Tag: ಆನೆಗೊಂದಿ ಉತ್ಸವ

  • ಆನೆಗೊಂದಿ ಉತ್ಸವದಲ್ಲಿ ‘ನನ್ನ ಗೆಳತಿ’ ಎಂದ ಪಿಎಸ್‍ಐ

    ಆನೆಗೊಂದಿ ಉತ್ಸವದಲ್ಲಿ ‘ನನ್ನ ಗೆಳತಿ’ ಎಂದ ಪಿಎಸ್‍ಐ

    – ಶಿಳ್ಳೆ, ಸ್ಟೆಪ್ಸ್ ಹಾಕಿದ ಅಧಿಕಾರಿಗಳು

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಐತಿಹಾಸಿಕ ಕ್ಷೇತ್ರವಾಗಿರುವ ಆನೆಗೊಂದಿಯಲ್ಲಿ ಎರಡು ದಿನ ಉತ್ಸವ ನಡೆದಿದ್ದು, ನಾವು ಯಾರಿಗೂ ಕಮ್ಮಿಯಿಲ್ಲ ಎನ್ನುವಂತೆ ಪಿಎಸ್‍ಐಯೊಬ್ಬರು ‘ನನ್ನ ಗೆಳತಿ’ ಎಂದು ಹಾಡಿದ ಹಾಡು ಎಲ್ಲೆಡೆ ವೈರಲ್ ಆಗಿದೆ.

    ಆನೆಗೊಂದಿ ಉತ್ಸವದಲ್ಲಿ ಅಧಿಕಾರಿಗಳು ಮತ್ತು ಪೊಲೀಸರು ಕಳೆದ ಒಂದು ವಾರದಿಂದ ಉತ್ಸವದ ಯಶಸ್ಸಿಗಾಗಿ ಕೆಲಸ ಮಾಡಿದ್ದರು. ಆನೆಗೊಂದಿ ಉತ್ಸವದ ಶ್ರೀಕೃಷ್ಣದೇವರಾಯ ವೇದಿಕೆಯ ಮೇಲೆ ಗಂಗಾವತಿ ಗ್ರಾಮೀಣ ಠಾಣೆಯ ಪಿಎಸ್‍ಐ ದೊಡ್ಡಪ್ಪ ಅವರು ‘ನನ್ನ ಗೆಳತಿ, ನನ್ನ ಗೆಳತಿ’ ಹಾಡನ್ನು ಹಾಡಿ ಎಲ್ಲರ ಮನ ಗೆದ್ದಿದ್ದಾರೆ. ಈ ಹಾಡಿಗೆ ಗಂಗಾವತಿ ತಹಶೀಲ್ದಾರ್ ಚಂದ್ರಕಾಂತ್ ಅವರು ಶಿಳ್ಳೆ ಹೊಡೆದು, ಡ್ಯಾನ್ಸ್ ಮಾಡಿ ಪಿಎಸ್‍ಐ ಅವರಿಗೆ ಪ್ರೋತ್ಸಾಹಿಸಿದ್ದರು. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಪಿಎಸ್‍ಐ ಹಾಡಿನ ಮೋಡಿಗೆ ಎಲ್ಲರೂ ಮನಸೋತಿದ್ದಾರೆ.

    ಪಿಎಸ್‍ಐ ಹಾಡುವಾಗ ವೇದಿಕೆ ಮೇಲಿದ್ದ ಇತರ ಅಧಿಕಾರಿಗಳು ಕೂಡ ಸ್ಟೆಪ್ ಹಾಕಿದ್ದು ವಿಶೇಷವಾಗಿತ್ತು. ಅಧಿಕಾರಿಗಳ ಹಾಡಿಗೆ ನೆರೆದಿದ್ದ ಜನರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದ್ದು, ನಾವು ಕೆಲಸಕ್ಕೂ ಸೈ, ಡ್ಯಾನ್ಸ್-ಹಾಡಿಗೂ ಸೈ ಎಂದು ಅಧಿಕಾರಿಗಳು ತೋರಿಸಿಕೊಟ್ಟಿದ್ದಾರೆ.

    ಆನೆಗೊಂದಿ ಉತ್ಸವ ಎರಡು ದಿನಗಳ ಕಾಲ ನಡೆದಿದ್ದು, ಉತ್ಸವದಲ್ಲಿ ಗಾಯಕ ವಿಜಯ್‍ಪ್ರಕಾಶ್, ನಟ ಯಶ್ ಪಾಲ್ಗೊಂಡಿದ್ದರು. ಈ ಐತಿಹಾಸಿಕ ಆನೆಗೊಂದಿ ಉತ್ಸವವನ್ನು ಕೊಪ್ಪಳ ಜಿಲ್ಲಾಡಳಿತ ಯಶಸ್ವಿಯಾಗಿ ನಡೆಸಿಕೊಟ್ಟು ಮೆಚ್ಚುಗೆಗೆ ಪಾತ್ರವಾಗಿದೆ.

  • ಕೊಪ್ಪಳ ಮನೆ ಮಗಳು ಗಂಗಮ್ಮನ ಯುಗಳ ಗೀತೆಗೆ ತಲೆ ದೂಗಿದ ಜನರು

    ಕೊಪ್ಪಳ ಮನೆ ಮಗಳು ಗಂಗಮ್ಮನ ಯುಗಳ ಗೀತೆಗೆ ತಲೆ ದೂಗಿದ ಜನರು

    ಕೊಪ್ಪಳ: ಕೊಪ್ಪಳ ಮನೆ ಮಗಳು, ಗಾಯಕಿ ಗಂಗಮ್ಮ ಅವರ ಯುಗಳ ಗೀತೆಗೆ ಸಂಗೀತಾಸಕ್ತರು ತಲೆ ದೂಗಿದರು.

