Tag: ಆಪರೇಷನ್ ಆಡಿಯೋ

  • ಆಪರೇಷನ್ ಆಡಿಯೋ ಪ್ರಕರಣ – ಬಿಎಸ್‍ವೈಗೆ ಬಿಗ್ ರಿಲೀಫ್

    ಆಪರೇಷನ್ ಆಡಿಯೋ ಪ್ರಕರಣ – ಬಿಎಸ್‍ವೈಗೆ ಬಿಗ್ ರಿಲೀಫ್

    ಬೆಂಗಳೂರು: ಆಪರೇಷನ್ ಆಡಿಯೋ ಪ್ರಕರಣಕ್ಕೆ ಸಂಬಂಧಿದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

    ನಗರದ ಸಿಟಿ ಸಿವಿಲ್ ಕೋರ್ಟಿನ 82 ನೇ ವಿಶೇಷ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದು, ಬಿಎಸ್‍ವೈ ಸೇರಿದಂತೆ ಇತರ ನಾಲ್ವರಿಗೂ ಮಧ್ಯಂತರ ಜಾಮೀನು ಮಂಜೂರು ಆಗಿದೆ.

    ಏನಿದು ಪ್ರಕರಣ:
    ಆಪರೇಷನ್ ಆಡಿಯೋ ಪ್ರಕರಣಕ್ಕೆ ಸಂಬಂಧಿದಂತೆ ಗುರುಮಿಠಕಲ್ ಶಾಸಕ ನಾಗನಗೌಡ ಪುತ್ರ ಶರಣಗೌಡ ಅವರು ರಾಯಚೂರಿನ ದೇವದುರ್ಗ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಶರಣಗೌಡ ಅವರ ದೂರು ಆಧಾರಿಸಿ ಬಿಎಸ್ ಯಡಿಯೂರಪ್ಪ ಸೇರಿದಂತೆ ನಾಲ್ವರ ಮೇಲೆ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬಿಎಸ್‍ವೈ ಅವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

    ಪ್ರಕರಣದಲ್ಲಿ ಬಿಎಸ್ ಯಡಿಯೂರಪ್ಪ ಅವರು ಎ-1 ಆರೋಪಿ ಆಗಿದ್ದರೆ, ಶಾಸಕರಾದ ಶಿವನಗೌಡ ನಾಯಕ್, ಪ್ರೀತಂ ಗೌಡ, ಪತ್ರಕರ್ತ ಮರಂಕಲ್ ಅವರ ವಿರುದ್ಧ ದೂರು ದಾಖಲಾಗಿತ್ತು. ಭ್ರಷ್ಟಾಚಾರ ನಿಗ್ರಹ ಕಾಯ್ದೆ 19/2019 ಕಲಂ 8 ಮತ್ತು 12. ಭ್ರಷ್ಟಾಚಾರ ತಡೆಗಟ್ಟುವ ತಿದ್ದುಪಡಿ ಅಧಿನಿಯಮ 2018 ಮತ್ತು 120(ಬಿ), ಐಪಿಸಿ 506 ಕಾಯ್ದೆ ಅಡಿ ಎಫ್‍ಐಆರ್ ದಾಖಲಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಅವ್ರ ಮುಖ ಇಂಗು ತಿಂದ ಮಂಗನಂತಾಗಿದೆ: ಬಿಜೆಪಿ ಶಾಸಕರಿಗೆ ಸಿದ್ದರಾಮಯ್ಯ ಟಾಂಗ್

    ಅವ್ರ ಮುಖ ಇಂಗು ತಿಂದ ಮಂಗನಂತಾಗಿದೆ: ಬಿಜೆಪಿ ಶಾಸಕರಿಗೆ ಸಿದ್ದರಾಮಯ್ಯ ಟಾಂಗ್

    – ಮೂಲ ಉದ್ದೇಶವನ್ನೇ ಮರೆತ ಶಾಸಕರು
    – ಬಿಜೆಪಿಯವರಿಗೆ ಸ್ವಹಿತ ಮುಖ್ಯವಾಗಿದೆ

    ಬೆಂಗಳೂರು: ಅವರ ಮುಖ ನೋಡಬೇಕು ಇಂಗು ತಿಂದ ಮಂಗನಂತಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಬಿಜೆಪಿ ಶಾಸಕರ ಕುರಿತು ವ್ಯಂಗ್ಯವಾಡಿದ್ದಾರೆ.

