Tag: ಆದಿತ್ಯ ರಾವ್

  • ಆದಿತ್ಯ ರಾವ್ ಹುಸಿ ಬಾಂಬರ್, ಎಚ್‍ಡಿಕೆ ನಿಯಂತ್ರಣ ಕಳೆದುಕೊಂಡಿದ್ದಾರೆ: ಡಿಸಿಎಂ

    ಆದಿತ್ಯ ರಾವ್ ಹುಸಿ ಬಾಂಬರ್, ಎಚ್‍ಡಿಕೆ ನಿಯಂತ್ರಣ ಕಳೆದುಕೊಂಡಿದ್ದಾರೆ: ಡಿಸಿಎಂ

    ತುಮಕೂರು: ಮಂಗಳೂರು ಸೈಕೋ ಬಾಂಬರ್ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆತ ಹುಸಿ ಬಾಂಬ್ ಹವ್ಯಾಸಿ ಎಂಬುದು ಗೊತ್ತಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

    ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಸವಾಲು, ಸಮಸ್ಯೆ, ಆತಂಕ ನಮಗೆ ಗೊತ್ತಿದೆ. ಸಾವು ನೋವು ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಈಗಲೇ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು. ಆರೋಪಿಯನ್ನು ಬಂಧಿಸಿದರೂ ಇದು ಪೊಲೀಸರ ರಿಹರ್ಸಲ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡುವುದು ಸರಿಯಲ್ಲ. ಈ ರೀತಿಯ ಹೇಳಿಕೆಗಳು ಅವರ ಸ್ಥಾನಕ್ಕೆ ಗೌರವ ತರುವಂತಹದಲ್ಲ. ಅವರೂ ರಾಜ್ಯವನ್ನು ಆಳಿದವರು, ಇತ್ತಿಚೆಗೆ ನಿಯಂತ್ರಣ ಕಳಕೊಂಡು ಏನೇನೋ ಮಾತನಾಡುತಿದ್ದಾರೆ ಎಂದು ಲೇವಡಿ ಮಾಡಿದರು.

    ಯಾವುದೋ ಒಂದು ಧರ್ಮದ ಮೇಲೆ ಗೂಬೆ ಕೂರಿಸುವುದನ್ನು ಮೊದಲು ನಿಲ್ಲಿಸಲಿ, ದ್ವೇಷ, ಮತ್ಸರ, ವೈನಸ್ಸು ಬೆಳೆಯುತ್ತ ಹೋದರೆ ಸಮಾಜಕ್ಕೆ ಮಾರಕವಾಗುತ್ತದೆ. ವಿರೋಧ ಪಕ್ಷಗಳು ಸಮಾಜ ಒಡೆದು ಬೆಂಕಿ ಹತ್ತಿಸುವ ಕೆಲಸ ಮಾಡುತಿವೆ. ಇದನ್ನು ಬಿಟ್ಟು ಉತ್ತಮ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

    ಸಿಎಎ ವಿರೋಧಿಸುವವರಿಗೆ ಮನುಷ್ಯತ್ವ ಇಲ್ಲ. ಮುಸ್ಲಿಮರನ್ನು ದೇಶದಿಂದ ಓಡಿಸುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇಂತಹ ಸುಳ್ಳನ್ನು ಹೇಳಲು ಅವರಿಗೆ ಹೇಗೆ ಮನಸ್ಸು ಬರುತ್ತದೋ ಗೊತ್ತಿಲ್ಲ. ಅವರಿಗೆ ಮನುಷ್ಯತ್ವ ಬೇಡವೇ ಎಂದು ಪ್ರಶ್ನಿಸಿದರು.

    ಮುಖ್ಯಮಂತ್ರಿಗಳು ವಿದೇಶದಿಂದ ಬಂದ ನಂತರ ಸಂಪುಟ ವಿಸ್ತರಣೆ ಆಗಲಿದೆ. ಡಿಸಿಎಂ ಹುದ್ದೆ ಕುರಿತು ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಮುಖ್ಯಮಂತ್ರಿಗಳ ನಿರ್ಧಾರಕ್ಕೆ ನಾವು ಬದ್ಧ ಎಂದರು.

  • ಏರ್‌ಪೋರ್ಟಲ್ಲಿ ಸೆಕ್ಯೂರಿಟಿ ಕೆಲ್ಸ ಕನಸು ಕಂಡವನಿಗಿಂದು ಟೈಟ್ ಸೆಕ್ಯೂರಿಟಿ!

    ಏರ್‌ಪೋರ್ಟಲ್ಲಿ ಸೆಕ್ಯೂರಿಟಿ ಕೆಲ್ಸ ಕನಸು ಕಂಡವನಿಗಿಂದು ಟೈಟ್ ಸೆಕ್ಯೂರಿಟಿ!

    ಬೆಂಗಳೂರು: ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಬೇಕು ಎಂದು ಬಯಸಿದ್ದ ಆದಿತ್ಯ ರಾವ್‍ಗೆ ಇಂದು ಟೈಟ್ ಸೆಕ್ಯೂರಿಟಿ ಸಿಕ್ಕಿದೆ.

    ಹೌದು. ಆದಿತ್ಯ ರಾವ್ ಬೆಂಗಳೂರು ಏರ್ ಪೋರ್ಟಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡಬೇಕು ಎಂದು ಬಯಸಿದ್ದ. ಆದರೆ ಆತನಿಗೆ ಕೆಲಸ ಸಿಕ್ಕಿರಲಿಲ್ಲ. ಇದರಿಂದ ನೊಂದಿದ್ದ ಆದಿತ್ಯ ರಾವ್, ಹುಸಿಬಾಂಬ್ ಕರೆಯನ್ನು ಮಾಡಿ ಬೆದರಿಸಿದ್ದನು. ಇದೇ ಆದಿತ್ಯ ರಾವ್ ಇಂದು ಪೊಲೀಸರ ಅತಿಥಿಯಾಗಿದ್ದು, ಟೈಟ್ ಸೆಕ್ಯೂರಿಟಿ ಮೂಲಕ ಮಂಗಳೂರಿಗೆ ತೆರಳಿದ್ದಾನೆ.

    ಖಾಕಿ ಪಡೆಯ ಜೊತೆಗೆ ಏರ್ ಪೋರ್ಟಿನ ಭದ್ರತಾ ಸಿಬ್ಬಂದಿಯ ಟೈಟ್ ಸೆಕ್ಯೂರಿಟಿ ಮೂಲಕ ಬೆಂಗಳೂರು ಏರ್ ಪೋರ್ಟ್ ಒಳಗೆ ಆದಿತ್ಯರಾವ್ ಎಂಟ್ರಿ ಕೊಟ್ಟಿದ್ದ. ಈ ವೇಳೆ ಈತನ ಜೊತೆ ಸುಮಾರು 100 ಮಂದಿ ಪೊಲೀಸರಿದ್ದರು. ಇದನ್ನೂ ಓದಿ: ಮಂಗ್ಳೂರು ಪೊಲೀಸರಿಗೆ ಬಾಂಬರ್ ಆದಿತ್ಯ ರಾವ್ ಹಸ್ತಾಂತರ

    ಇತ್ತ ಇಡೀ ಕರುನಾಡನ್ನು ಬೆಚ್ಚಿಬೀಳಿಸಿದ ಮಂಗಳೂರು ಏರ್ ಪೋರ್ಟ್ ಬಾಂಬ್ ಪ್ರಕರಣದ ಆರೋಪಿ ಹೇಗಿರಬಹುದು, ಆತನನ್ನು ಬೆಂಗಳೂರಿಂದ ಮಂಗಳೂರಿಗೆ ಹೇಗೆ ಕರೆದುಕೊಂಡು ಹೋಗುತ್ತಾರೆ ಅನ್ನೋ ಕುತೂಹಲ ಜನರಲ್ಲಿತ್ತು. ಬಾಂಬರ್ ಯಾರು, ಹೇಗಿದ್ದಾನೆ ಎಂದು ಕುತೂಹಲದಿಂದ ನೋಡಲು ಏರ್ ಪೋರ್ಟ್ ಹೊರಗಡೆ ಜನ ಸಾಗರವೇ ಸೇರಿತ್ತು. ಪೊಲೀಸರು ಕೆಲ ಕಾಲ ನಿರ್ಗಮನದ ಗೇಟ್ ಮುಚ್ಚಿದ್ದರು. ಆರೋಪಿಯನ್ನು ಕರೆದೊಯ್ಯುವ ವೇಳೆ ಜನರನ್ನು ಹೊರಗಡೆ ನಿಲ್ಲಿಸಲಾಗಿತ್ತು. ಯಾರಿಗೂ ಈ ಸಂದರ್ಭದಲ್ಲಿ ಪ್ರವೇಶ ಇರಲಿಲ್ಲ. ವಿಮಾನ ನಿಲ್ದಾಣದ ಸಿಬ್ಬಂದಿ ಕೂಡ ಬಾಂಬರನ್ನು ನೋಡುವ ಕುತೂಹಲದಿಂದ ನಿರ್ಗಮನ ಗೇಟ್ ಮುಂದೆ ಜಮಾಯಿಸಿದ್ದು ವಿಶೇಷವಾಗಿತ್ತು.

