ಬೆಳಗಾವಿ: ಸರಿಯಾದ ಸಮಯಕ್ಕೆ ವೆಂಟಿಲೇಟರ್ ಬೆಡ್ ಸಿಗದೇ ನಾಲ್ವರು ರೋಗಿಗಳು ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಎರಡು ಗಂಟೆಯಲ್ಲಿ ನಾಲ್ವರು ರೋಗಿಗಳು ಕುಟುಂಬಸ್ಥರ ಮುಂದೆಯೇ ನರಳಿ ನರಳಿ ಪ್ರಾಣ ಬಿಟ್ಟಿದ್ದಾರೆ.
ನಾಲ್ಕು ಗಂಟೆಗಳ ಹಿಂದೆ 56 ವರ್ಷ ವ್ಯಕ್ತಿಯನ್ನ ಬೆಳಗಾವಿಯ ಬಿಮ್ಸ್ ಗೆ ಕರೆತರಲಾಗಿತ್ತು. ಆಕ್ಸಿಜನ್ ಬೆಡ್ ನೀಡುವಂತೆ ರೋಗಿಯ ಸಂಬಂಧಿ ಆಸ್ಪತ್ರೆಯ ಸಿಬ್ಬಂದಿ ಬಳಿ ಮನವಿ ಮಾಡಿಕೊಳ್ಳುತ್ತಿದ್ದರು. ಬೆಡ್ ಸಿಗುವ ವೇಳೆಗಾಗಲೇ ವ್ಯಕ್ತಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಇದರಿಂದ ಆಕ್ರೋಶಗೊಂಡ ಮಹಿಳೆ, ಇಷ್ಟು ದೊಡ್ಡ ಆಸ್ಪತ್ರೆಯಲ್ಲಿ ನಮಗೆ ಬೆಡ್ ಸಿಗಲಿಲ್ಲ. ಸರ್ಕಾರಕ್ಕೆ ಒಂದು ವೆಂಟಿಲೇಟರ್ ವ್ಯವಸ್ಥೆ ಮಾಡಿಕೊಡಲು ಸಾಧ್ಯ ಆಗಲಿಲ್ಲ. ಮನುಷ್ಯರ ಜೀವ ಉಳಿಸುವ ಮಾನವೀಯತೆ ಸಹ ಇಲ್ಲಿಲ್ಲ ಎಂದು ಸರ್ಕಾರಕ್ಕೆ ಹಿಡಿ ಶಾಪ ಹಾಕಿದರು.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರೋರಿಗೆ ಬೆಡ್, ಆಕ್ಸಿಜನ್ ಸಿಗುತ್ತಿಲ್ಲ. ನನ್ನ ಮುಂದೆಯೇ ವೆಂಟಿಲೇಟರ್ ಇಲ್ಲದೇ ನಾಲ್ವರು ಸಾವನ್ನಪ್ಪಿದ್ದಾರೆ. ನಾವುಇ ಕರೆದುಕೊಂಡ ಬಂದ ರೋಗಿಯ ಪಲ್ಸ್ ರೇಟ್ ಕಡಿಮೆ ಆಗಿತ್ತು. ಆ ವೇಳೆಗೆ ಆಕ್ಸಿಜನ್ ಬಂದಿದ್ದರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ರೋಗಿಗಳ ಸಂಬಂಧಿಕರಿಗೆ ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳುವಂತೆ ಹೇಳಲಾಗುತ್ತಿದೆ. ಹೊರಗಡೆ ಚಿಕ್ಕ ಚಿಕ್ಕ ಆಕ್ಸಿಜನ್ ಸಿಲಿಂಡರ್ ಗಳು ಟೋಕನ್ ವ್ಯವಸ್ಥೆಯಲ್ಲಿ ಸಿಗುತ್ತಿವೆ. ನಮಗೆ ಆಕ್ಸಿಜನ್ ಸಿಲಿಂಡರ್ ತರಲು ಹೇಳಿದ್ರೆ ಹೇಗೆ ಎಂದು ಯುವಕ ಪ್ರಶ್ನೆ ಮಾಡಿದ್ದಾನೆ.
ಬೆಂಗಳೂರು. ಆಕ್ಸಿಜನ್ ಕೊರತೆಗೆ ಸರ್ಕಾರ ಕಾರಣ ಅಲ್ಲ ಎಂದು ಸಚಿವ ಎಸ್.ಟಿ.ಸೋಮಶೇಖರ್ ಉಡಾಫೆ ಉತ್ತರ ನೀಡಿದ್ದಾರೆ.
