Tag: ಆಯುಧ ಪೂಜೆ

  • ‘ಪಬ್ಲಿಕ್ ಟಿವಿ’ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮ

    ‘ಪಬ್ಲಿಕ್ ಟಿವಿ’ ಕಚೇರಿಯಲ್ಲಿ ಆಯುಧ ಪೂಜೆ ಸಂಭ್ರಮ

    – ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್ ಭಾಗಿ

    ಬೆಂಗಳೂರು: ಸುದ್ದಿ ವಾಹಿನಿ ‘ಪಬ್ಲಿಕ್ ಟಿವಿ’ (Public TV) ಕಚೇರಿಯಲ್ಲಿ ಆಯುಧ ಪೂಜೆ (Ayudha Pooja) ಸಂಭ್ರಮ ಮನೆ ಮಾಡಿತ್ತು. ಕಚೇರಿಯಲ್ಲಿ ಪೂಜಾ ಕಾರ್ಯ ನೆರವೇರಿಸಲಾಯಿತು.

    ಪಬ್ಲಿಕ್ ಟಿವಿಯ ಕ್ಯಾಮೆರಾ, ಟ್ರೈಪಾಡ್, ಲೈಟ್ಸ್, ಮೈಕ್‌ಗೆ ಪೂಜೆ ಸಲ್ಲಿಸಲಾಯಿತು. ಪಬ್ಲಿಕ್ ಟಿವಿ ಮುಖ್ಯಸ್ಥರಾದ ಹೆಚ್.ಆರ್.ರಂಗನಾಥ್, ಸಿಇಒ ಅರುಣ್ ಕುಮಾರ್, ಸಿಒಒ ಹರೀಶ್ ಕುಮಾರ್ ಹಾಗೂ ಪಬ್ಲಿಕ್ ಟಿವಿಯ ಎಲ್ಲಾ ಸಿಬ್ಬಂದಿ ಪೂಜೆಯಲ್ಲಿ ಭಾಗವಹಿಸಿದ್ದರು. ಇದನ್ನೂ ಓದಿ: ನಾಡಹಬ್ಬ ದಸರಾ ಸಂಭ್ರಮ – ಅಂಬಾವಿಲಾಸ ಅರಮನೆಯಲ್ಲಿ ಕಳೆಗಟ್ಟಿದ ಆಯುಧಪೂಜೆ

    ಬಳಿಕ ಕಚೇರಿಯ ವಾಹನಗಳಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ಬೂದಗುಂಬಲ ದೃಷ್ಟಿ ತೆಗೆದು ಹೊಡೆಯಲಾಯಿತು. ಪೂಜೆ ಬಳಿಕ ಸಿಬ್ಬಂದಿ ಪ್ರಸಾದ ಸ್ವೀಕರಿಸಿದರು.

    ಶ್ರೀಧರ ಭಟ್ಟಾಚಾರ್ಯ ಗುರೂಜಿ ಅವರು ಪೂಜಾ ಕಾರ್ಯವನ್ನು ನಡೆಸಿಕೊಟ್ಟರು. ಹಬ್ಬದ ವಿಶೇಷವಾಗಿ ಪಬ್ಲಿಕ್ ಟಿವಿಯ ಎಲ್ಲಾ ಸಿಬ್ಬಂದಿಗೆ ಸ್ವೀಟ್‌ ಬಾಕ್ಸ್‌ ವಿತರಿಸಲಾಯಿತು. ಇದನ್ನೂ ಓದಿ: ಆಯುಧ ಪೂಜೆಗೆ ಖರೀದಿ ಭರಾಟೆ ಜೋರು – ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್ ಸುತ್ತ ಟ್ರಾಫಿಕ್ ಜಾಮ್

  • ಆಯುಧ ಪೂಜೆಗೆ ಖರೀದಿ ಭರಾಟೆ ಜೋರು – ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್ ಸುತ್ತ ಟ್ರಾಫಿಕ್ ಜಾಮ್

    ಆಯುಧ ಪೂಜೆಗೆ ಖರೀದಿ ಭರಾಟೆ ಜೋರು – ಬೆಳ್ಳಂಬೆಳಗ್ಗೆ ಕೆ.ಆರ್ ಮಾರ್ಕೆಟ್ ಸುತ್ತ ಟ್ರಾಫಿಕ್ ಜಾಮ್

    ಬೆಂಗಳೂರು: ದೇಶದೆಲ್ಲೆಡೆ ಇಂದು (ಅ.1) ಆಯುಧ ಪೂಜೆ ಸಂಭ್ರಮ ಜೋರಾಗಿದೆ. ಸಿಲಿಕಾನ್ ಸಿಟಿಯಲ್ಲಿ ಜನರು ಖರೀದಿಗಾಗಿ ಮುಗಿಬಿದ್ದಿದ್ದು, ಕೆ.ಆರ್ ಮಾರ್ಕೆಟ್  (KR Market) ಸುತ್ತ ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ಆಗಿದೆ.

    ಆಯುಧ ಪೂಜೆ ಹಿನ್ನೆಲೆ ಕೆ.ಆರ್ ಮಾರುಕಟ್ಟೆಯಲ್ಲಿ ಜನದಟ್ಟಣೆ ಹೆಚ್ಚಾಗಿದ್ದು, ಹೂವು, ಹಣ್ಣು ಪೂಜಾ ಸಾಮಗ್ರಿಗಳ ಖರೀದಿ ಭರಾಟೆ ಜೋರಾಗಿದೆ. ಈ ಹಿನ್ನೆಲೆ ಟೌನ್‌ಹಾಲ್‌ನಿಂದ ಕೆಆರ್ ಮಾರ್ಕೆಟ್‌ವರೆಗೆ ಟ್ರಾಫಿಕ್ ಬಿಸಿ ತಟ್ಟಿದೆ. ಖರೀದಿಗೆ ಬಂದ ಜನರು ಫ್ಲೈಓವರ್ ಮೇಲೆಯೂ ವಾಹನಗಳನ್ನು ಪಾರ್ಕ್ ಮಾಡಿದ್ದು, ಫ್ಲೈ ಓವರ್ ಮೇಲೆಯೂ ಕಿ.ಮೀವರೆಗೂ ಟ್ರಾಫಿಕ್ ಜಾಮ್ ಉಂಟಾಗಿದೆ.ಇದನ್ನೂ ಓದಿ: ಭಾರತದ ಮೋಸ್ಟ್‌ ಡೇಂಜರಸ್‌ ಫೋರ್ಟ್‌ – ಹರಿಹರ ಕೋಟೆ ಹತ್ತಲು ಡಬಲ್‌ ಗುಂಡಿಗೆ ಬೇಕು!

    ಆಯುಧ ಪೂಜೆ ಹಾಗೂ ದಸರಾ ಹಬ್ಬದ ಹಿನ್ನೆಲೆ ಹೂವು, ಹಣ್ಣುಗಳ ಬೆಲೆಯೂ ಗಗನಕ್ಕೇರಿದೆ. ಬೆಲೆ ಏರಿಕೆಯಾದರೂ ಹಬ್ಬರ ಸಂಭ್ರಮ ಜೋರಾಗಿ ಇದೆ.

    ಹೂವು                         ಇಂದಿನ ದರ (ಕೆ.ಜಿಗೆ)
    ಸೇವಂತಿ                      200-300 ರೂ.
    ಕನಕಾಂಬರ                2000-2500 ರೂ.
    ಮಲ್ಲಿಗೆ                         1500-2000 ರೂ.
    ಗುಲಾಬಿ                         400-450 ರೂ.
    ಕಾಕಡ                              800 ರೂ
    ಬಾಳೆಕಂಬ ಜೋಡಿ             50-70ರೂ.
    ಕುಂಬಳಕಾಯಿ                  50-60ರೂ
    ಗುಲಾಬಿ ಹಾರ                   4000 ರೂ.