    ಸಾಮಾನ್ಯವಾಗಿ ಫ್ಲೈಟ್ ಮೂಲಕ ಆರೋಪಿಯನ್ನು ಕರೆದೊಯ್ಯುವ ಪ್ರಕ್ರಿಯೆ ತೀರಾ ಕಡಿಮೆ. ಆದರೆ ಇದೀಗ ಈ ಆರೋಪಿಯನ್ನು ವಿಮಾನದ ಮೂಲಕವೇ ಮಂಗಳೂರಿಗೆ ರವಾನೆ ಮಾಡಲಾಗಿದೆ.

  • ಮಂಗ್ಳೂರು ಪೊಲೀಸರಿಗೆ ಬಾಂಬರ್ ಆದಿತ್ಯ ರಾವ್ ಹಸ್ತಾಂತರ

    ಮಂಗ್ಳೂರು ಪೊಲೀಸರಿಗೆ ಬಾಂಬರ್ ಆದಿತ್ಯ ರಾವ್ ಹಸ್ತಾಂತರ

    ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದ ಆರೋಪಿ ಆದಿತ್ಯ ರಾವ್ ನನ್ನು ಮಂಗಳೂರು ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ.

    ಆರೋಪಿ ಆದಿತ್ಯ ರಾವ್ ಇಂದು ಶರಣಾದ ಕೂಡಲೇ ಪೊಲೀಸರು, ಆತನನ್ನ ಹಲಸೂರು ಗೇಟ್ ಠಾಣೆಗೆ ಕೆರೆದೊಯ್ದು ವಿಚಾರಣೆಗೆ ಒಳಪಡಿಸಿದರು. ಮಧ್ಯಾಹ್ನ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ಈ ವೇಳೆ ಆದಿತ್ಯ ರಾವ್‍ನನ್ನ ವಶಕ್ಕೆ ಪಡೆಯಲು ಮಂಗಳೂರು ಪೊಲೀಸರು ವಿಮಾನದಲ್ಲಿ ಬೆಂಗಳೂರಿಗೆ ಬಂದರು. ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಆದಿತ್ಯನನ್ನ ಮಂಗಳೂರು ಪೊಲೀಸರು (ಬೆಳ್ಳಿಯಪ್ಪ ತಂಡ) ಸ್ವಲ್ಪ ಹೊತ್ತು ವಿಚಾರಣೆ ನಡೆಸಿದರು. ಇದನ್ನೂ ಓದಿ; ಹರಸಾಹಸ ಪಟ್ಟು 2018ರಲ್ಲಿ ಆದಿತ್ಯನನ್ನು ಹಿಡಿದಿದ್ರು ಬೆಂಗ್ಳೂರು ಪೊಲೀಸರು

    ಇತ್ತ ಆರೋಪಿಯ ಸ್ವ-ಇಚ್ಛಾ ಹೇಳಿಕೆ ಪರಿಶೀಲನೆ ಮಾಡಿದ ಒಂದನೇ ಎಸಿಎಂಎಂ ನ್ಯಾಯಾಧೀಶ ಜಗದೀಶ್, ಬಳಿಕ ಟ್ರಾನ್ಸಿಟ್ ವಾರೆಂಟ್ ಅಡಿಯಲ್ಲಿ ಮಂಗಳೂರಿಗೆ ಕರೆದೊಯ್ಯಲು ಒಪ್ಪಿಗೆ ನೀಡಿದರು. ಮಂಗಳೂರು 6 ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರು ಪಡಿಸಲು ಒಂದನೇ ಎಸಿಎಂಎಂ ನ್ಯಾಯಾಧೀಶರು ಸೂಚಿಸಿದ್ದಾರೆ. ಇದನ್ನೂ ಓದಿ: I Am Fit And Fine- ವೈದ್ಯರ ಬಳಿ ಆದಿತ್ಯ ರಾವ್ ಡೈಲಾಗ್

    ಇದೇ ವೇಳೆ ನ್ಯಾಯಾಧೀಶರು ಆರೋಪಿ ನೀಡಿದ್ದ ಮೂರೂವರೆ ಪುಟಗಳ ಸ್ವ-ಇಚ್ಛಾ ಹೇಳಿಕೆಯನ್ನು ಪರಿಶೀಲನೆ ಮಾಡಿದರು. ನಾಳೆ ಕೋರ್ಟ್ ಅವಧಿ ಮುಗಿಯುವುದರೊಳಗೆ ಆರೋಪಿ ಆದಿತ್ಯನನ್ನು ಮಂಗಳೂರು ಎಸಿಎಂಎಂ ಕೋರ್ಟಿಗೆ ಹಾಜರುಪಡಿಸಬೇಕು. ಇದನ್ನೂ ಓದಿ: ತಾಯಿಗೆ ಕ್ಯಾನ್ಸರ್ ಆಗಿದ್ರೂ ಸಹಾಯಕ್ಕೆ ಬಂದಿರಲಿಲ್ಲ ಆದಿತ್ಯ ರಾವ್!

    ಟ್ರಾನ್ಸಿಟ್ ವಾರೆಂಟ್ ಆ ಕೋರ್ಟಿಗೆ ಹಾಜರಾಗುವವರೆಗೆ ವ್ಯಾಲ್ಯೂ ಇರುತ್ತದೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿ 7.15ಕ್ಕೆ ಬಾಂಬ್ ಆರೋಪಿ ಆದಿತ್ಯ ರಾವ್ ನನ್ನು ಪೊಲೀಸರು ಬೆಂಗಳೂರಿನಿಂದ ಮಂಗಳೂರಿಗೆ ಸ್ಪೈಸ್ ಜೆಟ್ ವಿಮಾನದ ಮೂಲಕ ಕರೆದುಕೊಂಡು ಹೋಗಲಿದ್ದಾರೆ. ಈಗಾಗಲೇ ಆರೋಪಿಯನ್ನು ಕರೆದೊಯ್ಯಲು ಮಂಗಳೂರಿನ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಬೆಂಗಳೂರಿನಲ್ಲಿದ್ದು, ಸದ್ಯ ಏರ್ ಪೋರ್ಟ್ ತಲುಪಿದ್ದಾರೆ.

  • ಹರಸಾಹಸ ಪಟ್ಟು 2018ರಲ್ಲಿ ಆದಿತ್ಯನನ್ನು ಹಿಡಿದಿದ್ರು ಬೆಂಗ್ಳೂರು ಪೊಲೀಸರು

    ಹರಸಾಹಸ ಪಟ್ಟು 2018ರಲ್ಲಿ ಆದಿತ್ಯನನ್ನು ಹಿಡಿದಿದ್ರು ಬೆಂಗ್ಳೂರು ಪೊಲೀಸರು

    ಚಿಕ್ಕಬಳ್ಳಾಪುರ: ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಸದ್ಯ ಪೊಲೀಸರಿಗೆ ಶರಣಾಗಿರುವ ಆದಿತ್ಯ ರಾವ್, ಈ ಹಿಂದೆ 2018ರಲ್ಲಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವುದಾಗಿ ಹುಸಿ ಕರೆ ಮಾಡಿದ್ದನು. ಆಗ ಈತನನ್ನು ಬೆಂಗಳೂರು ಪೊಲೀಸರು ಹರಸಾಹಸ ಪಟ್ಟು ಹಿಡಿದಿದ್ದರು.