ಆರೋಗ್ಯ ಸಚಿವ ಸುಧಾಕರ್ ಅವರನ್ನ ಭೇಟಿಯಾದ ನಂತರ ಎಸ್.ಟಿ.ಸೋಮಶೇಖರ್ ಮಾಧ್ಯಮಗಳ ಜೊತೆ ಮಾತನಾಡಿ, ಎಲ್ಲರಂತೆ ಸರ್ಕಾರವನ್ನು ಸಮರ್ಥಿಸಿಕೊಂಡರು. ಸಂಜೆ ಸಭೆ ಬಳಿಕ ಅಲ್ಲಿ ಚರ್ಚೆ ಮಾಡುತ್ತೇವೆ. ಆಕ್ಸಿಜನ್ ಕೊರತೆ ಆಗದಂತೆ ನೋಡಿಕೊಳ್ಳಲು ನೋಡಲ್ ಅಧಿಕಾರಿಗಳು ಇರ್ತಾರೆ. ಅವರು ಕೆಲಸ ಮಾಡದೇ ಹೋದ್ರೆ ಸರ್ಕಾರಕ್ಕೆ ಕೆಟ್ಟ ಹೆಸರು. ಅಧಿಕಾರಿಗಳ ನಿರ್ಲಕ್ಷ್ಯ ಇದರಲ್ಲಿದೆ ಎಂದು ಹೇಳಿ ಜಾರಿಕೊಂಡರು.
ಎರಡು ಗಂಟೆಗೆ ಆಕ್ಸಿಜನ್ ಖಾಲಿ ಆಗುತ್ತೆ ಗೊತ್ತಿದ್ರೆ, 12 ಗಂಟೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಅಧಿಕಾರಿಗಳು ಕೆಲಸ ಮಾಡಿಲ್ಲ ಎಂದು ಹೇಳಿ ಕಾರ್ ಹೋದರು. ಇತ್ತ ಆರೋಗ್ಯ ಸಚಿವ ಕೆ. ಸುಧಾಕರ್, ಕಲಬುರಗಿ ಆಕ್ಸಿಜನ್ ದುರಂತಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದರು.
– ನನ್ನಳಿಯ ನನಗೆ ಬೇಕು, ಮಗಳನ್ನ ಹೀಗೆ ನೋಡಲಾರೆ: ಕಣ್ಣೀರಿಟ್ಟ ಹೆತ್ತೊಡಲು – ಪತ್ನಿಗೆ ಕರೆ ಮಾಡಿ ನರಳಿ ನರಳಿ ಸಾವನ್ನಪ್ಪಿದ ಸೋಂಕಿತ
ಚಾಮರಾಜನಗರ: ರಾಜ್ಯ ಸರ್ಕಾರದ ಕುಂಭಕರ್ಣನ ನಿದ್ದೆಗೆ 24 ಅಮಾಯಕ ಜೀವಗಳು ಬಲಿಯಾಗಿದೆ. ಈ ದುರಂತದಲ್ಲಿ ಪತಿಯನ್ನ ಕಳೆದುಕೊಂಡು ನವ ವಧು ನನ್ನ ತಾಳಿ ಉಳಿಸಿಕೊಡಿ ಅಂತ ಕಣ್ಣೀರಿಟ್ಟ ದೃಶ್ಯ ನೋಡಿದವರು ಕಣ್ಣೀರು ಹಾಕುವಂತಿತ್ತು. ಇಷ್ಟು ಚಿಕ್ಕ ವಯಸ್ಸಿನ ಮಗಳನ್ನ ಹೀಗೆ ನೋಡಲಾರೆ ಅಂತ ಸೆರಗೊಡ್ಡಿ ಅಳಿಯನನ್ನ ಉಳಿಸಿಕೊಡಿ ಎಂದು ಹೆತ್ತಮ್ಮ ಕಣ್ಣೀರಿಡುತ್ತಿತ್ತು.