    ಆನೆಗೊಂದಿ ಉತ್ಸವದ ಸಮಾರೋಪ ಸಮಾರಂಭದ ಮುಖ್ಯ ವೇದಿಕೆಯಲ್ಲಿ ಗಂಗಮ್ಮ ಮತ್ತು ಗಾಯಕ ಹೇಮಂತ್ ಅವರ ಜೊತೆಯಾಗಿ ಹಾಡಿದ ಯುಗಳ ಗೀತೆ, ಕೇಳಿಸದೆ ಕಲ್ಲು ಕಲ್ಲಿನಲಿ ಹಂಪಿಯ ಗುಡಿ, ಮನೆಯನು ಬೆಳಗಿದೆ, ಬಾಳ ಬಂಗಾರ ನೀನು, ಲೋಕವೆ ಹೇಳಿದ ಮಾತಿದು ಹಾಡುಗಳನ್ನು ಹಾಡುವ ಮೂಲಕ ಕೊಪ್ಪಳ ಜನತೆಯ ಸಿನಿ ರಸಿಕರ ಮನ ತಣಿಸಿದರು. ಇವರನ್ನು ಆನೆಗೊಂದಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಅಂಜನಾ ದೇವಿ ಸನ್ಮಾನಿಸಿದರು. ಇದನ್ನೂ ಓದಿ: ಕೆರೆ ಹೂಳೆತ್ತುವ ಕೆಲಸ ಜಲಕ್ರಾಂತಿಗೆ ನಾಂದಿಯಾಗಲಿ: ಯಶ್

    ಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಇಂದು ಸಂಭ್ರಮದ ತೆರೆ ಬಿದ್ದಿದೆ. ಎರಡು ದಿನಗಳ ಕಾಲ ನಡೆದ ವಿಜಯನಗರ ಸಾಮ್ರಾಜ್ಯದ ಹೆಬ್ಬಾಗಿಲು ಆನೆಗೊಂದಿಯಲ್ಲಿ ಸಂಭ್ರಮ ಮನೆ ಮಾಡಿತ್ತು. ಸಮಾರೋಪ ಸಮಾರಂಭದ ಬಳಿಕ ನಡೆದ ವಿವಿಧ ಕಾರ್ಯಕ್ರಮಗಳು ನೆರೆದಿದ್ದ ಪ್ರೇಕ್ಷಕರಿಗೆ ಮನೋರಂಜನೆ ನೀಡಿದವು. ಇದನ್ನೂ ಓದಿ: ಆನೆಗೊಂದಿ ಉತ್ಸವದಲ್ಲಿ ರಾಕ್ ಕ್ಲೈಂಬಿಂಗ್ ಸಾಹಸ ಪ್ರದರ್ಶನ

    ಮೊಬೈಲ್ ಮಲ್ಲಪ್ಪ ಎಂದು ಖ್ಯಾತಿ ಪಡೆದ ಧಾರವಾಡದ ಹಾಸ್ಯ ಕಲಾವಿದ ಮಲ್ಲಪ್ಪ ಅವರು ಜನರಿಗೆ ಸಖತ್ ಮನರಂಜನೆ ನೀಡಿದರು. ಬೆಂಗಳೂರಿನ ಚಿತ್ರತಂಡದ ಸಂತೆ ಇಂದ ನಡೆದ ಕಾರ್ಯಕ್ರಮಗಳು ನೋಡುಗರನ್ನು ತನ್ನತ್ತ ಸೆಳೆದವು. ಕಾರ್ಯಕ್ರಮದ ಕುರಿತು ಮಾತನಾಡಿದ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಪ್ರತಿ ವರ್ಷ ಆನೆಗೊಂದಿ ಉತ್ಸವ ಆಚರಣೆ ಮಾಡುತ್ತೇವೆ ಎಂದು ಜನರಿಗೆ ಆಶ್ವಾಸನೆ ನೀಡಿದರು. ಇದನ್ನೂ ಓದಿ: ಆನೆಗೊಂದಿ ಉತ್ಸವದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ: ಸಾರ್ವಜನಿಕರಿಂದ ಹರ್ಷ

  • ಕೆರೆ ಹೂಳೆತ್ತುವ ಕೆಲಸ ಜಲಕ್ರಾಂತಿಗೆ ನಾಂದಿಯಾಗಲಿ: ಯಶ್

    ಕೆರೆ ಹೂಳೆತ್ತುವ ಕೆಲಸ ಜಲಕ್ರಾಂತಿಗೆ ನಾಂದಿಯಾಗಲಿ: ಯಶ್

    – ನನಗೂ ಕೊಪ್ಪಳ ಜಿಲ್ಲೆಗೆ ಅವಿನಾಭಾವ ಸಂಬಂಧವಿದೆ

    ಕೊಪ್ಪಳ: ಕೆರೆ ಹೂಳೆತ್ತುವ ಕೆಲಸ ಜಲಕ್ರಾಂತಿಗೆ ನಾಂದಿಯಾಗಲಿ ಎಂದು ರಾಕಿಂಗ್ ಸ್ಟಾರ್ ಯಶ್ ಕರೆ ನೀಡಿದ್ದಾರೆ.

    ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿ ಅವರು, ಕೆರೆ ಹೂಳೆತ್ತುವ ಕೆಲವನ್ನು ನಾನು ಕೊಪ್ಪಳ ಜಿಲ್ಲೆಯಲ್ಲಿ ಮಾಡಿದ್ದೇನೆ. ಇದರ ಮುಖ್ಯ ಉದ್ದೇಶ ಜಲ ಕ್ರಾಂತಿಗೆ ನಾಂದಿ ಹಾಡುವುದಾಗಿತ್ತು ಎಂದು ಹೇಳಿದರು.