    ಉಡುಪಿ ಜಿಲ್ಲೆ ಮಣಿಪಾಲದ ಹುಡ್ಕೋ ಕಾಲೋನಿಯಲ್ಲಿ ವಾಸವಾಗಿದ್ದ ಆದಿತ್ಯ ರಾವ್ ಮೆಕ್ಯಾನಿಕಲ್ ಎಂಜಿನಿಯರಿಂಗ್ ಓದಿದ್ದ. ಉದ್ಯೋಗ ಸಂಬಂಧ ಬೆಂಗಳೂರಿಗೆ ತೆರಳಿದ್ದ ಆದಿತ್ಯ ರಾವ್ ವಿಮಾನ ನಿಲ್ದಾಣದಲ್ಲಿ ಕೆಲಸದ ಕನಸು ಹೊತ್ತಿದ್ದನು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆತನಿಗೆ ಸೆಕ್ಯೂರಿಟಿ ಕೆಲಸ ಸಿಗದಿದ್ದಾಗ ಬಾಂಬ್ ಇಡುವುದಾಗಿ ಹುಸಿ ಕರೆ ಮಾಡಿ ಸಿಕ್ಕಿಬಿದ್ದು, 9 ತಿಂಗಳು ಚಿಕ್ಕಬಳ್ಳಾಪುರ ಕಾರಾಗೃಹದಲ್ಲಿದ್ದನು. ಇದನ್ನೂ ಓದಿ: ತಾಯಿಗೆ ಕ್ಯಾನ್ಸರ್ ಆಗಿದ್ರೂ ಸಹಾಯಕ್ಕೆ ಬಂದಿರಲಿಲ್ಲ ಆದಿತ್ಯ ರಾವ್!

    ಪ್ರಕರಣದ ಹಿನ್ನೆಲೆ ಏನು?
    2018ರಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದ ಆದಿತ್ಯ ರಾವ್ ಸೆಕ್ಯೂರಿಟಿ ಕೆಲಸ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡಿದ್ದನು. ಆದರೆ ಆತನಿಗೆ ವಿಮಾನ ನಿಲ್ದಾಣದಲ್ಲಿ ಸೆಕ್ಯೂರಿಟಿ ಕೆಲಸ ಸಿಕ್ಕಿರಲಿಲ್ಲ. ಹೀಗಾಗಿ ಸೇಡು ತೀರಿಸಿಕೊಳ್ಳುವ ಸಂಚು ರೂಪಿಸಿದ್ದ ಆರೋಪಿ ಅಂದು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಡುವುದಾಗಿ ಹುಸಿ ಬಾಂಬ್ ಕರೆ ಮಾಡಿದ್ದನು. ಇದನ್ನೂ ಓದಿ: ನಾಲ್ಕು ಸಿಮ್ ಇಟ್ಕೊಂಡಿದ್ದ, ಲ್ಯಾಪ್‍ಟಾಪ್ ಕದ್ದಿದ್ದ – ಎಸಿ ಹಾಕ್ತಾರೆ ಎಂದು ಬ್ಯಾಂಕ್ ಕೆಲಸ ಬಿಟ್ಟ

    ಈ ಪ್ರಕರಣ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಆಗ ಈ ಪ್ರಕರಣದ ತನಿಖೆ ನಡೆಸಿದ್ದ ಅಂದಿನ ಪಿಎಸ್‍ಐ ವರುಣ್ ಕುಮಾರ್ ಸಾಕಷ್ಟು ಹರಸಾಹಸ ಪಟ್ಟು ಆದಿತ್ಯನನ್ನು ಬಂಧಿಸಿದ್ದರು. ಹುಸಿ ಬಾಂಬ್ ಕರೆ ಮಾಡಿದ ಸ್ಥಳದ ಮಾಹಿತಿ ಕಲೆಹಾಕಿ, ರಾಮಮೂರ್ತಿ ನಗರದ ಬಳಿ ಇರುವ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ ಪೊಲೀಸರಿಗೆ ಆದಿತ್ಯ ಮುಖ ಪರಿಚಯ ಆಗಿತ್ತು. ಹೀಗಾಗಿ ಆತನ ಫೋಟೋ ಹಿಡಿದು ಪೊಲೀಸರು ಎಲ್ಲಾ ಕಡೆ ಹುಡುಕಾಟ ಆರಂಭಿಸಿದ್ದರು. ಕೊನೆಗೆ ಪೊಲೀಸರ ಕೈಗೆ ಆದಿತ್ಯ ಮೆಟ್ರೋ ರೈಲಿನಲ್ಲಿ ಸಿಕ್ಕಿಹಾಕಿಕೊಂಡಿದ್ದನು. ಕೊನೆಗೆ ಆತನನ್ನು ವಶಕ್ಕೆ ಪಡೆದ ಪೊಲೀಸರು ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಈ ಪ್ರಕರಣದಲ್ಲಿ ನ್ಯಾಯಾಧೀಶರು ಆದಿತ್ಯನಿಗೆ ಸರಿಸುಮಾರು ಒಂದೂವರೆ ವರ್ಷ ಜೈಲುವಾಸ ಶಿಕ್ಷೆ ವಿಧಿಸಿದ್ದರು. ಇದನ್ನೂ ಓದಿ: ಬಾಂಬ್ ತಯಾರಿಸಲು ಉಗ್ರ ಸಂಘಟನೆಯ ಜೊತೆ ಸಂಪರ್ಕಕ್ಕೆ ಯತ್ನಿಸಿದ್ದ ಆದಿತ್ಯ ರಾವ್

    ಆದರೆ ಚಿಕ್ಕಬಳ್ಳಾಪುರ ಜಿಲ್ಲಾ ಕಾರಾಗೃಹದಲ್ಲಿ ಒಂಬತ್ತು ತಿಂಗಳು ಸೆರೆವಾಸವನ್ನು ಅನುಭವಿಸಿ ಇತ್ತೀಚೆಗಷ್ಟೇ ಆದಿತ್ಯ ಬಿಡುಗಡೆಯಾಗಿ ಉಡುಪಿ ಸೇರಿದ್ದನು. ಸದ್ಯ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಈಗ ಪೊಲೀಸರಿಗೆ ಶರಣಾಗಿದ್ದಾನೆ. ಇನ್ನು ಆದಿತ್ಯ ರಾವ್ ಮಾನಸಿಕ ಸ್ಥಿಮಿತವನ್ನು ಕಳೆದುಕೊಂಡು ಸೇಡು ತೀರಿಸಿಕೊಳ್ಳುವ ಮನೋಭಾವ ಹೊಂದಿರುವ ವ್ಯಕ್ತಿಯಾಗಿದ್ದು, ತನ್ನ ಹೆಸರು ಸದಾ ಪ್ರಚಲಿತದಲ್ಲಿರಬೇಕು, ತಾನು ಹೆಸರು ಮಾಡಬೇಕು ಎಂದು ಪದೇ ಪದೇ ಇಂತಹ ದುಷ್ಕೃತ್ಯಗಳನ್ನು ಎಸಗಿರಬಹುದು ಅಂತ ಪೊಲೀಸರು ಹೇಳಿದ್ದಾರೆ.

