Tag: ಆರ್ಥಿಕ ನೀತಿ

  • ಒಂದು ಕಾಫಿ ಬೇಕಿದ್ರೆ 20 ಲಕ್ಷ ಬೋಲಿವರ್ ನೀಡ್ಬೇಕು!

    ಒಂದು ಕಾಫಿ ಬೇಕಿದ್ರೆ 20 ಲಕ್ಷ ಬೋಲಿವರ್ ನೀಡ್ಬೇಕು!

    ಕಾರಾಕಾಸ್(ವೆನೆಜುವೆಲಾ): ಸರ್ಕಾರದ ದೂರಾಲೋಚನೆ ರಹಿತ ಆರ್ಥಿಕ ನೀತಿಗಳಿಂದ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರುವ ವೆನೆಜುವೆಲಾ ದೇಶದಲ್ಲಿ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಳವಾಗಿದೆ. ಇಲ್ಲಿನ ಜನರು ಒಂದು ಕಾಫಿ ಕುಡಿಯಲು 20 ಲಕ್ಷ ಬೋಲಿವರ್ ಹಣ ಖರ್ಚು ಮಾಡುವ ಸ್ಥಿತಿ ತಲುಪಿದ್ದಾರೆ.

    ಸ್ಥಳೀಯ ಮಾಧ್ಯಮಗಳು ವರದಿ ಮಾಡಿರುವ ಅನ್ವಯ ಕಳೆದ 1 ವರ್ಷದಿಂದ ದೇಶದ ಹಣದುಬ್ಬರ ಸೂಚ್ಯಂಕ 86,857% ಹೆಚ್ಚಳವಾಗಿದೆ. ಇದರಿಂದ ಬ್ಲಾಕ್ ಮಾರ್ಕೆಟ್ ನಲ್ಲಿ ಒಂದು ಕಾಫಿಗೆ 20 ಲಕ್ಷ ಬೋಲಿವರ್ ಅಂದರೆ 68.7 ರೂ. ನೀಡಬೇಕಿದೆ.

    ಅಂತರಾಷ್ಟ್ರೀಯ ಹಣ ನಿಧಿ ನೀಡಿರುವ ಮಾಹಿತಿ ಪ್ರಕಾರ, ವೆನೆಜುವೆಲಾ ಆರ್ಥಿಕ ಪರಿಸ್ಥಿತಿ ದೇಶದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ದಿನಗಳಿದೆ. ಈ ಹಿಂದೆ 1920 ರಲ್ಲಿ ಜರ್ಮನಿ ಹಾಗೂ ದಶಕದ ಹಿಂದೆ ಜಿಂಬಾಂಬ್ವೆಯಲ್ಲಿ ಕಂಡು ಬಂದ ಆರ್ಥಿಕ ಕೆಟ್ಟ ಪರಿಸ್ಥಿತಿಗಿಂತಲೂ ಕೆಟ್ಟದಾಗಿದೆ ಎಂದು ತಿಳಿಸಿದೆ.

    ವೆನೆಜುವೆಲಾ ದೇಶಾದ್ಯಂತ ಜನರು ಊಟಕ್ಕೂ ಪರದಾಟ ನಡೆಸುತ್ತಿದ್ದು, ದೇಶದ ಆರ್ಥಿಕತೆ ಪುನಶ್ಚೇತನಕ್ಕೆ ಅಧ್ಯಕ್ಷ ನಿಕೊಲಾಸ್ ಮುಡುರೊ ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ವಿಫಲವಾಗಿದೆ. ಅಂದಹಾಗೇ ವೆನೆಜುವೆಲಾ ದೇಶದ ಹಣವನ್ನು ಬೋಲಿವರು ಎಂದು ಕರೆಯುತ್ತಾರೆ. ಸದ್ಯದ ಆರ್ಥಿಕ ಮಾರುಕಟ್ಟೆಯಲ್ಲಿ ದೇಶದ ಒಂದು ಬೋಲಿವರು ಭಾರತದ 0.00057 ರೂ. ಗೆ ಸಮಾನಾಗಿದೆ. ಅಮೆರಿಕದ ಖಂಡದ ಉತ್ತರ ಭಾಗದಲ್ಲಿರುವ ಸಮುದ್ರ ಕರಾವಳಿ ದೇಶ ವೆನೆಜುವೆಲಾ. ಈ ದೇಶದ ದಕ್ಷಿಣಕ್ಕೆ ಬ್ರೆಜಿಲ್, ಪೂರ್ವಕ್ಕೆ ಗಯಾನ, ಪಶ್ಚಿಮಕ್ಕೆ ಕೊಲಂಬಿಯಾ ದೇಶಗಳಿದೆ.