  • ಯಾರ ಬಳಿ ಆಯುಧ ಇಲ್ಲವೋ ಅವರೆಲ್ಲಾ ಆಯುಧ ಖರೀದಿಸಿ ಪೂಜಿಸಿ: ನಾರಾಯಣ ಭಾಂಡಗೆ

    ಯಾರ ಬಳಿ ಆಯುಧ ಇಲ್ಲವೋ ಅವರೆಲ್ಲಾ ಆಯುಧ ಖರೀದಿಸಿ ಪೂಜಿಸಿ: ನಾರಾಯಣ ಭಾಂಡಗೆ

    ಬಾಗಲಕೋಟೆ: ಶಕ್ತಿಶಾಲಿ ಸಮಾಜ ಕಟ್ಟಬೇಕಿದ್ದಲ್ಲಿ ಸಮಸ್ತ ಹಿಂದೂಗಳು (Hindu) ಆಯುಧ ಪೂಜೆ ಮಾಡಬೇಕು. ಯಾರ ಬಳಿ ಆಯುಧ ಇಲ್ಲವೋ ಅವರೆಲ್ಲಾ ಆಯುಧ ಖರೀದಿಸಬೇಕು ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣ ಭಾಂಡಗೆ (Narayana Bhandage) ಕರೆ ನೀಡಿದ್ದಾರೆ.

    ನವಮಿ ಅಂದ್ರೆ ಬಹಳಷ್ಟು ಜನ ಮರೆತಿದ್ದು ಕೇವಲ ಊಟ ಮಾಡುವುದು ಹಬ್ಬ ಅಂತಾಗಿದೆ. ನಿಜವಾಗಿಯೂ ನವಮಿ (Navami) ಅಂದರೆ ಆಯುಧ ಪೂಜೆ ಮಾಡಬೇಕು. ಸೈನಿಕರು, ಪೊಲೀಸರು ಆಯುಧ ಪೂಜೆ ಮಾಡ್ತಾರೆ. ನಾಳೆ ಎಲ್ಲರೂ ಆಯುಧ ಪೂಜೆ (Ayudha Puja) ಮಾಡಬೇಕು ಎಂದರು. ಇದನ್ನೂ ಓದಿ:  Ayudha Puja 2025 | ವಿಜಯದಶಮಿ ಮುನ್ನಾದಿನ ಆಯುಧ ಪೂಜೆ ಆಚರಣೆ ಮಾಡುವುದೇಕೆ? ಈ ವರ್ಷ ಶುಭ ಮುಹೂರ್ತ ಯಾವಾಗ?

     

    ದೇಶ, ರಾಷ್ಟ್ರ, ಸಮಾಜ ರಕ್ಷಣೆ ಮಾಡಬೇಕಿದ್ದಲ್ಲಿ ದುರ್ಗಾ ಮಾತೆಯ ಶಕ್ತಿ ನಮಗೆ ಬರಬೇಕು. ಅದಕ್ಕಾಗಿ ಎಲ್ಲರೂ ಆಯುಧ ಪೂಜೆ ಮಾಡಬೇಕು. ಯಾರಲ್ಲಿ ಆಯುಧಗಳು ಇಲ್ವೋ ಅವರೆಲ್ಲಾಹೊಸದಾಗಿಯಾದ್ರೂ ಖರೀದಿ ಮಾಡಬೇಕು. ಮುಂದಿನ ದಿನಗಳಲ್ಲಿ ಆಯುಧಗಳ ಪೂಜೆ ಬಹಳ ಅವಶ್ಯಕತೆ ಇದೆ ಎಂದು ಹೇಳಿದರು.

    ಹಿಂದೂಗಳಿಗೆ ಶಸ್ತ್ರ ಮತ್ತು ಶಾಸ್ತ್ರ ಎರಡೂ ಬೇಕು. ಸಮರಕ್ಕೆ ಶಸ್ತ್ರ ಬೇಕಾಗುತ್ತೆ, ಅಭ್ಯಾಸಕ್ಕೆ ಶಾಸ್ತ್ರ ಬೇಕಾಗುತ್ತದೆ. ಹಿಂದೂ ಸಮಾಜ ಯಾವತ್ತೂ ಶಕ್ತಿಶಾಲಿ ಸಮಾಜ. ಎಂದಿಗೂ ನಿರ್ವೀರ್ಯ ಸಮಾಜ ಅಲ್ಲ, ನಾವು ಯಾರಿಗೂ ಅನ್ಯಾಯ ಮಾಡಲು ಹೋಗುವುದಿಲ್ಲ ಎಂದು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

  • Ayudha Puja 2025 | ವಿಜಯದಶಮಿ ಮುನ್ನಾದಿನ ಆಯುಧ ಪೂಜೆ ಆಚರಣೆ ಮಾಡುವುದೇಕೆ? ಈ ವರ್ಷ ಶುಭ ಮುಹೂರ್ತ ಯಾವಾಗ?

    Ayudha Puja 2025 | ವಿಜಯದಶಮಿ ಮುನ್ನಾದಿನ ಆಯುಧ ಪೂಜೆ ಆಚರಣೆ ಮಾಡುವುದೇಕೆ? ಈ ವರ್ಷ ಶುಭ ಮುಹೂರ್ತ ಯಾವಾಗ?

    ಪ್ರತೀ ವರ್ಷ ಅಶ್ವಿನಿ ಮಾಸದ 9ನೇ ದಿನದಂದು ಅಂದ್ರೆ ಮಹಾನವಮಿಯಂದು ಆಯುಧ ಪೂಜೆಯನ್ನ ಮಾಡಲಾಗುತ್ತದೆ. ಇನ್ನೂ ಕೆಲವೆಡೆ ವಿಜಯದಶಮಿ ದಿನದಂದೂ ಆಯುಧ ಪೂಜೆಯನ್ನು ಮಾಡುತ್ತಾರೆ. 2025ರ ಆಯುಧ ಪೂಜೆಯನ್ನು (Ayudha Puja) ಅಕ್ಟೋಬರ್‌ 01ರ ಬುಧವಾರದಂದು ಆಚರಿಸಲಾಗುವುದು. ದಕ್ಷಿಣ ಭಾರತದಲ್ಲಿ ಆಯುಧ ಪೂಜೆಗೆ ಹೆಚ್ಚಿನ ಮಹತ್ವವನ್ನು ನೀಡಲಾಗಿದೆ. ಈ ದಿನ ನಾವು ಕೆಲಸ ಮಾಡಲು ಬಳಸುವ ವಸ್ತುಗಳನ್ನು, ಆಯುಧಗಳನ್ನು ಮತ್ತು ರಕ್ಷಾ ಕವಚಗಳನ್ನು ಪೂಜಿಸುವ ಸಂಪ್ರದಾಯವಿದೆ. ಇದರ ಹಿಂದೆ ಪುರಾಣ ಪುಣ್ಯಕಥೆಗಳೂ ಇವೆ. ಅವುಗಳೇನೆಂಬುದನ್ನಿಲ್ಲಿ ತಿಳಿಯೋಣ…

    ಈ ವರ್ಷ ಶುಭ ಮುಹೂರ್ತ ಎಷ್ಟೊತ್ತಿಗೆ?
    ಈ ವರ್ಷ ಅಕ್ಟೋಬರ್‌ 1ರಂದು ಆಯುಧಪೂಜಾ ಹಬ್ಬ ಇರಲಿದ್ದು, ಇದಾದ ಮುರು ದಿನ ವಿಜಯದಶಮಿ ಆರಂಭವಾಗುತ್ತದೆ. ಈ ಬಾರಿ ಅಕ್ಟೋಬರ್‌ 1ರಂದು ಮಧ್ಯಾಹ್ನ 2:09 ರಿಂದ 2:57ರ ಸಂದರ್ಭ ಶುಭಮುಹೂರ್ತ ಇದೆ.

