ಮಂಗಳೂರು: ಮಂಗಳೂರಿನ ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಿ ಆದಿತ್ಯ ರಾವ್ಗೆ ಮಂಗಳೂರಿನ ನಾಲ್ಕನೇ ಜಿಲ್ಲಾ ನ್ಯಾಯಾಲಯ ಪ್ರತ್ಯೇಕ ಎರಡು ಶಿಕ್ಷೆ ಪ್ರಮಾಣವನ್ನು ವಿಧಿಸಿ ತೀರ್ಪು ಪ್ರಕಟಿಸಿದೆ.
2020ರ ಜನವರಿ 20ರಂದು ಮಂಗಳೂರಿನ ಏರ್ಪೋರ್ಟ್ಗೆ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನವರಿ 22ರಂದು ಬೆಂಗಳೂರಿನಲ್ಲಿ ಆದಿತ್ಯ ಶರಣಾಗಿದ್ದ. ಆ ಬಳಿಕ ಪ್ರಕರಣ ಕೋರ್ಟ್ನಲ್ಲಿ ಇತ್ತು. ಇಂದು ಜಿಲ್ಲಾ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಎರಡು ಶಿಕ್ಷೆ ಪ್ರಮಾಣ ಪ್ರಕಟಿಸಿದ್ದು, ಒಂದು ಸೆಕ್ಷನ್ನಡಿ 20 ವರ್ಷ ಜೈಲು ಮತ್ತು 10 ಸಾವಿರ ರೂ. ದಂಡ, ಮತ್ತೊಂದು ಸೆಕ್ಷನ್ನಡಿ 5 ವರ್ಷ ಜೈಲು ಹಾಗೂ 10 ಸಾವಿರ ರೂ. ದಂಡ ವಿಧಿಸಿ ಆದೇಶ ಹೊರಡಿಸಿದೆ. ಇದನ್ನೂ ಓದಿ: ಚೆನ್ನೈನಿಂದ ರಾಸಾಯನಿಕ ತರಿಸಿದ್ದ ಬಾಂಬರ್- ಸ್ಫೋಟಕ ವಿಚಾರ ಬಾಯ್ಬಿಟ್ಟ ಆದಿತ್ಯ
ಉಡುಪಿ ಜಿಲ್ಲೆಯ ಮಣಿಪಾಲ ಮೂಲದ ಆದಿತ್ಯ ರಾವ್, ಮೆಕ್ಯಾನಿಕಲ್ ಎಂಜಿನಿಯರ್ ಪದವೀಧರನಾಗಿದ್ದ. 2018ರಲ್ಲಿ ಬೆಂಗಳೂರು ಏರ್ಪೋರ್ಟ್ ಕೆಲಸಕ್ಕೆ ಅರ್ಜಿ ಸಲ್ಲಿಸಿದ್ದ. ಆದರೆ ಸೂಕ್ತ ದಾಖಲೆಗಳು ಇಲ್ಲದ ಕಾರಣ ಅರ್ಜಿ ತಿರಸ್ಕೃತಗೊಂಡಿತ್ತು. ತನ್ನ ಅರ್ಜಿ ತಿರಸ್ಕೃತವಾಗಿದ್ದಕ್ಕೂ ಆದಿತ್ಯ ರಾವ್ಗೆ ಆಕ್ರೋಶವಿತ್ತು. ಹೀಗಾಗಿ ಅನೇಕ ಬಾರಿ ಆದಿತ್ಯಾ ಏರ್ಪೋರ್ಟ್ಗೆ ಹುಸಿ ಬಾಂಬ್ ಕರೆ ಮಾಡಿದ್ದ. ಬಳಿಕ ಮಂಗಳೂರು ಏರ್ಪೋರ್ಟ್ಗೆ ಬಾಂಬ್ ಇಟ್ಟು ಬಂಧನಕ್ಕೆ ಒಳಗಾಗಿದ್ದ.
ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಆದಿತ್ಯರಾವ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.
ಮಂಗಳೂರಿನ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಆರೋಪಿ ಆದಿತ್ಯರಾವ್ ವಿರುದ್ಧ ಸ್ಥಳೀಯ ಪೋಲಿಸರ ವಿಶೇಷ ತನಿಖಾ ತಂಡ 700 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಚಾರ್ಜ್ಶೀಟ್ನಲ್ಲಿ ಹಲವು ಪ್ರಮುಖ ಅಂಶಗಳನ್ನು ಉಲ್ಲೇಖ ಮಾಡಲಾಗಿದ್ದು, ಆರೋಪಿ ಇಟ್ಟಿದ್ದ ಬ್ಯಾಗ್ ನಲ್ಲಿ ಇದ್ದದ್ದು ನಿಜವಾದ ಸ್ಫೋಟಕವಾಗಿದೆ. ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಆದಿತ್ಯರಾವ್ ಬಾಂಬ್ ಇಟ್ಟಿದ್ದ ಎಂದು ತಿಳಿಸಲಾಗಿದೆ.
ಅಲ್ಲದೆ ಅಮೋನಿಯಂ ನೈಟ್ರೇಟ್, ಸ್ಫೋಟದ ತೀವ್ರತೆ ಹೆಚ್ಚಿಸಲು ಕಬ್ಬಿಣದ ಮೊಳೆ ಅಳವಡಿಸಲಾಗಿತ್ತು. ಉದ್ದೇಶಪೂರ್ವಕವಾಗಿ ಒಂದು ವೈಯರ್ ಸಂಪರ್ಕಿಸದೆ ಆರೋಪಿ ಹಾಗೆಯೇ ಬಿಟ್ಟಿದ್ದ. ಇದು ನಿಜವಾದ ಸ್ಫೋಟಕ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲೂ ಸಾಬೀತಾಗಿದೆ. ಆರೋಪಿ ವಿರುದ್ಧ ಯು.ಎ.ಪಿ.ಎ ಅಡಿ ಪ್ರಕರಣ ದಾಖಲಿಸಿ ಈ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.
ಏನಿದು ಪ್ರಕರಣ?:
2020ರ ಜನವರಿ 20ರಂದು ಮಂಗಳೂರು ಏರ್ ಪೋರ್ಟ್ನಲ್ಲಿ ಬಾಂಬ್ ಪತ್ತೆಯಾಗಿದ್ದು, ಈ ವಿಚಾರ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಬೆನ್ನಲ್ಲೆ ಎಲ್ಲಾ ವಿಮಾನ ನಿಲ್ಧಾನದಲ್ಲೂ ಹೈಅಲರ್ಟ್ ಘೋಷಣೆ ಮಾಡಲಾಗಿತ್ತು. ಈ ಬೆನ್ನಲ್ಲೇ ಆರೋಪಿ ಆದಿತ್ಯರಾವ್ ನಢರವಾಗಿ ಬೆಂಗಳೂರಿಗೆ ಬಂದು ಪೊಲೀಸ್ ಮಹಾನಿರ್ದೇಶಕಿ ನೀಲಮಣಿರಾಜು ಅವರ ಕಚೇರಿಗೆ ತೆರಳಿ ಶರಣಾಗಿದ್ದನು. ಅಲ್ಲದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಾನೇ ಬಾಂಬ್ ಇಟ್ಟಿರುವುದಾಗಿ ಬಾಯ್ಬಿಟ್ಟಿದ್ದನು.