ಬೆಳಗ್ಗೆ ಇಡ್ಲಿ ತರೋಕೆ ಹೇಳಿದ್ರು:
ಬೆಂಗಳೂರಿನ ಯಲಹಂಕದ ಮಹಾದೇವ ಸ್ವಾಮಿ ಎಂಬ 28 ವರ್ಷದ ಯುವಕನಿಗೆ ಪಾಸಿಟಿವ್ ಆಗಿತ್ತು. 3 ದಿನಗಳ ಹಿಂದೆ ಬೆಂಗಳೂರಲ್ಲಿ ವೆಂಟಿಲೇಟರ್ ಇಲ್ಲ ಎಂದು ಕುಟುಂಬಸ್ಥರು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆಕ್ಸಿಜನ್ ಸಿಗದೇ ಸೋಂಕಿತ ಸಾವನ್ನಪ್ಪಿದ್ದಾನೆ. ಜಿಲ್ಲಾಸ್ಪತ್ರೆ ಮುಂದೆ ಕುಟುಂಬಸ್ಥರು ಬಿದ್ದು ಹೊರಳಾಡಿದ್ರು. ನಮಗೆ ಫೆಬ್ರವರಿ 21ಕ್ಕೆ ಮದ್ವೆ ಆಗಿತ್ತು. ನಿನ್ನೆ ರಾತ್ರಿ ಅವರಿಗೆ ನಾನೇ ಊಟ ಮಾಡಿಸಿ ಬಂದಿದ್ದೆ. ಬೆಳಗ್ಗೆ ತಿಂಡಿಗೆ ಇಡ್ಲಿ ಬೇಕೆಂದು ಹೇಳಿದ್ದರು. ಆದರೆ ಬೆಳಗ್ಗೆ ನೋಡಿದ್ರೆ ಹೀಗಾಗಿದೆ ಎಂದು ಮಹಾದೇವ ಸ್ವಾಮಿ ಪತ್ನಿ ಗೋಳಾಡಿದರು.
ಮದ್ವೆಯಾಗಿ 2 ತಿಂಗಳು ಆಗಿತ್ತು:
ಮಹದೇವಸ್ವಾಮಿ ಮದುವೆಯಾಗಿ ಎರಡು ತಿಂಗಳು ಆಗಿತ್ತು. ನಿನ್ನೆ ರಾತ್ರಿ ಹತ್ತೂವರೆ ಸುಮಾರಿಗೆ ಹೆಂಡ್ತಿಗೆ ವಿಡಿಯೋ ಕಾಲ್ ಮಾಡಿದ್ದಾನೆ. ನನಗೆ ಆಕ್ಸಿಜನ್ ಪ್ರಾಬ್ಲಂ ಆಗ್ತಿದೆ. ಆಕ್ಸಿಜನ್ ಕೊಡ್ತಿಲ್ಲ ಅಂತ ಹೇಳಿದ್ದಾನೆ. ಆಗ ತಕ್ಷಣ ನರ್ಸ್ ಬಂದು ಫೋನ್ ಕಿತ್ತಿಕೊಂಡು ಇಟ್ಟುಕೊಂಡಿದ್ದಾರೆ. ಆಮೇಲೆ ಅವನು ನಾಲ್ಕೂವರೆ ಗಂಟೆ ನರಳಾಡಿ ನರಳಾಡಿ ಪ್ರಾಣ ಬಿಟ್ಟಿದ್ದಾನೆ ಅಂತ ಮೃತನ ಸಂಬಂಧಿ ಆರೋಪಿಸಿದ್ದಾರೆ. 24 ಸೋಂಕಿತರ ಸಾವಿಗೆ ಕಾರಣವಾದ ಚಾಮರಾಜನಗರ ಜಿಲ್ಲಾಸ್ಪತ್ರೆ ಎದುರು ಮೃತರ ಕುಟುಂಬಸ್ಥರು ಹಿಡಿ ಶಾಪ ಹಾಕುತ್ತಿದ್ದರು. ಮೃತದೇಹದ ಮೇಲೆ ರಕ್ತದ ಕಲೆಗಳನ್ನು ಗಮನಿಸಿ ಅನುಮಾನ ವ್ಯಕ್ತಪಡಿಸುವ ದೃಶ್ಯಗಳು ಕಂಡು ಬಂದವು.
ಇಷ್ಟಾದ್ರೂ ಸರ್ಕಾರ ಮಾತ್ರ ಸಾಧ್ಯವಾದಷ್ಟೂ ನುಣಚಿಕೊಳ್ಳುವ ಮೂಲಕ ತನ್ನ ಹಳೆ ನಿರ್ಲಕ್ಷ್ಯದ ಚಾಳಿಯನ್ನ ಮುಂದುವರಿಸಿಕೊಂಡು, ಸಭೆ ಮಾಡ್ತೀವಿ, ಚರ್ಚೆ ಮಾಡ್ತೀವಿ, ತನಿಖೆ ಮಾಡ್ತೀವಿ ಅಂತ ತೋಚಿದ್ದನ್ನ ಹೇಳ್ಕೊಂಡು ಬೀಸೋ ದೊಣ್ಣೆಯಿಂದ ಪಾರಾದ್ರೆ ಸಾಕು ಅಂತ ಓಡಾಡ್ತಿದೆ.