    navratri special Ayudha Pooja What Is Its Significance

    ಆಯುಧ ಪೂಜೆ ಮಹತ್ವ ಏನು?
    ಹಿಂದೂ ಧರ್ಮದಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ಪುರಾಣಗಳ ಪ್ರಕಾರ ಅಂದು ದಿನ ಆಯುಧಗಳನ್ನು ಪೂಜಿಸುವ ಸಂಪ್ರದಾಯವಿದೆ. ಹಿಂದಿನ ಕಾಲದಲ್ಲಿ, ಕ್ಷತ್ರಿಯ ಜನರು ಯುದ್ಧಕ್ಕೆಂದು ಹೋಗುತ್ತಿದ್ದರು. ಇವರು ವಿಜಯದಶಮಿಯ ಒಂದು ದಿನ ಮೊದಲು ಆಯುಧ ಪೂಜೆ ದಿನ ತಮ್ಮ ಯುದ್ಧ ಸಾಮಾಗ್ರಿಗಳನ್ನಿಟ್ಟು ಪೂಜೆಯನ್ನು ಮಾಡುತ್ತಿದ್ದರು. ಆಯುಧ ಪೂಜೆಯ ಮೂಲಕ ಆಯುಧಗಳನ್ನು ಪೂಜಿಸುವುದರಿಂದ ಯುದ್ಧದಲ್ಲಿ ವಿಜಯಿಯಾಗಬಹುದು ಎಂಬುದು ಅವರ ನಂಬಿಕೆಯಾಗಿತ್ತು. ಈ ಪೂಜೆಯನ್ನು ಕೆಲಸ ಮತ್ತು ಜ್ಞಾನದ ಸಮನ್ವಯದ ಸಂಕೇತವೆಂದು ಪರಿಗಣಿಸಲಾಗಿದೆ.

    ಆಯುಧ ಪೂಜೆ ವಿಧಾನ
    ಆಯುಧ ಪೂಜೆಯ ದಿನದಂದು ಜನರು ತಮ್ಮ ಮನೆ, ಕೆಲಸದ ಸ್ಥಳ, ಕಾರ್ಖಾನೆಗಳು ಮತ್ತು ಅಂಗಡಿಗಳಲ್ಲಿ ಬಳಸುವ ಉಪಕರಣಗಳು ಮತ್ತು ಸಲಕರಣೆಗಳನ್ನು ಸ್ವಚ್ಛಗೊಳಿಸುತ್ತಾರೆ ಮತ್ತು ಪೂಜೆಗೆ ಅಲಂಕರಿಸುತ್ತಾರೆ. ವ್ಯಾಪಾರ ವರ್ಗದವರು ತಮ್ಮ ವ್ಯಾಪಾರ ಸಲಕರಣೆಗಳಾದ ಕಂಪ್ಯೂಟರ್, ಪೆನ್ನು, ಖಾತೆ ಪುಸ್ತಕ ಇತ್ಯಾದಿಗಳಿಗೆ ಪೂಜೆಯನ್ನು ಮಾಡುತ್ತಾರೆ ಮತ್ತು ರೈತರು ತಮ್ಮ ಕೃಷಿ ಉಪಕರಣಗಳನ್ನು ಪೂಜಿಸುತ್ತಾರೆ. ಸೈನಿಕರು ತಮ್ಮ ಆಯುಧಗಳನ್ನು ಪೂಜಿಸುತ್ತಾರೆ.

    MYSURU DASARA 4

    ಅಂದು ಪೂಜಾ ಸ್ಥಳವನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಲಾಗುತ್ತದೆ. ನಂತರ ಅಲ್ಲಿ ದೇವರು ಮತ್ತು ದೇವತೆಗಳ ವಿಗ್ರಹಗಳು ಅಥವಾ ಚಿತ್ರಗಳನ್ನು ಇಡಲಾಗುತ್ತದೆ. ಇದರ ನಂತರ, ಪೂಜೆಯನ್ನು ನಡೆಸಲಾಗುತ್ತದೆ. ಅದರಲ್ಲಿ ಹೂವುಗಳು, ಧೂಪದ್ರವ್ಯಗಳು, ದೀಪಗಳು ಮತ್ತು ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ. ತೆಂಗಿನಕಾಯಿ, ಹೂವು, ಅರಿಶಿನ, ಕುಂಕುಮ ಮತ್ತು ಅಕ್ಷತೆಯನ್ನು ಅರ್ಪಿಸಿ ಆಯುಧಗಳು ಮತ್ತು ವಾದ್ಯಗಳನ್ನು ಪೂಜಿಸುತ್ತಾರೆ. ಪೂಜೆಯ ಸಮಯದಲ್ಲಿ, ವಾದ್ಯಗಳನ್ನು ಗೌರವಿಸಲಾಗುತ್ತದೆ. ಪೂಜೆಯ ಕೊನೆಯಲ್ಲಿ ಪ್ರಸಾದವನ್ನು ವಿತರಿಸಲಾಗುತ್ತದೆ.

    ಆಯುಧ ಪೂಜೆ ಕಥೆ
    ಆಯುಧ ಪೂಜೆಗೆ ಸಂಬಂಧಿಸಿದ ದಂತಕಥೆಯ ಪ್ರಕಾರ, ದುರ್ಗಾದೇವಿಯು ತನ್ನ ರೌದ್ರ ರೂಪದಲ್ಲಿ ರಾಕ್ಷಸ ಮಹಿಷಾಸುರನನ್ನು ಸೋಲಿಸಿರುವ ದಿನವಾಗಿದೆ. ಎಲ್ಲಾ ದೇವತೆಗಳು ರಾಕ್ಷಸನನ್ನು ಸೋಲಿಸಲು ದುರ್ಗೆಗೆ ತಮ್ಮ ಆಯುಧಗಳು, ಪ್ರತಿಭೆ ಮತ್ತು ಶಕ್ತಿಗಳನ್ನು ನೀಡಿದರು. ಸಂಪೂರ್ಣ ಯುದ್ಧವು ಒಂಬತ್ತು ದಿನಗಳ ಕಾಲ ನಡೆಯಿತು. ಮತ್ತು ನವಮಿಯ ಮುನ್ನಾದಿನದಂದು, ದುರ್ಗಾ ದೇವಿಯು ಮಹಿಷಾಸುರನನ್ನು ಕೊಲ್ಲುವ ಮೂಲಕ ಯುದ್ಧವನ್ನು ಮುಕ್ತಾಯಗೊಳಿಸಿದಳು. ಹೀಗಾಗಿ, ಆ ದಿನವನ್ನು ಮಹಾನವಮಿ ಎಂದು ಆಚರಿಸಲಾಗುತ್ತದೆ ಮತ್ತು ಆಯುಧ ಪೂಜೆಯ ವಿಧಿವಿಧಾನವನ್ನು ಪೂರೈಸಲಾಗುತ್ತದೆ. ದುರ್ಗಾ ದೇವಿಯು ಬಳಸಿದ ಎಲ್ಲಾ ಆಯುಧಗಳು ಮತ್ತು ಉಪಕರಣಗಳು ತಮ್ಮ ಉದ್ದೇಶವನ್ನು ಸಾಧಿಸಿವೆ ಎನ್ನುವ ನಂಬಿಕೆಯಿದೆ. ಯುದ್ಧದ ನಂತರ ಆ ಆಯುಧಗಳನ್ನು ಗೌರವಿಸಲು ಎಲ್ಲಾ ಆಯುಧಗಳನ್ನು ಪೂಜಿಸಿ ಒಂದೆಡೆ ಇಟ್ಟು ಶುಚಿಗೊಳಿಸಿ ಅಲಂಕರಣ ಮಾಡಿದ ನಂತರ ಆಯಾ ದೇವರು ಮತ್ತು ದೇವತೆಗಳಿಗೆ ಅವುಗಳನ್ನು ಹಿಂದಿರುಗಿಸಲಾಯಿತು.