ಉಡುಪಿ: ಮಂಗಳೂರು ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟಿದ್ದ ಬಾಂಬರ್, ಸೈಕೋ ಕ್ರಿಮಿನಲ್ ಆದಿತ್ಯ ಓರ್ವ ಜಿಮ್ಮರ್ ಆಗಿದ್ದನು. ಏರ್ಪೋರ್ಟ್ನಲ್ಲಿ ಬಾಂಬ್ ಇಡುವ ಹಿಂದಿನ ಎರಡು ದಿನ ಉಡುಪಿಯ ಕಾರ್ಕಳದ ಕಿಂಗ್ಸ್ ಕೋರ್ಟ್ ಹೋಟೆಲ್ನಲ್ಲಿ ಕೆಲಸ ಮಾಡಿದ್ದ ಈತ ಅಲ್ಲಿ ದುಬಾರಿ ಜಿಮ್ ಪರಿಕರಗಳನ್ನುಗಳನ್ನು ಬಿಟ್ಟು ಹೋಗಿದ್ದನು. ಅದನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪುಶ್ ಅಪ್ ಮಷೀನ್ ಮತ್ತು ಡಂಬಲ್ಸ್ ಅನ್ನು ಕಾರ್ಕಳ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಲಾಗಿದೆ. ಕಿಂಗ್ಸ್ ಕೋರ್ಟ್ ಹೋಟೆಲ್ ಮಾಲೀಕ ಅಶೋಕ್ ಶೆಟ್ಟಿ ಕಾರ್ಕಳ ಪೊಲೀಸರಿಗೆ ಡಂಬಲ್ಸ್ ಹಸ್ತಾಂತರ ಮಾಡಿದ್ದಾರೆ. ಈ ನಡುವೆ ಆದಿತ್ಯ ರಾವ್ನ ಎರಡು ದಿನದ ಚಲನವಲನಗಳಿರುವ ದೃಶ್ಯಾವಳಿಗಳು ಹೋಟೆಲ್ನ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆದಿತ್ಯ ರಾವ್ ಪ್ರಕರಣದ ತನಿಖೆಯಲ್ಲಿ ಈ ವಿಡಿಯೋ ಮಹತ್ವವಾಗಿದ್ದು, ಸಿಸಿಟಿವಿಯ ಡಿವಿಆರ್ನ್ನು ಮಂಗಳೂರು ಎಸಿಪಿ ಬೆಳ್ಳಿಯಪ್ಪ ವಶಪಡಿಸಿಕೊಂಡಿದ್ದಾರೆ.
ಕೆಲಸ ಮಾಡಿದಲ್ಲೆಲ್ಲಾ ಪ್ರತಿನಿತ್ಯ ಜಿಮ್:
ಆದಿತ್ಯ ಬಂಧನಕ್ಕೊಳಗಾದರೂ ಆತನ ಅವತಾರಗಳು, ಕಥೆಗಳು ಒಂದೊಂದೇ ಹೊರ ಬರುತ್ತಿವೆ. ಅವನೊಬ್ಬ ಕಿಕ್ ಬಾಕ್ಸರ್, ಕರಾಟೆ ಪಟು ಆಗಿದ್ದು, ಆರೋಗ್ಯದ ಬಗ್ಗೆ ಸಿಕ್ಕಾಪಟ್ಟೆ ಗಮನ ಕೊಡುತ್ತಿದ್ದನು. ಬಾಂಬ್ ಇಡುವ ಕ್ರಿಮಿನಲ್ ಆದರೂ ತನ್ನ ಆರೋಗ್ಯ ಚೆನ್ನಾಗಿಯೇ ಕಾಪಾಡಿಕೊಂಡಿದ್ದನು.
ಬ್ಯಾಗಿನೊಳಗೆ ಸದಾಕಾಲ ತನ್ನ ಜೊತೆಗೆ ಡಂಬಲ್ಸ್ ಕೊಂಡೊಯ್ಯುತ್ತಿದ್ದ ಆದಿತ್ಯ, ಮಂಗಳೂರಿನ ಏರ್ಪೋರ್ಟ್ನಲ್ಲಿ ಬಾಂಬ್ ಇಟ್ಟ ಹಿಂದಿನ ದಿನವೂ ದೈಹಿಕ ವ್ಯಾಯಾಮ ಮಾಡಿರುವುದು ಬೆಳಕಿಗೆ ಬಂದಿದೆ. ಬಾಂಬ್ ಹೊತ್ತ ಬ್ಯಾಗ್ನ ಜೊತೆಗೆ ಆದಿತ್ಯ ಡಂಬಲ್ಸ್ ಕೂಡಾ ಹೊತ್ತು ತಂದಿದ್ದನು. ಕಾರ್ಕಳದ ಕಿಂಗ್ಸ್ ಕೋರ್ಟ್ ಹೋಟೆಲಿನಲ್ಲಿ ಎರಡು ದಿನದ ಹಿಂದೆ ಅಂದರೆ ಜನವರಿ 18 ಈತ ಕೆಲಸಕ್ಕೆ ಸೇರಿದ್ದನು. ಕೆಲಸ ಮುಗಿದ ಬಳಿಕ ರಾತ್ರಿ ಅಲ್ಲೇ ತಂಗುತ್ತಿದ್ದ ಆದಿತ್ಯ ಬೆಳಗ್ಗೆ 4 ಗಂಟೆಗೆ ಎದ್ದು ಡಂಬಲ್ಸ್ ನಲ್ಲಿ ದೈಹಿಕ ಕಸರತ್ತು ನಡೆಸ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.
ಬಾಂಬ್ ಇಡಲು ಸೋಮವಾರ ಹೋಟೆಲ್ ಬಿಟ್ಟು ತೆರಳುವಾಗ ನೀಲಿ ಬಣ್ಣದ ಡಂಬಲ್ಸ್ ಗಳನ್ನು ಹೋಟೆಲ್ನಲ್ಲೇ ಬಿಟ್ಟು ಹೋಗಿದ್ದು, ಆ ಡಂಬಲ್ಸ್ ಮತ್ತು ಪುಶಪ್ ಸಾಧನ ಹೋಟೆಲ್ ಸಿಬ್ಬಂದಿಗಳ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಹೀಗಾಗಿ ಅದನ್ನು ಜೋಪಾನ ಮಾಡಿ ಇಡಲಾಗಿತ್ತು. ಈಗ ಆ ಎರಡೂ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರು: ಹೊಳೆಯುವ ಪದಾರ್ಥಕ್ಕೆ ಗ್ರಾಮೀಣ ಭಾಗದಲ್ಲಿ ಮಿಣಿ ಮಿಣಿ ಎಂಬ ಪದ ಬಳಕೆ ಮಾಡಲಾಗುತ್ತದೆ. ಆ ಪದವನ್ನು ಟ್ರೋಲ್ ಮಾಡುವ ಮೂಲಕ ಕನ್ನಡ ಮತ್ತು ಗ್ರಾಮೀಣ ಕರ್ನಾಟಕಕ್ಕೆ ಅಪಮಾನ ಮಾಡಿದಂತೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.
ದೇಶದಲ್ಲಿ ಇಂದು ನಡೆಯುತ್ತಿರುವುದು ಕುಟಿಲ ರಾಜಕಾರಣ. ಅದರ ಭಾಗವೇ ಕೊಂಕು, ಟ್ರೋಲ್ ಗಳು. ಒಬ್ಬ ನಾಯಕನ ವಿರುದ್ಧ ಎದುರು ನಿಂತು ಹೋರಾಡಲಾಗದ ಹೇಡಿಗಳು ಗೇಲಿ, ಅಪಹಾಸ್ಯದ ತಂತ್ರದ ಮೂಲಕ ನಾಯಕನ ಹನನಕ್ಕೆ ನಿಲ್ಲುತ್ತಾರೆ. ಮಿಣಿ ಮಿಣಿ ಎಂಬ ಶಬ್ಧ ಇಟ್ಟುಕೊಂಡು ಬಿಜೆಪಿ ಮಾಡುತ್ತಿರುವುದು ಅದೇ ಹೇಡಿಗಳ ಕೆಲಸ.