    ಕಲ್ಲಿನ ಬೆಟ್ಟ ಗುಡ್ಡಗಳ ಮಧ್ಯೆ ಹಸಿರಿನಿಂದ ಕೂಡಿದ ಆನೆಗೊಂದಿಯು ವಿಭಿನ್ನವಾಗಿದೆ. ಹಾಗಾಗಿ ಮುಂದಿನ ದಿನಮಾನಗಳಲ್ಲಿ ಈ ಭಾಗದಲ್ಲಿ ಚಿತ್ರ ತೆಗೆಯುವ ಬಯಕೆ ಇದೆ. ನನಗೂ ಕೊಪ್ಪಳ ಜಿಲ್ಲೆಗೆ ಯಾವುದೋ ಒಂದು ಅವಿನಾಭಾವ ಸಂಬಂಧವಿದೆ. ನಾನು ಒಬ್ಬ ಸಾಮಾನ್ಯ ಮನುಷ್ಯ. ನನ್ನಿಂದ ಕೆರೆ ಹೂಳೆತ್ತುವ ಕೆಲಸ ಮಾಡುವುದಾದರೆ ತಮ್ಮಿಂದ ಯಾಕೆ ಸಾಧ್ಯ ಇಲ್ಲ. ನಾವು ಮನಸು ಮಾಡಿದರೆ ಏನಾದರು ಬೇಕಾದರೂ ಮಾಡಬಹುದು ಎಂದು ಜನರನ್ನು ಪ್ರೇರೆಪಿಸಿದರು.

    ನಾನು ಕೆರೆ ಹೂಳೆತ್ತುತ್ತೇನೆ ಎಂದಾಗ ಬಹಳ ಜನ ಬೇಡ ಸರ್ ಎಂದರು. ಆದರೆ ನಾನು ಮಾಡಲೇಬೇಕೆಂಬ ವಿಚಾರ ತಲೆಯಲ್ಲಿ ಬಂದಾಗ ಕೆರೆ ಹೂಳೆತ್ತುವ ಕೆಲಸ ಮಾಡಿದೆ. ಅದು ಮುಂದೆ ಅನೇಕರಿಗೆ ಸ್ಫೂರ್ತಿಯಾಯಿತು. ಎಲ್ಲಾ ಸಾರ್ವಜನಿಕ ಕೆಲಸವನ್ನು ಕೇವಲ ಸರ್ಕಾರ ಮಾಡಲಿ ಅಂತ ಕುಳಿತರೆ ವ್ಯವಸ್ಥೆ, ಸಾಮಾಜಿಕ ಕೆಲಸಗಳು ಆಗುವುದಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ಮಾಡಿದರೆ ಏನನ್ನಾದರು ಮಾಡಬಹುದು ಎಂದು ಕರೆ ನೀಡಿದರು.

    ಈ ಕಾರ್ಯಕ್ರಮದಲ್ಲಿ ನಟ ಯಶ್ ಅವರನ್ನು ಶಾಸಕ ಪರಣ್ಣ ಮುನವಳ್ಳಿ ಹಾಗೂ ಜಿಲ್ಲಾಧಿಕಾರಿಗಳು ಸನ್ಮಾನಿಸಿದರು.

  • ಆನೆಗೊಂದಿ ಉತ್ಸವದಲ್ಲಿ ರಾಕ್ ಕ್ಲೈಂಬಿಂಗ್ ಸಾಹಸ ಪ್ರದರ್ಶನ

    ಆನೆಗೊಂದಿ ಉತ್ಸವದಲ್ಲಿ ರಾಕ್ ಕ್ಲೈಂಬಿಂಗ್ ಸಾಹಸ ಪ್ರದರ್ಶನ

    ಕೊಪ್ಪಳ: ಆನೆಗೊಂದಿ ಉತ್ಸವ 2020ರ ನಿಮಿತ್ತ ನಫಾಸನ ಸಂಸ್ಥೆ ವತಿಯಿಂದ ರಾಕ್ ಕ್ಲೈಂಬಿಂಗ್ ಸಾಹಸ ಪ್ರದರ್ಶನ ನಡೆಯಿತು.

    ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದ ನಿಮಿತ್ತ ಇಂದು ನಡೆದ ರಾಕ್ ಕ್ಲೈಂಬಿಂಗ್ ಪ್ರದರ್ಶನಕ್ಕೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಋಷಿಮುಖ ಪರ್ವದಲ್ಲಿ ಚಾಲನೆ ನೀಡಿದರು. ಆನೆಗೊಂದಿಯ ಶ್ರೀ ಕೇಷ್ಣದೇವರಾಯ ವೇದಿಕೆ ರಸ್ತೆಯ ಪಕ್ಕದಲ್ಲಿ ನಡೆದ ರಾಕ್ ಕ್ಲೈಂಬಿಂಗ್ ಪ್ರದರ್ಶನದಲ್ಲಿ ರ‍್ಯಾಪ್ಲಿಂಗ್, ಜಿಫ್‍ಲೈನ್ ಕೃತಕ ಗೊಡೆ, ಆರ್ಚರಿ ಸೇರಿದಂತೆ ವಿವಿಧ ಪ್ರದರ್ಶನಗಳು ನಡೆದವು.

    ಈ ಪ್ರದರ್ಶನದಲ್ಲಿ ಭಾಗವಹಿಸಲು ಮಕ್ಕಳು ಸ್ವಇಚ್ಛೆಯಿಂದ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದು ವಿಶೇಷವಾಗಿತ್ತು. ನಫಾಸನ ಸಂಸ್ಥೆಯ ಸಹಾಯಕ ನಿರ್ದೇಶಕ ವಿರೇಶ್.ಎಂ ಹಾಗೂ ಅವರ ಸಂಸ್ಥೆಯ ಸಾಹಸಿ ರಾಕ್ ಕ್ಲೈಂಬಿಂಗ್ ಪ್ರದರ್ಶನವನ್ನು ನಡೆಸಿಕೊಟ್ಟಿತು.