  • Navratri 2025 Day 9: ಸಿದ್ಧಿ ಕರುಣಿಸಿ ಭಕ್ತರನ್ನು ಕಾಪಾಡುವ ಸಿದ್ಧಿದಾತ್ರಿ ದೇವಿ

    Navratri 2025 Day 9: ಸಿದ್ಧಿ ಕರುಣಿಸಿ ಭಕ್ತರನ್ನು ಕಾಪಾಡುವ ಸಿದ್ಧಿದಾತ್ರಿ ದೇವಿ

    ವರಾತ್ರಿಯ ಒಂಬತ್ತನೇ ದಿನ ಅಂದರೆ ಮಹಾನವಮಿಯ ದಿನ ದುರ್ಗಾ ದೇವಿಯ ಒಂಬತ್ತನೇ ರೂಪವಾದ ದೇವಿ ಸಿದ್ಧಿದಾತ್ರಿಗೆ ಸಮರ್ಪಿತವಾಗಿದೆ. ಸಿದ್ಧಿದಾತ್ರಿ ದೇವಿಯು ತನ್ನ ಎರಡು ಕೈಗಳಲ್ಲಿ ಗದಾ ಮತ್ತು ಚಕ್ರವನ್ನು ಹೊಂದಿದ್ದಾಳೆ. ಇನ್ನೆರಡು ಕೈಗಳಲ್ಲಿ ಕಮಲ ಮತ್ತು ಶಂಕು ಹಿಡಿದಿದ್ದಾಳೆ.

    ಸಿದ್ಧಿದಾತ್ರಿಯ ಮಹತ್ವ:
    ಸಿದ್ಧಿದಾತ್ರಿ ದೇವಿಯು ಎಲ್ಲಾ ಸಿದ್ಧಿಗಳ ಮೂಲ. ಆಕೆ ಎಲ್ಲಾ ಎಂಟು ಅಷ್ಟಸಿದ್ಧಿಗಳನ್ನು ಹೊಂದಿದ್ದಾಳೆ. ದೇವಿಯ ಆರಾಧನೆಯು ಸಹಸ್ರಾರ ಚಕ್ರವನ್ನು ಪ್ರಚೋದಿಸುತ್ತದೆ. ಇದನ್ನು ಕಿರೀಟ ಚಕ್ರ ಎಂದೂ ಕರೆಯುತ್ತಾರೆ. ಹಿಂದೂ ಶಾಸನಗಳ ಪ್ರಕಾರ, ಅವಳು ತನ್ನ ಭಕ್ತರಿಗೆ ಅದೃಷ್ಟವನ್ನು ಆಶೀರ್ವದಿಸುತ್ತಾಳೆ ಮತ್ತು ಅವರಿಗೆ ಮೋಕ್ಷವನ್ನು ಒದಗಿಸುತ್ತಾಳೆ.

    ಸಿದ್ಧಿ ಎಂದರೆ ಅಲೌಕಿಕ ಶಕ್ತಿ ಅಥವಾ ಸೃಷ್ಟಿ, ಅಸ್ತಿತ್ವದ ಅಂತಿಮ ಮೂಲದ ಅರ್ಥವನ್ನು ಸಾಧಿಸುವ ಸಾಮರ್ಥ್ಯ. ದಾತ್ರಿ ಎಂದರೆ ಕೊಡುವುದು. ತಾಯಿಯನ್ನು ಪೂಜೆ ಮಾಡಿದರೆ ನಿಜವಾದ ಅಸ್ತಿತ್ವವನ್ನು ಅರಿತುಕೊಳ್ಳುವ ಶಕ್ತಿ ಪ್ರಾಪ್ತಿಯಾಗುತ್ತದೆ. ತಾಯಿಯ ಆರಾಧನೆಯು ನಮ್ಮ ಮನಸ್ಸಿನಲ್ಲಿರುವ ಅಜ್ಞಾನವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಪುರಾಣ ಗ್ರಂಥಗಳ ಪ್ರಕಾರ ಜಗತ್ತಿನ ಎಂಟು ಸಿದ್ಧಿಗಳೆಂದರೆ ಅನಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಕ್ಯಾಮ್ಯ, ಇನ್ಶಿತ್ವ, ವಶಿತ್ವ. ನವದುರ್ಗೆಗಳಲ್ಲಿ ತಾಯಿ ಸಿದ್ಧಿದಾತ್ರಿಯು ಈ ಎಲ್ಲ ಅದ್ಭುತ ಅಂಶಗಳನ್ನು ಹೊಂದಿದ್ದಾಳೆ.

    ಪುರಾಣದ ಕಥೆಗಳ ಪ್ರಕಾರ ತಾಯಿ ಸಿದ್ಧಿದಾತ್ರಿಯಿಂದ ಆಶೀರ್ವಾದ ಪಡೆದ ಶಿವನು ಆಕೆಯಿಂದ ಎಂಟು ಸಿದ್ಧಿಗಳನ್ನು ಪಡೆದ ಎಂದು ಹೇಳಲಾಗುತ್ತದೆ. ಬ್ರಹ್ಮಾಂಡದ ಸೃಷ್ಟಿಯ ವೇಳೆ ಶಿವನು ಪರಾಕಾಷ್ಟೆಯನ್ನು ಆರಾಧಿಸಿದನು. ಎಷ್ಟೇ ಆರಾಧಿಸದರೂ ಶಕ್ತಿ ದೇವತೆ ಪ್ರತ್ಯಕ್ಷಳಾಗಲಿಲ್ಲ. ನಂತರ ಆಕೆಯು ಶಿವನ ಎಡ ಭಾಗದ ಅರ್ಧದಲ್ಲಿ ಕಾಣಿಸಿಕೊಂಡಳು. ಅಂದಿನಿಂದ ಪರಶಿವನು ಅರ್ಧನಾರೀಶ್ವರ ಎಂಬ ಇನ್ನೊಂದು ಹೆಸರಿನಿಂದ ಗುರುತಿಸಿಕೊಂಡನು ಎಂದು ಹೇಳಲಾಗುತ್ತದೆ.

  • ಆಯುಧ ಪೂಜೆ ಹಬ್ಬಕ್ಕೂ ಸಾರಿಗೆ ಇಲಾಖೆಯಲ್ಲಿ ದುಡ್ಡಿಲ್ವಾ?- ಒಂದು ಬಸ್‌ಗೆ ಕೇವಲ 150 ರೂ. ಬಿಡುಗಡೆ

    ಆಯುಧ ಪೂಜೆ ಹಬ್ಬಕ್ಕೂ ಸಾರಿಗೆ ಇಲಾಖೆಯಲ್ಲಿ ದುಡ್ಡಿಲ್ವಾ?- ಒಂದು ಬಸ್‌ಗೆ ಕೇವಲ 150 ರೂ. ಬಿಡುಗಡೆ

    ಬೆಂಗಳೂರು: ಆಯುಧ ಪೂಜೆ (Ayudha Pooja) ಹಬ್ಬಕ್ಕೆ ಸರ್ಕಾರಿ ಬಸ್‌ಗಳಿಗೆ ಪೂಜೆ ಸಲ್ಲಿಸಲು ಸಾರಿಗೆ ಇಲಾಖೆಯಿಂದ ಹಣ ಬಿಡುಗಡೆ ಮಾಡಲಾಗಿದೆ. ಪ್ರತಿ ಬಸ್‌ಗೆ ಕೇವಲ 150 ರೂ. ರಿಲೀಸ್‌ ಮಾಡಿದೆ.

    ಪ್ರತಿ ವರ್ಷ ದಸರಾ ಹಿನ್ನೆಲೆಯಲ್ಲಿ ಆಯುಧ ಪೂಜೆ ಹಬ್ಬದಲ್ಲಿ ಸಾರಿಗೆ ಬಸ್‌ಗಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಅದಕ್ಕಾಗಿ ಸಾರಿಗೆ ಇಲಾಖೆಯು ಪ್ರತಿ ಬಸ್‌, ಇಲಾಖಾ ವಾಹನಕ್ಕೆ ಹಣ ಬಿಡುಗಡೆ ಮಾಡಲಿದೆ. ಈ ಬಾರಿ ಕೇವಲ 150 ರೂ. ಬಿಡುಗಡೆ ಮಾಡಿದೆ. ಇದಕ್ಕೆ ಸಿಬ್ಬಂದಿ ಅಸಮಾಧಾನ ಹೊರಹಾಕಿದ್ದಾರೆ.