    ಕಲಾಪದ ಬಳಿಕ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ, ಸದನದಲ್ಲಿ ಜನರ ಜ್ವಲಂತ ಸಮಸ್ಯೆ ಚರ್ಚೆ ಮಾಡುವುದನ್ನು ಬಿಟ್ಟು ರಾಜಕೀಯ ಮಾಡುವುದಕ್ಕೆ ಇಲ್ಲಿಗೆ ಬರಬೇಕೇ? ಅವರಿಗೆ ಸ್ವಹಿತ ಮುಖ್ಯವೇ ಹೊರತು ಜನರ ಹಿತ ಮುಖ್ಯವಲ್ಲ. ಅವರು ಮೂಲ ಉದ್ದೇಶವನ್ನೇ ಮರೆತುಬಿಟ್ಟಿದ್ದಾರೆ. ಇದನ್ನು ರಾಜ್ಯದ ಜನ ಕ್ಷಮಿಸುವುದದಿಲ್ಲ ಎಂದು ಹೇಳಿ ಬಿಜೆಪಿ ಶಾಸಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯಪಾಲ ವಜುಬಾಯ್ ವಾಲಾ ಅವರನ್ನು ಭೇಟಿಯಾಗಿದ್ದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಶಾಸಕ ಪ್ರೀತಂಗೌಡ ಮನೆ ಮೇಲೆ ಕಲ್ಲು ತೂರಾಟದ ದೂರು ನೀಡಲು ಹೋಗಿದ್ದು ಸರಿಯಲ್ಲ. ಎಲ್ಲ ರೀತಿಯ ವಿಚಾರ ಕಾನೂನು, ಸುವ್ಯವಸ್ಥೆ ವಿಚಾರ ಅಸೆಂಬ್ಲಿಯಲ್ಲಿ ಚರ್ಚೆ ಮಾಡಬೇಕಲ್ಲವೇ? ರಾಜಭವನ ಇಂತಹ ಆರೋಪಗಳನ್ನು ಚರ್ಚೆ ಮಾಡುವ ಜಾಗವೇ? ಬಿಜೆಪಿಯವರು ಕರ್ತವ್ಯದಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಅಸಮಾಧಾನ ಹೊರಹಾಕಿದರು.

    ವಿರೋಧ ಪಕ್ಷದವರಿಗೆ ರಾಜ್ಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಆಸಕ್ತಿಯಿಲ್ಲ. ಈ ಬಾರಿ ಸದನ ನಡೆಸಬಾರದೆಂದು ಬಿಜೆಪಿಯವರು ತೀರ್ಮಾನ ಮಾಡಿಕೊಂಡು ಬಂದಿದ್ದರು. ಹೀಗಾಗಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿ ಉಂಟು ಮಾಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಾದರೆ ಸದನದಲ್ಲಿ ಕೇಳಬೇಕಿತ್ತು. ಅದನ್ನು ಬಿಟ್ಟು ಗಲಾಟೆ ಮಾಡಿದ ಎಂದು ಅವರು, ಅಸೆಂಬ್ಲಿ ಹೇಗೆ ನಡೆಯಬೇಕೆಂದು ಬ್ಯುಸಿನೆಸ್ ಅಡ್ವೈಸರಿ ಕಮಿಟಿಯಲ್ಲಿ ಚರ್ಚೆ ಮಾಡಬೇಕು ಎಂದು ತಿಳಿಸಿದರು.