ಫೆಬ್ರವರಿ ಆರಂಭದಲ್ಲಿ ಕೊರೊನಾ ಸ್ಫೋಟದ ಮುನ್ಸೂಚನೆಯನ್ನ ತಜ್ಞರು ನೀಡಿದ್ರೂ ಸರ್ಕಾರ ಮಾತ್ರ ಏನೂ ಆಗಿಲ್ಲ ಅನ್ನುವಂತೆ ತನ್ನ ರಾಜಕಾರಣದಲ್ಲಿ ಮೈಮರೆತಿತ್ತು. ಈಗ ಸರ್ಕಾರದ ಬೇಜಾವಾಬ್ದಾರಿಗೆ 24 ಜೀವಗಳು ಬಲಿಯಾಗಿವೆ. ಒಂದೊಂದು ಕುಟುಂಬದ್ದು ಕಣ್ಣೀರ ಕಥೆ. ಕೇಳಿದ್ರೆ ಕಲ್ಲು ಹೃದಯದಲ್ಲಿ ಕಣ್ಣೀರು ಜಿನುಗುತ್ತೆ. ತಮ್ಮವರನ್ನ ಕಳೆದುಕೊಂಡವರ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಅದಕ್ಕಿಂತ ಸಾಮಾನ್ಯ ಜನರು ಏನು ಮಾಡೋದಕ್ಕೆ ಸಾಧ್ಯ ಇಲ್ಲ ಅನ್ನೋದು ತಿಳಿದ ಹುಂಬ ಸರ್ಕಾರ ಒಂದು ಸುದ್ದಿಗೋಷ್ಠಿ ನಡೆಸಿ ಅವರಿವರ ಮೇಲೆ ಆರೋಪ ಮಾಡಿ ಕೈ ತೊಳೆದುಕೊಳ್ಳೋಕೆ ಮುಂದಾದಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಚಾಮರಾಜನಗರ: ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ 24 ರೋಗಿಗಳು ಸಾವನ್ನಪ್ಪಿರುವ ವಿಚಾರದಲ್ಲಿ ಸರ್ಕಾರ ತನ್ನ ಸಮರ್ಥನೆಯ ಚಾಳಿಯನ್ನ ಮುಂದುವರಿಸಿದೆ. ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸುರೇಶ್ ಕುಮಾರ್ ಮತ್ತು ಆರೋಗ್ಯ ಸಚಿವ ಕೆ.ಸುಧಾಕರ್, ಆಕ್ಸಿಜನ್ ಇಲ್ಲದೇ ಮೂವರಷ್ಟೇ ಸಾವನ್ನಪ್ಪಿದ್ದು ಅಂತ ಸಮರ್ಥಿಸಿಕೊಂಡಿದ್ದಾರೆ. ಹಾಗಾದ್ರೆ ಸಚಿವರ ಪ್ರಕಾರ ಆ ಮೂರು ಜೀವಗಳಿಗೆ ಬೆಲೆ ಇಲ್ಲವಾ ಅನ್ನೋ ಪ್ರಶ್ನೆಯೊಂದು ಮೂಡಿದೆ.
ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗ್ತಿದ್ದಂತೆ ಎಚ್ಚೆತ್ತ ಸಚಿವರು ಚಾಮರಾಜನಗರಕ್ಕೆ ದೌಡಾಯಿಸಿದರು. ಪರಿಶೀಲನೆ ನಡೆಸಿ ಇಬ್ಬರು ಸುದ್ದಿಗೋಷ್ಠಿ ನಡೆಸಿದರು. ಜಿಲ್ಲಾಸ್ಪತ್ರೆಯಲ್ಲಿ 24 ಕೋವಿಡ್ ಸಂಬಂಧಿತ ಸಾವು ಆಗಿದೆ. ಆಮ್ಲಜನಕದ ಕೊರತೆಯಿಂದ 24 ಜನ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ. ಎಲ್ಲ ಸಾವುಗಳು ಆಮ್ಲಜನಕ ಕೊರತೆಯಿಂದ ಸಂಭವಿಸಿಲ್ಲ. ಬೇರೆ ಬೇರೆ ಕಾರಣಗಳಿಂದಲೂ ಸಾವನ್ನಪ್ಪಿದ್ದಾರೆ. ಈ ಕುರಿತು ತನಿಖೆ ನಡೆಬೇಕಿದೆ. ಸರ್ಕಾರ ಸಹ ಮೂರು ದಿನಗಳಲ್ಲಿ ವರದಿ ಸಲ್ಲಿಸುವಂತೆ ಸೂಚಿಸಿದೆ ಎಂದು ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಹೇಳಿದರು.
24 ಅಲ್ಲ 35: ನನ್ನ ಪ್ರಕಾರ ಆಮ್ಲಜನಕ 34 ರಿಂದ 35 ಜನ ಸಾವನ್ನಪ್ಪಿದ್ದಾರೆ. ಪ್ರತಿದಿನ ಜಿಲ್ಲಾ ಸರ್ಜನ್, ಡಿಸಿ ಜೊತೆ ಮಾತನಾಡುತ್ತಿದ್ದೇನೆ. ನಿನ್ನೆ ವೈದ್ಯಾಧಿಕಾರಿಗಳು ಆಕ್ಸಿಜನ್ ಕೊರತೆ ಇದೆ ಎಂದು ಹೇಳಿದ್ದರು. ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ಮೈಸೂರು ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತನಾಡುವಂತೆ ಹೇಳಿದ್ರು. ಅವರಿಗೆ ಹೇಳಿದ್ರೂ ಆಕ್ಸಿಜನ್ ಬರಲಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಆರೋಪಿಸಿದ್ದಾರೆ. ಇದನ್ನೂ ಓದಿ: ದುರಂತದ ನಡುವೆ ವಿಚಿತ್ರ ಘಟನೆ – ಬದುಕಿದ್ರೂ ಸತ್ತಿದ್ದಾರೆ ಅಂತ ಸುಳ್ಳು ಮಾಹಿತಿ-ವೆಂಟಿಲೇಟರ್ನಲ್ಲಿದ್ದ ಅಮ್ಮನ ಕಂಡು ನಿಟ್ಟುಸಿರು ಬಿಟ್ಟ ಪುತ್ರ
ಚಾಮರಾಜನಗರ: ಜಿಲ್ಲೆಯಲ್ಲಿ ಸಾವನ್ನಪ್ಪಿರೋದು 24 ಅಲ್ಲ, 34 ರಿಂದ 35 ಜನರು ಎಂದು ಕಾಂಗ್ರೆಸ್ ಶಾಸಕರಾದ ಪುಟ್ಟರಂಗಶೆಟ್ಟಿ ಮತ್ತು ನರೇಂದ್ರ ಗಂಭೀರ ಆರೋಪ ಮಾಡಿದ್ದಾರೆ.
ಸರ್ಕಾರ ಸರಿಯಾಗಿ ಆಮ್ಲಜನಕ ಪೂರೈಕೆ ಮಾಡುತ್ತಿಲ್ಲ. ನಾನು ಸರ್ಕಾರದ ಕಾರ್ಯದರ್ಶಿ ರವಿಕುಮಾರ್ ಜೊತೆ ಮಾತನಾಡಿದ್ರೂ ಆಕ್ಸಿಜನ್ ಪೂರೈಕೆಯಾಗಿಲ್ಲ. ಒಬ್ಬರು ಮತ್ತೊಬ್ಬರನ್ನ ಕೇಳಿ ಎಂದು ಹೇಳಿ ನುಣಚಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದ್ರೆ ಅವರ ವಿರುದ್ಧ ಎಫ್ಐಆರ್ ಆಗಲಿ. ಈ ಕುರಿತು ನ್ಯಾಯಾಂಗ ತನಿಖೆ ನಡೆಸಬೇಕೆಂದು ಶಾಸಕ ನರೇಂದ್ರ ಒತ್ತಾಯಿಸಿದ್ದಾರೆ.