    ಹಬ್ಬದ ದಿನಗಳಲ್ಲಿ ಹೂ-ಹಣ್ಣು, ಹಾರ ಎಲ್ಲದರ ಬೆಲೆಯೂ ಏರಿಕೆ ಆಗುವುದು ಸಾಮಾನ್ಯ. ಒಂದು ಮಾರು ಹೂವಿನ ಹಾರವೇ ಹಬ್ಬದಲ್ಲಿ 100 ರೂ. ದಾಟಲಿದೆ. ಕೇವಲ 150 ರೂಪಾಯಿಯಲ್ಲಿ ಒಂದು ವಾಹನಕ್ಕೆ ಪೂಜೆ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ವ್ಯಕ್ತವಾಗಿದೆ.

    ವಿಭಾಗೀಯ ಕಾರ್ಯಾಗಾರಕ್ಕೆ 2000 ರೂ. ಹಾಗೂ ಪ್ರಾದೇಶಿಕ ಕಾರ್ಯಾಗಾರಕ್ಕೆ 4000 ರೂ. ಹಣವನ್ನು ಸಾರಿಗೆ ಇಲಾಖೆ ಬಿಡುಗಡೆ ಮಾಡಿದೆ. ರಾಜ್ಯದ ನಾಲ್ಕೂ ನಿಗಮಗಳಿಗೆ ಒಂದು ಬಸ್‌ಗೆ 150 ರೂ. ಸಿಗಲಿದೆ. ಸಿಬ್ಬಂದಿಯೇ ಹಣ ಹಾಕಿ ಹಬ್ಬ ಮಾಡುವ ಸ್ಥಿತಿ ನಿರ್ಮಾಣವಾಗಿದೆ.

  • ರಾಮನಗರ| ಆಯುಧಪೂಜೆಯಲ್ಲಿ ರೌಡಿಶೀಟರ್‌ಗಳನ್ನು ಸನ್ಮಾನಿಸಿದ ಪೊಲೀಸರು

    ರಾಮನಗರ| ಆಯುಧಪೂಜೆಯಲ್ಲಿ ರೌಡಿಶೀಟರ್‌ಗಳನ್ನು ಸನ್ಮಾನಿಸಿದ ಪೊಲೀಸರು

    – ದಲಿತ ಸಂಘಟನೆಯಿಂದ ಗೃಹಸಚಿವರಿಗೆ ದೂರು

    ರಾಮನಗರ: ಕಾನೂನು ಸುವ್ಯವಸ್ಥೆ ಕಾಪಾಡುವುದರೊಂದಿಗೆ ರೌಡಿಶೀಟರ್‌ಗಳ (Rowdysheetars) ಹೆಡೆಮುರಿ ಕಟ್ಟಬೇಕಿದ್ದ ಪೊಲೀಸರು ಠಾಣೆಯಲ್ಲೇ ಇಬ್ಬರು ರೌಡಿಶೀಟರ್‌ಗಳಿಗೆ ಹಾರಹಾಕಿ ಸನ್ಮಾನಿಸಿದ ಘಟನೆ ರಾಮನಗರದ (Ramanagara) ಪುರ ಪೊಲೀಸ್ ಠಾಣೆಯಲ್ಲಿ ನಡೆದಿದೆ.

    ಕಳೆದ ಅ.18ರಂದು ಟೌನ್ ಪೊಲೀಸ್ ಠಾಣೆಯಲ್ಲಿ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಠಾಣೆಯಲ್ಲಿ ಆಯುಧಪೂಜೆ (Ayudha Pooja) ಕಾರ್ಯಕ್ರಮದ ವೇಳೆ ಒಂದಷ್ಟು ಗಣ್ಯರನ್ನು ಸನ್ಮಾನಿಸಿ ಗೌರವಿಸುವುದನ್ನು ವಾಡಿಕೆ ಮಾಡಿಕೊಂಡಿರುವ ಪೊಲೀಸರು, ಗಣ್ಯರ ಹೆಸರಿನಲ್ಲಿ ರೌಡಿಶೀಟರ್‌ಗಳಾದ ಅಜ್ಜದ್ ಹಾಗೂ ಅಂಜದ್ ಎನ್ನುವವರಿಗೆ ಹಾರ, ಶಾಲು ಹಾಕಿ ಸನ್ಮಾನ ಮಾಡಿ ಫೋಟೊಗೆ ಪೋಸ್ ನೀಡಿದ್ದಾರೆ. ಇದನ್ನೂ ಓದಿ: ನಮ್ಮ ದೇಶದಲ್ಲಿ ಸಂವಿಧಾನ ವಿರೋಧಿಗಳೂ ಇದ್ದಾರೆ, ನಾವು ಎಚ್ಚರಿಕೆಯಿಂದ ಇರಬೇಕು: ಸಿಎಂ

    ಸದ್ಯ ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಬೇಕಿರುವ ಪೊಲೀಸರೇ ರೌಡಿಶೀಟರ್‌ಗಳಿಗೆ ಸನ್ಮಾನಿಸಿರುವುದು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗೆ ಗುರಿಯಾಗಿದೆ. ರೌಡಿಶೀಟರ್‌ಗಳಿಗೆ ಸತ್ಕರಿಸುವ ಪೊಲೀಸರ ಮೇಲೆ ಸೂಕ್ತ ಕ್ರಮ ಕೈಗೊಳ್ಳುವಂತೆ ದಲಿತ ಸಂಘಟನೆಗಳು ಗೃಹಸಚಿವರಿಗೆ ಹಾಗೂ ರಾಜ್ಯಪಾಲರಿಗೆ ಪತ್ರ ಬರೆದಿದ್ದು, ಕ್ರಮಕ್ಕಾಗಿ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಕಲಬೆರಕೆ ಸೇಂದಿ ಮಾರಾಟ ಮಾಡುತ್ತಿದ್ದ ದಂಪತಿ ಬಂಧನ – 400 ಲೀಟರ್ ಸೇಂದಿ ಜಪ್ತಿ

  • ದೇವಾಲಯಗಳಲ್ಲಿ ವಿಶೇಷ ಆಯುಧಪೂಜೆ – ವಾಹನಗಳಿಗೆ ಪೂಜೆ ಮಾಡಿ ಸಂಭ್ರಮಿಸಿದ ಜನ

    ದೇವಾಲಯಗಳಲ್ಲಿ ವಿಶೇಷ ಆಯುಧಪೂಜೆ – ವಾಹನಗಳಿಗೆ ಪೂಜೆ ಮಾಡಿ ಸಂಭ್ರಮಿಸಿದ ಜನ

    – ಪಬ್ಲಿಕ್ ಟಿವಿ ಕಚೇರಿಯಲ್ಲೂ ಆಯುಧಪೂಜೆ

    ಬೆಂಗಳೂರು: ನಾಡಿನಾದ್ಯಂತ ಇಂದು ಆಯುಧ ಪೂಜೆಯ (Ayudha Pooja) ಸಂಭ್ರಮ. ದಸರಾ ಹಬ್ಬದ ಒಂಭತ್ತನೇ ದಿನವಾದ ನವಮಿಯಂದು ಆಯುಧಗಳ ಪೂಜೆ ಮಾಡಿ ಹಬ್ಬ ಮಾಡುವುದು ಸಂಪ್ರದಾಯ. ಸಿಲಿಕಾನ್‌ ಸಿಟಿಯಲ್ಲಿ ಆಯುಧ ಪೂಜೆಯ ಸಂಭ್ರಮ ಎಲ್ಲೆಡೆ ಮನೆ ಮಾಡಿತ್ತು.

