Tag: ಆಂಧ್ರ ಪ್ರದೇಶ

  • ರಾಯಚೂರಿನಿಂದ ಆಂಧ್ರಪ್ರದೇಶಕ್ಕೆ ಇಂದಿನಿಂದ ಬಸ್ ಓಡಾಟ ಆರಂಭ

    ರಾಯಚೂರಿನಿಂದ ಆಂಧ್ರಪ್ರದೇಶಕ್ಕೆ ಇಂದಿನಿಂದ ಬಸ್ ಓಡಾಟ ಆರಂಭ

    – ಸೇವಾ ಸಿಂಧುವಿನಲ್ಲಿ ಅರ್ಜಿ ಹಾಕಿದವರಿಗೆ ಮಾತ್ರ ಅವಕಾಶ
    – ಆಂಧ್ರಪ್ರದೇಶದಿಂದ ಬಂದವರಿಗೆ ಕಡ್ಡಾಯ ಹೋಮ್ ಕ್ವಾರಂಟೈನ್

    ರಾಯಚೂರು: ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಲಾಕ್‍ಡೌನ್‍ನಲ್ಲಿ ಸಡಿಲಿಕೆಗಳು ಆಗುತ್ತಲೇ ಇವೆ. ಈಗ ರಾಯಚೂರಿನಿಂದ ಆಂಧ್ರಪ್ರದೇಶಕ್ಕೆ ಬಸ್ ಸಂಚಾರ ಆರಂಭವಾಗಿದೆ. ಪ್ರಾರಂಭಿಕವಾಗಿ ಮಂತ್ರಾಲಯಕ್ಕೆ ಎರಡು ಬಸ್ ಹಾಗೂ ಆಂಧ್ರಪ್ರದೇಶ ಮಾರ್ಗವಾಗಿ ಬೆಂಗಳೂರಿಗೆ ಒಂದು ಬಸ್ ಬಿಡಲಾಗಿದೆ. ಆದ್ರೆ ಸೇವಾ ಸಿಂಧುವಿನಲ್ಲಿ ಅರ್ಜಿ ಹಾಕಿ ಅನುಮತಿ ಪಡೆದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಆಂಧ್ರಪ್ರದೇಶಕ್ಕೆ ಇಂದು ತೆರಳುವವರು ಯಾರೂ ಇಲ್ಲ. ಸದ್ಯ ರಾಜ್ಯದ ಗಡಿವರೆಗೆ ಮಾತ್ರ ಬಸ್ ಓಡಾಡಲಿದೆ.

    ಮಂತ್ರಾಲಯ ಸೇರಿದಂತೆ ಆಂಧ್ರಪ್ರದೇಶದಿಂದ ಬರುವವರಿಗೆ ಹೋಮ್ ಕ್ವಾರಂಟೈನ್ ಮಾಡುವುದರಿಂದಲೂ ಪ್ರಯಾಣಿಕರ ಸಂಖ್ಯೆ ಕಡಿಮೆಯಿದೆ. ಇನ್ನೂ ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠದಲ್ಲಿ ದರ್ಶನಕ್ಕೆ ಭಕ್ತರಿಗೆ ಇನ್ನೂ ಅವಕಾಶ ನೀಡದ ಹಿನ್ನೆಲೆ ಮಂತ್ರಾಲಯಕ್ಕೆ ಹೋಗುವವರ ಸಂಖ್ಯೆ ಕಡಿಮೆಯಿದೆ. ಆಂಧ್ರಪ್ರದೇಶಕ್ಕೆ ಪ್ರಯಾಣ ಬೆಳೆಸಲಿರುವ ಬಸ್‍ಗಳು ಸಿದ್ಧಗೊಂಡಿವೆ.

    ಹೊರರಾಜ್ಯಕ್ಕೆ ಬಸ್ ಸಂಚಾರದ ಮೊದಲನೆ ದಿನವಾಗಿರುವುದರಿಂದ ಸಾರಿಗೆ ಇಲಾಖೆ ಸಿಬ್ಬಂದಿಗಳಲ್ಲೂ ಸ್ವಲ್ಪ ಗೊಂದಲಗಳಿವೆ. ರಾಯಚೂರಿನಿಂದ ಬೆಂಗಳೂರಿಗೆ ತೆರಳುವ ಬಸ್ ನಲ್ಲಿ ಹೆಚ್ಚು ಜನ ಮಂತ್ರಾಲಯದಿಂದ ಹತ್ತುತ್ತಾರೆ. ಅವರಿಗೆ ರಿಸರ್ವೆಶನ್ ಇನ್ನೂ ಆರಂಭವಾಗಿಲ್ಲ. ಮಂತ್ರಾಲಯದಿಂದ ಬಾಗಲಕೋಟೆಗೆ ಹೊರಡುವ ಬಸ್ ರಾಯಚೂರಿನಿಂದ ಆರಂಭಿಸಲಾಗಿದೆ. ಪ್ರಯಾಣಿಕರ ಹೆಸರು, ಮೊಬೈಲ್ ಸಂಖ್ಯೆ, ವಿಳಾಸವನ್ನು ಕಡ್ಡಾಯವಾಗಿ ಪಡೆಯಲಾಗುತ್ತಿದೆ. ಥರ್ಮಲ್ ಸ್ಕ್ರೀನಿಂಗ್, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದೆ.

  • 200 ವರ್ಷದ ಹಳೆಯದಾದ ಶಿವನ ದೇವಾಲಯ ಪತ್ತೆ

    200 ವರ್ಷದ ಹಳೆಯದಾದ ಶಿವನ ದೇವಾಲಯ ಪತ್ತೆ

    ಹೈದರಾಬಾದ್: ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಸುಮಾರು 200 ವರ್ಷ ಹಳೆಯ ಶಿವ ದೇವಾಲಯ ಪತ್ತೆಯಾಗಿದೆ.

    ಪೆನ್ನಾ ನದಿ ಪಾತ್ರದಲ್ಲಿ ದೇವಾಲಯ ಪತ್ತೆಯಾಗಿದೆ. ಮರಳು ಗಣಿಗಾರಿಕೆ ವೇಳೆ ಶಿವ ದೇವಾಲಯ ಕಂಡು ಜನರು ಅಚ್ಚರಿಗೆಗೊಳಗಾಗಿದ್ದಾರೆ. ಸುಮಾರು 200 ವರ್ಷ ಹಳೆಯ ದೇಗುಲ ಎಂದು ಸ್ಥಳೀಯರು ಹೇಳುತ್ತಿದ್ದಾರೆ.

    ದೇಗುಲದ ಗೋಪುರ ಕಾಣಿಸಿಕೊಂಡಿದ್ದು, ಕಲ್ಲುಗಳಿಂದ ಮಾಡಲ್ಪಟ್ಟಿದೆ. ಗೋಪುರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ಥಳೀಯರು ಮರಳಿನಲ್ಲಿ ಹುದುಗಿರುವ ದೇವಾಲಯ ತೆಗೆಯಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಿದೆ.

    https://www.youtube.com/watch?v=6MwnD0izR0g

  • ಆಂಧ್ರ- ಕರ್ನಾಟಕ ಮಧ್ಯೆ ಬಸ್ ಸಂಚಾರ- ಕೊರೊನಾ ಸ್ಫೋಟ ಸಾಧ್ಯತೆ

    ಆಂಧ್ರ- ಕರ್ನಾಟಕ ಮಧ್ಯೆ ಬಸ್ ಸಂಚಾರ- ಕೊರೊನಾ ಸ್ಫೋಟ ಸಾಧ್ಯತೆ

    – ಮಹಾರಾಷ್ಟ್ರ ಬಳಿಕ ಆಂಧ್ರದಿಂದ ಕೊರೊನಾ ಆಗಮನ

    ಅಮರಾವತಿ: ಮಹಾರಾಷ್ಟ್ರ ಕಂಟಕದ ಬಳಿಕ ಇದೀಗ ರಾಜ್ಯಕ್ಕೆ ಆಂಧ್ರದ ಕಂಟಕ ಪ್ರಾರಂಭವಾಗುವ ಭಯ ಎದುರಾಗಿದ್ದು, ಆಂಧ್ರ ಪ್ರದೇಶ ಅಂತರ್ ರಾಜ್ಯ ಬಸ್ ಸಂಚಾರವನ್ನು ಪ್ರಾರಂಬಿಸಲು ನಿರ್ಧರಿಸಿದೆ. ಹಂತ ಹಂತವಾಗಿ ರಾಜ್ಯಕ್ಕೆ 500 ಬಸ್‍ಗಳನ್ನು ಬಿಡಲು ಕ್ರಮ ಕೈಗೊಂಡಿದೆ.

    ಆಂಧ್ರ ಪ್ರದೇಶದಿಂದ ರಾಜ್ಯಕ್ಕೆ ಬಸ್ ಬಿಡಲು ಆಂಧ್ರ ಸರ್ಕಾರ ನಿರ್ಧರಿಸಿದ್ದು, ಮೊದಲ ಹಂತದಲ್ಲಿ 168 ಬಸ್‍ಗಳು ರಾಜ್ಯಕ್ಕೆ ಸಂಚರಿಸಲಿವೆ. ಜೂನ್ 17 ರಿಂದ ಆಂಧ್ರ ಪ್ರದೇಶ ಹಾಗೂ ಕರ್ನಾಟಕದ ಮಧ್ಯೆ 168 ಬಸ್‍ಗಳು ಸಂಚರಿಸಲಿವೆ ಎಂದು ಆಂಧ್ರ ಸರ್ಕಾರ ತಿಳಿಸಿದೆ. ಒಟ್ಟು ನಾಲ್ಕು ಹಂತಗಳಲ್ಲಿ 500 ಬಸ್‍ಗಳು ಕರ್ನಾಟಕ ಆಂಧ್ರದ ಮಧ್ಯೆ ಸಂಚರಿಸಲಿವೆ ಎಂದು ಅಲ್ಲಿನ ಸರ್ಕಾರ ಮಾಹಿತಿ ನೀಡಿದೆ. apsrtconline.in ಮೂಲಕ ಸೀಟ್ ನೋಂದಾಯಿಸಿಕೊಂಡು ಪ್ರಯಾಣಿಸಲು ತಿಳಿಸಿದೆ.

    ಮಂತ್ರಾಲಯ, ಬೆಂಗಳೂರು ಸೇರಿದಂತೆ ಈ ಹಿಂದಿನಂತೆ ರಾಜ್ಯದ ಪ್ರಮುಖ ನಗರಗಳಿಗೆ ಆಂಧ್ರ ಬಸ್‍ಗಳು ಸಂಚರಿಸಲಿವೆ. ಈ ಮೂಲಕ ಬಸ್‍ಗಳು ಆಂಧ್ರದಿಂದ ಕರ್ನಾಟಕಕ್ಕೆ ಕೊರೊನಾ ಸೋಂಕಿತರನ್ನು ಹೊತ್ತು ತರುವ ಎಲ್ಲ ಸಾಧ್ಯತೆಗಳಿವೆ. ಈಗಾಗಲೇ ರಾಜ್ಯದಲ್ಲಿ ಪತ್ತೆಯಾಗಿರುವ ಬಹುತೇಕ ಕೊರೊನಾ ಪ್ರಕರಣಗಳು ಮಹಾರಾಷ್ಟ್ರ, ಆಂಧ್ರ ಪ್ರದೇಶ ಹಾಗೂ ತೆಲಂಗಾಣದ್ದಾಗಿದ್ದು, ಇದೀಗ ಬಸ್ ಸಂಚಾರದಿಂದ ಮತ್ತೆ ಕೊರೊನಾಘಾತವಾಗುವ ಸಾಧ್ಯತೆ ಇದೆ.

  • ಪತ್ತೆಯಾಗದ ಕೊರೊನಾ ಸೋಂಕಿತ- ಶೋಧದಲ್ಲಿ 2 ರಾಜ್ಯದ ಅಧಿಕಾರಿಗಳು

    ಪತ್ತೆಯಾಗದ ಕೊರೊನಾ ಸೋಂಕಿತ- ಶೋಧದಲ್ಲಿ 2 ರಾಜ್ಯದ ಅಧಿಕಾರಿಗಳು

    – ಎರಡು ರಾಜ್ಯಗಳಿಗೆ ಕೊರೊನಾ ಹಂಚ್ತಾನಾ ಸೋಂಕಿತ?
    – ಜೂನ್ 6ರಿಂದ ನಾಪತ್ತೆ

    ಕೋಲಾರ: ಕೊರೊನಾ ಸೋಂಕಿತ ತನಗೆ ಸೋಂಕು ತಗುಲಿರೋದು ದೃಢಪಡುತ್ತಿದ್ದಂತೆ ಮೊಬೈಲ್ ಸ್ವಿಚ್ ಆಫ್ ಮಾಡಿ ಎಸ್ಕೇಪ್ ಅಗಿರುವ ಘಟನೆ ಕೋಲಾರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಕೋಲಾರದಲ್ಲಿ ಈ ಸೋಂಕಿತನಿಂದ ಸೋಂಕು ಹಬ್ಬುತ್ತಾ ಅನ್ನೋ ಆತಂಕ ಮನೆ ಮಾಡಿದೆ.

    ಮಂಡ್ಯ ಜಿಲ್ಲೆ ನಾಗಮಂಗಲ ಮೂಲದ ವ್ಯಕ್ತಿಯಿಂದ ಸದ್ಯ ಇಂಥಾದೊಂದು ಆತಂಕ ಎದುರಾಗಿದ್ದು, ಕೊರೊನಾ ಸೋಂಕಿತ (ರೋಗಿ-4863) ಜೂನ್ 3 ರಂದು ಆಂಧ್ರದ ತಿರುಪತಿ ತಿರುಮಲದಿಂದ ಕೋಲಾರಕ್ಕೆ ಬಂದಿದ್ದಾನೆ. ತಿರುಮಲದಲ್ಲಿ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಕೋಲಾರದ ಎಪಿಎಂಸಿ ಮಾರುಕಟ್ಟೆ ಬಳಿಯ ವಾಸವಿ ಹೋಟೆಲ್‍ನಲ್ಲಿ ಕೆಲಸಬೇಕೆಂದು ಕೇಳಿಕೊಂಡು ಹೋಗಿರುವ ಮಾಹಿತಿ ಲಭ್ಯವಾಗಿದೆ.

    ವರದಿ ಬರುತ್ತಿದ್ದಂತೆ ಎಸ್ಕೇಪ್: ವಾಸವಿ ಹೋಟೆಲ್ ಮಾಲೀಕ ಹೊರ ರಾಜ್ಯದಿಂದ ಬಂದಿರುವ ಕಾರಣ ಕೋವಿಡ್ ಟೆಸ್ಟ್ ಮಾಡಿಸಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ. ಜಿಲ್ಲಾಸ್ಪತ್ರೆ ಎಸ್‍ಎನ್‍ಆರ್ ಗೆ ಹೋಗಿ ಕೋವಿಡ್ ಟೆಸ್ಟ್‍ಗೆ ಗಂಟಲು ದ್ರವ ಮಾದರಿ ನೀಡಿ ಬಂದಿದ್ದು, ಆಸ್ಪತ್ರೆಯ ಸಿಬ್ಬಂದಿ ವಿಳಾಸ ಬರೆದುಕೊಂಡು ವರದಿ ಬರುವವರೆಗೆ ಹೋಮ್ ಕ್ವಾರಂಟೇನ್ ನಲ್ಲಿರುವಂತೆ ಸೂಚಿಸಿದ್ದಾರೆ. ಜೂನ್ 6ರಂದು ಆತನ ವರದಿ ಪಾಸಿಟಿವ್ ಬಂದಾಗ ಆರೋಗ್ಯ ಇಲಾಖೆ ಸಿಬ್ಬಂದಿ ಆತ ನೀಡಿದ್ದ ಫೋನ್ ನಂಬರ್‍ಗೆ ಕಾಲ್ ಮಾಡಿ ಆಸ್ಪತ್ರೆಗೆ ಬಂದು ದಾಖಲಾಗುವಂತೆ ಸೂಚನೆ ನೀಡಿದ್ದಾರೆ. ಆದರೆ ಗಾಬರಿಗೊಂಡ ಸೋಂಕಿತ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಸದ್ಯ ಆತನ ಮೊಬೈಲ್ ಟವರ್ ಲೊಕೇಷನ್ ಆಧರಿಸಿ ಆತನನ್ನು ಹುಡಕಾಟ ನಡೆಸುತ್ತಿರುವ ಕೋಲಾರ ಹಾಗೂ ಕೆಜಿಎಫ್ ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದ್ದಾನೆ.

    ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗುತ್ತಿದ್ದಂತೆ ಗಾಬರಿಗೊಂಡ ಆರೋಗ್ಯ ಇಲಾಖೆ ಸಿಬ್ಬಂದಿ ಆತ ನೀಡಿದ್ದ ವಿಳಾಸವನ್ನು ಪರಿಶೀಲನೆ ಮಾಡಿದಾಗ ಆತ ಬಂಗಾರಪೇಟೆ ವಾಸವಿ ಹೋಟೆಲ್ ಅಡ್ರೆಸ್ ನೀಡಿದ್ದಾನೆ. ಆ ವಿಳಾಸ ಪರಿಶೀಲನೆ ಮಾಡಿದಾಗ ಆ ಹೆಸರಿನ ಹೋಟೆಲ್ ಅಲ್ಲಿ ಇಲ್ಲಾ ಅನ್ನೋದು ತಿಳಿದಿದೆ. ಅಲ್ಲದೆ ಆತ ಕೋಲಾರದ ಎಪಿಎಂಸಿ ಮಾರುಕಟ್ಟೆ ಬಳಿ ಇರುವ ವಾಸವಿ ಹೋಟೆಲ್ ನಲ್ಲಿ ಕೆಲಸ ಕೇಳಿಕೊಂಡು ಹೋಗಿದ್ದ ಮಾಹಿತಿ ಲಭ್ಯವಾಗಿದೆ. ಜೊತೆಗೆ ಎರಡು ದಿನಗಳಿಂದ ಆತ ಈ ಹೋಟೆಲ್ ಬಳಿಯೇ ಇದ್ದ ವಿಷಯ ತಿಳಿದಿದೆ.

    ಪೊಲೀಸರು ಆತನ ಫೋನ್ ನಂಬರ್ ಪಡೆದು ಪರಿಶೀನೆ ನಡೆಸಿದಾಗ ಆತ ಕೋಲಾರ ನಗರದಲ್ಲಿ ಓಡಾಡಿ, ನಂತರ ಬಂದ ಮಾರ್ಗದಂತೆ ಕೆಜಿಎಫ್ ಮೂಲಕ ಕುಪ್ಪಂ ಹಾದಿಯಲ್ಲಿ ಚಿತ್ತೂರಿಗೆ ತೆರಳಿರುವುದು ಖಚಿತವಾಗಿದೆ. ಈಗಾಗಲೆ ರಾಜ್ಯದ ಕೋಲಾರ, ಕೆಜಿಎಫ್ ಹಾಗೂ ಆಂಧ್ರದ ಚಿತ್ತೂರು, ತಿರುಪತಿ ಜಿಲ್ಲೆಯ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. 2 ರಾಜ್ಯದ ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಕಣ್ಣು ತಪ್ಪಿಸಿ ಹೋಗಿರುವ ವ್ಯಕ್ತಿ ಎಲ್ಲೆಲ್ಲಿ ಓಡಾಡ್ತಾನೋ, ಯಾರ ಯಾರಿಗೆ ಸೋಂಕು ಹರಡುತ್ತಾನೋ ಅನ್ನೋ ಭಯ ಸದ್ಯ ಕೋಲಾರದಲ್ಲಿ ಮಾತ್ರವಲ್ಲದೆ ಆಂಧ್ರಪ್ರದೇಶದಲ್ಲೂ ಶುರುವಾಗಿದೆ.

  • ಜೂನ್ 8ರಿಂದ ತಿರುಪತಿ ತಿಮ್ಮಪ್ಪನ ದರ್ಶನ!

    ಜೂನ್ 8ರಿಂದ ತಿರುಪತಿ ತಿಮ್ಮಪ್ಪನ ದರ್ಶನ!

    – ಸಾಮಾಜಿಕ ಅಂತರ ಪಾಲನೆ ಹಿನ್ನೆಲೆ ಸಿಬ್ಬಂದಿ, ಸ್ಥಳೀಯರಿಗೆ ಮಾತ್ರ ಅವಕಾಶ

    ಹೈದರಾಬಾದ್: ಕೊರೊನಾ ಹಿನ್ನೆಲೆಯಲ್ಲಿ ಕಳೆದ 70 ದಿನಗಳಿಂದ ಬಂದ್ ಆಗಿರುವ ತಿರುಪತಿ ತಿಮ್ಮಪ್ಪನ ದೇವಸ್ಥಾನವನ್ನು ಓಪನ್ ಮಾಡಲು ಆಂಧ್ರ ಪ್ರದೇಶ ಸರ್ಕಾರ ಅನುಮತಿ ನೀಡಿದೆ.

    ಜೂನ್ 8ರಿಂದ ದೇವಾಲಯದಲ್ಲಿ ದರ್ಶನ ಆರಂಭವಾಗಲಿದ್ದು, ಆದರೆ ಟಿಟಿಡಿ ಸಿಬ್ಬಂದಿ ಮತ್ತು ಸ್ಥಳೀಯರಿಗೆ ಮಾತ್ರ ಪ್ರಯೋಗಾತ್ಮಕವಾಗಿ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ಸಿಗಲಿದೆ. ಸಾಮಾನ್ಯ ಭಕ್ತರಿಗೆ ಯಾವಾಗ ಅವಕಾಶ ನೀಡಲಾಗುತ್ತದೆ ಎಂಬ ಬಗ್ಗೆ ಸರ್ಕಾರ ಯಾವುದೇ ಮಾಹಿತಿ ನೀಡಿಲ್ಲ. ತಿಮ್ಮಪ್ಪನ ದರ್ಶನ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಮಾಡಲು, ಗಂಟೆಗೆ 300 ಭಕ್ತರಿಗೆ ಮಾತ್ರ ದರ್ಶನ ಕಲ್ಪಿಸಲು ಟಿಟಿಡಿ ಸಿದ್ಧತೆ ನಡೆಸಿದೆ.

    ಟಿಟಿಡಿ ಮಂಡಳಿ ಸಲ್ಲಿಸಿದ ಹಿನ್ನೆಲೆಯಲ್ಲಿ ಸರ್ಕಾರ ಪ್ರಯೋಗಾತ್ಮಕವಾಗಿ ದರ್ಶನ ವ್ಯವಸ್ಥೆಯನ್ನು ನಡೆಸಲು ಅನುಮತಿ ನೀಡಿದೆ. ಲಾಕ್‍ಡೌನ್ ನಿಯಮಗಳಿಂದ ವಿನಾಯಿಸತಿ ಸಿಕ್ಕ ಮೊದಲ ಭಾಗದ ಹಿನ್ನೆಲೆಯಲ್ಲಿ ದೇಶದ ವಿವಿಧ ದೇವಾಲಯಗಳು ಭಕ್ತರಿಗೆ ದರ್ಶನ ನೀಡಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳುತ್ತಿದೆ. ಆದರೆ ಆಂಧ್ರ ಪ್ರದೇಶ ಸರ್ಕಾರ ಲಾಕ್‍ಡೌನ್ ಸಡಿಲಿಕೆಯ ಫೇಸ್-1 ಕುರಿತು ಇದುವರೆಗೂ ಯಾವುದೇ ನಿಯಮಾವಳಿಗಳನ್ನು ಬಿಡುಗಡೆಗೊಳಿಸಿಲ್ಲ.

    ಕೇಂದ್ರ ಸರ್ಕಾರ ಹಾಗೂ ಸಚಿವಾಲಯ ನೀಡಿರುವ ನಿರ್ದೇಶನಗಳ ಹಿನ್ನೆಲೆಯಲ್ಲಿ ಶ್ರೀವಾರಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಮಗೆ ಭಕ್ತರಿಂದ ಸಾಕಷ್ಟು ಇ-ಮೇಲ್, ಸಂದೇಶಗಳು ಬರುತ್ತಿದ್ದು, ದೇವರ ದರ್ಶನ ಆರಂಭದ ಕುರಿತು ಮಾಹಿತಿ ಕೇಳುತ್ತಿದ್ದಾರೆ. ಆದರೆ ಸರ್ಕಾರದ ನೀಡುವ ಲಾಕ್‍ಡೌನ್ ನಿರ್ದೇಶನಗಳ ಮೇಲೆ ಎಲ್ಲವೂ ಆಧಾರವಾಗಿರುತ್ತದೆ. ಮಾರ್ಚ್ 19 ರಿಂದ ದೇವಾಲಯದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶವಿಲ್ಲದಿರುವುದರಿಂದ ಪ್ರತಿ ತಿಂಗಳು 200 ಕೋಟಿ ರೂ. ನಷ್ಟ ಎದುರಾಗಿದೆ ಎಂದು ತಿಳಿಸಿದ್ದಾರೆ. ಇತ್ತ ಆದಾಯಕ್ಕೆ ಹೊಡೆತ ಬಿದ್ದ ಪರಿಣಾಮ ಟಿಟಿಡಿ ಸಿಬ್ಬಂದಿಯ ವೇತನ ನೀಡಲು ಸಮಸ್ಯೆ ಎದುರಿಸಿದೆ. ಪ್ರತಿದಿನ ಭಕ್ತರು ದೇವರ ಹುಂಡಿಗೆ ಸಲ್ಲಿಸುತ್ತಿದ್ದ ಕಾಣಿಕೆಗಳು ದೇವಾಲಯದ ಪ್ರಮುಖ ಆದಾಯದ ಮೂಲವಾಗಿತ್ತು. ಹುಂಡಿಯಲ್ಲಿ ಪ್ರತಿದಿನ 50 ಲಕ್ಷ ರೂ. ಆದಾಯ ಲಭಿಸುತ್ತಿತ್ತು.

  • ಮಲೆನಾಡಿಗೆ ತಬ್ಲಿಘಿ, ಮುಂಬೈ ನಂತರ ಕೇರಳ, ಆಂಧ್ರದವರ ಕಂಟಕ

    ಮಲೆನಾಡಿಗೆ ತಬ್ಲಿಘಿ, ಮುಂಬೈ ನಂತರ ಕೇರಳ, ಆಂಧ್ರದವರ ಕಂಟಕ

    – ಮಲೆನಾಡು ಜಿಲ್ಲೆಯಲ್ಲಿ ಹೆಚ್ಚಿದ ಕೊರೊನಾ ಸೋಂಕಿತರ ಸಂಖ್ಯೆ
    – ಒಂದೇ ದಿನ 10 ಪಾಸಿಟಿವ್ ಪ್ರಕರಣಗಳು ಪತ್ತೆ
    – ಮಹಾರಾಷ್ಟ್ರ ಸೇರಿದಂತೆ ಇತರೇ ರಾಜ್ಯದ ಜನರಿಗಿಲ್ಲ ಪ್ರವೇಶ

    ಶಿವಮೊಗ್ಗ: ಕಳೆದ ಒಂದೂವರೆ ತಿಂಗಳಿನಿಂದ ಗ್ರೀನ್ ಜೋನ್ ನಲ್ಲಿದ್ದ ಶಿವಮೊಗ್ಗಕ್ಕೆ ಇದೀಗ ಸಿಡಿಲಾಘಾತವಾಗಿದ್ದು, ಒಂದೇ ದಿನ 10 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿತರ ಸಂಖ್ಯೆ 14ರಿಂದ ಒಂದೇ ಬಾರಿಗೆ ಏರಿಕೆ ಕಂಡಿದ್ದು, 24ಕ್ಕೆ ಏರಿದೆ. ಹೀಗಾಗಿ ಹೊರ ರಾಜ್ಯಗಳಿಂದ ಶಿವಮೊಗ್ಗಕ್ಕೆ ಬರುವವರಿಗೆ ನೋ ಎಂಟ್ರಿ ಎನ್ನಲಾಗಿದ್ದು, ಇನ್ನು 167 ಮಂದಿಯ ಫಲಿತಾಂಶ ಬರುವುದು ಬಾಕಿ ಇದೆ.

    ಕಳೆದ ಒಂದುವರೆ ತಿಂಗಳಿನಿಂದ ರಾಜ್ಯದಲ್ಲಿ ಇತರೆ ಜಿಲ್ಲೆಗಳ ಕೊರೊನಾ ಸೋಂಕಿತರ ಸಂಖ್ಯೆ ಕಂಡು ಆತಂಕದಲ್ಲಿದ್ದ ಮಲೆನಾಡಿನ ಜನತೆಗೆ ಇದೀಗ ಸಿಡಿಲಾಘಾತವಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಒಂದೇ ಬಾರಿಗೆ ಸೋಂಕು ಪೀಡಿತರ ಸಂಖ್ಯೆ 24ಕ್ಕೆ ಏರಿಕೆಯಾಗಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮನೆ ಮಾಡಿದೆ. ಅದರಲ್ಲೂ ಸೋಮವಾರ ಸಂಜೆಯವರೆಗೂ ಕೇವಲ 14 ಸೋಂಕಿತರ ಸಂಖ್ಯೆ ಇದ್ದು, ರಾತ್ರಿ ಬಳಿಕ 10 ಪಾಸಿಟಿವ್ ಪ್ರಕರಣಗಳು ದೃಢವಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 24ಕ್ಕೆ ಏರಿದೆ. ಈ ಮೊದಲು ತಬ್ಲಿಘಿಗಳು ನಂತರ ಮುಂಬೈನಿಂದ ಬಂದವರಿಗೆ ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಇದೀಗ ಹೊಸದಾಗಿ ಕೇರಳ ಹಾಗೂ ಆಂಧ್ರಪ್ರದೇಶದಿಂದ ಬಂದವರಲ್ಲಿ ಪಾಸಿಟಿವ್ ಕಾಣಿಸಿಕೊಂಡಿದೆ.

    ಸ್ಥಳೀಯರಲ್ಲೂ ಪಾಸಿಟಿವ್ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಮೊಗ್ಗದ ಬಾಳೆಕೊಪ್ಪ, ತೀರ್ಥಹಳ್ಳಿಯ ಹಳ್ಳಿಬೈಲು ಹಾಗೂ ಶಿಕಾರಿಪುರದ ತರಲಘಟ್ಟ ಗ್ರಾಮಗಳನ್ನು ಕಂಟೈನ್ ಮೆಂಟ್ ಜೋನ್‍ಗಳಾಗಿ ಪರಿವರ್ತಿಸಲಾಗಿದೆ. ಜಿಲ್ಲೆಯ ತೀರ್ಥಹಳ್ಳಿಗೆ ಮುಂಬೈ ಮೂಲದಿಂದ ಬಂದಿದ್ದ ಐವರಿಗೆ ಸೋಂಕು ತಗುಲಿರುವುದು ಧೃಢವಾಗಿದ್ದು, ಕೇರಳದಿಂದ ಶಿವಮೊಗ್ಗಕ್ಕೆ ಬಂದಿದ್ದ ಸೂಳೆಬೈಲು ಬಡಾವಣೆಯ ಇಬ್ಬರು ನಿವಾಸಿಗಳು ಹಾಗೂ ಆಂಧ್ರ ಮೂಲದ ಓರ್ವ ವ್ಯಕ್ತಿಗೆ ಸೋಂಕು ಧೃಢವಾಗಿದೆ.

    ಇನ್ನೂ ಆಘಾತಕಾರಿ ವಿಚಾರವೆಂದರೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದ ಇಬ್ಬರಿಗೆ ಸೋಂಕು ತಗುಲಿದೆ. ಕುಂಸಿಯ ಬಾಳೆಕೊಪ್ಪ ಗ್ರಾಮದ 63 ವರ್ಷದ ಹಾಲು ವ್ಯಾಪಾರಿ ಮತ್ತು ಶಿಕಾರಿಪುರದ ತರ್ಲಘಟ್ಟ ಗ್ರಾಮದ ಯುವತಿಯೊಬ್ಬಳಿಗೆ ಹೇಗೆ ಸೋಂಕು ತಗುಲಿದೆ ಎಂಬುದೇ ತಿಳಿಯದಾಗಿದೆ. ಈ ಸಂಬಂಧ ಅಧಿಕಾರಿಗಳು ತನಿಖೆ ಸಹ ಕೈಗೊಂಡಿದ್ದಾರೆ. ಇವರಿಬ್ಬರಿಗೆ ಸೋಂಕು ಹೇಗೆ ತಗುಲಿದೆ ಎಂಬುದೇ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.

    ಒಟ್ಟಾರೆ ಶಿವಮೊಗ್ಗದಲ್ಲಿ ಪ್ರಸ್ತುತ 916 ಜನ ಸಾಂಸ್ಥಿಕ ಕ್ವಾರೆಂಟೈನ್ ಮತ್ತು 64 ಮಂದಿ ಹೋಮ್ ಕ್ವಾರೆಂಟೈನ್‍ನಲ್ಲಿದ್ದು, ಕ್ವಾರೆಂಟೈನ್ ವ್ಯವಸ್ಥೆಗಾಗಿ 50 ವಸತಿ ಶಾಲೆಗಳು, ಹೊಟೇಲ್‍ಗಳು ಮತ್ತು ಗ್ರಾಮೀಣ ಭಾಗದಲ್ಲಿ 7 ಶಾಲೆಗಳನ್ನು ಬಳಸಿಕೊಳ್ಳಲಾಗುತ್ತಿದೆ. ಪಾಸಿಟಿವ್ ಬಂದ ಪ್ರಕರಣಗಳಿಗೆ ಸಂಬಂಧಿಸಿದಂತೆ 67 ಮಂದಿ ಪ್ರಾಥಮಿಕ ಸಂಪರ್ಕ ಹೊಂದಿದವರು ಹಾಗೂ 150 ಮಂದಿ ದ್ವಿತೀಯ ಹಂತದ ಸಂಪರ್ಕ ಹೊಂದಿದವರನ್ನು ಕ್ವಾರೆಂಟೈನ್ ಮಾಡಲಾಗಿದೆ.

  • ಅನುಮತಿ ಇಲ್ಲದೇ ಮದ್ವೆ- ಬಳ್ಳಾರಿಯಲ್ಲಿ ವಧು-ವರ ಸೇರಿ 8 ಮಂದಿಗೆ ಕ್ವಾರಂಟೈನ್

    ಅನುಮತಿ ಇಲ್ಲದೇ ಮದ್ವೆ- ಬಳ್ಳಾರಿಯಲ್ಲಿ ವಧು-ವರ ಸೇರಿ 8 ಮಂದಿಗೆ ಕ್ವಾರಂಟೈನ್

    ಬಳ್ಳಾರಿ: ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದ ನೆರೆಯ ಆಂಧ್ರ ಪ್ರದೇಶ ಗಡಿ ಭಾಗದ ವಧು-ವರ ಸೇರಿದಂತೆ ಎಂಟು ಮಂದಿಯನ್ನ ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ.

    ಜಿಲ್ಲಾಡಳಿತದ ಅನುಮತಿ ಪಡೆಯದೆ ನೆರೆಯ ಆಂಧ್ರ ಪ್ರದೇಶದ ಗಡಿ ಗ್ರಾಮದಿಂದ ವಧು-ವರ ಸೇರಿದಂತೆ ಎಂಟು ಮಂದಿ ತಾಲೂಕಿನ ಅಮರಾಪುರ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಹಾಜರಾಗಿದ್ದರು. ಖಚಿತ ಮಾಹಿತಿ ಪಡೆದ ಜಿಲ್ಲಾಡಳಿತ ತಂಡವೊಂದನ್ನು ಗ್ರಾಮಕ್ಕೆ ಕಳುಹಿಸಿ, ಕೂಡಲೇ ಆ ಎಂಟು ಮಂದಿಯನ್ನ ಗುರುತಿಸಿ 14 ದಿನಗಳ ಕಾಲ ಕ್ವಾರಂಟೈನ್ ಮಾಡಿದೆ.  ಎಂಟು ಮಂದಿಯ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಿದ್ದು, ವರದಿ ಬರಬೇಕಿದೆ.

    ಇತ್ತೀಚೆಗಷ್ಟೇ ಜಿಲ್ಲೆಯಲ್ಲಿ ನಡೆಯಬೇಕಿದ್ದ 7 ಬಾಲ್ಯ ವಿವಾಹಗಳನ್ನು ಪತ್ತೆಹಚ್ಚಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಮದುವೆ ತಡೆಯುವಲ್ಲಿ ಯಶಸ್ವಿಯಾಗಿದ್ದರು. ಬಳ್ಳಾರಿ ತಾಲೂಕಿನ ಕುಂಟನಾಳು ಗ್ರಾಮದಲ್ಲಿ ಮೇ 10-13ರಂದು ಪ್ರತ್ಯೇಕವಾಗಿ 7 ಬಾಲ್ಯವಿವಾಹಗಳನ್ನ ಗುರು-ಹಿರಿಯರು ನಿಶ್ಚಯಿಸಿದ್ದರು. ಈ ಕುರಿತು ಮಾಹಿತಿ ಪಡೆದಿದ್ದ ಅಧಿಕಾರಿಗಳು ಕೂಡಲೇ ಗ್ರಾಮಕ್ಕೆ ತೆರಳಿ, ಬಾಲ್ಯ ವಿವಾಹಗಳನ್ನ ತಡೆದಿದ್ದರು.

  • ಸೈಕಲ್‍ಗಾಗಿ ಕೂಡಿಟ್ಟಿದ್ದ 971 ರೂ. ಸಿಎಂ ಪರಿಹಾರ ನಿಧಿಗೆ ನೀಡಿದ ಪೋರ

    ಸೈಕಲ್‍ಗಾಗಿ ಕೂಡಿಟ್ಟಿದ್ದ 971 ರೂ. ಸಿಎಂ ಪರಿಹಾರ ನಿಧಿಗೆ ನೀಡಿದ ಪೋರ

    – ಶೀಘ್ರವೇ ಸೈಕಲ್ ಗಿಫ್ಟ್ ನೀರುವ ಭರವಸೆ ನೀಡಿದ ಸಚಿವ
    – ಬಾಲಕನ ಸಹಾಯದ ಗುಣಕ್ಕೆ ಮೆಚ್ಚುಗೆ

    ಹೈದರಾಬಾದ್: ಕೊರೊನಾ ವೈರಸ್ ವಿರುದ್ಧ ಹೋರಾಡಲು ಬಹುತೇಕರು ಸಹಾಯ ಹಸ್ತ ಚಾಚುತ್ತಿದ್ದು, ಬಡವರೂ ಸಹ ತಮ್ಮ ಕೈಲಾದಷ್ಟು ಸಹಾಯ ಮಾಡುತ್ತಿದ್ದಾರೆ. ಅದೇ ರೀತಿ ಇದೀಗ ಮಕ್ಕಳು ಸಹ ಸಹಾಯ ಮಾಡುತ್ತಿದ್ದು, ಆಂಧ್ರ ಪ್ರದೇಶದ 4 ವರ್ಷದ ಬಾಲಕ ತಾನು ಕೂಡಿಟ್ಟ ಹಣವನ್ನು ದಾನ ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾನೆ.

    ಆಂಧ್ರ ಪ್ರದೇಶದ ವಿಜಯವಾಡದ ನಾಲ್ಕು ವರ್ಷದ ಬಾಲಕ ಸೈಕಲ್ ಖರೀದಿಸಲು ತಾನು ಕೂಡಿಟ್ಟಿದ್ದ 971 ರೂ.ಗಳನ್ನು ದಾನ ಮಾಡುವ ಮೂಲಕ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಏ.7ರಂದು ಆಂಧ್ರ ಪ್ರದೇಶದ 4 ವರ್ಷದ ಬಾಲಕ ಹೇಮಂತ್ ತಾನು ಕೂಡಿಟ್ಟ 971 ರೂ.ಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡಿದ್ದಾನೆ.

    ತಾಡೆಪಲ್ಲಿಯ ವೈಎಸ್‍ಆರ್ ಕಾಂಗ್ರೆಸ್ ಕಚೇರಿಯಲ್ಲಿ ಆಂಧ್ರ ಪ್ರದೇಶದ ಸಾರಿಗೆ ಸಚಿವ ಪೆರ್ನಿ ವೆಂಕಟರಾಮಯ್ಯ ಅವರನ್ನು ಭೇಟಿ ಮಾಡಿ ಈ ಹಣ ನೀಡಿದ್ದಾನೆ. ಬಾಲಕನ ಸಹಾಯದ ಗುಣವನ್ನು ಕಂಡು ವೆಂಕಟರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಶೀಘ್ರವೇ ಸೈಕಲ್ ಗಿಫ್ಟ್ ನೀಡುವುದಾಗಿ ಬಾಲಕನಿಗೆ ಸಚಿವರು ಭರವಸೆ ನೀಡಿದ್ದಾರೆ.

    ಹೇಮಂತ್ ಮಾತ್ರವಲ್ಲ ಇತ್ತೀಚೆಗೆ ಮೇಘಾಲಯದ 5 ವರ್ಷದ ಬಾಲಕ ಸಹ ಮಾಸ್ಕ್ ಧರಿಸಿ ಸಚಿವರ ಕಚೇರಿಗೆ ತೆರಳಿ ತಾನು ಸಂಗ್ರಹಿಸಿಟ್ಟಿದ್ದ ಸುಮಾರು 1,501 ರೂಗಳನ್ನು ಅವರ ಕೈಗೆ ತಲುಪಿಸಿದ್ದನು. ಮೇಘಾಲಯದ ಎಲ್ ಮಯಾನ್ ನೊಂಗ್‍ಬ್ರಿ ತಾನು ಹುಂಡಿಯಲ್ಲಿ ಕೂಡಿಟ್ಟ ನಾಣ್ಯಗಳನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಲುಪಿಸಿದ್ದ. ಹೀಗೆ ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಮಕ್ಕಳು ಸಹ ನೆರವಿಗೆ ಧಾವಿಸುತ್ತಿದ್ದಾರೆ.

  • ಕ್ವಾರಂಟೈನ್‍ನಲ್ಲಿ ಇರುವವರಿಗೆ ಸಿಎಂ ಜಗನ್ ಮೋಹನ್ ‘ಕೈ ತುತ್ತು’

    ಕ್ವಾರಂಟೈನ್‍ನಲ್ಲಿ ಇರುವವರಿಗೆ ಸಿಎಂ ಜಗನ್ ಮೋಹನ್ ‘ಕೈ ತುತ್ತು’

    ಅಮರಾವತಿ: ಕ್ವಾರಂಟೈನ್‍ನಲ್ಲಿ ಇರುವ ಕೊರೊನಾ ಶಂಕಿತರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶದಿಂದ ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ‘ಕೈ ತುತ್ತು’ (ಗೋರು ಮುದ್ದ) ಮೆನು ನೀಡುತ್ತಿದ್ದಾರೆ.

    ವಿಜಯವಾಡದ ಕ್ವಾರಂಟೈನ್ ಕೇಂದ್ರದಲ್ಲಿ ಇರುವ ಕೊರೊನಾ ಸೋಂಕು ಶಂಕಿರಿಗೆ ಬಾಳೆಹಣ್ಣು, ಮೋಸಂಬಿ, ಒಣ ದ್ರಾಕ್ಷಿ, ಗೋಡಂಬಿ, ಪಿಸ್ತಾ, ಬಾದಾಮಿ ಖರ್ಜೂರ ಮತ್ತು ಮೊಟ್ಟೆಗಳನ್ನು ನೀಡಲಾಗುತ್ತಿದೆ. ಇದೇ ರೀತಿ ಕೈ ತುತ್ತು ಮೆನುವನ್ನು ರಾಜ್ಯದಾದ್ಯಂತದ ಎಲ್ಲಾ ಕ್ವಾರಂಟೈನ್ ಕೇಂದ್ರಗಳಲ್ಲಿ ಅನುಸರಿಸಬೇಕು ಎಂದು ಜಗನ್ ಮೋಹನ್ ರೆಡ್ಡಿ ತಿಳಿಸಿದ್ದಾರೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಗುರುವಾರ ಬೆಳಗ್ಗೆ ವೇಳೆಗೆ ಒಂದೇ ದಿನದಲ್ಲಿ ಆಂಧ್ರಪ್ರದೇಶದಲ್ಲಿ 43 ಜನರಿಗೆ ಕೊರೊನಾ ದೃಢವಾಗಿದ್ದು, ಈ ಮೂಲಕ ಸೋಂಕಿತರ ಸಂಖ್ಯೆ 348ಕ್ಕೆ ಏರಿಕೆ ಕಂಡಿದೆ. ಇಲ್ಲಿವರೆಗೂ 6 ಮಂದಿ ಚೇತರಿಸಿಕೊಂಡಿದ್ದು, ನಾಲ್ವರು ಮೃತಪಟ್ಟಿದ್ದಾರೆ.

  • ಮಹಾರಾಷ್ಟ್ರದಲ್ಲಿ ಒಂದೇ ದಿನ 13 ಸಾವು- ಮೃತರ ಸಂಖ್ಯೆ 45ಕ್ಕೆ ಏರಿಕೆ

    ಮಹಾರಾಷ್ಟ್ರದಲ್ಲಿ ಒಂದೇ ದಿನ 13 ಸಾವು- ಮೃತರ ಸಂಖ್ಯೆ 45ಕ್ಕೆ ಏರಿಕೆ

    ಮುಂಬೈ: ಹೆಮ್ಮಾರಿ ಕೊರೋನಾದಿಂದಾಗಿ ನೆರೆಯ ರಾಜ್ಯ ಮಹಾರಾಷ್ಟ್ರ ಅಕ್ಷರಶಃ ಮುದ್ದೆ ಮುದ್ದೆಯಾಗುತ್ತಿದೆ. ಭಾನುವಾರ ಒಂದೇ ದಿನದಲ್ಲಿ 13 ಜನರ ಸಾವನ್ನಪ್ಪಿದ್ದು, ಈ ಮೂಲಕ ರಾಜ್ಯದಲ್ಲಿ ಮೃತರ ಸಂಖ್ಯೆ 45ಕ್ಕೆ ಏರಿಕೆ ಕಂಡಿದೆ.

    ಈ ಕುರಿತು ಮಾಹಿತಿ ನೀಡಿರುವ ಮಹಾರಾಷ್ಟ್ರ ಆರೋಗ್ಯ ಇಲಾಖೆ, ರಾಜ್ಯದಲ್ಲಿ ಇಂದು 13 ಕೊರೊನಾ ಸೋಂಕಿತರು ಮೃತಪಟ್ಟಿದ್ದಾರೆ. ಹೀಗಾಗಿ ಈವರೆಗೂ ಕೊರೊನಾಗೆ ಒಟ್ಟು 45 ಜನರ ಬಲಿಯಾಗಿದ್ದಾರೆ. ಇಂದು ಮುಂಬೈನಲ್ಲಿ 8 ಮಂದಿ, ಪುಣೆಯಲ್ಲಿ ಮೂವರು, ಕಲ್ಯಾಣ್, ಡೊಂಬಿವಾಲಿ ಹಾಗೂ ಔರಂಗಬಾದ್‍ನಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿಸಿದೆ.

    ರಾಜ್ಯದಲ್ಲಿ ಭಾನುವಾರ ಒಂದೇ ದಿನದಲ್ಲಿ 113 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 478ಕ್ಕೆ ಏರಿಕೆ ಕಂಡಿದೆ. ಈ ಪೈಕಿ 56 ಜನರು ಗುಣಮುಖರಾಗಿದ್ದು ಅವರನ್ನು ಡಿಸ್ಚಾರ್ಜ್ ಮಾಡಲಾಗಿದೆ ಎಂದು ಮಹಾರಾಷ್ಟ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

    ಮಧ್ಯಪ್ರದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 193ಕ್ಕೆ ಏರಿಕೆ ಕಂಡಿದೆ. ಇಂದು ಓರ್ವ ಕೊರೊನಾ ಸೋಂಕಿತ ಮೃತಪಟ್ಟಿದ್ದು, ಸಾವನ್ನಪ್ಪಿದವರ ಸಂಖ್ಯೆ 12ಕ್ಕೆ ಏರಿದೆ ಎಂದು ಮಧ್ಯಪ್ರದೇಶದ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಪಲ್ಲವಿ ಜೈನ್ ಗೋವಿಲ್ ತಿಳಿಸಿದ್ದಾರೆ.

    ದೇಶಾದ್ಯಂತ ಡೆಡ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಈವರೆಗೆ ದೆಹಲಿಯಲ್ಲಿ 445 ಪ್ರಕರಣಗಳು ದಾಖಲಾಗಿದ್ದು ಸದ್ಯದವರೆಗೆ 6 ಮಂದಿ ಕೊರೊನಾಗೆ ಬಲಿ ಆಗಿದ್ದಾರೆ. ತಬ್ಲಿಘಿಯಲ್ಲಿ ಭಾಗಿಯಾಗಿದ್ದವರ ಪತ್ತೆಗೆ ಮೊಬೈಲ್ ನಂಬರ್ ಗಳನ್ನು ದೆಹಲಿ ಪೊಲೀಸರು ಬೆನ್ನತ್ತಿದ್ದಾರೆ. ಇದರ ಮಧ್ಯೆ ದೆಹಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಪಲಾಯನಕ್ಕೆ ಯತ್ನಿಸ್ತಿದ್ದ 8 ಮಂದಿ ಮಲೇಷ್ಯನ್ನರನ್ನು ಬಂಧಿಸಲಾಗಿದೆ. ಇವರು ಸಹ ಜಮಾತ್ ಕಾರ್ಯಕಮ್ರದಲ್ಲಿ ಭಾಗಿಯಾಗಿದ್ದರು ಎಂದು ಶಂಕಿಸಲಾಗಿದೆ.

    ರಾಜದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಲ್, ರಾಜ್ಯದಲ್ಲಿ ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗಳನ್ನು ಗುರುತಿಸುವಂತೆ ತಿಳಿಸಿದ್ದಾರೆ. ಆಂಧ್ರ ಪ್ರದೇಶದಲ್ಲಿ ಇಂದು 34 ಹೊಸ ಪ್ರಕರಣಗಳು ಪತ್ತೆ ಆಗಿದ್ದು, ಸೋಂಕಿತರ ಸಂಖ್ಯೆ 226ಕ್ಕೇರಿದೆ. ಕರ್ನೂಲ್‍ನಲ್ಲಿ 23, ಚಿತ್ತೂರಿನಲ್ಲಿ 7, ನೆಲ್ಲೂರು, ಪ್ರಕಸಂನಲ್ಲಿ ತಲಾ 2 ಕೇಸ್‍ಗಳು ಪತ್ತೆ ಆಗಿದೆ. ಇವುಗಳಲ್ಲಿ ಬಹುತೇಕರಿಗೆ ಜಮಾತ್ ನಂಟಿದೆ ಎನ್ನಲಾಗಿದೆ.