ ಸಾಂಕ್ರಾಮಿಕ ರೋಗದ ಪ್ರತಿಕೂಲ ಪರಿಣಾಮ ಹೆಚ್ಚು ಬೀಳದಂತೆ ನೋಡಿಕೊಳ್ಳುವಲ್ಲಿ ಸಫಲರಾಗಿದ್ದರು. ಹಣಕಾಸು ನೀತಿ, ನಿಯಂತ್ರಕ ನೀತಿ ಸೇರಿದಂತೆ ಹಲವಾರು ಕ್ರಮಗಳ ಮೂಲಕ ಆರ್‌ಬಿಐ ಅನ್ನು ಮುನ್ನಡೆಸಿದ್ದರು.

  • ಬ್ಯಾಂಕ್ ಲಾಕರ್‌ನಲ್ಲಿಟ್ಟ ದುಡ್ಡಿಗೆ ಗೆದ್ದಲು – 8 ಲಕ್ಷ ಢಮಾರ್!

    ಬ್ಯಾಂಕ್ ಲಾಕರ್‌ನಲ್ಲಿಟ್ಟ ದುಡ್ಡಿಗೆ ಗೆದ್ದಲು – 8 ಲಕ್ಷ ಢಮಾರ್!

    ಬೆಂಗಳೂರು: ಬ್ಯಾಂಕ್‌ ಲಾಕರ್‌ನಲ್ಲಿ (Bank Locker) ಇಟ್ಟಿದ್ದ 8 ಲಕ್ಷ ರೂಪಾಯಿ ಗೆದ್ದಲಿಗೆ ಬಲಿಯಾಗಿದ್ದಕ್ಕೆ ಗ್ರಾಹಕರೊಬ್ಬರು ಈಗ ಬೆಂಗಳೂರಿನ ಪ್ರಧಾನ ಕಚೇರಿಗೆ ದೂರು ನೀಡಿದ್ದಾರೆ.

    ಸಫಲ್‌ ಮಂಗಳೂರಿನ (Mangaluru) ಕೋಟೆಕಾರ್‌ನಲ್ಲಿರುವ ಕೆನರಾ ಬ್ಯಾಂಕಿನಲ್ಲಿ 8 ಲಕ್ಷ ರೂ. ಇಟ್ಟಿದ್ದರು. 6 ತಿಂಗಳ ಬಳಿಕ ಔಷಧಿಗಾಗಿ ದುಡ್ಡು ತೆಗೆಯಲು ಲಾಕರ್‌ ತೆರೆದಿದ್ದಾರೆ.

    ಬ್ಯಾಂಕ್ ನವರೇ ಖುದ್ದಾಗಿ ಲಾಕರ್ ಓಪನ್ ಮಾಡಿದ್ದಾರೆ. ಲಾಕರ್ ಮಳೆನೀರಿನಲ್ಲಿ ನೆಂದ ಸ್ಥಿತಿಯಲ್ಲಿದ್ದರೆ ದುಡ್ಡು ಸಂಪೂರ್ಣವಾಗಿ ಕಪ್ಪಾಗಿ ಹುಡಿ ಹುಡಿಯಾಗಿ ಗೆದ್ದಲು ಹಿಡಿದು ಚೂರಾಗಿ ಬಿದ್ದಿದೆ. ಎಂಟು ಲಕ್ಷ ರೂ. ದುಡ್ಡು ಇದೇ ರೀತಿ ಆಗಿದೆ. ಇದನ್ನೂ ಓದಿ: ದತ್ತಪೀಠದ ತಪ್ಪಲಿನಲ್ಲಿ ಕಾಡ್ಗಿಚ್ಚು – ಹೊತ್ತಿ ಉರಿದ ಅಪರೂಪದ ಶೋಲಾರಣ್ಯ

     

    ಆರ್‌ಬಿಐ ನಿಯಮದ ಪ್ರಕಾರ ಪ್ರಕಾರ ದುಡ್ಡನ್ನು ಲಾಕರ್‌ನಲ್ಲಿ ಇಡುವಂತಿಲ್ಲ ಹೀಗಾಗಿ ಇದಕ್ಕೂ ನಮಗೂ ಸಂಬಂಧ ಇಲ್ಲ ಎಂದು ಬ್ಯಾಂಕ್‌ನವರು ಹೇಳಿದ್ದಾರೆ. ಹೀಗಾಗಿ ಸಫಲ್ ಕುಟುಂಬಸ್ಥರು ಬೆಂಗಳೂರಿಗೆ ಆಗಮಿಸಿ ಪ್ರಧಾನ ಕಚೇರಿಗೆ ದೂರು ನೀಡಿ, ಹಳೆಯ ಕಟ್ಟಡ ನಿರ್ವಹಣೆ ಕೊರತೆಯಿಂದ ಸಮಸ್ಯೆಯಾಗಿದೆ. ಹೀಗಾಗಿ ಸರಿಪಡಿಸಬೇಕು ಎಂದು ಮನವಿ ಮಾಡಿದ್ದಾರೆ.