    ವನವಾಸಕ್ಕೆ ಹೊರಟ ಪಂಡವರು ತಮ್ಮ ಆಯುಧಗಳನ್ನ ಯಾರಿಗೂ ಕಾಣದಂತೆ ಇಟ್ಟು, ವನವಾಸ ಅಜ್ಞಾತವಾಸ ಮುಗಿಸಿದ ಬಳಿಕ ತಮ್ಮ ಆಯುಧಗಳನ್ನ ಮತ್ತೆ ತೆಗದುಕೊಂಡು ಪೂಜಿಸಿದ ದಿನವಿದು. ಹೀಗಾಗಿ, ಜನರು ತಮ್ಮ ಮನೆಗಳ ಆಯುಧಗಳನ್ನ ಶುದ್ದ ಮಾಡಿ, ಅಲಂಕಾರ ಮಾಡಿ ಪೂಜಿಸುತ್ತಾರೆ. ಜೊತೆಗೆ ವಾಹನಗಳಿಗೆ ಪೂಜೆ ಸಲ್ಲಿಸುತ್ತಾರೆ. ಇದನ್ನೂ ಓದಿ: ತಾಯಿ ಚಾಮುಂಡೇಶ್ವರಿ ಆಶೀರ್ವಾದ ನನ್ನ ಮೇಲೆ ಸದಾ ಇರುತ್ತೆ: ಸಿಎಂ

    ಆಯುಧ ಪೂಜೆಯ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿಯ ಜನ ಶಕ್ತಿ ದೇವತೆಗಳ ದರ್ಶನ ಮಾಡಿ ಆಯುಧಗಳ ಪೂಜೆ ಮಾಡಿದರು. ಬೆಂಗಳೂರು ಸರ್ಕಲ್ ಮಾರಮ್ಮ ದೇವಾಲಯದ ಮುಂದೆ ಬೆಳಗ್ಗೆಯಿಂದಲೇ ಸಾವಿರಾರು ಜನರ ತಮ್ಮ ವಾಹನಗಳನ್ನ ತಂದು ಪೂಜೆ ಮಾಡಿಸಿದರು.

    ನಗರದ ಕಾಳಿ ದೇವಿ ಬಂಡೆಮಹಾಕಾಳಿ ದೇವಾಲಯದಲ್ಲಿ ಭಕ್ತರ ಸಾಗರವೇ ತುಂಬಿತ್ತು. ಮಹಾಕಾಳಿ ದೇವಿಯ ಆಯುಧಗಳನ್ನ ದೇವಾಲಯದಲ್ಲಿ ವಿಶೇಷ ಹೋಮ ಮಾಡಿ, ಪೂಜಿಸಲಾಯಿತು. ದೇವಾಲಯದಲ್ಲಿ ಭಕ್ತರು ದೇವಿ ದರ್ಶನ ಪಡೆದು, ಆಯುಧ ಪೂಜೆಯಂದು ತಮಗೂ ಒಳಿತನ್ನ ಮಾಡಲಿ ಎಂದು ತಾಯಿಯ ಬಳಿ ಬೇಡಿಕೊಂಡರು. ನಾಳೆ ದಶಮಿಯ ಪ್ರಯುಕ್ತ, ದೇವಾಲಯದ ಆವರಣದಲ್ಲಿ ಬನ್ನಿ ಮರ ಕಡೆದು, ಪಟ್ಟದ ತಾಯಿಯ ಮೆರವಣಿಗೆ ಮಾಡಲಿದ್ದಾರೆ. ಇದನ್ನೂ ಓದಿ: ನವರಾತ್ರಿ ವಿಶೇಷ: ಆಯುಧ ಪೂಜೆ ಯಾಕೆ ಮಾಡಲಾಗುತ್ತದೆ? ಏನಿದರ ಮಹತ್ವ?

    ಮೈಸೂರು ರಸ್ತೆ ಶಿರಸಿ ಸರ್ಕಲ್ ಸಿಎಆರ್ ಕೇಂದ್ರ ಸ್ಥಾನದಲ್ಲಿ ವಿಶೇಷ ಪೂಜೆ ಮಾಡಲಾಯಿತು. ಹಾರ್ಮೊರಿ, ವೆಪೆನ್‌ಗಳು, ಸಿಎಆರ್ ಹೆಡ್ ಕ್ವಾರ್ಟರ್‌ನ ಶಸ್ತ್ರಾಗಾರದಲ್ಲಿ ಬಂದೂಕುಗಳು, ರೈಫಲ್‌ಗಳಿಗೆ, ಸಿಎಆರ್ ವಾಹನಗಳನ್ನು ಹೂಗಳಿಂದ ಸಿಂಗರಿಸಿ ಪೂಜೆ ಮಾಡಲಾಯ್ತು. ಬಾಳೆಕಂದು ಕತ್ತರಿಸಿ ಪೂಜೆ ನೆರವೇರಿಸಿದ ನಗರ ಪೊಲೀಸ್ ಆಯುಕ್ತ ಬಿ‌.ದಯಾನಂದ ಸಿಎಆರ್ ಹೆಡ್ ಕ್ವಾಟರ್ ಡಿಸಿಪಿ ಡಿ.ಎಲ್.ನಾಗೇಶ್ ಸೇರಿದಂತೆ ಅಧಿಕಾರಿ ಸಿಬ್ಬಂದಿಗಳ ಪೂಜೆಯಲ್ಲಿ ಭಾಗಿಯಾಗಿದ್ದರು.

    ಪಬ್ಲಿಕ್‌ ಟಿವಿ ಕಚೇರಿಯಲ್ಲೂ ಆಯುಧಪೂಜೆ
    ಕನ್ನಡದ ಸುದ್ದಿವಾಹಿನಿ ‘ಪಬ್ಲಿಕ್‌ ಟಿವಿ’ ಕಚೇರಿಯಲ್ಲೂ ಆಯುಧಪೂಜೆ ಆಚರಿಸಲಾಯಿತು. ಇಂದು ಬೆಳಗ್ಗೆ ಕಚೇರಿಯಲ್ಲಿ ವಾಹನಗಳಿಗೆ ಪೂಜೆ ನೆರವೇರಿಸಿ ಸಿಬ್ಬಂದಿಗೆ ಸಿಹಿ ಹಂಚಲಾಯಿತು.

  • ನವರಾತ್ರಿ ವಿಶೇಷ: ಆಯುಧ ಪೂಜೆ ಯಾಕೆ ಮಾಡಲಾಗುತ್ತದೆ? ಏನಿದರ ಮಹತ್ವ?

    ನವರಾತ್ರಿ ವಿಶೇಷ: ಆಯುಧ ಪೂಜೆ ಯಾಕೆ ಮಾಡಲಾಗುತ್ತದೆ? ಏನಿದರ ಮಹತ್ವ?

    ಪ್ರತಿ ವರ್ಷ ಆಶ್ವಯುಜ ಮಾಸದಲ್ಲಿ ಬರುವ ನವರಾತ್ರಿ ಹಬ್ಬವನ್ನು (Navratri Festival) ಹಿಂದೂಗಳು (Hindu) ವೈಭವದಿಂದ ಆಚರಿಸುತ್ತಾರೆ. ಒಂಬತ್ತು ದಿನಗಳ ಕಾಲ ಆಚರಿಸುವ ಈ ಹಬ್ಬದಲ್ಲಿ ಪ್ರತಿ ದಿನವೂ ವಿಶೇಷ ಪೂಜೆಗಳನ್ನು ಕೈಗೊಳ್ಳಲಾಗುತ್ತದೆ. ಅವುಗಳಲ್ಲಿ ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಗೆ (Ayudha Puja) ವಿಶೇಷ ಮಹತ್ವವಿದೆ.