    ಅತೃಪ್ತರ ವಿರುದ್ಧ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ದೂರು ನೀಡಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ, ಈ ಹಿಂದೆ ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್‍ಪಿ) ಸಭೆಗೆ ಹಾಗೂ ಕಲಾಪಕ್ಕೆ ಶಾಸಕರು ಬಂದಿರಲಿಲ್ಲ. ಹೀಗಾಗಿ ವಿಪ್ ಹಾಗೂ ನೋಟಿಸ್ ಜಾರಿ ಮಾಡಿದ್ದೇವು. ಬಳಿಕ ಸ್ಪೀಕರ್ ಅವರಿಗೆ ದೂರು ನೀಡಿದ್ದೇವು ಅಷ್ಟೇ ಎಂದು ಹೇಳಿ ಜಾರಿಕೊಂಡರು.

    ಎಸ್‍ಐಟಿ ತನಿಖೆಗೆ ಸಿಎಂ ಕುಮಾರಸ್ವಾಮಿ ಅವರೇ ಘೋಷಣೆ ಮಾಡಿದ್ದಾರೆ ಹೊರತು ನಾನಲ್ಲ. ಇಂತಹ ವಿಚಾರಗಳನ್ನು ನಾನು ಘೋಷಣೆ ಮಾಡುವುದಕ್ಕೆ ಆಗುತ್ತಾ? ನಾನೊಬ್ಬ ಸದಸ್ಯನಾಗಿ ಸಲಹೆಯನ್ನು ಹೇಳಿದ್ದೇನೆ ಅಷ್ಟೇ. ಎಸ್‍ಐಟಿ ತನಿಖೆಗೆ ಆದೇಶವಾಗಿದ್ದು, ಆದಷ್ಟು ಬೇಗ ತನಿಖಾ ತಂಡವನ್ನು ಸಿಎಂ ಕುಮಾರಸ್ವಾಮಿ ಅವರು ರಚನೆ ಮಾಡುತ್ತಾರೆ ಎದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬಿಜೆಪಿಯವರ ನೇತೃತ್ವದಲ್ಲೇ ತನಿಖೆ ಮಾಡಿಸೋಣ: ಬಿಎಸ್‍ವೈಗೆ ಎಚ್‍ಡಿಕೆ ಟಾಂಗ್

    ಬಿಜೆಪಿಯವರ ನೇತೃತ್ವದಲ್ಲೇ ತನಿಖೆ ಮಾಡಿಸೋಣ: ಬಿಎಸ್‍ವೈಗೆ ಎಚ್‍ಡಿಕೆ ಟಾಂಗ್

    ಬೆಂಗಳೂರು: ಆಪರೇಷನ್ ಆಡಿಯೋ ತನಿಖೆಯನ್ನು ಬಿಜೆಪಿಯವರ ನೇತೃತ್ವದಲ್ಲೇ ಮಾಡಿಸೋಣ ಎಂದು ಸಿಎಂ ಕುಮಾರಸ್ವಾಮಿ ಅವರು, ನಗುತ್ತಲೇ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

    ಭೋಜನ ವಿರಾಮ ಮುಗಿಸಿಕೊಂಡು ಕಲಾಪಕ್ಕೆ ತೆರಳುವ ಮುನ್ನ ಮಾತನಾಡಿದ ಅವರು, ಎಸ್‍ಐಟಿಯಿಂದ ಆಪರೇಷನ್ ಆಡಿಯೋ ವಿಚಾರಣೆ ಬೇಡವೆಂದು ಬಿಜೆಪಿಯವರು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಸೂಕ್ತ ರೀತಿಯ ತನಿಖೆ ಮಾಡಿಸೋಣ ಬಿಡಿ ಎಂದು ವ್ಯಂಗ್ಯವಾಡಿದರು. ಇದನ್ನು ಓದು: ಆಪರೇಷನ್ ಆಡಿಯೋ ಪ್ರಕರಣ – ಎಸ್‍ಐಟಿ ತನಿಖೆ ವಹಿಸಿಕೊಂಡರೆ ತನಿಖೆ ಹೇಗೆ ನಡೆಯುತ್ತೆ?