  • ಬೆಳ್ಳಂಬೆಳಗ್ಗೆ ಗಂಗಾವತಿಯಿಂದ ಆನೆಗೊಂದಿಗೆ ಓಡಿದ ಯುವಕ-ಯುವತಿಯರು

    ಬೆಳ್ಳಂಬೆಳಗ್ಗೆ ಗಂಗಾವತಿಯಿಂದ ಆನೆಗೊಂದಿಗೆ ಓಡಿದ ಯುವಕ-ಯುವತಿಯರು

    ಕೊಪ್ಪಳ: ಮೈ ಕೊರೆಯುವ ಚಳಿ, ಗುರಿ ಮುಟ್ಟಬೇಕೆಂಬ ಛಲ ಹೀಗಾಗಿ ಬೆಳ್ಳಂಬೆಳಗ್ಗೆ ನೂರಾರು ಯುವಕರು, ಯುವತಿಯರು ಶಾಲಾ-ಕಾಲೇಜು ವಿದ್ಯಾರ್ಥಿಗಳು ಲಗುಬಗೆಯಿಂದ ಓಡಿದರು.

    ಕೊಪ್ಪಳದ ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದ ಭಾಗವಾಗಿ ನಗರದ ಕೇಂದ್ರ ಬಸ್ ನಿಲ್ದಾಣದಿಂದ ಆನೆಗೊಂದಿವರೆಗೆ 12 ಕಿ.ಮೀ ಪುರುಷರ ಮ್ಯಾರಾಥಾನ್ ಹಾಗೂ ಗಂಗಾವತಿಯಿಂದ ಸಂಗಾಪುರದವರೆಗೆ 5 ಕಿ.ಮೀ ಮಹಿಳಾ ಮ್ಯಾರಾಥಾನ್ ಹಮ್ಮಿಕೊಳ್ಳಲಾಗಿತ್ತು.

    ಸ್ಪರ್ಧಾಳುಗಳು ಉತ್ಸಾಹದಿಂದಲೇ ಈ ಮ್ಯಾರಾಥಾನ್‍ನಲ್ಲಿ ಪಾಲ್ಗೊಂಡಿದ್ದರು. ಶಾಸಕ ಪರಣ್ಣ ಮುನವಳ್ಳಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ವಿಶ್ವನಾಥ ರೆಡ್ಡಿ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿದರು. 200ಕ್ಕೂ ಹೆಚ್ಚು ಪುರುಷ 100ಕ್ಕೂ ಹೆಚ್ಚು ಮಹಿಳಾ ಸ್ಪರ್ಧಿಗಳು ಪಾಲ್ಗೊಂಡಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.

  • ಆನೆಗೊಂದಿ ಉತ್ಸವದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ:  ಸಾರ್ವಜನಿಕರಿಂದ ಹರ್ಷ

    ಆನೆಗೊಂದಿ ಉತ್ಸವದಲ್ಲಿ ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ: ಸಾರ್ವಜನಿಕರಿಂದ ಹರ್ಷ

    ಕೊಪ್ಪಳ: ಆನೆಗೊಂದಿ ಉತ್ಸವವು ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡುತ್ತಿದ್ದು, ಸಾರ್ವಜನಿಕರು ಸ್ಪರ್ಧಾ ಸ್ಥಳಗಳಲ್ಲಿ ಪಾಲ್ಗೊಂಡು ಹರ್ಷ ವ್ಯಕ್ತಪಡಿಸುತ್ತಿದ್ದಾರೆ.

    ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವ-2020ರ ನಿಮಿತ್ತ ಆನೆಗೊಂದಿಯ ಗ್ರಾಮದಲ್ಲಿ ಚಿತ್ರಕಲಾ ಸ್ಪರ್ಧೆ, ರಂಗೋಲಿ ಸ್ಪರ್ಧೆ, ಪಗಡೆಯಾಟ, ಕೆಸರು ಗದ್ದೆ ಓಟ, ಹಗ್ಗ-ಜಗ್ಗಾಟ, ಕಲ್ಲುಗುಂಡು ಎತ್ತುವುದು, ಸಂಗ್ರಾಣಿ ಕಲ್ಲು ಎತ್ತುವುದು, ಸೇರಿದಂತೆ ವಿವಿಧ ಗ್ರಾಮೀಣ ಕ್ರೀಡೆಗಳು ನಡೆದವು.

    ಚಿತ್ರಕಲಾ ಸ್ಪರ್ಧೆ:
    ಉತ್ಸವದ ಅಂಗವಾಗಿ ಕನ್ನಡ ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಸಲಾದ ಚಿತ್ರಕಲೆ ಸ್ಪರ್ಧೆಯಲ್ಲಿ 43 ಸ್ಪರ್ಧಾಳುಗಳು ಭಾಗವಹಿಸಿದ್ದರು. ಒಟ್ಟು 84 ಚಿತ್ರಗಳನ್ನು ಪ್ರದರ್ಶನ ಮಾಡಲಾಗಿತ್ತು. ಅದರಲ್ಲಿ ಕೊಟ್ಟೂರು ಶಾಲೆಯ ಹನುಮೇಶ್ ಅವರ ಗಗನ್ ಮಹಲ್ ಚಿತ್ರಕ್ಕೆ ಪ್ರಥಮ ಸ್ಥಾನ ನೀಡಲಾಗಿದೆ. ರಾಜಶೇಖರ ಯಲಬುರ್ಗಾ ಅವರ ವಾಲಿಕೋಟೆ ಚಿತ್ರಕ್ಕೆ ದ್ವಿತೀಯ ಸ್ಥಾನ ಲಭಿಸಿದೆ. ಇಸ್ಲಾಂಪುರಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಶಿಭೂಷಣ್ ಎಂ.ಜಿ ಅವರ ವಾಲಿಕೋಟೆಯ ಚಿತ್ರಕ್ಕೆ ತೃತೀಯ ಸ್ಥಾನ ಲಭಿಸಿದೆ.