    ಆಯುಧಗಳನ್ನು ಪೂಜಿಸುವ ಮತ್ತು ಅವುಗಳಿಗೆ ಕೃತಜ್ಞರಾಗಿರುವ ದಿನವೇ ಆಯುಧ ಪೂಜೆ. ರೈತರು ನೇಗಿಲು ಕೃಷಿಗೆ ಬಳಸುವ ವಸ್ತುಗಳಿಗೆ ಪೂಜೆ ಮಾಡಿದರೆ ಸೈನಿಕರು ಬಂದೂಕು, ಫಿರಂಗಿ, ಯುದ್ಧ ಟ್ಯಾಂಕರ್, ವಿಮಾನಗಳಿಗೆ ಪೂಜೆ ಮಾಡುತ್ತಾರೆ. ಮನೆಯಲ್ಲಿರುವ ಪುಟಾಣಿಯ ಸೈಕಲಿನಿಂದ ಹಿಡಿದು ದೊಡ್ಡ ವಾಹನಗಳಿಗೆ ಪೂಜೆ ನಡೆದರೆ ಕಚೇರಿಗಳಲ್ಲಿ ಕಂಪ್ಯೂಟರ್‌, ಉತ್ಪಾದನಾ ಯಂತ್ರಗಳಿಗೆ ಪೂಜೆ ನಡೆಯುತ್ತದೆ. ಆಯುಧ ಪೂಜೆಯಂದು ಮನೆಯಲ್ಲಿ ಉಪಯೋಗಿಸುವ ಚೂರಿಯಿಂದ ಹಿಡಿದು ಎಲ್ಲಾ ವಿಧದ ಆಯುಧಗಳನ್ನು ಪೂಜಿಸಲಾಗುತ್ತಿದೆ. ಕುಶಲಕರ್ಮಿಗಳು ತಮ್ಮ ಉಪಕರಣಗಳನ್ನು ಪೂಜಿಸುತ್ತಾರೆ, ಕಲೆಗೆ ಸಂಬಂಧಿಸಿದ ಜನರು ತಮ್ಮ ವಾದ್ಯಗಳನ್ನು ಪೂಜಿಸುತ್ತಾರೆ. ಈ ದಿನ ವಸ್ತುಗಳನ್ನು ತೊಳೆದು, ಹೂಗಳಿಂದ ಅಲಂಕರಿಸಿ ಪೂಜೆ ನೆರವೇರಿಸಲಾಗುತ್ತಿದೆ.

    ಆಯುಧ ಪೂಜೆಯು ದುರ್ಗಾ ಮಾತೆಯನ್ನು ಪೂಜಿಸಿದರೆ ಯಶಸ್ಸು ಸಿಗುತ್ತದೆ ಎಂಬ ನಂಬಿಕೆಯಿದೆ. ರಾಜರ ಆಡಳಿತ ಅವಧಿಯಲ್ಲಿ ನವಮಿಯಂದು ಆಯುಧಗಳಿಗೆ ಪೂಜೆ ಮಾಡಿ ದಶಮಿಯಂದು ಯುದ್ಧಕ್ಕೆ ಹೊರಟರೆ ಹೊರಟರೆ ವಿಜಯ ಸಿದ್ಧಿ ಎನ್ನುವ ನಂಬಿಕೆ ಇತ್ತು. ಈ ಕಾರಣಕ್ಕೆ ನವಮಿಯಂದೇ ಪೂಜೆ ಸಲ್ಲಿಸಿ ಜೈತ್ರಯಾತ್ರೆಗೆ ತೆರಳುತ್ತಿದ್ದರು. ಈ ಪದ್ದತಿ ಈಗಲೂ ಉಳಿದುಕೊಂಡಿದೆ. ಸಾಂಕೇತಿಕವಾಗಿ ಕೆಲ ರಾಜವಂಶಸ್ಥರು ತಮ್ಮ ರಾಜ್ಯದ ಗಡಿಯನ್ನು ದಾಟಿ ಮತ್ತೆ ಮರಳುತ್ತಾರೆ. ಇದನ್ನೂ ಓದಿ: ಕೈ ಬೀಸಿ ಕರೆಯುತ್ತಿದೆ ಮಂಗಳೂರು ದಸರಾ – ಬರೋಬ್ಬರಿ 22 ಲಕ್ಷ ಬಲ್ಬುಗಳಿಂದ ಅಲಂಕಾರ

    ಪೌರಾಣಿಕ ಕಥೆ ಏನು?
    ಆಯುಧ ಪೂಜೆಯ ಹಿಂದೆ ಪೌರಾಣಿಕ ಕಥೆಯೂ ಇದೆ. ದ್ವಾಪರ ಯುಗದಲ್ಲಿ ಪಾಂಡವರು (Pandavas) 12 ವರ್ಷಗಳ ವನವಾಸ, ಒಂದು ವರ್ಷ ಅಜ್ಞಾತವಾಸ ಮಾಡುತ್ತಾರೆ. ಅಜ್ಞಾತವಾಸವನ್ನು ಮತ್ಸ್ಯನಗರದ ವಿರಾಟರಾಯನ ಅರಮನೆಯಲ್ಲಿ ಕಳೆಯುತ್ತಾರೆ. ಅಜ್ಞಾತಕ್ಕೆ ತೆರಳುವ ಮುನ್ನ ತಮ್ಮಲ್ಲಿದ್ದ ಶಸ್ತ್ರಾಸ್ತ್ರಗಳನ್ನು ಬನ್ನಿ ವೃಕ್ಷದಲ್ಲಿ ಅಡಗಿಸಿ ಇಡುತ್ತಾರೆ.

    ವಿರಾಟನ ಆಸ್ಥಾನದಲ್ಲಿ ಆಗ ಧರ್ಮರಾಜ ಕಂಕಭಟ್ಟ, ಭೀಮ ಬಾಣಸಿಗನಾದ ವಲಲನಾಗಿ, ಅರ್ಜುನ ಬೃಹನ್ನಳೆಯಾಗಿ ನೃತ್ಯ ಶಿಕ್ಷಕಿಯಾಗಿ ವೇಷ ಧರಿಸಿದರೆ ನಕುಲ ಸಹದೇವರು ಅನುಕ್ರಮವಾಗಿ ಅಶ್ವಪಾಲಕ-ಗೋಪಾಲಕರಾದರು. ದ್ರೌಪದಿ ಸೈರಂಧ್ರಿಯಾಗಿ ವಿರಾಟನ ಪತ್ನಿಯಾದ ಸುದೇಷ್ಣೆಯ ಆಪ್ತ ಸಖಿಯಾಗಿ ಕೆಲಸ ಮಾಡುತ್ತಿರುತ್ತಾಳೆ.

    ಅಜ್ಞಾತ ವಾಸದ ಕೊನೆಯಲ್ಲಿ ವಿರಾಟರಾಯನ ಗೋವುಗಳನ್ನು ಕೌರವರು ಅಪಹರಿಸುತ್ತಾರೆ. ಈ ವೇಳೆ ವಿರಾಟ ರಾಜನ ಪುತ್ರ ಉತ್ತರ ಕುಮಾರ ಕುರು ಸೇನೆಯನ್ನು ಸೋಲಿಸಿ ಗೋವುಗಳನ್ನು ನಾನು ತರುತ್ತೇನೆ ಎಂದು ಜಂಬ ಕೊಚ್ಚಿಕೊಳ್ಳುತ್ತಾನೆ. ಈತನ ರಥಕ್ಕೆ ಸಾರಥಿಯಾಗಿ ಬೃಹನ್ನಳೆಯಾಗಿರುವ ಅರ್ಜುನನು ತೆರಳುತ್ತಾನೆ. ಕೌರವರ ಬಾಣಗಳನ್ನು ನೋಡಿ ರಥ ತಿರುಗಿಸುವಂತೆ ಉತ್ತರ ಕುಮಾರ ಬೃಹನ್ನಳೆಯ ಬಳಿ ಪರಿ ಪರಿಯಾಗಿ ಕೇಳುತ್ತಾನೆ. ಇದಕ್ಕೆ ಒಪ್ಪದ ಅರ್ಜುನ ಶಮಿ ವೃಕ್ಷದ ಬಳಿ ಬಂದು ಆಯುಧ ಇಳಿಸುತ್ತಾನೆ. ಅರ್ಜುನ ತನ್ನ ಗಾಂಡೀವವನ್ನು ಧರಿಸಿ ಯುದ್ಧ ಮಾಡಿ ಗೋವುಗಳನ್ನು ಕೌರವರ ಸೆರೆಯಿಂದ ಬಿಡಿಸುತ್ತಾನೆ. ಪಾಂಡವರು 12 ವರ್ಷಗಳ ವನವಾಸ ಮುಗಿಸಿ ಒಂದು ವರ್ಷ ಅಜ್ಞಾತವಾಸ ಮುಗಿಸಿದ ದಿನವೇ ವಿಜಯದಶಮಿ. ನವರಾತ್ರಿ ಹಬ್ಬ ಮುಗಿಸಿ ದಶಮಿಯಂದು ಸಾಧಿಸಿದ ವಿಜಯದ ಕುರುಹಾಗಿ ಕೂಡ ಆಯುಧ ಪೂಜೆಯನ್ನು ಆಚರಿಸಲಾಗುತ್ತದೆ.