  • ಆದಿತ್ಯ ಶರಣಾಗಿರೋದು ನಾಟಕ, ಬೆಂಗ್ಳೂರಿಗೆ ಬಂದಿದ್ದು ಹೇಗೆ – ಎಚ್‍ಡಿಕೆ ಪ್ರಶ್ನೆ

    ಆದಿತ್ಯ ಶರಣಾಗಿರೋದು ನಾಟಕ, ಬೆಂಗ್ಳೂರಿಗೆ ಬಂದಿದ್ದು ಹೇಗೆ – ಎಚ್‍ಡಿಕೆ ಪ್ರಶ್ನೆ

    – ನನ್ನ ಅವಧಿಯಲ್ಲಿ ಈ ರೀತಿ ಆಗಿರಲಿಲ್ಲ
    – ಹಿಂದೂಗಳು ಭಯೋತ್ಪಾದಕರಾಗುತ್ತಿದ್ದಾರೆ

    ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಆರೋಪಿ ಪೊಲೀಸರಿಗೆ ಶರಣಾಗಿದ್ದನ್ನು ನೋಡಿದರೆ ಇದು ನಾಟಕದಂತೆ ಕಾಣುತ್ತದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

    ಈ ಬಗ್ಗೆ ಮಾತನಾಡಿದ ಎಚ್‍ಡಿಕೆ, ಆರೋಪಿ ಆದಿತ್ಯ ರಾವ್ ತಾನಾಗೇ ಬಂದು ಶರಣಾಗಿದ್ದಾನೆ ಎಂದು ಹೇಳುತ್ತಿದ್ದಾರೆ. ಆದಿತ್ಯ ಶರಣಾಗಿರೋದು ನಾಟಕೀಯ ಎಂದು ನನಗೆ ಅನಿಸುತ್ತಿದೆ. ಏಕೆಂದರೆ ಪಾಪ ಆದಿತ್ಯ ಮಂಗಳೂರಿನಿಂದ ಡಿಜಿ ಆಫೀಸ್‍ಗೆ ಬಂದು ಶರಣಾಗಿದ್ದಾನೆ ಎಂದರೆ ಇಲ್ಲಿ ಆತನನ್ನು ಕರೆದುಕೊಂಡು ಬಂದವರು ಯಾರು ಎಂದು ಪ್ರಶ್ನಿಸಿದರು. ಆತ ಲಾರಿಯಲ್ಲಿ ಬಂದ ಎಂದು ಕೆಲವರು ಹೇಳುತ್ತಾರೆ. ಆದರೆ ಆತ ಡಿಜಿ ಕಚೇರಿಗೆ ಯಾಕೆ ಬಂದ ಎನ್ನುವುದೇ ನನಗೆ ಕಾಡುತ್ತಿರುವ ಪ್ರಶ್ನೆ ಎಂದು ಹೇಳಿದರು.

    ಇದೇ ವೇಳೆ ಈ ಘಟನೆಯಿಂದ ಮುಸ್ಲಿಮರು ಮಾತ್ರ ಭಯೋತ್ಪಾದಕರಾಗ್ತಾರೆ ಎಂದು ಹೇಳುವುದಕ್ಕೆ ಆಗುತ್ತಿಲ್ಲ. ಹಿಂದೂಗಳು ಸಹ ಭಯೋತ್ಪಾದಕರಾಗುವ ವಾತಾವರಣ ಈ ಘಟನೆಯಿಂದ ಗೊತ್ತಾಗುತ್ತಿದೆ. ಬಿಜೆಪಿ ತೀರ್ಥ ಪ್ರಸಾದ ಕೊಡುತ್ತೆ. ಹಿಂದಿನಿಂದ ಭಜರಂಗದಳ ತ್ರಿಶೂಲ ಹಿಡಿದುಕೊಂಡು ಬರುತ್ತೆ ಎಂಬ ರೇಣುಕಾಚಾರ್ಯ ಹೇಳಿಕೆಗೆ ಕುಮಾರಸ್ವಾಮಿ ಟಾಂಗ್ ನೀಡಿದರು.

    ನಾನು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಇಂತಹ ಘಟನೆಗಳು ಆಗಿಲ್ಲ. ಆದರೆ ಈಗ ಇಂತಹ ಘಟನೆ ನಡೆಯುತ್ತಿದೆ. ಇದಕ್ಕೆ ಕಾರಣ ಯಾರು? ಇದನ್ನು ಹೇಗೆ ಸರಿ ಮಾಡುತ್ತೀರಾ ಎಂದು ಕುಮಾರಸ್ವಾಮಿ ಅವರು ಕೆ.ಎಸ್ ಈಶ್ವರಪ್ಪ ಅವರನ್ನು ಪ್ರಶ್ನಿಸಿದ್ದಾರೆ.

    ಇದು ಬಿಜೆಪಿಯವರ ಸ್ವಯಂಕೃತ ಅಪರಾಧ. ಬಿಜೆಪಿ ಅವರೇ ಸಮಾಜದ ನಡುವೆ ಕಂದಕ ಸೃಷ್ಟಿ ಮಾಡಬೇಡಿ. ನಾನು ಯಾವುದೇ ಸಮಾಜ ಓಲೈಸಲು ಕೆಲಸ ಮಾಡಲ್ಲ. ನಾನು ಕೇವಲ ಜನರ ಪರವಾಗಿ ಧ್ವನಿ ಎತ್ತುತ್ತೇನೆ ಅಷ್ಟೆ. ಎಲ್ಲಾ ಸಮುದಾಯದ ಪರ ನಾನು ಧ್ವನಿ ಎತ್ತಿದ್ದೇನೆ. ಅಷ್ಟೇ ಅಲ್ಲ ಅನ್ಯಾಯ ಆದಾಗಲೆಲ್ಲಾ ನಾನು ಧ್ವನಿ ಎತ್ತಿದ್ದೇನೆ ಎಂದು ಪ್ರತಿಕ್ರಿಯಿಸಿದರು.

    ನಮ್ಮ ದೇಶದಲ್ಲಿ ಅನೇಕ ಜನರು ಭಾರತ ಬಿಟ್ಟು ಬೇರೆ ದೇಶಕ್ಕೆ ಕೆಲಸಕ್ಕಾಗಿ ಹೋಗಿದ್ದಾರೆ. ಇಲ್ಲಿ ಕೆಲಸ ಸಿಗದೇ ಇರುವ ಕಾರಣ ಅವರು ಅಲ್ಲಿಗೆ ಹೋಗುತ್ತಾರೆ. ಕೇಂದ್ರ ಈಗ ಸಿಎಎ, ಎನ್‍ಆರ್ ಸಿ ಎಂದು ಹೊರಟಿದೆ. ಆದರೆ ಈಗ ಇದು ಅವಶ್ಯಕತೆ ಇಲ್ಲ. ಮಿಸ್ಟರ್ ಮೋದಿ ನೀವು ಈಗ ಉದ್ಯೋಗದ ಬಗ್ಗೆ ಗಮನ ಕೊಡಿ ಎಂದರು.

    ಮಂಗಳೂರಿನಲ್ಲಿ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚಾರಣೆಗೂ ಮುನ್ನ ಪೊಲೀಸರು ಅಣಕು ಪ್ರದರ್ಶನ ಮಾಡುವ ರೀತಿಯಲ್ಲಿ, ಮಂಗಳೂರು ಕಮಿಷನರ್ ಹರ್ಷ ಅಣಕು ಪ್ರದರ್ಶನ ಮಾಡಿ ಜನರಲ್ಲಿ ಆತಂಕ ಹುಟ್ಟಿಸಿದ್ದಾರೆ ಎಂದು ಕುಮಾರಸ್ವಾಮಿ ಮಂಗಳವಾರ ಹೇಳಿಕೆ ನೀಡಿದ್ದರು.

  • I Am Fit And Fine- ವೈದ್ಯರ ಬಳಿ ಆದಿತ್ಯ ರಾವ್ ಡೈಲಾಗ್

    I Am Fit And Fine- ವೈದ್ಯರ ಬಳಿ ಆದಿತ್ಯ ರಾವ್ ಡೈಲಾಗ್

    ಬೆಂಗಳೂರು: ನನಗೆ ಏನೂ ಆಗಿಲ್ಲ. ನಾನು ಚೆನ್ನಾಗಿದ್ದೇನೆ ಎಂದು ಆದಿತ್ಯ ರಾವ್ ವೈದ್ಯರ ಜೊತೆ ಹೇಳಿದ್ದಾನೆ

    ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣದಲ್ಲಿ ಇಂದು ಬೆಳಗ್ಗೆ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲು ಕೆಸಿ ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ವೈದ್ಯರು ಪರೀಕ್ಷೆ ನಡೆಸುತ್ತಿದ್ದಾಗ, “ಐ ಆ್ಯಮ್ ಆಲ್ ರೈಟ್ ಡಾಕ್ಟರ್, ಐ ಡೋಂಟ್ ನೀಡ್ ಎನಿ ಮೆಡಿಸಿನ್” ಅಂತ ಡೈಲಾಗ್ ಹೊಡೆದಿದ್ದಾನೆ. ಆರೋಪಿ ಆದಿತ್ಯ ರಾವ್ ವೈದ್ಯರ ಜೊತೆ ನಡೆಸಿದ ಸಂಭಾಷಣೆಯ ಎಕ್ಸ್ ಕ್ಲೂಸೀವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭಿಸಿದೆ.