    ರಂಗೋಲಿ ಸ್ಪರ್ಧೆ:
    ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ನಡೆದ ರಂಗೋಲಿ ಸ್ಪರ್ಧೆಯಲ್ಲಿ 29 ಮಹಿಳೆಯರು ಭಾಗವಹಿಸಿದ್ದರು. ಅದರಲ್ಲಿ ಪ್ರಥಮ ಸ್ಥಾನ ಲಕ್ಷ್ಮಿ (ಸಾಣಾಪುರ), ದ್ವಿತೀಯ ಶೃತಿ ಹಿರೇಮಠ (ರಾಂಪುರ), ತೃತೀಯ ಧರ್ಮವತಿ (ಹನುಮನಹಳ್ಳಿ) ಸ್ಥಾನ ಪಡೆದಿದ್ದಾರೆ. ರಂಗೋಲಿ ಸ್ಪರ್ಧಾ ಸ್ಥಳಕ್ಕೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಸೇರಿದಂತೆ ಅನೇಕರು ಭೇಟಿ ನೀಡಿ ರಂಗೋಲಿ ವೀಕ್ಷಿಸಿದರು.

    ಪಗಡೆಯಾಟ:
    ಪಗಡೆ ಸ್ಪರ್ಧೆಯಲ್ಲಿ 05 ಮಹಿಳೆಯರು ಭಾಗವಹಿಸಿದ್ದರು. ಇದರಲ್ಲಿ ಆನೆಗೊಂದಿಯ ಗೀತಾ ಕೆ ಪ್ರಥಮ ಸ್ಥಾನ, ಗಂಗಾವತಿಯ ಮಂಜುಳಾ ಎಂ ದ್ವಿತೀಯ ಸ್ಥಾನ, ಬಸಪಟ್ಟಣದ ಜಯಲಕ್ಷ್ಮಿ ಕೆ.ಎಲ್ ತೃತೀಯ ಸ್ಥಾನ ಪಡೆದಿದ್ದಾರೆ. ಪುರುಷರ ಪಗಡೆ ಆಟ ಸ್ಪರ್ಧೆಯಲ್ಲಿ 03 ಪುರುಷರು ಭಾಗವಹಿಸಿದ್ದರು. ಇದರಲ್ಲಿ ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಚರಂಡಯ್ಯ ಪ್ರಥಮ ಸ್ಥಾನ ಪಡೆದರೆ, ಕೊಪ್ಪಳದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಮಾನಪ್ಪ ದ್ವಿತೀಯ, ಗಂಗಾವತಿಯ ಎಸ್.ಕೆ.ಎನ್.ಜಿ ಕಾಲೇಜಿನ ವಿದ್ಯಾರ್ಥಿ ನಾಗರಾಜ ತೃತೀಯ ಸ್ಥಾನ ಪಡೆದಿದ್ದಾರೆ.

    ಕೆಸರು ಗದ್ದೆ ಓಟ:
    ಕೆಸರು ಗದ್ದೆ ಓಟಕ್ಕೆ ಗಂಗಾವತಿ ಶಾಸಕ ಪರಣ್ಣ ಈಶ್ವರಪ್ಪ ಮುನವಳ್ಳಿ ಹಾಗೂ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಜಂಟಿಯಾಗಿ ಚಾಲನೆ ನೀಡಿದರು. ಓಟದಲ್ಲಿ ಒಟ್ಟು 45 ಸ್ಪರ್ಧಾಳುಗಳು ಭಾಗವಹಿಸಿದ್ದು, ಒಂದು ಭಾಗದಲ್ಲಿ 09 ಜನರಂತೆ ಐದು ವಿಭಾಗಗಳಲ್ಲಿ ಸ್ಪರ್ಧೆಯನ್ನು ಪ್ರಾರಂಭಿಸಿ, ಇದರಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದವರನ್ನು ಅಂತಿಮ ಪಂದ್ಯಾವಳಿಗೆ ಆಯ್ಕೆ ಮಾಡಲಾಯಿತು. ಅಂತಿಮ ಸ್ಪರ್ಧೆಯಲ್ಲಿ ಒಟ್ಟು 10 ಜನ ಸ್ಪರ್ಧಿಗಳಿಂದ ಕೆಸರು ಗದ್ದೆ ಓಟ ನಡೆಯಿತು. ಇದರಲ್ಲಿ ಪ್ರಥಮ ಸ್ಥಾನ ಪ್ರೇಮರಾಜ್ ರಾಮಪ್ಪ, ದ್ವಿತೀಯ ಸ್ಥಾನವನ್ನು ಪೊಲೀಸ್ ಇಲಾಖೆಯ ಶರಣಪ್ಪ ಪಡೆದರೆ. ತೃತೀಯ ಸ್ಥಾನವನ್ನು ಎಂ.ಡಿ ಸಮೀರ್ ಪಡೆದರು.

    ಕೆಸರು ಗದ್ದೆಯಲ್ಲಿ ಹಗ್ಗ-ಜಗ್ಗಾಟ:
    ಉತ್ಸವದ ಅಂಗವಾಗಿ ಪೊಲೀಸ್, ಆರ್.ಡಿ.ಪಿ.ಆರ್. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ಏರ್ಪಡಿಸಲಾದ ಹಗ್ಗ-ಜಗ್ಗಾಟ ಸ್ಪರ್ಧೆಗೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅವರು ಚಾಲನೆ ನೀಡಿದರು. ಈ ಕೆಸರು ಗದ್ದೆಯಲ್ಲಿ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಒಟ್ಟು 10 ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಪ್ರಥಮ ಸ್ಥಾನ ಪೊಲೀಸ್ ಇಲಾಖೆ ಡಿ.ಆರ್ ಕೊಪ್ಪಳ ತಂಡ, ದ್ವಿತೀಯ ಸ್ಥಾನ ಆನೆಗೊಂದಿ ಮುಸ್ತಾಫ ತಂಡ, ತೃತೀಯ ಸ್ಥಾನ ಬಸವನದುರ್ಗ ವೆಂಕಟೇಶ ಬಾಬು ತಂಡ ಪಡೆದಿದೆ.