ನಾನು ಸುಳ್ಳಾಡಿಲ್ಲ, ನಿಂದನಾತ್ಮಕ ಪದ ಬಳಸಿಲ್ಲ. ಪತ್ರಿಕೆಯೊಂದರ ವರದಿ ಓದಿ ಸತ್ಯ ಮಾತಾಡಿದ್ದೇನೆ. ಆದಿತ್ಯ 'ರಾವ್' ಎಂಬ ಉಗ್ರನ ರಕ್ಷಣೆಗೆ ನಿಂತಿರುವ ಬಿಜೆಪಿ ನನ್ನ ಸತ್ಯದ ಮಾತನ್ನೇ ಗೇಲಿ ಮಾಡುತ್ತಿದೆ. ಬಿಜೆಪಿ ಸತ್ಯ, ಧರ್ಮಗಳ ವಿರೋಧಿ. 3/4
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) January 28, 2020
ನಾನು ಹಿಂದೆಯೇ ಹೇಳಿದಂತೆ, ಪಾಕಿಸ್ತಾನ, ನಾಜಿ ಜೀನ್ ಹೊಂದಿರುವ ಬಿಜೆಪಿಗೆ ಕನ್ನಡದ ಮೂಲ ನಿವಾಸಿ ಸಮುದಾಯದ ನಾಯಕರನ್ನು ಕಂಡರೆ ಉರಿ. ಅದಕ್ಕೇ ಈ ಮಣ್ಣಿನ ಮೂಲ ನಿವಾಸಿ ಸಮುದಾಯದ ಪ್ರತಿನಿಧಿಯಾದ ನನ್ನನ್ನು ಹಣಿಯಲು ಪ್ರಯತ್ನಿಸುತ್ತಿದೆ. ಎದುರಲ್ಲಿ ನಿಂತು ಹೋರಾಡಲಾಗದೇ ಗೇಲಿ ಮೂಲಕ ಹಣಿಯಲು ನಿಂತಿದೆ ಬಿಜೆಪಿ. ಇದನ್ನೂ ಓದಿ: ಮಿಣಿ ಮಿಣಿ ಪೌಡರ್ ಹೇಳಿಕೆ ವೈರಲ್- ಹೆಚ್ಡಿಕೆ ಮೊದಲ ಪ್ರತಿಕ್ರಿಯೆ
ಗ್ರಾಮೀಣ ಕನ್ನಡದಲ್ಲಿ ಹೊಳೆಯುವ ಪದಾರ್ಥಕ್ಕೆ ಮಿಣಿಮಿಣಿ ಎನ್ನಲಾಗುತ್ತದೆ. ಅದು ಶುದ್ಧ ಕನ್ನಡ, ಗ್ರಾಮೀಣ ಪದ. ಅದನ್ನೇ ಅಪಮಾನಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರೆ ಅದು ಕನ್ನಡಕ್ಕೆ, ಗ್ರಾಮೀಣ ಕರ್ನಾಟಕಕ್ಕೆ ಮಾಡಿದ ಅಪಮಾನ. ಎಷ್ಟೇ ಆಗಲಿ ಬಿಜೆಪಿಗರ ಜೀನ್ ಪಾಕಿಸ್ತಾನದ್ದಲ್ಲವೇ. ಅದಕ್ಕೇ ಅವರಿಗೆ ಕನ್ನಡದ ಪದಗಳು ತಾತ್ಸಾರ. 4/4
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) January 28, 2020
ನಾನು ಸುಳ್ಳಾಡಿಲ್ಲ, ನಿಂದನಾತ್ಮಕ ಪದ ಬಳಸಿಲ್ಲ. ಪತ್ರಿಕೆಯೊಂದರ ವರದಿ ಓದಿ ಸತ್ಯ ಮಾತಾಡಿದ್ದೇನೆ. ಆದಿತ್ಯ ‘ರಾವ್’ ಎಂಬ ಉಗ್ರನ ರಕ್ಷಣೆಗೆ ನಿಂತಿರುವ ಬಿಜೆಪಿ ನನ್ನ ಸತ್ಯದ ಮಾತನ್ನೇ ಗೇಲಿ ಮಾಡುತ್ತಿದೆ. ಬಿಜೆಪಿ ಸತ್ಯ, ಧರ್ಮಗಳ ವಿರೋಧಿ. ಗ್ರಾಮೀಣ ಕನ್ನಡದಲ್ಲಿ ಹೊಳೆಯುವ ಪದಾರ್ಥಕ್ಕೆ ಮಿಣಿಮಿಣಿ ಎನ್ನಲಾಗುತ್ತದೆ. ಅದು ಶುದ್ಧ ಕನ್ನಡ, ಗ್ರಾಮೀಣ ಪದ. ಅದನ್ನೇ ಅಪಮಾನಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರೆ ಅದು ಕನ್ನಡಕ್ಕೆ, ಗ್ರಾಮೀಣ ಕರ್ನಾಟಕಕ್ಕೆ ಮಾಡಿದ ಅಪಮಾನ. ಎಷ್ಟೇ ಆಗಲಿ ಬಿಜೆಪಿಗರ ಜೀನ್ ಪಾಕಿಸ್ತಾನದ್ದಲ್ಲವೇ. ಅದಕ್ಕೇ ಅವರಿಗೆ ಕನ್ನಡದ ಪದಗಳು ತಾತ್ಸಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ: ಬಾಂಬರ್ ಆದಿತ್ಯನ ತನಿಖಾ ಪುರಾಣದಲ್ಲಿ ಅಗೆದಷ್ಟು ವಿಷಯಗಳು ಸಿಗ್ತಾಯಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆದಿತ್ಯನ ವಿಚಾರಣೆ ಇಂದು ತವರು ಜಿಲ್ಲೆಗೆ ಶಿಫ್ಟ್ ಆಗಿದೆ. ಮಂಗಳೂರು ಏರ್ ಪೋರ್ಟಿನಲ್ಲಿ ಬಾಂಬ್ ಇಟ್ಟು ಸೀದಾ ಬಂದದ್ದು ವಡಭಾಂಡೇಶ್ವರದ ಬಲರಾಮ ದೇವರ ಸನ್ನಿಧಿಗೆ ಅಂತ ಆದಿತ್ಯ ಬಾಯಿ ಬಿಟ್ಟಿದ್ದಾನೆ. ಖತರ್ನಾಕ್ ಆದಿತ್ಯ ಪುರಾಣಕ್ಕೆ ಸೈನೈಡ್ ಈಗ ತಗ್ಲಾಕೊಂಡಿದೆ.
ಮಂಗಳೂರು ಏರ್ಪೋರ್ಟಿಗೆ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಸೈಕೋ ಬಾಂಬರ್ ತನಿಖೆ ಶುರುವಾಗಿದೆ. ತನಿಖೆ ವೇಳೆ ಮಾಹಿತಿಗಳನ್ನು ಬಹಿರಂಗ ಮಾಡಿರುವ ಆದಿತ್ಯ, ಹಲವು ಬ್ಯಾಂಕಿನಲ್ಲಿ ಲಾಕರ್ ಗಳನ್ನು ಪಡೆದಿರುವ ಮಾಹಿತಿ ನೀಡಿದ್ದಾನೆ. ತನಿಖಾಧಿಕಾರಿ ಬೆಳ್ಳಿಯಪ್ಪ ಆರೋಪಿಯನ್ನು ಕಡಿಯಾಳಿಯ ಕರ್ಣಾಟಕ ಬ್ಯಾಂಕಿಗೆ ಕರೆತಂದಿದ್ದಾರೆ. ಲಾಕರ್ ನಲ್ಲಿ ಕೆಲ ವಸ್ತುಗಳನ್ನು ಇಟ್ಟ ಬಗ್ಗೆ ಆದಿತ್ಯ ಹೇಳಿದ್ದ. 4ನೇ ಶನಿವಾರ ಬ್ಯಾಂಕ್ ರಜೆ ಇದ್ದರೂ ಬಾಗಿಲು ತೆರೆಸಿ ತನಿಖೆ ಮಾಡಲಾಯ್ತು.