    ಲಾಕರ್‌ನಲ್ಲಿ ಹಣ ಇಡಬಾರದು ನಿಜ. ಆದರೆ ಬ್ಯಾಂಕ್‌ನಲ್ಲಿ ಹಣ ಇಟ್ಟರೆ ಸೇಫ್‌ ಎಂಬ ನಂಬಿಕೆಯಿದೆ. ಆದರೆ ನಿರ್ವಹಣೆ ಕೊರತೆಯಿಂದ ಈ ರೀತಿ ಸಮಸ್ಯೆಯಾದರೆ ಹೊಣೆ ಯಾರು ಎನ್ನುವುದೇ ಪ್ರಶ್ನೆ.

     

  • RBI: 5 ವರ್ಷಗಳ ಬಳಿಕ ರೆಪೊ ದರ ಕಡಿತ ಮಾಡಿದ ಆರ್‌ಬಿಐ

    RBI: 5 ವರ್ಷಗಳ ಬಳಿಕ ರೆಪೊ ದರ ಕಡಿತ ಮಾಡಿದ ಆರ್‌ಬಿಐ

    ನವದೆಹಲಿ: ಮಂದಗತಿಯಲ್ಲಿ ಸಾಗುತ್ತಿರುವ ಆರ್ಥಿಕತೆಗೆ ಪುನಶ್ಚೇತನ ನೀಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (RBI) ಮಹತ್ವದ ಕ್ರಮಕೈಗೊಂಡಿದೆ. ಐದು ವರ್ಷಗಳ ಬಳಿಕ ಮೊದಲ ಬಾರಿಗೆ ಬಡ್ಡಿ ದರಗಳನ್ನು (Repo Rate) ಕಡಿತ ಮಾಡಿದೆ.

    RBI ಹಣಕಾಸು ನೀತಿ ಸಮಿತಿ (MPC) ಪ್ರಮುಖ ದರವನ್ನು 6.50% ರಿಂದ 6.25% ಕ್ಕೆ 25 ಬೇಸಿಸ್ ಪಾಯಿಂಟ್‌ಗಳಷ್ಟು ಕಡಿತಗೊಳಿಸಲು ಸರ್ವಾನುಮತದಿಂದ ನಿರ್ಧರಿಸಿದೆ ಎಂದು ಆರ್‌ಬಿಐ ಗವರ್ನರ್‌ ಸಂಜಯ್ ಮಲ್ಹೋತ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಕುಂಭಮೇಳದಲ್ಲಿ ಡಿಕೆಶಿ ಪುತ್ರಿ – ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಐಶ್ವರ್ಯ

    ಮೂವರು ಆರ್‌ಬಿಐ ಸದಸ್ಯರು ಮತ್ತು ಮೂವರು ಬಾಹ್ಯ ಸದಸ್ಯರನ್ನು ಒಳಗೊಂಡಿರುವ ಎಂಪಿಸಿ, 2020ರ ಮೇ ತಿಂಗಳಲ್ಲಿ ಕೊನೆಯದಾಗಿ ರೆಪೊ ದರವನ್ನು ಕಡಿಮೆ ಮಾಡಿತ್ತು. ಅದಾದ ಬಳಿಕ ನಡೆದ 11 ನೀತಿ ಸಭೆಗಳಲ್ಲಿ ರೆಪೊ ದರದಲ್ಲಿ ಯಾವುದೇ ಬದಲಾವಣೆ ತಂದಿರಲಿಲ್ಲ.

    ಚಿಲ್ಲರೆ ಹಣದುಬ್ಬರವು ಶೇ.6 ರೊಳಗೆ ಇದೆ. ಹೀಗಾಗಿ, ಆರ್‌ಬಿಐ ದರ ಕಡಿತದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿತ್ತು. ಇದನ್ನೂ ಓದಿ: ಬ್ರ್ಯಾಂಡ್‌ ನೇಮ್‌ ಚೇಂಜ್‌; ‘ಎಟರ್ನಲ್‌’ ಎಂದು ಹೆಸರು ಬದಲಿಸಿಕೊಂಡ Zomato

    ಈ ಮಾರ್ಚ್‌ನಲ್ಲಿ ಕೊನೆಗೊಳ್ಳುವ ಹಣಕಾಸು ವರ್ಷದ ನೈಜ ಜಿಡಿಪಿ ಬೆಳವಣಿಗೆ 6.4% ಎಂದು ಅಂದಾಜಿಸಲಾಗಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಮುಂಬರುವ ಹಣಕಾಸು ವರ್ಷದಲ್ಲಿ ನಿರೀಕ್ಷಿತ ನೈಜ ಬೆಳವಣಿಗೆ ಮೊದಲ ತ್ರೈಮಾಸಿಕದಲ್ಲಿ 6.7%, ಎರಡನೇ ತ್ರೈಮಾಸಿಕದಲ್ಲಿ 7%, ಮೂರನೇ ತ್ರೈಮಾಸಿಕದಲ್ಲಿ 6.5% ಮತ್ತು ನಾಲ್ಕನೇ ತ್ರೈಮಾಸಿಕದಲ್ಲಿ 6.5% ಎಂದು ಅವರು ಅಂದಾಜಿಸಿದ್ದಾರೆ.