    ಇಂದು ಬೆಳಗ್ಗೆ 11 ಗಂಟೆ ಸುಮಾರಿಗೆ ಪೊಲೀಸರು ಆರೋಪಿಯನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ಈ ವೇಳೆ ವೈದ್ಯರು, ಏನಾದರೂ ಸಮಸ್ಯೆ ಇದ್ಯಾ? ಜ್ವರ ಶೀತ ಕೆಮ್ಮು ಏನಾದ್ರೂ ಇದೆಯೇ ಎಂದು ಪ್ರಶ್ನಿಸಿದರು. ಆಗ ಆದಿತ್ಯ ರಾವ್, ಐ ಆ್ಯಮ್ ಆಲ್ ರೈಟ್ ನಂಗೇನೂ ಸಮಸ್ಯೆಯೇ ಇಲ್ಲ. ನಂಗ್ಯಾವ ಮೆಡಿಸನ್ ಬೇಡ ಅಂತ ಹೇಳಿದ್ದಾನೆ. ಇದನ್ನೂ ಓದಿ: ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್

    ವೈದ್ಯರ ಎಲ್ಲಾ ತಪಾಸಣೆಗೂ ಸಕಾರಾತ್ಮಕವಾಗಿ ಸೈಕೋ ಬಾಂಬರ್ ಆದಿತ್ಯ ರಾವ್ ಸ್ಪಂದಿಸಿದ್ದಾನೆ. ಮಾನಸಿಕ ಸ್ಥಿತಿ ಬಗ್ಗೆ ನಾವೇನು ಜಡ್ಜ್ ಮಾಡುವುದಕ್ಕೆ ಆಗುವುದಿಲ್ಲ. ಆದರೆ ಆತ ಮಾತಾನಾಡುವ ಶೈಲಿ ನೋಡಿದರೆ ಆತ ಮಾನಸಿಕ ಅಸ್ವಸ್ಥ ಅಂತ ಹೇಳೋದಕ್ಕೆ ಬರಲ್ಲ. ಆದರೆ ಮಂಗಳೂರು ಪೊಲೀಸರು ಆಮೇಲೆ ಆತನ ಮಾನಸಿಕ ಸ್ಥಿತಿಯ ಬಗ್ಗೆ ವೈದ್ಯರ ಅಭಿಪ್ರಾಯ ಪಡೆದೇ ಪಡೆಯುತ್ತಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇದನ್ನೂ ಓದಿ: ತಾಯಿಗೆ ಕ್ಯಾನ್ಸರ್ ಆಗಿದ್ರೂ ಸಹಾಯಕ್ಕೆ ಬಂದಿರಲಿಲ್ಲ ಆದಿತ್ಯ ರಾವ್!

    ಆತನ ಬಿಪಿ ಪಲ್ಸ್ ಶುಗರ್ ಎಲ್ಲವೂ ನಾರ್ಮಲ್ ಆಗಿದೆ. ಹೃದಯಸಂಬಂಧಿ ಸಮಸ್ಯೆಯೂ ಆತನಿಗಿಲ್ಲ ಅಂತ ವೈದ್ಯರು ತಿಳಿಸಿದ್ದಾರೆ. ಇದೇ ವೇಳೆ ತಿಂಡಿ ಮಾಡಿದ್ರಾ ಎಂದು ವೈದ್ಯರ ಪ್ರಶ್ನೆಗೆ, ಹೌದು ಮಾಡಿದ್ದೀನಿ, ನಂಗ್ಯಾವ ಮಾತ್ರೆ ಬರೆದು ಕೊಡಬೇಡಿ. ಯಾವ ಟ್ಯಾಬ್ಲೆಟ್ ತೆಗೆದುಕೊಳ್ಳುವ ಸಮಸ್ಯೆ ನಂಗಿಲ್ಲವೆಂದು ವೈದ್ಯರಿಗೆ ಮಾಹಿತಿ ಕೊಟ್ಟಿದ್ದಾನೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ನಾಲ್ಕು ಸಿಮ್ ಇಟ್ಕೊಂಡಿದ್ದ, ಲ್ಯಾಪ್‍ಟಾಪ್ ಕದ್ದಿದ್ದ – ಎಸಿ ಹಾಕ್ತಾರೆ ಎಂದು ಬ್ಯಾಂಕ್ ಕೆಲಸ ಬಿಟ್ಟ

  • ತಾಯಿಗೆ ಕ್ಯಾನ್ಸರ್ ಆಗಿದ್ರೂ ಸಹಾಯಕ್ಕೆ ಬಂದಿರಲಿಲ್ಲ ಆದಿತ್ಯ ರಾವ್!

    ತಾಯಿಗೆ ಕ್ಯಾನ್ಸರ್ ಆಗಿದ್ರೂ ಸಹಾಯಕ್ಕೆ ಬಂದಿರಲಿಲ್ಲ ಆದಿತ್ಯ ರಾವ್!

    – ಮಗನ ಬಗ್ಗೆ ಎಲ್ಲೂ ಹೇಳಿಕೊಳ್ತಿರಲಿಲ್ಲ
    – ತಂದೆ-ತಾಯಿ ತುಂಬಾ ಒಳ್ಳೆಯವರು

    ಉಡುಪಿ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಉಡುಪಿ ಮೂಲದ ಆದಿತ್ಯ ರಾವ್ ಇಂದು ಬೆಂಗಳೂರಿನಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾನೆ. ಸೈಲೆಂಟ್ ಕಿಲ್ಲರ್ ಆಗಿರುವ ಆದಿತ್ಯ ರಾವ್ ಹಿನ್ನೆಲೆ ಕೆದಕಿ ಹೋದಂತೆ ಹಲವಾರು ಪ್ರಕರಣಗಳಲ್ಲಿ ಈತ ಪೊಲೀಸರಿಗೆ ಬೇಕಾಗಿದ್ದವನಾಗಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.

    ಆದಿತ್ಯ ರಾವ್ ಅಕ್ಕಪಕ್ಕದ ಮನೆಯವರು ಆತನ ತಂದೆ-ತಾಯಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಾರೆ. ಆದರೆ ಆದಿತ್ಯ ರಾವ್ ಬಗ್ಗೆ ಯಾವುದೇ ಮಾಹಿತಿಯಿಲ್ಲ. ಈ ಸಂಬಂಧ ಪಕ್ಕದ ಮನೆ ನಿವಾಸಿ ದಿವ್ಯ ಕಿಣಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಆದಿತ್ಯನ ಜೊತೆ ನಮಗೆ ಮಾತುಕತೆಯೇ ಇಲ್ಲ. ಆದರೆ ಆತನ ತಂದೆ-ತಾಯಿಯ ಜೊತೆ ಉತ್ತಮ ಒಡನಾಟವಿದೆ. ಆತನ ತಂದೆ-ತಾಯಿ ತುಂಬಾ ಒಳ್ಳೆಯವರು. ತಾಯಿ ಇರುವಾಗ ಅವರು ಯಾವತ್ತೂ ನಮ್ಮೊಂದಿಗೆ ಮಾತನಾಡುತ್ತಿದ್ದರು. ಆದರೆ ತಂದೆ ಯಾರ ಜೊತೆಯೂ ಮಾತನಾಡುತ್ತಿರಲಿಲ್ಲ. ತುಂಬಾ ಸಾಧು ಸ್ವಭಾವದ ವ್ಯಕ್ತಿಯಾಗಿರುವ ಅವರು ತಮ್ಮಷ್ಟಕ್ಕೆ ತಾವು ಇರುತ್ತಿದ್ದು, ಯಾರೊಂದಿಗೂ ಬೆರೆಯುತ್ತಿರಲಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್