ಲಾಕರ್ ತೆರೆದಾಗ ಬೆಚ್ಚಿಬಿದ್ದ ಪೊಲೀಸರು:
ಸೈಕೋ ಬಾಂಬರ್ ಆದಿತ್ಯ ತನಿಖೆ ಮಾಡುತ್ತಾ ಲಾಕರ್ ನಲ್ಲಿ ಆದಿತ್ಯ ಇಟ್ಟದ್ದ ಬಾಕ್ಸ್ ಗಳನ್ನು ತೆರೆದು ನೋಡಿದಾಗ ಚಿನ್ನದ ಆಭರಣ ಇಡುವ ಬಾಕ್ಸ್ ಪತ್ತೆಯಾಗಿದೆ. ಬಾಕ್ಸ್ ಒಳಗೆ ಅನುಮಾನಾಸ್ಪದ ಪುಡಿ ಪತ್ತೆಯಾಗಿದೆ. ಎಫ್ ಎಸ್ ಎಲ್ ತಜ್ಞರಿಗೆ ಪೊಲೀಸರು ಅದನ್ನು ಒಪ್ಪಿಸಲಿದ್ದಾರೆ.
ಮಂಗಳೂರಿನ ಚಿನ್ನದಂಗಡಿಯಿಂದ ಖರೀದಿಸಿದ್ನಂತೆ ಸೈನೈಡ್:
ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಬ್ಯಾಂಕ್ ಲಾಕರ್ ನಿಂದ ಅನುಮಾನಾಸ್ಪದ ವಸ್ತುಗಳು, ದಾಖಲೆಗಳು, ಸರ್ಟಿಫಿಕೇಟ್ ಗಳನ್ನು ವಶಕ್ಕೆ ಪಡೆದಿದೆ. ವಿಮಾನ ನಿಲ್ದಾಣದಲ್ಲಿ ಸ್ಫೋಟಿಸಲು ವರ್ಷದ ಹಿಂದೆಯಿಂದ ತಯಾರಿ ಮಾಡಿದ್ನಾ ಎಂಬ ಬಗ್ಗೆ ಸಂಶಯ ಶುರುವಾಗಿದೆ. ಯಾಕಂದರೆ ಆದಿತ್ಯ ಲಾಕರ್ ಓಪನ್ ಮಾಡಿ ವರ್ಷ ಒಂದೂವರೆ ಕಳೆದಿದೆ. ಇದನ್ನೂ ಓದಿ: ಮಂಗ್ಳೂರು ಬಾಂಬರ್ ಆದಿತ್ಯ ರಾವ್ನನ್ನು ಎನ್ಐಎ ವಶಕ್ಕೆ ಪಡೆಯುತ್ತಾ..?
ಹುಸಿ ಬಾಂಬ್ ಕರೆ ಮಾಡಿದ್ದೇ ಉಡುಪಿಯ ಮಲ್ಪೆಯಿಂದ:
ಆರೋಪಿ ಆದಿತ್ಯನನ್ನು ಉಡುಪಿಯಿಂದ ಮಲ್ಪೆಗೆ ಶಿಫ್ಟ್ ಮಾಡಲಾಯ್ತು. ಇಲ್ಲಿನ ವಡಭಾಂಡೇಶ್ವರ ದೇವಸ್ಥಾನದ ಬಳಿ ಮಹಜರಿಗೆ ಕರೆತರಲಾಯ್ತು. ಮಂಗಳೂರು ಏರ್ ಪೋರ್ಟ್ ಬಳಿ ಬಾಂಬ್ ಇಟ್ಟ ಆದಿತ್ಯ ಸೀದಾ ಮಲ್ಪೆಗೆ ಬಂದಿದ್ದಾನೆ. ಇಲ್ಲಿನ ಪೆಟ್ಟಿಗೆ ಅಂಗಡಿಯೊಂದರ ಬಳಿ ಕುಳಿತು ಇಂಡಿಗೋ ವಿಮಾನದಲ್ಲಿ ಮತ್ತೊಂದು ಬ್ಯಾಗ್ ಬಾಂಬ್ ಇಟ್ಟಿದ್ದೇನೆಂದು ಹೇಳಿ ಸಿಮ್ ಕಾರ್ಡ್ ಬಿಸಾಕಿ ಕಾಲ್ಕಿತ್ತಿದ್ದಾನೆ. ಇದನ್ನು ಮಹಜರು ವೇಳೆ ಆದಿತ್ಯನೇ ಒಪ್ಪಿಕೊಂಡಿದ್ದಾನೆ.
ಏರ್ ಪೋರ್ಟ್ ಟರ್ಮಿನಲ್ ಮ್ಯಾನೇಜರ್ಗೆ ಆದಿತ್ಯ ಕರೆ ಮಾಡಿದ ನಂತರ ಕಾರ್ಕಳ ಮೂಲದ ಜಿಂ ಮಾಸ್ಟರ್ ಗೆ ಫೋನ್ ಮಾಡಿ ಕಾರ್ಕಳಕ್ಕೆ ಹೊರಟಿದ್ದಾನೆ. ಈ ಎಲ್ಲಾ ಫೋನ್ ಕರೆಗಳು ಮಲ್ಪೆ ಫೋನ್ ಟವರಲ್ಲಿ ದಾಖಲಾಗಿದೆ.
ಆದಿತ್ಯ ರಾವ್ ಏರ್ ಪೋರ್ಟ್ ಬಾಂಬಿಗೆ ಫೈನಲ್ ಟಚ್ ಕೊಟ್ಟ ಕಾರ್ಕಳದ ಕಿಂಗ್ಸ್ ಬಾರಿನಲ್ಲಿ ಆದಿತ್ಯನ ಚಟುವಟಿಕೆಗಳ ಮಹಜರು ನಡೆಯಿತು. ಬಾರ್ ಮಾಲೀಕರು- ಸಿಬ್ಬಂದಿ ಜೊತೆ ಪೊಲೀಸರು ಮಾಹಿತಿ ಪಡೆದರು. ಏರ್ ಪೋರ್ಟ್ ಅಧಿಕಾರಿಗಳ ಕೋಪದಲ್ಲಿ ಬಾಂಬ್ ಫಿಕ್ಸ್ ಮಾಡಿದ ಆದಿತ್ಯ, ಮಾನಸಿಕವಾಗಿ ಕುಗ್ಗಿದ್ದಾಗ ಸೈನೈಡ್ ಜಗಿದು ಸಾಯಲು ರೆಡಿ ಮಾಡಿಕೊಂಡಿದ್ದ ಎಂಬೂದು ಗೊತ್ತಾಗುತ್ತಿದೆ. ಆದಿತ್ಯನ ಪುರಾಣದಲ್ಲಿ ಇನ್ನೆಷ್ಟು ಅಧ್ಯಾಯಗಳಿವೆ ಎಂಬೂದು ಸದ್ಯದ ಕುತೂಹಲ.
– ಕೇಂದ್ರಕ್ಕೆ ವರದಿ ಸಲ್ಲಿಸಿದ ತನಿಖಾ ತಂಡ
– ಸ್ಥಳ ಮಹಜರು ವೇಳೆ ಸತ್ಯ ಬಾಯ್ಬಿಟ್ಟ ಆದಿತ್ಯ
ಮಂಗಳೂರು: ಭಯೋತ್ಪಾದಕ ಕೃತ್ಯ ಎಂದೇ ಪರಿಗಣಿತವಾಗಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಂಗಳೂರು ಪೊಲೀಸರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಆದಿತ್ಯ ರಾವ್ ಬಗ್ಗೆ ಕೇಂದ್ರಕ್ಕೆ ವರದಿ ರವಾನೆಯಾಗಿದೆ. ಪೊಲೀಸರ ಪ್ರಾಥಮಿಕ ವರದಿಯನ್ನು ಕೇಂದ್ರ ಗೃಹ ಇಲಾಖೆ ಪರಿಶೀಲಿಸಲಿದ್ದು, ಎನ್ಐಎ ತನಿಖೆ ಅಗತ್ಯವಿದೆಯೇ ಅನ್ನುವ ಬಗ್ಗೆ ನಿರ್ಧರಿಸಲಿದೆ.