    ವ್ಹೀಲ್ ಚೇರ್ ಸ್ಪರ್ಧೆ:
    ಪುರುಷರ ವ್ಹೀಲ್ ಚೇರ್ ಸ್ಪರ್ಧೆಯಲ್ಲಿ ಒಟ್ಟು 4 ಸ್ಪರ್ಧಿಗಳು ಭಾಗವಹಿಸಿದ್ದು, ಗೊಂಡಬಾಳದ ಗಣೇಶ ಬಂಡಿವಡ್ಡರ ಪ್ರಥಮ, ವಡ್ಡರಹಟ್ಟಿಯ ಅಶೋಕ ಡಂಬರ್ ದ್ವಿತೀಯ, ವಡ್ಡರಹಟ್ಟಿ ಯಲ್ಲಪ್ಪ ತೃತೀಯ ಸ್ಥಾನಗಳನ್ನು ಪಡೆದಿದ್ದಾರೆ.

    ಸ್ಲೋ ಸೈಕಲ್ ರೈಸ್ ಸ್ಪರ್ಧೆ:
    ಸ್ಲೋ ಸೈಕಲ್ ರೇಸ್ ಸ್ಪರ್ಧೆಯಲ್ಲಿ ಒಟ್ಟು ಈ ಸ್ಪರ್ಧೆಯಲ್ಲಿ 29 ಸ್ಪರ್ಧಾಳುಗಳು ಭಾಗವಹಿಸಿದ್ದು, 3 ವಿಭಾಗಗಳಾಗಿ ವಿಂಗಡನೆ ಮಾಡಲಾಗಿದೆ. 1 ಗುಂಪಿಗೆ 10 ರಂತೆ ಸ್ಲೋ ಸೈಕಲ್ ರೈಸ್ ಮಾಡಿಸಲಾಗಿತ್ತು. ಇದರಲ್ಲಿ ಪ್ರಥಮ ಸ್ಥಾನ ವೆಂಕಟೇಶಬಾಬು (ಆನೆಗೊಂದಿ), ದ್ವಿತೀಯ ಬೋಗಪ್ಪ (ಗಂಗಾವತಿ), ತೃತೀಯ ವಿರನಗೌಡ ಕುಲಕರ್ಣಿ ಹಾರಳ ಸ್ಥಾನ ಪಡೆದಿದ್ದಾರೆ.

    ಸಂಗ್ರಹಣೆ ಕಲ್ಲು ಎತ್ತುವ ಸ್ಪರ್ಧೆ:
    ಸಂಗ್ರಾಣಿ ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಒಟ್ಟು 22 ಪುರುಷರ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿರುವ ಸಂಗ್ರಾಣಿ ಕಲ್ಲಿನ ತೂಕ 55, 57, 62, 65, 70, 72, 74, 77, 78, 80 ಕೆಜಿ ಭಾರವನ್ನು ಹೊಂದಿದ್ದವು. ಪ್ರಥಮ ಸ್ಥಾನ ಪಡೆದ ಹಾಲಪ್ಪ (ಕುಷ್ಟಗಿ) 77 ಕೆ.ಜಿ ತೂಕದ ಸಂಗ್ರಾಣಿ ಕಲ್ಲು ಎತ್ತಿದ್ದರೆ. ದ್ವಿತೀಯ ಸ್ಥಾನ ಪಡೆದ ಹನುಮಂತ ತುರುವಿಹಾಳ 74 ಕೆ.ಜಿ, ತೃತೀಯ ಸ್ಥಾನ ಪಡೆದ ಸೋಮನಾಥ (ಕುಷ್ಟಗಿ) 72 ಕೆ.ಜಿ ಸಂಗ್ರಾಣಿ ಕಲ್ಲು ಎತ್ತಿದ್ದಾರೆ.

    ಕಲ್ಲು ಎತ್ತುವ ಸ್ಪರ್ಧೆ:
    ಕಲ್ಲು ಎತ್ತುವ ಸ್ಪರ್ಧೆಯಲ್ಲಿ ಒಟ್ಟು 11 ಸ್ಪರ್ಧಿಗಳು ಭಾಗವಹಿಸಿದ್ದರು. ಇದರಲ್ಲಿ 100 ಮತ್ತು 120 ಕೆಜಿ ಕಲ್ಲುಗಳನ್ನು ಇರಿಸಲಾಗಿತ್ತು. ಇದರಲ್ಲಿ ಪ್ರಥಮ ಸ್ಥಾನ ಪ್ರಭು ಸುಭಾಷ್ ಚಂದ್ರ ಜವಳಗೇರಾ, ದ್ವಿತೀಯ ಸ್ಥಾನ ಆಯಾನಿ ಮುದಕಪ್ಪ ಅರಳಹಳ್ಳಿ, ತೃತೀಯ ಸ್ಥಾನ ಎ. ಮಾರುತಿ ಕಂಪ್ಲಿ ಅವರು ಪಡೆದಿದ್ದಾರೆ.

