Tag: ಆಂಬುಲೆನ್ಸ್

  • ವಿಧಾನಸೌಧದಲ್ಲೇ ಸಿಬ್ಬಂದಿಗೆ ಹೃದಯಾಘಾತ- ಆಸ್ಪತ್ರೆಗೆ ಸಾಗಿಸಲು ಪರದಾಟ

    ವಿಧಾನಸೌಧದಲ್ಲೇ ಸಿಬ್ಬಂದಿಗೆ ಹೃದಯಾಘಾತ- ಆಸ್ಪತ್ರೆಗೆ ಸಾಗಿಸಲು ಪರದಾಟ

    ಬೆಂಗಳೂರು: ಸಿಬ್ಬಂದಿಗೆ ವಿಧಾನಸೌಧದಲ್ಲೇ ಲಘು ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ಸಾಗಿಸಲು ಅಲ್ಲಿನ ಸಿಬ್ಬಂದಿ ಪರದಾಡಿದ ಘಟನೆ ನಡೆದಿದೆ.

    ಸಚಿವಾಲಯ ಸಿಬ್ಬಂದಿ ಅಮ್ಜದ್ ಪಾಶಾ ಅವರು ಇಂದು ಬೆಳಗ್ಗೆ ಎಂದಿನಂತೆ ಕೆಲಸಕ್ಕೆ ಬಂದಿದ್ದ ವೇಳೆ ವಿಧಾನ ಸೌಧದ ಒಳಗಡೆಯೇ ಅಸ್ವಸ್ಥರಾಗಿ ಬಿದ್ದಿದ್ದಾರೆ. ಆದ್ರೆ ಆ ಕೂಡಲೇ ಅವರಿಗೆ ತುರ್ತು ಚಿಕಿತ್ಸಾ ಸೌಲಭ್ಯವಿಲ್ಲದೇ ಸಿಬ್ಬಂದಿ ಗಲಿಬಿಲಿಗೊಂಡಿದ್ದಾರೆ.

    ಹೃದಯಾಘಾತ ಸಂಭವಿಸಿ ಪಾಶಾ ಬಿದ್ದಿದ್ದರೂ ಒಂದೆಡೆ ಸ್ಟ್ರೆಚರ್ ವ್ಯವಸ್ಥೆಯೂ ಇರಲಿಲ್ಲ. ಇನ್ನೊಂದೆಡೆ ಆಂಬುಲೆನ್ಸ್ ಕೂಡ ತಡವಾಗಿ ಬಂದಿದ್ದರಿಂದ ಸ್ಥಳದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಕೊನೆಗೆ ಕಚೇರಿ ಕುರ್ಚಿಯ ಮೂಲಕವೇ ಅವರನ್ನು ಸಚಿವಾಲಯ ಕಚೇರಿಯಿಂದ ಹೊರಗಡೆ ಕರೆತಂದಿದ್ದು, ಬಳಿಕ ಆಂಬುಲೆನ್ಸ್ ಮೂಲಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

    ಸದ್ಯ ಪಾಶಾ ಅವರ ಆರೋಗ್ಯದಲ್ಲಿ ಸುಧಾರಣೆ ಕಾಣುತ್ತಿದೆ ಎಂದು ತಿಳಿದುಬಂದಿದೆ.

  • ಮರ ಕಡಿಯುವಾಗ ಕೈಕೊಟ್ಟ ಮಿಷನ್- ಆಂಬುಲೆನ್ಸ್ ನಲ್ಲೇ 1 ಗಂಟೆ ನರಳಾಡಿದ ಗರ್ಭಿಣಿ

    ಮರ ಕಡಿಯುವಾಗ ಕೈಕೊಟ್ಟ ಮಿಷನ್- ಆಂಬುಲೆನ್ಸ್ ನಲ್ಲೇ 1 ಗಂಟೆ ನರಳಾಡಿದ ಗರ್ಭಿಣಿ

    ಬೀದರ್: ಮರ ಕಡಿಯುವಾಗ ಮಿಷನ್ ಕೈಕೊಟ್ಟಿದ್ದರಿಂದ ಸುಮಾರು 1 ಗಂಟೆಗಳ ಕಾಲ ಗರ್ಭಿಣಿ ಆಂಬುಲೆನ್ಸ್ ನಲ್ಲೇ ನರಳಾಟ ಅನುಭವಿಸಿರುವ ಘಟನೆ ಬೀದರ್ ತಾಲೂಕಿನ ಕೌಠೌ ಗ್ರಾಮದ ಬಳಿ ನಡೆದಿದೆ.

    ಕೌಠೌ ಗ್ರಾಮದ ಬಳಿ ಇರುವ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಒಂದು ಗಂಟೆಗಳ ಕಾಲ ಆಂಬುಲೇನ್ಸ್ ನಲ್ಲಿ ಗರ್ಭಿಣಿಯ ನರಳಾಟ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ.

    ಅರಣ್ಯ ಇಲಾಖೆಯ ಅಧಿಕಾರಿಗಳು ಮರ ಕಡಿಯುವ ಮುನ್ನ ಮುನ್ನೆಚ್ಚರಿಕೆಯಾಗಿ ಜೆಸಿಬಿ ತರದೆ ಮರ ಕಡಿಯಲು ಹೋಗಿದ್ದಾರೆ. ಆದರೆ ಮರ ಕಡಿಯುತ್ತಿದ್ದಂತೆ ಮಿಷನ್ ಕೈಕೊಟ್ಟಿದೆ. ಇದರಿಂದ ಮರ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಅದೇ ಮಾರ್ಗವಾಗಿ ಗರ್ಭಿಣಿಯೊಬ್ಬರು ಆಂಬುಲೆನ್ಸ್ ನಲ್ಲಿ ಹೆರಿಗೆಗಾಗಿ ಬೀದರ್ ಜಿಲ್ಲಾಸ್ಪತ್ರೆಗೆ ಹೋಗುತ್ತಿದ್ದರು. ಆದರೆ ಅರಣ್ಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರ್ಧ ಕಿಲೋಮೀಟರ್ ದೂರದ ವರೆಗೆ ಟ್ರಾಫಿಕ್ ಜಾಮ್ ಆಗಿದ್ದು, ಗರ್ಭಿಣಿ ನರಳಾಟ ಅನುಭವಿಸಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

    ಗರ್ಭಿಣಿಯ ನರಳಾಟ ನೋಡಿ ಸಾರ್ವಜನಿಕರು ಅರಣ್ಯ ಇಲಾಖೆಯ ಸಿಬ್ಬಂದಿಗಳ ಜೊತೆ ಕೈ ಜೋಡಿಸಿ ರಸ್ತೆಯಲ್ಲಿದ್ದ ಮರವನ್ನು ಪಕಕ್ಕೆ ಸರಿಸಿ ಆಂಬುಲೆನ್ಸ್ ಗೆ ದಾರಿ ಮಾಡಿಕೊಟ್ಟು ಮಾನವೀಯತೆ ಮರೆದಿದ್ದಾರೆ. ನಂತರ ಅರಣ್ಯ ಇಲಾಖೆಯ ಅಧಿಕಾರಿಗಳು  ಜೆಸಿಬಿ ತರಿಸಿ ರಸ್ತೆ ಕ್ಲೀನ್ ಮಾಡಿದ್ದಾರೆ.

     

     

     

  • ಇನ್ಮುಂದೆ ಆಂಬುಲೆನ್ಸ್ ಗಳಲ್ಲಿ ರೋಗಿಗಳ ಕಂಡೀಷನ್‍ಗೆ ತಕ್ಕಂತೆ ಹಾರ್ನ್, ಲೈಟ್ ಕಲರ್!-  ಎಲೆಕ್ಷನ್ ಅಕ್ರಮ ತಡೆಗೆ ಪ್ಲ್ಯಾನ್?

    ಇನ್ಮುಂದೆ ಆಂಬುಲೆನ್ಸ್ ಗಳಲ್ಲಿ ರೋಗಿಗಳ ಕಂಡೀಷನ್‍ಗೆ ತಕ್ಕಂತೆ ಹಾರ್ನ್, ಲೈಟ್ ಕಲರ್!-  ಎಲೆಕ್ಷನ್ ಅಕ್ರಮ ತಡೆಗೆ ಪ್ಲ್ಯಾನ್?

    ಬೆಂಗಳೂರು: ಎಲೆಕ್ಷನ್‍ ನಲ್ಲಿ ವಾಮಮಾರ್ಗದಿಂದ ಅಕ್ರಮ ದುಡ್ಡು ಸಾಗಾಟ ಮಾಡೋ ಕುಳಗಳಿಗೆ ಐಪಿಎಸ್ ರೂಪಾ ಶಾಕ್ ನೀಡೋಕೆ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಆಂಬುಲೆನ್ಸ್ ಗಳಿಗೆ ಭರ್ಜರಿ ಮೇಜರ್ ಸರ್ಜರಿ ಮಾಡಲು ಸಜ್ಜಾಗಿದ್ದಾರೆ. ಆಂಬುಲೆನ್ಸ್ ಗೂ ಎಲೆಕ್ಷನ್‍ಗೂ ಏನ್ ಕನೆಕ್ಷನ್ ಅಂತಾ ತಲೆಕೆಡಿಸಿಕೊಂಡ್ರಾ? ಈ ಸುದ್ದಿ ಓದಿ.

    ಕರ್ನಾಟಕ ಎಲೆಕ್ಷನ್ ಮೂಡ್‍ನಲ್ಲಿದೆ. ಎಲೆಕ್ಷನ್ ಬೆನ್ನಲ್ಲೆ ಅಕ್ರಮ ಹಣದ ಸಾಗಾಟ ಭರ್ಜರಿಯಾಗಿ ನಡೆಯಲಿದೆ. ಇದಕ್ಕಾಗಿ ರಾಜಕೀಯ ಕುಳಗಳು ವಾಮ ಮಾರ್ಗದ ಮೂಲಕ ದುಡ್ಡು ಸಾಗಿಸೋದು ಎಲ್ಲರಿಗೂ ಗೊತ್ತಿರೋ ವಿಚಾರ. ಆಂಬುಲೆನ್ಸ್ ನಲ್ಲಿ ಕೂಡ ದುಡ್ಡು ಸಾಗಿಸೋ ಸಾಧ್ಯತೆ ಇರೋದ್ರಿಂದ ಈಗ ಇದಕ್ಕೆ ಬ್ರೇಕ್ ಹಾಕೋದಕ್ಕೆ ರಸ್ತೆ ಸಾರಿಗೆ ಮತ್ತು ಸುರಕ್ಷತಾ ಅಯುಕ್ತೆ ರೂಪಾ ಮುಂದಾಗಿದ್ದಾರೆ.

    ಎಮರ್ಜೆನ್ಸಿ ಕೇಸ್‍ಗಳಿಗೆ ರೆಡ್‍ ಲೈಟ್ ಮತ್ತು ಲಾಂಗ್ ಸೈರನ್ ಇದ್ರೆ, ನಾರ್ಮಲ್ ಕೇಸ್‍ಗಳಾದ್ರೆ ನೀಲಿ ಬಣ್ಣದ ಲೈಟ್ ಹಾಗೂ ಸಪರೇಟ್ ಸೈರನ್ ನೀಡಲು ಚಿಂತನೆ ಮಾಡಿದ್ದಾರೆ. ಆಂಬುಲೆನ್ಸ್ ಗಳನ್ನ ಕೆಲವು ಸಂದರ್ಭದಲ್ಲಿ ಚೆಕ್ ಮಾಡುವಂತೆ ಟ್ರಾಫಿಕ್ ಪೊಲೀಸರಿಗೂ ಸೂಚನೆ ನೀಡಿದ್ದಾರೆ. ಆದ್ರೆ ನೇರವಾಗಿ ಇದನ್ನು ಒಪ್ಪಿಕೊಳ್ಳದ ರೂಪಾ, ಟ್ರಾಫಿಕ್‍ನಲ್ಲಿ ತುರ್ತು ಸಮಯದಲ್ಲಿ ಪ್ರಾಣ ಹೋಗುವುದನ್ನು ತಡೆಯಲು ಹಾಗೂ ಆಂಬುಲೆನ್ಸ್ ಮಿಸ್ ಯೂಸ್ ಆಗದಂತೆ ತಡೆಯಲು ಈ ನಿರ್ಧಾರ ಮಾಡಿರೋದಾಗಿ ಹೇಳಿದ್ರು.

     

  • ಮೃತದೇಹ ಕೊಂಡೊಯ್ಯುವಾಗ ವಾಸನೆ ಬಂದಿತ್ತೆಂದು ಫುಲ್ ಬಾಟಲ್ ಕುಡಿದ ಆಂಬುಲೆನ್ಸ್ ಚಾಲಕನಿಗೆ ಫೈನ್

    ಮೃತದೇಹ ಕೊಂಡೊಯ್ಯುವಾಗ ವಾಸನೆ ಬಂದಿತ್ತೆಂದು ಫುಲ್ ಬಾಟಲ್ ಕುಡಿದ ಆಂಬುಲೆನ್ಸ್ ಚಾಲಕನಿಗೆ ಫೈನ್

    ಬೆಂಗಳೂರು: ಮೃತದೇಹವನ್ನ ಆಂಬುಲೆನ್ಸ್ ನಲ್ಲಿ ತೆಗೆದುಕೊಂಡು ಹೋಗುವಾಗ ವಾಸನೆ ಬಂದಿತ್ತು ಅಂತ ಫುಲ್ ಬಾಟಲ್ ಕುಡಿದು ವಾಹನ ಚಾಲನೆ ಮಾಡ್ತಿದ್ದ ಚಾಲಕನನ್ನು ಸಂಚಾರಿ ಪೊಲೀಸರು ತಡೆದು ದಂಡ ಹಾಕಿದ್ದಾರೆ.

    ಕುಡಿದು, ಸೈರನ್ ಬಳಸಿ ಆಂಬುಲೆನ್ಸ್ ಚಾಲನೆ ಮಾಡುತ್ತಿದ್ದ ಚಾಲಕನನ್ನು ನಗರದ ಹಲಸೂರು ಗೇಟ್ ಬಳಿ ಸಂಚಾರಿ ಪೊಲೀಸರು ತಡೆದಿದ್ದಾರೆ. ವಿಜಯನಗರದ ಪುಷ್ಪಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಆಂಬುಲೆನ್ಸ್ ಇದ್ದಾಗಿದ್ದು, ಯಶ್ವಂತ್ ಆಂಬುಲೆನ್ಸ್ ಚಾಲನೆ ಮಾಡುತ್ತಿದ್ದ. ಆಂಬುಲೆನ್ಸ್ ತಡರಾತ್ರಿ ಕೆಆರ್ ಸರ್ಕಲ್ ಮಾರ್ಗವಾಗಿ ಬರುವಾಗ ಪೊಲೀಸರು ತಡೆದಿದ್ದಾರೆ.

    ಇನ್ಸ್ ಪೆಕ್ಟರ್ ಮಹಮ್ಮದ್, ಆಂಬುಲೆನ್ಸ್ ತಡೆದು ತಪಾಸಣೆ ನಡೆಸಿದಾಗ ಮದ್ಯಪಾನ ಮಾಡಿರುವುದು ಖಚಿತವಾಗಿದೆ ಹಾಗೂ ಆಂಬುಲೆನ್ಸ್ ತಪಾಸಣೆ ನಡೆಸಿದಾಗ ಯಾವುದೇ ರೋಗಿ ಇರಲಿಲ್ಲ. ಪೊಲೀಸರು ಆಂಬುಲೆನ್ಸ್ ವಶಕ್ಕೆ ಪಡೆದು, ಚಾಲಕ ಯಶ್ವಂತ್ ಗೆ ಫೈನ್ ಹಾಕಿ ಕಳಿಸಿದ್ದಾರೆ.

     

  • ಆಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ಆಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

    ಬಳ್ಳಾರಿ: ಆಂಬುಲೆನ್ಸ್ ನಲ್ಲೆ ಗರ್ಭಿಣಿಯೊಬ್ಬರು ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿರುವ ಘಟನೆ ಜಿಲ್ಲೆಯ ಮರಿಯಮ್ಮನಹಳ್ಳಿ ಬಳಿ ನಡೆದಿದೆ.

    ಹೊಸಪೇಟೆ ತಾಲೂಕಿನ ಅಯ್ಯನಹಳ್ಳಿ ಗ್ರಾಮದ ನಿವಾಸಿ ಲಕ್ಷ್ಮಿ ಅವರು ಗರ್ಭಿಣಿಯಾಗಿದ್ದು, ಇಂದು ಬೆಳ್ಳಿಗ್ಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ನಂತರ ಪತಿ ಆಂಬುಲೆನ್ಸ್ ಗೆ ಕರೆ ಮಾಡಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.

    ಆಂಬುಲೆನ್ಸ್ ಮರಿಯಮ್ಮನಹಳ್ಳಿ ಬರುತ್ತಿದ್ದಾಗ ಲಕ್ಷ್ಮಿ ಅವರಿಗೆ ಹೆರಿಗೆ ನೊವು ಜಾಸ್ತಿಯಾಗಿದೆ. ಬಳಿಕ ಆಂಬುಲೆನ್ಸ್ ಸಿಬ್ಬಂದಿಗಳಾದ ಅನಿಲ್ ಮತ್ತು ಚಾಲಕ ಸುರೇಶ್ ಸುರಕ್ಷಿತವಾಗಿ ಆಂಬುಲೆನ್ಸ್ ನಲ್ಲಿಯೇ ಹೆರಿಗೆ ಮಾಡಿಸಿದ್ದು, ಸಮಯ ಪ್ರಜ್ಞೆ ಮೆರೆದಿದ್ದಾರೆ.

    ಲಕ್ಷ್ಮಿ ಅವರು ಇಬ್ಬರು ಗಂಡು ಮಕ್ಕಳಿಗೆ ಜನ್ಮ ನೀಡಿದ್ದಾರೆ. ನಂತರ ಬಾಣಂತಿಯನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • ಆಂಬುಲೆನ್ಸ್ ಚಾಲಕನಿಂದ ಅತ್ಯಾಚಾರ ಯತ್ನ- ತಪ್ಪಿಸಿಕೊಳ್ಳಲು ವ್ಯಾನಿನಿಂದ ಜಿಗಿದ ಯುವತಿ

    ಆಂಬುಲೆನ್ಸ್ ಚಾಲಕನಿಂದ ಅತ್ಯಾಚಾರ ಯತ್ನ- ತಪ್ಪಿಸಿಕೊಳ್ಳಲು ವ್ಯಾನಿನಿಂದ ಜಿಗಿದ ಯುವತಿ

    ಭುವನೇಶ್ವರ: ಬಲವಂತವಾಗಿ ಅತ್ಯಾಚಾರಕ್ಕೆ ಯತ್ನಿಸಿದ್ದ ಚಾಲಕನಿಂದ ಪಾರಾಗಲು ಯುವತಿ ಆಂಬುಲೆನ್ಸ್ ನಿಂದ ಜಿಗಿದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಒಡಿಶಾದ ಅಂಗುಲ್ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.

    19 ವರ್ಷದ ಸಂತ್ರಸ್ತೆ ಅಸ್ವಸ್ಥರಾಗಿದ್ದ ತನ್ನ ಸಹೋದರಿಯನ್ನು ಶನಿವಾರ ಮಧ್ಯಾಹ್ನ ಕಟಕ್‍ನಲ್ಲಿರುವ ಒಂದು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ನಂತರ ರಾತ್ರಿ ತಮ್ಮ ಮನೆಗೆ ಬಿಡುವಂತೆ ಯುವತಿ ಆಂಬುಲೆನ್ಸ್ ಚಾಲಕನ ಬಳಿಗೆ ಡ್ರಾಪ್ ಕೇಳಿದ್ದಾರೆ. ಇದಕ್ಕೆ ಒಪ್ಪಿಕೊಂಡ ಚಾಲಕ ಯುವತಿಯನ್ನು ಮುಂದುಗಡೆ ಕುರಿಸಿಕೊಂಡು ಮನೆಗೆ ಕರೆದೊಯ್ಯುತ್ತಿದ್ದ ವೇಳೆಯಲ್ಲಿ ಆಂಬುಲೆನ್ಸ್ ನಲ್ಲಿಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಚಾಲಕನ ವರ್ತನೆ ದಿಢೀರ್ ಬದಲಾಗಿದ್ದನ್ನು ನೋಡಿದ ಯುವತಿ ಆತನಿಂದ ತಪ್ಪಿಸಿಕೊಳ್ಳಲು ಬನಾರ್ಪಾಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಲಿಸುತ್ತಿದ್ದಾಗ ಆಂಬುಲೆನ್ಸ್ ನಿಂದ ಜಿಗಿದಿದ್ದಾರೆ. ಇದರಿಂದ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯಕ್ಕೆ ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಸಾವು ಬದುಕಿನ ಮಧ್ಯೆ ಆಸ್ಪತ್ರೆಯಲ್ಲಿ ಹೋರಾಡುತ್ತಿದ್ದಾರೆ.

    ಈ ಕೃತ್ಯ ಎಸಗಿದ್ದ ಆರೋಪಿ ಚಾಲಕನನ್ನು ಬಂಧಿಸಿ ತನಿಖೆ ನಡೆಸುತ್ತಿದ್ದೇವೆ. ಆರೋಪಿ ಕುಡಿದ ಮತ್ತಿನಲ್ಲಿ ಆಂಬುಲೆನ್ಸ್ ಓಡಿಸುತ್ತಿದ್ದ ಎಂದು ಬನಾರ್ಪಾಲ್ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸುಕುಮಾರ್ ತ್ರಿಪಾಠಿ ಹೇಳಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಆಂಬುಲೆನ್ಸ್ ಮೇಲೆ ಸ್ಥಳೀಯ ನಿವಾಸಿಗಳು ದಾಳಿ ಮಾಡಿ ಅದನ್ನು ಧ್ವಂಸಗೊಳಿಸಿದ್ದಾರೆ.

     

     

  • ರೋಗಿ ಇಲ್ಲದಿದ್ರೂ ಸೈರನ್  ಹಾಕ್ಕೊಂಡು ವೇಗವಾಗಿ ಬಂದು ಕಾರಿಗೆ ಗುದ್ದಿದ ಅಂಬುಲೆನ್ಸ್ ಚಾಲಕ

    ರೋಗಿ ಇಲ್ಲದಿದ್ರೂ ಸೈರನ್ ಹಾಕ್ಕೊಂಡು ವೇಗವಾಗಿ ಬಂದು ಕಾರಿಗೆ ಗುದ್ದಿದ ಅಂಬುಲೆನ್ಸ್ ಚಾಲಕ

    ತುಮಕೂರು: ನಗರದ ಅಂತರಸನಹಳ್ಳಿ ಸೇತುವೆ ಬಳಿ ಅಂಬುಲೆನ್ಸ್ ನಲ್ಲಿ ರೋಗಿಗಳು ಇಲ್ಲದೇ ಇದ್ದರೂ ವೇಗವಾಗಿ ಬಂದ ಚಾಲಕ ಕಾರಿಗೆ ಡಿಕ್ಕಿ ಹೊಡೆದಿದ್ದಾನೆ.

    ಈ ಆಂಬುಲೆನ್ಸ್ ಬೆಳಧರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೇರಿದ್ದು ಎಂದು ಹೇಳಲಾಗಿದೆ. ಕಾರಿಗೆ ಡಿಕ್ಕಿ ಹೊಡೆದ ಬಳಿಕ ಸ್ಥಳೀಯರು ಅಂಬುಲೆನ್ಸ್ ಚಾಲಕ ಯುವರಾಜ್ ನನ್ನು ಹಿಡಿದು ಥಳಿಸಿದ್ದಾರೆ. ಅಂಬುಲೆನ್ಸ್ ನಲ್ಲಿ ರೋಗಿಗಳು ಇಲ್ಲದೆ ಇದ್ರೂ ಸೈರನ್ ಹಾಕಿ ವೇಗವಾಗಿ ಚಲಾಯಿಸಿದ್ದರಿಂದ ಕಾರಿಗೆ ಡಿಕ್ಕಿ ಹೊಡೆದಿದೆ.

    ಅಂಬುಲೆನ್ಸ್ ವೇಗವಾಗಿ ಬಂದಿದ್ದರಿಂದ ಎರಡು ವಾಹನಗಳು ಜಖಂಗೊಂಡಿವೆ. ಈ ಸಂಬಂಧ ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

    https://www.youtube.com/watch?v=UnIy_BECWH8

  • 1 ತಿಂಗ್ಳ ಮಗುವಿನ ಜೀವ ಉಳಿಸಲು 7 ಗಂಟೆಯಲ್ಲಿ 516 ಕಿ.ಮೀ ಕ್ರಮಿಸಿದ್ರು ಈ ಆಂಬುಲೆನ್ಸ್ ಡ್ರೈವರ್

    1 ತಿಂಗ್ಳ ಮಗುವಿನ ಜೀವ ಉಳಿಸಲು 7 ಗಂಟೆಯಲ್ಲಿ 516 ಕಿ.ಮೀ ಕ್ರಮಿಸಿದ್ರು ಈ ಆಂಬುಲೆನ್ಸ್ ಡ್ರೈವರ್

    ತಿರುವನಂತಪುರಂ: ರೋಗಿಯ ಪ್ರಾಣ ಉಳಿಸಲು ಆಂಬುಲೆನ್ಸ್ ಗಳು ಸೂಕ್ತ ಸಮಯಕ್ಕೆ ಅವರನ್ನ ಆಸ್ಪತ್ರೆಗೆ ಕರೆದೊಯ್ಯುವುದು ತುಂಬಾ ಮುಖ್ಯವಾಗುತ್ತದೆ. ಹೀಗೆ ಒಂದು ತಿಂಗಳ ಮಗುವಿನ ಪ್ರಾಣ ಉಳಿಸುವ ಸಲುವಾಗಿ ಆಂಬುಲೆನ್ಸ್ ಚಾಲಕರೊಬ್ಬರು ಉತ್ತರ ಕಣ್ಣೂರು ನಗರದಿಂದ ಕೇರಳ ರಾಜಧಾನಿ ತಿರುವನಂತಪುರಂವರೆಗೆ ಆಂಬುಲೆನ್ಸ್ ನಲ್ಲಿ 7 ಗಂಟೆ ಸಮಯದಲ್ಲಿ ಬರೋಬ್ಬರಿ 516 ಕಿ.ಮೀ ಕ್ರಮಿಸಿ ಸುದ್ದಿಯಾಗಿದ್ದಾರೆ.

    ಗೂಗಲ್ ಮ್ಯಾಪ್‍ನ ಪ್ರಕಾರ ನೋಡಿದರೆ ಸ್ವಲ್ಪ ಟ್ರಾಫಿಕ್ ನಡುವೆ ಇಷ್ಟು ದೂರವನ್ನು ಕ್ರಮಿಸಲು ಬರೋಬ್ಬರಿ 13 ಗಂಟೆ ಸಮಯ ಬೇಕು. ಅದರಲ್ಲೂ ಕೇರಳದ ಕಿರಿದಾದ ರಸ್ತೆಗಳಲ್ಲಿ ವಾಹನದಟ್ಟಣೆ ನೋಡಿದ್ರೆ ಸುಮಾರು 14 ಗಂಟೆಗಳೇ ಬೇಕಾಗಬಹುದು. ಹೀಗಿದ್ದರೂ ಆಂಬುಲೆನ್ಸ್ ಚಾಲಕ ಕೇವಲ 7 ಗಂಟೆಗಳಲ್ಲಿ ಆಸ್ಪತ್ರೆಗೆ ಮಗುವನ್ನ ರವಾನಿಸಿದ್ದಾರೆ. 15 ನಿಮಿಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದನ್ನು ಕಡಿತಗೊಳಿಸಿದ್ರೆ ಇವರ ಪ್ರಯಾಣ 6 ಗಂಟೆ 45 ನಿಮಿಷಕ್ಕೆ ಇಳಿಯುತ್ತದೆ. ಅಂದ್ರೆ ಸರಾಸರಿ ವೇಗ ಗಂಟೆಗೆ 76.4 ಕಿ.ಮೀ ಆಗುತ್ತದೆ.

    ಆಂಬುಲೆನ್ಸ್ ಓಡಿಸುತ್ತಿದ್ದ ಚಾಲಕ ತಮೀಮ್. ಇವರು ಮೂಲತಃ ಕಾಸರಗೋಡಿನವರು. ಬುಧವಾರ ರಾತ್ರಿ ಕಣ್ಣೂರಿನ ಪರಿಯಾರಂ ಮೆಡಿಕಲ್ ಕಾಲೇಜಿನಿಂದ ತಮೀಮ್ ಅವರಿಗೆ ಕರೆ ಬಂದಿತ್ತು. 31 ದಿನಗಳ ಪುಟ್ಟ ಕಂದಮ್ಮ ಫಾತೀಮಾ ಲಬಿಯಾಳನ್ನು ಕಣ್ಣೂರಿನಿಂದ ತಿರುವನಂತಪುರಂನ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು.

    ಏರ್ ಆಂಬುಲೆನ್ಸ್ ವ್ಯವಸ್ಥೆಗೆ 5 ಗಂಟೆ ಬೇಕಿತ್ತು:  ಮಗು ವಾರದಿಂದ ದೀರ್ಘ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಹೀಗಾಗಿ ತುರ್ತು ಹೃದಯ ಶಸ್ತ್ರಚಿಕಿತ್ಸೆ ಮಾಡಬೇಕಿದ್ದರಿಂದ ಎಷ್ಟು ಸಾಧ್ಯವೋ ಅಷ್ಟು ಬೇಗ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಿತ್ತು. ವಿಮಾನದಲ್ಲಿ ಕರೆದುಕೊಂಡು ಹೋಗೋಣವೆಂದರೆ ಹತ್ತಿರದ ಮಂಗಳೂರು ಮತ್ತು ಕ್ಯಾಲಿಕಟ್ ವಿಮಾನ ನಿಲ್ದಾಣಗಳ ನಡುವೆ ಪ್ರಯಾಣಿಸಲು 3 ಗಂಟೆ ಬೇಕಿತ್ತು. ಆದ್ರೆ ಏರ್ ಆಂಬುಲೆನ್ಸ್ ವ್ಯವಸ್ಥೆ ಮಾಡಲು ಕನಿಷ್ಠ 5 ಗಂಟೆ ಸಮಯ ಬೇಕಿತ್ತು. ಆದ್ದರಿಂದ ರಸ್ತೆ ಮಾರ್ಗದಲ್ಲೇ ಮಗುವನ್ನ ಕಣ್ಣೂರಿನಿಂದ ತಿರುವನಂತಪುರಂಗೆ ರವಾನಿಸಲು ತೀರ್ಮಾನಿಸಿದ್ದರು.

    ಪೊಲೀಸ್, ಎನ್‍ಜಿಓ ಸಹಾಯ: ಮುಂದೆ ನಡೆದಿದ್ದೆಲ್ಲವೂ ಸಿನಿಮಾ ರೀತಿಯಲ್ಲಿತ್ತು. ತಮೀಮ್ ತನಗೆ ನಿಯೋಜಿಸಿದ ಕೆಲಸವನ್ನ ಕೈಗೆತ್ತಿಕೊಂಡ್ರು. ಕೇರಳ ಪೊಲೀಸರು ಆಂಬುಲೆನ್ಸ್ ಗಾಗಿ ರಸ್ತೆ ಅನುವು ಮಾಡಿಕೊಟ್ಟರು. ಇದರಲ್ಲಿ ಭಾಗಿಯಾದ ಮೊದಲ ಅಧಿಕಾರಿ ಕಣ್ಣೂರಿನ ಜಿಲ್ಲಾ ಪೊಲೀಸ್ ಮುಖ್ಯಸ್ಥರು. ಇಡೀ ಪ್ರಯಾಣದ ಜೊತೆ ಸಹಕರಿಸಲು ವಿಶೇಷ ತಂಡವನ್ನು ರಚಿಸಿದ್ರು. ಆಂಬುಲೆನ್ಸ್ ಜೊತೆಗೆ ಹೋಗಲು ಒಂದು ತಂಡ ಹಾಗೂ ತಮೀಮ್ ಅವರ ವಾಹನ ಹೋಗುವ ರಸ್ತೆಗಳಲ್ಲಿ ಟ್ರಾಫಿಕ್ ನಿಯಂತ್ರಿಸಲು ಮತ್ತೊಂದು ತಂಡವನ್ನು ರಚಿಸಿದ್ದರು. ಕೇವಲ ರಾಜ್ಯ ಪೊಲೀಸರಷ್ಟೇ ಅಲ್ಲ, ಮಗುವಿನ ಪ್ರಯಾಣದ ಬಗ್ಗೆ ವಿಷಯ ತಿಳಿದು ಕೇರಳ ಚೈಲ್ಡ್ ಪ್ರೊಟೆಕ್ಷನ್ ಟೀಮ್ ಎಂಬ ಎನ್‍ಜಿಓ ಕೂಡ ಪೊಲೀಸರೊಂದಿಗೆ ಕೈ ಜೋಡಿಸಿದ್ರು.

    ಆಂಬುಲೆನ್ಸ್ ನೋಡಲು ರಸ್ತೆಗಳಲ್ಲಿ ನಿಂತ್ರು ಜನ: ಬುಧವಾರ ರಾತ್ರಿ 8.23ಕ್ಕೆ ತಮೀಮ್ ಆಂಬುಲೆನ್ಸ್ ನ ಸೈರನ್ ಆನ್ ಮಾಡಿ ತಿರುವನಂತಪುರಂವರೆಗಿನ 516 ಕಿ.ಮೀ ಪ್ರಯಾಣವನ್ನ ಆರಂಭಿಸಿದ್ದರು. ಚೈಲ್ಡ್ ಪ್ರೊಟೆಕ್ಷನ್ ಟೀಂ ಸಹಾಯದಿಂದ ಆಂಬುಲೆನ್ಸ್ ಪ್ರಯಾಣದ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಿತ್ತು. ಜನ ಆಂಬುಲೆನ್ಸ್ ನೋಡಲೆಂದೇ ರಸ್ತೆಗಳಲ್ಲಿ ನಿಂತಿದ್ದರು. ಕೆಲವರು ಮೊಬೈಲ್‍ನಲ್ಲಿ ಇದನ್ನ ವಿಡಿಯೋ ಮಾಡಿ ಟ್ವಿಟ್ಟರ್‍ನಲ್ಲಿ ಹಂಚಿಕೊಂಡಿದ್ದಾರೆ.

    ಒಂದೇ ಒಂದು ಸ್ಟಾಪ್: ಆಂಬುಲೆನ್ಸ್ ಜೊತೆಗೆ ಕೇರಳ ಪೊಲೀಸರ ಎರಡು ಎಸ್‍ಯುವಿ ವಾಹನಗಳಿದ್ದವು. ತಮೀಮ್ ವಾಹನವನ್ನು ನಿಧಾನಗೊಳಿಸದಂತೆ ನೋಡಿಕೊಳ್ಳಲು ಜಿಲ್ಲಾ ಗಡಿಗಳಲ್ಲಿ ಎಸ್‍ಯುವಿ ವಾಹನಗಳು ಬದಲಾವಣೆಯಾಗುತ್ತಿದ್ದವು. ಸುಮಾರು 11 ಗಂಟೆಯ ವೇಳೆಗೆ ವಾಹನಗಳು ಕೋಝಿಕೋಡ್‍ನ ಕಾಕಡು ನಲ್ಲಿನ ಪೆಟ್ರೋಲ್ ಬಂಕ್ ತಲುಪಿದ್ದವು. ಇಡೀ ಪ್ರಯಾಣದಲ್ಲಿ ಇದೊಂದೇ ಕಡೆ ವಾಹನವನ್ನ ನಿಲ್ಲಿಸಿದ್ದು.

    ಕೊನೆಗೆ ಗುರುವಾರ ನಸುಕಿನ ಜಾವ 3.23ರ ವೇಳೆಗೆ ಆಂಬುಲೆನ್ಸ್ ತಿರುವನಂತಪುರಂನ ಆಸ್ಪತ್ರೆ ತಲುಪಿತು. ಅಲ್ಲಿನ ವೈದ್ಯರು ಹಾಗೂ ಸಿಬ್ಬಂದಿ ಕೂಡಲೇ ಮಗುವನ್ನ ಒಳಗೆ ಕರೆದೊಯ್ದರು.

    100-120 ಕಿ.ಮೀ ವೇಗದಲ್ಲಿದ್ದೆ: ಇಂತದ್ದೊಂದು ಪ್ರಯಾಸಕರ ಪ್ರಯಾಣದ ನಂತರ ಮಾತನಾಡುವಾಗ ತಮೀಮ್ ತಾನು ಮಾಡಿದ ಈ ದೊಡ್ಡ ಕೆಲಸದ ಶಾಕ್‍ನಿಂದ ಇನ್ನೂ ಹೊರಬಂದಿರಲಿಲ್ಲ. ಪೊಲೀಸರು ಹಾಗೂ ಚೈಲ್ಡ್ ಪ್ರೊಟೆಕ್ಷನ್ ಟೀಂ ನ ಕೆಲಸವನ್ನು ಹೊಗಳಿದ ತಮೀಮ್, ಇವರ ಸಹಾಯ ಮತ್ತು ಬೆಂಬಲ ಇಲ್ಲದಿದ್ರೆ ಈ ಯಶಸ್ವಿ ಪ್ರಯಾಣ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ರು. ಬಹುತೇಕ 100-120 ಕಿ.ಮೀ ವೇಗದಲ್ಲಿ ನಾನಿದ್ದೆ. ಎರಡೂ ತಂಡಗಳ ಪರಿಶ್ರಮಕ್ಕೆ ಧನ್ಯವಾದ ಎಂದು ಅವರು ಹೇಳಿದ್ರು.

    ಇಡೀ ಪ್ರಯಾಣಕ್ಕೆ ಮುಖ್ಯ ಕಾರಣವಾಗಿದ್ದ ಮಗು ಫಾತೀಮಾ ಸರಿಯಾದ ಸಮಯಕ್ಕೆ ಆಸ್ಪತೆಯೇನೋ ತಲುಪಿದೆ. ಆದ್ರೆ ಮಗುವಿನ ಸ್ಥಿತಿ ಇನ್ನೂ ಚಿಂತಾನಕವಾಗಿದೆ ಎಂದು ವರದಿಯಾಗಿದೆ.

  • ಮೂರನೇ ಬಾರಿ ಮಾರ್ಗ ಮಧ್ಯೆ ಕೆಟ್ಟು ನಿಂತ ಆಂಬುಲೆನ್ಸ್ – ಮಂಡ್ಯ ಸಾರ್ವಜನಿಕರ ಆಕ್ರೋಶ

    ಮೂರನೇ ಬಾರಿ ಮಾರ್ಗ ಮಧ್ಯೆ ಕೆಟ್ಟು ನಿಂತ ಆಂಬುಲೆನ್ಸ್ – ಮಂಡ್ಯ ಸಾರ್ವಜನಿಕರ ಆಕ್ರೋಶ

    ಮಂಡ್ಯ: ಅಪಘಾತದಿಂದ ಗಾಯಗೊಂಡು ನರಳಾಡುತ್ತಿದ್ದವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದ ಆಂಬುಲೆನ್ಸ್ ಮಾರ್ಗ ಮಧ್ಯೆ ಕೆಟ್ಟು ನಿಂತ ಘಟನೆ ನಗರದಲ್ಲಿ ನಡೆದಿದೆ.

    ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ ಆಂಬುಲೆನ್ಸ್ ಕೆಟ್ಟು ನಿಲ್ಲುತ್ತಿರುವ ಮೂರನೇ ಪ್ರಕರಣವಾಗಿದೆ. ಸೆಪ್ಟೆಂಬರ್ 17 ರಂದು ಜಿಲ್ಲೆಯ ಪಾಂಡವಪುರ ತಾಲೂಕಿನ ಹಾರೋಹಳ್ಳಿ ಬಳಿ ಬೈಕ್‍ಗಳ ನಡುವೆ ಅಪಘಾತ ಸಂಭವಿಸಿ ತೌಸಿಫ್ ಹಾಗೂ ವಾಸಿಂ ಎಂಬ ಇಬ್ಬರು ಗಾಯಗೊಂಡಿದ್ದರು. ರೋಗಿಯೊಬ್ಬರನ್ನು ಮಿಮ್ಸ್ ಆಸ್ಪತ್ರೆಯಿಂದ ಮೈಸೂರಿಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಇಂಡವಾಳು ಗ್ರಾಮದ ಬಳಿ ಆಂಬುಲೆನ್ಸ್ ಕೆಟ್ಟು ನಿಂತಿತ್ತು. ಸುಮಾರು 20 ನಿಮಿಷಗಳವರೆಗೂ ಕಾದು ನಂತರ ಬೇರೆ ಆಂಬುಲೆನ್ಸ್ ಅನ್ನು ಸ್ಥಳಕ್ಕೆ ಕರೆಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಗಿತ್ತು.

    ಸೆಪ್ಟೆಂಬರ್ 27 ರಂದು ಜ್ವರದಿಂದ ಬಳಲುತ್ತಿದ್ದ 4 ವರ್ಷದ ಬಾಲಕಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮತ್ತೆ ಆಂಬುಲೆನ್ಸ್ ನಗರದ ಸಮೀಪ ಹೆದ್ದಾರಿಯಲ್ಲಿ ಕೆಟ್ಟು ನಿಂತಿತ್ತು. ಕಾರಣ ಕೇಳಿದರೆ ಎಕ್ಸಲೇಟರ್ ವೈರ್ ಕಟ್ ಆಗಿದ್ದರಿಂದ ಕೆಟ್ಟು ನಿಂತಿದೆ ಎಂದು ಹೇಳಿದ್ದರು.

    ಇದೀಗ ಮೂರನೇ ಬಾರಿ ರೋಗಿಯನ್ನು ಆಸ್ಪತ್ರೆಗೆ ಸಾಗಿಸುತ್ತಿದ್ದ ಸಂದರ್ಭದಲ್ಲಿ ಆಂಬುಲೆನ್ಸ್ ಕೆಟ್ಟು ನಿಂತಿದೆ. ಆಂಬುಲೆನ್ಸ್ ಕೆಟ್ಟು ನಿಂತಿರುವ ವಿಡಿಯೋವನ್ನು ಸ್ಥಳೀಯರೊಬ್ಬರು ಮೊಬೈಲ್‍ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಆಂಬುಲೆನ್ಸ್‍ಗಳು ಪದೇ ಪದೇ ಈ ರೀತಿ ಕೆಟ್ಟು ನಿಲ್ಲುತ್ತಿರುವುದು ಖಂಡಿಸಿ ಸಾರ್ವಜನಿಕರು ಆಕ್ರೋಷವನ್ನು ವ್ಯಕ್ತ ಪಡಿಸುತ್ತಿದ್ದಾರೆ.


  • ಆಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

    ಆಂಬುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

    ವಿಜಯಪುರ : ಜಿಲ್ಲೆಯ ಮಹಿಳೆಯೊಬ್ಬರು ಸರ್ಕಾರದ ಆರೋಗ್ಯ ಕವಚ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

    ಮೂಲತಃ ಬಾಗಲಕೋಟೆ ಜಿಲ್ಲೆಯ ಜಮಕಂಡಿ ತಾಲೂಕಿನ ತೊದಲಬಾಗಿ ಗ್ರಾಮದವರಾದ ನಿರ್ಮಲಾ ಎಂಬವರೇ ಹೆಣ್ಣು ಮಗುವಿಗೆ ಜನ್ಮ ನೀಡಿದವರು. ನಿರ್ಮಲಾ ಅವರಿಗೆ ಶುಕ್ರವಾರ ಸಂಜೆ ತೀವ್ರ ಹೆರಿಗೆನೋವು ಕಾಣಿಸಿಕೊಂಡಿತ್ತು. ತಕ್ಷಣ ವಿಜಯಪುರ ತಾಲೂಕಿನ ಬಬಲೇಶ್ವರದ 108 ಆಂಬುಲೆನ್ಸ್ ಸೇವೆಗೆ ಕರೆ ಮಾಡಿ ಹೆರಿಗೆಗಾಗಿ ಆಸ್ಪತ್ರೆಗೆ ಕರೆದ್ಯೊಯುವ ಪ್ರಯತ್ನ ನಡೆಸಲಾಗಿತ್ತು.

    ಆದರೆ ಬಾಗಲಕೋಟೆಯ ಕುಂಬಾರಹಳ್ಳ ಬಳಿಗೆ ತೆರಳುವ ವೇಳೆಗೆ ನಿರ್ಮಲಾ ಅವರಿಗೆ ಹೆರಿಗೆ ನೋವು ತೀವ್ರವಾಗಿದೆ. ಅದ್ದರಿಂದ ಆಂಬುಲೆನ್ಸ್ ನಲ್ಲಿದ್ದ ಸಿಬ್ಬಂದಿಯಾದ ಇಟಿಎಂ ವಿಶ್ವನಾಥ, ಚಾಲಕ ಸಂಜು ಹಾಗೂ ಆಶಾ ಕಾರ್ಯಕರ್ತೆ ಕುಸುಮಾ ಅವರು ಮಹಿಳೆಗೆ ಹೆರಿಗೆ ಮಾಡಿಸಿದ್ದಾರೆ.

    ಹೆರಿಗೆ ನಂತರ ತಾಯಿ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ವೈದ್ಯರು ಹೇಳಿದ್ದಾರೆ. ಆಂಬುಲೆನ್ಸ್ ನಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿದ ಸಿಬ್ಬಂದಿಗೆ ನಿರ್ಮಲಾ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.