ಬಾಂಬರ್ ಆದಿತ್ಯನನ್ನು ಪೊಲೀಸರು ಮಂಗಳೂರು ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಆರೋಪಿ ಆದಿತ್ಯನನ್ನು ವಿಚಾರಣೆ ನಡೆಸಿದ ಪೊಲೀಸರು, ಸಮಗ್ರ ವರದಿಯನ್ನು ರೆಡಿ ಮಾಡಿದ್ದರು. ಬಾಂಬ್ ತಯಾರಿಕೆ, ಅದಕ್ಕೆ ಬಳಸಿದ ವಸ್ತುಗಳು, ಏರ್ ಪೋರ್ಟ್ ಅಧಿಕಾರಿಗಳು ಟಾರ್ಗೆಟ್ ಆಗಿರುವುದು ಇತ್ಯಾದಿ ವಿಚಾರಗಳ ಬಗ್ಗೆ ಆರೋಪಿ ನೀಡಿದ್ದ ಮಾಹಿತಿಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇಡೀ ಪ್ರಕರಣದ ಕುರಿತ ವರದಿಯನ್ನು ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳು ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ಚೆನ್ನೈನಿಂದ ರಾಸಾಯನಿಕ ತರಿಸಿದ್ದ ಬಾಂಬರ್- ಸ್ಫೋಟಕ ವಿಚಾರ ಬಾಯ್ಬಿಟ್ಟ ಆದಿತ್ಯ
ತನಿಖಾಧಿಕಾರಿ ಮಂಗಳೂರು ಉತ್ತರ ಎಸಿಪಿ ಕೆ.ಯು ಬೆಳ್ಳಿಯಪ್ಪ ರೆಡಿ ಮಾಡಿದ್ದ ವಿಚಾರಣಾ ವರದಿ ರಾಜ್ಯ ಗೃಹ ಇಲಾಖೆಗೆ ಸಲ್ಲಿಕೆಯಾಗಿದ್ದು ಅಲ್ಲಿಂದ ಕೇಂದ್ರ ಸರ್ಕಾರಕ್ಕೆ ರವಾನೆಯಾಗಿದೆ. ಆರೋಪಿ ನೀಡಿರುವ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇನ್ನಷ್ಟು ತನಿಖೆ ಅಗತ್ಯವಿದ್ದರೆ ವಿಚಾರಣೆಗೆ ಪ್ರತ್ಯೇಕ ತಂಡವನ್ನು ಕಳಿಸಿಕೊಡುವ ಸಾಧ್ಯತೆಯಿದೆ.
ಅಗತ್ಯ ಕಂಡು ಬಂದಲ್ಲಿ ಭಯೋತ್ಪಾದಕ ಕೃತ್ಯಗಳ ಬಗ್ಗೆ ತನಿಖೆ ನಡೆಸುವ ರಾಷ್ಟ್ರೀಯ ತನಿಖಾ ದಳ ಆರೋಪಿಯನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ. ಹೀಗಾಗಿ ಮಂಗಳೂರು ಪೊಲೀಸರು ನೀಡಿರುವ ರಿಪೋರ್ಟ್ ಮಹತ್ವದ್ದಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತೆಗೆದುಕೊಳ್ಳುವ ನಿರ್ಣಯದ ಮೇಲೆ ಪ್ರಕರಣ ಯಾವ ರೀತಿಯ ತಿರುವು ಪಡೆಯುತ್ತೆ ಅನ್ನೋದು ನಿರ್ಧಾರವಾಗಲಿದೆ. ಇದನ್ನೂ ಓದಿ: ಮಂಗಳೂರು ಬಾಂಬರ್ ಮೇಲೆ ಮತ್ತೊಂದು ಕೇಸ್ ದಾಖಲು
ಭಯೋತ್ಪಾದಕರಿಗೆ ಬಳಸುವಂತಹ ಕಠಿಣ ಕಾನೂನುಗಳನ್ನು ಪೊಲೀಸರು ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ತಂಡಗಳು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚಿದೆ. ಇದೇ ವೇಳೆ ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿ ಕೊಂಡೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಜೀವಂತ ಬಾಂಬ್ ಪತ್ತೆ ವಿಚಾರ ಇಡೀ ದೇಶದ ಗಮನ ಸೆಳೆದ ಪ್ರಕರಣವಾಗಿದ್ದು ಸಹಜವಾಗೇ ಆದಿತ್ಯ ರಾವ್ ಹೈಪ್ರೊಫೈಲ್ ಆರೋಪಿಯಾಗಿ ಬದಲಾಗಿದ್ದಾನೆ.
ಆರೋಪಿ ಉತ್ತರದಿಂದ ಅಚ್ಚರಿಗೊಂಡ ಪೊಲೀಸರು:
ಪೊಲೀಸರು ಸ್ಥಳ ಮಹಜರು ನಡೆಸಿದ ವೇಳೆ ತೀರಾ ಸಹಜವಾಗಿ ಆರೋಪಿ ಉತ್ತರ ನೀಡುತ್ತಿದ್ದುದು ಪೊಲೀಸರನ್ನೇ ಅಚ್ಚರಿಗೊಳಿಸಿತ್ತು. ಬಾಂಬ್ ಇದ್ದ ಬ್ಯಾಗ್ ಇಟ್ಟಿದ್ದ ಟಿಕೆಟ್ ಕೌಂಟರ್ ಬಳಿಯ ಕುರ್ಚಿಯನ್ನು ತೋರಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾನೆ. ಪೊಲೀಸರ ಜೊತೆ ತುಳುವಿನಲ್ಲಿಯೇ ಸಂಭಾಷಣೆ ನಡೆಸುತ್ತಾ ಆಟೋ ಇಳಿದು ಎಸ್ಕಲೇಟರ್ ಮೂಲಕ ಮೇಲಿಂದ ಹತ್ತಿ ಬಂದಿದ್ದನ್ನು ತೋರಿಸಿದ್ದಾನೆ. ಮುಖಕ್ಕೆ ಮಾಸ್ಕ್ ಹಾಕಿದ್ದರೂ, ಯಾವುದನ್ನೂ ಆಲಕ್ಷಿಸದೆ ಪೊಲೀಸರ ಪ್ರಶ್ನೆಗಳಿಗೆ ಉತ್ತರ ನೀಡಿದ್ದನು. ಬಳಿಕ ಏರ್ ಪೋರ್ಟ್ ಬಳಿಯಿಂದ ಆಟೋ ಮೂಲಕ ಕೆಂಜಾರು ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿನ ಸೆಲೂನ್ ಬಳಿಯಿದ್ದ ಬ್ಯಾಗ್ ತೆಗೆದುಕೊಂಡಿದ್ದನ್ನೂ ಉಲ್ಲೇಖಿಸಿದ್ದಾನೆ. ಇದನ್ನೂ ಓದಿ: ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್
ಪೊಲೀಸರು ಈಗಾಗಲೇ ಆರೋಪಿಯನ್ನು ಹತ್ತು ದಿನಗಳ ಕಸ್ಟಡಿಗೆ ಪಡೆದಿದ್ದು ತನಿಖೆಯನ್ನು ಚೆನ್ನೈಗೆ ವಿಸ್ತರಿಸಲಿದ್ದಾರೆ. ಚೆನ್ನೈನಿಂದ ಬಾಂಬ್ ತಯಾರಿಕೆಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿದ್ದು, ಆ ಬಗ್ಗೆ ಪೊಲೀಸರು ಅಲ್ಲಿಗೆ ಕೊಂಡೊಯ್ದು ವಿಚಾರಣೆ ನಡೆಸಲಿದ್ದಾರೆ. ಒಟ್ಟಿನಲ್ಲಿ ಆದಿತ್ಯ ರಾವ್ ಸಂಪೂರ್ಣ ಜಾತಕ ಈಗ ಪೊಲೀಸರ ಕೈಸೇರಿದ್ದು, ಇನ್ನು ಯಾವ ರೀತಿಯ ತನಿಖೆಗೆ ಒಳಪಡಲಿದ್ದಾನೆ ಅನ್ನೋದು ಕುತೂಹಲ ಅಷ್ಟೇ. ಇದನ್ನೂ ಓದಿ: ಮಂಗ್ಳೂರು ಸ್ಫೋಟ ಪ್ರಕರಣ- ಪಬ್ಲಿಕ್ ಟಿವಿಗೆ ಶಂಕಿತ ಉಗ್ರನ ವಿಡಿಯೋಗಳು ಲಭ್ಯ
ಬಾಗಲಕೋಟೆ: ಮಂಗಳೂರು ಏರ್ ಪೋರ್ಟಿನಲ್ಲಿ ಆದಿತ್ಯ ರಾವ್ ಇಟ್ಟಿದ್ದ ಬಾಂಬ್ ಗಿಂತ ರೇಣುಕಾಚಾರ್ಯ ಹಾಕಿದ ಬಾಂಬ್ ದೊಡ್ಡದೆಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ ನಂಜಯ್ಯನಮಠ್ ಲೇವಡಿ ಮಾಡಿದರು.