    ಅವರ ತಂದೆ ಕೆಲಸದಲ್ಲಿದ್ದಾಗ ಮನೆಯನ್ನು ಬಾಡಿಗೆ ಕೊಟ್ಟಿದ್ದರು. ಕೆಲಸದಿಂದ ನಿವೃತ್ತಿ ಹೊಂದಿದ ಬಳಿಕ ಅವರು ಇಲ್ಲಿ ಬಂದು ನೆಲೆಸಿರುವುದಾಗಿ ಆದಿತ್ಯ ರಾವ್ ತಾಯಿ ನಮ್ಮಲ್ಲಿ ಹೇಳುತ್ತಿದ್ದರು. ತಾಯಿಗೆ ಕ್ಯಾನ್ಸರ್ ಇದ್ದರೂ ಆದಿತ್ಯ ಮಾತ್ರ ಅವರ ಸಹಾಯಕ್ಕೆ ಬಂದಿರಲಿಲ್ಲ. ಈ ಕೊರಗು ಅವರಲ್ಲಿತ್ತು ಎಂದು ದಿವ್ಯ ಹೇಳುತ್ತಾರೆ. ಇದನ್ನೂ ಓದಿ: ನಾಲ್ಕು ಸಿಮ್ ಇಟ್ಕೊಂಡಿದ್ದ, ಲ್ಯಾಪ್‍ಟಾಪ್ ಕದ್ದಿದ್ದ – ಎಸಿ ಹಾಕ್ತಾರೆ ಎಂದು ಬ್ಯಾಂಕ್ ಕೆಲಸ ಬಿಟ್ಟ

    ಆದಿತ್ಯ ರಾವ್ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ತಂದೆ-ತಾಯಿ ಕೂಡ ಮಗನ ಬಗ್ಗೆ ಏನೂ ಹೇಳುತ್ತಿರಲಿಲ್ಲ. ಆದಿತ್ಯ ತಾಯಿ ಮರಣದ ನಂತರ ನಮಗೂ ಅವರಿಗೂ ಸಂಪರ್ಕವೇ ಇಲ್ಲ. ಆದಿತ್ಯ ತಾಯಿಗೆ ಕ್ಯಾನ್ಸರ್ ಇತ್ತು. ಹೀಗಾಗಿ ಆರೋಗ್ಯದ ಬಗ್ಗೆ ಬೇಜಾರಾಗುತ್ತಿದ್ದರು. ಆದಿತ್ಯನಿಗೆ ತಮ್ಮ ಇದ್ದಾನೆ. ಅವನು ಕೂಡ ಒಳ್ಳೆಯವನಾಗಿದ್ದು, ಮದುವೆ ಆಗಿದೆ. ಆದರೆ ದೊಡ್ಡವನಾದ ಆದಿತ್ಯ ಬಗ್ಗೆ ನಮಗೇನೂ ಗೊತ್ತಿಲ್ಲ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಬಾಂಬ್ ತಯಾರಿಸಲು ಉಗ್ರ ಸಂಘಟನೆಯ ಜೊತೆ ಸಂಪರ್ಕಕ್ಕೆ ಯತ್ನಿಸಿದ್ದ ಆದಿತ್ಯ ರಾವ್

  • ಮಾನಸಿಕ ಅಸ್ವಸ್ಥನೆಂದು ಬಿಂಬಿಸಿ ಮುಚ್ಚಿ ಹಾಕಬಾರದು – ಸಂಘ ಪರಿವಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

    ಮಾನಸಿಕ ಅಸ್ವಸ್ಥನೆಂದು ಬಿಂಬಿಸಿ ಮುಚ್ಚಿ ಹಾಕಬಾರದು – ಸಂಘ ಪರಿವಾರದ ವಿರುದ್ಧ ಸಿದ್ದರಾಮಯ್ಯ ಆಕ್ರೋಶ

    ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬು ಇಟ್ಟಿರುವ ಆರೋಪಿ ಆದಿತ್ಯರಾವ್ ಎಂಬವನ ಬಗ್ಗೆ ನಿಷ್ಪಕ್ಷಪಾತವಾಗಿ ನಡೆಸಿ ಸತ್ಯ ಸಂಗತಿಯನ್ನು ಬಯಲಿಗೆಳೆಯಬೇಕು ಆತನನ್ನು ಮಾನಸಿಕ ಅಸ್ವಸ್ಥನೆಂದು ಬಿಂಬಿಸಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆಯಬಾರದು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದಾರೆ.

    ಈ ಸಂಬಂಧ ಎರಡು ಟ್ವೀಟ್ ಮಾಡಿರುವ ಅವರು, ನಿರ್ದಿಷ್ಟ ಸಮುದಾಯದ ಬಗ್ಗೆ ಪೂರ್ವಗ್ರಹ ಹೊಂದಿರುವ ಸಂಘ ಪರಿವಾರದ ನಾಯಕರು ದಕ್ಷಿಣ ಕನ್ನಡದಲ್ಲಿ ನಡೆಯುತ್ತಿರುವ ಸಾಮಾನ್ಯ ಅಪರಾಧ ಪ್ರಕರಣಗಳಿಗೂ ಕೋಮುಬಣ್ಣ ಬಳಿಯುತ್ತಿರುವುದೇ ಅಲ್ಲಿನ ಶಾಂತಿ ವ್ಯವಸ್ಥೆ ಕದಡಲು ಕಾರಣ. ತಮ್ಮ ಅಜೆಂಡಾಕ್ಕೆ ಬಳಸಲಾಗದ ಪ್ರಕರಣಗಳ ಬಗ್ಗೆ ಅವರ ಮೌನವೇ ಅವರ ದುರುದ್ದೇಶಕ್ಕೆ ಸಾಕ್ಷಿ ಎಂದು ಮಾಜಿ ಸಿಎಂ ಹರಿಹಾಯ್ದಿದ್ದಾರೆ. ಇದನ್ನೂ ಓದಿ: ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್

    ಆದಿತ್ಯ ರಾವ್ ಬಂಧನ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಈ ಪ್ರಕರಣದಲ್ಲಿ ನಮ್ಮ ಪೊಲೀಸರು ಕ್ಷಿಪ್ರವಾಗಿ ಕೆಲಸ ಮಾಡಿರುವುದು ಅವರ ದಕ್ಷತೆ ಮತ್ತು ಪ್ರಾಮಾಣಿಕತೆಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಹೀಗಾಗಿ ಅನಾವಶ್ಯಕವಾಗಿ ಪೊಲೀಸರ ಬಗ್ಗೆ ಟೀಕೆ ಮಾಡಿ ಅವರ ನೈತಿಕತೆಯನ್ನು ಕುಗ್ಗಿಸುವ ಕೆಲಸವನ್ನು ಯಾರು ಮಾಡಬಾರದು. ಪೊಲೀಸರು ತನಿಖೆ ನಡೆಸಿದ ರೀತಿಯಿಂದಲೇ ಆರೋಪಿ ಶರಣಾಗಿದ್ದಾನೆ. ಅದಕ್ಕೆ ನಾವು ಮೊದಲು ಆರೋಪಿ ಇಂತಹ ಸಂಘಟನೆಗೆ ಸೇರಿದವರು ಅಥವಾ ಇಂತಹ ವ್ಯಕ್ತಿ ಎಂದು ಹೇಳಿರಲಿಲ್ಲ. ಯಾರೇ ಆರೋಪಿ ಇದ್ದರು ಅವನನ್ನು ಕಂಡು ಹಿಡಿಯುತ್ತೇನೆ ಎಂದಿದ್ದೆವು. ಆ ಪ್ರಕಾರ ಪೊಲೀಸರು ಪ್ರಾಮಾಣಿಕವಾಗಿ ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಗೃಹ ಸಚಿವರು ಪೊಲೀಸರನ್ನು ಶ್ಲಾಘಿಸಿದ್ದರು.