    ಈ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಿಗೆ ಖೆಡ್ಡಾ ತೋಡಲು ಸಿಎಂ ಕುಮಾರಸ್ವಾಮಿ ಭಾರೀ ಸಿದ್ಧತೆ ನಡೆಸುತ್ತಿದ್ದಾರೆ. ಮತ್ತೆ ಆಪರೇಷನ್ ಕಮಲಕ್ಕೆ ಕೈ ಹಾಕದಂತೆ ಕಟ್ಟಿ ಹಾಕಲು ಇದೇ ಸರಿಯಾದ ಸಮಯ ಎಂದು ಮೈತ್ರಿ ನಾಯಕರು ಪ್ಲಾನ್ ಮಾಡಿದ್ದಾರೆ. ಹೀಗಾಗಿ ಆಪರೇಷನ್ ಆಡಿಯೋ ಪ್ರಕರಣದ ತನಿಖೆಯನ್ನು ಎಸ್‍ಐಟಿಗೆ ಒಪ್ಪಿಸಲು ದೋಸ್ತಿ ಸರ್ಕಾರ ಮುಂದಾಗಿದೆ ಎನ್ನುವುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಆಡಳಿತ ಪಕ್ಷವನ್ನೇ ಶೇಮ್.. ಶೇಮ್… ಎಂದು ಟೀಕಿಸಿದ ಬಿಜೆಪಿ

    ಆಡಳಿತ ಪಕ್ಷವನ್ನೇ ಶೇಮ್.. ಶೇಮ್… ಎಂದು ಟೀಕಿಸಿದ ಬಿಜೆಪಿ

    ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ಆಡಳಿತ ಪಕ್ಷದ ಸದಸ್ಯರಿಗೆ ಬಿಜೆಪಿ ನಾಯಕರು ಶೇಮ್ ಶೇಮ್ ಎಂದು ವ್ಯಂಗ್ಯವಾಡಿದ ಪ್ರಸಂಗ ವಿಧಾನ ಪರಿಷತ್ ಕಲಾದಪಲ್ಲಿ ನಡೆಯಿತು.

    ಆಪರೇಷನ್ ಆಡಿಯೋ ಪ್ರಕರಣ ವಿಧಾನ ಪರಿಷತ್ ಕಲಾಪದಲ್ಲಿಯೂ ಭಾರೀ ಚರ್ಚೆ ಹಾಗೂ ಪ್ರತಿಭಟನೆಗೆ ಕಾರಣವಾಯಿತು. ಇಂದು ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರು ಭಿತ್ತಿ ಪತ್ರ ಪ್ರದರ್ಶನ ಮಾಡಿದರು. ಇದನ್ನು ಖಂಡಿಸಿ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು, ಆಡಳಿತ ಪಕ್ಷಕ್ಕೆ ಮಾನ ಮರ್ಯಾದೆ ಇಲ್ಲ ಎಂದು ಕಿಡಿಕಾರಿದರು.

    ವಿಧಾನ ಪರಿಷತ್ ಸಭಾಪತಿ ಪ್ರತಾಪ್‍ಚಂದ್ರ ಶೆಟ್ಟಿ ಅವರು ಆಪರೇಷನ್ ಆಡಿಯೋ ವಿಚಾರ ಹಾಗೂ ಪ್ರತಿಭಟನೆಯನ್ನು ಕೈಬಿಡುವಂತೆ ತಿಳಿ ಹೇಳಿದರು. ಆದರೂ ಬಿಜೆಪಿ ಹಾಗೂ ಮೈತ್ರಿ ಸರ್ಕಾರದ ಮಧ್ಯೆ ವಾಗ್ದಾಳಿ ನಡೆದೇ ಇತ್ತು. ಹೀಗಾಗಿ 5 ನಿಮಿಷಗಳಂತೆ ಎರಡು ಬಾರಿ ಅಧಿವೇಶನ ಮುಂದಕ್ಕೂಡಿದರೂ ಸದಸ್ಯರು ಪರಸ್ಪರ ವಾಗ್ದಾಳಿ ಮುಂದುವರಿಸಿದ್ದರು.