ಮಸೀದಿಗಳಲ್ಲಿ ಮದ್ದುಗುಂಡು ಸಂಗ್ರಹಿಸಿದ್ದಾರೆಂಬ ರೇಣುಕಾಚಾರ್ಯ ಹೇಳಿಕೆಗೆ ಬಾಗಲಕೋಟೆಯಲ್ಲಿ ಪ್ರತಿಕ್ರಿಯಿಸಿದ ನಂಜಯ್ಯನಮಠ್, ಸಮಾಜವನ್ನು ಕುಲುಷಿತಗೊಳಿಸುವ ಉಡಾಫೆ ಹಾಗೂ ಬೇಜವಾಬ್ದಾರಿ ಹೇಳಿಕೆಯನ್ನು ಖಂಡಿಸುತ್ತೇನೆ. ಅಧಿಕೃತ ಮಾಹಿತಿ ಇದ್ದರೆ ಗೃಹ ಸಚಿವರು, ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕಿತ್ತು. ಮದ್ದುಗುಂಡು ನೋಡಿದ್ರೆ ಕಂಪ್ಲೆಂಟ್ ಕೊಡಿ. ರಾಜ್ಯ ಮತ್ತು ಕೇಂದ್ರದಲ್ಲಿ ನಿಮ್ಮದೇ ಪಕ್ಷದ ಸರ್ಕಾರಗಳು ಇವೆ ಅಂತ ಸವಾಲು ಹಾಕಿದರು.
ಹೇಳಿಕೆಗಳು ಸಮಾಜವನ್ನು ಬದುಕಲು ಬಿಡಬೇಕೇ ವಿನಃ ಬೆಂಕಿ ಹಚ್ಚುವ ಕೆಲಸ ಮಾಡಬಾರದು. ಬಿಜೆಪಿ, ಕಾಂಗ್ರೆಸ್, ಜನತಾದಳ ಎಲ್ಲ ಪಕ್ಷಗಳಿಗೆ ಇದು ಅನ್ವಯವಾಗುತ್ತೆ. ಯಾವ ಮಸೀದಿಯಲ್ಲಿ ಮದ್ದುಗುಂಡು ಇದೆ ಎಂದು ರೇಣುಕಾಚಾರ್ಯ ತೋರಿಸಬೇಕು. ಇಲ್ಲವೇ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಬಾಗಲಕೋಟೆ ಕಾಂಗ್ರೆಸ್ ಘಟಕದಿಂದ ಕಾನೂನು ಹೋರಾಟ ಮಾಡುತ್ತೇವೆ. ಅವರೊಬ್ಬ ಸಾರ್ವಜನಿಕರ ಎದುರು ವಿದೂಷಕನಂತೆ ಇದ್ದಾರೆ ಎಂದು ಗೇಲಿ ಮಾಡಿದ್ರು.
ಇದೇ ವೇಳೆ ಮಹಾಸರ್ಕಾರ ಬೆಳಗಾವಿ ಸೇರಿ ರಾಜ್ಯದ ಗಡಿ ತಂಟೆಗೆ ಬಂದ್ರೆ ಬೆಂಬಲ ವಾಪಸ್ ಪಡೆಯಿರಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಒತ್ತಾಯ ಮಾಡಿದ್ರು. ಮುಗಿದು ಹೋದ ಗಡಿ ಅಧ್ಯಾಯ ಕೆದಕುವುದು ಸರಿಯಲ್ಲ. ನೆಲ, ಜಲ, ಭಾಷೆಯ ವಿಚಾರದಲ್ಲಿ ರಾಜಿಯಿಲ್ಲ. ಠಾಕ್ರೆ, ಸಂಜಯ್ ರಾವತ್ ಬೆಂಕಿ ಹಾಕುವ ಕೆಲಸ ಮಾಡ್ತಿದ್ದಾರೆ. ಮೊದಲೇ ಬೆಳಗಾವಿಯಲ್ಲಿ ಕನ್ನಡಿಗರ ಪರಿಸ್ಥಿತಿ ಗಂಭೀರ ಇದೆ. ಮಹಾಜನ ವರದಿ ಬಗ್ಗೆ ಉತ್ತಮ ಅಭಿಪ್ರಾಯ ಎರಡು ನಾಡಿನವರು ಕೊಟ್ಟಿದ್ದಾರೆ. ಇನ್ನೊಮ್ಮೆ ಈ ರೀತಿ ಕೆದಕಿದರೆ, ಉಡಾಫೆ ತಕರಾರು ಮಾಡಿದ್ರೆ, ಮಹಾರಾಷ್ಟ್ರ ಸರ್ಕಾರಕ್ಕೆ ಕೊಟ್ಟಿರುವ ಬೆಂಬಲ ವಾಪಸ್ ಪಡೆಯಲು ಆಗ್ರಹಿಸುವುದಾಗಿ ಎಚ್ಚರಿಕೆ ನೀಡಿದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಳಂಬ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸೋನಿಯಾಗಾಂಧಿ ತೆಗೆದುಕೊಳ್ಳುವ ನಿರ್ಣಯಕ್ಕೆ ನಮ್ಮ ಒಲವು ಇದೆ. ಯಾರಾದ್ರೂ ಬೇಗ ಆಗಿಬರಲಿ. ಬಹಳ ದಿನ ಜಾಗ ಖಾಲಿ ಇಡಬಾರದು. ಈಗಾಗಲೇ ಕಾರ್ಯಕರ್ತರು ಬಹಳಷ್ಟು ನೊಂದಿದ್ದಾರೆ. ಒಂದು ಅಧ್ಯಕ್ಷರನ್ನೂ ಮಾಡಲು ಆಗಿಲ್ಲ ನಿಮಗೆ, ಹೋಗಿ ಎಂದು ಜನ ಮಾತಾಡುವಂತೆ ಆಗಬಾರದು. ಅದೆಷ್ಟು ಬೇಗವೋ ಅಷ್ಟು ಬೇಗ ಆಯ್ಕೆ ಆಗಲಿ. ಇಲ್ಲಾಂದ್ರೆ ಏನೋ ಒಂದು ಗ್ರಹಣ ಹಿಡಿದಂತೆ ಆಗುತ್ತದೆ ಎಂದರು.