  • ಅಭಿವೃದ್ಧಿ ಎಲ್ಲಿ ಆಗಿದೆ: ಕೇಂದ್ರದ ವಿರುದ್ಧ ಮನಮೋಹನ್ ಸಿಂಗ್ ಗರಂ

    ಅಭಿವೃದ್ಧಿ ಎಲ್ಲಿ ಆಗಿದೆ: ಕೇಂದ್ರದ ವಿರುದ್ಧ ಮನಮೋಹನ್ ಸಿಂಗ್ ಗರಂ

    ಬೆಂಗಳೂರು: ಕೇಂದ್ರದ ಬಿಜೆಪಿ ಸರ್ಕಾರ ಎಲ್ಲಾ ರಂಗದಲ್ಲು ವಿಫಲವಾಗಿದೆ. ಅಭಿವೃದ್ಧಿ ಅಂತ ಹೇಳುತ್ತೆ ಆದ್ರೆ ಎಲ್ಲಿಯು ಅಭಿವೃದ್ಧಿ ಕಾಣುತ್ತಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಾಗ್ದಾಳಿ ನಡೆಸಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಆರ್ಥಿಕ ನೀತಿಗಳು ಸಾಮಾನ್ಯ ಜನರ ಮೇಲೆ ಹೆಚ್ಚು ಪರಿಣಾಮಗಳನ್ನು ಬೀರುತ್ತದೆ. ಕೇಂದ್ರದ ನೋಟು ನಿಷೇಧ ಮತ್ತು ಜಿಎಸ್‍ಟಿ ಅನುಷ್ಠಾನದಲ್ಲಿ ಆಗಿರುವ ನ್ಯೂನತೆಗಳಿಂದ ಜನರು ಹೆಚ್ಚು ಸಮಸ್ಯೆಗೀಡಾಗಿದ್ದಾರೆ. ಸಾವಿರಾರು ಮಂದಿ ನಿರುದ್ಯೋಗಿಗಳಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

    ಕೇಂದ್ರ ಸರ್ಕಾರದ ನಿರ್ಧಾರದಿಂದ ಮಧ್ಯಮ ಮತ್ತು ಸಣ್ಣ ಮಧ್ಯಮ ಕೈಗಾರಿಕೆಗಳು ಅವನತಿಯತ್ತ ಹೋಗಿವೆ. ನಮ್ಮ ಸರ್ಕಾರ ಇದ್ದಾಗ ಪೆಟ್ರೋಲ್ ದರ ತುಂಬ ಕಡಿಮೆಯಿತ್ತು. ಇವತ್ತು ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರಿದೆ. ಹೆಚ್ಚು ತೆರಿಗೆಯನ್ನು ಪಡೆಯುತ್ತಿರುವ ಕೇಂದ್ರ ಸರ್ಕಾರ ದೇಶದ ಜನರಿಗೆ ಉತ್ತರಿಸಬೇಕಾಗಿದೆ ಎಂದು ಕಿಡಿಕಾರಿದರು.

    ಕಳೆದ 4 ವರ್ಷಗಳಿಂದ ಮೋದಿಯವರು ಕಾಂಗ್ರೆಸ್ ಸರ್ಕಾರವನ್ನ ತೆಗಳುವ ಕೆಲಸ ಬಿಟ್ರೆ ಬೇರೆನೂ ಮಾಡಿಲ್ಲ. ದೇಶದ ಕೃಷಿ ಬೆಳವಣಿಗೆಗೆ ಒತ್ತು ನೀಡದೇ ಇರುವುದರಿಂದ ಆ ಕ್ಷೇತ್ರದ ಬೆಳವಣಿಗೆ ಹಿನ್ನೆಡೆ ಕಂಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಬೆಂಗಳೂರಿನಲ್ಲಿ ಯುವಕರ ಸಂಖ್ಯೆ ಜಾಸ್ತಿ ಇದೆ, ದೇಶದ ಸ್ಟಾರ್ಟ್ ಅಪ್ ಕ್ಯಾಪಿಟಲ್. ಟೆಂಡರ್ ಶ್ಯೂರ್ ರಸ್ತೆಗಳು ಪ್ರಪಂಚದಲ್ಲಿಯೇ ಹೆಸರು ಮಾಡಿದೆ. ಮೆಟ್ರೊಗಾಗಿ ಹೆಚ್ಚಿನ ಅನುದಾನವನ್ನ ರಾಜ್ಯ ಸರ್ಕಾರ ನೀಡಿದೆ. ಸಿದ್ದರಾಮಯ್ಯ ಸರ್ಕಾರ ಸಾಕಷ್ಟು ಕೈಗಾರಿಕೆಗಳು ಬೆಂಗಳೂರಿನಲ್ಲಿ ಸ್ಥಾಪನೆಯಾಗಲು ಒತ್ತು ನೀಡಿದೆ. ಗುಜರಾತ್‍ಗಿಂತ ಕೈಗಾರಿಕೆಗಳ ಸ್ಥಾಪನೆಯಲ್ಲಿ ಕರ್ನಾಟಕ ಮುಂದೆ ಇದೆ. ಉದ್ಯೋಗ ಸೃಷ್ಟಿಯಲ್ಲೂ ಸಹ ದೇಶಕ್ಕೆ ಬೆಂಗಳೂರು ಮಾದರಿಯಾಗಿದೆ. ನಾವು ಮಾಡಿರುವ ಒಳ್ಳೆಯ ಕೆಲಸಗಳು ಬಿಜೆಪಿಯವರ ಕಣ್ಣಿಗೆ ಕಂಡಿಲ್ಲ ಎಂದು ಲೇವಡಿಮಾಡಿದರು.