Tag: ಆನೆಬಲ

  • ‘ಆನೆಬಲ’ಕ್ಕೆ ಸಿಕ್ತು ಕಾಲೇಜು ವಿದ್ಯಾರ್ಥಿಗಳ ಬಲ!

    ‘ಆನೆಬಲ’ಕ್ಕೆ ಸಿಕ್ತು ಕಾಲೇಜು ವಿದ್ಯಾರ್ಥಿಗಳ ಬಲ!

    ಮಂಡ್ಯ, ಅಲ್ಲಿನ ಪರಿಸರ, ಅದರ ಸೌಂದರ್ಯ, ಮಾತು, ಜನ, ಬದುಕಿನ ಶೈಲಿ ಎಲ್ಲವೂ ‘ಆನೆಬಲ’ ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ರೂಪುಗೊಂಡಿದೆ. ರಾಗಿಮುದ್ದೆ ಸ್ಪರ್ಧೆ, ಸ್ಪರ್ಧಿಗಳು, ಅದರ ಸುತ್ತ ಒಂದಷ್ಟು ಕ್ಯಾರೆಕ್ಟರುಗಳು, ಇವುಗಳ ಜೊತೆಗೆ ತೆರೆದುಕೊಳ್ಳುವ ‘ಆನೆಬಲ’ ಸಿನಿಮಾ ಈಗಾಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಸಿನಿಮಾದಲ್ಲಿರುವ ಗ್ರಾಮೀಣ ಸೊಗಡಿನ ಕಥೆಗೆ ಜನ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ ವಿದ್ಯಾರ್ಥಿಗಳು ಕೂಡ ಸಿನಿಮಾವನ್ನು ನೋಡಿ ಕೊಂಡಾಡಿದ್ದಾರೆ.

    ಸಿನಿಮಾಗಳಿಗೆ ಪ್ರಮೋಷನ್ ತುಂಬಾ ಮುಖ್ಯವಾಗುತ್ತೆ. ಒಂದು ಸಿನಿಮಾ ರಿಲೀಸ್ ಆಗುವುದಕ್ಕೂ ಮುನ್ನ ಅದರ ಜವಾಬ್ದಾರಿ ಚಿತ್ರತಂಡದ ಮೇಲಿರುತ್ತೆ. ನಂತರ ಆ ಸಿನಿಮಾ ರಿಲೀಸ್ ಆಗಿ, ಕಥೆ ಪ್ರೇಕ್ಷಕರಿಗೆ ಇಷ್ಟವಾದ್ರೆ ಪ್ರಮೋಷನ್ ಅಗತ್ಯವೇ ಇರುವುದಿಲ್ಲ. ಯಾಕಂದ್ರೆ ನಮ್ಮ ಕನ್ನಡಿಗರು ಯಾವತ್ತಿಗೂ ಉತ್ತಮವಾದ ಸಿನಿಮಾವನ್ನ ಕೈಬಿಟ್ಟ ಉದಾಹರಣೆಯೇ ಇಲ್ಲ. ಒಬ್ಬ ನೋಡಿದ ಸಿನಿಮಾ ಕಥೆಯನ್ನ ಹತ್ತು ಜನಕ್ಕೆ ಹಂಚಿ ಅವರು ಕೂಡ ಆ ಸಿನಿಮಾವನ್ನು ನೋಡುವಂತೆ ಮಾಡುವುದು ನಮ್ಮ ಕನ್ನಡಿಗರ ಗುಣ. ಇದೀಗ ಅಂತದ್ದೇ ಒಂದು ಸನ್ನಿವೇಶ ಮುಂದುವರೆದಿದೆ. ಅದು ‘ಆನೆಬಲ’ ಸಿನಿಮಾಗೆ. ಹೌದು ವಿದ್ಯಾರ್ಥಿಗಳು ಈ ಸಿನಿಮಾವನ್ನು ನೋಡಿ, ಪ್ರಚಾರ ಕೂಡ ಆರಂಭಿಸಿದ್ದಾರೆ. ಎಲ್ಲಿ ಅಂತೀರಾ..? ಮುಂದೆ ಓದಿ.