ಬೆಂಗಳೂರು: ಮಂಗಳೂರು ಏರ್ಪೋರ್ಟ್ನಲ್ಲಿ ಪತ್ತೆಯಾಗಿದ್ದ ಬಾಂಬ್ ಪ್ರಕರಣ ಜನರ ಮನಸ್ಸಿನಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು. ಇದೀಗ ಪೊಲೀಸರು ಬಾಂಬರ್ ಆದಿತ್ಯ ರಾವ್ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಚಂದನವನದಲ್ಲಿ ಮಂಗಳೂರು ಬಾಂಬ್ ಪ್ರಕರಣವನ್ನು ತೆರೆ ಮೇಲೆ ತರಲು ಕೆಲಸಗಳು ಶುರುವಾಗಿವೆ.
ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘1st ರ್ಯಾಂಕ್ ಟೆರರಿಸ್ಟ್ ಆದಿತ್ಯ’ ಎಂಬ ಹೆಸರಲ್ಲಿ ಟೈಟಲ್ ರಿಜಿಸ್ಟರ್ ಆಗಿದೆ. ಇದೀಗ ಪತ್ರಕರ್ತ, ಬರಹಗಾರ ಚಕ್ರವರ್ತಿ ಚಂದ್ರಚೂಡ್ ಈ ಪ್ರಕರಣವನ್ನು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ನಿರ್ದೇಶಕ ಪ್ರೇಮ್ ನಾಯಕನಟರಾಗಿ ಕಾಣಿಸಿಕೊಳ್ಳಲಿದ್ದಾರೆ.
ಚಂದ್ರಚೂಡ್ ಅವರು ಈ ಚಿತ್ರಕ್ಕೆ ‘I am ಕಲ್ಕಿ’ ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಪ್ರೇಮ್ ಕೆಲ ವರ್ಷಗಳ ಹಿಂದೆ ಶಿವಣ್ಣ ಮತ್ತು ಸುದೀಪ್ ಕಾಂಬಿನೇಷನ್ನಲ್ಲಿ ‘ಕಲ್ಕಿ’ ಚಿತ್ರವನ್ನು ಶುರು ಮಾಡಿದ್ದರು. ಆದರೆ ಆ ಸಿನಿಮಾ ಸೆಟ್ಟೇರಿಲ್ಲ. ಇದೀಗ ಚಂದ್ರಚೂಡ್ ಮಂಗಳೂರು ಬಾಂಬ್ ಪ್ರಕರಣದ ಚಿತ್ರಕ್ಕೆ ಇದೇ ಹೆಸರನ್ನು ಇಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಚಂದ್ರಚೂಡ್, ನಾವು ಬಾಂಬ್ ವಿಚಾರವನ್ನೇ ಇಟ್ಟುಕೊಂಡು ಸಿನಿಮಾ ಮಾಡಲು ತಯಾರಿ ಮಾಡುತ್ತಿದ್ದೆವು. ಆದರೆ ಯಾವ ಕಥೆಯೂ ಕೂಡ ಫೈನಲ್ ಆಗಿರಲ್ಲಿ. ಇದೇ ವೇಳೆ ಆದಿತ್ಯ ರಾವ್ ಘಟನೆ ನಡೆಯಿತು. ಹೀಗಾಗಿ ಈ ಕಥೆಗೆ ಸೂಕ್ತವಾಗುತ್ತದೆ ಎಂದು ಮಂಗಳೂರು ಬಾಂಬ್ ಪ್ರಕರಣದ ದೃಶ್ಯ ಈ ಚಿತ್ರದಲ್ಲಿ ಇರಲಿದೆ. ಇದೊಂದು ಕ್ರೈಂ ಥ್ರಿಲ್ಲರ್ ಚಿತ್ರವಾಗಿದೆ ಎಂದು ತಿಳಿಸಿದ್ದಾರೆ.
ಸುರೇಶ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ಚಂದ್ರಚೂಡ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಸಿನಿಮಾವನ್ನು ಕನ್ನಡ ಮತ್ತು ತಮಿಳು ಎರಡು ಭಾಷೆಗಳಲ್ಲಿ ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ರೇಮ್ ಈ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಸಿನಿಮಾದ ಕಥೆ ಕೇಳಿದ ತಕ್ಷಣ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಪ್ರೇಮ್ ಅವರು ‘ಏಕ್ ಲವ್ ಯಾ’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಚಿತ್ರತಂಡ ಮುಖ್ಯವಾಗಿರುವ ಆದಿತ್ಯ ರಾವ್ ಪಾತ್ರವನ್ನು ಯಾರು ಮಾಡಬೇಕು ಅನ್ನೋದನ್ನು ಚರ್ಚಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎಂದು ತಿಳಿದು ಬಂದಿದೆ.
ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಆದಿತ್ಯ ರಾವ್ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ.
ಬಜ್ಪೆ ವಿಮಾನ ನಿಲ್ದಾಣದ ಸಿಬ್ಬಂದಿ ಅಬ್ದುಲ್ ಹಮೀದ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಆದಿತ್ಯ ರಾವ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಜ.20ರ ಮಧ್ಯಾಹ್ನ 2.30ಕ್ಕೆ ಆದಿತ್ಯರಾವ್ ಇಂಡಿಗೋ ಮ್ಯಾನೇಜರ್ ಅವರಿಗೆ, ಹೈದರಾಬಾದಿಗೆ ತೆರಳುತ್ತಿರುವ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬೆದರಿಕೆ ಕರೆ ಮಾಡಿದ್ದ. ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ಬಾಂಬರ್ ಆದಿತ್ಯರಾವ್ ಮಾಸ್ಟರ್ ಪ್ಲಾನ್ ಕೇಳಿ ದಂಗಾದ ಬೆಂಗಳೂರು ಪೊಲೀಸರು
ಮಧ್ಯಾಹ್ನ 2.15ಕ್ಕೆ ಹೈದರಾಬಾದ್ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೋ ವಿಮಾನ ಮರಳಿ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್ಗೆ ತೆರಳಬೇಕಿತ್ತು. ಚೆಕ್ ಇನ್ ಆಗಿ ಎಲ್ಲ ಪ್ರಯಾಣಿಕರನ್ನು ವಿಮಾನದ ಒಳಗಡೆ ಕಳುಹಿಸಲಾಗಿತ್ತು.
ವಿಮಾನ ಟೇಕಾಫ್ ಆಗಲು ಸಿದ್ಧತೆ ನಡೆಯುತ್ತಿದ್ದಾಗ ಇಂಡಿಗೋ ಕಚೇರಿಗೆ ದೂರವಾಣಿ ಕರೆ ಬಂದಿತ್ತು. ಹೈದರಾಬಾದ್ಗೆ ತೆರಳುವ ಇಂಡಿಗೋ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಆಗಂತುಕನೊಬ್ಬ ಕರೆ ಮಾಡಿ ಬೆದರಿಸಿದ್ದ.
ಬೆದರಿಕೆ ಕರೆ ಬಂದ ಬಗ್ಗೆ ಸಿಬ್ಬಂದಿ ನಿಲ್ದಾಣದ ಭದ್ರತಾ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಕೂಡಲೇ ಜಾಗೃತರಾದ ನಿಲ್ದಾಣದ ಭದ್ರತಾ ಸಿಬ್ಬಂದಿ ಇಂಡಿಗೋ ವಿಮಾನ ಸಂಚಾರಕ್ಕೆ ತಡೆ ನೀಡಿ ಎಲ್ಲ ಪ್ರಯಾಣಿಕರನ್ನು ಮರಳಿ ಟರ್ಮಿನಲ್ಗೆ ಕರೆತಂದಿದ್ದರು.