  • ಆನೆಗೊಂದಿ ಉತ್ಸವ: ಆಕರ್ಷಕ ಸ್ಥಿರ, ಹಗ್ಗದ ಮಲ್ಲಕಂಬ ಪ್ರದರ್ಶನ

    ಆನೆಗೊಂದಿ ಉತ್ಸವ: ಆಕರ್ಷಕ ಸ್ಥಿರ, ಹಗ್ಗದ ಮಲ್ಲಕಂಬ ಪ್ರದರ್ಶನ

    ಕೊಪ್ಪಳ: ಆನೆಗೊಂದಿ ಉತ್ಸವದ ನಿಮಿತ್ತ ಲಕ್ಷ್ಮೇಶ್ವರದ ಕರ್ನಾಟಕ ಅಮೆಚೂರ್ ಮಲ್ಲಕಂಬ ಸಂಸ್ಥೆಯ ವತಿಯಿಂದ ಮಂಗಳವಾರ ಆಕರ್ಷಕ ಮಲ್ಲಕಂಬ ಪ್ರದರ್ಶನ ನಡೆಯಿತು.

    ಆನೆಗೊಂದಿ ಉತ್ಸವವು ಇದೇ ಜನವರಿ 09 ಮತ್ತು 10ರಂದು ನಡೆಯಲಿದ್ದು, ಉತ್ಸವದ ಅಂಗವಾಗಿ ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬೈಕ್ ಸ್ಟಂಟ್, ಗಾಳಿಪಟ ಉತ್ಸವ, ಕಬಡ್ಡಿ, ವಾಲಿಬಾಲ್, ಸೈಕಲ್ ಜಾಥಾ, ಹಗ್ಗ-ಜಗ್ಗಾಟ, ಕೆಸರು ಗದ್ದೆ ಓಟ ಸೇರಿದಂತೆ ಹಲವು ಗ್ರಾಮೀಣ ಕ್ರೀಡೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮಂಗಳವಾರ ಮಲ್ಲಗಂಬ, ಸ್ಲೋ ಸೈಕಲ್ ರೇಸ್ ಸ್ಪರ್ಧೆ ನಡೆಯಿತು.

    ಕೊಪ್ಪಳ ಜಿಲ್ಲೆಯ ಐತಿಹಾಸಿಕ ಕ್ಷೇತ್ರವಾದ ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವದ ನಿಮಿತ್ತ ಹಮ್ಮಿಕೊಳ್ಳಲಾದ ಮಲ್ಲಕಂಬ ಪ್ರದರ್ಶನಕ್ಕೆ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಅವರು ಚಾಲನೆ ನೀಡಿದರು. ತುಳಸಗಿ, ಬಾಗಲಕೋಟೆ, ಕಲದಗಿ, ರಾಮಗಿರಿ ಊರುಗಳನ್ನೊಳಗೊಂಡ ಲಕ್ಷ್ಮೇಶ್ವರದ ಕರ್ನಾಟಕ ಅಮೆಚೂರ್ ಮಲ್ಲಕಂಬ ಸಂಸ್ಥೆಯ ವಿದ್ಯಾರ್ಥಿಗಳು ಮಲ್ಲಗಂಬ ಪ್ರದರ್ಶನ ನೀಡಿದರು.

    ಹಗ್ಗದ ಮಲ್ಲಕಂಬ ಪ್ರದರ್ಶನದಲ್ಲಿ 37 ಜನ ಬಾಲಕಿಯರು ಹಾಗೂ ಸ್ಥಿರ ಮಲ್ಲಕಂಬ ಪ್ರದರ್ಶನದಲ್ಲಿ 36 ಜನ ಬಾಲಕರು ಪಾಲ್ಗೊಂಡಿದ್ದರು. ಯೋಗ ಸೇರಿದಂತೆ ವಿಭಿನ್ನ ರೀತಿಯಲ್ಲಿ ವ್ಯಾಯಾಮಗಳನ್ನು ಮಾಡುವುದರ ಮೂಲಕ ಸಾರ್ವಜನಿಕರ ಮನ ಸೆಳೆದರು.

    ಸ್ಲೋ ಸೈಕಲ್ ರೇಸ್:
    ಆನೆಗೊಂದಿಯ ಶ್ರೀ ಕೃಷ್ಣದೇವರಾಯ ವೇದಿಕೆ ಮುಂಭಾಗದಲ್ಲಿ ಹಮ್ಮಿಕೊಳ್ಳಲಾದ ಸ್ಲೋ ಸೈಕಲ್ ರೇಸ್ ಪಂದ್ಯಕ್ಕೆ ಆನೆಗೊಂದಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಂಜನಾದೇವಿ ಚಾಲನೆ ನೀಡಿದರು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಆನೆಗೊಂದಿ ಉತ್ಸವ ಕ್ರೀಡಾ ಸಮಿತಿ ಅಧ್ಯಕ್ಷ ಆರ್.ಜಿ ನಾಡಗೀರ, ಜಿಲ್ಲೆಯ ದೈಹಿಕ ಶಿಕ್ಷಣಾಧಿಕಾರಿ ಬಸವರಾಜ, ಗಂಗಾವತಿ ತಹಶೀಲ್ದಾರ್ ಎಲ್.ಡಿ ಚಂದ್ರಕಾಂತ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಚಂದ್ರಮೋಹನ್, ತಾಲೂಕು ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಚಂದ್ರಶೇಖರ ರಾಥೋಡ್, ಕರ್ನಾಟಕ ಅಮೆಚರ್ ಮಲ್ಲಕಂಬ, ಲಕ್ಷೆಮ್ಮೆಶ್ವರ ಸಂಸ್ಥೆಯ ಗೌರವ ಕಾರ್ಯದರ್ಶಿ ಎಸ್.ಎಫ್. ಕೊಡ್ಲಿ ಸೇರಿದಂತೆ ಮತ್ತಿತರರು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಆನೆಗೊಂದಿ ಉತ್ಸವ – ಪ್ರಚಾರಕ್ಕಾಗಿ ಮೇಣದಬತ್ತಿ ಮೊರೆಹೋದ ಅಧಿಕಾರಿಗಳು

    ಆನೆಗೊಂದಿ ಉತ್ಸವ – ಪ್ರಚಾರಕ್ಕಾಗಿ ಮೇಣದಬತ್ತಿ ಮೊರೆಹೋದ ಅಧಿಕಾರಿಗಳು

    ಕೊಪ್ಪಳ: ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಉತ್ಸವ 2020ರ ಪ್ರಚಾರಕ್ಕಾಗಿ ಹಾಗೂ ಸ್ಥಳೀಯರನ್ನು ಉತ್ಸವದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು ಅಧಿಕಾರಿಗಳು ಮೇಣದಬತ್ತಿ ಮೊರೆ ಹೋಗಿದ್ದಾರೆ.

    ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಿಡಿಒಗಳು, ಗಂಗಾವತಿ ಇಒ, ಡಾ. ಡಿ. ಮೋಹನ್ ನೇತೃತ್ವದಲ್ಲಿ ಆನೆಗೊಂದಿ ಗ್ರಾಮದಲ್ಲಿ ಮೇಣದಬತ್ತಿ ಉರಿಸಿ ಉತ್ಸವ-2020 ಎಂದು ಸಂದೇಶ ಸಾರುವ ಮೂಲಕ ಪ್ರಚಾರಕ್ಕೆ ಮುನ್ನುಡಿ ಬರೆದರು.

    ಅಲ್ಲದೇ ಇದೇ ಸಂದರ್ಭದಲ್ಲಿ ಮನೆಗಳನ್ನು ಸಿಂಗರಿಸಿ ಉತ್ಸವದ ದಿನಗಳಲ್ಲಿ ಮನೆಯ ಮುಂದೆ ತಳೀರು ತೋರಣ ಕಟ್ಟಿ, ರಂಗೋಲಿ ಹಾಕಿ ಸಿಂಗರಿಸುವಂತೆ ಮನವಿ ಮಾಡಲಾಯಿತು.

  • ಆನೆಗೊಂದಿ ಉತ್ಸವ: ನಿಸರ್ಗ ದೃಶ್ಯಗಳನ್ನೊಳಗೊಂಡ ಟೀಸರ್ ಬಿಡುಗಡೆ

    ಆನೆಗೊಂದಿ ಉತ್ಸವ: ನಿಸರ್ಗ ದೃಶ್ಯಗಳನ್ನೊಳಗೊಂಡ ಟೀಸರ್ ಬಿಡುಗಡೆ

    ಕೊಪ್ಪಳ: ಗಂಗಾವತಿ ತಾಲೂಕಿನ ಐತಿಹಾಸಿಕ ಹಾಗೂ ಧಾರ್ಮಿಕ ತಾಣವಾದ ಆನೆಗೊಂದಿಯಲ್ಲಿ ಕೊಪ್ಪಳ ಜಿಲ್ಲಾಡಳಿತದಿಂದ ಜನವರಿ 9 ಹಾಗೂ 10ರಂದು ನಡೆಸಲು ಉದ್ದೇಶಿಸಿರುವ ಆನೆಗೊಂದಿ ಉತ್ಸವ-20ರ ಟೀಸರ್ ಅನ್ನು ಜಿಲ್ಲಾಡಳಿತ ಬಿಡುಗಡೆ ಮಾಡಿದೆ.

    ವಿಜಯನಗರ ಸಾಮ್ರಾಜ್ಯದ ಮೊದಲ ರಾಜ್ಯಧಾನಿ ಎಂದು ಗುರುತಿಸಿಕೊಂಡಿರುವ, ಶಿಲಾಯುಗದ ಇತಿಹಾಸ ಹೊಂದಿದ ಹಾಗೂ ಪೌರಾಣಿಕೆ ಹಿನ್ನೆಲೆಯ ಆನೆಗೊಂದಿ ಹಾಗೂ ಸುತ್ತಲಿನ ಐತಿಹಾಸಕ ಸ್ಮಾರಕಗಳನ್ನು ಟೀಸರ್ ನಲ್ಲಿ ಸೇರಿಸಲಾಗಿದೆ. ಜೊತೆಗೆ ಸಣಾಪುರದ ಕಲ್ಲಿನನ ಸೇತುವೆ, ಬೋಟಿಂಗ್, ಐತಿಹಾಸಿಕ ಪ್ರಸಿದ್ಧ ಅಂಜನಾದ್ರಿ ಬೆಟ್ಟ, ತುಂಗಭದ್ರಾ ನದಿ ಸೇರಿದಂತೆ ಇನ್ನಿತರ ದೃಶ್ಯ ಹೀಗೆ ಚಿತ್ರಿಸಲಾಗಿದೆ.

    ಉತ್ಸವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳ ಮಾಹಿತಿಯನ್ನೂ ಇದರಲ್ಲಿ ನೀಡಲಾಗಿದೆ. ನಾಡಿನ ಅನೇಕ ಕಲಾವಿದರು, ಕಲಾತಂಡಗಳು ಉತ್ಸವಕ್ಕೆ ಮೆರಗು ತರಲಿವೆ. ಅಷ್ಟೇ ಅಲ್ಲದೆ ಉತ್ಸವದಲ್ಲಿ ಸಾಂಪ್ರದಾಯಿಕ ಸ್ಪರ್ಧೆಗಳಾದ ಹಗ್ಗ ಜಗ್ಗಾಟ, ಕಬಡ್ಡಿ, ಮಲ್ಲಗಂಬ, ಕುಸ್ತಿ, ಕಲ್ಲುಗುಂಡು ಎತ್ತುವುದು, ಸಂಗ್ರಾಣಿ ಕಲ್ಲು ಎತ್ತುವುದು ಸೇರಿದಂತೆ ಅನೇಕ ಕ್ರೀಡೆಗಳು ನಡೆಯಲಿವೆ.