    ನಾಗಮಂಗಲ ಸೇರಿದಂತೆ ಅನೇಕ ಕಾಲೇಜುಗಳಲ್ಲಿ ಈ ರೀತಿ ವಿದ್ಯಾರ್ಥಿಗಳ ಸಪೋರ್ಟ್ ಸಿನಿಮಾಗೆ ಸಿಕ್ಕಿದೆ. ತಾವೂ ನೋಡಿದ್ದಲ್ಲದೇ, ಸ್ನೇಹಿತರಿಗೂ ಈ ಸಿನಿಮಾ ನೋಡಿ, ಇಲ್ಲಂದ್ರೆ ಒಂದೊಳ್ಳೆ ಕನ್ನಡ ಸಿನಿಮಾವನ್ನು ಮಿಸ್ ಮಾಡಿಕೊಳ್ತೀರಾ ಅಂತ ಸಲಹೆ ನೀಡುತ್ತಿದ್ದಾರೆ. ಈ ಸಿನೆಮಾದಲ್ಲಿರುವ ಹಾಡು ಮತ್ತು ಕಾಮಿಡಿಗೆ ಫಿದಾ ಆಗಿರುವ ವಿದ್ಯಾರ್ಥಿಗಳು ವಾಲಂಟರಿಯಾಗಿ ಸಿನೆಮಾ ಪ್ರಮೋಷನ್ ಮಾಡುತ್ತಿದ್ದಾರೆ. ಇದರಿಂದ ಚಿತ್ರತಂಡಕ್ಕೆ ಮತ್ತಷ್ಟು ಹೊಸ ಹುರುಪು ಸಿಕ್ಕಂತಾಗಿದೆ.

    ಪದವಿ ತರಗತಿಯ ಪರೀಕ್ಷೆಗಳು ಇನ್ನೂ ಎರಡು ತಿಂಗಳಿರುವ ಕಾರಣ ವಿದ್ಯಾರ್ಥಿಗಳು ‘ಆನೆಬಲ’ ಸಿನೆಮಾ ನೋಡಿ ಮೆಚ್ಚಿಕೊಂಡಿದ್ದಾರೆ. ತಮ್ಮ ಸಹಪಾಠಿಗಳಿಗೆ, ಸಿಕ್ಕವರಿಗೆಲ್ಲ ‘ಆನೆಬಲ’ ಸಿನಿಮಾ ನೋಡಲು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳ ಈ ಪ್ರೀತಿಗೆ ಚಿತ್ರತಂಡ ಕೃತಜ್ಞತೆ ಸಲ್ಲಿಸಿದ್ದು, ಅವರ ಪ್ರೀತಿ ಸಹಕಾರಕ್ಕೆ ಅಪಾರ ಸಂತಸ ವ್ಯಕ್ತಪಡಿಸಿದೆ.

  • ರೆಗ್ಯೂಲರ್ ಮೂವಿ ಅಲ್ಲ ‘ಆನೆಬಲ’

    ರೆಗ್ಯೂಲರ್ ಮೂವಿ ಅಲ್ಲ ‘ಆನೆಬಲ’

    ಸಿದ್ಧ ಸೂತ್ರವ ಬಿಟ್ಟು ಮಾಡಿದ ಆನೆಬಲ ಈ ವರ್ಷಗಳನ್ನ ಬಂದಿರುವ ಕಲ್ಟ್ ಚಿತ್ರ. ಯಾವುದೇ ಸಿನಿಮಾ ಆಗ್ಲಿ ಕಂಪ್ಲೀಟ್ ಸಿನಿಮಾ ಮುಗಿಯುವವರೆಗೂ ಎಲ್ಲಿಯೂ ಬೋರ್ ಆಗದಂತೆ ನೋಡಿಕೊಂಡರೆ ಪ್ರೇಕ್ಷಕನಿಗೆ ಬಹಳ ಹತ್ತಿರವಾಗಿಬಿಡುತ್ತೆ. ಅದೇ ಸಾಲಿಗೆ ಸೇರಿರುವಂತ ಸಿನಿಮಾ ಅಂದ್ರೆ ಅದು ‘ಆನೆ ಬಲ’. ಸಿನಿಮಾ ಕಂಪ್ಲಿಟ್ ಆಗುವವರೆಗೂ ಬಹಳ ಕ್ಯೂರಿಯಾಸಿಟಿ ಮತ್ತು ಇಂಟ್ರೆಸ್ಟ್ ಕ್ರಿಯೇಟ್ ಮಾಡೋ ಶಕ್ತಿಯನ್ನ ಆನೆಬಲ ಸಿನಿಮಾ ಹೊಂದಿದೆ.