ವಿಮಾನದಲ್ಲಿದ್ದ ಪ್ರತಿಯೊಂದು ಬ್ಯಾಗ್ನ್ನು ಹೊರತೆಗೆದು ಕೂಲಂಕಷವಾಗಿ ತಪಾಸಣೆ ಮಾಡಲಾಯಿತು. ಸಂಜೆ 4 ಗಂಟೆಗೆ ಆರಂಭಗೊಂಡ ತಪಾಸಣೆ ರಾತ್ರಿ 7.30ರವರೆಗೂ ನಡೆದಿತ್ತು. ತಪಾಸಣೆ ಪೂರ್ಣಗೊಂಡ ಬಳಿಕ ಇದೊಂದು ಹುಸಿ ಕರೆ ಎಂಬ ತೀರ್ಮಾನಕ್ಕೆ ಭದ್ರತಾ ಸಿಬ್ಬಂದಿ ಬಂದ ನಂತರ ಇಂಡಿಗೋ ವಿಮಾನ ಹೈದರಾಬಾದಿಗೆ ಪ್ರಯಾಣ ಬೆಳೆಸಿತ್ತು.
ಬೆಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿ ಶರಣಾಗಿರುವ ಆರೋಪಿ ಆದಿತ್ಯ ರಾವ್ ಮಾಸ್ಟರ್ ಪ್ಲಾನ್ ಕೇಳಿ ಪೊಲೀಸರೇ ಕಕ್ಕಾಬಿಕ್ಕಿಯಾಗಿದ್ದಾರೆ.
ಹೌದು. ಮಂಗಳವಾರ ಬೆಳಗ್ಗೆ ಆದಿತ್ಯ ರಾವ್ ಬೆಂಗಳೂರಿನಲ್ಲಿರುವ ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದ. ಶರಣಾದ ನಂತರ ಬೆಂಗಳೂರಿನಲ್ಲೇ ಶರಣಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಆದಿತ್ಯ ರಾವ್ ನೀಡಿದ ಉತ್ತರವನ್ನು ಕೇಳಿ ಪೊಲೀಸರು ದಂಗಾಗಿದ್ದಾರೆ.
ಯಾವುದೇ ಕೃತ್ಯ ಮಾಡಿದ ನಂತರ ಆರೋಪಿಗಳು ಪರಾರಿಯಾಗುವುದು ಸಾಮಾನ್ಯ ಸಂಗತಿ. ಆದರಲ್ಲೂ ಅಪರೂಪದ ಪ್ರಕರಣದಲ್ಲಿ ಆರೋಪಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ನ್ಯಾಯಾಲಯಕ್ಕೆ ಹಾಜರಾಗಿ ಶರಣಾಗುತ್ತಾರೆ ಹೊರತು ಡಿಜಿ ಐಜಿಪಿ ಕಚೇರಿಗೆ ಹಾಜರಾಗಿ ಶರಣಾಗುವುದಿಲ್ಲ. ಆದರೆ ಉಡುಪಿ ಮೂಲದ ಆದಿತ್ಯ ರಾವ್ ನೇರವಾಗಿ ಬೆಳಗ್ಗೆ ಬೆಂಗಳೂರಿನ ಡಿಜಿ ಕಚೇರಿಗೆ ಆಗಮಿಸಿ ಶರಣಾಗಿದ್ದನ್ನು ನೋಡಿ ಪೊಲೀಸರಲ್ಲಿ ಕುತೂಹಲ ಮೂಡಿಸಿತ್ತು. ಹೀಗಾಗಿ ಆತನ ಪ್ರಾಥಮಿಕ ವಿಚಾರಣೆಯಲ್ಲಿ ಈ ಬಗ್ಗೆ ಪೊಲೀಸರು ಪ್ರಶ್ನೆ ಕೇಳಿದ್ದಾರೆ. ಇದನ್ನೂ ಓದಿ: ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್
ಈ ಪ್ರಶ್ನೆಗೆ ಆದಿತ್ಯ ರಾವ್, ಸಿಸಿಟಿವಿ ವಿಡಿಯೋ, ಫೋಟೋ ಬಿಡುಗಡೆ ಮಾಡಿದ ನಂತರ ಹೇಗೂ ಪೊಲೀಸರು ನನ್ನನ್ನು ಬಂಧಿಸುತ್ತಾರೆ ಎನ್ನುವುದು ಖಚಿತವಾಯಿತು. ಪೊಲೀಸರು ಬಂಧಿಸುವ ಮೊದಲು ನಾನೇ ಶರಣಾದರೆ ಉತ್ತಮ ಎಂಬ ತೀರ್ಮಾನಕ್ಕೆ ಬಂದೆ. ಬಂಧಿಸುವ ಮೊದಲು ನಾನು ದೊಡ್ಡ ಸುದ್ದಿಯಾಗಬೇಕು. ಮಂಗಳೂರಿನಲ್ಲಿ ಶರಣಾದರೆ ಅದಕ್ಕೆ ದೊಡ್ಡ ಮಟ್ಟದ ಪ್ರಚಾರ ಸಿಗುವುದಿಲ್ಲ. ದೊಡ್ಡ ಮಟ್ಟದ ಪ್ರಚಾರ ಪಡೆಯುವ ಆಸೆಯಿಂದಲೇ ನಾನು ಡಿಜಿ ಕಚೇರಿಯಲ್ಲಿ ಶರಣಾಗಿದ್ದೇನೆ ಎಂದು ಹೇಳಿದ್ದಾನೆ. ಆದಿತ್ಯ ರಾವ್ ತನ್ನ ಪ್ರಚಾರದ ತಂತ್ರವನ್ನು ಬಿಚ್ಚಿಡುತ್ತಿದ್ದಂತೆ ವಿಚಾರಣೆ ನಡೆಸುತ್ತಿದ್ದ ಪೊಲೀಸರು ಸಹ ಒಂದು ಕ್ಷಣ ಕಕ್ಕಾಬಿಕ್ಕಿ ಆಗಿದ್ದರು ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಸೋಮವಾರ ರಾತ್ರಿಯೇ ಉಡುಪಿ ಬಿಟ್ಟಿದ್ದ ಆದಿತ್ಯ ರಾವ್, ಶಿವಮೊಗ್ಗಕ್ಕೆ ಹೋಗಿ ಅಲ್ಲಿಂದ ಲಾರಿಯಲ್ಲಿ ಬೆಂಗಳೂರು ತಲುಪಿದ್ದಾನೆ. ಮಂಗಳವಾರ ಬೆಳಗ್ಗೆ ಡಿಜಿಪಿ ನೀಲಮಣಿ ರಾಜು ಎದುರು ಶರಣಾಗಿದ್ದಾನೆ. ಕೂಡಲೇ ಪೊಲೀಸರು, ಆತನನ್ನ ಹಲಸೂರು ಗೇಟ್ ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದರು. ಮಧ್ಯಾಹ್ನ ವೈದ್ಯಕೀಯ ಪರೀಕ್ಷೆ ನಡೆಸಲಾಯಿತು. ನಂತರ 1ನೇ ಎಸಿಎಂಎಂ ಕೋರ್ಟ್ ಮುಂದೆ ಹಾಜರುಪಡಿಸಿ ಟ್ರಾನ್ಸಿಟ್ ವಾರೆಂಟ್ ಮೂಲಕ ಆರೋಪಿಯನ್ನು ಮಂಗಳೂರು ಪೊಲೀಸರು ವಶಕ್ಕೆ ಕೂಡ ಪಡೆದರು. ಸಂಜೆ 7.30ರ ವಿಮಾನದಲ್ಲಿ ಮಂಗಳೂರಿಗೆ ಕರೆದೊಯ್ಯಲಾಯ್ತು. ಇದೀಗ ಸಿಸಿಬಿ ಕಚೇರಿಯಲ್ಲಿ ಆದಿತ್ಯನನ್ನು ಇರಿಸಲಾಗಿದ್ದು, ಇಂದು ಮಂಗಳೂರು ಕೋರ್ಟ್ ಮುಂದೆ ಹಾಜರುಪಡಿಸಲಾಗುತ್ತದೆ.