ನನ್ನ ಕ್ಷೇತ್ರದವರು ಮೂರು ಜನ ಸಾವನ್ನಪ್ಪಿದ್ದಾರೆ. ಆದ್ರೆ ದಾಖಲೆಗಳಲ್ಲಿ ಒಬ್ಬರ ಹೆಸರು ಮಾತ್ರ ತೋರಿಸಲಾಗಿದೆ. ಹಾಗಾದ್ರೆ ಇನ್ನಿಬ್ಬರು ಎಲ್ಲಿ ಹೋದ್ರು ಎಂದು ಮೃತರ ಹೆಸರು ಮತ್ತು ವಿಳಾಸವನ್ನ ಬಹಿರಂಗಪಡಿಸಿದರು. ಕೆಲ ದಾಖಲೆಗಳ ಹಿಡಿದು ಶಾಸಕರಾದ ಪುಟ್ಟರಂಗಶೆಟ್ಟಿ ಮತ್ತು ನರೇಂದ್ರ ಸುದ್ದಿಗೋಷ್ಠಿ ನಡೆಸುತ್ತಿದ್ದರು. ಇಬ್ಬರ ಸುದ್ದಿಗೋಷ್ಠಿಗೆ ಆಕ್ಷೇಪ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ರವಿ ಮಧ್ಯ ಪ್ರವೇಶಿಸಿ ತಡೆದರು.
ನನ್ನ ಪ್ರಕಾರ ಆಮ್ಲಜನಕ 34 ರಿಂದ 35 ಜನ ಸಾವನ್ನಪ್ಪಿದ್ದಾರೆ. ಪ್ರತಿದಿನ ಜಿಲ್ಲಾ ಸರ್ಜನ್, ಡಿಸಿ ಜೊತೆ ಮಾತನಾಡುತ್ತಿದ್ದೇನೆ. ನಿನ್ನೆ ವೈದ್ಯಾಧಿಕಾರಿಗಳು ಆಕ್ಸಿಜನ್ ಕೊರತೆ ಇದೆ ಎಂದು ಹೇಳಿದ್ದರು. ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ಮೈಸೂರು ಜಿಲ್ಲಾಡಳಿತ ಸ್ಪಂದಿಸುತ್ತಿಲ್ಲ. ಮುಖ್ಯ ಕಾರ್ಯದರ್ಶಿಗಳ ಜೊತೆ ಮಾತನಾಡುವಂತೆ ಹೇಳಿದ್ರು. ಅವರಿಗೆ ಹೇಳಿದ್ರೂ ಆಕ್ಸಿಜನ್ ಬರಲಿಲ್ಲ ಎಂದು ಶಾಸಕ ಪುಟ್ಟರಂಗಶೆಟ್ಟಿ ಆರೋಪಿಸಿದ್ದಾರೆ.
ಓರ್ವ ಶಾಸಕರಿಗೆ ಅಧಿಕಾರಿಗಳು ಮಾಹಿತಿ ನೀಡುತ್ತಿಲ್ಲ. ಹಾಗಾಗಿ ಈ ಸಾವಿಗೆ ಸರ್ಕಾರವೇ ಕಾರಣ. ಮೃತರ ಕುಟುಂಬಗಳಿಗೆ ಸರ್ಕಾರ ಪರಿಹಾರ ನೀಡಬೇಕೆಂದು ಪುಟ್ಟರಂಗಶೆಟ್ಟಿ ಒತ್ತಾಯಿಸಿದರು.
ಮಂಡ್ಯ: ಆಕ್ಸಿಜನ್ ಕೊರತೆಯೇ ನಮ್ಮ ಮೇಜರ್ ಪ್ರಾಬ್ಲಂ. ಸದ್ಯ ಇವತ್ತು ಸಂಜೆಯವರೆಗೂ ಆಕ್ಸಿಜನ್ ಆಗಲಿದೆ. ಇವತ್ತು ರಾತ್ರಿ ಮತ್ತು ನಾಳೆಗೆ ಕಷ್ಟವಿದೆ. ಹಾಗಾಗಿ ನಾನೇ ಆಕ್ಸಿಜನ್ ಫಿಲ್ಲಿಂಗ್ ಕಂಪನಿಗೆ ಭೇಟಿ ನೀಡುತ್ತಿದ್ದೇನೆ ಎಂದು ಸಚಿವ ಕೆ.ಸಿ.ನಾರಾಯಣಗೌಡ ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಆಕ್ಸಿಜನ್ ಎಲ್ಲಿಯೂ ಸಿಗುತ್ತಿಲ್ಲ. ಮೆಡಿಕಲ್ ಕಾಲೇಜಿನಲ್ಲಿ 150 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಸಾಮಾನ್ಯ ರೋಗಿಗಳನ್ನ ಒಂದು ಕಡೆ ಶಿಫ್ಟ್ ಮಾಡಲಾಗಿದೆ. ತಾಲೂಕುಗಳಿಗೆ ಆಕ್ಸಿಜನ್ ಸಿಲಿಂಡರ್ ಗಳೇ ಹೋಗಬೇಕು. ದಿನಕ್ಕೆ 350 ರಿಂದ 400 ಸಿಲಿಂಡರ್ ಗಳ ಅವಶ್ಯಕತೆವಿದೆ. ಇದುವರೆಗೂ ಯಾವುದೇ ಸಮಸ್ಯೆ ಆಗಿಲ್ಲ. ಈಗ ಆಕ್ಸಿಜನ್ ಅಭಾವ ಕಾಣಿಸಿಕೊಂಡಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಆಕ್ಸಿಜನ್ ಅಭಾವ ಹಿನ್ನೆಲೆ ನಾನೇ ಫ್ಯಾಕ್ಟರಿಗೆ ತೆರಳಿ ಎಷ್ಟು ಸಾಧ್ಯವಾಗುತ್ತೋ ಅಷ್ಟು ತುಂಬಿ ಕಳುಹಿಸುವ ಕೆಲಸ ಮಾಡುತ್ತೇನೆ. ಇಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಬೇಕಾಗುತ್ತೆ ಅಂತ ಸರ್ಕಾರಕ್ಕೆ ಅಂದಾಜು ಇರಲಿಲ್ಲ. ಈಗ ಯಾರೇ ದಾಖಲಾದ್ರೂ ಆಕ್ಸಿಜನ್ ಕೇಳುತ್ತಾರೆ. ಗ್ರಾಮೀಣ ಭಾಗದ ಜನರು ಜ್ವರ ಬಂದ್ರೂ ಎಂಟರಿಂದ ಹತ್ತು ದಿನ ಅಲ್ಲೇ ಇರುತ್ತಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಆಸ್ಪತ್ರೆಗೆ ಬರುತ್ತಾರೆ. ಹಾಗಾಗಿ ಜಿಲ್ಲೆಯಲ್ಲಿ ಸಮಸ್ಯೆ ಆಗುತ್ತಿದೆ ಎಂದು ತಿಳಿಸಿದರು.
ಮಂಡ್ಯ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿ ಸಾವಿರಕ್ಕೂ ಅಧಿಕ ಬೆಡ್ ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ವಸತಿ ನಿಲಯಗಳನ್ನ ಕೋವಿಡ್ ಕೇರ್ ಸೆಂಟರ್ ಗಳಾಗಿ ಬದಲಾಯಿಸಲಾಗಿದೆ. ಜಿಲ್ಲೆಯ ಕೊರೊನಾ ಸೋಂಕಿತರು ಅಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿ ಡಿಸ್ಚಾರ್ಜ್ ಆಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಲಕ್ನೋ: ಉಸಿರಾಟದ ಸಮಸ್ಯೆಯಿಂದ ನರಳಾಡುತ್ತಿದ್ದ ತಾಯಿಗೆ ಮಗಳೇ ಬಾಯಿಯ ಉಸಿರು ನೀಡಲು ಪ್ರಯತ್ನಿಸಿರುವ ಹೃದಯವಿದ್ರಾವಕ ಘಟನೆ ಉತ್ತರ ಪ್ರದೇಶದ ಬಹರೈಚ್ ನಲ್ಲಿ ನಡೆದಿದೆ.
ಕೊರೊನಾ ಎರಡನೇ ಅಲೆಯಲ್ಲಿ ಆಕ್ಸಿಜನ್ ಕೊರತೆ ಕಾಣಿಸಿಕೊಂಡಿದ್ದು, ಸೋಂಕಿತರು ಪ್ರಾಣವಾಯುವಿನ ಸಿಲಿಂಡರ್ ಹಿಡಿದುಕೊಂಡು ಆಸ್ಪತ್ರೆಗೆ ಅಲೆದಾಡುತ್ತಿರುವ ದೃಶ್ಯಗಳು ಕಾಣ ಸಿಗುತ್ತಿವೆ. ಇನ್ನು ಕೆಲವರು ಸರಿಯಾದ ಸಮಯಕ್ಕೆ ಆಕ್ಸಿಜನ್ ಸಿಗದೇ ಕೊರೊನಾ ರೋಗಿಗಳು ಸಾವನ್ನಪ್ಪಿರುವ ಪ್ರಕರಣಗಳು ನಮ್ಮ ರಾಜ್ಯದಲ್ಲಿಯೂ ವರದಿಯಾಗಿವೆ. ಉತ್ತರ ಪ್ರದೇಶದಲ್ಲಿ ತಾಯಿ ನರಳಾಟ ನೋಡಲಾಗದೇ ಬಾಯಿಯ ಮೂಲಕ ಉಸಿರು ನೀಡುವ ಪ್ರಯತ್ನಿಸುತ್ತಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಹರೈಚ್ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗಳಿಗೆ ಅವರೇ ಸಂಬಂಧಿಕರೇ ಆಕ್ಸಿಜನ್ ವ್ಯವಸ್ಥೆ ಮಾಡುವ ಪರಿಸ್ಥಿತಿ ಬಂದಿದೆ. ಕೆಲ ದಿನಗಳ ಹಿಂದೆ ಕೊರೊನಾ ಸೋಂಕಿತ ಪತಿಗೆ ಪತ್ನಿ ಉಸಿರು ನೀಡಿ ಬದುಕಿಸಿಕೊಳ್ಳುವ ಮನಕಲಕುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.
ವಿಜಯಪುರ: ಆರೋಗ್ಯ ಸಚಿವರ ಜಿಲ್ಲೆಯ ಜಿಲ್ಲಾಸ್ಪತ್ರೆಯಲ್ಲಿ ಸರಿಯಾದ ಸಮಯಕ್ಕೆ ಆಕ್ಸಿಜನ್ ಪೂರೈಕೆ ಮಾಡದ ಕಾರಣಕ್ಕೆ ರೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ವಿಜಯಪುರ ತಾಲೂಕಿನ ಉತ್ನಾಳ ಗ್ರಾಮದ ನಿವಾಸಿ ಅನಿಲ್ ದೊಡ್ಡಮನಿ(40) ಮೃತ ದುರ್ದೈವಿ. ವಿಜಯಪುರದ ಜಿಲ್ಲಾಸ್ಪತ್ರೆಯಲ್ಲಿ ಹಳದಿ ಕಾಮಣಿ ಕಾಯಿಲೆ ಚಿಕಿತ್ಸೆಗಾಗಿ ಅನಿಲ್ ದಾಖಲಾಗಿದ್ದರು. ಆದರೆ ಇಂದು ಬೆಳಗ್ಗೆಯಿಂದ ಅನಿಲ್ಗೆ ಸರಿಯಾಗಿ ಆಸ್ಪತ್ರೆ ಸಿಬ್ಬಂದಿ ಚಿಕಿತ್ಸೆ ನೀಡಿಲ್ಲವಂತೆ. ಅಲ್ಲದೆ ಉಸಿರಾಟ ತೊಂದರೆಯಿಂದ ರೋಗಿ ಒದ್ದಾಡುತ್ತಿದ್ದಾಗ ಆಕ್ಸಿಜನ್ ನೀಡಿ ಎಂದು ಪತ್ನಿ ಕಲ್ಪನಾ ಮತ್ತು ಕುಟುಂಬಸ್ಥರು ಸಿಬ್ಬಂದಿ ಬಳಿ ಗೋಳಾಡಿದರು ಯಾರು ಕ್ಯಾರೆ ಅಂದಿಲ್ಲ ಎಂದು ಆರೋಪಿಸಲಾಗಿದೆ.
ರೋಗಿಗೆ ಆಕ್ಸಿಜನ್ ಪೂರೈಕೆ ಮಾಡುವ ಬದಲು ಆಸ್ಪತ್ರೆ ಸಿಬ್ಬಂದಿ ನಮ್ಮಲ್ಲಿ ಆಕ್ಸಿಜನ್ ಕೊರತೆ ಇದೆ ಎಂದು ಹೇಳಿ ಸುಮ್ಮನ್ನಾಗಿದ್ದಾರೆ. ಸರಿಯಾದ ಸಮಯಕ್ಕೆ ನನ್ನ ಪತಿಗೆ ಆಕ್ಸಿಜನ್ ನೀಡಿದ್ದರೆ ಅವರು ಬದುಕುತ್ತಿದ್ದರು ಎಂದು ರೋಗಿಯ ಪತ್ನಿ ಕಣ್ಣೀರಿಟ್ಟಿದ್ದಾರೆ.
ಇದೇ ರೀತಿ ಆಕ್ಸಿಜನ್ ಕೊರತೆಯಿಂದ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ. ಆದರೂ ಕೂಡ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆ ನಿಭಾಯಿಸಲು ಸಾಧ್ಯವಾಗಿಲ್ಲ. ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯದಿಂದ ತಮ್ಮವರನ್ನು ಕಳೆದುಕೊಂಡ ರೋಗಿಗಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.