    ಆರೋಪಿಯ ವಿರುದ್ಧ ಸಿಕ್ಕ ಸಿಸಿಟಿವಿ ದೃಶ್ಯಾವಳಿ, ಆಟೋ ಹಾಗೂ ಇತರೆ ಸಾಕ್ಷ್ಯಗಳ ಜಾಲವನ್ನು ಹುಡುಕಿ ಹೊರಟಾಗ ಆದಿತ್ಯ ರಾವ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಉಡುಪಿಯಲ್ಲಿರುವ ಆತನ ಮನೆಗೆ ಹೋಗಿ ತಂದೆ, ತಾಯಿ ಹಾಗೂ ಕುಟುಂಬಸ್ಥರ ಬಳಿ ಪೊಲೀಸರು ಆರೋಪಿಯ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಆ ಬಳಿಕ ಮೂರು ತನಿಖಾ ತಂಡ ರಚಿಸಿ ಈ ಸಂಬಂಧ ತನಿಖೆ ನಡೆಸಲಾಗುತ್ತಿತ್ತು. ಆದರೆ ಆರೋಪಿ ಉಡುಪಿಯಿಂದ ಬೆಂಗಳೂರಿಗೆ ಬಂದು ಪೊಲೀಸರಿಗೆ ಶರಣಾಗಿದ್ದಾನೆ. ಈ ಕೃತ್ಯವೆಸಗಲು ಏನು ಕಾರಣ? ಆತನ ಹಿಂದೆ ಯಾರಿದ್ದಾರೆ? ಎನ್ನುವ ಎಲ್ಲಾ ಮಾಹಿತಿ ತನಿಖೆ ಬಳಿಕ ತಿಳಿದು ಬರಲಿದೆ ಎಂದು ತಿಳಿಸಿದರು.

  • ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್

    ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್

    – ಬುದ್ಧಿ ಹೇಳಿದ್ದರೂ ಬದಲಾಗದ ಆದಿತ್ಯ ರಾವ್
    – ಮನೆಗೆ ಬರಬೇಡ ಎಂದಿದ್ದ ತಂದೆ
    – ಬೆದರಿಕೆ ಕರೆಯಿಂದ ತಂದೆಗೆ ನೋವಾಗಿದೆ

    ಮಂಗಳೂರು: ಆದಿತ್ಯ ರಾವ್ ನನ್ನ ಅಣ್ಣ ಹೌದು, ಆದರೆ ಕಳೆದ ಬಾರಿ ಬಾಂಬ್ ಬೆದರಿಕೆ ಹಾಕಿದಾಗಲೇ ನಾವು ಆತನನ್ನು ಬಿಟ್ಟಿದ್ದೇವೆ. ಮನೆಗೆ ಬರಬೇಡ ಎಂದು ತಂದೆ ಸಹ ಹೇಳಿದ್ದಾರೆ. ಚಿಕ್ಕವನಿದ್ದಾಗ ಒಳ್ಳೆಯವನಾಗಿಯೇ ಇದ್ದ. ಇತ್ತೀಚೆಗೆ ಈ ರೀತಿ ಮಾಡುತ್ತಿದ್ದಾನೆ ಎಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್ ಸಹೋದರ ಅಕ್ಷತ್ ರಾವ್ ವಿವರಿಸಿದ್ದಾರೆ.

    ಮಂಗಳೂರಿನ ಚಿಲಿಂಬಿಯಲ್ಲಿ ಪ್ರತಿಕ್ರಿಯಿಸಿದ ಅವರು, ಬೆದರಿಕೆ ಕರೆ ಮಾಡಿದಾಗ ಆದಿತ್ಯನಿಗೆ ಬುದ್ಧಿ ಹೇಳಿದ್ದೇವೆ. ಬುದ್ಧಿ ಮಾತು ಕೇಳದಿದ್ದಾಗ ಅವನನ್ನು ಮನೆಯಿಂದಲೇ ಹೊರಗೆ ಹಾಕಿದ್ದೇವೆ. ಈಗ ನಮ್ಮ ಜೊತೆ ಅವನ ಸಂಪರ್ಕ ಇಲ್ಲ. ನಾವು ನಮ್ಮ ಪಾಡಿಗೆ ಕೆಲಸ ಮಾಡಿಕೊಂಡು ಬದುಕುತ್ತಿದ್ದೇವೆ. ಅವನ ಕೃತ್ಯಕ್ಕೆ ಜವಬ್ದಾರರಾಗಲು ನಮ್ಮಿಂದ ಸಾಧ್ಯವಿಲ್ಲ. ಕಳೆದ ಎರಡು ವರ್ಷಗಳಿಂದ ಅವನ ಜೊತೆ ನಮಗೆ ಸಂಪರ್ಕ ಇಲ್ಲ. ಅವನ ಪಾಡಿಗೆ ಅವನನ್ನು ಬಿಟ್ಟಿದ್ದೇವೆ. ನಾವು ಇಬ್ಬರೇ ಮಕ್ಕಳು, ಮೂಲತಃ ಮಣಿಪಾಲದವರಾದ ನಾವು ಮಂಗಳೂರಿಗೆ ಬಂದು 6 ತಿಂಗಳಾಯಿತು ಎಂದು ಮಾಹಿತಿ ನೀಡಿದರು.

    ಚಿಕ್ಕಂದಿನಿಂದ ಸರಿಯಾಗಿಯೇ ಇದ್ದ, ನಂತರ ನಾನು 8ನೇ ತರಗತಿಯಿಂದ ಹಾಸ್ಟೆಲಿಗೆ ಸೇರಿಕೊಂಡೆ. ಆತನೂ ಸಹ ಹಾಸ್ಟೆಲ್ ಸೇರಿದ, ನಂತರ ನಾವಿಬ್ಬರೂ ಒಟ್ಟಿಗೆ ಇದ್ದದ್ದು ಕಡಿಮೆ. ಕುಟುಂಬದವರೆಲ್ಲ ಸೇರಿದಾಗ ನಾವೂ ಸೇರುತ್ತಿದ್ದೆವು. ಆದಿತ್ಯ ಎಂಬಿಎ ಮತ್ತು ಬಿಇ ವಿದ್ಯಾಭ್ಯಾಸ ಮಾಡಿದ್ದಾನೆ. ಇತ್ತೀಚೆಗೆ ಇಂತಹ ಕೃತ್ಯಗಳನ್ನು ಎಸಗುತ್ತಿದ್ದಾನೆ. ಅವನನ್ನು ಸರಿ ಮಾಡಲು ತಂದೆ ಸಹ ಪ್ರಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ, ಹೀಗಾಗಿ ನಾವು ಅವನನನ್ನು ಬಿಟ್ಟಿದ್ದೇವೆ. ಕಳೆದ ಎರಡು ವರ್ಷಗಳಿಂದ ಅವನ ನಮ್ಮ ನಡುವೆ ಯಾವುದೇ ರೀತಿಯ ಸಂಪರ್ಕವಿಲ್ಲ ಎಂದು ತಿಳಿಸಿದರು.

    ಕೊನೆಯದಾಗಿ 2019ರ ಫೆಬ್ರವರಿಯಲ್ಲಿ ತಾಯಿ ತೀರಿಕೊಂಡಾಗ ಆದಿತ್ಯಗೆ ಕರೆ ಮಾಡಿದ್ದೆವು. ಆಗ ಆತ ಚಿಕ್ಕಬಳ್ಳಾಪುರದ ಜೈಲಿನಲ್ಲಿದ್ದ. ಹಿರಿಯ ಮಗನಾದ ಹಿನ್ನೆಲೆಯಲ್ಲಿ ಆತನಿಗೆ ಕರೆ ಮಾಡಿ ವಿಚಾರ ತಿಳಿಸಿದ್ದೆವು. ಜೈಲಾಧಿಕಾರಿಗಳಿಗೆ ತಿಳಿಸಿ ಕಳುಹಿಸಲು ತಿಳಿಸಿದೆವು, ಆತ ಬರಲಿಲ್ಲ. ಹೀಗಾಗಿ ನಾನೇ ತಾಯಿಯ ಸಾವಿನ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದೆ. ಅವನ ಕೃತ್ಯದ ಬಗ್ಗೆ ತಿಳಿಯುವ ಆಸಕ್ತಿ ನಮಗಿಲ್ಲ. ಈ ವಿಚಾರದಲ್ಲಿ ನಾವು ಅವನಿಗೆ ಬೆಂಬಲ ನೀಡಿಲ್ಲ, ಪೊಲೀಸರ ಎಲ್ಲ ತನಿಖೆಗೆ ಸಹಕರಿಸಿದ್ದೇವೆ. ಅಲ್ಲದೆ ಆತನಿಗೆ ಜಾಮೀನು ಪಡೆಯಲು ಸಹಾಯ ಮಾಡಿಲ್ಲ, ಮಾಡುವುದೂ ಇಲ್ಲ. ಅವನ ಬಗ್ಗೆ ನಮಗೂ ಭಯವಿದೆ. ಹೀಗಾಗಿ ನಮ್ಮ ಕುಟುಂಬಕ್ಕೆ ಭದ್ರತೆ ನೀಡುವಂತೆ ಪೊಲೀಸರಲ್ಲಿ ಕೇಳಿಕೊಂಡಿದ್ದೇವೆ ಎಂದರು.