    ಹಿಂದೆ ರಾಜರಿಗೆ ಆಯುಧಗಳ ಬಹಳ ಮುಖ್ಯವಾಗಿದ್ದವು. ಈ ಕಾರಣಕ್ಕೆ ನಮ್ಮನ್ನು ರಕ್ಷಿಸುವ ಕತ್ತಿ, ಖಡ್ಗಗದಂತಹ ಆಯುಧಗಳಿಗೆ ಒಂದು ದಿನ ವಿರಾಮ ನೀಡಿ ಅವುಗಳಿಗೆ ಕೃತಜ್ಞತೆ ಅರ್ಪಿಸಲು ಆಯುಧ ಪೂಜೆ ದಿನದಂದು ವಿಶೇಷ ಪೂಜೆ ಮಾಡಲಾಗುತ್ತದೆ. ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ದೈವೀಕ ಶಕ್ತಿ ಇದೆ. ಇದರಿಂದಾಗಿ ಆಯುಧ ಪೂಜೆಯಂದು ವಾಹನಗಳಿಗೆ ಪೂಜೆ ಸಲ್ಲಿಸಿದರೆ ಯಾವುದೇ ರೀತಿಯ ಸಮಸ್ಯೆ ಉಂಟಾಗುವುದಿಲ್ಲ ಎಂಬ ನಂಬಿಕೆ ಇದೆ.

  • ನವರಾತ್ರಿಯ 9ನೇ ದಿನ ಆಯುಧ ಪೂಜೆ – ಖಾಸಾ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಪೂಜೆ

    ನವರಾತ್ರಿಯ 9ನೇ ದಿನ ಆಯುಧ ಪೂಜೆ – ಖಾಸಾ ಆಯುಧಗಳಿಗೆ ರಾಜವಂಶಸ್ಥ ಯದುವೀರ್ ಪೂಜೆ

    – ಶನಿವಾರ ವಿಜಯದಶಮಿ ಮೆರವಣಿಗೆಗೆ ಭರದ ಸಿದ್ಧತೆ

    ಮೈಸೂರು: ನವರಾತ್ರಿಯ 9ನೇ ದಿನವಾದ ಇಂದು ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ (Mysore Palace) ಸಾಂಪ್ರದಾಯಿಕ ಆಯುಧ ಪೂಜೆ ನೆರವೇರಲಿದೆ. ರಾಜವಂಶಸ್ಥ ಯದುವೀರ್ ಪಟ್ಟದ ಆನೆ, ಕುದುರೆ, ಹಸು ಸೇರಿ ಖಾಸಾ ಆಯುಧಗಳು, ಅರಮನೆ ವಾಹನಗಳಿಗೆ ಪೂಜೆ ಸಲ್ಲಿಸಲಿದ್ದು, ದಸರಾ (Dasara) ವೈಭವ ಮತ್ತಷ್ಟು ಕಳೆಗಟ್ಟಲಿದೆ. ಈ ಕುರಿತ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ.

    ಮೈಸೂರಿನಲ್ಲಿ ನಾಡಹಬ್ಬ ದಸರಾ ಮಹೋತ್ಸವದ ಸಂಭ್ರಮ ಮನೆಮಾಡಿದೆ. ನವರಾತ್ರಿಯ 9 ದಿನವಾದ ಇಂದು ಅರಮನೆಯಲ್ಲಿ ರಾಜವಂಶಸ್ಥ ಯದುವೀರ್ ಕೃಷ್ಣ ದತ್ತ ಚಾಮರಾಜ ಒಡೆಯರ್ ಆಯುಧ ಪೂಜಾ ನೆರವೇರಿಸಲಿದ್ದಾರೆ. ಈ ಹಿನ್ನೆಲೆ ಅರಮನೆಯಲ್ಲಿ ಬೆಳಗ್ಗಿನಿಂದಲೇ ಆಯುಧ ಪೂಜೆಯ ಧಾರ್ಮಿಕ ಕೈಂಕರ್ಯಗಳು ಆರಂಭವಾಗಿವೆ.

    ಬೆಳಿಗ್ಗೆ 6ಗಂಟೆಗೆ ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ಚಂಡಿಕಾಹೋಮ ನೆರವೇರಲಿದ್ದು, ಪಟ್ಟದ ಆನೆ, ಕುದುರೆ, ಹಸು ಆನೆ ಬಾಗಿಲಿಗೆ ಆಗಮನವಾಗಲಿವೆ. ಖಾಸಗಿ ಆಯುಧಗಳನ್ನ ಆನೆ ಬಾಗಿಲು ಮೂಲಕ ಶ್ರೀ ಕೋಡಿ ಸೋಮೇಶ್ವರ ದೇವಾಲಯಕ್ಕೆ ರವಾನೆ ಮಾಡಲಾಗುತ್ತದೆ. ಬಳಿಕ ಕೋಡಿ ಸೋಮೇಶ್ವರ ದೇವಾಲಯದಿಂದ ಖಾಸಾ ಆಯುಧಗಳನ್ನ ಆನೆ ಬಾಗಿಲ ಮುಖಾಂತರ ಅರಮನೆಯ ಕಲ್ಯಾಣ ಮಂಟಪಕ್ಕೆ ರವಾನೆ ಮಾಡಲಾಗುತ್ತದೆ. ನಂತರ ಚಂಡಿ ಹೋಮ ಪೂರ್ಣಾಹುತಿ ನೆರವೇರಲಿದೆ. ಆ ನಂತರ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು ಆನೆ ಬಾಗಿಲಿಗೆ ಬಂದು, ಅರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನೆರವೇರಲಿದೆ.

    ಆಯುಧ ಪೂಜೆಯ ಕೊನೆಯಲ್ಲಿ ತಾವು ಬಳಸುವ ವಾಹನಗಳಿಗೂ ಯದುವೀರ್ ಪೂಜೆ ಸಲ್ಲಿಸಲಿದ್ದಾರೆ. ನಂತರ ಅರಮನೆಯ ಕಲ್ಯಾಣ ಮಂಟಪದಲ್ಲಿ ಸಂಜೆ ರತ್ನ ಖಚಿತ ಸಿಂಹಾಸನದಲ್ಲಿ ನವರಾತ್ರಿಯ ಕೊನೆಯ ದಿನದ ಖಾಸಗಿ ದರ್ಬಾರ್ ನಡೆಸಿ, ಸಿಂಹಾಸನದಿಂದ ಸಿಂಹ ವಿಸರ್ಜನೆ ಮಾಡುತ್ತಾರೆ. ಆ ಬಳಿಕ ವಾಣಿ ವಿಲಾಸ ದೇವರ ಮನೆಯಲ್ಲಿ ಕಂಕಣ ವಿಸರ್ಜನೆ ಮಾಡುತ್ತಾರೆ.

    ಒಟ್ಟಾರೆ ಅಂಬಾವಿಲಾಸ ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧಪೂಜೆ ನೆರವೇರಿಸುವ ಮೂಲಕ ನವರಾತ್ರಿ ಪೂಜೆ ಪೂರ್ಣಗೊಳ್ಳಲಿದೆ. ನಾಳೆ ವಿಜಯದಶಮಿ ಮೆರವಣಿಗೆಗೆ ಅರಮನೆ ಆವರಣದಲ್ಲಿ ಭರದ ಸಿದ್ಧತೆ ನಡೆದಿದೆ.