    ಇದೊಂದು ವಿಭಿನ್ನ ಕಥೆಯನ್ನ ಹೊಂದಿರುವ ಸಿನಿಮಾ. ಊರಿನ ಬಗ್ಗೆ ಅಪಾರ ಗೌರವ ಹೊಂದಿರುವ ಯುವಕರ ತಂಡದ ಸಿನಿಮಾ. ಕಾಮಿಡಿ ಜೊತೆಯಲ್ಲಿ ಊರಿನ ಹೆಸರನ್ನು ಉಳಿಸಲು ಸ್ನೇಹಿತರನ್ನ ಬಿಡದೇ ಜೊತೆಯಲ್ಲೇ ಸಾಗುತ್ತಾನೆ. ಸಿನಿಮಾದಲ್ಲಿ ದೋಷಗಳು ಇಲ್ಲವೆಂದೆನಿಲ್ಲ. ಆದರೆ ಅದಕ್ಕೂ ಮೀರಿ ಒಳ್ಳೆಯ ಅಂಶಗಳೇ ಹೆಚ್ಚಾಗಿ ಚಿತ್ರದುದ್ದಕ್ಕೂ ಸಿಗುತ್ತವೆ.

    ಸಿನಿಮಾದಲ್ಲಿ ಕೇಳ ಸಿಗುವ ‘ನಾವು ಚೆಂಗ್ಲು ಹುಡುಗರೇ ಇರಬಹುದು ಆದ್ರೆ ಊರಿನ ವಿಷಯಕ್ಕೆ ಬಂದರೇ ನಾವು ಒಳ್ಳೆಯವರೇ’ ಎಂಬ ಡೈಲಾಗ್ ಇಡೀ ಸಿನಿಮಾದ ಕಥೆಯನ್ನು ಸಾರುತ್ತಿದೆ. ಹಾಗೇ ಸಿನಿಮಾದುದ್ದಕ್ಕೂ ಹೆಣ್ಣಿನ ಮಹತ್ವವನ್ನು ಸಾರಲಾಗಿದೆ. ಜಿಲ್ಲಾ ಮಟ್ಟದ ರಾಗಿ ಮುದ್ದೆ ಸ್ವರ್ಧೆ ಮಾಡಬೇಕೆನ್ನುವ ಶಿವನ ಮಾತಿನಿಂದ ಇಡೀ ಸಿನೆಮಾ ಬೇರೊಂದು ತಿರುವು ಪಡೆದುಕೊಂಡು ಚಿತ್ರಕ್ಕೆ ಒಂದು ಶಕ್ತಿಯನ್ನ ತುಂಬುತ್ತದೆ.

    ಸಿನಿಮಾದಲ್ಲಿ ಪ್ರೀತಿ ವಿಚಾರವನ್ನು ಎಷ್ಟು ಬೇಕು ಅಷ್ಟನ್ನ ಹೇಳಿರುವ ನಿರ್ದೇಶಕ ರಾಜು, ಚಿತ್ರದುದ್ದಕ್ಕೂ ಹಳ್ಳಿಯ ಹುಡುಗರಿಗೆ ಇರಬೇಕಾದ ಜವಾಬ್ದಾರಿಯನ್ನ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಗ್ರಾಮೀಣ ಬದುಕಿನ ಒಟ್ಟು ಹೂರಣವನ್ನ ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ. ಅದಕ್ಕೆ ತಕ್ಕಂತೆ ಬೆಟ್ಟೆಗೌಡ ಅದ್ಧೂರಿಯಾಗಿ ದೃಶ್ಯ ಸೆರೆ ಹಿಡಿದಿದ್ದಾರೆ. ಪೂರ್ಣ ಚಂದ್ರ ತೇಜಸ್ವಿ ಅವರ ಸಂಗೀತ ಮತ್ತು ಹಿನ್ನೆಲೆ ಸಂಗೀತ ಸೂಪರ್ ಆಗಿದ್ದು ಹಾಡುಗಳು ಇಂಪಾಗಿವೆ. ಸಾಗರ್ ಸೇರಿದಂತೆ ಬಹುತೇಕ ನಟರು ಸಹಜವಾಗಿ ಅಭಿನಯಿಸಿದ್ದಾರೆ, ಅದು ಇಡೀ ಸಿನೆಮಾದ ಪ್ಲಸ್ ಪಾಯಿಂಟ್. ಸಂಭಾಷಣೆ ಚುರುಕಾಗಿದೆ ಹೆಚ್ಚಾಗಿ ಸಂದರ್ಭೋಚಿತವಾಗಿವೆ. ಆನೆಬಲ ಎಲ್ಲರೂ ಕುಳಿತು ನೋಡಬಹುದಾದ ಚಿತ್ರ.

  • ಹೊಸತು ಬೇಕು, ಹಳತು ಇರಲಿ- ಎರಡು ಬೆರತಾಗಲೇ ಹಳ್ಳಿಗಳಿಗೆ ಆನೆಬಲ

    ಹೊಸತು ಬೇಕು, ಹಳತು ಇರಲಿ- ಎರಡು ಬೆರತಾಗಲೇ ಹಳ್ಳಿಗಳಿಗೆ ಆನೆಬಲ

    ನೆಬಲ ಸಂಪೂರ್ಣ ಚಿತ್ರ ಹಳ್ಳಿ ಹಿನ್ನೆಲೆಯಲ್ಲೇ ನಡೆಯುತ್ತೆ. ಹಳ್ಳಿಯ ಆಚರಣೆ, ಸಂಪ್ರದಾಯ, ಕಟ್ಟುಪಾಡು, ಹಬ್ಬ, ಹೀಗೆ ಎಲ್ಲವನ್ನು ತೋರಿಸುತ್ತ ಸಂದೇಶವನ್ನು ನೀಡಿದ್ದಾರೆ ನಿರ್ದೇಶಕರು. ಮಹಾತ್ಮ ಗಾಂಧೀಜಿ ಹೇಳಿದ ಹಳ್ಳಿಗಳೇ ದೇಶದ ಅಭಿವೃದ್ಧಿಯ ಜೀವಾಳ ಅನ್ನೋದನ್ನ ಮತ್ತೆ ಮತ್ತೆ ನೆನಪಿಸಿದ್ದಾರೆ. ತ್ರಂತ್ರಜ್ಞಾನದ ಜೊತೆ ಹಳ್ಳಿಯ ಆಚರಣೆಗಳು, ಸಂಪ್ರದಾಯಗಳು ಕಳೆದು ಹೋಗ್ಬಾರ್ದು ಎರಡು ಒಟ್ಟೊಟ್ಟಿಗೆ ಸಾಗಬೇಕು ಎಂದು ಎಚ್ಚರಿಸುತ್ತಾ ಭರಪೂರ ಮನರಂಜನೆಯನ್ನು ನೀಡುತ್ತೆ.

    ಮಂಡ್ಯದಲ್ಲಿ ಹಿಂದಿನಿಂದಲೂ ಆಚರಣೆಯಲ್ಲಿರುವ ಮುದ್ದೆ ತಿನ್ನುವ ಸ್ಪರ್ಧೆಯೇ ಈ ಚಿತ್ರದ ಕಥಾವಸ್ತು. ಮುದ್ದೆ ತಿನ್ನುವ ಸ್ಪರ್ಧೆಯ ಸುತ್ತವೇ ಇಡೀ ಚಿತ್ರ ಸುತ್ತುತ್ತದೆ. ಎಲ್ಲಾ ಹಳ್ಳಿಗಳಲ್ಲೂ ಇರುವಂತೆ ಈ ಹಳ್ಳಿಯ ಬಗ್ಗೆ ಸದಾ ಆಲೋಚಿಸುವ ಶಿವು ಎಂಬ ಹುಡುಗ ಈ ಚಿತ್ರದ ಕಥಾ ನಾಯಕ. ಯಾವಾಗಲು ಸಕಾರಾತ್ಮಕ ಯೋಚನೆ ಜೊತೆಗೆ ಜಾಲಿಯಾಗಿರುವ ಹುಡುಗ ಶಿವು. ಹಳ್ಳಿಯ ಬಗ್ಗೆ, ಜನ್ರ ಬಗ್ಗೆ ಅಪಾರ ಅಭಿಮಾನ ಇಟ್ಟುಕೊಂಡಿರುತ್ತಾನೆ. ಜೊತೆಗೆ ಆತನ ಪ್ರೇಮ ಪುರಾಣವೂ ಚಿತ್ರದಲ್ಲಿ ಅಷ್ಟೇ ಇಂಟ್ರಸ್ಟಿಂಗ್ ಆಗಿದೆ. ಕೃಷಿಯೇ ಉಸಿರಾಗಿಸಿಕೊಂಡಿರುವ ಹಳ್ಳಿ ಜನ್ರು ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಬೇಕು ಆಗ ಜನ್ರ ಬದುಕು ಹಸನಾಗುತ್ತೆ, ಸುಧಾರಿಸುತ್ತೆ ಅನ್ನೋದು ಶಿವು ಆಲೋಚನೆ ಒಂದು ಕಡೆ ಆದ್ರೆ, ಹಿಂದಿನಿಂದ ನಡೆದುಬಂದ ಮುದ್ದೆ ತಿನ್ನುವ ಸ್ಪರ್ಧೆ ಇನ್ನೊಂದು ಕಡೆ. ಶಿವು ಕನಸು ಈಡೇರುತ್ತಾ? ಮುದ್ದೆ ತಿನ್ನುವ ಸ್ಪರ್ಧೆ ಹೇಗಿತ್ತು ಅನ್ನೋದಕ್ಕೆ ಆನೆಬಲ ಚಿತ್ರ ನೋಡಿಯೇ ತಿಳಿಯಬೇಕು.

    ನೈಜತೆಗೆ ಹತ್ತಿರವಾಗಿ ಸಾಗೋ ಆನೆಬಲ ಚಿತ್ರ ನೋಡುಗರನ್ನು ಸೆಳೆಯುತ್ತೆ. ಮಂಡ್ಯ ಆಡು ಭಾಷೆಯ ಸೊಗಡನ್ನು ತೆರೆ ಮೇಲೆ ಸವಿಯೋ ಆನಂದ ಚಿತ್ರದ ಮೇಲೆ ಇನ್ನಷ್ಟು ಸೆಳೆತ ಉಂಟು ಮಾಡುತ್ತೆ. ಸಿಲ್ವರ್ ಸ್ಕ್ರೀನ್ ಮೇಲೆ ಆಡಂಬರ ಅಬ್ಬರ ನೋಡಿ ಬೋರಾಗಿದ್ದ ಪ್ರೇಕ್ಷಕನಿಗೆ ಹಳ್ಳಿ ಸೊಬಗು, ಸೊಗಡು ಸವಿಯೋ ಅವಕಾಶವನ್ನು ಆನೆಬಲ ಚಿತ್ರ ತಂದಿದೆ. ನಿರ್ದೇಶಕರ ಈ ಪ್ರಯತ್ನಕ್ಕೆ ನಾವು ಶಬ್ಬಾಶ್ ಹೇಳಲೇಬೇಕು. ಒಟ್ಟಿನಲ್ಲಿ ಮುದ್ದೆ ಉಂಡಷ್ಟೇ ಖುಷಿಯನ್ನು ಆನೆಬಲ ಚಿತ್ರ ನೀಡುತ್ತೆ.

    ಚಿತ್ರ: ಆನೆಬಲ
    ನಿರ್ದೇಶನ: ಸೂನಗಹಳ್ಳಿ ರಾಜು
    ನಿರ್ಮಾಪಕ: ಎ.ವಿ.ವೇಣುಗೋಪಾಲ್ ಅಡಕಮಾರನಹಳ್ಳಿ
    ಸಂಗೀತ ನಿರ್ದೇಶನ: ಪೂರ್ಣಚಂದ್ರ ತೇಜಸ್ವಿ
    ಛಾಯಾಗ್ರಾಹಕ: ಜಿ.ಟಿ. ಬೆಟ್ಟೇಗೌಡ
    ತಾರಾಬಳಗ: ಸಾಗರ್, ರಕ್ಷಿತ, ಇತರರು

    ರೇಟಿಂಗ್-3.5/4

  • ಬಹುನಿರೀಕ್ಷಿತ ‘ಆನೆಬಲ’ ಚಿತ್ರದ ಟ್ರೈಲರ್ ಇಂದು ರಿಲೀಸ್

    ಬಹುನಿರೀಕ್ಷಿತ ‘ಆನೆಬಲ’ ಚಿತ್ರದ ಟ್ರೈಲರ್ ಇಂದು ರಿಲೀಸ್

    ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ದುಡಿದ ಅನುಭವ ಇರೋ ನಿರ್ದೇಶಕ ಸೂನಗಹಳ್ಳಿ ರಾಜು ಡೈರೆಕ್ಷನ್ ಅಖಾಡಕ್ಕೆ ಇಳಿದಿದ್ದಾರೆ. ಮೊದಲ ಚಿತ್ರದಲ್ಲಿ ಹೊಸ ಪ್ರಯೋಗಕ್ಕೆ ಕೈ ಹಾಕಿರೋ ಇವರು ಗ್ರಾಮೀಣ ಭಾಗದ ಕಥಾನಕವನ್ನು ತಮ್ಮ ಚಿತ್ರದ ಕಥೆಯನ್ನಾಗಿಸಿಕೊಂಡಿದ್ದಾರೆ. ಚಿತ್ರಕ್ಕೆ ‘ಆನೆಬಲ’ ಎಂಬ ಟೈಟಲ್ ಇಟ್ಟು ಕ್ಯೂರಿಯಾಸಿಟಿ ಬಿಲ್ಡ್ ಮಾಡಿರೋ ಸೂನಗಹಳ್ಳಿ ರಾಜು ಇಂದು ತಮ್ಮ ಆನೆಬಲ ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಿದ್ದಾರೆ.

    ‘ಆನೆಬಲ’ ಚಿತ್ರದಲ್ಲಿ ಹೊಸತಂಡವನ್ನು ಕಟ್ಟಿಕೊಂಡು ಡೈರೆಕ್ಟರ್ ಕ್ಯಾಪ್ ತೊಟ್ಟಿರೋ ಸೂನಗಹಳ್ಳಿ ರಾಜು ಪ್ರೇಕ್ಷಕರಿಗೆ ಮಂಡ್ಯ ಸೊಗಡನ್ನು ಉಣಬಡಿಸಲಿದ್ದಾರೆ. ಮಂಡ್ಯ ಭಾಗದ ಜಾನಪದ ಆಚರಣೆಯನ್ನೇ ಇಟ್ಟುಕೊಂಡು ಕಥೆ, ಚಿತ್ರಕಥೆ ಹೆಣೆದು ಕೇವಲ ಹೊಸ ಕಲಾವಿದರನ್ನೇ ಹಾಕಿಕೊಂಡು ಸಿನಿಮಾ ಮಾಡಿ ಭೇಷ್ ಎನಿಸಿಕೊಂಡಿದ್ದಾರೆ. ಚಿತ್ರದ ಬಗ್ಗೆ ಎಲ್ಲೂ ಗುಟ್ಟು ರಟ್ಟು ಮಾಡದ ನಿರ್ದೇಶಕರು ಇಂದು ಟ್ರೈಲರ್ ರಿಲೀಸ್ ಮಾಡಲು ಮುಂದಾಗಿದ್ದಾರೆ.

    ಜನತಾ ಟಾಕೀಸ್ ಬ್ಯಾನರ್‍ನಡಿ ಆನೆಬಲ ಚಿತ್ರ ನಿರ್ಮಾಣವಾಗಿದ್ದು, ಸಾಗರ್, ರಕ್ಷಿತ ಚಿತ್ರದಲ್ಲಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜನೆ, ಕೆ.ಜೆ ಬೆಟ್ಟೇಗೌಡ ಕ್ಯಾಮೆರಾ ವರ್ಕ್ ಚಿತ್ರಕ್ಕಿದೆ. ಇಂದು ಬಿಡುಯಾಗಲಿರೋ ಚಿತ್ರದ ಟ್ರೈಲರ್ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.

  • ನಾಟಿ ಕೋಳಿ ಸಂಬಾರ್ ಜೊತೆ ರಾಗಿಮುದ್ದೆ ತಿನ್ನೋ ಸ್ಪರ್ಧೆ: ಮೀಸೆ ಹೀರೇಗೌಡ ಚಾಂಪಿಯನ್

    ನಾಟಿ ಕೋಳಿ ಸಂಬಾರ್ ಜೊತೆ ರಾಗಿಮುದ್ದೆ ತಿನ್ನೋ ಸ್ಪರ್ಧೆ: ಮೀಸೆ ಹೀರೇಗೌಡ ಚಾಂಪಿಯನ್

    ಮಂಡ್ಯ: ಸಕ್ಕರೆ ನಾಡಿನ ಗ್ರಾಮೀಣ ಸೊಗಡಿನ ಜನ ರಾಗಿ ಮುದ್ದೆಯನ್ನು ನುಂಗುವುದನ್ನು ಕ್ರೀಡೆಯಾಗಿ ಮಾರ್ಪಾಡು ಮಾಡಿಕೊಂಡಿದ್ದಾರೆ. ಅದ್ದರಿಂದ ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರಾಗಿ ಮುದ್ದೆ ನುಂಗುವ ಸ್ಪರ್ಧೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಭಾನುವಾರ ಮಂಡ್ಯ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಜನತಾ ಟಾಕೀಸ್ ಮತ್ತು ನಮ್ಮ ಹೈಕ್ಳು ತಂಡ ನೆಲದನಿ ಬಳಗ ಆಯೋಜಿಸಿದ್ದ ಜಿಲ್ಲಾ ಮಟ್ಟದ ನಾಟಿ ಕೋಳಿ ಸಾಂಬಾರ್ ನಲ್ಲಿ ರಾಗಿ ಮುದ್ದೆ ನುಂಗುವ ಸ್ಪರ್ಧೆ ಯಾವ ಕ್ರೀಡೆಗೂ ಕಡಿಮೆ ಇಲ್ಲದಂತೆ ನಡೆಯಿತು.

    ಮಂಗಲ ಗ್ರಾಮದ ಶ್ರೀ ಮಾರಮ್ಮನ ದೇವಾಲಯದ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ 62 ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಪೈಕಿ 20 ನಿಮಿಷದಲ್ಲಿ ಅತಿ ಹೆಚ್ಚು ಮುದ್ದೆ ತಿಂದವರು ವಿಜಯಶಾಲಿಗಳು ಎಂದು ತೀರ್ಪುಗಾರರು ಸಮಯ ನಿಗದಿಪಡಿಸಿದ್ದರು. ಈ ಪೈಕಿ 20 ನಿಮಿಷದಲ್ಲಿ ಶ್ರೀರಂಗಪಟ್ಟಣ ತಾಲ್ಲೂಕಿನ ಅರಕೆರೆ ಗ್ರಾಮದ ಹೀರೇಗೌಡ ಅರ್ಧ ಕೆ.ಜಿ. ತೂಕದ ಆರೂವರೆ ಮುದ್ದೆ ತಿನ್ನುವ ಮೂಲಕ ಸ್ಪರ್ಧೆಯಲ್ಲಿ ಜಯಗಳಿಸಿದರು.

    ಸ್ಪರ್ಧೆಯಲ್ಲಿ ಜಯ ಪಡೆದ ಹೀರೇಗೌಡ ಅವರಿಗೆ ಐದು ಸಾವಿರ ರೂ. ನಗದು ಬಹುಮಾನ ನೀಡಲಾಯಿತು. ಅಂದಹಾಗೇ ಪ್ರಥಮ ಬಹುಮಾನ ಪಡೆದ ಹೀರೇಗೌಡ ಅವರು ರಾಗಿ ಮುದ್ದೆ ನುಂಗುವ ಸ್ಪರ್ಧೆಯಲ್ಲಿ 9 ಬಾರಿ ಪ್ರಥಮ ಬಹುಮಾನ ಪಡೆದಿದ್ದಾರೆ. ಈ ಸ್ಪರ್ಧೆಗೆ ಸೂನಗನಹಳ್ಳಿ ರಾಜು ನಿರ್ದೇಶನದ ಆನೆಬಾಲ ಸಿನಿಮಾ ತಂಡವು ಸಹ ಈ ಸಹಯೋಗ ನೀಡಿದ್ದು, ಆ ಸಿನಿಮಾದಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ನಟನೆಗೆ ಅವಕಾಶ ಸಹ ಕೊಡಲಾಗುವುದು ಹೇಳಲಾಗಿತ್ತು. ಅದರಂತೆ ಮೊದಲ ಬಹುಮಾನ ವಿಜೇತ ಹೀರೇಗೌಡ ಆನೆಬಾಲ ಸಿನಿಮಾದಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ.

    ಇನ್ನು ಸ್ಪರ್ಧೆಯಲ್ಲಿ ಸುರೇಶ್ ಎಂಬವರು ಐದೂವರೆ ಮುದ್ದೆ ತಿಂದು ಮೂರು ಸಾವಿರ ರೂ. ನಗದು ಬಹುಮಾನ ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟರು. ನಾಲ್ಕೂವರೆ ಮುದ್ದೆ ತಿಂದ ರಾಮಮೂರ್ತಿ ಎರಡು ಸಾವಿರ ರೂ. ನಗದು ಬಹುಮಾನ ಪಡೆದು ತೃತೀಯ ಬಹುಮಾನ ಪಡೆದಿದ್ದಾರೆ. ಈ ಮೂವರು ಸೇರಿದಂತೆ ಹೆಚ್ಚು ಮುದ್ದೆ ತಿಂದ ಇನ್ನು ನಾಲ್ಕು ಮಂದಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

    ಈ ವೇಳೆ ಮಾತನಾಡಿದ ಸ್ಪರ್ಧೆ ಆಯೋಜಕರಾದ ಮಂಗಲ ಲಂಕೇಶ್, ಗ್ರಾಮೀಣ ಸೊಗಡಿನ ಕ್ರೀಡೆಗಳ ಪೈಕಿ ರಾಗಿ ಮುದ್ದೆ ತಿನ್ನುವುದು ಸಹ ಒಂದು ಕ್ರೀಡೆಯಾಗಿದ್ದು, ಇಂತಹ ಗ್ರಾಮೀಣ ಸೊಗಡಿನ ರಾಗಿ ಮುದ್ದೆ ನುಂಗುವ ಸ್ಪರ್ಧೆಯನ್ನು ಮತ್ತೆ ಮತ್ತೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

    ಎಚ್.ಡಿ.ದೇವೇಗೌಡರು ಪ್ರಧಾನಿಯಾದಾಗ ತಮ್ಮ ನೆಚ್ಚಿನ ರಾಗಿ ಮುದ್ದೆ ಸವಿಯಲು ಬೆಂಗಳೂರಿನಿಂದ ರಾಜಧಾನಿ ದೆಹಲಿಗೆ ಬಾಣಸಿಗರನ್ನು ಕರೆದು ಕೊಂಡು ಹೋಗಿದ್ದರು.