    ಈ ವೇಳೆ ಮಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಎನ್ನುವ ಪ್ರಶ್ನೆಗೆ, ಆತ ಎಲ್ಲಿದ್ದಾನೆ ಎನ್ನುವುದು ನಮಗೆ ಗೊತ್ತಿಲ್ಲ. ಮಾಧ್ಯಮಗಳಿಂದಾಗಿ  ಮಂಗಳೂರಿನಲ್ಲಿದ್ದಾನೆ ಎನ್ನುವ ವಿಚಾರ ತಿಳಿಯುತು ಎಂದು ಉತ್ತರಿಸಿದರು.

  • ನಾಲ್ಕು ಸಿಮ್ ಇಟ್ಕೊಂಡಿದ್ದ, ಲ್ಯಾಪ್‍ಟಾಪ್ ಕದ್ದಿದ್ದ – ಎಸಿ ಹಾಕ್ತಾರೆ ಎಂದು ಬ್ಯಾಂಕ್ ಕೆಲಸ ಬಿಟ್ಟ

    ನಾಲ್ಕು ಸಿಮ್ ಇಟ್ಕೊಂಡಿದ್ದ, ಲ್ಯಾಪ್‍ಟಾಪ್ ಕದ್ದಿದ್ದ – ಎಸಿ ಹಾಕ್ತಾರೆ ಎಂದು ಬ್ಯಾಂಕ್ ಕೆಲಸ ಬಿಟ್ಟ

    – ಪತ್ನಿ, ಮಕ್ಕಳನ್ನು ಸಾಕುವುದು ಯಾರು ಎಂದು ಮದ್ವೆಯಾಗದ ಆರೋಪಿ
    – ಲ್ಯಾಪ್‍ಟಾಪ್ ಕದಿಯುವುದನ್ನು ಹವ್ಯಾಸ ಮಾಡ್ಕೊಂಡಿದ್ದ

    ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಬಂಧನಕ್ಕೊಳಗಾದ ಆದಿತ್ಯ ರಾವ್ ಭರ್ತಿ ನಾಲ್ಕು ಸಿಮ್ ಕಾರ್ಡ್ ಬಳಕೆ ಮಾಡುತ್ತಿದ್ದನು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.

    ಮೆಕ್ಯಾನಿಕಲ್ ಎಂಜಿನಿಯರ್, ಎಂಬಿಎ ಪದವಿ ಓದಿದ್ದ ಆದಿತ್ಯ ಬೆಂಗಳೂರಿನ ಮಹಾತ್ಮ ಗಾಂಧಿ(ಎಂಜಿ) ರಸ್ತೆಯಲ್ಲಿರುವ ಪ್ರತಿಷ್ಠಿತ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ. ಕಚೇರಿಯಲ್ಲಿ ಹೆಚ್ಚು ಎಸಿ ಹಾಕುತ್ತಾರೆ ಎಂದು ಕೆಲಸ ಬಿಟ್ಟಿದ್ದ.  ಇದನ್ನೂ ಓದಿ: ಹೌದು, ಬಾಂಬ್ ಇಟ್ಟಿದ್ದು ನಾನೇ – ತಪ್ಪೊಪ್ಪಿಕೊಂಡ ಆದಿತ್ಯ ರಾವ್

    ನೋಡುವುದಕ್ಕೆ ಸಭ್ಯಸ್ಥನಾಗಿ ಹೈಫೈ ಇಂಗ್ಲಿಷ್ ಮಾತನಾಡುತ್ತಿದ್ದ ಆದಿತ್ಯ ಕಳ್ಳತನವನ್ನು ಹವ್ಯಾಸವನ್ನಾಗಿ ಮಾಡಿಕೊಂಡಿದ್ದ. ಈ ಹಿಂದೆ ಪೇಯಿಂಗ್ ಗೆಸ್ಟ್ ನಲ್ಲಿದ್ದಾಗ ರೂಮೇಟ್‍ನ ಲ್ಯಾಪ್ ಟಾಪ್ ಹಾಗೂ 2013ರಲ್ಲಿ ಬೆಂಗಳೂರಿನ ವಿಮಾ ಕಂಪನಿಯಲ್ಲಿ ಕೆಲಸ ಮಾಡಿದ್ದಾಗ ಸಹದ್ಯೋಗಿ ಲ್ಯಾಪ್ ಟಾಪ್ ಕೂಡ ಕದ್ದಿದ್ದ ವಿಚಾರ ಈಗ ಬೆಳಕಿಗೆ ಬಂದಿದೆ. ಅಲ್ಲದೆ ಈ ಬಗ್ಗೆ ಸದ್ದಗುಂಟೆ ಹಾಗೂ ಜಯನಗರ ಠಾಣೆಯಲ್ಲೂ ದೂರು ದಾಖಲಾಗಿತ್ತು. ಇದನ್ನೂ ಓದಿ: ಮಾನಸಿಕ ರೋಗಿಯಂತಿದ್ದ, ಯಾರೊಂದಿಗೂ ಮಾತನಾಡುತ್ತಿರಲಿಲ್ಲ: ಆದಿತ್ಯ ಸಹದ್ಯೋಗಿ

    ಸದಾ ಮೌನಿ ಆಗಿರುತ್ತಿದ್ದ ಆದಿತ್ಯ ಬಳಿ ಉತ್ತಮ ಸಂಬಳ ಬರುತ್ತಿದ್ದ ಬ್ಯಾಂಕ್ ಕೆಲಸವನ್ನು ತೊರೆದಿದ್ದು ಯಾಕೆ ಎಂದು ಕೇಳಿದ್ದಕ್ಕೆ, ಸಂಬಳ ಉತ್ತಮವಾಗಿ ಬರುತ್ತಿತ್ತು. ಆದರೆ ನನಗೆ ಎಸಿ ಆಗುವುದಿಲ್ಲ. ನೈಸರ್ಗಿಕ ಗಾಳಿ ಬೇಕು. ಈ ಕಾರಣಕ್ಕೆ ನಾನು ಉದ್ಯೋಗ ತೊರೆದೆ ಎಂದು ಹೇಳಿದ್ದ. ಇದನ್ನೂ ಓದಿ: ವಿಮಾನ ನಿಲ್ದಾಣದಲ್ಲಿ ಉದ್ಯೋಗ ಸಿಗದ್ದಕ್ಕೆ ಬೆದರಿಕೆ ಕರೆ ಮಾಡಿದ್ದ ಬಾಂಬರ್ ಈಗ ಬಾಂಬ್ ಇಟ್ಟ

    ಈಗ 40 ವರ್ಷವಾಗಿದ್ದು, ಮದುವೆ ಯಾಕೆ ಆಗಿಲ್ಲ ಎಂದು ಕೇಳಿದಾಗ, ನನ್ನನ್ನೇ ನಾನು ಸಾಕಿಕೊಳ್ಳೋದು ಕಷ್ಟ. ಇನ್ನು ಮದುವೆಯಾದರೆ ಪತ್ನಿ, ಮಕ್ಕಳನ್ನು ಸಾಕುವುದು ಯಾರು ಎಂದು ಪ್ರಶ್ನಿಸುತ್ತಿದ್ದ ವಿಚಾರ ಮೂಲಗಳಿಂದ ತಿಳಿದು ಬಂದಿದೆ.