    ಸಿಎಂ ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದರೆ ಎಲ್ಲವೂ ಸರಿ ಹೋಗುತ್ತೆ ಎಂದು ಕೋಟಾ ಶ್ರೀನಿವಾಸ ಪೂಜಾರಿ ವ್ಯಂಗ್ಯವಾಡಿದರು. ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿಗಳು, ಆಪರೇಷನ್ ಆಡಿಯೋ ಬಗ್ಗೆ ನೀವು ನೊಟೀಸ್ ಕೊಟ್ಟಿಲ್ಲ. ಹೀಗಾಗಿ ಚರ್ಚೆಗೆ ಅವಕಾಶ ಇಲ್ಲ ಎಂದು ಆಡಳಿತ ಪಕ್ಷದ ಸದಸ್ಯರಿಗೆ ಜೋರು ಧ್ವನಿಯಲ್ಲಿ ಗದರಿದರು.

    ಸಭಾಪತಿ ಗದರಿಸುತ್ತಿದ್ದಂತೆ ಕೆಲ ಕಾಂಗ್ರೆಸ್ ಸದಸ್ಯರು ಚರ್ಚೆಗೆ ಅವಕಾಶ ಕೊಡುವಂತೆ ಮನವಿ ಮಾಡಿಕೊಂಡರು. ಆದರೆ ಸಭಾಪತಿಗಳು ಮನವಿಯನ್ನು ತಳ್ಳಿ ಹಾಕಿದರು. ಇದನ್ನು ವಿರೋಧಿಸಿ ಆಡಳಿತ ಪಕ್ಷದ ಸದಸ್ಯರು ಧರಣಿ ಆರಂಭಿಸಿದರು. ಈ ವೇಳೆ ಬಿಜೆಪಿ ನಾಯಕರು ಶೇಮ್ ಶೇಮ್ ಎಂದು ವ್ಯಂಗ್ಯವಾಡಿದರು.

    ಆಡಳಿತ ಪಕ್ಷದ ಧರಣಿ ಹಾಗೂ ಬಿಜೆಪಿಯ ವಾಗ್ದಾಳಿಯಿಂದಾಗಿ ಸಭಾಪತಿಗಳು ಒಂದು ಗಂಟೆ ಕಲಾಪ ಮುಂದೂಡಿದರು. ಮತ್ತೆ ಕಲಾಪ ಆರಂಭವಾಗಿದ್ದರೂ ಆಡಳಿತ ಪಕ್ಷದ ಸದಸ್ಯರು ಧರಣಿ ಮುಂದುವರಿಸಿದರು. ಇದರಿಂದಾಗಿ ಬಿಜೆಪಿಯ ಸದಸ್ಯರು ಸಭಾತ್ಯಾಗ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲೋಕಸಭೆಯಲ್ಲೂ ಆಪರೇಷನ್ ಆಡಿಯೋ ಬಿಸಿಬಿಸಿ ಚರ್ಚೆ

    ಲೋಕಸಭೆಯಲ್ಲೂ ಆಪರೇಷನ್ ಆಡಿಯೋ ಬಿಸಿಬಿಸಿ ಚರ್ಚೆ

    – ಬಿಜೆಪಿ ವಿರುದ್ಧ ಚಾಟಿ ಬೀಸಿದ ಮಲ್ಲಿಕಾರ್ಜುನ ಖರ್ಗೆ, ಎಚ್‍ಡಿಡಿ

    ನವದೆಹಲಿ: ಆಪರೇಷನ್ ಆಡಿಯೋ ವಿಚಾರ ಲೋಕಸಭಾ ಕಲಾಪದಲ್ಲಿಯೂ ಭಾರೀ ಚರ್ಚೆಯಾಗಿದ್ದು, ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

    ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶಾಸಕರನ್ನು ಖರೀದಿ ಮಾಡಲು ಯತ್ನಿಸಿದ ಆಡಿಯೋ ಬಿಡುಗಡೆಯಾಗಿದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿಗೆ ಆಮಿಷ ಒಡ್ಡಿ ರಾಜೀನಾಮೆ ಕೊಡಿಸುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ನನ್ನದೇ ಲೋಕಸಭೆ ಕ್ಷೇತ್ರದ ಗುರುಮಿಠಕಲ್ ಶಾಸಕರಿಗೆ ಆಮಿಷ ಒಡ್ಡಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ಅವರು ಅಧಿವೇಶನಲ್ಲಿ ಆರೋಪಿಸಿದರು.

    ಶಾಸಕ ನಾಗನಗೌಡ ಅವರ ಮಗ ಶರಣಗೌಡ ಮೂಲಕ ಕುದುರೆ ವ್ಯಾಪಾರಕ್ಕೆ ಬಿಜೆಪಿ ನಾಯಕರು ಮುಂದಾಗಿದ್ದಾರೆ. ಇದಕ್ಕೆ ಪೂರಕ ಆಡಿಯೋವನ್ನು ಸಿಎಂ ಕುಮಾರಸ್ವಾಮಿ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಆಡಿಯೋದಲ್ಲಿ ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾಗಿಯೂ ಹೇಳಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಅವರಿಗೆ 50 ಕೋಟಿ ರೂ. ನೀಡುವ ಬಗ್ಗೆ ಆಡಿಯೋದಲ್ಲಿ ಉಲ್ಲೇಖವಿದೆ ಎಂದು ಮಲ್ಲಿಕಾರ್ಜುನ ಖರ್ಗೆ ದೂರಿದರು.

    ಕಾನೂನು ತೊಡಕು ಉಂಟಾದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರನ್ನು ನಿಭಾಯಿಸುತ್ತಾರೆ. ಪಕ್ಷಕ್ಕೆ ಬಂದಲ್ಲಿ ಸಚಿವ ಸ್ಥಾನ ಮತ್ತು ಹಣ ನೀಡುತ್ತೇವೆ ಎನ್ನುವ ಅಂಶಗಳು ಆಡಿಯೋದಲ್ಲಿದೆ ಎಂದು ಕಿಡಿಕಾರಿದರು.

    ಈ ವೇಳೆ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ಆಪರೇಷನ್ ಮಾಡುವುದನ್ನು ಮೊದಲು ಶುರು ಮಾಡಿದ್ದೆ ಬಿಜೆಪಿಯವರು. 2009ರಲ್ಲಿ ಬಿಜೆಪಿಯವರು ಶಾಸಕರನ್ನು ಖರೀದಿ ಮಾಡಿದರು. ಮತ್ತೆ ಆ ಕೆಲಸವನ್ನು ಆರಂಭಿಸಿದ್ದಾರೆ. ಶಾಸಕರಿಗೆ ಹಣ ಮತ್ತು ಅಧಿಕಾರದ ಆಮಿಷ ಒಡಲಾಗುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.

    ಕಲಾಪಕ್ಕೂ ಮುನ್ನ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಅನೇಕ ನಾಯಕರು ಸಂಸತ್ ಆವರಣದಲ್ಲಿ ಪ್ರತಿಭಟನೆ ನಡೆಸಿದರು. ಆಪರೇಷನ್ ಕಮಲ ಸಂವಿಧಾನದ ಸಾವು, ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಮಾರಾಟವಾಗುತ್ತಿದೆ. ಶಾಸಕರನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದು ಪ್ರತಿಭಟನಾನಿರತರು ಘೋಷಣೆ ಕೂಗಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv