Tag: ಆರಾಧನೆ

  • ಪಾದುಕೆಗೆ ಅಭಿಷೇಕ, ಪೂಜೆ- ಉಡುಪಿಯಲ್ಲಿ ಪೇಜಾವರ ಶ್ರೀ ಆರಾಧನೆ

    ಪಾದುಕೆಗೆ ಅಭಿಷೇಕ, ಪೂಜೆ- ಉಡುಪಿಯಲ್ಲಿ ಪೇಜಾವರ ಶ್ರೀ ಆರಾಧನೆ

    ಉಡುಪಿ: ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿ ವೃಂದಾವಸ್ಥರಾಗಿ 12 ದಿನಗಳು ಕಳೆದಿದೆ. ಪೇಜಾರಶ್ರೀಗಳು ಹುಟ್ಟುಹಾಕಿದ ಎಲ್ಲಾ ಸಂಸ್ಥೆಗಳಲ್ಲಿ ಮಠಗಳಲ್ಲಿ ಶ್ರೀಗಳ ಆರಾಧನೆ ನಡೆದಿದೆ.

    ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಪ್ರದಾಯ ಪ್ರಕಾರ ಉಡುಪಿಯ ಪೇಜಾವರ ಮಠದಲ್ಲಿ ಪವಮಾನ ಹೋಮ, ಪಾರಾಯಣಗಳು ಭಜನೆಗಳು ನೆರವೇರಿದೆ. ಮಧ್ಯಾಹ್ನ ಮಹಾಪೂಜೆ ಸಂದರ್ಭದಲ್ಲಿ ಪೇಜಾವರಶ್ರೀಗಳು ಬಳಸುತ್ತಿದ್ದ ಪವಿತ್ರ ಪಾದುಕೆಗೆ ಅಭಿಷೇಕ ಮತ್ತು ಪೂಜೆ ನೆರವೇರಿತು. ಸಾವಿರಾರು ಮಂದಿ ಪೇಜಾವರಶ್ರೀ ಭಕ್ತರು, ಮಠದ ಆರಾಧಕರು ಆರಾಧನಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ಪೇಜಾವರ ಮಠದ ಧಾರ್ಮಿಕ ವಿದ್ವಾಂಸ ವಾಸುದೇವ ಭಟ್ ಮಾತನಾಡಿ, ದೇಶದಲ್ಲಿ ಒಟ್ಟು ಎಂಬತ್ತು ಸಂಸ್ಥೆಗಳಲ್ಲಿ ಕೂಡಾ ವಿಶ್ವೇಶತೀರ್ಥರ ಆರಾಧನೆ ನಡೆಯುತ್ತದೆ. ಶಾಲಾ ಕಾಲೇಜುಗಳಲ್ಲಿ ಅನ್ನಾರಾಧನೆ ನಡೆಯುತ್ತದೆ. ಮಠ ಮತ್ತಿತರ ಧಾರ್ಮಿಕ ಕೇಂದ್ರದಲ್ಲಿ ಪೂಜೆ ಸಹಿತ ಅನ್ನ ಸಂತರ್ಪಣೆ ನಡೆಯುತ್ತದೆ ಎಂದರು.

    ವಿಶ್ವೇತೀರ್ಥರ ಮಹಾ ಸಮಾರಾಧನೆ ನಿಮಿತ್ತ ಸಮಾಧಿ ಮಾಡಿದ ವಿದ್ಯಾಪೀಠದಲ್ಲಿ ಅಹೋರಾತ್ರಿ ಕಾರ್ಯಕ್ರಮಗಳಿವೆ. ಬೇರೆ ಕಡೆಗಳಲ್ಲಿ ವಿದ್ವತ್ ಗೋಷ್ಠಿ, ಭಜನೆ, ನುಡಿನಮನಗಳು ಆಯೋಜನೆಯಾಗಿದೆ. ಪೇಜಾವರ ಮಠದ ಛತ್ರಗಳು ದೇಶವ್ಯಾಪಿ ಇದೆ. ಅಲ್ಲೆಲ್ಲಾ ಊಟದ ವ್ಯವಸ್ಥೆಯನ್ನು ಭಕ್ತರಿಗೆ ಮಾಡಲಾಗಿದೆ.

  • ಇಂದು ಶಿರೂರು ಸ್ವಾಮೀಜಿ ಆರಾಧನಾ ಪ್ರಕ್ರಿಯೆ

    ಇಂದು ಶಿರೂರು ಸ್ವಾಮೀಜಿ ಆರಾಧನಾ ಪ್ರಕ್ರಿಯೆ

    ಉಡುಪಿ: ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ ಉಡುಪಿಯ ಶಿರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿ ಆರಾಧನೆ ಇವತ್ತು ನಡೆಯಲಿದ್ದು, ಶಿರೂರು ಮೂಲಮಠದಲ್ಲಿ ಆರಾಧನಾ ಪ್ರಕ್ರಿಯೆ ನಡೆಯಲಿದೆ.

    ಪವಮಾನ ಹೋಮ, ನವಕ ಪ್ರಧಾನ ಹೋಮ, ವಿರಾಜ ಮಂತ್ರಹೋಮಕ್ಕೆ ಏರ್ಪಾಟು ಮಾಡಿಕೊಂಡಿದ್ದಾರೆ. ಎಲ್ಲಾ ಪ್ರಕ್ರಿಯೆಗಳು ನಡೆದ ನಂತರ ಮಠದಲ್ಲಿರುವ ಮುಖ್ಯಪ್ರಾಣ ದೇವರು, ಅನ್ನವಿಠಲ ದೇವರಿಗೆ ಎಳನೀರಿನ ಅಭಿಷೇಕ ನಡೆಯಲಿದೆ. ಆರಾಧನಾ ಪ್ರಕ್ರಿಯೆಯ ನಂತರ ಸುಮಾರು 300 ಜನರಿಗೆ ಅನ್ನದಾನ ನಡೆಯಲಿದೆ. ಕಾಪು ತಾಲೂಕಿನ ಹಿರಿಯಡ್ಕ ಸಮೀಪದ ಶಿರೂರು ಗ್ರಾಮದಲ್ಲಿ ಈ ಎಲ್ಲಾ ವಿಧಿವಿಧಾನ ನಡೆಯುತ್ತಿದ್ದು, ಶಿರೂರು ಮಠದ ದ್ವಂದ್ವ ಮಠವಾದ ಸೋದೆ ಮಠ ಆರಾಧನಾ ಪ್ರಕ್ರಿಯೆಯ ಜವಾಬ್ದಾರಿ ಹೊತ್ತಿದೆ.

    ಜುಲೈ 19 ರಂದು ಸ್ವಾಮೀಜಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು. ಸಾವನ್ನಪ್ಪಿದ 13 ನೇ ದಿನಕ್ಕೆ ಆರಾಧನೆ ನಡೆಯಬೇಕಿತ್ತು. ಆದರೆ ವಾರದ ಹಿಂದೆಯಷ್ಟೇ ಪೊಲೀಸರು ಮೂಲಮಠವನ್ನು ದ್ವಂದ್ವ ಸೋದೆ ಮಠಕ್ಕೆ ಬಿಟ್ಟುಕೊಟ್ಟಿದ್ದರು. ಪ್ರಕರಣ ತನಿಖೆ ಹಂತದಲ್ಲಿ ಇದ್ದುದರಿಂದ ಆರಾಧನಾ ಪ್ರಕ್ರಿಯೆ ವಿಳಂಬವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv